Friday, January 4, 2013

ನಾಗಾಭರಣರ ಮುನ್ನುಡಿ...

ಒಂದು ಖುಷಿಯ ವಿಚಾರ: ಖ್ಯಾತ ನಿರ್ದೇಶಕ ನಾಗಾಭರಣ ನನ್ನ ಪುಸ್ತಕ 'ನೋಡಲೇ ಬೇಕಾದ ಕನ್ನಡ ಚಿತ್ರಗಳು' ಗೆ ಮುನ್ನುಡಿ ಬರೆದಿದ್ದಾರೆ.ನಾನು ನಾಗಭರಣರನ್ನು ನೋಡಿದ್ದೆ  . ಆದರೆ ಅವರಿಗೆ ನನ್ನ ಪರಿಚಯವಿರಲಿಲ್ಲ . ಅವರ ಮೊಬೈಲ್ ನಂಬರ್ ಸಂಗ್ರಹಿಸಿ ಫೋನ್ ಮಾಡಿ ವಿಷಯ ತಿಳಿಸಿದೆ. 'ಸರಿ ಪುಸ್ತಕ ತಂದು ಕೊಡಪ್ಪಾ...ನೋಡೋಣ ಓದ್ತೀನಿ ಎಂದರು..' ನಾನು ಅವರ ಆಫೀಸಿಗೆ ತೆಗೆದುಕೊಂಡು ಹೋಗಿ ಕೊಟ್ಟುಬಂದೆ. ಆಮೇಲೆ ಫೋನ್ ಮಾಡೋಣ ಎನಿಸಿದರೂ ಆ ಸಮಯದಲ್ಲಿ 'ಬೆಂಗಳೂರು ಚಿತ್ರೋತ್ಸವ ' ಇದ್ದುದರಿಂದ ಅವರು ಕೆಲಸದ ಒತ್ತಡದಲ್ಲಿರುತ್ತಾರೆಂದು ಫೋನ್ ಮಾಡಲಿಲ್ಲ. ಅವರು ಚಿತ್ರೋತ್ಸವದಲ್ಲಿ ಸಿಕ್ಕರಾದರೂ ಅವರನ್ನು ಆ ವಿಷಯವಾಗಿ ಮಾತಾಡಿಸುವುದು ಒಳ್ಳೆಯದಲ್ಲ ಎನಿಸಿ ಸುಮ್ಮನಾದೆ. ನಾನು ಪುಸ್ತಕ ಕೊಟ್ಟ ನಾಲ್ಕನೆಯ ದಿನ ಚಿತ್ರೋತ್ಸವದಲ್ಲಿ ಚಿತ್ರವೊಂದನ್ನು ನೋಡುತ್ತಿದ್ದೆ. ಆಗ ಫೋನ್ ಮಾಡಿದ ನಾಗಾಭರಣರು 'ಮುನ್ನುಡಿ ಬರೆದಿದ್ದೇನೆ...' ಎಂದರು.ನಾನು ಹೋಗಿ ಮುನ್ನುಡಿ ಸಂಗ್ರಹಿಸಿಕೊಂಡು ಬಂದಾಗಲೂ ಅವರನ್ನು ನಾನು ಭೇಟಿಯಾಗಲಿಕ್ಕೆ ಸಾಧ್ಯವಾಗಲಿಲ್ಲ.
ಅದಕ್ಕೆ ಮೊನ್ನೆ ಕೆಳದಿ ಚೆನ್ನಮ್ಮ ಧಾರಾವಾಹಿಯ ಚಿತ್ರೀಕರಣಕ್ಕೆ ಸ್ಥಳಕ್ಕೆ ಹೋದಾಗ ನಾಗಾಭರಣ ಸಿಕ್ಕರು. ಗಂಟೆಗಟ್ಟಲೆ ಕುಳಿತು ಮಾತಾಡಿದ್ದು ನನಗೆ ಖುಷಿಯಾಯಿತು. ನನ್ನ ಸಿನೆಮಾದ ಬಗ್ಗೆ ವಿಚಾರಿಸಿದರು, ನನ್ನ ಇನ್ನೊಂದು ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಲು ಒಪ್ಪಿಕೊಂಡರು.
"ಚಲನಚಿತ್ರಗಳು ಕೇವಲ ಮನರಂಜನೆಗಾಗಿ ಅಲ್ಲ, ಮನೋವಿಕಾಸಕ್ಕೆ ಮತ್ತು ಭಾವಲೋಕ ವಿಹಾರಕ್ಕೆ.ಈ ಬುದ್ದಿ ಹಾಗೂ ಭಾವಗಳ ತಾಕಲಾಟ ಮತ್ತು ಸಮೀಕರಣ ನಾವು ಕಾಣುವ ಚಿತ್ರಗಳಲ್ಲಿವೆ ಮತ್ತು ಯಾವ ಕಾರಣಗಳಿಂದಾಗಿ ಅವು ನಮ್ಮ ಸಮಾಜದ ಸಾಕ್ಷಿ ಪ್ರಜ್ಞೆಯಾಗಿ ಉಳಿದಿವೆ.? ಅಲ್ಲದೆ ವೈಯಕ್ತಿಕ ಬದುಕಿನ ನೆನಪಿನಾಳದಲ್ಲಿ ಸದಾ ಜಾಗೃತವಾಗಿವೆ.? ಇವುಗಳನ್ನ ಗಮನಿಸಿದಾಗ ದೃಶ್ಯಮಾಧ್ಯಮದ ಘಟಸ್ಫೋಟದಿಂದ ಲಕ್ಷಾಂತರ ಚಲನಚಿತ್ರಗಳು ಚಲಿಸುತ್ತಿದ್ದಾವಾದರೂ, ನಮ್ಮ ನಿಲುವಿನಲ್ಲಿ ನಿರಂತರವಾಗಿ ಉಳಿಯುವವು  ಕೆಲವೇ ಕೆಲವು. ಅವುಗಳನ್ನ ಹೆಕ್ಕಿ ದೃಡೀಕರಿಸುವುದು ಸುಲಭದ ಕೆಲಸವಲ್ಲ. ಲೋಕೊಭಿನ್ನರುಚಿ:ಹೀಗಾಗಿ ಬಹುಮಾನ್ಯ ರುಚಿಗಳಲ್ಲಿ ಸದಭಿರುಚಿಯನ್ನು ಸಾಧಿಸಿ ಶೋಧಿಸುವ ಕೆಲಸವನ್ನ ಶ್ರೀ.ರವೀಂದ್ರ  ಪ್ರಯತ್ನಿಸಿದ್ದಾರೆ. ಪ್ರಯತ್ನ ಸ್ತುತ್ಯಾರ್ಹ."
ಇದು  ನಾಗಾಭರಣ ಸರ್ ಬರೆದ ಮುನ್ನುಡಿಯ ತುಣುಕು.
ಇಷ್ಟರಲ್ಲೇ ಪುಸ್ತಕ ಮಾರುಕಟ್ಟೆಯಲ್ಲಿರುತ್ತದೆ. ಎಲ್ಲಾ ಗೆಳೆಯ/ಗೆಳತಿಯರು ಮನಸು ಮಾಡಿ, ಪುಸ್ತಕ ಓದಿ ನನ್ನನ್ನು ಹರಸಿ ಉಳಿಸಿ ಎಂಬ ಪ್ರಾರ್ಥನೆ ನನ್ನದು.
ಪ್ರಶಾಂತ ವಿಟ್ಲ ಎರಡು ಮುಖಪುಟದ ಮಾದರಿಯನ್ನು ಕಳುಹಿಸಿದ್ದರು. ನಾವು  ಮೊದಲನೆಯದನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ನಿಮ್ಮ ಅಭಿಪ್ರಾಯ..?
ಓದಿ ಮೆಚ್ಚಿದ್ದು :
ಮೌನ ಕಣಿವೆ
ಬ್ಲಾಗ್ ನಲ್ಲಿ ಅದೆಷ್ಟು ಒಳ್ಳೊಳ್ಳೆ ಲೇಖನಗಳಿವೆ ಗೊತ್ತಿದೆಯೇ..? ನೀವು ಭೇಟಿ ನೀಡಿಲ್ಲವಾದರೆ ಅವಶ್ಯವಾಗಿ ಒಮ್ಮೆ ನೋಡಿ.
ಇಂದು ನನಗೆ ಭುಜದೆತ್ತರ ಬೆಳೆದು ನಿಂತ ಮಗಳಿದ್ದಾಳೆ. ಆದರೂ ಒಬ್ಬಂಟಿ ಪುರುಷನಿರುವೆಡೆ, ಆತ ಪರಿಚಿತನಾಗಿದ್ದರೂ ನಾನು ಹೋಗಲಾರೆ. ಆತನನ್ನು ನಾನು ನಂಬಲಾರೆ ಎನ್ನುವುದಕ್ಕಿಂತಲೂ ನನ್ನನ್ನು ನಾನೇ ನಂಬದಿರುವಂತ  ಸ್ಥಿತಿ ನನ್ನದು.
"ಸಂಬಂಧದ ಕೊಂಡಿ ಮತ್ತೆ ಸೇರಿಕೊಳ್ಳುವುದು ನನಗೆ ಬೇಕಾಗಿರಲಿಲ್ಲ. ಅಷ್ಟರಲ್ಲೇ ನನಗೆ ಅರ್ಥವಾಗಿಬಿಟ್ಟಿತ್ತು. ಪ್ರೀತಿಯ ಜಗತ್ತೇ ಬೇರೆ. ವಾಸ್ತವವೇ ಬೇರೆ. ಸಾಮಾಜಿಕ ಸ್ಥಾನ-ಮಾನ ನನ್ನ ಘನತೆ ಅಂತಸ್ತುಗಳನ್ನು ಹೆಚ್ಚಿಸಿರಬಹುದು. ಆದರೆ ಒಳಗೊಳಗೇ ನಾನು ಕುಸಿದುಹೋಗಿದ್ದೇನೆ.."
"ನನಗೀಗಲೂ ನೆನಪಿದೆ. ನನ್ನ ಮಗನೊಮ್ಮೆ ಮಾತಿನ ಮಧ್ಯೆ ”ಹೆಂಗಸು’ ಎಂಬ ಪದವನ್ನು ಉಪಯೋಗಿಸಿದ. ನನಗೆ ಆ ಪದವನ್ನು ಕೇಳಿದರಾಗದು. ನಾನು ಎಂದೂ ಆ ಪದವನ್ನು ಉಪಯೋಗಿಸುವುದಿಲ್ಲ. ಹೆಂಗಸು ಅಂದರೆ ಹೆಣ್ಣು ಕೂಸು. ಹೆರುವವಳು ಎಂಬ ಅರ್ಥ ಅದರಿಂದ ಸ್ಫುರಿಸುತ್ತದೆಯೆಂಬುದು ನನ್ನ ಭಾವನೆ., ಮಹಿಳೆಯ ಅಸ್ತಿತ್ವವನ್ನು ಅದು ಸೀಮಿತಗೊಳಿಸುತ್ತದೆಯೆಂಬುದು ನನ್ನ ಗ್ರಹಿಕೆ. ನನ್ನನ್ನು ಯಾರಾದರೂ ’ಆಯಮ್ಮ’ ಎಂದು ಸಂಭೋದಿಸಿದರೆ ನನ್ನ ಸಿಟ್ಟು ನೆತ್ತಿಗೇರುತ್ತದೆ!  ನನ್ನ ಮಗನಿನ್ನೂ ತುಂಬಾ ಚಿಕ್ಕವನು, ಆದರೂ ನಾನವನಿಗೆ ಹೇಳಿದೆ ’ಹೆಂಗಸು ಅನ್ನಬಾರದು, ಮಹಿಳೆ ಅನ್ನು’ ಅಂತ ಆಮೇಲೆ ನಾನದನ್ನು ಮರೆತು ಬಿಟೆ."
ಸಾಲುಗಳಲ್ಲಿನ  ವೈವಿಧ್ಯತೆಯನ್ನು ಗಮನಿಸಿ .

4 comments:

  1. ಶುಭಾಶಯಗಳು.
    ಎಷ್ಟನ್ನ ನೋಡಿದ್ದೇನೆ ಅಂತ ತಿಳ್ಕೊಬೇಕು, ನಿಮ್ಮ ವಿವರ ಓದ ಬೇಕು
    ಉಷಾ ಅವರ ಸಾಲುಗಳು ಪರಿಣಾಮಕಾರಿ

    ReplyDelete
  2. modalne mukha puTa is too good. am looking forward to this book. good luck.
    Usha kattemane writes very well...
    i like the way u r introducing a new blog in your new posts..
    :-)
    ms

    ReplyDelete
  3. i am waiting for your book. is it available in book store? when?
    your blog is very interesting and informative. i wonder about your amount of stuff...keep writing..
    good luck

    ReplyDelete
  4. ಶುಭಹಾರೈಕೆಗಳು. ಜಾಸ್ತಿ ಜನರನ್ನು ತಲುಪಲಿ. ಜಾಸ್ತಿ ವಿಮರ್ಶೆಗೆ ಒಳಗಾಗಲಿ. ಜಾಸ್ತಿ ಪ್ರಚಾರ ಪಡೆಯಲಿ

    ReplyDelete