Monday, April 22, 2013

ಬೆಳದಿಂಗಳ ಬಾಲೆಯ ಕನವರಿಕೆ...

ಕೆಲವೊಮ್ಮೆ ನಾವೇ ಮೆಚ್ಚಿದ ನಮ್ಮದೇ ಕಥೆಗಳು, ಆಲೋಚನೆಗಳು ಹಲವಾರು ದಿನ ಕಳೆದ ನಂತರ ನಮಗೆ ಔಟ್ ಡೇಟೆಡ್ ಎನಿಸುತ್ತದೆ. ಹಾಗೆ ಕೆಲವು ಸಿನೆಮಾಗಳ ವಸ್ತುಗಳೂ ಅಷ್ಟೇ. ತಂತ್ರಜ್ಞಾನ ಬೆಳೆದಂತೆ ಆವತ್ತಿನ ಸಿನೆಮಾವನ್ನು ಈವತ್ತು ನೋಡಿದಾಗ ಅರ್ಥಹೀನ ಎನಿಸುತ್ತದೆ. ಆದರೆ ಸಿನೆಮಾವನ್ನು ಆವತ್ತಿನ ಕಾಲಮಾನದಲ್ಲೇ ನೋಡಿದಾಗ ಮಾತ್ರ ನಮಗೆ ತಟ್ಟುತ್ತದೆ. ಅದರಲ್ಲೂ ನನ್ನ ಪೀಳಿಗೆಯವರು ನಾವು ಅದೃಷ್ಟವಂತರು ಎನ್ನಬಹುದು. ನಮಗೆ ಪತ್ರ ಬರೆಯುವ, ಪೋಸ್ಟ್ ಮಾಡುವ, ಅ೦ಚೆಗಾಗಿ ಕಾಯುವ ..ಎಲ್ಲವೂ ಅನುಭವಕ್ಕೆ ನಿಲುಕಿವೆ. ಹಾಗೆಯೇ ಇಮೇಲ್ ಕೂಡ ಗೊತ್ತು. ಎಸ್ಎಂ ಎಸ್ ಕೂಡ ನಮ್ಮ ಕೈಯಲ್ಲಿದೆ. ಆದರೆ ತೀರಾ ಇತ್ತೀಚಿನ ಪೀಳಿಗೆಗೆ ಇಮೇಲ್ ಗೊತ್ತೇ ಹೊರತು ಅಂಚೆ ಗೊತ್ತಿಲ್ಲ. ಪತ್ರ ಬರೆದಿಲ್ಲ. ಅಥವಾ ಬರೆಯುವ ಅವಶ್ಯಕತೆ ಇಲ್ಲ. 
ನನಗನಿಸಿದ ಪ್ರಕಾರ ಯಾರನ್ನಾದರೂ ಮಿಸ್ ಮಾಡಿಕೊಳ್ಳಲು ಈವತ್ತಿನ ಮಟ್ಟಿಗೆ ಸಾಧ್ಯವಿಲ್ಲ. ಅಥವಾ ಮಿಸ್ ಮಾಡಿಕೊಳ್ಳುವ ತೀವ್ರತೆ ಆವತ್ತಿನಷ್ಟಿಲ್ಲ. ಕಾಲೇಜಿನಲ್ಲಿ ಪ್ರೀತಿಸುವ ಅಥವಾ ಆಗ ತಾನೇ ಪ್ರೀತಿಗೆ ಬಿದ್ದವರು ಬೇಸಿಗೆಯ ಅಥವಾ ದಸರಾ ರಜೆಗೆ ತಮ್ಮ ತಮ್ಮ ಊರಿಗೆ ತೆರಳಿದಾಗ ಅವರ ಚಡಪಡಿಕೆಗಳು ಅದೆಷ್ಟಿರುತ್ತಿದ್ದವು. ಬರೀ ಟೆಲೆಫೋನ್ ನಲ್ಲಿ ಕದ್ದು ಮುಚ್ಚಿ ಮಾತಾಡಿಕೊಳ್ಳುವ ಪುಳಕ ಈಗೆಲ್ಲಿ. ತಿಂಗಳುಗಟ್ಟಲೆ ಮಿಸ್ ಮಾಡಿಕೊಳ್ಳುತ್ತಾ ಆ ಮೂಲಕ ಕಾಯುತ್ತ ಕೊನೆಗೊಂದು ದಿನ ಭೇಟಿಯಾದಾಗ ಮಾತು ಬರದೆ ಸುಮ್ಮನೆ ಮುಖ ಮುಖ ನೋಡುತ್ತಾ ಕಣ್ಣಂಚಿನಲ್ಲಿ ನೀರು ಜಿನುಗಿ...ಇಡೀ ದಿನಗಟ್ಟಲೆ ಹೇಗೆ ಬರೀ ನೆನಪಲ್ಲೇ ಕನಸಲ್ಲೇ ಕಳೆದದನ್ನು ಹೇಳಿಕೊಳ್ಳುವ ಅಂತ ಮನಸು ತವಕಿಸಿದರೂ ಮಾತು ಬರದೆ...ಅಬ್ಬಾ...
ಆದರೆ ಈಗ ಅದಿಲ್ಲ. ಮಿಸ್ ಮಾಡಿಕೊಳ್ಳುವ ಅವಧಿಯನ್ನು ಅಥವಾ ತೀವ್ರತೆಯನ್ನು ಮೊಬೈಲ್ ತಿಂದು ಹಾಕಿದೆ. 'ಏಯ್.. ನಾನಿಲ್ಲಿದ್ದೇ ಗೊತ್ತಾ...ಹೇಗಿದೆ ಅಂತೀಯ...ನೀನಿರಬೇಕಿತ್ತು...ಎಷ್ಟೊಂದು ಮಿಸ್ ಮಾಡ್ಕೊತಿದ್ದೀನಿ..' ಎಂದು ಆ ಕ್ಷಣದಲ್ಲೇ ಹೇಳಿಬಿಟ್ಟರೆ ಮುಗೀತಲ್ಲ...ಅಲ್ಲಿಗೆ ಮಿಸ್ ಮೈನಸ್...
ಬೆಳದಿಂಗಳ ಬಾಲೆಯ ರೇವಂತ್ ಒಂದು ಸ್ಥಿರದೂರವಾಣಿಯಲ್ಲಿ ಕೇಳಿಬರುವ ಸುಂದರ ಹುಡುಗಿಯ ಧ್ವನಿಗೆ ಮಾರುಹೋಗಿ ಹುಡುಕುತ್ತಾ ಸಾಗುವಲ್ಲಿನ ಪಯಣ ಅದೆಷ್ಟು ರೋಚಕ ರೋಮಾಂಚಕವಾಗಿತ್ತು ಅಲ್ಲವಾ..?ಚದುರಂಗದಾಟದಲ್ಲಿ ಗಟಾನುಗಟಿಗಳನ್ನು ಹೊಡಿದುರುಳಿಸೋ ರೇವಂತ್ ಒಂದು ನಂಬರ್, ಆ ಮೂಲಕ ಆ ಬೆಳದಿಂಗಳ ಬಾಲೆಯನ್ನು ಹುಡುಕಲು ಪಡುವ ಪ್ರಯತ್ನಗಳು, ಆಕೆ ಕೊಡುವ ಸುಳಿವುಗಳು, ನೋಡುಗನಿಗೆ ಅದೆಷ್ಟು ಆಪ್ತವೆನಿಸಿರಲಿಲ್ಲ. ಅಷ್ಟೇ ಅಲ್ಲ...ಚಿತ್ರದ ಕೊನೆಯಲ್ಲಿ ನಂಬರ್,  ಆ ಮನೆ ಗೊತ್ತಾಗಿ ಆಕೆಯನ್ನು ನೋಡಲು ಮಳೆಯಲ್ಲೇ ಓಡುವ ರೇವ೦ತನಿಗಿ೦ತ ನೋಡುಗನ ಕಾತರವೇ ಹೆಚ್ಚಿದ್ದಿರಬಹುದೇನೋ..?
ಹಾಗೆ ನೀವು ಯಾರೇ ನೀನು ಚಲುವೆ ಚಿತ್ರದಲ್ಲಿ ಬರೇ ಸ್ಥಿರದೂರವಾಣಿ ಮೂಲಕ, ಪತ್ರದ ಮೂಲಕ ಸಂಗೀತ, ರವಿಚಂದ್ರನ್ ಪ್ರೀತಿಯಲ್ಲಿ ಬೀಳುವುದನ್ನು ಅನುಭವಿಸದಿರುವುದಾದರೂ ಹೇಗೆ.? ಬರೀ ಪತ್ರಕ್ಕಾಗಿ ಕಾಯುತ್ತಾ , ಪತ್ರಗಳ ಮುಖೇನ ಕನಸು  ಹಂಚಿಕೊಳ್ಳುತ್ತಾ ಪ್ರೀತಿಯನ್ನು ಗಟ್ಟಿಮಾಡಿಕೊಳ್ಳುವ ವಿಸ್ಮಯ ಅದೆಷ್ಟು ಚಂದವಿತ್ತಲ್ಲವೇ? ಚಿತ್ರದ ಕೊನೆಯಲ್ಲಿ ಜೊತೆಯಲ್ಲೇ ರವಿಚಂದ್ರನ್ ಇದ್ದರೂ ಊರೆಲ್ಲಾ ಅಲೆಯುವ ನಾಯಕಿಗೆ ನಾಯಕ ಸಿಗುವ ಕೊನೆಕ್ಷಣದಲ್ಲಿ ನಮ್ಮ ಮೈಮನಸು ರೋಮಾಂಚನದಿಂದ ಅರಳದಿರಲು ಸಾಧ್ಯವೇ ಹೇಳಿ.
ಸುಮ್ಮನೆ ಯೋಚಿಸಿದಾಗ ಅಕಸ್ಮಾತ್ ಮೊಬೈಲ್ ಆವಾಗಲೇ ಬ೦ದುಬಿಟ್ಟಿದ್ದರೆ ಎಂಬ ಭಯವಾಗುತ್ತದೆ ನನಗೆ. ರೇವಂತ್ ಒಂದೆ ಘಂಟೆಯಲ್ಲಿ ಕಂಡುಹಿಡಿದುಬಿಡುತ್ತಿದ್ದ. ಆಕೆಯ ಜೊತೆಗೆ ಅಷ್ಟು ಬಾಂಧವ್ಯ ಬೆಳೆಯುತ್ತಿರಲಿಲ್ಲವೇನೋ? ಆಫೀಸಿಗೆ ಹೊರಡುವಾಗ, ಬಸ ಹತ್ತಿದ ಮೇಲೆ, ತಲುಪಿದ ಮೇಲೆ, ಮದ್ಯಾಹ್ನದ ಊಟದ ಸಮಯದಲ್ಲಿ ..ಹೀಗೆ ಪ್ರೀತಿ ಪಾತ್ರರಿಗೆ ಕ್ಷಣಕ್ಷಣದ ವರದಿ ಸಲ್ಲಿಸುವ ಮೊಬೈಲಿಗರಾದ ನಾವು, ಯಾರೇ ಪರಿಚಯವಾದರೂ ನಿಮ್ಮ ನಂಬರ್ ಕೊಡಿ, ಇದು ನನ್ನ ನಂಬರ್ ಎಂದು ವಿನಿಮಯ ಮಾಡಿಕೊಂಡು ಬಿಡುವ ಈ ಕಾಲದಲ್ಲಿ ಸಂಗೀತ ಪಟ್ಟಷ್ಟು ಕಷ್ಟ ಪಡಬೇಕಿಲ್ಲವೇನೋ? ಹಾಗಾಗಿ ಯಾರೇ ನೀನು ಚಲುವೆ ಚಿತ್ರವೇ ನಮಗೆ ಸಿಗುತ್ತಿರಲಿಲ್ಲ.ನಂಬರ ವಿನಿಮಯವಾಗಿ ಅಲ್ಲೇ ಪ್ರೀತಿ ಬೆಳೆದು ಅವರು ಒಬ್ಬರನ್ನೊಬ್ಬರು ಸಿಕ್ಕಿ ಎಲ್ಲವೂ ಸುಲಭವಾಗಿಬಿಡುತ್ತಿತ್ತು.
ಜೋಗಿ ಚಿತ್ರದಲ್ಲಿನ ಒಂದು ದೃಶ್ಯ. ಬೆಂಗಳೂರು ಮಹಾನಗರಿಗೆ ಬಂದು ಅರಿವಿಲ್ಲದೆ ರೌಡಿಯಾಗಿ ಬಿಡುವ  ಮಾದೇಶ ಅಮ್ಮನನ್ನು ಹುಡುಕುವುದು, ಹಾಗೆ ಮಗನನ್ನು ಹುಡುಕಿಕೊಂಡು ಬರುವ ಮಾದೇಶನ ತಾಯಿಗೆ ಮಗನ ಗೆಳೆಯ ಯೋಗೇಶ ಸಿಗುವುದು ಎಲ್ಲವೂ ಸರಿ. ಆಕೆ ಮೊದಲು ಯೋಗೇಶನಿಗೆ ಸಿಕ್ಕಿ ಆನಂತರ ಯೋಗೇಶ ಮಾದೇಶನಿಗೆ ಸಿಕ್ಕಾಗ ಅಮ್ಮನ ವಿಷಯ ತಿಳಿದವನು ವಿಳಾಸ ಬರೆದುಕೊಡುತ್ತಾನೆ ಹೊರತು ಮೊಬೈಲ್ ನಂಬರ್ ಕೊಡುವುದಿಲ್ಲ. ಚಿತ್ರದಲ್ಲಿ ಮಾದೇಶ ಮೊಬೈಲ್ ಕಾಲದವನಾದರೂ ಉಪಯೋಗಿಸುವುದಿಲ್ಲ. ಅದು ಚಿತ್ರದ ಓಟಕ್ಕೆ ಪ್ಲಸ್ ಆಗಿದೆ.
ಈಗಂತೂ  ಮೊಬೈಲ್ ಮಿಸ್ ಆದ ಕುರಿತು ಹಾಸ್ಯಮಯ, ಪ್ರೇಮ ಮತ್ತು ಸಾಹಸಮಯ ಚಿತ್ರಗಳು ಎಲ್ಲ ಭಾಷೆಯಲ್ಲೂ ಸುಮಾರಷ್ಟು ಬಂದಿವೆ. ಮೊಬೈಲಿ೦ದಲೆ ಪ್ರೀತಿ ಹುಟ್ಟುವ, ಮೊಬೈಲಿ೦ದಲೆ ಏನೇನೋ ಆಗುವ ಸಿನಿಮಾಗಳಿಗೇನೂ ಕೊರತೆಯಿಲ್ಲ. ಆದರೂ ಮೊದಲ ಪ್ರೇಮ ಪತ್ರವೇ..? ಎನ್ನುವ ಪತ್ರ ಮುಖೇನ ಪ್ರೀತಿಯ ಪುಳಕವೇಕೋ ಸಿಗುತ್ತಿಲ್ಲವೆನಿಸುತ್ತದೆ.
ನಿಮ್ಮ ಅಭಿಪ್ರಾಯ..?



1 comment:

  1. ನಂಗಂತೂ ಬೆಳದಿಂಗಳ ಬಾಲೆಯೇ ಇಷ್ಟ :)

    ReplyDelete