Tuesday, April 30, 2013

ವಿಕ್ಷಿಪ್ತತೆ, ಸೂರಿ ಮತ್ತು ಕಡ್ಡಿಪುಡಿ ಸಿನಿಮಾ..

 ವಿಕ್ಷಿಪ್ತ ಮತ್ತು ವಿಕೃತದ ನಡುವಿನ ಅಂತರ ಬಹಳ ದೊಡ್ಡದು ಎಂದು ಕೆಲವೊಮ್ಮೆ ಅನಿಸಿದರೆ ಕೆಲವೊಮ್ಮೆ ಎರಡರ ನಡುವಿನ ಅಂತರ ತುಂಬಾ ಚಿಕ್ಕದು ಅಥವಾ ಸಣ್ಣ ಎಳೆ ಎನಿಸುತ್ತದೆ.ಅದರಲ್ಲೂ ಸಿನಿಮಾ ವಿಷಯಕ್ಕೆ ಬಂದಾಗ ಕೆಲವು ನಿರ್ದೇಶಕರ ವಿಕ್ಷಿಪ್ತ ಮನಸ್ಥಿತಿ ಅಥವಾ ಅವರ ಕಥೆಯಲ್ಲಿನ ವಿಕ್ಷಿಪ್ತ ದೃಷ್ಟಿ ಅಚ್ಚರಿ ಮೂಡಿಸದೇ ಇರದು. ನಾವು ನೋಡುವ ದೃಷ್ಟಿಗೂ ಅವರು ತೋರಿಸುವ ಜಗತ್ತಿನ ಸೃಷ್ಟಿಗೂ ಅಜಗಜಾಂತರ ವ್ಯತ್ಯಾಸವಿರುವುದು ಕಂಡುಬರುತ್ತದೆ. ಆದರೆ ಎಲ್ಲರೂ ಜಗತ್ತನ್ನು ವಾರೆಗಣ್ಣಿಂದ ನೋಡಲು ಸಾಧ್ಯವಿಲ್ಲ. ಅದರಲ್ಲೂ ಒಂದು ಮಾಧ್ಯಮದಲ್ಲಿರುವ ಮರುಸೃಷ್ಟಿಗೆ ಅವಕಾಶವಿರುವ ಸೃಜನಶೀಲ ವ್ಯಕ್ತಿಗಳ ಬರಹ, ಚಿತ್ರಣ ಅಥವಾ ಒಟ್ಟಾರೆಯಾಗಿ ಅವರ ಸೃಷ್ಟಿ ನಮಗೊಂದು ಭಿನ್ನವಾದ‘ಲೋಕವನ್ನೇ ದರ್ಶಿಸುವುದು ನಿಜ.
ಇನ್ನು ಸಿನಿಮಾದ ವಿಷಯಕ್ಕೆ ಬಂದಾಗ ಒಬ್ಬ ನಿರ್ದೇಶಕ ತಾನು ನೋಡಿದ ಅಥವಾ ತನಗಿಷ್ಟವಾದದ್ದನ್ನೇ ತೆರೆಯ ಮೇಲೆ ತಂದರೆ ಅದು ಅತ್ಯುತ್ತಮವಾಗಿರುತ್ತದೆ ಅಷ್ಟೇ ಅಲ್ಲ.ಆ ಕಥಗೊಂದು ನ್ಯಾಯ ಸಿಗುತ್ತದೆ. ಬಲವಂತವಾಗಿ, ಸೂಕ್ತ ಅದ್ಯಯನವಿಲ್ಲದೇ ಒಂದು ಭಿನ್ನ ಕಥೆಯನ್ನು ನಿರೂಪಿಸಹೊರಟಾಗ ಸಾಕಷ್ಟು ಅಪಸವ್ಯವಾಗುವುದು ಸತ್ಯ. 
ನಿರ್ದೇಶಕ ಬಾಲಾರ ಯಾವುದೇ ಸಿನಿಮಾ ತೆಗೆದುಕೊಳ್ಳಿ. ಅದು ವಿಕ್ಷಿಪ್ತ ಎನ್ನಬಹುದು. ಅವರು ಜಗತ್ತನ್ನು ನೋಡಿರುವ ಅಥವಾ ನೋಡುವ ರೀತಿಯೇ ಭಿನ್ನವಾದದ್ದು. ಅವರ ಚಿತ್ರಗಳಲ್ಲಿ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಇರುತ್ತವೆ. ಹಾಸ್ಯ, ಹಾಡು, ಹೊಡೆದಾಟ, ಕೊಲೆ ಹೀಗೆ ಆದರೆ ಚಿತ್ರ ಮಾಮೂಲಿ ಮಸಾಲೆ ಸಿನಿಮಾ ಎನಿಸುವುದಿಲ್ಲ. 
ಕನ್ನಡದಲ್ಲಿ ಸೂರಿ ನಿರ್ದೇಶನದ ,ದುನಿಯಾ’ ಚಿತ್ರ ಬಂದಾಗ ನನ್ನಂತಹ ಯುವ ನಿರ್ದೇಶಕರಿಗೆ ಪುಳಕವಾದದ್ದಂತೂ ನಿಜ.ದುನಿಯಾ ಚಿತ್ರದಲ್ಲಿನ ದೃಶ್ಯರಚನೆ, ದೃಶ್ಯ ಜೋಡನೆ, ಪಾತ್ರ ಪೋಷಣೆ ಮತ್ತು ನಿರೂಪಣೆ ಮೆಚ್ಚುವಂತಹದ್ದು. ನಮ್ಮ ನಡುವಿನ ಜಗತ್ತನ್ನು ವಿಕ್ಷಿಪ್ತವಾಗಿ ತೋರಿಸಿದ್ದರು ಸೂರಿ. ಆದರೆ ಅದಾದ ಮೇಲೆ ಸೂರಿ ಬಲವಂತವಾಗಿ ತಮ್ಮ ಚಿತ್ರಗಳಲ್ಲಿ ಜಗತ್ತನ್ನು ವಿಭಿನ್ನವಾಗಿ ತೋರಿಸಲು ಪ್ರಯತ್ನಿಸಿದರೇನೋ..? ಹಾಗಾಗಿಯೇ ಅವರ ಮುಂದಿನ ಚಿತ್ರಗಳಲ್ಲಿ ಭಿನ್ನತೆಗಿಂತ
ಕ್ರೌರ್ಯ ಭೀಭತ್ಸಗಳು ರೌದ್ರಾವತಾರ ತಾಳಿದ್ದವು. ಎಲ್ಲವನ್ನು ಬೇರೊಂದು ದೃಷ್ಟಿಕೋನದಿಂದ ನೋಡಲೇಬೇಕು, ಪ್ರೇಕ್ಷಕ ಸೂರಿ ಸಿನಿಮಾಗಳಿಂದ ಬೇರೇನೋ ನಿರೀಕ್ಷಿಸುತ್ತಾನೆ ಎಂದು ಅವರಂದುಕೊಂಡರೇನೋ ಎಂಬಂತೆ ಅವರ ತದನಂತರ ಚಿತ್ರಗಳ ದೃಶ್ಯಗಳು, ಪಾತ್ರಗಳು ಅವುಗಳ ಹಿನ್ನೆಲೆ ಮುಂತಾದವುಗಳು ತೀರಾ ಸಾಮಾನ್ಯವಾಗಿರಲಿಲ್ಲ. ಅಷ್ಟೆಲ್ಲಾ ಮಾತನಾಡುವ ದುನಿಯಾದಲ್ಲಿನ ರಂಗಾಯಣ ರಘು ಪಾತ್ರವನ್ನು ಇತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಏಕಾಏಕಿ ಮೂಕನನ್ನಾಗಿಸಿದರು.ಹಾಗೆ ಮುಂದುವರೆದರೆ ಜಾಕಿ ಚಿತ್ರದಲ್ಲಿ ಹೆಣ ಇಟ್ಟುಕೊಂಡು ಅಪಹಾಸ್ಯ ಮಾಡುವ, ಅಣ್ಣಾಬಾಂಡ್ ನಲ್ಲೂ ಅದನ್ನೇ ಮುಂದುವರೆಸಿದರು. ಬಹುಶ ಅದೇ ಅವರ ಹಿನ್ನೆಡೆಗೆ ಕಾರಣವಿರಬಹುದು.
ಚಿತ್ರದಲ್ಲಿನ ಕಥೆಯಲ್ಲಿ ವಿಕ್ಷಿಪ್ತತೆಯನ್ನು ಬಲವಂತವಾಗಿ ಕಟ್ಟಿಕೊಡುವ ಪ್ರಯತ್ನದಿಂದಾಗಿಯೇ ಸೂರಿ ಚಿತ್ರಗಳು ಇಷ್ಟೇನಾ ಎನ್ನುವ ಹಣೆಪಟ್ಟಿ ಪಡೆದುಕೊಂಡವು ಎನ್ನಬಹುದು.
ಈಗ ಕಡ್ಡಿಪುಡಿ ಚಿತ್ರ ತೆರೆಗೆ ಬರುವ ಹಂತದಲ್ಲಿದೆ. ಅದರ ಪ್ರೋಮೋ ಕೂಡ ಅಲ್ಲಲ್ಲಿ ಹರಿದಾಡುತ್ತಿದೆ. ಬರೀ ಪ್ರೋಮೋ ನೋಡಿ ಯಾವುದನ್ನೂ ತೀರ್ಮಾನಿಸಲಾಗುವುದಿಲ್ಲವಾದರೂ ಮತ್ತೊಂದು ಸೂರಿ ಶೈಲಿಯ ಚಿತ್ರ ಎನ್ನುವುದರಲ್ಲಿ ಸಂಶಯ ಬರುವುದಿಲ್ಲ.ಚಿತ್ರದ ಸ್ತಿಲ್ಸ್ ಕೂಡ ಅದೇ ಕಥೆಯನ್ನು ಹೇಳುತ್ತವೆ. ಪ್ರೋಮೋದಲ್ಲಿನ ದೃಶ್ಯ ನನಗೆ ಸಿಟಿ ಆಫ಼್ ಗಾಡ್ ಚಿತ್ರದಲ್ಲಿನ ದೃಶ್ಯವೊಂದನ್ನು ನೆನಪಿಸಿತು. ಜಂಗ್ಲಿಯ ಮೊದಲ ದೃಶ್ಯ ಕೂಡ ಪಲ್ಪ್ ಫಿಕ್ಷನ್ ಚಿತ್ರದಲ್ಲಿನ ದೃಶ್ಯಕ್ಕೆ ಹೋಲಿಕೆಯಾಗುತ್ತಿತ್ತು.ಜಂಗ್ಲಿ ಚಿತ್ರದಲ್ಲಿ ಕಾರಿನ ಹಿಂಬದಿಯಲ್ಲಿ ಕೊಲೆ ಮಾಡಬೇಕಾಗಿರುವ ವ್ಯಕ್ತಿಯನ್ನಿಟ್ಟುಕೊಂಡು ಅದೊಂದು ವಿಷಯ ಬಿಟ್ಟು ಬೇರೆಲ್ಲಾ ಉಡಾಫೆಯ ತಮಾಷೆಯ ಮಾತಾಡಿಕೊಂಡು ಹೋಗುತ್ತಾರೆ, ಅದೇ ರೀತಿಯಲ್ಲಿ ಪಲ್ಪ್ ಪಿಕ್ಷನ್ ಚಿತ್ರದಲ್ಲಿ ಕೊಲೆ ಮಾಡಲು ಸಿದ್ಧರಾಗಿ ಹೋಗುವ ಜಾನ್ ಟ್ರವೋಲ್ಟ ಮತ್ತು ಸಾಮುವೆಲ್ ಜಾಕ್ಸನ್ ಆ ವಿಷಯವೊಂದನ್ನು ಬಿಟ್ಟು ಬೇರೆಲ್ಲಾ ಮಾತಾಡಿಕೊಂಡು ಹೋಗುತ್ತಾರೆ. ಸ್ಪೂರ್ತಿ ಏನೇ ಇರಲಿ. ಕನ್ನಡದ ಮಟ್ಟಿಗೆ ಬಹು ನಿರೀಕ್ಷೆಯ ನಿರ್ದೇಶಕ ಸೂರಿ. ಆದರೆ ದುನಿಯಾ ನಂತರದ ಅವರ ಯಾವ ಚಿತ್ರವೂ ಪ್ರೇಕ್ಷಕರನ್ನು ಸಂಪೂರ್ಣ ತಣಿಸಿಲ್ಲ. ಆದರೂ ಚಿತ್ರದಿಂದ ಚಿತ್ರಕ್ಕೆ ನಿರೀಕ್ಷೆ ಇಮ್ಮಡಿಯಾಗುತ್ತಲೇ ಇದೆ. ಇನ್ನು ಚಿರಯುವಕ ಶಿವರಾಜ್ ಕುಮಾರ್ ರವರ ಇತ್ತೀಚಿನ ಚಿತ್ರಗಳು ಯಾವುವೂ ಯಶಸ್ಸಿನ ಹಾದಿ ಹಿಡಿದಿಲ್ಲ. ಈ ಚಿತ್ರ ಶಿವಣ್ಣರಿಗೆ ಯಶಸನ್ನ ತಂದುಕೊಟ್ಟು, ಸೂರಿ ಮೇಲಿನ ಭರವಸೆಯನ್ನುಳಿಸಿ  ಪ್ರೇಕ್ಷಕರ ನಿರೀಕ್ಷೆಯನ್ನು ಜೀವಂತವಾಗಿಡಬೇಕಾಗಿದೆ.
ಹಾಗಾಗಿ ಕಡ್ಡಿಪುಡಿಯ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ

ವಿಶೇಷ ಚಿತ್ರ...26

ಸ್ಪೆಷಲ್ 26 ಚಿತ್ರ ನಿಜಕ್ಕೂ ವಿಶೇಷವಾದ ಚಿತ್ರ ಎನ್ನಬಹುದು. ಕಥೆ, ನಿರೂಪಣೆಯ ದೃಷ್ಟಿಯಿಂದಾಗಿ, ಕಲಾವಿದರ ಅಭಿನಯದ ದೃಷ್ಟಿಯಿಂದಾಗಿ ಈ ಚಿತ್ರ ನೋಡಲೇಬೇಕಾದ ಚಿತ್ರ ಎನಿಸಿಕೊಳ್ಳುತ್ತದೆ.1987ರ ಮಾರ್ಚ್ ತಿಂಗಳಲ್ಲಿ  ಮುಂಬೈನಲ್ಲಿ ನಡೆದ ಸುಳ್ಳು ತೆರಿಗೆ ದಾಳಿಯನ್ನಾಧರಿಸಿದ ಚಿತ್ರ ಇದು. ನಿಜ ಕಥೆಯ ಚಿತ್ರವಾದರೂ ನಿರ್ದೇಶಕ ಇದನ್ನು ಒಂದು ಸಾಕ್ಷ್ಯಚಿತ್ರವನ್ನು ಮಾಡಲು ಹೋಗಿಲ್ಲ. ಒಂದು ಪರಿಪೂರ್ಣ ಮನರಂಜನೆಯ ಚಿತ್ರಕ್ಕೇ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ತುಂಬಿಸಿರುವುದರಿಂದ ಚಿತ್ರ ಕುತೂಹಲ ಕೆರಳಿಸುತ್ತಾ ಸಾಗುತ್ತದೆ.
ಚಿತ್ರದ ಕಥೆ ಇಂತಿದೆ. ಆವತ್ತು ಜನವರಿ ಇಪ್ಪತ್ತಾರು. ಅಲ್ಲಿನ ಪೋಲೀಸ್ ಸ್ಟೇಷನ್ನಿಗೆ ಕರೆಯೊಂದು ಬರುತ್ತದೆ. ಅದನ್ನು ತೆಗೆದುಕೊಳ್ಳುವ ಪೋಲೀಸ್ ಅಧಿಕಾರಿಗೆ ಅತ್ತಲಿನ ಧ್ವನಿಯೊಂದು ತಾವು ಸಿ.ಬಿ.ಐ.ನವರು, ಈಗ ಒಬ್ಬ ಗಣ್ಯವ್ಯಕ್ತಿಯ ಮನೆಗೆ ದಾಳಿಗೆ ಹೋಗುತ್ತಿದ್ದೇವೆ, ಅದಕ್ಕೆ ಪೋಲೀಸ್ ಸಹಕಾರ ಬೇಕು ಎಂದಾಗ ಪೋಲೀಸ್ ಅಧಿಕಾರಿ ಒಪ್ಪಿಕೊಳ್ಳುತ್ತಾನೆ. ಒಬ್ಬ ಮಂತ್ರಿಯ ಮನೆಗೆ ನುಗ್ಗಿ ದಾಳಿ ನಡೆಸಿ ಅವನಲ್ಲಿದ್ದ ಹಣ, ಚಿನ್ನವನ್ನೆಲ್ಲಾ ದಸ್ತಗಿರಿಮಾಡುವ ಸಿ.ಬಿ.ಐನವರು ವಂಚಕರು ಎಂಬುದು ಆನಂತರ ಗೊತ್ತಾಗುತ್ತದೆ. ಈಗ ಅವರು ದೋಚಿರುವ ಸಂಪತ್ತು ಕಪ್ಪುಹಣವಾದ್ದರಿಂದ ಮಂತ್ರಿ ಅದನ್ನು ಸಾರ್ವಜನಿಕರ ಗಮನಕ್ಕೆ ತರಲು ಮನಸ್ಸುಮಾದುವುದಿಲ್ಲ. ಆದರೆ ಇದರಿಂದಾಗಿ ಪೋಲೀಸ್ ಆಫ಼ೀಸರ್ ಸಸ್ಪೆಂಡ್ ಆಗಬೇಕಾಗಿಬರುತ್ತದೆ. ಆತ ತನಿಖೆ ಮಾಡುತ್ತಾ ಸಾಗಿದಂತೆ ಇದೇ ತರಹದ ನಕಲಿ ದಾಳಿಗಳು ಸುಮಾರು ಕಡೆ ನಡೆದಿರುವುದು ತಿಳಿದುಬರುತ್ತದೆ. ಈ ಕೇಸಿನ ತನಿಖೆಯನ್ನು ನಿಷ್ಠಾವಂತ ದಕ್ಷ ಪೋಲೀಸ್ ಅಧಿಕಾರಿಗೆ ವಹಿಸಲಾಗುತ್ತದೆ.
ಇತ್ತ ವಂಚಕರ ಗುಂಪು ಈ ಸಾರಿ ಅದಕ್ಕಿಂತಲೂ ದೊಡ್ದ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ಆದರೆ ಅದು ಆ ಪೋಲೀಸಗೆ ತಿಳಿಯುತ್ತದೆ. ಅವರನ್ನು ನಕಲಿದಾಳಿ ಮಾಡುತ್ತಿರುವಾಗಲೇ ಹಿಡಿಯಬೇಕೆಂದು ಆ ಅಧಿಕಾರಿ ಪ್ಲಾನ್ ಮಾಡುತ್ತಾನೆ. ಇದಾವುದೂ ಗೊತ್ತಿರದ ಅವರು ತಮ್ಮ ಕಾರ್ಯವನ್ನು ಕೈಗೊಳ್ಳಲು ಮುಂದಾಗುತ್ತಾರೆ. ಮುಂದೆ,,?
ಚಿತ್ರ ಶರವೇಗದಲ್ಲಿ ಸಾಗುತ್ತದೆ. ಕೊನೆಯವರೆಗೂ ತನ್ನ ಕುತೂಹಲವನ್ನು ಉಳಿಸಿಕೊಳ್ಳುವ ಚಿತ್ರ ಕೊನೆಯಲ್ಲಿ ನೋಡುಗನಿಗೆ ಶಾಕ್ ಕೊಡುತ್ತದೆ.
ಚಿತ್ರದಲ್ಲಿನ ಸಂಭಾಷಣೆ ಮತ್ತು  ಚಿತ್ರಕಥೆ ಚಿತ್ರವನ್ನು ಹೆಚ್ಚು ಆಸಕ್ತಿಕರವನ್ನಾಗಿ ಮಾಡಿವೆ. ಅದರಲ್ಲೂ ಎಲ್ಲೂ ಸುಳಿವು ಬಿಟ್ಟುಕೊಡದ ಚಿತ್ರಕಥೆಯೇ ೨೬ರ ಹೈಲೈಟ್. ಹಾಗೆ ಹಿನ್ನೆಲೆ ಸಂಗೀತ ಸಿನಿಮಾದ ಗತಿಗೆ ಸಹಕಾರಿಯಾಗಿದೆ.
ವಂಚಕರ ನಾಯಕನಾಗಿ ಅಕ್ಶಯಕುಮಾರ್ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಗುಂಪಿನ ಸದಸ್ಯನಾಗಿ ಅನುಪಮ್ ಖೇರ್ ರದು ಪಾತ್ರೋಚಿತ ಅಭಿನಯ. ಚಿತ್ರದಲ್ಲಿ ನಮಗಿಷ್ಟವಾಗುವುದು ಮನೋಜ್ ಬಾಜಪೇಯಿ. ದಕ್ಷ ಪೋಲೀಸ್ ಅಧಿಕಾರಿಯಾಗಿ ಕಡಕ್ಕಾಗಿ ಪಾತ್ರ ನಿರ್ವಹಿಸಿದ್ದಾರೆ ಮನೋಜ್. ಹಾಗೆ ಮತ್ತೊಂದು ಮಹತ್ವದ ಪಾತ್ರ ನಿರ್ವಹಿಸಿರುವ ಜಿಮ್ಮಿ ಶೇರ್ ಗಿಲ್ ಕೂಡ ತಮ್ಮ ನಟನೆಯಿಂದಾಗಿ ಗಮನಸೆಳೆಯುತ್ತಾರೆ.
ಎ ವೆಡ್ನೆಸ್ ಡೇ ತರಹದ ಪ್ರಸ್ತುತ ಭಯೋತ್ಪಾದಕ ವಿರೋಧಿ ಥ್ರಿಲ್ಲರ್ ಚಿತ್ರ ನೀಡಿದ್ದ ನೀರಜ್ ಪಾಂಡೆಯವರ ನಿರ್ದೇಶನ ನಿಜಕ್ಕೂ ಅಭಿನಂದನಾರ್ಹ. ಒಮ್ಮೆ ನೋಡಿ ಎಂದು ಧೈರ್ಯವಾಗಿ ಶಿಫ಼ಾರಸ್ಸು ಮಾಡಬಹುದಾದ ಚಿತ್ರ ಸ್ಪೆಶಲ್ 26