Wednesday, February 12, 2014

ರಿಮೇಕ್ ಹಿಂದೆ ಬಿದ್ದಾಗ..


ಪರಭಾಷೆಯಲ್ಲಿ ಉತ್ತಮ ವಿಮರ್ಶೆ ಪಡೆದಿದ್ದ ಆದರೆ ಅಷ್ಟಾಗಿ ಯಶಸ್ಸು ಪಡೆಯದ ಒಂದು ಉತ್ತಮ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಿದ್ದ  ನಿರ್ಮಾಪಕರನ್ನು ಕೇಳಿದ್ದೆ. 'ಅಲ್ಲಾ ಸಾರ್..ಈ ಚಿತ್ರ ಅಲ್ಲೇ ತೋಪು..ಮತ್ಯಾಕೆ ಅದನ್ನು ಕನ್ನಡಕ್ಕೆ ಮಾಡಿದಿರಿ...ಅದ್ಯಾವ ಮಾನದಂಡದ ಅದರ ಮೇಲೆ ಹಣ ಹಾಕಿದಿರಿ..' ಅವರು ನಗುತ್ತಾ ಉತ್ತರಿಸಿದರು. 'ನಾನಾಗ ಚೆನ್ನೈ ನಗರಕ್ಕೆ ಯಾವುದೋ ಕೆಲಸಕ್ಕೆ ಹೋಗಿದ್ದೆ. ಸಮಯ ಸಿಕ್ಕಾಗ ಸಿನಿಮ ನೋಡುವುದು ನನ್ನ ಅಭ್ಯಾಸ.ಹಾಗೆಯೇ ಅಲ್ಲಿದ್ದ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದೆ. ನನಗೆ ಅದೆಷ್ಟು ಇಷ್ಟವಾಯಿತು ಎಂದರೆ ಈ ಚಿತ್ರವನ್ನು ನನಗೆ ಗೊತ್ತಿರುವ ಮಂದಿಗೆಲ್ಲಾ ತೋರಿಸಿದೆ. ಫೋನ್ ಮಾಡಿ ನನ್ನ ಗೆಳೆಯರಿಗೆಲ್ಲಾ ಚಿತ್ರ ನೋಡುವಂತೆ ಹೇಳಿದೆ. ಅದಾದ ನಂತರವೂ ಯಾಕೋ ತೃಪ್ತಿಯಾಗಲಿಲ್ಲ. ಈ ಕತೆಯನ್ನು ಇಡೀ ಕನ್ನಡ ಜನಕ್ಕೆ ತೋರಿಸಬೇಕು ಎನಿಸಿತು..ಹಾಗಾಗಿ ಅದನ್ನು ಕನ್ನಡಕ್ಕೆ ತಂದೆ. ನಾನು ಹಣಕಾಸಿನ ಲೆಕ್ಕಾಚಾರದಲ್ಲಿ ಸೋತಿರಬಹುದು. ಆದರೆ ಗುಣಮಟ್ಟದ ಲೆಕ್ಕಾಚಾರದಲ್ಲಿ ಗೆದ್ದಿದ್ದೇನೆ...' ಎಂದಿದ್ದರು.
ಹೌದು. ನನ್ನ ಪ್ರಕಾರ ಅದೇ ಸರಿ. ಯಾರೇ ಆಗಲಿ ಒಂದು ಕತೆಯನ್ನು ಅಥವಾ ಸಿನೆಮಾವನ್ನು ಕನ್ನಡಕ್ಕೆ ತರಬೇಕೆಂದರೆ ಅದು ಅಷ್ಟರ ಮಟ್ಟಿಗೆ ನಮ್ಮನ್ನು ಕಾಡಬೇಕು. ನೋಡಿದಾಕ್ಷಣ ಎಲ್ಲರಿಗೂ ಇದನ್ನು ತೋರಿಸಬೇಕು ಎನಿಸಬೇಕು. ಆನಂತರವೇ ಅದನ್ನು ಸಿನಿಮಾ ಅಥವ ರೀಮೇಕ್ ಮಾಡಬೇಕು.
ಆದರೆ ಅದು ಅಷ್ಟರ ಮಟ್ಟಿಗೆ ನಮ್ಮಲ್ಲಿ ನಡೆಯುವುದಿಲ್ಲ. ಇಲ್ಲಿ ಯಶಸ್ಸೊಂದೆ ಮೂಲ ಮಂತ್ರ. ಆ ಚಿತ್ರ ಯಶಸ್ವಿಯಾಗಿದೆ. ಅದನ್ನು ಕನ್ನಡೀಕರಿಸೋಣ..ಸಮರೋಪಾದಿಯಲ್ಲಿ ಕೆಲಸ ಮಾಡಿ ಸಂತೆಗೆ ಮೂರು ಮೊಳ ನೇಯ್ದು ಮಾರಲು ಇಡಬೇಕು. ಅಷ್ಟೆ ಸಾರ್ಥಕತೆ. ಹಾಗಾಗಿಯೇ ಎಷ್ಟೋ ಚಿತ್ರಗಳು ನಮ್ಮಲ್ಲಿ ತೋಪು ಬೀಳುತ್ತವೆ. ಅಲ್ಲಿನ ಭಾವ, ಗತಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ನಮ್ಮವರು ಬರೀ ಯಶಸ್ಸೇ ಮಾನದಂಡ ಎಂದು ಕೊಳ್ಳುತ್ತಾರೆ.ಅಲ್ಲಿ ಹಿಟ್ ಆಗಿದೆ. ಹಾಗಾದರೆ ಇಲ್ಲೂ ಆಗಬಹುದು ಎನ್ನುವ ತಪ್ಪು ಕಲ್ಪನೆಯಷ್ಟೇ ನಿರ್ಮಾಪಕರ ತಲೆಯಲ್ಲಿ ತುಂಬಿರುತ್ತದೆ. ಹಾಗೆಯೇ ನಿರ್ದೇಶಕನಿಗೆ ಹೊಸ ಕತೆ ಮಾಡುವ ಅದನ್ನು ಚಿತ್ರಕತೆ ಮಾಡುವ, ನಿರ್ಮಾಪಕರಿಗೆ ಕಲಾವಿದರಿಗೆ ಒಪ್ಪಿಸುವ ರಿಸ್ಕು ಕಡಿಮೆಯಾಗಿ ಹೇಗೋ ಒಂದು ಸಿಡಿ ಕೊಟ್ಟು ಚಿತ್ರ ತಯಾರಿಗೆ ನಿಂತುಬಿಡುತ್ತಾನೆ.
ಆದರೆ ಕೇವಲ ಲೆಕ್ಕಾಚಾರವೇ ಸಿನಿರಂಗವನ್ನು ಆಳುವುದಿಲ್ಲ. 
ಸುಮಾರು ವರ್ಷದ ಹಿಂದೆ ಇಲ್ಲಿಂದ ಚೆನ್ನೈ ಗೆ ಕೆಲಸದ ಮೇಲೆ ಒಬ್ಬ ನಿರ್ಮಾಪಕರು ಹೋದರಂತೆ. ಹೋದವರೇ ಅಲ್ಲಿನ ಹಂಚಿಕೆದಾರರನ್ನು ಭೇಟಿ ಮಾಡಿ ಯಾವ ಯಾವ ಚಿತ್ರ ಯಾವ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ವಿಚಾರಿಸಿದಾಗ ಒಂದು ತಮಿಳು ಚಿತ್ರ ಯರ್ರಾಬಿರ್ರಿ ಓಡುತ್ತಿರುವುದು ಗೊತ್ತಾಗಿದೆ. ತಕ್ಷಣವೇ ಹಿಂದೆ ಮುಂದು ನೋಡದ ನಿರ್ಮಾಪಕರು ಆ ನಿರ್ಮಾಪಕರನ್ನು ಹೇಗೋ ಭೇಟಿ ಮಾಡಿದ್ದೆ ಅದರ ಕನ್ನಡ ಅವತರಣಿಕೆಯ ಹಕ್ಕುಗಳನ್ನು ಕೊಡುವಂತೆ ದುಂಬಾಲು ಬಿದ್ದಿದ್ದಾರೆ.ನಮ್ಮ ನಿರ್ಮಾಪಕರಿಗೆ ಅದೆಲ್ಲಿ ಬೇರೇಯವರ ಪಾಲಾಗಿ ಬಿಡುತ್ತದೋ ಎಂಬ ಭಯ ಏನೋ ಒಂದು ಹಣಕ್ಕೆ ತೆಗೆದುಕೊಂಡು ಜಗತ್ತನ್ನು ಗೆದ್ದವರಂತೆ ಕರ್ನಾಟಕ್ಕೆ ಬಂದಿದ್ದಾರೆ.
ಬಂದ ಮೇಲೆ ಗೊತ್ತಾಗಿರುವ ವಿಷಯವೆಂದರೆ ಆ ಚಿತ್ರ ಕನ್ನಡದ ರೀಮೇಕ್ ಎಂಬುದು.
ಇನ್ನೂ ಒಂದು ಚಿತ್ರದ ಕತೆ ಹೆಚ್ಚು ಕಡಿಮೆ ಇದೆ ಆಗಿದೆ. ಕನ್ನಡದಲ್ಲಿ ಬಿಡುಗಡೆಯಾದ ಚಿತ್ರವೊಂದು ಆನಂತರ ತಮಿಳಿನಲ್ಲಿ ರೀಮೇಕ್ ಆಗಿ ಆನಂತರ ಮತ್ತೆ ಕನ್ನಡದಲ್ಲಿ ಬಂದದ್ದು ಗೊತ್ತೇ ಇದೆ.
ದಿನೇಶ್ ಬಾಬು ನಿರ್ದೇಶನದ ಎಸ್. ನಾರಾಯಣ್ ಅಭಿನಯದಲ್ಲಿ ಬಲಗಾಲಿಟ್ಟು ಒಳಗೆ ಬಾ ಎಂಬ ಚಿತ್ರವೊಂದು ಬಂದಿತ್ತು. ಇಂಗ್ಲಿಷ್ ಚಿತ್ರದ ಕನ್ನಡ ಅವತರಣಿಕೆ ಅದು ಎನ್ನಬಹುದು.ಅದನ್ನು ರಾಜಮೌಳಿ ಮರ್ಯಾದೆ ರಾಮಣ್ಣ ಹೆಸರಿನಲ್ಲಿ ತೆಲುಗಿಗೆ ತಂದರು. ಅದು ಯಶಸ್ವಿಯೂ ಆಯಿತು. ತಕ್ಷಣವೇ ಅದನ್ನು ಕೋಮಲ್ ಕನ್ನಡಕ್ಕೆ ಅದೇ ಹೆಸರಿನಲ್ಲಿ ತಂದರು. ಚಿತ್ರ ಸೋತಿದ್ದು ಬೇರೆ ಮಾತು.
ಸ್ಕೂಲ್ ಮಾಸ್ಟರ್ ಚಿತ್ರದ್ದು ಅದೇ ಕತೆ.ಬಿ.ಆರ್.ಪಂತುಲು ಅಭಿನಯದಲ್ಲಿ ತೆರೆಗೆ ಬಂದ ಈ ಚಿತ್ರ 1958 ರಲ್ಲೇ ಬಿಡುಗಡೆಯಾದ
ಈ ಚಿತ್ರ ಹಿಂದಿಯಲ್ಲಿ ಭಾಗ ಬಾನ್ ಆಗಿ ಬಂದರೆ ಅದನ್ನೇ ಮತ್ತೆ ಈ ಬಂಧನ ಮಾಡಿದರು. ಹಾಗೆ ನೋಡಿದರೆ ಮೂರು ಚಿತ್ರದಲ್ಲಿ ಕ್ಲೈಮಾಕ್ಸ್ ಬಿಟ್ಟರೆ ಎಲ್ಲವೂ ಅದೇ ಕತೆ.ಆದರೂ ಅದನ್ನು ರೀಮೇಕ್ ಮಾಡಿದರು ನಮ್ಮವರು.
ಇದೆಲ್ಲವನ್ನೂ ಗಮನಿಸಿದರೆ ಇವರೆಲ್ಲರ ದೃಷ್ಟಿ ಕತೆಯ ಮೇಲೆ ಬೀಳುವುದೇ ಇಲ್ಲ ಎಂಬುದು ಗೊತ್ತಾಗುತ್ತದೆ. ಬರೀ ಯಶಸ್ಸನ್ನೇ ನೋಡುತ್ತಾರೆ.ಚಿತ್ರ ಯಶಸ್ವಿಯಾಗಿದೆ, ಯಾಕೆ ಅದರ ಕತೆ ಏನಿತ್ತು..ಕನ್ನಡದಲ್ಲಿ ಅದು ಆಗಿಬರುತ್ತದಾ...ಎಂಬುದನ್ನೆಲ್ಲಾ ಪರಾಮರ್ಶಿಸಿ ಆನಂತರ ಅದನ್ನು ಕನ್ನಡೀಕರಿಸಿದರೆ ಅದು ಸರಿ. ಅಲ್ಲಿ ಯಶಸ್ವಿಯಾಯಿತು ಎಂಬುದನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ ಅದೆಷ್ಟರ ಮಟ್ಟಿಗೆ ಸರಿ..?
ಮೊನ್ನೆ ಮೊನ್ನೆ ಇಂಗ್ಲಿಷ್ ಚಿತ್ರ ಬ್ಲೇರ್ ವಿಚ್ ಪ್ರೊಜೆಕ್ಟ್ ನ ಕನ್ನಡ ರೂಪವಾದ 6-5=2 ಬಿಡುಗಡೆಯಾಗಿ ಯಶಸ್ವಿಯಾದದ್ದು ಗೊತ್ತೇ ಇದೆ. ಬಹುಶ ಕನ್ನಡದ ಮಟ್ಟಿಗೆ ಇತ್ತೀಚಿಗೆ ಬರೀ ಹೊಸತನ, ನವ್ಯ ನಿರೂಪಣೆಯಿಂದ ಯಶಸ್ವಿಯಾದ ಚಿತ್ರವದು. ಈಗ ಅದನ್ನು ಹಿಂದಿ ರೀಮೇಕ್ ಮಾಡಲು ಹೊರಟಿರುವುದು ಸರಿ. ಆದರೆ ಅದರ ರೀಮೇಕ್ ಮಾಡಹೊರಟವರಿಗೆ ಅದೇ ತರಹದ ಚಿತ್ರವೊಂದು ಈಗಾಗಲೇ ಹಿಂದಿಯಲ್ಲಿ ಬಂದಿತ್ತು ಎಂಬುದು ಗೊತ್ತಿರಬಹುದಾ..? ಗೊತ್ತಿದ್ದೂ ತಲೆ ಕೆಡಿಸಿಕೊಳ್ಳದೆ ರೀಮೇಕ್ ಮಾಡುತ್ತಿದ್ದಾರಾ ಎಂಬುದೇ ಪ್ರಶ್ನೆ.
ನಿರೂಪಣೆ ಹೊಸತನವನ್ನು ಮೆಚ್ಚಿ ಅದನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದರೆ ಅದಕ್ಕೆ ಶಹಬ್ಬಾಸ್ ಹೇಳಬಹುದು. ಆದರೆ ಇಲ್ಲಿ ಗೆದ್ದ್ದಿದೆ ಎಂಬುದಕ್ಕೆ ಹಿಂದೆ ಮುಂದೆ ನೋಡದೆ ರೀಮೇಕ್ ಮಾಡಲು ಒಪ್ಪಿರಬಹುದಾ..? 
2012 ರಲ್ಲಿ ಬಿಡುಗಡೆಯಾದ ಈ ಹಿಂದಿ ಚಿತ್ರದ ಹೆಸರು ?: ಎ ಕ್ವೆಶ್ಚನ್ ಮಾರ್ಕ್. ಏಳು ಜನ ವಿದ್ಯಾರ್ಥಿಗಳು ಒಂದು ಕಾಲೇಜ್ ಪ್ರೊಜೆಕ್ಟ್ ಗಾಗಿ ಮೂವಿ ಶೂಟ್ ಮಾಡಲು ಹೋಗುತ್ತಾರೆ. ಅವರು ವಾಪಸ್ಸಾಗುವುದಿಲ್ಲ. ಸುಮಾರು ದಿನದ ನಂತರ ಅವರ ಕ್ಯಾಮೆರಾ ಮುದ್ರಿತ ಟೇಪ್ ಸಿಗುತ್ತದೆ. ಅದರಲ್ಲಿದ್ದನ್ನೆ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗಿದೆ ಎಂದೇ ಹೆಸರು ಮಾಡಿಕೊಂಡು ತೆರೆಗೆ ಬಂದ ಈ ಚಿತ್ರದ ನಿರ್ದೇಶಕರು ಯಶ್ ದೇವ್ ಮತ್ತು ಆಲಿಸಿನ್ ಪಟೇಲ್. ಭಾರತದ ಮೊತ್ತ ಮೊದಲ 'ಫೌಂಡ್ ಫೂಟೇಜ್' ಫಿಲಂ ಎಂದೇ ಹೆಸರಾದ ಈ ಚಿತ್ರ ಹೇಳ ಹೆಸರಿಲ್ಲದಂತೆ ಸೋತದ್ದು ಬೇರೆ ಮಾತು.

ಒಟ್ಟಿನಲ್ಲಿ ರೀಮೇಕ್ ಎನ್ನುವುದು ತಪ್ಪೋ ಸರಿಯೋ. ಅದು ಬೇರೆ ಮಾತು. ಒಂದು ಭಿನ್ನವಾದ ವಿಶಿಷ್ಟವಾದ ಕತೆಯನ್ನು ನಮ್ಮಲ್ಲಿಗೆ ತರುವುದು ಒಳ್ಳೆಯದೇ. ಆದರೆ ಸುಖಾ ಸುಮ್ಮನೆ ಅಲ್ಲಿ ಗೆದ್ದಿದೆ ಎಂದಾಕ್ಷಣ ಅದರ ಕತೆ ಇನ್ನಿತರ ವಿಷಯದ ಬಗ್ಗೆ ಯೋಚಿಸದೆ ಕಣ್ಮುಚ್ಚಿಕೊಂಡು ಕನ್ನಡಕ್ಕೆ ತರುವುದು ನಮ್ಮಲ್ಲಿನ ಸೋಮಾರಿತನವನ್ನು ತೋರಿಸುತ್ತದೆ ಅಲ್ಲವೇ.ಅಥವಾ ನಮ್ಮಲ್ಲಿನ ಆತ್ಮ ವಿಶ್ವಾಸದ ಕೊರತೆಯನ್ನು ನಮ್ಮ ಕತೆಯಲ್ಲಿನ ಭರವಸೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎನಿಸುವುದಿಲ್ಲವೇ?

Tuesday, February 4, 2014

ಉದ್ದವನ್ನು ತುಂಡರಿಸುತ್ತಾ...

ಚಿತ್ರಕರ್ಮಿಗಳು ಸಿನಿಮಾ ಮಾಡುವಾಗ ಎದುರಾಗುವ ಸಮಸ್ಯೆ ಅದರ ಅವಧಿಯದ್ದು. ಅಂದರೆ ಬರಹದ ರೂಪದ ಸಿನಿಮಾ ದೃಶ್ಯ ರೂಪಕ್ಕೆ ಬಂದಾಗ ಎಷ್ಟು ಉದ್ದ ಬರುತ್ತದೆ, ಎಷ್ಟು ಉದ್ದ ಮಾಡಿದರೆ ಸರಿಯಾಗುತ್ತದೆ ಎಂಬುದನ್ನು ಅಂದಾಜು ಮಾಡುವುದು ಅಷ್ಟು ಸುಲಭವಲ್ಲ. ಮೊದಲಿಗೆ ಒಂದು ಕತೆಯನ್ನು ಮನಸ್ಸಿನಲ್ಲಿ ಅಂದುಕೊಂಡ ನಂತರ ಅದರ ಚಿತ್ರಕತೆ ರಚಿಸಿದ ನಂತರ ಅದು ಎಷ್ಟು ಅವಧಿಯ ಚಿತ್ರ ಆಗಬಹುದು ಎಂಬ ಅಂದಾಜು ಮಾಡಲು ಒಬ್ಬ ನಿರ್ದೇಶಕ ಮುಂದಾಗುತ್ತಾನೆ. ಮೊದಲೆಲ್ಲಾ ಐದು ಹಾಡು ನಾಲ್ಕು ಫೈಟ್ ಗಳಿದ್ದರೆ ಮುಕ್ಕಾಲು ಘಂಟೆ ಎಗರಿ ಹೋಗುತ್ತಿತ್ತು. ಆನಂತರ ಉಳಿದ ಒಂದು ಮುಕ್ಕಾಲು ಘಂಟೆಗೆ ಕತೆಯನ್ನು ಹೆಣೆಯ ಬೇಕಿರುತ್ತಿತ್ತು. 
ನನಗೆ ಗೊತ್ತಿರುವಂತೆ ಪ್ರತಿ ದೃಶ್ಯವನ್ನು ರಚಿಸಿದ ಮೇಲೆ ಅದರ ಅಂತಿಮ ಪ್ರತಿ ಬರೆದಾದ ನಂತರ ಸ್ಟಾಪ್ ಕ್ಲಾಕ್ ಇಟ್ಟುಕೊಂಡು ಆ ದೃಶ್ಯವನ್ನು ಸಂಪೂರ್ಣ ಶಾಟ್ಸ್ ಜೊತೆಗೆ ಹಿನ್ನೆಲೆ ಸಂಗೀತವನ್ನು ಸೇರಿಸಿಕೊಂಡು ಕಲ್ಪಿಸುತ್ತಾ ನಟಿಸಿಕೊಂಡು ಅಂದಾಜು ಮಾಡುತ್ತೇವೆ. ಆಗ ಆ ದೃಶ್ಯ ಎಷ್ಟು ಉದ್ದ ಬರಬಹುದು ಎಂಬ ಅಂದಾಜು ನಮಗೆ ಸಿಕ್ಕಿ ಬಿಡುತ್ತದೆ. ಆದರೆ ಚಿತ್ರೀಕರಣದ ಸಮಯದಲ್ಲಿ ಮತ್ತು ಚಿತ್ರೀಕರಣದ ನಂತರ ಅದು ಗಮನಾರ್ಹ ಬದಲಾವಣೆ ಕಂಡು ಬಿಡುತ್ತದೆ. ಅದಕ್ಕೆ ನಿರೂಪಣೆಯ ಗತಿ ಮತ್ತು ಕಲಾವಿದರ ಅಭಿನಯ ಶೈಲಿ ಕೂಡ ಕಾರಣವಾಗುತ್ತದೆ. ಉದಾಹರಣೆಗೆ ಒಂದು ಪೇಜ್ ಉದ್ದದ್ದ ಸಂಭಾಷಣೆ ಇರುವ ದೃಶ್ಯವೊಂದನ್ನು ರಘುವರಣ್, ಸಾಯಿಕುಮಾರ್ ಇಬ್ಬರಿಗೂ ಕೊಟ್ಟರೇ ಅವರು ಅವರದೇ ಶೈಲಿಯಲ್ಲಿ ಅಭಿನಯಿಸಿದರೆ ಅದರ ಉದ್ದ ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸ ಹೊಂದುತ್ತದೆ. ಸಾಯಿಕುಮಾರ್ ಇರುವ ಅಷ್ಟೂ ಸಂಭಾಷಣೆಯನ್ನು ಪಟಪಟನೆ ಉದುರಿಸಿ ಅಥವಾ ಅಬ್ಬರಿಸಿ ಬಾಯೊರೆಸಿಕೊಂಡು ಕಣ್ಣು ಕೆಕ್ಕರಿಸಿಕೊಂಡು ನಿಂತು ಬಿಡುತ್ತಾರೆ. ಆದರೆ ರಘುವರಣ್ ಹಾಗಲ್ಲ. ಒಂದೊಂದೇ ಮಾತನ್ನು ಅಳೆದು ತೂಗಿ ಗುಣಿಸಿ ಭಾಗಿಸಿ ಎದುರಿರುವವನು ಕೇಳಿಸಿಕೊಳ್ಳುತ್ತಿದ್ದಾನೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುವವರಂತೆ ಆಗಾಗ ಅವನ ಮುಖ ನೋಡುತ್ತಾ ನಿಧಾನಕ್ಕೆ ಅದು ಯಾವುದೇ ವಿಷಯವಾದರೂ ತಲೆಕೆಡಿಸಿಕೊಳ್ಳದೆ ಸಾವಧಾನ ಚಿತ್ತರಾಗಿ ಹೇಳುತ್ತಾರೆ. ಸಾಯಿಕುಮಾರ್ ಒಂದೇ ನಿಮಿಷಕ್ಕೆ ಹಿನೆಲೆ ಸಂಗೀತ, ಪರಿಣಾಮ ಜೊತೆಗೆ ಅಷ್ಟನ್ನು ಮುಗಿಸಿದ್ದರೆ, ರಘುವರಣ್ ಗೆ ಎರಡೂವರೆ ನಿಮಿಷವಾದರೂ ಬೇಕಾಗುತ್ತದೆ. 
ಹಾಗೆಯೇ ಕೆಲವು ಚಿತ್ರಗಳು ಮಂದಗತಿಯನ್ನು ಬೇಡುತ್ತವೆ. ಅಥವಾ ನಿರ್ದೇಶಕರ ಕಲ್ಪನೆ ಮತ್ತು ಸೃಜನ ಶೀಲತೆಯ ನಿರೂಪಣೆಯಲ್ಲಿ ಮಂದಗತಿ ಇರುತ್ತದೆ. ಆವಾಗ ಬರಹದ ಪ್ರತಿ ಹಿಡಿದುಕೊಂಡು ನಿರ್ದೇಶಕನನ್ನು ಹೊರತುಪಡಿಸಿ ಬೇರೆಯವರು ಅಂದಾಜು ಮಾಡುವುದು ಕಷ್ಟ. ಉದಾಹರಣೆಗೆ ಹಿಂದಿಯಲ್ಲಿ ಬಂದ ಲೂಟೆರ ಚಿತ್ರವನ್ನು ಗಮನಿಸಿದರೇ ಗೊತ್ತಾಗುತ್ತದೆ. ಸುಮ್ಮನೆ ಕುಳಿತು ಅದರ ಸ್ಕ್ರಿಪ್ಟ್ ಅನ್ನು ನೋಡಿಕೊಂಡು ನಾವು ರಚಿಸಿದರೂ ಅದು ಬರಹದ ರೂಪದಲ್ಲಿ ಮಾಮೂಲಿ ಚಿತ್ರಗಳಿಗಿಂತ ಕಡಿಮೆ ಪುಟಗಳಲ್ಲಿ ಮುಗಿದುಹೋಗುತ್ತದೆ.
ನಮ್ಮ ಚಿತ್ರದ ಬಗ್ಗೆ ಮಾತಾಡುವುದಾದರೆ ಮೊದಲಿಗೆ ಬರಹದ ರೂಪದಲ್ಲಿದ್ದ ಸಿನೆಮಾ ಎರಡು ಘಂಟೆ ಹತ್ತು ನಿಮಿಷ ಬರುತ್ತದೆ ಎಂದು ಅಂದಾಜು ಮಾಡಿದ್ದೆ. ಸ್ಟಾಪ್ ಕ್ಲಾಕ್ ಹಾಕಿಕೊಂಡು ರೂಮಿನ ಬಾಗಿಲು ಹಾಕಿಕೊಂಡು ಇಡೀ ದೃಶ್ಯವನ್ನು ಕಣ್ಣಮುಂದೆ ನಡೆಯುತ್ತಿರುವಂತೆ ಶಾಟ್ ವಿಭಜನೆಯ ಜೊತೆಗೆ ಕಲ್ಪಿಸಿ ಪಾತ್ರಗಳ ಸಂಭಾಷಣೆಯನ್ನು ಒಪ್ಪಿಸಿಕೊಂಡು ಅಂದಾಜು ಮಾಡಿದ್ದೆ. ನನ್ನ ಪ್ರಕಾರ ಅದು ಕರಾರುವಕ್ಕಾಗಿ ಅಷ್ಟೇ ಸಮಯ ಬರುತ್ತದೆ ಎನಿಸಿತ್ತು. ಆದರೆ ಚಿತ್ರೀಕರಣದ ನಂತರ ಸಂಕಲನ ಮಾಡಿ ಚಿತ್ರ ನೋಡಿದಾಗ ನನ್ನ ಅಂದಾಜು ತಲೆಕೆಳಗಾಗಿತ್ತು . ಚಿತ್ರ ಅನಾಮತ್ತು ಎರಡು ಘಂಟೆ ಮೂವತ್ತಾರು ನಿಮಿಷ ಬಂದಿತ್ತು. ಅಂದರೆ ಇಪ್ಪತ್ತು ನಿಮಿಷ ಹೆಚ್ಚಿಗೆ ಬಂದಿತ್ತು. ನಾನು ಅಂದುಕೊಂಡಷ್ಟನ್ನೇ ಅಂದುಕೊಂಡ ಹಾಗೆಯೇ ಚಿತ್ರೀಕರಿಸಿದ್ದೆ. ಆದರೂ ಇಪ್ಪತ್ತಾರು ನಿಮಿಷ ಹೆಚ್ಚಿತ್ತು. ಅದೂ ಹಾಡು ಇಲ್ಲದೆ. ಈಗ ನಮಗೆ ಪೀಕಲಾಟಕ್ಕಿಟ್ಟುಕೊಂಡದ್ದು ಎಲ್ಲಿ ಯಾವುದನ್ನು ಕತ್ತರಿಸಬೇಕು ಎಂಬುದು. ಪೂರ್ತಿ ಎರಡು ಘಂಟೆ ಮೂವತ್ತಾರು ನಿಮಿಷವನ್ನು ಪರದೆಗೆ ತಂದುಬಿಡೋಣ ಎಂದರೆ ನಮ್ಮವರು ಇಲ್ಲ...ಅನಗತ್ಯ ಲ್ಯಾಗ್ ಆಗುತ್ತದೆ. ಜನಕ್ಕೆ ಬೋರ್ ಹೊಡೆಸಬಹುದು ಎಂಬರ್ಥದ ಮಾತುಗಳನ್ನು ಆಡಿದರು.
ಹಾಗೆ ನೋಡಿದರೆ ಮೊದಲೆಲ್ಲಾ ನೆಗೆಟಿವ್ ನಲ್ಲಿ ಶೂಟ್ ಮಾಡುವ ಸೆನ್ಸಾರ್ ಗೆ ಹದಿಮೂರು ಸಾವಿರದ ಚಿಲ್ಲರೆ ಅಡಿಗಳಷ್ಟು ಉದ್ದವಿರಲೇ ಬೇಕಿತ್ತು. ಎಷ್ಟೋ ಚಿತ್ರಗಳು ಚಿತ್ರೀಕರಣವಾಗಿ ಅದರ ಉದ್ದ ಸಾಲದೇ ಮತ್ತೆ ಒಂದೆರೆಡು ದೃಶ್ಯವನ್ನೂ ಹಾಡನ್ನೂ ಸೇರಿಸಿ ಉದ್ದವನ್ನು ಸರಿ ಪಡಿಸುತ್ತಿದ್ದರು. ನನಗೆ ಗೊತ್ತಿರುವಂತೆ ಒಂದು ಚಿತ್ರದ ಉದ್ದ ಕಡಿಮೆಯಾದಾಗ ಅದಕ್ಕೆ ಒಂದು ಹಾಡನ್ನು ಕೈಗೆ ಸಿಕ್ಕಿದ ಕ್ಯಾಮೆರಾ ದಲ್ಲಿ ಚಿತ್ರಿಸಿ ಸೇರಿಸಲಾಗಿತ್ತು. ಆಗಲೂ ಕಡಿಮೆಯಾದಾಗ ಆ ಚಿತ್ರತಂಡ ಚಿತ್ರದಲ್ಲಿದ್ದ ಓಕೆ ಆಗದ ಶಾಟ್ಸ್ ಗಳನ್ನೂ ಚಿತ್ರದ ಕೊನೆಯಲ್ಲಿ ಸೇರಿಸಿ ಅದಕ್ಕೆ ಮೇಕಿಂಗ್' ಎಂಬ ಬರಹ ಹಾಕಿ ಅದನ್ನೇ ಉಲ್ಪಾ ಪಲ್ಟಾ ತಿರುಗಿಸಿ ಹಿಗ್ಗಿಸಿದ್ದರು.
ಆದರೆ ನಮ್ಮ ಚಿತ್ರರಂಗದ ಮಟ್ಟಿಗೆ ಈ ಉದಾಹರಣೆ ತುಂಬಾ ಕಡಿಮೆ ಎನ್ನಬಹುದು. ಒಬ್ಬ ನಿರ್ದೇಶಕ ಚಿತ್ರೀಕರಣ ಸ್ಥಳದಲ್ಲಿ ಹೇಗೆ ಬೇಕೋ ಹಾಗೆಲ್ಲಾ ಶಾಟ್ಸ್ ತೆಗೆಯಲು ಮುಂದಾಗಿಬಿಡುತ್ತಾನೆ. ಅಲ್ಲಿಗೆ ಹೋಗುವವರೆಗೆ ಒಂದು ಮನಸ್ಸಿನಲ್ಲಿ ಇಷ್ಟನ್ನು ಚಿತ್ರಿಸಬೇಕು ಎಂದೇ ಕೊಂಡೆ ಹೋಗುತ್ತಾನಾದರೂ ಅಲ್ಲಿ ಹೋದ ಮೇಲೆ ತಲೆ ಎಲ್ಲೆಲ್ಲೋ ಓಡಿ ಅಗತ್ಯವಿರಲಿ ಇಲ್ಲದಿರಲಿ ಚಿತ್ರಿಸಿಬಿಡುತ್ತಾನೆ. ಬೇಕಾದರೆ ಬಳಸಿಕೊಂಡರಾಯಿತು..ಇಲ್ಲದಿದ್ದರೆ ಬೇಡ..ಮತ್ತೆ ಇದೆ ಜಾಗಕ್ಕೆ ಬರಲು ಸಾಧ್ಯವಾಗುತ್ತದೆಯೇ ಎಂಬ ಸಮರ್ಥನೆ ಅವನದ್ದಾಗಿರುತ್ತದೆ.
ಆದರೆ ನಾನು ತಿಳಿದ ಮಟ್ಟಿಗೆ ಇದು ಹಾಲಿವುಡ್ ನಲ್ಲಿ ಕಡಿಮೆಯೇ. ಯಾಕೆಂದರೆ ಅಲ್ಲಿ ವಿಸ್ತೃತವಾದ ಸ್ಟೋರಿಬೋರ್ಡ್ ಇರುತ್ತದೆ. ಇಷ್ಟನ್ನೇ ಹೀಗೆಯೇ ಚಿತ್ರಿಸಬೇಕು ಎಂಬುದು ಮೊದಲೇ ಕರಾರುವಕ್ಕಾಗಿರುತ್ತದೆ. ಹಾಗಾಗಿ ಅಲ್ಲಿ ಅಷ್ಟಾಗಿ ಸಮಸ್ಯೆಯಾಗುವುದಿಲ್ಲ.
ನಮ್ಮಲ್ಲಿ ಎಷ್ಟೋ ಚಿತ್ರಗಳು ಮೊದಲ ಹಂತದ ಸಂಕಲನವಾದ ಮೇಲೆ ನೋಡಿದರೆ ನಾಲ್ಕು ಘಂಟೆಗೂ ಹೆಚ್ಚು ಬಂದು ಬಿಟ್ಟಿರುತ್ತದೆ. ಅದರಲ್ಲೂ ಸ್ಟಾರ್ ಸಿನೆಮಾಗಳು ಉದ್ದುದ್ದ ಬರುತ್ತವೆ. ಅದರಲ್ಲಿ ಬಿಲ್ಡ್ ಅಪ್ ಶಾಟ್ಸ್ ಗಳು ಎಕ್ಸ್ಟ್ರಾ ಶಾಟ್ಸ್ ಗಳು...ಆನಂತರ ಟ್ರಿಮ್ಮಿ೦ಗ್ ಗೆ ಕುಳಿತುಕೊಂಡರೆ ಮೊದಲಿಗೆ ಶಾಟ್ಸ್ ಲೆಕ್ಕದಲ್ಲಿ ಕತ್ತರಿಸುತ್ತಾ ಕೊನೆ ಕೊನೆಗೆ ದೃಶ್ಯವನ್ನೇ ಎಗರಿಸಬೇಕಾಗುತ್ತದೆ. ಕೊನೆಗೂ ಅಂತೂ ಇಂತೂ ಅಂತಿಮ ಪ್ರತಿ ಮೂರು ಘಂಟೆಯಷ್ಟು ಬಂದರೆ ಇನ್ನೇನೂ ಕತ್ತರಿಸಲು ಸಾಧ್ಯವಿಲ್ಲ ಎನಿಸಿ ಬಿಡುಗಡೆ ಮಾಡಿಬಿಡುತ್ತಾರೆ. ಆದರೆ ಬಿಡುಗಡೆಯಾದ ಮೇಲೆ ಮತ್ತೆ ಚಿತ್ರ ಎಳೆತ ಎನಿಸಿದರೆ ಆಗ ಮತ್ತಷ್ಟು ಕತ್ತರಿಸಬೇಕಾಗುತ್ತದೆ. ಇತ್ತೀಚಿಗೆ ಬೃಂದಾವನ, ಮಾತ್ರನ್. ಜಿಲ್ಲಾ, ನೆನೋಕ್ಕಡಿನೆ ಮುಂತಾದ ಚಿತ್ರಗಳು ಹದಿನೈದು ನಿಮಿಷಗಳಷ್ಟು ಕಡಿತಗೊಂದಿದ್ದವು. ಕೆಲವು ಚಿತ್ರಗಳಂತೂ ಆರುಘಂಟೆಗಳಷ್ಟು ಉದ್ದವಿದ್ದದ್ದು , ನಾಲ್ಕು ಘಂಟೆ ಉದ್ದವಿದ್ದದ್ದು ನಮ್ಮಲ್ಲಿ ಉದಾಹರಣೆಗಳಿವೆ.
ಏಕೆ ಹೀಗೆ ಆಗುತ್ತವೆ.? ಎಂಬ ಪ್ರಶ್ನೆ ಕುರಿತು ಹಲವಾರು ಸಾರಿ ಯೋಚಿಸಿದ್ದೇನೆ. ಯಾಕೆಂದರೆ ಒಂದು ಚಿತ್ರದ ಪೂರ್ವ ಯೋಜನೆ ಬರಹದ ಹಂತದಲ್ಲಿ ನಿರ್ದೇಶಕ ಇರದೇ ಇದ್ದರೇ ಅಥವಾ ನಿರ್ದೇಶಕ ಚಿತ್ರದ ಮೂಡ್ ಅಥವಾ ಭಾವವನ್ನು ಅರಿತುಕೊಳ್ಳದಿದ್ದರೆ ಈ ರೀತಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಕೈಗೆ ಸಿಕ್ಕಿದ ದೃಶ್ಯದ ಬರಹದ ಪ್ರತಿಯನ್ನು ಸಂಕಲನದಲ್ಲಿ ತೊಂದರೆಯಾಗದಂತೆ ಶಾಟ್ಸ್ ವಿಭಜಿಸಿ ನಿರ್ದೇಶನ ಮಾಡಿದರೆ ಅದು ನಿರ್ದೇಶನವೇ ಅಲ್ಲ. ಇಷ್ಟಕ್ಕೂ ಸಿನಿಮಾದಲ್ಲಿ ಶಾಟ್ಸ್ ದೃಶ್ಯವನ್ನು ಚಿತ್ರೀಕರಿಸಲು ಉಪಯೋಗವಾಗುವಂತಹದ್ದು. ಆದರೆ ಚಿತ್ರದ ಭಾವಕ್ಕೆ ಯಾವ ಶಾಟ್ಸ್ ಇಟ್ಟರೆ ಪರಿಣಾಮಕಾರಿ ಎಲ್ಲಿಗೆ ಒಂದು ಶಾಟ್ಸ್ ಬದಲಿಸಿದರೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಚಿತ್ರದ ಒಟ್ಟಾರೆ ಆಶಯಕ್ಕೆ ಮತ್ತು ಗತಿಗೆ ಪೂರಕವಾಗಿರುತ್ತದೆ ಎಂಬುದನ್ನು ಅರಿತುಕೊಂಡು ಮಾಡುವುದು ನಿರ್ದೇಶನ ಎನ್ನಬಹುದು. ಅದರ ಹೊರತಾಗಿ ಸುಮ್ಮನೆ ಒಂದಷ್ಟು ಶಾಟ್ ವಿಭಜಿಸಿದರೆ ಭಾವ ಮನಸ್ಸಿಗೆ ತಟ್ಟುವುದಿಲ್ಲ. ಸಿನೆಮಾದಲ್ಲಿ ಗತಿ ಎಂಬುದು ಹೆಚ್ಚು ಅಗತ್ಯವಾದ ಅಂಶ. ಯಾಕೆಂದರೆ ಒಂದು ಥ್ರಿಲ್ಲರ್ , ಪತ್ತೆಧಾರಿ, ಭಯಾನಕ,.ಹಾಸ್ಯ ಹೀಗೆ ಆಯಾ ವಿಭಾಗಕ್ಕೆ ಅದರದೇ ಆದ ನಿರೂಪಣಶೈಲಿ ಇರುತ್ತದೆ. ಅದ್ಯಾವುದನ್ನೂ ಲೆಕ್ಕಿಸದೆ ಸುಮ್ಮನೆ ಶಾಟ್ ವಿಭಜನೆ ಮಾಡಿ ಚಿತ್ರೀಕರಿಸಿದರೆ ಉದ್ದ ಅಳತೆ ಸಿಗದೇ ಸಿನಿಮಾ ಏನೇನೋ ಆಗುತ್ತದೆ.
ಹೆಚ್ಚಾಗಿ ಕಿರುತೆರೆ ದೈನಂದಿನ ಧಾರಾವಾಹಿಗಳಲ್ಲಿ ಈ ಕೆಲಸವಾಗುತ್ತದೆ. ಎಲ್ಲೋ ಕುಳಿತು ಚಿತ್ರಕತೆ ಸಂಭಾಷಣೆ ಬರೆಯುವ ಬರಹದ ರೂಪ ಬೆಳಿಗ್ಗೆ ನಿರ್ದೇಶಕನ ಕೈ ಸೇರುತ್ತದೆ. ಅದನ್ನು ಸಂಜೆಯವರೆಗೆ ಚಿತ್ರಿಸಿಕೊಡಬೇಕಾಗುತ್ತದೆ. ಇತ್ತೀಚಿಗೆ ನಾನೊಂದು ಧಾರಾವಾಹಿಗೆ ಸಂಚಿಕೆ ನಿರ್ದೇಶಕನಾಗಿದ್ದೆ. ನನಗೆ ಬೆಳಿಗ್ಗೆ ಪ್ರತಿ ದೊರೆಯುತ್ತಿತ್ತು. ಕಲಾವಿದರಿರುತ್ತಿದ್ದರು. ಇದೇಕೆ, ಇದೇನು, ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರವೂ ಇರುತ್ತಿರಲಿಲ್ಲ. ಅದಕ್ಕೆ ಸಮಯವೂ ಇರುತ್ತಿರಲಿಲ್ಲ. ಆ ದಿನದಲ್ಲಿ ಅಷ್ಟನ್ನೂ ಹೆಚ್ಚು ಚಿತ್ರಿತ ಅವಧಿಯ ಜೊತೆಗೆ ಚಿತ್ರಿಸಿಕೊಡಬೇಕಾಗುತ್ತಿತ್ತು. ನಾನದನ್ನು ಮಾಡಿದೆ ಕೂಡ. ಅದು ಅಷ್ಟು ಖುಷಿ ಎನಿಸದಿದ್ದರೂ ಅದರದೇ ಆದ ಪ್ರಪಂಚದಲ್ಲಿ ಅದು ಅವಶ್ಯಕವೂ ಆಗಿತ್ತು.
ಇಷ್ಟಕ್ಕೂ ಚಿತ್ರಗಳಲ್ಲಿ ಇಷ್ಟೇ ಅವಧಿಯಿರಬೇಕು ಎನ್ನುವ ಕಾನೂನು ಇಲ್ಲ. ಹಾಲಿವುಡ್ ರಂಗದಲ್ಲಿ ಒಂದೂವರೆ ಘಂಟೆಯಿಂದ ಚಿತ್ರದ ಕತೆ ಬೇಡುವಷ್ಟು ಅವಧಿಯಿರುತ್ತದೆ. ಟೈಟಾನಿಕ್ ಮೂರು ಘಂಟೆ ಹದಿನಾರು ನಿಮಿಷ, ಶಿಂಡ್ಲರ್ ಲಿಸ್ಟ್ ಮೂರುವರೆ ಘಂಟೆ ಹೀಗೆ. ಬರ್ನಾರ್ಡೊ ಬಾರ್ಟುಲೂಸಿ ನಿರ್ದೇಶನದ 1900 ಐದು ಘಂಟೆ, ವಾರ ಅಂಡ್ ಪೀಸ್ ಎಂಟುಘಂಟೆ ಅವಧಿಯದ್ದಾಗಿವೆ. ಆದರೆ ಅವುಗಳು ಬೋರ್ ಎನಿಸುವುದಿಲ್ಲ. ಯಾಕೆಂದರೆ ಚಿತ್ರೀಕರಿಸುವಾಗಲೇ ಅವರಿಗೆ ಚಿತ್ರದ ಅವಧಿಯ ಅಂದಾಜು ಇರುತ್ತದೆ. ಹಾಗಾಗಿ ತೀರಾ ಉದ್ದವಾಗಿ ಆನಂತರ ಕತ್ತರಿಸುವ ಪ್ರಮೇಯ ಬರುವುದಿಲ್ಲವೇನೋ?
ಒಟ್ಟಿನಲ್ಲಿ ಅಂದುಕೊಂಡ ಅವಧಿಗಿಂತ ಎರಡು ಪಟ್ಟು ಮೂರು ಪಟ್ಟು ಉದ್ದದ ಚಿತ್ರಗಳು ನಮ್ಮಲ್ಲೇ ಜಾಸ್ತಿ ಇರಬಹುದೇನೋ ಅನ್ನುವ ಅನುಮಾನ ನನ್ನದು. ಯಾಕೆಂದರೆ ನನಗೆ ಗೊತ್ತಿರುವಂತೆಯೇ ಎಷ್ಟೋ ಯಶಸ್ವೀ ನಿರ್ದೇಶಕರ ಯಶಸ್ವೀ ಚಿತ್ರಗಳು ನೀಳ ಚಿತ್ರಗಳಾಗಿದದ್ದು ಆನಂತರ ಚಿಕ್ಕದಾದದ್ದು ಅದನ್ನು ಕಡಿತಗೊಳಿಸಲು ಒದ್ದಾಡಿದ್ದು ಎಷ್ಟೋ ಅಂಶಗಳನ್ನು ಕಿತ್ತೆ ಹಾಕಿದ್ದು ನನಗೆ ಗೊತ್ತಿದೆ.

Thursday, January 30, 2014

ರೀಮೇಕ್...1

ಪ್ರತಿ ಸಾರಿ ರೀಮೇಕ್ ಚಿತ್ರಗಳನ್ನು ನೋಡಿದ ಮೇಲೆ ನನಗೆ ಹೀಗೆಯೇ ಯೋಚನೆ ಕಾಡತೊಡಗುತ್ತದೆ. ಸುಮ್ಮನೆ ಈ ಚಿತ್ರ ಎಲ್ಲೂ ಬಂದಿಲ್ಲ, ಇದರ ಬಗ್ಗೆ ನಾನು ಓದೂ ಇಲ್ಲ, ನೋಡೂ ಇಲ್ಲ  ಎಂದೆಲ್ಲಾ ಮನಸ್ಸಿನಲ್ಲಿ ಅಂದುಕೊಂಡು ಖಾಲಿ ತಲೆಯಲ್ಲಿಯೇ ಸಿನಿಮಾ ನೋಡುವ ಪ್ರಯತ್ನ ಮಾಡುತ್ತೇನೆ. ಆದರೂ ನೋಡಿಯಾದ ಮೇಲೆ ಅಯ್ಯೋ ಅದೇ ಚೆನ್ನಾಗಿತ್ತಲ್ಲ ಎನಿಸುತ್ತದೆ. ಅದೇ ರೀತಿ ಕೆಲವು ಚಿತ್ರದ ಕನ್ನಡ ಅವತರಣಿಕೆ ಎಂದಾಗ ಅದರಲ್ಲಿನ ಅದ್ಭುತವಾಗಿದ್ದ ಅಂಶಗಳನ್ನು ಕನ್ನಡದಲ್ಲೂ ನೋಡುವ ಖುಷಿಗೆ ಚಿತ್ರ ಮಂದಿರಕ್ಕೆ ಹೊಕ್ಕಿರುತ್ತೇನೆ. ಅದು ಕೆಲವೊಮ್ಮೆ ಕೈ ಕೊಡುತ್ತವೆ.
ನಾನು ಚಿನ್ನತಂಬಿ, ಚಿಂಟಿ, ಅನಾರಿ ರಾಮಾಚಾರಿ ನಾಲ್ಕು ಚಿತ್ರಗಳನ್ನು ನೋಡಿದ್ದೇನೆ. ರವಿಚಂದ್ರನ್, ಶಿವಾಜಿ ಪ್ರಭು, ವೆಂಕಟೇಶ್ ಎಲ್ಲರೂ ಕಣ್ಣಲ್ಲೇ ಇದ್ದಾರೆ. ಆದರೆ ರವಿಚಂದ್ರನ್ ಮುಂದೆ ಅವರೆಲ್ಲರೂ ಒಂದು ಹೆಜ್ಜೆ ಕಮ್ಮಿಯೇ. ಯಾಕೆಂದರೆ ಶಿವಾಜಿ ಪ್ರಭು ಗುಂಡ ಗುಂಡಕ್ಕೆ ತೀರಾ ಪೆದ್ದನಂತೆ ಕಾಣುತ್ತಾರೆ..ವೆಂಕಟೇಶ್ ಚುರುಕಾಗಿದ್ದು ಪೆದ್ದನಿಗಿಂತ ಸ್ವಲ್ಪ ಮೇಲೆ ಅನಿಸುತ್ತಾರೆ. ಆದರೆ ಆ ರಾಮಾಚಾರಿಯ ಅಮಾಯಕ ಮನಸ್ಸಿನ ಮುಗ್ಧ ಯುವಕನ ಪಾತ್ರವಿದೆಯಲ್ಲ ಅದು ರವಿಚಂದ್ರನ್ ದೇ ಎನಿಸುತ್ತದೆ. ಅದೇ ರೀತಿ ಶಂಕರ್ ನಾಗ್ ಅಭಿನಯದ ಹೊಸ ಜೀವನ, ಕಾಶೀನಾಥ್ ಅಭಿನಯದ ಲವ್ ಮಾಡಿ ನೋಡು ಚಿತ್ರಗಳನ್ನು ಗಮನಿಸಬಹುದು.ಎರಡರ ಮೂಲ ರೂಪಕ್ಕಿಂತ ನಮ್ಮದು ಚೆನ್ನಾಗಿದೆ ಎನಿಸುತ್ತದೆ. ಅದೇ ಅ ಕಿಸ್ ಬಿಫೋರ್ ಡೈಯಿಂಗ್ ಚಿತ್ರದ ಹಳೆಯ ಆನಂತರ ಮ್ಯಾಟ್ ದಿಲ್ಲೊನ್ ಅಭಿನಯದ ಆನಂತರ ಮಲಯಾಳಂ ಭಾಷೆಯ ಚಿತ್ರಗಳನ್ನು ನೋಡಿದ ಮೇಲೆ ಬಾಜಿಗರ್ ಸೂಪರ್ ಎನಿಸುತ್ತದೆ. ಪ್ರತೀಕಾರ, ಪ್ರೀತಿ ತಾಯಿ ಮಮತೆ ಎಲ್ಲವನ್ನೂ ಹದವಾಗಿ ಬೆರೆಸಿದ್ದ ಚಿತ್ರವದು. ಅದರ ಎಲ್ಲಾ ಅಂತ್ಯಗಳನ್ನು ಸುಮ್ಮನೆ ಗಮನಿಸಿ. ಆಂಗ್ಲ ಭಾಷೆಯ ಚಿತ್ರದಲ್ಲಿ ನಾಯಕಿಯನ್ನು ಅಟ್ಟಿಸಿಕೊಂಡು ಬರುವಾಗ ನಾಯಕ ಸಾಯುತ್ತಾನೆ. ಮಲಯಾಳಂ ಚಿತ್ರದಲ್ಲಿ ನಾಯಕಿಯ ತಂಗಿ ನಾಯಕನನ್ನು ಸಾಯಿಸುತ್ತಾಳೆ.ಆದರೆ ಬಾಜಿಗರ್ ಚಿತ್ರದ ಅಂತ್ಯದಲ್ಲಿ ಖಳನೆ ಸಾಯಿಸಿದರೂ ಅದರಲ್ಲಿನ ಫೋರ್ಸ್ ಬೇರೆ. ನಾಯಕ ಸಮರ್ಥನೆ ಇದ್ದರೂ  ಅನ್ಯಾಯವಾಗಿ ಮೂರು ಕೊಲೆಗಳನ್ನು ಮಾಡುತ್ತಾನೆ. ಹಾಗಾಗಿ ಅವನು ಅವನ ದಾರಿಯಲ್ಲಿ ಸರಿ ಎನಿಸಿದರೂ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದಾಗ ಅದು ತಪ್ಪು. ಹಾಗೆಯೇ ಪ್ರತೀಕಾರದ ಬೆಂಕಿ ನಮ್ಮನ್ನೂ ಸುಡುತ್ತದೆ ಎನ್ನುವದನ್ನು ಚಿತ್ರದಲ್ಲಿ ಸೇರಿಸಲೇ ಬೇಕಿತ್ತು. ಆದರೆ ಕನ್ನಡದಲ್ಲಿ ಆ ಎಲ್ಲಾ ಆಶಯವನ್ನೂ ಒಂದೇ ಏಟಿಗೆ ತೆಗೆದು ಬೀಸಾಕಿದರು. ನಾಯಕ ಖಳನನ್ನು ಸಾಯಿಸಿ ನಾನು ಕೊಲೆ ಮಾಡಿರುವುದು ನನಗೆ ಗೊತ್ತು, ನಿನಗೆ ಗೊತ್ತು ಆ ದೇವರಿಗೆ ಗೊತ್ತು ಶಿಕ್ಷೆ ಅವನೇ ಕೊಡಲಿ ಎಂದು ಆರಾಮವಾಗಿ ನಡೆದುಕೊಂಡು ಹೋಗಿಬಿಡುತ್ತಾನೆ, ನಾಯಕಿಯ ಜೊತೆಗೆ. ಇಲ್ಲಿ ನಿರ್ದೇಶಕ ನಾಯಕನನ್ನ್ಯಾಕೆ ಉಳಿಸಿದರು? ಜೊತೆಗೆ ಏನನ್ನು ಹೇಳಲು ಹೊರಟರು ..ಮತ್ತದು ಸರಿಯಾಯಿತಾ..? ನಾವು ಸಾವಿರ ಮಾತನಾಡಬಹುದು. ಆದರೆ ಫಲಿತಾಂಶ ನಮ್ಮಲ್ಲೇ ಇದೆ. ಚಿತ್ರ ಸೋತದ್ದು ಗೊತ್ತೇ ಇದೆ.
ಅದೇ ರೀತಿ ಅಲ್ಲಿನ ಪ್ರಮುಖ ಅಂಶಗಳನ್ನು ಇಲ್ಲಿ ಪೇಲವ ಮಾಡಿದ್ದರು. ನನ್ನ ವಿಷಯವೇ ಅದು. ಒಂದು ರೀಮೇಕ್ ಮಾಡುವಾಗ ಅದರಲ್ಲಿನ ಭಾವತೀವ್ರತೆ, ಅದರಲ್ಲಿನ ಪ್ರಮುಖ ಅಂಶ ಮತ್ತು ಅದರಲ್ಲಿದ್ದ ಜನ ಸೆಳೆಯುತ್ತಿದ್ದ ಅಂಶ ಯಾಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಲ್ಲಿ ಅದೇ ಪ್ರಮುಖವಾದ ಅಂಶವಾಗಿರುತ್ತದೆ. ಬಹುತೇಕ ನಮ್ಮವರ್ಯಾಕೆ[ಬರೀ ಕನ್ನಡ ಸಿನೆಮಾ ಬಗ್ಗೆ ಮಾತಾಡುತ್ತಿರುವುದರಿಂದ] ಅದನ್ನು ಸರಿಯಾಗಿ ಗಮನಿಸುವುದಿಲ್ಲ. ಬಾಜಿಗರ್ ವಿಷಯದಲ್ಲಿ ಕ್ಲೈಮಾಕ್ಸ್ ಮುಖ್ಯವಾದ ಜನರನ್ನು ಆಕರ್ಷಿಸಿದ ಅಂಶ ಎನ್ನಬಹುದು. ಹೊಟ್ಟೆಯಲ್ಲಿ ರಾಡು ಚುಚ್ಚಿಸಿಕೊಂಡ ನಾಯಕ ಖಳನನ್ನು ನೋಡುತ್ತಿದ್ದರೆ, ಖಳ ಅಟ್ಟಹಾಸದ ನಗು ನಗುತ್ತಿರುತ್ತಾನೆ. ಆದರೆ ಸ್ವಲ್ಪ ಹೊತ್ತಿನ ನಂತರ ನಾಯಕನೂ ನಗತೊಡಗಿದಾಗ ಖಳನಿಗೆ ಗಾಬರಿ, ಆಶ್ಚರ್ಯ..ನಿನ್ನನ್ನು ಕೊಲ್ಲಲು ನನಗೆ ಕಾರಣ ಸಿಕ್ಕಿತು ಎನ್ನುವ ಭಾವ ಆ ನಗೆಯಲ್ಲಿರಬಹುದಾ..? ಒಟ್ಟಿನಲ್ಲಿ ಆ ದೃಶ್ಯ ರೋಮಾಂಚನ ಉಂಟುಮಾಡುವುದು ಸಹಜ. ಆದರೆ ಅದೇ ಕನ್ನಡ ಅವತರಣಿಕೆಯಲ್ಲಿಲ್ಲ.
ಪೊರ್ಕಿ ಮತ್ತು ಪೋಕಿರಿಯ ಸಮಸ್ಯೆಯೂ ಅದೆ. ಅಲ್ಲಿನ ಪವರ್, ಫೋರ್ಸ್ ಕನ್ನಡದಲ್ಲಿರಲಿಲ್ಲ. ಹಾಗೆ ನೋಡಿದರೆ ತೆಲುಗಿನ ಮಹೇಶ್ ಬಾಬು ಪವರ್ ಗೆ ತಾರಾಮೌಲ್ಯಕ್ಕೆ ದರ್ಶನ್ ಎಲ್ಲಾ ದಿಕ್ಕಿನಿಂದಲೂ ಜಾಸ್ತಿ ಎನ್ನಬಹುದು. ಆದರೆ ಅಲ್ಲಿನ ಅವರ ಕೇಶ ಶೈಲಿ ಮತ್ತು ಅಭಿನಯ ಶೈಲಿ ಸಿನಿಮದ ಮೊದಲ ಋಣಾತ್ಮಕ ಅಂಶ ಎನ್ನಬಹುದು. ಆದರೆ ಅಣ್ಣಯ್ಯ, ಗಡಿಬಿಡಿ ಗಂಡ ಮುಂತಾದ ರವೀಚಂದ್ರನ್ ಅವರ ಅಭಿನಯದ ರೀಮೇಕ್ ಚಿತ್ರಗಳಲ್ಲಿ ಮೂಲಕ್ಕಿಂತ ಒಂದು ಕೈ ಹೆಚ್ಚಗಿನ ಸೊಗಸಿದೆ ಎನ್ನಬಹುದು. ಹಾಗೆಯೇ ತಮಿಳಿನ ರಜನಿಕಾಂತ್ ಅಭಿನಯದ ಭಾಷಾ ಕನ್ನಡದಲ್ಲಿ ಬರುತ್ತದೆ ಎಂದಾಗ ಕುತೂಹಲ ಇದ್ದೇ ಇತ್ತು. ಆದರೆ ಇಲ್ಲಿನ ಕೋಟಿಗೊಬ್ಬ ಚೆನ್ನಾಗಿತ್ತು. ಅದೇ ಮಾತನ್ನು ವಿಷ್ಣುಸೇನಾಗೆ ಹೇಳಲಿಕ್ಕೆ ಬರುವುದಿಲ್ಲ. ಇದೆಲ್ಲಾ ದೊಡ್ಡವರ ಸಿನಿಮಾಗಳು. ಫ್ರೆಂಚ್ ನ ಪ್ರಾನ್ಸಿಸ್ ವಬೇರ್ ನಿರ್ದೇಶನದ ಡಿನ್ನರ್ ಗೇಮ್ ಹಿಂದಿಯಲ್ಲಿ ಭೇಜಾ ಫ್ರೈ ಆಗಿ ಬಂದಾಗ ಮೂಲಕ್ಕಿಂತ ಹೆಚ್ಚಿನ ನಗು ದೇಸಿ ಸಿನಿಮಾದಲ್ಲಿತ್ತು. ವಿನಯ್ ಪಾಠಕ್ ಅಭಿನಯ ಅದ್ಭುತ ಎಂದೇ ಹೇಳಬಹುದು. ಯಾಕೆಂದರೆ ಇಲ್ಲಿ ವಿನಯ್ ಪಾಠಕ್ ನಾನು ಹಾಸ್ಯಗಾರ ಎಂದುಕೊಳ್ಳದೆ ಅಭಿನಯಿಸಿದ್ದರು. ಮೂಲದಲ್ಲಿ ಚಿತ್ರಕಲಾವಿದನ ಪಾತ್ರ ಹಿಂದಿಯಲ್ಲಿ ಗಾಯಕನಾಗಿ ಬದಲಾಗಿತ್ತು. ಆದರೆ ಅದೇ ಕನ್ನಡಕ್ಕೆ ದಿನೇಶ್ ಬಾಬು ನಿರ್ದೇಶನದಲ್ಲಿ ಮಿಸ್ಟರ್ ಗರಗಸ ಆಗಿ ಮೂಡಿಬಂದಾಗ ಅಲ್ಲಿ ನಗು ಬರಲು ಕಾರಣವೇ ಇರಲಿಲ್ಲ. ಕೋಮಲ್ ಪ್ರತಿ ದೃಶ್ಯದಲ್ಲೂ ಕೃತಕವಾಗಿ ಕಾಣಿಸಿದ್ದರು, ಅಭಿನಯಿಸಿದ್ದರು... ಒಬ್ಬ ಚಿತ್ರ ನಿರ್ದೇಶಕನಾಗಿ ಬರಹಗಾರನಾಗಿ ಬೇಕೆಂತಲೇ ನಗಿಸಲು ಪ್ರಯತ್ನಿಸಿದ್ದರು.
ಹಿಂದಿಯಲ್ಲೂ ಇದು ಹಲವಾರು ಸಾರಿ ಆಗಿದ್ದಿದೆ. ಇಂಗ್ಲಿಷಿನಲ್ಲಿ ಎರಡು ಇಟಾಲಿಯನ್ ಜಾಬ್ ಚಿತ್ರಗಳಿವೆ. ಎರಡರಲ್ಲೂ ಮುಖ್ಯವಾದ ಅಂಶವೆಂದರೆ ತುಂಬಿದ ಜನನಿಬಿಡ ನಗರದಲ್ಲಿನ ಟ್ರಾಫಿಕ್ ಜಾಮ್ ಕುರಿತಾದದ್ದು. ಟ್ರಾಫಿಕ್ ಜಾಮ್ ಬಳಸಿಕೊಂಡು ದೊಡ್ಡ ಕಳ್ಳತನ ಮಾಡುವುದು ಚಿತ್ರದ ಮುಖ್ಯ ಅಂಶ.ಆದರೆ ಅಬ್ಬಾಸ್ ಮಸ್ತಾನ್ ತಲೆಯನ್ನು ಎಲ್ಲಿ ಇಟ್ಟಿದ್ದರೋ..? ಆ ಮುಖ್ಯಾಂಶವನ್ನೇ ತೆಗೆದು ಬಿಟ್ಟಿದ್ದರು. ಸಿನಿಮಾ ಅಟ್ಟರ್ ಪ್ಲಾಪ್ ಆದದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ..
ಒಂದು ಚಿತ್ರವನ್ನು ಅಥವಾ ಕಾದಂಬರಿಯನ್ನು ರೂಪಾಂತರ ಭಾಷಾಂತರ ಗೊಳಿಸುವಾಗ  ಮೂಲದಲ್ಲಿ ಮುಖ್ಯವಾದ ಅಂಶ ಏನಿತ್ತು ಎಂಬುದನ್ನು ತಿಳಿದುಕೊಳ್ಳದೇ ರೀಮೇಕ್ ಮಾಡಿದಾಗ ಈ ರೀತಿ ಫಲಿತಾಂಶ ಬರುವುದು ಖಂಡಿತವೆ ಅಲ್ಲವೇ.

Friday, January 3, 2014

ಸಿನಿಮಾ ಕದ್ದು ನೋಡುವ ಚಾಳಿ..

ನೀನು ಗ್ರೇಟ್ ಗುರು ಅಂದ ಗೆಳೆಯ. ನಾನು ಉಬ್ಬಿ ಹೋಗಬೇಕಿತ್ತಾ? ಯೋಚಿಸಿದೆ. ಯಾಕೆಂದರೆ ಅವನು ನನ್ನನ್ನು ಹಾಗೆ ಹೊಗಳಿದ್ದು ನನ್ನ ಕಳ್ಳತನ ನೋಡಿ.
ಈ ಸಾರಿಯ ಬೆಂಗಳೂರು  ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೋಗಲಾಗಲಿಲ್ಲ. ಆದರೂ ಅಲ್ಲಿ ಯಾವ ಯಾವ ಸಿನಿಮಾಗಳಿವೆ ಎನ್ನುವ ಕುತೂಹಲದಿಂದ ಅಲ್ಲಿದ್ದ ಚಿತ್ರಗಳ ಪಟ್ಟಿ ಮಾಡಿದೆ. ಅದರಲ್ಲಿನ ಸುಮಾರಷ್ಟು ಜಾಗತಿಕ ಚಿತ್ರಗಳನ್ನು ನೋಡಿದ್ದೆ. ನಮ್ಮದೇ ನೆಲದ ಒಂದಷ್ಟು ಚಿತ್ರಗಳನ್ನು ನೋಡಲಾಗಿರಲಿಲ್ಲ. ಅದರ ಬಗ್ಗೆ ಮಾತನಾಡುತ್ತಾ ನನ್ನ ಗೆಳೆಯನಿಗೆ ನಾನು ನೋಡಿರುವ ಪಟ್ಟಿಗಳನ್ನು ಹೇಳಿದಾಗ ಅವನು ಹುಬ್ಬೇರಿಸಿ ಎಲ್ಲಿ ನೋಡ್ತೀಯಾ ಮಾರಾಯಾ ನಮಗೆ ಸಿಗೋದೆ ಇಲ್ಲ..ನೀನು ಗ್ರೇಟ್ ಎಂದಿದ್ದ. ನಾನು ಆ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿರಲಿಲ್ಲ. ಮತ್ತವುಗಳ ಅಧಿಕೃತ ಡಿವಿಡಿಗಳನ್ನೂ ತಂದು ನೋಡಿರಲಿಲ್ಲ. ಅವುಗಳನ್ನು ಕದ್ದು ನೋಡಿದ್ದೆ.
ನಾನು ಸುಮ್ಮನೆ ವಿಕಿಪೀಡಿಯದಲ್ಲಿ ಇಸವಿ ಪ್ರಕಾರ ಚಿತ್ರಗಳನ್ನು ಹುಡುಕುತ್ತೇನೆ. ಪ್ರತಿ ವರ್ಷವೂ ಇದನ್ನು ಮಾಡುತ್ತೇನೆ. ಈ ವರ್ಷ, ಈ ತಿಂಗಳು ಯಾವ ಚಿತ್ರ ಹೆಚ್ಚು ಹಣ ಗಳಿಸಿತು, ಯಾವ ಚಿತ್ರ ಪ್ರಶಸ್ತಿ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿತು, ಯಾವ ಚಿತ್ರ ವಿವಾದದ ಗೂಡಾಯಿತು..ಮುಂತಾದವುಗಳನ್ನು ನೋಡುತ್ತೇನೆ. ಎಲ್ಲಾ ದೇಶದ ಚಿತ್ರಗಳನ್ನು ಸುಮ್ಮನೆ ಒಮ್ಮೆ ನೋಡೋಣ ಎನ್ನುವ ಮನಸ್ಥಿತಿ ನನ್ನದು. ಹಾಗಾಗಿ ಗೊತ್ತು ಗುರಿಯಿಲ್ಲದ, ಹೆಸರೇ ಕೇಳಿಲ್ಲದ ದೇಶಗಳ ಹೆಸರುಗಳನ್ನೂ ತಿಳಿದು ಅಲ್ಲಿನ ಸಿನೆಮಾಗಳನ್ನೂ ನೋಡಲು ಪ್ರಯತ್ನಿಸುತ್ತೇನೆ.
ಇದು ನನ್ನ ಮೊದಲನೆಯ ಹಂತದ ಕೆಲಸ.ಕೊರಿಯಾದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾ ಯಾವುದು ಎಷ್ಟು ಹಣ ಗಳಿಸಿತು ಎಂಬುದನ್ನು ತಿಳಿದು ಅದನ್ನು ಪಟ್ಟಿ ಮಾಡಿಕೊಂಡು ಅದನ್ನು ಅಂತರ್ಜಾಲದಲ್ಲಿ ಜಾಲಾಡುತ್ತೇನೆ. ಟೋರೆಂಟ್ ನಿಂದ ಎಲ್ಲೆಲ್ಲಿ ಡೌನ್ ಲೋಡ್ ಗೆ ಅವಕಾಶವಿದೆಯೋ ಅಲ್ಲೆಲ್ಲಾ ಹುಡುಕುತ್ತೇನೆ. ಯು ಟ್ಯೂಬ್, ಫಾರಿನ್ ಮೂವಿ ಡೌನ್ಲೋಡ್, ಫ್ರೀ ಸ್ಟ್ರೀಮಿಂಗ್ ಹೀಗೆ. ಅಲ್ಲೆಲ್ಲಾ ಸಿಗದೇ ಹೋದರೆ ಆನಂತರ ಆಯಾ ಭಾಷೆಯ ಅಂತರ್ಜಾಲ ಪುಟಗಳನ್ನೂ ತೆರೆಯುತ್ತೇನೆ. ಅಲ್ಲಿನ ಅಕ್ಷರಗಳನ್ನು ಕಾಪಿ ಪೇಸ್ಟ್ ಮಾಡಿಕೊಂಡು ಗೂಗಲ್ ಟ್ರಾನ್ಸ್ಲೇಷನ್ ನಲ್ಲಿ ಅದರ ಇಂಗ್ಲಿಷ್ ಅರ್ಥ ತಿಳಿದುಕೊಂಡು ಅಲ್ಲಿ ಎಲ್ಲಿ ಯಾವುದು ಡೌನ್ಲೋಡ್ ಎಂಬುದನ್ನು ಗೊತ್ತು ಮಾಡಿಕೊಂಡು ಡೌನ್ ಲೋಡ್ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಕೊರಿಯಾ ನಾಡಿನ ವೆಬ್ ಸೈಟ್ ಚಿತ್ತಾರವೇ ಒಂದು ಚಂದ..ಹಾಗೆ ಬರೀ ಝೆಡ್ ಗಳನ್ನ ಬೇಕೆಂದ ಕಡೆಯಲ್ಲ ತುರುಕುವ  ರಷ್ಯನ್ , ಅದೇನೋ ಇಂಗ್ಲಿಷೋ ಏನೋ ಗೊತ್ತಾಗದ ಪೋಲಿಷ್ ಮುಂತಾದವುಗಳು ವಿಚಿತ್ರ. ಅವುಗಳ ಅಂತರ್ಜಾಲ ಪುಟದಲ್ಲಿ ಮೊದಲಿಗೆ ಚಿತ್ರ ನೋಡಿ ಅದರ ಕೆಳಗಿನ ವಾಕ್ಯವನ್ನು ಭಾಷಾಂತರಿಸಿ ನೋಡಿ ಅವುಗಳಲ್ಲಿ ನನಗೆ ಬೇಕಾದ, ಆಪ್ತ ವೆನಿಸುವ 'ಡೌನ್ ಲೋಡ್' ಎನ್ನುವ ಪದ ಹುಡುಕುವುದಕ್ಕೆ ಗಂಟೆ ಗಟ್ಟಲೆ ಸಮಯ ಬೇಕಾಗುತ್ತದೆ.
ಅದನ್ನು ವಿವರಿಸಿದೆ. ಅಂವ ಇನ್ನೂ ಗ್ರೇಟ್ ಬಿಡಪ್ಪಾ ಎಂದ. ನಮ್ಮ ಸಿನಿಮಾ ಪೈರೇಟ್ ಆದರೆ ಕಿರುಚಾಡುವ ನಾವು, ಬೇರೆಯವರ ಸಿನೆಮಾ ನೋಡಲು ಪೈರೇಟ್ ಕಾಪಿ ಯನ್ನೇ ಕಾಯುವುದು ವಿಪರ್ಯಾಸ ಎನಿಸದಿರಲಿಲ್ಲ.
ಮೊದಲೆಲ್ಲಾ ನನ್ನ ಬಳಿ ಕಂಪ್ಯೂಟರ್ ಇರಲಿಲ್ಲ. ಅಂತರ್ಜಾಲ ವ್ಯವಸ್ಥೆ ಇರಲಿಲ್ಲ. ತಿಂಗಳಿಗೊಮ್ಮೆ ನ್ಯಾಷನಲ್ ಮಾರ್ಕೆಟ್ ಕಡೆಗಳಲ್ಲಿ ಜೇಬಲ್ಲಿ ಸಾವಿರ ಗಟ್ಟಲೆ ಹಣ ಇಟ್ಟು ಕೊಂಡು ಹೋಗಿ ಒಂದಷ್ಟು ಡಿವಿಡಿ ಕೊಡಿ ಎನ್ನುತ್ತಿದ್ದೆ. ಅವನು ಯಾವುದು ಬೇಕು ಎಂದರೆ ಎಲ್ಲಿ ಕೊಡಿ ಎಂದು ಅವನಿಂದ ಆ ಡಿವಿಡಿಗಳ ಸಂಪುಟ ತೆಗೆದುಕೊಂಡು ಬರೀ ಮೇಲಿನ ಚಿತ್ರಗಳನ್ನು ನೋಡಿ ಪಕ್ಕಕ್ಕಿರಿಸುತ್ತಾ ಹೋಗುತ್ತಿದ್ದೆ. ಹೆಚ್ಚು ಕಡಿಮೆ ಪಕ್ಕದಲ್ಲಿ ಅಂಗಡಿಯವನೆ ಅವಾಕ್ಕಾಗುವಷ್ಟು ಸಂಗ್ರಹವಾಗುತ್ತಿದ್ದಂತೆ ಒಂದೇ ಸಾರಿ ಐದು ಸಾವಿರವೋ ಹತ್ತು ಸಾವಿರವೋ ಕೊಟ್ಟು ಬರುತ್ತಿದ್ದೆ. ಹಾಗೆಯೇ ನನ್ನ ಗೆಳೆಯರು ಇದ್ದರು ಸಿನಿಮಾ ಹುಚ್ಚರು.ದುಡ್ಡು ಬರುತ್ತಿದ್ದಂತೆಯೇ ಡಿವಿಡಿ ಅಂಗಡಿಗೆ ಹೋಗಿ ಲೆಕ್ಕವಿಲ್ಲದಷ್ಟು ಡಿವಿಡಿ ಕೊಂಡು ಅಲ್ಲಿಂದಲೇ ಫೋನ್ ಮಾಡಿ ನೂರೈವತ್ತು ಡಿವಿಡಿ ಕೊಂಡಿದ್ದೇನೆ ಮನೆಗೆ ಬಾ ಎನ್ನುತ್ತಿದ್ದರು. ಪ್ರತಿ ಸಿನಿಮಾದ ಡಿವಿಡಿ ಹರಡಿಕೊಂಡು ಅದರ ಮೇಲಿನ ಪೋಸ್ಟರ್ ನೋಡುತ್ತಾ ಅದರ ಹಿಂದುಗಡೆಯ ವಿವರಗಳನ್ನು ಓದುತ್ತಾ,  ಡಿವಿಡಿ ಪ್ಲೇಯರ್ ಗೆ ಡಿವಿಡಿ ಹಾಕುವಾಗ ಪೋಸ್ಟರ್ ನಲ್ಲಿದ್ದ ಸಿನಿಮಾ ಇರುತ್ತದಾ ಎಂಬ ಸಂಶಯ ಪಡುತ್ತಾ ಸಿನಿಮಾ ನೋಡುವುದೇ ಒಂದು ಮಜಾ ಎನ್ನಬಹುದು. ಯಾಕೆಂದರೆ ಎಷ್ಟೋ ಸಾರಿ ಹೊರಗಿನ ಪೋಸ್ಟರ್ ಗೂ ಒಳಗಿನ ಸಿನಿಮಾ ಕ್ಕೂ ಸಂಬಂಧವೇ ಇರುತ್ತಿರಲಿಲ್ಲ. ಕೆಲವೊಮ್ಮೆ ಸಿನೆಮಾಗಳು ಅದೆಷ್ಟು ಇಷ್ಟವಾಗುತ್ತಿದ್ದವೆಂದರೆ ಛೆ ಇವನಿಗೆನ್ ನಾವು ಪೈರೇಟ್ ಕಾಪಿ ತೆಗೆದುಕೊಂಡು ಮೋಸ ಮಾಡುತ್ತಿದ್ದೇವೆ ಎನಿಸಿಬಿಡುತ್ತಿತ್ತು. ಸಿನಿಮ ಪರಡಿಸೋ ಚಿತ್ರವನ್ನು ಪದೇ ಪದೇ ನೋಡಿ ಆನಂತರ ಅದರ ಒರಿಜಿನಲ್ ಡಿವಿಡಿ ಕೊಂಡು ತಂದಿದ್ದೆ. ಯುದ್ಧಂ ಸೇಯ್ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಖುಷಿಯಾಗಿ ಅದರ ಪೈರೇಟ್ ಕಾಪಿ ತೆಗೆದುಕೊಂಡು ಬಂದು ನೋಡಿ ಅದರ ಒರಿಜಿನಲ್ ಬರುವವರೆಗೆ ಕಾದಿದ್ದು ಅದನ್ನೂ ಕೊಂಡು ಕೊಂಡಿದ್ದೆ. ಆದರೆ ಅದನ್ನು ನೋಡಿದಾಗ ನಿರಾಸೆಯಾಗಿತ್ತು. ಭಾರತದಲ್ಲಿ ಸಿಗುವ ಡಿವಿಡಿ ಸೆನ್ಸಾರ್ ಆದದ್ದರಿಂದ ಚಿತ್ರದಲ್ಲಿನ ಮುಖ್ಯ[?] ಅಂಶಗಳೇ ಇರುತ್ತಿರಲಿಲ್ಲ. ಉದಾಹರಣೆಗೆ ಯುದ್ಧಂ ಸೇಯ್ ಚಿತ್ರದ ಇಂಟರ್ವಲ್ ನ ಹೊಡೆದಾಟ ವೆ ಕತ್ತರಿ ಪ್ರಯೋಗಕ್ಕೆ ಒಳಗಾಗಿತ್ತು...
ಆದರೆ ಅದ್ಯಾವಾಗ ನನಗೆ ಕದಿಯಬಹುದು ಎಂಬುದು ಮನವರಿಕೆಯಾಯಿತೋ ಈಗೆಲ್ಲಾ ಬರೀ ಹಾರ್ಡ್ ಡಿಸ್ಕ್ ತುಂಬಾ ಸಿನೆಮಾಗಳೆ. ನೋಡುವುದು ಟಿಪ್ಪಣಿ ಮಾಡಿಡುವುದು ಅಳಿಸಿ ಹಾಕುವುದು..ರೂಢಿಯಾಯಿತು. ಇತ್ತೀಚಿಗೆ ನಾನು ಕೊಂಡ ಡಿವಿಡಿ ಯಾವುದು? ಎಂದರೆ ಉತ್ತರವೇ ಇಲ್ಲ.
ಮೊದಲೆಲ್ಲಾ ಶಾಲೆಯಲ್ಲಿದ್ದಾಗ ಮನೆಯಲ್ಲಿ ಗೊತ್ತಾದರೆ ಬಯ್ಯುತ್ತಾರೆ ಎಂದು ಸಿನೆಮಾಗಳನ್ನೂ ಕದ್ದು ನೋಡುತ್ತಿದ್ದೆ. ಈಗಲೂ ಅದೇ ಕದ್ದು ನೋಡುವ ಚಾಳಿ ಬೇರೆ ತರಹದಲ್ಲಿ ಮುಂದುವರೆಯುತ್ತಿದೆ ಎನಿಸದಿರಲಿಲ್ಲ.

Tuesday, December 31, 2013

2013 ಕ್ಕೆ ವಿದಾಯ ಹೇಳುತ್ತಾ..?

ಸುಮ್ಮನೆ ಕಳೆದ ಸಾರಿಯ ಇದೇ ದಿನವನ್ನು ಗಮನಿಸಿದರೇ ನನ್ನ ಬದುಕಿನಲ್ಲಿ ಅಂತಹ ಅದ್ಭುತ ಎನಿಸಿದ್ದು ಏನು ನಡೆದಿಲ್ಲ ಎನ್ನಬಹುದು. ಹೋದ ಸಾರಿ ಇದೇ ದಿನಗಳಲ್ಲಿ 5 ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಮಾ ನೋಡುತ್ತಾ ಕಾಲ ಕಳೆದಿತ್ತು. ಆದರೆ ಈ ಸಾರಿ ಅದು ಸಾಧ್ಯವಾಗಲೇ ಇಲ್ಲ. ಹಾಗಾದರೆ ಏನು ಮಾಡಿದೆ ಅಂತಹ ಸಾಧನೆ ಎಂಬ ಪ್ರಶ್ನೆಗೆ ಹೇಳಿಕೊಳ್ಳುವಂತಹ ಉತ್ತರವೂ ಇಲ್ಲ. ಬಿಡುಗಡೆಯಾಗಬೇಕಿದ್ದ ನನ್ನ ಸಿನಿಮಾ ಮತ್ತಷ್ಟು ಸಮಸ್ಯೆಯಲ್ಲಿ ಸಿಕ್ಕಿಕೊಂಡಿತ್ತು. ಆದರೆ ಅದೇಗೋ ಏನೋ 2013 ರ ವರ್ಷಾಂತ್ಯದ ಹೊತ್ತಿಗೆ ಎಲ್ಲಾ ಸಮಸ್ಯೆಗಳು ವಿವಾದಗಳು ಒಂದು ಮಟ್ಟಿಗೆ ಬಗೆ ಹರಿದಿದೆ. ನನ್ನ ಪುಸ್ತಕ ನೋಡಲೇಬೇಕಾದ ನೂರೊಂದು ಕನ್ನಡ ಚಿತ್ರಗಳು ಈ ವರ್ಷ ಬಿಡುಗಡೆಯಾಯಿತು. ಇಷ್ಟು ಬಿಟ್ಟರೆ ಒಂದಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನನ್ನನ್ನು ತೊಡಗಿಸಿಕೊಂಡದ್ದು ಬಿಟ್ಟರೆ ಬೇರೆ ಯಾವ ಸಾಧನೆಯೂ ಆಗಲಿಲ್ಲ.
ಆದರೆ ಈ ಸಾರಿಯೂ ನಾನು ನೋಡಿದ ಸಿನಿಮಾಗಳು ದಾಖಲೆಯ ಸಂಖ್ಯೆ ದಾಟಿವೆ ಎನ್ನಬಹುದು. ಮೊದಲಿಗೆ ಜನವರಿಯಿಂದ ಡಿಸೆಂಬರ್ ವರೆಗೆ ಕನ್ನಡದಲ್ಲೇ ಸರಿ ಸುಮಾರು ನೂರಾ ಹದಿನಾರು ಸಿನೆಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಮನಸಿನ ಪುಟದಲಿ, ನೀನಂದ್ರೆ ಇಷ್ಟಕಣೋ, ಮಾನಸ, ಬ್ಲೂ ಮೂನ್ ಮುಂತಾದ ಒಂದಷ್ಟು ಚಿತ್ರಗಳನ್ನು ಹೊರತು ಪಡಿಸಿದರೇ, ನೂರಾ ಒಂಭತ್ತು ಸಿನಿಮಾಗಳನ್ನ ನೋಡಿಬಿಟ್ಟಿದ್ದೇನೆ. ಹಾಗೆಯೇ ಬಾಲಿವುಡ್ ಚಿತ್ರಗಳಲ್ಲೂ ಸುಮಾರಷ್ಟು ನೋಡಿದ್ದೇನೆ. ಹಾಲಿವುಡ್ ನ ಜಗತ್ತಿನ ಸಿನಿಮಾಗಳು ನೂರ ಐವತ್ತಕ್ಕೂ ಹೆಚ್ಚು ನೋಡಿದ್ದೇನೆ. ಆ ಲೆಕ್ಕದಲ್ಲಿ ಸುಮಾರು ಎರಡು ನೂರ ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನೋಡಿದ ಸಂತಸ ನನ್ನದು. ಅವುಗಳಲ್ಲಿ ಸುಮಾರಷ್ಟು ಖುಷಿ ಕೊಟ್ಟಿವೆ. ಬೇಸರ ಕಳೆದಿವೆ, ಬೇಸರ ತರಿಸಿವೆ. ಅದು ಬೇರೆ ಮಾತು.
ಇನ್ನು ಈ ಸಾರಿಯ ಓದು ಸ್ವಲ್ಪ ಕಡಿಮೆ ಎನ್ನಬಹುದು. ಸುಮ್ಮನೆ ಲೆಕ್ಕ ಇಟ್ಟರೆ ಮೂವತ್ತು ಪುಸ್ತಕಗಳನ್ನು ಓದಿರಬಹುದಷ್ಟೇ.ಅದು ಬಿಟ್ಟರೆ ದಿನಪತ್ರಿಕೆ, ವಾರ ಪತ್ರಿಕೆಗಳು ಒಂದಷ್ಟು ಧಾರಾವಾಹಿಗಳನ್ನು ಅಲ್ಲಲ್ಲಿ ನೋಡಲಷ್ಟೇ ಸಾಧ್ಯವಾಯಿತು. ಮಿತ್ರರ ಬ್ಲಾಗ್ ನಲ್ಲಿದ್ದ ಒಂದಷ್ಟು ಬರಹಗಳನ್ನು ಓದಲೂ ಸಮಯ ಸಾಲದೇ ಅಲ್ಲಲ್ಲಿ ಓದಿದ್ದಾಯಿತು. ಬರವಣಿಗೆಯೂ ಅಷ್ಟಾಗಿಲ್ಲ. ಮಾರ್ಚ್ ತಿಂಗಳ ನಂತರ ಓಡಾಟ, ಕೆಲಸದ ಒತ್ತಡಗಳು ಜಾಸ್ತಿಯಾದ್ದರಿಂದ ಓದಲು ಸಮಯ, ಆಸಕ್ತಿ ಎರಡೂ ಕೊರತೆಯಾಗಿತ್ತು.ಹಾಗೆಯೇ ಇಡೀ ವರ್ಷದಲ್ಲಿ ಎರಡು ಪ್ರಬಂಧಗಳು, ಒಂದು ಕಥೆ ಮಾತ್ರ ಬರೆಯಲು ಸಾಧ್ಯವಾಯಿತಷ್ಟೇ.ನನ್ನ ಬ್ಲಾಗ್ ನಲ್ಲೂ ಕೂಡ ನಿಯಮಿತವಾಗಿ ಬರೆಯಲು ಸಮಯ ಮತ್ತು ಅದಕ್ಕೆ ಅನುಗುಣವಾದ ಪರಿಸ್ಥಿತಿ ಎರಡೂ ಸಿಗಲಿಲ್ಲ ಎಂದೇ ಹೇಳಬಹುದು.
ಹಾಗೆಯೇ ನನ್ನ ಸುಮಾರಷ್ಟು ಯೋಜನೆಗಳು ಇನ್ನೇನು ಪ್ರಾರಂಭವಾಯಿತು ಎನ್ನುವ ಹಂತಕ್ಕೆ ಬಂದು ನಿಂತು ಹೋದವು. ಕೆಲವು ಮುಂದಿನವರ್ಶಕ್ಕೆ ಮುಂದೂಡಲ್ಪಟ್ಟವು.
ಈ ವರ್ಷದಲ್ಲಿ ಒಂದಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಯಾವುದು ಫಲ ಕೊಡುತ್ತದೋ?

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

Wednesday, December 25, 2013

ಚಿತ್ರೋತ್ಸವದ ಜಾಲತಾಣದ ಬೇಸರದ ಸಂಗತಿಯನ್ನು ಕುರಿತು...

ಹಬ್ಬದ ರೂಪದಲ್ಲಿ 75 ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರದರ್ಶಿಸಲು ಆಯೋಜಿಸಲಾಗಿದೆ ಬಟ್ಟಿಗಳಲ್ಲಿ ಮತ್ತು ಛಾಯಾಚಿತ್ರಗಳನ್ನು ಅತ್ಯಂತ ಎಬ್ಬಿಸುವ ಪ್ರದರ್ಶನ ಸ್ನೇಹ ಹೆಚ್ಚು ವೀಕ್ಷಕ. ಸಿನಿಮಾ ಸೃಜನಶೀಲ ಮತ್ತು ಶೈಕ್ಷಣಿಕ ಅಂಶಗಳನ್ನು ಮೇಲೆ ............................
ಉತ್ಸವ ಸಮಿತಿ ಶ್ರೇಷ್ಠತೆ ಉನ್ನತ ಮಟ್ಟದ ಖಚಿತಪಡಿಸಿಕೊಳ್ಳಲು, ಗಿರೀಶ್ ಕಾಸರವಳ್ಳಿ, ವಿಶ್ವದ ಪ್ರಮುಖ ನಿರ್ಮಾಪಕರು ಒಂದು ವಹಿಸಿದ್ದರು. 
ಜೀವನದ ವಿವಿಧ ರಂಗಗಳ ಶ್ರೇಷ್ಠ ಸಲಹೆಗಾರರ ​​ಉನ್ನತ ಸಮಿತಿ ಹಬ್ಬದ ಹಿಂದೆ ಸ್ಪೂರ್ತಿಯಾಗಬಹುದು 
ಆಗಿತ್ತುಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಸಂಸ್ಕೃತಿಯ ಪ್ರಮುಖ ಸೆಂಟರ್ ಆಗಲು ಕರ್ನಾಟಕ ಖ್ಯಾತಿವೆತ್ತ ಪರಂಪರೆ ಮತ್ತು ಸಾಹಿತ್ಯ, ಲಲಿತಕಲೆ ಮತ್ತು ಸಿನಿಮಾ ಜಾಗ ರಾಜ್ಯದ ಸಾಧನೆಗಳು ಅನುಗುಣವಾಗಿ. ...................
ಅಕಾಡೆಮಿ 4 BIFFES ಕಲಾತ್ಮಕ ನಿರ್ದೇಶಕ, ಭಾರತ, ಶ್ರೀ HN ನರಹರಿ ರಾವ್ ಫಿಲ್ಮ್ ಸೊಸೈಟಿ ಚಳುವಳಿಯ ಚಿತ್ರ ತಜ್ಞ ಮತ್ತು ಅನುಭವಿ ನೇಮಕ ಮಾಡಿದೆ... 

ಸಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಳ್ಳೆಯ ಚಿತ್ರಗಳಿವೆ. ಅದು ಬೇರೆ ಮಾತು. ಅದರ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣ ಎಂದು ಅದರ ಜಾಲತಾಣಕ್ಕೆ ಬೇಟಿ ಕೊಟ್ಟೆ. ಅಲ್ಲಿನ ಭಾಷೆಯ ಆಯ್ಕೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಇದ್ದುದರಿಂದ ನಾನು ಎರಡನೇ ಯೋಚನೆ ಮಾಡದೆ ಕನ್ನಡ ಆಯ್ಕೆ ಮಾಡಿಕೊಂಡು ಅಲ್ಲಿನ ವಿವರಗಳನ್ನು ಓದಲು ಪ್ರಾರಂಭಿಸಿದೆ. ಆಗ ಕಂಡ ಅವಸ್ಥೆ ಇದು. ಅದೆಂತಹ ಅಧ್ವಾನ ಎಂದರೆ ಈ ಸುಖಕ್ಕೆ ಯಾಕಾದರೂ ಕನ್ನಡದ ಭಾಷೆಯ ಆಯ್ಕೆ ಕೊಡುತ್ತಾರೋ ಎನಿಸದಿರಲಿಲ್ಲ. ಒಂದು ಚಿತ್ರೋತ್ಸವಕ್ಕೆ ಕಡಿಮೆ ಖರ್ಚು ಆಗುವುದಿಲ್ಲ. ಎಲ್ಲವನ್ನೂ ತಕ್ಕ ಮಟ್ಟಿಗೆ ಯೋಜಿಸಿ ಭಾಷೆಯ ವಿಷಯದಲ್ಲಿ ಅದರಲ್ಲೂ ನಮ್ಮದೇ ಭಾಷೆಯ ವಿಷಯದಲ್ಲಿ ಇಂತಹ ದಿವ್ಯ ನಿರ್ಲಕ್ಷ್ಯ ಕಂಡು ನನಗೆ ಅಚ್ಚರಿ, ಬೇಸರವಾಗದಿರಲಿಲ್ಲ.ಯಾಕೆ ಇಷ್ಟು ತಾತ್ಸಾರ. ಅಲ್ಲೇನೂ ಪುಟಗಟ್ಟಲೆಯ ಲೇಖನಗಳಿಲ್ಲ. ಇರುವ ಕೆಲವೇ ಕೆಲವು ಬರಹಗಳನ್ನೂ ಇಷ್ಟು ಅಧ್ವಾನವಾಗಿ ಬರೆಯುವುದಕ್ಕೆ ಅದೇಗೆ ಸಾಧ್ಯ ಮತ್ತು ಆ ಆಯೋಜಕರುಗಳು ಇದನ್ನು ಗಮನಿಸದಿರಲು ಹೇಗೆ ಸಾಧ್ಯ? ಹೀಗೆ ಮುಂದುವರೆದರೆ , ದೊಡ್ಡ ದೊಡ್ದವರೇ, ಹಿರಿಯರೇ. ಸಂಘ ಸಂಸ್ಥೆಗಳೇ ಹೀಗೆ ಮಾಡಿದರೆ ಅದೇಗೆ ನಮ್ಮ ಭಾಷೆ ಬೆಳೆಯಲು ಸಾಧ್ಯ ಎನಿಸದಿರಲಿಲ್ಲ. ಶ್ರೀ NR ವಿಷು ಕುಮಾರ್ ಶ್ರೀ HN ನರಹರಿ ರಾವ್ ಶ್ರೀ ಆರ್.ಕೆ. ಶಿವರಾಂ,ಶ್ರೀ ಚೆನ್ನಪ್ಪ ಪ್ರಕಾಶ್ ..ಹೀಗೆ ಸುಮಾರಷ್ಟು ದಿಗ್ಗಜರಿರುವಾಗ ಇಂತಹದ್ದು ಹೇಗೆ ಸಾಧ್ಯವಾಯಿತು ಎಂಬುದನ್ನು ಅವರೇ ಉತ್ತರಿಸಬೇಕೇನೋ?

ಈ ಕೆಳಗಿನ ಬರಹವನ್ನು ಓದಿ ಏನೆಂದು ಕಂಡು ಹಿಡಿದವರಿಗೆ ಚಿತ್ರೋತ್ಸವಕ್ಕೆ ಉಚಿತ ಪಾಸ್ ಕೊಡುವ ಬಹುಮಾನವಿದೆಯೇನೋ?
ಎಲ್ಲೋ, ಅಫ್ಘಾನಿಸ್ಥಾನ ಅಥವಾ ಬೇರೆಡೆ, ಯುದ್ಧ ಚೂರಾಗುತ್ತವೆ ದೇಶದಲ್ಲಿ ... ತನ್ನ ಮೂವತ್ತರ ಹರೆಯದ ಯುವತಿ ಕುಸಿದ ಕೋಣೆಯಲ್ಲಿ ತನ್ನ ಹಳೆಯ ಪತಿ ಮೇಲೆ ವೀಕ್ಷಿಸಿದಾಗ. ಅವರು ಏಕೆಂದರೆ ಕುತ್ತಿಗೆ ಗುಂಡಿನ ತರಕಾರಿ ರಾಜ್ಯದ ಕಡಿಮೆ ಇದೆ. ಅವರು ಆದರೆ ಸಹೋದರರು, ಜಿಹಾದ್ ತನ್ನ ಸಹಚರರು ತೊರೆಯಿತು ಕೇವಲ. ಒಂದು ದಿನ, ಮಹಿಳೆ ತನ್ನ ಮೂಕ ಪತಿ ತಮ್ಮ ಸಂಬಂಧದ ಬಗ್ಗೆ ತನ್ನ ಭಾವನೆಗಳನ್ನು ಬಗ್ಗೆ ಅವರಿಗೆ ಸತ್ಯವನ್ನು ಹೇಳಲು ನಿರ್ಧರಿಸುತ್ತಾಳೆ. ತನ್ನ ಬಾಲ್ಯದ, ತನ್ನ ನೋವನ್ನು ತನ್ನ ನಿರಾಶೆಯನ್ನು, ತನ್ನ ಒಂಟಿತನ, ತನ್ನ ಕನಸುಗಳ, ತನ್ನ ಆಸೆಗಳನ್ನು ಬಗ್ಗೆ ಮಾತಾಡುತ್ತಾನೆ ... ಅವರು ಕಳೆದ 10 ವರ್ಷಗಳ ಮದುವೆಯಾಗಿದ್ದಾರೆ ಸಹ, ಅವರು ಮೊದಲು ಮಾಡಿದ ಎಂದಿಗೂ ವಿಷಯಗಳನ್ನು ಹೇಳುತ್ತಾರೆ.

ಇದು ಅಫ್ಘಾನಿಸ್ತಾನ್ ದೇಶದ ಆಫ್ಘನಿಸ್ತಾನಿ ಭಾಷೆಯ ಚಲನಚಿತ್ರದ ಕನ್ನಡ ಲಿಪಿಯ ಸಾರಾಂಶವಂತೆ. ಬಹುಶ ಇದನ್ನು ಅಫ್ಘಾನಿಸ್ತಾನ್ ಭಾಷೆಯಲ್ಲಿ ಕೊಟ್ಟಿದ್ದರೂ ಅಲ್ಪಸ್ವಲ್ಪ ಅರ್ಥವಾಗುತ್ತಿತ್ತೇನೋ?

Saturday, December 14, 2013

ಹಾಡಿನ ಹಿನ್ನೆಲೆಯಲ್ಲಿ...

ಬಟ್ಟಲು ಗನ್ನಿನ ಚಲುವೆ ಲೇಖನವನ್ನೂ ಮೆಚ್ಚಿ ಹಲವಾರು ಗೆಳೆಯರು ಫೋನ್ ಮಾಡಿದ್ದರು. ನನಗೆ ಪರಿಚಯವಿರುವ ಹಿರಿಯ ವ್ಯಕ್ತಿಯಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದು ಈಗ ಅದನ್ನು ಮುಂದುವರೆಸದೆ ಆರಾಮವಾಗಿ ಮನೆಯಲ್ಲಿದ್ದಾರೆ. ಆದರೆ ಸಾಹಿತ್ಯದ ಬಗ್ಗೆ ಸಿನೆಮಾದ ಬಗ್ಗೆ ನಿರರ್ಗಳವಾಗಿ ಆಸಕ್ತಿಯಿಂದ ಗಂಟೆಗಟ್ಟಲೆ ಬೇಕಾದರೆ ಮಾತನಾಡುತ್ತಾರೆ. ನನಗವರ ಪರಿಚಯವಾದದ್ದು ಪಾರ್ಕಿನಲ್ಲಿ. ದಿನ ನಾನು ಒಂದಷ್ಟು ಕಸರತ್ತು[?] ಮಾಡಿ ಅಲ್ಲಿನ ಕಲ್ಲು ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದೆ. ಆಗ ಅದೊಂದು ದಿನ ಅವರೆ ನನ್ನ ಹಿನ್ನೆಲೆ ವಿಚಾರಿಸಿದರು. ನಾನು ಸಿನೆಮಾದವನು, ಜೊತೆಗೊಂದಿಷ್ಟು ಸಾಹಿತ್ಯದ ಜ್ಞಾನವಿದೆ ಎಂಬುದನ್ನು ತಿಳಿದ ಮೇಲಂತೂ ನನ್ನೊಡನೆ ಗೆಳೆತನ ಬೆಳೆಸಿಯೇಬಿಟ್ಟರು. ಅವರ ಕಾಲದ ಸಿನೆಮಾಗಳು ಅದು ಬಿಡುಗಡೆಯಾದ ದಿನಗಳಲ್ಲಿ ನಡೆದ ಆಸಕ್ತಿಕರವಾದ ಘಟನೆಗಳನ್ನೂ ಅಷ್ಟೇ ಆಸಕ್ತಿದಾಯಕವಾಗಿ ಹೇಳುತ್ತಾರೆ. ಆಗಾಗ ನನ್ನ ಬ್ಲಾಗ್ ಕೂಡ ಓದುತ್ತಾರೆ. ನನ್ನ ಲೇಖನ ಓದಿದ್ದ ಅವರು ಆವತ್ತು ಮಾತನಾಡಲು ಸಿದ್ಧರಾಗಿಯೇ ಬಂದಿದ್ದರೆಂದು ಕಾಣಿಸುತ್ತದೆ. ನನ್ನ ಲೇಖನದ ಬಗ್ಗೆ ಮಾತನಾಡಲು ಶುರು ಮಾಡಿದ ಅವರು ಸಿನಿಮಾದ ಹಾಡುಗಳ ಬಗ್ಗೆ ಹೊಸ ಲೋಕವೊಂದನ್ನೇ ತೆರೆದಿಟ್ಟರು.
ಒಂದು ಸಿನೆಮಾವನ್ನು, ಸಿನೆಮಾದ ಹಾಡುಗಳನ್ನ ಪ್ರತಿನಿಧಿಸುವುದಾದರೂ ಏನು? ನಮಗೆ ಇಷ್ಟವಾದದ್ದು ನಮ್ಮ ಹಿರಿಯರಿಗೆ ಏಕೆ ಇಷ್ಟವಾಗುವುದಿಲ್ಲ...ಈವತ್ತಿನ ನಮ್ಮ ಮೆಚ್ಚಿನ ಚಿತ್ರಗಳನ್ನ ಹಿರಿಯರು ಏಕೆ ಇಷ್ಟ ಪಡುವುದಿಲ್ಲ. ನಮ್ಮ ತಲೆಮಾರಿನ ನಾಯಕರುಗಳನ್ನು ಹಳಬರು ಯಾಕೆ ಇಷ್ಟ ಪಡುವುದಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಆವಾಗಾವಾಗ ಕಾಡುತ್ತಿರುತ್ತದೆ. ಉತ್ತರವೇನೋ ಸುಲಭ. ಅವರವರ ತಲೆಮಾರಿನ ಘಟನೆಗಳು ಚಿತ್ರಗಳು ಅವರವರಿಗೆ ಇಷ್ಟವಾಗುತ್ತವೆ ಎನ್ನುವುದಂತೂ ಖಚಿತ.ಆದರೆ ಅದಷ್ಟೇ ಅಲ್ಲ. ಅಲ್ಲಿ ನೆನಪುಗಳಿರುತ್ತವೆ.
'ಏನಪ್ಪಾ ಈಗ ಯಾಕೆ ಅಂತ ಸಿನೆಮಾಗಳನ್ನೂ ತೆಗೀತೀರಾ...ನಮ್ಮ ಕಾಲದಲ್ಲಿ ಎಷ್ಟೊಳ್ಳೆ ಸಿನೆಮಾಗಳು ಬರ್ತಿದ್ವು ಗೊತ್ತಾ..' ಎಂದರು. ನಾನು 'ಅಜ್ಜ..ನೀವು ಇತ್ತೀಚಿಗೆ ಯಾವ ಸಿನೆಮಾ ನೋಡಿದ್ದೀರಿ...ಎಂಬ ಪ್ರಶ್ನೆಗೆ ಅವರಿಂದ ಯಾವುದೂ ಇಲ್ಲಾ ಯಾಕೆಂದರೆ ಯಾವುದೂ ಚೆನ್ನಾಗಿರಲಿಲ್ಲ ಎನ್ನುವ ಉತ್ತರ ಬಂತು. ಯಾವ ಸಿನೆಮಾವನ್ನೂ ನೋಡದೆ ಚೆನ್ನಾಗಿಲ್ಲ ಎನ್ನುವುದಾದರೂ ಹೇಗೆ. ಹಾಗಾದರೆ ಅವರ ಕಾಲದಲ್ಲಿ ಬಂದ ಎಲ್ಲಾ ಸಿನೆಮಾಗಳೂ ಒಳ್ಳೆಯದಿತ್ತಾ?ಸುಮ್ಮನೆ  ಅವರ ಜೊತೆ ಮಾತಿಗಿಳಿದು ಅವರ ಕಾಲದ ಸಿನೆಮಾಗಳ ಬಗ್ಗೆ ಮಾತನಾಡಿದೆ. ಅವರು ಪ್ರತಿ ಸಿನೆಮಾದ ಹಿಂದೆ ಅವರ ಜೀವನದ ಘಟನೆಗಳನ್ನೂ ನೆನಪು ಮಾಡಿಕೊಂಡು ಹೇಳುತ್ತಿದ್ದರು. ಆ ಸಿನೆಮಾ ಬಂದಾಗ ನಾನು ಕಾಲೆಜಿನಲ್ಲಿದ್ದೆ, ಈ ಸಿನೆಮಾ ಬಂದಾಗ ನನ್ನ ಮದುವೆಯಾಗಿತ್ತು ಹೀಗೆ...ಆಗ ನನಗರ್ಥವಾದದ್ದು ಅವರ ಬದುಕಿನ ಮಜಳುಗಳಲ್ಲಿ ಸಿನೆಮಾಗಳೂ ಹಾಡು ಹೋಗಿದ್ದವು ಎಂಬುದು. ಹೌದು. ಒಂದು ಹಾಡು, ಸಿನಿಮಾದ ಹಿನ್ನೆಲೆಯಲ್ಲಿ ಜೀವನದ ಒಂದೊಂದು ಮಜಲುಗಳಿರುತ್ತವೆ. ಹಾಗಾಗಿ ಅದನ್ನು ಕೇಳಿದಾಗ ಅದ್ಯಾವುದೋ ಅವ್ಯಕ್ತ ಆತ್ಮೀಯ ಭಾವ ನಮ್ಮನ್ನು ಆವರಿಸಿ ಅದನ್ನು ಇಷ್ಟಪಡಿಸಬಹುದು. ಆದರೆ ಆವತ್ತಿನ ಹಿರಿಯರಿಗೆ ಈವತ್ತಿನ ಸಿನೆಮಾಗಳಲ್ಲಿ ಅಂತಹ ನೆನಪುಗಳು ಇರುವ ಸಾಧ್ಯತೆ ಕಡಿಮೆ.