Tuesday, November 12, 2013

ಒಟ್ಟಾರೆ ಒಂದಷ್ಟು ಸಿನಿಮಾಗಳು:


ಬ್ಯಾಡ್ಜೆಸ್ ಆಫ್ ಫ್ಯೂರಿ, ಫಾಸ್ಟ್ ಅಂಡ್ ಫ್ಯೂರಿಯಸ್ ಸಿಕ್ಸ್, ಗುಡ್ ಡೇ ಟು ಡೈ ಹಾರ್ಡ್, ಅಸಾಲ್ಟ್ ಆನ್ ವಾಲ್ ಸ್ಟ್ರೀಟ್, ಒಬ್ಲಿವಿಒನ್ ವರ್ಲ್ಡ್ ವಾರ್ ಝೆಡ್ ಚಿತ್ರಗಳು ಈ ವಾರದಲ್ಲಿ ನಾನು ನೋಡಿದ ಚಿತ್ರಗಳು. ಎಲ್ಲಾ ಪಕ್ಕ ಕಮರ್ಷಿಯಲ್, ಮಸಾಲೆ  ಅಂಶಗಳಿರುವ ಸಿನೆಮಾಗಳು ಇವು. ಕಥೆಯ ಬಗ್ಗೆ ಕೇಳುವ ಹಾಗಿಲ್ಲ. ಹೇಳುವುದಕ್ಕೂ ಗೊತ್ತಾಗುವುದಿಲ್ಲ. ಹಾಗಂತ ಬೇರೆಯವರಿಗೆ ಈ ಸಿನೆಮಾ ನೋಡಿ ಎಂದು ಹೇಳಿದರೆ, ಶಿಪಾರಸ್ಸು ಮಾಡಿದರೆ ಯಾಕೆ ನೋಡಬೇಕು ಎಂಬೊಂದು ಪ್ರಶ್ನೆಯನ್ನು ಅವರು ಒಗಾಯಿಸಿದರೆ ನಿಮ್ಮಲ್ಲಿ ಅಂತಹ ಸಮರ್ಥವಾದ ಉತ್ತರವೂ ಇರುವುದಿಲ್ಲ.
ಬ್ಯಾಡ್ಜೆಸ್ ಆಫ್ ಫ್ಯೂರಿ ಈ ವರ್ಷ ಬಿಡುಗಡೆಯಾದ ಚಿತ್ರ. ನಮ್ಮಲ್ಲಿ ಬರುತ್ತಿದ್ದ ಕಳ್ಳ ಪೋಲಿಸ್ ಹೊಡೆದಾಟ ರೌಡಿ ಸಾಮ್ರಾಜ್ಯ ಇತ್ಯಾದಿ ಇತ್ಯಾದಿ ಕಥೆಯಿರುವ ಚಿತ್ರ. ಜಪಾನಿ ನಾಯಕ ಜೆಟ್ ಲಿ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದು ಚಿತ್ರವನ್ನು  ನಿರ್ದೇಶನ ಮಾಡಿದ್ದಾರೆ. ಸಿನೆಮಾದಲ್ಲಿ ಕಥೆಗಿಂತ ಅಲ್ಲಲ್ಲಿ ಬರುವ ಹಾಸ್ಯ ಪ್ರಸಂಗ ಇಷ್ಟವಾಗುತ್ತದೆ. ಅದೆಲ್ಲವನ್ನೂ ಮೀರಿ ಗಮನ ಸೆಳೆಯುವುದು ಚಿತ್ರದಲ್ಲಿರುವ ಮೂರು ಹೊಡೆದಾಟದ ದೃಶ್ಯಗಳು. ಕುಂಗ್ ಫು ಹೊಡೆದಾಟವನ್ನು ಅದ್ಭುತವಾಗಿ ಸಿನಿಮೀಯಗೊಳಿಸಲಾಗಿರುವ ಹೊಡೆದಾಟಗಳು ಮಜಾ ಕೊಡುತ್ತವೆ. ಹುಬ್ಬೇರಿಸುವಂತೆ ಮಾಡುತ್ತವೆ. ಇಷ್ಟರ ಮೇಲೆ ಇನ್ನೇನಾದರೂ ಇದೆಯಾ ಎಂದರೆ ಏನಿಲ್ಲ ಸ್ವಾಮೀ ಎಂದು ಬಿಡಬೇಕಷ್ಟೇ. ಫೈಟಿಂಗ್ ಇಷ್ಟಪಡುವವರು  ಚಿತ್ರವನ್ನೊಮ್ಮೆ ನೋಡಬಹುದು ಅಥವಾ ಡಿವಿಡಿ ತಂದು ಬರೀ ಫೈಟ್ ಅಷ್ಟನ್ನೇ ನೋಡಿ ಖುಷಿ ಪಡಬಹುದು.
ಮೇಲಿನ ವಿವರಗಳು ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರಕ್ಕೂ ಅನ್ವಯವಾಗುತ್ತದೆ. ಇದು ಆ ಸರಣಿಯ ಆರನೆಯ ಚಿತ್ರ. ಒಂದಷ್ಟು ವಾಹನಗಳ ಹಾರಾಟ, ತೂರಾಟ ಈ ಸರಣಿಯ ಮುಖ್ಯ ಅಂಶಗಳು. ಈ ಚಿತ್ರದಲ್ಲಿ ಅವೆಲ್ಲಕ್ಕಿಂತ ಒಂದು ಕೈ ಹೆಚ್ಚಗಿನ ಸಾಹಸವಿದೆ. ಒಂದು ಕಡೆ ಸಾಹಸಿಗಳು, ಮತ್ತೊಂದು ಕಡೆ ಪೊಲೀಸರು, ಜೊತೆ ಸೇರಿ ದುಷ್ಟರನ್ನು ಮಟ್ಟ ಹಾಕುವುದು ಚಿತ್ರದ ಸಾರಾಂಶ.
ಜೀಪಿನಲ್ಲಿ ಹೋಗುತ್ತಾ ದೊಡ್ಡ ವಿಮಾನಕ್ಕೆ ಹುಕ್ ಹಾಕಿ ಅದನ್ನೇ ನೆಲಸಮ ಮಾಡುವ ಸನ್ನಿವೇಶ, ಅದರ
ಚಿತ್ರಣ ರೋಮಾಂಚನ ಉಂಟುಮಾಡುತ್ತದೆ. ಚಿತ್ರದ ಕೊನೆಯಲ್ಲಿ ದೊಡ್ಡ ಸೇತುವೆಯ ಮೇಲೆ ನಡೆಯುವ ಅದ್ದೂರಿ ಭಯಾನಕ ಚೇಸ್  ಉಸಿರುಗಟ್ಟಿಸುತ್ತದೆ. ಯುದ್ಧದಲ್ಲಿ ಬಳಸುವ ಟ್ಯಾಂಕರ್ ತೆಗೆದುಕೊಂಡು ಬರುವ ಖಳರನ್ನು ಮಾಮೂಲಿ ಕಾರಿನಲ್ಲೇ ಹೊಡೆದು ಹಾಕುವ ಚಿತ್ರಣ ರೋಮಾಂಚಕ. ಬರೀ ಅಷ್ಟಕ್ಕಾದರೂ ಒಮ್ಮೆ ಚಿತ್ರವನ್ನೊಮ್ಮೆ ನೋಡಲಡ್ಡಿಯಿಲ್ಲ.ಚಿತ್ರದಲ್ಲಿ ವಿನ್ ಡೀಸಲ್, ಪಾಲ್ ವಾಕರ್ , ರಾಕ್ ಅಂತಹ ನಟರುಗಳ ದೊಡ್ಡ ತಾರಾಗಣವಿದೆ. ಚಿತ್ರದ ಕೊನೆಯಲ್ಲಿ ಟ್ರಾನ್ಸ್ಪೋರ್ಟರ್  ಚಿತ್ರದ ನಾಯಕ ಜಾಸನ್ ಸ್ತಾಥಂ ತೋರಿಸುವುದರ ಮೂಲಕ ಈ ಸರಣಿಯ ಏಳನೆಯ ಭಾಗದಲ್ಲಿ ಖಳನಾಗಿ ಸ್ತಾಥಂ ಇರುತ್ತಾರೆ ಎಂಬ ಸೂಚನೆ ಕೊಡುತ್ತಾರೆ ನಿರ್ದೇಶಕರು.
ಅಂದ ಹಾಗೆ ಏಳರಲ್ಲಿ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರಂತೆ ಮತ್ತು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಖ್ಯಾತ ನಿರ್ದೇಶಕ ಜೇಮ್ಸ್ ವಾನ್.
ಬ್ರೂಸ್ ವಿಲ್ಲಿಸ್ ಡೈ ಹಾರ್ಡ್ ಸರಣಿಗಳಿಗೆ ಹೆಸರುವಾಸಿಯಾದವರು. ಭರ್ಜರಿ ಸಾಹಸ ತುಸು ಹಾಸ್ಯ  ಈ ಸರಣಿ ಚಿತ್ರಗಳ ವಿಶೇಷಗಳು. ಮಗನನ್ನು ಹುಡುಕಿಕೊಂಡು ಬರುವ ಬ್ರೂಸ್ ವಿಲ್ಲಿಸ್ ಅವನಿಗರಿವಿಲ್ಲದೆ ಒಂದು ವಿಷವರ್ತುಲದಲ್ಲಿ ಸಿಕ್ಕಿ ಕೊಳ್ಳುತ್ತಾನೆ. ಇನ್ನೇನು ಮುಂದೆ ಇದ್ದೆ ಇರುತ್ತಲ್ಲ..ಮಾರಿಹಬ್ಬ..
   ಚಿತ್ರದ ಪ್ರಾರಂಭದಲ್ಲಿ ಹದಿನೈದು ನಿಮಿಷಕ್ಕಿಂತಲೂ ಹೆಚ್ಚಾದ ಒಂದು ಚೇಸ್ ಇದೆ. ಅದೇ ಚಿತ್ರದ ಪ್ರಮುಖ ನೋಡಲೇ ಬೇಕಾದ ಅಂಶ. ಉಳಿದದ್ದು ನಿಮಗೆ ಬಿಟ್ಟದ್ದು. ಹೆಲಿಕ್ಯಾಪ್ಟರ್ ನೆಲಕ್ಕುರುಳುತ್ತವೆ..ಕಟ್ಟಡಗಳು ನೆಲಸಮವಾಗುತ್ತವೆ...ಗುಂಡು ಮದ್ದುಗಳು ಟನ್ ಗಟ್ಟಲೆ ಚೆಲ್ಲಾಡುತ್ತವೆ. ಅದಕ್ಕೆಲ್ಲಾ ನಿಮಗೆ ಸಾಕ್ಷಿಯಾಗುವ ಆಸೆಯಿದ್ದರೆ ಒಮ್ಮೆ ನೋಡಬಹುದು.
ಈ ಎಲ್ಲಾ ಸಿನಿಮಾಗಳ ನಡುವೆ ಅಸಾಲ್ಟ್ ಆನ್ ವಾಲ್ ಸ್ಟ್ರೀಟ್ ತಲೆ ಬುಡವಿಲ್ಲದ ಚಿತ್ರ. ಇದೊಂದು ಆಕ್ಷನ್ ಚಿತ್ರವಾದರೂ ಬಜೆಟ್ ಕೊರತೆಯಿಂದಾಗಿ ಚಿತ್ರದಲ್ಲಿ ಏನೂ ಇಲ್ಲ ಎನ್ನುವ ಭಾವನೆ ಮೂಡುತ್ತದೆ. ಶೇರು ಮಾರುಕಟ್ಟೆಯ ಏರುಪೇರು, ಅಲ್ಲಿನವರ ಸ್ವಾರ್ಥದಿಂದಾಗಿ ನಾಯಕನ ವೈಯಕ್ತಿಕ ಬದುಕು ಏರುಪೇರಾಗುತ್ತದೆ. ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದುಕೊಂಡು ನಮ್ಮ ಟೈಗರ್ ಪ್ರಭಾಕರ್ ರೀತಿ ಸಿಕ್ಕಸಿಕ್ಕಲ್ಲಿ ಕೊಲ್ಲುತ್ತ  ಬರುತ್ತಾನೆ ನಾಯಕ. ಚಿತ್ರದಲ್ಲಿ ಯಾವೊಂದು ಅಂಶವೂ ನೋಡತಕ್ಕುದಲ್ಲ. ಬಜೆಟ್ ಇಲ್ಲದಿದ್ದಾಗ ಬರವಣಿಗೆಯಾದರೂ ಕುತೂಹಲಕರವಾಗಿದ್ದರೆ ಚಿತ್ರವನ್ನು ತೂಗಿಸಿಕೊಂಡು ಹೋಗುತ್ತದೆ. ಈ ಚಿತ್ರದಲ್ಲಿ ಎರಡೂ ಇಲ್ಲ.
ಒಬ್ಲಿವಿಯನ್ ಖ್ಯಾತ ನಟ ಟಾಮ್ ಕ್ರುಯಿಸ್ ಅಭಿನಯದ ಚಿತ್ರ. ಇದರ ನಿರ್ದೇಶಕ . ಹಾಗಾಗಿ ಒಂದು ಮಟ್ಟಗಿನ ಕುತೂಹಲ ಇದ್ದೆ ಇರುತ್ತದೆ. ಚಿತ್ರ ನೋಡಿದ ಮೇಲೆ ಆ ಕುತೂಹಲವೆಲ್ಲಾ ಮಾಯವಾಗಿ ಇಬ್ಬರೂ ನಮ್ಮ ನಿರೀಕ್ಷೆಗಳನ್ನು ಮಣ್ಣುಪಾಲು ಮಾಡಿದರು ಎನಿಸುತ್ತದೆ. ಚಿತ್ರ ನಡೆಯುವುದು ಭವಿಷ್ಯದ ಕಾಲಘಟ್ಟದಲ್ಲಿ. ತಲೆಬುಡವಿಲ್ಲದ ಚಿತ್ರಕಥೆ ನೋಡುಗನನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತದೆ.ಇಬ್ಬರು ದಿಗ್ಗಜರು ಸೇರಿಕೊಂಡು ಹೀಗೆಲ್ಲಾ ಮಾಡುತ್ತಾರಾ..ಎನಿಸಿಬಿಡುತ್ತದೆ. ಚಿತ್ರದಲ್ಲಿ ಒಂದಷ್ಟು ವಿಶುಯಲ್ ಎಫೆಕ್ಟ್ಸ್ ಚೆನ್ನಾಗಿದೆ. ಅದೇ ಚಿತ್ರದ ಆರಂಭದಲ್ಲಿ ಏನೋ ಇದೆ ಎನ್ನುವ ಕುತೂಹಲ ಮೂಡಿಸುತ್ತದೆ.
ವರ್ಲ್ಡ್ ವಾರ ಝೆಡ್ ಬ್ರಾಡ್ ಪಿಟ್ ಅಭಿನಯದ ಚಿತ್ರ. ಝೊ೦ಬಿಗಳು ಮಾನವ ಕುಲವನ್ನು ನಾಶಮಾಡಿ ತಮ್ಮದೇ ಸಾಮ್ರ್ಯಾಜ್ಯವನ್ನು ಸ್ಥಾಪಿಸಲು ನೋಡುತ್ತವೆ.ಅವುಗಳನ್ನು ರಕ್ತ ಬಿಜಾಸುರರು ಎನ್ನಬಹುದಾ..? ಚಿತ್ರದಲ್ಲಿ ಒಮ್ಮೆ ಅಲ್ಲಿನ ವಿಜ್ಞಾನಿ ಮಾತನಾಡುತ್ತಾ ಝೊ೦ಬಿಗಳ ಬಗ್ಗೆ ವಿವರ ಕೊಡುತ್ತ ಭಾರತದ ಪ್ರಸ್ತಾಪ ಮಾಡಿ ‘ ಅಲ್ಲಿ ರಾಕ್ಷಸ ‘[ಅವರು ರಕ್ಷಾಸ’ ಎಂದು ಉಚ್ಚರಿಸುತ್ತಾರೆ] ಎನ್ನುವ ಪಂಗಡದೊಂದಿಗೆ ಹೊಡೆದಾಡುತ್ತಿದ್ದರು ಎನ್ನುತ್ತಾನೆ. ಹಾಗಾಗಿ ನಮ್ಮಲ್ಲಿನ ರಾಕ್ಷಸರಿಗೆ ಝೊ೦ಬಿಗಳು ಸಮವಾ...? ಗೊತ್ತಾಗುವುದಿಲ್ಲ. ಪ್ರಾರಂಭದಲ್ಲಿ ಮಕ್ಕಳ ಜೊತೆ ರಜಾದಲ್ಲಿ ಮಜಾ ಮಾಡಲು ಹೊರಟ ನಾಯಕ ಟ್ರಾಫಿಕ್ ಜಾಮ್ ನಲ್ಲಿದ್ದಾಗ ಝೊ೦ಬಿಗಳು ಆಕ್ರಮಣ ಮಾಡಿ ಸಿಕ್ಕಸಿಕ್ಕವರಿಗೆ ಕಚ್ಚಿ ರಕ್ತ ಹೀರಿ ಅದರ ರಕ್ತವನ್ನು ಸೇರಿಸಿ ತಮ್ಮತರಹ ಮಾಡಿಕೊಳ್ಳುತ್ತವೆ. ಅವುಗಳ ಮೂಲ ಹುಡುಕುತ್ತಾ ಹೋಗುವ ನಾಯಕ ಅವುಗಳ ಬಗ್ಗೆ ಕೆಲವು ಅಂಶಗಳನ್ನು ಅರ್ಥ ಮಾಡಿಕೊಳ್ಳುತ್ತಾನೆ.. ಅದೆಂದರೆ ಝೊ೦ಬಿಗಳು ಆರೋಗ್ಯವಂತ ಮನುಷ್ಯನನ್ನೇ ಆಕ್ರಮಣ ಮಾಡುತ್ತವೆ. ನಿಶ್ಯಕ್ತರು, ರೋಗಿಗಳು, ಮುದುಕರನ್ನು ಆಕ್ರಮಣ ಮಾಡುವುದಿಲ್ಲ ಎಂಬುದು. ಈ ಒಂದು ಸೂತ್ರದ ಮೂಲಕ ಮನುಕುಲವನ್ನು ಝೊ೦ಬಿಗಳಿಂದ ರಕ್ಷಿಸಲು ಹೊರಡುತ್ತಾನೆ.
ಚಿತ್ರದಲ್ಲಿ ಗಮನ ಸೆಳೆಯುವುದು ಚಿತ್ರಕಥೆ. ಕುತೂಹಲಕಾರಿ, ಎಲ್ಲೂ ಬೋರ್ ಆಗದ ಚಿತ್ರಕಥೆ ನಿಮ್ಮನ್ನು ಹಿಡಿದು ಕೂರಿಸುತ್ತದೆ. ಹಾಗೆಯೇ ಚಿತ್ರದಲ್ಲಿ ಬರುವ ದೃಶ್ಯವೈಭವ, ವಿಶುಯಲ್ ಎಫೆಕ್ಟ್ಸ್ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಉತ್ತಮ ಸಾಹಸ, ವಿಶುಯಲ್ ಎಫೆಕ್ಟ್ಸ್ ಗಳನ್ನೊಳಗೊಂಡ ಒಳ್ಳೆಯ ಥ್ರಿಲ್ಲರ್ ಚಿತ್ರವಿದು.

Sunday, November 10, 2013

ಇಸ್ತ್ರೀ ಪುರಾಣ- ಲಲಿತ ಪ್ರಬಂಧ.



ಇಡೀ ಊರಿನಲ್ಲಿ ಅಂಗಿಗಳಿಗೆ ಗರಿಗರಿಯಾದ ಇಸ್ತ್ರೀ ಮಾಡಿಕೊಂಡು ಮನೆಯಿಂದ ಹೊರ ಬೀಳುತ್ತಿದ್ದವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಎಂದರೆ ನೀವು ನಂಬಲೇ ಬೇಕು. ಹಬ್ಬ, ಹರಿದಿನ, ಅಪರೂಪಕ್ಕೆ ಪಕ್ಕದ ನಗರ ನಂಜನಗೂಡಿಗೆ, ಯಾವುದೋ ಮದುವೆಗೆ, ಮುಂಜಿಗೆ ಮಾತ್ರ ಇಸ್ತ್ರೀ ಹಾಕಿದ ಬಟ್ಟೆ ಧರಿಸುತ್ತಿದ್ದ ನಮ್ಮೂರಿನ ಜನಕ್ಕೆ ಅದರ ಹೊರತಾಗಿ ಬಟ್ಟೆಗಳಿಗೆ ಇಸ್ತ್ರೀ ಹಾಕುವುದು ವ್ಯರ್ಥ ಎನಿಸುತ್ತಿತ್ತು. ಇಸ್ತ್ರೀ ಹಾಕಲಿಕ್ಕೆ ಇದ್ದ ಧಿರಿಸಾದರೂ ಎಂತಹದು. ಒಂದು ಬಿಳಿಯ ಪಂಚೆ, ಬಿಳಿಯ ಅಂಗಿ ಮಾತ್ರ. ನಮೂರಿನ ಬಹುತೇಕರು ಪ್ಯಾಂಟು ಧರಿಸುತ್ತಿರಲಿಲ್ಲ. ಅದೆಲ್ಲ ಸರ್ಕಾರಿ ಕೆಲಸದಲ್ಲಿರುವವರಿಗೆ ಮತ್ತು ದಿನ ಬೆಳಿಗ್ಗೆ ಪೇಟೆಗೆ ಹೋಗಿ ಬರುವವರಿಗೆ ಸೂಕ್ತ, ಹೊಲದಲ್ಲಿ ಕೆಲಸ ಮಾಡುವ ನಮ್ಮಂಥವರಿಗೆ ಪ್ಯಾಂಟು ಎಂಬುದು ಸೋಮಾರಿತನ ಕಲಿಸಿಕೊಡುವ ಕೆಟ್ಟ ಸಾಧನ ಎನ್ನುವರೀತಿಯಾಗಿ ಜನ ಅಭಿಪ್ರಾಯ ಹೊಂದಿದ್ದರು. ಇದೆಲ್ಲಾ ಕಾರಣಗಳಿಂದಲೇ ನಮ್ಮೂರಿನಲ್ಲಿ ನಮ್ಮ ಮನೆಯಲ್ಲಿದ್ದ ಏಕೈಕ ಇಸ್ತ್ರೀ ಪೆಟ್ಟಿಗೆಗೆ ಭಯಾನಕ ಬೇಡಿಕೆಯಿತ್ತು. ನಮ್ಮಪ್ಪ ಶಾಲಾ ಶಿಕ್ಷಕರಾದ್ದರಿಂದ ದಿನಾ ಇಸ್ತ್ರೀ ಮಾಡುತ್ತಿದ್ದರು. ನಾವು ಶಾಲೆಗೆ ಹೋಗುತ್ತಿದ್ದರಿಂದ ಇಸ್ತ್ರೀ ಮಾಡಿಕೊಳ್ಳುತ್ತಿದ್ದೆವು. ಆರು ತಿಂಗಳಿಗೋ ವರ್ಷಕ್ಕೋ ಬೇಕಾಗುವ ಇಸ್ತ್ರೀ ಪೆಟ್ಟಿಗೆಗೆ ವಿನಾಕರಾಣ ಬಂಡವಾಳ ಹಾಕಲು ನಮ್ಮೂರಿನ ಜನ ಮನಸು ಮಾಡಿರಲಿಲ್ಲ. ಹಾಗಾಗಿ ಬೇಕಾದಾಗ ನಮ್ಮ ಮನೆಗೆ ಬಂದು ಇಸ್ತ್ರೀ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದರು.
ನಮ್ಮ ಮನೆಯಲ್ಲಿದ್ದದ್ದು ದೊಡ್ಡದಾದ ಕಬ್ಬಿಣದ ಇದ್ದಿಲು ಹಾಕಿ ಶಾಖ ಕೊಡಬಹುದಾದಂತಹ ಇಸ್ತ್ರೀ ಪೆಟ್ಟಿಗೆ. ‘ಸಾರ್..ನಿಮ್ಮನೆ ಇಸ್ತ್ರೀ ಪೆಟ್ಟಿಗೆಗೆ ಕಾವಾಕೋದೇ ಬ್ಯಾಡ ಬುಡಿ..ಸುಮ್ಕೆ ಬಟ್ಟೆ ಮೇಲೆ ತಿಕ್ಕಿಬಿಟ್ರೆ ಇಸ್ತ್ರೀ ಆಗೋಯ್ತದೆ...ಒಳ್ಳೆ ರೋಡ ಮೇಲೆ ಬುಲ್ಡೋಜರ್ ಓಡಾಡ್ತದಲ್ಲ ಹಂಗೆ..’ಎನ್ನುವ ಮೆಚ್ಚುಗೆಯ ಮಾತುಗಳನ್ನಾಡಿ ನಮ್ಮನೆಯ ಇಸ್ತ್ರೀ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದವರೂ ಇದ್ದರು.
ಅದರಲ್ಲೂ ಮದುವೆಯ ಸಂದರ್ಭಗಳಲ್ಲಿ ಇಸ್ತ್ರೀ ಪೆಟ್ಟಿಗೆ ಇಡೀ ಊರನ್ನೇ ಸುತ್ತಿ ಬರುತ್ತಿತ್ತು. ಆಗ ನಮ್ಮಪ್ಪ ಅದರಲ್ಲೂ ಏನಾದರೂ ಒಂದು ಲಾಭ ಪಡೆದುಕೊಳ್ಳೋಣ ಎಂದುಕೊಂಡು ಇಸ್ತ್ರೀ ಪೆಟ್ಟಿಗೆಯನ್ನು ಯಾರು ತೆಗೆದುಕೊಂಡು ಹೋಗುತ್ತಾರೋ ಅವರು ಖಾಲಿ ಇಸ್ತ್ರೀಪೆಟ್ಟಿಗೆ ತಂದು ಕೊಡಬಾರದು ಎಂದು ತಾಕೀತು ಮಾಡಿಬಿಟ್ಟಿದ್ದರು. ಆವಾಗಿಲಿಂದ ಖಾಲಿ ಇಸ್ತ್ರೀ ಪೆಟ್ಟಿಗೆ ಬರುವಾಗ ಇದ್ದಿಲು ತುಂಬಿಕೊಂಡು ಬರುತ್ತಿತ್ತು.
ಆದರೆ ಊರಲ್ಲಿ ಬರುಬರುತ್ತಾ ಇಸ್ತ್ರೀ ಮಾಡುವವರೂ ಪೇಟೆಗೆ ಹೋಗಿ ಬರುವವರೂ ಜಾಸ್ತಿಯಾಗಿದ್ದರು. ಅದರಿಂದ ನಮ್ಮ ಮನೆಯ ಇಸ್ತ್ರೀಪೆಟ್ಟಿಗೆ ನಮಗೆ ಸಿಗುವುದು ದುಸ್ತರವಾಗತೊಡಗಿತ್ತು. ದಾರಿಯಲ್ಲಿ ಸಿಕ್ಕ ಜನ ನಮ್ಮ ತಂದೆಗೆ ‘ಸಾರ್  ಈ ಆಯ್ತವಾರ ನಾನೊಂದು ಮದುವೆಗೆ ಹೋಬೇಕು.ಒಸಿ ಇಸ್ತ್ರೀ ಪೆಟ್ಟಿಗೆ ಇಟ್ಟಿರಿ ಯಾರ್ಗೂ ಕೊಡಬೇಡಿ..’ ಎಂದು ಮೊದಲೇ ಬುಕಿಂಗ್ ಮಾಡಿಕೊಂಡುಬಿಡುತ್ತಿದ್ದರು. ಆದರೂ ಅದರ ಹಿಂದಿನ ದಿನ ತೆಗೆದುಕೊಂಡು ಹೋದವರು ವಾಪಸು ಕೊಟ್ಟಿರದೆ ಬುಕಿಂಗ್ ಮಾಡಿದವರು ನಮ್ಮ ಮನೆಗೆ ಬಂದಾಗ ‘ಇಲ್ಲಾ...ರಾಮು..ಆ ಸಿದ್ಲಿಂಗು ಇನ್ನೂ ತಂದೆ ಕೊಟ್ಟಿಲ್ಲ..’ಎಂದರೆ ಕೆರಳಿದ ಅವರು ‘ಸಾರ್ ನಿಮಗೆ ಮೊದಲೇ ಹೇಳಿದ್ನಲ್ಲಾ ಸಾ...ಏನ್ ಸಾ ನೀವು ಹಿಂಗ್ ಮಾಡಿಬುಟ್ರಿ..’ ಎಂದು ನಮ್ಮಪ್ಪನನ್ನೇ ದೂಷಿಸಿ, ‘ಇರೀ ಅವನಿಗೊಂದು ಭೂತ ಬುಡಿಸ್ತೀನಿ..ಏನ್ ಅವರಪ್ಪನ ಮನೆದು ಅನ್ಕಂಡಿದ್ದಾನಾ..’ ಎಂದು ನಮ್ಮೆದುರಿಗೆ ಬೈದು ‘ಸಾರ್..ಅವನಿಗೆ ಇನ್ಯಾವತ್ತೂ ಕೊಡಲೇಬೇಡಿ ಸಾರ್..’ ಎಂದು ನಮಗೆ ಆಜ್ಞಾಪಿಸಿ ಅಲ್ಲಿಂದ ಅವರ ಮನೆಯ ಕಡೆಗೆ ಗೂಳಿಯಂತೆ ನುಗ್ಗುತ್ತಿದ್ದರು.
ಆ ಇಸ್ತ್ರೀಪೆಟ್ಟಿಗೆ ಊರಿನಲ್ಲಿ ನಮಗೊಂದು ವಿಶೇಷ ಮರ್ಯಾದೆಯನ್ನು ತಂದುಕೊಟ್ಟಿತ್ತು. ಎಲ್ಲರೂ ಸಂತೋಷದಿಂದ ಮಾತಾಡಿಸುತ್ತಿದ್ದರಲ್ಲದೆ, ನಮ್ಮ ಮನೆಯ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಿದ್ದರು. ಆದರೆ ಅದರಿಂದ ಚಿಕ್ಕಪುಟ್ಟ ಅವಾಂತರಗಳೂ, ನಮ್ಮ ಇಸ್ತ್ರೀ ಪೆಟ್ಟಿಗೆಯಿಂದ ಜಗಳಗಳೂ ನಡೆಯುತ್ತಿದ್ದ ಸಂದರ್ಭಗಳೂ ಇದ್ದವು.   
ಅದೊಂದು ದಿನ ನಮ್ಮೂರಿನವರೇ ಆದ ಇಬ್ಬರು ಮಹಿಳೆಯರು ಜುಟ್ಟು ಜುಟ್ಟು ಹಿಡಿದುಕೊಂಡು ಜಗಳವಾಡಿಕೊಂಡಿದ್ದರು. ಅದಕ್ಕೆ ಕಾರಣವಾದದ್ದು ನಮ್ಮ ಮನೆಯ ಇಸ್ತ್ರೀ ಪೆಟ್ಟಿಗೆಯಾಗಿತ್ತು. ರತ್ನಮ್ಮ ನಮ್ಮ ಮನೆಯಲ್ಲಿ ಬಂದು ಆವತ್ತು ಇಸ್ತ್ರೀ ಪೆಟ್ಟಿಗೆ ಕೇಳಿದ್ದಳು. ತನ್ನ ಮಗಳು-ಅಳಿಯ ಊರಿಗೆ ಬಂದು ವಾರವಾಗಿದ್ದು ನಾಳೆ ಹೋಗುತ್ತಿದ್ದಾರೆ, ನಮ್ಮ ಅಳಿಯ ಇಸ್ತ್ರೀಯಿಲ್ಲದೆ ಬಟ್ಟೆ ಧರಿಸುವುದೇ ಇಲ್ಲ ಎಂದು ಅಲವತ್ತುಗೊಂಡಿದ್ದಳು. ಆದರೆ ಆಕೆಯ ದುರಾದೃಷ್ಟಕ್ಕೆ ಆವತ್ತೇ ಲಕ್ಷ್ಮಿ ತನ್ನ ಮನೆಗೆ ತೆಗೆದುಕೊಂಡು ಹೋಗಿಬಿಟ್ಟಿದ್ದಳು. ಆಗ ಕೈ ಕೈ ಹೊಸಕಿಕೊಂಡ ರತ್ನಮ್ಮ ಹೆಂಗಾರ ಮಾಡಿ ತನಗೆ ಆ ಇಸ್ತ್ರೀ ಪೆಟ್ಟಿಗೆಯನ್ನು ಈಸಿ ಕೊಡಬೇಕೆಂದು ಇದು ನಮ್ಮ ಮನೆಯ ಮಾನ ಮರ್ಯಾದೆಯ ಪ್ರಶ್ನೆ, ಬೀಗರ ಮುಂದೆ ನಮ್ಮ ಮರ್ಯಾದೆ ಹೋಗಿ ಬಿಡುತ್ತದೆ, ನೀವೇ ಬಂದು ಲಕ್ಷ್ಮಿ ಹತ್ತಿರ ಇಸ್ತ್ರೀಪೆಟ್ಟಿಗೆ ಈಸಿಕೊಟ್ಟು ಉಪಕಾರ ಮಾಡಬೇಕು ಎಂದು ನಮ್ಮಪ್ಪನನ್ನು ಗೋಗೆರೆದಿದ್ದಳು. ನಮ್ಮಮ್ಮ ಅಲ್ಲೋಗಿ ಕೇಳು ಅವಳು ಕೊಡುತ್ತಾಳೆ ಎಂದು ಎಷ್ಟೇ ಹೇಳಿದರೂ ಆಕೆ ಲಕ್ಷ್ಮಮ್ಮನ ಬಳಿ ಹೋಗಲು ತಯಾರಿರಲಿಲ್ಲ. ಯಾಕೆಂದರೆ ರತ್ನಮ್ಮ ಮತ್ತು ಲಕ್ಷ್ಮಿ ಇಬ್ಬರೂ ವಾರಗಿತ್ತಿಯರಾಗಿದ್ದರು ಮತ್ತು  ಅವರ ಮನೆಗಳು ಎದುರು ಬದುರೆ ಇದ್ದದ್ದರಿಂದ ದಿನಾ ಜಗಳವಾಡುತ್ತಿದ್ದರು. ಕೊನೆಗೆ ಸೋತ ನಮ್ಮಪ್ಪ ನನ್ನನ್ನು ಹೋಗಿ ಅವಳ ಮನೆಯಿಂದ ಇಸ್ತ್ರೀ ಪೆಟ್ಟಿಗೆಯನ್ನು ಈಸಿಕೊಡುವಂತೆ ಹೇಳಿದರು. ನಾನು ರತ್ನಮ್ಮ ಜೊತೆ ಲಕ್ಷ್ಮಮ್ಮನ ಮನೆಗೆ ಹೋಗಿ ಅವರ ಮನೆಯಿಂದ ಇಸ್ತ್ರೀ ಪೆಟ್ಟಿಗೆ ತೆಗೆದುಕೊಟ್ಟಿದ್ದಕ್ಕೆ ರತ್ನಮ್ಮ ಭಾವಪರವಶಳಾಗಿ ನನ್ನನ್ನು ಕೊಂಡಾಡಿದ್ದಳು.
ಆನಂತರ ಮನೆಗೆ ಖುಷಿಯಿಂದ ಬಂದಿದ್ದಾಳೆ. ಮಗಳ ಕೈಯಲ್ಲಿ ಅಳಿಯನ ಬಟ್ಟೆ ಕೊಡುವಂತೆ ಕೇಳಿದ್ದಾಳೆ, ಮಗಳೂ ಅಷ್ಟೇ ಖುಷಿಯಿಂದ ಹೋಗಿ ಗಂಡನ ಹತ್ತಿರ ಅಮ್ಮ ಇಸ್ತ್ರೀ ಮಾಡಿಕೊಡುತ್ತಾಳೆ..ಬಟ್ಟೆ ಕೊಡಿ ಎಂದು ಕೇಳಿದ್ದಾಳೆ, ಅವನು ಕೊಟ್ಟಿದ್ದಾನೆ..ಅದೇ ಒಂದು ತರನಾದ ಗರ್ವದ ಜೊತೆಗೆ ರತ್ನಮ್ಮ ಇಸ್ತ್ರೀ ಮಾಡಲು ಕುಳಿತುಕೊಂಡಿದ್ದಾಳೆ.ಮೊದಲಿಗೆ ಎರಡು ರಗ್ಗನ್ನು ಮೂರು ಅಡಿ ಉದ್ದಕ್ಕೆ ಮಡಚಿ ಅದರ ಮೇಲೆ ಬಿಳಿಯ ಪಂಚೆ ಹಾಸಿ ಸಿದ್ಧಮಾಡಿದ್ದಾಳೆ. ಇಸ್ತ್ರೀ ಪೆಟ್ಟಿಗೆಗೆ ಮೊದಲಿಗೆ ಇದ್ದಲು ಹಾಕಿ, ಆನಂತರ ನಿಗಿ ನಿಗಿ ಕೆಂಡ ಹಾಕಿ ಮುಚ್ಚಿದ್ದಾಳೆ. ಆನಂತರ ಬಿಸಿಯಾಗಿದೆ ಎಂದಾಕ್ಷಣ ಅಳಿಯ ಹೊಸ ಮುದುರಿಹೋಗಿದ್ದ ರೇಶಿಮೆ ಅಂಗಿಯನ್ನು ಹಾಸಿ ಇಸ್ತ್ರೀ ಪೆಟ್ಟಿಗೆಯನ್ನು ಅದರ ಮೇಲೆ ಇಟ್ಟಿದ್ದಾಳೆ. ಆನಂತರ ಮೇಲೆತ್ತಿದ್ದರೆ ಇಡೀ ಇಸ್ತ್ರೀ ಪೆಟ್ಟಿಗೆ ಅಂಗಿಗೆ ಆಂಟಿಕೊಳ್ಳಬೇಕೆ..?ಜೋರಾಗಿ ಒದರಿದಾಗ ಇಸ್ತ್ರೀ ಪೆಟ್ಟಿಗೆ ಅಷ್ಟೂ ಜಾಗವನ್ನು ಆಪೋಶನ ತೆಗೆದುಕೊಂಡಿದೆ. ಅಳಿಯನ ಬಟ್ಟೆಯ ಸ್ಥಿತಿ ಕಂಡ ರತ್ನಮ್ಮ ಹೌಹಾರಿದ್ದಾಳೆ. ಇನ್ನು ಗಂಡ ಬಂದರೆ ಭಾರಿಸುವುದು ಖಾತರಿಯಾಗಿದೆಯಾದರೂ ಇದಕ್ಕೆಲ್ಲಾ ಕಾರಣ ಲಕ್ಷ್ಮಿ ಎಂದೆ ಎನಿಸಿಬಿಟ್ಟಿದೆ.
ಇಸ್ತ್ರೀ ಪೆಟ್ಟಿಗೆ ತೆಗೆದುಕೊಂಡು ಹೋದವರು ಬಟ್ಟೆಗಳನ್ನು ಸುಟ್ಟುಕೊಳ್ಳುವುದು ಸರ್ವೇ ಸಾಮಾನ್ಯವಾಗಿತ್ತಾದರೂ ವಾಪಸು ಕೊಡುವಾಗ ಬುಡದಲ್ಲಿ ಶಾಖ ಜಾಸ್ತಿಯಾಗಿ ಅಂಟಿಕೊಂಡಿದ್ದ ಕರಗಿದ್ದ ಬಟ್ಟೆಯನ್ನೆಲ್ಲಾ ಕೆರೆದು ಕೊಡುತ್ತಿದ್ದರು. ನಾವೂ ಅಷ್ಟೇ! ಇಸ್ತ್ರೀ ಮಾಡುವ ಮೊದಲು ತಳವನ್ನೊಮ್ಮೆ ನೋಡಿಯೇ ಮುಂದುವರೆಯುತ್ತಿದ್ದೆವು. ತಕ್ಷಣ ಇದೆಲ್ಲಾ ಆ ಲಕ್ಷ್ಮಿ ಬೇಕೆಂತಲೇ ಮಾಡಿದ್ದಾಳೆ, ತಾನೇ ಬಟ್ಟೆ ಸುಟ್ಟುಕೊಂಡು ತಳ ಕೆರೆಯದೆ ಹಾಗೆ ಕೊಟ್ಟಿದ್ದಾಳೆ, ತನ್ನ ಮಾನ ಕಳೆಯಲು ಹುನ್ನಾರ ಮಾಡಿದ್ದಾಳೆ ಎಂದುಕೊಂಡ ರತ್ನಮ್ಮ ಇನ್ನು ಮುಂದೆ ಯೋಚಿಸಲು ಹೋಗದೆ ಸೀದಾ ಅವಳ ಮನೆಗೆ ನುಗ್ಗಿ ಶರಂಪರ ಜಗಳವಾಡಿದ್ದಾಳೆ. ಇಲ್ಲಾ...ಅದು ಮೇಸ್ಟ್ರು ಕೊಟ್ಟಾಗಲೇ ಹಾಗಿತ್ತು ಬೇಕಾದ್ರೆ ಅವರನ್ನೇ ಕೇಳು..ನನ್ನ ತಂಟೆಗೆ ಬರಬೇಡ ಎಂದು ಲಕ್ಷ್ಮಿ ಜೋರು ಮಾಡಿದ್ದಾಳೆ. ಇದು ತಾರಕಕ್ಕೇರಿ ಕೊನೆಗೆ ಸಾಕ್ಷಿಗಾಗಿ ಅವರ ದಂಡು ನಮ್ಮ ಮನೆಯ ಮುಂದೆ ಬಂದಿದೆ.
‘ಹೇಳಿ ಸಾ..ನೀವು ಕೊಡುವಾಗ ಹಂಗೆ ಇರ್ನಿಲ್ವಾ..’
‘ಅದ್ಯಾಕಂಮಿ ಮೇಸ್ಟ್ರು ಸುಟ್ಟುಕೊಟ್ಟಾರು..ನಿಂಗೆ ಮನೆವರ್ತೆ ಮಾಡಕ್ಕೆ ಬರ್ಲ್ಲಾಂದ್ರೆ ಯಾರ್ಗೂ ಬರಾಕಿಲ್ವಾ..ಕತ್ತೆ ಲೌಡಿ ನೀನು ಬೇಕಂದೆ ಮಾಡಿದೆಯ್ ..ಎಂದು ಇವಳು...ಕೊನೆಗೆ ಅದೇ ಮನೆಯ ಅಳಿಯನ ಮಧ್ಯಸ್ಥಿಕೆಯಿಂದಾಗಿ ಆ ಜಗಳ ಬಗೆಹರಿದದ್ದು ಬೇರೆ ಮಾತು.
ನಮ್ಮೂರಿನಲ್ಲಿ ಪುಟ್ಟಪ್ಪನೊಬ್ಬನೇ ಅಗಸನಿದ್ದದ್ದು. ಆದರೆ ಅಲ್ಯಾರೂ ಬಟ್ಟೆ ಹೊಗೆಯಲು ಅವನ ಕೈಗೆ ಕೊಡುತ್ತಿರಲಿಲ್ಲ. ಮುಟ್ಟಿನ, ಸೂತಕದ ಮುಂತಾದ ಬಟ್ಟೆಗಳನ್ನು ಮಾತ್ರ ಅವನ ಕೈಗೆ ಕೊಟ್ಟು ಒಗೆಸುವ ಸಂಪ್ರಾದಾಯ ನಮ್ಮೂರಲ್ಲಿತ್ತು. ಹಾಗಾಗಿ ಅವನ ಮೂಲ ಕಸುಬಿನಿಂದ ಅವನಿಗೆ ಅಂತಹ ಲಾಭವಾಗುತ್ತಿರಲಿಲ್ಲ. ಊರವರು ವರ್ಷಕ್ಕೊಮ್ಮೆ ಒಂದಷ್ಟು ದವಸ ಧಾನ್ಯ ಕೊಡುತ್ತಿದ್ದರಾದರೂ ಅದು ಅಲ್ಲಿಗಲ್ಲಿಗೆ ಸರಿ ಹೋಗುತ್ತಿತ್ತು.
ಅದೊಂದು ದಿನ ಹೀಗೆ ನಮ್ಮ ಮನೆಗೆ ಬಂದ ಪುಟ್ಟಪ್ಪನಿಗೆ ನಮ್ಮಪ್ಪ ಅದೂ ಇದೂ ಮಾತಾಡುತ್ತ ಇಸ್ತ್ರಿಯ ವಿಚಾರ ತೆಗೆದಿದ್ದರು. ‘ಅಲ್ವೋ ಪುಟ್ಟ ..ಹೆಂಗೂ ಒಂದು ಇಸ್ತ್ರೀ ಅಂಗಡಿ ಇಟ್ಕಂದ್ರೆ ಜನಕ್ಕೂ ಒಳ್ಳೆದಾಗ್ತದೆ..ನಿನಗೂ ಒಂದಷ್ಟು ಕಾಸಾಗ್ತದೆ..’ ಎಂದದ್ದಕ್ಕೆ ಒಮ್ಮೆ ನೆಲಕ್ಕೆ ತುಪಕ್ಕನೆ ಉಗಿದ ಪುಟ್ಟಪ್ಪ, ‘ಸುಮ್ಕಿರಿ ಸಾ.. ನಮ್ಮೂರ ಜನ ಕಾಸು ಕೊಟ್ಟು ಇಸ್ತ್ರೀ ಹಾಕಿಸ್ಕ೦ಡಾರ..? ತಾಮ್ರದ ಚೆಂಬೋಳಕ್ಕೆ ಕೆಂಡಸುರ್ಕೊಂದು ತಾವೇ ಬಟ್ಟೆ ಮೇಲೆ ತಿಕ್ಕೊಳ್ಳೋ ಜನ ..’ ಎಂದೆಲ್ಲಾ ದೂಷಣೆಯ ಮಾತುಗಳನ್ನಾಡಿದನಾದರೂ ಕೊನೆಕೊನೆಗೆ ನಮ್ಮಪ್ಪನ ಮಾತಿನಲ್ಲೂ ಅರ್ಥ ಇದೆ ಅನಿಸಿತು. ನಮ್ಮಪ್ಪನೂ ಅದಕ್ಕೆ ಬೇಕಾದ ಉದಾಹರಣೆಗೆಳನ್ನೂ ಊರು ಬೆಳೆಯುತ್ತಿರುವ ರೀತಿ, ಶಾಲೆಯ ಹುಡುಗರು ಕಾಲೇಜಿಗೆ ಕಾಲು ಇಡುತ್ತಿರುವುದು ಜನರೆಲ್ಲಾ ಪ್ಯಾಂಟನ್ನು ಬಳಸಲು ಕಲಿತಿರುವುದು ಮುಂತಾದ ಇಸ್ತ್ರೀಗೆ ಅನುಕೂಲಕರವಾದ ಅಂಶಗಳನ್ನು ಅವನ ತಲೆಗೆ ತುಂಬಿದ್ದರು. ಕೊನೆಗೆ ‘ಸರಿ ಸಾ.. ಆದೂ ಆಗೋಗ್ಲಿ..ಹೆಂಗೋ ನಂಗೆ ಮೊದಲ್ನಂಗೆ ಹೊಲದಲ್ಲಿ ಕೆಲಸ ಮಾಡಕ್ಕಾಗಲ್ಲ..ಕುಂತ ಜಾಗದಲ್ಲೇ ಒಂದಷ್ಟು ಕಾಸು ಬರದಾದ್ರೆ ಆಗ್ಲಿ ಬುಡಿ...ಹೆಂಗೋ ಒಂದ್ ಇಸ್ತ್ರೀ ಪೆಟ್ಟಿಗೆ, ಒಂದಷ್ಟು ಇದ್ದಿಲು ತಾನೇ ಬಂಡವಾಳ ..’ ಎಂದವನು ಒಂದು ಇಸ್ತ್ರೀ ಅಂಗಡಿಯನ್ನು ತೆರೆಯುವ ನಿರ್ಧಾರ ಮಾಡೇ ಬಿಟ್ಟಿದ್ದ. ‘ಸಾರ್..ಒಸಿ ಯವಾರ ಕೈ ಹತ್ತೊಗಂಟ ನಿಮ್ಮ ಇಸ್ತ್ರೀ ಪೆಟ್ಟಿಗೆ ಕೊಟ್ಟಿರಿ..ಆಮ್ಯಾಕೆ ನಾನೇ ಒಂದ್ ಕೊಂಡ್ಕತೀನಿ..ಎಂದಾಗ ನಮ್ಮಪ್ಪ ಹೌಹಾರಿದ್ದರು.
ನಮ್ಮ ಮನೆಯ ಇಸ್ತ್ರೀ ಪೆಟ್ಟಿಗೆ ಊರ ಬಹುತೇಕರ ಬಟ್ಟೆಗಳನ್ನು ಇಸ್ತ್ರೀ ಮಾಡಿ, ಸುಟ್ಟು ಹಾಕಿ ಅದರ ಬುಡವೆಲ್ಲ ಸವೆದು ಹೋಗಿತ್ತು. ಅದರಲ್ಲಿ ಇಸ್ತ್ರೀ ಮಾಡೋವಾಗ ಅತಿಯಾದ ಜಾಗರೂಕತೆ ವಹಿಸಬೇಕಾಗಿತ್ತು. ಹಾಗಾಗಿ ನಮಗೆ ಹೊಸದನ್ನು ತರುವ ಅನಿವಾರ್ಯ ಬಂದೊದಗಿತ್ತು. ಆದರೆ ಈ ಸಾರಿ ಇದ್ದಿಲು ಇಸ್ತ್ರೀ ಪೆಟ್ಟಿಗೆ ಬೇಡವೇ ಬೇಡ..ಕರೆಂಟ್ ದು ತನ್ನಿ ಎಂಬುದು ನಮ್ಮಮ್ಮ ಮತ್ತು ನಮ್ಮೆಲ್ಲರ ಒಕ್ಕೊರಳಿನ ಒತ್ತಾಯವಾಗಿತ್ತು. ‘ಅದೇಗೆ ಸಾಧ್ಯ..ನಾವೇನೆ ತಂದರೂ ಊರ ಜನ ಕೇಳದೆ ಬಿಡುವುದಿಲ್ಲ..ಕೊಡದಿದ್ದರೆ ನಿಷ್ಠೂರ..ಹಾಗಂತ ಕೊಟ್ಟರೆ ಅದನ್ನು ಬಳಸಲು ಬರದೆ ಹೆಚ್ಚು ಕಡಿಮೆ ಆಗುವ ಸಂಭವ ಜಾಸ್ತಿ..ಮೊದಲೇ ಕರೆಂಟಿನದು..ಸುಮ್ಮನೆ ಇಲ್ಲದ ಅಪಾಯ ಯಾಕೆ? ’ಎಂಬುದು ನಮ್ಮಪ್ಪನ ಅಳಲು. ಹಾಗಾಗಿ ಪುಟ್ಟಪ್ಪ ಇಸ್ತ್ರೀ ಅಂಗಡಿ ತೆರೆದರೆ ನಮಗೆ ಸ್ವಲ್ಪ ತೊಂದರೆ ತಪ್ಪಬಹುದು ಎಂಬುದು ನಮ್ಮಪ್ಪನ ಆಲೋಚನೆಯೂ ಆಗಿತ್ತೆನ್ನಬಹುದು.
ಹೊಸದಾದ ಇಸ್ತ್ರೀ ಪೆಟ್ಟಿಗೆ ತಂದ ಪುಟ್ಟಪ್ಪ ಅಂಗಡಿ ತೆರೆಯುವ ಹಿಂದಿನ ನಮ್ಮ ಮನೆಗೆ ಬಂದವನು ನಮ್ಮಪ್ಪನ ಕೈಯಲ್ಲಿ ಶರ್ಟುಗಳನ್ನು ಇಸ್ತ್ರೀ ಮಾಡುವ ಬಗೆ, ಪ್ಯಾಂಟುಗಳನ್ನೂ ಇಸ್ತ್ರೀ ಮಾಡುವ ಬಗೆ ಮುಂತಾದ ವಿಷಯಗಳನ್ನು ಗಂಟೆಗಟ್ಟಲೆ ಪ್ರಾಯೋಗಿಕವಾಗಿಯೇ ತಿಳಿದುಕೊಂಡು ಹೋಗಿದ್ದ.
ಮಾರನೆಯ ದಿನ ಭರ್ಜರಿಯಾಗಿ ಇಸ್ತ್ರೀ ಪೆಟ್ಟಿಗೆ ಅಂಗಡಿ ತೆರೆದ ಪುಟ್ಟಪ್ಪ ಮನೆಮನೆಗೂ ಹೋಗಿ ತಾನು ಇಸ್ತ್ರೀ ಪೆಟ್ಟಿಗೆ ಅಂಗಡಿ ತೆರೆದಿರುವುದಾಗಿ ಸಾರಿಕೊಂಡು ಬಂದಿದ್ದ. ಹೇಗೋ ವರ್ಷಾ ವರ್ಷಾ ಬಂದು ದವಸ ಧಾನ್ಯ ತೆಗೆದುಕೊಂಡು ಹೋಗುವ ಪುಟ್ಟಪ್ಪನಿಗೆ ತಾವು ಕೊಟ್ಟ ದವಸಕ್ಕೆ ಸರಿಯಾದ ಕೆಲಸ ತೆಗೆದುಕೊಳ್ಳಬೇಕು ಎಂದು ನಮ್ಮೂರ ಜನ ನಿರ್ಧಾರ ಮಾಡಿಬಿಟ್ಟು ಬಟ್ಟೆಯನ್ನೆಲ್ಲಾ ಅವನ ಕೈಲಿ ಕೊಟ್ಟು ಇಸ್ತ್ರೀ ಮಾಡಿಸಲು ಸಿದ್ಧರಾಗಿದ್ದರು.
ಆದರೆ ಒಂದೆ ವಾರಕ್ಕೆ ಪುಟ್ಟಪ್ಪನ ಅಂಗಡಿಯನ್ನು ಮುಚ್ಚುವ ಪ್ರಮೇಯ ಬಂದೊದಗಿತ್ತು. ಇನ್ನೂ ಅನುಭವವಿಲ್ಲದ ಕಾರಣ ಪುಟ್ಟಪ್ಪ ಇಸ್ತ್ರೀ ಪೆಟ್ಟಿಗೆಗೆ ಎರ್ರಾಬಿರ್ರಿ  ಇದ್ದಿಲು ಕೆಂಡ ಹಾಕಿಬಿಡುತ್ತಿದ್ದ. ಬಟ್ಟೆಗಳು ಸುಟ್ಟು ಹೋಗುತಿದ್ದವು.ಆನಂತರ ಅದನ್ನು ಮಡಚಿ ಮಟ್ಟಸವಾಗಿ ಕೊಡುತ್ತಿದ್ದ. ‘ಪರಾವಾಯಿಲ್ಲ ಕಣಯ್ಯಾ..ನೀನು ಕಸುಬು ಕಲ್ತು ಬುಟ್ಟೆ..’ ಎಂದರೇ, ‘ಏನೋ ಸಾಮಿ..ಇನ್ನಾ ಸಲ್ಪ ಪಕ್ಕಾ ಆಗ್ಬೇಕು...ಈ ವಾರದಾಗೆ ಎಲ್ಲಾ ಸರ್ಯೋತದೆ..’ ಎಂಬ ಮಾತುಗಳನ್ನು ಆಡುತ್ತಿದ್ದ. ಅವನ ಮಾತಿನ ಒಳಾರ್ಥ ಅರಿಯದ ಜನ ಕೈಗೆ ಚಿಲ್ಲರೆ ಕಾಸು ಕೊಟ್ಟು ಮನೆಗೆ ಹೋಗಿ ಬಟ್ಟೆಯನ್ನು ಬಿಡಿಸಿದರೆ ಅಲ್ಲಿರುತ್ತಿತ್ತು ಸುಟ್ಟು ಹೋದ ರಂಧ್ರಗಳ ಚಿತ್ತಾರ. ತೀರಾ ಸುಟ್ಟುಹೋಗದಿದ್ದರೂ ಇಸ್ತ್ರೀ ಪೆಟ್ಟಿಗೆಯ ಕೆಳ ಸಂಧಿಯಿಂದ ಹಾರುವ ಚಿಕ್ಕ ಚಿಕ್ಕ ಕಿಡಿಗಳು ಬಟ್ಟೆಗಳಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡುತ್ತಿದ್ದವು. ಒಳ್ಳೊಳ್ಳೆ ಮದುವೆ ಸೀರೆಗಳು , ಬಟ್ಟೆಗಳು ಸುಟ್ಟು ಹೋದ ನಂತರ ಜನರೆಲ್ಲಾ ಅವನ ಮನೆಯ ಹತ್ತಿರ ಹೋಗಿ ಅವನ ಇಸ್ತ್ರೀಪೆಟ್ಟಿಗೆ ಕಿತ್ತುಕೊಂಡು ಬದಲಿ ಹೊಸ ಬಟ್ಟೆ ಕೊಡುವಂತೆ ಜಗಳ ಮಾಡಿದ್ದರು. ಅವರನ್ನೆಲ್ಲಾ ಹೇಗೋ ಸಮಾಧಾನ ಮಾಡಿ ಕಳುಹಿಸಿದ ಪುಟ್ಟಪ್ಪನ ಮಗ ಗಂಗಯ್ಯ ಅಪ್ಪನಿಗೆ ಬೈಯ್ದು ‘ನೀನು ಮನೆಯಲ್ಲಿ ಬಿದ್ದಿರು..ಈ ಇಸ್ತ್ರೀನೂ ಮಾಡಬೇಡಾ..ಏನೂ ಮಾಡಬೇಡಾ..’ ಎಂದು ಗದರಿ ಅಂಗಡಿಯನ್ನು ಮುಚ್ಚಿದ್ದ.
ಅದೇ ಕೊನೆ. ಆನಂತರ ನಮ್ಮ ಊರಿನಲ್ಲಿ ಮತ್ತೆ ಯಾರೂ ಇಸ್ತ್ರೀ ಅಂಗಡಿ ಇಡಲಿಲ್ಲವಾದರೂ ಕೆಲವರು ಸ್ವಂತಕ್ಕೆ ಇಸ್ತ್ರೀಪೆಟ್ಟಿಗೆಯನ್ನು ಖರೀದಿ ಮಾಡಿದ್ದರು.ನಾವೊಂದು ಎಲೆಕ್ಟ್ರಿಕ್ ಇಸ್ತ್ರೀಪೆಟ್ಟಿಗೆ ತಂದೆವಾದರೂ ಹಳೆಯ ಇಸ್ತ್ರೀಪೆಟ್ಟಿಗೆ ಮಾತ್ರ ತನ್ನ ಊರು ಸುತ್ತುವ ಕಾರ್ಯಕ್ರಮವನ್ನು ಎಡೆಬಿಡದೆ ಮಾಡುತ್ತಿತ್ತು.
[ಇತ್ತೀಚಿಗೆ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ನನ್ನ ಪ್ರಬಂಧ]

Tuesday, October 29, 2013

ಜೋಗಿಯವರ ಚಿಕ್ಕಪ್ಪ...

ಚಿಕ್ಕಪ್ಪ ಸಾಮಾನ್ಯನಲ್ಲ, ಆತಯಾರು ಆ ಊರಿಗೆ ಅವನು ಬಂದದ್ದಕ್ಕೆ ನಿರ್ಧಿಷ್ಟವಾದ ಉದ್ದೇಶವೆನಾದರೂ ಇರಬಹುದಾ..? ಆತನ ಹಿನ್ನೆಲೆ ಏನು ಎಂಬಿತ್ಯಾದಿ ಪ್ರಶ್ನೆಗಳು ಚಿಕ್ಕಪ್ಪ ಕಾದಂಬರಿಯ ಲೇಖಕರನ್ನು ಕಾಡಿದಂತೆ ಓದುಗನನ್ನೂ ಕಾಡುತ್ತದೆ.ಚಿಕ್ಕಪ್ಪ ತೀರಾ ದೊಡ್ಡದಾದ ಪುಸ್ತಕವಲ್ಲ. ಮೂರು ತಾಸಿನಲ್ಲಿ ಓದಿಬಿಡಬಹುದಾದ ಪುಸ್ತಕ.ಚಿಕ್ಕಪ್ಪ ಎನ್ನುವವನ ಜೀವನದ ಕಥೆಯಲ್ಲ. ಬದಲಿಗೆ ಅದೊಂದು ವರದಿ ಎಂದರೆ ಸೂಕ್ತವೆನಿಸಬಹುದು.
ಚಿಕ್ಕಪ್ಪ ಕಾದಂಬರಿಯಲ್ಲಿ ಬರುವ ಚಿಕ್ಕಪ್ಪನ ಪಾತ್ರವೇ ಅಂತಹದ್ದು. ಹಂತಹಂತವಾಗಿ ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ ಇಡೀ ಊರನ್ನೇ ಆ ಮೂಲಕ ಇಡೀ ಒಂದು ಸಮುದಾಯವನ್ನೇ ಅದರ ಜೊತೆಗೆ ಒಂದು ಪೀಳಿಗೆಯನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಚಿಕ್ಕಪ್ಪ ನಮ್ಮೆಲ್ಲರ ಮನಸ್ಸಿನಲ್ಲಿ ಉಳಿಯುವಂತೆ ಜೋಗಿಯವರು ಬರೆದಿದ್ದಾರೆ. ಅಥವಾ ಅವರೇ ಹೇಳುವಂತೆ ಅದನ್ನು ದಾಖಲಿಸಿದ್ದಾರೆ. ಅಲ್ಲಿ ಹೀಗೇನಾದರೂ ನಡೆದಿತ್ತಾ ಎಂಬ ಪ್ರಶ್ನೆ ಗೆ ನಡೆದಿದ್ದರೂ ನಡೆದಿರಬಹುದು ಎಂಬ ಉತ್ತರ ಬರುತ್ತದೆ. ಅದನ್ನು ಲೇಖಕರು ಕೊಡುವುದಿಲ್ಲ. ಅಥವಾ ಆ ಪಾತ್ರ ಸ್ಪಷ್ಟವಾಗಿ ಹೇಳುವುದಿಲ್ಲ. ಬದಲಿಗೆ ಓದುತ್ತಾ ಓದುತ್ತಾ ನಮಗೆ ಅನಿಸುತ್ತದೆ. ಜೊತೆಗೆ ನಮ್ಮೂರಿನಲ್ಲಿ ಇದ್ದ ಅವನನ್ನೇ ಹೋಲುವ ವ್ಯಕ್ತಿಯ ನೆನಪಾಗುತ್ತದೆ. ಹಾಗಾಗಿಯೇ ಜೋಗಿ ಇದು ನಿಮ್ಮೂರಿನ ಕಥೆಯೂ ಇರಬಹುದು ಅಥವಾ ನಿಮ್ಮೂರಲ್ಲಿಯೂ ಒಬ್ಬ ಚಿಕ್ಕಪ್ಪ ಇರಬಹುದು ಎನ್ನುತ್ತಾರೆ.
ಆದರೆ ಚಿಕ್ಕಪ್ಪ ಒಂದು ಕಾದಂಬರಿ ಎನಿಸಿಕೊಳ್ಳುವುದಕ್ಕಿಂತ ಒಬ್ಬ ವ್ಯಕ್ತಿಯ ಕುರಿತಾದ ವರದಿ ಎನಿಸಿಕೊಳ್ಳುತ್ತದೆ. ನನ್ನ ಪ್ರಕಾರ ಅದೇ ಪುಸ್ತಕದ ಧನಾತ್ಮಕ ಅಂಶ. ಹಾಗೆಯೇ ಅದುವೇ ಪುಸ್ತಕದ ಋಣಾತ್ಮಕ ಅಂಶ ಎನಿಸದೆ ಇರದು. ಒಬ್ಬ ವ್ಯಕ್ತಿಯ ಚಿತ್ರಣವನ್ನು ಜೋಗಿ ತುಂಬಾ ವಿವರವಾಗಿಯೇ ಕಟ್ಟಿಕೊಟ್ಟಿದ್ದಾರೆ. ಆದರೂ ಅದೊಂದು ಪರಿಪೂರ್ಣ ಕಾಲ್ಪನಿಕ ಕಥಾನಕ ಅನಿಸುವುದಿಲ್ಲ. ಅಥವಾ ಸಂಪೂರ್ಣ ವ್ಯಕ್ತಿಯೊಬ್ಬನ ಜೀವನ ಚರಿತ್ರೆ ಅನಿಸುವುದಿಲ್ಲ. ಹಾಗಾಗಿಯೇ ಚಿಕ್ಕಪ್ಪನ ಪಾತ್ರ ಇಷ್ಟವಾದರೂ ಕಾದಂಬರಿ ಕಾಡುವುದು ಅನುಮಾನ.ಸರಾಗವಾಗಿ ಓಡಿಸಿಕೊಂಡು ಹೋಗುವ ಕಾದಂಬರಿ ಬೇಗನೆ ಮುಗಿದುಹೋಗುತ್ತದೆ. ಕೊನೆಯಲ್ಲಿ ಇಷ್ಟೇನಾ..? ಇನ್ನೂ ಏನಾದರೂ ಇರಬೇಕಿತ್ತು ಎನಿಸುತ್ತದೆ.
ಚಿಕ್ಕಪ್ಪ ಕಾದಂಬರಿ ಓದುವಾಗ ಬೇಸರ ತರಿಸುವುದಿಲ್ಲವಾದರೂ ಜೋಗಿಯವರದೇ ಕೃತಿಯಾದ ಗುರುವಾಯನ ಕೆರೆಯ ರೀತಿ ಅಚ್ಚರಿ ಹುಟ್ಟಿಸುವುದಿಲ್ಲ. ಹಾಗೆಯೇ ಅದರಲ್ಲಿನ ಪಾತ್ರಗಳಂತೆ ಕಾಡುವುದಿಲ್ಲ.
ನನಗೆ ಮಂಗಳೂರು ಸುಳ್ಯ ಮುಂತಾದವುಗಳ ಪರಿಚಯ ಅಷ್ಟಾಗಿ ಇರಲಿಲ್ಲ. ಮೊದಲೆಲ್ಲಾ ಸಿನಿಮಾದ ಕೆಲಸಗಳಿಗೆ ಹೋಗುತ್ತಿದ್ದೆವಾದರೂ ಆವಾಗ ಊರನ್ನು ಅಷ್ಟು ಚೆನ್ನಾಗಿ ಗಮನಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನನಗೆ ಈಗ ಸುಳ್ಯ ಮಾವನ ಮನೆಯಾದ್ದರಿಂದ ಅಲ್ಲಿ ಹೋಗಿ ವಾರಗಟ್ಟಲೆ ಉಳಿಯುವುದರಂದ ಅಲ್ಲಿನ ಜನಜೀವನ ಸ್ಥಳ ಪರಿಚಿತವಾಗಿವೆ. ಹಾಗಾಗಿಯೇ ಜೋಗಿಯವರ ಚಿಕ್ಕಪ್ಪ ಓದುವಾಗ ಪುಸ್ತಕದಲ್ಲಿ ಬರುವ ಸಂಪಾಜೆ, ಉಪ್ಪಿನಂಗಡಿ, ಮಂಗಳೂರು ಮುಂತಾದವು ಪರಿಚಿತ ಅನಿಸುತ್ತದೆ. ಹಾಗೆಯೇ ಅಲ್ಲಿಯ ರಾಗಯುತವಾದ ಗ್ರಾಂಥಿಕ ಭಾಷೆ ಖುಷಿ ಕೊಡುತ್ತದೆ. ಅಲ್ಲಲ್ಲಿ ಕೇಳಿ ಬರುವ ಬರ್ಪುಂಡ..ಒಣಸಾಂಡ ತುಳು ಕಿವಿಗೆ ಹಿತ ಎನಿಸದಿದ್ದರೂ ಇತ್ತೀಚಿಗೆ ಕಿರಿಕಿರಿ ಉಂಟುಮಾಡುವುದಿಲ್ಲ. ಹಾಗಾಗಿಯೇ ಚಿಕ್ಕಪ್ಪ ಕಾದಂಬರಿ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಯಿತು ಎನ್ನಬಹುದು. ಆದರೂ ಅದ್ಯಾಕೆ ಬೇರೆ ಕಾದಂಬರಿಗಳ ಹಾಗೆ ಸೆಳೆಯಲಿಲ್ಲ ಎನ್ನುವ ಪ್ರಶ್ನೆ ಹಾಗೆಯೇ ನನ್ನಲ್ಲಿ ಉಳಿದುಕೊಂಡಿದೆ. ಚಿಟ್ಟೆ ಹೆಜ್ಜೆ ಜಾಡು, ಯಾಮಿನಿ, ಹಿಟ್ ವಿಕೆಟ್ ಮುಂತಾದ ಕಾದಂಬರಿಗಳು ಅವುಗಳ ಸತ್ವ ಚೆನ್ನಾಗಿಯೇ ಇದೆ. ಆದರೆ ಅದ್ಯಾಕೋ ತೀರಾ diluted ಎನಿಸುತ್ತದೆ. ಸುಮ್ಮನೆ ಕುಳಿತು ಸರಾಗವಾಗಿ ಬರೆದಂತೆ ಭಾಸವಾಗುತ್ತದೆ. ಅದರಲ್ಲೂ ಚಿಕ್ಕಪ್ಪ ಮತ್ತು ಚಿಟ್ಟೆಹೆಜ್ಜೆ ಜಾಡು ಕಥಾವಸ್ತುವಿನ ವಿಷಯದಲ್ಲಿ ತುಂಬಾ ಸತ್ವಯುತವಾದವುಗಳು. ಹಾಗೆಯೇ ಕಾದಂಬರಿಯ ದ್ರವ್ಯದಲ್ಲೇ ರೋಚಕತೆ, ರೋಮಾಂಚನವಿದೆ. ಆದರೆ ಕಾದಂಬರಿ ಹಿಡಿಯಾಗಿ ಅದನ್ನು ಕಟ್ಟಿಕೊಡುವದರಲ್ಲಿ ಯಶಸ್ವಿಯಾಗಿಲ್ಲವೇನೋ ಎನಿಸುತ್ತದೆ. ಒಂದು ಕಾದಂಬರಿ ನಾನು ತಿಳಿದ ಮಟ್ಟಿಗೆ ಅದರದೇ ಆದ ಪ್ರಪಂಚವನ್ನು ಹೊಂದಿರುತ್ತದೆ. ಓದುತ್ತಾ ಓದುತ್ತಾ ತನ್ಮಯರಾದಂತೆ ಕಣ್ಮುಂದೆ ಆ ಊರು ಅಲ್ಲಿನ ಘಟನೆಗಳು ಸನ್ನಿವೇಶಗಳು ಕಣ್ಮುಂದೆ ಬರಲು, ಮನಸ್ಸಿನಲ್ಲಿ ಅಚ್ಚೋತ್ತಲು ಪ್ರಾರಂಭಿಸುತ್ತವೆ. ಪುಸ್ತಕ ಓದಿ ಕೆಳಗಿಟ್ಟ ಮೇಲೆ ಆ ಪ್ರಪಂಚದಿಂದ ವಾಸ್ತವಕ್ಕೆ ಬರಲು ಸಮಯ ಹಿಡಿಯುತ್ತವೆ. ಅದರಲ್ಲಿನ ದಟ್ಟತೆ, ಭಾಷಾಪ್ರಯೋಗ ಅಥವಾ ಅಲ್ಲಿನ ದೃಷ್ಟಾಂತಗಳು  ಆ ತೆರೆನಾದ ಗಟ್ಟಿತನವನ್ನು ಅದಕ್ಕೆ ತಂದುಕೊಡುತ್ತವಾ..? 
ಒಟ್ಟಿನಲ್ಲಿ ಒಮ್ಮೆ ಓದಬಹುದಾದ ಪುಸ್ತಕ ಚಿಕ್ಕಪ್ಪ ಎನ್ನಬಹುದು...

Monday, October 21, 2013

ನೈರೋಬಿಯಲ್ಲಿ ಬದುಕುವುದೆಂದರೆ...

ಅವನನ್ನುತ್ತಾನೆ ನಾನು ನೈರೋಬಿಗೆ ಹೋಗುತ್ತೇನೆ, ಸಿನೆಮಾದಲ್ಲಿ ಅಭಿನಯಿಸುತ್ತೇನೆ..ಬೇಡಪ್ಪ..ನೈರೋಬಿಯೆಂದರೆ ಕಳ್ಳ ಕಾಕರ, ಮೋಸಗಾರರ ತವರು ನೀನಲ್ಲಿ ಹೋದರೆ ನೀನು ನೀನಾಗಿ ಇರುವುದಕ್ಕೆ ಸಾಧ್ಯವಾಗುವುದೇ ಇಲ್ಲ ಎಂಬ ಉತ್ತರ ಬರುತ್ತದೆ. ಆದರೂ ಅವನು ಮಾತ್ರ ನೈರೋಬಿಯಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಲೇಬೇಕೆಂದು ನಿರ್ಧರಿಸಿಬಿಡುತ್ತಾನೆ.ಇರುವ ಊರಲ್ಲಿ ಡಿವಿಡಿಗಳನ್ನ ಮನೆಮನೆಗೆ ಸರಬರಾಜು ಮಾಡುವ ಕೆಲಸ ಅವನದು. ಅದವನ ಇಷ್ಟದ ಕೆಲಸವಾದ್ದರಿಂದ ಅದರಲ್ಲಿ ಅಷ್ಟಾಗಿ ಹಣವಿಲ್ಲದಿದ್ದರೂ ಖುಷಿಯಿದೆ. ಊರಲ್ಲಿ ತಾನು ನೋಡಿದ ಚಿತ್ರಗಳ ಮುಖ್ಯ ಪಾತ್ರಗಳ ಅಭಿನಯವನ್ನು ಅನುಕರಣೆ ಮಾಡಿ ತೋರಿಸುತ್ತಾನೆ. ಹಾಗಾಗಿಯೇ ಅವನನ್ನು ಕಂಡರೆ ಎಲ್ಲರಿಗೂ ಖುಷಿ. 
ಅದೊಂದು ದಿನ ತನ್ನ ಸಂಬಂಧಿಯಿಂದ ನೆರವು ಪಡೆದು ನೈರೋಬಿಗೆ ಹೊರಟುನಿಲ್ಲುತ್ತಾನೆ.
ಆದರೆ ನೈರೋಬಿ ಅವನು ಪಾದಾರ್ಪಣೆ ಮಾಡಿದ ತಕ್ಷಣ ತನ್ನ ಕರಾಳ ಮುಖವನ್ನು ತೋರಿಸಿಬಿಡುತ್ತದೆ.ತನ್ನ ಊರಿನ ಬಸ್ಸಿನಿಂದ ಇಳಿದವನನ್ನು ನಾಲ್ಕು ಜನರ ಗುಂಪೊಂದು ಅಮಾನುಷವಾಗಿ ದೋಚುತ್ತದೆ. ಅಲ್ಲಿಂದ ಹೇಗೋ ನಡೆದುಬರುತ್ತಿದ್ದಾಗ ಪೋಲಿಸರು ವಿನಾಕಾರಣ ಹಿಡಿದುಕೊಂಡು ಹೋಗಿ ಅತ್ಯಂತ ಕೆಟ್ಟದಾದ ಕೊಳಕಾದ ಜೈಲಿಗೆ ಹಾಕಿಬಿಡುತ್ತಾರೆ. ಅಲ್ಲಿಗೆ ಅವನಿಗೆ ನೈರೋಬಿಯ ಕರಾಳ ಮುಖದ ಪರಿಚಯವಾಗುತ್ತದೆ.
ಮುಂದೆ ಆತ ನಟನಾಗುತ್ತಾನಾ?
ಅಥವಾ ತನ್ನ ಕನಸುಗಳನ್ನು ಮೂಟೆ ಕಟ್ಟಿಟ್ಟು ಬೇರೆ ದಾರಿ ಹಿಡಿಯುತ್ತಾನ?
2012ರಲ್ಲಿ ಬಿಡುಗಡೆಯಾದ ನೈರೋಬಿ ಹಾಫ್ ಲೈಫ್ ಚಿತ್ರದ ಕಥೆ ಇದು. ಈಗಾಗಲೇ ನೀವು ಮೊರೆಲ್ಲಿ ಫೆರ್ನಾಂಡಿಸ್ ನ ಸಿಟಿ ಆಫ್ ಗಾಡ್ ನೋಡಿದ್ದರೆ ಈ ಚಿತ್ರ ಕೂಡ ನಿಮಗೆ ಇಷ್ಟವಾಗುತ್ತದೆ. ಅಷ್ಟೇ ಅಲ್ಲ. ಮನಕಲಕುತ್ತದೆ. ಚಿತ್ರದ ಕಥೆಯಲ್ಲೇನೋ ಮಹತ್ವದ್ದು ಹೊಸತನವಿಲ್ಲ. ಆದರೆ ನಿರ್ದೇಶಕ ಹೇಳಬೇಕಾದ್ದನ್ನು ನಾಯಕನ ಕೈಯಲ್ಲಿ ಕೊನೆಯ ದೃಶ್ಯದಲ್ಲಿ ಹೇಳಿಸುತ್ತಾನೆ. ಅಲ್ಲಿನ ಸಂಭಾಷಣೆ ಇಡೀ ಚಿತ್ರದ ಕಥೆಯನ್ನು ಹೇಳುತ್ತದೆ. ಜೊತೆಗೆ ಕೀನ್ಯಾವನ್ನು ತೆರೆದು ನಮ್ಮ ಮುಂದಿಡುತ್ತದೆ.
ಚಿತ್ರ ಇಷ್ಟವಾಗುವುದು ಚಿತ್ರದಲ್ಲಿನ ಪಾತ್ರಧಾರಿಗಳ ಅಭಿನಯದಿಂದಾಗಿ. ಜೋಸೆಫ್ ವೈರಮು ಹೆಸರಿನ ಆ ಹುಡುಗನ ಅಭಿನಯ ನಮ್ಮನ್ನು ನಿಜವಾದ ಕನಸುಗಾರನ ಲೋಕಕ್ಕೆ ಕರೆದೊಯ್ಯುತ್ತದೆ. ಹಾಗೆಯೇ ಹತಾಶೆಗಳನ್ನೂ ಆತ ಮೆಟ್ಟಿ ನಿಲ್ಲುವ ರೀತಿ ನಮಗೆ ಸ್ಫೂರ್ತಿದಾಯಕ ಎನಿಸುತ್ತದೆ.
ಜೈಲಿನಲ್ಲಿ ಕೊಳಕಾದ ಶೌಚಾಲಯವನ್ನು ತೊಳೆಯ ಬೇಕಾಗಿ ಬಂದಾಗ ಅಲ್ಲೇ ವಾಂತಿ ಮಾಡಿಕೊಳ್ಳುವ ಆನಂತರ ಅಲ್ಲೇ ಅದನ್ನು ಮರೆತು ಜೋರಾಗಿ ಹಾಡಿಕೊಳ್ಳುತ್ತಾ ಸ್ವಚ್ಚಮಾಡುವ ದೃಶ್ಯ ನಿಜಕ್ಕೂ ಆತನ ಇಡೀ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತದೆ. ಆ ಕ್ಷಣಕ್ಕೆ ಆ ಸಂದರ್ಭಕ್ಕೆ ಆತ ಹಿಂದಡಿಯಿಕ್ಕಿದರೂ ಮರುಕ್ಷಣದಲ್ಲೇ ಅದನ್ನು ಸ್ವೀಕರಿಸುವ ಅದಕ್ಕೆ ಹೊಂದಿಕೆಯಾಗುವ ಅವನ ಗುಣ ಹಿಡಿಸುತ್ತದೆ ಅಷ್ಟೇ ಅಲ್ಲ. ಅವನ ಅಸಹಾಯಕತೆಯನ್ನು ಎತ್ತಿ ಹಿಡಿಯುತ್ತದೆ.ಸ್ವಾಹಿಲಿ ಭಾಷೆಯಲ್ಲಿರುವ ಈ ಚಿತ್ರವನ್ನು ಆರಾಮವಾಗಿ ನೋಡಲೇಬೇಕಾದ ಚಿತ್ರಗಳ ಪಟ್ಟಿಯಲ್ಲಿ ಸೇರಿಸಬಹುದು.


Saturday, October 19, 2013

ಅದಲಾಲ್ ಕಾದಲ್ ಸೇವೀರ್...



ಅದೊಂದು ಕಾಲೇಜು. ಅಲ್ಲೊಂದಷ್ಟು ಹುಡುಗಿ, ಹುಡುಗರು. ಆ ವಯಸ್ಸಿನಲ್ಲಿ ಇರಬಹುದಾದ ಕುತೂಹಲ ಚೆಲ್ಲಾಟ ಮೊಂಡಾಟ ಎಲ್ಲವೂ ಇದೆ. ಅಂತ ಹುಡುಗರ ಪೈಕಿ ಕಾರ್ತಿಕ್ ಇದ್ದಾನೆ. ಅದೇ ಗೆಳೆಯರ ಗುಂಪಲ್ಲಿ ಶ್ವೇತಾ ಇದ್ದಾಳೆ. ಅವರಿಬ್ಬರೂ ಪ್ರೀತಿಸುತ್ತಾರೆ. ಒಂದಷ್ಟು ಕದ್ದು ಮುಚ್ಚಿ ಓಡಾಡುತ್ತಾರೆ. ಆನಂತರ ಅದೊಂದು ದಿನ ತಮ್ಮ ವಯಸಿನ ಬಿಸಿಯಲ್ಲಿ ನಡೆಯಬಾರದ್ದು ನಡೆದುಹೋಗುತ್ತದೆ. ಮುಂದೆ..ಸುಮಾರು ವರ್ಷಗಳ ಹಿಂದೆ ತೇಜಾ ನಿರ್ದೇಶನದ ಚಿತ್ರಂ ಕಥೆಯಿದ್ದ ಹಾಗಿದೆ ಎಂದರೆ ಅದಕ್ಕೂ ಅರ್ಧ ಡಜನ್ ಇದೆ ರೀತಿಯ ಕಥೆಯಿರುವ ಸಿನಿಮಾಗಳನ್ನು ಹೇಳಿಬಿಡಬಹುದು. ಆದರೆ ನಿರ್ದೇಶಕ ಸುಸೀಂದ್ರನ್  ನಿರ್ದೇಶನದ ಅದಲಾಲ್ ಕಾದ ಸೇಯ್ವೀರ್ ಚಿತ್ರದ ಅದರ ಅತ್ಯುತ್ತಮ ಅಂತ್ಯದಿಂದಾಗಿ ನೋಡಿದ ಸುಮಾರು ಹೊತ್ತು ಮನಸ್ಸಿನಲ್ಲಿ ಉಳಿಯುತ್ತದೆ. ಇಷ್ಟು ಚಿಕ್ಕ ಕಥೆಯನ್ನು ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದೋ, ಕಥೆಯೇನೋ ಚೆನ್ನಾಗಿದೆ, ಆದರೆ ಇದು ಸಿನಿಮಾಕ್ಕೆ ಸರಿಬರುವುದಿಲ್ಲ ಎಂಬಂತಹ ಮಾತುಗಳನ್ನು ನೀವು ನಮ್ಮಲ್ಲಿ ಕೇಳಬಹುದು.ಆದರೆ ಅಂತಹ ಕಥೆಗಳನ್ನು ಸಿನಿಮಾ ರೂಪಕ್ಕೆ ತಂದು ಸೈ ಎನಿಸಿಕೊಳ್ಳುವುದರಲ್ಲಿ ತಮಿಳರದು ಎತ್ತಿದ ಕೈ. ಅವರು ಒಂದು ಕಥೆ ಇಟ್ಟುಕೊಂಡರೆ ಅದಕ್ಕೆ ತಕ್ಕಂತೆ ಚಿತ್ರಕಥೆ ಹೆಣೆಯುತ್ತಾ ಸಾಗುತ್ತಾರೆಯೇ ಹೊರತು ಅದರಲ್ಲಿ ಬಲವಂತವಾಗಿ ಮನರಂಜನಾ ಅಂಶಗಳನ್ನು ತುರುಕುವುದಕ್ಕೆ ಹೋಗುವುದಿಲ್ಲ. ಹಾಗಂತ ತೀರಾ ಪ್ರಯೋಗವನ್ನೂ ಮಾಡುವುದಿಲ್ಲ. ಕಥೆಯ ನೆಲೆಗಟ್ಟಿನಲ್ಲಿ ನಡೆಯಬಹುದಾದ ವಾಸ್ತವಿಕ ಅಂಶಗಳನ್ನು ಜೋಡಿಸುತ್ತಾ ಸಾಗುತ್ತಾರೆ. ನಾನು ಗಮನಸಿದ ಹಾಗೆ ನಮ್ಮಲ್ಲಿ ಅದು ಸ್ವಲ್ಪ ಕಡಿಮೆ. ಉದಾಹರಣೆಗೆ ಈ ಚಿತ್ರವನ್ನೇ ತೆಗೆದುಕೊಳ್ಳಿ. ಇದು ಕೇವಲ ಒಂದು ಘಂಟೆ ಮೂವತ್ತು ನಿಮಿಷಗಳ ಚಿತ್ರ. ಒಂದು ಸಿನಿಮಾ ಅದೂ ಹಾಡುಗಳಿರುವ ಪ್ರೇಮ ಕಥೆ ಕೇವಲ ಒಂದೂವರೆ ಘಂಟೆ ಎಂಬುದನ್ನು ಊಹಿಸುವುದು ನಮ್ಮಲ್ಲಿ ಕಷ್ಟ. ಹೇಳಿಕೊಳ್ಳುವಂತಹ ನಾಯಕ –ನಾಯಕಿ ಇಲ್ಲ. ಆದರೆ ಕಥೆ ಮತ್ತು ಚಿತ್ರಕಥೆ ನಿಮ್ಮನ್ನು ಕುರ್ಚಿಗೆ ಅಂಟಿಸಿ ಕೂರಿಸಿಬಿಡುತ್ತದೆ. ಕೊನೆಯ ದೃಶ್ಯವಂತೂ ನಿಮ್ಮ ಕಣ್ಣಲ್ಲಿ ಒಂದು ಹನಿ ನೀರು ತರಿಸಿಬಿಡುತ್ತದೆ. ಹಾಗಂತ ಇದು ದುರಂತಮಯ ಚಿತ್ರವಲ್ಲ. ನಾಯಕ –ನಾಯಕಿ ಕೊನೆಯಲ್ಲಿ ಸುಖವಾಗಿಯೇ ಇರುತ್ತಾರೆ..ಆದರೂ..ಏನು ಎಂಬ ಪ್ರಶ್ನೆಗೆ ಉತ್ತರ ಬೇಕಾದಲ್ಲಿ ನೀವೇ ಒಮ್ಮೆ ಈ ಸಿನೆಮಾ ನೋಡಿಬಿಡಿ..ಅಥವಾ ಕಾಯಿರಿ. ಯಾರಾದರೂ ಕನ್ನಡದ ಪುಣ್ಯಾತ್ಮರು ಇದನ್ನು ರೀಮೇಕ್ ಮಾಡಿದರೂ ಮಾಡಬಹುದು.ನಿರ್ದೇಶಕ ಸುಶೀಂದ್ರನ್ ಸಣ್ಣಕಥೆಯಾಧಾರಿತ ಚಿಕ್ಕ ಬಜೆಟ್ಟಿನ ಪರಿಣಾಮಕಾರಿ ಚಿತ್ರಕಥೆಯ ಚಿತ್ರಗಳಿಗೆ ಹೆಸರುವಾಸಿಯಾದವರು. ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಹೊತ್ತಿರುವ ಈ ಯುವ ನಿರ್ದೇಶಕರು ಪ್ರಯೋಗಗಳಿಗಿಂತ ಹೆಚ್ಚಾಗಿ ಉತ್ತಮ ಮನಮಿಡಿಯುವ ಕಥೆಗಳಿಗೆ ಹೆಸರುವಾಸಿಯಾದವರು. ಇವರು ನಿರ್ದೇಶನದ ವೆನಿಲ್ಲಾ ಕಬಡ್ಡಿಕುಳಂ ಕಬಡ್ಡಿ ಕ್ರೀಡೆಯ ಬಗ್ಗೆ ಬಂದಂತಹ ಅತ್ಯುತ್ತಮ ಚಿತ್ರ. ಅದಾದ ನಂತರ ಅಳಗಿರಿಸಾಮಿಯನ್ ಕುದುರೈ ಪ್ರಶಸ್ತಿ ವಿಜೇತ ಸಣ್ಣ ಕಥೆಯಾಧಾರಿತ ಚಿತ್ರ. 

Thursday, October 17, 2013

ಒಂದೆ ಕಥೆ..ಎರಡು ಸಿನೆಮಾಗಳು

 ರೋಲಂಡ್ ಎಂರಿಚ್ ನಿಮಗೆ ಗೊತ್ತಿರಬಹುದು. ದೃಶ್ಯ ವೈಭವದ ಅಂದರೆ ಗ್ರಾಫಿಕ್ಸ್ ಹೊಂದಿದ ಚಿತ್ರಗಳನ್ನು ನಿರ್ದೇಶನ ಮಾಡುವುದರಲ್ಲಿ ಮತ್ತು ವಿನಾಶಕಾರಿ, ಧ್ವಂಸಾತ್ಮಕ ಕಥೆಯ ಚಿತ್ರಗಳೆಂದರೆ ರೋಲಂಡ್ ಖುಷಿಯೇನೋ? ಆತನ ಚಿತ್ರಗಳನ್ನು ಒಮ್ಮೆ ಗಮನಿಸಿ.ಗಾಡ್ಜಿಲ್ಲಾ, 2012, ಇಂಡಿಪೆಂಡೆನ್ಸ್ ಡೇ,ದಿ ಡೇ ಆಫ್ಟರ್ ಟುಮಾರೋ,ಮೂನ್ 44, ..ಹೀಗೆ. ಹೆಚ್ಚು ಎಲ್ಲಾ ಚಿತ್ರಗಳಲ್ಲೂ ಆತನ ತಾಂತ್ರಿಕ ಕೌಶಲವನ್ನು ನಾವು ಕಾಣಬಹುದು. ಆತನ ನಿರ್ದೇಶನದಲ್ಲಿ ಈ ವರ್ಷ ಬಿಡುಗಡೆಯಾದ ಚಿತ್ರ ವೈಟ್ ಹೌಸ್ ಡೌನ್. ಇದು ಹೆಸರೇ ಸೂಚಿಸುವಂತೆ ಉಗ್ರಗಾಮಿಗಳು ವೈಟ್ ಹೌಸ್ ಅನ್ನು ಮುತ್ತಿಗೆ ಹಾಕುವುದು, ನಾಯಕ ಹೋರಾಡಿ ಅಲ್ಲಿನ ಪ್ರಧಾನಿಯನ್ನು ಉಳಿಸುವುದು ಇಷ್ಟೇ ಕಥೆ. ಆಶ್ಚರ್ಯದ ಸಂಗತಿಯೆಂದರೆ ಇದೆ ವರ್ಷ ಬಿಡುಗಡೆಯಾದ ಒಲಿಂಪಸ್ ಹ್ಯಾಸ್ ಫಾಲನ್ ಚಿತ್ರದ ಕಥೆಯೂ ಇದೆ. ವ್ಯತ್ಯಾಸವೇನೆಂದರೆ ಮಗಳನ್ನು ಸಂಸತ್ತು ಭವನಕ್ಕೆ ಕರೆದುಕೊಂಡು ಬರುವ ನಾಯಕ ಅನಿರೀಕ್ಷಿತವಾಗಿ ಉಗ್ರಗಾಮಿಗಳ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಒಲಿಂಪಸ್ ಚಿತ್ರದಲ್ಲಿ ನಾಯಕ ಅಪಘಾತದಲ್ಲಿ ಪ್ರೆಸಿಡೆಂಟ್ ಪತ್ನಿಯನ್ನು ಉಳಿಸಲು ಸಾಧ್ಯವಾಗದಿದ್ದಾಗ ಆ ಕೆಲಸಕ್ಕೆ ರಾಜಿನಾಮೆ ನೀಡಿರುತ್ತಾನೆ.ಚಿತ್ರದ ಕಥೆ, ನಿರೂಪಣೆ ಎರಡೂ ಒಂದೆ ಆಗಿವೆ. ಹಾಗೆಯೇ ಸಾಹಸಮಯ ದೃಶ್ಯಗಳು. ಆದರೆ ಆಂಟೊನಿ ಫುಕುಅ ನಿರ್ದೇಶನದ ಒಲಿಂಪಸ್ ಹ್ಯಾಸ್ ಫಾಲನ್ ಚಿತ್ರದ ವೇಗ ಚೆನ್ನಾಗಿದೆ. ಕೇವಲ ಒಂದೂವರೆ ಗಂಟೆಗಳ ಈ ಚಿತ್ರದ ಚಿತ್ರಕಥೆ ಶರವೇಗದಲ್ಲಿ ಸಾಗುತ್ತದೆ.ನಿರ್ದೇಶಕ ಅಂತೋಣಿ ಫುಕಾ ಈ ಹಿಂದೆ ಶೂಟರ್ ಚಿತ್ರವನ್ನು ನಿರ್ದೇಶನ ಮಾಡಿದವನು.ಹಾಗೆಯೇ ನಾಯಕನಾಗಿ ಅಭಿನಯಿಸಿರುವ ಗೆರಾರ್ಡ್ ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾನೆ. ಆದರೆ ಎರಡು ಘಂಟೆ ಇಪ್ಪತ್ತು ನಿಮಿಷದ ವೈಟ್ ಹೌಸ್ ಡೌನ್ ಅಲ್ಲಲ್ಲಿ ಬೋರ್ ಹೊಡೆಸುತ್ತದೆ. ಅದಕ್ಕೆ ಕಾರಣ ಚಿತ್ರದ ಉದ್ದ ಎನ್ನಬಹುದು.
ಆದರೆ ಆಕಾಶದಲ್ಲಿ ವಿಮಾನ ಹತ್ತಿ ಉರಿಯುವುದು, ಹೆಲಿಕ್ಯಾಪ್ಟರ್ ಬೆಂಕಿಗೆ ಸಿಕ್ಕಿ ನೆಲಕ್ಕೆ ಬೀಳುವುದು ಮುಂತಾದವುಗಳು ವೈಟ್ ಹೌಸ್ ನ ಮುಖ್ಯಾಂಶಗಳು ಎನ್ನಬಹುದು. ಅದೇ ರೀತಿ ಒಲಿಂಪಸ್ ಚಿತ್ರದಲ್ಲೂ ಕೋರಿಯನ್ ಉಗ್ರರು ದಾಳಿ ಮಾಡುವ ಶೈಲಿ ಅದನ್ನು ನಾಯಕನೋಬ್ಬನೆ ಬೇಧಿಸುತ್ತಾ ಹೋಗುವುದು ಕನ್ನಡದ ನಿಷ್ಕರ್ಷ ಚಿತ್ರವನ್ನು ನೆನಪಿಸದೇ ಇರದು.
ಒಟ್ಟಿನಲ್ಲಿ ಒಂದೆ ವರ್ಷದಲ್ಲಿ ತಿಂಗಳುಗಳ ಅಂತರದಲ್ಲಿ ಒಂದೆ ಕಥೆಯ ಎರಡು ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಒಲಿಂಪಸ್ ಕೊಡುವ ಮಜಾವನ್ನು ವೈಟ್ ಕೊಡುವುದಿಲ್ಲ. ಟೈಮ್ ಪಾಸ್ ಗೆ ಸಾಹಸಪ್ರಿಯರು ನೋಡಬಹುದಾದ ಚಿತ್ರಗಳು ಇವು ಎನ್ನಲಡ್ಡಿಯಿಲ್ಲ.

Wednesday, October 16, 2013

45 ದಿನಗಳ ರಹಸ್ಯ.

ಕಲಿತ ವಿದ್ಯೆಯನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ. ನಾನು ಬಾಕ್ಸಿಂಗ್ ಬಿಟ್ಟು ವರ್ಷಗಳೇ ಕಳೆದಿವೆ. ಆದರೂ ರಿಂಗ್ ಒಳಗೆ ನಿಂತಾಕ್ಷಣ ನನಗೆ ಆಟದ ಸುಲಿಹುಗಳು ನಿಚ್ಚಳವಾಗುತ್ತಾ ಹೋದವು. ಕೇವಲ ನಿಮಿಷಗಳಲ್ಲಿ ನಾನು ಅದೆಷ್ಟು ಸಿದ್ಧನಾಗಿದ್ದೆನೆಂದರೆ ಆ ತಕ್ಷಣಕ್ಕೆ ಹೊಡೆದಾಡಲು ಸಿದ್ಧನಿದ್ದೆ.
ಆದರೆ ಹೊಡೆದಾಟವಿದ್ದದ್ದು ಮಾರನೆಯ ದಿನ. ನನಗೆ ಮತ್ತೆ ಇದೆ ಹೋರಾಟಕ್ಕಿಳಿಯಲು ಸುತಾರಾಂ ಇಷ್ಟವಿರಲಿಲ್ಲ.ಯಾಕೆಂದರೆ ಆಟದಲ್ಲಿ ಮೋಸವಿತ್ತು. ಅದೊಂದು ಮನರಂಜನೆಯಿಂದ ದಂಧೆಯ ರೂಪ ತಾಳಿತ್ತು. ಯಾರು ಸೋಲಬೇಕು ಯಾರು ಗೆಲ್ಲಬೇಕು ಎಂಬುದು ಮೊದಲೇ ನಿಶ್ಚಯವಾಗಿಬಿಡುತ್ತಿತ್ತು. ನನಗೆ ಆಟವನ್ನು ಮುಂದುವರಿಸದೆ ಇರಲು ಕಾರಣವಾದದ್ದು ಇದೆ. ಆದರೆ ಮಂಗಳೂರು ಬಿಟ್ಟು ಬಾಂಬೆಗೆ ಬಂದದ್ದು ನಾನು ಹಣ ಮಾಡುವುದಕ್ಕೆ. ಆದರೆ ಬರುತ್ತಲೇ ಇಲ್ಲಿ ಸಿಕ್ಕಿ ಕೊಂಡಿದ್ದೆ. ಪತ್ತರ್ ಕೈಗೆ. ಹೋಟೆಲ್ಲಿನಲ್ಲಿ ನಡೆದ ಚಿಕ್ಕ ಹೊಡೆದಾಟದಲ್ಲಿ ಪತ್ತರ್ ಕಡೆಯವನಿಗೆ ಮಣ್ಣು ಮುಕ್ಕಿಸಿದ್ದೆ. ಆದರೆ ಆತ ನಾಳೆ ನಡೆಯಬೇಕಾಗಿದ್ದ ಬಾಕ್ಸಿಂಗ್ ನಲ್ಲಿ ಪತ್ತರ್ ಗೆ ವಿರುದ್ಧವಾಗಿ ಪತ್ತರ್ ಕಡೆಯ ಶಿವನ ಜೊತೆಗೆ ಹೊಡೆದಾಡಬೇಕಾಗಿತ್ತು. ಆದರೆ ನಾನವನಿಗೆ ಅದೇಗೆ ಭಾರಿಸಿದ್ದೆ ಎಂದರೆ ಆತ ಹುಷಾರಾಗಿ ಓಡಾಡಲು ಕನಿಷ್ಟ ಒಂದು ತಿಂಗಳಾದರೂ ಬೇಕಿತ್ತು. ನನ್ನನ್ನು ವಿಚಾರಿಸಿಕೊಳ್ಳಲು ಬಂದ ಪತ್ತರ್ ಗೆ ನಾನು ಹಳೆಯ ಬಾಕ್ಸಿಂಗ್ ಪಟು ಎಂಬುದು ಗೊತ್ತಾದದ್ದೇ ನಾಳಿನ ಆಟದಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದ. ಹೇಳಿದ್ದ ಅಲ್ಲ ಆದೇಶಿಸಿದ್ದ. ಅವನಾಡಿದ ಮಾತುಗಳು ಹೀಗಿತ್ತು. ' ನೋಡು ಮರಿ,...ನಾಳೆ ನೀನು ಅವನ ಜೊತೆ ಆಡಬೇಕು. ಎರಡು ರೌಂಡ್ ಗೆಲ್ಲಬೇಕು..ಮೂರನೆಯ ರೌಂಡ್ ಸೋಲಬೇಕು. ಅಷ್ಟೇ..ಇದು ನಡೀಬೇಕು. ನೀನು ಆಗಲ್ಲ, ಸೋಲಲ್ಲ ಅನ್ನೋ ಹಾಗೆ ಇಲ್ಲ...ಆಮೇಲೆ ಪೋಲಿಸ್ ಅಂತೆಲ್ಲಾ ಹೋಗೋ ಹಾಗೂ ಇಲ್ಲ. ಈಗಾಗಲೇ ನಾನು ಲಕ್ಷಾಂತರ ಹಣಾನ ಅದರಲ್ಲಿ ಕಟ್ಟಿದ್ದೀನಿ. ನಾನು ಹೇಳಿದ್ದು ನಡೀದೆ ಹೋದರೆ ನನಗೆ ದೊಡ್ಡ ನಷ್ಟ ಆಗುತ್ತೆ..ನಿನ್ನ ಪ್ರಾಣ ಹೋಗುತ್ತೆ...' ಎಂದಿದ್ದ ಮತ್ತು ನನ್ನ ಪ್ರತಿಕ್ರಿಯೆಗೂ ಕಾಯದೆ ಹೊರಟುಹೋಗಿದ್ದ.
ನಾನು ತಪ್ಪಿಸಿಕೊಳ್ಳುವ ಯಾವ ಅವಕಾಶವೂ ಇರಲಿಲ್ಲ.
*************    ***********
ನನ್ನ ಎದುರಾಳಿ ಶಿವ ದೈತ್ಯ ದೇಹಿ. ಆಮೇಲೆ ಅವನಿಗೂ ಆಟ ಏನು ನಡೆಯುತ್ತದೆ ಎಂಬುದು ಗೊತ್ತಿತ್ತು. ಅವನು ಎರಡು ಸುತ್ತಿನಲ್ಲಿ ಸೋಲಲೇ ಬೇಕಿತ್ತು. ಮೂರದರಲ್ಲಿ ಗೆಲ್ಲಬೇಕಿತ್ತು. ಅಕಸ್ಮಾತ್ ನಾನು ಸೋಲದೆ, ಗೆಲ್ಲಲು ಪ್ರಯತ್ನಿಸಿದರೆ ನನ್ನನ್ನು ಮುಗಿಸುವಂತೆ ಪತ್ತರ್ ಆದೇಶ ಹೊರಡಿಸಿದ್ದು ನನಗೂ ಗೊತ್ತಿತ್ತು.
ಬಾಕ್ಸಿಂಗ್ ನೋಡಲು ಜನ ಕಿಕ್ಕಿರಿದು ನಿಂತಿದ್ದರು. ಅವರ ಕೇಕೆ ಬೊಬ್ಬೆ ಮುಗಿಲು ಮುಟ್ಟಿತ್ತು. ಹೊಸಬನೊಬ್ಬ ಶಿವನ ಜೊತೆ ಆಡುತ್ತಿದ್ದಾನೆ ಎನ್ನುವುದು ಹಲವರಲ್ಲಿ ರೋಮಾಂಚನ ಉಂಟು ಮಾಡಿತ್ತು. ನಾನು ಮಾತ್ರ ಇನ್ನೂ ಯೋಚಿಸುತ್ತಲೇ ಇದ್ದೆ. ಆಟವಾದಲೇ ಬೇಕಾದಾಗ ನನ್ನನ್ನು ನಾನು ಮರೆತುಬಿಡುತಿದ್ದೆ. ಹಾಗೇನಾದರೂ ಆದರೆ ಈವತ್ತಿಗೆ ನನ್ನ ಕಥೆ ಮುಗಿಯುತ್ತಿತ್ತು. ನಾನು ಸುತ್ತಲೂ ನೋಡಿದೆ. ಮುಗ್ಧ ಜನರು ತಾವುದುಡಿದಿದ್ದನ್ನು ತಂದು ಆಟಕ್ಕೆ ಕಟ್ಟಿದ್ದರು. ಆದರೆ ಆ ಪತ್ತರ್ ತಾನು ದೋಚಿದ ಹಣವನ್ನು ಕಟ್ಟಿದ್ದ. ಅವನಿಗೆ ಹೆದರಿ ನಾನು ಸೋಲಬೇಕಾ? ನನ್ನೊಬ್ಬನ ಸೋಲಿನಲ್ಲಿ ಇಷ್ಟು ಜನರ ಸೋಲೂ ಇದೆಯಲ್ಲ ಎನಿಸದಿರಲಿಲ್ಲ.
ಆಟ ಶುರುವಾಯಿತು. ನಾನುಸುಮ್ಮನೆ ಪ್ರೇಕ್ಷಕರತ್ತ ನೋಡಿದೆ ಅಷ್ಟೇ. ಅಲ್ಲಿದ್ದಳು ಆ ಸುಂದರಿ. ನೇರವಾಗಿ ಸ್ವರ್ಗದಿಂದ ಧರೆಗೆ ಇಳಿದು ಬಂದಿರುವ ಸುಂದರಿ ಅಪ್ಸರೆ..ಅಷ್ಟು ಜನರಲ್ಲಿ ಅವಳ ಸೌಂದರ್ಯ ಎದ್ದು ಕಾಣುತ್ತಿತ್ತು. ಅವಳೂ ನನ್ನ ಕಡೆಗೆ ನೋಡುತ್ತಿದ್ದಳು. ನಾನೂ ಅವಳನ್ನು ದಿಟ್ಟಿಸಿದೆ. ನೀನು ಗೆಲ್ಲಲೇ ಬೇಕು ಎಂಬಂತೆ ಕೈ ಆಡಿಸಿದಳು. ಅಲ್ಲಿಗೆ ನಾನು ಎಲ್ಲೋ ಕಳೆದುಹೋಗಿದ್ದೆ. ಪತ್ತರ್ ಮರೆತು ಹೋಗಿದ್ದ.
ಆಟ ಶುರುವಾಯಿತು. ಮೂರು ಸುತ್ತಿನಲ್ಲಿ ಶಿವನನ್ನು ಹೊಡೆದು ಬೀಸಾಕಿದೆ. ಆತನ ಮೂಗಿನ ನಟ್ಟಿ ಹರಿದು ರಕ್ತ ಚಿಮ್ಮಿತ್ತು. ಕಣ್ಣ ಸುತ್ತ ಕಪ್ಪಾಗಿತ್ತು. ಮೂರನೆಯ ಸುತ್ತಿನ ಕೊನೆಯ ಪಂಚ್ ಗೆ ಅವನು ಬಿದ್ದದ್ದು ಹೇಗಿತ್ತೆಂದರೆ ಯಾವುದೋ ಆನೆ ಕುಸಿದುಬಿದ್ದ ಹಾಗಿತ್ತು. ಸುತ್ತಲೂ ನೋಡಿದೆ.ರೆಫಾರಿ ಬಂದು ನನ್ನ ಕೈ ಎತ್ತಿ ಗೆಲುವಿನ ಘೋಷಣೆ ಮಾಡುತ್ತಿದ್ದ. ನನ್ನ ಕಣ್ಣು ಅವಳನ್ನು ಹುಡುಕುತ್ತಿತ್ತು. ಆದರೆ ಪತ್ತರ್ ತನ್ನ ಕಡೆಯವರ ಜೊತೆ ಕೆಂಡಾಮಂಡಲವಾಗಿ ನಿಂತಿದ್ದ. ಜನರೆಲ್ಲರೂ ಅಲ್ಲಿಂದ ಹೋಗುವುದನ್ನೇ ಕಾಯುತ್ತಿದ್ದ.ಅಲ್ಲಿಂದ ಅವನ ಕೈಯಿಂದ ತಪ್ಪಿಸಿಕೊಳ್ಳಲು ನನಗೆ ಅಷ್ಟು ಮಾತ್ರದ ಸಮಯವಿತ್ತು.ಆದರೆ ನನ್ನ ಮುಂದೆ ಇದ್ದದ್ದು ಇನ್ನೂ ಒಂದು ಪ್ರಶ್ನೆ ? ತಪ್ಪಿಸಿಕೊಂಡು ಹೋಗುವುದಾದರೂ ಎಲ್ಲಿಗೆ? ಯಾಕೆಂದರೆ ಈಗಾಗಲೇ ನನ್ನ ಜಾಗದಿಂದ ಕಿಲೋಮೀಟರುಗಳವರೆಗೆ ಪತ್ತರ್ ತನ್ನ ಕಾವಲನ್ನು, ನನ್ನನ್ನು ಬೇಟೆಯಾಡಲು ಜನರನ್ನು ಬಿಟ್ಟಿರುವ ಸಾಧ್ಯತೆ ಇತ್ತು.
ನಾನು ಇನ್ನೂ ಡ್ರೆಸ್ಸಿಂಗ್ ರೂಮಲ್ಲಿದ್ದೆ. ತುಂಬ ಜನ ಅಭಿಮಾನಿಗಳು ಬಂದು ಕೈಕುಲುಕಿ ಪ್ರಶಂಸಿಸಿ ಹೋಗುತ್ತಿದ್ದರು. ವರ್ಷಗಳೇ ಕಳೆದ ಮೇಲೆ ಪ್ರಪ್ರಥಮ ಬಾರಿಗೆ ಪತ್ತರ್ ಕಡೆಯವನೊಬ್ಬ ಸೋತಿದ್ದ. ಮಣ್ಣು ಮುಕ್ಕಿದ್ದ. ಅದೇ ನನ್ನನ್ನು ಹೀರೋನನ್ನಾಗಿ ಮಾಡಿತ್ತು. ಅವರು ತಾವು ಕಟ್ಟಿದ್ದ ಚೂರುಪಾರು ಹಣ ಗೆದ್ದಿದ್ದಕ್ಕೆ ಸಂತೋಷ ಪಡುತ್ತಿರಲಿಲ್ಲ. ಯಾರೋ ಒಬ್ಬ ಪತ್ತರ್ ವಿರುದ್ಧ ಗಂಡಸುತನ ತೋರಿದನಲ್ಲ ಎಂಬುದು ಅವರ ಸಂಭ್ರಮಕ್ಕೆ ಕಾರಣವಾಗಿತ್ತು.ಆದರೆ ನಾನು ಜನರೆಲ್ಲಾ ಹೋಗುವುದನ್ನೇ ಕಾಯುತ್ತಿದ್ದೆ. ಆದರೆ ಅವರಿರುವವರೆಗೂ ಪತ್ತರ್ ಆಗಲಿ, ಅವನ ಕಡೆಯವರಾಗಲಿ ನನ್ನನ್ನು ಮುಟ್ಟುವುದಿಲ್ಲ್ಲ ಎಂಬುದೂ ನನಗೆ ಗೊತ್ತಿತ್ತು.. ಜನರೆಲ್ಲಾ, ಮಾಧ್ಯಮದವರೆಲ್ಲಾ ಒಬ್ಬೊಬ್ಬರೇ ಖಾಲಿಯಾದರು. ನಾನೂ ಹಾಗೆ ಬಾಗಿಲ ಕಡೆಗೆ ಗಮನಿಸುತ್ತಿದ್ದೆ. ಅಷ್ಟರಲ್ಲಿ ಬಂದಳು ಅಪ್ಸರೆ...ನನ್ನ ಕೋಣೆಗೆ ಬಂದವಳೇ, ಬಾಗಿಲು ಹಾಕಿ ಬಿಟ್ಟಳು.
'ಸೂಪರ್..ಅಂಡ್ ವಂಡರ್ ಫುಲ್ ಆಟ..ನಾನಂತೂ ಕಳೆದು ಹೋಗ್ಬಿಟ್ಟೆ...ಎಂದು ನನ್ನನ್ನ ಬಿಗಿದಪ್ಪಿದಳು.ಆನಂತರ , 'ಅದಿರ್ಲಿ...ಈಗ ಮತ್ತೊಂದು ಗಂಡಾಂತರ ಕಾದಿದೆ..ನೀನಿಲ್ಲಿಂದ ತಪ್ಪಿಸ್ಕೊಬೇಕು..' ಎಂದಳು. ನಾನು ಅವಾಕ್ಕಾದೆ. ಅಂದರೆ ಇವಳಿಗೆ ಎಲ್ಲವೂ ಗೊತ್ತಿದೆ.! 'ನಿಮಗೆ..ಗೊತ್ತಾ?'
'ಗೊತ್ತಿಲ್ಲದೇ ಏನು? ಅವನೊಬ್ಬ ರೋಗ್..ಇರ್ಲಿ..ಈವತ್ತು ಅವನಿಗೆ ಸೋಕ್ಕಿಳಿದಿದೆ..ನೋಡಿ..ಈ ಕಿಟಕಿಯಿಂದ ಪೈಪ್ ಹಿಡಿದು ಕೆಳಕ್ಕೆ ಜಾರಿದರೆ ಸೀದಾ ಪಾರ್ಕಿಂಗ್ ಲಾಟ್ ಹತ್ತರ ಹೋಗ್ತೀರಾ..ಅಲ್ಲಿ ಕಾರು ತಗೊಂಡು ಎಸ್ಕೇಪ್ ಆಗ್ಬಿಡಿ..ಅಲ್ಲಿವರೆಗೆ ನಾನು ಯಾರೂ ಬರದೆ ಇರೋಹಂಗೆ ನೋಡ್ಕೋತೀನಿ..ಈ ತರಹ ಬಾಗಿಲು ಹಾಕಿದ್ರೆ ಕಷ್ಟ..?'
ಆದರೆ ನನ್ನ ಹತ್ತಿರ ಕಾರಿಲ್ಲ...?
ನಾನು ಹೇಳಿದ್ದು ನನ್ನ ಕಾರು ಬಗ್ಗೆ...ಕಪ್ಪು ಕಲರ್ ಕಾರು, ಸ್ವಿಫ್ಟ್ ಡಿಸೈರ್...ಬೇಗ..ನಂಬರ್ 1848 ಕಾರಲ್ಲಿ ಒಳಗೆ ನನ್ನ ಗಂಡ ಕುಳಿತಿರತಾರೆ..ನಾನು ಎಲ್ಲಾ ಹೇಳಿದ್ದೀನಿ..ಬೇಗ  ಹರಿ ಅಪ್...'
ನಾನು ಮಾತಾಡದೆ ಅವಳೆಡೆಗೆ ನೋಡಿದೆ. ನಂತರ ಅವಳು ಹೇಳಿದ ಹಾಗೆ ಕಿಟಕಿಯಿಂದ ತೋರಿ ಪ್ರಯಾಸ ಪಟ್ಟು ಕೆಳಗಿಳಿದೆ. ಅವಳ ಕಾರಿನ ಹತ್ತಿರ ಬಂದ ತಕ್ಷಣ ಅವಳ ಗಂಡ ಬಾಗಿಲು ತೆರೆದೆ. ಅವನೊಂದು ಪ್ರಯಾಸದ ನಗೆ ಬೀರಿದ. ನಾನು ಕುಳಿತ ಒಂದೆ ನಿಮಿಷಕ್ಕೆ ಅವಳು ಬಂದಳು. ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತಳು. ಅಷ್ಟೇ ಕಾರು ಶರವೇಗದಿಂದ ಅಲ್ಲಿಂದ ಮುನ್ನುಗ್ಗಿತು.
ಆದರೆ ನಾನು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದೆ. ಇಷ್ಟೊತ್ತಿಗೆ ಇಡೀ ಕೋಣೆ ಹುಡುಕುತ್ತಿರುತ್ತಾರೆ. ಇಲ್ಲ ಎಂದು ಗೊತ್ತಾದ ತಕ್ಷಣ..
'ಅಲ್ನೋಡು..ಪೋಲಿಸ್ ಚೆಕಿಂಗ್ ನಡೀತಾ ಇದೆ...' ಅವಳ ಗಂಡ ಗಾಬರಿಯಿಂದ ಕೂಗಿದ. ನಾನಂದುಕೊಂಡದ್ದಕ್ಕಿಂತ ಪತ್ತರ್ ಖದರ್ ಜಾಸ್ತಿಯೇ ಇತ್ತು.ನಾನು ಸೀಟಿನಲ್ಲಿ ಹಾಗೆಯೇ ಕೆಳಗೆ ಬಗ್ಗಿ ಅಡ್ಡಡ್ಡ ಮಲಗಿದೆ. ಆದರೂ ಸಿಕ್ಕಿಹಾಕಿಕೊಳ್ಳುವ ಅವಕಾಶ ಇತ್ತು.
ನಾವು ಇನ್ನೇನು ಚೆಕಿಂಗ್ ಹತ್ತಿರ ಬಂದೆವು. ಪೋಲಿಸರು ಮತ್ತು ಅವರ ಜೊತೆಗೆ ಒಂದಿಬ್ಬರು ಪತ್ತರ್ ಕಡೆಯವರು ಕಾರಗಳ ಒಳಗೆಲ್ಲಾ ಪರೀಕ್ಷೆ ಮಾಡುತ್ತಿದ್ದರು. ನಾನು ಉಸಿರು ಬಿಗಿ ಹಿಡಿದು ಮಲಗಿದ್ದೆ. ಆದರೆ ಇದ್ದಕ್ಕಿದ್ದಂತೆ ಕಾರಿನ ವೇಗ ಹೆಚ್ಚಾಯಿತು. ಏನಾಯಿತು ಎಂಬುದು ಗೊತ್ತಾಗುವಷ್ಟರಲ್ಲಿ ಕಾರು ಶರವೇಗದಲ್ಲಿ ಅಲ್ಲಿಂದ ಹೊರಟಿತ್ತು. ನಾನು ತಲೆ ಎತ್ತಿದೆ.
'ಇದೊಂದೇ ದಾರಿಯಿದ್ದದ್ದು..ಇಲ್ಲಾಂದ್ರೆ ತಪ್ಪಿಸಿಕೊಳ್ಳೋಕೆ ಸಾಧ್ಯಾನೆ ಇರ್ತಿರಲಿಲ್ಲ..' ನಾನು ಕೇಳದಿದ್ದರೂ ಸಮಜಾಯಿಷಿ ಕೊಟ್ಟ ಆಕೆ ಕಾರಿನ ವೇಗವನ್ನು ಇನ್ನೂ ಹೆಚ್ಚಿಸಿದಳು. ಸ್ವಲ್ಪ ಹೊತ್ತಿನಲ್ಲೇ ಒಂದು ಪೋಲಿಸ್ ಜೀಪು, ಎರಡು ಕಾರು ಮತ್ತು ಎರಡು ಬೈಕುಗಳು ನಮ್ಮ ಹಿಂದೆ ಬಿದ್ದದ್ದು ಗೊತ್ತಾಯಿತು. ನಮ್ಮ ಕಾರಿನ ವೇಗ ಇನ್ನೂ ಹೆಚ್ಚಿತ್ತು. ಯಾವುದೋ ಕಾರ್ ರೇಸ್ನಲ್ಲಿನ ಕಾರುಗಳು ಓಡುತ್ತಿರುವ ಹಾಗೆ ಭಾಸವಾಗುತ್ತಿತ್ತು.ಅಷ್ಟರಲ್ಲಿ ಗುಂಡು ಬಂದು ಕಾರಿನ ಸೀಟಿನ ಹಿಂಬದಿಗೆ ಬಿತ್ತು. ಅವಳ ನಿಯಂತ್ರಣ ಒಂದು ಕ್ಷಣ ತಪ್ಪಿತಷ್ಟೇ..ಕಾರು ಅಡ್ಡಾ ದಿಡ್ಡಿ ಚಲಿಸಿ ಮುಂದಿನ ಕಾರಿಗೆ ಡಿಕ್ಕಿ ಹೊಡೆದು ಮೇಲೆ ಹಾರಿತು. ಅಷ್ಟೇ ಅಮೇಲೆನಾಯಿತೋ ನನಗೆ ಗೊತ್ತಾಗಲಿಲ್ಲ.
******
ಕಣ್ಣು ಬಿಟ್ಟಾಗ ನಾನು ಆಸ್ಪತ್ರೆಯಲ್ಲಿದ್ದೆ. ತಲೆ ಧಿಂ ಎನ್ನುತ್ತಿತ್ತು. ಅಬ್ಬಾ ಬದುಕಿದ್ದೇನ? ಅವಳು ಅವಳ ಗಂಡ ಬದುಕಿರಬಹುದಾ..?ಆದರೆ ನನಗೆ ಮತ್ತೆ ಪ್ರಜ್ಞೆ ತಪ್ಪಿತ್ತು. ಮತ್ತೆ ಪ್ರಜ್ಞೆ ಬಂದಾಗ ನನ್ನ ಎದುರಿಗೆ ವೈದ್ಯರುಗಳ ಗುಂಪೇ ಇತ್ತು.
'ಹೇಗಿದ್ದೀರಾ ಮಿಸ್ಟರ್..' ಎಂದರು. ನಾನು ನಕ್ಕೆ. ಮಾತಾಡಲು ಸಾಧ್ಯವಾಗಬಹುದಾ?
'ಹಿ ಇಸ್ ಪೆರ್ಫೆಕ್ಟ್ಲಿ ಆಲ್ರೈಟ್ ...' ಎಲ್ಲರೂ ಅತ್ತ ಹೋದರು. ನಾನು ಎದ್ದು ಕುಳಿತುಕೊಳ್ಳುವ ಪ್ರಯತ್ನ ಪಟ್ಟೆ ಸಾಧ್ಯವಾಗಲಿಲ್ಲ. ಆಗ ಹತ್ತಿರ ಬಂದ ವೈದ್ಯರು,
'ಏನು.ನೀವೀಗ ಹುಶಾರಿದ್ದೀರಾ...ಇನ್ನೆರೆಡು ದಿನ ನೀವು ಓಡಾಡಬಹುದು..' ಎಂದರು.
'ಡಾಕ್ಟ್ರೆ...ಅವಳು ಹುಶಾರಿದ್ದಾಳಾ..?' ಎಂದೆ.
ಅವರು ಒಮ್ಮೆ ನಕ್ಕು ಹೌದು ಎನ್ನುವಂತೆ ತಲೆಯಾಡಿಸಿ ಅಲ್ಲಿಂದ ಹೊರಟುಹೋದರು. ನಾನು ಆಸ್ಪತ್ರೆಯನ್ನೊಮ್ಮೆ ಗಮನಿಸಿದೆ. ಎಲ್ಲಾ ಕನ್ನಡದಲ್ಲಿತ್ತು. ಡಾಕ್ಟರು ಕೂಡ ಕನ್ನಡದಲ್ಲಿ ಮಾತನಾಡುತ್ತಿದ್ದರು. ನನಗೆ ಆಶ್ಚರ್ಯವಾಗತೊಡಗಿತು.ಇದೇನಿದು..ಅಪಘಾತವಾದದ್ದು ಮುಂಬೈನಲ್ಲಿ ಅಲ್ಲಿಂದ ಬೆಂಗಳೂರಿಗೆ ಆಸ್ಪತ್ರೆಗೆ ನನ್ನನ್ನು ಕರೆತಂದು ಸೇರಿಸಿದವರಾದರೂ ಯಾರು?
ಸ್ವಲ್ಪ ಹೊತ್ತಿನ ನಂತರ ಒಬ್ಬ ಪೋಲಿಸ್ ಅಧಿಕಾರಿ ಒಳಬಂದವನು , ನನ್ನ ಪಕ್ಕ ಕುಳಿತುಕೊಂಡ.ಅವನಾಗಲೇ ನನ್ನೊಡನೆ ಮಾತಾಡಲು ವೈದ್ಯರ ಜೊತೆ ವಾದವಿವಾದ ಮಾಡಿ ಬಂದಿದ್ದ.
ನನ್ನನ್ನೊಮ್ಮೆ ದಿಟ್ಟಿಸಿ,
'ಅವಳು ಯಾರು?'
'ಸಾರ್ ನನಗೆ ಗೊತ್ತಿಲ್ಲ ..ಅವಳ ಹೆಸರೂ ಕೂಡ ಗೊತ್ತಿಲ್ಲ ಸಾರ್ ಹೇಗಿದ್ದಾಳೆ ಅವಳು..? ನಾನು ಕಾತರನಾಗಿ ಕೇಳಿದೆ.
ಅವನೊಂದು ನಿಟ್ಟುಸಿರು ಬಿಟ್ಟು '
ಅವಳು ಬದುಕಿಲ್ಲ. ಅಪಘಾತದ ಫೋರ್ಸ್ ಹೇಗಿತ್ತು ಅಂದ್ರೆ ಅವಳ ದೇಹಾನ ಹಾರೆ ಹಾಕಿ ಮೀಟಿ ತೆಗೀಬೇಕಾಯ್ತು..'
ನನಗೆ ಒಂತರಾ ಆಯಿತು. ' ಸಾರ್ ..ಹಿಂದಿನ ಸೀಟಿನಲ್ಲಿದ್ದರಲ್ಲ ಅವಳ ಗಂಡ..ಅವರು ಬದುಕಿದ್ದಾರೆ ತಾನೇ..?..
'ಮಿಸ್ಟರ್...ಹಿಂದಿನ ಸೀಟಿನಲ್ಲಿ ಯಾರೂ ಇರಲಿಲ್ಲ...ನೀನು ಡ್ರೈವ್ ಸೀಟಲ್ಲಿದ್ದೆ..ನಿನ್ನ ಪಕ್ಕ ಅವಳಿದ್ದಳು..ಈಗ ಹೇಳು ಆಕ್ಸಿಡೆಂಟ್ ಹೇಗೆ ನಡೀತು..ಹಾ..ಅವಳ ಹೆಸರೂ ಗೊತ್ತಿಲ್ಲ ಅಂತೀಯಾ..ಹಾಗಾದರೆ ಆವತ್ತು ರಾತ್ರಿ ನೀವಿಬ್ರೆ ಬೆಂಗಳೂರಿಂದ ಹೊರಗೆ ಅಷ್ಟು ವೇಗವಾಗಿ ಕಾರನ್ನು ಯಾಕೆ ಓಡಿಸ್ತಿದ್ರಿ..ಎಲ್ಲಿಗೆ ಹೋಗ್ತಿದ್ರೀ..'
ನನಗೆ ಅಯೋಮಯ ಎನಿಸಿತು. ಏನು ಈ ಯಪ್ಪಾ ಏನೇನೋ ಮಾತಾಡುತ್ತಿದ್ದಾನೆ..ನಾನು ಬೆಂಗಳೂರಾ? ಡ್ರೈವಿಂಗ್ ಸೀಟಾ?
'ಸಾರ್..ನೀವು ಏನು ಹೇಳ್ತಾ ಇದ್ದೀರೋ ನನಗೆ ಗೊತ್ತಾಗಲಿಲ್ಲ. ಆಕ್ಸಿಡೆಂಟ್ ನಡೆದಿರೋದು ಮುಂಬೈನಲ್ಲಿ. ನಾನು ಬೆಂಗಳೂರು ನೋಡೇ ಇಲ್ಲ. ನನಗೆ ಚೆನ್ನಾಗಿ ನೆನಪಿದೆ. ಆವತ್ತು ಜುಲೈ 28. ಪತ್ತರ್ ಕಡೆ ಶಿವನ ಜೊತೆ ಫೈಟ್ ಮಾಡಿದೆ..ಗೆದ್ದೇ..ಆಯಮ್ಮ ಸಿಕ್ಕಿದ್ಳು..ತಪ್ಪಿಸಿಕೊಳ್ಳೋವಾಗ ಆಕ್ಸಿಡೆಂಟ್ ಆಯ್ತು. ಅವಳ ಕಾರು ಸ್ವಿಫ್ಟ್ .'
ಈಗ ಪೋಲಿಸ್ ಗೊಂದಲಕ್ಕೆ ಬಿದ್ದ.
'ಡಾಕ್ಟರು ಎಲ್ಲಾ ಸರಿಯಾಗಿದೆ ಅಂದ್ನಲ್ಲ.' ಎಂದು ತನ್ನಲ್ಲೇ ಗೊಣಗಿಕೊಂಡ.ನಂತರ ನನ್ನ ಹತ್ತಿರ ಮುಖ ತಂದು,
'ಮಿಸ್ಟರ್..ಆಕ್ಸಿಡೆಂಟ್ ನಡೆದಿರೋದು ಜುಲೈ 28 ಅಲ್ಲ..ಸೆಪ್ಟೆಂಬರ್ 12. ನಡೆದಿರೋದು ಹೆಬ್ಬಾಳ್ ರಿಂಗ್ ರೋಡಲ್ಲಿ...ಕಾರು ಸ್ವಿಫ್ಟ್ ಅಲ್ಲ. ಬಿಎಂಡಬ್ಲ್ಯೂ. ..'ನಾನು ಅವನನ್ನೇ ಗೊಂದಲದಲ್ಲಿ ನೋಡಿದೆ. ಆದವನಿಗೆ ಅರ್ಥವಾಗಿರಬೇಕು. ತನ್ನ ಬಳಿಯಲ್ಲಿದ್ದ ಫೈಲಿನಿಂದ ಒಂದಷ್ಟು ಪೇಪರ್ ಕಟಿಂಗ್ಸ್, ಫೋಟೋಗಳನ್ನೂ ಹೊರತೆಗೆದ.
ಹೌದು ಆಕ್ಸಿಡೆಂಟ್ ಆದದ್ದು ಸೆಪ್ಟೆಂಬರ್ 12. ಅದು ದಿನಪತ್ರಿಕೆಯಿಂದ ಖಾತರಿಯಾಯಿತು. ಫೋಟೋದಲ್ಲಿ ಬಿಮ್ಡಬ್ಲ್ಯೂ ಕಾರು ನಜ್ಜುಗುಜ್ಜಾಗಿತ್ತು. ಹೌದು ನಾನೇ ಡ್ರೈವಿಂಗ್ ಸೀಟಲ್ಲಿದ್ದೆ. ಪಕ್ಕದಲ್ಲಿ ಯಾರೋ ಹೆಂಗಸು ವಿಕಾರವಾಗಿ ಮುಖವೆಲ್ಲಾ ಜಜ್ಜಿಹೊಗಿತ್ತು.
ನಾನು ಸ್ವಲ್ಪ ಹೊತ್ತು ಸುಮ್ಮನೆ ಮಲಗಿಬಿಟ್ಟೆ. ಕಣ್ಣು ಮುಚ್ಚಿಕೊಂಡು ಯೋಚಿಸತೊಡಗಿದೆ. ನನಗೆಲ್ಲಾ ನಿಚ್ಚಳವಾಗಿತ್ತು. ಬಾಂಬೆ, ಫೈಟ್, ಪತ್ತರ್, ಆಕ್ಸಿಡೆಂಟ್ ಮತ್ತು ಜುಲೈ 28.
ಆದರೆ ಇಲ್ಲಿ ಕಥೆಯೇ ಬೇರೆಯಿತ್ತು.
ಆಕ್ಸಿಡೆಂಟ್ ಸೆಪ್ಟೆಂಬರ್ 12 ರಂದು ಬಿಎಂಡಬ್ಲ್ಯೂ ಕಾರಿನಲ್ಲಿ ನಾನೇ ಡ್ರೈವ್ ಮಾಡುವಾಗ ನಡೆದಿತ್ತು. ಅದೂ ಬೆಂಗಳೂರಿನಲ್ಲಿ. ಏನಿದು..?
ಒಂದಕ್ಕೊಂದು ತಾಳೆಯಾಗದೆ ತಲೆ ಸಿಡಿಯತೊಡಗಿತ್ತು.
ಆಕ್ಸಿಡೆಂಟ್ ಸ್ಥಳದಿಂದ ಪ್ರಜ್ಞೆತಪ್ಪಿದ್ದ ನನ್ನನ್ನು ಹೊರಕ್ಕೆ ಎಳೆಯುತ್ತಿರುವುದು, ಆಂಬುಲೆನ್ಸ್ ಗೆ ಹಾಕುತ್ತಿರುವುದು ಎಲ್ಲಾ ಪೋಲಿಸ್ ತೋರಿಸಿದ ಫೋಟೋದಿಂದಾಗಿ ನಂಬಲೇಬೇಕಿತ್ತು.
ಅಂದರೆ 45 ದಿನ ನನ್ನ ಕೈಗೆ ಸಿಕ್ಕಿರಲಿಲ್ಲ. ಬಾಂಬೆಯಿಂದ ತಪ್ಪಿಸಿಕೊಂಡ ನಾನು ಬೆಂಗಳೂರಿಗೆ ಬಂದು ಬಿಎಂಡಬ್ಲ್ಯೂ ಕಾರಿನ ಓನರ್ ಆಗಿ, ಪಕ್ಕದಲ್ಲಿ ಹುಡುಗಿಯನ್ನು ಕೂರಿಸಿಕೊಂಡು....ಇದೆಲ್ಲಾ ಹೇಗೆ ಸಾಧ್ಯ..ಹಾಗಾದರೆ ನಾನಾವತ್ತು ಬಾಂಬೆನಲ್ಲಿ ಸಾಯಲಿಲ್ಲವಾ..?
45 ದಿನಗಳಲ್ಲಿ ಏನೋ ಗಣನೀಯವಾದದ್ದು ನಡೆದಿತ್ತು. ನಾನದನ್ನು ಕಂಡು ಹಿಡಿಯಲೇ ಬೇಕಿತ್ತು. ನನ್ನ ಬದುಕೇ ನನಗೆ ರೋಚಕವಾಗಿಯೂ ಕುತೂಹಲವಾಗಿಯೂ ಮತ್ತು ರಹಸ್ಯಮಯವಾಗಿಯೂ ತೋರುತಿತ್ತು.
*********************************
ಮೊನ್ನೆ ಎಲ್ಲೋ ಒಂದು ಕಡೆ ಬೆಳಗಿನಿಂದ ಸಂಜೆಯವರೆಗೆ ಕುಳಿತಿರಬೇಕಾಯಿತು. ನಾನು ಅಂತಹ ಸಂದರ್ಭಗಳಲ್ಲಿ ಒಂದಷ್ಟು ಪುಸ್ತಕದ ಮೊರೆ ಹೋಗುತ್ತೇನೆ. ಗೆಳೆಯರು ಜೊತೆಯಲ್ಲಿದ್ದರೆ ಕಾಡು ಹರಟೆ ಇದ್ದದ್ದೇ. ಆದರೆ ಆವತ್ತು ಯಾರೂ ಇರಲಿಲ್ಲ. ಹಾಗಂತ ಗಂಭೀರವಾಗಿ ಏನನ್ನಾದರೂ ಓದಲಿಕ್ಕೆ ತೆಗೆದುಕೊಂಡೂ ಹೋಗುವ ಹಾಗಿರಲಿಲ್ಲ. ಅಲ್ಲಿ ಮದ್ಯೆ ಮದ್ಯೆ ಏನೋ ವಿಚಾರಿಸುವದಿತ್ತು. ಅಂತಹ ಸಂದರ್ಭಗಳಲ್ಲಿ ನನ್ನನು ಕಾಪಾಡಿರುವ ವ್ಯಕ್ತಿ ಜೇಮೆಸ್ ಹಾಡ್ಲಿ ಚೇಸ್. ಆತನ ಸ್ಟ್ರಿಕ್ಟ್ಲಿ ಫಾರ್ ಕ್ಯಾಶ್ ಕಾದಂಬರಿ ನನಗೆ ಥ್ರಿಲ್ ಕೊಟ್ಟಿತ್ತು. ರೋಚಕವಾಗಿ ಓದಿಸಿಕೊಳ್ಳುವ ಕಾದಂಬರಿ ಅದು. ಮೊನ್ನೆ ಬಂದಡ್ಯಾನಿ ಬಾಯ್ಲ್ ನಿರ್ದೇಶನದ ಟ್ರಾನ್ಸ್, ಹಿಂದಿಯ ಘನ್ ಚಕ್ಕರ್ ಚಿತ್ರಗಳ ಕಥೆಯಂತೆಯೇ ಇದೂ ಇದ್ದದ್ದು ಇನ್ನಷ್ಟು ಕುತೂಹಲ ತರಿಸಿತ್ತು. ಟೈಮ್ ಪಾಸ್ ಗೆ ಉತ್ತಮ ಕಾದಂಬರಿ.