Showing posts with label ಕವನ. Show all posts
Showing posts with label ಕವನ. Show all posts

Thursday, May 24, 2012

ಮೂರು ಸಣ್ಣ ಕಥೆಗಳು..


ಬ್ರೇಕಿಂಗ್ ನ್ಯೂಸ್:
ಆವತ್ತು ಎಂದಿನಂತೆ ಸುದ್ಧಿವಾಹಿನಿಯ ಕೆಲಸ ಮಾಡುತ್ತಿದ್ದ ರಮಣನ ಕ್ಯಾಮೆರಾ ಕಣ್ಣಿಗೆ ರಾಜಕಾರಣಿಯೊಬ್ಬನ ಅಸಹ್ಯವೊಂದು ಸಿಕ್ಕಿತ್ತು. ತಡಮಾಡದೆ ಅಷ್ಟನ್ನೂ ಚಿತ್ರೀಕರಿಸಿದ್ದು ದೇಶದಲ್ಲೇ ದೊಡ್ಡ ಸಂಚಲನವನ್ನುಂಟುಮಾಡಿ ಆ ವ್ಯಕ್ತಿ ರಾಜಿನಾಮೆ ಕೊಡುವಂತೆ ಮಾಡಿತ್ತು. ಮೊದಲಿಂದಲೂ ಕ್ರಾಂತಿಕಾರಿ ಧೋರಣೆ ಹೊಂದಿದ್ದ ರಮಣನಿಗೆ ಆವತ್ತು ಎಲ್ಲರಿಂದಲೂ ಪ್ರಶಂಸೆಗಳ ಸುರಿಮಳೆ.ಇದೇ ರೀತಿ ಮುಂದುವರೆದರೆ ದೇಶವನ್ನು ಸುಧಾರಿಸಬಹುದು ಎಂದು ಎಲ್ಲರೂ ಹೊಗಳಿದ್ದೇ ಹೊಗಳಿದ್ದು.
ಇದೆಲ್ಲಾ ನಡೆದು ಸುಮಾರು ತಿಂಗಳುಗಳೇ ನಡೆದುಹೋಗಿವೆ.ಈಗ ರಾಜಕಾರಣಿ ಮತ್ತೆ ಅಧಿಕಾರಕ್ಕೆ ಬಂದಿದ್ದಾನೆ. ಮಾಧ್ಯಮದವರಿದ್ದಾರೆ ಎಂದರೆ ಎಲ್ಲರೂ ಎಚ್ಚರಿಕೆಯಿಂದಿರುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಜನರೂ ಅದನ್ನು ಮರೆತುಬಿಟ್ಟಿದ್ದಾರೆ.
ಈಗ ಜನರು ಮನರಂಜನೆಗಾಗಿ, ಥ್ರಿಲ್ಲಿಗಾಗಿ, ಸುದ್ಧಿವಾಹಿನಿಯವರು ಟಿಆರ್‌ಪಿಗಾಗಿ ಮತ್ತೊಂದು  ಬ್ರೇಕಿಂಗ್‌ನ್ಯೂಸ್‌ಗೆ ಕಾಯುತ್ತಿದ್ದಾರೆ.
ಆಟ:
ನೋಡ್ರೀ..ಎಷ್ಟು ಕೂಗಿದ್ರು ಊಟಕ್ಕೇ ಬರ್ತಿಲ್ಲಾ.. ಮನೆಗೆ ಬಂದ ತಕ್ಷಣ ಸುಷ್ಮಾ ಗಂಡ ರಘುಗೆ ಮಗನ ಮೇಲೆ ದೂರು ಹೇಳಿದಳು. ರಿತೇಶ್ ಏನ್ ಮಾಡ್ತಿದ್ದೀಯ..  ಎಂದು ಬೂಟು ಕಳಚುತ್ತಲೇ ರಘು ಕೂಗು ಹಾಕಿದ. ಡ್ಯಾಡಿ ಇನ್ನು ಎರಡು ಓವರ್ರಿದೆ..೧೮ ರನ್ ಬೇಕಿರೋದು.. ಎಂದವನು ತನ್ನ ಆಟದಲ್ಲಿ ಮಗ್ನನಾದ ಮಗ ರಿತೇಶ್ ಕ್ರಿಕೆಟ್, ುಟ್‌ಬಾಲ್ ವಾಲಿಬಾಲ್ ,ಶೂಟಿಂಗ್, ಸಿಕ್ಸರ್, ೋರ್, ಸೆಂಚ್ಯುರಿ ಮನೆಯಲ್ಲೇ ಕಂಪ್ಯೂಟರಿನಲ್ಲೇ ಆಡಿಬಿಡುತ್ತಾನೆ. ಆಟ ಮುಗಿಸಿ ಕನ್ನಡಕ ತೆಗೆದು ಕಣ್ಣುಜ್ಜಿಕೊಳ್ಳುತ್ತ ಕೆಳಗೆ ಬಂದ ಮಗನನ್ನು ಒಮ್ಮೆ ನೋಡಿದ ರಘು. ಶಾಲೆಯ ಬಸ್ ಮನೆ ಹತ್ತಿರಕ್ಕೆ ಬರುತ್ತದೆ, ಮನೆ ಪಾಠ ಬೇರೆ ಇದೆ, ಎನರ್ಜಿ ಡ್ರಿಂಕ್ ಕುಡಿಯುತ್ತಾನೆ..ಆದರೂ ಮಗ ಈಗಲೆ ಕನ್ನಡಕ ಹಾಕಿದ್ದಾನೆ, ಹೊಟ್ಟೆ ಡೊಳ್ಳಾಗಿದೆ.. ಸೌಲಭಗಳೇ ಇಲ್ಲದ ಊರಲ್ಲಿ ಬೆಳೆದ ರಘು ಚಿಕ್ಕವನಿದ್ದಾಗ ಶಾಲೆಯಿಂದ ಬಂದನೆಂದರೆ ಪುಸ್ತಕದ ಚೀಲ ಬೀಸಾಕಿ ಆಟವಾಡಲು ಹೋದರೆ ಬರುತ್ತಿದ್ದದ್ದು ರಾತ್ರಿಗೆ. ಇಡೀ ಮೈಯೆಲ್ಲಾ ಬೆವರುಬೆವರಾದರೂ ದೇಹ ಗಟ್ಟಿಯಾಗುತ್ತಿತ್ತು..ಸೌಲಭ್ಯ ಗಳೇ ಶಾಪವಾಯಿತಾ? ಎಂಬ ಪ್ರಶ್ನೆ ಕಾಡತೊಡಗಿತು ರಘುವಿಗೆ.
ನಾಣ್ಯ:
ದೇವಸ್ಥಾನದಲ್ಲಿ ಹುಂಡಿಗೆ ಹಾಕಲು ಹೆಂಡತಿಯಿಂದ ಚಿಲ್ಲರೆ ಕೈಗೆ ತೆಗೆದುಕೊಂಡ ಸತೀಶನಿಗೆ ಆ ಹೊಸ ನಾಣ್ಯ ನೋಡಿ ಅಚ್ಚರಿಯಾಯಿತು. ತನ್ನ ಬಾಲ್ಯದಲ್ಲಿ ಅಪ್ಪ, ಮಾವ ಕೊಡುತ್ತಿದ್ದ ಹತ್ತು ಪೈಸೆ, ಇಪ್ಪತ್ತು ಪೈಸೆಯ ನಾಣ್ಯಗಳನ್ನು ಜತನದಿಂದ ಕೂಡಿಡುತ್ತಿದ್ದದ್ದು ಅದರ ಇಸವಿಯ ಪ್ರಕಾರ ಸಂಗ್ರಹಿಸುತ್ತಿದ್ದದ್ದು , ಆವಾಗಾವಾಗ ನೋಡಿಕೊಂಡು ಪುಳಕಿತನಾಗುತ್ತಿದ್ದದ್ದು ನೆನೆಪಾಯಿತು. ನಾಣ್ಯವನ್ನೇ ತಿರುಗಿಸಿಮುರುಗಿಸಿ ನೋಡಿದ ರಾಘವ ಹೆಂಡತಿಯಿಂದ ಒಂದಷ್ಟು ನೋಟುಗಳನ್ನು ತೆಗೆದುಕೊಂಡು ತಿರುಗಿಸಿಮುರುಗಿಸಿ ನೋಡತೊಡಗಿದ. ತಿಂಗಳಿಗೆ ಲಕ್ಷದಷ್ಟೂ ಸಂಬಳ ತೆಗೆದುಕೊಂಡರೂ ಅಷ್ಟು ದುಡ್ಡನ್ನು ಕಣ್ಣಾರೆ ನೋಡಿ ಕೈಯ್ಯಾರೆ ಸ್ಪರ್ಷಿಸಿರಲಿಲ್ಲ. ಒಂದನೆಯ ತಾರೀಖು ಮೊಬೈಲಿಗೆ ಸಂಬಳದ ಹಣ ಜಮೆಯಾದ ಸಂದೇಶ ಬರುತ್ತಿತ್ತು. ಆನಂತರ ಐದನೇ ತಾರೀಖಿನ ನಂತರ ವಿದ್ಯುತ್ ಶುಲ್ಕ ಕಟ್ಟಾದದ್ದು, ಮನೆ ಸಾಲದ ಬಾಬತ್ತು, ಕಾರಿನ ಸಾಲದ ಬಾಬತ್ತು, ಮಧ್ಯಮಧ್ಯ ಇವನೋ ಹೆಂಡತಿಯೋ ಕಾರ್ಡ್ ಉಜ್ಜಿದ್ದರೆ ಅದು ಕಡಿತಗೊಂಡಿದ್ದ ಸಂದೇಶಗಳು ಬಂದು ಮೊಬೈಲಿಗೆ ಬೀಳುತ್ತಿದ್ದವು. ಸಂಬಳ ಬಂದದ್ದರಿಂದ ಹಿಡಿದು ಎಲ್ಲಾ ವ್ಯವಹಾರಗಳು ಮೊಬೈಲಿನಲ್ಲೇ ಮುಗಿದುಹೋಗುತ್ತಿದ್ದವು. ಹಣದ ಹಿಂದೆ ಬಿದ್ದು ಹಣ ಸಂಪಾದಿಸಿ ಹಣವನ್ನೇ ಸರಿಯಾಗಿ ನೋಡದ ನಾನು ಬದುಕಿನಲ್ಲಿ ಇನ್ನು ಏನೇನು ಕಳೆದುಕೊಂಡಿದ್ದೇನೋ ಎನ್ನುವ ಯೋಚನೆ ಸತೀಶನಿಗೆ ಕಾಡತೊಡಗಿತು.                                

Saturday, May 12, 2012

ಅಚ್ಚರಿಯ ಬದುಕಿದು ಬದುಕಿಬಿಡು ಒಮ್ಮೆ...ಕೊನೆಯ ಭಾಗ



ರಿ ಎಂದು ಬೆಳಗೆದ್ದ ತಕ್ಷಣ ಸೊಸೆ ಕಾವ್ಯಳ ಜೊತೆ ವಾಕಿಂಗ್ ಪಾರ್ಕಿಗೆ ಹೊರಟುಬಿಡುತ್ತಿದ್ದಳು. ಅಲ್ಲಿ ಸುಮ್ಮನೆ ನಾಲ್ಕಾರು ಸುತ್ತು ಸುತ್ತುಹಾಕುವುದು ಆನಂತರ ಸೀದಾ ಮನೆಗೆ ಬರುವುದು.. ಎರಡು ದಿನ ಕಳೆಯುವಷ್ಟರಲ್ಲಿ ತಮ್ಮ ಜೀವನವೇ ಒಂದು ರೆಕಾರ್ಡೆಡ್ ಪ್ರೋಗ್ರಾಮ್ಮಿನಂತೆ ಅನಿಸಿತು ಸುಶೀಲಮ್ಮನಿಗೆ. ಒಂದು ಬಟ್ಟೆ ಒಗೆಯದ, ಪಾತ್ರೆ ತೊಳೆಯದ ಸೊಸೆ ವಾಕಿಂಗ್ ಎಂದು ಕಷ್ಟಪಡುವುದು ನೋಡಿ, ಅಲ್ಲಾ ಕಣವ್ವಾ..ಬೆಳಗೆದ್ದ ತಕ್ಷಣ ಆ ಪಾರ್ಕತ್ರ ಹೋಗಿ ಸುತ್ತದಕ್ಕಿಂತ ಇಲ್ಲೇ ಪಾತ್ರಪಗಡ ತೊಳ್ಕಂಡ್ರೆ ಕೆಲ್ಸಾನೂ ಆಯ್ತದೆ..ಮೈಗೊಸಿ ಕಸ್ರತ್ತಾಗಿ ಬೆವ್ರ ಬತ್ತದೆ..ಹಂಗೆ ಕರೆಂಟುಬಿಲ್ಲಾ ವಾಟರಬಿಲ್ಲೂ ಈಸ್ಕ..ನಾವೇ ನಡ್ಕಂಡೋಗಿ ಕಟ್ಬುಟ್ಟುಬರಾಣ.. ಎಂಬೊಂದು ಸಲಹೆಕೊಟ್ಟಾಗ ಸೊಸೆ ಕಾವ್ಯ ಸುಶೀಲಮ್ಮನನ್ನು ಒಂಥರಾ ನೋಡಿದ್ದಳು. ಮಾರನೆಯ ದಿನ ಅಶೋಕ ಅಮೌ..ನೀನ್ಯಾಕ ಅವಳನ್ನು ಅಡಿಗೆ ಮಾಡಲ್ಲ ಕಸ ಗೂಡ್ಸಲ್ಲಾ ಅಂದ್ಯಂತೆ..ರಾತ್ರಿ ಬೇಜಾರು ಮಾಡ್ಕೊಂಡಿದ್ಳು..ಅವ್ಳಿಗೆ ಒಸಿ ಸೊಂಟನೋವು.. ಎಂದು ನಯವಾಗಿ ಹೇಳಿದಾಗ ಸುಶೀಲಮ್ಮ ಅಚ್ಚರಿಗೊಂಡಿದ್ದಳು. ಇದ್ಯಾಕೋ ನಮಗೆ ಅರ್ಥವಾಗವಲ್ದು.. ನೀವು ಪ್ಯಾಟೆವ್ರು ನಡೆಯ ಕಡೆ ನಡೆಯಲ್ಲ..ಮಾಡ ಕಡೆ ಮಾಡಲ್ಲ..ಆದ್ರೆ ಅದ್ಕೇ ಬೇರೇ ಬೇರೇ ಟೈಮಿಟ್ಕತ್ತಿದ್ದೀರಿ..ಊರಕಡೆ ಸೊಪ್ಪೌಸ್ತಿ ಅಂದ್ರೆ ಮೂಗು ಮುರೀತೀರಿ..ಇಲ್ಲಿ ಆಯುರ್ವೇದಾನ್ಬುಟ್ಟು ದಂಡಿ ದುಡ್ಡು ಸುರಿತೀರಿ..ನಾ ಅಂದದ್ದು ಅವ್ಳಗಲ್ಲ ಕಣಪ್ಪಾ..ನಿನ್ನೂ ಸೇರೇ ಯೋಳಿದ್ದು..ಅಲ್ಲಾ ನೀನೂ ಬೆಳಗೆದ್ದು ಕಾರ ತಕ್ಕಂಡು ಹೊಗಬುಟ್ಕಂಡು ಅಷ್ಟು ದೂರ ಹೋಬಿಟ್ಟು ಜಿಮ್ಮುಪಮ್ಮು ಅಂತೀಯಲ್ಲ..ಇಲ್ಲೇ ಮಾಡಟೈಮಿಗೆ ಮಾಡಿದ್ರ ಕೆಲ್ಸ ಆಯ್ತದಲ್ಲಾಂತ.. ಎಂದು ಉತ್ತರಿಸಿದ್ದಳು. ನಿಂಗೆ ಬೆಂಗ್ಳೂರಂದ್ರೆ ಗೊತ್ತಾಗಲ್ಲ..ಅದ್ಕೆಲ್ಲಾ ಟೈಮೆಲ್ಲಿದ್ದಮ್ಮಾ..ನಾನು ಆಫ಼ೀಸಿಗೆ ಸರ್ಯಾದ ಟೈಮಿಗೆ ಹೋಗ್ನಿಲ್ಲಾಂದ್ರೆ ಸಾವ್ರಾರು ಜನ ಸ್ಟೂಡೆಂಟುಗಳು ಕಾಯ್ತಿರ್ತಾರಾ..?ಎಂದು ಸ್ವಲ್ಪ ಅಸಹನೆಯಿಂದ ಹೇಳಿದ್ದನು ಅಶೋಕ. ಆದರೆ ಸುಶೀಲಮ್ಮ ಅಷ್ಟು ಸುಲಭವಾಗಿ ಅದನ್ನೆಲ್ಲಾ ಹೂ೦ಗುಟ್ಟುವ ಗಿರಾಕಿಯಲ್ಲ. ನೀನೇ ಯೋಚ್ನೆ ಮಾಡು ಅಶೋಕ..ಈಗ ನೀನು ಊಟದ ಟೈಮಿಗೆ ನಿದ್ರೆ ಮಾಡ್ತೀಯ. ನಿದ್ರೆ ಟೈಮಲ್ಲಿ ಕೆಲ್ಸ ಮಾಡ್ತೀಯ.. ಅದ್ಯಾರೊ ಕಾಯ್ಕಂಡಿರ್ತಾರೇಂತ ನೀನು ಕೆಲ್ಸ ಮಾಡ್ತೀಯ.. ಅವ್ರು ಇನ್ಯಾರ್ಗೋ ಕೆಲ್ಸ ಮಾಡ್ತಾರೆ..ನಿಮಗೆ ನೀವು ಬದ್ಕತಾನೆ ಇಲ್ವೇನೋ ಅನ್ಸುತ್ತೆ ಕಣಪ್ಪಾ..ಸರಿ ಬಿಡು..ಕಾವ್ಯಗೆ ಬೇಜಾರ್ ಮಾಡ್ಕಬೇಡಾಂತ ಹೇಳು.. ಎಂದು ಸುಶೀಲಮ್ಮ ನಿಟ್ಟುಸಿರುಬಿಟ್ಟಿದ್ದಳು.
ಒಂದು ವಾರದಿಂದ ಮೊಮ್ಮಗ ನಟ್ಟೂ ಒಂಥರಾ ಆಡಲು ಶುರು ಮಾಡಿದ್ದ. ಕೇಳಿದರೆ ಮನೆಯಲ್ಲಿ ಯಾರೂ ಹೇಳಲು ತಯಾರಿರಲಿಲ್ಲ. ಕಾವ್ಯ ಮಾತ್ರ ಅದೊಂದು ದಿನ ಏನೂ ಇಲ್ಲಾತ್ತೆ..ಪ್ರೊಜೆಕ್ಟ್ ಮುಗಿಸಕ್ಕೆ ಕೊಟ್ಟಿದ್ದ ಟೈಮು ಮುಗ್ದೋಯ್ತಂತೆ..ಅದ್ಕೆ ಟೆನ್ಷನಲ್ಲೌವನೆ.. ಎಂದು ತೇಲಿಸಿಬಿಟ್ಟಿದ್ದಳು.
ಆದರೆ ಬರುಬರುತ್ತಾ ನಟ್ಟೂನ ವರ್ತನೆ ವಿಚಿತ್ರವಾಗತೊಡಗಿತ್ತು. ಮಾತುಮಾತಿಗೂ ರೇಗುತ್ತಿದ್ದ. ಕೈಗೆ ಸಿಕ್ಕಿದ್ದನ್ನು ಬೀಸಾಕುತ್ತಿದ್ದ, ಎಲ್ಲಾ ನಿಮ್ಮಿಂದ ಎಲ್ಲಾ ನಿಮ್ಮಿಂದ ಎನ್ನುತ್ತಿದ್ದ. ಅದೆಷ್ಟು ಚಟುವಟಿಕೆಯಿಂದಿದ್ದವನು ನಟರಾಜ..ಇದೇನಾಗಿಹೋದ..
ಅಶೋಕ ಅದ್ಯಾರೊ ಡಾಕ್ಟರಿಗೆ ಫೋನ್ ಮಾಡಿದವನು ಅಪಾಯಿಂಟ್‌ಮೆಂಟ್ ತಗೊಂಡಿದೀನಿ..ಒಳ್ಳೇ ಫ಼ೇಮಸ್ ಸೈಕಿಯಾಟ್ರಿಸ್ಟ್..ಹೆಂಗಾರ ಮಾಡಿ ಅವನ್ನು ಒಂದ್ಸಾರಿ ಅವರತ್ರ ಬರೋಕೆ ಒಪ್ಸು.. ಎಂದು ಕಾವ್ಯಳಿಗೆ ಹೇಳಿದ್ದಕ್ಕೆ ನನ್ನ ಮಾತು ಎಲ್ಲಿ ಕೇಳ್ತಾವ್ನೆ..ನೀವೇ ಹೇಳಿ..ಇಲ್ಲಾಂದ್ರೆ ಅವ್ರನ್ನೆ ಇಲ್ಲಿ ಬರ್ಲಿಕ್ಕೇಳಿ..ಅದೇನೋ ಫ಼ೀಸು ಕೋಡೋನಂತೆ.. ಎಂದಳು. ಸುಶೀಲಮ್ಮ ಇಬ್ಬರನ್ನು ಒಮ್ಮೆ ನೋಡಿದವಳು ಅದೇನೂಂತ ಹೇಳ್ರಪ್ಪ..ನಾನು ಬೇಕಾದ್ರೆ ಅವ್ನಿಗೇಳ್ತೀನಿ..ಎಂದಾಗ ಇಬ್ಬರು ಸುಶೀಲಮ್ಮನ ಕಡೆಗೆ ತಿರುಗಿದವರು ಅದೇ ಕಣಮ್ಮಾ..ಹಿಂಗೆಲ್ಲಾ ಆಡ್ತಾವ್ನಲ್ಲಾ..ಅದ್ಕೇ ಡಾಕ್ಟ್ರತ್ರ ತೋರ್ಸವೂಂತ.. ಎಂದ ಅಶೋಕ. ಅಲ್ಲ ಕಣಪ್ಪಾ..ಮೊದ್ಲು ನಟ್ಟೂನ ಏನು ಯಾಕೇಂತ ನೀವು ಕೇಳಿ..ಅದುಬಿಟ್ಟು ಅದಕೇಳಕೂ ಬೇರೆಯವ್ರ ಕೈಲಿ ದುಡ್ಡುಕೊಟ್ಟು ಕೇಳಿಸ್ತಿದ್ದೀರಲ್ಲ..ಏನೇಳಣ ನಿಮ್ಗೆ..ಎಂದಳು. ಅದೆಲ್ಲಾ ಆಗಲ್ಲ ಕಣವ್ವಾ..ಎಂದ ಅಶೋಕ. ಸುಶೀಲಮ್ಮ ಮರುಮಾತಾಡಲಿಲ್ಲ. ಎದ್ದು ಹೊರನಡೆದಳು.. ಎಲ್ಲಿಗೆ ಹೋಗಬೇಕೆಂಬುದು ಗೊತ್ತಾಗಲಿಲ್ಲ.ಈ ಬೆಂಗಳೂರಿಗರ ಬದುಕೇ ವಿಚಿತ್ರ ಎನಿಸಿತು. ಇಲ್ಯಾರು ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುವುದಿಲ್ಲವಲ್ಲ. ಬೇರೆಯವರ ಕೆಲಸವನ್ನು ಸಂಬಳ ತೆಗೆದುಕೊಂಡು ತಾವು ಮಾಡುತ್ತಾರೆ, ತಮ್ಮ ಕೆಲಸವನ್ನು ಸಂಬಳ ಕೊಟ್ಟು ಬೇರೆಯವರ ಕೈಲಿ ಮಾಡಿಸುತ್ತಿದ್ದಾರೆ..ಇದೊಂಥರ ವಿಚಿತ್ರ ಸೈಕಲ್ ಎನಿಸಿತು..ಹಾಗೆ ಪಾರ್ಕಿನ ಹತ್ತಿರ ನಡೆದಳು..ಪಾರ್ಕಿನಲ್ಲಿನ ಸರ್ಕಸ್ಸುಗಳನ್ನು ನೋಡುವುದೇ ಸುಶೀಲಮ್ಮನಿಗೆ ಆನಂದ. ಚಂಪಾಂಜಿಗಳಂತೆ ಚಪ್ಪಾಳೆ ತಟ್ಟಿಕೊಂಡು ಕೃತಕವಾಗಿ ನಗುವವರು, ಮನೆಯಲ್ಲಿ ಒಂದು ಕಡ್ಡಿಯನ್ನು ಅತ್ತಿತ್ತ ಸರಿಸದೇ ಅಲ್ಲಿ ಬಂದು ಕುಣಿಯುವವರು, ಪಾರ್ಕಿನವರೆಗೇ ಬೈಕಿನಲ್ಲಿ ಬಂದು ಅಲ್ಲಿ ಸುತ್ತುಗಳನ್ನು ಎಣಿಸಿಕೊಂಡು ಬೆವರು ಬರುವಂತೆ ನಡೆಯುವವರು.. ದಿನನಿತ್ಯ ಮಾಡಬಹುದಾದದ್ದಕ್ಕೆ ಟೈಮ್ ಟೇಬಲ್ ಹಾಕಿಕೊಂಡು ಮಾಡುವ ಜನರೇ ವಿಚಿತ್ರ ಎನಿಸಿತು. ಹಾಗೆ ಪಾರ್ಕಿಗೆ ಬಂದವಳಿಗೆ ನಟ್ಟು ಕಾಣಿಸಿದ. ತಲೆ ತಗ್ಗಿಸಿ ಪಾರ್ಕಿನ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ. ಸುಶೀಲಮ್ಮ ಸದ್ದು ಮಾಡದೇ ಅವನ ಹತ್ತಿರ ಹೋಗಿ ಕುಳಿತಳು. ಆದರೆ ನಟ್ಟೂವಿಗೆ ಇದಾವುದರ ಪರಿವೇ ಇರಲಿಲ್ಲ. ನಟರಾಜ.. ಅಜ್ಜಿ ದನಿ ಕೇಳಿ ತಲೆಯೆತ್ತಿ ನೋಡಿದ ನಟ್ಟೂ ಮುಖ ಸಿಂಡರಿಸಿದ. ಇಲ್ಯಾಕೆ ಬಂದೆ ಎನ್ನುವಂತೆ ನೋಡಿದ. ಆದರೆ ಅದ್ಯಾವುದನ್ನೂ ಸುಶೀಲಮ್ಮ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಅವನ ತಲೆ ನೇವರಿಸಿದಳು. ಮೊದಮೊದಲಿಗೆ ಕೊಸರಿಕೊಂಡನಾದರೂ ಆಮೇಲೆ ಹಾಗೆ ಸುಮ್ಮನೆ ಕುಳಿತುಕೊಂಡ. ನಟರಾಜ ನೀನು ಚಿಕ್ಕವಾಗಿದ್ದಾಗ ಎಷ್ಟು ಚೆನ್ನಾಗಿ ಗೋಡೇಮೇಲೆಲ್ಲಾ ಚಿತ್ರ ಬರೀತಿದ್ಯಲ್ಲಪ್ಪಾ..ಈಗ ಬರೆಯೊಲ್ಲವೇನೋ..ಎಂದಳು. ಅವಳ ದನಿಯಲ್ಲಿದ್ದ ಆರ್ದ್ರತೆ ಅವನನ್ನು ಕರಗಿಸಿಬಿಟ್ಟಿತ್ತು. ಬರೀಲಿಕ್ಕೇ ಶನಿಗಳು ಬಿಡಬೇಕಲ್ಲ..ಯಾವಾಗಲೂ ಕೆಲ್ಸ ಕೆಲ್ಸಾಂತ ಸಾಯಿಸ್ತಾವೆ.. ಎಂದವನು ಕುಳಿತಿದ್ದ ಬೆಂಚಿಗೆ ಜೋರಾಗಿ ಗುದ್ದಿದ. ಅಲ್ಲಾಪ್ಪಾ..ಇಷ್ಟ್ ದೊಡ್ಡ ಸಿಟೀಲಿ ಮನೆಯಿದೆ..ಕಾರಿದೆ..ಇನ್ನೂ ಯಾತಿಕಪ್ಪ ಇಷ್ಟು ಕೆಲ್ಸ ಮಾಡ್ಬೇಕು.. ಅದು ನಮ್ಮಪ್ಪ ಅನ್ನವ್ನಿಗೆ ಗೊತ್ತಾಗಬೇಕಲ್ಲಜ್ಜಿ..ನಾನು ಚಿತ್ರಕಲಾಪರಿಷತ್ತಿಗೆ ಸೇರ್ಕೋತೀನಂದೆ.. ಬರೋಡಕ್ಕೆ ಹೋಗ್ತೀನಿ ಅಂದೆ.. ಇಲ್ಲಾ ಅದ್ರೆಲೆಲ್ಲಾ ಸಂಪಾದನೆಯಿಲ್ಲಾಂದ..ಹೋಗ್ಲಿ ಒಂದಷ್ಟು ದಿನ ಕೆಲ್ಸ ಮಾಡಿ ಆಮೇಲೆ ನಂಗಿಷ್ಟ ಬಂದದ್ದು ಮಾಡೋಣ ಅಂತ ಈ ಕಂಪ್ಯುಟರ್ ಚಾಕ್ರಿ ಮಾಡ್ಕಂಡಿವ್ನಿ..ಮೊದಲಿಗೆ ಎಜ್ಯುಕೇಷನ್ ಲೋನು, ಆಮೇಲೆ ಮನೇದು, ಆಮೇಲೆ ಕಾರುದು.. ಮುಗಿಯಂಗೇ ಕಾಣಿಸ್ತಿಲ್ಲ..ಜೀವನಪೂರ್ತಿ ನಾನು ಹಿಂಗೇ ಇರ್ಬೇಕನ್ನಿಸ್ಬಿಟ್ಟಿದೆ ಅಜ್ಜಿ..ಇದ್ಕೆ ಯಾಕೆ ಬದುಕಬೇಕೇಳು..ಎಂದ. ಕೊನೆಯ ಮಾತುಗಳು ಸ್ವಗತದಂತಿತ್ತು. ಅಜ್ಜಿ ನನ್ನ ಕನಸು ಬೇರೆಯಿತ್ತಜ್ಜಿ..ನಾನು ಟರ್ನರ್ ಥರಾನೊ, ಕೆ.ಕೆ.ಹೆಬ್ಬಾರ ತರಾನೋ ಕಲಾವಿದ ಆಗ್ಬೇಕು..ಸಾಧನೆ ಮಾಡಬೇಕು ಅನ್ಕೊಂಡಿದ್ದೆ..ಈಗ ಅದೇನೂ ಮಾಡ್ತಿಲ್ಲ..ಕೂಲಿ ಮಾಡ್ತಿದೀನಿ ಅಜ್ಜಿ.. ಕೂಲಿ ಮಾಡ್ತಿದೀನಿ .. ನಟ್ಟೂ ಬಿಕ್ಕಿ ಬಿಕ್ಕಿ ಅಳತೊಡಗಿದ. ಸುಶೀಲಮ್ಮ ಅವನನ್ನು ತನ್ನ ಎದೆಗೆ ಒರಗಿಸಿಕೊಂಡು ತಲೆ ನೇವರಿಸಿದಳು. ನೀನು ಮಾಡ್ತಿರೋದು ಸಾಧನೇನೆ ಅಲ್ವಾಪ್ಪಾ..ಇಂಥ ದೊಡ್ಡ ಪೇಟೇಲಿ ಇಂಥ ಪರಿ ಹಣ ಸಂಪಾದನೆ ಮಾಡೋದು ಸಾಧನೆ ಕಣಪ್ಪ..ಎಂದಳು. ಸುಮ್ಕಿರು ಅಜ್ಜಿ ಆ ದುಡ್ಡಿಗಷ್ಟು ಬೆಂಕಿ ಬೀಳ್ಲಿ..ನೆಮ್ಮದಿ ಇಲ್ಲಾಜ್ಜಿ..ನಾವೇನು ಕೆಲಸ ಮಾಡ್ತಿದ್ದೀವಿ ಗೊತ್ತಾಜ್ಜಿ..ಚಿಕ್ಕದು ಮಾಡೋದು..ಇನ್ನಾ ಚಿಕ್ಕದು ಮಾಡೋದು..ಇಕ ಈ ಮೊಬೈಲು..ಮೊದಲು ಮಾತಾಡ್ತಿದ್ವಿ..ಆಮ್ಯಾಕೆ ರೇಡಿಯೋ ಬರಂಗೆ ಮಾಡಿದ್ವಿ..ಆಮ್ಯಾಕೆ ಟಿವಿ..ಇಂಟೇರ್ನೆಟ್ಟೂ ಹಿಂಗೆ ಇರದ್ನೆ ಸೇರ್ಸದು..ಇದೆಂಥಾ ಸಾಧನೆ ದರಿದ್ರ.. ಸುಶೀಲಮ್ಮನಿಗೆ ಯಾವುದೂ ಅರ್ಥವಾಗಲಿಲ್ಲ.ಮಾತು ಹೆಂಗೇ ಮುಂದುವರೆಸಬೇಕೆಂದೂ ಗೊತ್ತಾಗಲಿಲ್ಲ. ಹಂಗಾರೆ ಇರದ್ನೇ ಒಂದಕ್ಕೆ ಯಾಕಪ್ಪ ತುಂಬುತಿದ್ದೀರಿ..ಈ ತರ ನಿದ್ರೆ ಕೆಡಿಸ್ಕಂಡು ಕೆಲಸ ಮಾಡಿ ದುಡ್ಡು ಸಂಪಾದ್ನೆ ಮಾಡ್ಕಂಡು ಡಾಕ್ಟ್ರ ಶಾಪಿಗೆ ಯಾಕೆ ಸುರದರೀ ಮಂತೆ.. ಎಂದಳು. ಹುಚ್ಚು ಕಣಮ್ಮ..ದುಡ್ಡಿನ ಹುಚ್ಚು..ನಮ್ಮಪ್ಪಂಗೆ ಹೇಳಿದೆ ಕೆಲ್ಸ ಬಿಡ್ತೀನಿ..ಕಲಾವಿದ ಆಯ್ತೀನಿ ಅಂದ್ರೆ ಸಾಫ಼್ಟವೇರ್ ಕೆಲ್ಸ ಬಿಟ್ಟು ಬೋರ್‍ಡ್ ಬರೆಯೋಕೆ ಹೋಗ್ತೀಯ ಅಂತಾನೆ..ಎಂದು ಅಪ್ಪನನ್ನು ಬೈಯಲು ಶುರು ಮಾಡಿದ ನಟ್ಟೂ. ಸುಶೀಲಮ್ಮನಿಗೆ ಯಾಕೋ ಇದಾವುದೂ ಸರಿ ಹೋಗುತ್ತಿಲ್ಲವೆನಿಸಿತು. ಅವನನ್ನು ಹಾಗೆ ಬೈಯಲು ಬಿಟ್ಟುಬಿಟ್ಟಳು. ಸುಮಾರು ಹೊತ್ತು ಹಾಲಿನ ಕುಕ್ಕರಿನಂತೆ ಕುಂಯ್‌ಗುಟ್ಟಿದ ನಟರಾಜು ಚಿಕ್ಕ ಮಗುವಿನಂತೆ ಅಜ್ಜಿ ಕಡೆ ತಿರುಗಿ ಈಗ ನಾನೇನ್ಮಾಡ್ಲಿ ಅಜ್ಜಿ ..ಎಂದ. ಒಂದ ಮಾತು ಹೇಳ್ಲಾ ಕಂದ..ನಂಗೂ ಯಾಕೋ ಈ ಊರು ಒಗ್ತಿಲ್ಲ ಕಣಪ್ಪಾ..ನಾವೇ ರೋಗ ತರಿಸ್ಕಂಡು ಅದನ ಸರಿ ಪಡಿಸ್ಕಬೇಕು ಇಲ್ಲಿ..ಎಲ್ಲಾನೂ ಅಷ್ಟೇ..ಯಾವುದು ಇಲ್ಲಿ ನಮ್ಮ ಕೈಲಿಲ್ಲಾನ್ಸತದೆ..ಅದ್ಕೆ ಹೆಂಗಿದ್ರೂ ಊರ್ನಾಗೆ ನಮ್ಮನೆ ಅದೆ..ಒಂಚೂರು ಹೊಲ ಅದೆ..ನೀನೂ ನಂಜೊತೆ ಬಂದ್ಬುಡಪ್ಪ..ಅದೇನ ಚಿತ್ರಗಿತ್ರ ಬರೀ ನಂಜೊತೆ ಇರು..ಎಂದಳು. ತಟ್ಟನೇ ತಲೆಯೆತ್ತಿ ನೋಡಿದ ನಟರಾಜ. ಇದೊಂದು ದಾರಿ ಇದೆಯೆಂಬುದು ಅವನಿಗೆ ಗೊತ್ತೇ ಇರಲಿಲ್ಲ. ಅಥವಾ ಅವನ ಗಮನಕ್ಕೇ ಬಂದಿರಲಿಲ್ಲ.ಬರೀ ಲಾಜಿಕ್ಕೂ ಕಂಪ್ಯೂಟರು ಸಾಫ಼್ಟವೇರುಗಳು, ಡೆಡ್‌ಲೈನುಗಳೂ ಬೆಂಗಳೂರಿನ ಟ್ರಾಫ಼ಿಕ್ಕಿಗಿಂತಲೂ ದಟ್ಟವಾಗಿ ಜಾಮಾಗಿ ಅವನ ಯೋಚನಮಾರ್ಗದ ಸಣ್ಣಸಣ್ಣ ಸಂದಿಗಳನ್ನೂ ದ್ವಿಚಕ್ರವಾಹನದವರು ದಾಳಿಯಿಟ್ಟು ಅದನ್ನೂ ಜಾಮುಮಾಡುವಂತೆ ಮಾಡಿಬಿಟ್ಟಿದ್ದವು. ಅವನು ಏನೂ ಮಾತಾಡಲಿಲ್ಲ.
***
ಅಲ್ಲ ಕಣಮ್ಮ ಆ ಊರಿಗೆ ಬಂದು ಅವನೇನು ಮಾಡೀನು..ಚಿತ್ರ ಬರ್ಕಂಡು ಬದುಕೋಕೆ ಆದೀತಾ.. ಅಶೋಕ ದನಿಯೇರಿಸಿ ಕೂಗಿದ. ನಮ್ಮದೇನೂ ಹೆಚ್ಚುಕಡಿಮೆ ಮುಗೀತು..ನಾವು ಅವ್ನುಗೋಸ್ಕರ ತಾನೆ ಹೇಳ್ತಿರೋದು.. ಅಸಹನೆಯಿಂದ ಅಶೋಕನ ಬಿಪಿ ಏರುತ್ತಿತ್ತು. ಸುಶೀಲಮ್ಮ ಅದೇ ಕಣಪ್ಪಾ ಮಾತು ಮಾತಿಗೂ ಅವನಿಗೋಸ್ಕರ ಅವನಿಗೋಸ್ಕರ ಅಂತೀರಿ..ಆದ್ರೆ ನಿಮ್ಮಿಷ್ಟ ಬಂದಂಗೆ ಇರು ಅಂತೀರೀ..ನಿಮ್ದೆಲ್ಲಾ ಮುಗಿದಮೇಕೆ ಅಂವ ಅವನಿಗೇನಿಷ್ಟಾನೋ ಹಂಗಿರ್ಲಿ ಬಿಡಪ್ಪಾ..ಎಂದಳು. ಒಂದ್ ಮಾತೇಳ್ಲಾ ಅಶೋಕ..ನಿಮ್ಮಪ್ಪ ಕಷ್ಟಪಟ್ಟು ಕೂಲಿ ಮಾಡಿ ನಿನ್ನನ್ನು ಓದಿಸಿ ಪಾಠ ಮಾಡೋ ಲೆಕ್ಚರ್ ಮಾಡುದ್ರು..ಆದ್ರೆ ನೀನು ನಿನ್ನ ಮಗನ್ನ ಚೆನ್ನಾಗಿ ಓದ್ಸಿ ಅದ್ಯಾಕಪ್ಪ ಕೂಲಿ ಮಾಡಕ್ಕೆ ಕಳಿಸ್ತೀದ್ದೀಯ..?ಅಂದುಬಿಟ್ಟಳು. ಅಮ್ಮನ ಕೊನೆಯ ಮಾತು ಅಶೋಕನಿಗೆ ನಾಟಿ ಬಿಟ್ಟಿತ್ತು.ಮುಂದೇನೋ ಮಾತನಾಡಲು ಬಾಯಿ ತೆರೆದವನು ಹಾಗೆ ಬಾಯಿತೆರೆದುಕೊಂಡೇ ಇದ್ದ.ಸುಶೀಲಮ್ಮನೂ ಮುಂದೇನೊ ಹೇಳುತ್ತಾನೆಂದು ಕಾಯತೊಡಗಿದಳು.ಸುಮ್ಮನೆ ತಲೆ ತಗ್ಗಿಸಿದ ಅಶೋಕ ಮತ್ತೆ ತಲೆಯೆತ್ತಿದಾಗ ಅವನ ಕಣ್ಣು ತುಂಬಿಬಂದಿತ್ತು. ಆ ಕ್ಷಣದಲ್ಲಿ ಅದಕ್ಕೆ ಕಾರಣವೇನಿರಬಹುದೆಂಬುದು ಇಬ್ಬರಿಗೂ ಸ್ಪಷ್ಟವಾಗಿ ಗೊತ್ತಿರಲಿಲ್ಲ. [ಮುಗಿಯಿತು]

Wednesday, April 25, 2012

ಲಲಿತ ಪ್ರಬಂಧ.


ತಾವು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರಿಂದ ನಾನೂ ಕೂಡ ಅವರಂತೆಯೇ ಶಿಕ್ಷಕರಾಗಬೇಕೆಂಬುದು ನಮ್ಮ ತಂದೆಯವರ ಮಹತ್ವಾಕಾಂಕ್ಷೆಯಾಗಿತ್ತು. ಆದರೆ ನನಗೋ ಸಿನೆಮಾ ಪತ್ರಿಕೋದ್ಯಮದ ಕಡೆ ಅತೀವ ಹುಚ್ಚು. ಪ್ರತಿ ಸಾರಿ ಊಟಕ್ಕೆ ಒಟ್ಟಿಗೆ ಕುಳಿತಾಗಲೂ ಶಿಕ್ಷಕರಿಗಿರುವ ಗೌರವ, ಇರಬೇಕಾದ ಜವಾಬ್ದಾರಿ ಮತ್ತು ಶಿಕ್ಷಕ ವೃತ್ತಿಯ ಮಹತ್ವವನ್ನು ವಿವರಿಸುತ್ತಿದ್ದರು. ನಾನು ಸುಮ್ಮನೆ ಹೂಂಗುಡುತ್ತಿದ್ದೆ. ಆಮೇಲೆ ಮಲಗಿಕೊಂಡಾಗ ನಿದ್ರೆ ಬರುವವರೆಗೂ ಯೋಚಿಸುತ್ತಿದ್ದೆ , ಅಪ್ಪ"ಹೇಳಿದ್ದೆಲ್ಲಾ ಸರೀನಾ' ಎಂದು. ಅದರಲ್ಲಿ ಸತ್ಯ ಎಷ್ಟಿದೆ? ಎಂಬುದರ ಪರೀಕ್ಷೆಗೆ ಬೀಳುತ್ತಿದ್ದೆ. ಆದರೆ, ಕೆಲವೊಂದು ಸರಿ ಎನಿಸಿದರೂ ಕೆಲವೊಂದು ವಿಷಯಗಳನ್ನು ಒಪ್ಪಿಕೊಳ್ಳಲು ಆಗುತ್ತಿರಲಿಲ್ಲ.

ಇಡೀ ಊರಲ್ಲಿ ಅಪ್ಪನನ್ನು "ಮೇಸ್ಟ್ರೇ...' ಎಂದೇ ಕರೆಯುತ್ತಿದ್ದರು. ಅವರ ಮಗನಾದ ನನ್ನನ್ನು ಎಲ್ಲರೂ ಪ್ರೀತಿಯಿಂದ, ಗೌರವದಿಂದ ನೋಡುತ್ತಿದ್ದರು. ಊರಲ್ಲಿ ಹೊಸ ಬೆಳೆ ಬಂದಾಗಲೆಲ್ಲ "ಒಂದು ಕೊಳಗ ಮೇಸ್ಟ್ರ ಮನೆಗೆ'  ಎಂದು ಎತ್ತಿಟ್ಟುಬಿಡುತ್ತಿದ್ದರು. ಒಂದು ಹೊರೆ ಸೌದೆಯನ್ನು ನಮ್ಮ ಹಿತ್ತಲಿಗೆ ತಂದಿಟ್ಟು ಮಾತಾಡಿ ಹೋಗುತ್ತಿದ್ದರು. ಇಡೀ ಊರಲ್ಲಿ ಏನೇ ತೊಂದರೆಯಾದರೂ ಅಪ್ಪನ ಹತ್ತಿರ ಬಂದು ವಿವರಿಸಿ ಅಭಿಪ್ರಾಯ, ಪರಿಹಾರಗಳನ್ನು ಕೇಳುತ್ತಿದ್ದರು.

ಆದರೆ, ನಮ್ಮಪ್ಪಶಿಕ್ಷಕರಾಗಿದ್ದ ಶಾಲೆಯಲ್ಲಿ ನಾನು ಓದಲಾಗಲೇ ಇಲ್ಲ.
ನಾನು ಮೂರನೆಯ ತರಗತಿಯಲ್ಲಿದ್ದಾಗ ಆರ್‌. ಗೌಡ ಎಂಬ ಶಿಕ್ಷಕ ರೊಬ್ಬರಿದ್ದರು. ಉದ್ದಕ್ಕೆ ಸಣ್ಣಕಿದ್ದ ಅವರ ಕಣ್ಣುಗಳು ಮಾತ್ರ ತೀಕ್ಷ್ಣವಾಗಿದ್ದವು. ಊರಿನ ಜನ, ಅದರಲ್ಲೂ ಹೆಂಗಸರು ಅವರನ್ನು ಬಿದಿರುಪೀಪಿ ಮೇಸ್ಟ್ರೆ ಎಂದೇ ಕರೆಯುತ್ತಿದ್ದರು. ಅವರ ವಿಶೇಷವೆಂದರೆ ಅವರು ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಅಡ್ಡ ಹೆಸರು/ಉಪನಾಮ ಇಟ್ಟೇ ತೀರುತ್ತಿದ್ದರು. ಅವರ ಸ್ಮರಣಶಕ್ತಿ ಅದೆಷ್ಟು ಶಕ್ತಿಯುತವಾಗಿತ್ತೆಂದರೆ ರಿಜಿಸ್ಟರಿನಲ್ಲಿ ಹೆಸರು ಕೂಗುವಾಗಲೂ ಅದೇ ಅಡ್ಡನಾಮದಿಂದ ಕರೆಯುತ್ತಿದ್ದರು ಮತ್ತು ಆ ವಿದ್ಯಾರ್ಥಿ ಆ ಅಡ್ಡನಾಮವನ್ನೆ ಅಧಿಕೃತವಾಗಿ ಒಪ್ಪಿಕೊಂಡು "ಯಸ್‌ ಸಾರ್‌' ಎನ್ನಲೇಬೇಕಾದ ಅನಿವಾರ್ಯ ಪರಿಸ್ಥಿತಿ ತಂದೊಡ್ಡುತ್ತಿದ್ದರು. ""ಕರೆಕ್ಟಾಗಿ ಪಾಟ ಯೋಳು ಅಂದ್ರ ಎಲಿÅಗೂ ಅಡ್ಡ ಹೆಸ್ರಿಟಕೊಂಡು ಕುಣೀತಾವ°ಲ್ಲಾ ಆ ಪೀಪಿ ಮೇಸ್ಟ್ರೆ... ನನ್‌ ಮಗನ್‌ ಹೆಸ್ರಿಗೇನಾಗಿದ್ದು...' ಎಂದು ಅದೆಷ್ಟೋ ಹೆಂಗಸರು, ತಾಯಂದಿರು ಶಾಲೆಯ ಮುಂದೆ ಬಂದು ಜಗಳ ಆಡಿದ್ದೂ ಉಂಟು. ಆಗೆಲ್ಲಾ "ಅಮೌ¾... ನಿನ್‌ ಮಗ ಸರಿಯಾಗಿ ಓದಿನ ಇಲ್ವ ಅನ್ನದ್ನ ತಿಳ್ಕಂಡು ವಿಚಾರಿಸ್ಕ... ಅದ ಬಿಟ್ಟೂ ಹಿಂಗ ಇಸ್ಕೂಲ್‌ ಮುಂದ ಬಂದು ಜಗಳಾಡಿದ್ರ ಹುಚ್ಚುಮಾರಿ ಅಂತ ನಿಂಗೇ ಹೆಸರಿಡಬೇಕಾಯ್ತದೆ...' ಎಂದು ಅವರಿಗೇ ಜೋರು ಮಾಡಿ ಕಳುಹಿಸಿಬಿಡುತ್ತಿದ್ದರು. ಆಮೇಲೆ ಒಂದು ವಾರದವರೆಗೆ ಆ ವಿದ್ಯಾರ್ಥಿಗೆ 17ನೇ ಮಗ್ಗಿ, 21ನೇ ಮಗ್ಗಿ ಹೇಳಿಸಿ ತಪ್ಪು$ಮಾಡಿಸಿ ದೊಣ್ಣೆಯಿಂದ ಚಚ್ಚುತ್ತಿದ್ದರು. ಹುಡುಗರೂ ಏನೂ ಕಡಿಮೆಯಿರಲಿಲ್ಲ. ಮೇಸ್ಟ್ರೆ ಮಧ್ಯಾಹ್ನದ ಹೊತ್ತಿಗೆ ಲೋಟ ಕೊಟ್ಟು , "ಹಾಲು ತೆಗೆದುಕೊಂಡು ಬಂದು ಟೀ ಮಾಡು' ಎಂದಾಗ ತೀರಾ ಕೋಪವಿದ್ದವರು "ಸಾರ್‌, ನಾವು ಹಾಲು ತರುತ್ತೇವೆ' ಎಂದು ಹೇಳಿ, ಹಾಲು ತರುವಾಗ ಆ ಲೋಟಕ್ಕೆ ಕಳ್ಳಿàಗಿಡದ ಹಾಲು ಹಾಕಿ, ಅದು ಸರಿಯಾಗಿ ಟೀ ಆಗದೆ ಗೌಡರು ಅದನ್ನೇ ಕುಡಿದಾಗ, ""ಈವತ್ತು ರಾತ್ರಿಗೆ ಐತೆ ನಿಮಗೆ...' ಎಂದು ಸಂತಸದಿಂದ ಕುಣಿದಾಡಿ, ""ನಾಳಿಗೆ ಪೀಪಿ ಮೇಸ್ಟ್ರೆ ಬರಲ್ವಂತೆ...' ಎಂದು ಖಡಾಖಂಡಿತವಾಗಿ ಅನೌನ್ಸ್‌ ಮಾಡುತ್ತಿದ್ದರು.

ಊರಲ್ಲಿ ಮನೆ ಪಾಠಕ್ಕೆ ಹುಚ್ಚುಮೇಸ್ಟ್ರೆ ಇದ್ದರು. ತಲೆಯಲ್ಲಿ ಶಾಸ್ತ್ರಕ್ಕೆಂದರೂ ಒಂದು ಕಪ್ಪಗಿನ ಕೂದಲು ಸಿಕ್ಕುತ್ತಿರಲಿಲ್ಲ. ಮದುವೆಯಾಗಿರಲಿಲ್ಲವೋ, ಅಥವಾ ಹೆಂಡತಿ ಬಿಟ್ಟು ಹೋಗಿದ್ದಳ್ಳೋ ಅಂತೂ ಊರಿಗೆ ಬಂದದ್ದು ಒಂಟಿಯಾಗಿಯೇ! ಅದೆಲ್ಲಿ ಅದ್ಯಾವ ಶಾಲೆಯಲ್ಲಿ ಶಿಕ್ಷಕರಾಗಿದ್ದರೋ, ಅದ್ಯಾವ ವಿಷಯ ಬೋಧಿಸು ತ್ತಿದ್ದರೋ ಅವರು ನಿವೃತ್ತರಾಗಿದ್ದರೋ ಅಥವಾ ಕೆಲಸ ಬಿಟ್ಟಿದ್ದರೋ ಯಾರಿಗೂ ಗೊತ್ತಿರಲಿಲ್ಲ. ಆದರೆ ಬಂದದ್ದೇ ತಾನು ಮೇಸ್ಟ್ರೆ ಮನೆಪಾಠದ ಮೇಸ್ಟ್ರೆ ಎಂದು ಪರಿಚಯಿಸಿಕೊಂಡಿದ್ದರು. ಆದರೆ, ಅವರ ಹಿಂಸಾವಿನೋದಿಯ ಗುಣ ಮಾತ್ರ ವಿದ್ಯಾರ್ಥಿಗಳ ಚಡ್ಡಿಯಲ್ಲಿ ಉಚ್ಚೆಮಾಡುವಂತೆ ಮಾಡುತ್ತಿತ್ತು.
""ಸರಿಯಾಗಿ ಓದಲ್ವಾ... ನಾಳೆಯಿಂದ ಹುಚ್ಚುಮೇಸ್ಟ್ರ ಹತ್ರ ಮನೆಪಾಠಕ್ಕೋಗು...' ಎಂದರೆ ಸಾಕು ಆವತ್ತೆಲ್ಲಾ ಮೈ ಗಢಗಢ. ಮನೆ ಪಾಠಕ್ಕೆ ಕಾಲಿಡುತ್ತಿದ್ದಂತೆಯೇ ಮೊದಲಿಗೆ ಕಾಣುತ್ತಿದ್ದದ್ದು ತಲೆ ಕೆಳಗೆ ಹಾಕಿ ಕಾಲು ಮೇಲೆ ಹಾಕಿ ಗೋಡೆಗೊರಗಿ ಕಣ್ಣೀರು ಸುರಿಸುತ್ತಿದ್ದ ವಿದ್ಯಾರ್ಥಿಗಳು... ಮುಂದಿನ ಸಾಲಿನಲ್ಲಿ ಕುಕ್ಕರಗಾಲಿನಲ್ಲಿ ಕುಳಿತು ಕಾಲ ಕೆಳಗಿಂದ ಕೈ ತಂದು ಕುಂಡೆ ಎತ್ತಿ ಕಿವಿ ಹಿಡಿದು ಅಳುತ್ತಿದ್ದವರು...
ಅನಂತರ ಒಂದಿಬ್ಬರು ಕೈ ಉಜ್ಜಿಕೊಂಡು ಅಳುತ್ತ ಮಗ್ಗಿ ಒಪ್ಪಿಸುತ್ತಿದ್ದರೆ ಮೇಸ್ಟ್ರೆ ಬೆತ್ತವನ್ನು ಮೇಲೆ ಕೆಳಗೆ ಆಡಿಸುತ್ತ ಆರಾಮಾಗಿ ಕುರ್ಚಿಯಲ್ಲಿ ಕುಳಿತಿರುತ್ತಿದ್ದರು.

ಅವರು ತರಗತಿ ಪ್ರಾರಂಭವಾಗುವುದಕ್ಕೆ ಮುನ್ನ ಎಲ್ಲರ ಎದುರಿಗೆ ಬೆತ್ತವನ್ನು ದಿನವೂ ಪರೀಕ್ಷಿಸುತ್ತಿದ್ದರು. ಅದನ್ನು ಬಗ್ಗಿಸಿ, ಮುರಿಯುವಂತೆ ಮಾಡಿ ಆನಂತರ ಗೋಡೆಗೆ ಪಠೀರ್‌ ಪಠೀರ್‌ ಎಂದು ಬಾರಿಸಿ "ಗಟ್ಟಿಯಾಗಿದೆ' ಎಂಬಂತೆ ನಮ್ಮಗಳ ಕಡೆಗೆ ನೋಡುತ್ತಿದ್ದರು... ಈ ಹುಚ್ಚುಮೇಸ್ಟ್ರ ಹುಚ್ಚಾಟಗಳು ಇನ್ನೂ ಇದ್ದವು. ಮಗ್ಗಿಯನ್ನು ಉಲ್ಟಾ ಉರುಹೊಡೆಸುತ್ತಿದ್ದರು, ಪಾಠವನ್ನು ಹತ್ತತ್ತು ಬಾರಿ ಬರೆಸುತ್ತಿದ್ದರು, ತಪ್ಪು ಮಾಡಿದರೆ ರೂಮಲ್ಲಿ ಕೂರಿಸಿ, ಬಾಗಿಲು ಹಾಕಿ ಮೆಣಸಿನಕಾಯಿ ಹೊಗೆ ಹಾಕುತ್ತಿದ್ದರು... ಊರಿನ ಜನರೂ "ತಮ್ಮ ಪುಂಡು ಮಕ್ಕಳಿಗೆ ಬುದ್ಧಿ ಕಲಿಸಲು ಹುಚ್ಚು ಮೇಸ್ಟ್ರೆ ಸರಿ' ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದರು.
ಹೊಡೆಯುವುದಕ್ಕೆ ಮನೆಯವರ ಅಧಿಕೃತ ಅನುಮತಿ ಸಿಕ್ಕಮೇಲೆ ಕೇಳಬೇಕೆ? ಹುಚ್ಚುಮೇಸ್ಟ್ರ ಹುಚ್ಚಾಟ ಹದ್ದು ಮೀರುತ್ತಿತ್ತು.

ಅವನನ್ನು ಓಲಾಡದಂತೆ ಒಂಟಿಕಾಲಲ್ಲಿ ನಿಲ್ಲಿಸುತ್ತಿದ್ದರು. ಅವನ ಕಿವಿ ಹಿಸಿದುಹೋಗುವಂತೆ ಹಿಂಡಿಬಿಡುತ್ತಿದ್ದರು. ಅದಕ್ಕಿಂತ ಘನಘೋರ ಶಿಕ್ಷೆಯೆಂದರೆ ಅವನಿಗಿಂತ ಕಿರಿಯವಯಸ್ಸಿನವನ ಕೈಯಲ್ಲಿ ಕಪಾಲಕ್ಕೆ ಹೊಡೆಸುತ್ತಿದ್ದುದಷ್ಟೆ ಅಲ್ಲ , ಅವನ ಕಾಲ ಕೆಳೆಗೆ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಮೂರು ಮೂರು ಬಾರಿ ನುಗ್ಗಿಸುತ್ತಿದ್ದರು, ಅದೂ ಮನೆಪಾಠದ ಮನೆಯಿಂದ ಹೊರಗೆ... ಎಲ್ಲರಿಗೂ ಕಾಣುವಂತೆ. ಇವೆಲ್ಲದ್ದರಿಂದಲೋ ಏನೊ, ಮಾರನೇ ದಿನ ಶಾಲೆಯಲ್ಲಿ ನಮ್ಮ ಮೇಸ್ಟ್ರೆ ಇತಿಹಾಸ ಪಾಠ ಮಾಡುತ್ತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿದವರು ಅದೆಷ್ಟು ಕಷ್ಟಪಟ್ಟರು ಎಂದು ವಿವರಿಸುತ್ತಿದ್ದರೂ ಹುಚ್ಚುಮೇಸ್ಟ್ರ ಮುಂದೆ ಯಾವ ಬ್ರಿಟಿಷರು ಸಾಟಿಯಿಲ್ಲ ಎನಿಸಿಬಿಡುತ್ತಿತ್ತು.

ನನ್ನ ಹೈಸ್ಕೂಲ್‌ ಜೀವನವಂತೂ ವರ್ಣರಂಜಿತ ಎಂದೇ ಹೇಳಬಹುದು.ಅದು ಮಠದವರು ನಡೆಸುತ್ತಿದ್ದ , ಆಗತಾನೆ ಪ್ರಾರಂಭವಾಗಿದ್ದ ಶಾಲೆಯಾದ್ದ ರಿಂದ ಶಾಲೆಗೆ ಕಟ್ಟಡವೇ ಇರಲಿಲ್ಲ. ಅದಕ್ಕೆ ಊರಿನ ಜಮೀನಾªರರ ಮನೆ ಯಲ್ಲಿ , ಕೊಟ್ಟಿಗೆಯಲ್ಲಿ ತೋಟದ ಮನೆಯಲ್ಲಿ, ಅರ್ಧ ಕಟ್ಟಿದ ಮನೆಗಳಲ್ಲಿ ಸರ್ಕಾರಿ ಆಸ್ಪತ್ರೆಗೆಂದು ಕಟ್ಟಿಸಿದ್ದ ಪೂರ್ತಿಯಾಗಿರದ ಕಟ್ಟಡ ಹೀಗೆ ಎಲ್ಲೆಂದ ರಲ್ಲಿ ತರಗತಿಗಳು ನಡೆಯುತ್ತಿದ್ದವು. ಕೊಟ್ಟಿಗೆಯಲ್ಲಿ ಎಂಟನೆಯ ತರಗತಿ, ಪಾಳುಮನೆಯಲ್ಲಿ ಒಂಬತ್ತು ಮತ್ತು ತೋಟದ ಮನೆಯಲ್ಲಿ ಹತ್ತು...
ಆದರೆ ಪ್ರಾರ್ಥನೆ ಬೇರೊಂದು ಕಡೆ. ಅಲ್ಲಿಂದ ಪ್ರಾರ್ಥನೆ ಮುಗಿಸಿ ಸಾಲಾಗಿ ಇರುವೆ ಗಳಂತೆ ಒಂದು ಕಿಲೋಮೀಟರು ನಡೆದು ಊರಜನರೆಲ್ಲಾ ನೋಡುವಂತೆ ತರಗತಿಗೆ ಹೋಗಬೇಕಿತ್ತು. ಅದು ಕೆಲವರಿಗೆ ಲಾಭದಾಯಕವೂ ಆಗಿತ್ತು. ಕೆಲವರು ಮನೇಲೇ ಇದ್ದು ತಮ್ಮ ಕೆಲಸವನ್ನು ಮಾಡಿಕೊಂಡು ಪ್ರಾರ್ಥನೆ ಮುಗಿಸಿ ಕ್ಲಾಸ್‌ ರೂಮಿಗೆ ಹೋಗುವಾಗ ಅವರ ಮನೆಮುಂದೆ ಸಾಲು ಬಂದಾಗ ಮೆಲ್ಲಗೆ ಕಳ್ಳತನದಲ್ಲಿ ಸಾಲಿನಲ್ಲಿ ನುಸುಳಿಕೊಳ್ಳುತ್ತಿದ್ದರು. ನಮ್ಮ ತರಗತಿಯ ಹತ್ತಿರ ಹೋದಂತೆ ಕೊಕ್ಕರೆಯಂತೆ ಸೆಗಣಿ-
ಗಂಜಲವನ್ನು ದಾಟಿ ನಮ್ಮ ನಮ್ಮ ಡೆಸ್ಕಿಗೆ ಹಾರಿಕೊಳ್ಳಬೇಕಿತ್ತು. ಆಮೇಲೆ ಅಪ್ಪಿತಪ್ಪಿಯೂ ಡೆಸ್ಕಿಗೆ ಕಾಲು ಸೋಕಿಸುವಂತಿರಲಿಲ್ಲ. ಬ್ಯಾಗು, ಪುಸ್ತಕ ಅಪ್ಪಿತಪ್ಪಿ$ಕೆಳಗೆ ಬಿದ್ದರಂತೂ ಮುಗೀತು. ಎಲ್ಲವೂ ಸಗಣಿಮಯ. ಇದನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದವರೆಂದರೆ ಹೋಮ್‌ವರ್ಕ್‌ ಮಾಡದಿರುತ್ತಿದ್ದವರು!

ಹೋಮ್‌ವರ್ಕ್‌ ಪುಸ್ತಕವನ್ನು ಮೇಸ್ಟ್ರಿಗೆ ಕೊಡುವಾಗ ಕೈತಪ್ಪಿ$ಕೆಳಗೆ ಬೀಳುವಂತೆ ಮಾಡಿ ಸಗಣಿಮಯ ಮಾಡುತ್ತಿದ್ದರು. ಆಮೇಲೆ ಆತುರಾತುರವಾಗಿ ಅದನ್ನ ಎತ್ತಿಕೊಳ್ಳುವಂತೆ ಮಾಡಿ ಇನ್ನಷ್ಟು ಸಗಣಿ ಮೆತ್ತಿಸಿ ಮೇಸ್ಟ್ರೆ ಮುಟ್ಟದಂತೆ ಮಾಡಿ "ಸರಿ ನಾಳೆ ತಂದು ತೋರಿಸು...' ಎಂದು ಮೇಸ್ಟ್ರೇ ಹೇಳುವಂತೆ ಮಾಡುತ್ತಿದ್ದರು. ಅಲ್ಲಿದ್ದ ಮೇಸ್ಟ್ರೆಗಳಾದರೂ ಯಾರು? ಆಗತಾನೆ ಬಿ.ಎಡ್‌ ಮುಗಿಸಿದವರು, ಬಿ.ಎ. ಮುಗಿಸಿ ಊರಲ್ಲೇ ಇದ್ದವರು. ಮಠಕ್ಕೆ ಬಂದು ಪಾಠ ಮಾಡಿ ಎಂದು ಸ್ವಾಮಿಗಳಿಂದ ಅಪ್ಪಣೆಯಾಗುತ್ತಿದ್ದಂತೆ ಪ್ಯಾಂಟುಶರ್ಟು ತೊಟ್ಟು ಪಾಠ ಮಾಡಲು ಶಾಲೆಗೆ ಬಂದುಬಿಡುತ್ತಿದ್ದರು.

ಅದರಲ್ಲಿ ನನಗೆ ಚೆನ್ನಾಗಿ ನೆನಪಿರುವುದು ರಮೇಶ ಮೇಸ್ಟ್ರೆ. ನಿನ್ನೆಯೆಲ್ಲಾ ಊರಾಚೆಯ ಕಂಪೌಂಡಿನ ಮೆಲೆ ಕುಳಿತು ಬೀಡಿ ಸೇದುತ್ತಿದ್ದವನಿಗೆ ಏಕಾಏಕಿ ಮರ್ಯಾದೆ ಕೊಡುವುದಾದರೂ ಹೇಗೆ...? ಅವನೊ ಪಕ್ಕಾ ಮೇಸ್ಟ್ರಿಗಿಂತ ಹೆಚ್ಚಾಗಿಯೇ ಮೆರೆಯುತ್ತಿದ್ದನು. ""ಲೋ..ನಿಂಗೆ ರಾತ್ರಿ ಸ್ವಲ್ಪ$ಹೊರೆ ಎತ್ಕಂಡ್‌ ಬಾ ಅಂದ್ರೆ ಬರಕ್ಕಾಗ್ಲಿಲ್ಲ ಹೋಮ್‌ವರ್ಕ್‌ ಮಾಡದೆ ಬಂದ್‌ ನಿಂತಿದ್ದೀಯಾ... ಮೊನ್ನೆ ನಮ್‌ ಹೊಲಕ್ಕೇ ದನ ನುಗ್ಸಿಯ... ಗಡಿಭೈರವನ ಜೂಜಾಟ ದಲ್ಲಿ ಜಾತ್ರೇಲಿ ಮುನ್ನೂರುಪಾಯ್‌ ಗೆಲ್ಲಕಾಯ್ತದೆ ಹೋಮ್‌ವರ್ಕ್‌ ಮಾಡಕಾ ಗಲ್ವಾ...?' ಹೀಗೆ ವೈಯಕ್ತಿಕ ವಿಷಯಗಳನ್ನು ಹೋಮ್‌ವರ್ಕ್‌ ಜೊತೆ ಸೇರಿಸಿ ಬಡಿಯುತ್ತಿದ್ದುದಕ್ಕೆ ಇನ್ನೂ ಒಂದು ಕಾರಣವಿತ್ತು. ಗಡಿ ಭೈರವನ ಜಾತ್ರೆಯಲ್ಲಿ ಆಡುವ ಜೂಜಾಟದಲ್ಲಿ ಸ್ವತಃ ಗುರು ಶಿಷ್ಯರಿಬ್ಬರೂ ಪಾಲ್ಗೊಳ್ಳುತ್ತಿದ್ದದ್ದು.

""ಲೋ ಈ ಸಿದ್ದಪ್ಪನ ಮಗ ಬೇಜಾನ್‌ ಆಡ್ತಾನೆ ಕಣಾÉ... ಅವ್ನಿಗೆ ಡಿಗ್ರೀಲಿ ಇನ್ನೂ ಎರಡು ಸಬೆjಕುr ಉಳ್ಕಂಡಿದ್ದಂತೆ...' ಹುಡುಗರು ಮಾತಾಡಿಕೊಳ್ಳುತ್ತಿದ್ದೆವು. ಶಾಲೆ ಬಿಟ್ಟ ಮೇಲೆ ನಾವು ನಮ್ಮೂರಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದರೆ ಇದೇ ರಮೇಶ ಮೇಸ್ಟ್ರೆ ಸೌದೆ ಹೊರೆ ಹೊತ್ತುಕೊಂಡೋ, ದನಗಳನ್ನು ಹೊಡೆದು ಕೊಂಡೋ ಹೋಗುವುದನ್ನು ನೋಡುತ್ತಿದ್ದೆವು. ಆಗೆಲ್ಲಾ ನಮಸ್ಕಾರ ಮಾಡಿದರೆ ಏನೋ ಒಂದು ರೀತಿಯ ಬಿಗುಮಾನದ ನಗೆ ನಗುತ್ತಿದ್ದದ್ದುಂಟು. ಕೆಲವೊಮ್ಮೆ ಬೆಳಿಗ್ಗೆಯೇ ದನಕ್ಕೇ ನೇಗಿಲು ಹೇರಿಕೊಂಡು ಹೋಗುತ್ತಿದ್ದದ್ದೂ ಉಂಟು. ಆಗ ""ಸಾರ್‌, ಈವತ್ತು ಸ್ಕೂಲಿಗೆ ಬರಲ್ವಾ...?' ಎಂದರೆ, ""ಇಲ್ಲಾ ಕಣೊÅà ಸ್ವಲ್ಪ$ಹೊಲದಲ್ಲಿ ಕೆಲ್ಸ ಐತೆ... ಆಳುಗಳು ಬಂದಿಲ್ಲಾ...' ಎಂದುತ್ತರಿಸುತ್ತಿದ್ದರು. ಆಗ ನಾವೆಲ್ಲ , ""ಸಾ...
ನೀವು ಪ್ಯಾಂಟ್‌ ಹಾಕಿರೋದು ನೋಡಿ ಸ್ಕೂಲಿಗೆ ಬಂದರೇನೋ ಅನ್ಕೊಂಡ್ವಿ...' ಎಂದು ಕಾಣದಂತೆ ನಗುತ್ತಿದ್ದೆವು.

ಹಾಗೆ ಮಹದೇವಪ್ಪಎಂಬ ಇನ್ನೊಬ್ಬ ಶಿಕ್ಷಕರಿದ್ದರು.ಶಿವರಾಜು ಕುಮಾರ್‌ ಹೇರ್‌ ಕಟ್‌ ಅವರದು. ಅವರು ಶಾಲೆಯ ಕ್ಲರ್ಕ್‌ ಆಗಿದ್ದರೂ ಒಂದೊಂದು ಪಿರಿಯಡ್‌ ಜನರಲ್‌ ಕ್ಲಾಸ್‌ ಮಾಡುತ್ತೇನೆ ಎಂದು ಬಂದುಬಿಡುತ್ತಿದ್ದರು. ಅವರು ಬಂದರೆಂದರೆ ನಮಗೆಲ್ಲಾ ಪುಕ್ಕಟ್ಟೆ ಮನರಂಜನೆ.

ಅವರು ನಮಗೆ ಗೊತ್ತಾಗುವಷ್ಟು ಪೆದ್ದರಾಗಿದ್ದರು. ""ಸಾರ್‌ ಇವನು ಚೆನ್ನಾಗಿ ಹಿಂದಿ ಹಾಡು ಕಲ್ತಿದ್ದಾನೆ ಸಾರ್‌...' ಎಂದು ಗೆಳೆಯ ಪುಟ್ಸಾಮಿಯನ್ನು ತೋರಿಸುತ್ತಿದ್ದೆವು. ""ಬಾರೊ... ಹಾಡು' ಎಂದಾಕ್ಷಣ ಚಿಗರೆಯಂತೆ ಹಾರುತ್ತಿದ್ದ ಪುಟ್ಸಾಮಿ ಗಂಟಲು ಸರಿಪಡಿಸಿಕೊಂಡು ಬಾಯಿಗೆ ಬಂದದ್ದು ಹಾಡಿನ ತರದಲ್ಲಿ ಪೇಚಾಡುತ್ತಿದ್ದರೆ ನಾವು ಮುಸಿಮುಸಿ ನಗುತ್ತಿದ್ದೆವು. ಆದರೆ ಮಹದೇವಪ್ಪ ಮಾತ್ರ ನಮ್ಮೆಡೆಗೆ ಕೆಂಗಣ್ಣು ಬಿಟ್ಟು ನೋಡ್ರೋ ಎಷ್ಟ್ ಚೆನ್ನಾಗಿ ಕಲ್ತಿದ್ದಾನೆ ಹಿಂದಿ ಹಾಡನ್ನಾ... ನೀವೂ ಇದ್ದೀರಾ... ಎಂದು ಬೈಯುತ್ತಿದ್ದರು. ನಮಗಂತೂ ನಗು ತಡೆಯಲು ಆಗುತ್ತಲೇ ಇರಲಿಲ್ಲ.

ಮೀನಾ ನಮ್ಮ ತರಗತಿಯಲ್ಲಿದ್ದ ಹದಿನಾರು ಹುಡುಗಿಯರ ಪೈಕಿ ಸ್ವಲ್ಪ$ ಬೆಳ್ಳಗೆ ಸುಂದರವಾಗಿದ್ದಳು.ಅವಳನ್ನು ಭಾನುವಾರದಂದು ಮದುವೆಗೆ ಹೆಣ್ಣು ನೋಡಲು ಈ ಮಹದೇವಪ್ಪ ಹೋಗಿದ್ದರು.ಆಗ ಮೀನಾ ಮಹದೇವಪ್ಪನನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಕ್ಕೆ ಎರಡು ಕಾರಣಗಳನ್ನು ಕೊಟ್ಟಿದ್ದಳು. ಅವರನ್ನು ಈಗಾಗಲೇ ಸಾರ್‌... ಸಾರ್‌ ಎಂದು ಕರೆದು ರೂಢಿಯಾಗಿರುವುದರಿಂದ ಮದುವೆಯ ನಂತರ ಹಾಗೆ ಕರೆಯಲಿಕ್ಕೆ ಆಗದು ಎನ್ನುವುದು ಮೊದಲನೆಯ ಕಾರಣವಾಗಿದ್ದರೆ ಎರಡನೆಯದು ಮೇಸ್ಟ್ರೆಪೆದ್ದು ಎಂಬುದು. ಆದರೆ ಮಹದೇವಪ್ಪ ಮೇಸ್ಟ್ರೆ ಮೀನಾ ತನ್ನ ವಿದ್ಯಾರ್ಥಿನಿಯಾದ್ದರಿಂದ ತನ್ನನ್ನು ಒಪ್ಪೆಧೀ ಒಪ್ಪುತ್ತಾಳೆ, ಈ ಮದುವೆ ನಡೆಯುತ್ತದೆ ಎಂದು ಬಲವಾಗಿ ನಿರ್ಧರಿಸಿಬಿಟ್ಟಿದ್ದರು. ಆದರೆ, ಫ‌ಲಿತಾಂಶ ತಿಳಿದ ಮೇಲೆ ಅವರ ವರ್ತನೆಯೆ ಬೇರೆಯಾಗಿತ್ತು. ತರಗತಿಗೆ ಬಂದರೆ ಏನಾದರೊಂದು ವಿಷಯ ತೆಗೆದು "ಈಗಿನ ಕಾಲದ ಹುಡುಗೀರು ಸರಿಯಿಲ್ಲ..ಅವರ ಎಕ್ಸ್‌ಪೆಕ್ಟೇಷನ್‌ ಜಾಸ್ತಿ... ಅಂಥವರಿಗೆ ಸರಿಯಾಗೇ ಆಗುತ್ತೆ...' ಎಂದು ವಾರೆಗಣ್ಣಿಂದ ಮೀನಾಳೆಡೆಗೆ ನೋಡಿದರೆ, ಮೀನಾ ತಲೆತಗ್ಗಿಸುತ್ತಿದ್ದಳು. ನಾವು ಮುಸಿಮುಸಿ ನಗುತ್ತಿದ್ದೆವು.

ಕೊನೆಗೂ ಮೀನಾಳ ಮದುವೆಗೆ ಇಡೀ ನಮ್ಮ ಶಾಲೆಯೇ ನೆರೆದಿದ್ದರೂ ಮಹದೇವಪ್ಪ ಮಾತ್ರ ತನಗೆ ಕೆಲಸವಿದೆಯೆಂದು ತಪ್ಪಿಸಿಕೊಂಡರು.

ಇವರ ಜೊತೆಗೆ ನಮಗೆ ಪಾಠ ಚೆನ್ನಾಗಿ ಕಲಿಸಿದ ಗುರುಗಳು ಇದ್ದಾರೆ. ಆದರೆ, ಅವರಿಗಿಂತ ನೆನಪಿಗೆ ಬರುವುದು ಈ ಮೇಸ್ಟ್ರೆಗಳೇ... ನೆನಪಾದಾಗಲೆಲ್ಲ ನಗು ಬಂದರೂ ಅಮೇಲೆ ಯಾಕೋ ಕಣ್ತುಂಬಿ ಬರುತ್ತದೆ..ಅದು ಖುಷಿಗೋ, ಕಳೆದುಹೋದ ಕಾಲವನ್ನು ನೆನೆದೋ ಇಂದಿಗೂ ಗೊತ್ತಾಗಿಲ್ಲ.[ಇದು ನವಂಬರ 13 ರ೦ದು  ಉದಯವಾಣಿಸಾಪ್ತಾಹಿಕದಲ್ಲಿ ಪ್ರಕಟವಾಗಿದೆ.]

Monday, April 23, 2012

ಅಚ್ಚರಿಯ ಬದುಕಿದು... ಬದುಕಿಬಿಡು ಒಮ್ಮೆ !-ಭಾಗ-1


{ಈ ಕಥೆ ಕಳೆದ ಭಾನುವಾರ[22/4/2012]ದ ಉದಯವಾಣಿಯ ಸಾಪ್ತಾಹಿಕ ಸಂಚಿಕೆಯಲ್ಲಿ  ಪ್ರಕಟವಾಗಿದೆ.} ರೆನ್ಸಿಯಿದ್ದೂ, ನೆಟ್‌ವರ್ಕ್‌ ಇದ್ದೂ ಬ್ಯಾಟರಿ ಸತ್ತ ಮೊಬೈಲಿನಂತಾಗಿರುವ ನಟರಾಜ ಅಲಿಯಾಸ್‌ ನಟ್ಟೂನನ್ನು ನೋಡಿ ಸುಶೀಲಮ್ಮನಿಗೇ ಅಯ್ಯೋ ಎನಿಸಿತು. ಬೆಳಗ್ಗಿಂದ ಸಂಜೆವರೆಗೆ ಟಿವಿಯಲ್ಲಿ ಒದರಿದ್ದನ್ನೇ ಒದರುವ ನ್ಯೂಸ್‌ ಚಾನಲ್ಲಿನಂತೆ ನಟ್ಟೂ ಏನೇನೋ ಗೊಣಗುವುದು, ತಲೆಯ ಮೇಲೇನೋ ಗಟ್ಟಿಯಾಗಿ ಅಂಟಿಸಿದ್ದನ್ನು ಕೆಳಬೀಳಿಸುವವನಂತೆ ತಲೆಯನ್ನು ಅತ್ತಿಂದಿತ್ತ ಜೋರಾಗಿ ಅಲ್ಲಾಡಿಸುವುದನ್ನು ಸುಮ್ಮನೇ ನೋಡುತ್ತಿದ್ದ ಸುಶೀಲಮ್ಮನಿಗೆ ಯಾಕೆ ಯಾರು ಅವನಲ್ಲಿ ಏನನ್ನೂ ಹೇಳುತ್ತಿಲ್ಲ ಎನಿಸಿ ಬಹುಶಃ ಈಗ ಹೇಳುತ್ತಾರೇನೋ ಎಂದು ಮಗ ಅಶೋಕನ ರೂಮಿನ ಕಡೆಗೊಮ್ಮೆ ಸೊಸೆ ಕಾವ್ಯಾಳ ಕೊನೆಗೊಮ್ಮೆ ನೋಡುವುದು, ಅದೇ ಸ್ಪೀಡಿನಲ್ಲಿ ಟಿವಿಯ ಕಡೆಗೆ ಕಣ್ಣು ಹಾಯಿಸಿ ಅಲ್ಲಿನ ಕಥೆಯನ್ನು ಫ‚ಾಲೋ ಮಾಡುವುದು ಮಾಡುತ್ತಿದ್ದಳು. ಸುಮಾರು ಹೊತ್ತು ಅದೇ ಪ್ರಕ್ರಿಯೆಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದ ನಟ್ಟೂ ಆಮೇಲೆ ತಲೆ ಒದರಿಕೊಳ್ಳುತ್ತಲೇ ಎದ್ದುಹೊರಗಡೆ ಹೋಗಿಬಿಟ್ಟ. ಅವನು ಹೋದದ್ದನ್ನು ಖಾತರಿ ಮಾಡಿಕೊಂಡು ಜುರಾಸಿಕ್‌ ಪಾರ್ಕಿನ ಡೈನೋಸಾರ್‌ನಂತೆ ನಿಧಾನಕ್ಕೆ ಹೆಜ್ಜೆಹಾಕುತ್ತ, ಸದ್ಯ ಜೀವ ಬಂತೆಂಬುವಂತೆ ಹೊರ ಬಂದ ಅಶೋಕ ತನ್ನನ್ನೇ ರಿಯಾಲಿಟಿ ಶೋನಲ್ಲಿ ಹಸಿಮಾಂಸ ಕಚ್ಚಿ ತಿನ್ನುತ್ತಿದ್ದ ಪೇಟೆಯ ಅನಾಗರಿಕರನ್ನು ನೋಡುವಂತೆ ನೋಡುತ್ತಿದ್ದ ಅಮ್ಮನನ್ನು ನೋಡಿ, ಬೈದರೂ ಅಂದರೂ ನಗುನಗುತ್ತಲೇ ಉತ್ತರಿಸುವ ನಿಯತ್ತಾಗಿ "ವಂದನೆಗಳು ಶುಭದಿನ' ಎನ್ನುವ ಕಸ್ಟಮರ್‌ಕೇರ್‌ ಗಿರಾಕಿಯಂತೆ, "ವರ್ಕ್‌ ಟೆನÒನ್‌ ಕಣವ್ವಾ... ನಿಂಗೇನೂ ಅರ್ಥ ಆಗಲ್ಲಾ...' ಎಂದ. ಕಾರ್ಯಕ್ರಮದ ಮಧ್ಯಮಧ್ಯ ಇಣುಕಿಹಾಕುವ ಟ್ರೆ„ಲರಿನಂತೆ ಆ ಮಾತನ್ನು ಅಮ್ಮನಿಗೇ ಈಗಾಗಲೇ ನೂರಾರು ಬಾರಿ ಹೇಳಿಬಿಟ್ಟಿದ್ದ. ಸುಶೀಲಮ್ಮ ಮಾತನಾಡಲಿಲ್ಲ. ಬದಲಿಗೆ ಯಾಕೆ ಹೀಗೆ ಅಪ್ಪಮಗನಿಗೇ ಬುದ್ಧಿ ಹೇಳಲು ಅಥವಾ ಗದರಿಸಲು ಹೆದರುತ್ತಿರುವನಾ? ಅಥವಾ ಇದ್ಯಾಕೆ ಯಾರೂ ನಟ್ಟೂನನ್ನು ಕೂರಿಸಿಕೊಂಡು ಏನಾಯಿತು... ಯಾಕೆ ಹಿಂಗೆ ಎಂದು ಕೇಳುತ್ತಿಲ್ಲ ಎನ್ನುವುದು ಕರೋಡಪತಿ ಸ್ಪರ್ಧೆಯ ಕೋಟಿ ರೂಪಾಯಿಯ ಪ್ರಶ್ನೆಯಂತೆ ಕಾಡತೊಡಗಿತು.

ಸುಶೀಲಮ್ಮ ಬೆಂಗಳೂರಿಗೆ ಬಂದು ಕೇವಲ ಆರು ತಿಂಗಳಾಗಿತ್ತು.ಅದೂ ಗಂಡ ಸತ್ತು ಒಂಬತ್ತು ವರ್ಷದ ನಂತರ. ಮಗ ಅದೆಷ್ಟೇ ಹೇಳಿದ್ದರೂ ತನ್ನೂರು ತನ್ನ ಜನ ಬಿಟ್ಟು ಬರಲು ಸುಶೀಲಮ್ಮನಿಗೇ ಯಾಕೋ ಮನಸ್ಸೇ ಒಪ್ಪಿರಲಿಲ್ಲ. ಇರುವ ಒಬ್ಬನೆ ಒಬ್ಬ ಮಗನನ್ನು ಕಷ್ಟಪಟ್ಟು ಕೂಲಿ ಮಾಡಿಯೇ ಓದಿಸಿದ್ದರು ಸಿದ್ದಪ್ಪ ಮತ್ತು ಸುಶೀಲಮ್ಮ. ಇಡೀ ತಮ್ಮ ವಂಶದಲ್ಲಿಯೇ ಯಾರು ಜಾಸ್ತಿ ಓದಿದವರಿಲ್ಲದಿದ್ದರಿಂದ ಮಗ ಅಶೋಕನನ್ನು ಓದಿಸಿಯೇ ತೀರಬೇಕೆಂಬ ಹಠ ಗಂಡ-ಹೆಂಡತಿಯರದಾಗಿತ್ತು. ಮಗ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಹಿಡಿದು ಊರಲ್ಲಿ ಓಡಾಡಿಕೊಂಡಿದ್ದರೆ ಅದೆಷ್ಟು ಚೆನ್ನ. ತಮ್ಮ ಮೈಲೇಜು ಸರೀಕರ, ಸಂಬಂಧಿಕರ ಮುಂದೆ ಮನಸಿನ ವೇಗದಲ್ಲಿ ಓಡುತ್ತದೆ ಎಂದು ಕನಸುಕಟ್ಟಿಕೊಂಡಿದ್ದರು. ಆದರೆ, ಅಶೋಕ ಅಂಥ ಯಾವ ಆಫ‚‌ರ್‌ಗಳನ್ನೂ ತನ್ನ ತಾರೀಫಿ‚ನಲ್ಲಿ ಸೇರಿಸಿರಲಿಲ್ಲ. ಅಪ್ಪಾ$ಇದು ಚೆನ್ನಾಗಿದೆ... ಇದನ್ನ ಓದಿದರೆ ಒಳ್ಳೇ ಲಾಭವಿದೆ... ಅದಕ್ಕೆ ಇಷ್ಟು ಖರ್ಚಾಗುತ್ತದೆ ಎಂದಷ್ಟೇ ಹೇಳಿ ದುಡ್ಡು ನಮ್ಮದಾದರೂ ತರಹೇವಾರಿ ಆಫ‚‌ರ್‌ ಇಟ್ಟು ತಮಗಿಷ್ಟವಾದದ್ದನ್ನೇ ಗಿರಾಕಿಗಳಿಗೆ ತಗಲಾಕುವ ಸೂಪರ್‌ಬಜಾರುಗಳಂತೆ ಹೇಳಿ ಹಣ ಕೀಳುತ್ತಿದ್ದ. ಮೈಸೂರಿನ ಹಾಸ್ಟೆಲ್ಲಿನಲ್ಲಿಯೇ ಉಳಿದುಕೊಂಡು ವಾರಕ್ಕೊಮ್ಮೆ ರಜೆಯಿದ್ದರೂ ಮನೆಗೆ ಬರದೇ ತಾನಿಲ್ಲಿಯೇ ಓದಿಕೊಳ್ಳುತ್ತಿದ್ದೇನೆಂದು ಹೇಳಿಕಳುಹಿಸುತ್ತಿದ್ದ ಅಶೋಕ ರಜಾದಿನವನ್ನು ಮಾತ್ರ ಕಾವ್ಯಾಳಿಗಾಗಿ ಮೀಸಲಾಗಿಟ್ಟಿದ್ದ. ಕಾವ್ಯಾ ಅವನ ಸಹಪಾಠಿ. ಇನ್ನೇನು ಓದು ಮುಗಿಯಿತು, ಕೆಲಸವೂ ಸಿಗುತ್ತದೆ... ಇದೇ ಸಂದರ್ಭದಲ್ಲಿ ಸ್ಕೋಪ್‌ ತೆಗೆದುಕೊಳ್ಳುವ ಕಾರ್ಯಕ್ರಮಗಳಾದ ಮದುವೆಗೆ ಹುಡುಗಿ ನೋಡುವುದು, ಮದುವೆ-ಸಮಾರಂಭಗಳಿಗೆ ಹೋಗಿ ನಿಮ್ಮ ಮಗ ಓದುತ್ತಿದ್ದಾನಾ ಎನ್ನುವ ಪ್ರಶ್ನೆಯನ್ನು ತನ್ನ ಮಗನ ಇಂಟ್ರಡಕ್ಷನ್ನಿಗಾಗಿ ಬಳಸಿಕೊಂಡು, ಆನಂತರ ಮಗ ಹೇಗೇಗೆಲ್ಲಾ ಓದಿದ ಎನ್ನುವುದನ್ನು ಸಿನೆಮಾದ ಅವಧಿಗಿಂತ ತುಸು ಜಾಸ್ತಿಯಾಗಿ, ಧಾರಾವಾಹಿಗಿಂತ ತುಸು ಕಡಿಮೆಯಾಗಿ, ಯಕ್ಷಗಾನಕ್ಕಿಂತ ಕಡಿಮೆ ಅಬ್ಬರದಲ್ಲಿ ಕೊರೆಯಬೇಕೆಂಬ ಹುನ್ನಾರಗಳನ್ನು ಯಶಸ್ವಿಯಾಗಿಸಬೇಕೆಂದು ಸುಶೀಲಮ್ಮ ಸರ್ವರೀತಿಯಲ್ಲೂ ಸಿದ್ಧಗೊಳ್ಳುತ್ತಿದ್ದರೆ ಅತ್ತ ಮಗರಾಯ ಓದು-ಮದುವೆ-ಕೆಲಸಗಳನ್ನು ಒಂದೇ ಟೈಂಲ್ಯಾಪ್ಸಿನಲ್ಲಿ ಮುಗಿಸಿಯೇಬಿಟ್ಟು ಸುಶೀಲಮ್ಮನ ಸರ್ವ ಯೋಜನೆಗಳಿಗೂ ಸ್ಟೇ ಆರ್ಡರ್‌ ತಂದುಬಿಟ್ಟಿದ್ದನಲ್ಲದೇ ಯಾವ ಸಭೆಸಮಾರಂಭಗಳಿಗೂ ಹೋಗಲಾಗದಂತೆ ಮಾಡಿಬಿಟ್ಟಿದ್ದ.  ಆವತ್ತು ಗಂಡ-ಹೆಂಡಿರಿಬ್ಬರಿಗೂ ಎದೆಯೆ ಒಡೆದುಹೋಗಿತ್ತು. ಆದರೆ, ಅವರಿಬ್ಬರು ಯಾವ ಬೀದಿನಾಟಕದ ಪಾತ್ರಧಾರಿಗೂ ಕಮ್ಮಿಯಿಲ್ಲದಂತೆ ಒಬ್ಬರ ಮುಂದೊಬ್ಬರು ಮಗನನ್ನು  ಹೊಗಳುವ ಕೆಲಸ ಮಾಡಿದ್ದರು. ಮದುವೆಯ ಮೂರನೆಯ ದಿನಕ್ಕೇ ಬೆಂಗಳೂರಿಗೆ ಹೊರಟುನಿಂತ ಮಗ-ಸೊಸೆ ಅದೆಷ್ಟು ಬಾರಿ ತಮ್ಮೊಡನೆ ಬರಲೇಬೇಕೆಂದು ರಚ್ಚೆ ಹಿಡಿದರೂ ಬರುವುದಿಲ್ಲವೆಂದು ಇವರಿಬ್ಬರು ತಾವೂ ರಚ್ಚೆ ಹಿಡಿದು ಗೆದ್ದುಬಿಟ್ಟಿದ್ದರು. 

ಇದೆಲ್ಲಾ ಮುಗಿದ ಮೇಲೆ ಒಂದೇ ನಿಟ್ಟಿನಲ್ಲಿ ಇಪ್ಪತ್ತಮೂರು ವರ್ಷಗಳು ಕಳೆದುಹೋಗಿದ್ದವು. ಅಷ್ಟೂ ದಿನಗಳನ್ನು ಮಗನ ಓದಿಗಾಗಿ ಮಾಡಿದ ಸಾಲವನ್ನು ತಮ್ಮಲ್ಲಿರುವ ಮೊಬೈಲ್‌ ಪರದೆಯಗಲದ ಜಮೀನಿನಲ್ಲಿ ದುಡಿದು ತೀರಿಸುವುದಕ್ಕೆ ಮುಡಿಪಾಗಿಟ್ಟುಬಿಟ್ಟಿದ್ದರು. ಮಗ ಪೇಟೆಯಲ್ಲಿ ಸಾವಿರಗಳನ್ನು ಬರೀ
ಮೊಬೈಲಿನಲ್ಲಿ ಮಾತಾಡಿ ಕಳೆಯುವ ಹಣವನ್ನು ಇಲ್ಲಿವರು ಕಂತುಗಳಂತೆ ತಿಂಗಳುತಿಂಗಳು ಕಟ್ಟುತ್ತಿದ್ದರು.
ಮಗ ಅಶೋಕನಿಗೆ ಗೊತ್ತಾಗಿದ್ದರೆ ಒಂದೇ ಸಾರಿ ಕಟ್ಟಿ ಚಾಪ್ಟರ್‌ ಕ್ಲೋಸು ಮಾಡುತ್ತಿದ್ದನೇನೋ... ಆದರೆ, ಸುಶೀಲಮ್ಮ ಸಿದ್ದಪ್ಪದಂಪತಿಗಳಿಗೆ ಅದ್ಯಾಕೋ ಹೇಳಬೇಕೆನ್ನಿಸಿರಲಿಲ್ಲ. ಸಾಲ ತೀರಿದ ಮೇಲೆ ಮಗ ಹಾಕುವ ಊಟ ತಿಂದುಕೊಂಡು ಅದ್ಹೇಗೆ ಸಾಯುವವರೆಗೆ ಕಾಲ ತಳ್ಳುವುದು ಎನ್ನಿಸಿದ್ದರಿಂದ ದುಡಿಯುವ ಮತ್ತು ಸಾಲ ತೀರಿಸುವ ಕಾಯಕದಲ್ಲಿ ಕೈಲಾಸ ಕಂಡುಕೊಂಡಿದ್ದರು.
 ಅಶೋಕನಿಗೆ ಮಗುವಾಯಿತು. ಮಗ, ಬೆಂಗಳೂರಿನ ಪ್ರತಿಷ್ಠಿತ ಸ್ಕೂಲಿಗೆ ದುಬಾರಿ ಹಣತೆತ್ತು ಸೇರಿಯೂ ಆಯಿತು, ಮಗನ ಕಣ್ಣಿಗೆ ಅಪ್ಪನಿಗಿಂತ ಮೊದಲೇ ಕನ್ನಡಕವೂ ಬಂದಿತು, ಮಗ ಗುಂಡುಗುಂಡಗೆ ಬೆಳೆದುಮುದ್ದಾಗಿದ್ದವನು ಬರುಬರುತ್ತ ಡುಮ್ಮನಾಗಿದ್ದದ್ದೂ ಆಯಿತು... ಹೀಗೆ. ಪ್ರತಿಸಾರಿಯೂ ಅಜ್ಜಿಯ ಊರಿಗೆ ಬಂದಾಗ ಆಗುತ್ತಿದ್ದ ಬದಲಾವಣೆಗಳು ಮಾತ್ರ ಸುಶೀಲಮ್ಮನಿಗೆ ಅಚ್ಚರಿ ತರಿಸುತ್ತಿದ್ದವು. ಹೊರಗೆ ಹೋಗಿ ಒಂದು ಆಟವಾಡದ ಮೊಮ್ಮಗ ಮಾತ್ರ ಟಿವಿಯ ನ್ಯೂಸ್‌ ರೀಡರಿನಂತೆ ಇಂಗ್ಲೀಷ್‌ ಮಾತಾಡುವುದು ಹೆಮ್ಮೆಯೆನಿಸುತ್ತಿತ್ತು. ಗೋಡೆಯ ಮೇಲೆ ಕೈಗೆ ಸಿಕ್ಕಿದ್ದರಲ್ಲಿ ಮೊಮ್ಮಗ ನಟರಾಜು ಶಿವಪಾರ್ವತಿ ಚಿತ್ರ ಬಿಡಿಸುತ್ತಿದ್ದರೆ ಸುಶೀಲಮ್ಮನಿಗೆ ಅವನ ಕೈಚಳಕ ನೋಡಿ ಅಚ್ಚರಿಯಾಗುತ್ತಿತ್ತು. ಆದರೆ ಕಾವ್ಯಾ ಮಾತ್ರ "ಓದೊRà ಅಂದ್ರೆ ಇಲ್ಲಿ ಬಂದು ಗೀಚಿ¤àಯ...' ಎಂದು ದೊಣ್ಣೆ ಹಿಡಿದು ಟಾಮ್‌ ಅಂಡ್‌ ಜೆರ್ರಿಯ ಟಾಮ್‌ನಂತೆ ಅಟ್ಟಾಡಿಸುತ್ತಿದ್ದಳು. "ನೋಡ್ತಿರಿ ಅತ್ತೆ, ನನ್ನ ಮಗ ದೊಡ್ಡ ಇಂಜಿನಿಯರಾಗ್ತಾನೆ...
ಇವ್ರಂಗೆ ಗಂಟಲು ಹರ್ಕಂಡು ಪಾಠ ಮಾಡಿ ತಿಂಗಳಿಗೆ ಸಾವ್ರ ಎಣಿಸಲ್ಲ... ಏಸಿ ರೂಮಲ್ಲಿ ಕೂತ್ಕಂಡು ಲಕ್ಷಲಕ್ಷ ಎಣಿಸ್ತಾನೆ...' ಎನ್ನುತ್ತಿದ್ದರೆ ಸುಶೀಲಮ್ಮನಿಗೆ ಅದೇಕೋ ಮುಳ್ಳಿನ ಚಪ್ಪಲಿಯನ್ನು ರೇಷ್ಮೆಯ ಬಟ್ಟೆಗೆ ಸುತ್ತಿ ಹೊಡೆದಂತಾಗುತ್ತಿತ್ತು.

*

ಬೆಂಗಳೂರಿಗೆ ಬೆಂಗಳೂರೇ ಒಂದು ಮಾಯಾನಗರಿಯಂತೆ ಸುಶೀಲಮ್ಮನಿಗೆ ಮಗನ ಮನೆಗೆ ಬಂದ ವಾರದಲ್ಲೇ ಅನ್ನಿಸತೊಡಗಿತ್ತು. ಎಲ್ಲವನ್ನೂ ಕೈಯೊಳಗಿನ ಮೊಬೈಲೆ ಮಾಡಿ ಮುಗಿಸುತ್ತಲ್ಲಾ ಎನಿಸಿ ಆ ಮಾಯಾದಂಡದ ಮೇಲೆ ಆಸಕ್ತಿ ಮೂಡಿತ್ತು. "ಈವತ್ಯಾಕೋ ಅಡಿಗೆ ಮಾಡಕ್ಕಾಗ್ಲಿಲ್ಲ ಕಣ್ರೀ ಅದ್ಕೆà ಹೋಟೆಲ್ಲಿಂದ ಏನಾದ್ರೂ ತರಿಸ್ತಿದ್ದೀನಿ ನಿಮಗೇನು ಬೇಕು?' ಎಂಬೊಂದು ಕರೆ ಗಂಡನಿಗೆ, "ಎರಡು ಪಿಜಾ, ಒಂದು ಬರ್ಗರ್‌' ಎಂದು ಹೊಟೇಲಿನವನಿಗೆ ಕುಳಿತಲ್ಲೆ ಕರೆ ಮಾಡಿದರೆ ಮುಗಿಯಿತು... ಅಲ್ಲಿಂದ ಏಳುವಷ್ಟರಲ್ಲಿ ಮನೆಗೆ ಶರವೇಗದಲ್ಲಿ ಊಟ ತಂದು ಬೀಸಾಕಿಹೋಗುವ ಯಕ್ಷಿಣಿ ದೇವತೆಗಳು...! ಬೇಗ ಏಳಲು ಅಲಾರ್ಮ್, ರೇಡಿಯೋ, ಲೆಕ್ಕ ಮಾಡುವ ಕ್ಯಾಲ್ಕುಲೇಟರ್‌, ಟೈಮು ತೋರಿಸುವ ಗಡಿಯಾರ, ದಿನ ಲೆಕ್ಕಗಳಿಗೆ ಕ್ಯಾಲೆಂಡರು... ಹೀಗೆ, ಅದೆಷ್ಟು ಕೆಲಸಗಳನ್ನು ಮೊಬೈಲೆಂಬ ಆ ಪುಟ್ಟ ಕರೆಸಾಧನ ಮಾಡುತ್ತದಲ್ಲ ಎನಿಸಿತ್ತು. ಒಂದೇ ಏಟಿಗೆ ಬೆಳಿಗೆದ್ದು ಕೂಗುವ ಕೋಳಿ, ಅಜ್ಜಿ ಕಥೆ, ಹಬ್ಬದ ಜಾನಪದದ ಹಾಡುಗಳು, ಹತ್ತು ಬೆರಳುಗಳು, ಮತ್ತದರ ಮೂರುಮೂರು ಗೀರುಗಳು, ಅಮಾವಾಸ್ಯೆ ಹುಣ್ಣಿಮೆ, ಸೂರ್ಯ ಹೀಗೆ ಎಲ್ಲವನ್ನು ಹೊಡೆದು ಬಿಸಾಡಿಬಿಟ್ಟ ಆ ಕರೆಸಾಧನ ಯಂತ್ರರೂಪದ ರಜನೀಕಾಂತ್‌ನಂತೆ ಸುಶೀಲಮ್ಮನಿಗೆ ಭಾಸವಾಗತೊಡಗಿತ್ತು. ಆದರೆ, ಪಕ್ಕದ ಮನೆಯ ಪುಟ್ಟ ಹುಡುಗ ಬಂದು ಅಜ್ಜಿ ಈವತ್ತು ಗೊತ್ತಾ ಕುಸ್ತೀಲಿ ನಾನೇ ಗೆದ್ದಿದ್ದು.. ಎಂದಾಗ ಎಲ್ಲಿ ಆಡಿದೆ ಎಂದು ಕೇಳಿದ್ದಕ್ಕೆ ಕಂಪ್ಯೂಟರಿನಲ್ಲಿ ಎಂದುತ್ತರಿಸಿದ್ದು ಅದೇನೆಂದು ತಿಳಿದುಕೊಂಡ ಸುಶೀಲಮ್ಮನಿಗೆ ಕಂಪ್ಯೂಟರಿನ ಮುಂದೆ ಮೊಬೈಲ್‌ ತುತ್ಛವಾಗಿ ಕಾಣಿಸಿತ್ತು. ಅಲ್ಲೆ ಆಟವಾಡಬಹುದು, ಓದಬಹುದು, ಸಿನೆಮಾ ನೋಡಬಹುದು ಮದುವೆ ಹೆಣ್ಣೂ ಹುಡುಕಬಹುದು, ಕರೆಂಟುಬಿಲ್‌, ವಾಟರ್‌ಬಿಲ್‌ ಸಕಲವನ್ನೂ ಕಂಪ್ಯೂಟರೆನ್ನುವ ಡಬ್ಬವೇ ಮಾಡುತ್ತದೆ ಎಂದಾಗ ಸುಶೀಲಮ್ಮ ನಿಬ್ಬೆರಗಾಗಿ ಹೋಗಿದ್ದಳು. ದಿನ ಕಳೆದಂತೆ ಬೆಂಗಳೂರಿಗೆ ಬೆಂಗಳೂರೇ ಯಂತ್ರದ ಚಕ್ರಗಳಿಗೆ ತನ್ನನ್ನು ಅರ್ಪಿಸಿಕೊಂಡಿದೆಯೆನಿಸತೊಡಗಿತ್ತು. ವಾರಗಟ್ಟಲೆ ತಿಂಗಳುಗಟ್ಟಲೇ ಊರಿನಲ್ಲಿ ಕರೆಂಟಿಲ್ಲದಿದ್ದಾಗ ಬೇಗನೇ ಊಟ ಮುಗಿಸಿ ಮಕ್ಕಳನ್ನು ಮಲಗಿಸಿಕೊಂಡು ಕಥೆ ಹೇಳುತ್ತ ಮಲಗಿಸುತ್ತಿದ್ದದ್ದು ಸುಶೀಲಮ್ಮನಿಗೆ ನೆನಪಿಗೆ ಬಂದಿತ್ತು. ಆದರೆ, ಇಲ್ಲಿ ಅರ್ಧ ದಿನ ಕರೆಂಟಿಲ್ಲದಿದ್ದರೆ ಇಡೀ ಬದುಕೇ ಅಸ್ತವ್ಯಸ್ತವಾಗುತ್ತಿದ್ದದು ಕಂಡು ಅಚ್ಚರಿಯ ಜೊತೆಜೊತೆಗೆ ಬೇಸರವೂ ಆಗುತ್ತಿತ್ತು. ಆದರೆ, ತಿಂಗಳು ಕಳೆಯುವಷ್ಟರಲ್ಲಿ ಬೆಂಗಳೂರು ಹಣವನ್ನೇ ಅಡಿಪಾಯಮಾಡಿಕೊಂಡಿದೆ ಎನಿಸಲು ಪ್ರಾರಂಭವಾಗಿತ್ತು.
"ಅಮ್ಮ ನಾಳೆಯಿಂದ ಇವಳ ಜೊತೆ ವಾಕಿಂಗ್‌ ಹೋಗಿ ಬಾ... ನಡೆಯೋದು ಆರೋಗ್ಯಕ್ಕೇ ಒಳ್ಳೇದು...'
ಎಂದು ಮಗ ಅಶೋಕ ಅದೊಂದು ದಿನ ಹೇಳಿದಾಗ ಅವನೆಡೆಗೆ ಅಚ್ಚರಿಯ ರಿಯಾಕ್ಷನ್‌ ಕೊಟ್ಟಿದ್ದಳು. ಮೈಲುಗಟ್ಟಲೆ ನಡೆದು, ಹೊಲದ ಕೆಲಸ ಮಾಡುತ್ತಿದ್ದವಳಿಗೆ ನಡೆಯಲು ಹೇಳಿದ್ದು ಇಂಟೆರೆಸ್ಟಿಂಗಾಗಿ ಟಿವಿ ನೋಡುವಾಗ ಕರೆಂಟಿದ್ದು ಕೇಬಲ್‌ ಕನೆಕ್ಷನ್‌ ಕಡಿದುಹೋದಂತೆನಿಸಿತ್ತು.