Monday, October 21, 2013

ನೈರೋಬಿಯಲ್ಲಿ ಬದುಕುವುದೆಂದರೆ...

ಅವನನ್ನುತ್ತಾನೆ ನಾನು ನೈರೋಬಿಗೆ ಹೋಗುತ್ತೇನೆ, ಸಿನೆಮಾದಲ್ಲಿ ಅಭಿನಯಿಸುತ್ತೇನೆ..ಬೇಡಪ್ಪ..ನೈರೋಬಿಯೆಂದರೆ ಕಳ್ಳ ಕಾಕರ, ಮೋಸಗಾರರ ತವರು ನೀನಲ್ಲಿ ಹೋದರೆ ನೀನು ನೀನಾಗಿ ಇರುವುದಕ್ಕೆ ಸಾಧ್ಯವಾಗುವುದೇ ಇಲ್ಲ ಎಂಬ ಉತ್ತರ ಬರುತ್ತದೆ. ಆದರೂ ಅವನು ಮಾತ್ರ ನೈರೋಬಿಯಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಲೇಬೇಕೆಂದು ನಿರ್ಧರಿಸಿಬಿಡುತ್ತಾನೆ.ಇರುವ ಊರಲ್ಲಿ ಡಿವಿಡಿಗಳನ್ನ ಮನೆಮನೆಗೆ ಸರಬರಾಜು ಮಾಡುವ ಕೆಲಸ ಅವನದು. ಅದವನ ಇಷ್ಟದ ಕೆಲಸವಾದ್ದರಿಂದ ಅದರಲ್ಲಿ ಅಷ್ಟಾಗಿ ಹಣವಿಲ್ಲದಿದ್ದರೂ ಖುಷಿಯಿದೆ. ಊರಲ್ಲಿ ತಾನು ನೋಡಿದ ಚಿತ್ರಗಳ ಮುಖ್ಯ ಪಾತ್ರಗಳ ಅಭಿನಯವನ್ನು ಅನುಕರಣೆ ಮಾಡಿ ತೋರಿಸುತ್ತಾನೆ. ಹಾಗಾಗಿಯೇ ಅವನನ್ನು ಕಂಡರೆ ಎಲ್ಲರಿಗೂ ಖುಷಿ. 
ಅದೊಂದು ದಿನ ತನ್ನ ಸಂಬಂಧಿಯಿಂದ ನೆರವು ಪಡೆದು ನೈರೋಬಿಗೆ ಹೊರಟುನಿಲ್ಲುತ್ತಾನೆ.
ಆದರೆ ನೈರೋಬಿ ಅವನು ಪಾದಾರ್ಪಣೆ ಮಾಡಿದ ತಕ್ಷಣ ತನ್ನ ಕರಾಳ ಮುಖವನ್ನು ತೋರಿಸಿಬಿಡುತ್ತದೆ.ತನ್ನ ಊರಿನ ಬಸ್ಸಿನಿಂದ ಇಳಿದವನನ್ನು ನಾಲ್ಕು ಜನರ ಗುಂಪೊಂದು ಅಮಾನುಷವಾಗಿ ದೋಚುತ್ತದೆ. ಅಲ್ಲಿಂದ ಹೇಗೋ ನಡೆದುಬರುತ್ತಿದ್ದಾಗ ಪೋಲಿಸರು ವಿನಾಕಾರಣ ಹಿಡಿದುಕೊಂಡು ಹೋಗಿ ಅತ್ಯಂತ ಕೆಟ್ಟದಾದ ಕೊಳಕಾದ ಜೈಲಿಗೆ ಹಾಕಿಬಿಡುತ್ತಾರೆ. ಅಲ್ಲಿಗೆ ಅವನಿಗೆ ನೈರೋಬಿಯ ಕರಾಳ ಮುಖದ ಪರಿಚಯವಾಗುತ್ತದೆ.
ಮುಂದೆ ಆತ ನಟನಾಗುತ್ತಾನಾ?
ಅಥವಾ ತನ್ನ ಕನಸುಗಳನ್ನು ಮೂಟೆ ಕಟ್ಟಿಟ್ಟು ಬೇರೆ ದಾರಿ ಹಿಡಿಯುತ್ತಾನ?
2012ರಲ್ಲಿ ಬಿಡುಗಡೆಯಾದ ನೈರೋಬಿ ಹಾಫ್ ಲೈಫ್ ಚಿತ್ರದ ಕಥೆ ಇದು. ಈಗಾಗಲೇ ನೀವು ಮೊರೆಲ್ಲಿ ಫೆರ್ನಾಂಡಿಸ್ ನ ಸಿಟಿ ಆಫ್ ಗಾಡ್ ನೋಡಿದ್ದರೆ ಈ ಚಿತ್ರ ಕೂಡ ನಿಮಗೆ ಇಷ್ಟವಾಗುತ್ತದೆ. ಅಷ್ಟೇ ಅಲ್ಲ. ಮನಕಲಕುತ್ತದೆ. ಚಿತ್ರದ ಕಥೆಯಲ್ಲೇನೋ ಮಹತ್ವದ್ದು ಹೊಸತನವಿಲ್ಲ. ಆದರೆ ನಿರ್ದೇಶಕ ಹೇಳಬೇಕಾದ್ದನ್ನು ನಾಯಕನ ಕೈಯಲ್ಲಿ ಕೊನೆಯ ದೃಶ್ಯದಲ್ಲಿ ಹೇಳಿಸುತ್ತಾನೆ. ಅಲ್ಲಿನ ಸಂಭಾಷಣೆ ಇಡೀ ಚಿತ್ರದ ಕಥೆಯನ್ನು ಹೇಳುತ್ತದೆ. ಜೊತೆಗೆ ಕೀನ್ಯಾವನ್ನು ತೆರೆದು ನಮ್ಮ ಮುಂದಿಡುತ್ತದೆ.
ಚಿತ್ರ ಇಷ್ಟವಾಗುವುದು ಚಿತ್ರದಲ್ಲಿನ ಪಾತ್ರಧಾರಿಗಳ ಅಭಿನಯದಿಂದಾಗಿ. ಜೋಸೆಫ್ ವೈರಮು ಹೆಸರಿನ ಆ ಹುಡುಗನ ಅಭಿನಯ ನಮ್ಮನ್ನು ನಿಜವಾದ ಕನಸುಗಾರನ ಲೋಕಕ್ಕೆ ಕರೆದೊಯ್ಯುತ್ತದೆ. ಹಾಗೆಯೇ ಹತಾಶೆಗಳನ್ನೂ ಆತ ಮೆಟ್ಟಿ ನಿಲ್ಲುವ ರೀತಿ ನಮಗೆ ಸ್ಫೂರ್ತಿದಾಯಕ ಎನಿಸುತ್ತದೆ.
ಜೈಲಿನಲ್ಲಿ ಕೊಳಕಾದ ಶೌಚಾಲಯವನ್ನು ತೊಳೆಯ ಬೇಕಾಗಿ ಬಂದಾಗ ಅಲ್ಲೇ ವಾಂತಿ ಮಾಡಿಕೊಳ್ಳುವ ಆನಂತರ ಅಲ್ಲೇ ಅದನ್ನು ಮರೆತು ಜೋರಾಗಿ ಹಾಡಿಕೊಳ್ಳುತ್ತಾ ಸ್ವಚ್ಚಮಾಡುವ ದೃಶ್ಯ ನಿಜಕ್ಕೂ ಆತನ ಇಡೀ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತದೆ. ಆ ಕ್ಷಣಕ್ಕೆ ಆ ಸಂದರ್ಭಕ್ಕೆ ಆತ ಹಿಂದಡಿಯಿಕ್ಕಿದರೂ ಮರುಕ್ಷಣದಲ್ಲೇ ಅದನ್ನು ಸ್ವೀಕರಿಸುವ ಅದಕ್ಕೆ ಹೊಂದಿಕೆಯಾಗುವ ಅವನ ಗುಣ ಹಿಡಿಸುತ್ತದೆ ಅಷ್ಟೇ ಅಲ್ಲ. ಅವನ ಅಸಹಾಯಕತೆಯನ್ನು ಎತ್ತಿ ಹಿಡಿಯುತ್ತದೆ.ಸ್ವಾಹಿಲಿ ಭಾಷೆಯಲ್ಲಿರುವ ಈ ಚಿತ್ರವನ್ನು ಆರಾಮವಾಗಿ ನೋಡಲೇಬೇಕಾದ ಚಿತ್ರಗಳ ಪಟ್ಟಿಯಲ್ಲಿ ಸೇರಿಸಬಹುದು.


Saturday, October 19, 2013

ಅದಲಾಲ್ ಕಾದಲ್ ಸೇವೀರ್...



ಅದೊಂದು ಕಾಲೇಜು. ಅಲ್ಲೊಂದಷ್ಟು ಹುಡುಗಿ, ಹುಡುಗರು. ಆ ವಯಸ್ಸಿನಲ್ಲಿ ಇರಬಹುದಾದ ಕುತೂಹಲ ಚೆಲ್ಲಾಟ ಮೊಂಡಾಟ ಎಲ್ಲವೂ ಇದೆ. ಅಂತ ಹುಡುಗರ ಪೈಕಿ ಕಾರ್ತಿಕ್ ಇದ್ದಾನೆ. ಅದೇ ಗೆಳೆಯರ ಗುಂಪಲ್ಲಿ ಶ್ವೇತಾ ಇದ್ದಾಳೆ. ಅವರಿಬ್ಬರೂ ಪ್ರೀತಿಸುತ್ತಾರೆ. ಒಂದಷ್ಟು ಕದ್ದು ಮುಚ್ಚಿ ಓಡಾಡುತ್ತಾರೆ. ಆನಂತರ ಅದೊಂದು ದಿನ ತಮ್ಮ ವಯಸಿನ ಬಿಸಿಯಲ್ಲಿ ನಡೆಯಬಾರದ್ದು ನಡೆದುಹೋಗುತ್ತದೆ. ಮುಂದೆ..ಸುಮಾರು ವರ್ಷಗಳ ಹಿಂದೆ ತೇಜಾ ನಿರ್ದೇಶನದ ಚಿತ್ರಂ ಕಥೆಯಿದ್ದ ಹಾಗಿದೆ ಎಂದರೆ ಅದಕ್ಕೂ ಅರ್ಧ ಡಜನ್ ಇದೆ ರೀತಿಯ ಕಥೆಯಿರುವ ಸಿನಿಮಾಗಳನ್ನು ಹೇಳಿಬಿಡಬಹುದು. ಆದರೆ ನಿರ್ದೇಶಕ ಸುಸೀಂದ್ರನ್  ನಿರ್ದೇಶನದ ಅದಲಾಲ್ ಕಾದ ಸೇಯ್ವೀರ್ ಚಿತ್ರದ ಅದರ ಅತ್ಯುತ್ತಮ ಅಂತ್ಯದಿಂದಾಗಿ ನೋಡಿದ ಸುಮಾರು ಹೊತ್ತು ಮನಸ್ಸಿನಲ್ಲಿ ಉಳಿಯುತ್ತದೆ. ಇಷ್ಟು ಚಿಕ್ಕ ಕಥೆಯನ್ನು ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದೋ, ಕಥೆಯೇನೋ ಚೆನ್ನಾಗಿದೆ, ಆದರೆ ಇದು ಸಿನಿಮಾಕ್ಕೆ ಸರಿಬರುವುದಿಲ್ಲ ಎಂಬಂತಹ ಮಾತುಗಳನ್ನು ನೀವು ನಮ್ಮಲ್ಲಿ ಕೇಳಬಹುದು.ಆದರೆ ಅಂತಹ ಕಥೆಗಳನ್ನು ಸಿನಿಮಾ ರೂಪಕ್ಕೆ ತಂದು ಸೈ ಎನಿಸಿಕೊಳ್ಳುವುದರಲ್ಲಿ ತಮಿಳರದು ಎತ್ತಿದ ಕೈ. ಅವರು ಒಂದು ಕಥೆ ಇಟ್ಟುಕೊಂಡರೆ ಅದಕ್ಕೆ ತಕ್ಕಂತೆ ಚಿತ್ರಕಥೆ ಹೆಣೆಯುತ್ತಾ ಸಾಗುತ್ತಾರೆಯೇ ಹೊರತು ಅದರಲ್ಲಿ ಬಲವಂತವಾಗಿ ಮನರಂಜನಾ ಅಂಶಗಳನ್ನು ತುರುಕುವುದಕ್ಕೆ ಹೋಗುವುದಿಲ್ಲ. ಹಾಗಂತ ತೀರಾ ಪ್ರಯೋಗವನ್ನೂ ಮಾಡುವುದಿಲ್ಲ. ಕಥೆಯ ನೆಲೆಗಟ್ಟಿನಲ್ಲಿ ನಡೆಯಬಹುದಾದ ವಾಸ್ತವಿಕ ಅಂಶಗಳನ್ನು ಜೋಡಿಸುತ್ತಾ ಸಾಗುತ್ತಾರೆ. ನಾನು ಗಮನಸಿದ ಹಾಗೆ ನಮ್ಮಲ್ಲಿ ಅದು ಸ್ವಲ್ಪ ಕಡಿಮೆ. ಉದಾಹರಣೆಗೆ ಈ ಚಿತ್ರವನ್ನೇ ತೆಗೆದುಕೊಳ್ಳಿ. ಇದು ಕೇವಲ ಒಂದು ಘಂಟೆ ಮೂವತ್ತು ನಿಮಿಷಗಳ ಚಿತ್ರ. ಒಂದು ಸಿನಿಮಾ ಅದೂ ಹಾಡುಗಳಿರುವ ಪ್ರೇಮ ಕಥೆ ಕೇವಲ ಒಂದೂವರೆ ಘಂಟೆ ಎಂಬುದನ್ನು ಊಹಿಸುವುದು ನಮ್ಮಲ್ಲಿ ಕಷ್ಟ. ಹೇಳಿಕೊಳ್ಳುವಂತಹ ನಾಯಕ –ನಾಯಕಿ ಇಲ್ಲ. ಆದರೆ ಕಥೆ ಮತ್ತು ಚಿತ್ರಕಥೆ ನಿಮ್ಮನ್ನು ಕುರ್ಚಿಗೆ ಅಂಟಿಸಿ ಕೂರಿಸಿಬಿಡುತ್ತದೆ. ಕೊನೆಯ ದೃಶ್ಯವಂತೂ ನಿಮ್ಮ ಕಣ್ಣಲ್ಲಿ ಒಂದು ಹನಿ ನೀರು ತರಿಸಿಬಿಡುತ್ತದೆ. ಹಾಗಂತ ಇದು ದುರಂತಮಯ ಚಿತ್ರವಲ್ಲ. ನಾಯಕ –ನಾಯಕಿ ಕೊನೆಯಲ್ಲಿ ಸುಖವಾಗಿಯೇ ಇರುತ್ತಾರೆ..ಆದರೂ..ಏನು ಎಂಬ ಪ್ರಶ್ನೆಗೆ ಉತ್ತರ ಬೇಕಾದಲ್ಲಿ ನೀವೇ ಒಮ್ಮೆ ಈ ಸಿನೆಮಾ ನೋಡಿಬಿಡಿ..ಅಥವಾ ಕಾಯಿರಿ. ಯಾರಾದರೂ ಕನ್ನಡದ ಪುಣ್ಯಾತ್ಮರು ಇದನ್ನು ರೀಮೇಕ್ ಮಾಡಿದರೂ ಮಾಡಬಹುದು.ನಿರ್ದೇಶಕ ಸುಶೀಂದ್ರನ್ ಸಣ್ಣಕಥೆಯಾಧಾರಿತ ಚಿಕ್ಕ ಬಜೆಟ್ಟಿನ ಪರಿಣಾಮಕಾರಿ ಚಿತ್ರಕಥೆಯ ಚಿತ್ರಗಳಿಗೆ ಹೆಸರುವಾಸಿಯಾದವರು. ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಹೊತ್ತಿರುವ ಈ ಯುವ ನಿರ್ದೇಶಕರು ಪ್ರಯೋಗಗಳಿಗಿಂತ ಹೆಚ್ಚಾಗಿ ಉತ್ತಮ ಮನಮಿಡಿಯುವ ಕಥೆಗಳಿಗೆ ಹೆಸರುವಾಸಿಯಾದವರು. ಇವರು ನಿರ್ದೇಶನದ ವೆನಿಲ್ಲಾ ಕಬಡ್ಡಿಕುಳಂ ಕಬಡ್ಡಿ ಕ್ರೀಡೆಯ ಬಗ್ಗೆ ಬಂದಂತಹ ಅತ್ಯುತ್ತಮ ಚಿತ್ರ. ಅದಾದ ನಂತರ ಅಳಗಿರಿಸಾಮಿಯನ್ ಕುದುರೈ ಪ್ರಶಸ್ತಿ ವಿಜೇತ ಸಣ್ಣ ಕಥೆಯಾಧಾರಿತ ಚಿತ್ರ. 

Thursday, October 17, 2013

ಒಂದೆ ಕಥೆ..ಎರಡು ಸಿನೆಮಾಗಳು

 ರೋಲಂಡ್ ಎಂರಿಚ್ ನಿಮಗೆ ಗೊತ್ತಿರಬಹುದು. ದೃಶ್ಯ ವೈಭವದ ಅಂದರೆ ಗ್ರಾಫಿಕ್ಸ್ ಹೊಂದಿದ ಚಿತ್ರಗಳನ್ನು ನಿರ್ದೇಶನ ಮಾಡುವುದರಲ್ಲಿ ಮತ್ತು ವಿನಾಶಕಾರಿ, ಧ್ವಂಸಾತ್ಮಕ ಕಥೆಯ ಚಿತ್ರಗಳೆಂದರೆ ರೋಲಂಡ್ ಖುಷಿಯೇನೋ? ಆತನ ಚಿತ್ರಗಳನ್ನು ಒಮ್ಮೆ ಗಮನಿಸಿ.ಗಾಡ್ಜಿಲ್ಲಾ, 2012, ಇಂಡಿಪೆಂಡೆನ್ಸ್ ಡೇ,ದಿ ಡೇ ಆಫ್ಟರ್ ಟುಮಾರೋ,ಮೂನ್ 44, ..ಹೀಗೆ. ಹೆಚ್ಚು ಎಲ್ಲಾ ಚಿತ್ರಗಳಲ್ಲೂ ಆತನ ತಾಂತ್ರಿಕ ಕೌಶಲವನ್ನು ನಾವು ಕಾಣಬಹುದು. ಆತನ ನಿರ್ದೇಶನದಲ್ಲಿ ಈ ವರ್ಷ ಬಿಡುಗಡೆಯಾದ ಚಿತ್ರ ವೈಟ್ ಹೌಸ್ ಡೌನ್. ಇದು ಹೆಸರೇ ಸೂಚಿಸುವಂತೆ ಉಗ್ರಗಾಮಿಗಳು ವೈಟ್ ಹೌಸ್ ಅನ್ನು ಮುತ್ತಿಗೆ ಹಾಕುವುದು, ನಾಯಕ ಹೋರಾಡಿ ಅಲ್ಲಿನ ಪ್ರಧಾನಿಯನ್ನು ಉಳಿಸುವುದು ಇಷ್ಟೇ ಕಥೆ. ಆಶ್ಚರ್ಯದ ಸಂಗತಿಯೆಂದರೆ ಇದೆ ವರ್ಷ ಬಿಡುಗಡೆಯಾದ ಒಲಿಂಪಸ್ ಹ್ಯಾಸ್ ಫಾಲನ್ ಚಿತ್ರದ ಕಥೆಯೂ ಇದೆ. ವ್ಯತ್ಯಾಸವೇನೆಂದರೆ ಮಗಳನ್ನು ಸಂಸತ್ತು ಭವನಕ್ಕೆ ಕರೆದುಕೊಂಡು ಬರುವ ನಾಯಕ ಅನಿರೀಕ್ಷಿತವಾಗಿ ಉಗ್ರಗಾಮಿಗಳ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಒಲಿಂಪಸ್ ಚಿತ್ರದಲ್ಲಿ ನಾಯಕ ಅಪಘಾತದಲ್ಲಿ ಪ್ರೆಸಿಡೆಂಟ್ ಪತ್ನಿಯನ್ನು ಉಳಿಸಲು ಸಾಧ್ಯವಾಗದಿದ್ದಾಗ ಆ ಕೆಲಸಕ್ಕೆ ರಾಜಿನಾಮೆ ನೀಡಿರುತ್ತಾನೆ.ಚಿತ್ರದ ಕಥೆ, ನಿರೂಪಣೆ ಎರಡೂ ಒಂದೆ ಆಗಿವೆ. ಹಾಗೆಯೇ ಸಾಹಸಮಯ ದೃಶ್ಯಗಳು. ಆದರೆ ಆಂಟೊನಿ ಫುಕುಅ ನಿರ್ದೇಶನದ ಒಲಿಂಪಸ್ ಹ್ಯಾಸ್ ಫಾಲನ್ ಚಿತ್ರದ ವೇಗ ಚೆನ್ನಾಗಿದೆ. ಕೇವಲ ಒಂದೂವರೆ ಗಂಟೆಗಳ ಈ ಚಿತ್ರದ ಚಿತ್ರಕಥೆ ಶರವೇಗದಲ್ಲಿ ಸಾಗುತ್ತದೆ.ನಿರ್ದೇಶಕ ಅಂತೋಣಿ ಫುಕಾ ಈ ಹಿಂದೆ ಶೂಟರ್ ಚಿತ್ರವನ್ನು ನಿರ್ದೇಶನ ಮಾಡಿದವನು.ಹಾಗೆಯೇ ನಾಯಕನಾಗಿ ಅಭಿನಯಿಸಿರುವ ಗೆರಾರ್ಡ್ ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾನೆ. ಆದರೆ ಎರಡು ಘಂಟೆ ಇಪ್ಪತ್ತು ನಿಮಿಷದ ವೈಟ್ ಹೌಸ್ ಡೌನ್ ಅಲ್ಲಲ್ಲಿ ಬೋರ್ ಹೊಡೆಸುತ್ತದೆ. ಅದಕ್ಕೆ ಕಾರಣ ಚಿತ್ರದ ಉದ್ದ ಎನ್ನಬಹುದು.
ಆದರೆ ಆಕಾಶದಲ್ಲಿ ವಿಮಾನ ಹತ್ತಿ ಉರಿಯುವುದು, ಹೆಲಿಕ್ಯಾಪ್ಟರ್ ಬೆಂಕಿಗೆ ಸಿಕ್ಕಿ ನೆಲಕ್ಕೆ ಬೀಳುವುದು ಮುಂತಾದವುಗಳು ವೈಟ್ ಹೌಸ್ ನ ಮುಖ್ಯಾಂಶಗಳು ಎನ್ನಬಹುದು. ಅದೇ ರೀತಿ ಒಲಿಂಪಸ್ ಚಿತ್ರದಲ್ಲೂ ಕೋರಿಯನ್ ಉಗ್ರರು ದಾಳಿ ಮಾಡುವ ಶೈಲಿ ಅದನ್ನು ನಾಯಕನೋಬ್ಬನೆ ಬೇಧಿಸುತ್ತಾ ಹೋಗುವುದು ಕನ್ನಡದ ನಿಷ್ಕರ್ಷ ಚಿತ್ರವನ್ನು ನೆನಪಿಸದೇ ಇರದು.
ಒಟ್ಟಿನಲ್ಲಿ ಒಂದೆ ವರ್ಷದಲ್ಲಿ ತಿಂಗಳುಗಳ ಅಂತರದಲ್ಲಿ ಒಂದೆ ಕಥೆಯ ಎರಡು ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಒಲಿಂಪಸ್ ಕೊಡುವ ಮಜಾವನ್ನು ವೈಟ್ ಕೊಡುವುದಿಲ್ಲ. ಟೈಮ್ ಪಾಸ್ ಗೆ ಸಾಹಸಪ್ರಿಯರು ನೋಡಬಹುದಾದ ಚಿತ್ರಗಳು ಇವು ಎನ್ನಲಡ್ಡಿಯಿಲ್ಲ.

Wednesday, October 16, 2013

45 ದಿನಗಳ ರಹಸ್ಯ.

ಕಲಿತ ವಿದ್ಯೆಯನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ. ನಾನು ಬಾಕ್ಸಿಂಗ್ ಬಿಟ್ಟು ವರ್ಷಗಳೇ ಕಳೆದಿವೆ. ಆದರೂ ರಿಂಗ್ ಒಳಗೆ ನಿಂತಾಕ್ಷಣ ನನಗೆ ಆಟದ ಸುಲಿಹುಗಳು ನಿಚ್ಚಳವಾಗುತ್ತಾ ಹೋದವು. ಕೇವಲ ನಿಮಿಷಗಳಲ್ಲಿ ನಾನು ಅದೆಷ್ಟು ಸಿದ್ಧನಾಗಿದ್ದೆನೆಂದರೆ ಆ ತಕ್ಷಣಕ್ಕೆ ಹೊಡೆದಾಡಲು ಸಿದ್ಧನಿದ್ದೆ.
ಆದರೆ ಹೊಡೆದಾಟವಿದ್ದದ್ದು ಮಾರನೆಯ ದಿನ. ನನಗೆ ಮತ್ತೆ ಇದೆ ಹೋರಾಟಕ್ಕಿಳಿಯಲು ಸುತಾರಾಂ ಇಷ್ಟವಿರಲಿಲ್ಲ.ಯಾಕೆಂದರೆ ಆಟದಲ್ಲಿ ಮೋಸವಿತ್ತು. ಅದೊಂದು ಮನರಂಜನೆಯಿಂದ ದಂಧೆಯ ರೂಪ ತಾಳಿತ್ತು. ಯಾರು ಸೋಲಬೇಕು ಯಾರು ಗೆಲ್ಲಬೇಕು ಎಂಬುದು ಮೊದಲೇ ನಿಶ್ಚಯವಾಗಿಬಿಡುತ್ತಿತ್ತು. ನನಗೆ ಆಟವನ್ನು ಮುಂದುವರಿಸದೆ ಇರಲು ಕಾರಣವಾದದ್ದು ಇದೆ. ಆದರೆ ಮಂಗಳೂರು ಬಿಟ್ಟು ಬಾಂಬೆಗೆ ಬಂದದ್ದು ನಾನು ಹಣ ಮಾಡುವುದಕ್ಕೆ. ಆದರೆ ಬರುತ್ತಲೇ ಇಲ್ಲಿ ಸಿಕ್ಕಿ ಕೊಂಡಿದ್ದೆ. ಪತ್ತರ್ ಕೈಗೆ. ಹೋಟೆಲ್ಲಿನಲ್ಲಿ ನಡೆದ ಚಿಕ್ಕ ಹೊಡೆದಾಟದಲ್ಲಿ ಪತ್ತರ್ ಕಡೆಯವನಿಗೆ ಮಣ್ಣು ಮುಕ್ಕಿಸಿದ್ದೆ. ಆದರೆ ಆತ ನಾಳೆ ನಡೆಯಬೇಕಾಗಿದ್ದ ಬಾಕ್ಸಿಂಗ್ ನಲ್ಲಿ ಪತ್ತರ್ ಗೆ ವಿರುದ್ಧವಾಗಿ ಪತ್ತರ್ ಕಡೆಯ ಶಿವನ ಜೊತೆಗೆ ಹೊಡೆದಾಡಬೇಕಾಗಿತ್ತು. ಆದರೆ ನಾನವನಿಗೆ ಅದೇಗೆ ಭಾರಿಸಿದ್ದೆ ಎಂದರೆ ಆತ ಹುಷಾರಾಗಿ ಓಡಾಡಲು ಕನಿಷ್ಟ ಒಂದು ತಿಂಗಳಾದರೂ ಬೇಕಿತ್ತು. ನನ್ನನ್ನು ವಿಚಾರಿಸಿಕೊಳ್ಳಲು ಬಂದ ಪತ್ತರ್ ಗೆ ನಾನು ಹಳೆಯ ಬಾಕ್ಸಿಂಗ್ ಪಟು ಎಂಬುದು ಗೊತ್ತಾದದ್ದೇ ನಾಳಿನ ಆಟದಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದ. ಹೇಳಿದ್ದ ಅಲ್ಲ ಆದೇಶಿಸಿದ್ದ. ಅವನಾಡಿದ ಮಾತುಗಳು ಹೀಗಿತ್ತು. ' ನೋಡು ಮರಿ,...ನಾಳೆ ನೀನು ಅವನ ಜೊತೆ ಆಡಬೇಕು. ಎರಡು ರೌಂಡ್ ಗೆಲ್ಲಬೇಕು..ಮೂರನೆಯ ರೌಂಡ್ ಸೋಲಬೇಕು. ಅಷ್ಟೇ..ಇದು ನಡೀಬೇಕು. ನೀನು ಆಗಲ್ಲ, ಸೋಲಲ್ಲ ಅನ್ನೋ ಹಾಗೆ ಇಲ್ಲ...ಆಮೇಲೆ ಪೋಲಿಸ್ ಅಂತೆಲ್ಲಾ ಹೋಗೋ ಹಾಗೂ ಇಲ್ಲ. ಈಗಾಗಲೇ ನಾನು ಲಕ್ಷಾಂತರ ಹಣಾನ ಅದರಲ್ಲಿ ಕಟ್ಟಿದ್ದೀನಿ. ನಾನು ಹೇಳಿದ್ದು ನಡೀದೆ ಹೋದರೆ ನನಗೆ ದೊಡ್ಡ ನಷ್ಟ ಆಗುತ್ತೆ..ನಿನ್ನ ಪ್ರಾಣ ಹೋಗುತ್ತೆ...' ಎಂದಿದ್ದ ಮತ್ತು ನನ್ನ ಪ್ರತಿಕ್ರಿಯೆಗೂ ಕಾಯದೆ ಹೊರಟುಹೋಗಿದ್ದ.
ನಾನು ತಪ್ಪಿಸಿಕೊಳ್ಳುವ ಯಾವ ಅವಕಾಶವೂ ಇರಲಿಲ್ಲ.
*************    ***********
ನನ್ನ ಎದುರಾಳಿ ಶಿವ ದೈತ್ಯ ದೇಹಿ. ಆಮೇಲೆ ಅವನಿಗೂ ಆಟ ಏನು ನಡೆಯುತ್ತದೆ ಎಂಬುದು ಗೊತ್ತಿತ್ತು. ಅವನು ಎರಡು ಸುತ್ತಿನಲ್ಲಿ ಸೋಲಲೇ ಬೇಕಿತ್ತು. ಮೂರದರಲ್ಲಿ ಗೆಲ್ಲಬೇಕಿತ್ತು. ಅಕಸ್ಮಾತ್ ನಾನು ಸೋಲದೆ, ಗೆಲ್ಲಲು ಪ್ರಯತ್ನಿಸಿದರೆ ನನ್ನನ್ನು ಮುಗಿಸುವಂತೆ ಪತ್ತರ್ ಆದೇಶ ಹೊರಡಿಸಿದ್ದು ನನಗೂ ಗೊತ್ತಿತ್ತು.
ಬಾಕ್ಸಿಂಗ್ ನೋಡಲು ಜನ ಕಿಕ್ಕಿರಿದು ನಿಂತಿದ್ದರು. ಅವರ ಕೇಕೆ ಬೊಬ್ಬೆ ಮುಗಿಲು ಮುಟ್ಟಿತ್ತು. ಹೊಸಬನೊಬ್ಬ ಶಿವನ ಜೊತೆ ಆಡುತ್ತಿದ್ದಾನೆ ಎನ್ನುವುದು ಹಲವರಲ್ಲಿ ರೋಮಾಂಚನ ಉಂಟು ಮಾಡಿತ್ತು. ನಾನು ಮಾತ್ರ ಇನ್ನೂ ಯೋಚಿಸುತ್ತಲೇ ಇದ್ದೆ. ಆಟವಾದಲೇ ಬೇಕಾದಾಗ ನನ್ನನ್ನು ನಾನು ಮರೆತುಬಿಡುತಿದ್ದೆ. ಹಾಗೇನಾದರೂ ಆದರೆ ಈವತ್ತಿಗೆ ನನ್ನ ಕಥೆ ಮುಗಿಯುತ್ತಿತ್ತು. ನಾನು ಸುತ್ತಲೂ ನೋಡಿದೆ. ಮುಗ್ಧ ಜನರು ತಾವುದುಡಿದಿದ್ದನ್ನು ತಂದು ಆಟಕ್ಕೆ ಕಟ್ಟಿದ್ದರು. ಆದರೆ ಆ ಪತ್ತರ್ ತಾನು ದೋಚಿದ ಹಣವನ್ನು ಕಟ್ಟಿದ್ದ. ಅವನಿಗೆ ಹೆದರಿ ನಾನು ಸೋಲಬೇಕಾ? ನನ್ನೊಬ್ಬನ ಸೋಲಿನಲ್ಲಿ ಇಷ್ಟು ಜನರ ಸೋಲೂ ಇದೆಯಲ್ಲ ಎನಿಸದಿರಲಿಲ್ಲ.
ಆಟ ಶುರುವಾಯಿತು. ನಾನುಸುಮ್ಮನೆ ಪ್ರೇಕ್ಷಕರತ್ತ ನೋಡಿದೆ ಅಷ್ಟೇ. ಅಲ್ಲಿದ್ದಳು ಆ ಸುಂದರಿ. ನೇರವಾಗಿ ಸ್ವರ್ಗದಿಂದ ಧರೆಗೆ ಇಳಿದು ಬಂದಿರುವ ಸುಂದರಿ ಅಪ್ಸರೆ..ಅಷ್ಟು ಜನರಲ್ಲಿ ಅವಳ ಸೌಂದರ್ಯ ಎದ್ದು ಕಾಣುತ್ತಿತ್ತು. ಅವಳೂ ನನ್ನ ಕಡೆಗೆ ನೋಡುತ್ತಿದ್ದಳು. ನಾನೂ ಅವಳನ್ನು ದಿಟ್ಟಿಸಿದೆ. ನೀನು ಗೆಲ್ಲಲೇ ಬೇಕು ಎಂಬಂತೆ ಕೈ ಆಡಿಸಿದಳು. ಅಲ್ಲಿಗೆ ನಾನು ಎಲ್ಲೋ ಕಳೆದುಹೋಗಿದ್ದೆ. ಪತ್ತರ್ ಮರೆತು ಹೋಗಿದ್ದ.
ಆಟ ಶುರುವಾಯಿತು. ಮೂರು ಸುತ್ತಿನಲ್ಲಿ ಶಿವನನ್ನು ಹೊಡೆದು ಬೀಸಾಕಿದೆ. ಆತನ ಮೂಗಿನ ನಟ್ಟಿ ಹರಿದು ರಕ್ತ ಚಿಮ್ಮಿತ್ತು. ಕಣ್ಣ ಸುತ್ತ ಕಪ್ಪಾಗಿತ್ತು. ಮೂರನೆಯ ಸುತ್ತಿನ ಕೊನೆಯ ಪಂಚ್ ಗೆ ಅವನು ಬಿದ್ದದ್ದು ಹೇಗಿತ್ತೆಂದರೆ ಯಾವುದೋ ಆನೆ ಕುಸಿದುಬಿದ್ದ ಹಾಗಿತ್ತು. ಸುತ್ತಲೂ ನೋಡಿದೆ.ರೆಫಾರಿ ಬಂದು ನನ್ನ ಕೈ ಎತ್ತಿ ಗೆಲುವಿನ ಘೋಷಣೆ ಮಾಡುತ್ತಿದ್ದ. ನನ್ನ ಕಣ್ಣು ಅವಳನ್ನು ಹುಡುಕುತ್ತಿತ್ತು. ಆದರೆ ಪತ್ತರ್ ತನ್ನ ಕಡೆಯವರ ಜೊತೆ ಕೆಂಡಾಮಂಡಲವಾಗಿ ನಿಂತಿದ್ದ. ಜನರೆಲ್ಲರೂ ಅಲ್ಲಿಂದ ಹೋಗುವುದನ್ನೇ ಕಾಯುತ್ತಿದ್ದ.ಅಲ್ಲಿಂದ ಅವನ ಕೈಯಿಂದ ತಪ್ಪಿಸಿಕೊಳ್ಳಲು ನನಗೆ ಅಷ್ಟು ಮಾತ್ರದ ಸಮಯವಿತ್ತು.ಆದರೆ ನನ್ನ ಮುಂದೆ ಇದ್ದದ್ದು ಇನ್ನೂ ಒಂದು ಪ್ರಶ್ನೆ ? ತಪ್ಪಿಸಿಕೊಂಡು ಹೋಗುವುದಾದರೂ ಎಲ್ಲಿಗೆ? ಯಾಕೆಂದರೆ ಈಗಾಗಲೇ ನನ್ನ ಜಾಗದಿಂದ ಕಿಲೋಮೀಟರುಗಳವರೆಗೆ ಪತ್ತರ್ ತನ್ನ ಕಾವಲನ್ನು, ನನ್ನನ್ನು ಬೇಟೆಯಾಡಲು ಜನರನ್ನು ಬಿಟ್ಟಿರುವ ಸಾಧ್ಯತೆ ಇತ್ತು.
ನಾನು ಇನ್ನೂ ಡ್ರೆಸ್ಸಿಂಗ್ ರೂಮಲ್ಲಿದ್ದೆ. ತುಂಬ ಜನ ಅಭಿಮಾನಿಗಳು ಬಂದು ಕೈಕುಲುಕಿ ಪ್ರಶಂಸಿಸಿ ಹೋಗುತ್ತಿದ್ದರು. ವರ್ಷಗಳೇ ಕಳೆದ ಮೇಲೆ ಪ್ರಪ್ರಥಮ ಬಾರಿಗೆ ಪತ್ತರ್ ಕಡೆಯವನೊಬ್ಬ ಸೋತಿದ್ದ. ಮಣ್ಣು ಮುಕ್ಕಿದ್ದ. ಅದೇ ನನ್ನನ್ನು ಹೀರೋನನ್ನಾಗಿ ಮಾಡಿತ್ತು. ಅವರು ತಾವು ಕಟ್ಟಿದ್ದ ಚೂರುಪಾರು ಹಣ ಗೆದ್ದಿದ್ದಕ್ಕೆ ಸಂತೋಷ ಪಡುತ್ತಿರಲಿಲ್ಲ. ಯಾರೋ ಒಬ್ಬ ಪತ್ತರ್ ವಿರುದ್ಧ ಗಂಡಸುತನ ತೋರಿದನಲ್ಲ ಎಂಬುದು ಅವರ ಸಂಭ್ರಮಕ್ಕೆ ಕಾರಣವಾಗಿತ್ತು.ಆದರೆ ನಾನು ಜನರೆಲ್ಲಾ ಹೋಗುವುದನ್ನೇ ಕಾಯುತ್ತಿದ್ದೆ. ಆದರೆ ಅವರಿರುವವರೆಗೂ ಪತ್ತರ್ ಆಗಲಿ, ಅವನ ಕಡೆಯವರಾಗಲಿ ನನ್ನನ್ನು ಮುಟ್ಟುವುದಿಲ್ಲ್ಲ ಎಂಬುದೂ ನನಗೆ ಗೊತ್ತಿತ್ತು.. ಜನರೆಲ್ಲಾ, ಮಾಧ್ಯಮದವರೆಲ್ಲಾ ಒಬ್ಬೊಬ್ಬರೇ ಖಾಲಿಯಾದರು. ನಾನೂ ಹಾಗೆ ಬಾಗಿಲ ಕಡೆಗೆ ಗಮನಿಸುತ್ತಿದ್ದೆ. ಅಷ್ಟರಲ್ಲಿ ಬಂದಳು ಅಪ್ಸರೆ...ನನ್ನ ಕೋಣೆಗೆ ಬಂದವಳೇ, ಬಾಗಿಲು ಹಾಕಿ ಬಿಟ್ಟಳು.
'ಸೂಪರ್..ಅಂಡ್ ವಂಡರ್ ಫುಲ್ ಆಟ..ನಾನಂತೂ ಕಳೆದು ಹೋಗ್ಬಿಟ್ಟೆ...ಎಂದು ನನ್ನನ್ನ ಬಿಗಿದಪ್ಪಿದಳು.ಆನಂತರ , 'ಅದಿರ್ಲಿ...ಈಗ ಮತ್ತೊಂದು ಗಂಡಾಂತರ ಕಾದಿದೆ..ನೀನಿಲ್ಲಿಂದ ತಪ್ಪಿಸ್ಕೊಬೇಕು..' ಎಂದಳು. ನಾನು ಅವಾಕ್ಕಾದೆ. ಅಂದರೆ ಇವಳಿಗೆ ಎಲ್ಲವೂ ಗೊತ್ತಿದೆ.! 'ನಿಮಗೆ..ಗೊತ್ತಾ?'
'ಗೊತ್ತಿಲ್ಲದೇ ಏನು? ಅವನೊಬ್ಬ ರೋಗ್..ಇರ್ಲಿ..ಈವತ್ತು ಅವನಿಗೆ ಸೋಕ್ಕಿಳಿದಿದೆ..ನೋಡಿ..ಈ ಕಿಟಕಿಯಿಂದ ಪೈಪ್ ಹಿಡಿದು ಕೆಳಕ್ಕೆ ಜಾರಿದರೆ ಸೀದಾ ಪಾರ್ಕಿಂಗ್ ಲಾಟ್ ಹತ್ತರ ಹೋಗ್ತೀರಾ..ಅಲ್ಲಿ ಕಾರು ತಗೊಂಡು ಎಸ್ಕೇಪ್ ಆಗ್ಬಿಡಿ..ಅಲ್ಲಿವರೆಗೆ ನಾನು ಯಾರೂ ಬರದೆ ಇರೋಹಂಗೆ ನೋಡ್ಕೋತೀನಿ..ಈ ತರಹ ಬಾಗಿಲು ಹಾಕಿದ್ರೆ ಕಷ್ಟ..?'
ಆದರೆ ನನ್ನ ಹತ್ತಿರ ಕಾರಿಲ್ಲ...?
ನಾನು ಹೇಳಿದ್ದು ನನ್ನ ಕಾರು ಬಗ್ಗೆ...ಕಪ್ಪು ಕಲರ್ ಕಾರು, ಸ್ವಿಫ್ಟ್ ಡಿಸೈರ್...ಬೇಗ..ನಂಬರ್ 1848 ಕಾರಲ್ಲಿ ಒಳಗೆ ನನ್ನ ಗಂಡ ಕುಳಿತಿರತಾರೆ..ನಾನು ಎಲ್ಲಾ ಹೇಳಿದ್ದೀನಿ..ಬೇಗ  ಹರಿ ಅಪ್...'
ನಾನು ಮಾತಾಡದೆ ಅವಳೆಡೆಗೆ ನೋಡಿದೆ. ನಂತರ ಅವಳು ಹೇಳಿದ ಹಾಗೆ ಕಿಟಕಿಯಿಂದ ತೋರಿ ಪ್ರಯಾಸ ಪಟ್ಟು ಕೆಳಗಿಳಿದೆ. ಅವಳ ಕಾರಿನ ಹತ್ತಿರ ಬಂದ ತಕ್ಷಣ ಅವಳ ಗಂಡ ಬಾಗಿಲು ತೆರೆದೆ. ಅವನೊಂದು ಪ್ರಯಾಸದ ನಗೆ ಬೀರಿದ. ನಾನು ಕುಳಿತ ಒಂದೆ ನಿಮಿಷಕ್ಕೆ ಅವಳು ಬಂದಳು. ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತಳು. ಅಷ್ಟೇ ಕಾರು ಶರವೇಗದಿಂದ ಅಲ್ಲಿಂದ ಮುನ್ನುಗ್ಗಿತು.
ಆದರೆ ನಾನು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದೆ. ಇಷ್ಟೊತ್ತಿಗೆ ಇಡೀ ಕೋಣೆ ಹುಡುಕುತ್ತಿರುತ್ತಾರೆ. ಇಲ್ಲ ಎಂದು ಗೊತ್ತಾದ ತಕ್ಷಣ..
'ಅಲ್ನೋಡು..ಪೋಲಿಸ್ ಚೆಕಿಂಗ್ ನಡೀತಾ ಇದೆ...' ಅವಳ ಗಂಡ ಗಾಬರಿಯಿಂದ ಕೂಗಿದ. ನಾನಂದುಕೊಂಡದ್ದಕ್ಕಿಂತ ಪತ್ತರ್ ಖದರ್ ಜಾಸ್ತಿಯೇ ಇತ್ತು.ನಾನು ಸೀಟಿನಲ್ಲಿ ಹಾಗೆಯೇ ಕೆಳಗೆ ಬಗ್ಗಿ ಅಡ್ಡಡ್ಡ ಮಲಗಿದೆ. ಆದರೂ ಸಿಕ್ಕಿಹಾಕಿಕೊಳ್ಳುವ ಅವಕಾಶ ಇತ್ತು.
ನಾವು ಇನ್ನೇನು ಚೆಕಿಂಗ್ ಹತ್ತಿರ ಬಂದೆವು. ಪೋಲಿಸರು ಮತ್ತು ಅವರ ಜೊತೆಗೆ ಒಂದಿಬ್ಬರು ಪತ್ತರ್ ಕಡೆಯವರು ಕಾರಗಳ ಒಳಗೆಲ್ಲಾ ಪರೀಕ್ಷೆ ಮಾಡುತ್ತಿದ್ದರು. ನಾನು ಉಸಿರು ಬಿಗಿ ಹಿಡಿದು ಮಲಗಿದ್ದೆ. ಆದರೆ ಇದ್ದಕ್ಕಿದ್ದಂತೆ ಕಾರಿನ ವೇಗ ಹೆಚ್ಚಾಯಿತು. ಏನಾಯಿತು ಎಂಬುದು ಗೊತ್ತಾಗುವಷ್ಟರಲ್ಲಿ ಕಾರು ಶರವೇಗದಲ್ಲಿ ಅಲ್ಲಿಂದ ಹೊರಟಿತ್ತು. ನಾನು ತಲೆ ಎತ್ತಿದೆ.
'ಇದೊಂದೇ ದಾರಿಯಿದ್ದದ್ದು..ಇಲ್ಲಾಂದ್ರೆ ತಪ್ಪಿಸಿಕೊಳ್ಳೋಕೆ ಸಾಧ್ಯಾನೆ ಇರ್ತಿರಲಿಲ್ಲ..' ನಾನು ಕೇಳದಿದ್ದರೂ ಸಮಜಾಯಿಷಿ ಕೊಟ್ಟ ಆಕೆ ಕಾರಿನ ವೇಗವನ್ನು ಇನ್ನೂ ಹೆಚ್ಚಿಸಿದಳು. ಸ್ವಲ್ಪ ಹೊತ್ತಿನಲ್ಲೇ ಒಂದು ಪೋಲಿಸ್ ಜೀಪು, ಎರಡು ಕಾರು ಮತ್ತು ಎರಡು ಬೈಕುಗಳು ನಮ್ಮ ಹಿಂದೆ ಬಿದ್ದದ್ದು ಗೊತ್ತಾಯಿತು. ನಮ್ಮ ಕಾರಿನ ವೇಗ ಇನ್ನೂ ಹೆಚ್ಚಿತ್ತು. ಯಾವುದೋ ಕಾರ್ ರೇಸ್ನಲ್ಲಿನ ಕಾರುಗಳು ಓಡುತ್ತಿರುವ ಹಾಗೆ ಭಾಸವಾಗುತ್ತಿತ್ತು.ಅಷ್ಟರಲ್ಲಿ ಗುಂಡು ಬಂದು ಕಾರಿನ ಸೀಟಿನ ಹಿಂಬದಿಗೆ ಬಿತ್ತು. ಅವಳ ನಿಯಂತ್ರಣ ಒಂದು ಕ್ಷಣ ತಪ್ಪಿತಷ್ಟೇ..ಕಾರು ಅಡ್ಡಾ ದಿಡ್ಡಿ ಚಲಿಸಿ ಮುಂದಿನ ಕಾರಿಗೆ ಡಿಕ್ಕಿ ಹೊಡೆದು ಮೇಲೆ ಹಾರಿತು. ಅಷ್ಟೇ ಅಮೇಲೆನಾಯಿತೋ ನನಗೆ ಗೊತ್ತಾಗಲಿಲ್ಲ.
******
ಕಣ್ಣು ಬಿಟ್ಟಾಗ ನಾನು ಆಸ್ಪತ್ರೆಯಲ್ಲಿದ್ದೆ. ತಲೆ ಧಿಂ ಎನ್ನುತ್ತಿತ್ತು. ಅಬ್ಬಾ ಬದುಕಿದ್ದೇನ? ಅವಳು ಅವಳ ಗಂಡ ಬದುಕಿರಬಹುದಾ..?ಆದರೆ ನನಗೆ ಮತ್ತೆ ಪ್ರಜ್ಞೆ ತಪ್ಪಿತ್ತು. ಮತ್ತೆ ಪ್ರಜ್ಞೆ ಬಂದಾಗ ನನ್ನ ಎದುರಿಗೆ ವೈದ್ಯರುಗಳ ಗುಂಪೇ ಇತ್ತು.
'ಹೇಗಿದ್ದೀರಾ ಮಿಸ್ಟರ್..' ಎಂದರು. ನಾನು ನಕ್ಕೆ. ಮಾತಾಡಲು ಸಾಧ್ಯವಾಗಬಹುದಾ?
'ಹಿ ಇಸ್ ಪೆರ್ಫೆಕ್ಟ್ಲಿ ಆಲ್ರೈಟ್ ...' ಎಲ್ಲರೂ ಅತ್ತ ಹೋದರು. ನಾನು ಎದ್ದು ಕುಳಿತುಕೊಳ್ಳುವ ಪ್ರಯತ್ನ ಪಟ್ಟೆ ಸಾಧ್ಯವಾಗಲಿಲ್ಲ. ಆಗ ಹತ್ತಿರ ಬಂದ ವೈದ್ಯರು,
'ಏನು.ನೀವೀಗ ಹುಶಾರಿದ್ದೀರಾ...ಇನ್ನೆರೆಡು ದಿನ ನೀವು ಓಡಾಡಬಹುದು..' ಎಂದರು.
'ಡಾಕ್ಟ್ರೆ...ಅವಳು ಹುಶಾರಿದ್ದಾಳಾ..?' ಎಂದೆ.
ಅವರು ಒಮ್ಮೆ ನಕ್ಕು ಹೌದು ಎನ್ನುವಂತೆ ತಲೆಯಾಡಿಸಿ ಅಲ್ಲಿಂದ ಹೊರಟುಹೋದರು. ನಾನು ಆಸ್ಪತ್ರೆಯನ್ನೊಮ್ಮೆ ಗಮನಿಸಿದೆ. ಎಲ್ಲಾ ಕನ್ನಡದಲ್ಲಿತ್ತು. ಡಾಕ್ಟರು ಕೂಡ ಕನ್ನಡದಲ್ಲಿ ಮಾತನಾಡುತ್ತಿದ್ದರು. ನನಗೆ ಆಶ್ಚರ್ಯವಾಗತೊಡಗಿತು.ಇದೇನಿದು..ಅಪಘಾತವಾದದ್ದು ಮುಂಬೈನಲ್ಲಿ ಅಲ್ಲಿಂದ ಬೆಂಗಳೂರಿಗೆ ಆಸ್ಪತ್ರೆಗೆ ನನ್ನನ್ನು ಕರೆತಂದು ಸೇರಿಸಿದವರಾದರೂ ಯಾರು?
ಸ್ವಲ್ಪ ಹೊತ್ತಿನ ನಂತರ ಒಬ್ಬ ಪೋಲಿಸ್ ಅಧಿಕಾರಿ ಒಳಬಂದವನು , ನನ್ನ ಪಕ್ಕ ಕುಳಿತುಕೊಂಡ.ಅವನಾಗಲೇ ನನ್ನೊಡನೆ ಮಾತಾಡಲು ವೈದ್ಯರ ಜೊತೆ ವಾದವಿವಾದ ಮಾಡಿ ಬಂದಿದ್ದ.
ನನ್ನನ್ನೊಮ್ಮೆ ದಿಟ್ಟಿಸಿ,
'ಅವಳು ಯಾರು?'
'ಸಾರ್ ನನಗೆ ಗೊತ್ತಿಲ್ಲ ..ಅವಳ ಹೆಸರೂ ಕೂಡ ಗೊತ್ತಿಲ್ಲ ಸಾರ್ ಹೇಗಿದ್ದಾಳೆ ಅವಳು..? ನಾನು ಕಾತರನಾಗಿ ಕೇಳಿದೆ.
ಅವನೊಂದು ನಿಟ್ಟುಸಿರು ಬಿಟ್ಟು '
ಅವಳು ಬದುಕಿಲ್ಲ. ಅಪಘಾತದ ಫೋರ್ಸ್ ಹೇಗಿತ್ತು ಅಂದ್ರೆ ಅವಳ ದೇಹಾನ ಹಾರೆ ಹಾಕಿ ಮೀಟಿ ತೆಗೀಬೇಕಾಯ್ತು..'
ನನಗೆ ಒಂತರಾ ಆಯಿತು. ' ಸಾರ್ ..ಹಿಂದಿನ ಸೀಟಿನಲ್ಲಿದ್ದರಲ್ಲ ಅವಳ ಗಂಡ..ಅವರು ಬದುಕಿದ್ದಾರೆ ತಾನೇ..?..
'ಮಿಸ್ಟರ್...ಹಿಂದಿನ ಸೀಟಿನಲ್ಲಿ ಯಾರೂ ಇರಲಿಲ್ಲ...ನೀನು ಡ್ರೈವ್ ಸೀಟಲ್ಲಿದ್ದೆ..ನಿನ್ನ ಪಕ್ಕ ಅವಳಿದ್ದಳು..ಈಗ ಹೇಳು ಆಕ್ಸಿಡೆಂಟ್ ಹೇಗೆ ನಡೀತು..ಹಾ..ಅವಳ ಹೆಸರೂ ಗೊತ್ತಿಲ್ಲ ಅಂತೀಯಾ..ಹಾಗಾದರೆ ಆವತ್ತು ರಾತ್ರಿ ನೀವಿಬ್ರೆ ಬೆಂಗಳೂರಿಂದ ಹೊರಗೆ ಅಷ್ಟು ವೇಗವಾಗಿ ಕಾರನ್ನು ಯಾಕೆ ಓಡಿಸ್ತಿದ್ರಿ..ಎಲ್ಲಿಗೆ ಹೋಗ್ತಿದ್ರೀ..'
ನನಗೆ ಅಯೋಮಯ ಎನಿಸಿತು. ಏನು ಈ ಯಪ್ಪಾ ಏನೇನೋ ಮಾತಾಡುತ್ತಿದ್ದಾನೆ..ನಾನು ಬೆಂಗಳೂರಾ? ಡ್ರೈವಿಂಗ್ ಸೀಟಾ?
'ಸಾರ್..ನೀವು ಏನು ಹೇಳ್ತಾ ಇದ್ದೀರೋ ನನಗೆ ಗೊತ್ತಾಗಲಿಲ್ಲ. ಆಕ್ಸಿಡೆಂಟ್ ನಡೆದಿರೋದು ಮುಂಬೈನಲ್ಲಿ. ನಾನು ಬೆಂಗಳೂರು ನೋಡೇ ಇಲ್ಲ. ನನಗೆ ಚೆನ್ನಾಗಿ ನೆನಪಿದೆ. ಆವತ್ತು ಜುಲೈ 28. ಪತ್ತರ್ ಕಡೆ ಶಿವನ ಜೊತೆ ಫೈಟ್ ಮಾಡಿದೆ..ಗೆದ್ದೇ..ಆಯಮ್ಮ ಸಿಕ್ಕಿದ್ಳು..ತಪ್ಪಿಸಿಕೊಳ್ಳೋವಾಗ ಆಕ್ಸಿಡೆಂಟ್ ಆಯ್ತು. ಅವಳ ಕಾರು ಸ್ವಿಫ್ಟ್ .'
ಈಗ ಪೋಲಿಸ್ ಗೊಂದಲಕ್ಕೆ ಬಿದ್ದ.
'ಡಾಕ್ಟರು ಎಲ್ಲಾ ಸರಿಯಾಗಿದೆ ಅಂದ್ನಲ್ಲ.' ಎಂದು ತನ್ನಲ್ಲೇ ಗೊಣಗಿಕೊಂಡ.ನಂತರ ನನ್ನ ಹತ್ತಿರ ಮುಖ ತಂದು,
'ಮಿಸ್ಟರ್..ಆಕ್ಸಿಡೆಂಟ್ ನಡೆದಿರೋದು ಜುಲೈ 28 ಅಲ್ಲ..ಸೆಪ್ಟೆಂಬರ್ 12. ನಡೆದಿರೋದು ಹೆಬ್ಬಾಳ್ ರಿಂಗ್ ರೋಡಲ್ಲಿ...ಕಾರು ಸ್ವಿಫ್ಟ್ ಅಲ್ಲ. ಬಿಎಂಡಬ್ಲ್ಯೂ. ..'ನಾನು ಅವನನ್ನೇ ಗೊಂದಲದಲ್ಲಿ ನೋಡಿದೆ. ಆದವನಿಗೆ ಅರ್ಥವಾಗಿರಬೇಕು. ತನ್ನ ಬಳಿಯಲ್ಲಿದ್ದ ಫೈಲಿನಿಂದ ಒಂದಷ್ಟು ಪೇಪರ್ ಕಟಿಂಗ್ಸ್, ಫೋಟೋಗಳನ್ನೂ ಹೊರತೆಗೆದ.
ಹೌದು ಆಕ್ಸಿಡೆಂಟ್ ಆದದ್ದು ಸೆಪ್ಟೆಂಬರ್ 12. ಅದು ದಿನಪತ್ರಿಕೆಯಿಂದ ಖಾತರಿಯಾಯಿತು. ಫೋಟೋದಲ್ಲಿ ಬಿಮ್ಡಬ್ಲ್ಯೂ ಕಾರು ನಜ್ಜುಗುಜ್ಜಾಗಿತ್ತು. ಹೌದು ನಾನೇ ಡ್ರೈವಿಂಗ್ ಸೀಟಲ್ಲಿದ್ದೆ. ಪಕ್ಕದಲ್ಲಿ ಯಾರೋ ಹೆಂಗಸು ವಿಕಾರವಾಗಿ ಮುಖವೆಲ್ಲಾ ಜಜ್ಜಿಹೊಗಿತ್ತು.
ನಾನು ಸ್ವಲ್ಪ ಹೊತ್ತು ಸುಮ್ಮನೆ ಮಲಗಿಬಿಟ್ಟೆ. ಕಣ್ಣು ಮುಚ್ಚಿಕೊಂಡು ಯೋಚಿಸತೊಡಗಿದೆ. ನನಗೆಲ್ಲಾ ನಿಚ್ಚಳವಾಗಿತ್ತು. ಬಾಂಬೆ, ಫೈಟ್, ಪತ್ತರ್, ಆಕ್ಸಿಡೆಂಟ್ ಮತ್ತು ಜುಲೈ 28.
ಆದರೆ ಇಲ್ಲಿ ಕಥೆಯೇ ಬೇರೆಯಿತ್ತು.
ಆಕ್ಸಿಡೆಂಟ್ ಸೆಪ್ಟೆಂಬರ್ 12 ರಂದು ಬಿಎಂಡಬ್ಲ್ಯೂ ಕಾರಿನಲ್ಲಿ ನಾನೇ ಡ್ರೈವ್ ಮಾಡುವಾಗ ನಡೆದಿತ್ತು. ಅದೂ ಬೆಂಗಳೂರಿನಲ್ಲಿ. ಏನಿದು..?
ಒಂದಕ್ಕೊಂದು ತಾಳೆಯಾಗದೆ ತಲೆ ಸಿಡಿಯತೊಡಗಿತ್ತು.
ಆಕ್ಸಿಡೆಂಟ್ ಸ್ಥಳದಿಂದ ಪ್ರಜ್ಞೆತಪ್ಪಿದ್ದ ನನ್ನನ್ನು ಹೊರಕ್ಕೆ ಎಳೆಯುತ್ತಿರುವುದು, ಆಂಬುಲೆನ್ಸ್ ಗೆ ಹಾಕುತ್ತಿರುವುದು ಎಲ್ಲಾ ಪೋಲಿಸ್ ತೋರಿಸಿದ ಫೋಟೋದಿಂದಾಗಿ ನಂಬಲೇಬೇಕಿತ್ತು.
ಅಂದರೆ 45 ದಿನ ನನ್ನ ಕೈಗೆ ಸಿಕ್ಕಿರಲಿಲ್ಲ. ಬಾಂಬೆಯಿಂದ ತಪ್ಪಿಸಿಕೊಂಡ ನಾನು ಬೆಂಗಳೂರಿಗೆ ಬಂದು ಬಿಎಂಡಬ್ಲ್ಯೂ ಕಾರಿನ ಓನರ್ ಆಗಿ, ಪಕ್ಕದಲ್ಲಿ ಹುಡುಗಿಯನ್ನು ಕೂರಿಸಿಕೊಂಡು....ಇದೆಲ್ಲಾ ಹೇಗೆ ಸಾಧ್ಯ..ಹಾಗಾದರೆ ನಾನಾವತ್ತು ಬಾಂಬೆನಲ್ಲಿ ಸಾಯಲಿಲ್ಲವಾ..?
45 ದಿನಗಳಲ್ಲಿ ಏನೋ ಗಣನೀಯವಾದದ್ದು ನಡೆದಿತ್ತು. ನಾನದನ್ನು ಕಂಡು ಹಿಡಿಯಲೇ ಬೇಕಿತ್ತು. ನನ್ನ ಬದುಕೇ ನನಗೆ ರೋಚಕವಾಗಿಯೂ ಕುತೂಹಲವಾಗಿಯೂ ಮತ್ತು ರಹಸ್ಯಮಯವಾಗಿಯೂ ತೋರುತಿತ್ತು.
*********************************
ಮೊನ್ನೆ ಎಲ್ಲೋ ಒಂದು ಕಡೆ ಬೆಳಗಿನಿಂದ ಸಂಜೆಯವರೆಗೆ ಕುಳಿತಿರಬೇಕಾಯಿತು. ನಾನು ಅಂತಹ ಸಂದರ್ಭಗಳಲ್ಲಿ ಒಂದಷ್ಟು ಪುಸ್ತಕದ ಮೊರೆ ಹೋಗುತ್ತೇನೆ. ಗೆಳೆಯರು ಜೊತೆಯಲ್ಲಿದ್ದರೆ ಕಾಡು ಹರಟೆ ಇದ್ದದ್ದೇ. ಆದರೆ ಆವತ್ತು ಯಾರೂ ಇರಲಿಲ್ಲ. ಹಾಗಂತ ಗಂಭೀರವಾಗಿ ಏನನ್ನಾದರೂ ಓದಲಿಕ್ಕೆ ತೆಗೆದುಕೊಂಡೂ ಹೋಗುವ ಹಾಗಿರಲಿಲ್ಲ. ಅಲ್ಲಿ ಮದ್ಯೆ ಮದ್ಯೆ ಏನೋ ವಿಚಾರಿಸುವದಿತ್ತು. ಅಂತಹ ಸಂದರ್ಭಗಳಲ್ಲಿ ನನ್ನನು ಕಾಪಾಡಿರುವ ವ್ಯಕ್ತಿ ಜೇಮೆಸ್ ಹಾಡ್ಲಿ ಚೇಸ್. ಆತನ ಸ್ಟ್ರಿಕ್ಟ್ಲಿ ಫಾರ್ ಕ್ಯಾಶ್ ಕಾದಂಬರಿ ನನಗೆ ಥ್ರಿಲ್ ಕೊಟ್ಟಿತ್ತು. ರೋಚಕವಾಗಿ ಓದಿಸಿಕೊಳ್ಳುವ ಕಾದಂಬರಿ ಅದು. ಮೊನ್ನೆ ಬಂದಡ್ಯಾನಿ ಬಾಯ್ಲ್ ನಿರ್ದೇಶನದ ಟ್ರಾನ್ಸ್, ಹಿಂದಿಯ ಘನ್ ಚಕ್ಕರ್ ಚಿತ್ರಗಳ ಕಥೆಯಂತೆಯೇ ಇದೂ ಇದ್ದದ್ದು ಇನ್ನಷ್ಟು ಕುತೂಹಲ ತರಿಸಿತ್ತು. ಟೈಮ್ ಪಾಸ್ ಗೆ ಉತ್ತಮ ಕಾದಂಬರಿ.

Thursday, October 10, 2013

ನೀವಿನ್ನೂ ಮಿಸ್ಕಿನ್ ಚಿತ್ರ ನೋಡಿಲ್ಲವೇ?

ಗುಂಡೇಟು ತಿಂದು ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದ ಅನಾಮಿಕ ಚಂದ್ರು ಎಂಬ ವೈದ್ಯಕೀಯ ವಿದ್ಯಾರ್ಥಿಗೆ ಸಿಗುತ್ತಾನೆ. ಈ ಮೊದಲೇ ಮೂರ್ನಾಲ್ಕು ಜನ ಬಿದ್ದವನನ್ನು ನೋಡಿ ಹೋಗಿರುತ್ತಾರೆ. ಆದರೆ ಮಾನವೀಯತೆಯ ದೃಷ್ಟಿಯಿಂದ ಪ್ರಯಾಸ ಪಟ್ಟು ತನ್ನ ಮೋಟಾರ್ ಬೈಕಿನಲ್ಲಿ ಸಾಗಿಸಿಕೊಂಡು ಆಸ್ಪತ್ರೆಗಳಿಗೆ ಅಲೆಯುವ ಚಂದ್ರುಗೆ ಅಲ್ಲಿನ ಸಿಬ್ಬಂದಿಗಳ ವರ್ತನೆ ಬೇಸರ ತರಿಸುತ್ತದೆ. ಕೊನೆಗೆ ಪೋಲಿಸ್ ಮೊರೆ ಹೋದಾಗಲೂ ಒಬ್ಬ ಪೋಲಿಸ್ ಸಾಯುತಿರುವವನ ಕೈಯಲ್ಲಿದ್ದ ಗಡಿಯಾರ ಬಿಚ್ಚಿಕೊಳ್ಳುತ್ತಾನೆಯೇ ಹೊರತು ಬೇರೇನೂ ಮಾಡುವುದಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಮನೆಗೆ ಅವನನ್ನು ತಂದು ತನ್ನ ಮೇಜಿನ ಮೇಲೆಅವನಿಗೆ ಆಪರೇಷನ್ ಮಾಡುವ ನಿರ್ಧಾರ ಕೈಗೊಳ್ಳುತ್ತಾನೆ ಚಂದ್ರು.ತನ್ನ ಪ್ರೊಫೆಸರ್ ಗೆ ಫೋನ್ ಮಾಡಿ ಆ ಮೂಲಕ ಆಪರೇಷನ್ ಮಾಡಿ ಮಲಗುತ್ತಾನೆ.
ಆದರೆ ಬೆಳಗಾಗುವಷ್ಟರಲ್ಲಿ ಆತ ನಾಪತ್ತೆ. ಆದರೆ ಮಾರನೆಯ ದಿನವೇ ಪೋಲಿಸ್ ಚಂದ್ರುವಿನ ಮನೆಗೆ ಬಂದು ಒಬ್ಬ ಸುಫಾರಿ ಹಂತಕ ಈಗಾಗಲೇ ಹದಿನಾಲ್ಕು ಕೊಲೆ ಮಾಡಿರುವ ಭಯಾನಕ ಖೈದಿಗೆ ಆಶ್ರಯ ಕೊಟ್ಟದ್ದಕ್ಕೆ, ತಪ್ಪಿಸಿಕೊಳ್ಳಲು ನೆರವಾದದ್ದಕ್ಕೆ ಬಂಧಿಸುತ್ತಾರೆ. ಹಾಗೆ ಅವನ ಅಣ್ಣ ಅತ್ತಿಗೆಯನ್ನು ಬಂಧಿಸುತ್ತಾರೆ. ಈಗ ಹೇಗಾದರೂ ಮಾಡಿ ಚಂದ್ರುವಿನ ಮುಖಾಂತರ ಆ ಹಂತಕನನ್ನು ಹಿಡಿಯುವುದು ಅವರ ಗುರಿ.
ಆ ಹಂತಕ ಚಂದ್ರುವಿನ ಮೊಬೈಲಿಗೆ ಕರೆ ಮಾಡಿ ಥ್ಯಾಂಕ್ಸ್ ಹೇಳಿ ನಾನು ನಿನ್ನನ್ನು ಬೇಟಿಯಾಗಬೇಕು ಎನ್ನುತ್ತಾನೆ. ಅವನ ಹತ್ಯೆಗೆ ಒಂದು ಸಂಚು ಮಾಡುವ ಪೋಲಿಸ್ ಸಿಬ್ಬಂದಿ ಅದಕ್ಕೆ ಗಾಳವಾಗಿ ಚಂದ್ರುವನ್ನು ಬಳಸಿಕೊಳ್ಳಲು ನಿರ್ಧರಿಸುತ್ತಾರೆ.ಅಲ್ಲಿಂದ ಶುರುವಾಗುತ್ತದೆ ನೋಡಿ ನಿಜವಾದ ಕಥೆ. 
ಕೇವಲ ಎರಡು ರಾತ್ರಿಗಳಲ್ಲಿ ನಡೆಯುವ ಕಥೆ ಮಿಸ್ಕಿನ್ ನಿರ್ದೇಶನದ ಓನಾಯುಂ ಅಟ್ಟುಕುಟ್ಟಿಯಾಮ್ ಚಿತ್ರದ್ದು.ಚಿತ್ರದ ಪ್ರಾರಂಭದಿಂದ ಕೊನೆಯ ವರೆಗೂ ಒಂದೆ ಗತಿಯನ್ನು ಕಾಯ್ದು ಕೊಂಡಿರುವ ನಿರ್ದೇಶಕ ಮಿಸ್ಕಿನ್ ನೋಡುಗನನ್ನು ಕುರ್ಚಿಯ ತುದಿಗೆ ಕೂರಿಸುತ್ತಾರೆ. ಪ್ರತಿ ತಿರುವು ಪ್ರತಿ ಸನ್ನಿವೇಶವೂ ವಾಸ್ತವಿಕ ನೆಲೆಯಲ್ಲೇ ಸಾಗುವುದರಿಂದ ನಮ್ಮ ಕಣ್ಣ ಮುಂದೆ ಇದೆಲ್ಲ ನಡೆಯುತ್ತಿದೆ ಎಂಬಂತೆ ಭಾಸವಾಗಿ ಉಸಿರುಕಟ್ಟುತ್ತದೆ.
ತಾವೇ ಇಲ್ಲಿ ಹಂತಕನ ಪಾತ್ರವನ್ನು ಮಾಡಿದ್ದಾರೆ. ಚಿತ್ರದಲ್ಲಿ ಇಳಯರಾಜಾ ರ ಹಿನ್ನೆಲೆ ಸಂಗೀತವಿದೆ. ಅದು ನಮ್ಮನ್ನು ಆ ಮೂಡಿನಿಂದ ಹೊರಬರಲು ಬಿಡುವುದೇ ಇಲ್ಲ.
ಮಿಸ್ಕಿನ್ ಬಗ್ಗೆ ಹೇಳುವುದಾದರೆ ಭಾರತದ ಚಿತ್ರರಂಗದಲ್ಲಿ ಸ್ವಂತ ಚಿತ್ರಕಥೆ ಬರೆವ ಮತ್ತು ಪ್ರತಿ ದೃಶ್ಯವನ್ನು ತುಂಬಾ ಸೂಕ್ಷ್ಮವಾಗಿ ವಿವರಗಳ ಜೊತೆ ಜೊತೆಗೆ ವಾಸ್ತವಿಕ ಅಂಶಗಳನ್ನು ಬೆರೆಸಿ ರಚಿಸುವ ನಿರ್ದೇಶಕರಲ್ಲಿ ಒಬ್ಬರು ಎನ್ನಬಹುದು. ಮಿಸ್ಕಿನ್ ಚಿತ್ರಗಳಲ್ಲಿ ದೃಶ್ಯ ವೈಭವವಾಗಲಿ, ಅತಿಯಾದ ಶಾಟ್ ವಿಂಗಡನೆಯಾಗಲಿ ಇರುವುದಿಲ್ಲ. ಹಾಗೆಯೇ ಕ್ಯಾಮೆರಾ  ಕೋನಗಳೂ ಅಷ್ಟೇ. ನಿಮಗೆ ಅಡ್ಡಾದಿಡ್ಡಿಯಾಗಿ ಅತಿಯಾದ ಬುದ್ದಿವಂತಿಕೆ ಕಾಣಸಿಗುವುದಿಲ್ಲ.ಅವರ ಮೊದಲ ಚಿತ್ರ ಚಿತ್ತಿರಂ ಪೆಸುದಡಿ ಯಿಂದ ಹಿಡಿದು ಮೊನ್ನೆ ಮೊನ್ನೆ ಬಂದ ನಲವತ್ತು ಕೋಟಿ ವೆಚ್ಚದ ಮೂಗುಮುಡಿಯಾ ವರೆಗೆ ಗಮನಿಸಿ.ಅದರಲ್ಲೂ ಅಂಜಾದೆಯ ಕೊನೆಯ ದೃಶ್ಯದ ಚಿತ್ರೀಕರಣವಂತೂ ಸೂಪರ್.
ಇದರಲ್ಲಿಯೂ ಅದು ಮುಂದುವರೆದಿದೆ. ನಿಧಾನಕ್ಕೆ ಚಿತ್ರ ಸಾಗಿದರೂ ಎಲ್ಲೂ ಗೊಂದಲ ಮೂಡಿಸದೆ ಸ್ವಲ್ಪವೂ ಕುತೂಹಲ ಕಡಿಮೆಯಾಗಿಸದೆ ಚಿತ್ರ ಕೊನೆಯವರೆಗೂ ನೋಡಿಸಿಕೊಳ್ಳುತ್ತದೆ.
ನನ್ನ ಪ್ರಕಾರ ಇದು ಚಿತ್ರಪ್ರೇಮಿಗಳು, ಅದರಲ್ಲೂ ಥ್ರಿಲ್ಲರ್ ಪ್ರಿಯರು ಒಮ್ಮೆ ನೋಡಲೇ ಬೇಕಾದ ಚಿತ್ರ.
ಕೊಸರು: ಮೂಗುಮುಡಿ ಚಿತ್ರದ ಸೋಲಿನಿಂದಾಗಿ ನಿರ್ದೇಶಕ ಮಿಸ್ಕಿನ್ ಅವರಿಗೆ ನಿರ್ಮಾಪಕರು ದೊರೆಯದೆ ತಾವೇ ನಿರ್ಮಿಸಿದ ಚಿತ್ರವಿದು. ಹಾಗಾಗಿ ಇದು ದೊಡ್ಡದಾಗಿ ಬಿಡುಗಡೆಯಾಗಿಲ್ಲ.. ಚಿಕ್ಕ ಚಿಕ್ಕ ನಗರಗಳಲ್ಲಿ ಬಿಡುಗಡೆ ಮಾಡಿ, ತಾವೇ ಪ್ರಚಾರ ಮಾಡಿ, ಪೋಸ್ಟರ್ ಅಂಟಿಸಿಕೊಂಡು ಚಿತ್ರವನ್ನು ಮುನ್ನಡೆಸುತ್ತಿದ್ದಾರೆ ಮಿಸ್ಕಿನ್. ಆದರೆ ಈಗಾಗಲೇ ಪತ್ರಿಕೆಗಳಿಂದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಚಿತ್ರ ಪಡೆದಿದೆ.

Tuesday, October 8, 2013

ತಣ್ಣನೆಯ ಹಂತಕನ ಕಥೆ:

ಯಾವುದೇ ಒಬ್ಬ ವ್ಯಕ್ತಿಗೆ ಕೆಲಸ ಕೊಡುವ ಮೊದಲು ಅವನು ಆ ಕೆಲಸದಲ್ಲಿ ನಿಷ್ಣಾತನೋ ಇಲ್ಲವೋ ಪರೀಕ್ಷಿಸಬೇಕಾದದ್ದು ಕೆಲಸ ಕೊಡುವ ಬಾಸ್ ನ ಮೊದಲ ಕೆಲಸ. ಅವನು ಕುಕ್ಲಿಂಸ್ಕಿ. ಹೆಸರೇ ವಿಚಿತ್ರ ಎನಿಸಿದರೂ ಅದವರ ತಂದೆ ತಾಯಿ ಇಟ್ಟ ಹೆಸರಾದ್ದರಿಂದ ನಾವಲ್ಲ, ಅವರ ಬಾಸ್ ರಾಯ್ ಕೂಡ ಇನ್ನೂ ಮಾಡುವಂತಿಲ್ಲ. ಅವನಿಗೆ ಅವನ ಹೆಸರು ಕರೆಯುವುದು ಹಿಂಸಾತ್ಮಕ. ಸ್ಕಿ ರಾಯ್ ಹತ್ತಿರ ಬಂದವನು ನನಗೆ ಕೆಲಸವಿಲ್ಲ ಕೆಲಸ ಕೊಡಿ ಎಂದು ಕೇಳಿದಾಗ ರಾಯ್ ಅವನ ಕೈಗೊಂದು ಪಿಸ್ತೂಲ್ ಕೊಟ್ಟು ಅಲ್ಲಿ ಕುಳಿತ ಭಿಕ್ಷುಕನನ್ನು ಕೊಂದು ಬಾ ಎನ್ನುತ್ತಾನೆ. ಅವನಿಗೆ ಗೊತ್ತು ಸುಫಾರಿ ಹಂತಕನಿಗೆ ಕೊಲ್ಲು ಎಂದರೆ ಅವನು ಕೊಳ್ಳಬೇಕು, ಯಾರು ಏಕೆ,,ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಬಾರದು. ಸ್ಕಿಯೂ ಅಷ್ಟೇ. ತುಟಿಪಿಟಕ್ ಎನ್ನದೆ ಪಿಸ್ತೂಲ್ ತೆಗೆದುಕೊಂಡು ಆ ಭಿಕ್ಷುಕನ ಹತ್ತಿರ ಹೋಗುತ್ತಾನೆ. ಆತನ ಪಕ್ಕ ಕುಳಿತುಕೊಂಡು ಕುಶಲೋಪರಿ ವಿಚಾರಿಸಿ ಅವನು ಉತ್ತರಿಸುವಷ್ಟರಲ್ಲಿ ಮೂರ್ನಾಲ್ಕು ಗುಂಡುಗಳನ್ನು ಅವನ ದೇಹಕ್ಕೆ ತೂರಿಸಿ ಅಲ್ಲಿಂದ ಎದ್ದು ಬಂದು ರಾಯ್ ಕಡೆಗೆ ‘ಹೆಂಗೆ’ ಎನ್ನುವ ಹಾಗೆ ನೋಡುತ್ತಾನೆ.
ಹಾಗಂತ ಸ್ಕಿ ಗೆ ಅದು ಮೊದಲನೆಯ ಕೊಲೆಯೇನೂ ಅಲ್ಲ. ಆದರೆ ನಿರುದ್ದೇಶದಿಂದ ಮಾಡಿದ ಮೊದಲ ಕೊಲೆಯದು. ಇದಕ್ಕೂ ಮುನ್ನ ಸ್ನೂಕರ್ ಆಡುವಾಗ ಚಿಕ ಜಗಳವಾಗಿ ಬೈದನೆಂದು ಎದುರಾಳಿಯನ್ನು ಕುಳಿತಕಾರಿನಲ್ಲಿ ಕಟ್ಟು ಕೊಯ್ದು ಕೊಂದಿದ್ದ.
ಮುಂದೆ ರಾಯ್ ಜೊತೆ ಸೇರಿದ ಮೇಲೆ ಶುರುವಾಯಿತಲ್ಲ ಕೊಲೆಗಳ ಸುರಿಮಳೆ. ಫೋಟೋ ಕೊಟ್ಟು ದುಡ್ಡು ಕೊಟ್ಟರೆ ಮುಗೀತು ಆ ನಿರ್ದಯಿ ಹಂತಕನಿಗೆ ಬೇರೇನೂ ಬೇಕಾಗುವುದಿಲ್ಲ. ಹೋಗಿ ಕೊಂದು ಬಂದು ಬಿಡುತ್ತಾನೆ.
ಅವನಿಗೆ ಪ್ರೀತಿಸಿ ಮದುವೆಯಾದ ಹೆಂಡತಿಯಿದ್ದಾಳೆ. ಇಬ್ಬರು ಹೆಣ್ಣು ಮಕ್ಕಳಿದ್ದಾಳೆ. ಮನೆಯಲ್ಲಿ ಆತ ಅದ್ಭುತ ಗಂಡ ಮತ್ತು ಅಪ್ಪ.ಅವನನ್ನು ಪೊಲೀಸಿನವರು ಬಂಧಿಸಿದಾಗ ಸ್ವತಃ ಹೆಂಡತಿ ಮಕ್ಕಳೇ ನಿಬ್ಬೆರಗಾಗಿ ಹೋಗಿದ್ದರಂತೆ. ಅವನ ಜೀವಿತಾವಧಿಯಲ್ಲಿ ಸರಿ ಸುಮಾರು ನೂರಕ್ಕೂ ಹೆಚ್ಚು ಕೊಲೆಗಳನ್ನು ಮಾಡಿದ ಸ್ಕಿಗೆ ಜೀವಾವಧಿ ಶಿಕ್ಷೆಯಾಗಿ ಜೈಲಿನಲ್ಲೇ ಪ್ರಾಣಬಿಟ್ಟ.

2012 ರಲ್ಲಿ ಬಿಡುಗಡೆಯಾದ ದಿ ಐಸ್ ಮ್ಯಾನ್ ಚಿತ್ರ ಇದೆ ಸ್ಕಿ ಯಾ ಜೀವನ ಕಥೆಯನ್ನು ಆಧರಿಸಿದ್ದು.ಇದರ ನಿರ್ದೇಶಕರು ಅರಯಾಲ್ ವ್ರೋಮೆನ್. ಇಲ್ಲಿ ಸ್ಕಿ ಪಾತ್ರ ನಿರ್ವಹಿಸಿದವರು ಮೈಖೇಲ್ ಶನೋನ್.
ಚಿತ್ರದಲ್ಲಿ ಸ್ಕಿ ಪಾತ್ರವನ್ನು ಎಲ್ಲೂ ವೈಭವೀಕರಿಸಿಲ್ಲ.ಅವನ ಕೊಲೆಗಳನ್ನೂ ಅಷ್ಟೇ. ನಿರ್ದೇಶಕ ಮಂದಗತಿಯ ನಿರೂಪಣೆಯ ಜೊತೆ ಜೊತೆಗೆ ಸ್ಕಿ ಯಾ ಎರಡೂ ಮುಖಗಳನ್ನು ತುಂಬಾ ಚೆನ್ನಾಗಿ ತೆರೆದಿಟ್ಟಿದ್ದಾನೆ. ಒಬ್ಬ ಪ್ರೇಮಿಯಾಗಿ ತಂದೆಯಾಗಿ ಕುಟುಂಬವನ್ನು ತುಂಬಾ ಚೆನ್ನಾಗಿ ಪೋಷಿಸುವ ಗೃಹಸ್ಥ ಮತ್ತು ಫೋಟೋ ಸಿಕ್ಕ ತಕ್ಷಣ ಯಾರು ಅವರ ಹಿನ್ನೆಲೆ ಏನು ಎಂಬುದನ್ನೂ ಕಿಂಚಿತ್ತೂ ಯೋಚಿಸದೆ ಕೊಳ್ಳುವ ನಿರ್ದಯಿ ಹಂತಕ ಎರಡನ್ನೂ ನಾಯಕ ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ. ಅಂತೂ ಆಕಾಶದ ಕೆಳೆಗೆ ಇತಿಹಾಸದ ಕಾಲಗರ್ಭದಲ್ಲಿ ಏನೆಲ್ಲಾ ನಡೆದುಹೋಗಿದೆ ಎಂತೆಂಥ ಜನರಿದ್ದರಲ್ಲವಾ ಎಂಬ ಪ್ರಶ್ನೆಗೆ ಉತ್ತರವಂತಿದೆ ಈ ಚಿತ್ರ.
ಕೊಸರು: ಮೊನ್ನೆ ಮೊನ್ನೆ ನಮ್ಮಲ್ಲಿ ದಂಡುಪಾಳ್ಯ ಚಿತ್ರ ಬಂದಿತ್ತು. ಉಮೇಶ್ ಎನ್ನುವ ಕುಖ್ಯಾತನ ಚಿತ್ರವೂ ಬಂದುಹೋಯಿತು. ಈಗ ಅದೇ ಉಮೇಶ್ ರೆಡ್ಡಿ ಕಥೆಯಾಧಾರಿತ ಖತರ್ನಾಕ್ ಬರುತ್ತಿದೆ. ಹಾಗೆ ನೋಡಿದರೆ ಇವೆಲ್ಲಾ ದಿ ಐಸ್ಮ್ಯಾನ್  ತರಹದ ಚಿತ್ರಗಳೇ. ಆದರೆ ಅವುಗಳೇಕೆ ನಮಗೆ ಬೇರೆಯದೇ ರೀತಿಯಾಗಿ ಕಾಣಿಸುತ್ತವೆ ಎಂಬ ಪ್ರಶ್ನೆ ನನ್ನನ್ನು ಆಗಾಗ ಕಾಡುತ್ತದೆ. ಒಬ್ಬ ಸರಣಿ ಹಂತಕ, ಅತ್ಯಾಚಾರಿಯ ಕಥೆ ಸಿನೆಮಾ ಮಾಡಿದರೆ ಅದರ ಸಾರ್ಥಕತೆ ಏನು..? ಎನ್ನುವ ಪ್ರಶ್ನೆ ಆಗಾಗ ಉದ್ಭವಿಸುತ್ತಲೇ ಇರುತ್ತದೆ. ಆದರೆ ಹಿಟ್ಲರ್, ಮುಸಲೋನಿ, ಈದಿ ಅಮೀನ್ ಜೀವನಾಧಾರಿತ ಚಿತ್ರಗಳು ಬಂದು ಇತಿಹಾಸದ ಔಟಾದ ಒಂದು ಮಗ್ಗುಲನ್ನು ನಮಗೆ ವಿಶದಪಡಿಸಿವೆ. ಆದರೆ ನಮ್ಮಲ್ಲಿನ ಚಿತ್ರಗಳನ್ನು ಈ ರೀತಿ ಒಪ್ಪಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಅವೆಲ್ಲಾ ಅಭಿರುಚಿಯಿಲ್ಲದ ಸಿನಿಮಾಗಳು ಎಣಿಸುವುದಕ್ಕೆ ಕಾರಣವಾದರೂ ಏನು? ಎಂಬ ಪ್ರಶ್ನೆ ಆಗಾಗ ಕಾಡುತ್ತದೆ. ಚರ್ಚಿಸುವರು ಇದ್ದರೇ ಒಂದು ನಿರ್ಣಯಕ್ಕೆ ಬರಬಹುದು. ಏನಂತೀರಿ?

Monday, October 7, 2013

ಅಪರಿಚಿತ-ಘಜಿನಿ-ಒಂದು ಕಥೆ.

[ಸರಿ ಸುಮಾರು ನಾಲ್ಕು ವರ್ಷದ ಹಿಂದೆ ನೋಳನ್ ನ ಮೆಮೆಂಟೊ ಚಿತ್ರದ ಕಥೆಗೆ ಮಾರುಹೋದ ನಾನು, ಫಿಲಿಪ್ ಅದರ ಬಗ್ಗೆ ಚಿಕ್ಕದಾದ ಶೋಧನೆಯನ್ನೇ ಮಾಡಿದ್ದೆವು. ಅದರ ಮೂಲಕಥೆಯ ಬಗ್ಗೆ ತಲೆಕೆಡಿಸಿಕೊಂಡು ಅದನ್ನು ಓದಿದ ನಂತರವಷ್ಟೇ ನಮಗೆ ಸಮಾದಾನವಾದದ್ದು. ಆನಂತರ ಆ ಚಿತ್ರದ ಚಿತ್ರಕಥೆಯ ಪ್ರತಿ ಓದಿ ಮೇಕಿಂಗ್ ಬಗ್ಗೆ ಒಂದಷ್ಟು ತಲೆಕೆಡಿಸಿಕೊಂಡಿದ್ದೆವು. ಆ ಸಮಯದಲ್ಲಿ ನಾನು ಕನ್ನಡಕ್ಕೆ ಭಾವಾನುವಾದ ಮಾಡಿದ್ದೆ.ಈವತ್ತಿಗೂ ಮೆಮೆಂಟೊ ನನಗೆ ಅಷ್ಟೇ ವಿಸ್ಮಯ ಖುಷಿ ಕೊಡುತ್ತದೆ.ಹಾಗಾಗಿ ಅದರ ಮೂಲಕಥೆ ಬರೆದ ಜೊನಾಥನ್ ನೋಲನ್ ಗೆ ನನ್ನ ನಮನ.ಆ೦ಟೆರೋಗ್ರೇಡ್ ಅಥವಾ ಅಲ್ಪಾವಧಿ ನೆನಪಿನ ಶಕ್ತಿಯೆ೦ಬ ಅಪರೂಪದ ಖಾಯಿಲೆಯಾಧರಿಸಿದ ವಿಶೇಷ ಕಥೆ ಇದು.ಈ ರೋಗದಿ೦ದ ಬಳಲುವ ವ್ಯಕ್ತಿಯೊಬ್ಬ ತನ್ನ ಹೆ೦ಡತಿಯನ್ನು ಕೊ೦ದವನ ಮೇಲೆ ಸೇಡು ತೀರಿಸಿಕೊಳ್ಳಲು ಹೆಣಗಾಡುವುದೇ ಇದರ ಕಥಾ ಹ೦ದರ. ]

ಅಪರಿಚಿತ:
ನೀನೆಂಥ  ಲೇಟ್ ಲತೀಫಾ ಅಂದ್ರೆ  ನಿನ್ನ ಅಂತ್ಯ ಸಂಸ್ಕಾರಕ್ಕೂ  ನೀನು ತಡವಾಗೇ ಹೋಗ್ತಿಯೇನೋ...?!.  ಕಲ್ಪನಾ ಇದೇ ತಾನೇ ಹೇಳ್ತಿದ್ದದ್ದು.... ನೀನದನ್ನ  ತಮಾಷೆ ಅನ್ಕೊ ಳ್ತಿದ್ದೆ....  ಹೇಳಿದ್ದೆಲ್ಲಾ ಹೇಳಿ ಕೊನೇಲಿ ಅವಳೂ ನಕ್ಕು ಬಿಡ್ತಿದ್ದಳಲ್ವಾ....? ನೀನೂ ನಗ್ತಿದ್ದೆ... ನಕ್ಕ ಮೇಲೆ ಅದು ತಮಾಷೆ ತಾನೇ?
ಕಲ್ಪನಾ ..!
ಎಂಥ ಹುಡುಗಿ.... ಉತ್ಸಾಹದ ಬುಗ್ಗೆ.... ಸ್ಪೂತರ್ಿಯ ಚಿಲುಮೆ ಅಂತಾರಲ್ಲ. ಅದ್ನೆಲ್ಲಾ ಸಾರಾಸಗಟಾಗಿ ತೆಗೆದು ಬೀಸಾಕಿ ಬರೇ  'ಕಲ್ಪನಾ' ಅಂದ್ರೆ ಸಾಕಾಗುತ್ತೇನೋ.... ಎಂಥ ನಗು ಅವಳದು.... ಅವಳ ಸನಿಹಾನೇ ಸಾಕು..... ಜಗತ್ತಿನ ಎಲ್ಲಾ ನೋವನ್ನೂ ಮರೆಸಿಬಿಡೋದು....
ಅದ್ಕೆ ನಿನ್ನನ್ನು ಸಹಿಸ್ಕೊಂಡಳು.... ನಿನ್ನಂಥ ಮರೆಗುಳೀನಾ....
ಒಂದು ಪ್ರಶ್ನೆ !
ನೇರವಾಗಿ ಕೇಳ್ತೀನಿ..
ಅವಳ ಅಂತ್ಯಸಂಸ್ಕಾರಕ್ಕೆ ನೀನು ಹೋಗಿದ್ಯಾ..?
ಸರಿಯಾದ ಸಮಯಕ್ಕೆ ಹೋಗಿದ್ಯಾ ಇಲ್ಲ ಅದ್ಕೂ ತಡವಾಗಿ .....
ಸರಿ ಬಿಡು ! ನೀನು ಹೋಗಿದ್ದೆ, ಅದಂತೂ ಗ್ಯಾರಂಟಿ. ಸಾಕ್ಷಿಗೆ ಅಂತ ಫೋಟೋ ಇದೆಯಲ್ಲ!! ಅವಳ  ಸಂಸ್ಕಾರದ ದಿನ ತೆಗೆದದ್ದು.
ಸಂಸ್ಕಾರದ ದಿನ ಫೋಟೋ ತೆಗೀಬಾರದು. ಆದರೆ ಯಾರೋ ತೆಗೆದು ದೊಡ್ಡ ಉಪಕಾರ ಮಾಡಿದ್ದಾರೆ. ಇನ್ಯಾರು ?  ನಿನ್ನನ್ನ ಚಿಕಿತ್ಸೆ ಮಾಡ್ತಿರೋ ಡಾಕ್ಟರ್ ವಿಷ್ಣುನೇ.... ಅದಕ್ಕೆ ಆ ಫೋಟೋನ ದೊಡ್ಡದು ಮಾಡಿ ಬಾಗಿಲಿನ ಹಿಂದೇನೆ ಹಾಕಿದ್ದಾರೆ.. ಬಾಗಿಲು ತೆಗೆಯುವಾಗಲೂ ಕಾಣಿಸಬೇಕು.. ಮುಚ್ಚೋವಾಗಲೂ ಕಾಣಿಸಬೇಕು..
ಪ್ರತಿಸಾರಿ ಎಚ್ಚರ ಆದಾಗ್ಲೂ ಕಲ್ಪನಾ.. ಟೀ.. ಕಲ್ಪನಾ.. ಕಾಫಿ.. ಕಲ್ಪನಾ.. ಎಲ್ಲೋದೆ.. ಅಂತ ಹುಡುಕೋಕೆ ಪ್ರಾರಂಭಿಸಿಬಿಡ್ತೀಯಾಂತ.. ಫೋಟೋ ನೋಡು! ಅಂತ್ಯ ಸಂಸ್ಕಾರದ ದಿನ.. ನಿನ್ನ ಮುಖದಲ್ಲಿ ದುಃಖದ ಭಾವನೆಗಿಂತ ಒಂಥರಾ ನಿಲರ್ಿಪ್ತತೆ ಇದೆ,, ಕುತೂಹಲನೂ ಇರಬಹುದು... ಯಾರದಿರಬಹುದು  ಈ 'ಶವ'  ಅಂತ..!
ಹೇ! ತಮಾಷೆ ಮಾಡಿದೆ..
ಪಾಪ! ಡಾಕ್ಟರು! ತಮ್ಮ ಕೈಲಾದ, ಕೈಲಾಗದ ಎಲ್ಲಾ ಕೆಲಸ ಮಾಡ್ತಿದ್ದಾರೆ.. ನಿನ್ನಿಂದಾಗಿ ಅದ್ಯಾವಾವದೋ ಪುಸ್ತಕಗಳನ್ನ ಗುಡ್ಡೆಹಾಕಿಕೊಂಡು, ನಿನ್ನ ಮೆದುಳಿಗೋಸ್ಕರ ಅವರ ಮೆದುಳನ್ನ ಚಿಂದಿ ಮಾಡ್ಕೋತಾ ಇದ್ದಾರೆ..ಬಹುಶ:.ಅವರ ಎ0.ಬಿ.ಬಿ.ಎಸ್ ಮಾಡೋವಾಗ್ಲೂ ಇಷ್ಟೊ0ದು ತಲೆ ಕೆಡಿಸಿಕೊ0ಡಿರಲ್ಲ ಅನ್ಸುತ್ತೆ...

  ಪ್ರತಿ 10 ನಿಮಿಷಕ್ಕೆ 'ಕಲ್ಪನಾ' ನೆಲ್ಲಿ ಹುಡುಕ್ತೀಯಾಂತ ಈ ವ್ಯವಸ್ಥೆ !ನಿನ್ನ ಮಿದುಳಿನ ಕೆಲಸವನ್ನು ತಾವು ವಹಿಸಿಕೊ0ಡಿದ್ದಾರೆ..ವಿನಾಕಾರಣ..!! ನಿನ್ನದು ಮುಮ್ಮುಖ ಮರೆವು... ಬೇರೆಲ್ಲಾನೂ 10 ನಿಮಿಷಕ್ಕಿಂತ ಜಾಸ್ತಿ ಹಿಡಿದಿಟ್ಟುಕೊಳ್ಳಲಾಗದಾ ಆ ನಿನ್ನ ನೆನಪಿನ ಶಕ್ತಿಗೆ ಅದೊಂದು ಶಾಪ ನೋಡು..ಕಲ್ಪನಾ..ಅವಳ ಕೊನೆಯ ಆರ್ತನಾದ...ಮರೆಯೋಕ್ಕೇ ಆಗ್ತಿಲ್ಲ..
 ನಿಂಗೇನಾಗಿದೆ,ಏನಾಗ್ತಿದೆ  ಅಂತ ನಿಂಗೆ ಗೊತ್ತಾಗಲ್ಲ...ಆದರೆ ಕೊನೇ ದಿನ! ಕೊನೇ ದಿನಾನೇ ಅದು.. ಅದಾದ ಮೇಲೆ ಮತ್ತೆ ನಿನ್ನ ಬದುಕಿನಲ್ಲಿ ಇನ್ನೇನಾದ್ರು ಘಟಿಸೋಕೆ ಸಾಧ್ಯಾನಾ ...? ಹೇಳು.
ಆವತ್ತು ಕಲ್ಪನಾಗೆ ಏನಾಯ್ತು ಅಂತ ಗೊತ್ತಲ್ಲ.. ಚೆನ್ನಾಗಿ ನೆನಪಿದೆ ತಾನೇ.. ಅಂತ ಸುಂದರವಾದ, ಅದ್ಭುತವಾದ ಹುಡುಗೀನ ಬರೇ ಕೋಪದಿಂದ ದಿಟ್ಟಿಸೋಕೂ ಸಾಧ್ಯ ಇಲ್ಲ.. ಅಂತಹುವುದರಲ್ಲಿ  ಅದೆಂತಹದ್ದೋ ಕಬ್ಬಿಣದ ರಾಡೋ.. ಏನೋ ಇರಬೇಕು.. ಅದರಲ್ಲಿ ಹೊಡೆದು ಸಾಯ್ಸಿದ ಅಂದ್ರೆ ಅವ್ನೆಂಥ ಕಟುಕ ಇರಬೇಕು..
ಅವನ ಮುಖ ನೆನಪಿಸ್ಕೋ.. ಸ್ವಲ್ಪವೇ ಬಾಣಲಿ ತಲೆ.. ದಪ್ಪನಾದ ಮೂಗು.. ಧಡಿಯ.. ಆಮೇಲೆ ವಿಚಿತ್ರವಾದ ಮೃಗಸ್ವರೂಪಿ ಕಣ್ಣುಗಳು.. ಅವುಗಳನ್ನಂತೂ ಮರೆಯೋಕೂ ಸಾಧ್ಯವಿಲ್ಲ ಅನ್ಸುತ್ತೆ..
ಇಂಥ ಇನ್ನೂ 100 ಖಾಯಿಲೆಗಳು  ನಿನ್ನನ್ನ  ಆಕ್ರಮಿಸಿಕೊಂಡರೂ ಅವನ 'ಚಿತ್ರ'ನ ನಿನ್ನ ಕಣ್ಣುಗಳಿಂದ ಅಳಿಸೋಕೆ ಸಾಧ್ಯಾನೇ ಇಲ್ವೇನೋ..  ಅವಳಿಗೂ ಬಿದ್ದಷ್ಟೇ ಪೆಟ್ಟು ನಿಂಗೂ ಬಿತ್ತು.. ಅವನಿಗೆ ಆ ಕ್ಷಣದಲ್ಲಿ ಆ ಜಾಗದಲ್ಲಿದ್ದ ಯಾವೊಂದು ಸಾಕ್ಷೀನೂ ಜೀವಂತವಾಗಿ ಉಳಿಸೋಕೆ ಇಷ್ಟವಿರಲಿಲ್ಲ. ಆದ್ರೆ ನೀನು ಗಟ್ಟಿ ಪಿಂಡ..
ಅವಳು,.. ಕಲ್ಪನಾ... ಹೂವು..! ನಲುಗಿ ಹೋದಳು.. ಪಕಳೆಗಳನನ್ನ ಮೈ ಚೆಲ್ಲಿ ಛಿದ್ರ ಛಿದ್ರ ಆಗೋದ್ಳು..
ಅವನು ಯಾರು..? ಅವನೆಲ್ಲಿತರ್ನೆ ಅಂತ ಡಾಕ್ಟರುಗಳಿಗೂ ಗೊತ್ತು, ಪೊಲೀಸಿನವರಿಗೂ ಗೊತ್ತು..
ಆದರೆ ಅವರಾರು ನಿಂಗೆ ಹೇಳಲ್ಲ.. 10 ನಿಮಿಷಕ್ಕೊಂದ್ಸಾರಿ ಮರೆತು ಹೋಗೋ ನಿನಗೆ ಅದನ್ನ ಹೇಳಿ ಉಪಯೋಗವಿಲ್ಲ ಅಂತ ಅವರೇ ಅಂದ್ಕೊಂಡು ಬಿಟ್ಟಿದ್ದಾರೆ..
ಈ ಯಾತನೆಗೆ.. ನಿನ್ನ ಕೋಪಕ್ಕೆ ಕೊನೆ ಇದೆ..
ಅದನ್ನೇ ನಾನು  ಹೇಳ್ತಾ ಇರೋದು..
ಇದು ನಿನ್ನ ಮನೆ., ನಿನ್ನ ರೂಮು ಅನ್ಕೊಂಡಿದ್ದೀಯಾ.. ಹುಚ್ಚ!.. ಇದು ಆಸ್ಪತ್ರೆ... ಅದರಲ್ಲಿ ಒಂದು ಕೊಠಡೀನ ನಿನಗಾಗೇ ಮೀಸಲಾಗಿಟ್ಟಿದ್ದಾರೆ.. ಯಾಕೆ ಹೇಳು?
ನಿನ್ನನ್ನ ಮಾದರಿಯಾಗಿಟ್ಟುಕೊಂಡು ಅವರು ಸಂಶೋಧನೆ ಮಾಡೋಕೆ ? ಅದ್ರಿಂದ ಅವರಿಗೆ ಉಪಯೋಗ ಇದೆ..
ಅವನು ಆ ಧಡಿಯ.. ಅವ್ನಿಗೆ ಉಪಯೋಗ ಇದೆ..
ಆದರೆ ನಿನಗೆ..?
ನಿನ್ನಗುರಿ ಕಥೆ ಏನು ?
ಏಳು.. ಮೇಲೇಳು.. ಏನಾದ್ರೂ ಮಾಡು.....
*****
ಸಂಜಯಗೆ ಎಚ್ಚರವಾಯಿತು ನಿಧಾನಕ್ಕೆ ಕಣ್ಣು  ತೆರೆದ ಸ್ವಲ್ಪ ಹೊತ್ತು ಎಲ್ಲಾ ಅಯೋಮಯ. ಅಂಗಾತ ಮಲಗಿದ್ದರಿಂದ ಸೂರಿನ ಕಡೆ ಅಯಾಚಿತವಾಗಿ ದೃಷ್ಟಿ ಹೋಯಿತು. ಅಲ್ಲಿ ಪೇಪರಿನಲ್ಲಿ, ದಪ್ಪ ದಪ್ಪ ಅಕ್ಷರಗಳಲ್ಲಿ ಬರೆದು ಏನೋ ಅಂಟಿಸಿದ್ದರು. ಸಂಜಯ್ ಅದನ್ನು ಓದಲು ಹೋಗಲಿಲ್ಲ. ತಲೆ ತಿರುಗಿಸಿ ಸುತ್ತ-ಮುತ್ತ ನೋಡಿದ. ಇಡೀ ಕೊಠಡಿಯನ್ನ ಅವಲೋಕಿಸಿದ. ಬೆಳ್ಳಗಿನ ಕೊಠಡಿ ಅದು.. ಎಲ್ಲವೂ ಶ್ವೇತಮಯ.. ಗೋಡೆ ಬಣ್ಣ, ಕಿಟಕಿ ಚೌಕಟ್ಟಿನ ಬಣ್ಣ.. ಪರದೆಗಳು, ಹಾಸಿಗೆ, ಹೊದಿಕೆ ಎಲ್ಲಾ ಬೆಳ್ಳಗೆ..
ಸಂಜಯ್ ಈಗ ಅಂಗಾತವಾಗಿ ಮಲಗಿ ಸೂರಿನಲ್ಲಿದ್ದದ್ದು  ಓದಿದ   ಇದು ಆಸ್ಪತ್ರೆ....  ಇದು  ನಿನ್ನ ಕೊಠಡಿ.. ಎಂದು ಬರೆದಿತ್ತು. ಸಂಜಯ್ಗೆ ಅದರಿಂದ ಹೆಚ್ಚು ಉಪಯೋಗವೇನೂ ಆಗಲಿಲ್ಲ.
ಎದ್ದು ಕುಳಿತುಕೊಂಡವನು ಇಡೀ ಕೊಠಡಿಯನ್ನು ಅವಲೋಕಿಸಿದ. ಕೊಠಡಿ ಸ್ವಲ್ಪ ವಿಸ್ತಾರವಾಗಿಯೇ ಇತ್ತು. 2 ಬಾಗಿಲುಗಳಿತ್ತು. ಒಂದು ಕಿಟಕಿ, ಕಿಟಕಿಯ ಪಕ್ಕವೇ ಒಂದು ಮೇಜು, ಮೇಜಿನ ಮೇಲೊಂದು ಟೇಬಲ್ಲು ಲ್ಯಾಂಪು, ಅದ್ಯಾವವದೋ ಪುಸ್ತಕಗಳು, ಒಂದು ಅಲಾಮರ್್ ಗಡಿಯಾರ, ಫೋಟೋಗಳ ರಾಶಿ ಇತ್ತು. ಹಾಗೆ ಮಂಚದ ಪಕ್ಕದಲ್ಲೇ ಚಿಕ್ಕ 'ಬೀರು' ಇತ್ತು.. ಅದರ ಮೇಲೆ ಒಂದು 'ಡಬ್ಬಿ' ಆ ಡಬ್ಬಿಯ ಮೇಲೆ ಸಿಗರೇಟು ಎಂದು ಬರೆದಿತ್ತು.
ಸಂಜಯ್ ಯಾಕೋ ಒಂದ್ಸಾರಿ ನಕ್ಕವನು, ಕಾಲಿನ ಮೇಲೆ ಇದ್ದ ಹೊದಿಕೆ ತೆಗೆದು ಹಾಕಿ, ಮಂಚದಿಂದ ಕೆಳಕ್ಕೆ ಕಾಲು ಇಳಿಬಿಟ್ಟು ಡಬ್ಬಿ ತೆರೆದು ಒಂದು ಸಿಗರೇಟು ತೆಗೆದು ತುಟಿಗಿಟ್ಟುಕೊಂಡ. ಪಕ್ಕದಲ್ಲೇ ಲೈಟರ್ ಇತ್ತು ಸಿಗರೇಟು ಹಚ್ಚಿಕೊಂಡ... ಹಾಗೆಯೇ 'ಧಮ್' ಎಳೆಯುತ್ತ ಎದ್ದು ನಿಂತು ಬಾಯಲ್ಲಿ ಸಿಗರೇಟು ಇರುವಂತೆಯೇ ಒಮ್ಮೆ ಮೈಮುರಿದ.
ನಂತರ ಒಂದು 'ಗುಕ್ಕು' ಹೊಗೆ ಹೊರಗೆ ಬಿಟ್ಟ.
 ಹಾಯೆನಿಸಿತು..
ಬೀರು ತೆಗೆದ.. ಅದರಲ್ಲಿ ಬಟ್ಟೆಗಳಿದ್ದವು. ನೀಟಾಗಿ ಒಗೆದು ಇಸ್ತ್ರೀ ಮಾಡಿದ್ದ ಬಟ್ಟೆಗಳು. ಬೀರು ಮುಚ್ಚಿದ.
ಕಿಟಕಿಯ ಪಕ್ಕ ಎಂಥದೋ ಚಾಟರ್್ ತರಹದ ಪೇಪರನ್ನು ಅಂಟಿಸಲಾಗಿತ್ತು. ಸಂಜಯ್ ಹತ್ತಿರ ಹೋಗಿ ಒಮ್ಮೆ ನೋಡಿದ !
ಅದು ದಿನದ ಕಾರ್ಯಕ್ರಮಗಳ ಪಟ್ಟಿ..
ರಾತ್ರಿ 10:00 ರಿಂದ ಬೆಳಗ್ಗೆ 8:00 ರವರೆಗೆ- ಮಲಗು -ನಿದ್ರೆಮಾಡು.
ಬೆಳಿಗ್ಗೆ 8:00 ರಿಂದ 8:30 ಹಲ್ಲುಜ್ಜು...
ಎಂದು ಪ್ರತಿ ಅರ್ಧ ಘಂಟೆಯನ್ನು ವಿಂಗಡಿಸಿ-ವಿಂಗಡಿಸಿ ಆ ಪಟ್ಟಿ ರಚಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೆ ಮಾಡಬೇಕಾದ ಕೆಲಸಗಳೆಲ್ಲವನ್ನೂ ಚಾಚೂ ತಪ್ಪದೆ ಅದರಲ್ಲಿ ಸೇರಿಸಲಾಗಿತ್ತು. ಸಂಜಯ್ ಗಡಿಯಾರದ ಕಡೆ ನೋಡಿದ. ಅದು 8:15 ತೋರಿಸುತಿತ್ತು. ಬೇರೇನೋ ಯೋಚಿಸದೆ 'ಬಾತ್ ರೂಮ್' ಎಂದು ಬರೆದಿದ್ದ ಕೊಠಡಿಯ ಕಡೆಗೆ ಹೆಜ್ಜೆ ಹಾಕಿದ.
ಬಾತ್ ರೂಮಿನ ಒಳ ಬಂದವನೇ ಸುಮ್ಮನೇ ಸುತ್ತಲೂ ಕಣ್ಣಾಡಿಸಿದ. ಕಿಟಕಿಯ ಪಕ್ಕ  'ಆಶ್ ಟ್ರೇ' ಇತ್ತು. ತನ್ನ ಸಿಗರೇಟು ನೋಡಿದ.. ಅರ್ಧ ಸೇದಿಯಾಗಿತ್ತು.. ಅದನ್ನ 'ಆಶ್ ಟ್ರೇ' ಗೆ ತುರುಕಿದ.  ಅಲ್ಲಿದ್ದ ಬೀರು ತೆರೆದ ಟೂತ್ ಪೇಸ್ಟ್, ಟೂತ್ ಬ್ರಶ್ ಇತ್ತು. ನಲ್ಲಿಯ ಗುಂಡಿಯನ್ನು ಒತ್ತಿದ. ಒಂದು ಗುಕ್ಕು ನೀರು ಬಂತು. ಬಾಯಿ ಮುಕ್ಕಳಿಸಿ ಪೇಸ್ಟನ್ನು ಬ್ರಶ್ ಗೆ ಹಾಕಿಕೊಂಡು 'ಕಮೋಡ್' ನ ಮೇಲೆ ಕುಳಿತುಕೊಂಡ..
ನಂತರ ಮತ್ತೆ ಬೀರು ಬಾಗಿಲು ತೆರೆದ. ಮೌತ್ ವಾಷ್ನ್ನು  ಹೊರಗೆ ತೆರೆದ. ಹಲ್ಲುಜ್ಜಿ, ಬಾಯಿ ಮುಕ್ಕಳಿಸಿ, ಟೂಥ್ಪೇಸ್ಟ್ ನ ಪಕ್ಕ ಟೂತ್ಬ್ರಶ್ ಇಟ್ಟು, ಎದುರಿದ್ದ ಕನ್ನಡಿಯಲ್ಲಿ ಮುಖ ನೋಡಿಕೊಂಡ. ಹಾಗೆ ಕನ್ನಡಿಯ ಮೇಲ್ತುದಿಯಲ್ಲಿ ಒಂದು ಕಾಗದದಲ್ಲಿ ಬರೆದಿದ್ದನ್ನು ಓದಿದ. ಹಲ್ಲುಜ್ಜೋಕೆ ಅರ್ಧ ಘಂಟೆ ಬೇಕಾ..?
ಸಂಜಯ್ ಇನ್ನು ತಡಮಾಡಲಿಲ್ಲ. ಅಲ್ಲೇ 'ಮೈಸೋಪು' ಎಂದು ಬರೆದಿದ್ದ ಸೋಪಿನ ಡಬ್ಬಿಯಿಂದ ಸೋಪು ತೆಗೆದುಕೊಂಡು ಮುಖ ತೊಳೆದ. ಕನ್ನಡಿಯ ಪಕ್ಕದ ಹ್ಯಾಂಗರಿನಲ್ಲಿ ನೇತು ಹಾಕಿದ್ದ  ಬಟ್ಟೆ-ಟವೆಲ್ ತೆಗೆದುಕೊಂಡು ಮುಖ ಒರೆಸುತ್ತಿದ್ದಾಗ, ಕನ್ನಡಿ ಮತ್ತು ಹ್ಯಾಂಗರಿನ ನಡುವಿನ ಸಂಧಿಗೆ ಸುರುಳಿ ಸುತ್ತಿ ಇಟ್ಟಿದ್ದ ಕಾಗದವೊಂದು  ಕಣ್ಣಿಗೆ ಬಿತ್ತು.
ಸಂಜಯ್ ಅದನ್ನು ತೆಗೆದು ಸುರುಳಿ ಬಿಡಿಸಿದ. ಅದರಲ್ಲಿ ಬರೆದಿದ್ದನ್ನ ಓದಿದ..
ಮುಖ ಒರೆಸಿ, ಟವೆಲ್ ಅಲ್ಲೇ ಇಡು.. ಇನ್ನೂ ಓದ್ತಾ ಇದ್ದೀಯಾ ಮೂರ್ಖ .. ಪುಟ ತಿರುಗಿನೋಡು.. ಎಂದಿತ್ತು. ಸಂಜಯ್ ಗೆ ಒಂದು ತರವಾಯಿತು. ಹಿಂದೆ ತಿರುಗಿಸಿದ  ಅದರಲ್ಲಿ  ಓದಿದ ಮೇಲೆ ಮೊದಲಿನ ಹಾಗೆ ಸುರುಳಿ ಸುತ್ತಿ ಎಲ್ಲಿತ್ತೋ ಅಲ್ಲೇ ಇಟ್ಟು.. ಹೊರಡು..!
ಸಂಜಯ್ ಮತ್ತೆ-ಮತ್ತೆ ಹಿಂದೆ-ಮುಂದೆ ಓದಿದವನು, ಆ ಕಾಗದವನ್ನು ಸುರುಳಿ ಮಾಡಿ, ಅದೆಲ್ಲಿತ್ತೋ ಅಲ್ಲಿಗೆ, ಹಾಗೇ ತೂರಿಸಿದ.
ಮತ್ತೆ ಕನ್ನಡಿಯಲ್ಲಿ ತನ್ನನ್ನೇ ತಾನು ನೋಡಿಕೊಂಡ. ಆಗ ಅವನಿಗೆ ಆ ಗುರುತು ಕಂಡಿದ್ದು.! ಕಿವಿಯ ಹಿಂಭಾಗದಿಂದ ಪ್ರಾರಂಭವಾಗಿ, ಬೈತಲೆಯಂತೆ ಹಣೆಯ ಹತ್ತಿರ ಬಂದು ಮಾಯವಾಗಿತ್ತು. ಬೆರಳ ತುದಿಯಿಂದ ಅದರ ಜಾಡು ಹಿಡಿದು ಅದನ್ನ ಸವರುತ್ತ ಸಂಜಯ್  ತಲೆ ತಿರುಗಿಸಿಕೊಂಡು ಕನ್ನಡಿಯಲ್ಲಿ ಅದರ ಬಿಂಬ ನೋಡಲು ಸುಮಾರು ಹೊತ್ತು ಪ್ರಯತ್ನಿಸಿದನಾದರೂ ಒಂದು ಸ್ಪಷ್ಟ ಚಿತ್ರಣ ದೊರಕಲಿಲ್ಲ.
ನಂತರ ಬಾತ್ ರೂಮಿನಿಂದ ಹೊರಬಂದವನು ಅದರ ಬಾಗಿಲು ಮುಚ್ಚಿ, ಅದರ ನಾಬ್ ಹಿಡಿದು ತಿರುವಿ ಹಿಂದಕ್ಕೆ ತಿರುಗಿಸಬೇಕು  ಅಷ್ಟರಲ್ಲಿ ಆ ಫೋಟೊ ಅವನ ಕಣ್ಣಿಗೆ ಬಿದ್ದಿತು. ಇನ್ನೊಂದು ಬಾಗಿಲಿಗೆ ಅಂಟಿಸಿದ ಫೋಟೋ ಅದು.
ಹತ್ತಿರ ಹೋದ ಸಂಜಯ್ ಅದನ್ನೇ ದಿಟ್ಟಿಸಿ ನೋಡಿದ.
ಯಾವುದೋ ಶವ ಸಂಸ್ಕಾರದ ಫೋಟೋ ಅದು. ಅದರ ಪಕ್ಕದಲ್ಲಿ ನಿಂತಿರುವ ವ್ಯಕ್ತಿ ತಾನೇ..
ಫೋಟೋದ ಕೆಳಗೆ ಬರೆದಿದ್ದನ್ನು ಓದಿದ.
ಕಲ್ಪನಾಳ ಶವ ಸಂಸ್ಕಾರ.. ದಿನಾಂಕ.. ಚಿಲ್ಲನೆ ರಕ್ತ ಅವನ ಮುಖಕ್ಕೆ ತುಂಬಿ ಬಂದು, ಇಡೀ ಮುಖವೇ ಕೆಂಪಾಯಿತು.. ಮುಷ್ಟಿ ಬಿಗಿಯಿತು.. ಆ ವ್ಯಕ್ತಿ.. ಆ ಧಡಿಯನ ಚಿತ್ರ ಕಣ್ಣ ಮುಂದೆ ಬಂತು..
ಬಿಡಬಾರದು ಅವನನ್ನ..
ಸಂಜಯ್ ಇಡೀ ಕೋಣೆಯನ್ನ ಅವಸರವಸರವಾಗಿ  ಹುಡುಕತೊಡಗಿದ.. ಮಂಚದ ಕೆಳಗೆ.. ಬೀರುವಿನ ಒಳಗೆ.. ಟೇಬಲ್ ಮೇಲೆ.. ಪುಸ್ತಕ..ಪೆನ್ನು..
ಹುಡುಕಿದ..ಹುಡುಕಿದ..
ಹತ್ತು ನಿಮಿಷವಾಯಿತು..
ಮಂಚದ ಕೆಳಗೆ ಹುಡುಕುತಿದ್ದವನು, ಮಂಚದ ಮೇಲೆ ಕುಳಿತುಕೊಂಡ.. ಮತ್ತೆ ಇಡೀ ಕೋಣೆಯನ್ನ ಅವಲೋಕಿಸಿದವನು ಕಿಟಕಿಯ ಪಕ್ಕ ಇದ್ದ ಚಾಟರ್್ ನೋಡಿ, ಎದ್ದು ಚಾಟರ್್ ಹತ್ತಿರ ಹೋದ
ತಿರುಗಿ ಗಡಿಯಾರ ನೋಡಿದ..
9:15 ತೋರಿಸುತಿತ್ತು.. ಮತ್ತೆ ತಿರುಗಿ ಕಾರ್ಯಕ್ರಮ ಪಟ್ಟಿ ನೋಡಿದ. 9 ರಿಂದ 10 ಉಪಹಾರ ದ ಸಮಯ ಹಸಿವಾಗುತ್ತಿದ್ದರೆ ಟೇಬಲ್  ಮೇಲಿನ 'ಕರೆಗುಂಡಿ' ಒತ್ತುವುದು ಎಂದು ಬರೆದಿತ್ತು. ಅದನ್ನ ಎರೆಡೆರೆಡು ಸಾರಿ ಓದಿಕೊಂಡ ಸಂಜಯ್ ಟೇಬಲ್ ಹತ್ತಿರಕ್ಕೆ ಸಾಗಿದ.

                         ******
 ನೀನು ಎಲ್ಲರ ಹಾಗೆ ಬದುಕೋಕೆ ಸಾಧ್ಯಾನೇ ಇಲ್ಲ ! ಕಲ್ಪನಾ ಇಲ್ಲದೆ ಇರೋ ನಿನ್ನ ಪ್ರಪಂಚಾನ ಊಹಿಸಿಕೊಳ್ಳೋಕೆ  ಅಸಾಧ್ಯ.. ಎಲ್ಲಾ ಮರೆತು ಇನ್ನೊಬ್ಬಳ ಪ್ರೀತಿಸಿ, ಮದುವೆಯಾಗಿ ಮಕ್ಕಳು ಮಾಡ್ಕೊಂಡು....

ನಿನ್ನ ಗೆಳತಿ ಹೆಸರನ್ನೇ ನಿನ್ನ ಕೈಲಿ ನೆನಪಿಟ್ಟುಕೊಳ್ಳೋಕೆ ಸಾಧ್ಯ ಇಲ್ಲ..... ಇನ್ನು ಮದುವೆಯಾಗ್ಬಿಟ್ರೆ.. ಅವಳು 24 ಘಂಟೆ ಮದುವೇಲಿ ಜೊತೆಯಾಗಿರೋ ಫೋಟೋ ಹಿಡ್ಕಂಡು ಅಥವ ಅದನ್ನೂ 'ತಾಳಿ' ತರ ಕತ್ತಿಗೆ ನೇತಾಕೊಂಡು ಓಡಾಡಬೇಕಾಗುತ್ತೆ..
ಅಥವಾ ನೀನು ಯಾವುದಾದರೂ ಕೆಲಸನಾದ್ರೂ ಮಾಡೋಕೆ ಸಾಧ್ಯಾನಾ? ಊಹೂಂ....
ಬೇಡಪ್ಪ.. ಆರಾಮವಾಗಿ ಕುಳಿತು ಸಿನಿಮಾ ನೋಡಿ ಮಜ  ಮಾಡೋಕ್ಕಾಗುತ್ತಾ.. ಯಾವುದಾದರು ಪುಸ್ತಕ ಓದೋಕ್ಕಾಗುತ್ತಾ..?ಮೊದಲ ಪುಟದಿ0ದ ಓದೋಕೆ ಶುರು ಮಾಡಿದ್ರೆ ನಾಲ್ಕನೇ ಪುಟದ ನ0ತರ ಮತ್ತೆ ಮೊದಲಿನಿ0ದಾನೇ ಓದಬೇಕೇನೋ?ಅಥವಾ ನ0ಗನ್ಸುತ್ತೆ ಬಹುಶ ಒ0ದೇ ಒ0ದು ಸಣ್ಣಕಥೇನ ನಿನ್ನ ಜೀವಮಾನವಿಡೀ ಓದಬಹುದೇನೋ..??
ಅಥವಾ .. ..ನೀನು  ಎ0ಜಾಯ್  ಮಾಡಬೇಕಂದ್ರೆ 'ಟಿ ವಿ' ಜಾಹೀರಾತುಗಳನ್ನ ಮಾತ್ರ ನೋಡಬೇಕು.. ಅವು ಸಂಪೂರ್ಣ ಅರ್ಥವಾಗುತ್ತೆ ನೋಡು..
ಅಲ್ವಾ..
ಏನೂ ಮಾಡೋಕಾಗದೆ ಬದುಕೋ ಸಾರ್ಥಕತೆನಾದ್ರೂ  ಏನು ಹೇಳು..?
ನಿನ್ನ ರೋಗಾನ ಸರಿ ಮಾಡೋಕಂತೂ ಆಗಲ್ಲ.. ಡಾಕ್ಟರುಗಳಾದ್ರೂ ಏನು ಮಾಡೋಕೆ ಸಾಧ್ಯ.. ಇಡೀ ನಿನ್ನ ಬದುಕನ್ನ 10-10 ನಿಮಿಷದ ತರ ವಿಭಜನೆ ಮಾಡಿ ತುಂಡು-ತುಂಡು ಮಾಡಿ, ಪ್ರತಿಯೊಂದಕ್ಕೂ ಒಂದೊಂದು ಹೆಸರು ಕೊಟ್ಟು ಮಾಡಬೇಕಾದ ಕೆಲಸದ ಲಿಸ್ಟ್ ಮಾಡಿ ಜೀವನನ ತುಸು ಸಹನೀಯ ಮಾಡಬಹುದೇನೋ...?
ಆದ್ರೆ ಅವ್ರು ನಿನ್ನನ್ನ , ನಿನ್ನ ಮನೆಗೆ ಹೋಗೋಕೆ ಬಿಡ್ತಾರೆ ಅನ್ನೋ ನಂಬಿಕೆ ನನಗಿಲ್ಲ..
ಮನೆಗೆ ಹೋಗಿ ಈ 'ಮರೆಗುಳಿ' ಏನ್ಮಾಡೋಕೆ ಸಾಧ್ಯ ? ಅಥವಾ ಮಾಡೋದಾದ್ರೂ ಏನು ? ಅನ್ನೋದು ಅವರ ಪ್ರಶ್ನೆ !
ನಂದೂ  ಅದೇ ಪ್ರಶ್ನೆ !
ಇಲ್ಲಿಂದ ಹೊರಗೆ ಹೋಗಿ ಏನಾದ್ರೂ ಮಾಡಬೇಕಾಗಿದೆಯಾ ?
ನಾನು ಹೇಳ್ತೀನಿ ಕೇಳು..
ಇದೆ!!  ದ್ವೇಷ .... ಸೇಡು..!!  ಆತ್ಮಶಾಂತಿ!!  ಸಂತೃಪ್ತಿ..
ನೋಡು ನಿನ್ನೆದೇಲಿ ದಗದಗ ಅಂತ ಉರೀತಾ ಇರೋ ಬೆಂಕಿ ಆರೋಕೆ ಮುಂಚೇನೆ ನೀನು ನಿನ್ನ ಬೇಟೇನ ಬೆನ್ನೆತ್ತಬೇಕು. ಇಲ್ಲಾಂದ್ರೆ ಈ ಕಾಲ.. ಏನು ಬೇಕಾದ್ರೂ ಮಾಡಿಬಿಡುತ್ತೆ.. ನನ್ನ ಭಯ ಏನಪ್ಪಾಂದ್ರೆ 'ಅದು ನಿನ್ನ ಬೆಂಕಿನ ಶಮನ ಮಾಡಿಬಿಟ್ರೆ....' ಅಂತ.
ಹಾಗಾಗಬಾರದು!!
ಈ ಸಮಯ  ಅನ್ನೋದು ಕೆಲವೊಮ್ಮೆ  ಕ್ಷಮೆ ಮತ್ತು ಹೇಡಿತನ ಎರಡನ್ನೂ  ಒಂದು ಮಾಡಿಬಿಡುತ್ತೆ..
ದ್ವೇಷದಿಂದ ಹಿಂದೆ ಸರಿಯೋ ಹಂಗೆ ಮಾಡಿಬಿಡುತ್ತೆ..
ಹಾಗೆ ದ್ವೇಷದಿಂದ  ಹಿಂದೆ ಸರಿಯೋ ಹಂಗೆ ಮಾಡೋದು ಸಮಯ ಅಷ್ಟೇ ಅಲ್ಲ.. ಇನ್ನೊಂದಿದೆ..ಕಾನೂನು.. ಪೊಲೀಸು..
ಏನಾದ್ರೂ  ತಪ್ಪು  ಮಾಡಿದೆ ಕರೆದುಕೊಂಡೋಗಿ ಜೈಲಲ್ಲಿ ಕೂರಿಸ್ತೀವಿ ಅಂತಾರೆ.. ಶಿಕ್ಷೆ ಕೊಡ್ತೀವಿ ಅಂತ ಹೆದ್ರಿಸ್ತಾರೆ..
ಈಗ ನೀನು ಇರೋದಾದ್ರೂ  ಎಲ್ಲಿ ಅನ್ಕೊಂಡೆ.. ನಿನ್ನ ರೂಮಿಗೆ ಕಂಬಿಗಳಿಲ್ಲ.. ಬೀಗ ಇಲ್ಲ.. ಕಾಯುವವರು ಯಾರು ಇಲ್ಲ ಅನ್ನೋದು ಬಿಟ್ರೆ ಇದು ಜೈಲೇ ತಾನೇ..!!
ಅಥವ ನೀನೀಗಾಗ್ಲೆ ಜೀವಂತ ಶವ ಆದ್ರಿಂದ ಅವರಿಗೆ ಅದರ ಅವಶ್ಯಕತೆ ಕಾಣಿಸ್ದೆ ಇರಬಹುದು..!!
ಅಂದ್ರೆ  ಅದರರ್ಥ..ನೀನು ಈ ಪೊಲೀಸು - ಜೈಲು ಇವಕ್ಕೆಲ್ಲ ಹೆದರಬೇಕಾಗಿಲ್ಲಾ0ತ. ಇನ್ನು  ಸಮಯ-.. ಅದು ನಿನ್ನ ಮೇಲೆ ಪ್ರಭಾವ ಬೀರೋಕೆ ಸಾಧ್ಯವೇ ಇಲ್ಲ, ಪದೇ ಪದೇ- ಪ್ರತೀ ಸಲ .. ಹತ್ತು ನಿಮಿಷಾನೇ..
ಹೊಸ-ಹೊಸ ಹತ್ತು ನಿಮಿಷಾನೇ..
ಕಾಲ ಎಲ್ಲವನ್ನು ಮರೆಸುತ್ತೆ ಅಂತಾರೆ. ನಿಂಗೆ ಮರೆಯೋಕೆ ಸಾಧ್ಯ ಇಲ್ಲಾಂದ್ಮೇಲೆ  ಕ್ಷಮಿಸೋದಾದ್ರು  ಹೇಗೆ.. ನೀನು ಈಗ ಒಂದು ತುಣುಕು . ಹತ್ತು ನಿಮಿಷದ ಮನುಷ್ಯ. ಇದು ನಿನ್ನ ದೌರ್ಬಲ್ಯ.. ಆದರೆ ತುಂಬಾ ಪ್ರಬಲವಾದ ದೌರ್ಬಲ್ಯ. ಇಷ್ಟೊತ್ತಿಗೆ ನೀನು ಈ ಚಿಕ್ಕ ಕೋಣೀಲಿ ಕುಳಿತು ಗಳಗಳಾಂತ ಅಳಬೇಕಿತ್ತೇನೋ.. ಅಳಿದುಳಿದಿರೋ ಚೂರು-ಪಾರು ನೆನಪುಗಳನ್ನ  ಹೆಕ್ಕಿಕೊಂಡು, ಅದನ್ನೇ ತಿರುಗಿಸಿ - ಮುರುಗಿಸಿ ಅದಕ್ಕೆ ತಕ್ಕ ಹಾಗೆ ಸ್ಪಂದಿಸುತ್ತಾ ಕುಳಿತಿರಬೇಕಿತ್ತೇನೋ..?
 ಆದರೆ  ನಿಂಗೆ ಹಾಗಿರೋಕಾಗಲ್ಲ..
ಯಾಕೆಂದರೆ ನಿನ್ನ ನೆನಪುಗಳ ತುಣುಕುಗಳ ಕೊನೇ ತುಣುಕು..ನಿನಗೆ ಚೆನ್ನಾಗಿ ನೆನಪಿದೆ..
ಅವನ ಮುಖ.. ಆ ಬಾಣಲಿ ತಲೆ.. ಧಡಿಯ..
ಮತ್ತೆ ಕಲ್ಪನಾ!! ನೋವಿನಿಂದ ವಿಲ - ವಿಲಾಂತ ಒದ್ದಾಡ್ತ.. ನಿನ್ನ ಕಡೇನೇ ನೋಡ್ತಾ.. ನಿಂಗೇನಾದ್ರೂ ಆಗಿಬಿಡುತ್ತಾ ಅಂತ ದುಗುಡಗೊಳ್ತಾ.. ಯಾರಾದ್ರೂ ಕಾಪಾಡ್ತರಾ..ದೇವರು ಕಾಪಾಡೇ ಕಾಪಾಡ್ತಾನೆ.. ಅಂತ ಕೊನೆಗಳಿಗೇಲಿ ಪ್ರಾಥರ್ಿಸುತ್ತಾ.. ಬಿದ್ದ ಏಟಿಗೆ ತಲೆ ಛಿದ್ರವಾಗಿ.. ಕೊನೆಗೊಂದು ಆರ್ತನಾದಮಾಡಿ....
ನಿನಗಾಗಿರೋ ಈ ಹಿಮ್ಮುಖ ಮರೆವು ಈ ದೃಶ್ಯಾನ ಮರೆಯೋಕೆ ಬಿಡಲ್ಲ.. ಅದು ಹೊಸ ನೆನಪುಗಳನ್ನ ಯಾವುದನ್ನೂ 10 ನಿಮಿಷದ ಮೇಲೆ ಉಳಿಸಿಕೊಳ್ಳಲ್ಲ.. ನಿನ್ನ ಮೆದುಳಿನಲ್ಲಿ ಯಾವಾಗಲೂ ಹೊಸ ಸರಕು ತುಂಬೋದೆ ಇಲ್ವಲ್ಲಾ..
ಈ ತುಣುಕು ಯಾವತ್ತಿದ್ರೂ ಶಾಶ್ವತ.. ಅಲ್ವಾ?
ನಿನ್ನ ಜೀವನ ಮುಗಿದೋಯ್ತು ಅಂತ ಅನ್ಕೋತೀಯಲ್ಲ .. ಇಲ್ಲ ಇನ್ನೂ ಅ0ತಿಮ ಘಟ್ಟ ಬಾಕಿ ಇದೆ.. ಅದನ್ನ ಯಶಸ್ವಿಯಾಗಿ ಮುಗಿಸಿದ ಮೇಲೆ ನಿನ್ನ ಜೀವನಕ್ಕೊಂದು ಅರ್ಥ ಸಿಗೋದು!
ಅದೆಲ್ಲ ಮುಗಿದ್ಮೇಲೆ ಮಾಮೂಲಿ ಇದೇ ತರ ಇನ್ನೂ ಚಿಕ್ಕದಾಗಿರೋ ಕೋಣೇಲಿ ಕೂಡಿ ಹಾಕ್ತಾರೆ.. ಉಳಿದ ಜೀವನನೆಲ್ಲ ನೀನಲ್ಲೇ ಕಳಿಬೇಕು.. ಆಗ ನಿನಗೆ ಕೊರಗು ಇರಲ್ಲ...
ಅವನನ್ನ ಬಿಡಲಿಲ್ಲ.. ಅನ್ನೋ ಚೀಟಿ ಒಂದು ನಿನ್ನತ್ರ ಇರುತ್ತಲ್ವಾ!!
ಅದಕ್ಕಿಂತ ಸಂತೃಪ್ತಿ ಇನ್ನೇನಿದೆ ಹೇಳು..?!
ನಿನಗೆ ಮಾಡೋಕೆ ಎಷ್ಟೊಂದು ಕೆಲಸ ಇದೆ ಅಂತ ಗೊತ್ತಾಯ್ತಲ್ಲ. ನಿಂಗೆ ಅಸಾಧ್ಯ ಅನ್ನಿಸಬಹುದು.. ಆದರೆ ನನಗೆ ನಿನ್ನ ಮೇಲೆ  ನಂಬಿಕೆ ಇದೆ..ಖಾತರಿ ಇದೆ.. ನಿನಗೆ ಹೆಚ್ಚು ಸಮಯ ಇಲ್ಲ.. ಬರೇ ಹತ್ತು ನಿಮಿಷ ಹೆಚ್ಜಿಲ್ಲ.. ಆಮೇಲೆ ಮತ್ತೆ ಹೊಸದಾಗಿ ಪ್ರಾರಂಭವಾಗಿಬಿಡುತ್ತೆ.. ಆದ್ದರಿಂದ ಈ ಸಮಯ ಕಳೆಯೋಕೆ ಮುಂಚೆ ಕಾರ್ಯಪ್ರವೃತ್ತನಾಗು... ಹೊರಡಬೇಕು.. ಹುಡುಕಬೇಕು.. ಮುಗಿಸಬೇಕು..
ಬರೋ ಹೊಸ  ಹತ್ತು ನಿಮಿಷದಲ್ಲಿರೋ ಹೊಸ 'ನಿನ್ನ' ಕೆಲಸ ಮಾಡಿಸಬೇಕೂಂದ್ರೆ ಚೀಟಿಗಳು ಅವಶ್ಯಕ!!
ಕೈಗೆ ಪೇಪರು ತಗೋ.. ಲಿಸ್ಟ್ ಮಾಡು.. ಸಹಾಯಕ್ಕೆ ಗಡಿಯಾರ ಇದೆ.. ಸಾಕಲ್ವಾ..

                       **********
ಅಲಾಮರ್್ ಬಡಿದುಕೊಂಡಿದ್ದರಿಂದ ಸಂಜಯ್ ಗೆ ಎಚ್ಚರವಾಯಿತು. ಕಣ್ಮುಚ್ಚಿಕೊಂಡೇ ಕೈಯಿಂದ ಅಲಾಮರ್್ ಆಫ್ ಮಾಡಲು ಕೈ ಹಾಕಿ ತಡವಿದ. ಅಲಾರ್ಮ್ ಅಲ್ಲಿರಲೇ ಇಲ್ಲ. ಆದರೆ ಬಡಿದುಕೊಳ್ಳುತಿತ್ತು. ವಿಧಿಯಿಲ್ಲದೆ ಕಣ್ಣು ತೆರೆದರೆ ಕತ್ತಲೆ ಕಣ್ಣೆಗೆ ರಾಚಿತು. ಪಕ್ಕದಲ್ಲಿದ್ದ ಲ್ಯಾಂಪಿನ ಸ್ವಿಚ್ ಆನ್ ಮಾಡಿದ. ಇಡೀ ರೂಮು ದೀಪದ ಬೆಳಕಿನಿಂದ ಬೆಳಗತೊಡಗಿದ ಆ ಬೆಳಕೆಗೆ ಕಣ್ಣುಗಳು ಹೊಂದಿಕೊಳ್ಳಲು ಸುಮಾರು ಹೊತ್ತೇ ಹಿಡಿಯಿತು.
ಮಲಗಿಕೊಂಡೆ ಸುತ್ತಲೂ ಕಣ್ಣು ಹಾಯಿಸಿದ. ಇಡೀ ಕೋಣೆ ಖಾಲಿ ಖಾಲಿಯಾಗಿತ್ತು. ಸುಮಾರು ಹೊತ್ತು ಬಡಿದುಕೊಂಡ ಅಲಾಮರ್್ ನಿಂತಿತು. ಸಂಜಯ್  ಗಡಿಯಾರ ನೋಡಿದಾಗ 3:20  ತೋರಿಸುತ್ತಿತ್ತು. ಕಿಟಕಿ ಕಡೆ ನೋಡಿದಾಗ ಇನ್ನೂ ಕತ್ತಲಿದ್ದರಿಂದ ಇದು ಬೆಳಗಿನ ಜಾವದ 3:20 ಎಂಬುದರ ಅರಿವಾಯಿತು ಸಂಜಯ್ ಗೆ.
ಹಾಗೆ ಹೊದಿಕೆ ಸರಿಸಿದವನಿಗೆ ಕಂಡದ್ದು ಶೂ ಧರಿಸಿದ್ದ ಕಾಲುಗಳು. ಈಗ ಸಂಜಯ್ ತನ್ನನ್ನ ತಾನೇ ನೋಡಿಕೊಂಡ. ನೀಟಾಗಿ ಇನ್ಷಟರ್್ ಮಾಡಿದ್ದ. ಜೀನ್ಸ್ ಧರಿಸಿದ್ದ... ಮೇಲೆ ಜಾಕೆಟ್ ಬೇರೆ !
ಮೇಲಿದ್ದವನು ಇಡೀ ಕೋಣೆಯನ್ನು ಅವಲೋಕಿಸಿದ. ಖಾಲಿ ಖಾಲಿಯಾಗಿತ್ತು. ಗೋಡೆಗೆ ಅಂಟಿಸಿದ್ದ ಟೇಪಿನ ತುಂಡುಗಳನ್ನ ಬಿಟ್ಟರೆ ಬೇರೇನೂ ಇರಲಿಲ್ಲ
ಬೇರೇನೂ ಇರಲಿಲ್ಲ..
ಎಲ್ಲಾ ಖಾಲಿ..ಖಾಲಿ..
ಸ್ವಲ್ಪ ಹೊತ್ತಿನ ನಂತರ ಮತ್ತೆ ಅಲಾಮರ್್ ಬಡಿದುಕೊಂಡಾಗ ಸಂಜಯ್ ಅದರ ಹತ್ತಿರ ಹೋಗಿ ಆಫ್ ಮಾಡಿದ. ಆಗ ಅವನ ಕೈನ ಹಿಂಭಾಗಕ್ಕೆ ಎರಡು ಬೀಗದ ಕೈಗಳನ್ನು ಟೇಪಿನಿಂದ ಅಂಟಿಸಿರುವುದು ಗಮನಕ್ಕೆ ಬಂತು. ಅದರ ಜೊತೆಗೆ ಒಂದು ಚೀಟಿ.
ಜಾಕೇಟಿನ ಜೀಬಿಗೆ ಕೈ ಹಾಕಿದ.. ಸಾವಿರ ನೋಟುಗಳ ಒಂದು ಕಂತೆ ಇತ್ತು.. ಅದಕ್ಕೂ ಒಂದು ಚೀಟಿ ಹಚ್ಚಲಾಗಿತ್ತು.. ಅದರ ಜೊತೆಗೆ ಒಂದು ಅಂಟಿಸಿದ  ಎನ್ವಲಪ್ ಇತ್ತು... ಹಾಗೇ ಜೇಬು ಹುಡುಕುತ್ತಿದ್ದವನಿಗೆ ಬಲ ಜೇಬಿನಲ್ಲಿ ಒಂದಷ್ಟು ಫೋಟೊಗಳು, ನಕ್ಷೆಗಳು..  ಮತ್ತು ಒಂದು ಚಿಕ್ಕ ಕಾಗದ ಕಟ್ಟು ಸಿಕ್ಕಿತು..
ಎಲ್ಲವನ್ನೂ ಮತ್ತೆ ಜೇಬಿಗೆ ಹಾಕಿ ಮತ್ತೆ ರೂಮನ್ನು ಹುಡುಕತೊಡಗಿದ ಬಾತ್ ರೂಮಲ್ಲಿ  ಆಶ್ ಟ್ರೇ ಬಿಟ್ಟರೆ ಬೇರೇನೂ ಇರಲಿಲ್ಲ.
ಸಂಜಯ್ ಗೆ ಏನು ಮಾಡಬೇಕೆಂದು ತೋಚಲಿಲ್ಲ. ಏನು ಮಾಡಬೇಕೆಂದು ಹೇಳುವ ಕಾರ್ಯಕ್ರಮ ಪಟ್ಟಿಯು ಅಲ್ಲಿರಲಿಲ್ಲ..
ಜೇಬಿನಲ್ಲಿದ್ದ ಕಾಗದ ಕಟ್ಟುಗಳನ್ನು ತೆಗೆದು  ಓದೋಣವೆನಿಸಿದರೂ ಯಾಕೋ ಬೇಡವೆನಿಸಿತು. ಹಾಗೆ ಹಿಂದಿರುಗಿ ಹಾಸಿಗೆಯ ಹತ್ತಿರ ಬಂದವ, ಹಾಗೆ ಹಾಸಿಗೆಯ ಮೇಲಿ ಅಡ್ಡಾದ.
ಏಳು.. ಈ ತಕ್ಷಣ ಇಲ್ಲಿಂದ ಹೊರಡು.. ಇವರು ನಿನ್ನ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ..
ಎಂದು ವಕ್ರವಕ್ರವಾಗಿ ಬರೆದ ಕಾಗದವನ್ನು ಸೂರಿಗೆ ಅಂಟಿಸಲಾಗಿತ್ತು. ಸಂಜಯ್ ತಡಮಾಡಲಿಲ್ಲ.
                       
                                  *************

ನಿನ್ನ ಸ್ಕೂಲ್ಡೇಸ್ ನೆನಪಿದೆಯಾ? ಪರೀಕ್ಷೇಲಿ ಕಾಪಿ ಹೊಡೀತಾ ಇದ್ದದ್ದು.. ನಿನ್ನ ಪಕ್ಕದಲ್ಲಿ ಕುಳಿತುಕೊಳ್ತಿದ್ದ ಉಮಾಶಂಕರ ಅಂಗೈ ಮೇಲೆ , ಕೈ ಮೇಲೆ, ತೋಳ ಮೇಲೆಲ್ಲ ಕಾಪಿ ಬಕರ್ೊಂಡು  ಬತರ್ಿದ್ದನಲ್ವಾ.... ಸಿಕ್ಕಾಕೊಂಡು ಫೇಲಾದದ್ದು ಬೇರೆ ಮಾತು....
ಎಷ್ಟೂಂತ ಚೀಟೀಲಿ ಬರೆದಿಟ್ಕೋತೀಯಾ ಹೇಳು.. ಆಮೇಲೆ ಆ ಚೀಟೀನೆ ಫಾಲೋ ಮಾಡಬೇಕೂಂತ ನಿಂಗ್ಯಾವ ಚೀಟಿ ಹೇಳುತ್ತೆ ಹೇಳು..
ಅಕಸ್ಮಾತ್ ನಿನ್ನ ಶಟರ್ು, ಜಾಕೆಟ್ ಎಲ್ಲಾದ್ರೂ ಬಿಟ್ಟು ಹೋದ್ರೆ, ಕಳೆದು ಕೊಂಡ್ರೆ ನಿನ್ನ ಜೀವನಾನೇ ಮುಗಿದೋಗುತ್ತೆ..
ಆಮೇಲೆ ನಿನ್ನ ಗುರಿ ಕಥೆ..??
ಜೊತೆಗೆ ಇಂಥ ಕೆಲಸಗಳನ್ನು ಮಾಡೋವಾಗ ಬೇರೆಯವ್ರನ್ನ ನಂಬೋಕೂ ಆಗಲ್ಲ. ನಾವೇ ಮಾಡಬೇಕು.. ನೀನಿದ್ರೆ ಸಾಕು..ಆ ಲಿಸ್ಟ್ ನಿನ್ನ ಹತ್ತಿರ ಇರಬೇಕು.
ಆಂಥ ಜಾಗ ಯಾವುದು?
ಯೋಚಿಸ್ತಾ ಇದ್ದೀಯಾ ?
ಜಾಸ್ತಿ ಯೋಚಿಸಬೇಡ..
ಸುಮ್ನೆ ಉಮಾಶಂಕರನ್ನ ನೆನಪಿಸ್ಕೊ..

                              ***************

ಸಂಜಯ್ಗೆ ಎಚ್ಚರವಾಯಿತಾದರೂ ಮಂಪರು ಹಾಗೆ ಇತ್ತು. ಯಾವುದೋ ಸಿನಿಮಾ ಹಾಡು ಸಣ್ಣಗೆ ಕೇಳಿಸುತ್ತಿತ್ತು.. ಅಕ್ಕಪಕ್ಕ ಯಾರೋ ಇದ್ದಾರೆ ಎಂಬಂತಾದದ್ದೆ ಸಂಜಯ್ ಬಲವಂತದಿಂದ ಕಣ್ಣು ತೆರೆದ. ಅಲುಗಾಡಿದ.. ಯಾವುದೋ ಕಿರಿದಾದ ಮಂಚದ ಮೇಲೆ ಮಲಗಿದ್ದ. ಮಲಗಿದ್ದಲ್ಲಿಂದಲೇ ಕಣ್ಣನ್ನು ತಿರುಗಿಸಿ ಸುತ್ತ ಮುತ್ತ ನೋಡಿದ. ಚಿಕ್ಕದಾದ ಕೋಣೆ ಅದು.. ಸುತ್ತ ಮುತ್ತ ಕನ್ನಡಿಗಳೇ ರಾರಾಜಿಸುತ್ತಿದ್ದವು. ಚಿತ್ರ ವಿಚಿತ್ರ ಚಿತ್ರಪಟಗಳು ಇಡೀ ಕೋಣೆಯ ತುಂಬಾ ನೇತಾಡುತ್ತಿದ್ದವು.
ಕೈ ಎಳೆದುಕೊಳ್ಳಲು ಪ್ರಯತ್ನಿಸಿದಾಗ ಉಂಟಾಯಿತು ನೋವು..
ಉರಿ ಉರಿ..!!
ಸಂಜಯ್ ತನ್ನ ಕೈ ನೋಡಿಕೊಂಡ. ಮಣಕೈಯಿಂದ ಸ್ವಲ್ಪ ಮೇಲೆ ಇವನೇ.. ಕಲ್ಪನಾ ಕೊಲೆಗಾರ.. ಎಂದು ಹಚ್ಚೆ ಹುಯ್ಯಲಾಗಿತ್ತು. ಅಲ್ಲಿಂದ ಒಂದು ಬಾಣ ಮೇಲ್ಮುಖವಾಗಿತ್ತು. ತೋಳಿನ ಕಡೆ ತೋರಿಸುತ್ತಿತ್ತು. ತೋಳನ್ನ ನೋಡಬೇಕೆನ್ನಿಸಿತು. ಅಷ್ಟರಲ್ಲಿ ವ್ಯಕ್ತಿಯೊಬ್ಬ ಮುಂದೆ ಬಂದು ನಿಂತಿದ್ದ,  ದಪ್ಪಕ್ಕಿದ್ದ.  ನೀವು ಕೊಟ್ಟ ಲೀಸ್ಟಿನಲ್ಲಿರೋದನ್ನೆಲ್ಲಾ   ಟ್ಯಾಟ್ಟೂ ಹಾಕಾಯ್ತು... ಎಂದ, ದಪ್ಪಗಿನ ವ್ಯಕ್ತಿ.ಸುಮ್ಮನೆ ಏನೂ ಅರ್ಥವಾಗದೆ ಸ0ಜಯ ಅವನನ್ನೇ ದಿಟ್ಟಿಸಿದ..
ತೋಳ ಮೇಲಿರೋ ಚಿತ್ರಕ್ಕೆ ಸ್ವಲ್ಪ ಹೊತ್ತು ಬೇಕು ಎಂದ.
ಸಂಜಯ್ ಮಾತನಾಡಲಿಲ್ಲ ಸುಮ್ಮನೆ ಅವನನ್ನು ನೋಡಿದ. ಆ ವ್ಯಕ್ತಿ ಮುಂದೆ ಮಾತನಾಡಲಿಲ್ಲ.
ತನ್ನ ಪಾಡಿಗೆ ತಾನು ಆ ಕಡೆ ಹೋಗಿ ಆ ಪರಿಕರಗಳನ್ನ ಜೋಡಿಸಿಡತೊಡಗಿದ.
ಸಂಜಯ್ ಕಣ್ಮುಚ್ಚಿಕೊಂಡು ಮಲಗಿದ..
ಹಲೋ.... ಸಾರ್.... ಮುಗೀತು ಸಾರ್..
ಧ್ವನಿ ಕೇಳಿ ಸಂಜಯ್ ಕಣ್ಣು ಬಿಟ್ಟ. 'ಏನು ಮುಗೀತು..?' ಎಂದು ಕೇಳಬೇಕೆನ್ನಿಸಿದರೂ ಕೇಳಲಿಲ್ಲ.. ಬದಲಿಗೆ ಸುಮ್ಮನೆ ಆ ಕಡೆ ಈ ಕಡೆ ನೋಡಿದ..ನ0ತರ ಅವನನ್ನೇ ನೇರವಾಗಿ ದಿಟ್ಟಿಸತೊಡಗಿದ. ದೃಷ್ಟಿ ಎದುರಿಸಲಾರದೆ ಅವನು ಅಲ್ಲೇ ಇದ್ದ ಸಂಜಯ್ನ ಶಟರ್ು ತೆಗೆದುಕೊಟ್ಟ. ಸಂಜಯ್ ಶರ್ಟ್ ಕಡೆಗೊಮ್ಮೆ ನೋಡಿ,ಶರ್ಟನ್ನ ಅವನ ಕೈಯಿಂದ ತೆಗೆದುಕೊಂಡು ಕನ್ನಡಿ ಮುಂದೆ ಹೋಗಿ ನಿಂತು, ಶಟರ್ು ಹಾಕಿಕೊಳ್ಳಲು ಅಣಿಯಾದವನು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನೊಮ್ಮೆ ನೋಡಿ ಬೆಚ್ಚಿದ..
ಇಡೀ ಮೈ ಮೇಲೆಲ್ಲಾ ಹಚ್ಚೆಗಳು.. ನಂಬರ್ ಗಳು.. ದಿನಚರಿಯ ಪಟ್ಟಿಗಳಿದ್ದವು..
ಕಲ್ಪನಾಳನ್ನ ಕೊಂದವನನ್ನು ಸುಮ್ಮನೆ ಬಿಡಬೇಡ.. ಎದೆಯ ಮೇಲೆ ದಪ್ಪನೇ ಅಕ್ಷರದಲ್ಲಿ ಬರೆಯಲಾಗಿತ್ತು. ಸ್ವಲ್ಪ ಹೊತ್ತು ತನ್ನ ಇಡೀ ಮೈಯನ್ನು ದಿಟ್ಟಿಸಿದ ಸಂಜಯ್, ಶಟರ್ು ಹಾಕಿಕೊಂಡ ಶಟರ್ಿನ ಮುಂಗೈಯನ್ನು ಹಿಂದಕ್ಕೆ ಮಡಚಲು ಕೈ ನೋಡಿದಾಗ ಅಲ್ಲಿ ಬಾಣದ ಗುರುತಿತ್ತು..
ಶರ್ಟನ್ನು ತೋಳಿನವರೆಗೂ ಮೇಲೆ ಸರಿಸಿ ತೋಳನ್ನೊಮ್ಮೆ ನೋಡಿ ಕನ್ನಡಿಯ ಮುಂದೆ ನಿಂತ, ತೋಳ ಮೇಲಿರುವ ಚಿತ್ರ ಸ್ಪಷ್ಟವಾಗಿ ಕಾಣುವಂತೆ.
ಅಲ್ಲಿ ವ್ಯಕ್ತಿಯ ಚಿತ್ರವಿತ್ತು.
ಬಾಣಲಿ ತಲೆ.. ಧಡಿಯ.. ರೇಖಾ ಚಿತ್ರದಂತಹ ಹಚ್ಚೆ ಅದಾಗಿತ್ತು.

                                    ***********

ಈವತ್ತು ನಿನ್ನ ಜನ್ಮದಿನ..ಹ್ಯಾಪಿ ಬತರ್್ ಡೇ ಟು ಯೂ  ನಿನಗೊಂದು ಚಿಕ್ಕ ಗಿಫ್ಟ್ ತಂದಿದ್ದೀನಿ.  ಒಂದು ಬಾಟಲು ಬಿಯರು.. ಜೊತೆಗೆ ಒಂದು ಚಿಕ್ಕ ಅಲಾಮರ್್ ಗಂಟೆ.!! ನಿಂಗೊಂದು ಗಡಿಯಾರ ಕೊಡೋಣ ಅನ್ನಿಸ್ತು.. ಆದರೆ ಅದನ್ನ ತಗೊಂಡು ನೀನೇನು ಮಾಡ್ತೀಯಾ..
ಮತ್ತೆ ಈ ಅಲಾಮರ್್ ಘಂಟೆ ಯಾಕೆ ?
ಈ ಪ್ರಶ್ನೇ ನಿನ್ನ ತಲೆ ತಿಂತಿರಬಹುದಲ್ವಾ....
ಪ್ರತೀಸಲ ಇದನ್ನ ನೋಡ್ದಾಗ, ನಿಂಗೆ ಈ ಪ್ರಶ್ನೆ ಜೊತೆ ಇನ್ನೂ ಕೆಲವೊಂದು ಪ್ರಶ್ನೆಗಳು ತಲೆ ತಿನ್ನಬಹುದು..
ಇದೆಲ್ಲಿಂದ ಬಂತು..?
ಇದನ್ನ ಯಾರು ಕೊಟ್ಟರು..?
ಸುಮ್ನೆ ಯೋಚನೆ ಮಾಡು.. ಉತ್ತರ ನಿಂಗೆ ಗೊತ್ತಾಗುತ್ತೆ. ನೀನು ಬದುಕಿದ್ದೀಯಾ ಅಂತ ನೆನಪು ಮಾಡೋಕೆ  ಈ ಘಂಟೆ..
ಪ್ರತಿ ಹತ್ತು ನಿಮಿಷಕ್ಕೆ ಇದು ನಿನ್ನನ್ನ ಎಚ್ಚರಿಸುತ್ತೆ...
ಘಂಟೆ ಹೊಡೆದು..
ನಿಂಗೊತ್ತಾ ಹಳೇ ಕಾಲದಲ್ಲಿ ಜನ ತಾವೆಲ್ಲಿ ಜೀವಂತ ಸಮಾಧಿ ಆಗ್ ಬಿಡ್ತೀವೋ ಅಂತ ಹೆದ್ರುತಿದ್ರಂತೆ..
ವೈದ್ಯಕೀಯ ವಿಜ್ಞಾನ ಇಷ್ಟು ಮುಂದುವರೆದಿರಲಿಲ್ಲ. ಮಲಗಿ ಗಾಢವಾಗಿ ಮಲಗಿ ಮೂಛರ್ೆ ಹೋದವ್ರನ್ನ ಸತ್ತೇ ಹೋದ್ರು ಅಂತ ತಿಲ್ಕೊಂಡು ಬಿಡ್ತಿದ್ರು..ಅವರನ್ನ ಅ0ತ್ಯಸ0ಸ್ಕಾರಕ್ಕೆ ಅ0ತ ಕಕರ್ೊ0ಡು ಸ್ಸಾರಿ ಹೊತ್ಕ0ಡು ಹೋಗೋ ಸ0ದರ್ಭದಲ್ಲಿ ಎಷ್ಟೋ ಜನಕ್ಕೆ ಎಚ್ಚರ ಆಗಿ ಚಟ್ಟದ ಮೇಲೆ ಎದ್ದು ಕುಳಿತು ಬಿಡ್ತಿದ್ರು.. ಕಷ್ಟಪಟ್ಟು ಹೆಗಲು ನೋಯಿಸ್ಕೊಂಡು ಚಟ್ಟಾನ ಹೊತರ್ಾ ಇದ್ದೋರು ದೆವ್ವ-ಭೂತ ಅನ್ಕೊ0ಡು ಚೆಟ್ಟಾನ ಆ ಮಹಾನುಭಾವನ ಸಮೇತ ಅಲ್ಲೇ ಬೀಸಾಕಿ..
ಕಳೆದ ನಿಮಿಷದಲ್ಲಿ ಹೆಣ ಆಗಿದ್ದವನು ನೆಲಕ್ಕೆ ಅಪ್ಪಳಿಸಿ ಸೊಂಟ ಮುರ್ಕೊಂಡು..
ಗೋಳೋ ಅಂತ ಅಳ್ತಿದ್ದ ಸಂಬಂಧಿಕರು ಅಳಬೇಕೋ.. ಸಂತೋಷ ಪಡಬೇಕೋ... ಗಾಬರಿಪಡಬೇಕೋ ಗೊತ್ತಾಗದೆ   ಕಕ್ಕಾಬಿಕ್ಕಿಯಾಗಿ..
ಆಮೇಲೆ...
ಬಹುಶಃ ತಮಟೆ ಕುಣಿತ ಶುರುಮಾಡಿದ್ರೇನೋ..
ಆ ಸದ್ದಿಗಾದರೂ ಅಕಸ್ಮಾತ್ ಸತ್ತಿಲ್ದೆ ಇದ್ರೆ ಎಚ್ಚರವಾಗ್ಲಿ ಅಂತ....
ಇಲರ್ಿ..ಒನ್ಸ್ ಎಗೇನ್ ಹ್ಯಾಪಿಬರ್ತ್ ಡೇ ಟು ಯೂ.....

                                   *************

ಟಿನಾ ಟಿನಾ ಟಿನ್....
ಗಂಟೆ ಶಬ್ದಕ್ಕೆ  ಏನನ್ನೋ ಬರೆಯುತ್ತಿದ್ದ ಸಂಜಯ್ ಬರೆಯುವುದನ್ನು ನಿಲ್ಲಿಸಿದ. ತನ್ನ ಜಾಕೆಟ್ಟಿನ ಜೇಬಿನಿಂದ 'ಅಲಾಮರ್್' ಹೊರಗೆ ತೆಗೆದು ನೋಡಿದ. ನಂತರ ಸ್ನೂಜರ್ ಬಟನ್ ಹೊತ್ತಿದವನೇ ಮತ್ತೆ ಟೇಬಲ್ಲಿನ ಕಡೆ ತಿರುಗಿದ. ಏನೋ ಅರ್ಧ ಬರೆದಿದ್ದ ಕಾಗದ, ಪೆನ್ನು ಇತ್ತು.ಓದಿದ
ಅದು ಯಾರದೋ ವಿಳಾಸ..
ಯಾವುದೋ ಮನೆಯ ವಿಳಾಸ ಅದು
ಅಡ್ರೆಸ್..... ಜೊತೆಗೆ ಅಲ್ಲಿಗೆ ಹೋಗುವ ಬಸ್ಸಿನ ನಂಬರ್ ಇತ್ತು..
ಸಂಜಯ್ಗೆ ಅಯೋಮಯವೆನಿಸಿತು. ಯಾವುದೂ ಸ್ಪಷ್ಟವಾಗಿ ಅರ್ಥವಾಗಲಿಲ್ಲ. ತಲೆ ಎತ್ತಿ ಸುತ್ತಲೂ ನೋಡಿದ, ಅದೊಂದು ವಿಶಾಲವಾದ ಕೋಣೆ, ಅಲ್ಲೊಂದು ಟೇಬಲ್ಲು.. ಟೇಬಲ್ಲಿನ ಮೇಲೆ ಇಡೀ  ನಗರದ ದೊಡ್ಡ ನಕ್ಷೆ ಇತ್ತು. ರೈಲು ಮಾರ್ಗ, ಬಸ್ ಮಾರ್ಗ, ಬಸ್ ಸ್ಟ್ಯಾಂಡ್, ದೇವಸ್ಥಾನಗಳು, ಉಧ್ಯಾನವನಗಳನ್ನ ..  ಅದರಲ್ಲಿ ಗುರುತಿಸಲಾಗಿತ್ತು.
ಸಂಜಯ್ ವಿಳಾಸವಿದ್ದ ಕಾಗದ ತೆಗೆದುಕೊಂಡು ಆ ನಕ್ಷೆಯ ಹತ್ತಿರ ಬಂದವನು.. ಆ ಬಸ್ಸಿನ ಮಾರ್ಗ, ಆ ಸ್ಥಳವನ್ನು ತನ್ನ ಬೆರಳಿನಿಂದ ಗುರುತಿಸಿದ.
ಹಾಗೆ ಸ್ವಲ್ಪ ಹೊತ್ತು ನಿಂತವನು ಆ ಕಾಗದ ಹಿಡಿದುಕೊಂಡೇ ಪಕ್ಕದಲ್ಲಿದ್ದ ದೊಡ್ಡ ಕನ್ನಡಿಯತ್ತ ಬಂದವನು ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡುತ್ತ ನಿಂತ. ಶಟರ್ಿನ ಮೇಲಿನ ಗುಂಡಿ ಬಿಚ್ಚಿದ್ದರಿಂದ ಎದೆ ಕಾಣಿಸುತ್ತಿತ್ತು.... ಏನೋ ಹಚ್ಚೆ ಕಂಡಂತಾದ್ದರಿಂದ ಸಂಜಯ್ ಶಟರ್ಿನ ಗುಂಡಿ ಬಿಚ್ಚತೊಡಗಿದ. ಬಿಚ್ಚಿ ತನ್ನ ಇಡೀ ದೇಹ ನೋಡಿಕೊಂಡ.. ಏನೇನೋ ಹಚ್ಚೆಗಳು.. ನಂಬರ್ಗಳು.. ತಲೆ ಬಗ್ಗಿಸಿ ಓದಲು ಪ್ರಯತ್ನಿಸಿದ..ಅದು 'ಹಿಮ್ಮುಖ' ವಾದ್ದರಿಂದ ಓದಲು ಸಾಧ್ಯವಾಗಲಿಲ್ಲ.....
ಸ್ವಲ್ಪ ಹೊತ್ತಿನ ವ್ಯರ್ಥ ಪ್ರಯತ್ನದ ನಂತರ ಸಂಜಯ್ ತಲೆ ಎತ್ತಿ ಕನ್ನಡಿ ನೋಡಿದ.. ಈಗ ಅವನ ದೇಹದ ಮೇಲಿನ ಹಚ್ಚೆಗಳು ಸರಿಯಾಗಿ ಕಾಣುತ್ತಿತ್ತು..
ಕಲ್ಪನಾಳನ್ನು ಕೊಂದವನನ್ನು ಸುಮ್ಮನೆ ಬಿಡಬೇಡ..
ತಲೆಗೆ ದಪ್ಪನೆಯ ಸುತ್ತಿಗೆಯಿಂದ ಭಾರಿಸಿದಂತಾಯಿತು. ಕಣ್ಣುಗಳು ಕೆಂಪಾದವು.. ಮುಷ್ಟಿ ಬಿಗಿಗೊಳಿಸಿದವನಿಗೆ ಕೈಯಲ್ಲಿ ಪೇಪರು ಇರುವುದು ಗಮನಕ್ಕೆ ಬಂತು.
ಆ ಕಾಗದದ ಚೀಟಿ ಬಿಡಿಸಿದ.
ಆ ವಿಳಾಸವನ್ನು ಎರೆಡೆರೆಡು ಬಾರಿ ಓದಿಕೊಂಡವನು, ಗುಂಡಿ ಹಾಕಿಕೊಳ್ಳುತ್ತಾ ಹೊರಡಲನುವಾದ.

                                  ************

ನನಗೊತ್ತಿಲ್ಲ.. ನೀನಿದನ್ನ ಓದೋವಾಗ ಎಲ್ಲಿರ್ತೀಯಾ?.... ಅಥವಾ ನೀನಿದನ್ನ ಓದ್ತೀಯಾ ಅನ್ನೋ ಖಾತರಿ ಕೂಡ ನಂಗಿಲ್ಲ..... ಅಥವ  ನಿಂಗಿದರ ಅವಶ್ಯಕತೆಯೂ ಇಲ್ಲ.
ಆದರೆ ನಿನ್ನ ಬದುಕೆ ಹಾಗಾಗಿಬಿಟ್ಟಿದೆಯಲ್ವಾ.. ಚೂರೇ ಚೂರುಗಳನ್ನ ಹೆಕ್ಕಿ ಹೆಕ್ಕಿ ಜೊತೆಗೆ ಸೇರಿಸಿ ಒಂದು ಮಾಡಿ.. ಆ ಮೂಲಕ ಬದುಕನ್ನ ರೂಪಿಸಿಕೊಳ್ಳಬೇಕು.
ಪ್ರತಿಯೊಬ್ಬರಿಗೂ ಒಂದು ಅಂತಿಮ ದಿನ  ಅಂತ ಬರುತ್ತೆ.. ಅಥವ ನಮ್ಮ ಪಾಲಿಗೆ ಅದಾಗಲೇ ಮುಗಿದುಹೋಗಿದೆಯಾ ?
ಹಾಗಾಗಿರಲ್ಲ..
ನಿನ್ನ ಪ್ರಯತ್ನ ನೀನು ಮಾಡು..
ಹುಡುಕು.. ಹುಡುಕು.. ಅವ್ನು ಸಿಗೋವರೆಗೂ ಹುಡುಕು..
ಮೂಲೆ-ಮೂಲೆ, ಗಲ್ಲಿ-ಗಲ್ಲಿ ಹುಡುಕು..
ಅವನು ಸಿಗಲೇಬೇಕು..
ಯಾಕೆಂದರೆ ಅವನು ಸಾಯಲೇಬೇಕಲ್ವಾ.. ಸಾವಂತು ಕಟ್ಟಿಟ್ಟ ಬುತ್ತಿ.
ಸಿಕ್ತಾನೆ..!!
ಸಿಕ್ಕ ತಕ್ಷಣ ಅವನನ್ನ ಕೊಂದು ಬಿಡು.
ಹಿಂದೆ- ಮುಂದೆ ಯೋಚನೆ ಮಾಡಲೇಬೇಡ.. ಮುಂದೇನಾಗುತ್ತೋ..
ಅಂತೆಲ್ಲಾ ಯೋಚಿಸೋಕೇ ಹೋಗಬೇಡ..!!  ಅವನು ನಿನ್ನ ಕೈಗೆ ಸಿಕ್ಕಿಹಾಕೊಂಡಾಗ  ಅವನಿಗೇನನ್ನಿಸಬಹುದು.. ಅದೆಂತಹ ಮೂರ್ಖತನದ ಫೈಲ್ಲ್ ಆಗಬಹುದು..
10 ನಿಮಿಷದ...
ಕೇವಲ 10 ನಿಮಿಷದ ಮನುಷ್ಯನ ಕೈಗೆ ಸಿಕ್ಕಿ ಹಾಕ್ಕೊಳ್ಳೋದಂದ್ರೆ  ಅದೆಂತಹ ನಾಚಿಕೆಗೇಡು..!!

                                   **************

ಜೇಬಲ್ಲಿನ ಅಲಾಮರ್್ ಗಂಟೆ ಬಡಿದುಕೊಂಡಾಗ ತಲೆ ತಗ್ಗಿಸಿಕುಳಿತಿದ್ದ ಸಂಜಯ್ ತಲೆಯಿತ್ತಿ ಸುತ್ತಲೂ ನೋಡಿದ. ಅವನೊಂದು ಜೀಪಿನಲ್ಲಿ ಕುಳಿತಿದ್ದ.
ಹೌದು..!!   ಜೀಪೆ..
ಹಾಗೆ ಹೊರಗೆ ನೋಡಿದ.
ಅದೊಂದು ಮನೆ. ಮನೆ ಮುಂದೆ ಜನ ಗುಂಪು ಸೇರಿದ್ದರು.. ಒಂದಷ್ಟು ಜನ ಪೊಲೀಸರು.. ಫೋಟೋ ಗ್ರಾಫರ್ಗಳು...
ಸಂಜಯ್ ತಾನು ಕುಳಿತ ಜೀಪನ್ನೊಮ್ಮೆ ಅವಲೋಕಿಸಿದ. ಅದು ಪೊಲೀಸು ಜೀಪು ! ಹಾಗಾದರೆ ಏನಾಗಿದೆ?
ಯಾರನ್ನಾದರೂ ಕೇಳಬೇಕೆನ್ನಿಸಿತು.
ಆದರೆ ಕೇಳದೆ, ಸುಮ್ಮನೆ ಗುಂಪನ್ನೆ ದಿಟ್ಟಿಸುತ್ತಾ ಕುಳಿತ !!
ಪೊಲೀಸರು ಗುಂಪು ಗೂಡಿದ್ದ ಜನರನ್ನು ಚದರಿಸುತ್ತಿದ್ದರು.
ಚದುರಿಸಿದರು..
ಅಲ್ಲಿದ್ದ ಆ0ಬ್ಯುಲೆನ್ಸ್ ಸ್ವಲ್ಪ ಮುಂದೆ ಬಂತು.
ಆಗ ಕಾಣಿಸಿತು ಹೆಣ!!
ಬೋರಲಾಗೆ ವ್ಯಕ್ತಿಯೊಬ್ಬ ಬಿದ್ದಿದ್ದ. ಅವನ ತಲೆಯ ಭಾಗದಿಂದ ರಕ್ತ ಹರಿದು ಮುಖದ ಹತ್ತಿರವೆಲ್ಲ ಮಡುಗಟ್ಟಿತು. ಅವನ ಕೈಯನ್ನು ಯಾರೋ ತಿರುಚಿದಂತೆ ಬೆನ್ನ ಹಿಂದಕ್ಕಿತ್ತು. ಅವನು ಬಿದ್ದಿರುವ ರೀತಿ ನೋಡಿದರೆ ಅವನಿಗೆ ಪ್ರತಿಭಟನೆಗೆ ಹೆಚ್ಚು ಅವಕಾಶ ಸಿಕ್ಕಿಲ್ಲದಿರುವುದು ಗೋಚರವಾಗುತ್ತಿತ್ತು.
ಯಾರೋ ಸ್ಟ್ರೆಚರ್ ಎಳೆತಂದರು.
ಇನ್ನಿಬ್ಬರು ಅವನನ್ನು ಎತ್ತಿ ತಂದು ಸ್ಟ್ರೆಚರ್ ಮೇಲೆ ಮಲಗಿಸಿದರು.
ಆಗ ಕಾಣಿಸಿತು ಸಂಜಯ್ಗೆ ಅವನ ಮುಖ..
ಅ ಬಾಣಲಿ ತಲೆ.. ಧಡಿಯ..
ಆ ಮುಖವನ್ನು ಸಂಜಯ್ ಮರೆಯಲು ಸಾಧ್ಯವೇ ಇರಲಿಲ್ಲ.
ಅವನು ಸತ್ತು ಹೋಗಿದ್ದಾನೆ..
ಹೌದು.. ಬರ್ಬರವಾಗಿ..
ಸಂಜಯನ ಕಣ್ಣುಗಳಲ್ಲಿ ಸಂತೃಪ್ತಿಯ ಹೊಳಪು ಮಿನುಗಿತು. ಹೌದು ! ಕಲ್ಪನಾಳ ಕೊಲೆಗಾರ.. ನನ್ನ ಕಲ್ಪನಾಳ ಕೊಲೆಗಾರ ಇನ್ನಿಲ್ಲ.
ಅವನನ್ನ ಕಲ್ಲಿನಿಂದ ಜಜ್ಜಿ ಜಜ್ಜಿ ಕೊಲೆ ಮಾಡಲಾಗಿದೆ..
ಕಲ್ಪನಾಳ ನೆನಪು ಬಂದು ಸಂಜಯ್ಗೆ ಕಣ್ಣಲ್ಲಿ ನೀರು ತುಂಬಿತು.
ಸ್ಟ್ರೆಚರನ್ನ  ತುಂಬಿಕೊಂಡು  ಆಂಬುಲೆನ್ಸ್  ಅಲ್ಲಿಂದ ಹೊರಡುತ್ತಿದ್ದಂತೆಯೇ ಇವನು ಕುಳಿತಿದ್ದ ಜೀಪು ಕೂಡ ಹೊರಡತೊಡಗಿತು.
ಸಂಜಯ್ ಗೆ ನಗುಬಂತು!
ಹೌದು.. ಅವನಿಲ್ಲ.. ಆ ಧಡಿಯ ಇಲ್ಲ..
ಸಂಜಯ್ನ ನಗು  ಮರೆಯಾಗತೊಡಗಿತು.. ಏನೋ ಅನ್ನಿಸತೊಡಗಿತು. ಬರೆದಿಡಬೇಕು..ಮರೆಯುವ ಮುನ್ನ ಬರೆದಿಡಬೇಕು..
ಸಂಜಯ್ ಕುಳಿತಲ್ಲಿಂದಲೇ ಜೇಬು ತಡವಿಕೊಂಡ. ನಂತರ ಜೇಬಿಗೆ ಕೈ ಹಾಕಲು ಹೋದವನಿಗೆ ಏನೋ ತಡೆದಂತಾಯಿತು.. ಕೈ ನೋಡಿಕೊಂಡವನಿಗೆ ಅಚ್ಚರಿಯಾಯಿತು..!!
ಅವನ ಕೈಗೆ ಕೋಳ ತೊಡಿಸಲಾಗಿತ್ತು.!!
ಮತ್ತು
ಕೈಗಳಲ್ಲಿ  ರಕ್ತದ  ಕಲೆ ಇತ್ತು.
ಸಂಜಯ್ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಹೇಗೇಗೊ ಕೈ ಹೊಂದಿಸಿ ಕೊಂಡು ಜೇಬಿನಲ್ಲಿದ್ದವೆಲ್ಲವನ್ನು ಹೊರ ಚೆಲ್ಲತೊಡಗಿದ.
ಒಂದಷ್ಟು.. ಹಣ..ಬೀಗದ ಕೈಗಳು.. ತುಂಡು ಕಾಗದಗಳು..
ಒಂದು ತುಂಡು ಕಾಗದ ತೆಗೆದುಕೊಂಡವನು.. ಈಗ ಪೆನ್ನಿಗಾಗಿ ಹುಡುಕತೊಡಗಿದ.
ಬರೆದಿಡಬೇಕು..
ನನ್ನ ಗುರಿ ತಲುಪಿದ್ದೇನೆ..
ಅವನನ್ನ ಕೊಂದಾಗಿದೆ..ಬರೆದಿಡಬೇಕು..
ಎಲ್ಲಿ ಮರೆತುಹೋಗುತ್ತದೋ ಎಂಬ ಗಾಬರಿಯಲ್ಲಿ ಪೆನ್ನಿಗಾಗಿ ಹುಡುಕತೊಡಗಿದ. ಆದರೆ ಪೆನ್ನು ಸಿಗಲೇ ಇಲ್ಲ..
ಪಕ್ಕದಲ್ಲಿ ಕುಳಿತು ಸಂಜಯನನ್ನೇ ಅಚ್ಚರಿಯಿಂದ ದಿಟ್ಟಿಸುತ್ತಿದ್ದ ಪೊಲೀಸಿನವನಿಗೆ ಕೇಳಿದ.
ಸರ್.. ಒ0ದ್ ಸ್ವಲ್ಪ ಪೆನ್ನು ಕೊಡ್ತೀರಾ..??
ಅವನು ಅದೇ ಅಚ್ಚರಿಯಲ್ಲಿ ಏನೊಂದು ಪ್ರಶ್ನೆ ಕೇಳದೆ ಪೆನ್ನು ಕೊಟ್ಟ. ಪೆನ್ನನ್ನು ಹಿಡಿದುಕೊಂಡು ತೊಡೆಯ ಮೇಲೆ ಕಾಗದದ ತುಂಡು ಇಟ್ಟುಕೊಂಡು ತಲೆ ಮೇಲೆತ್ತಿ ಏನು ಬರೆಯಬೇಕೆ0ಬುದನ್ನು  ಮನದಲ್ಲೊಮ್ಮೆ ಪಠಿಸಿದ.
ಕಲ್ಪನಾಳ ಕೊಲೆಗಾರ ಸತ್ತಾಗಿದೆ..ಇನ್ನು ನಾನು ಹುಡುಕುವ ಹಾಗಿಲ್ಲ..ಅವನಿಗೆ ತಕ್ಕ ಶಿಕ್ಷೆ ಆಗಿದೆ..ಅವನ ತಲೆ ಚಚ್ಚಿ.. ಸ0ಜಯ್ ಅವುಡುಗಚ್ಚಿದ.
ಇನ್ನು ಬರೆಯಲು ಪ್ರಾರಂಭಿಸಬೇಕಷ್ಟೆ..!!
ಕ್ರೀ...ಚ್...ಚ್
ಜೀಪಿಗೆ ಏನೋ ಅಡ್ಡ ಬಂದದ್ದರಿಂದ ಡ್ರೈವರ್ ಬ್ರೇಕ್ ಹಾಕಿದ. ಸಂಜಯ್ ಮುಗ್ಗರಿಸಿದ. ಕೈಲಿದ್ದ ಪೇಪರು, ಪೆನ್ನು ಕೆಳಗೆ ಬಿತ್ತು.. ಇವನದನ್ನು ಹುಡುಕಲು ಪ್ರಯತ್ನಿಸುತ್ತಿದ್ದಾಗಲೇ, ಪಕ್ಕದಲ್ಲಿದ್ದ ಪೊಲೀಸ್ ಸುಮ್ಮನಿರುವಂತೆ ಹೇಳಿ, ತಾನೇ ಬಗ್ಗಿ ಪೇಪರು, ಪೆನ್ನು ಎತ್ತಿಕೊಟ್ಟ.
ಪೇಪರು, ಪೆನ್ನು ಕೈಗೆ ತೆಗೆದುಕೊಂಡ ಸಂಜಯ್ಗೆ ಏನು ಬರೆಯಬೇಕೆಂಬುದು ತೋಚಲಿಲ್ಲ.. ಸ್ವಲ್ಪ ಹೊತ್ತು ನೆನಪಿಸಿಕೊಳ್ಳಲು ಪ್ರಯತ್ನಿಸಿದ.. ಸ್ವಲ್ಪ ಹೊತ್ತು ಸುಮ್ಮನೆ ಕುಳಿತ. ನಂತರ  ಏನೂ ತೋಚದೆ ಪೆನ್ನನ್ನು ವಾಪಸ್ಸು ಪೊಲೀಸ್ ಕೈಗೆ ಕೊಟ್ಟ.
ಜೀಪ್ ಸ್ಟೇಷನ್ನಿನ ಹತ್ತಿರ ಬಂದು ನಿಂತಿತು.
ಇಳಿಯುವುದಕ್ಕೆ ಅಣಿಯಾದ ಸಂಜಯ್ ನ ದೃಷ್ಟಿ ಅವನ ಕೈ ಮೇಲೆ ಬಿತ್ತು. ಕೈಕೋಳದಿಂದ ಸ್ವಲ್ಪ ಮೇಲುಗಡೆ..
ಇವನೇ ಕಲ್ಪನಾಳ ಕೊಲೆಗಾರ.. ಎಂದು ಹಚ್ಚೆ ಹಾಕಲಾಗಿತ್ತು ಅದರ ಮುಂದೊಂದು ಬಾಣದ ಗುರುತು ತೋಳಿನ ಕಡೆ ತೋರಿಸುತ್ತಿತ್ತು. ಸಂಜಯ್ಗೆ ತೋಳನ್ನೊಮ್ಮೆ ನೋಡಬೇಕೆನಿಸಿತು.ut
ಅದೇ ಗುಂಗಿನಲ್ಲಿ ಜೀಪಿನಿಂದ ಕೆಳಗಿಳಿದವನು ಸ್ಟೇಷನ್ನಿನ ಒಳಗೆ ನಡೆಯತೊಡಗಿದ. ಇವನ ಹಿಂದೆ-ಮುಂದೆ ಪೊಲೀಸಿನವರಿದ್ದರು. ಅಲ್ಲೊಂದು ಬೈಕ್ ನಿಂತಿತ್ತು, ಸಂಜಯ್ ಸುಮ್ಮನೆ ನಿಂತವನು ತೋಳನ್ನು ಆ ಬೈಕ್ನ ಮಿರರ್ಗೆ ಹೊಂದಿಸಿಕೊಂಡು ನೋಡಿದ..
ಬಾಣಲಿ.. ತಲೆ.. ಧಡಿಯನ ರೇಖಾ ಚಿತ್ರ.
ಕಲ್ಪನಾ.. ಧಡಿಯಾ..
ಸಂಜಯ್ನ ರಕ್ತ ಕುದಿಯತೊಡಗಿತು.
ಅವನನ್ನು ಬಿಡುವುದಿಲ್ಲ ..ಬಿಡಬಾರದು.. ಅವಡುಗಚ್ಚಿದ.
ರೋಷಾವೇಶದಿ0ದ ಕೈ ಮುಷ್ಟಿ ಬಿಗಿಹಿಡಿಯಿತು..  [ಮೂಲ : ಜೊನಾಥನ್ ನೋಲನ್]