Sunday, August 10, 2014

ಹೀಗೆ ಸುಮ್ಮನೆ...

ಸಿನಿಮಾದ ಚಿತ್ರಕತೆಯೇ ಸಿನಿಮಾದ ಕತೆಯ ಆಧಾರ ಸ್ಥಂಭ. ಹಾಗಾಗಿ ಚಿತ್ರಕತೆಯ ಮೇಲೆ ಒಂದಿಡೀ ಸಿನಿಮಾ ಆಧಾರವಾಗಿರುತ್ತದೆ. ಹಾಗೆಯೇ ಒಂದು ಕತೆಯನ್ನು ಭಿನ್ನವಾಗಿ ನಿರೂಪಿಸಬೇಕೆಂದರೆ ಅದಕ್ಕೆ ಚಿತ್ರಕತೆಯೇ ಮುಖ್ಯವಾದದ್ದು. ಮೊದಲಿಗೆ ಏನನ್ನೋ ತೋರಿಸಿ ಆಮೇಲೆ ಏನನ್ನೋ ತೋರಿಸಿ ತಳಕುಹಾಕಿ ಹೀಗೆ. ಒಂದು ಕತೆಯನ್ನು ಆಸಕ್ತಿಕರ ಮಾಡಿಬಿಡಬಹುದು. ಸುಮ್ಮನೆ ಕುತೂಹಲ ಕೆರಳಿಸುತ್ತಾ ಸಾಗಿ ಕೊನೆಯಲ್ಲಿ ಆ ರಹಸ್ಯವನ್ನು ಬಿಚ್ಚಿಟ್ಟರೆ ನೋಡುಗ ಫುಲ್ ಖುಷಿ.
ನೋಡುತ್ತಾ ನೋಡುತ್ತಾ ಊಹೆ ಮಾಡುತ್ತಾ ಸಾಗುವ ವೀಕ್ಷಕನಿಗೆ ಕೊನೆಯಲ್ಲಿ ಅವನಿಗೆ ನಿಲುಕದ್ದು ಇದ್ದು ಬಿಟ್ಟರೆ ಅವನ ಸಂತಸಕ್ಕೆ ಪಾರವಿಲ್ಲ. ಏಕೆಂದರೆ ಅದು ಬುದ್ದಿವಂತಿಕೆಯ ಪ್ರಶ್ನೆ. ಯಾವಾಗಲೂ ಗೆಲ್ಲುವುದು ಆ ಬುದ್ದಿವಂತಿಕೆಯೇ. ಹಾಗಾಗಿಯೇ ಮೊದಲಿಗೆ ಉಪೇಂದ್ರ ತಮ್ಮ ಎ ಚಿತ್ರದ ಅಡಿಬರಹದಲ್ಲಿ ಬುದ್ದಿವಂತರಿಗೆ ಮಾತ್ರ ಎಂದಿದ್ದರು.
ಆದರೆ ಎ ಚಿತ್ರದ ಚಿತ್ರಕತೆ ಏನೇ ತಿರುವು ಮುರುಗಾಗಿದ್ದರೂ ಕತೆಗಿಂತ ಚಿತ್ರಕತೆಯಲ್ಲಿ ಸತ್ವವಿತ್ತು. ಬರೀ ದೃಶ್ಯದಲ್ಲೇ ಮಜಾ ಇತ್ತು. ಹಾಗಾಗಿಯೇ ಸಿನಿಮಾ ಅರ್ಥವಾಗದಿದ್ದರೆ ಇನ್ನೊಮ್ಮೆ ನೋಡಲೂ ಸಿನಿಮಾ ಬೇಸರ ಆಗುತ್ತಿರಲಿಲ್ಲ. ಮೊದಲ ಸಿನಿಮಾದೊಳಗಿನ ಸಿನಿಮಾದಲ್ಲಿನ ದೃಶ್ಯಗಳು ವಿಡಂಬನೆ ಜೊತೆಗೆ ಮಾಸ್ ಆಗಿತ್ತು. ಅದರಲ್ಲಿ ಅಬ್ಬರ ಆರ್ಭಟ ಇತ್ತು. ಇನ್ನೊಮ್ಮೆ ಮಗದೊಮ್ಮೆ ನೋಡುವ ಪ್ರೇಕ್ಷಕ ಅರ್ಥ ಮಾಡಿಕೊಳ್ಳುವ ಜೊತೆಗೆ ದೃಶ್ಯದ ದ್ರವ್ಯಕ್ಕೆ ಮಾರುಹೋಗುತ್ತಿದ್ದ. ಅದನ್ನು ನೋಡಿ ಮಜಾ ಮಾಡುತ್ತಿದ್ದ. ಎಲ್ಲಾ ತಿರುವು ಮುರುಗು ಚಿತ್ರಕತೆಯ ಸಿನಿಮಾಗಳಿಗೆ ಗೊಂದಲಮಯ ನಿರೂಪಣೆಗೆ ಮುಖ್ಯವಾದದ್ದು ಅಂತಹುದ್ದೆ ಮಜಾ ಕೊಡುವ ಚಿತ್ರಕತೆ ಎನ್ನಬಹುದು. ಅದು ಪದೇ ಪದೇ ನೋಡಿಸಿಕೊಳ್ಳುವಂತಿದ್ದರೆ ಸೂಪರ್. ಇಲ್ಲವಾದಲ್ಲಿ ಸಿನಿಮಾ ಮೊದಲ ವೀಕ್ಷಣೆಗೆ ಗೊಂದಲ ಮೂಡಿಸಿದರೂ ಎರಡನೆಯ ಸಾರಿ ನೋಡಿ ತಿಳಿಯೋಣ ಅಂದುಕೊಂಡರೂ ಚಿತ್ರಮಂದಿರದೊಳಗೆ ಹೋಗಲು ಮನಸ್ಸು ಹಿಂಜರಿದೆ ಹಿಂಜರಿಯುತ್ತದೆ.
ನೋಲನ್ ನಿರ್ದೇಶನದ ಫಾಲೋಯಿಂಗ್, ಮೆಮೆಂಟೊ ಗಿಂತ ಮಜಾ ಕೊಡುವುದು ಇನ್ಸೆಪ್ಶನ್ . ಅದಕ್ಕೆ ಕಾರಣ ಮೊದಲೆರೆಡು ಚಿತ್ರಗಳಲ್ಲಿ ನೋಡಿಸಿಕೊಳ್ಳುವ ದೃಶ್ಯ ವೈಭವ ಇಲ್ಲ. ಆದರೆ ವಸ್ತುವಿದೆ. ಆದರೆ ಇನ್ಸೆಪ್ಶನ್ ನಲ್ಲಿ ವಸ್ತು, ದೃಶ್ಯ ವೈಭವ ಎರಡೂ ಇದೆ.
ಮೊನ್ನೆ ನೋಡಿದ ಬಹುಪರಾಕ್, ಅದಕ್ಕೂ ಮುನ್ನ ಬಂದ ಉಳಿದವರು ಕಂಡಂತೆ , ಲೂಸಿಯ ಚಿತ್ರಗಳನ್ನು ನೋಡಿದಾಗ ನನಗನ್ನಿಸಿದ್ದು. ಬಹುಪರಾಕ್ ಒಬ್ಬನ ಜೀವನ ಕಥನ. ಅದನ್ನು ನಿರ್ದೇಶಕ ಸುನಿ ಮೂರು ಭಾಗಗಳಾಗಿ ಮಾಡಿದ್ದಾರೆ. ಮೂರರ ಘಟ್ಟಗಳನ್ನು ಒಂದರಪಕ್ಕ ಒಂದರಂತೆ ಜೋಡಿಸುತ್ತಾ ಸಾಗಿದ್ದಾರೆ. ಹಾಗಂತ ಮೂರೂ ಕತೆಗಳೂ ಒಬ್ಬನದು ಎಂದು ನಿಖರವಾಗಿ ಹೇಳುವ ಹಾಗಿಲ್ಲ. ಹೇಳುವುದಾದರೂ ಕಾಲಘಟ್ಟವನ್ನು ಹೆಸರಿಸುವ ಹಾಗಿಲ್ಲ. ಉದಾಹರಣೆಗೆ ಅವಳಿ ನಾಯಕಿಯರನ್ನು ಪ್ರೀತಿಸುವ ನಾಯಕನದೆ ಇಡೀ ಸಿನೆಮಾದ ಕತೆ ಅವನದೇ ಎನ್ನುವುದಾದರೆ ಆತ ಮುದುಕನಾಗುವವರೆಗೆ ಕತೆ ಅವಲೋಕಿಸಿದರೆ, ಅದ್ಯಾವ ಕಾಲಘಟ್ಟದಲ್ಲಿ ನಡೆಯುತ್ತದೆ ಎಂಬುದು ಗೊಂದಲಕ್ಕೀಡು ಮಾಡುತ್ತದೆ. ಈವತ್ತಿನ ಮೊಬೈಲ್, ಪರಿಸ್ಥಿತಿ ಅಲ್ಲೂ ಇದೆ. ಮುದುಕನ ಕತೆಯಲ್ಲೂ ಇದೆ. ಭೂಗತದೊರೆ ಕತೆಯಲ್ಲೂ ಇದೆ. ಅಂದರೆ ಕತೆ ಈವತ್ತಿಗೆ ಪ್ರಾರಂಭವಾಗಿದ್ದರೆ ಮುಂದಿನ ನಲವತ್ತು ವರ್ಷದ ಚಿತ್ರಣ ಅಲ್ಲಿರಬೇಕಿತ್ತು. ಅಥವಾ ಕತೆ ಈವತ್ತಿಗೆ ಮುಗಿದಿದ್ದರೆ ಹಿಂದಿನ ನಲವತ್ತು ವರ್ಷದ ಚಿತ್ರಣ ಇರಬೇಕಿತ್ತು. ಆದರೆ ಮೂರು ಕತೆಗಳು ಸಮಾನ ಕಾಲಘಟ್ಟದಲ್ಲಿ ನಡೆಯುತ್ತವೆ. ಸರಿ ಇದಕ್ಕೊಂದು ಉದಾತ ಅರ್ಥವನ್ನು ಕೊಟ್ಟು ಅದು ಎಲ್ಲರ ಕತೆಯೂ ಇರಬಹುದು, ಯಾವಾಗ ಬೇಕಾದರೂ ನಡೆಯಬಹುದು ಎಂದು ಬರೆದುಬಿಡಬಹುದು. ಓದಿದವರು ಅದನ್ನು ಮೆಚ್ಚಲೂ ಬಹುದು. ಆದರೆ ನೋಡುಗ?
ಬಹಳ ಜಾಗರೂಕತೆಯಿಂದ ಚಿತ್ರಕತೆ ಹೆಣೆದು ಕೊನೆಯವರೆಗೂ ಸಾಗಿಸಿ ಕೊನೆಯಲ್ಲಿ ಒಂದೇ ಕಥನ ಎನ್ನುವುದನ್ನು ಒಂದೇ ದೃಶ್ಯದಲ್ಲಿ ಸಾದರ ಪಡಿಸುತ್ತಾರೆ ಸುನಿ. ಆದರೆ ಅಲ್ಲಿಯವರೆಗೆ ನೋಡಿ ಅಕಸ್ಮಾತ್ ಅರ್ಥವಾಗದೆ ಇದ್ದರೇ ಮತ್ತೊಮ್ಮೆ ನೋಡಿ ಅರ್ಥ ಮಾಡಿಕೊಳ್ಳೋಣ ಎನ್ನಲು ದೃಶ್ಯ ಕಥನದಲ್ಲಿ ಮಜಾ ಸಿಗುವುದಿಲ್ಲ. ಮತ್ತು ಮೊದಲ ನೋಟಕ್ಕೆ ಪ್ರೇಕ್ಷಕ ಹೈರಾಣ ಆಗಿರುತ್ತಾನಾದ್ದರಿಂದ ಆತನ ಆಸಕ್ತಿ ಕರಗಿಹೋಗಿರುತ್ತದೆ. ಬಹುಶ ಉಳಿದವರು ಕಂಡಂತೆ ಚಿತ್ರದ ಸೋಲಿಗೂ ಇದೇ ಕಾರಣವಿರಬಹುದು. ಉಳಿದವರು ಕಂಡಂತೆ ಚಿತ್ರದ ಕತೆಯ ಭಾಗ ಭಾಗ ನಿರೂಪಣೆಯಲ್ಲಿ ಮಜಾ ಇರಲಿಲ್ಲವಾದರೂ ಚಿತ್ರಣದಲ್ಲಿ ಅಚ್ಚುಕಟ್ಟಿತ್ತು. ಆದರೆ ಮತ್ತೊಮ್ಮೆ ನೋಡೋಣ ಎಂದುಕೊಳ್ಳದ ಪ್ರೇಕ್ಷಕ ತಲೆಬಿಸಿ ಎಂದುಕೊಂಡ...ಬಹುಪರಾಕ್ ಕೂಡ ಅದೇ ನಿಟ್ಟಿನಲ್ಲಿದೆಯಾ?
ಪ್ರಯೋಗಾತ್ಮಕ ಚಿತ್ರವನ್ನು ಮಾಡುವಾಗ ಯಾವ ಪ್ರೇಕ್ಷಕನಿಗೆ ನಾವದನ್ನು ನೀಡುತ್ತಿದ್ದೇವೆ ಎಂದುಕೊಂಡರೆ ಒಳ್ಳೆಯದು ಎನ್ನಬಹುದು. ಯಾಕೆಂದರೆ ಅದನ್ನು ಸರ್ವ ರೀತಿಯ ಎಲ್ಲಾ ವರ್ಗದ ವೀಕ್ಷಕರು ನೋಡಲಿ ಎನ್ನಬಹುದಾದರೆ ದೃಶ್ಯಾವಳಿಗಳಲ್ಲಿ ಆ ತನವನ್ನು ಸೇರಿಸಲೇಬೇಕಾಗುತ್ತದೆ. ಇಲ್ಲವಾದಲ್ಲಿ ಒಟ್ಟಾರೆ ಮಜಾ ಕೊಡಬಹುದು ಎಂದುಕೊಳ್ಳುವ ಅಂಶ ಬಿಡಿಯಾಗಿ ನೀರಸ ಎನಿಸುತ್ತದೆ ಅಥವಾ ಬಿಡಿಯಾಗಿ ಸೂಪರ್ ಎನಿಸುವ ಅಂಶ ಒಟ್ಟಾರೆಯಾಗಿ ಪೇಲವ ಎನಿಸುತ್ತದೆ.
ಹಾಗೆಯೇ ಕೆಲವು ಕತೆಗಳಿಗೆ ಅದರದೇ ಆದ ಮಿತಿಗಳಿರುವುದು ಸತ್ಯ. ನನ್ನದೇ ಚಿತ್ರದ ಉದಾಹರಣೆ ತೆಗೆದುಕೊಂಡರೆ ನನ್ನ ಕತೆ ಹೇಳಿ ನಿರ್ಮಾಪಕರಿಗೆ ಹೇಳಿದ್ದೆ. ನಮ್ಮದು ಒಮ್ಮೆ ಮಾತ್ರ ನೋಡುವ ಸಿನಿಮಾ ಯಾಕೆಂದರೆ ಒಂದು ಸಸ್ಪೆನ್ಸ್ ಚಿತ್ರದ ಅಂತ್ಯ ಒಮ್ಮೆ ಗೊತ್ತಾದರೆ ಮತ್ತೊಮ್ಮೆ ಯಾಕೆ ನೋಡುತ್ತಾನೆ ಪ್ರೇಕ್ಷಕ ಎಂದು. ಅದು ಸತ್ಯವೇ ಆಗಿದ್ದರೂ ನಿರ್ಮಾಪಕರು ನನ್ನ ಮುಖ ನೋಡಿದ್ದರು.
ಒಟ್ಟಿನಲ್ಲಿ ಒಬ್ಬ ಚಿತ್ರಕರ್ಮಿ ಒಂದು ಕತೆ ಮಾಡಿದ ನಂತರ ಕತೆಯ ಹೊರಗೆ ನಿಂತು ಒಮ್ಮೆ ವಿಮರ್ಶೆ ಮಾಡಿದರೆ ಒಳ್ಳೆಯದೇನೋ? ಇಲ್ಲವಾದಲ್ಲಿ ಭ್ರಮಾನಿರಸನ ಕಟ್ಟಿಟ್ಟ ಬುತ್ತಿ.

  

Wednesday, July 30, 2014

ಹೀಗೊಂದು ತಲೆ ಹರಟೆ.

ಮೊನ್ನೆ ಒಗ್ಗರಣೆ ಚಿತ್ರ ನೋಡುತ್ತಿದ್ದೆ. ಅನಿವಾರ್ಯವಾಗಿಯಾದರೂ ಮೂರು ಮೂರು ಸಾರಿ ಇಷ್ಟಪಟ್ಟು ನೋಡಿದ ಸಿನಿಮಾ ಒಗ್ಗರಣೆ. ಅಲ್ಲೊಂದು ದೃಶ್ಯವಿದೆ. ನಾಯಕ ಕಾಳಿದಾಸ ಕಾಡಿನಜೀವಿ ಜಗ್ಗಯ್ಯನನ್ನು ಕರೆತಂದು ಮನೆಯಲ್ಲಿರಿಸಿಕೊಂಡಾಗ ಅದು ರಾಜಕಾರಣಿಗೆ ಗೊತ್ತಾಗುತ್ತದೆ. ಆ ಸನ್ನಿವೇಶದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆಯುತ್ತದೆ. ಆಗ ರಾಜಕಾರಣಿ ಇನ್ಮೇಲೆ ನಾನೇ ನಿನಗೆ ವಿಲನ್ ತಿಳ್ಕೋ ಎನ್ನುತ್ತಾನೆ. ಆಗ ಪ್ರತಿಕ್ರಿಯಿಸುವ ಪ್ರಕಾಶ್ ರಾಜ್ ನನಗೆ ವಿಲ್ಲನ್ನಾ? ಎನ್ನುತ್ತಾರೆ. ಆ ಒಂದು ಸಂಭಾಷಣೆಗೆ ಇಡೀ ಚಿತ್ರಮಂದಿರ ಶಿಳ್ಳೆ ಹಾಕಿತ್ತು.
ಆ ಕ್ಷಣದಲ್ಲಿ ಅಲ್ಲಿನ ಅಸಹಾಯಕ ಕಾಳಿದಾಸನನ್ನು ಮರೆತ ಪ್ರೇಕ್ಷಕ ಮಾಮೂಲಿ ಖಳ ಪ್ರಕಾಶ ರಾಜನನ್ನು ತಟ್ಟನೆ ಮನಸ್ಸಿಗೆ ತಂದುಕೊಂಡಿದ್ದ. ಅಂದರೆ ಪ್ರಕಾಶ ತಮ್ಮ ಖಳನಾಯಕನ ಪಾತ್ರದಲ್ಲಿ ಅದೆಷ್ಟರ ಮಟ್ಟಿಗೆ ಬೇರೂರಿದ್ದಾರೆ ಜನಮಾನಸದಲ್ಲಿ ಎನಿಸದಿರಲಿಲ್ಲ. 
ಒಬ್ಬ ಕಲಾವಿದ ಕೆಲವು ಪಾತ್ರಗಳಿಂದ ಜನರಲ್ಲಿ ಬೇರೂರಿ ಬಿಡುತ್ತಾನೆ. ಅದು ಒಳ್ಳೆಯದಾ ಕೆಟ್ಟದಾ? ಅದು ಗೊತ್ತಾಗದ ಉತ್ತರವಿಲ್ಲದ ಪ್ರಶ್ನೆ. ಕೆಲವೊಮ್ಮೆ ಅದೇ ವರವಾದರೆ ಮತ್ತೆ ಕೆಲವೊಮ್ಮೆ ಅದೇ ಶಾಪವಾಗುತ್ತದೆ. ಉದಾಹರಣೆಗೆ ಕನ್ನಡೇತರ ಭಾಷೆಗಳಲ್ಲಿ ದೊಡ್ಡ ನಾಯಕರುಗಳಿಗೆ ಕೇರ್ ಮಾಡದ ಅಬ್ಬರಿಸುವ ಪ್ರಕಾಶ್ ರಾಜ್ ಕನ್ನಡಕ್ಕೆ ಬಂದಾಗ ಅಸಹಾಯಕರಂತೆ ಆಗಿಬಿಡುತ್ತಾರೆ. ಅವರ ನಾನು ನನ್ನ ಕನಸು ಚಿತ್ರದಲ್ಲೂ ಒದ್ದಾಡುತ್ತಾರೆ. ಎಲ್ಲಿ ಹೋದ ಆ ಖದರ್ ಖಳನಾಯಕ ಎನಿಸದೇ ಇರದು ಪ್ರೇಕ್ಷಕನಿಗೆ. ನನಗೆ ಎಷ್ಟೋ ಸಲ ಹಾಗೆ ಅನಿಸಿದ್ದಿದ್ದೆ.
ಇನ್ನೊಂದು ಚಿತ್ರ ರೋಜ್ ನಲ್ಲಿ ಸಾಯಿಕುಮಾರ್ ಅಭಿನಯಿಸಿದ್ದಾರೆ. ಅದೂ ಖಾಕಿಧಾರಿಯಾಗಿ. ಇನ್ನು ಕೇಳಬೇಕೆ. ? ನಾಯಕನಾಗಿ, ಪೋಲಿಸ್ ಆಗಿ  ಖಳರನ್ನು ದುಷ್ಟರನ್ನು  ಬರೀ ಹೊಡೆಯುವುದರಲ್ಲಷ್ಟೇ ನಿಷ್ಣಾತರಲ್ಲ ಸಾಯಿ. ಮುಲಾಜಿಲ್ಲದೆ ಅವಾಚ್ಯ ಶಬ್ಧಗಳಿಂದ ಅಕ್ಕನ, ಅಮ್ಮನ್, ಗಾಂಡು ಚೂತ್ಯ ಬೈಯುವುದರಲ್ಲಿ ಎತ್ತಿದ ಕೈ. ಎದುರಿನವನು ಯಾರೇ ಆಗಿರಲಿ ಬೈದೆ ಮಾತನಾಡುವುದು ಅವರ ಗುಣ. ರೋಜ್ ಚಿತ್ರದಲ್ಲಿ ಅವರು ಬಂದ ತಕ್ಷಣ ಜನರಿಗೆಲ್ಲಾ ರೋಮಾಂಚನ. ಅದರಲ್ಲೂ ಮುಂದಿನ ಬೆಂಚಿನ ಅಭಿಮಾನಿಗಳಂತೂ ಅವರ ಬಾಯಿಯಿಂದ ಉದುರುವ ಶಬ್ಧಗಳನ್ನು ಕೇಳಲು ಕಾತುರರಾಗತೊಡಗಿದರು. ಅಲ್ಲಿಯವರೆಗೆ ಆಕಳಿಸುತ್ತಾ ಏನೇನೋ ಕೌಂಟರ್ ಕೊಡುತ್ತಿದ್ದ ಪ್ರೇಕ್ಷಕನಿಗೆ ಸಾಯಿ ಕುಮಾರ್ ಬಾಯಿ ಮುಚ್ಚಿಸಿದ್ದರು. ಆದರೆ ಚಿತ್ರದಲ್ಲಿ ಸಾಯಿಕುಮಾರ್ ಗೆ ನಿರ್ದೇಶಕರು ಕಡಿವಾಣ ಹಾಕಿದ್ದರಿಂದ ಅವರು ಯಾರನ್ನೂ ಬೈಯಲಿಲ್ಲ. ಪ್ರೇಕ್ಷಕನಿಗೆ ಬೇಸರವಾದದ್ದಂತೂ ಸತ್ಯ.
ಹೌದು. ಕೆಲವು ಕಲಾವಿದರು ಹಾಗಿದ್ದರೆನೆ ಚೆನ್ನ ಎನಿಸಿಬಿಡುತ್ತದೆ. ಅವರೂ ನಮಗೆ ಇದೆ ತಕ್ಕದ್ದು ಎನ್ನುವಂತೆ ಮಾಡುತ್ತಾರೆ. ಅದರಿಂದ ಹೊರಬರುತ್ತಾರೋ ಇಲ್ಲವೋ? ಪ್ರೇಕ್ಷಕ ಮಾತ್ರ ಅದರಿಂದ ಹೊರಬರುವುದಿಲ್ಲ. ನನಗೆ ಹಾಲಿವುಡ್ ಚಿತ್ರದಲ್ಲಿ ಟಾಮ್ ಲಿ ಜೋನ್ಸ್ ಇದ್ದರೆ ಆತ ಯಾರನ್ನೋ ಹುಡುಕೆ ಹುಡುಕುತ್ತಾನೆ ಎನಿಸುತ್ತದೆ.  ಆತನ ಸಿನಿಮಾಗಳನ್ನು ನೋಡಿ ಬಹುತೇಕ ಚಿತ್ರದಲ್ಲಿ ಆತನ ಕೆಲಸ ಹುಡುಕುವುದು. ಯಾವುದೋ ಕೊಲೆಯನ್ನೂ ಕೊಲೆಗಾರರನ್ನು ಬೆನ್ನಟ್ಟುವುದು ತಾಮಿಲಿ ಜೋನ್ಸ್ ಗೆ ಖುಷಿ ಎನಿಸುತ್ತದೆ. ಒಂದು ಚಿತ್ರದಲ್ಲಂತೂ ಅತಿರೇಕ ಎನ್ನುವಂತೆ ತನ್ನನ್ನೇ ಹುಡುಕುತ್ತಿರುತ್ತಾನೆ.
ಹಾಗೆಯೇ ಇಮ್ರಾನ್ ಹಶ್ಮಿ ಯ ಬಗ್ಗೆ ನನ್ನ ಗೆಳೆಯನೊಬ್ಬ ಹೇಳುತ್ತಿದ್ದ. ಇವನೇನು ಗುರು ಕಂಡವರ ಹೆಂಡ್ರು ಅಂದ್ರೆ ಬಾಯಿ ಬಿಡ್ತಾನೆ ಎಂದು. ಕೇಳಲಿಕ್ಕೆ ನಗು ತರಿಸುತ್ತಾದರೂ ಇಮ್ರಾನ್ ಪರಪತ್ನಿ ಪ್ರೇಮಿ ಎನಿಸುತ್ತದೆ. ಹಾಗೆ ಇಮ್ರಾನ್ ಬೇರೆ ನಾಯಕರ ರೀತಿ ಪ್ರೀತಿಸುವುದಿಲ್ಲ. ಪ್ರೀತಿಯೋ ಮದುವೆಯೋ ಮೊದಲಿಗೆ ಮಂಚಕ್ಕೆ ಎಳೆದುಕೊಳ್ಳಲೆ ಬೇಕು, ಮುತ್ತಿಡಬೇಕು...ಜನರಿಗೂ ಇಮ್ರಾನ್ ಹೀಗೆ ಮಾಡಿದರೆ ಖುಷಿ. ಅದು ಬಿಟ್ಟು ಆತ ಯಾರೇ ನೀನು ಚಲುವೆ ನಾಯಕನಂತೆ, ಬೆಳದಿಂಗಳ ಬಾಲೆಯ ರೇವಂತ್ ನಂತೆ ಮುಖ ನೋಡದೆ, ಮುಟ್ಟದೆ ಮುತ್ತಿಡದೆ, ಬೆತ್ತಲೆ ಬೆನ್ನ ಮೇಲೆ ಕೈಯಾಡಿಸದೆ ಪ್ರೀತಿಸಲಾರನೇನೋ ಎನಿಸುತ್ತದೆ. ಹಾಗೆ ಆತ ಪ್ರೀತಿಸಿದರೂ ನಾಯಕಿಯನ್ನು ಆತ ಮುಟ್ಟದಿದ್ದರೆ ಜನರಿಂದ ಬೈಸಿಕೊಳ್ಳಲಿಕ್ಕೂ ಸಾಕು..
ಹಾಗೆಯೇ ಕೆಲವು ದಿವಸಗಳ ಹಿಂದೆ ದೇವರಾಜ್ ಪೋಲಿಸ್ ಡಿಪಾರ್ಟ್ಮೆಂಟ್ ಅನ್ನು ಗುತ್ತಿಗೆ ತೆಗೆದುಕೊಂಡ ಹಾಗೆ ಆದೆ ಪಾತ್ರಗಳನ್ನೂ ನಿರ್ವಹಿಸಿದ್ದರು. ಆಗೆಲ್ಲಾ ಏನು ದೇವರಾಜ್ ಅವರು ಶೂಟಿಂಗ್ ಎಂದಾಕ್ಷಣ ಮನೆಯಿಂದಲೇ ಪೋಲಿಸ್ ಯುನಿಫಾರ್ಮ್ ಹಾಕಿಕೊಂಡು ಹೋಗಿಬಿಡುತ್ತಾರಾ? ಎನಿಸುತ್ತಿತ್ತು.
ಹಾಗೆಯೇ ಅಲ್ಲಿಂದಿಲ್ಲಿಗೆ ಚಾಡಿ ಹೇಳಲು,  ಹಾಗೆಯೇ ಮನೆ ಮುರಿಯಲು ಸುಂದರರಾಜ್, ಹೆಣ್ಣು ಮಗಳನ್ನು ಮದುವೆ ಮಾಡಿಕೊಡುತ್ತೇನೆ ಎಂದರೂ ಬಿಡದೆ ಅತ್ಯಾಚಾರ ಮಾಡಲು ಮುಂದಾಗುವ ಕೀರ್ತಿ ರಾಜ್, ಕಂಡ ತಕ್ಷಣ ಮಾಸ್ತರ್ ಎನಿಸುವ ಸದಾಶಿವ ಬ್ರಹ್ಮಾವರ್, ಬಜಾರಿ ಅತ್ತೆಯಾಗಿ ಸತ್ಯಭಾಮ ಮುಂತಾದವರು ನಮ್ಮ ಮನಸ್ಸಿನಲ್ಲಿ ಆಯಾ ಪಾತ್ರಗಳ ಮೂಲಕ ಬೇರೂರಿಬಿಟ್ಟಿದ್ದಾರೆ. ಕೀರ್ತಿರಾಜ್ ಹುಡುಗಿಯೊಂದಿಗೆ ಸಭ್ಯವಾಗಿ ಮಾತನಾಡುತ್ತಾ ನಿಂತಿದ್ದರೂ ಅದೆಲ್ಲಿ ಪಕ್ಕಕ್ಕೆಳೆದೊಯ್ಯುತ್ತಾರೋ, ರೇಪ್ ಮಾಡುತ್ತಾರೋ ಎನಿಸುತ್ತದೆ. ಮಂಗಳಾರತಿ ತಟ್ಟೆ ಹಿಡಿದು ಸೊಸೆಯನ್ನು ಸತ್ಯಭಾಮ ಸಂತೋಷದಿಂದ ಮನೆಗೆ ಬರಮಾಡಿಕೊಂಡರೂ ಅದರಲ್ಲಿ ಏನೋ ಹುನ್ನಾರವಿರಬೇಕು ಎನಿಸದೇ ಇರದು. ಹಾಗೆಯೇ ಕಾಶಿನಾತ್ ಸುಮ್ಮನೆ ಮಾತನಾಡಿದರೂ ಅದರಲ್ಲಿ ಪೋಲಿತನವನ್ನೂ ಕಲ್ಪ್ಸಿಕೊಳ್ಳುವ ಪ್ರೇಕ್ಷಕರಿಗೆ ಕೊರತೆಯಿಲ್ಲ.ಎಷ್ಟೇ ಅಶಕ್ತ ಕೇಡಿಯಿದ್ದರೂ ಅನಂತನಾಗ್, ರಿಷಿ ಕಪೂರ್ ಹೊಡೆದಾಡಲು ಹಿಂದೆ ಮುಂದೆ ನೋಡುತ್ತಾರೆ ಎನಿಸುತ್ತದೆ. ಹಾಗೆಯೇ ಒಂದಷ್ಟು ದಿನದ ಹಿಂದೆ ರಮೇಶ್ ಪ್ರೀತಿಸಿ ಮನಸ್ಸಿನಲ್ಲಿಯೇ ಆ ಪ್ರೀತಿಯನ್ನು ಇಟ್ಟುಕೊಳ್ಳುತ್ತಿದ್ದರು. ಪ್ರೇಯಸಿಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಅವರ ಮದುವೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಕಣ್ಣೀರಿಡುತ್ತಾ ನಿಂತುಕೊಳ್ಳುತ್ತಿದ್ದರು.ನಮ್ಮೂರಲ್ಲಿ ದೂರದರ್ಶನವಿದ್ದ ಸಮಯದಲ್ಲಿ ಮುನ್ನೋಟ ಎನ್ನುವ ಕಾರ್ಯಕ್ರಮ ಪ್ರತಿ ಭಾನುವಾರ ಬರುತ್ತಿತ್ತು. ಅದರಲ್ಲಿ ವಾರದ ಪ್ರಮುಖ ಕಾರ್ಯಕ್ರಮಗಳನ್ನು ಹೇಳುತ್ತಿದ್ದಾಗ ಮುಂದಿನ ಭಾನುವಾರದ ಸಿನಿಮಾ ಯಾವುದಿರಬಹುದು ಎಂಬ ಕುತೂಹಲ ನಮ್ಮನ್ನು ಕಾಡುತ್ತಿತ್ತು. ಅದೇನಾದರೂ ರಾಜ್, ಅನಂತನಾಗ್ ಅವರದ್ದಾದರೆ ನಮ್ಮೂರ ಹೆಂಗೆಳೆಯರು ಖುಷಿ. ಯಾಕೆಂದರೆ ಸಂಸಾರಿಕ ಕತೆ ಅಲ್ಲಿರುತ್ತಿತ್ತು. ಆದರೆ ನಾವು ಹುಡುಗರು ಬೇಸರ ಪಟ್ಟುಕೊಳ್ಳುತ್ತಿದ್ದೆವು. ಯಾಕೆಂದರೆ ಕೊಲೆ ಸುಲಿಗೆ ಹೊಡೆದಾಟ ಯಾವುದೂ ಇಲ್ಲದ ಸಿನಿಮಾ ನೋಡುವುದು ನಮಗೆ ಚಿತ್ರಹಿಂಸೆ. ಆದರೆ ವಿಷ್ಣು ಅಂಬಿ ಶಂಕರ್ ನಾಗ್ ಎಂದರೆ ನಾವು ಕುಣಿದಾಡುತ್ತಿದ್ದೆವು.
ಈಗಲೂ ಕೆಲ ಕಲಾವಿದರು ಹೀಗೆಯೇ ಇದ್ದರೇ ಚೆನ್ನ ಎನಿಸುತ್ತದೆ. ಅಂತವರ ಪಟ್ಟಿಯಲ್ಲಿ ನಿಮ್ಮ ಮೆಚ್ಚಿನ ಕಲಾವಿದರು ಯಾರಿರಬಹುದು..?

Saturday, June 21, 2014

ಚಿತ್ರಕತೆ ಬರವಣಿಗೆ:

ಚಿತ್ರಕತೆ ಬರೆಯುವುದು ಹೇಗೆ ಎನ್ನುವ ಪ್ರಶ್ನೆ ನನ್ನನ್ನು ತುಂಬಾ ದಿನಗಳವರೆಗೆ ಕಾಡಿದ ಪ್ರಶ್ನೆ ಎನ್ನಬಹುದು. ಅಂದರೆ ಶೈಲಿ ಹೇಗೆ, ಹೇಗೆ ಪ್ರಾರಂಭಿಸಬೇಕು ಮತ್ತು ಯಾವ ರೀತಿ ಬರೆಯುವುದು ಸರಿಯಾದದ್ದು ಮತ್ತು ಅನುಕೂಲಕರವಾದದ್ದು ಎಂಬುದು ಪ್ರಶ್ನೆ.
ಆದರೆ ಚಿತ್ರರಂಗಕ್ಕೆ ಬಂದ ಮೇಲೆ ನನಗೆ ಅದರ ಸ್ಪಷ್ಟ ರೂಪ ಗೊತ್ತಾಯಿತು ಎನ್ನಬಹುದು.
ಆದರೆ ಮೈಸೂರಿನಲ್ಲಿ ಇದ್ದಾಗಲೇ ಅದರ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದೆ. ಆಗ ಗಾಂಧೀ ಸಿನಿಮಾದ ಚಿತ್ರಕತೆ ಪುಸ್ತಕದ ರೂಪದಲ್ಲಿ ಸಿಕ್ಕಿತ್ತು. ಅದನ್ನು ನನ್ನ ಟೆಕ್ಸ್ಟ್ ಪುಸ್ತಕಕ್ಕಿಂತ ಹೆಚ್ಚಾಗಿ ಹಗಲು ರಾತ್ರಿ ಓದಿದ್ದೆ ಅನ್ನುವುದಕ್ಕಿಂತ ಅದನ್ನು ಗಮನಿಸಿದ್ದೆ. ಅದೇನು ಇಂಟೀರಿಯರ್, ಎಕ್ಷ್ತೇರಿಯರ್, ಕಟ್ ಟು, ಫೇಡ್ ಔಟ್, ಫೇಡ್ ಇನ್ ...ಅದರ ಬಗ್ಗೆ ವಿಸ್ತೃತವಾಗಿ ಅದ್ಯಯನ ಮಾಡಿದ ನಂತರ ಅದರ ರೀತಿಯಲ್ಲೇ ಬರೆಯಲು ಪ್ರಾರಂಭಿಸಿ ನಾನಂದುಕೊಂಡ ಒಂದಿಡೀ ಕತೆ ಚಿತ್ರಕತೆಯನ್ನು ಬರೆದುಬಿಟ್ಟಿದ್ದೆ.
ಆದರೆ ಇಲ್ಲಿ ಬಂದಾಗ ಅದು ಚಿತ್ರೀಕರಣಕ್ಕೆ ಅಷ್ಟು ಉಪಯೋಗವಾಗುವುದಿಲ್ಲ ಎನಿಸಿತು. ಈಗೀಗಂತೂ ಅದರ ಉಪಯೋಗವಿಲ್ಲ ಎನಿಸಿತು. 
ಹಾಳೆಯ ಒಂದು ಮಗ್ಗಲಲ್ಲಿ ಅಂದರೆ ಎಡಭಾಗದಲ್ಲಿ ದೃಶ್ಯದ ಸಂಖ್ಯೆ, ಸ್ಥಳ, ಪಾತ್ರಧಾರಿಗಳು ಮುಂತಾದವುಗಳನ್ನು ಬರೆದು a ಪುಟದ ಅರ್ಧ ಭಾಗದಲ್ಲಿ ಎಡಭಾಗಕ್ಕೆ ಚಿತ್ರಕತೆ ಸಂಭಾಷಣೆ ಬರೆಯುವುದು ಒಳ್ಳೆಯದು. ಯಾಕೆಂದರೆ ಚಿತ್ರೀಕರಣದ ಸಮಯದಲ್ಲಿ ಮುಂದೆ ಸಂಕಲನಕ್ಕೆ ಉಪಯೋಗವಾಗಲೆಂದು ಎಡಿಟಿಂಗ್ ರಿಪೋರ್ಟ್ ಬರೆಯುತ್ತಾರೆ. ಅದರಿಂದ ಅದರ ರೀಡಿಂಗ್ ನಿಂದ ok ಯಾದ, ok ಆಗದ ದೃಶಿಕೆಗಳನ್ನ ವಿಂಗಡಿಸುವುದು ಸುಲಭ ಸಾಧ್ಯ. ಹಾಗೆಯೇ ಚಿತ್ರೀಕರಣದ ಸಮಯದಲ್ಲಿ ಶಾಟ್ ವಿಭಜನೆ, ಸಂಯೋಜನೆ ದಾಖಲೆಗಳನ್ನು ಬರೆದುಕೊಳ್ಳಲು ಸುಲಭ. ಹಾಗಾಗಿ ಒಂದು ಅರ್ಧ ಭಾಗ ಖಾಲಿಯಿದ್ದಾಗ ok ಶಾಟ್, ಅಥವಾ ಏನಾದರೂ ತಿದ್ದುಪಡಿ ಇದ್ದರೇ, ಅಥವಾ ಆಯಾ ಶಾಟ್ ನ ಕ್ಯಾಮೆರಾ ಕ್ಲಿಪ್ ನಂಬರ್ ಮುಂತಾದವುಗಳನ್ನು ನಮೂದಿಸಲು ಉಪಯೋಗವಾಗುತ್ತದೆ ಎನ್ನಬಹುದು.
ಆದರೆ ಹಾಲಿವುಡ್ ಶೈಲಿಯಲ್ಲಿ ಅದಕ್ಕೆ ಆಸ್ಪದವಿಲ್ಲ. ನೋಡಲು ಓದಲು ಅದು ಚೆನ್ನಾಗಿರುತ್ತದೆ. ಪ್ರಾಯೋಗಿಕವಾಗಿ ಇಷ್ಟು ಅನುಕೂಲಕಾರಿಯಲ್ಲ .
ಅಂದ ಹಾಗೆ ರಕ್ಷಿತ್ ಶೆಟ್ಟಿ ತಮ್ಮ ಉಳಿದವರು ಕಂಡಂತೆ ಚಿತ್ರದ ಸ್ಕ್ರಿಪ್ಟ್ ಪ್ರತಿಯನ್ನು ಅಂತರ್ಜಾಲದಲ್ಲಿ ಹಾಕಿದ್ದಾರೆ. ಮತ್ತದು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದಾರೆ. ಒಂದು ಚಿತ್ರ ಭರ್ಜರಿ ಯಶಸ್ಸು ಕಂಡರೆ ಅದರ ಪುಸ್ತಕಗಳು ಬರುವುದು ಸಾಮಾನ್ಯ. ಕನ್ನಡದಲ್ಲಿ ಮಠ, ಎದ್ದೇಳು ಮಂಜುನಾಥ ಚಿತ್ರಗಳು ಬರಹರೂಪದಲ್ಲಿ ಬಂದಿವೆ. ಹಾಗೆ ನೋಡಿದರೆ ಉಕ ಅದ್ಭುತ ಯಶಸ್ವೀ ಚಿತ್ರವಲ್ಲ. ಹಾಗಂತ ತೆಗೆದು ಹಾಕುವ ಚಿತ್ರವೂ ಅಲ್ಲ. ಅದೊಂತರ ಚಿತ್ರ. ನಾನು ಸಿನಿಮಾ ನೋಡುತ್ತಾ ನೋಡುತ್ತಾ ಬೋರ್ ಆಯಿತು ಎನಿಸಿದೆ. ನೋಡಿದ ಮೇಲೆ ಇದೇನು ಕುತೂಹಲವೇ ಇಲ್ಲವಲ್ಲ ಎನಿಸಿದೆ. ಆದರೆ ಅಷ್ಟರ ನಡುವೆಯೂ ನೋಡಿಸಿಕೊಂಡಿದೆ. 
ಒಂದು ಚಿತ್ರದಲ್ಲಿ ಭರವಸೆ, ಅತಿ ಭರವಸೆ ನಿರೀಕ್ಷೆ ಗಳು ಸಿನಿಮಾವನ್ನು ಸಾಮಾನ್ಯವಾಗಿ ನೋಡಲು ಬಿಡುವುದಿಲ್ಲ ಎನ್ನುವುದಕ್ಕೆ ಉಕ ಉತ್ತಮ ಉದಾಹರಣೆ ಎನ್ನಬಹುದು, ಅದರ ಪ್ರಚಾರ, ಪ್ರೊಮೊ, ರಕ್ಷಿತ್ ಶೆಟ್ಟಿ ಇವುಗಳನ್ನು ಸಿನಿಮಾದ ಮೇಲೆ ಅದೆಂತಹ ಪರಿಣಾಮ ಬೀರಿದ್ದವು ಎಂದರೆ ಚಿತ್ರ ನೋಡಿದವರು ಇಲ್ಲಾ ಹೊಗಳಬೇಕು, ಇಲ್ಲಾ ತೆಗಳಬೇಕು ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟರು. ಹಾಗಾಗಿ ಮುಖಪುಸ್ತಕದಲ್ಲಿ ಅಲ್ಲಲ್ಲಿ ಅದರ ಚರ್ಚೆಗಳು ಬೈಗುಳ ಹೊಗಳಿಕೆಗಳು ಎಗ್ಗಿಲ್ಲದೆ ನಡೆದವು ಎನ್ನಬಹುದು. ಹೇಗೆ ವಸ್ತು ಮಾನ್ಯಕ್ಕಿಂತ ಹೆಚ್ಚು ಹೊಗಳಿದರೆ ತಡೆದುಕೊಳ್ಳಲಾಗುವುದಿಲ್ಲವೋ ಹಾಗೆಯೇ ವಿನಾಕಾರಣ ತೆಗಳಿದರೆ ತಡೆದುಕೊಳ್ಳಲಾಗುವುದಿಲ್ಲ. ಸಿನಿಮಾ ಅಂದ್ರೆ. ಸಿನಿಮಾ ಅಷ್ಟೇ.ಏನೇ ಪ್ಯಾಶನ್, ಅದೂ ಇದೂ ಎಂದರೂ ಕತ್ತಲೆಯಲ್ಲಿ ಎರಡೂವರೆ ಗಂಟೆಯ ಜಗತ್ತಿನ ಅನುಭವವೇ ಅಂತಿಮ. ಹಾಗಾಗಿ ಒಂದು ಚಿತ್ರವನ್ನು ಹೊಗಳುವುದಕ್ಕಿಂತ ಅಥವಾ ಪೋಸ್ಟ್ ಮಾರ್ಟಂ ಮಾಡುವುದಕ್ಕಿಂತ ಸುಮ್ಮನೆ ನೋಡಬೇಕು ಅಲ್ಲವೇ?
ಉಕ ಚಿತ್ರಕತೆಯ ಬರಹದ ಪ್ರತಿಯನ್ನು ರಕ್ಷಿತ್ ಅಂತರ್ಜಾಲದಲ್ಲಿ ಬಿಟ್ಟಿದ್ದಾರೆ. ನಿಜಕ್ಕೂ ಅದು ಸಂತೋಷದ ವಿಷಯ. ಸಿನಿಮಾ ನೋಡಿ ಅರ್ಥವಾಗಲಿಲ್ಲ ಎಂದು ಕೊಳ್ಳುವವರು ಅದನ್ನೊಮ್ಮೆ ಓದಿ ಅರ್ಥ ಮಾಡಿಕೊಳ್ಳಬಹುದು ಎಂಬುದಕ್ಕಿಂತ ಸಿನಿಮಾಕ್ಕೆ ಬರಲು ಅಪೇಕ್ಷೆ ಇರುವವರಿಗೆ ಚಿತ್ರಕತೆ ಬರೆಯುವ ಶೈಲಿಯ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಅದು ಅತ್ಯವಶ್ಯ. ಆದರೆ ಅದರ ಶೈಲಿ ಹಾಲಿವುಡ್ ಚಿತ್ರಗಳ ಬರಹದ ಪ್ರತಿಯ ಹಾಗಿರುವುದು ಮತ್ತು ಪ್ರಾಯೋಗಿಕವಾಗಿ ಅದರ ಉಪಯೋಗ ನಾನು ಕಂಡ ಮಟ್ಟಿಗೆ ಇಲ್ಲದಿರುವುದು ಬೇಸರದ ಸಂಗತಿ. ಜಗತ್ತಿನ ಚಿತ್ರಕರ್ಮಿಗಳ ಕಾರ್ಯರೂಪವನ್ನು ಅನುಸರಿಸುವುದು ಅವಶ್ಯ. ಅದು ನಮ್ಮಲ್ಲಿನ ಕೆಲಸಕ್ಕೆ ಎಷ್ಟು ಅನುಕೂಲ ಎನ್ನುವುದನ್ನು ಮನಗಂಡಾಗ ಆ ಕೆಲಸಕ್ಕೂ ಒಂದು ಸಾರ್ಥಕತೆ ಬರುತ್ತದೆ.ಹಾಗಾಗಿ ರಕ್ಷಿತ್ ಕೆಲಸವನ್ನು ಮೆಚ್ಚಿಕೊಳ್ಳುತ್ತಲೇ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಬೇಕಾಗುತ್ತದೆ.
ಅದರ ಜೊತೆಗೆ ಚಿತ್ರದಲ್ಲಿ ಬಳಸಿರುವ ಹೊಸ ತಂತ್ರಜ್ಞಾನಗಳ ಬಗ್ಗೆ ಸ್ವಾನುಭವವನ್ನು ಅದರ ಪ್ರಾಯೋಗಿಕವಾಗಿ ಆದ ಲಾಭ ನಷ್ಟಗಳನ್ನು ಹಂಚಿಕೊಂಡರೆ ಚಿತ್ರಕರ್ಮಿಗಳಿಗೆ ಇನ್ನೂ ಲಾಭದಾಯಕವಾಗುತ್ತದೆ ಎನಿಸುತ್ತದೆ.
ಅವರು ಬಿಡುವಿದ್ದಾಗ ಅದನ್ನು ಮಾಡಲಿ ಎಂಬುದು ನನ್ನ ಆಶಯ..

Monday, June 16, 2014

ಕೌಂಟರ್ ವೀರರು:


ಇಲ್ಲಿ ಕೌಂಟರ್ ವೀರರು ಎಂದರೆ ನಾನಾ ಅರ್ಥ ಬರಬಹುದು. ಬಾರ್ ನಲ್ಲಿ ಒಳ ಹೋಗಿ ಮಟ್ಟಸವಾದ ಟೇಬಲ್ ಹಿಡಿದು ಕುಳಿತುಕೊಂಡು ನಿಧಾನಕ್ಕೆ ಗುಟುಕರಿಸುವ ಮದ್ಯಪಾನಿಯ ಹೊರತಾಗಿ ಆತುರಾತುರವಾಗಿ ಬಾರ್ ಕೌಂಟರ್ ನಲ್ಲಿಯೇ ಒಂದೆರೆಡು ಕಾಳು ಉಪ್ಪಿನಕಾಯಿ ಕೊಯ್ಲಿ ಹಿಡಿದು ಲಬಕ್ಕನೆ ಇಡೀ ಲೋಟದ ಪಾನೀಯವನ್ನು ಗಂಟಲಿಗೆ ಸುರಿದುಕೊಂಡು  ಆ ಕ್ಷಣದಲ್ಲೇ ಉಪ್ಪಿನಕಾಯಿ ನೆಕ್ಕಿ ಏನೋ ಕೆಲಸವಾಯಿತಪ್ಪ ಎನ್ನುವಂತೆ ಮುಖಭಾವ ವ್ಯಕ್ತ ಪಡಿಸುವವರನ್ನೂ ಕೂಡ ಕೌಂಟರ್ ವೀರರು ಎನ್ನಬಹುದು. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಆ ಕೌಂಟರ್ ವೀರರ ಬಗ್ಗೆಯಲ್ಲ.
ನಮ್ಮ  ಸಿನಿಮಾದಲ್ಲಿ ಡೈಲಾಗ್ ಕೌಂಟರ್ ಡೈಲಾಗ್ ಎಂಬ ಪದಗಳನ್ನು ಬಳಸುತ್ತೇವೆ. ಡೈಲಾಗ್ ಗೆ ಪ್ರತಿಯಾಗಿ ಎದುರುತ್ತರ ಎನ್ನಬಹುದು. ಈ ಎದುರುಮಾತುಗಳು ಅಲ್ಲಲ್ಲಿ ಬಂದಾಗ ಜನರಲ್ಲಿ ನಗೆ ಉಕ್ಕಿಸಬಹುದು, ಅಥವಾ ರೋಮಾಂಚನ ಉಂಟು ಮಾಡಬಹುದು. ಹಾಗಾಗಿ ಪಂಚಿಂಗ್ ಡೈಲಾಗ್ ಎಂದೆ ಕರೆಯಲ್ಪಡುವ ಈ ಮಾತುಗಳೇ ಕೆಲಚಿತ್ರಗಳ ಬಂಡವಾಳ ಎನ್ನಬಹುದು. ಅದರಲ್ಲೂ ಹಾಸ್ಯ ಚಿತ್ರಗಳಿಗೆ ಈ ಪಂಚಿಂಗ್ ಡೈಲಾಗ್ ಗಳು ಬೇಕೇ ಬೇಕು.
ಆದರೆ ಇವೆಲ್ಲಾ ಸಿನಿಮ ಒಳಗಿನ ಕತೆಯಾಯಿತು. ನೀವು ಚಿತ್ರಮಂದಿರದೊಳಗೆ ಹೋದಾಗ ಅಲ್ಲೂ ಪಂಚಿಂಗ್ ಡೈಲಾಗ್ ಹೇಳುವವರನ್ನು ಕಾಣಬಹುದು. ಅವರೇ ಪ್ರೇಕ್ಷಕರು. ಸುಖಾ ಸುಮ್ಮನೆ ಎಲ್ಲಾ ಸಿನಿಮಾಗಳಿಗೂ ಇವರೇನು ಪಂಚಿಂಗ್ ಡೈಲಾಗ್ ಹರಿ ಬಿಡುವುದಿಲ್ಲ. ಚಿತ್ರ ಬೋರಾದಾಗ, ಆಕಳಿಕೆ ಹೆಚ್ಚಾದಾಗ ತೆರೆಯ ಮೇಲಿನ ಪಾತ್ರಧಾರಿಗಳ ಮಾತಿಗೆ ಸರಿಯಾದ ಎದುರುತ್ತರವನ್ನು ಹೊರಗೆ ಕುಳಿತೆ ನೀಡುವವರು. ಅವರ ಮಾತುಗಳು ಕೆಲವೊಮ್ಮೆ ಸಿನಿಮಾದ ಬೋರ್ ಕಳೆಯುತ್ತದೆ ಎಂದರೆ ಅದನ್ನು ಅತಿಶಯೋಕ್ತಿ ಎನ್ನುವ ಹಾಗಿಲ್ಲ. ಮಲ್ಟಿಫ್ಲೆಕ್ಸ್ ನಲ್ಲಿ ಇವರು ಕಡಿಮೆ ಎನ್ನಬಹುದು. ಯಾಕೆಂದರೆ ಅಲ್ಲಿ ಬರುವವರೆಲ್ಲಾ ಡೀಸೆಂಟ್ ಆಗಿರಬೇಕು ಎಂದುಕೊಂಡು ಮೊದಲೇ ನಿರ್ಧಾರ ಮಾಡಿಬಿಟ್ಟಿರುತ್ತಾರೆ. ಆದರೆ ನಮ್ಮವರು ಆಗಲ್ಲ. ಯಾವ ಹಿಂಜರಿಕೆಯೂ ಇಲ್ಲದೆ ತಮ್ಮ ಅನಿಸಿಕೆ ಅಭಿಪ್ರಾಯ ಕೆಲವೊಮ್ಮೆ ಸಿನಿಮಾದ ಒಂದು ಸಾಲಿನ ವಿಮರ್ಶೆಯನ್ನು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ವ್ಯಕ್ತಪಡಿಸುತ್ತಿರುತ್ತಾರೆ.
ಮೊನ್ನೆ ಗಜಕೇಸರಿ ಚಿತ್ರಕ್ಕೆ ಹೋಗಿದ್ದೆ. ನಾನು ಸಾಮಾನ್ಯವಾಗಿ ದ್ವಿತೀಯ ತರಗತಿಗೆ ಹೋಗುತ್ತೇನೆ. ಅಲ್ಲಾದರೆ ಪ್ರೇಕ್ಷಕರು ಜಾಸ್ತಿಯೂ ಇರುತ್ತಾರೆ. ಸ್ವಲ್ಪ ಹಣ ಉಳಿದು ಮಧ್ಯಂತರದ ಖರ್ಚಿಗೂ ಆಗುತ್ತದೆ ಎನ್ನುವುದು ನನ್ನ ಹುನ್ನಾರ. ನನ್ನ ಪಕ್ಕದಲ್ಲಿ ಅಭಿಮಾನಿಯೊಬ್ಬ ಕುಳಿತುಬಿಟ್ಟಿದ್ದ. ಅವನಾಗಲೇ ಭಜರಂಗಿ ಚಿತ್ರವನ್ನು ನೋಡಿ ಬಿಟ್ಟಿದ್ದ ಅಲ್ಲದೆ ಗಜಕೇಸರಿ ಚಿತ್ರದ ಕತೆ ಸ್ವಲ್ಪ ಭಜರಂಗಿ ಚಿತ್ರದ್ದನ್ನೇ ಹೋಲುತ್ತದಲ್ಲಾ ಅವನಿಗೆ ಸ್ವಲ್ಪ ಬೋರಾಗಲು ತೊಡಗಿತು. ಶುರುವಾಯಿತು ನೋಡಿ ಅವನ ಆರ್ಭಟ.
ಹಿಂದುಗಡೆ ಸಾಲಿನಲ್ಲಿ ಕುಳಿತ ಯಾರಿಗೂ ಫೋನ್ ಬಂದು ಆತ ರಿಸೀವ್ ಮಾಡಿ ಗುರು ನಾನು ಸಿನಿಮಾ ನೋಡ್ತಿದ್ದೀನಿ.. ಎಂದ. ಆ ಕಡೆಯವನು ಯಾವ ಸಿನಿಮಾ ಎಂದು ಕೇಳೆ ಕೇಳುತ್ತಾನೆ ಎಂಬುದನ್ನು  ಊಹಿಸಿದ ನಮ್ಮ ಕೌಂಟರ್ ವೀರ ಗುರು ಭಜರಂಗಿ-2 ನೋಡ್ತಿದ್ದೀನಿ ಅಂತ ಹೇಳು ಎಂದು ಜೋರಾಗಿ ಕಿರುಚಿದ. ಚಿತ್ರಮಂದಿರ ಒಮ್ಮೆ ಗೊಳ್ ಎಂದು ನಕ್ಕಿತ್ತು.
ಯಶ್ ನ ಬಾಹುಬಲಿ ಪಾತ್ರಕ್ಕೆ ಖಳನಾಯಕ ವಿಷ ಕುಡಿಸಿದಾಗ ಸಾಯಲು ಹತ್ತೇ ನಿಮಿಷ ಇದೆ ಎಂದಾಗ ಹೊಡೆದಾಡುವ ಮುನ್ನ ಬಾಹುಬಲಿ ವೀರಾವೇಶದ ಒಂದಷ್ಟು ಮಾತುಗಳನ್ನು ಆಡುತ್ತಾನೆ. ಅದರಲ್ಲಿ ಕನ್ನಡದ ವೀರರ ಘನತೆ, ಇತಿಹಾಸ ಮುಂತಾದವೆಲ್ಲಾ ತುಂಬಿರುತ್ತದೆ. ಆದರೆ ನಮ್ಮ ಕೌಂಟರ್ ವೀರ ಅದಾವುದನ್ನೂ ಗಮನಿಸಲಿಲ್ಲ.
ಗುರು.. ಇರದೇ ಹತ್ತು ನಿಮಿಷ ...ಟೈಮ್ ವೇಸ್ಟ್ ಮಾಡಬೇಡ...ಹೊಡೆದಾಕು.. ಆಮೇಲೆ ಟೈಮ್ ಇದ್ರೆ ಮಾತಾಡೋವಂತೆ...
ಎಂಬ ಕೌಂಟರ್ ಕೊಟ್ಟ. ಯಶ್ ಬಿಟ್ಟು ಎಲ್ಲರೂ ನಕ್ಕರು.
ಫ್ಲಾಶ್ ಬ್ಯಾಕ್ ಮುಗಿದು ಆನೆ ಮುಂದೆ ನಿಂತ ನಾಯಕ ಹೇಳುತ್ತಾನೆ ಈ ಕತೆಯಲ್ಲಾ ನಾನು ನಂಬಬೇಕಾ...ಎಂದೆಲ್ಲಾ ಮಾತಾಡುವಾಗ ನಾಯಕಿ ಅಮೂಲ್ಯ ಬಂದು ಒಂದಷ್ಟು ಮಾತಾಡಿ ಕನ್ವಿನ್ಸ್ ಮಾಡುತ್ತಾಳೆ. ಆದರೆ ನಮ್ಮ ಕೌಂಟರ್ ವೀರ ಅಷ್ಟು ಕಾಯದೆ.
ನೀನು ನಂಬಬೇಕು ಗುರು.. ಇದಕ್ಕೂ ಮುನ್ನ ಭಜರಂಗಿ ನೋಡ್ ಬಂದಿದ್ರೆ ನಿಂಗೆ ಎಲ್ಲಾ ಗೊತ್ತಾಗಿರೋದು ಎಂದ.
ಆಮೇಲೆ ಅದೆಷ್ಟೋ ಕೌಂಟರ್ ಗಳು ಬಂದವೆಂದರೆ ಸಿನಿಮಾ ಮುಗಿಯೋವರೆಗೂ ನಗುವುದೇ ಆಗಿತ್ತು.
ಇಂತಹ ಕೌಂಟರ್ ವೀರರನ್ನು ನಾನು ಪ್ರತಿ ಚಿತ್ರಮಂದಿರದಲ್ಲೂ ಗಮನಿಸುತ್ತೇನೆ. ಅದರಲ್ಲೂ ಸಿನಿಮಾ ಚೆನ್ನಾಗಿಲ್ಲದಿದ್ದರಂತೂ ಅದರ ಮಜಾವೇ ಬೇರೆ. ಕೆಲವು ಅಂತಹ ಕೌಂಟರ್ ಗಳಿವೆ.
ಚಪ್ಪಾಳೆ ಚಿತ್ರದ ಕೊನೆಯ ದೃಶ್ಯದಲ್ಲಿ ಖಳರು ನಾಯಕನನ್ನು ಹೊಡೆದು ಬೀಳಿಸುತ್ತಾರೆ. ಆಗ ಆತನ ಸ್ನೇಹಿತರು ಎಲ್ಲಾ ಬಂದು ಅಲ್ಲೇ ಒಂದು ಬ್ಯಾಂಡ್ ಸೆಟ್, ಡ್ರಮ್ ಸೆಟ್ ರೆಡಿ ಮಾಡಿ ಭಾರಿಸುತ್ತಾರೆ. ಆಗ ನಾಯಕ ಎಚ್ಚರಗೊಳ್ಳುತ್ತಾನೆ.
ಗುರು..ಬರೀ ಆ ಡ್ರಮ್ ಭಾರಿಸೋವಷ್ಟೇ ಏಟು ಕೇಡಿಗಳಿಗೆ ಭಾರಿಸಿದ್ರೆ ಅವನು ಆರಾಮವಾಗಿ ಮಲಗಿರ್ತಿದ್ದ.. ಏಳೋದೇ  ಬೇಕಿರಲಿಲ್ಲವಲ್ಲಪ್ಪ..
***

ನಾಯಕ: ನೀನು ಹೀಗೆ ಮಾಡ್ತೀಯ ಅಂತ ನನಗೆ ಗೊತ್ತಿರಲಿಲ್ಲ...ಎಂತ ಕೆಲಸ ಮಾಡ್ಬಿಟ್ಟೆ..
ಕೌಂಟರ್ ವೀರ: ನಮಗೂ ನೀನು ಇಷ್ಟು ಬೋರ್ ಮಾಡ್ತೀಯ ಅಂತ ಗೊತ್ತಿರಲಿಲ್ಲ. ಎಂತ ಕೆಲಸ ಮಾಡ್ಬಿಟ್ಟೆ..
***
ನಾಯಕಿ: ನೀನು ನನ್ನ ಸರ್ವಸ್ವ ಕಣೋ...ನಿನಗೆ ಏನು ಬೇಕೋ ಕೇಳು ..
ಕೌಂಟರ್ ವೀರ: ಆಮೇಲೆ ಅವನಿಗೆ ಏನು ಬೇಕೋ ಕೊಡುವಿಯಂತೆ ತಾಯಿ..ನಮಗೆ ನಮ್ಮ ಟಿಕೆಟ್ ದುಡ್ಡು ಕೊಟ್ಬಿಡವ್ವಾ..
****
ನಾಯಕ: ನನಗೆ ಎಷ್ಟು ಕೋಪ ಬರ್ತಿದೆ ಅಂದ್ರೆ... ಆದ್ರೆ ಏನ್ಮಾಡ್ಲಿ..
ಕೌಂಟರ್ ವೀರ: ಏನ್ ಮಾಡ್ತೀಯ ಗುರು ..ನಮಗೂ ಬರ್ತಿದೆ... ಪರದೆ ಹರಿದು ಹಾಕಬೇಕಷ್ಟೇ..


ಹೀಗೆ ಎಷ್ಟೋ ಕೌಂಟರ್ ವೀರರ ಕೌಂಟರ್ ಗಳು ಸಿನಿಮಾದ ಹೊರಗೆ ಮಜಾ ಕೊಡುತ್ತವೆ. ನಿಮಗೂ ಇಂತಹ ಕೌಂಟರ್ ವೀರರ ಭೇಟಿಯಾಗಿದ್ದರೆ, ಅವರ ಮಾತುಗಳನ್ನು ಹರಿಬಿಟ್ಟರೆ ನಾವು ಖುಷಿ ಪಡಬಹುದು.

Thursday, May 22, 2014

ಹೊಸ ಅನುಭವ:

ಮೊನ್ನೆ ಮೊನ್ನೆ ಕನ್ನಡಚಿತ್ರರಂಗದ ಎಂಬತ್ತು ವರ್ಷದ ಸಮಾರಂಭಕ್ಕೆ ನಾನು ಹೋಗಿದ್ದೆ. ಸುಮ್ಮೆನೆ ಅಲ್ಲಿನ ಕಾರ್ಯಾಗಾರ ಭಾಷಣ ಕೇಳುವುದರ ಜೊತೆಗೆ ನನ್ನದೇ ಪುಸ್ತಕವನ್ನು ಅಲ್ಲೊಂದಷ್ಟು ಇಟ್ಟುಕೊಂಡರೆ ಹೇಗೆ ಎಂಬ ಐಡಿಯಾ ಬಂದಿತ್ತು. ಪುಸ್ತಕದ ಪ್ರಚಾರ ಹಾಗೆಯೇ ಮಾರಾಟವಾದರೆ ಸ್ವಲ್ಪ ಹಣ ಜೇಬು ಸೇರುತ್ತದೆ ಎಂಬ ಆಸೆಯಿಂದ ಪುಸ್ತಕ ಇಟ್ಟುಕೊಳ್ಳುವ ಎಂದು ನಿರ್ಧರಿಸಿದೆ.
ನಾನು ಎಲ್ಲಾದರೂ ಹೋದಾಗ ನನ್ನನ್ನು ಸೆಳೆಯುವುದು ಪುಸ್ತಕದ ಅಂಗಡಿ ಮತ್ತು ಸಿನಿಮಾ ಡಿವಿಡಿ ಅಂಗಡಿಗಳು ಮಾತ್ರ. ಉಳಿದವೆಲ್ಲಾ ನನ್ನ ಪಾಲಿಗೆ ನಗಣ್ಯ ಅನಿಸುತ್ತವೆ. ಆದರೆ ಡಿವಿಡಿ ಅಂಗಡಿಗೆ ಹೋಗಿ ಸುಮ್ಮನೆ ಡಿವಿಡಿಗಳನ್ನೂ ನೋಡುವಂತೆ ನೋಡಿ, ಅದರ ಹಿಂಭಾಗದ ಸಾರಾಂಶವನ್ನು ಗಮನಿಸಿ, ಆಸಕ್ತಿಕರ ಎನಿಸಿದರೆ ಬೆಲೆ ನೋಡಿ, ಕೊಳ್ಳುವುದೋ ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ. ಡಿವಿಡಿ ಗಳನ್ನ ಮೊದಲು ನೂರರ ಸಂಖ್ಯೆಯಲ್ಲಿ ಒಮ್ಮೆಲೇ ಕೊಳ್ಳುತ್ತಿದ್ದೆ. ಈಗ ಅಂತರ್ಜಾಲದಿಂದಾಗಿ ಹಣ ಉಳಿಸುವ ದುರಾಸೆಯಲ್ಲಿದ್ದೇನೆ. ಆದರೆ ಪುಸ್ತಕದ ವಿಷಯದಲ್ಲಿ ಹಾಗಿಲ್ಲ. ಪ್ರತಿವಾರ ಒಂದಲ್ಲಾ ಒಂದು ಪುಸ್ತಕ ಕೊಂಡುಕೊಳ್ಳುತ್ತೇನೆ.
ಆದರೆ ಕೆಲವನ್ನು ಅಲ್ಲೇ ಮುನ್ನುಡಿ ಓದುವ ಪ್ರಯತ್ನ ಮಾಡಿ ಆಮೇಲೆ ಕೊಳ್ಳುವ ನಿರ್ಣಯಕ್ಕೆ ಬರುತ್ತೇನೆ. ಆದರೆ ಒಂದಷ್ಟು ಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಹೋಗಿ ಬರುವವರು, ನೋಡುವವರು ಕೊಂಡು ಕೊಳ್ಳಬಹುದಾ ಇಲ್ಲವಾ ಎಂಬುದನ್ನು ಊಹೆ ಮಾಡುತ್ತಾ  ಅವರು ಪುಸ್ತಕವನ್ನು, ಅದರ ಪುಟಗಳನ್ನೂ ತಿರುವಿ ಹಾಕುವಾಗ, ಅವರ ಮುಖಭಾವವನ್ನು ಓದಲು ಪ್ರಯತ್ನಿಸುವುದು ಒಂದು ಅದ್ಭುತ ಅನುಭವ ಎನ್ನಬಹುದು.
ನಾನು ಪುಸ್ತಕವನ್ನು ನನ್ನ ಮುಂದೆ ಮೇಜಿನ ಮೇಲೆ ಆಲಂಕಾರಿಕವಾಗಿ ಜೋಡಿಸಿ, ಅದರ ಹಿಂದುಗಡೆ ಒಂದು ಖುರ್ಚಿಯಲ್ಲಿ ಕುಳಿತು ಪುಸ್ತಕವನ್ನು ಓದುತ್ತಿದ್ದೆ. ಕೆಲವೊಮ್ಮೆ ಓದುತ್ತಿರುವವನಂತೆ ನಟಿಸುತ್ತಿದ್ದೆ.
ಸುಮಾರು ಜನ ಬರುತ್ತಿದ್ದರು. ನೋಡುತ್ತಿದ್ದರು. ಒಬ್ಬರು ವಯಸ್ಸಾದ ವ್ಯಕ್ತಿ ಬಂದವರು ಇದರಲ್ಲಿ ವಿಷ್ಣುವರ್ಧನ್ ಅಭಿನಯದ ಚಿತ್ರವಿದೆಯೇ ಎಂದು ಕೇಳಿ ಇದೆ ಎಂಬುದನ್ನು ಖಾತರಿ ಮಾಡಿಕೊಂಡು ತೆಗೆದುಕೊಂಡರು.
ಇನ್ನೊಬ್ಬರು ನೀವು 1934 ರಿಂದ 2009 ರವರೆಗಿನ ಕನ್ನಡ ಚಿತ್ರಗಳನ್ನಷ್ಟೇ ಆಯ್ಕೆ ಮಾಡಿದ್ದೀರಿ. ಯಾಕೆ ಇಡೀ ಭಾರತದ ಚಿತ್ರರಂಗದಲ್ಲಿ ಎಲ್ಲಾ ಭಾಷೆಯನ್ನೂ ಒಗ್ಗೂಡಿಸಿ ನೋಡಲೇ ಬೇಕಾದ ನೂರೊಂದು ಭಾರತೀಯ ಚಿತ್ರಗಳು ಎಂಬ ಪುಸ್ತಕ ಬರೆಯಬಾರದು ಎಂಬ ಸಲಹೆ ಪ್ರಶ್ನೆ ಕೇಳಿದ್ದರು. ಅಯ್ಯೋ ಸಾರ್, ಇಡೀ ಭಾರತದ ಚಿತ್ರಗಳನ್ನು ಬರೀ ನೂರು ನೂರು ನೋಡಲೂ ನನಗೆ ಶತಮಾನವೇ ಬೇಕಲ್ಲ ಎಂದಿದ್ದೆ ನಗುತ್ತಾ.
ಒಬ್ಬ ವ್ಯಕ್ತಿ ನೀಟಾಗಿ ಇನ್ಶರ್ಟ್ ಮಾಡಿದ್ದು ಬಂದವನೇ ಪುಸ್ತಕವನ್ನು ನೋಡಿ ಅದನ್ನು ಬಿಡಿಸಿ ನೋಡಲಾರಂಭಿಸಿದ್ದ. ನೋಡಿದವನೇ ನನ್ನ ಮುಖ ನೋಡಿ, ಏನ್ ಪುಸ್ತಕ ಬರೀತಾರೋ ದರಿದ್ರ ಎಂದ. ನಾನು ಯಾಕೆ ಸಾರ್..ಚೆನ್ನಾಗಿಲ್ಲವಾ? ಎಂದು ಕೇಳಿದ್ದಕ್ಕೆ, ನಿಮಗೆ ಈ ಲೇಖಕ ಗೊತ್ತಾ ಎಂದ. ಆತ ಪುಸ್ತಕದ ಒಳಪುಟವನ್ನು ನೋಡಿದ್ದರೂ ಅದರಲ್ಲಿನ ನನ್ನ ಫೋಟೋ ಮತ್ತು ಸಾಕ್ಷಾತ್ ನನಗೂnanagoo ಅಜಗಜಾಂತರ ವ್ಯತ್ಯಾಸವಿತ್ತು. ಹಾಗಾಗಿ ಆತ ನಾನು ಪುಸ್ತಕ ಮಾರುವ ವ್ಯಕ್ತಿ ಎಂದಷ್ಟೇ ತಿಳಿದಿದ್ದ ಎನಿಸುತ್ತದೆ. ನಾನು ಉದ್ದುದ್ದ ಅಡ್ಡಡ್ಡ ತಲೆಯಲ್ಲಾಡಿಸಿದೆ. ಅಲ್ರೀ ಒಂದು ಪುಸ್ತಕ andreಅಂದ್ರೆ ಅದರಲ್ಲೊಂದು ಡಿಸಿಪ್ಲಿನ್ ಇರ್ತದೆ. ಈಗ ಪುಬ್ಲಿಶ್ ಅಂದ್ರೂ ಅದರಲ್ಲಿ ಒಂದಷ್ಟು ಸ್ವರೂಪಗಳಿರ್ತವೆ. ಇವನ್ನು ನೋಡಿ. ಇಡೀ ಪುಸ್ತಕದಲ್ಲಿ ಪರಿವಿಡಿ ಹಾಕಿಲ್ಲ ಎಂದ ಮುಖವನ್ನು ಗಿಂಜುತ್ತಾ. ಅದು ಹಾಗಲ್ಲ ಸಾರ್. ಮೊದಲಿಗೆ ಪರಿವಿಡಿ ಹಾಕಿ, ಚಿತ್ರಗಳ ಪಟ್ಟಿ ಕೊಟ್ಟು ಬಿಟ್ಟರೆ ಆತ ಮುಂದಕ್ಕೆ ಓದುವುದೇ ಇಲ್ಲ.ಪುಸ್ತಕವನ್ನು ಕೊಂಡು ಕೊಳ್ಳುವುದೂ ಇಲ್ಲ. ಸಿನಿಮಾಗಳು ಆತನಿಗೆ ಪರಿಚಿತವಾದ್ದರಿಂದ ಒಮ್ಮೆ ಕಣ್ಣಾಡಿಸಿ ನೋಡಿರದ ಚಿತ್ರವನ್ನು ಸ್ಮೃತಿಯಲ್ಲಿರಿಸಿಕೊಂಡು ಹೋಗಿಬಿಟ್ಟರೆ ಲೇಖಕನ ಪ್ರಕಾಶಕನ ಗೋಳು ಯಾರು ಕೇಳುತ್ತಾರೆ ಎಂದೆ. ಅದಕ್ಕೆ ಅವನಿಷ್ಟ ಬಂದ ಹಾಗೆ ಬರೆದರೆ ಆಗಿಬಿಡುತ್ತಾ ಎಂದವನು, ಪುಸ್ತಕವನ್ನು ಅಲ್ಲೇ ಬೀಸಾಕಿ, ಏನೇ ಮಾಡಿದರೂ ಅದರಲ್ಲಿ ಡಿಸಿಪ್ಲಿನ್ ಇರಲೇ ಬೇಕು ಎಂದು ಬೈದುಕೊಳ್ಳುತ್ತಾ ಅಲ್ಲಿಂದ ಹೋಗಿಯೇಬಿಟ್ಟ.
ಆ ಸಮಾರಂಭಕ್ಕೆ ಬಂದಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಇಂದಿನ ಭಾರತೀಯ ಸಿನಿಮಾ, ನಿರ್ದೇಶಕರು ಬದಲಾಗುತ್ತಿರುವ ಪರಿ ಮತ್ತು ಪ್ರೇಕ್ಷಕರ ನಾಡಿಮಿಡಿತ ಮುಂತಾದವುಗಳನ್ನು ಸಾಧ್ಯಂತವಾಗಿ ವಿವರಿಸಿದ್ದರು. ಜೊತೆಗೆ ಕಿರು ಸಾಕ್ಷ್ಯಚಿತ್ರವನ್ನೂ ಸಿದ್ಧ ಪಡಿಸಿಕೊಂಡು ಬಂದಿದ್ದರು. ಅದರ ಪ್ರದರ್ಶನದ ಜೊತೆಗೆ ಮಾತನಾಡುತ್ತಾ ತುಂಬಾ ಪ್ರೌಢವಾಗಿ ಮತ್ತು ವಸ್ತುನಿಷ್ಠವಾಗಿ ಸಿನಿಮಾದ ಬಗ್ಗೆ ಮಾತನಾಡಿದ್ದರು. ಆದರೆ ಆಕೆಯ ಮಾತುಗಳಿದ್ದದ್ದು ಇಂಗ್ಲಿಷ್ ಭಾಷೆಯಲ್ಲಿ.
ಆಕೆಯ ಮಾತಿನ ನಂತರ ಕಾಫೀ ವಿರಾಮಕ್ಕೆ ಹೊರಬಂದಾಗ ತುಂಬಾ ಜನ ಆಕೆಯ ಸುತ್ತುವರೆದು ಅದೂ ಇದೂ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕನ್ನಡದ ಬೆರಳೆಣಿಕೆಯ ಚಿತ್ರಗಳನ್ನಷ್ಟೇ ನೋಡಿದ್ದ ಆಕೆ ಏನೇನೋ ಹೇಳುತ್ತಿದ್ದರು. ಒಟ್ಟಿನಲ್ಲಿ ಆಕೆಯ ಸುತ್ತ ಇಡೀ ಒಂದು ಗುಂಪೇ ಇತ್ತು. ಆಕೆಯ ಗುಂಪಿನಿಂದ ಮಾರುದೂರದಲ್ಲಿ ನನ್ನ ಕಿರುಪುಸ್ತಕ ಮಳಿಗೆಯ ಹತ್ತಿರ ಯಾರೂ ಕಣ್ಣು ಹಾಯಿಸದೇ ಇದ್ದದ್ದು ನನಗೆ ಒಂಚೂರು ಇರುಸುಮುರುಸು ಉಂಟುಮಾಡಿತ್ತು. ಹೊಸ ಹೊಸ ಸಿನಿಮಾಸಕ್ತ ಹುಡುಗರು ಕಿರುಚಿತ್ರಗಳನ್ನು ಮಾಡಿದ್ದವರು ಆಕೆಗೆ ನಾನಾತರದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆಕೆ ಉತ್ಸಾಹದಿಂದ ಉತ್ತರಿಸುತ್ತಿದ್ದರು. ನಾನು ಆ ಪ್ರಹಸನವನ್ನೇ ನೋಡುತ್ತಿದ್ದೆ.
ಆಕೆ ಒಂದಷ್ಟು ಮಾತನಾಡಿದ ನಂತರ ಸುಮ್ಮನೆ ನೋಡುವಾಗ ನನ್ನತ್ತ ನೋಡಿದವರು ಸೀದಾ ಹತ್ತಿರಕ್ಕೆ ಬಂದರು. ನಾನು ಎದ್ದುನಿಂತೆ. ಆಕೆ ಇಂಗ್ಲೀಷಿನಲ್ಲಿ ಇದೇನಿದು ಎಂದರು. ನಾನು ಉತ್ತರಿಸಲು ಬಾಯಿ ತೆರೆದೇ. ಅಷ್ಟರಲ್ಲೇ ನನಗೆ ಅಲ್ಲೇ ಪರಿಚಯವಾಗಿದ್ದವರು ತಮ್ಮ ಹರಕು ಮುರುಕು ಇಂಗ್ಲಿಷ್ನಲ್ಲಿ ಉತ್ಸಾಹದಿಂದ ಉತ್ತರಿಸತೊಡಗಿದರು. ಅವರ ಸಂಭಾಷಣೆ ಮಜಾ ಇಲ್ಲಿದೆ.
ಮೇಡಂ..ದಿಸ್ is ಇಸ್ ಬುಕ್..
ನನಗೊತ್ತು ..ಯಾವ ಪುಸ್ತಕ..?[ಇಂಗ್ಲಿಷ್ ನಲ್ಲಿ]
ಬುಕ್..ಸಿನಿಮಾಸ್ ಯುವರ್ ಡೆತ್ ವಾಚ್..
ವಾಟ್..?
ಯು ವಾಚ್ ಡೆಡ್ ಸಿನಿಮಾ ಹಂಡ್ರೆಡ್ ಒನ್ ಫಿಲಂಸ್ ಕನ್ನಡ ..
ಆಕೆಗೆ ಇನ್ನಷ್ಟು ಗೊಂದಲ ಏರ್ಪಟ್ಟಿದ್ದರಿಂದ ನಾನು ಉತ್ತರಿಸಬೇಕಾಯಿತು. ಆಕೆಗೆ ಆ ಪುಸ್ತಕ ಕೇಳಿ ಖುಷಿಯಾಗಿ ನನಗೆ ಕನ್ನಡ ಬರುವುದಿಲ್ಲ. ಆದರೂ ಇದರ ಲೇಖಕನಿಗೆ ಪ್ರಶಂಸಿಸಬೇಕು. ಎಂದವರೇ ಒಂದು ಪುಸ್ತಕ ತೆರೆದು ಅಲ್ಲಿದ್ದ ಸಿನಿಮಾ ಪಟ್ಟಿಯನ್ನು ಗಮನಿಸತೊಡಗಿದರು. ಆದರೆ ಅವರಿಗೆ ಕನ್ನಡ ಲಿಪಿ ಬರುತ್ತಿರಲಿಲ್ಲ. ಅಲ್ಲಿದ್ದ ಕುಬಿ ಮತ್ತು ಇಯಾಲ ಚಿತ್ರವನ್ನು ಗಮನಿಸಿದರು.
ಇದ್ಯಾವ ಸಿನಿಮಾ?
ಕುಬಿ ಅಂಡ್ ಇಯಾಲ.
ಒಹ್. ಕನ್ನಡ
ಯು ನೋ ಕನ್ನಡ ಪೊಯೆಟ್ ಕುಗೆಂಪು. ಹಿಸ್ ಸನ್..ಫುಲ್ ಮೂನ್ ತೇಜಸ್ವಿ. ಹೀ ರೈಟ್ಸ್ ಸ್ಟೋರಿ. ಅಂಡ್ ಫಿಲಂ ಮೇಕ್ಸ್.
ಯು ವಾಚ್ ಮೇಡಂ. ಡೆಡ್ ಫಿಲಂ ಬಿಫೋರ್...ಆಕ್ಚುವಲ್ಲಿ ರಾಜಣ್ಣ ಬಿಗ್ ಆಕ್ಟರ್. ಹೀ ಡೆಡ್ ವೀರಪ್ಪನ್..
ಏನು? ವೀರಪ್ಪನ್ ಕೊಂದದ್ದು ರಾಜಕುಮಾರಾ?
ಯಾಕೋ ಮಾತುಕತೆ ಹಳಿ ತಪ್ಪಿ ಆಕೆ ಏನನ್ನೋ ಅರ್ಥ ಮಾಡಿಕೊಂಡು ಈ ಅತ್ಯುತ್ಸಾಹಿ ಏನನ್ನೋ ಹೇಳಿ ಯಡವಟ್ಟು ಆಗುತ್ತದೆ ಎಂಬುದು ಗೊತ್ತಾದದ್ದೇ ನಾನು ಮಾತಾಡಲೇಬೇಕಾಯಿತು. ಆದರೆ ಆಕೆ ಬಂದು ಮಾತಾಡಿ ಹೋದದ್ದೇ ನನ್ನ ಪುಸ್ತಕಕ್ಕೆ ಇನ್ನಿಲ್ಲದ ಮಹತ್ವ ಬಂದದ್ದು ಸತ್ಯ. ಆಕೆ ಪುಸ್ತಕ ನೋಡಿ, ಅಲ್ಲಿದ್ದ ಕೆಲವರಿಗೆ ನನ್ನ ಪುಸ್ತಕವನ್ನು ಹೆಸರಿಸಿ, ಹೊಗಳಿ ನನ್ನ ಮೊಬೈಲ್ ನಂಬರ್ ತೆಗೆದುಕೊಂಡು ಹೋದ ಮೇಲೆ ಅಷ್ಟು ಹೊತ್ತು ನನ್ನ ಪುಸ್ತಕದ ಕಡೆ ಕಣ್ಣೆತ್ತಿಯೂ ನೋಡದವರು ಒಮ್ಮೆ ನನ್ನ ಬಳಿ ಬಂದು ನನ್ನ ಪುಸ್ತಕವನ್ನು ತಿರುಗಿಸಿ ಮುರುಗಿಸಿ ನೋಡಿ ಹಾಳೆ ಬಿಡಿಸಿ ಓದಿ ನನ್ನೆಡೆ ಮೆಚ್ಚುಗೆಯ ಮಂದಹಾಸ ಬೀರಿದ್ದರು.
ಕನ್ನಡದ ಹೊಸ ಅಲೆಯ ನಿರ್ದೇಶಕ, ನಿರ್ದೇಶಕಿ ಮತ್ತು ನಟ ನಿರ್ದೇಶಕ ಮೂವರು ಆ ಸಮಾರಂಭದಲ್ಲಿ ಭಾಗವಹಿಸಿದ್ದರು. ನನ್ನಿಂದ ಮಾರುದೂರದಲ್ಲಿ ನಿಂತು ಕನ್ನಡ ಚಿತ್ರರಂಗದ ಸ್ಥಿತಿಗತಿಯ ಬಗ್ಗೆ ಕಳಕಳಿಯಿಂದ ಚರ್ಚಿಸುತ್ತಿದ್ದರು. ಆದರೆ ಅವರು ಹೋಗುವಾಗ, ಬರುವಾಗ ನಿಂತು ಮಾತಾಡುವಾಗ ಕೇವಲ ಮಾರುದೂರದಲ್ಲಿ ಬೇಡವೆಂದರೂ ಕಣ್ಣಿಗೆ ಬೀಳುವಂತಿದ್ದ ಪುಸ್ತಕದ ಕಡೆಗೆ ಸುಮ್ಮನೆ ಕೂಡ ತಿರುಗಿಯೂ ನೋಡಲಿಲ್ಲ ಎಂಬುದು ಬೇಸರದ ಸಂಗತಿ ಎನ್ನಬಹುದು. ಒಂದಷ್ಟು ಸಿನಿಮಾದ ಒಲವಿದ್ದ ಮೇಲೆ ಯಾವುದೇ ರೀತಿಯ ಸಿನಿಮಾ ಸಂಬಂಧ ಪಟ್ಟ ಪುಸ್ತಕವೋ ಡಿವಿಡಿಯೋ ಇದ್ದರೇ ಕುತೂಹಲಕ್ಕಾದರೂ ಒಮ್ಮೆ ನೋಡುವುದು ಸಹಜ. ಅದರಲ್ಲಿ ನಾವು ನೋಡುವುದೇನಿದೆ...ನಾವು ಅದನ್ನೆಲ್ಲಾ ಮೀರಿದವರು ಎಂಬ ಮನೋಭಾವ ಅವರದ್ದಾಗಿತ್ತು.

Sunday, April 20, 2014

ನಾನು ಅವನಾಗ ಹೊರಟು......

ನಿಮ್ಮ ಸಿನಿಮಾ ನಾಲೆಜ್ ಸೂಪರ್ ..ಹಾಗೆಯೇ ಸಾಹಿತ್ಯ ಕೂಡ ಚೆನ್ನಾಗಿಯೇ ಗೊತ್ತಿದೆ. ಭಾಷೆಯ ಮೇಲಿನ ಹಿಡಿತ ಅದ್ಭುತ ಇಷ್ಟಿದ್ದೂ ಯಾಕೆ ನೀವು ಈ ಮಾಸ್ತರಿಕೆ ಕೆಲಸ ಮಾಡಬೇಕು..?ಅದೇ ನಿಮ್ಮ ಗೆಳೆಯ ಅಂತೀರಿ ಅವನನ್ನ..ಕ್ಲಾಸ್ ಮೇಟ್ ಬೇರೆ. ನೋಡಿ ಈವತ್ತು ಸುಮಾರು ಸಿನಿಮಾ ಡೈರೆಕ್ಟ್ ಮಾಡೇ ಬಿಟ್ಟಾ..? ಇವತ್ತು ಪತ್ರಿಕೆಗಳಲ್ಲಿ, ಟಿವಿನಲ್ಲಿ ಅವನ ಹೆಸರು, ಸಂದರ್ಶನ ಎಲ್ಲಾ ಬರ್ತಾ ಇದೆ. ನೀವು ಯಾಕೆ ಟ್ರೈ ಮಾಡಬಾರದು..?
ನಮ್ಮ ಬಾಸ್ ಹಾಗೆ ಹೇಳಿದಾಗ ನಾನು ಯೋಚಿಸುವಂತಾದದ್ದು ನಿಜ. ಈವತ್ತು ಚಿತ್ರರಂಗದಲ್ಲಿ ನಿರ್ದೇಶಕನಾಗಿ ಕತೆಗಾರನಾಗಿ ಮಿಂಚುತ್ತಿರುವ ಅವನು ನನ್ನ ಕಾಲೇಜ್ ಮೇಟ್. ಹಾಗೂ ಹಾಸ್ಟೆಲ್ ಮೇಟ್. ಜೊತೆಯಲ್ಲಿಯೇ ಮೂರು ವರ್ಷ ಕಳೆದವರು. ಅವನೂ ಬ್ರಿಲ್ಲಿಯೆಂಟ್. ಆದರೂ ಆಗಾಗ ಕತೆ ಬರೆಯುತ್ತಿದ್ದ. ಇಬ್ಬರೂ ಜೊತೆ ಜೊತೆಯಾಗಿಯೇ ಸಿನಿಮಾ ನೋಡುತ್ತಿದ್ದೆವು. ಚರ್ಚಿಸುತ್ತಿದ್ದೆವು. ಆ ನಿರ್ದೇಶಕ ಹಾಗೆ ಈ ನಿರ್ದೇಶಕ ಹೀಗೆ ಎಂದೆಲ್ಲಾ ಆಯಾ ನಿರ್ದೇಶಕರ ಮಾನ ಮರ್ಯಾದೆ ಹರಾಜಾಗುತ್ತಿದ್ದೆವು.ಆ ಚಿತ್ರದ ಕತೆ ಚಿತ್ರಕತೆ ಬಗ್ಗೆ ಸಂಭಾಷಣೆ ನಿರ್ದೇಶನ ಅಭಿನಯ ಹೀಗೆ ಎಲ್ಲಾ ವಿಷಯಗಳನ್ನೂ ಚರ್ಚಿಸುತ್ತಿದ್ದೆವು. ಆಗಾಗ ಅವನು ನಾನೇನಾದರೂ ಮುಂದೆ ಸಿನಿಮಾ ಮಾಡಿದ್ರೆ ಹೀಗೆ ಮಾಡಲ್ಲಪ್ಪ ಎನ್ನುತ್ತಿದ್ದ. ಆಗ ನಾನೂ ಅವನ ಜೊತೆ ದನಿ ಗೂಡಿಸುತ್ತಿದ್ದೆ. ಹೌದು. ಒಳ್ಳೆ ಕನ್ನಡ ಚಿತ್ರ ಮಾಡಬೇಕು. ಎಂತೆಂಥ ಕತೆಗಳಿವೆ ಕನ್ನಡದಲ್ಲಿ. ಅದನ್ನೆಲ್ಲಾ ದೃಶ್ಯ ಮಾಧ್ಯಮಕ್ಕೆ ತರಬೇಕು.. ಎಂದೆಲ್ಲಾ ಮಧ್ಯರಾತ್ರಿಯವರೆಗೆ ಮಾತನಾಡುತ್ತಿದ್ದೆವು.
ನಮ್ಮ ಸಿನಿಮಾ ಹುಚ್ಚು ಎಷ್ಟಿತ್ತು ಎಂದರೆ ಇಡೀ ಹಾಸ್ಟೆಲ್ ಗೆಳೆಯರು, ಕಾಲೇಜು ಹುಡುಗರು ಬಿಡುಗಡೆಯಾದ ಹೊಸ ಚಿತ್ರಕ್ಕೆ ಹೋಗಬೇಕೆಂದರೆ ನಮ್ಮನ್ನೊಮ್ಮೆ ಕೇಳಿ ಅದರ ಬಗ್ಗೆ ತಿಳಿದುಕೊಂಡು ಹೋಗುತ್ತಿದ್ದರು. ಬಿಡುಗಡೆಯಾದ ಎಲ್ಲಾ ಚಿತ್ರವನ್ನೂ ಆಯಾದಿನವೇ ರಾತ್ರಿಯ ಆಟ ನೋಡಿಬಿಡುತ್ತಿದ್ದೆವು.
ಆನಂತರ ನಮ್ಮ ದಿಕ್ಕು ಬೇರೆ ಬೇರೆಯಾಯಿತು. ನಾನಂತೂ ಒಳ್ಳೆಯ ಅಂಕವಿದ್ದರಿಂದ ಸುಲಭವಾಗಿ ಕೆಲಸ ತೆಗೆದುಕೊಂಡಿದ್ದೆ. ಆನಂತರ ಮನೆಯಲ್ಲಿ ಸ್ವಲ್ಪ ಮಟ್ಟಿಗಿನ ನೆಮ್ಮದಿ ಇತ್ತು. ದಿನ ಕಳೆಯುತ್ತಿದ್ದಂತೆ ನನ್ನ ಜೀವನ ತನ್ನದೇ ಆದ ರೂಪು ಪಡೆದುಕೊಳ್ಳುತ್ತಿತ್ತು. ಈ ನಡುವೆ ಅವನು ಎನಾದಾ ? ಎಂಬುದನ್ನು ನಾನು ಮರತೆ ಬಿಟ್ಟಿದ್ದೆ. ಆಗಾಗ ಗೆಳೆಯರು ಸಿಕ್ಕರೆ ಅವನ ವಿಷಯ ಬಂದಾಗ ಮಾತನಾಡುತ್ತಿದ್ದೆವು. ಅವನಾ..ಅದೆಲ್ಲೋ ಬೆಂಗಳೂರಿಗೆ ಹೋಗಿದ್ದಾನಂತೆ ಅದ್ಯಾವುದೋ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾನಂತೆ..ಅವನಿಗೇನು ಮಾರಾಯ..ಎಲ್ಲಾ ಚೆನ್ನಾಗಿತ್ತು..ಆರಾಮವಾಗಿ ಬದುಕಬಹುದಿತ್ತು..ಅದು ಬಿಟ್ಟು ಇದೆಲ್ಲಾ ಪಡಿ ಪಾಟಲು ಬೇಕಿತ್ತಾ ಅವನಿಗೆ...ಹೀಗೆ ಅವನ ಮಾತಿಲ್ಲದೆ ನಮ್ಮ ಮಾತುಕತೆ ಮುಗಿಯುತ್ತಿರಲಿಲ್ಲ. ಆಗಾಗ ಅಲ್ಲೊಂದು ಇಲ್ಲೊಂದು ಪತ್ರಿಕೆಯಲ್ಲಿ ಅವನು ಬರೆದ ಬರಹಗಳು ಪ್ರಕಟವಾದಾಗ ನಾವೆಲ್ಲಾ ಗೆಳೆಯರು ಓದಿ ಮಾತಾಡಿಕೊಳ್ಳುತ್ತಿದ್ದೆವು. ಇಷ್ಟೆಲ್ಲಾ ಬರೆಯುವ ತಿಳಿದುಕೊಂಡಿರುವವ ಇನ್ನೂ ಸೆಟ್ಲ್ ಆಗದೆ ಒದ್ದಾಡುತ್ತಿರುವುದು ನಮಗೆ ಸ್ವಲ್ಪ ಬೇಸರ ತರಿಸುತ್ತಿತ್ತು.
ಆದರೆ ಇದೆಲ್ಲಾ ಒಂದು ಎಂಟು ವರ್ಷದ ನಂತರ ಬದಲಾಯಿತು. ಇದ್ದಕ್ಕಿದ್ದಂತೆ ಅವನು ಚಿತ್ರರಂಗದಲ್ಲಿ ಉದಯವಾದವನು ಹೆಸರು ಮಾಡಿದ. ಹಣ ಮಾಡಿದ. ಎಲ್ಲಾ ಕಡೆ ಅವನದೇ ಮಾತು ಕತೆ.ಇಂತಹ ಸಮಯದಲ್ಲೇ ನಮ್ಮ ಬಾಸ್ ಹಾಗೆ ಹೇಳಿದ್ದು.
ಯಾಕೋ ಆ ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ. ಅವನದೇ ಯೋಚನೆ ನಾವೆಲ್ಲಾ ಕೆಲಸ ತೆಗೆದುಕೊಂಡು ಮದುವೆಯಾಗಿ ಸೆಟ್ಲ್ ಆದೆವು ಎಂಬ ಹಮ್ಮಿನಲ್ಲಿ ಓಡಾಡುತ್ತಿದ್ದಾಗ ಆತ ಏನೇನೂ ಇಲ್ಲದೆ ಅಲೆಯುತ್ತಿದ್ದ.ಆದರೆ ಈಗ ಅವನದೇ ಮಾತು. ಮೆಚ್ಚುಗೆಯಲ್ಲಾ ಅವನದೇ. ಹಾಗೆ ನೋಡಿದರೆ ನಮಗಿಂತ ಚೆನ್ನಾಗಿಯೇ ಹಣವಂತನಾಗಿಯೇ ಇದ್ದಾನೆ ಅವನು. ನಾನು ತಪ್ಪು ಮಾಡಿದೆನಾ..? ನಾನೂ ಯಾಕೆ ಒಂದು ಕೈ ನೋಡಬಾರದು. ಅವನೇ ಮಾಡಿದ್ದಾನೆಂದರೆ ನಾನು ಮಾಡಲು ಕಷ್ಟವೇನಲ್ಲ.
ಮಾರನೆಯ ದಿನವೇ ಆತನ ಸಿನಿಮಾಗಳ ಡಿವಿಡಿಗಳನ್ನೂ ಕೊಂಡು ತಂದವನು ಒಂದರ ಹಿಂದೆ ಒಂದರಂತೆ ನೋಡಿದ್ದೆ. ಆದ್ರೆ ಯಾಕೋ ಯಾವುದೂ ಮನಸ್ಸಿಗೆ ತಾಕಿರಲಿಲ್ಲ.ನಾವು ಕಾಲೇಜು ದಿನಗಳಲ್ಲಿ ಹೇಗೆ ಸಿನಿಮಾ ಮಾಡಬಾರದು ಎಂದೆಲ್ಲಾ ಬೈದಾಡಿದ್ದೆವೋ ಆತ ಅದನ್ನೆಲ್ಲಾ ಮರೆತವನಂತೆ ಹಾಗೆಯೇ ಅಥವಾ ಸ್ವಲ್ಪ ಅದಕ್ಕಿಂತ ವ್ಯತಿರಿಕ್ತವಾಗಿ ಮಾಡಿದ್ದ. ಅಷ್ಟೇ. ಅದು ಬಿಟ್ಟರೆ ಯಾವುದೂ ಅಂತಹ ಮಾಸ್ಟರ್ ಪೀಸ್ ಎನಿಸುವ ಹಾಗಿರಲಿಲ್ಲ. ಅದರಲ್ಲೂ ಆತನ ಮೂರನೆಯ ಸಿನಿಮಾವನ್ನು ಪೂರ್ತಿ ನೋಡಲು ನನಗೆ ಅದೆಷ್ಟು ಬೋರಾಗುತ್ತಿತ್ತು ಎಂದರೆ ಯಾವಾಗ ಮುಗಿಯುತ್ತದೋ ಎನಿಸುತ್ತಿತ್ತು.ಆದರೆ ಆ ಚಿತ್ರ ಅದ್ಭುತ ಯಶಸ್ಸು ಗಳಿಸಿತ್ತಲ್ಲದೆ ಒಂದೆರೆಡು ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದುಕೊಂಡಿತ್ತು.
ಹೌದು. ನಾನು ಇವನಿಗಿಂತ ಚೆನ್ನಾಗಿ ಸಿನಿಮಾ ಮಾಡಬಲ್ಲೆ. ಅದ್ಭುತವಾದ ಕತೆ, ಕಲ್ಪನೆ ನನ್ನಲ್ಲಿದೆ. ಇಷ್ಟೆಲ್ಲಾ ಸಾಧಿಸಲು ಅವನು ತೆಗೆದುಕೊಂಡಷ್ಟು ಸಮಯ ನನಗೆ ಬೇಕಾಗೂ ಇಲ್ಲ. ಯಾಕೆಂದರೆ ನಾನು ಅವನಿಗಿಂತ ಅಡ್ವಾನ್ಸ್ ಇದ್ದೇನೆ ಎನಿಸಿತು.
nanu ನಾನು ನಿರ್ಧರಿಸಿದೆ. ನಾನೂ ಒಂದು ಕೈ ನೋಡಿಯೇ ಬಿಡುತ್ತೇನೆ. ರಂಗಿನಲೋಕದಲ್ಲಿ ನನ್ನದು ಒಂದು ಹೋಳಿ ಆಟ ಆಡಿಯೇ ತೀರುತ್ತೇನೆ.
ಮಾರನೆಯ ದಿನ ಬೆಳಿಗ್ಗೆ ಬಾಸ್ ಗೆ ವಿಷಯ ಹೇಳಿದಾಗ ಮೊದಲಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು ಆನಂತರ ಒಮ್ಮೆ ಸರಿಯಾಗಿ ಯೋಚಿಸಿ ನಿರ್ಧಾರ ಮಾಡು ಎಂಬ ಅಪಸ್ವರದ ಮಾತನಾಡಿದ್ದು ನನಗೆ ಇಷ್ಟವಾಗಲಿಲ್ಲ. ಆದರೆ ನನ್ನ ನಿರ್ಧಾರ ಗಟ್ಟಿಯಾಗಿತ್ತು.
ನಾನು ಅವನನ್ನು ಮೀರಿಸಬೇಕಿತ್ತು.
ಮಾರನೆಯ ದಿನವೇ ಕೆಲಸ ಬಿಟ್ಟೆನಾದರೂ ಯಾವಾಗ ಬೇಕಾದರೂ ಬಂದು ಮತ್ತೆ ಕೆಲಸಕ್ಕೆ ಜಾಯಿನ್ ಆಗಬಹುದು ಎಂದು ನನ್ನ ಬಾಸ್ ಹೇಳಿದಾಗ ಖುಷಿಯಾಯಿತು.ಆದರೆ ಹೇಗೋ ಸಾಧನೆ ಮಾಡಲು ಹೊರತು ನಿಂತಿರುವೆ. ನಿನಗದರಲ್ಲಿ ಪ್ರಾಕ್ಟಿಕಲ್ ನಾಲೆಜ್ ಕಡಿಮೆ. ಒಮ್ಮೆ ಅವನ ಅಭಿಪ್ರಾಯ ಸಲಹೆ ಯಾಕೆ ತೆಗೆದುಕೊಳ್ಳಬಾರದು ಎಂದರು.ನನಗೆ ಉರಿದು ಹೋಯಿತು. ಅದರ ಅವಶ್ಯಕತೆ ನನಗಿಲ್ಲ ಎಂದವನೇ ದುರ್ದಾನ ತೆಗೆದುಕೊಂಡವನಂತೆ ಅಲ್ಲಿಂದ ಹೊರಟುಬಂದಿದ್ದೆ.
ಈಗ ನನ್ನ ಗುರಿ ಸ್ಪಷ್ಟವಾಗಿತ್ತು..ಮನಸ್ಸಿನಲ್ಲಿ ಅವನು ಬಂದು ಹೋದ. ಅವನನ್ನು ಪ್ರತಿಸ್ಪರ್ಧಿಯಾಗಿ ತೆಗೆದುಕೊಂಡಿರುವವನು ನಾನು..ಅವನ ಹತ್ತಿರ ಸಲಹೆ ಕೇಳುವ ಸಲಾಮು ಹೊಡೆಯುವುದು ನನಗೆ ಇಷ್ಟವಾಗಲಿಲ್ಲ. ಮೊದಲಿಗೆ ಏನೇನು ಮಾಡಬೇಕು ಎಂಬುದನ್ನು ಪಟ್ಟಿ ಮಾಡಿದೆ. ಒಂದೊಳ್ಳೆ ಕತೆ ಮಾಡುವುದು..ಆನಂತರ ಮುಂದಿನದರ ಬಗ್ಗೆ ಯೋಚಿಸೋಣ. ಕತೆಯಿಲ್ಲದೆ ರೀಮೇಕ್ ರೀಮಿಕ್ಸ್ ಗಳಲ್ಲಿ ಕಳೆದುಹೋಗಿ ಒದ್ದಾಡುತ್ತಿರುವ ಚಿತ್ರರಂಗಕ್ಕೆ ನಾನು ಓಯಸಿಸ್ ಆದರೂ ಆಗಬಹುದು. ನನ್ನ ಮನೆಯ ಮುಂದಿನ ಚಿತ್ರಕರ್ಮಿಗಳು ಸಾಲು ಗಟ್ಟಿ ನಿಲ್ಲಬಹುದು ಎನಿಸಿತು.
nanu ನಾನು ನಿರ್ಧರಿಸಿದೆ.
.....
...
ಚೇತನ್ ಭಗತ್ ಜೊತೆಯಲ್ಲೇ ಓದಿದ ಎಸ್.ವಿ.ದಿವಾಕರ್ ಬರೆದ ಬೀಟನ್ ಬಿ ಭಗತ್ ಕಾದಂಬರಿಯ ಭಾವಾನುವಾದವಿದು. ಜೊತೆಯಲ್ಲೇ ಓದಿದ ಗೆಳೆಯನೊಬ್ಬ ಏನೋ ಮಾಡಿದ ಎಂದು ಹಠಕ್ಕೆ ಬೀಳುವ ದಿವಾಕರ್ ಲಕ್ಷಗಟ್ಟಲೆ ಸಂಬಳವಿದ್ದ ಕೆಲಸವನ್ನು ಲೆಕ್ಕಿಸದೆ ಅವನ ತರಹವೇ ಆಗಬೇಕೆಂದು ಪಣತೊಡುತ್ತಾರೆ. ತಾನು ಬರೆಯುತ್ತೇನೆ. ಲಕ್ಷ ಲಕ್ಷ ಸಂಪಾದಿಸುತ್ತೇನೆ..ಹೆಸರು ಗಳಿಸುತ್ತೇನೆ ಎಂದೆಲ್ಲಾ ಕನಸು ಕಟ್ಟಿಕೊಂಡು ಪೆನ್ನು ಹಿಡಿಯುತ್ತಾರೆ.
ನಾನು ನಾನು ಅಷ್ಟೇ. ನಾನು ಬೇರೆ ಯಾರ ತರಹವೂ ಆಗಬೇಕಿಲ್ಲ ಆಗುವುದು ಸಾಧ್ಯವೂ ಇಲ್ಲ. ಹಾಗೆಯೇ ಸಾಧನೆಯ ಹಾದಿ ಅಷ್ಟು ಸುಲಭದ ಸರಾಗದ ಹಾದಿಯಲ್ಲ ಎಂಬುದು ಗೊತಾಗುವವರೆಗೆ ಅವರು ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಸಮಯವಿದ್ದರೆ ಒಮ್ಮೆ ಓದಬಹುದು. ಎಲ್ಲೂ ಬೋರ್ ಹೊಡೆಸದ ಕಾದಂಬರಿ ಇದು.
[ಅಂದ ಹಾಗೆ ಅದನ್ನು ನಾನು ನನಗನಿಸಿದ ರೀತಿಯಲ್ಲಿ ನನ್ನ ಅನುಭವದ ಜೊತೆಗೆ ಪರಿಚಯಿಸಿದ್ದೇನೆ. ಅಷ್ಟೇ]

Friday, April 18, 2014

ಅವರ್ಯಾಕೆ ಓಡುತ್ತಿರುತ್ತಾರೆ ..? ಒಂದು ತಲೆ ಹರಟೆ.

ಚಿತ್ರದಲ್ಲಿ ಪ್ರೊಮೊ ಎಷ್ಟು ಮುಖ್ಯವೋ ಅದರ ಪೋಸ್ಟರ್ ಕೂಡ ಅಷ್ಟೇ ಮುಖ್ಯ ಎನ್ನಬಹುದು. ಯಾಕೆಂದರೆ ಪ್ರೊಮೊ ಹಾಡುಗಳಿಗಿಂತ ಮೊದಲಿಗೆ ಚಿತ್ರದ ಬಗ್ಗೆ ಸಣ್ಣ ಸುಳಿವು ಕೊಡುವುದು ಕುತೂಹಲ ಕೆರಳಿಸುವುದು ಈ ಪೋಸ್ಟರ್ ಗಳು ಎನ್ನಬಹುದು.ಅದರಲ್ಲೂ ಒಂದು ಚಿತ್ರದ ಪೋಸ್ಟರ್ ಆ ಚಿತ್ರದ ಬಗ್ಗೆ ಕುತೂಹಲ ಕೆರಳಿಸಬಹುದು, ಕತೆಯ ವಸ್ತುವನ್ನು ಬಿಚ್ಚಿಡಬಹುದು. ಹಾಗಾಗಿಯೇ ಒಬ್ಬ ನಿರ್ದೇಶಕ ಸಿನಿಮಾ ಮಾಡುವ ಆಷ್ಟೇ ಅಸ್ಥೆಯಿಂದ ಪೋಸ್ಟರ್ ಕೂಡ ವಿನ್ಯಾಸ ಮಾಡಿಸುತ್ತಾನೆ.
ಇದೊಂದು ಘಟನೆಯನ್ನು ನನಗೆ ಯಾರೋ ಒಬ್ಬರು ಹೇಳಿದ್ದರು. ಒಮ್ಮೆ ಪೋಸ್ಟರ್ ವಿನ್ಯಾಸಕಾರನ ಹತ್ತಿರ ಹೋದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ತಮ್ಮ ಚಿತ್ರ ರಂಗನಾಯಕಿ ಗೆ ಸೂಕ್ತವಾದ ಪೋಸ್ಟರ್ ವಿನ್ಯಾಸ ಮಾಡಿಕೊಡುವಂತೆ ಕೇಳಿಕೊಂಡರು. ತಮ್ಮ ಚಿತ್ರದ ಕತೆಯನ್ನು ಅದರ ಆಶಯವನ್ನು ಸಂಪೂರ್ಣವಾಗಿ ವಿವರಿಸಿದ ಖ್ಯಾತರು ತಮಗೆ ಒಬ್ಬ ಕಲಾವಿದೆಯ ಜೀವನದಲ್ಲಿ ಮದುವೆ ಎಂಬುವುದು ಹೇಗೆ ಆಕೆಯ ಕಲೆಯನ್ನು ಮರೆಯುವಂತೆ ಮಾಡಿ ಬಿಟ್ಟಿತು ಅಥವಾ ಮದುವೆಯೇ ಆಕೆಯ ಕಲೆಗೆ ಹೇಗೆ ಅಡ್ಡಗಾಲು ಹಾಕಿತು ಎಂಬುದನ್ನು ಸೂಚ್ಯವಾಗಿ ವಿವರಿಸುವ ಪೋಸ್ಟರ್ ರಚಿಸುವಂತೆ ಹೇಳಿದಾಗ ಕಲಾವಿದರು ಗೊಂದಲಕ್ಕೆ ಬಿದ್ದರಂತೆ. ಅಷ್ಟೂ ಕತೆಯನ್ನು ಹೇಗೆ ಒಂದೇ ಚಿತ್ರದಲ್ಲಿ ತೋರಿಸುವುದು ಎನ್ನುವುದನ್ನು ದಿನಗಟ್ಟಲೆ ಯೋಚಿಸಿದರೂ ಹೊಳೆಯದಿದ್ದಾಗ ಅವರು ಪುಟ್ಟಣ್ಣ ಅವರಲ್ಲೇ ಅದಕ್ಕೊಂದು ಐಡಿಯಾ ಕೊಡುವಂತೆ ಕೇಳಿಕೊಂಡರು.
ಸ್ವಲ್ಪ ಹೊತ್ತು ಯೋಚಿಸಿದ ಪುಟ್ಟಣ್ಣ ಹೇಳಿದರಂತೆ.
" ಒಂದು ಕೆಲಸ ಮಾಡಿ ಒಂದು ಬಾಗಿಲು ಕಟಾ೦ಜನವನ್ನು ಮಧ್ಯದಲ್ಲಿ ಬರೆಯಿರಿ. ಅದರ ಮೇಲೆ ಅಂದರೆ ಹೊಸ್ತಿಲ ಮೇಲೆ ಒಂದು ಮದುವೆಯಾಗಿ ಬಂದ ಹೆಣ್ಣು ಮಗಳು ಒದೆಯುವ ಅಕ್ಕಿ ತುಂಬಿದ ಸೇರು ಇರಲಿ. ಒಂದು ತುದಿಯಿಂದ ಪ್ರಾರಂಭವಾಗುವ ಹೆಜ್ಜೆ ಗುರುತುಗಳು ಆ ಹೊಸ್ತಿಲನ್ನು ದಾಟಿ ಇನ್ನೊಂದು ತುದಿಗೆ ಸಾಗಲಿ. ಹೊಸ್ತಿಲ ಆಚೆಯಿರುವ ಹೆಜ್ಜೆಗಳು ವರ್ಣರಂಜಿತವಾಗಿರಲಿ. ಹೊಸ್ತಿಲ ಹತ್ತಿರಕ್ಕೆ ಬರುಬರುತ್ತಾ ಅವುಗಳ ಬಣ್ಣ ಕಡಿಮೆಯಾಗಲಿ. ಹೊಸ್ತಿಲು ದಾಟಿದ ಮೇಲೆ ಅದರ ಬಣ್ಣ ಸಂಪೂರ್ಣ ಮಾಸಿಹೋಗಲಿ .."
ಅಂದರೆ ಹೊಸ್ತಿಲಾಚೆಗಿನ ಹೆಜ್ಜೆಗಳು ಆಕೆಯ ಕಲಾಜೀವನದ ಹೆಜ್ಜೆಗಳು. ಹಾಗಾಗಿಯೇ ಬಣ್ಣದ ಲೋಕದ ಹೆಜ್ಜೆಗಳು, ಬಣ್ಣದ ಹೆಜ್ಜೆಗಳು. ಹೊಸ್ತಿಲು ಒಳ ಹೋಗುವುದು ಮದುವೆಯ ಸಂಕೇತ. ಆನಂತರ ಮಾಸಿದ ಬಣ್ಣದ ಹೆಜ್ಜೆ ಗುರುತುಗಳು...
ನಿಜಕ್ಕೂ ಇದಕ್ಕಿಂತ ಅದ್ಭುತವಾದ ಆ ಸಿನಿಮಾಕ್ಕೆ ಒಪ್ಪುವ ಪೋಸ್ಟರ್ ವಿನ್ಯಾಸ ಇಲ್ಲ ಎನ್ನಬಹುದು.
ಉಪೇಂದ್ರರ ಎ ಚಿತ್ರದ ಪೋಸ್ಟರ್ ಕೂಡ ಅದ್ಭುತಗಳ ಸಾಲಿಗೆ ಸೇರುತ್ತದೆ ಎನ್ನಬಹುದು.ಚಿತ್ರದಲ್ಲಿರುವ ನಾಯಕನ ತುಮುಲ, ನಿರೂಪಣೆಯಲ್ಲಿನ ಗೊಂದಲವನ್ನು ಪೋಸ್ಟರ್ ನಲ್ಲೆ ಸೂಕ್ಷ್ಮವಾಗಿ ವಿವರಿಸಿದ್ದು ಆ ಚಿತ್ರದ ಪೋಸ್ಟರ್ ವಿನ್ಯಾಸದ ವಿಶೇಷ ಎನ್ನಬಹುದು.
ಹಾಗೆಯೇ ಹಾಲಿವುಡ್ನ ಹ್ಯಾರಿಸನ್ ಫೋರ್ಡ್ ಅಭಿನಯದ ಫ್ಯೂಜಿಟಿವ್ ಚಿತ್ರದ ಪೋಸ್ಟರ್ ಗಮನಿಸಿ. ಚಿತ್ರದ ತುಂಬಾ ತಪ್ಪಿಸಿಕೊಂಡು ಓಡುವ ನಾಯಕ ಪೋಸ್ಟರ್ ನಲ್ಲೂ ಓಡುತ್ತಿರುತ್ತಾನೆ. ಚಿತ್ರದ ಕತೆಗೆ ತಕ್ಕಂತೆ ಆ ಪೋಸ್ಟರ್ ಇದೆ ಎನ್ನಬಹುದು. ಆದರೆ ಇತ್ತೀಚಿಗೆ ಬಂದ ಒಂದಷ್ಟು ಚಿತ್ರಗಳ ಪೋಸ್ಟರ್ ಗಳನ್ನೂ ಗಮನಿಸಿ. ನಾಯಕರು ಓಡುತ್ತಲೇ ಇರುತ್ತಾರೆ. ಮಹೇಶ್ ಬಾಬು ಅಭಿನಯದ ಪೋಕಿರಿ ಚಿತ್ರದಿಂದ ಪ್ರಾರಂಭವಾದ ಪೋಸ್ಟರ್ ಓಟ ಈಗಲೂ ನಡೆಯುತ್ತಲೇ ಇದೆ. ಇತ್ತೀಚಿಗೆ ಬಂದ ಕನ್ನಡವೂ ಸೇರಿದಂತೆ ಸುಮಾರಷ್ಟು  ಚಿತ್ರಗಳ ನಾಯಕರು ಓಡುತ್ತಲೇ ಇರುವುದನ್ನು ನಾವು ಕಾಣಬಹುದು. ಅದೆಲ್ಲಿಗೆ ಓಡುತ್ತಿದ್ದಾರೆ, ಅದ್ಯಾಕೆ ಓಡುತ್ತಿದ್ದಾರೆ. ಇವರೇ ಯಾರನ್ನಾದರೂ ಅಟ್ಟಿಸಿಕೊಂಡು ಹೋಗುತ್ತಿದ್ದಾರಾ..? ಅಥವಾ ಇವರನ್ನು ಯಾರಾದರೂ ಅಟ್ಟಿಸಿಕೊಂಡು ಹೋಗುತ್ತಿದ್ದಾರಾ..? ಅಥವಾ ತಮಾಷೆಗೆ ಹೇಳುವುದಾದರೆ ಯಾವುದಾದರೂ ಸ್ಪರ್ದೆಯಲ್ಲಿ ಭಾಗವಹಿಸುತ್ತಿದ್ದಾರಾ? ಎಂಬ ಪ್ರಶ್ನೆ ಎದುರಾಗದೆ ಇರದು.
ಯಾಕೆಂದರೆ ಆ ಪೋಸ್ಟರ್ ಚಿತ್ರಗಳನ್ನೆಲ್ಲಾ ನಾನು ನೋಡಿದ್ದೇನೆ. ಅವುಗಳಲ್ಲಿ ಅಂತಹ ಓಟ ಇಲ್ಲ. ನಾಯಕ ಯಾವುದೋ ಹೊಡೆದಾಟದ ಸಂದರ್ಭದಲ್ಲಿ ಓಡಿರಬಹುದೇನೋ? ಅದು ಬಿಟ್ಟರೆ ಚಿತ್ರದ ಕತೆಗೆ ಓಟಕ್ಕೆ ಸಂಬಂಧವಿಲ್ಲ. ಪೋಸ್ಟರ್ ನಲ್ಲಿ ಅಷ್ಟು ಫೋರ್ಸ್ ನಿಂದ ಓಡುವ ನಾಯಕನ ಸಿನಿಮಾ ಎಷ್ಟೋ ಸಾರಿ ಆಮೆವೇಗದಲ್ಲಿದ್ದು ಜನರೇ ಚಿತ್ರಮಂದಿರದಿಂದ ಹೊರಕ್ಕೆ ಓಟಕಿತ್ತ ಉದಾಹರಣೆ ಇಲ್ಲದಿಲ್ಲ.
ಮೊನ್ನೆ ಬಿಡುಗಡೆಯಾದ ಚಿತ್ರಗಳ ಪೋಸ್ಟರ್ ಗಮನಿಸಿ. ನಾಯಕಿ ಕೈಹಿಡಿದು ಕೊಂಡು ಓಡುತ್ತಿರುವ, ಗುಂಪು ಕಟ್ಟಿಕೊಂಡು ಓಡುತ್ತಿರುವ, ಕೈ ಯಲ್ಲಿ ಆಯುಧ ಹಿಡಿದು ಓಡುತ್ತಿರುವ, ಖುಷಿಯಿಂದ ಓಡುತ್ತಿರುವ, ಕೋಪದಿಂದ ಮುನ್ನುಗ್ಗಿ ಓಡುತ್ತಿರುವ, ತಪ್ಪಿಸಿಕೊಂಡು ಓಡುತ್ತಿರುವ ಹೀಗೆ ತರಹೇವಾರಿ ಓಟಗಾರರನ್ನು ಕಾಣಬಹುದು.ಆದರೆ ಸಿನಿಮಾದ ಕತೆಯಲ್ಲಿ ಆತರಹದ ಪಲಾಯನ, ತಪ್ಪಿಸಿಕೊಳ್ಳುವಿಕೆ ಇಲ್ಲ. ಸಾಮಾನ್ಯ ಪ್ರೇಮಕತೆಯ ಚಿತ್ರವಾದರೂ ನಾಯಕ ಓಡಿದರೆ ಏನು ಮಾಡೋಣ.
ಅಥವಾ ಬೇಗ ಬನ್ನಿ ಇಲ್ಲವಾದರೆ ನಾನೂ ಚಿತ್ರಮಂದಿರದಿಂದಲೇ ಓಡಿಬಿಡುತ್ತೇನೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತಿರಬಹುದಾ?