Friday, July 13, 2012

ಒಂದು ಪುಸ್ತಕ , ಒಂದು ಸಿನಿಮಾ :


ಗ್ಯಾಂಗ್ಸ್ ಆಫ ವಾಸ್ಸೇಪುರ್
ದೊಂದು ಸಣ್ಣಕಥೆಯನ್ನು ಓದಿ ಸುಮಾರು ವರ್ಷಗಳೇ ಕಳೆದಿದ್ದರೂ ಅದರ ಒಂದೊಂದು ಸಾಲುಗಳೂ ನನ್ನಲ್ಲಿ ಅಚ್ಚಳಿಯದೇ ಹಾಗೇ ಉಳಿದಿವೆ.ಆತ ಸಿನಿಮಾಗಳಲ್ಲಿ ಅಭಿನಯಿಸುವ ಸಹನಟ ಅರ್ಥಾತ್ ಜ್ಯೂನಿಯರ್ ಆರ್ಟಿಸ್ಟ್. ಆವತ್ತೂ ಕೂಡ ಎಂದಿನಂತೆ ಸಿನಿಮಾವೊಂದರಲ್ಲಿ ಸಹನಟನ ಪಾತ್ರ ಸಿಕ್ಕಿದೆ. ಅವನ ಪಾತ್ರವಿಷ್ಟೆ. ನಾಯಕ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾನೆ. ರಸ್ತೆಯಲ್ಲಿ ಸುಮಾರು ಜನ ದಾರಿಹೋಕರೂ ನಡೆದುಕೊಂಡು ಹೋಗುತ್ತಿರುತ್ತಾರೆ. ಈತ ಮಾತ್ರ ನಾಯಕನಿಗೆ ಡಿಕ್ಕಿ ಹೊಡೆದು ಕ್ಷಮೆ ಕೇಳಿ ಮುಂದೆ ಹಾದುಹೋಗಬೇಕು. ಆಗ ಆ ಸಹನಟನಿಗೆ ಡಿಕ್ಕಿ ಹೊಡೆದ ಮೇಲೆ ಯಾವ ರೀತಿ ಪ್ರತಿಕ್ರಿಯಿಸಬೇಕು, ಆತನ ಪ್ರತಿಕ್ರಿಯೆ ಏನು? ನಾನು ಹೇಗೆ ಯಾವ ರೀತಿ ಡಿಕ್ಕಿ ಹೊಡೆಯಬೇಕು ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.ತೀರಾ ಒಂದು ನಿಮಿಷವೂ ಬರದ ಆ ಪಾತ್ರಕ್ಕೆ ಆ ಸಹನಟ ತಯಾರಿಯಾಗುವುದೇ ಕಥೆಯ ವಸ್ತು. ನಿಜಕ್ಕೂ ಸಿನಿಮಾದಲ್ಲಿನ ತನ್ಮಯತೆ ಮತ್ತು ಹೊಂದಾಣಿಕೆ, ಪೂರ್ವ ತಯಾರಿ, ಕಲಾವಿದನಿಗಿರಬೇಕಾದ ಅಭಿನಯದೆಡೆಗಿನ ಪೂಜ್ಯಭಾವನೆ ಮುಂತಾದವುಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ ಸತ್ಯಜಿತ್ ರೇ. ಹೌದು.ಈ ಕಥಾಲೇಖಕ ಬೇರಾರೂ ಅಲ್ಲ. ಖ್ಯಾತ ಭಾರತೀಯ ನಿರ್ದೇಶಕ ಸತ್ಯಜಿತ್ ರೇ. ಅವರ ಸಣ್ಣಕಥೆಗಳು ಒಂದಕ್ಕಿಂತ ಒಂದು ಸ್ವಾರಸ್ಯಕರವಾಗಿದೆ. ಮೊನ್ನೆ ಮೈ ಇಯರ್ಸ್ ವಿಥ್ ಅಪು ಕಾದಂಬರಿ ಓದಿ ಮುಗಿಸಿದಾಗ ಆವರು ವಿಶ್ವಮಾನ್ಯ ಚಲನಚಿತ್ರ ಪಥೇರ್ ಪಾಂಚಾಲಿ ಸರಣಿಯ ನಿರ್ದೇಶನಕ್ಕಾಗಿ ಪಟ್ಟ ಕಷ್ಟಗಳು, ಅದರ ಪೂರ್ವ ತಯಾರಿಗಳು ಮುಂತಾದವುಗಳನ್ನು ಓದಿದಾಗ ಒಬ್ಬ ಚಿತ್ರಕರ್ಮಿ ತನ್ನ ಕನಸಿನ ಸಾಕ್ಷಾತ್ಕಾರಕ್ಕಾಗಿ ಏನೇನಲ್ಲಾ ತ್ಯಾಗ ಮಾಡಲು ತಯಾರಾಗಿ ಬಿಡುತ್ತಾನೆಂಬುವುದು ಆಶ್ಚರ್ಯತರಿಸುತ್ತದೆ. ಮತ್ತದು ಎಲ್ಲರ ಕೈಯಲ್ಲೂ ಸಾಧ್ಯವೂ ಇಲ್ಲ ಬಿಡಿ.ಚಿತ್ರದಲ್ಲಿ ಬರುವ ಮನೆಯ ಸೂರಿನ ಒಂದು ತೊಲೆ ಹೇಗಿರಬೇಕು ಎನ್ನುವುದರಿಂದಾ ಹಿಡಿದು ನಾಯಕಿಯ ಗೆಳತಿಯ ಮೂಗುತಿ ಎಷ್ಟು ದೊಡ್ಡದಿರಬೇಕು ಎನ್ನುವವರೆಗೆ ರೇ ಮೊದಲೇ ನಿರ್ಧರಿಸುತ್ತಾರೆ. ಅದರಲ್ಲೂ ಸಾಕಷ್ಟು ಹಣಕಾಸನ್ನು, ಹೆಸರನ್ನು ಕೊಟ್ಟಿದ್ದ ಜಾಹಿರಾತು ವಿಭಾಗದಿಂದ ಸಿನಿಮಾಕ್ಕೇ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡೇ ಬಂದ ರೇ ಅವರನ್ನು ಸಿನಿಮಾ ಅಷ್ಟು ಸುಲಭವಾಗಿ ಬಿಗಿದಪ್ಪಿಕೊಳ್ಳುವುದಿಲ್ಲ. ಎಲ್ಲಾ ಒಂದು ರೀತಿಯಲ್ಲಿ ಸೆಟ್ ರೈಟ್ ಆಗಿದೆ, ಸರಿಯಾಗಿದೆ ಎನ್ನುವಷ್ಟರಲ್ಲಿ ಮತ್ತೆಲ್ಲೋ ಎಡವಟ್ಟುಗಳು, ಮತ್ತಿನ್ನೇನೋ ಸಮಸ್ಯೆಗಳು ಅದನ್ನು ಪರಿಹರಿಸುವಷ್ಟರಲ್ಲಿ ಹಣಕಾಸಿನ ತೊಂದರೆ..ಹೀಗೆ ಇಡೀ ಚಿತ್ರದುದ್ದಕ್ಕೂ ಒಂದಲ್ಲಾ ಒಂದು ಸಮಸ್ಯೆಗಳು ಅವರನ್ನು ಎಡೆಬಿಡದೆ ಕಾಡುತ್ತವೆ. ಆದರೆ ರೇ ಅವುಗಳನ್ನು ಅನುಭವ ಗಳೆಂದು ಪರಿಗಣಿಸಿ ತಮ್ಮನ್ನು ಸಿನಿಮಾದಲ್ಲಿ ತೊಡಗಿಸಿಕೊಳ್ಳುತ್ತಾರೆ. ಬಿಭೂತಿ ಭೂಷಣ್ ಬ್ಯಾನರ್ಜೀಯವರ ಕಾದಂಬರಿ ಈ ಕಲಾಕೃತಿಯಲ್ಲಿ ಬರುವ ಮುಖ್ಯಪಾತ್ರಧಾರಿಗಳನ್ನು ಆಯ್ಕೆಮಾಡುವುದಕ್ಕೇ ರೇ ಪಡುವ ಶ್ರಮ, ಅವರ ಪರಿಪಕ್ವತೆ, ನಿಖರತೆಗಳೂ ಕೂಡ ಆಶ್ಚರ್ಯತರಿಸುವಂತಹುದ್ದೆ. ಸಿನಿಮಾಕ್ಕಾಗಿ ಮನೆಯ ಆಭರಣಗಳನ್ನು ಒತ್ತೆಯಿಡುವಾಗ, ಹಣಕಾಸಿನ ವ್ಯವಸ್ಥೆಗಾಗಿ ದಿನಗಟಲೇ ಓಡಾಡುವಾಗ ಎಲ್ಲೂ ಕೂಡ ರೇ ಸಿನಿಮಾ ತಂದಿಟ್ಟ  
 ವಿಪರೀತ ಪರಿಸ್ಥಿತಿಗೆ ಕೊರಗುವುದಿಲ್ಲ, ಶಪಿಸುವುದಿಲ್ಲ. ಅದೆಲ್ಲದರ ನಡುವೆಯೇ ಅವರು ಸಿನಿಮಾದ ಚಿತ್ರಕಥೆಯ ಹೊಸಹೊಸ ಸಾಧ್ಯತೆಗಳ ಬಗ್ಗೆ, ತಿರುವುಗಳ ಜೋಡನೆಯ ಬಗ್ಗೆ ಅಲೋಚಿಸುತ್ತಾರೆ.ಇದೊಂದು ಪುಸ್ತಕವನ್ನು ಓದಿಲ್ಲದಿದ್ದರೆ ಒಮ್ಮೆ ಓದಿಬಿಡಿ. ಇಂಥ ಪುಸ್ತಕಗಳನ್ನೋದುವುದರಿಂದ ಅನೇಕ ಲಾಭವಿದೆ. ಆವತ್ತಿನ ರಾಜಕೀಯ ಪರಿಸ್ಥಿತಿ, ಸಿನಿಮಾಜಗತ್ತಿನ ಸ್ಥಿತಿಗತಿ, ಆವತ್ತಿನ ತಂತ್ರಜ್ಞಾನ, ಜನರ ದೃಷ್ಟಿ ಕಲಾವಿದರ ವರ್ತನೆಗಳು, ಆವತ್ತಿನ ಬಜೆಟ್ ಮುಂತಾದವುಗಳೂ ಕೂಡ ಗೊತ್ತಾಗಿಬಿಡುತ್ತವೆ.
   ಅನುರಾಗ್ ಕಶ್ಯಪ್ ನಿರ್ದೇಶನದ ಗ್ಯಾಂಗ್ಸ್ ಆಫ ವಾಸ್ಸೇಪುರ್ ಮತ್ತೊಂದು ರಕ್ತಚರಿತ್ರ ಎನಿಸಿಕೊಳ್ಳುತ್ತದೆ. ಹಾಗಂತ ಅನ್ನುವುದಕ್ಕೇ ನೇರ ಕಾರಣ ನಿರೂಪಣಾ ತಂತ್ರವಲ್ಲ. ಕಥೆಯ ವಸ್ತು. ಇಸವಿ 1941ರಲ್ಲಿ  ವಾಸ್ಸೇಪುರದಲ್ಲಿ ನಡೆಯುವ ರೈಲು ದರೋಡೆಯಿಂದ ಪ್ರಾರಂಭವಾಗುವ ಚಿತ್ರ ಒಂದು ಅನೂಹ್ಯ ರಕ್ತಸಿಕ್ತವೊಂದರ ಇತಿಹಾಸವನ್ನು ತೆರೆದಿಡುತ್ತಾ  
 ಸಾಗುತ್ತದೆ. ನನಗೆ ಪ್ರತಿಸಾರಿಯೂ ಒಂದು ಪ್ರಶ್ನೆ ಕಾಡುತ್ತಲೇ ಇರುತ್ತದೆ: ಮಾನವನ ಇತಿಹಾಸ ಇಷ್ಟು ಅಮಾನವೀಯವಾ? ಹೌದು ಜನ ಒಬ್ಬರನ್ನೊಬ್ಬರು ಕೊಚ್ಚಿಹಾಕುವ ಕಥೆ ರಕ್ತಚರಿತ್ರದ್ದು. ಇದು ಕೂಡ ಅಂತಹುದೇ ಕಥೆ. ಇಲ್ಯಾರನ್ನೂ ನಾಯಕ ಎಂದು ಬಿಂಬಿಸಲಾಗುವುದಿಲ್ಲ. ಅಥವಾ ಅವನು ಮಾಡಿದ್ದು ಸರಿ, ಅವನು ಹಾಗೆಯೇ ಮಾಡಬೇಕಿತ್ತು ಎಂದು ಒಂದು ಗಟ್ಟಿ ನಿರ್ಧಾರಕ್ಕೆ ಬರಲಾಗುವುದಿಲ್ಲ. ಬದಲಿಗೆ ಮೂರು ಹೊತ್ತು ತಿಂದು, ಚ೦ದಗೆ ಸಂಸಾರ ಮಾಡಿ ಅರವತ್ತೆಪ್ಪತ್ತು ವರ್ಷಕ್ಕೆ ಕೊನೆಯಾಗಿಬಿಡಬಹುದಾದ ಬದುಕನ್ನೇಕೆ   ರಕ್ತಸಿಕ್ತಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕಾಡದೇ ಬಿಡುವುದಿಲ್ಲ. ಇಲ್ಲಿ ಯಾವ ಕೊಲೆಯನ್ನೂ  
ನಿರ್ದೇಶಕ ವೈಭವೀಕರಿಸಿಲ್ಲ. ಅದು ಆವತ್ತು ಹೇಗೆ ನಡೆದಿತ್ತೋ ಹಾಗೆ ಚಿತ್ರೀಕರಿಸಿದ್ದಾನೆ. ಆದರೂ ಕೆಲವೊಮ್ಮೆ ಚಿತ್ರದ ಕಥೆಯ ಬಗ್ಗೆಯೇ ರೇಜಿಗೆ ಹುಟ್ಟಿಬಿಡುವುದಂತೂ ಸತ್ಯ. ಇದು ಒಬ್ಬನ, ಒಂದು ಕುಟುಂಬದ ಕಥೆಯಲ್ಲ. ತಲೆತಲೆಮಾರುಗಳ ಸುದೀರ್ಘ ಕಥನ. ಕಥೆಯನ್ನು ಹೇಳಬೇಕೆಂದರೆ; ಅವರಪ್ಪನನ್ನು ಕೊಂದನೆಂದು ಅವನ ಮಗ ಇವನನ್ನು ಕೊಲ್ಲಲು ಸಂಚುಮಾಡುತ್ತಾನೆ..ಮಧ್ಯದಲ್ಲಿ ಮತ್ತೊಂದಿಷ್ಟು ಜನರು ಸಾಯುತ್ತಾರೆ, ಇವನನ್ನು ಕೊಂದರೆಂದು ಇವನ ಮಗ ಅವರ ವಂಶವನ್ನೆ ನಿರ್ನಾಮಮಾಡಲು ನಿರ್ಧರಿಸುತ್ತಾನೆ..ಮಧ್ಯದಲ್ಲಿ ಮತ್ತೊಂದಷ್ಟು ಜನರು ಬರ್ಬರವಾಗಿ ಕೊಲೆಯಾಗುತ್ತಾರೆ..ಮತ್ತದು ಹೀಗೆಯೇ ಮುಂದುವರೆಯುತ್ತದೆ..
ಇದೆಲ್ಲದರ ನಡುವೆಯೂ ನಮಗಿಷ್ಟವಾಗುವುದು ಮನೋಜ್ ಬಾಜಪಯಿಯವರ ಅದ್ಭುತ ಅಭಿನಯ. ಇಡೀ ಒಂದು ಮನುಷ್ಯನ ಜೀವಿತಾವಧಿಯ ಪಾತ್ರವನ್ನು, ಆಯಾ ವಯಸ್ಸಿನ ಭಾವನೆಗಳನ್ನು ನಡವಳಿಕೆಯನ್ನು ವ್ಯಕ್ತಪಡಿಸುವ ಅವರ ಅಭಿನಯ ಸಾಮರ್ಥ್ಯಕ್ಕೆ ತಲೆಬಾಗಲೆಬೇಕು. ಹಾಗೇ ಯಾರ ಪರವೂ ವಹಿಸದೇ ಇದ್ದದ್ದನ್ನು ಇದ್ದ ಹಾಗೆ ತಣ್ಣಗೆ ನಿರೂಪಿಸುವ ನಿರ್ದೇಶಕ ಅನುರಾಗ್ ಕಶ್ಯಪ್‌ಗೂ ನಮನಗಳನ್ನು ಸಲ್ಲಿಸಬೇಕಾಗುತ್ತದೆ.
ಅಂದಹಾಗೆ  ಎರಡನೆಯ ಭಾಗವೂ ಬರುತ್ತದೆ ಎನ್ನುವ ಸೂಚನೆ ಕೊಡುತ್ತಾ ಚಿತ್ರವನ್ನ ಮುಗಿಸುವ ನಿರ್ದೇಶಕರು ಕಥೆಯನ್ನ ಅರ್ಧಕ್ಕೆ ನಿಲ್ಲಿಸಿಬಿಡುತ್ತಾರೆ.




9 comments:

  1. ಮೊದಲನೇ ಬಾರಿಗೆ 'ಮೈ ಈಯರ್ಸ್ ವಿದ್ ಅಪ್ಪು' ಕೇಳುತ್ತಿದ್ದೇನೆ. ಇ೦ಟರೆಸ್ಟಿ೦ಗ್ ಅನಿಸುತ್ತಿದೆ. ಮೂವಿ ಮೇಕಿ೦ಗ್ ಬಗ್ಗೆ ಅಚ್ಚರಿಯ ಅದ್ಭುತ ಚಿತ್ರಗಳೂ ಇವೆ. ನನಗೆ ಇಷ್ಟವಾದುದರಲ್ಲಿ ಕೆಲವು ಫೆಲಿನಿ ಯ "8 1/2", ಫ್ರಾನ್ಸಿಸ್ ಟ್ರಫೌಟ್ ನ 'Day for Night', ಟಿಮ್ ಬರ್ಟನ್ ನ 'Ed Wood'.
    ಅ೦ದ ಹಾಗೇ ಗ್ಯಾಂಗ್ಸ್ ಆಫ ವಾಸ್ಸೇಪುರ್ ನೋಡಬೇಕಿದೆ.

    ReplyDelete
  2. MY YEARS WITH APU IS A WONDERFUL BOOK.
    YES. I AGREE WID U. ALL THE MOVIES U NOTED ABOVE ARE EXCELLENT...
    BUT PERSONALLY I LIKE 81/2 FOR ITS INNOVATIVE IDEA N REALITY THRU FANTASY OR VICE VERSA...

    ReplyDelete
  3. this is good blog, ur writing is intresting.

    ReplyDelete
  4. ರವೀಂದ್ರ ಅವರೆ - ಗ್ಯಾಂಗ್ಸ್ ಆಫ್ ವಾಸೇಪುರ್ 1 ನ್ನು ಮಾತ್ರ ನೋಡಿದೆ -ಎಸ್ಟೋ ಭಯಾನಕ ಕೊಚ್ಚು ಕೊಲ್ಲು ಚಿತ್ರಗಳನ್ನು ನೋಡಿದ್ದೆ (ಎವಿಲ್ ಡೆಡ್ -ರೆಸಿಡೆಂಟ್ ಎವಿಲ್ )
    ಆದರೆ ಈ ಚಿತ್ರದ ಹಿಂಸೆ ಕೊಚ್ಚು ಕೊಲ್ಲು ರಕ್ತ ನೋಡಿ ವಾಂತಿ ಬರುವ್ದುದೊಂದೇ ಬಾಕಿ....!!
    ಅಂದು ನಡೆದದ್ದನ್ನ ಅದೇ ರೀತಿ ತೋರಿಸಿರುವುದು ನಿರ್ದೆಶಕನ ಜಾಣ್ಮೆ.....!

    ನೀವು ಚಿತ್ರಗಳ ಬಗ್ಗೆ ಬರೆವಾಗ ಎಲ್ಲ ಚಿತ್ರಗಳನ್ನು ಒಂದೇ ಬರಹದಲಿ ಸೇರಿಸುವುದು ಎಲ್ಲದರ ಬಗ್ಗೆ ಹೇಳುವುದು --ಅದನ್ನು ನಾವ್ ಓದಿದಾಗ ಅದು ಎಲ್ಲವೂ ತಲೆಗೆ ಹೋಗೋದು ಕಷ್ಟ...ಅದ್ಕೆ ಒಂದು ಸಿನೆಮ ಒಂದೇ ಬರಹ ರೀತಿ ಬರೆದರೆ ಪೂರ್ಣ ಗ್ರಹಣ ಆಗಬಹುದು ಅನ್ಸುತ್ತೆ....

    ಶುಭವಾಗಲಿ..

    \|/

    ReplyDelete
  5. I got a Kannada translation of Aparajito. currently reading that...:-)

    ReplyDelete
    Replies
    1. ಸೂಪರ್..ಯಾರು ಅನುವಾದಕರು?

      Delete
  6. ರವೀಂದ್ರರೇ, ಇದೀಗ ತಾನೇ ನಿಮ್ಮ ಬ್ಲಾಗಿನಿಂದ ಹಲವಾರು ಲೇಖನಗಳನ್ನ ಓದಿದೆ. ತುಂಬಾ ಹಿಡಿಸಿತು. ಏನೆಲ್ಲ ಮಾಹಿತಿ-ಒಳನೋಟಗಳನ್ನ ಹಂಚಿಕೊಳ್ಳುತ್ತ ಬಂದಿದ್ದೀರಿ! - ಅವುಗಳ ಹಿಂದೆ ತಮ್ಮ ವೈಯಕ್ತಿಕವಾದ ಅಪಾರ ಸಮಯ-ಪರಿಶ್ರಮಗಳಿರುವುದು ಸುಸ್ಪಷ್ಟ. ಬಲ್ಲವರಾಗಿದ್ದುಕೊಂಡು ಹೀಗೆ ನಿಯಮಿತವಾಗಿ ಬ್ಲಾಗಿಗೆ ಬರೆಯಲು ಅವಧಾನ-ವ್ಯವಧಾನಗಳನ್ನ ಇಟ್ಟುಕೊಂಡಿರುವುದು ನಿಜಕ್ಕೂ ಅಭಿನಂದನೀಯ ಸಂಗತಿ.

    ReplyDelete

  7. ಸತ್ಯಜಿತ್ ರೇ ಅವರ ಪುಸ್ತಕವನ್ನ ಶಿಫಾರಸ್ಸು ಮಾಡಿದ್ದಕ್ಕ್ಕಾಗಿ ಧನ್ಯವಾದಗಳು. ಇತ್ತೀಚೆಗೆ ಬಂದ 'ಬಾಂಬೇ ಟಾಕೀಸ್' ಚಲನಚಿತ್ರದಲ್ಲಿ ದಿಬಾಕರ್ ಬ್ಯಾನರ್ಜಿಯವರು ನಿರ್ದೇಶಿಸಿದ ಕಥೆಯು ನೀವು ಇಲ್ಲಿ ಉಲ್ಲೇಖಿಸಿರುವ ಸತ್ಯಜಿತ್ ರೇ ಅವರ ಕಥೆಯನ್ನು ಆಧರಿಸಿದ್ದು ಎನ್ನುವ ಅಂಶ ಈ ಲೇಖನವನ್ನು ಓದುತ್ತ ತಿಳಿಯಿತು. ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸಂಧರ್ಭಕ್ಕಾಗಿ ಪ್ರಾತಿನಿಧಿಕವಾಗಿ ಮಾಡಿದ ಸಿನೇಮಾ ಅಂತೆ ಅದು. ಅಂತಹಾ ಆ ಸಿನೇಮಾದಲ್ಲಿ ದಿಬಾಕರಬ್ಯಾನರ್ಜಿಯಂಥವರು ಆ ಕಥಾವಸ್ತುವನ್ನ ಏಕೆ ಮಾಡಿಕೊಂಡಿದ್ದರೆ ಎನ್ನುವುದು ನನಗೆ ಬಗೆಹರಿದಿರಲಿಲ್ಲ. ಅವರ ಆ ಆಯ್ಕೆ ಸಾಕಷ್ಟು ಔಚಿತ್ಯಪೂರ್ಣವಾಗಿದೆ ಎನ್ನುವುದು ಈಗ ಗೊತ್ತಾಯಿತು. ಧನ್ಯವಾದಗಳು.

    ReplyDelete