Saturday, September 7, 2013

ಬಣ್ಣ ಕಾಣದ ಕಣ್ಣಲ್ಲಿ ರಂಗಿನ ಕನಸು ಕಾಣುತ್ತಾ..?

ಲೂಸಿಯ ಚಿತ್ರ ಜನ ಸಾಮಾನ್ಯರಲ್ಲಿ ನಿರೀಕ್ಷೆ ಉಂಟು ಮಾಡಿದ್ದಕ್ಕಿಂತ ಗಣಕ-ಜನರಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿತ್ತು.ಪವನ್ ಕುಮಾರ್ ಪ್ರೇಕ್ಷಕರಲ್ಲಿ ಕೈ ಯಲ್ಲಿ ಮುಂಗಡ ಹಣ ಪಡೆದು ಅವರನ್ನೇ ನಿರ್ಮಾಪಕರನ್ನಾಗಿ ಮಾಡಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದರು.
ಬಣ್ಣ ಕಾಣದ ಕಣ್ಣಲ್ಲಿ ರಂಗಿನ ಕನಸು ಕಾಣುತ್ತ ಎನ್ನುವ ಶೀರ್ಷಿಕೆಯಲ್ಲಿ ಸಂಪೂರ್ಣ ಕಥೆ ಅಡಗಿದೆ. ಅಥವಾ ಪವನ್ ತಮ್ಮ ಚಿತ್ರದಲ್ಲಿ ಮೊದಲು ತೋರಿಸುವ ನೀ ಮಾಯೆಯೊಳಗೋ ಮಾಯೆ ನಿನ್ನೊಳಗೊ ಎನ್ನುವ ದಾಸವಾಣಿಯಲ್ಲೇ ಕಥೆ ಇದೆ ಅಥವಾ ಅದೇ ಕಥೆ ಎಳೆ.
ಕ್ರಿಸ್ತೋಪರ್ ನೋಳನ್ ತಮ್ಮ ಮೆಮೆಂಟೊ ಚಿತ್ರದಲ್ಲಿ ಒಂದು ತಂತ್ರವನ್ನು ಅಳವಡಿಸಿದ್ದರು.ಇಡೀ ಚಿತ್ರದ ಕಾಲಘಟ್ಟವನ್ನು ಕಪ್ಪು-ಬಿಳುಪು ಮತ್ತು ಬಣ್ಣದ ದೃಶ್ಯಗಳ ಮೂಲಕ ವಿಂಗಡಿಸಿದ್ದರು. ಅವುಗಳನ್ನು ಸೇರಿಸುವ ಕಡೆ ಕಪ್ಪು ಬಿಳುಪಿನ ಚಿತ್ರಿಕೆಯನ್ನು ಬಣ್ಣಕ್ಕೆ ಪರಿವರ್ತಿಸಿದ್ದರು. ಲೂಸಿಯಾ ಚಿತ್ರದಲ್ಲೂ ಕನಸು-ನನಸನ್ನು ಸಂಯೋಜಿಸಲು ಅದೇ ತಂತ್ರ ಬಳಸಿದ್ದಾರೆ ನಿರ್ದೇಶಕ ಪವನ್. ಒಂದು ಕಥಾ ವಾಹಿನಿಯನ್ನು ಕಪ್ಪು ಬಿಳುಪಲ್ಲೂ ಮತ್ತೊಂದನ್ನು ಬಣ್ಣದಲ್ಲೂ ಹೇಳುತ್ತಾ ಸಾಗಿ ಒಂದೆಡೆ ಎರಡನ್ನೂ ಒಂದು ಮಾಡುತ್ತಾರೆ. ಆ ನಿಟ್ಟಿನಲ್ಲಿ ಪವನ್ ಕುಮಾರ್ ಮೆಚ್ಚುಗೆಗೆ ಪಾತ್ರವಾಗುತ್ತಾರೆ.
ಆದರೆ ಚಿತ್ರ ಹೇಗಿದೆ? ಎಂಬ ಪ್ರಶ್ನೆ ಮೂಡದಿರದು. ಅವರ ಪ್ರಯತ್ನ ಅದರ ಹಿಂದಿನ ಶ್ರಮ ಕಷ್ಟ ಮುಂತಾದವುಗಳನ್ನು ಮನದಲ್ಲಿರಿಸಿಕೊಳ್ಳದೆ ಚಿತ್ರವನ್ನು ಒಮ್ಮೆ ವಿಶ್ಲೇಷಿಸಿದರೆ ಚಿತ್ರದ ವಿಶೇಷವೆ ಚಿತ್ರದ ತೊಡಕಾಗಿರುವ ಅಂಶ ಎದ್ದು ಕಾಣುತ್ತದೆ. ಮೊದಲಾರ್ಧ ಮಜಾ ಕೊಡುತ್ತಾ ಸಾಗುವ ಚಿತ್ರದ, ಎರಡನೆಯ ಭಾಗದಲ್ಲೂ ಅದೇ ತಂತ್ರವನ್ನು ಉಪಯೋಗವಾಗಿರುವುದು ಚಿತ್ರ ನಿರೀಕ್ಷಿತವಾಗುತ್ತದೆ. ಚಿತ್ರದ ಕೊನೆ ಕೊನೆಯಲ್ಲಿ ಸಾಕಷ್ಟು ಗೊಂದಲಗಳನ್ನು ಉಂಟು ಮಾಡಿರುವ ಪವನ್ ಆ ಗೊಂದಲಗಳ ಸಿಕ್ಕು ಬಿಡಿಸಲು ಕೆಲವು ತಂತ್ರಗಳನ್ನು ಉಪಯೋಗಿಸಿದ್ದಾರೆ. ಆದರೂ ಪ್ರೇಕ್ಷಕ ತೃಪ್ತನಾಗುವುದಿಲ್ಲ. ಒಹ್..ಇದು ಕಥೆ, ಇದು ನಡೆದದ್ದು..ಎನ್ನುವ ನಿರ್ಧಾರಕ್ಕೆ ಬರಲು ಆಗುವುದಿಲ್ಲ. ಎಲ್ಲೋ ಏನೋ ಮಿಸ್ ಆಗಿದೆ ಎಂದುಕೊಳ್ಳುವಲ್ಲಿ ನಿರ್ದೇಶಕನ ಸೋಲೂ ಇದೆ, ಗೆಲುವು ಇದೆ.
ಯಾಕೆ ಹೀಗೆ..? ಪ್ರೇಕ್ಷಕನನ್ನು ಬುದ್ದಿವಂತ ಎಂದುಕೊಂಡೆ ಸಿನಿಮಾ ಮಾಡಿದಾಗಲೂ ಅವನಿಗೆ ಅರ್ಥವಾಗುವುದಿಲ್ಲವಾ ಎನ್ನುವ ಪ್ರಶ್ನೆ ಇಂತಹ ಸಿನಿಮಾ ನೋಡಿ ಅಸಂತೃಪ್ತ ಮುಖ ಹೊತ್ತು ಬರುವ ಪ್ರೇಕ್ಷಕರನ್ನು ನೋಡಿದಾಗ ಕಾಡದಿರದು. ಯಾಕೆಂದರೆ ಲೂಸಿಯಾದಲ್ಲಿ ಒಂದೊಳ್ಳೆ ಪ್ರೇಮಕಥೆಯಿದೆ, ಹೊಸದಾದ ವಿಷಯವಿದೆ, ಕಲಾವಿದರುಗಳು ಅಭಿನಯವನ್ನು ಅದ್ಭುತವಾಗಿ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಪವನ್ ಕುಮಾರ್ ಇಡೀ ಚಿತ್ರವನ್ನೂ ಎಲ್ಲೂ ಕಲಾತ್ಮಕ ರೀತಿಯಲ್ಲಿ ಶೈಲಿಯಲ್ಲಿ ನಿರೂಪಿಸಿಲ್ಲ. ಒಂದು ಮನರಂಜನೀಯ ಚಿತ್ರಗಳಿಗೆ ಬೇಕಾದ ಅಂಶಗಳಾದ ಹೊಡೆದಾಟ, ಐಟಂ ಹಾಡು, ಕುಣಿತ, ತಮಾಷೆಯ ಮಾತುಗಳು..ಹೀಗೆ ಎಲ್ಲವನ್ನು ಬೆರೆಸಿದ್ದಾರೆ.ಆದರೂ ಗೊಂದಲಗಳ ಗೂಡಾದ ಪ್ರೇಕ್ಷಕನನ್ನು ಸಂಪೂರ್ಣವಾಗಿ ಅರ್ಥಮಾಡಿಸುವಲ್ಲಿ, ಅಥವಾ ಅವರ ಗೊಂದಲ ನಿವಾರಿಸುವಲ್ಲಿ ಅಂತಹ ಯಶಸ್ಸು ಕಂಡಿಲ್ಲ ಎನ್ನಬಹುದು.
ಸುಮ್ಮನೆ ಗಮನಿಸಿ. ಮೆಮೆಂಟೊಗಿಂತ ಮುಂಚೆಯೇ ತಿರುವು ಮರುಗು ಗೊಂದಲಮಯ ನಿರೂಪಣೆಯ 'ಎ' ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡಿದ್ದರು. ಮೊದಲ ಬಾರಿಗೆ ನೋಡಿದ ಬಹುತೇಕರಿಗೆ ಸಿನಿಮಾ ಅರ್ಥವೇ ಆಗಿರಲಿಲ್ಲ. ಹಾಗಾಗಿ ಅದನ್ನು ಮತ್ತೆ ಮತ್ತೆ ನೋಡಿದ್ದರು ಜನ. ಹಾಗೆ ಜನರು ಮತ್ತೆ ಮತ್ತೆ ನೋಡಲು ಪ್ರೇರೆಪಿಸಿದ್ದು ಕಥೆಯ ಗೊಂದಲಕ್ಕಿಂತ ಹೆಚ್ಚಾಗಿ ಚಿತ್ರದಲ್ಲಿದ್ದ ಕ್ಯಾಚಿ, ಮಜಾ ಕೊಡುವ ದೃಶ್ಯಗಳು. ಉಪೇಂದ್ರ ಚಿತ್ರದಲ್ಲಿ ಇನ್ನೂ ಅಧ್ವಾನ. ಚಿತ್ರವನ್ನು ಹೇಗೆ ನೋಡಬೇಕು ಎಂದು ಉಪೇಂದ್ರ ಪತ್ರಿಕೆಯಲ್ಲಿ ವಿವರಿಸಿದ್ದರು ಕೂಡ. ಈವತ್ತಿಗೂ ಮಳೆ, ಬೆಂಕಿ, ಗಾಳಿ ಮತ್ತು ಹೆಣ್ಣು ಇವುಗಳ ಕುರಿತಾದ ಉಪೇಂದ್ರ ಚಿತ್ರದ ಫಿಲಾಸಫಿ  ಅದೆಷ್ಟು ಜನಕ್ಕೆ ಅರ್ಥವಾಗಿದೆಯೋ..ಆದರೆ ಜನ ಮತ್ತೆ ಮತ್ತೆ ನೋಡಿದ್ದು ಮಾತ್ರ ಚಿತ್ರದಲ್ಲಿನ ಭಿನ್ನ, ಅತಿರೇಕದ ವನ್ಸ್ ಅಗೈನ್ ಮಜಾ ಕೊಡುವ ದೃಶ್ಯಾವಳಿಗಳಿಗಾಗಿಯೇ..
ಲೂಸಿಯಾ ಚಿತ್ರವೂ ಅಷ್ಟೇ. ಒಮ್ಮೆ ನೋಡಿದರೆ ಅಥವಾ ನೋಡುವಾಗ ಗಮನವನ್ನು ಬೇರೆಡೆಗೆ ಹರಿಸಿದರೆ ಅರ್ಥವಾಗುವುದು ಕಷ್ಟವೇ...ಕನಸು ಯಾವುದು..ಸತ್ಯ ಯಾವುದು..ಅಥವಾ ಎರಡೂ ಕನಸಾ..? ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿತಲೆ ಕೊರೆಯುವುದು ಸಹಜ. ಅದನ್ನು ನಿವಾರಿಸಿಕೊಳ್ಳಬೇಕಾದರೆ ಮತ್ತೊಮ್ಮೆ ನೋಡಬೇಕು, ಅದರ ಬಗ್ಗೆ ಒಂದಷ್ಟು ಆಲೋಚಿಸಬೇಕು..ಆದರೆ ಚಿತ್ರದಲ್ಲಿನ ದೃಶ್ಯಗಳು ಎರಡನೆಯ ಸಾರಿಯೂ ನೋಡುವಂತಿದೆಯೇ ಎನ್ನುವುದು ಪ್ರಶ್ನೆ.
ಇನ್ನುಳಿದಂತೆ ತಿನ್ನಬೇಡಕಮ್ಮಿ ಹಾಡು ಕೇಳುವಾಗ  ರಂಜಿಸುವಷ್ಟು ನೋಡುವಾಗ ರಂಜಿಸುವುದಿಲ್ಲ. ನಾಯಕನಾಗಿ ಸತೀಶ್ ನೀನಾಸಂ , ನಾಯಕಿಯಾಗು ಶ್ರುತಿ ಹರಿಹರನ್ ಸೂಪರ್. ಸಂಗೀತ ಮತ್ತು ಹಿನ್ನೆಲೆ ಸಂಗೀತ ಉತ್ತಮ. ಛಾಯಾಗ್ರಹಣ ಚಿತ್ರಕ್ಕೆ ತಕ್ಕುದಾಗಿದೆ.

3 comments:

  1. was hoping to catch this movie in a theater near my home...now i am in two minds...:-(

    ReplyDelete
  2. Lusia chitra 2 baari nodidare arthavaaguva chitra. aadare cinema 2gante 20 nimisha iruvudarinda adu swalpa kashta. cinema length ondhishtu cut maadidare tumba chennagirutte.

    ReplyDelete

  3. ನನಗೆ ಲುಸಿಯಾ ಸ್ವಲ್ಪ ಬೋರ್ ಆಯ್ತು . ಹಾಡುಗಳು ಸಿನೆಮಾಗೆ ಹೊಂದಿಕೆಯಾಗಿದೆ ಅನ್ನಿಸಲಿಲ್ಲ
    ಆಕ್ಟಿಂಗ್ ನೊ ಡೌಟ್ ಸೂಪರ್

    ReplyDelete