Monday, September 23, 2013

ಲೂಸಿಯಾ ಮತ್ತು ಪ್ರಯೋಗ

ಕನ್ನಡದ ಮಟ್ಟಿಗೆ ಪ್ರಯೋಗಗಳಿಗೆ ಯಾವತ್ತೋ ಕೊರತೆಯಿಲ್ಲ. ನನ್ನಅನಿಸಿಕೆಯ ಪ್ರಕಾರ ನಮ್ಮಲ್ಲಿ ರೀಮೇಕ್ ಬಿಟ್ಟರೆ ಪ್ರಯೋಗಾತ್ಮಕ ಚಿತ್ರಗಳೇ ಜಾಸ್ತಿ. ಸ್ವಂತ ಕಥೆಯ ರೆಗ್ಯುಲರ್ ಮಸಾಲೆ ಚಿತ್ರಗಳು ನಮ್ಮಲ್ಲಿ ಗಮನಾರ್ಹ ಎನಿಸಿಕೊಂಡದ್ದು ಕೆಲವೇ ಕೆಲವು ಮಾತ್ರ.
ಆದರೆ ಹಾಡುಗಳೇ ಇಲ್ಲದೆ, ಪಕ್ಕಾ ಕಮರ್ಷಿಯಲ್ ಚಿತ್ರವನ್ನು ಕೊಟ್ಟವರು ದೇಸಾಯಿಯವರು. ಪೋಲಿಸ್ ಸ್ಟೋರಿ ಕೂಡ ಹಾಡುಗಳೇ ಇಲ್ಲದೆ, ನಾಯಕಿಯೇ ಇಲ್ಲದ ಸಾಹಸಮಯ ಚಿತ್ರ.ಈವತ್ತಿಗೂ ಆ ಚಿತ್ರದ ಗತಿ ಮತ್ತು ಚಿತ್ರಕಥೆ ಯಾವುದೇ ಸಾಹಸಮಯ ಚಿತ್ರಕ್ಕೆ ಸ್ಫೂರ್ತಿಯಾಗುವಂತಹದ್ದು. ಈ ಹಿಂದೆ ಡಾ. ರಾಜಕುಮಾರ್ ಅಭಿನಯದ ನಾಂದಿ ಕೂಡ ಆವತ್ತಿನ  ಕಾಲಮಾನಕ್ಕೆ ಪ್ರಯೋಗಾತ್ಮಕ ಚಿತ್ರ.
ಉಪೇಂದ್ರರ ಎ, ಉಪೇಂದ್ರ ಕೂಡ ತಿರುವು ಮರುಗು ಚಿತ್ರಕಥೆಯನ್ನು ಹೊಂದಿದ್ದ ಪ್ರಯೋಗಾತ್ಮಕ ಚಿತ್ರಗಳೇ. ಅದರಲೂ ಎ ಚಿತ್ರಕ್ಕೆ ಇದು ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎನ್ನುವ ಅಡಿಬರಹವನ್ನು ಉಪ್ಪಿ ಕೊಟ್ಟಿದ್ದರು ಮತ್ತದು ಆ ಚಿತ್ರಕ್ಕೆ ಪೂರಕವಾಗಿತ್ತು. ಇತ್ತೀಚಿಗೆ ಕಮರ್ಷಿಯಲ್ ನೆಲೆಗಟ್ಟಿನಲ್ಲಿ ಯಾವುದೇ ಪ್ರಯೋಗಾತ್ಮಕ ಚಿತ್ರಗಳು ಬಂದದ್ದು ಕಡಿಮೆ ಎನ್ನಬಹುದು. ನೀವು ಎ ಚಿತ್ರವನ್ನೇ ಗಮನಿಸಿದರೆ ಅದರಲ್ಲಿನ ಕಥೆಗೂ ಚಿತ್ರಕಥೆಯ ಒಘಕ್ಕೂ ಅಂತ್ಯದಲ್ಲಿ ನಿಜಕಥೆಗೂ ಅಜಗಜಾಂತರ ವ್ಯತ್ಯಾಸವಿತ್ತು. ಮೊದಲು ನೋಡಿದ್ದೇ ಒಂದಾದರೆ, ಕೊನೆಯಲ್ಲಿ ಕಂಡದ್ದೇ ಇನ್ನೊಂದು ಎನ್ನುವಂತಿತ್ತು ಅದರ ಚಿತ್ರಕಥೆ. ಆದರೆ ಅದು ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆದದ್ದು ಚಿತ್ರದ ದೃಶ್ಯದಲ್ಲಿನ ಹೊಸತನ ಮತ್ತು ಮನರಂಜನಾತ್ಮಕ ಅಂಶಗಳಿಂದ ಎನ್ನಬಹುದು. ಅರ್ಥವಾಗದಿದ್ದರೆ ಮತ್ತೊಮ್ಮೆ ಕೂಡ ಬೋರಾಗದೆ ನೋಡಬಹುದಾಗಿತ್ತು.
ಆದರೆ ಲೂಸಿಯಾ ಪ್ರಯೋಗಾತ್ಮಕ ಚಿತ್ರವಾದರೂ ಅದರಲ್ಲಿ ಸ್ವಲ್ಪ ಕ್ಲಾಸ್  ಎನಿಸುವ ನಿರೂಪಣೆ ಬಿಗಿದಪ್ಪಿಕೊಂಡಿತ್ತು.ತಿರುವು ಮುರುಗು ಚಿತ್ರಕಥೆ ಅಲ್ಲಲ್ಲಿ ಪುನರಾವರ್ತನೆಯಾಗಿ ಗುರು ಇನ್ನು ಮಲಗ್ತಾನೆ, ಕನಸು ಕಾಣ್ತಾನೆ ಎಂದು ಸಾಮಾನ್ಯ ಪ್ರೇಕ್ಷಕ ಹೇಳುವಂತಿತ್ತು. ಅದಿರಲಿ ಆದರೆ ಒಂದು ಪ್ರಯೋಗಾತ್ಮಕ ಚಿತ್ರ ಮಾಡುವುದು ಅಂತಹ ಕಷ್ಟದ ಕೆಲಸವಲ್ಲ. ತಲೆಯಲ್ಲಿ ಕಸುವಿದ್ದರೆ ಮಾಡಿಬಿಡಬಹುದು. ಆದರೆ ಮಾಡಿದ ನಂತರ ಅದನ್ನು ಜನರಿಗೆ ತಲುಪಿಸುವುದಿದೆಯಲ್ಲ ಅದು ತಾಕತ್ತಿನ ಕೆಲಸ.
ಆ ವಿಷಯದಲ್ಲಿ ನಿರ್ದೇಶಕ ಪವನ್ ಕುಮಾರ್ ಮೆಚ್ಚುಗೆಗೆ ಅರ್ಹ ಎನ್ನಬಹುದು. ಚಿತ್ರವನ್ನು ಮಾಡಿ, ಅದನ್ನು ಹೆಗಲ ಮೇಲೆ ಹೊತ್ತು, ಜನರನ್ನು ಚಿತ್ರಮಂದಿರದೊಳಕ್ಕೆ ಬರುವಂತೆ ಮಾಡಿದ ಅವರ ಪ್ರಯತ್ನಕ್ಕೆ ದೊಡ್ಡ ಶಹಬ್ಬಾಸ್ ಹೇಳಲೇ ಬೇಕಾಗುತ್ತದೆ. ಹಾಗೆಯೇ ಮಲ್ಟಿಫ್ಲೆಕ್ಸ್ ಸಿನಿಮಾ ಎನ್ನುವ ಸಂಸ್ಕೃತಿ ಹಿಂದಿ ಚಿತ್ರರಂಗದಲ್ಲಿ ಇತ್ತೇ ಹೊರತು ಕನ್ನಡದಲ್ಲಿ ಇರಲೇ ಇಲ್ಲ. ಅದರಲ್ಲೂ ಕನ್ನಡದಲ್ಲಿನ ಕಡಿಮೆ ವೆಚ್ಚದ ಪ್ರಯೋಗಾತ್ಮಕ ಚಿತ್ರವನ್ನು ಮಲ್ಟಿಫ್ಲೆಕ್ಸ್ ನಲ್ಲಿ ಹಣ ತೆತ್ತು ನೋಡುವ ಕನ್ನಡಿಗರೂ ಇರಲಿಲ್ಲ. ಹಾಗಾಗಿ ಕಡಿಮೆ ವೆಚ್ಚದ ಚಿತ್ರಗಳಿಗೆ ಅತ್ತ ಕ್ಲಾಸ್ ಜನರಿಂದಲೂ ಮೆಚ್ಚುಗೆ ಇಲ್ಲದೆ, ಮಾಸ್ ಜನರಿಂದಲೂ ಪ್ರೋತ್ಸಾಹವಿಲ್ಲದೆ ಕೊರಗುವ ಪರಿಸ್ಥಿತಿ ಇದ್ದೆ ಇತ್ತು.
ಸ್ಟಾರ್ ಇದ್ದರೇ ಚಿತ್ರ ಎನ್ನುವಮಾತನ್ನು ಸ್ವಲ್ಪವಾದರೂ ಮಂಕಾಗಿಸಿದ ಪವನ್ ಕನ್ನಡ ಚಿತ್ರರಂಗಕ್ಕೆ ಯುವ ನಿರ್ದೇಶಕರಿಗೆ ಸ್ಫೂರ್ತಿದಾಯಕ ನಿರ್ದೇಶಕ ಎನ್ನಬಹುದು.
ಅವರ ಇಂತಹ ಪ್ರಯತ್ನ ಹೊಸತನ ಯಾವತ್ತಿಗೂ ಹೀಗೆಯೇ ಸಾಗಲಿ ಎನ್ನುವುದು ನನ್ನ ಹಾರೈಕೆ.

Saturday, September 21, 2013

ಔಟ್ ಲಯರ್ಸ್ ಪುಸ್ತಕ.

ನಾನಾಗ ಹತ್ತನೆಯ ತರಗತಿಯಲ್ಲಿದ್ದೆ. ವಿದ್ಯಾರ್ಥಿಗಳೇ ಯಶಸ್ಸು ಕನಸಲ್ಲ ಎಂಬ ಪುಸ್ತಕದ ಬಗ್ಗೆ ಯಾರೋ ಹೇಳಿದ್ದರು. ಕೇಳಿ ಖುಷಿಯಾದ ನಾನು ಅದನ್ನು ತೆಗೆದುಕೊಳ್ಳಲು ಇಡೀ ನಂಜನಗೂಡಿನ ಪುಸ್ತಕ ಅಂಗಡಿಗಳನ್ನು ಹುಡುಕಾಡಿದ್ದೆ. ಆದರೆ ಪುಸ್ತಕ ಸಿಕ್ಕಿರಲಿಲ್ಲ. ಮೈಸೂರಿಗೆ ಹೋಗಿ ತೆಗೆದುಕೊಂಡು ಬರಬೇಕಾಗಿತ್ತಾದರೂ ಅದೂ ಸಾಧ್ಯವಾಗಿರಲಿಲ್ಲ. ಆದರೆ ಅದ್ಯಾವುದೋ ಸ್ಪರ್ಧೆಯಲ್ಲಿ ಗೆದ್ದವನಿಗೆ ಅದೇ ಪುಸ್ತಕ ಬಹುಮಾನವಾಗಿ ಬಂದುಬಿಟ್ಟಿತ್ತು. ನನ್ನ ಸಂತೋಷಕ್ಕೆ ಪಾರವಿರಲಿಲ್ಲ. ಆವತ್ತಿಡೀ ಖುಷಿಯಾಗಿ ಇಡೀ ಪುಸ್ತಕ ಓದಿ ಮುಗಿಸಿದ್ದೆ. ಅದರಲ್ಲಿ ಒಂದು ವಾಕ್ಯವಿತ್ತು .ನೀವು ಪ್ರತಿದಿನ ಮಲಗುವ ಮುನ್ನ ಒಮ್ಮೆ ಈವತ್ತು ನಾನು ಚೆನ್ನಾಗಿ ಓದಿದ್ದೇನೆ ಎಂದು ಹತ್ತಾರು ಸಾರಿ ನಿಮಗೆ ಹೇಳಿಕೊಂಡು ಮಲಗಿ ..ಎಂಬುದು. ನನಗ ನಿಜಕ್ಕೂ ನಗು ಬಂದಿತ್ತು. ಇದರಲ್ಲಿ ಅಂತಹ ವಿಶೇಷವೇನಿದೆ..? ಹೇಳಿಕೊಂಡು ಮಲಗಿದರಾಯಿತು, ಆದರೆವ್ ಅದರಿಂದಾಗುವ ಉಪಯೋಗವಾದರೂ ಏನು? ನಾವು ಚೆನ್ನಾಗಿ ಓದಲು ಪ್ರಾರಂಭಿಸಿಬಿಡುತ್ತೇವೆಯೇ? ಎಂದೆಲ್ಲಾ ನನಗೆ ನಾನೇ ಪ್ರಶ್ನೆಗಳನ್ನು ಹಾಕಿಕೊಂಡು ಪುಸ್ತಕ ಬರೆದ ಸ್ವಾಮೀಜಿಯನ್ನು ನನ್ನಲ್ಲೇ ಅಪಹಾಸ್ಯ ಮಾಡಿದ್ದೆ. ಆದರೆ ಒಮ್ಮೆ ಅದೂ ಒಂದು ಪ್ರಯೋಗ ಆಗಿಬಿಡಲಿ ಎನಿಸಿತು.
ಮೊದಲ ದಿನ ಆರಾಮವಾಗಿ ಹತ್ತಕ್ಕಿಂತಲೂ ಹೆಚ್ಚು ಸಾರಿ ಹೇಳಿಕೊಂಡು, ನನ್ನಲ್ಲೇ ನಕ್ಕು ಮಲಗಿದ್ದೆ. ಎರಡನೆಯ ದಿನವೂ ನನಗೆ ಸಮಸ್ಯೆಯಾಗಲಿಲ್ಲ. ಆದರೆ ಮೂರನೆಯ ದಿನ ಮಾತ್ರ ಹಾಗೆ ಹೇಳಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಮೊದಲ ಬಾರಿಗೆ ನನಗೆ ಆಶ್ಚರ್ಯವಾಗಿತ್ತು. ಸುತಾರಾಂ ಹಾಗೆ ಅಂದುಕೊಳ್ಳಲು ಆಗಲೇ ಇಲ್ಲ. ಕೇಳುವವರಾಗಲಿ, ಪರೀಕ್ಷಿಸುವವರಾಗಲಿ ಯಾರೂ ಇಲ್ಲದಾಗಲೂ ನಮಗೆ ನಾವೇ ಸುಳ್ಳು ಹೇಳಿಕೊಳ್ಳಲು ಸಾಧ್ಯವಿಲ್ಲ ಎನಿಸಿತು.
ಆಮೇಲೆ ಯೋಚಿಸಿದಾಗ ನನಗೆ ಗೊತ್ತಾದದ್ದು ಸುಳ್ಳು ನಾವು ಬೇರೆಯವರಿಗೆ ಮಾತ್ರ ಹೇಳಲು ಸಾಧ್ಯ. ನಮಗೆ ನಾವೇ ಸುಳ್ಳು ಹೇಳಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು. ಆನಂತರ ದಿನದಲ್ಲಿ ಒಂದಷ್ಟು ಓದಿದ್ದರೆ ಮಾತ್ರವೇ ಹಾಗೆ ಹೇಳಿಕೊಳ್ಳಲು ಸಾಧ್ಯವಾಗುತ್ತಿತ್ತು. ಇಲ್ಲವಾದಲಿ ಅತೀವ ನೋವಾಗುತ್ತಿತ್ತು. ಸಂಜೆ ಯಾಯಿತೆಂದರೆ ನಿದಿರೆಗೆ ಜಾರುವ ಮುನ್ನ ದನ್ನು ಹೇಳಿಕೊಳ್ಳಲೇ ಬೇಕಲ್ಲ ಎಂಬುದನ್ನು ನೆನೆದು ಮೈ ನಡುಗುತ್ತಿತ್ತು. ಅದಕ್ಕಾಗಿಯಾದರೂ ಓದುತ್ತಿದ್ದೆ.
 ಮೊನ್ನೆ ಇದನ್ನೆಲ್ಲಾ ನೆನಪಿಸ್ಕೊಂದದ್ದು ಮಾಲ್ಕಂ ಗ್ಲಾದ್ವೆಲ್ ಬರೆದ ಔಟ್ ಲಯರ್ಸ್ ಪುಸ್ತಕ ಓದಿದಾಗ.ಅದೊಂದು ಕಾದಂಬರಿಯಾ, ಜ್ಞಾನಾರ್ಜನೆಯ ಪುಸ್ತಕವಾ, ಸಾಮಾನ್ಯ ಜ್ಞಾನಾವಾ..ಕ್ರೀಡೆಯ. ಸಿನಿಮಾ ಸಂಬಂಧಿ ಪುಸ್ಯಕವಾ ಅಥವಾ ಅದ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕವಾ..? ಎಂಬ ಪ್ರಶ್ನೆಗೆ ಅದು ಎಲ್ಲವೂ ಹೌದು. ಅಥವಾ ಯಾವುದೂ ಅಲ್ಲ ಎನ್ನುವ ಉತ್ತರ ನೀಡಲೇ ಬೇಕಾಗುತ್ತದೆ.
ಅದೊಂದು ದಿನ ಸಿಕ್ಕಿದ ವಾಸುಕಿ ನಿಮ್ಮ ಜೊತೆ ಮಾತನಾಡುವುದಿದೆ ಎಂದರು. ಸಿಕ್ಕಿ ಮಾತಾಡಿ  ಜೊತೆಯಲ್ಲಿ ಊಟಕ್ಕೆ ಕುಳಿತುಕೊಂಡೆವು. ಹೋಟೆಲ್ ಹೊರಗೆ
ಮಳೆ ಸುರಿಯುತ್ತಿತ್ತು. ನಮ್ಮ ಹರಟೆಯೇ ಜಡಿಮಳೆ ಆಗಿತ್ತು.ಮಾತೆಲ್ಲ ಮುಗಿಸಿ, ನನ್ನನ್ನು ಮನೆಯ ಹತ್ತಿರಕ್ಕೆ ಕರೆತಂದು ಹೋಗುವಾಗ ನನ್ನ ಕಡೆಯಿಂದ ಇದೊಂದು ಪುಸ್ತಕ ಎಂದು ವಾಸುಕಿ ನನಗೆ ಅದನ್ನು ಕೊಟ್ಟರು. ಅದಕ್ಕೂ ಮುನ್ನ ಎರಡ್ಮೂರು ಸಾರಿ ಅದರ ಬಗ್ಗೆ ಚಿಕ್ಕ ಪರಿಚಯವನ್ನು ನಮ್ಮ ಹರಟೆಯ ಮದ್ಯ ಸೇರಿಸಿದ್ದರಾದರೂ ನನಗೇಕೋ ಅದು ಸೇರಿರಲಿಲ್ಲ. ಅದು ಇಂಗ್ಲೀಷಿನ ಪುಸ್ತಕವಾದ್ದರಿಂದ ಮತ್ತು ಇಂಗ್ಲೀಷ್ ನನಗೆ ವೇಗವಾಗಿ ಓದಲು ಸಾಧ್ಯವಾಗುವುದಿಲ್ಲವಾದ್ದರಿಂದ ವಾರದಲ್ಲೇ ಓದಿ ಮುಗಿಸುತ್ತೇನೆ ಎಂದುಕೊಂಡೆ. ಆನಂತರ ಅದನ್ನು ಕೈಯಲ್ಲಿ ಹಿಡಿದು ಎಲ್ಲೆಂದರಲ್ಲಿ ಹೋಗುತ್ತಿದ್ದೆ. ಚೂರು ಪಾರು ಸಮಯ ಸಿಕ್ಕಾಗಲೆಲ್ಲಾ ಓದಿ ಮುಗಿಸಿಬಿಡೋಣ ಎನ್ನುವ ಹುನ್ನಾರ ನನ್ನದಾಗಿತ್ತು. ಆದರೇಕೋ ಪುಸ್ತಕ ಆಸಕ್ತಿದಾಯಕ ಎನಿಸುತ್ತಿದ್ದಾದರೂ ಓದಿದ್ದು ಸರಿಯಾಗಿ ತಲೆಗೆ ಹೋಗುತ್ತಲೇ ಇರಲಿಲ್ಲ. ಮತ್ತೆ ಓದಲು ತೆಗೆದುಕೊಂಡಾಗ ಹಳೆಯದು ಮರೆತುಹೋಗಿರುತ್ತಿತ್ತು. ಒಂದೆರೆಡು ತಿಂಗಳಿನ ನಂತರ ನನಗೆ ಅರ್ಥವಾದದ್ದು ಅದು ಹೀಗೆ ಕುಂತಲ್ಲಿ ನಿಂತಲ್ಲಿ ಓದುವ ಪುಸ್ತಕ ಅಲ್ಲ, ಅದು ಮಟ್ಟಸವಾಗಿ ಕುಳಿತುಕೊಂಡು ಓದಲೆಬೇಕಾದ ಪುಸ್ತಕ ಎನ್ನುವುದು.
ಹಾಗಾಗಿ ಒಂದು ವಾರ ಸುಳ್ಯದಲ್ಲಿ ಇದ್ದುದರಿಂದ ಮೊಬೈಲ್ ಕರೆಗಳ ಜಂಜಾಟವಿಲ್ಲದೆ ಕುಳಿತು ಓದಿ ಬಿಟ್ಟೆ. ಮತ್ತೆ ಮತ್ತೆ ಮೆಲುಕುಹಾಕಿದೆ.ಮತ್ತು ಪುಸ್ತಕದ ಸಾಹಿತಿಗೆ ದೊಡ್ಡ ನಮಸ್ಕಾರ ಹಾಕಿಯೂ ಬಿಟ್ಟೆ.
ಗ್ಲಾದ್ ವೆಲ್ ಗೊಂದು ಚಿಕ್ಕದಾದ, ವಾಸುಕಿ ರಾಘವನ್ ಗೊಂದು ದೊಡ್ಡ ನಮನ ನನ್ನ ಕಡೆಯಿಂದ.
ಸಿಕ್ಕಾಗ ಓದಿ ಬಿಡಿ ಅನ್ನುವ ಪುಸ್ತಕ ಇದಲ್ಲವಾದ್ದರಿಂದ ಓದಿಲೆಬೇಕಾದ ಪುಸ್ತಕ ಇದು ತೆಗೆದುಕೊಂಡು ಬಿಡಿ ಎನ್ನುವುದು ಲೇಸು. ಓದಿದ ಮೇಲೆ ಹೇಳಿ..ಏನಂತೀರಾ?

Monday, September 9, 2013

ಮೆಮೆಂಟೊ-ಒಂದು ವಿಶ್ಲೇಷಣೆ.


ಹುಶ: ನಾನು ನೋಡಿದ ಚಿತ್ರ್ರಗಳಲ್ಲೇ ಅದ್ಭುತವಾದ ಅನೇರ ಚಿತ್ರ್ರಕಥೆನ್ನು ಹೊ0ದಿರುವ ಚಿತ್ರ್ರವೆ0ದರೆ ಮಮೆ0ಟೋ. ವಿಭಿನ್ನ ವೈದ್ಯಕೀ ವಿಷಯಾಧಾರಿತ  ಕಥಾವಸ್ತು, ವಿಭಿನ್ನ ನಿರೂಪಣಾ ತಂತ್ರ ಮತ್ತು ನೋಡುಗನಿಗೇ ಹೀಗೆಯೇ ನೋಡಬೇಕೆ0ಬ ಸಿದ್ಧ ಸೂತ್ರವನ್ನು  ಹೊದಿರುವುದು ಈ ಚಿತ್ರದ ವಿಶೇಷ. ನೊಲನ್ ಮೊದಲ ಚಿತ್ರ 'ಫಾಲೋಯಿಂಗ್'    ಮುದುವರೆದ ಭಾಗದ೦ತೆ ಭಾಸವಾಗುವ ನಿರೂಪಣೆ  ಮತ್ತು ಕಥಾ ಹಂದರ ಅವನ ಚಿತ್ರ್ರಕಥೆಗಾರಿಕೆ ಕುಸುರಿನ್ನು ಇನ್ನಷ್ಟು ವಿಶದೀಕರಿಸುವಲ್ಲಿ ಯಶಸ್ವಿಯಾಗಿದೆ.
ಮೆಮೆಂಟೋ 2000 ದಲ್ಲಿ ತೆರೆಗೆ ಬಂದ ಮನೋವೈಜ್ಣಾನಿಕ ರೋಮಾಂಚಕ ಚಲನಚಿತ್ರ. ಕ್ರಿಸ್ಟೋಪರ್ ನೊಲನ್ ಇದರ ನಿರ್ದೇಶಕ.. ಮೊದಲಿಗೆ ಸಿನಿಮಾದ ಬಗ್ಗೆ, ಕಥೆಯ ಬಗ್ಗೆ ಮಾತಾಡೋಣ..
ನಾಯಕ  ಲಿಯೊನಾರ್ಡೋ ಶೆಲ್ಬಿ ಒಬ್ಬ ಇನ್ಷೂರೆನ್ಸ್ ಇನ್ವೆಸ್ಟಿಗೇಟರ್. ಇವನ ಸೇಡಿನ ಸುತ್ತ ಇಡೀ ಕಥೆ ಸುತ್ತುತ್ತದೆ. ಅವನ ಹೆಂಡತಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ, ಆ ಸಂದರ್ಭದಲ್ಲಿ ಕಾಪಾಡಲು ಹೋದ ಶೆಲ್ಬಿಯ ತಲೆಗೆ ಯಾವುದೋ ಹತ್ಯಾರದಿಂದ ಹೊಡೆದದ್ದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅವನಿಗೆ ಅಲ್ಪಕಾಲಿಕ ನೆನಪಿನ ಶಕ್ತಿಯ ರೋಗ ಅಡರಿಕೊಂಡಿದೆ. ಈಗವನ ನೆನಪಿನಕೋಶಕ್ಕೆ ಯಾವುದೇ ಹೊಸ ಘಟನಾವಳಿಗಳ ದಾಖಲೆಗಳನ್ನು ಹದಿನೈದು ನಿಮಿಷಕ್ಕೂ ಹೆಚ್ಚಿಗೆ ಹಿಡಿದಿಟ್ಟು ಕೊಳ್ಳಲಾಗುವುದಿಲ್ಲ. ಅವನ ತಲೆಗೆ ಪೆಟ್ಟು ಬಿದ್ದಾಗಿನಿಂದ ಹಿಂದಿನ ಘಟನೆಗಳು ಅಚ್ಚಳಿಯದೆ ಹಾಗೇ ಕುಳಿತುಬಿಟ್ಟವೇ.. ಅದರಿಂದಾಚೆಗಿನ ಹೊಸ ಹೊಸ ನೆನಪುಗಳು ಅವನಲ್ಲಿ ಉಳಿಯುವುದೇ ಇಲ್ಲ.  ಇಂಥ ಪರಿಸ್ಥಿತಿಯಲ್ಲಿರುವ ಶೆಲ್ಬಿಯು ಆ ಕೊಲೆಗಾರನನ್ನು ಹಿಡಿಯುವುದಾದರೂ ಹೇಗೆ ? ಆದರೆ ದ್ವೇಷಾಗ್ನಿ ದಿನದಿನಕ್ಕೆ , ಕ್ಷಣಕ್ಷಣಕ್ಕೆ ಅವನಲ್ಲಿ ದ್ವಿಗುಣಗೊಳ್ಳುತ್ತಲೇ ಇರುತ್ತದೆ.. ಆ ನೆನಪಿನ ತುಣುಕುಗಳು , ಆ ಆರ್ತನಾದ ಮರುಕಳಿಸಿದರೆ ಸಾಕು ಶೆಲ್ಬಿ ಹುಚ್ಚನಾಗಿ ಬಿಡುತ್ತಾನೆ.. ಅದಕ್ಕಾಗಿ ಶೆಲ್ಬಿ ಕೆಲವೊಂದು ವ್ಯವಸ್ಥೆ ಮಾಡಿಕೊಳ್ಳುತ್ತಾನೆ. ಹೆಗಲಿಗೆ ಒಂದು ಪೊಲಾರಾಯಿಡ್ ಕ್ಯಾಮೆರಾ ನೇತುಹಾಕಿ ಕೊಳ್ಳುತ್ತಾನೆ. ಜೇಬಿನಲ್ಲಿ  ಒಂದಷ್ಟು ಕಾಗದದ ತುಂಡುಗಳು ಮತ್ತು ಮೈಮೇಲೆಲ್ಲ ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾನೆ. ಏನು ಮಾಡಬೇಕು, ಯಾವಾಗ ಮಾಡಬೇಕು ಎಂಬುದೆಲ್ಲಾ ಕನ್ನಡಿಯ ಮುಂದೆ ನಿಂತುಕೊಂಡುಬಿಟ್ಟರೆ ತಿಳಿದುಹೋಗಿಬಿಡುತ್ತದೆ. ಇಂಥ ಶೆಲ್ಬಿಯ ಹಂತಕನ ಬೇಟೆಯ ರೋಮಾಂಚಕ ಪಯಣದಲ್ಲಿ ಹಲವಾರು ಘಟನೆಗಳ ಜೊತೆಗೆ ಮುಖ್ಯವಾಗಿ ಸ್ಯಾಮ್ ಎನ್ನುವವನೊಬ್ಬನ ಉಪಕಥೆ ಬಂದುಹೋಗುತ್ತವೆ. ತನ್ನ ದೌರ್ಬಲ್ಯಗಳ ನಡುವೆಯೂ ಛಲ ಬಿಡದೆ ತ್ರಿವಿಕ್ರಮನಂತೆ ಕೊಲೆಗಾರನನ್ನು ಹುಡುಕಿ ಅವನ ತಲೆಗೆ ಶೂಟ್ ಮಾಡುವುದರೊಂದಿಗೆ ಚಿತ್ರ ಮುಗಿಯುತ್ತದೆ!!
ಹೌದು ! ಮೊದಲ ವೀಕ್ಷಣೆಗೆ ಪ್ರೇಕ್ಷಕನ ಗ್ರಹಿಕೆಗೆ ಬರುವ ಕಥಾಹಂದರ ಇದು. ಸುಮ್ಮನೆ ನೋಡುತ್ತಾ ಹೋದಂತೆ ಇದಿಷ್ಟೆ ಕಥೆ ಅವನ ತೆಕ್ಕೆಗೆ ಸಿಕ್ಕಿ ಒಂದು ಸಾಮಾನ್ಯ ಸೇಡಿನ ಕಥೆ. ಒಂದು ವಿಚಿತ್ರ-ಅಪರೂಪದ ಖಾಯಿಲೆಯ ಜೊತೆಗೆ ಮಿಳಿತವಾಗಿರುವುದು ಗೋಚರಿಸುತ್ತದೆ. ಆದರೆ ಕ್ರಿಸ್ಟೋಪರ್ ನೊಲನ್ ಎನ್ನುವ ಅಸಾಮಾನ್ಯ ಬುದ್ದಿವಂತ ನಿದರ್ೆಶಕ ಇಡೀ ಚಿತ್ರವನ್ನು 2 ಆಯಾಮಗಳಲ್ಲಿ ನಿರ್ದೆಶಿಸಿದ್ದಾನೆ.. ಚಿತ್ರಕಥೆಯೂ ಕೂಡ ಎರಡು ಆಯಾಮದಲ್ಲಿದೆ.
ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು ಎನ್ನುವ ಗಾದೆ ಈ ಚಿತ್ರಕ್ಕೆ ಕರಾರುವಕ್ಕಾಗಿ ಅನ್ವಯವಾಗುತ್ತದೆ. ಕಣ್ಣಮುಂದೆ ನಡೆಯುವ ದೃಶ್ಯದರ್ಥವೇ ಬೇರೆ, ಅದರ ಅಂತರಾರ್ಥವೇ ಬೇರೆ! ಮೇಲ್ನೋಟಕ್ಕೆ ಅರ್ಥವಾಗುವ ಚಿತ್ರದ

ಕಥೆಯ ತಿರುಳಾದ ಹೆಂಡತಿಯ ಕೊಲೆ, ಸೇಡು ಇದಾವುದು ನಿಜದಲ್ಲಿ ಇಲ್ಲವೇ ಇಲ್ಲ. ನಾಯಕ ಶೆಲ್ಬಿಯ ಹೆಂಡತಿಯನ್ನು ಯಾರೂ ಕೊಂದೇ ಇರುವುದಿಲ್ಲ ಎನ್ನುವುದು ಪ್ರೇಕ್ಷಕನಿಗೆ ಮೊದಲ ಶಾಕ್ ! ಹಾಗೆ ಅವಳ ಸಾವಿಗೆ ಕಾರಣವಾದವನು  ಅಥವ ಕೈಯಾರೆ ಕೊಂದವನು ಬೇರೆ ಯಾರೂ  ಅಲ್ಲ ಶೆಲ್ಬಿಯೇ.. ಎನ್ನುವುದು ಎರಡನೇ ಶಾಕ್ ! ಮೊದಲು ಹೇಳಿದ ಕಥೆಗೂ, ಈಗ ಹೇಳುತ್ತಿರುವ ಕಥಾಹಂದರಕ್ಕೂ ಸಾಮ್ಯತೆಯೇ ಬರುತ್ತಿಲ್ಲವಲ್ಲ ಎನಿಸಬಹುದು ಅಥವಾ ಒಂದೇ ಸಿನಿಮಾದಲ್ಲಿ ಎರೆಡೆರೆಡು ಕಥಾಹಂದರ ಕಾಣಿಸುವಂತಹ ಚಿತ್ರಕಥೆ ರಚಿಸಿ ನಿರೂಪಿಸುವುದು  ಸುಲಭದ ಮಾತಲ್ಲ. ನೊಲನ್ ಅದನ್ನಿಲ್ಲಿ ಸಾಧಿಸಿ ಭೇಷ್ ಎನಿಸಿಕೊಂಡಿದ್ದಾನೆ. ಈ ಎರಡನೇ ಕಥೆಯು ನಿಮಗೆ ಅರ್ಥವಾಗಬೇಕಾದರೆ ಸಿನಿಮಾವನ್ನು ಬೇರೆ ರೀತಿಯಲ್ಲಿ ನೋಡಬೇಕಾಗುತ್ತದೆ. ಸುಮ್ಮನೆ ಸಿನಿಮಾ ಕಣ್ಣ ಮುಂದಿದೆ ನೋಡಬೇಕಷ್ಟೆ.. ಎಂದು ನೋಡಿದರೆ ನಿಮಗೆ ಲವಲೇಶವೂ ಅರ್ಥವಾಗದು. ಸಿನಿಮಾದ ದೃಶ್ಯಗಳು ಮನಸ್ಸಿನಲ್ಲೇ ಹಿಂದೆ-ಮುಂದೆ ಮಾಡಿಕೊಳ್ಳಬೇಕಾಗುತ್ತದೆ. ಹಿಂದಿನ ಯಾವುದೋ ದೃಶ್ಯಕ್ಕೆ ಮುಂದಿನ ಯಾವುದೋ ದೃಶ್ಯವನ್ನು ಮನದಲ್ಲಿಯೇ ಜಂಟಿಮಾಡಿ , ಅರ್ಥೈಸಿಕೊಳ್ಳಬೇಕಾಗುತ್ತದೆ.
ಅಂದರೆ ಸಿನಿಮಾವನ್ನು ಅದರದೇ ಆದ ವಿಶೇಷವಾದ ಕ್ರಮದಲ್ಲಿ ನೋಡಬೇಕು. ಅಂದರೆ ಚಿತ್ರದಲ್ಲಿ ಕಪ್ಪು-ಬಿಳುಪು ಮತ್ತು ಬಣ್ಣದ ದೃಶ್ಯಗಳ ಮಿಳಿತವಿದೆ. ಮೊದಲಿಗೆ ಚಿತ್ರದಲ್ಲಿ ಬರುವ ಕಪ್ಪು-ಬಿಳುಪು ದೃಶ್ಯಗಳನ್ನಷ್ಟೆ ನೋಡುತ್ತಾ ಅಥರ್ೆಸಿಕೊಳ್ಳುತ್ತಾ ಸಾಗಬೇಕು. ಚಿತ್ರದ ಕೊನೆಯ ದೃಶ್ಯದಲ್ಲಿ ಕಪ್ಪು-ಬಿಳುಪಿನ ದೃಶ್ಯವು ಬಣ್ಣದ ದೃಶ್ಯವಾಗಿ ಬದಲಾಗುತ್ತದೆ. ಆಗ ಬಣ್ಣದ ದೃಶ್ಯಗಳನ್ನು ಹಿಂದಿನಿಂದ ಮೊದಲನೇ ದೃಶ್ಯದವರೆಗೆ ನೋಡುತ್ತಾ ವಾಪಸ್ ಬರಬೇಕು ಅಂದರೆ ಇಡೀ ಚಿತ್ರದ ದೃಶ್ಯಗಳ ಜೋಡಣೆ ಒಂದು ವೃತ್ತದಂತಿದೆ ಎಲ್ಲಿ ಪ್ರಾರಂಭವಾಗುತ್ತದೋ ಅಲ್ಲೆ ಚಿತ್ರ ಮುಗಿಯುತ್ತದೆ ಅಥವ ಎಲ್ಲಿ ಮುಗಿಯುತ್ತದೋ ಅಲ್ಲೇ ಪ್ರಾರಂಭವಾಗುತ್ತದೆ. ಒ0ದರ್ಥದಲ್ಲಿ ಸಿನಿಮಾ ನೋಡಲು ಕೂಡ ಅದರದೇ ಆದ ಸಿದ್ಧಸೂತ್ರ ಹೊಂದಿರುವ ಅಪರೂಪದ ಚಿತ್ರ ಈ ಮೆಮೆಂಟೋ.
ಚಿತ್ರದ ಒಳಹೂರಣ ಇಂತಿದೆ.
ನತಾಲಿ ಕೈ ಬರಹ.
 ಶೆಲ್ಬಿ ಒಬ್ಬ ಇನ್ಷೂರೆನ್ಸ್ ಇನ್ವೆಸ್ಟಿಗೇಟರ್. ಅವನ ಹೆಂಡತಿಗೆ ಮದುಮೇಹದ ತೊಂದರೆ ಇರುವುದರಿಂದ  ಇನ್ಸುಲಿನ್ ಕೊಡಬೇಕಾಗಿರುತ್ತದೆ.ಆದರೆ ಈ ಖಾಯಿಲೆ ಶೆಲ್ಬಿಯನ್ನು ಆವರಿಸಿದಾಗ ಅವನ ನೆನಪಿನ ಶಕ್ತಿ ಹದಿನೈದು ನಿಮಿಷಕ್ಕಿಳಿಯುತ್ತದೆ. ಆತನ ಹೆಂಡತಿಗೆ ಇದರ ಅರಿವಾದರೂ ಹೊರಗಿನ ಸಮಾಜ, ಮುಖ್ಯವಾಗಿ ಇನ್ಷೂರೆನ್ಸ್ ಕಂಪನಿಯವರು ನಂಬುವುದಿಲ್ಲ. ಹಣ ಹೊಡೆಯುವುದಕ್ಕಾಗಿ ನಾಟಕ ಮಾಡುತ್ತಿದ್ದಾನೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಅತೀವವಾಗಿ ಪ್ರೀತಿಸುವ ಹೆಂಡತಿಗೆ ಗಂಡನ ಪರಿಸ್ಥಿಯ ಬಗ್ಗೆ ಯಾವುದೂ ಸ್ಪಷ್ಟವಾಗುವುದಿಲ್ಲ. ನಿಜಕ್ಕೂ ಆ ತರಹದ್ದೊಂದು ಖಾಯಿಲೆ ಇದೆಯಾ ? ಅಥವ ಗಂಡನೇ ನಾಟಕವಾಡುತ್ತಿದಾನಾ..? ಎಂಬ ಗೊಂದಲಕ್ಕೆ ಬೀಳುತ್ತಾಳೆ. ಆದರೆ ಇದು ಉಲ್ಬಣವಾದಾಗ ತಾನೇ  ತನ್ನ ಗಂಡನನ್ನು  ಪರೀಕ್ಷೆ ಮಾಡುವ ನಿಧರ್ಾರಕ್ಕೆ ಬರುತ್ತಾಳೆ. ಹದಿನೈದು ನಿಮಿಷಕ್ಕೊಮ್ಮೆ ಗಂಡನಿಗೆ ಮರೆತು ಹೋಗುವುದಾದರೆ ತನ್ನ ಇನ್ಸುಲಿನ್ ಇಂಜೆಕ್ಷನ್ ಅನ್ನು ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಪದೆ ಪದೇ ಕೊಡುವಂತೆ ಕೇಳುವುದು..ನಿಜವಾಗಲೂ ಮರೆವಿನ ಖಾಯಿಲೆ ಇದ್ದರೆ ಇ0ಜೆಕ್ಷನ್ ಕೊಡುತ್ತಾನೆ.. ತನ್ನನ್ನು ತುಂಬಾ ಪ್ರೀತಿಸುವ ತನ್ನ ಗಂಡ ನಾಟಕವಾಡುತ್ತಿದ್ದರೆ ಹಾಗೆ ಮಾಡುವುದಿಲ್ಲವೆಂಬ ನಂಬಿಕೆ ಆಕೆಯದು. ಆದರೆ ಆ ಪ್ರಯೋಗದಲ್ಲಿ ಆಕೆ ಇನ್ಸುಲಿನ್ ಓವರ್ ಡೋಸ್ ಆಗಿ  ಸಾಯುತ್ತಾಳೆ. ಆಕೆ ಸತ್ತ ಮೇಲೆ ಶೆಲ್ಬಿ ಆಸ್ಪತ್ರೆ ಸೇರುತ್ತಾನೆ. ದಿನಕಳೆದಂತೆ ಅವನಿಗೆ ತನ್ನ ಪರಿಸ್ಥಿತಿಯ ಸಂಪೂರ್ಣ ಅರಿವು ಮೂಡುತ್ತದೆ. ಹದಿನೈದು ನಿಮಿಷದ ಮೇಲೆ ತನ್ನ ನೆನಪಿನ ಕೋಶದಲ್ಲಿ ಯಾವೊಂದು ಘಟನೆಯೂ ದಾಖಲಾಗುವುದಿಲ್ಲವೆಂಬ ಕಟುಸತ್ಯ ಅರಿವಿಗೆ ಬರುತ್ತದೆ. ಮೊದಮೊದಲಿಗೆ ತಾನಿನ್ನು ಯಾವ ಪುರುಷಾರ್ಥಕ್ಕೆ ಬದುಕಬೇಕು ಅನಿಸುತ್ತದೆ. ತಾನು ಬದುಕಲಿಕ್ಕೆ ಏನಾದರೂ ಕಾರಣ ಅತ್ಯವಶ್ಯ ಎಂದು ಕೊಳ್ಳುವ ಶೆಲ್ಬಿ ಅದಕ್ಕಾಗಿ ತನ್ನ ಹೆಂಡತಿಯನ್ನು ಯಾರೋ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾರೆ ಎಂದು ಸುಳ್ಳು ಕಥೆ ಸೃಷ್ಟಿಸುತ್ತಾನೆ. ನಂತರ ತನ್ನ ಎದೆಯ ಮೇಲೆ ಅದನ್ನೇ ಹಚ್ಚೆಯನ್ನಾಗಿ ಹಾಕಿಸಿಕೊಳ್ಳುತ್ತಾನೆ. ಅವನಿಗೆ ತನ್ನ ದುಸ್ಥಿತಿಯ ಅರಿವು ಚೆನ್ನಾಗಿ
ಮೀಸೆ ಇಲ್ಲದಿರುವುದು ಇರುವುದು.
ಗೊತ್ತಿರುವುದರಿಂದ ಏನೇ ಮಾಡಿಕೊಂಡರೂ ಹದಿನೈದು ನಿಮಿಷದ ನಂತರ ಅದು ಮರೆತು ಹೋಗುವ
, ಮತ್ತದು ಸತ್ಯವೇ ಆಗಿಬಿಡುತ್ತದೆಂಬುದು ನಿಚ್ಚಳ ಸತ್ಯ..ಹಾಗೆ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳುವ ಶೆಲ್ಬಿಯ ಎದೆಯ ಮೇಲಿನ ಹಚ್ಚೆ 'ನಿನ್ನ ಹೆಂಡತಿಯ ಕೊಲೆಗಾರನನ್ನು ಹುಡುಕು'ದ ಪ್ರಕಾರ ತನ್ನ ಹೆಂಡತಿ ನಿಜವಾಗಲೂ ಕೊಲೆಯಾಗಿದ್ದಾಳೆ ಎ0ದು ಭ್ರಮಿಸಿ, ಆ ಸ0ಗತಿಯನ್ನು  ನಿಜವೆಂದೇ ನಂಬಿ ಅದರಂತೆ ಹುಡುಕಲು ಪ್ರಾರಂಭಿಸುತ್ತಾನೆ. ಒಂದು ಸುಳ್ಳು ತುಂಬಾ ದಿನದವರೆಗೆ ಜೀವಂತವಾಗಿದ್ದರೆ ಸತ್ಯವಾಗಿಬಿಡುತ್ತದೆನ್ನುವ ಮಾತು ಇಲ್ಲಿ ನಿಜವಾಗುತ್ತದೆ. ಹಾಗೆ ಹುಡುಕುತ್ತಾ ಸಾಗುವ ಶೆಲ್ಬಿಗೆ ಪರಿಚಯವಾಗುವವನು ಟೆಡ್ಡಿ, ಪೋಲೀಸ್ ಅಧಿಕಾರಿ. ಇವನ ದೌರ್ಬಲ್ಯವನ್ನು ಅರಿತು ಶೆಲ್ಬಿಯನ್ನು ದುರುಪಯೋಗ ಮಾಡಿಕೊಳ್ಳುತ್ತಾನೆ. ಸ್ಥಳೀಯ ಡಾನ್ನನ್ನು 'ಇವನೇ ನಿನ್ನ ಹೆಂಡತಿಯ ಕೊಲೆಗಾರ' ಎಂದು ತೋರಿಸಿ ಅವನನ್ನು ವಿನಾಕಾರಣ ಕೊಲ್ಲಿಸುವ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುತ್ತಾನೆ.. ಅವನನ್ನು ಕೊಲೆಗೈದ ನಂತರ ಅವನ ಅಂದರೆ ಸತ್ತ ಡಾನ್ ನ ಜಾಕೆಟ್ ಧರಿಸಿಕೊಳ್ಳುವ ನಾಯಕ ಅವರ ಜೇಬಲ್ಲಿದ್ದ ಪೇಪರ್ ತುಣುಕೊಂದರಿಂದ DON ಪ್ರೇಯಸಿ ನತಾಲಿಯನ್ನ ಸಂಧಿಸುತ್ತಾನೆ. ನಡೆದ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಹಾಗೆ ನಾಯಕನ ದೌರ್ಬಲ್ಯವನ್ನು ತಿಳಿದುಕೊಳ್ಳುವ ನತಾಲಿ ತನ್ನ ಪ್ರಿಯಕರನನ್ನು ಕೊಲ್ಲಿಸಿದ ಟೆಡ್ಡಿಯ ಕೊಲೆಗೆ ಸಂಚುರೂಪಿಸಿ, ಟೆಡ್ಡಿಯೇ ಶೆಲ್ಬಿಯ ಹೆಂಡತಿಯನ್ನು  ಕೊಂದದ್ದೆಂದು ಹೇಳಿ , ಅವಳನ್ನು ನಂಬಬೇಡ , ಸುಳ್ಳುಗಾರ ಎಂದು ಟೆಡ್ಡಿ ಮೇಲೆ ಎತ್ತಿಕಟ್ಟುತ್ತಾಳೆ.
ತಪ್ಪು ವಿಳಾಸ ಬರೆದುಕೊಳ್ಳುವುದು.
ಇದನ್ನೆಲ್ಲಾ ಕೇಳಿದ ನಾಯಕ ಶೆಲ್ಬಿ ಟೆಡ್ದಿಯ ಫೋಟೋದ ಮೇಲೆ ಕೊಲೆಗಾರನೆಂದು ಬರೆದುಕೊಂಡು ಟೆಡ್ದಿಯನ್ನು ಕೊಲ್ಲಲು ನಿರ್ಧರಿಸುತ್ತಾನೆ. ಟೆಡ್ದಿ ಅದೆಷ್ಟೆ ಬಡಿದುಕೊಂಡರೂ ಕೇಳದೆ ಅವನ ತಲೆಗೆ ಶೂಟ್ ಮಾಡಿ ಅವನನ್ನು ಕೊಲೆಗೈದು ತನ್ನ ಪೊಲಾರಾಯಿಡ್ ಕ್ಯಾಮೆರದಿಂದ ಸತ್ತವನ ಫೋಟೋ ತೆಗೆದು ಅದರ ಮೇಲೆ ಕೊಂದದ್ದಾಯಿತೆಂದು ದಾಖಲಿಸಿದರೂ ಆ ಕ್ಷಣದಲ್ಲಿ ಶೆಲ್ಬಿ ಕುಳಿತು ಯೋಚಿಸುತ್ತಾನೆ. ಇನ್ನು ಮೇಲೆ ಆ ಫೋಟೋ ತನ್ನ ಬಳಿಯಿದ್ದರೆ, ತನ್ನ ಸೇಡು ಮುಗಿದು ಹೋದರೆ  ನಾಳೆಯಿಂದ ತಾನು ಬದುಕುವುದಾದರೂ ಏತಕ್ಕೆ ! ಮುಂದಿನ ಹದಿನೈದು ನಿಮಿಷದ ನಂತರ ತಾನು ಯೋಚಿಸಿದ್ದು, ಯೋಜಿಸಿದ್ದು, ಕಾರ್ಯರೂಪಕ್ಕೆ ತಂದಿದ್ದು ಎಲ್ಲವೂ ತನಗೆ ನೆನಪೇ ಇರುವುದಿಲ್ಲವೆನ್ನುವ ಕಹಿಸತ್ಯದ ಅರಿವು ಅವನಿಗಿದೆಯಾದ್ದರಿಂದ ತನ್ನ ಜೀವನದ ಧ್ಯೇಯೋದ್ದೇಶವನ್ನು ಜೀವಂತವಾಗಿಡಲು, ತನ್ನ ಗುರಿಯನ್ನು ಎಂದೂ ಸಾಯಗೊಡದಿರಲು ಯೋಚಿಸಿ 'ಕೊಂದದ್ದಾಯಿತು' ಎಂದು ಬರೆದಿದ್ದ ಫೋಟೋವನ್ನು ಸುಟ್ಟು ಹಾಕಿಬಿಡುತ್ತಾನೆ. ಆ ಮೂಲಕ ತನ್ನ ಗುರಿಯನ್ನು ತನ್ನ ಸೇಡನ್ನು ಜೀವಂತಗೊಳಿಸುತ್ತಾನೆ.
ಮುದ್ರಿತ ಬರಹದ ಶೈಲಿ.

ಇಂಥ ಸಂಕೀರ್ಣವಾದ ಕಥೆಯನ್ನು ನೊಲನ್ ಅಷ್ಟೆ ಸಂಕೀರ್ಣವಾಗಿ, ಸೂಕ್ಷ್ಮವಾಗಿ ನಿರೂಪಿಸುತ್ತಾನೆ. ಮೊದಲನೆಯದಾಗಿ ತಿರುಗು ಮುರುಗಾದ ಚಿತ್ರಕಥೆಯನ್ನು ಜೋಡಿಸಿಕೊಂಡು ದೃಶ್ಯದ ಬಾಲವನ್ನು  ಮಧ್ಯದಲ್ಲಿ ಬರುವ ಇನ್ನೊಂದು ದೃಶ್ಯದ ತಲೆಗೆ ಅಂಟಿಸಿ, ತಾಳೆ ನೋಡಿ ಅಥರ್ೆಸಿಕೊಳ್ಳಬೇಕಾದ ಶ್ರಮ ಪ್ರೇಕ್ಷಕನದು. ಎರಡನೆಯದಾಗಿ ಪ್ರತಿಯೊಂದು ದೃಶಿಕೆಯನ್ನು ಎವೆಯಿಕ್ಕದೆ ನೋಡಲೇಬೇಕಾದ ಅನಿವಾರ್ಯತೆ ಇದೆ ಯಾಕೆಂದರೆ ಕ್ಷಣಾರ್ಧದಲ್ಲಿ ಮಾಯವಾಗುವ ಒಂದು ದೃಶಿಕೆಯಲ್ಲಿ ಇಡೀ ಚಿತ್ರದ ಗಂಟೊಂದನ್ನು ಬಿಡಿಸುವ ಸೂತ್ರದಾರವಿರುತ್ತದೆ  ಅದಕ್ಕೆ ಎಲ್ಲೂ, ಯಾವುದನ್ನೂ ಮಿಸ್ ಮಾಡಿಕೊಳ್ಳದೆ ಚಿತ್ರಪರದೆಗೆ ಕಣ್ಣಂಟಿಸಿಕೊಂಡು ಕುಳಿತುಬಿಡಬೇಕಾಗುತ್ತದೆ..ಯಾಕೆಂದರೆ ಚಿತ್ರದ ನಾಯಕ ತನ್ನದೇ ಜೀವನದ ಕಥೆಯನ್ನು ಬೇರೊಬ್ಬ ವ್ಯಕ್ತಿಯ ಕಥೆಯೊಂದಿಗೆ ಸಮೀಕರಿಸಿಕೊಳ್ಳುತ್ತಾನೆ. ಚಿತ್ರ ನೋಡುತ್ತಾ ಹೋದಂತೆ ಅದು ಬೇರೊಂದು ಕಥೆಯಾಗಿಯೇ ಸಾಗುತ್ತದೆ. ಚಿತ್ರದಲ್ಲಿ ಆ ಕಥೆಯು ಅಂತ್ಯವಾಗುವಲ್ಲಿ ಒಂದೇ ಒಂದು ಫ್ರೇಮ್ನಲ್ಲಿ ಆಸ್ಪತ್ರೆಯಲ್ಲಿ ಕುಳಿತ ಆ ವ್ಯಕ್ತಿಯ ಬದಲಿಗೆ, ನಾಯಕ ಕುಳಿತಿರುವುದನ್ನು ತೋರಿಸಿ, ನಿದರ್ೆಶಕ ಇದು ನಾಯಕನ ಕಥೆಯೇ ಎಂಬುದನ್ನು ಬಿಚ್ಚಿಡುತ್ತಾನೆ. ಕ್ಷಣಮಾತ್ರದಲ್ಲಿ ಬಂದು ಹೋಗುವ ಆ ಒಂದು ಚಿತ್ರಿಕೆ, ಚಿತ್ರದ ಇಡೀ ತಿರುಳನ್ನು ವಿವರಿಸುವಲ್ಲಿ ಯಶಸ್ವಿಯಾಗುತ್ತದೆ, ಹಾಗೆ ತನ್ನ ಹೆಂಡತಿಗೆ ಇನ್ಸುಲಿನ್ ಇಂಜೆಕ್ಟ್ ಮಾಡುವುದೂ ಕೂಡ ಕ್ಷಣಾರ್ಧದಲ್ಲಿ ತೋರಿಸಿ, ನಂತರ ಬೇರೆ ದೃಶಿಕೆಯನ್ನು ಅಂಟಿಸಿ, ಪ್ರೇಕ್ಷಕರ ಗಮನವನ್ನು ಬೇರೆಡೆಗೆ ತಿರುಗಿಸಿಬಿಡುತ್ತಾನೆ ನಿದರ್ೆಶಕ. ಇಷ್ಟೆಲ್ಲವನ್ನೂ ಅಥರ್ೆಸಿಕೊಂಡು, ಸರ್ಕಸ್ಸು ಮಾಡಿಕೊಂಡು ಸಿನಿಮಾ ನೋಡತೊಡಗಿದರೆ ಸಿನಿಮಾ ಕೊಡುವ ಮಜವೇ ಬೇರೆ ! ನಾಯಕ ತನ್ನನ್ನೇ ತಾನೇ ನಿಯಂತ್ರಿಸಿಕೊಳ್ಳುವುದು, ತನ್ನ ದೌರ್ಬಲ್ಯವನ್ನು ಸಾಮಾನ್ಯ ಎನ್ನುವಂತೆ ಹೇಳುವುದು, ಓಡುತ್ತಾ ಓಡುತ್ತಾ ಯಾಕೆ ಓಡುತ್ತಿದ್ದೇನೆಂಬುದನ್ನ ಮರೆತುಬಿಡುವುದು, ನತಾಲಿ ನಾ ನಿನಗೆ ಹದಿನೈದು ನಿಮಿಷದ ನಂತರ ಬಂದು, ಸುಳ್ಳು ಹೇಳಿ ಮೋಸಮಾಡುತ್ತೇನೆಂದು ಹೇಳಿ, ಪೇಪರು-ಪೆನ್ನುಗಳು ಕೈಗೆ ಸಿಗದಂತೆ ಮಾಡಿದಾಗ, ತನಗೆ ನತಾಲಿ ಮೋಸ ಮಾಡುತ್ತಾಳೆ ಎಂಬುದು ಗೊತ್ತಾಗಿ, ಅದನ್ನ ಬರೆದಿಡಲು ಕಾಗದ-ಪೆನ್ನಿಗಾಗಿ ಹುಡುಕಾಡುವುದು.. ಮುಂತಾದ ದೃಶ್ಯಗಳು ನಾಯಕನ ಮೇಲೆ ಕರುಣೆ, ಪ್ರೀತಿಯ ಮಿಶ್ರಭಾವ ಮೂಡಿಸುತ್ತವೆ.
ಬಾಗಿಲು ಒಮ್ಮೆ ಎಡಕ್ಕೆ ಒಮ್ಮೆ ಬಲಕ್ಕೆ
ಹಾಗೆ ಆ ದೃಶ್ಯಗಳನ್ನ ಹೆಣೆದಿರುವುದು, ಚಿತ್ರೀಕರಿಸಿರುವ ರೀತಿ ನೊಲನ್ ನಿರ್ದೇಶನದ ದಕ್ಷತೆಯ ಬಗ್ಗೆ ಹೆಮ್ಮೆ ಮೂಡಿಸುತ್ತದೆ.
ಯಾಕಿಂಥ ಸರ್ಕಸ್ಸು ಸಿನಿಮಾ ನೋಡಲು.. ಸರಳವಾಗಿ ನಿರೂಪಿಸಬಹುದಿತ್ತಲ್ಲ..? ಎಂಬ ಪ್ರಶ್ನೆಯನ್ನು ಪತ್ರಕರ್ತರು ನಿದರ್ೆಶಕ ನೊಲನ್ ಮುಂದಿಟ್ಟಾಗ, ಅವನು ಕೊಟ್ಟ ಉತ್ತರ ಇಂತಿದೆ.
 ನಮ್ಮ ಚಿತ್ರದಲ್ಲಿರುವ    ಮುಮ್ಮುಖ ಮರೆವು ಅಥವ ಆಂಟೆರೋಗ್ರೇಡ್ಖಾಯಿಲೆ ಅಥವಾ ಅರೆಕಾಲಿಕ ನೆನಪಿನ ಶಕ್ತಿ ಎಂಬ ಖಾಯಿಲೆ ತುಂಬಾ ಅಪರೂಪವಾದದ್ದು. ಪ್ರೇಕ್ಷಕರಿಗೆ ಈ ತರಹದ್ದೊಂದು ಖಾಯಿಲೆ ವಾಸ್ತವವಾಗಿ ಇದೆಯಾ? ಎಂಬ ಸಂಶಯ ಬರುವುದು ಸಹಜ. ಆ ನಿಟ್ಟಿನಲ್ಲಿ ಆ ಖಾಯಿಲೆಯ ಪ್ರಭಾವ ಅವರಿಗೆ ನೇರವಾಗಿ ಆಗುವಂತೆ ಸಣ್ಣದೊಂದು ಪ್ರಯೋಗವನ್ನು ಚಿತ್ರಕತೆಯ ಮೂಲಕ ಮಾಡಿದ್ದೇನೆ. ನೋಡುನೋಡುತ್ತಲೇ ಪ್ರೇಕ್ಷಕನಿಗೆ ತಾನೇ ಹದಿನೈದು ನಿಮಿಷದ ಹಿಂದೆ ನೋಡಿದ ದೃಶ್ಯ ಮರೆತುಹೋಗುತ್ತದೆ, ಅಥವ ಕಥೆ ಹಿಡಿತಕ್ಕೆ ಸಿಗುವುದಿಲ್ಲ. ಪ್ರೇಕ್ಷಕ ಹಿಂದಿನ ದೃಶ್ಯವನ್ನು ಸರಿಯಾಗಿ ನೆನಪಿಟ್ಟುಕೊಳ್ಳದ ಹೊರತು ಮುಂದಿನ ದೃಶ್ಯಕ್ಕೆ ಲಿಂಕ್ ಸಿಗುವುದಿಲ್ಲ ಅಂದರೆ ತೆರೆಯ ಮೇಲೆ ನಾಯಕ ನೆನಪಿಟ್ಟುಕೊಳ್ಳಲು ಕಾಗದ, ಹಚ್ಚೆ, ಫೋಟೋಗಳನ್ನು ಬಳಸುವಂತೆ, ತೆರೆಯ ಮುಂದೆ ಕುಳಿತ ಪ್ರೇಕ್ಷಕ ತನ್ನ ಬುದ್ಧಿಮತ್ತೆಯನ್ನು ಬಳಸಬೇಕು. ಚಿತ್ರದಲ್ಲಿ ನಾಯಕನ ಮೇಲೆ ಆ ಖಾಯಿಲೆ ಬೀರುವ ಪರಿಣಾಮವನ್ನೂ ನೋಡುಗ ಕೂಡ ಸಿನಿಮಾ ನೋಡುವವರೆಗೆ ಪ್ರಾಯೋಗಿಕವಾಗಿ ಅನುಭವಿಸಬೇಕಾಗುತ್ತದೆ. ಚಿತ್ರ ಮುಗಿಯುವಷ್ಟರಲ್ಲಿ  ಈ ತರಹದ ರೋಗ ಎಲ್ಲಿದೆ ಎಂಬ ಪ್ರಶ್ನೆಗೆ ಸ್ವಾನುಭವದ ಉತ್ತರ ದೊರಕಿರುತ್ತದೆ.. ಅದೇ ನನ್ನ ಉದ್ದೇಶ....
ಬಿದ್ದಿರುವವನಿಗೂ ಅಲ್ಲೇ ತೆಗೆದ ಫೋಟೋ ಕ್ಕೂ ಇರುವ ವ್ಯತ್ಯಾಸ...
ಎಂಥ ಬುದ್ಧಿವಂತಿಕೆಯಿಂದ ಕೂಡಿದ ಉತ್ತರ ನೋಡಿ !
ಸಿನಿಮಾದೊಳಗಿನ ಸಮಸ್ಯೆಯನ್ನು ಸಿನಿಮಾದ ಹೊರಗೆ ಕುಳಿತ ಪ್ರೇಕ್ಷಕನಿಗೆ ದಾಟಿಸಿ ಅವನನ್ನೇ ನಾಯಕನನ್ನಾಗಿಸಿ ಅವರ ಪ್ರಶ್ನೆಗಳಿಗೆ ಅನುಭವರೂಪದ ಉತ್ತರ ಕೊಡುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ.ಇಷ್ಟೆಲ್ಲಾ ಬುದ್ಧಿವಂತಿಕೆಯಿ0ದ ಕೂಡಿದ ಚಿತ್ರಕಥೆ ಹೊಂದಿರುವ ಮೆಮೆಂಟೋ ಚಿತ್ರ ತಾಂತ್ರಿಕ ಅಂಶದಲ್ಲೂ ಅಷ್ಟೆ ಶ್ರೀಮಂತವಾಗಿದೆ. ಚಿತ್ರದ ಮೊದಲ ದೃಶ್ಯವೇ 'ಹಿಂದೆ' ಚಲಿಸುವ ಮೂಲಕ ಇಡೀ ಚಿತ್ರವೇ 'ಹಿಂದೆ-ಮುಂದೆ' ಎಂಬ ಸೂಕ್ಷ್ಮವನ್ನು ತೆರೆದಿಡುತ್ತದೆ. ನಾಯಕನ
ಪಾತ್ರಧಾರಿ ಗೈ ಪಿಅರ್ಸ್ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾನೆ. ಮೊದಲಿಗೆ 'ಬ್ರಾಡ್ ಪಿಟ್' ನಿರ್ವಹಿಸಬೇಕಾಗಿದ್ದ ಪಾತ್ರವದು. ಕಾರಣಾಂತರಗಳಿಂದ ಆ ಪಾತ್ರ ಗೈ ಪಿಯಸರ್್ ಪಾಲಾಯಿತು. ನತಾಲಿಯಾಗಿ ಆನ್ ಮೋಸ್, ಟೆಡ್ಡಿಯಾಗಿ ಜೋ ಪಾಂಟೋಲಿಯಾನೋ ತಮ್ಮ ತಮ್ಮ ಪಾತ್ರಗಳನ್ನು ಪಾತ್ರೋಚಿತವಾಗಿ ಅಭಿನಯಿಸಿದ್ದಾರೆ.

ಸುಮಾರು 25 ದಿನಗಳಲ್ಲಿ ಚಿತ್ರೀಕರಿಸಿರುವ ಈ ಚಿತ್ರ ಮೊದಲಿಗೆ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕ, ವಿಮರ್ಶಕರ ಮೆಚ್ಚುಗೆ ಗಳಿಸಿದ್ದಷ್ಟೇ ಅಲ್ಲ ಗಲ್ಲಾಪೆಟ್ಟಿಗೆಯನ್ನೂ    ಕೊಳ್ಳೇ ಹೊಡೆದು ಅತ್ಯಂತ ಯಶಸ್ವಿ ಚಿತ್ರವಾಯಿತು. ಪ್ರಾರಂಭದಲ್ಲಿ ಕೇವಲ ಹನ್ನೊಂದೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೆಮೆಂಟೋ ಬರುಬರುತ್ತಾ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಕೊನೆಕೊನೆಗೆ ಐದುನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಮೂಲಕ ತನ್ನ ಪ್ರಾಬಲ್ಯ ಮೆರೆಯಿತು.
ಅತ್ಯುತ್ತಮ ಮೂಲ ಚಿತ್ರಕಥೆ ಮತ್ತು ಸಂಕಲನ ಕ್ಷೇತ್ರಗಳಿಗೆ 'ಆಸ್ಕರ್'ಗೆ ನಾಮಾಂಕಿತವಾಯಿತಾದರೂ 'ಜೊನಾಥನ್ ನೊಲನ್'ನ ಸಣ್ಣಕತೆ ಮೆಮೆಂಟೋ ಬಿಡುಗಡೆಗೆ ಮುನ್ನಾ ಎಲ್ಲೂ ಮುದ್ರಣಗೊಂಡಿರಲಿಲ್ಲವಾದ್ದರಿಂದ ಸ್ವಲ್ಪದರಲ್ಲಿ ಕೈ ತಪ್ಪಿ ಹೋಯಿತು. ಆದರೂ ಬರೀ ಚಿತ್ರಕತೆಗಾಗಿ ಸುಮಾರು 13 ಪ್ರತಿಷ್ಠಿತ ಪ್ರಶಸ್ಥಿಗಳನ್ನೂ, ಉತ್ತಮ ಚಿತ್ರಕ್ಕಾಗಿ 5 ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿತಲ್ಲದೆ,
ನೊಲನ್ನನ್ನು ವಿಶಿಷ್ಟ ನಿದರ್ೆಶಕ ಎಂಬ ಪಟ್ಟಕ್ಕೇರಿಸಿತು ಮತ್ತು 'ಸಾರ್ವಕಾಲಿಕ 100 ಅತ್ಯುತ್ತಮ ಸಿನಿಮಾಗಳು' ಪಟ್ಟಿಯಲ್ಲಿ 61 ನೇ ಸ್ಥಾನದಲ್ಲಿರುವ ಮೆಮೆಂಟೋ ಸಿನಿಪ್ರಿಯರು, ಸಿನಿಮಾದವರೂ ನೋಡಲೇ ಬೇಕಾದ ಚಿತ್ರವಾಗಿದೆ.
ಕ್ರಿಸ್ಟೋಪರ್ನೊಲನ್ನ ಸಹೋದರ ಜೊನಾಥನ್ನೊಲನ್ ಬರೆದ ಸಣ್ಣಕತೆಯಾಧಾರಿತ ಸಶಕ್ತ ಕಥೆಯ ಈ ಚಿತ್ರವನ್ನು ಅದರ ಕ್ರಮದಲ್ಲೇ ನೋಡಿ, ಸಂಪೂರ್ಣ ಅರ್ಥ ಮಾಡಿಕೊಂಡರೂ ಕೆಲವೊಂದು ಪ್ರಶ್ನೆಗಳು ಹಾಗೆಯೇ ಉಳಿದುಬಿಡುತ್ತವೆ.. ಬಹುಶಃ ಆ ಪ್ರಶ್ನೆಗಳಿಗೆ ನೊಲನ್ ಸ್ವತಃ ಉತ್ತರಿಸಬೇಕೇನೋ..?
   ಶಾರ್ಟ್ ಟೈಮ್ ಮೆಮೊರಿ ಲಾಸ್ಸ್ ಖಾಯಿಲೆಯಿಂದ ಬಳಲುತ್ತಿರುವ ನಾಯಕ ನಮಗೆ ನಿರೂಪಿಸುವ ಕಥೆ ಎಷ್ಟರ ಮಟ್ಟಿಗೆ ಸತ್ಯವಾದದ್ದು..? ಅಥವ ಎಷ್ಟರ ಮಟ್ಟಿಗೆ ನಂಬಲರ್ಹವಾದುದು.
    ಟೆಡ್ಡಿ ತನ್ನ ಕಾರನ್ನು ಪಾಳುಬಿದ್ದ ಕಟ್ಟಡದ ಮುಂದೆ ನಿಲ್ಲಿಸಿದಾಗ ನಾಯಕ ಆ ಕಾರಿನ ಸಂಖ್ಯೆ
SG137IU0ದಿರುತ್ತದೆ. ಆದರೆ ಅದನ್ನು SG1371U ಎಂದು ಕಾಗದದ ಮೇಲೆ ಬರೆದುಕೊಳ್ಳುತ್ತಾನೆ. ಹಾಗೆ ತೊಡೆಯ ಮೇಲೆ SG1371U ಎಂದು ಹಚ್ಚೆ ಹಾಕಿಸಿಕೊಳ್ಳುತ್ತಾನೆ. ಮುಂದಿನ ದೃಶ್ಯದಲ್ಲಿ ಮತ್ತದೇ ಕಾರಿನ ನಂಬರ್ ಪ್ಲೇಟ್ನಲ್ಲಿ SG1371U ಎಂದೇ ಇರುತ್ತದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಾ.?    ಟೆಡ್ಡಿಯ ಡ್ರೈವರ್ ಲೈಸನ್ಸ್ ಮೇಲೆ ಎಕ್ ಸ್ಪೈರಿ ದಿನಾಂಕ 02/29/01 ಎಂದಿರುತ್ತದೆ.. ಆದರೆ 2001 ರ ಫೆಬ್ರವರಿ ಅಧಿಕವರ್ಷ ಅಲ್ಲ. ಆದ್ದರಿಂದ 29 ಬರುವುದು ಸಾಧ್ಯವೇ ಇಲ್ಲ.. ಇದು ಹೇಗೆ..?
     ಬಾತ್ ರೂಮಿನಲ್ಲಿ ಹೆಂಡತಿಯ ಕೊಲೆಯಾದ ಘಟನೆಯ ಪ್ಲಾಶ್ ಬ್ಯಾಕ್ನಲ್ಲಿ ಬಾತ್ ರೂಮಿನ ಬಾಗಿಲು ಒಂದು ಸಾರಿ ತೋರಿಸುವಾಗ ಬಲಗಡೆಯಿಂದ ತೆರೆದಿದ್ದರೆ, ಮತ್ತೊ0ದು ಸಾರಿ ತೋರಿಸುವಾಗ ಎಡಗಡೆಯಿಂದ ತೆರೆದಿರುತ್ತದೆ.  ನತಾಲಿಯ ಅಪಾರ್ಟ್ಮೆಂಟ್ ನಲ್ಲಿ ಲ್ಯಾರಿ ಜೊತೆಗಿನ ಫೋಟೋದಲ್ಲಿ ಒಂದು ಸಾರಿ ಮೀಸೆ ಇದ್ದರೆ ಮತ್ತೊಂದು ಸಾರಿ ಮೀಸೆ ಇರುವುದಿಲ್ಲ.
       ನತಾಲಿ, ನಾಯಕ ಲೆನ್ನಿಗೆ ಡಾಡ್ ನನ್ನು ಹುಡುಕಲು ಹೇಳಿ, ಅವನು (ಪ್ರೇಕ್ಷಕರಿಗೆ ಗೊತ್ತಾಗುವಂತೆ) ಸಿಗುವ ವಿಳಾಸವನ್ನು ಮಾ0ಟ್ ರೆಸ್ಟ್ ಇನ್0ದು ಬರೆದುಕೊಟ್ಟರೆ ನಾಯಕ ಅದನ್ನು 'ಮಾಂಟ್ ಕ್ರೆಸ್ಟ್ ಇನ್' ಎಂದು ಉಚ್ಚರಿಸುತ್ತಾನೆ.. ಆದರೆ ಆ ಹೋಟೆಲ್ ಹತ್ತಿರ ಹೋದಾಗ ಅದರ ಹೆಸರು 'ಮಾಂಟ್ ಕ್ರೆಸ್ಟ್ ಇನ್' 0ದೇ ಇರುತ್ತದೆ
   
ಇಡೀ ಚಿತ್ರದಲ್ಲಿ 'ನತಾಲಿ'ಯ ಕೈ ಬರಹ ಬೇರೆ, ಬೇರೆಯಾಗಿರುತ್ತದೆ. ಅದು ಪ್ರೇಕ್ಷಕರ ಗಮನಕ್ಕೆ ಬರುವಂತೆ..!!
   ಚಿತ್ರದಲ್ಲಿ ಶೆಲ್ಬಿ ತನ್ನ ಮೈಮೇಲೆಲ್ಲಾ ನೆನಪಿಡಬೇಕಾದ ಸಂಗತಿಗಳನ್ನು ಹಚ್ಚೆ ಹಾಕಿಸುಕೊಂಡಿರುವ ಬರಹದ ಶೈಲಿ ಮುದ್ರಿತ ಅಕ್ಷರದಲ್ಲಿವೆ.ಆದರೆ ಕೈ ಮೇಲೆ ಮಾತ್ರ ಕೈಬರಹದ ರೂಪದಲ್ಲಿದೆ..!!
 ಈ ಮೇಲ್ಕಂಡವು ಮೇಲ್ನೋಟಕ್ಕೆ ಚಿತ್ರೀಕರಣದ ಹಂತದಲ್ಲಾದ ತಪ್ಪುಗಳೆನಿಸುವುದು ಸಹಜ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ ಅವೆಲ್ಲವನ್ನು ನಿರ್ದೇಶಕನ ಪ್ರಜ್ಞಾಪೂರ್ವಕವಾಗಿಯೇ ಬೇಕಂತಲೇ ಮಾಡಿದ್ದಾನೆನ್ನುವುದು. ಹೇಗೆ ಲಿಯೋನಾರ್ಡೋ ಶೆಲ್ಬಿಯ ನೆನಪಿನ ಶಕ್ತಿಯನ್ನು ನಂಬುವ ಹಾಗಿಲ್ಲವೋ.. ಹಾಗೆ ನಮ್ಮ ನೆನಪಿನ ಶಕ್ತಿಯೂ ನೂರಕ್ಕೆ ನೂರು ನಂಬಲರ್ಹವಲ್ಲ. ಅವು ಕಾಲಕಾಲಕ್ಕೆ ಬದಲಾಗುತ್ತವೆ. ನಮ್ಮ ಗ್ರಹಿಕೆಗೂ ವಾಸ್ತವ ಸಂಗತಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ಸೂಚ್ಯವನ್ನು ವಿಶದೀಕರಿಸಲು ನಿರ್ದೇಶಕನ ಜಾಣ್ಮೆಯಿಂದ ಚಿತ್ರಕಥೆ ಹೆಣೆದಿದ್ದಾನೆ. ಮತ್ತದರಲ್ಲಿ ಯಶಸ್ವಿಯೂ ಆಗಿದ್ದಾನೆ. ಈಗಾಗಲೇ ಸುಮಾರು ಜನ 'ಮೆಮೆಂಟೋ' ಚಿತ್ರವನ್ನುನೋಡಿರಬಹುದು, ಅರ್ಥೈಸಿಕೊಂಡಿರಬಹುದು. ಈಗ ಮತ್ತೊಮ್ಮೆ   ಮಗದೊಮ್ಮೆ ನೋಡಿ..
ಪ್ರತಿಸಾರಿಯು ಕೊಡುವ ಹೊಸಹೊಸ ಅನುಭವವನ್ನು ಎಂಜಾಯ್ ಮಾಡಿ.

ಕೊಸರು : ನಿರ್ದೇಶಕ ನೊಲನ್ ಬರೀ ಸಿನಿಮಾಕ್ಕಷ್ಟೇ ಅಲ್ಲ ಚಿತ್ರದ ಪ್ರತಿಯೊಂದು ಅಂಶಕ್ಕೂ ತುಂಬಾ ತಲೆ ಕೆಡಿಸಿಕೊಂಡಿದ್ದಾನೆ.  ಮೊದಲನೆಯದಾಗಿ ಚಿತ್ರದ ಪೋಸ್ಟರ್, ಫೋಟೋದೊಳಗೆ ಫೋಟೋ.. ನೀವು ಅದನ್ನು zoom in ಮಾಡುತ್ತಾ ಹೋದರೂ ಒಳಗೊಂದು ಚಿತ್ರದೊಳಗೊಂದು, ಚಿತ್ರದೊಳಗೊಂದು ಚಿತ್ರ.. ಹೀಗೆ ಸಾಗುತ್ತ ಹೋಗುತ್ತದೆ. ಎರಡನೆಯದಾಗಿ ಈ ಸಿನಿಮಾದ 'ವೆಬ್ಸೈಟ್'ಗೆ ಉಲ್ಟಾ ಹೆಸರು OTNEMEM’ ' ಎಂದು ಹೆಸರಿಟ್ಟಿರುವುದು.
         ಮೂರನೆಯದಾಗಿ 'ಮೆಮೆಂಟೊ' ಸಿನಿಮಾದ 'DVD' ಯಲ್ಲೂ ಹೊಸತನ ತೋರಿದ್ದಾನೆ.ಅದರಲ್ಲಿ ಸಿನಿಮಾದ ಎರಡು ವಿಧದ ಆವೃತ್ತಿಯ ಜೊತೆಗೆ  ಅದರಲ್ಲೇ 'ಗೇಮ್ ಕೂಡ ಇಟ್ಟು ಮೆದುಳಿಗೂ' ಕಸರತ್ತು ನೀಡಿದ್ದಾನೆ.
[ನನ್ನ ಎರಡನೆಯ ಪುಸ್ತಕ ಚಿತ್ರವಿಚಿತ್ರ-ಜಗತ್ತಿನ ಅಪೂರ್ವ ಚಿತ್ರಗಳ ಬಗೆಗಿನ ಲೇಖನಗಳು -ದಿಂದ ಆಯ್ದ ಒಂದು ಲೇಖನ]

ಜಗತ್ತು ಬದಲಾಯಿತು.......ಭಾಗ -16



ಸೋಮವಾರದ ದಿನ ಬೇಗನೆ ಆಫೀಸಿಗೆ ಹೊರಟುಬಂದೆ. ನನಗೆ ನಿನ್ನೆ ಉಮಾಶಂಕರ ಬಿಟ್ಟು ಹೋದ ಮೇಲೆ ಅವರ ಮನೆಯಲ್ಲಿ ಏನು ನಡೆದಿರಬಹುದು ಎಂಬ ಕುತೂಹಲವಿತ್ತು. ಆತ ಅಷ್ಟೆಲ್ಲಾ ಮಾತನಾಡಿ ಹೋದ ಮೇಲೆ ಮನೆಯಲ್ಲಿ ಸುಮ್ಮನಿರುತ್ತಾನೆ ಎಂದು ನನಗನಿಸಲಿಲ್ಲ. ಇನ್ನಷ್ಟು ಮಾತಾಡಿರಬಹುದು ಅಥವಾ ಗೆಲುವಿನ ನಗೆ ಬೀರಿ ಕಿರಿಕಿರಿ ಹುಟ್ಟಿಸಿರಬಹುದು ವೇದಾ ಮೇಡಂ ಗೆ ಎನಿಸಿತ್ತು. ಹಾಗಾಗಿ ಬೆಳಿಗ್ಗೆ ಬೇಗನೆ ಓಡಿ ಬಂದಿದ್ದೆ.  ಭಾನುವಾರ ಒಂದು ಫೋನ್ ಮಾಡಿ ವಿಚಾರಿಸೋಣ ಎನಿಸಿತ್ತು. ಆದರೆ ಸುಮ್ಮನಿದ್ದೆ.
ಆದರೆ ಹನ್ನೊಂದಾದರೂ ವೇದಾ ಮೇಡಂ ಬರಲೇ ಇಲ್ಲ. ಒಂದು ಫೋನ್ ಮಾಡೋಣ ಎಂದು ಮನಸ್ಸು ಸಾರಿ ಸಾರಿ ಹೇಳಿದರೂ ಯಾಕೋ ಧೈರ್ಯ ಬರಲಿಲ್ಲ. ಏನು ನಡೆದಿರಬಹುದು ಎಂಬ ಕುತೂಹಲ ಈಗ ಆತಂಕಕಕ್ಕೆ ತಿರುಗಿತ್ತು. ಅಷ್ಟಾದ ಮೇಲೂ ಆತ ಜಗಳವಾಡಿರಬಹುದಾ..? ಮನಸ್ಸು ಯಾಕೋ ಕೆಡುಕನ್ನೇ ಶಂಕಿಸುತ್ತಿತ್ತು. ಈಗ ಮನೆಯಲ್ಲಿದ್ದಾರಾ..? ಅಥವಾ ಆಫೀಸಿಗೆ ಮೇಲ್ ಲಗಾಯಿಸಿದ್ದಾರಾ..? ತಿಳಿದುಕೊಳ್ಳುವುದಾದರೂ ಹೇಗೆ? ನಾವು ರಜಾಪತ್ರ ಒಗಾಯಿಸಿದ್ದೀವಾ ಎಂಬುದನ್ನು ವೇದಾ ಮೇಡಂ ತಿಳಿದುಕೊಳ್ಳಬಹುದಿತ್ತು. ಆದರೆ ನಮ್ಮ ಮೇಲಧಿಕಾರಿಯ ವಿಷಯವನ್ನು ಯಾರ ಹತ್ತಿರ ಕೇಳುವುದು.? ಯಾವ ಕೆಲಸವನ್ನೂ ಮಾಡಲು ಮನಸ್ಸು ಬರಲಿಲ್ಲ. ಸುಮ್ಮನೆ ನನ್ನ ಸಿಸ್ಟಮ್ ಆನ್ ಮಾಡಿ ಸುಮ್ಮನೆ ಮುಂದೆ ಕುಳಿತಿದ್ದೆ.
ಹನ್ನೆರಡಾಗಿರಬಹುದು. ನಾನು ತಲೆ ಬಿಸಿ ಎಂದು ಕ್ಯಾಂಟೀನ್ ಗೆ ಬಂದೆ. ಅಷ್ಟರಲ್ಲಿ ನನ್ನ ಮೊಬೈಲ್ ರಿಂಗ್ ಆಯಿತು. ತೆರೆದು ನೋಡಿದರೆ ವೇದಾ ಮೇಡಂ ನಂಬರ್. ಅವರ ಹೆಸರು ಮೂಡದಿದ್ದರೂ ನಂಬರ್ ಮಾತ್ರ ಚಿರಪರಿಚಿತವಾಗಿತ್ತು. ಯಾಕೋ ಹೋದ ಜೀವ ಬಂದಂತಾಯಿತು. ಏನೋ ನಡೆದಿದೆ. ಅದನ್ನು ಹೇಳಲೆಂದೇ ಮೇಡಂ ಫೋನ್ ಮಾಡಿದ್ದಾರೆ ಎನಿಸಿ, ಪಟಾರನೆ ಕರೆ ಸ್ವೀಕರಿಸಿ ‘ಹಲೋ ‘ಎಂದೆ. ನಾನು ಉಮಾಶಂಕರ್ ಎಂದಿತು ಧ್ವನಿ. ಸಧ್ಯ ಆತ ಬೇಗನೆ ಮಾತನಾಡಿದ್ದ. ಇಲ್ಲವಾದಲ್ಲಿ ನಾನು ಮೇಡಂ ಎಂದೆ ಮಾತನಾಡಿಸಿಬಿಡುತ್ತಿದ್ದೆ. ನಂಬರ್ ಅಳಿಸಿಹಾಕಿದ್ದರೂ ಹೆಸರು ಗುರುತಿಟ್ಟುಕೊಂಡಿದ್ದೀಯ  ಎಂದು ಇನ್ನೊಂದು ಕಿರಿಕಿರಿಗೆ ಅದು ಕಾರಣವಾಗುತ್ತಿತ್ತು. ‘ಹಾ..ಹೇಳಿ ಸಾರ್..’ ಎಂದೆ. ಎಲ್ಲಿದ್ದೀಯಾ..?
ಆಫೀಸಿನಲ್ಲಿ..’
ನಾನೂ ಆಫೀಸಿನಲ್ಲಿದ್ದೀನಿ..ನೀನಿಲ್ಲಿ ಕಾಣಿಸ್ತಾ ಇಲ್ಲ..ಎಂದ.
ಕೋಪ ಉಕ್ಕಿಬಂದರೂ ತಡೆದುಕೊಂಡೆ.
ಸಾರ್..ಆಫೀಸಿನಲ್ಲೇ ಇದ್ದೀನಿ..ಈಗ ಕ್ಯಾಂಟೀನ್ ಗೆ ಬಂದೆ ಕಾಫಿ ಕುಡಿಯೋಕೆ..ಯಾಕೆ ?
ಸರಿ ಅಲ್ಲೇ ಇರು ಬಂದೆ,.. ಎಂದ ಉಮಾಶಂಕರ್ ಫೋನ್ ಕಟ್ ಮಾಡಿದ. ಅವನ ಕಿರಿಕಿರಿ ಅತಿಯಾಯಿತು ಎನಿಸಿತು. ನಿನ್ನೆ ಎಲ್ಲಾ ಮಾತಾಡಿ ಆಗಿದೆ. ಮತ್ತೆ ಇದೇನು ಈ ರೀತಿ ಕಾಡುವುದು..ಈವತ್ತೆನಾದರೂ ಜಾಸ್ತಿ ಮಾತನಾಡಿದರೆ ಅವನ ಮುಖದ ನೀರಿಳಿಸಬೇಕು ಎಂದು ನಿರ್ಧರಿಸಿದೆ.
ಉಮಾಶಂಕರ್ ಕ್ಯಾಂಟೀನ್ ಗೆ ಬಂದ. ತಿಳಿನೀಲಿ ಬಣ್ಣದ ಶರ್ಟ್ ಮತ್ತು ಕ್ರೀಂ ಬಣ್ಣದ ಪ್ಯಾಂಟ್ ಹಾಕಿದ್ದ.ಇನ್ ಶರ್ಟ್ ಮಾಡಿದ್ದ, ನೋಡಲು ಅದೆಷ್ಟು ಚೆನ್ನಾಗಿ ಕಾಣಿಸುತ್ತಿದ್ದ.
ಹತ್ತಿರ ಬಂದವನೇ ಒಂದು ನಗೆ ಬೀರಿದ. ನಾನೂ ಬಲವಂತದ ನಗು ಮೂಲಕ ಅವನನ್ನು ಸ್ವಾಗತಿಸಿದೆ.
ಕಾಫೀ ಕುಡಿಯೋಣ..?
ನೋ ಥ್ಯಾಂಕ್ಸ್..ನಾನು ಈಗಷ್ಟೇ ಕುಡಿದೇ.. ಎಂದೆ,
ಅಯ್ಯೋ ಪರವಾಗಿಲ್ಲ ಕುಡಿಯಮ್ಮ..ಎಂದವನು ನನ್ನ ಅನುಮತಿಗೂ ಕಾಯದೇ ಎರಡು ಕಾಫೀ ಆರ್ಡರ್ ಮಾಡಿದ. ನಂತರ ಇಬ್ಬರೂ ಎದುರುಬದುರಾಗಿ ಕುಳಿತೆವು.ನನಗೋ ಅವನು ಅದೆಷ್ಟು ಬೇಗ ಜಾಗ ಖಾಲಿ ಮಾಡುತ್ತಾನೋ ಎನಿಸಿತ್ತು.
ಅವನಿಗೆ ಯಾವ ಧಾವಂತವೂ ಇರಲಿಲ್ಲ.ಸಾವಧಾನವಾಗಿ ಕುಳಿತಿದ್ದ. ಅವನ ತುಟಿಯಂಚಿನಲ್ಲಿ ಗೆಲುವಿನ  ನಗುವಿತ್ತು. ಅಷ್ಟರಲ್ಲಿ ಕಾಫಿ ಬಂತು. ಇಬ್ಬರೂ ಗುಟುಕರಿಸಿದೆವು. ಮತ್ತೆ ನಿಮ್ಮ ಊರು ಯಾವುದು..? ಎಂದ. ನನಗೆ ಅವ್ನ ಜೊತೆ ಮಾತನಾಡುವುದೇ ಇಷ್ಟವಿರಲಿಲ್ಲ. ಆದರೂ ಬಲವಂತವಾಗಿ ಹೇಳಲೇ ಬೇಕಿತ್ತು. ಸ್ವಲ್ಪ ಅದೂ ಇದೂ ಮಾತಾಡಿದ ಮೇಲೆ ತನ್ನ ಬ್ಯಾಗ್ ನಲ್ಲಿದ್ದ ಪುಸ್ತಕಗಳನ್ನು ಹೊರತೆಗೆದ. ಇದು ನೀನು ನನ್ನ ಮಿಸ್ಸೆಸ್ ಗೆ ಕೊಟ್ಟಿದ್ದು..ಇದನ್ನು ಓದಿ ಅವಳಿಗೆ ಏನೂ ಆಗಬೇಕಾದ್ದಿಲ್ಲ.. ಇದೇ ನೆಪ ಮಾಡ್ಕೊಂಡು ಮತ್ತೆ ಮಾತುಕತೆ ಶುರು ಮಾಡೋದು ನನಗಿಷ್ಟ ಇಲ್ಲ..ಎಂದವನೇ ಪುಸ್ತಕಗಳನ್ನು ನನ್ನೆಡೆಗೆ ತಳ್ಳಿದ. ಎತ್ತಿ ಅವನ ಕಪಾಲಕ್ಕೆ ಭಾರಿಸಬೇಕು ಎನಿಸಿಬಿಟ್ಟಿತು. ಇವನೆಂತಹ ದರಿದ್ರದ ಮನುಷ್ಯ!
‘ಅದಕ್ಕೆ ಈವತ್ತು ಆಫೀಸಿಗೆ ಬರೋದು ಬೇಡಾ ಅಂತ ಹೇಳಿ ನಾನು ಬಂದೆ..ಈವತ್ತಿಗೆ ಎಲ್ಲಾ ಚುಕ್ತಾ ಆಗಿಬಿಡಬೇಕು..ಇನ್ಮುಂದೆ ಈ ಲವಿಡವಿ ನಡಿಯಬಾರದು ..ಅದಕ್ಕೆ ನಾನೇ ಬಂದೆ..’ ಎಂದ. ನಮ್ಮಿಬ್ಬರ ನಡುವೆ ಏನೂ ಇಲ್ಲ ಎನ್ನುವುದನ್ನು ಅವನಿಗೆ ಒಪ್ಪಿಕೊಳ್ಳಲು ಇಷ್ಟವಿರಲಿಲ್ಲ ಎನಿಸಿತು. ಇಷ್ಟು ದಿನ ಇತ್ತು, ಈಗ ನಾನು ನಿಲ್ಲಿಸಿದ್ದೇನೆ ಎಂಬುದನ್ನು ಆತ ಎಂಜಾಯ್ ಮಾಡುತ್ತಿದ್ದಾನೆ ಎನಿಸಿತು. ಇನ್ನೊಂದು ಮಾತನಾಡುವುದೂ ಇವನ ಜತೆ ವ್ಯರ್ಥ ಎನಿಸಿತು. ಹಾಗಾಗಿ ನಾನು ಮಾತನಾಡದೆ ಸುಮ್ಮನೆ ತಲೆಯಲ್ಲಾಡಿಸಿದೆ.ನಾನು ಕೊಟ್ಟಿದ್ದ ಜೇಮ್ಸ್ ಹಾಡ್ಲೀ ಚೇಸ್ ಪುಸ್ತಕಗಳನ್ನು ತೆಗೆದು ನನ್ನ ಬಳಿ ಇರಿಸಿಕೊಂಡೆ. ‘ನಿನ್ನೆ ನೋಡೋಣ ಅಂತ ಒಂದೆರೆಡು ಪುಟ ತಿರುವಿಹಾಕಿದೆ ಮಾರಾಯ..ತಥ್..ಏನೋಪ್ಪಾ..ದರಿದ್ರ ಅನ್ನಿಸಿತು.. ‘ ಎಂದ ನಾನು ಪ್ರತಿಕ್ರಿಯಿಸಲಿಲ್ಲ. ಅದಾದ ನಂತರ ಕಾಫೀ ಕುಡಿದು ಅಲ್ಲಿಂದ ಹೊರಟುಹೋದ.
ನಾನು ಸುಮಾರು ಹೊತ್ತು ಕ್ಯಾಂಟೀನ್ ನಲ್ಲಿಯೇ ಕುಳಿತಿದ್ದೆ. ಅವನ ವರ್ತನೆಯ ಆಜುಬಾಜುಗಳನ್ನು ಅಂದಾಜು ಮಾಡತೊಡಗಿದ್ದೆ. ಯಾರೇ ಆಗಲಿ ಹೆಂಡತಿ ಬೇರೊಬ್ಬನ ಜೊತೆ ಮಾತನಾಡಿ, ಸ್ವಲ್ಪ ಅತಿಯಾಗಿ ವರ್ತಿಸಿದರೆ ಸ್ವಲ್ಪ ಕೆಂಗಣ್ಣು ಬಿಡುವುದು ಸಹಜವೇ. ಆದರೆ ಇವನದು ಅತಿ ಎನಿಸಿತು. ಮುಂದೇನು ಮಾಡುವುದು..? ಸುಮ್ಮನಿದ್ದು ಬಿಡುವುದೇ ಸರಿ. ಯಾಕೆಂದರೆ ನನಗಿಂತ ನನಗೆ ವೇದಾ ಮೇಡಂ ಕ್ಷೇಮದ ಬಗ್ಗೆ ಹೆಚ್ಚು ಖಾಳಜಿ ಇತ್ತು. ಇವನ ಜೊತೆ, ಇವನ ಅನುಮಾನದ ಜೊತೆ, ಇವನ ಸಣ್ಣತನದ ಜೊತೆ ಮೇಡಂ ಅದೆಷ್ಟು ಕಿರಿಕಿರಿ ಅನುಭವಿಸುತ್ತಿರಬಹುದಲ್ಲಾ..?
ಮದ್ಯಾಹ್ನದ ಊಟವೂ ಹೊಟ್ಟೆಗೆ ಸೇರಲಿಲ್ಲ. ಏನಾದರೂ ತಿನ್ನೋಣ ಎನಿಸಿದರೂ ಹೊಟ್ಟೆ ತೆಗೆದುಕೊಳ್ಳಲು ತಯಾರಿರಲಿಲ್ಲ.
ಮೂರು ಘಂಟೆಯ ಹತ್ತಿರ ಹತ್ತಿರ ಆಫೀಸಿನ ಒಳಬಂದೆ. ಎಲ್ಲರೂ ನನ್ನ ಕಡೆಗೆ ನೋಡುತ್ತಿದ್ದಾರೆ ಎಂಬ ಭಾಸವಾಯಿತು.ಸುಮ್ಮನೆ ತಲೆಯೆತ್ತಿ ನೋಡಿದರೆ ಅದು ನಿಜವೂ ಆಗಿತ್ತು. ಏನಂದ್ರೆ ಏನೂ ಆಗಿಲ್ಲ..ಬಹುಶ ವೇದಾ ಮೇಡಂ ಬರದೆ ಅವಳ ಗಂಡ ಬಂದು ನನ್ನ ಜೊತೆ ಮಾತನಾಡಿದ್ದು ಇದಕ್ಕೆಲ್ಲಾ ಕಾರಣವಾಗಿರಬಹುದಾ..?
ಅಷ್ಟರಲ್ಲಿ ರೋಹಿತ್ ಬಂದ.ನಾನವನ ಮುಖವನ್ನೇ ನೋಡುತ್ತಾ ನನ್ನ ಕುರ್ಚಿಯಲ್ಲಿ ಕುಳಿತುಕೊಂಡೆ.
ಏನು ಗುರು..ಹಂಗೆ ಗುರಾಯಿಸ್ತಿದ್ದೀಯ..?
ಏನಿಲ್ಲಪ್ಪ..ಏನೋ ಕೇಳೋಕೆ ಬಂದಿದ್ದೀಯಲ್ಲ..ಏನು ಅಂತ ಕೇಳು.. ಎಂದೆ ನನ್ನ ಧ್ವನಿಯಲ್ಲಿದ್ದ ಅಸಹನೆ  ನನಗೆ ಗೋಚರವಾಗುತ್ತಿತ್ತು.
ಏನಿಲ್ಲಮ್ಮ..ಏನಂದ ಉಮಾ?
ಎಲ್ಲಾ ಗೊತ್ತಿರೋ ಹಂಗಿದೆ..
ನೋಡೋ..ಏನೋ ನಾನು ನಿನ್ನ ಫ್ರೆಂಡ್ ಅಂತ ಹೇಳ್ತಿದ್ದೀನಿ..ಅವತ್ತು ಹೇಳಿದೆ.ನೀನು ಕೇಳಲಿಲ್ಲ..ಅವನು ನಿನ್ನೆಯೇನೋ ನಿಮ್ಮಿಬ್ಬರನ್ನು ಕರೆಸಿ ಭೂತ ಬಿಡಿಸಿದನಂತೆ..ಎಲ್ಲಾವನ್ನೂ ಅವನೇ ಇನ್ಫಾರ್ಮಶನ್ ಕೊಟ್ಟಿರೋದಪ್ಪ.. ಇದೆಲ್ಲಾ ನಿಂಗೆ ಬೇಕಿತ್ತಾ..?
ನಾನು ಮಾತನಾಡದೆ ಅವನ ಮುಖ ನೋಡಿದೆ.
ಸರಿ ಬಿಡು..ಸಿಕ್ಕಷ್ಟು ಪಂಚಾಮೃತ. ಏನೋ ಪಟಾಯ್ಸಿ ವ್ಯವಹಾರ ಮುಗಿಸ್ಬಿಟ್ಟೆ ತಾನೆ..ಈಗ ಮುಗೀತು ತಾನೇ ಆರಾಮವಾಗಿ ಬಿಟ್ಟು ನೆಮ್ಮದಿಯಾಗಿರು ಎಂದು ನನ್ನ ಮುಖ ನೋಡಿದ. ನಾನು ಆ ಮೂರ್ಖನೊಂದಿಗೆ ಏನು ಮಾತನಾಡುವುದಿತ್ತು. ಆಣೆ ಮಾಡಿ ಪ್ರಮಾಣ ಮಾಡಿ ಸತ್ಯ ಹೇಳಿದರೂ ಇವರಿಗೆ, ಇವರಿಗಿರಲಿ ಖುದ್ದು ಉಮಾಶಂಕರನೇ ನಂಬಲು ತಯಾರಿರಲಿಲ್ಲ.
ಅದ್ಕೆ ಸುಮ್ಮನಾದೆ ಕಣೋ.. ಇನ್ನೇನು..ಆಲ್ವಾ..? ಎಂದೆ.
ಈಗ ರೋಹಿತ್ ಮುಖದಲ್ಲಿ ಸ್ವಲ್ಪ ಹೊಟ್ಟೆಕಿಚ್ಚಿನ ಭಾವ ಮೂಡಿ ಮರೆಯಾಯಿತು.
ಮತ್ತೆ ನಮ್ಮಿಬ್ಬರ ನಡುವೆ ಏನೂ ಇಲ್ಲ ಅಂದಿದ್ದೆ..ನಮಗೊತ್ತಿತ್ತಮ್ಮಾ..ಅಂತ ಸುಂದರಿ ಸಿಕ್ಕಮೇಲೆ ನೀನು ಬಿಡ್ತೀಯಾ..ಸದ್ದಿಲ್ಲದೇ ಪಟಾಯ್ಸೋ ಮಗಾ ನೀನು..ಎಂದ.
ನಾನು ನಕ್ಕೆ. ಯಾಕೋ ನನಗರಿವಿಲ್ಲದೆ ಜೋರಾಗಿ ನಗು ಬಂದುಬಿಟ್ಟಿತ್ತು. ಜೋರಾಗಿ ನಕ್ಕುಬಿಟ್ಟೆ. ರೋಹಿತ್ ಸ್ವಲ್ಪ ಗಲಿಬಿಲಿಗೊಂಡ.
ಸರಿಯಪ್ಪ..ಇನ್ಮುಂದಾದರೂ ಹುಷಾರಾಗಿರು..ಎಲ್ಲದಕ್ಕೂ ಬರೆಸಿಕೊಂಡು ಬಂದಿರಬೇಕು..ಎಂದು ತನ್ನ ಖುರ್ಚಿಯ ಹತ್ತಿರಕ್ಕೆ ಹೋದ. ನಾನು ಸುಮ್ಮನೆ ಯಾಂತ್ರಿಕವಾಗಿ ನನ್ನ ಕಂಪ್ಯೂಟರ್ ತೆರೆದುಕೊಂಡು ಕುಳಿತೆನಾದರೂ ಮನಸ್ಸು ಮಾತ್ರ ಎಲ್ಲೆಲ್ಲೋ ಓಡುತ್ತಿತ್ತು.
*****     ******   ******
ರೂಮಿಗೆ ಬಂದರೂ ಮನಸ್ಸಿನಲ್ಲಿ ಕಸಿವಿಸಿ ಇದ್ದೆ ಇತ್ತು. ಇದೆಂತಹ ಜನರಪ್ಪಾ..?ಏನಿಲ್ಲಾ ಏನಿಲ್ಲಾ ಎಂದು ಬಡಿದುಕೊಳ್ಳುತ್ತಿದ್ದರೂ ಯಾರೂ ಅದರೆಡೆಗೆ ತಲೆ ಕೆಡಿಸಿಕೊಳ್ಳದೆ  ಸಂಬಂಧವನ್ನು ತಾವೇ ಗಟ್ಟಿ ಮಾಡಿ ಏನೇನೋ ಕಲ್ಪಿಸಿಕೊಂಡು ಮಜಾ ತೆಗೆದುಕೊಳ್ಳುತ್ತಿರುವರಲ್ಲ ..ಅದರಲ್ಲೂ ಉಮಾಶಂಕರ ಅದೇನೋ ಸಾಧಿಸುವವನಂತೆ ವೇದಾ ಮೇಡಂ ಅವರನ್ನು ಮನೆಯಲ್ಲಿ ಕಟ್ಟಿಹಾಕಿ ತಾನು ಕಿಲಾಡಿ ತರಹ ಬಂದು ಪುಸ್ತಕ ಕೊಟ್ಟು ಹೋದ ಬಗೆ ತಮಾಷೆ ಎನಿಸಿತು. ತೀರಾ ಬಲವಂತದಿಂದ ಹೆದರುಸುವಿಕೆಯಿಂದ ಒಬ್ಬ ವ್ಯಕ್ತಿಯನ್ನು ಅಥವಾ ಒಂದು ಸಂಬಂಧವನ್ನು ತಡೆಯಲು ಸಾಧ್ಯವಾ..? ಇವರೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ..
ಆಫೀಸಿನಿಂದ ಮನೆಗೆ ಬರುವಷ್ಟರಲ್ಲಿ ಇದನ್ನೇ ಹತ್ತಾರು ಕೋನಗಳಿಂದ ಯೋಚಿಸಿದ್ದೆ. ಅದ್ಯಾವ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಅಥವಾ ಅದ್ಯಾವ ಕಾರಣ ಹುಡುಕಬೇಕಿತ್ತು ಎಂಬುದಕ್ಕೆ ಉತ್ತರವಿರಲಿಲ್ಲ. ಬರೀ ನನ್ನ ಸಮಾಧಾನಕ್ಕಾಗಿ  ಇಷ್ಟೆಲ್ಲಾ ಯೋಚಿಸಿದ್ದೆ. ಏನೇ ಆದರೂ ಸಮಾಧಾನವಂತೂ ಆಗಿರಲಿಲ್ಲ. ಮನಸ್ಸಿನಲ್ಲಿ ಗೊಂದಲವಂತೂ ಇದ್ದೇ ಇತ್ತು. ಆದರೆ ಒಂದಂತೂ ಮನಸ್ಸಿನಲ್ಲಿ ನಿರ್ಧಾರ ಮಾಡಿಬಿಟ್ಟಿದ್ದೆ. ಇನ್ನು ಮುಂದೆ ವೇದಾ ಮೇಡಂ ಏನೇ ಮಾತನಾಡಿದರೂ ಮಾತಾಡಿಸಬಾರದು..ಅವರ ಜೊತೆ ಯಾವ ರೀತಿಯ ಸಂಪರ್ಕವನ್ನೂ ಇಟ್ಟುಕೊಳ್ಳಬಾರದು..ಅವರ ಹೆಸರನ್ನು ನನ್ನ ಮೊಬೈಲಿನಿಂದ ಅಳಿಸಿಹಾಕಿದರೂ ಮನಸ್ಸಿನಲ್ಲಿ ಉಳಿಸಿಕೊಂಡಿದ್ದಕ್ಕೆ ಮೊದಲ ಬಾರಿಗೆ ಬೇಸರವಂತೂ ಆಗಿತ್ತು.
******  ******  ******
ಇದಾದ ಮೂರು ದಿನಗಳವರೆಗೆ ಆಫೀಸೊಂತರ ನೀರಸ ಎನಿಸಿತ್ತು. ವೇದಾ ಮೇಡಂ ಅವರ ಪಾಡಿಗೆ ಅವರು ಬರುತ್ತಿದ್ದರು, ನನ್ನನ್ನು ತಲೆ ಎತ್ತಿಯೂ ನೋಡುತ್ತಿರಲಿಲ್ಲ.. ನಾನು ಹಾಗೆಯೇ ಇದ್ದೆನಾದರೂ ಆವಾಗವಾಗ ಕದ್ದು ಮುಚ್ಚಿ ನೋಡುತ್ತಿದ್ದೆ. ಆದರೆ ವೇದಾ ಮೇಡಂ ಅಪ್ಪಿತಪ್ಪಿಯೂ ನನ್ನೆಡೆಗೆ ನೋಡಿರಲಿಲ್ಲ. ಆದರೆ ಇಡೀ ಆಫೀಸು ನಮ್ಮಿಬ್ಬರನ್ನು ಗಮನಿಸುತ್ತಿತ್ತು. ಮೂರನೆಯ ದಿನ ನಮ್ಮ ದೊಡ್ಡ ಬಾಸ್ ನನ್ನನ್ನು ತಮ್ಮ ಚೇಂಬರ್ ಗೆ ಬರಲಿಕ್ಕೆ ಹೇಳಿದಾಗ ನನಗೆ ಆಶ್ಚರ್ಯವಾಗಿತ್ತು. ಯಾಕೆಂದರೆ ಒಂದೊಂದು ಕೆಲಸವನ್ನು ನಮಗೆ ವಹಿಸಿ, ನಮಗೊಬ್ಬ ಟೀಂ ಲೀಡರ್ ಕೊಟ್ಟ ಮೇಲೆ ಮುಗೀತು, ಆಮೇಲೆ ಆ ಪ್ರಾಜೆಕ್ಟ್ ಮುಗಿಯುವವರೆಗೂ ನಮಗೂ ದೊಡ್ಡ ಬಾಸ್ ಗೂ ಸಂಪರ್ಕ ತೀರಾ ಕಡಿಮೆ ಇರುತ್ತಿತ್ತು ಅಥವಾ ಇರುತ್ತಲೇ ಇರಲಿಲ್ಲ. ನಾವೆಲ್ಲಾ ನಮ್ಮ ನಮ್ಮ ಟೀಂ ಲೀಡರ್ ಜೊತೆ ಸಂವಾದ ಮಾಡಿಕೊಂಡರೆ, ಅವರು ಅಂತಿಮವಾಗಿ ಬಾಸ್ ಜೊತೆ ಚರ್ಚಿಸುತ್ತಿದ್ದರು. ಟಾರ್ಗೆಟ್ ವಿಷಯದಲ್ಲೂ ಅಷ್ಟೇ ಬಾಸ್ ಟೀಂ ಲೀಡರ್ ತಲೆ ತಿಂದರೆ ಟೀಂ ಲೀಡರ್ ನಮ್ಮನ್ನು ಕುಯ್ದು ಸಾಯಿಸಿಬಿಡುತ್ತಿದ್ದರು.
ನಾನು ಎದ್ದು ನಮ್ಮ ಬಾಸ್ ಚಂಬೇರ್ ಗೆ ಹೋದೆ.
ಹೈ...ಕಂ ಇನ್..ಹೇಗೆ ನಡಿತಾ ಇದೆ,,
ಫೈನ್ ಸರ್..
ಓಕೆ. ಒಂದಷ್ಟು ಬದಲಾವಣೆಗಳು ಆಗಿವೆ ಮಿಸ್ಟರ್..ನೀವು ನಿಮ್ಮ ಪ್ರಾಜೆಕ್ಟ್ ಡೇಟಾಸ್ ಮತ್ತು ಫೀಡ್ ಬ್ಯಾಕ್ ಅನ್ನು ಕೊಟ್ಟು ಇಮ್ಮಿಡಿಯೇಟಾಗಿ ಮಾಧವನ್ ಟೀಂ ಗೆ ಜಾಯಿನ್ ಆಗಿ..ಅಗೈನ್ ಪ್ರೋಗ್ರೆಸ್ ಪ್ರೋಮೊಸಿಂಗ್ ಇರಬೇಕು..ಯು ಕ್ಯಾನ್ ಗೊ ನೌ..
ಬಾಸ್ ಇಷ್ಟೇ ಮಾತಾಡಿದ್ದು. ಆದರೆ ನಂಗೆ ಬೇರೆಯದೆಲ್ಲಾ ಅರ್ಥವಾಗಿತ್ತು. ಹೌದು ಮೇಡಂ ಬೇಕೆಂತಲೇ ನನ್ನನ್ನು ತಮ್ಮ ಟೀಂ ನಿಂದ ಹೊರಹಾಕಿಸಿದ್ದರು. ಅಥವಾ ಇದೆಲ್ಲಾ ಉಮಾಶಂಕರ್ ಕಿತಾಪತಿಯಾ..? ಇರಬಹುದು. ಏನಾದರೆ ನನಗೇನು..? ಸಧ್ಯ ಮಾತಾಡದೆ ಮುಖ ಮುಖ ನೋಡದೆ ಈ ರೀತಿ ಹಿಂಸಾತ್ಮಕವಾಗಿ ಇರುವುದಕ್ಕಿಂತ ಟೀಮ್ನಿಂದ ಹೊರಹೊಗುವುದೇ ಉತ್ತಮ ಎನಿಸಿತು. ಎಲ್ಲದಕ್ಕೂ  ತಲೆಯಲ್ಲಾಡಿಸಿ ಹೊರಬಂದೆ.
ಮದ್ಯಾಹ್ನ ಕ್ಯಾಂಟೀನ್ ನಲ್ಲಿ ಸಿಕ್ಕ ರೋಹಿತ್, ‘ಮಗಾ ವಿಷಯ ಗೊತ್ತಾಯ್ತು..ಏನಿಲ್ಲ..ಈಗ ಜಗ್ಗ ವೇದಾ ಮೇಡಂ ಟೀಮ್ಗೆ ಜಾಯಿನ್ ಆಗಿದ್ದಾನೆ...ಇಷ್ಟಕ್ಕೂ ನೀನು ಟೀಮಲ್ಲಿ ಇರಲೇಬಾರದು ಅಂತ ತೆಗಿಸಿಹಾಕಿದವರು ಯಾರು ಗೊತ್ತಾ,..? ನಿನ್ನ ವೇದಾ ಮೇಡಂ,.. ಇರಲಿ. ಇನ್ನೊಂದು ವಿಷ್ಯಾ ಹೇಳ್ತೀನಿ..ಆ ಜಗ್ಗ ಉಮಾಶಂಕರನಿಗೆ ಸ್ಪೈ ತಾರಾ ಇಷ್ಟು ದಿನ ಇಲ್ಲಿನ ಎಲ್ಲಾ ಸುದ್ದೀನೂ ಅವನೇ ವರದಿ ಮಾಡಿದ್ದು ..’ಎಂದ. ವಿಷಯ ತಿಳಿಯಿತಾದರೂ ನನಗೆ ಅದ್ಯಾವುದೂ ಆಸಕ್ತಿಕರವಾದದ್ದು ಎನಿಸಲಿಲ್ಲ. ನನ್ನ ನಿರ್ಲಿಪ್ತತೆ ನೋಡಿ ಅವನಿಗೆ ಆಶ್ಚರ್ಯವಾದರೂ ಅದನ್ನು ಆತ ಬೇರೆಯದೇ ರೀತಿಯಲ್ಲಿ ಗ್ರಹಿಸಿಕೊಂಡ. ‘ಇವೆಲ್ಲಾ ಆಗುತ್ತೆ ಕಣೋ..’ ಎಂದು ಮುಂದೆ ಏನನ್ನೋ ಹೇಳಲ್ಲಿ ಹೊರಟವನನ್ನು ನಾನೇ ತಡೆದೆ. ‘ಅಯ್ಯೋ ಮಾರಾಯ..ಅದರಿಂದ ನನಗೇನೂ ನಷ್ಟ ಇಲ್ಲ ಬಿಡಪ್ಪಾ..” ಎಂದೆ.ಅವನೊಮ್ಮೆ ಮುಖ ನೋಡಿ ಅಲ್ಲಿಂದ ಹೊರಟುಹೋದ.
ಒಂದು ವಾರ ಹೀಗೆಯೇ ಕಳೆದುಹೋಯಿತು. ನಾನೀಗ ಹೊಸ ಟೀಂ ಜಾಯಿನ್ ಆಗಿದ್ದೆ. ಮಾಧವನ್ ತಲೆ ಬಿಸಿ ಗಿರಾಕಿ. ಪ್ರತಿಯೊಂದಕ್ಕೂ ಕಿರಿಕಿರಿ ಮಾಡುತ್ತಿದ್ದ. ನಂಗೆ ಬೇರಾವುದಕ್ಕೂ ತಲೆ ಕೆಡಿಸಿಕೊಳ್ಳಲು ಸಮಯವಿಲ್ಲದಂತೆ ಮಾಡಿಹಾಕಿದ್ದ.
ಭಾನುವಾರ. ತಿಂಡಿ ತಿಂದು ಸುಮ್ಮನೆ ಪೇಪರ್ ಮೇಲೆ ಕಣ್ಣು ಹಾಯಿಸುತ್ತಿದ್ದೆ. ಏನೋ ಒಂದು ತರಹದ ಆಯಾಸ ನನ್ನನ್ನಾವರಿಸಿತ್ತು. ಅಷ್ಟರಲ್ಲಿ ನನ್ನ ಮನೆ ಕಾಲಿಂಗ್ ಬೆಲ್ ರಿಂಗ್ ಆಯಿತು. ಯಾರಿರಬಹುದು ಎಂದುಕೊಳ್ಳುತ್ತಲೇ  ಬಾಗಿಲು ತೆರೆದೆ.
ಎದುರಿಗೆ ವೇದಾ ಮೇಡಂ ನಿಂತಿದ್ದರು.
ನಾನು ಅವಾಕ್ಕಾದೆ.[ಸಶೇಷ]