Tuesday, June 18, 2013

ನನ್ನಿಷ್ಟ ಪುಸ್ತಕ ಮತ್ತು ರಾಮ್ ಗೋಪಾಲ್ ವರ್ಮ...

“ನನ್ನ ಪ್ಲಾಪ್ ಸಿನಿಮಾಗಳೆಲ್ಲವನ್ನೂ ನಾನು ಉದ್ದೇಶಪೂರ್ವಕವಾಗಿ ತೆಗೆದದ್ದು...ಹಾಗೂ ನನ್ನ ಹಿಟ್ ಸಿನಿಮಾಗಳೆಲ್ಲಾ ಅನಿರೀಕ್ಷಿತವಾಗಿ ಸಂಭವಿಸಿದ್ದು..”
ನಮಗೆ ನಿಮಗೆ ಗೊತ್ತಿರುವಂತೆ ಸತ್ಯ ಮತ್ತು ದಿಲ್ ಸೆ ಚಿತ್ರಗಳು ಒಂದೆ ವರ್ಷದಲ್ಲಿ ಬಿಡುಗಡೆಯಾದವು. ದಿಲ್ ಸೆ ಚಿತ್ರದಲ್ಲಿ ದಿಗ್ಗಜ ಮಣಿರತ್ನಂ ನಿರ್ದೇಶಕನ ಪಟ್ಟವನ್ನು ಅಲಂಕರಿಸಿದ್ದರು. ಸಂಗೀತ ಮಾಂತ್ರಿಕ ಎ.ಆರ್.ರಹಮಾನ್ ಸಂಗೀತ ನೀಡಿದ್ದರು. ಬಾಲಿವುಡ್ ಚಿತ್ರದ ಸೂಪರ್ ಸ್ಟಾರ್  ಶಾರುಕ್ ಖಾನ್ ಇದ್ದರು. ಹೀಗೆ ಬರೀ ದಿಗ್ಗಜರನ್ನೇ ಹೊಂದಿದ್ದ ಬಹು ನಿರೀಕ್ಷಿತ ದಿಲ್ ಸೆ ಪ್ರೇಕ್ಷಕರಿಂದಲೂ ವಿಮರ್ಶಕರಿಂದಲೂ ಗಲ್ಲಾಪೆಟ್ಟಿಗೆ ದೃಷ್ಟಿಯಿಂದಲೂ ಬಹುದೊಡ್ಡ ಸೋಲು ಕಂಡಿತ್ತು. ಆದರೆ ವರ್ಮಾ ಬಿಟ್ಟರೆ ಬೇರಾರೂ ಅಷ್ಟೊಂದು ಪರಿಚಿತರಲ್ಲದ ಸತ್ಯ ಚಿತ್ರ ಬಹುದೊಡ್ಡ ಯಶಸ್ಸು ಕಂಡಿತಲ್ಲದೆ ಮಾಸ್ಟರ್ ಪೀಸ್ ಎನಿಸಿಕೊಂಡಿತು.ವಿಷಯವೇನಪ್ಪ ಎಂದರೆ ರಾಮ್ ಗೋಪಾಲ್ ವರ್ಮರವರು ದಿಲ್ಸೆ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದರು.
ನನಗೆ ವರ್ಮಾ ಬಗ್ಗೆ ಅಚ್ಚರಿ ಎನಿಸಿದ್ದೆ ಈ ಕಾರಣದಿಂದಾಗಿ. ನಿರ್ಮಾಣ, ನಿರ್ದೇಶನ , ಬರಹ ಎಲ್ಲವನ್ನೂ ಸಮಪ್ರಮಾಣದಲ್ಲಿ ಹಂಚಿಕೊಂಡು ಹೋದ ಚಿತ್ರಕರ್ಮಿ ವರ್ಮಾ. ಮಣಿರತ್ನಂ ರವರ ತಿರುಡಾ ತಿರುಡಾ ಚಿತ್ರಕ್ಕೆ ಚಿತ್ರಕಥೆ ಬರೆದದ್ದು ಇದೆ ರಾಮ್ ಗೋಪಾಲ್ ವರ್ಮ.
ರಾಮ್ ಗೋಪಾಲ್ ವರ್ಮ ಬರೆದಿರುವ “ನನ್ನಿಷ್ಟ” ಪುಸ್ತಕವು ನಾನು ಮೊನ್ನೆ ಓದಿದೆ. ಅದು ಅಗ್ನಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಾಗ ಒಂದೆರೆಡು ಕಂತುಗಳನ್ನು  ಓದಿದ್ದೆನಾದರೂ ಪೂರ್ತಿ ಪುಸ್ತಕಕ್ಕಾಗಿ ಕಾದಿದ್ದೆ. ಮೊನ್ನೆ ಕೈಗೆ ಸಿಕ್ಕಾಗ ಸುಮಾರು ನೂರ ಅರವತ್ತೇಳು ಪುಟಗಳ ಪುಸ್ತಕವನ್ನು ಒಂದೆ ಗುಕ್ಕಿನಲ್ಲಿ ಓದಿ ಮುಗಿಸಿದೆ. ಪುಸ್ತಕ ಅದ್ಭುತವಲ್ಲದಿದ್ದರೂ, ಪೂರ್ತಿಯಾಗಿ ರಾಮ್ ಗೋಪಾಲ್ ವರ್ಮನನ್ನು ಹಿಡಿದಿಡದಿದ್ದರೂ ವರ್ಮಾರ ಯೋಚನಾಲಹರಿಯ ಒಂದು ಭಾಗವನ್ನಾದರೂ ನಮಗೆ/ಓದುಗರಿಗೆ ವಿಶದಪಡಿಸುತ್ತದೆ. ಇಲ್ಲಿ ನಿರ್ದೇಶಕ ವರ್ಮಾ ಇದ್ದಾರೆ ಹೊರತು ವೈಯಕ್ತಿಕ ವರ್ಮರ ಕಥೆಯಿಲ್ಲ. ಅವರು ಹುಟ್ಟು, ಓದು ಹೆಂಡತಿ ಮಕ್ಕಳು..ತಂದೆ ತಾಯಿ ..ಉಹೂ..ಯಾವುದೂ ಇಲ್ಲ. ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಪ್ರಸ್ತಾಪವಾಗುತ್ತದದಾದರೂ ಅದೂ ಸಿನಿಮಾದ ಒಂದು ಭಾಗಕ್ಕೆ ಸಹಾಯಮಾಡಲೆಂದೇ ಪ್ರಸ್ತಾಪವಾಗುತ್ತದೆ.
ವರ್ಮ ಭಾರತೀಯ ಚಿತ್ರರಂಗ ಕಂಡ ವಿಶಿಷ್ಟ ನಿರ್ದೇಶಕ. ಯಾವುದೇ ಇಮೇಜಿಗೆ ಗಂಟು ಬೀಳದ ತನ್ನಿಷ್ಟ ಬಂದಹಾಗೆ ಸಿನಿಮಾ ತೆಗೆಯುತ್ತಾ ಹೋದ ಚಿತ್ರಕರ್ಮಿ. ಅವರ ಸಿನಿಮಾಗಳಲ್ಲಿ ಭೂಗತ ಜಗತ್ತು ಕೊಲೆ ಸುಲಿಗೆ ಮುಂತಾದವುಗಳೇ ಮುಖ್ಯ ದ್ರವ್ಯ. ನವಿರುತನ, ತಿಳಿಹಾಸ್ಯದ ನಿರೂಪನೆಯಿರುವ ಚಿತ್ರಗಳು ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ನನಗೆ ಗೊತ್ತಿರುವ ಮಟ್ಟಿಗೆ ವಿಮರ್ಶಕರಿಂದ ಅತಿ ಹೆಚ್ಚು ಪ್ರಶಂಶೆಗೊಳಗಾದ ಹಾಗೆ ಕಟು ವಿಮರ್ಶೆಗೊಳಗಾದ ನಿರ್ದೇಶಕ ಎಂದರೆ ರಾಮ್ ಗೋಪಾಲ್ ವರ್ಮ ಎನ್ನಬಹುದು. ಆತನ ಚಿತ್ರಕ್ಕೆ ಅಗ್ಯಾತ್ ಗೆ ಬೆಂಗಳೂರ್ ಮಿರರ್ ಪತ್ರಿಕೆ ಸೊನ್ನೆ ಸ್ಟಾರ್ ನೀಡಿತ್ತು. ನಾನು ಇದುವರೆವಿಗೂ ಸೊನ್ನೆ ಸ್ಟಾರ್ ಪಡೆದ ಇನ್ನೊಂದು ಚಿತ್ರವನ್ನು ನೋಡಿಲ್ಲ. ಆದರೆ ಅವರ ಸರ್ಕಾರ್, ಸರ್ಕಾರ್ ರಾಜ್ , ಸತ್ಯ ಚಿತ್ರಗಳು ಅತ್ಯುತ್ತಮ ಚಿತ್ರ ಎಂದು ಪ್ರಶಂಶನೀಯ ವಿಮರ್ಶೆಗಳಿಸಿದ್ದವು.ತೆಲುಗಿನಲ್ಲಿ ಚಿತ್ರಯಾನ ಪ್ರಾರಂಭಿಸಿದ ವರ್ಮ ತಮಿಳು ಹಿಂದಿ ಚಿತ್ರರಂಗದಲ್ಲಿ ತಮ್ಮ ಛಾಪು ಒತ್ತಿದ್ದು ಅದೂ ಅತೀ ಕಡಿಮೆ ಸಮಯದಲ್ಲಿ ದೊಡ್ಡ ಸಾಧನೆಯಲ್ಲದೇ ಮತ್ತೇನು..?
ಪುಸ್ತಕದಲ್ಲಿ ಅವರ ಚಿತ್ರರಂಗ ಪ್ರವೇಶದಿಂದ ಹಿಡಿದು ಅವರ ಹಿನ್ನೆಲೆ, ಹುಚ್ಚು ಸಾಹಸಗಳ ವಿವರ ಇದೆ.
ಅವರ ಶ್ರೇಷ್ಠವೆನಿಸುವ ಚಿತ್ರಗಳ ಹಿಂದಿನ ಕಥೆಯಿದೆ. ಹಾಗೆ ಅವರ ಜೊತೆ ಬೆಳೆದ, ಅವರ ಸಿನಿಮಾಗಳಲ್ಲಿ ಕೆಲಸ ಮಾಡಿದ ಬರಹಗಾರ, ನಿರ್ದೇಶಕ ಬಗೆಗಿನ ಆರೋಗ್ಯಕರವಾದ ಪ್ರಸ್ತಾಪ ಇದೆ. ಹಾಗೆಯೇ ಬೇರೆಯ ನಿರ್ದೇಶಕರ ಬಗ್ಗೆ ಅವರಿಗಿರುವ ಅಭಿಪ್ರಾಯವಿದೆ. ಹಾಗೆ ನಮಗೆ/ನಿಮಗೆ ಗೊತ್ತಿಲ್ಲದ ವರ್ಮಾರ ಕಿರುಪರಿಚಯವಿದೆ.
ಒಮ್ಮೆ ಓದಿ.
ಕೆಲವು ಸಿನಿಮಾಗಳು ನೋಡುತ್ತಾ ನೋಡುತ್ತಾ ಇಷ್ಟು ಬೇಗ ಮುಗಿದುಹೊಯಿತಾ ಎನಿಸುತ್ತದೆ. ಹಾಗೆಯೇ ನಾನು ಯಂಡಮೂರಿಯವರ ಕಾದಂಬರಿಗಳನ್ನು ಓದುವಾಗ ದಿನಕ್ಕಿಷ್ಟೇ ಎಂಬಂತೆ ಓದುತಿದ್ದೆ. ಅದಕ್ಕೆ ಕಾರಣ ಒಂದೇ ದಿನಕ್ಕೆ ಓದಿ ಮುಗಿಸಿಬಿಟ್ಟರೆ ಮತ್ತೆ ಓದಲು ಮುಂದೇನು ಎಂಬ ಭಯವಿತ್ತು...ವರ್ಮಾರ ಪುಸ್ತಕವೂ ಅಷ್ಟೇ. ಇಷ್ಟೇನಾ .?ಎನಿಸುತ್ತದೆ. ಕಾರಣ ವರ್ಮಾ ಅವರ ಚಿತ್ರಗಳಿಂದಾಗಿ ನಮಗೆ ಹೆಚ್ಚು ಕುತೂಹಲಕಾರಿಯಾಗಿದ್ದಾರೆ. ಅವರ ಪುಸ್ತಕ, ಜೀವನಚರಿತ್ರೆ ಎಂದಾಗ ನಮಗೆ ಹೆಚ್ಚು ನಿರೀಕ್ಷೆ ಇದ್ದುಬಿಟ್ಟಿರುತ್ತದೆ. ಆದರೆ ಪುಸ್ತಕದಲ್ಲಿ ಅಷ್ಟು ವಿಷಯವಿಲ್ಲ. ಎಲ್ಲವೂ ಸರಳಾತಿಸರಳ  ಎನಿಸಿ, ವರ್ಮಾ ತೀರಾ ಅವರ ಒಳಗುದಿಯನ್ನು ಬಿಚ್ಚಿಟ್ಟಿಲ್ಲ , ಸುಮ್ಮನೆ ಕೆಲವು ವಿಷಯಗಳನ್ನು ತೇಲಿಸಿಬಿಟ್ಟಿದ್ದಾರೇನೋ ಎನಿಸುವುದರಿಂದ “ನನ್ನಿಷ್ಟ” ಪುಸ್ತಕ ಓದಿ ಮುಗಿಸಿದ ಮೇಲೂ ನಮ್ಮ ನಿರೀಕ್ಷೆ ತಣಿಯುವುದಿಲ್ಲ.
ಕೊಸರು:ಮೊನ್ನೆ ಕಡ್ಡಿಪುಡಿ ಚಿತ್ರ ನೋಡುತ್ತಿದ್ದಾಗ ನನಗನ್ನಿಸಿದ್ದು. ಚಿತ್ರದಲ್ಲಿ ಮೂರು ಜನ ಹಿಂಸಾವಿನೋದಿಗಳು ಕುಡಿದು ಸಿಗರೇಟು ಸೇದುತ್ತಾ ಹುಡುಗಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡುವ ದೃಶ್ಯವೊಂದಿದೆ. ಆಗ ಆ ದೃಶ್ಯ ನಡೆಯುತ್ತಿರುವಾಗ ಕೆಳಗೆ ಧೂಮಪಾನ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶ ಬರುತ್ತಲೇ ಇರುತ್ತದೆ. ಅಲ್ಲಿ ಅವರು ಚಿತ್ರದಲ್ಲಿ ಕೊಲೆಯನ್ನೂ ಮಾಡುತ್ತಿರುತ್ತಾರೆ, ಅತ್ಯಾಚಾರ ಮಾಡುತ್ತಿರುತ್ತಾರೆ. ಅಂದರೆ ಅತ್ಯಾಚಾರ ಮಾಡಬಹುದು, ಕೊಲೆ ಮಾಡಬಹುದು...ಧೂಮಪಾನ ಮದ್ಯಪಾನ ಮಾಡಬಾರದು ಎಂದರ್ಥವೆ ಎನಿಸಿ ನಗುಬಂದಿತು.

1 comment:

  1. ಪುಸ್ತಕದ ಬಗ್ಗೆ ಚೆನ್ನಾಗಿ ಹೇಳಿದಿರಿ.
    ಹೌದು ..ಖಂಡಿತಾ ನಗು ಬರೋ ವಿಚಾರ.
    ಕಡ್ಡಿಪುಡಿ ಬಗ್ಗೆ ಬರಿಯಲ್ವ ?

    ವೈಯುಕ್ತಿಕವಾಗಿ
    ಸೂರಿಯವರು ಪ್ರೇಮ ಕಥೆಯನ್ನ ಚೆನ್ನಾಗೆ ತೋರಿಸಿದ್ರೂ
    ಯಾಕೋ ಕೆಲವಿಷಯಗಳು ಬೋರ್ ಹೊಡಿಸಿದವು
    ಕೆಲವು ಮುಜುಗರ ಉಂಟುಮಾಡಿದವು

    ReplyDelete