Wednesday, November 21, 2012

ಯೋಗರಾಜ್ ಭಟ್ ರ ಡ್ರಾಮಾ ...

 ಯೋಗರಾಜ್ ಭಟ್ ನಿರ್ದೇಶನದ ಡ್ರಾಮಾ ಈ ವಾರ ತೆರೆಕಾಣುತ್ತಿದೆ. ಭಟ್ಟರು ಈಗೇನು ಮಾಡಿರಬಹುದು ಅಥವಾ ಇದನ್ನು ಎಷ್ಟು ಚೆನ್ನಾಗಿ ಮಾಡಿರಬಹುದು ಎನ್ನುವ ಕುತೂಹಲವಿದೆ. ಮುಂಗಾರುಮಳೆಯ ಪ್ರತಿಯೊಂದು ಅಂಶವು ಒಬ್ಬ ಚಿತ್ರಕರ್ಮಿಗೆ ಅದ್ಯಯನಕ್ಕೆ ಅರ್ಹವಾದದ್ದು. ಮೇಲ್ನೋಟಕ್ಕೆ ಆ ಸಿನಿಮಾದಲ್ಲಿ ಏನಿದೆ ಎನಿಸಿದರೂ ಸುಮ್ಮನೆ ಚಿತ್ರಕಥೆಯ ತಿರುವುಗಳನ್ನು ಗಮನಿಸುತ್ತಾ ಹೋದಂತೆ ಅದರ ವಿಶೇಷತೆ ನಮಗೆ ಗೊತ್ತಾಗುತ್ತದೆ. ಮೊದಲ  ನೋಟಕ್ಕೆ ತೀರ ಸಾದಾರಣ ಎನಿಸುವ ಮುಂಗಾರುಮಳೆಯ ಚಿತ್ರಕಥೆ ನಿಜಕ್ಕೂ ಅನಿರೀಕ್ಷಿತ ತಿರುವುಗಳನ್ನು ಒಳಗೊಂಡಿದೆ . ಸುಮ್ಮನೆ ಗಮನಿಸಿ. ನೋಡಿದ ಕೂಡಲೇ ನಾಯಕಿಗೆ ಮನಸೋಲುವ ನಾಯಕ ಶತಾಯಗತಾಯ ಆಕೆಯನ್ನು ಪ್ರೀತಿಸಿ ಮದುವೆಯಾಗಲೇಬೇಕು ಎಂಬ ನಿರ್ಧಾರಕೆ ಬಂದು ಬಿಡುತ್ತಾನೆ. ಆಕೆಯ ಹಿಂದೆ ಬೀಳುತ್ತಾನೆ. ಆದರೆ ಆಕೆಗೆ ಮದುವೆ ನಿಶ್ಚಿತಾರ್ಥವಾಗಿರುತ್ತದೆ.ಇದು ಮೊದಲ ತಿರುವು. ಅದು ಗೊತ್ತಾಗುತ್ತಿದ್ದಂತೆಯೇ ನಾಯಕ ಆಕೆಯ ಸಹವಾಸವೇ ಬೇಡ ಎಂದು ಹಿಂದಿರುಗಿ ಹೊರಟು ಬಿಡುತ್ತಾನೆ . ಆದರೆ ನಾಯಕಿ ತಮಾಷೆಗೆ ಕಿಚಾಯಿಸುತ್ತಾಳೆ, ಆತ ವಾಪಸ್ಸು ಬರುತ್ತಾನೆ . ಅದು ಎರಡನೇ ತಿರುವು. ಹಿಂದೆ ಬಂದವ ಆಕೆಯ ಹಿಂದೆ ಬಿದ್ದು ಬಿದ್ದು ರೋಸಿಹೋಗಿ ಆಕೆಯ/ಪ್ರೀತಿಯ  ಸಹವಾಸ ಬೇಡ ಎಂದು ಆಕೆಯನ್ನು ಬಿಡಲು ತಯಾರಾಗುತ್ತಾನೆ . ಆದರೆ ಅಷ್ಟರಲ್ಲಿ ಆಕೆಯೇ ಅವನಿಗೆ ಮನಸೋತಿರುತ್ತಾಳೆ. ಇದು ಮೂರನೆಯ ತಿರುವು. ಇಬ್ಬರ ಪ್ರೀತಿಯೂ ಒಂದಾಗಿ ಮದುವೆಯಾಗಬೇಕೆಂದು ನಿರ್ಧರಿಸಿದಾಗ ಆತ ಪರಿಸ್ಥಿತಿಯ ಒತ್ತಡಕ್ಕೆ ಮಣಿದು  ಬದಲಾಗುತ್ತಾನೆ. ಉಲ್ಟಾ ಹೊಡೆಯುತ್ತಾನೆ. ಇದು ಮತ್ತೊಂದು ತಿರುವು. ಹೀಗೆ ಇಡೀ ಚಿತ್ರವೇ ಗಿರಕಿ ಹೊಡೆಯುತ್ತಾ ಸಾಗುತ್ತದೆ. ಏನೋ ಆಗುವುದೆಂದು ಊಹಿಸಿದರೆ  ಇನ್ನೇನೋ ಆಗುತ್ತದೆ. ಯಾವುದೂ ಬೇಕು ಎಂದಾಗ ಸಿಗುವುದಿಲ್ಲ. ಸಿಕ್ಕಾಗ ಅದರ ಬಗ್ಗೆ ಒಲವಿರುವುದಿಲ್ಲ ಅಥವಾ ಅದು ಬೇಕಿರುವುದಿಲ್ಲ ಎಂಬ ಸಿದ್ಧಾಂತ ಚಿತ್ರಕ್ಕೆ ಚೆನ್ನಾಗಿ ಒಪ್ಪುತ್ತದೆ. ನಾನು ಮೊದಲಿಗೆ ಸಿನೆಮಾ ನೋಡಿದ ಮೇಲೆ ಸುಮ್ಮನೆ ಅದನ್ನೇ ಮೆಲುಕು ಹಾಕುತ್ತಿದ್ದಾಗ ಅದರ ಮಧ್ಯಂತರ ಎಲ್ಲಿ ಎಂಬುದೇ ಮರೆತುಹೋಗಿತ್ತು. ಅಷ್ಟರ ಮಟ್ಟಿಗೆ ಭಟ್ಟರ ತಂಡ ಪ್ರೇಕ್ಷಕನನ್ನು ಹಿಡಿದುಕೂರಿಸಿದ್ದಂತೂ ನಿಜ. 
 ಆದರೆ ಆಮೇಲಿನ ಭಟ್ಟರ ಚಿತ್ರಗಳು ಅದೇಕೋ ಅಷ್ಟು ರುಚಿಸಲಿಲ್ಲ. ಪುನರಾವರ್ತನೆ ಎನಿಸಿತು. ದೃಶ್ಯ ವೈಭವ, ಸಂಗೀತ, ಸಾಹಿತ್ಯ, ಸಂಭಾಷಣೆ ಹೀಗೆ ಪ್ರತಿ ಕ್ಷೇತ್ರದಲ್ಲೂ ದಕ್ಷತೆ ಮೆರೆದಿದ್ದ ಮುಂಗಾರುಮಳೆಯ ನಂತರದ ಚಿತ್ರಗಳು ಬರೀ ಸಂಭಾಷಣೆ-ಹಾಡುಗಳಷ್ಟೇ ಚಂದ ಎನಿಸುವಂತಾಗಿತ್ತು.
ಚಿತ್ರದಿಂದ  ಚಿತ್ರಕ್ಕೆ ಬೆಳೆಯುತ್ತಾ ಭಟ್ಟರು ಎಲ್ಲೋ ಸಾಗಿಹೋಗಬಹುದಿತ್ತೇನೋ ಎನಿಸುತ್ತದೆ. ಬಾಲಿವುಡ್ನಲ್ಲಿ ತಮಿಳರು ಮಾಡಿದ್ದನ್ನು ನಮ್ಮಲ್ಲಿನ ಶ್ರೇಷ್ಠ ನಿರ್ದೇಶಕರೇಕೆ ಮಾಡುವುದಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.. ಉದಾಹರಣೆಗೆ ಮುರುಗದಾಸ್ ದೀನ ಚಿತ್ರದಿಂದ ತಮ್ಮ ಪಯಣ ಪ್ರಾರಂಭಿಸಿ ಈವತ್ತಿನ ತುಪಾಕಿಯವರೆಗೆ ಅವರ ಬೆಳವಣಿಗೆ ಏರುಮುಖವಾಗಿಯೇ ಇದೆ. ತುಪಾಕಿ ಈಗ ಹಿಂದಿಗೆ ರಿಮೇಕ್ ಆಗುತ್ತಿದೆ . ಹಾಗೆ ಶಂಕರ್ ಕೂಡ. ಆದರೆ ನಮ್ಮಲ್ಲಿ ಅದೇಕೆ ಅದಾಗುತ್ತಿಲ್ಲ. ಮುಂಗಾರುಮಳೆಯ ನಂತರ ಭಟ್ ಚಿತ್ರಗಳೇಕೆ ಯಾವರೀತಿಯಲ್ಲೂ ಅದಕ್ಕಿಂತ ಮುಂದಾಗಲಿಲ್ಲವಲ್ಲ ಎಂಬ ಪ್ರಶ್ನೆ ಕಾಡುತ್ತದೆ. ಚಿತ್ರದಿಂದ ಚಿತ್ರಕ್ಕೆ ಮಾರುಕಟ್ಟೆಯನ್ನೂ, ತಮ್ಮದೇ ಚಾಪನ್ನೂ ಹೆಚ್ಚಿಸಿಕೊಳ್ಳುವ ತಮಿಳರ ಛಾತಿ ನಮಗೇಕೆ ಬರುವುದಿಲ್ಲ. ಬಹುತೇಕ  ಹೊಸತನ, ಹೊಸ ಪ್ರಯೋಗಗಳು ನಮ್ಮಲ್ಲೇ ಮೊದಲು ಮೊಳಕೆ ಹೊಡೆದರೂ ನಾವೇಕೆ ನಮ್ಮ ಚಿತ್ರರಂಗದಿಂದಾಚೆಗೆ ನಮ್ಮ ಹೆಜ್ಜೆ ಇಡಲು ಸಾಧ್ಯವಾಗಿಲ್ಲ ಎನಿಸುತ್ತದೆ.ಬರೀ ರೀಮೇಕ್ ಮಾಡಿಕೊಂಡಿ ಹಿಂದಿಯಲ್ಲಿ ನೆಲೆಕಂಡುಕೊಂಡ ಪ್ರಿಯದರ್ಶನ್, ಪ್ರಭುದೇವ  ತಮ್ಮದೇ ಸಿನಿಮಾಗಳನ್ನು ಮತ್ತೊಮ್ಮೆ ನಿರ್ದೇಶಿಸಿ ಹೆಸರುಗಳಿಸಿದ ಶಂಕರ್, ಮುರುಗದಾಸ್, ಅಮೀರ್ ಮುಂತಾದವರನ್ನು ನೋಡಿದಾಗ ನಮ್ಮಲ್ಲಿನ ಟಾಪ್ ನಿರ್ದೇಶಕರೇಕೆ ಅಲ್ಲಿ ಬರೀ ಹೆಜ್ಜೆ ಇಡಲೂ  ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.
ನನ್ನ  ಮೆಚ್ಚಿನ ನಿರ್ದೇಶಕ ಯೋಗರಾಜ್ ಭಟ್ ರಿಗೆ ಈವತ್ತು ಎಲ್ಲವೂ ಅವರ ಕೈಯಲ್ಲಿದೆ. ಅವರ ಸಿನೆಮಾಕ್ಕೆ ಬೇಕಾದ ಹೀರೋ, ತಂತ್ರಜ್ಞರನ್ನು  ಕೊಡುವ ನಿರ್ಮಾಪಕರಿದ್ದಾರೆ. ಅದೆಲ್ಲವನ್ನೂ ತಮ್ಮ ಅನುಭವ, ಬುದ್ದಿವಂತಿಕೆಯ ಜೊತೆ ಬೆರೆಸಿ ಇಡೀ ಭಾರತವೇ ತಿರುಗಿನೋಡುವಂತಹ  ಚಿತ್ರ ನೀಡಲಿ, ಮತ್ತು ನಮ್ಮದೂ ಚಿತ್ರರಂಗ ಸಮರ್ಥವಾಗಿದೆ ಎಂಬುದನ್ನು ಭಟ್ ತರಹದ ನಿರ್ದೇಶಕರು ಪರಭಾಷೆಯ ಚಿತ್ರರಂಗಕ್ಕೆ ತೋರಿಸಿಕೊಡಲಿ ಎಂಬುದು ನಮ್ಮಂತಹ ಬಹುತೇಕ ಅಭಿಮಾನಿಗಳ ಆಶಯ.
ಡ್ರಾಮಾವನ್ನ ಕಣ್ತುಂಬಿಕೊಳ್ಳಲು ಕ್ಷಣಗಣನೆ ಮಾಡುತ್ತಿದ್ದೇನೆ...

ಆತ ಹಂತಕ , ನಾನು ಚಿತ್ರಕಥೆಗಾರ-ಯಾಮಾರಿದರೆ ಕೊಲೆ.

ನಿಮಗೆ ಚೆಟ್ ಲೋಗನ್ ಬಗ್ಗೆ ಗೊತ್ತಿರಲಿಕ್ಕಿಲ್ಲ. ಭಯಾನಕ ಮನುಷ್ಯ ಅವನು . ತನ್ನ ದಾರಿಗೆ ಅಡ್ಡ ಬಂದರೆ ಯಾರನ್ನೂ ಸುಮ್ಮನೆ ಬಿಡುವುದಿಲ್ಲ . ಬೇರೆ ಮಾತೆ ಇಲ್ಲ . ಮುಗಿಸಿಬಿಡುವುದೇ.. ! ಕುಳಿತು ಮಾತಾಡುವುದು , ತರ್ಕದಿಂದ ವರ್ತಿಸುವುದು ಅದೆಲ್ಲಾ ಅವನ ಜಾಯಮಾನದಲ್ಲಿ ಇಲ್ಲವೇ ಇಲ್ಲ. ಅವನಿಗೆ ಗೊತ್ತಿರುವುದು ಒಂದೇ ಎದುರು ನಿಂತವರೆಲ್ಲಾ ಶತ್ರುಗಳು ಮತ್ತು ಅವರನ್ನು ಕೊಲ್ಲಲೇಬೇಕು.ಇಲ್ಲದಿದ್ದರೆ ನನಗೆ ಉಳಿಗಾಲವಿಲ್ಲ ಎಂಬುದು ಅವನ ಸಿದ್ಧಾಂತ. ಜೈಲಿನಿಂದ ತಪ್ಪಿಸಿಕೊಂಡವನು ಒಂದೇ ರಾತ್ರಿಯಲ್ಲಿ  ಆತ ಮಾಡಿದ ಕೊಲೆಗಳ ಸಂಖ್ಯೆ ಆರು. ಅದೂ ಬರ್ಬರವಾಗಿ. ಅವಳು..ಪಾಪಾ ಆ ಹುಡುಗಿಗೆ ಆತನ ಆಕ್ರಮಣ ಹೇಗಿತ್ತೆಂದರೆ ಅವಳ ತಲೆ  ಚೂರುಚೂರಾಗಿತ್ತು. ಇಡೀ ಮಿದುಳು ರಕ್ತ ಕೂದಲು ಎಲ್ಲವೂ ಮಿಕ್ಸಾಗಿದ್ದವು ಎಂದರೆ ಅದರ ಬರ್ಬರತೆಯನ್ನು ನೀವು ಊಹಿಸಬಹುದು. ಈಗ ಒಬ್ಬ ಪೋಲಿಸನನ್ನು ಕೂಡ ಕೊಲೆಮಾಡಿ ಅವನ ಟೋಪಿ ಮತ್ತು ಪಿಸ್ತೂಲ್  ಅನ್ನು ತನ್ನ ವಶಕ್ಕೆ ತೆಗೆದುಕೊಂಡು ಪರಾರಿಯಾಗಿದ್ದಾನೆ. ಅದೂ ಪೋಲಿಸ್ ವಾಹನದಲ್ಲೇ. ಈಗ ಇಡೀ ಪೋಲಿಸ್ ವ್ಯವಸ್ಥೆ ಆತನ ಹಿಂದೆ ಬಿದ್ದಿದ್ದೆ. ಎಲ್ಲ ಕಡೆ ರೇಡಿಯೋ  ಸಂದೇಶಹೋಗಿದೆ.
ಅಂಥವನು ಈಗ ನನ್ನ ಮುಂದಿದ್ದಾನೆ. ನನಗೆ ಪೋಲಿಸ್ ಅಪರಾಧಿಗಳು, ರಕ್ತ, ಕೊಲೆಗಳ ಅನುಭವವಿಲ್ಲ. ಅವೆಲ್ಲಾ ಸಿನಿಮಾಗಳಿಂದ ಮಾತ್ರ ನನಗೆ ಪರಿಚಿತ .ಯಾಕೆಂದರೆ ನಾನು ಚಿತ್ರರಂಗದಲ್ಲಿ ಬರಹಗಾರನಾಗಿ ತೊಡಗಿಸಿಕೊಂಡಿರುವವನು. ಚಲನಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದು ನನ್ನ ಕೆಲಸ . ಚಲನಚಿತ್ರಗಳಲ್ಲಿ ನನ್ನ ಪಾತ್ರದ ಮೂಲಕ ಹಲವಾರು ಕೊಲೆಗಳನ್ನೂ ಅತ್ಯಾಚಾರಗಳನ್ನೂ ಮಾಡಿಸಿದ್ದೇನೆ . ಆದರೆ ನಿಜ ಜೀವನದಲ್ಲಿ  ಅದರ ಬಗ್ಗೆ ಯೋಚಿಸಲೂ ನನಗೆ ಸಾಧ್ಯವಿಲ್ಲ . ಯಾವುದೋ ಸಿನೆಮಾದ ಕಥೆ ಬೆಳವಣಿಗೆಯ ಸಮಯದಲ್ಲಿ ಅದ್ಯಯನಕ್ಕಾಗಿ ಜೈಲಿನ ಒಳಗೆ ಹೋಗಿದ್ದೆ .
ಈ ಸಾರಿ ನಮ್ಮ ನಿರ್ಮಾಪಕರು   ಹೇಳಿಬಿಟ್ಟಿದ್ದರು. ಈ  ಸಾರಿಯ ಕಥೆಯಲ್ಲಿ ಎಲ್ಲಾ ರೀತಿಯ ರೋಚಕತೆ ಇರಬೇಕು. ಕೊಲೆ ಸುಲಿಗೆ ಶೃಂಗಾರ, ಹಾಸ್ಯ..ಹೀಗೆ ನವರಸಗಳೂ ತುಂಬಿ ತುಳುಕಬೇಕು ಎಂದು . ಅದಕ್ಕಾಗಿಯೇ ನಾನು ಪಟ್ಟಣದಲ್ಲಿದ್ದರೆ ಆ ಜನಜಂಗುಳಿಯಲ್ಲಿ ಏಕಾಗ್ರತೆ  ಸಾಧ್ಯವಿಲ್ಲವೆಂದು  ಈ  ಕಾಡೊಳಗೆ ವಾಸ್ತವ್ಯ ಮಾಡಿಕೊಟ್ಟಿದ್ದರು. ನಾನು ಏನು ಬರೆಯಬೇಕು ಯಾವ ರೀತಿಯ ಕಥೆ ಮಾಡಬೇಕು ಅಂಬ ಗೊಂದಲದಲ್ಲಿದ್ದಾಗಲೇ ಚೆಟ್ ನನ್ನ ಮನೆಗೆ ನುಗ್ಗಿದ್ದು . ಅವನ ಪರಿಚಯವಾದ ಮೇಲೆ ನಾನು ದಂಗು ಬಡಿದಿದ್ದೆ. ಈಗ ಅವನನ್ನು ಹೊರಗೆ ಕಳುಹಿಸುವುದೆಂತು ?..ಹಾಗೆ ಮಾತಾಡಿಸುತ್ತಿದ್ದಾಗ ಅವನು ತಾನು ಮಾಡಿದ ಕೊಲೆಗಳ ಬಗ್ಗೆ ಹೇಳಿದಾಗ ಅವನ ಕಥೆಯನ್ನು ಸಂಪೂರ್ಣ ಕೇಳಿಕೊಂಡು ಅದಕ್ಕೊಂದಿಷ್ಟು  ಸೇರಿಸಿ ಕಥೆ ಮಾಡಿದರೆ ನೈಜತೆಯ ಸ್ಪರ್ಶ ಸಿಗುತ್ತದೆ ಎನಿಸಿತು. . ಚೆಟ್ ನಿಗೆ ಪೂರ್ತಿ ಕಥೆ ಹೇಳುವಂತೆ ಕೇಳಿಕೊಂಡೆ .
'ನಾನೀಗಾಗಲೇ ಆರು ಕೊಲೆ ಮಾಡಿದ್ದೇನೆ. ಅವುಗಳ ಕಾರಣ  ಕೇಳಿದರೆ ನಿನಗೆ ಕ್ಷುಲ್ಲಕ ಎನಿಸಬಹುದು . ಆದರೆ ನನಗೆ ಹಾಗನ್ನಿಸುವುದಿಲ್ಲ . ಸುಮ್ಮನೆ ಕೇಳಿಸಿಕೊಳ್ಳುತ್ತಾ ಹೋಗು. ಸ್ವಲ್ಪ  ಹೆಚ್ಚುಕಡಿಮೆಯಾದರೂ ಏಳನೆಯವನು ನೀನಾಗಬಹುದು...' ಎಂದ ಚೆಟ್ ಕಣ್ಣಲ್ಲಿ   ಕ್ರೌರ್ಯ ತುಂಬಿ ತುಳುಕುತ್ತಿತ್ತು.
ಇದು ಜೇಮ್ಸ್ ಹಾಡ್ಲಿ ಚೇಸ್ ನ ಕಾದಂಬರಿ 'ವೀ ವಿಲ್ ಶೇರ್ ಎ ಡಬಲ್ ಫ್ಯೂನರಲ್ ' ನ ಪ್ರಾರಂಭದ ಪುಟಗಳ ಸಾರಾಂಶ . ನಾನು ಒಂದಷ್ಟು ಓದಿಯಾದ ಮೇಲೆ , ಬರೆದಾದ ಮೇಲೆ, ಸಿನಿಮಾಗಳನ್ನು ನೋಡಿಯಾದ ಮೇಲೆ ಬ್ರೇಕ್ ಎಂಬಂತೆ ಚೇಸ್ ಕಾದಂಬರಿಗಳನ್ನ ಓದುತ್ತೇನೆ . ಚೇಸ್ ನ ಕಾದಂಬರಿಗಳು ನನಗ್ಯಾವತ್ತೂ ಮೋಸ ಮಾಡಿಲ್ಲ ಅಥವಾ ಅದರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಇದೂ ಕೂಡ ಹಾಗೆಯೇ. ಪ್ರಾರಂಭದಲ್ಲೇ ಹಿಡಿದು ಕೂರಿಸಿಬಿಡುವ ಕಾದಂಬರಿ.   ಪುಟದಿಂದ ಪುಟಕ್ಕೆ ಕುತೂಹಲ ಕೆರಳಿಸುತ್ತಾ ಸಾಗುವ ಕಾದಂಬರಿಯ ಅಂತ್ಯ ಬಹಳ ರೋಚಕವಾಗಿದೆ. ಉತ್ತಮ ಟೈಮ್ ಪಾಸ್ ಕಾದಂಬರಿ. ಸುಮ್ಮನೆ ಓದಿ ಎಂದು ಶಿಫಾರಸ್ಸು ಮಾಡಬಹುದು .
..

ನಾನು ನಾನಲ್ಲ...ದೇವರಾಣೆಗೂ ಅವನೇ..?

ವರಿಬ್ಬರೂ  ತುಂಬಾ  ಅನೋನ್ಯವಾಗಿರುವ ಸಹೋದರರು. ಅಣ್ಣನಿಗೆ ಕಲೆಯಲ್ಲಿ  ಆಸಕ್ತಿ.   ಅಣ್ಣನಿಗೆ ಮದುವೆಯಾಗಿ ಸುಂದರವಾದ, ಒಳ್ಳೆಯ ಹೆಂಡತಿ ಇದ್ದಾಳೆ. ತಮ್ಮನಿಗೆ ಪ್ರೇಯಸಿ ಇದ್ದಾಳೆ ಆದರೂ ಮದುವೆಯಾಗಿಲ್ಲ. ಮರದಲ್ಲಿ ಕೆತ್ತನೆಯ ಕೆಲಸಗಳನ್ನು  ಮಾಡುವುದೆಂದರೆ ಖುಷಿ . ಆದರೆ ತಮ್ಮನಿಗೆ  ಕಾರ್ ರೇಸ್  ಹುಚ್ಚು.ಕಾರನ್ನು  ಶರವೇಗದಲ್ಲಿ ಓಡಿಸುವುದೆಂದರೆ  ಎಲ್ಲಿಲ್ಲದ ಉತ್ಸಾಹ . ಆದರೆ  ಅದು ಅಪಾಯಕಾರಿಯಾದ್ದರಿಂದ ಅಣ್ಣನಿಗೆ ಅದು  ಇಷ್ಟವಿರುವುದಿಲ್ಲ. ಆದರೆ  ಹೇಗೋ ಅಣ್ಣನ ಮನವೊಲಿಸುತ್ತಾನೆ . 'ಸರಿ ಇದೆ ಕೊನೆಯ ಪಂದ್ಯ. ಆಮೇಲಿನಿಂದ ಇದರಲ್ಲಿ ಭಾಗವಹಿಸುವಂತಿಲ್ಲ ' ಎಂದು ಹೇಳುವ ಅಣ್ಣ ಆ ಕಾರ್ ರೇಸ್ ಗೆ ತಮ್ಮನಿಗೆ ಪ್ರೋತ್ಸಾಹ ಕೊಡಲು  ತಾನೂ ಬರುತ್ತಾನೆ. ಪಂದ್ಯ ಮುಗಿಸಿ ಬರುವಾಗ ಅಪಘಾತವಾಗುತ್ತದೆ. ಅಣ್ಣತಮ್ಮ ಇಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗುತ್ತವೆ. ಇಬ್ಬರೂ ಕೋಮ ಸ್ಥಿತಿ ತಲುಪುತ್ತಾರೆ. ಒಂದು ವರ್ಷದ ನಂತರ ತಮ್ಮ ಕೋಮ ಸ್ಥಿತಿಯಿಂದ ಹೊರಬರುತ್ತಾನೆ. ಆಸ್ಪತ್ರೆಯಿಂದ ಮನೆಗೆ ಕರೆತಂದ ಅತ್ತಿಗೆಗೆ ಆತ ತಾನು 'ಅಣ್ಣ' ಎಂದೆ ಪರಿಚಯಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಆತನ ನಡೆ, ನುಡಿ ಎಲ್ಲಾ ಪಕ್ಕಾ ಅಣ್ಣನಂತೆಯೇ. ಅತನ ಪ್ರತಿಯೊಂದು ಸೂಕ್ಷ್ಮಾತಿಸೂಕ್ಷ್ಮ ಅಂಶಗಳೂ ಅಣ್ಣನಂತೆಯೇ ಇರುತ್ತವೆ. ಅತ್ತಿಗೆಗೆ ಗಾಬರಿಯಾಗುತ್ತದೆ. ಅದೇಗೆ ಆತನನ್ನು ಗಂಡನೆಂದು ಸ್ವೀಕರಿಸುವುದು? ಇದು ಆಕೆಗಷ್ಟೇ ಅಲ್ಲ ವೈದ್ಯಲೋಕದಲ್ಲೂ ಗೊಂದಲಗಳಿಗೆ ಕಾರಣವಾಗುತ್ತದೆ. ವೈದ್ಯರುಗಳಿಗೆ ಇದೊಂದು ಸವಾಲೆನಿಸುತ್ತದೆ. ಕೊನೆಗೆ ಕೋಮಾದಲ್ಲಿರುವ ಅಣ್ಣನ ಆತ್ಮ ತಮ್ಮನ ದೇಹಕ್ಕೆ ಸೇರಿಕೊಂಡಿರಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ.
ಈಗ ಅತ್ತಿಗೆಗೆ  ಈತ ನಿಜವಾಗಲೂ ತನ್ನ ಗಂಡನಾ..? ಎನ್ನುವ ಪ್ರಶ್ನೆ ಕಾಡತೊಡಗುತ್ತದೆ. ತನ್ನ ಮತ್ತು ಗಂಡನ ಜೀವನದಲ್ಲಿ ನಡೆದ ಕೆಲವು ವೈಯಕ್ತಿಕ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿದರೂ ಆತ ಅದಕ್ಕೆಲ್ಲಾ ನಿಖರವಾಗಿಯೇ 'ಅಣ್ಣ' ನಂತೆಯೇ ಉತ್ತರಿಸುತ್ತಾನೆ. ಆದರೂ ಆಕೆಗೆ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ತಮ್ಮನ ಪ್ರೇಯಸಿ ಕರೆದು ಆಕೆಯ ಹತ್ತಿರ ಹೇಗೆ ವರ್ತಿಸುತ್ತಾನೆ ಎಂದು ಪರೀಕ್ಷಿಸುತ್ತಾಳೆ. ಅಲ್ಲೂ ಆಕೆಗೆ  ಅಚ್ಚರಿಯೇ...ಅಣ್ಣನ ಆತ್ಮ ತಮ್ಮನಿಗೆ ಸೇರಿಕೊಂಡರೆ ತಮ್ಮನ ಆತ್ಮ ಎಲ್ಲಿ?
ಅದೊಂದು ದಿನ ಜೋರು ಮಳೆಯಲ್ಲಿ ಮನಗೆ ಬರುವ ತಮ್ಮನ ನಡವಳಿಕೆ ಅತ್ತಿಗೆಯನ್ನು ಅಚ್ಚರಿಗೊಳಿಸುತ್ತದೆ. ಹಿಂದೊಂದು ದಿನ ಇದೆ ತರಹದ ಸನ್ನಿವೇಶದಲ್ಲಿ ಅಣ್ಣ ಹೇಗೆ ನಡೆದುಕೊಂಡಿದ್ದನೋ ಹಾಗೆಯೇ ಈವತ್ತು ತಮ್ಮ ನಡೆದುಕೊಂಡಾಗ ಆಕೆಗೆ ಇದು ಅಣ್ಣನೆ , ತನ್ನ ಗಂಡನೆ ಎನಿಸಿಬಿಡುತ್ತದೆ.
ಆಕೆಯ ಅನುಮಾನಗಳು ಸಂಪೂರ್ಣ ಅಳಿಸಿಹೋಗಿ,  ಇದು ತಮ್ಮನ ದೇಹದಲ್ಲಿರುವ ತನ್ನ ಗಂಡ ಎನಿಸಿಬಿಡುತ್ತದೆ.
ಹೌದಾ ..? ಇದೆಲ್ಲಾ ಸಾಧ್ಯವಾ ಎನ್ನುವ ಪ್ರಶ್ನೆಗಳಿಗೆ ಉತ್ತರವೆಂದರೆ  ...ಅದೆಲ್ಲವನ್ನೂ ದೃಶ್ಯರೂಪದಲ್ಲಿ ನೋಡಿದರೆ ಮಜಾ ಎಂಬುದು ನನ್ನ ಅನಿಸಿಕೆ. 2003ರಲ್ಲಿ ಬಿಡುಗಡೆಯಾದ ಪಾರ್ಕ್ ಯಂಗ್ ಹೂ ನಿರ್ದೇಶನದ ಕೊರಿಯನ್ ಭಾಷಾ ಚಲನಚಿತ್ರ   ' ಅಡಿಕ್ಟಡ್ '  ಚಿತ್ರದ ಸಾರಾಂಶ ಇದು. ಪ್ರಾರಂಭದಲ್ಲಿ ಏನೋ ಎನಿಸಿದರೂ ಬರುಬರುತ್ತಾ ಕಥೆಯ ರೋಚಕತೆಯಿಂದಾಗಿ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಕೊನೆಯವರೆಗೂ ಎಲ್ಲೂ ರಹಸ್ಯ ಬಿಟ್ಟುಕೊಡದ ನಿರ್ದೇಶಕ ಆ ಮೂಲಕ ತಮ್ಮ ಪ್ರಾವೀಣ್ಯತೆ ಮೆರೆದಿದ್ದಾರೆ ಎನ್ನಬಹುದು. ಒಂದು ಘಂಟೆ  ನಲವತ್ತಾರು ನಿಮಿಷವಿರುವ  ಈ ಚಿತ್ರವನ್ನೊಮ್ಮೆ ನೋಡಿ.