Friday, July 26, 2013

ನೀವು ಹುಡುಗೀರು ಇಷ್ಟೇ ಕಣ್ರೆ...

ನೀವು ಹುಡುಗೀರು ಇಷ್ಟೇ ಕಣ್ರೆ...ನಮ್ಮ ಹುಡುಗರನ್ನ ಹಾಳು ಮಾಡ್ತೀರಿ..
ನೀವು ಹುಡುಗೀರಿಗೆ ಪ್ರೀತಿ ಪ್ರೇಮದ ಬೆಲೆ ಗೊತ್ತಿಲ್ಲ, ..ಆದರೆ ನಾವು ಪ್ರೀತಿ ಅಂದ್ರೆ ಪ್ರಾಣ ಬಿಡ್ತೀವಿ..
ನೀವು ಬಿಡಿ..ನಿಮ್ಮ ಖರ್ಚಿಗೆ ಜೊತೆಗೆ ಸುತ್ತಾಡೋಕೆ ಇರಲಿ ಅಂತ ಪ್ರೀತಿಸ್ತೀರಿ, ಆದರೆ ನಾವು ಆಗಲ್ಲ..
ಇತ್ತೀಚಿನ ಚಿತ್ರಗಳಲ್ಲಿ ಹುಡುಗರು, ನಾಯಕರು ಈ ರೀತಿ ಹೇಳುವ ಮಾತು ಕೇಳಿ ಕೇಳಿ ವಾಕರಿಕೆ ಬರುವಂತಾಗಿಬಿಟ್ಟಿದೆ. ಒಂದು ಪ್ರೀತಿಯ ಕಥೆಯಲ್ಲಿ ಮೋಸ ವಂಚನೆ, ಸುಖ, ಜಗಳ ಕದನ ಹೊಡೆದಾಟ ಎಲ್ಲವೂ ಇರುತ್ತದೆ. ಆದರೆ ಬೀದಿಯಲ್ಲಿ ಓಡಾಡಿಕೊಂಡು ತಿಕ್ಕಲು ತಿಕ್ಕಲಾಗಿ ಆಡುವ ಹುಡುಗ ಬೇಜವಾಬ್ದಾರಿ ಪ್ರದರ್ಶಿಸಿದರೂ ಪ್ರೀತಿ ಬಗ್ಗೆ ಈ ರೀತಿಯ ಉದ್ದುದ್ದ ಭಾಷಣ ಬಿಗಿಯುತ್ತಾನೆ.
ಆದರೆ ಒಂದು ಪ್ರಶ್ನೆ. ಯಾಕೆ ಸುಮಾರಷ್ಟು ಜನ ಚಿತ್ರ ನಿರ್ದೇಶಕರು ಹೆಣ್ಣು ಮಕ್ಕಳ ಮೇಲೆ ಈ ಗುರುತರ ಆರೋಪ ಹೊರಿಸುತ್ತಾರೆ ಎಂಬುದು? ಮೊನ್ನೆ ಗೂಗ್ಲಿ ನೋಡುವಾಗ ಪ್ರೀತಿ ಪ್ರೇಮ ಎಂದರೇ ನಾಯಕ ಉರಿದು ಬೀಳುತ್ತಾನೆ. ಕಾರಣ ಅವನಿಗೂ ಗೊತ್ತಿಲ್ಲ, ನಮಗೂ ಗೊತ್ತಿಲ್ಲ. ಒಂದು ಹಾಡಿನಲ್ಲಿ ಹುಡುಗೀರನ್ನು ಹಾವು ಮುಂಗುಸಿ ಹಾಗೆ ಹೀಗೆ ಆಲ್ಕೋಹಾಲು ಎಂದೆಲ್ಲಾ ವರ್ಣಿಸುತ್ತಾನೆ. ಅದು ಸರಿ.ಅದದ ನಂತರ ತಾನೇ ಪ್ರೀತಿಯಲ್ಲಿ ಬೀಳುತ್ತಾನೆ.ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿ ಬೆಳೆದು ಹೆಮ್ಮರವಾಗುವ ಕಥೆಗಳೂ ಸಾವಿರವಿದೆ. ಆದರೆ ನಾವು ನೋಡುತ್ತಿರುವ ಚಿತ್ರದಲ್ಲಿನ ದೃಶ್ಯದಲ್ಲಿ ನಮ್ಮನ್ನು ಒಪ್ಪಿಸುವ ಗುಣವಿಲ್ಲದಿದ್ದಾಗ ಈ ರೀತಿಯಾಗುತ್ತದಾ..? ಪ್ರಶ್ನೆ ಕಾಡುತ್ತದೆ.
ಶಾಜಹಾನ್ ಪ್ರೀತಿಗೋಸ್ಕರ ತಾಜ್ ಮಹಲ್ ಕಟ್ಟಿದ, ನೀವೇನು ಕಟ್ಟಿದ್ದೀರಿ ಎಂಬ ಒಂದು ಸಂಭಾಷಣೆಯನ್ನು ಯಾವುದೋ ಚಿತ್ರದಲ್ಲಿ ಕೇಳಿದ ನೆನಪು. ಭಗ್ನ ಪ್ರೇಮಿಯ ಚಿತ್ರಗಳಲ್ಲಂತೂ ಹೆಣ್ಣುಮಕ್ಕಳಿಗೆ ಬಾಯಿಗೆ ಬಂದಂತೆ ಬೈಯ್ಯದೆ ನಾಯಕ ಬಿಡುವುದಿಲ್ಲ. ಆದರೆ ಕಿಶೋರ್, ಮೊಹಮ್ಮದ್ ರಫೀ, ಕನ್ನಡದಲ್ಲಿ ಸುಮಾರಷ್ಟು , ಇತ್ತೀಚೆಗೆ ಬಂದ ಭಟ್ ಚಿತ್ರಗಳ ವಿರಹ ಗೀತೆಗಳನ್ನು ಕೇಳಿದಾಗ ಪ್ರೀತಿಯಲ್ಲಿ ಸೋಲುವುದರಲ್ಲೂ ಮಜಾವಿದೆಯಲ್ಲ ಎಂದು ನನಗೇ ಎಷ್ಟೋ ಸಾರಿ ಅನಿಸಿದ್ದಿದೆ. ಅದರಲ್ಲೂ ಕಿಶೋರ್ ರ ನೋವಿನ ಗೀತೆಗಳು ಅದೆಷ್ಟು ಚೆಂದ ಎನಿಸುತ್ತವೆ ಎಂದರೇ ಸುಮ್ಮನೇ ಯವ ವಿರಹವನ್ನೂ ಅನುಭವಿಸದೇ ಅದನ್ನು ಕೇಳುವುದರಲ್ಲಿ ಅದೆಂತಹ ಮಜಾ, ಯಾವುದಾದರೂ ಚಂದನೆಯ, ಒಳ್ಳೆಯ ಹುಡುಗಿ ಅದ್ಭುತವಾಗಿ ಪ್ರೀತಿಸಿ ಕೈಕೊಟ್ಟರೇ ಅದೆಷ್ಟು ಚೆನ್ನ ಎನಿಸುತ್ತದೆ. ಮುಸ್ಸಂಜೆಯ ಹೊತ್ತಿನಲ್ಲಿ ಸುಖಾ ಸುಮ್ಮನೇ ಕಣ್ಣಲ್ಲಿ ನೀರು ತುಂಬಿಕೊಂಡು ಹಾಡನ್ನು ಮಂದ್ರಸ್ಥಾಯಿಯಲ್ಲಿ ಕೇಳುತ್ತಿದರೇ ಅದೆಷ್ಟು ಚೆನ್ನಾಗಿರುತ್ತದೆ ಎಂದು ನನಗೆ ಅನಿಸಿ, ಹಾಗೆ ನನ್ನ ಬದುಕಲ್ಲಿ ಘಟಿಸದೇ ಇರುವುದನ್ನು ನೆನದು ಬೇಸರವಾಗುತ್ತದೆ.
ಸೋಲಲಿ, ಗೆಲ್ಲಲಿ.. ಪ್ರೀತಿಯಲ್ಲಿರುವ ಈ ಅನನ್ಯ ಭಾವಗಳ್ಯಾಕೆ ನಮ್ಮ ನಡುವಿನ ನಿರ್ದೇಶಕರಿಗೆ ಅರಿವಾಗುವುದಿಲ್ಲ. ಬದಲಿಗೆ ಪ್ರೀತಿ ಹಾಗೇ ಹೀಗೆ ಎಂದೆಲ್ಲಾ ವ್ಯಾಖ್ಯಾನ ಕೊಟ್ಟು ಮುಂದಿನ ಬೆಂಚಿನ ಪ್ರೇಕ್ಷಕರಿಂದ ಶಿಳ್ಳೆ ಗಳಿಸಿ, ಅವರನ್ನೂ ದಾರಿ ತಪ್ಪಿಸುತ್ತಾರಲ್ಲಾ ಎನಿಸಿ ಬೇಸರವಾಗುತ್ತದೆ.
ಗ್ಯಾಂಗ್ ಸ್ಟರ್ ಚಿತ್ರದಲ್ಲಿನ ದಯಾನ ಪ್ರೀತಿಗೆ ನಾನೇ ಸ್ವತ ಕಣ್ಣೀರಾಗಿದ್ದೇನೆ. ಇಡೀ ಚಿತ್ರದಲ್ಲಿ ಪಂಚಿಂಗ್ ಡೈಲಾಗ್ ಇರಲಿ ಒಂದೂ ಮಾತಾಡದಾ ಬರ್ಫಿಯ ಪ್ರೇಮಕಥೆ ಕಣ್ಣಿಗೆ ಕಟ್ಟಿದಂತಿದೆ. ಸಮಾಜಕ್ಕಾದರೂ ನನ್ನೊಡನೆ ಇರು ಎಂದು ತನ್ನೊಡನೆ ಕರೆದೊಯ್ಯುವ ಪೇಂಟೆಡ್ ವೇಲ್ ಚಿತ್ರದ ವಾಲ್ತರ್ ಫೈನ್, ಬಂಧನ ಚಿತ್ರದ ಹರೀಶ್, ತಾನು ಸತ್ತು ರೊಸ್ ಳ ಪ್ರೀತಿಯನ್ನು ಜೀವಂತವಾಗಿಡುವ ಟೈಟಾನಿಕ್ ಚಿತ್ರದ ಜಾಕ್... ಹೀಗೆ ಅದೆಷ್ಟು ಪ್ರೇಮಿಗಳ ಕಥೆ ಕಣ್ಣಲ್ಲಿ ಅಳಿಸದ ಚಿತ್ರವಾಗಿ ಉಳಿದುಬಿಟ್ಟಿದೆಯಲ್ಲ ಎನಿಸುತ್ತದೆ. ಆದರೆ ಇತ್ತೀಚಿನ ಪ್ರೇಮಕಥಾ ಕನ್ನಡ ಚಿತ್ರಗಳ್ಯಾಕೆ ಹಾಗೆ ಮನಸ್ಸಿಗೆ ತಟ್ಟುವುದಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡರೇ ಉತ್ತರ ಸಿಗುವುದೇ ಇಲ್ಲ. ಬದಲಿಗೆ ನೀವು ಹುಡುಗೀರು ಅಂದ್ರೆ ಗೊತ್ತಲ್ಲ.. ಎಂಬ ಡೈಲಾಗ್ ನೆನಪಿಗೆ ಬಂದು ನಗು ಬರುತ್ತದೆ, ಹಾಗೆ ಬೇಸರವೂ ಆಗುತ್ತದೆ.

1 comment:

  1. "ಈ ವುಡ್ಗೀರೆಲ್ಲಾ ಇಂಗೇ
    ಈ ವುಡ್ಗೀರೆಲ್ಲ ಇಂಗೇ" ಅಂತ ದೂರದಲ್ಲೆಲ್ಲೋ ಗುರುಕಿರಣ್ ಗುನುಗುತ್ತಿರುವಂತೆ ಭಾಸವಾಗುತ್ತಿದೆ!

    ನಮ್ಮ ಚಿತ್ರರಂಗ ಸ್ತ್ರೀ ಪ್ರೇಕ್ಷಕರನ್ನು ದೂರ ಮಾಡಿರೋ ರೀತಿ ನಿಜಕ್ಕೂ ಬೇಸರ ಮೂಡಿಸುತ್ತದೆ! :(

    ReplyDelete