Wednesday, October 2, 2013

ರೌಡಿಸಂ ನಡೆದು ಬಂದ ದಾರಿ..



ಓಂ ಚಿತ್ರ ಬರುವವರೆಗೂ ರೌಡಿ, ರೌಡಿಸಂ ಪರಿಕಲ್ಪನೆಗಳು ಕನ್ನಡದ ಸಿನೆಮಾಗಳಲ್ಲಿ ಬೇರೆಯದೇ ಇದ್ದವು. ರೌಡಿ ಏನಾದರೂ ಚಿತ್ರದ ನಾಯಕನಾಗಿದ್ದರೆ ಆತ ಒಳ್ಳೆಯವನಾಗಿರುತ್ತಿದ್ದ. ಅವನು ಕೇಡಿಗಳಿಗೆ ಮಾತ್ರ ಹೊಡೆಯುತ್ತಿದ್ದ. ಒಂದು ಪ್ರಭಾಕರ್ ಅಭಿನಯದ ಚಿತ್ರದಲ್ಲಿ ಇನ್ನಿತರ ಕೇಡಿಗಳನ್ನು ಹೊಡೆದ ನಮ್ಮ ರೌಡಿ ಪ್ರಭಾಕರ್ ತಾನೇ ಖುದ್ದಾಗಿ ಅವರನ್ನೆಲ್ಲಾ ಪೋಲಿಸ್ ಸ್ಟೇಷನ್ ಗೆ ಕರೆತಂದು ಲೇಡಿ ಇನ್ಸ್  ಪೆಕ್ಟರ್ ಗೆ ಒಪ್ಪಿಸಿ ಆಕೆಯ ಮನ ಗೆಲ್ಲುತ್ತಾರೆ. ಆಗ ಲೇಡಿ ಇನ್ಸ್ ಪೆಕ್ಟರ್ ಒಂದು ಬಿಂಕದ ದೃಷ್ಟಿ ಬೀರಿ ಆಮೇಲೆ ಹಾಡಿನ ಲೋಕಕ್ಕೆ ಹೋಗಿಬಿಡುತ್ತಾರೆ.
ಹಾಗೆ ಆವತ್ತಿನ ಸಿನಿಮಾಗಳಲ್ಲಿ ರೌಡಿಗಳನ್ನು ಗುರುತಿಸುವುದೂ ಸುಲಭವಾಗಿತ್ತು. ಖಡ್ಡಾಯವಾಗಿ ಹಣೆಗೊಂದು ಟೇಪ್ ಅಥವಾ ಹಗ್ಗ ಅಥವಾ ಕರವಸ್ತ್ರ. ಆಮೇಲೆ ಒಳಗೊಂದು ಕೆಂಪು ಬಣ್ಣದ ಟೀ ಶರ್ಟ್ ಮೇಲೆ ಜಾಕೀಟ್ ಅಥವಾ ಜರ್ಕಿನ್. ಇವಷ್ಟನ್ನು ರೌಡಿ ಹಾಕಲೆಬೇಕಾಗಿತ್ತು. ಆಮೇಲೆ ಈಗಿನ ತರಹದ ಡೀಲ್ ಗಳೆಲ್ಲಾ ಇರುತ್ತಿರಲಿಲ್ಲ. ಸಿನಿಮಾದ ಕೊನೆಯವರೆಗೂ ನಾಯಕನ ತಂದೆ ತಾಯಿ ಗೆ ಏನೋ ಕೆಡಕು ಮಾಡಿದ್ದ ಕೇಡಿಗೆ ಬುದ್ದಿ ಕಲಿಸುವುದೇ ಆತನ ಗುರಿಯಾಗಿತ್ತು.
ಹಾಗೆ ಒಬ್ಬ ಒಳ್ಳೆಯವನಾದ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದರೆ ಕೇಡಿ ಯಾವುದಾದರೊಂದು ಕಾರಣ ಹುಡುಕಿಕೊಂಡು ಬಂದು ಅಪ್ಪ ಅಮ್ಮನನ್ನು ಕೊಲೆ ಮಾಡಿದರೆ ಇಬ್ಬರು ಮಕ್ಕಳಲ್ಲಿ ಒಬ್ಬ ರೌಡಿ ಗ್ಯಾರಂಟಿ .. ಇನ್ನೊಬ್ಬ ನಟ ಯಾರು ಎಂಬುದರ ಮೇಲೆ ಮತ್ತೊಬ್ಬನ ಕೆಲಸವನ್ನು ನಾವು ಊಹೆ ಮಾಡಬಹುದಿತ್ತು. ಚಿತ್ರದಲ್ಲೆನಾದರೂ ದ್ವೀಪಾತ್ರವಿದ್ದರೆ ಮತ್ತೊಬ್ಬ ಪೋಲಿಸ್ ಆಗಿರುತ್ತಿದ್ದ.
ನೀವು ಬಂಗಾರದ ಕಳಸ ಚಿತ್ರವನ್ನೊಮ್ಮೆ ನೋಡಿ. ಅಲ್ಲಿ ನಾಯಕ ರೌಡಿ. ಯಾವುದೇ ಡೀಲ್ ಮಾಡುವುದಿಲ್ಲ. ಊರ ಜನ ಹೊತ್ತು ಹೊತ್ತಿಗೆ ಊಟ ಕಳಿಸಿಬಿಟ್ಟರೆ ಮುಗೀತು. ದೇವಸ್ಥಾನದಲ್ಲಿ ತನ್ನ ಪಾಡಿಗೆ ತಾನಿದ್ದು ಬಿಡುತ್ತಾನೆ. ಮಹಾಭಾರತದ ಬಕಾಸುರನನ್ನು ನೆನಪಿಸಿಕೊಳ್ಳಬಹುದು.. ಜೊತೆಗೆ ಆ ರೌಡಿ ಬುದ್ದಿವಾದ ಹೇಳುವ ‘ಆಹಾ ಅನ್ನೋ ಕೆಲಸ ಮಾಡದೆ ಕನ್ನಡ ನಾಡಲ್ಲಿ ಹುಟ್ಟಿದ ಮೇಲೆ..’ ಹಾಡನ್ನು ಹಾಡಿಕೊಂಡು ಕುಣಿಯುವುದು ವಿಪರ್ಯಾಸ ಎನಿಸಬಹುದು.
ಹಾಗಾದರೆ ರೌಡಿ ಇನ್ನೇನು ಕೆಲಸ ಮಾಡುತ್ತಿದ್ದ ಚಿತ್ರಗಳಲ್ಲಿ ಎಂಬ ಪ್ರಶ್ನೆ ಬಂದರೆ ಅದಕ್ಕೆ ಹಲವಾರು ಉತ್ತರಗಳಿವೆ. ಅವನು ಕೊಬ್ಬಿದ ಶ್ರೀಮಂತರ ಮನೆಯ ಹುಡುಗಿಗೆ ಬುದ್ದಿ ಕಲಿಸುತ್ತಿದ್ದ. ಅಮಾಯಕ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸುತ್ತಿದ್ದ. ಯಥಾಪ್ರಕಾರ ಕೊನೆಯಲ್ಲಿ ದೊಡ್ಡ ಕೇಡಿಗೆ ಹೊಡೆದು ಹಣ್ಣು ಗಾಯಿ ನೀರು ಗಾಯಿ ಮಾಡುತ್ತಿದ್ದ.
ಇನ್ನು ಕೆಲವು ಚಿತ್ರಗಳಲ್ಲಿ ರೌಡಿ ಎಂದರೆ ಅವನು ಹೆಚ್ಚಾಗಿ ಮಾರುಕಟ್ಟೆಗೆ ಬಂದವನು ತರಕಾರಿ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುವವನು. ಅಥವಾ ಚೆಂದದ ಹುಡುಗಿಯರನ್ನು ರೇಗಿಸುವವನು. ಅವನ ಹಣೆಯ ಮೇಲೋ ಕೆನ್ನೆಯ ಮೇಲೋ ಒಂದು ಗಾಯದ ಗುರುತಂತೂ ಇದ್ದೇ ಇರುತ್ತಿತ್ತು. ಆದರೆ ಅದೇ ರೌಡಿ ನಾಯಕನಾಗಿದ್ದರೆ ಮಾರುಕಟ್ಟೆಯ ಜನರಿಗೆ ಹಿತರಕ್ಷಣೆ ನೀಡುವವನಾಗಿರುತ್ತಾನೆ.ಅವರನ್ನು ಕಾಯುತ್ತಾನೆ. ಅಲ್ಲಿಗೆ ಬಂದು ಕೊಬ್ಬು ತೋರಿಸುವ ಶ್ರೀಮಂತರ ಮನೆಯ ಕೊಬ್ಬಿದ ಹುಡುಗಿಗೆ ಬುದ್ದಿ ಕಲಿಸುತ್ತಾನೆ. ರಸ್ತೆಯಲ್ಲಿರುವ ಅಮಾಯಕರಿಗೆ ಊಟ ತಿಂಡಿ ಕೊಡಿಸುತ್ತಾನೆ..ಹೀಗೆ.
ಆದರೆ ಒಮ್ಮೆ ಓಂ ಬಂದಿತು ನೋಡಿ. ಇಡೀ ರೌಡಿಸಂ ಚಿತ್ರಣವೇ ಬದಲಾಗಿ ಹೋಯಿತು. ಅವನು ಹಿಡಿಯುವ ಆಯುಧವೂ ಬದಲಾಯಿತು. ಮಾರುದ್ದದ ಮಚ್ಚು ಲಾಂಗು ಹೆಸರಲ್ಲಿ ಬೆಳಕಿಗೆ ಬಂದುಬಿಟ್ಟಿತು. ಆಮೇಲೆ ಒಂದಷ್ಟು ದಿನ ಸಿನಿಮಾಗಳಲ್ಲಿ ಲಾಂಗುಗಳ ಝಳಪಂತೂ ಸಹಿಸಲಸಾಧ್ಯವಾಗಿತ್ತು.ವೇಶ ಭೂಷಣ , ನಡೆ ನುಡಿಗೆ ನೈಜತೆಯ ಸ್ಪರ್ಶ ಬಂದದ್ದು ಓಂ ಚಿತ್ರದಿಂದ.
ಈಗಲೂ ನನಗೆ ಆಶ್ಚರ್ಯವೆಂದರೆ ಎಲ್ಲಿಂದಾದರೂ ಬೆಂಗಳೂರಿಗೆ ಬಂದರೆ ಮೊದಲು ಆತ ಭೂಗತಲೋಕಕ್ಕೆ ಎಂಟ್ರಿ ಕೊಡುತ್ತಾನೆ. ಲಾಂಗು ಕೈಯಲ್ಲಿ ಹಿಡಿಯುತ್ತಾನೆ.ಹೌದಾ..?ನನಗೆ ಉತ್ತರ ಸಿಕ್ಕಿಲ್ಲ.
ಆದರೆ ಈವತ್ತಿಗೂ ಹೆಚ್ಚು ಗಮನ ಸೆಳೆಯುವುದು ಈ ಭೂಗತಜಗತ್ತಿನ ಚಿತ್ರಗಳೇ. ನಾಯಗನ್, ಓಂ, ಸತ್ಯ, ಸರ್ಕಾರ್, ಗಾಡ್ ಫಾದರ್, ಸ್ಕಾರ ಫೇಸ್ ಹೀಗೆ. ನನಗಂತೂ ಇಂತಹ ಚಿತ್ರಗಳು ಭರಪೂರ ಮನರಂಜನೆ  ನೀಡಿವೆ. ಒಂದು ಹಾಲಿನ ಕ್ಯಾನ್ ತರಹದ ಡಬ್ಬದಲ್ಲಿ ಹಣ ವಸೂಲಿ ಮಾಡಿಕೊಂಡು ಬರುವ ರೌಡಿ, ಹಣೆಗೆ ಕೆಂಪು ಟೀಪು ಕಟ್ಟಿಕೊಂಡ ಸ್ಟೀಲ್ ರಿಂಗುಗಳುಳ್ಳ ವಿಚಿತ್ರ ಜಾಕೆಟ್ ಧರಿಸಿಕೊಂಡ ರೌಡಿ, ಪರೋಪಕಾರಿ ರೌಡಿ, ಪೋಲಿಸ್ ರಿಗೆ ಸಹಾಯ ಮಾಡುವ ರೌಡಿ, ಕೊಲೆ ಮಾಡದ ರೌಡಿ, ದಂಧೆ ಮಾಡದ, ದಂಧೆ ಮಾಡುವವರನ್ನು ಸದೆಬಡಿಯುವ ರೌಡಿ,..ಹೀಗೆ ಎಂತೆಂಥ ರೌಡಿಗಳನ್ನು ನೋಡಿಬಿಟ್ಟಿದ್ದೇವೆ. ಆದರೂ ನನಗೆ ತಮಾಷೆ ಎನಿಸುವುದು ಚರಣ್ ರಾಜ್ ಅಭಿನಯದ ಚಿತ್ರವೊಂದಿದೆ. ಅದರ ಹೆಸರೇ ‘ರಿಯಲ್ ರೌಡಿ’ ರಿಯಲ್ ಹೀರೋ ಎಂದಾಗ ಅದಕ್ಕೆ ಸಮರ್ಥನೆ ಕೊಡಬಹುದು. ಹೀರೋ ಎಂಬ ಶಬ್ದಾರ್ಥವೆ ಸಿನಿಮೀಯ ಎನಿಸುವುದರಿಂದ ಮತ್ತು ಸಿನಿಮಾವೇ ಕಾಲ್ಪನಿಕ-ಪುನರ್ನಿರ್ಮಾನವಾದ್ದರಿಂದ ಅಲ್ಲಿ ರಿಯಲ್ ಸ್ಟಾರ್, ರಿಯಲ್ ಹೀರೋ, ರಿಯಲ್ ಸ್ಟೋರಿ, ರಿಯಲ್ ಸ್ಟಂಟ್ ಮುಂತಾದವುಗಳಿಗೆ ಸಮರ್ಥನೆ ಇದ್ದೆ ಇದೆ. ಆದರೆ ರಿಯಲ್ ರೌಡಿ ಎಂಬುದೇ ಸಿನಿಮಾದ ಶೀರ್ಷಿಕೆಯೇ ಆದ್ದರಿಂದ  ಆ ಹೆಸರಿಗೆ ಏನು ಸಮರ್ಥನೆ ಕೊಟ್ಟಿರಬಹುದು ನಿರ್ದೇಶಕ ಎಂದು ಅದೊಂದು ದಿನ ಆ ಚಿತ್ರವನ್ನು ನೋಡಿಯೇಬಿಟ್ಟೆ.
ರಿಯಲ್ ರೌಡಿ ಯಾರು ಎಂಬುದು ನನಗೆ ಸ್ಪಷ್ಟವಾಗಿ ಅರ್ಥವಾಯಿತು...ತಿಳಿದುಕೊಳ್ಳುವ ಆಸೆಯಿದ್ದರೆ ನೀವು ಒಮ್ಮೆ ನೋಡಬಹುದು..ನೋಡಿದ ಮೇಲೆ ನೀವು ಲಾಂಗ್ ಎತ್ತಿಕೊಂಡರೂ ಎತ್ತಿಕೊಳ್ಳಬಹುದೇನೋ?

1 comment: