Wednesday, October 25, 2017

ಪಟಾಕಿ, ಫೇಸ್ ಬುಕ್, ಮತ್ತು ಪ್ರಕಾಶ್ ರೈ

ಪಟಾಕಿಗಳ ಹಿನ್ನೆಲೆ ಏನೇ ಇರಲಿ, ಪಟಾಕಿಯಲ್ಲಿರುವ ರಾಸಾಯನಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಅದರಲ್ಲೂ ಮಧ್ಯರಾತ್ರಿಯವರೆಗೆ ಧಂ ಡಂ ಸದ್ದು ಮನೆಯಲ್ಲಿರುವ ವಯೋವೃದ್ಧರಿಗೆ ಕಿರಿಕಿರಿ ಜೊತೆಗೆ ಅನಾರೋಗ್ಯ ಉಂಟು ಮಾಡಬಹುದು. ಅದೆಲ್ಲದರ ಜೊತೆಗೆ ಈವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆಯಲ್ಲ, ಚೀನಾದವರು ಪಟಾಕಿಯೊಳಗೆ ಭಯಂಕರ ರಾಸಾಯನಿಕ ತುಂಬಿದ್ದಾರೆ, ಹಾಗಾಗಿ ಅದರಿಂದ ಮಾರಣಾಂತಿಕ ರೋಗಗಳೂ ಬರಬಹುದು..ಇನ್ನು ಗಣಪತಿ ಹಬ್ಬಕ್ಕೆ ಗಣಪತಿ ಮೂರ್ತಿಯನ್ಯಾಕೆ ಕೂರಿಸಬೇಕು ಅಲ್ಲವೇ..? ಅದನ್ನು ತೆಗೆದುಕೊಂಡು ಕೆರೆಯಲ್ಲಿ ಮುಳುಗಿಸಿದರೆ ಮತ್ತದೇ ಜಲಮಾಲಿನ್ಯ...
ನಮಗೆಲ್ಲಾ ಹಬ್ಬ ಎಂದರೆ ಏನು ನೆನಪಾಗುತ್ತದೆ..? ನನಗಂತೂ ಗೌರಿಗಣೇಶ ಹಬ್ಬ ಎಂದಾಕ್ಷಣ ವಾರದ ಮುಂಚೆ ಖಾಲಿ ಬೆಂಕಿಪೊಟ್ಟಣಗಳಿಂದ ಒಂದು ಮಂಟಪ ಕಟ್ಟಿ, ಅದಕ್ಕೆ ಬಣ್ಣದ ಕಾಗದ ಅಂಟಿಸುವುದು ನೆನಪಿಗೆ ಬರುತ್ತಿದೆ. ಹಬ್ಬದ ಮೊದಲ ದಿನ ಪುಟ್ಟ ಗೌರಿ ಪ್ರತಿಮೆ, ಎರಡನೆಯ ದಿನ ತುಸುದೊಡ್ಡದಾದ ಗಣೇಶ ಪ್ರತಿಮೆ ಇಟ್ಟು ಪೂಜಿಸುವುದೇ ನೆನಪಿಗೆ ಬರುತ್ತದೆ. ಹಬ್ಬದ ದಿನ ಕಾಯಿಕಡುಬು, ಎಳ್ಳುಂಡೆ, ಸೇವಿಗೆ ನೆನಪಿಗೆ ಬರುತ್ತದೆ. ದೀಪಾವಳಿ ಎಂದರೆ ಎಣ್ಣೆ ಸ್ನಾನ, ದೀಪಗಳ ಬೆಳಕು, ಪಟಾಕಿಗಳ ಸಡಗರ, ಮನೆಯಲ್ಲಿ ಖರ್ಜಿಕಾಯಿ ಪಾಯಸದ ಅಡುಗೆ...ಷಷ್ಟಿ-ನಾಗರಪಂಚಮಿ ಎಂದರೆ ಬೆಳಿಗ್ಗೆ ಫಲಾಹಾರ-ವಿಧವಿಧ ವಡೆ, ಸಂಕ್ರಾಂತಿಗೆ ಬೆಲ್ಲದನ್ನ, ದನದ ಪಂದ್ಯ, ಉಗಾದಿಗೆ ಒಬ್ಬಟ್ಟು ಹೋಳಿಗೆ, ನೀರೆರೆಚೋ ಆಟ, ...ಹೀಗೆ ಒಂದೊಂದು ಹಬ್ಬಕ್ಕೂ ಒಂದೊಂದು ವಿಶೇಷತೆ, ಆಚರಣೆ ಶೈಲಿ, ಅಡುಗೆ ಹೀಗೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿವೆ. ಹಾಗಾಗಿಯೇ ಹಬ್ಬ ಎಂದಾಕ್ಷಣ ಇದೆಲ್ಲದರ ಜೊತೆಗೆ ನಾವು ಆಚರಿಸುತ್ತಿದ್ದ ರೀತಿ, ಆವತ್ತಿನ ಬಾಲ್ಯ, ಅಪ್ಪ ಅಮ್ಮ ಅಕ್ಕ ತಂಗಿ ಗೆಳೆಯರು ಸಂಭ್ರಮ ಮನಸ್ಸು ತುಂಬಿಬಿಡುತ್ತದೆ. ಅದೇ ಇಲ್ಲವೇ ಬದುಕು. ನೆನೆಪುಗಳ ಆಗರ.
ಆದರೆ ಇತ್ತೀಚಿಗೆ ಅದೆಲ್ಲವನ್ನು ನಾವು ತಿಪ್ಪೆ ಸಾರಿಸುತ್ತಿದ್ದೇವೆ. ವರ್ಷಪೂರ್ತಿ ವಾಹನಗಳ ಹಾರನ್ಗಳಿಂದ ಇಡೀ ನಗರವನ್ನೇ ಗಬ್ಬೆಬ್ಬಿಸಿರುವ ನಾವು ಪಟಾಕಿ ಶಬ್ಧಕ್ಕೆ ಇಡೀ ಜಗತ್ತೇ ನಾಶವಾಗುತ್ತದೆ ಎನ್ನುವ ಒಣ ಪ್ರತಿಷ್ಠೆಯ ಮಾತುಗಳನ್ನಾಡುತ್ತೇವೆ. ಕೈಯಲ್ಲಿರುವ ಮೊಬೈಲ್ ನಿಂದ ಹಿಡಿದು ದಿನಂಪ್ರತಿ ಉಪಯೋಗಿಸುವ ಅದೆಷ್ಟೋ ವಸ್ತುಗಳು ಉಪಕರಣಗಳ ಮಾತೃ ಚೀನಾ ..ಅದು ಗೊತ್ತಿದ್ದರೂ ಪಟಾಕಿಯಲ್ಲಿ ಚೀನಾದವರು ರಾಸಾಯನಿಕ ತುಂಬಿದ್ದಾರೆ ಎನ್ನುತ್ತೇವೆ..ಇಡೀ ಕಾರ್ಖಾನೆಯ ಕಸವನ್ನೆಲ್ಲಾ ತಂದು ಕೆರೆಗೆ ಚರಂಡಿಗೆ ತುಂಬುವ ನಾವು ವರ್ಷಕ್ಕೊಮ್ಮೆ ಗಣಪತಿ ಮೂರ್ತಿ ನೀರಲ್ಲಿ ಮುಳುಗಿಸಿದರೆ ಜಲಮಾಲಿನ್ಯ ಎನ್ನುವ ಭಾಷಣ ಬಿಗಿಯುತ್ತೇವೆ..
ಇದೆಂತಹದ್ದು ಅರ್ಥವೇ ಆಗುವುದಿಲ್ಲ.
ಇಸ್ಲಾಂ, ಕ್ರೈಸ್ತ, ಬೌದ್ಧ ಹೀಗೆ ಯಾವುದನ್ನಾದರೂ ನಮ್ಮದು ಎಂದರೆ ಅದು ಕೋಮುವಾದವಲ್ಲ, ಆದರೆ ನಾನೊಬ್ಬ ಹಿಂದೂ ಎಂದರೆ ಅದೇಗೆ ಕೋಮುವಾದ ಎನಿಸುತ್ತದೆ ಗೊತ್ತಾಗುವುದಿಲ್ಲ. ಇಲ್ಲಿಯವರೆಗೆ ಜಾತಿ-ಧರ್ಮದ ಕಾರಣಗಳಿಂದ ಉರುಳಿದ ಹೆಣಗಳನ್ನು ಲೆಕ್ಕ ಹಾಕಿದರೆ ಅದ್ಯಾರದ್ದು ಕೋಮುವಾದ ಭಯೋತ್ಪಾದಕತೆ ಎಂಬುದು ಗೊತ್ತಾಗುತ್ತದೆ. ವರ್ಷಾರಂಭಕ್ಕೆ ಮಧ್ಯರಾತ್ರಿಯವರೆಗೆ ಕುಡಿದು ಕುಣಿದು ಕುಪ್ಪಳಿಸಿದರೆ ಅದಕ್ಕೆ ಅನುಮತಿ ಇದೆ, ಅದು ಸಂಭ್ರಮಾಚರಣೆ, ಕ್ರಿಕೆಟ್ ಗೆದ್ದಾಗ ಮಧ್ಯರಾತ್ರಿ ಪಟಾಕಿ ಹೊಡೆದರೆ ವಯೋವೃದ್ಧರ ಕಿವಿಗೆ ತಂಪಾಗುತ್ತದೆ...ಗೋಮಾಂಸ ತಿನ್ನುವುದು ತಪ್ಪು ಎಂದರೆ ಹಂದಿ ಮಾಂಸ ತಿನ್ನುವ ಹಾಗೆಯೇ ಇಲ್ಲ ಎಂದರೆ ಅದು ಪದ್ಧತಿ..ನಮ್ಮ ಹಬ್ಬಗಳ ಬಗ್ಗೆ ನಾವೆಲ್ಲಾ ವೈಜ್ಞಾನಿಕ ದೃಷ್ಟಿಕೋನದಿಂದ ಮಾತನಾಡಿ, ದೊಡ್ಡ ಪಂಡಿತರ ಹಾಗೆ ಹಾಗೆಲ್ಲಾ ಮಾಡುವುದರ ಅಗತ್ಯವಿಲ್ಲ, ಅದು ಮೂಢನಂಬಿಕೆ ಎನ್ನುತ್ತೇವೆ. ನಮ್ಮದೇ ಸರ್ಕಾರ ಕೂಡ ಒಂದಷ್ಟು ನಿಬಂಧನೆ ಹೂಡುತ್ತದೆ, ಆದರೆ ಇತರೆ ಧರ್ಮದ ಹಬ್ಬ ಆಚರಣೆಗಳ ಬಗ್ಗೆ ಅವರು ಸೊಲ್ಲೆತ್ತುವುದಿಲ್ಲ, ಅದವರ ಪದ್ಧತಿ ಎಂದು ನಾವೆ ದನಿಗೂಡಿಸುತ್ತೇವೆ, ಅವರು ಬಲಿಕೊಡಲಿ, ಚಾವಟಿಯಿಂದ ಬೆನ್ನ ಮೇಲೆ ರಕ್ತ ಬರುವ ಹಾಗೆ ಬಡಿದುಕೊಳ್ಳಲಿ, ಉಪವಾಸ ವಿರಲಿ.. ಅದೆಲ್ಲದರ ಬಗ್ಗೆ ನಮ್ಮದು ಪ್ರಗತಿಪರವಾದ. ಅಲ್ಲಿ ವೈಜ್ಞಾನಿಕತೆ-ವಾಸ್ತವತೆ ಕಂಬಳಿಹೊದ್ದು ಮಲಗಿಬಿಟ್ಟಿರುತ್ತದೆ.
ಈ ಮಧ್ಯೆ ಪ್ರಕಾಶ್ ರೈ ನಂತಹ ನಟ ಅನಿಸಿದ್ದನ್ನು ಅನಿಸಿದ ಹಾಗೆಯೇ  ಮಾತನಾಡುತ್ತಾರೆ, ದಾಖಲಿಸುವ ಮುನ್ನ ಚರ್ಚಿಸಿದ್ದರೆ, ಎಲ್ಲಾ ದಿಕ್ಕುಗಳಿಂದ ನೋಡಿದ್ದರೆ ಆಗುತ್ತಿತ್ತೇನೋ? ಆದರೆ ಅವರ ಮಾತಿಗೆ ತಲೆದೂಗುವರ ಸಂಖ್ಯೆ ಹತ್ತಿರದಲ್ಲಿ ಸಾಕಷ್ಟಿರುತ್ತದಲ್ಲ, ಅದನ್ನು ಖಂಡಿಸುವವರನ್ನು ಹತ್ತಿರ ಬಿಟ್ಟುಕೊಳ್ಳುವ ಅನಿವಾರ್ಯತೆ ಅವರಿಗಿಲ್ಲ, ನನ್ನದೇ ಸರಿ ಎನ್ನುವ ಅಹಂ ಹೀಗೆ ಮಾಡಿಸುತ್ತದೆ. ಮತ್ತೊಬ್ಬ ನಾನು ಪ್ರಗತಿಪರ ಚಿಂತಕ, ಬುದ್ದಿಜೀವಿ ಜಾತ್ಯಾತೀತ ಹಾಗೆ ಹೀಗೆ ಎನ್ನುತ್ತಾನೆ.ಬಾರಪ್ಪ ಚರ್ಚೆಗೆ ಕೂರೋಣ ಎಂದರೆ ಆಸಾಮಿ ನಾಪತ್ತೆಯಾಗುತ್ತಾನೆ. ಅಂಬೇಡ್ಕರ್ ಬುದ್ಧನನ್ನು ಬಸವಣ್ಣ ನನ್ನು ಮಾತಿನ ಮಧ್ಯ ಎಳೆದು ತರುವವರನ್ನು ಕರೆದು ಬನ್ನಿ ಕುಳಿತುಕೊಂಡು ಅಂಬೇಡ್ಕರ್ ಬರಹಗಳ ಮಾತನಾಡೋಣ, ಬುದ್ಧನ ಪಂಚಶೀಲ ತತ್ವಗಳಲ್ಲಿ ನೀನು ಯಾವುದನ್ನು ಅಳವಡಿಸಿಕೊಂಡಿದ್ದೀಯ, ಬಸವಣ್ಣನ ಕಳಬೇಡ ಕೊಲಬೇಡ ವಚನದಲ್ಲಿನ ಸಾಲುಗಳಲ್ಲಿ ಯಾವುದು ನಿನ್ನ ಬದುಕಿನಲ್ಲಿ ಹಾಸುಹೊಕ್ಕಾಗಿದೆ..  ಎಂದರೆ ಸೊಲ್ಲೆತ್ತೆವುದಿಲ್ಲ. ಸಧ್ಯಕ್ಕೆ ನಾನೊಬ್ಬ ಹಿಂದೂ ಎಂದರೆ ಬೇರೆಯ ತರಹದ ದೃಷ್ಟಿ ನಮ್ಮನ್ನು ದಿಟ್ಟಿಸತೊಡಗುತ್ತದೆ.ಸಧ್ಯಕ್ಕೆ ಗಾಬರಿ ತರುವ ಸಂಗತಿ ಇದೆ ಅನಿಸುತ್ತದೆ. ಮೊದಲೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಚರ್ಚೆ ನಡೆಯುತ್ತಿತ್ತು. ಈಗ ವ್ಯಕ್ತಿಗತ ನಿಂದನೆ ಜಗಳ ಕಿತ್ತಾಟ, ದೂಷಣೆಗಳೇ ತುಂಬಿಹೋಗಿವೆ. ಗುಂಪುಗಾರಿಕೆಗಳು, ವಿಧವಿಧದ ಫೋಟೋಶಾಪ್ ಸೃಷ್ಟಿಗಳು ಇದೆಲ್ಲದ್ದಕ್ಕಿಂತ ಗಾಬರಿ ತರಿಸುವಂತಹದ್ದು ನನ್ನದೇ ಸರಿ ಎನ್ನುವ ಭಾವ ಮತ್ತೊಬ್ಬರ ಮಾತುಗಳನ್ನು ಕೇಳಿಸಿಕೊಳ್ಳಲೂ ತಾಳ್ಮೆಯಿಲ್ಲದಂತಹ ದಾರ್ಷ್ಟ್ಯ.
ನಾನು ಶಾಲಾಕಾಲೇಜು ದಿನಗಳಿಂದ ಓದಿಕೊಂಡು ಆರಾಧಿಸಿದ್ದವರು ಫೇಸ್ ಬುಕ್ ನಲ್ಲಿ ನೇರ ಸಿಕ್ಕಿ ಚಿಕ್ಕವರಾಗಿದ್ದಾರೆ. ಇವರೇನಾ ಅವರು ಎನ್ನುವಂತಾಗಿದ್ದಾರೆ. ಬಹುಶಃ ಪುಸ್ತಕದ ರೂಪದಲ್ಲಷ್ಟೇ ಅವರ ಬರಹಗಳಲ್ಲಷ್ಟೇ ಅವರನ್ನು ಕಾಣಿಸಿದ್ದ ಅವರೆಲ್ಲಾ ನೆರಾನೆರಾ ನಿಂತದ್ದೇ ಅವರೇ ತೀರಾ ತೆರೆದುಕೊಂಡಿದ್ದಾರೆ. ಆಡುವ ಮಾತೆಲ್ಲಾ ದಾಖಲಿಸುವಂತಹ ಫೇಸ್ ಬುಕ್ ಅವರನ್ನು ಚಿಕ್ಕವನನ್ನಾಗಿ ಮಾಡಿಬಿಟ್ಟಿದೆಯೇನೋ ಎನಿಸುತ್ತದೆ. ಆ ಪುಸ್ತಕದಲ್ಲಿ ಹಾಗೆ ಹೇಳಿದ್ದರು, ಈ ರೀತಿ ಚಿತ್ರಣವನ್ನು ಈ ಕತೆಯಲ್ಲಿ ತಂದಿದ್ದರು ಎಂದುಕೊಂಡು ಅದರ ಸರಿ ತಪ್ಪು ಕಂಡುಕೊಂಡು ಅದನ್ನು ಅಳವಡಿಸಿಕೋಳ್ಳಲು ಪ್ರಯತ್ನಿಸುತ್ತಿದ್ದ ಮಾದರಿವ್ಯಕ್ತಿತ್ವ ಎಂದುಕೊಂಡಿದ್ದ ನನಗೆ ಅವರ ಏಕಮುಖ ಚಿಂತನೆ ಬರಹ ಅಯ್ಯಯ್ಯೋ ಎನಿಸಿದೆ. ಸಧ್ಯಕ್ಕೆ ಫೇಸ್ಬುಕ್ ಬೇಸರ ತರಿಸುತ್ತದೆ. ಗೆಳೆಯರು ಸಿಕ್ಕರೆ ಒಂದಷ್ಟು ಟೈಮ್ ಪಾಸ್, ಫನ್ನಿ ವೀಡಿಯೋಸ್ ಬಿಟ್ಟರೆ ಮತ್ತೆಲ್ಲಾ ಜಗಳಗಳೇ...
ಹಾಗಾಗಿಯೇ ಪುಸ್ತಕಗಳೇ ಚಂದ, ಅದೇ ಖುಷಿ,, ಟಪಟಪ ಟೈಪಿಸಿ ಗಂಟೆಗಟ್ಟಲೆ ಮಾತನಾಡುವುದಕ್ಕಿಂತ ಎರಡು ನಿಮಿಷ ಕರೆ ಮಾಡಿದರೆ ಮುಗಿಯುತ್ತದಲ್ಲ ಎನಿಸಿದೆ. ಹಾಗಾಗಿಯೇ ಒಂದಷ್ಟು ಪುಸ್ತಕಗಳ ರಾಶಿ, ಸಿನಿಮಾದ ರಾಶಿಗಳನ್ನು ಗುಡ್ಡೆ ಹಾಕಿಕೊಂಡಿದ್ದೇನೆ. ಹಬ್ಬ ಹರಿದಿನ ಸಂಭ್ರಮ ಪೂಜೆ, ಬರಹ, ಕುಟುಂಬದ ಜೊತೆಗಿನ ಓಡಾಟ, ಮನೆಯಲ್ಲಿಯೇ ಕುಳಿತು ಒಂದಷ್ಟು ಹರಟೆ...ಮತ್ತೆ ದಶಕಗಳ ಹಿಂದಕ್ಕೆ ಸಾಗುತ್ತಿದ್ದೇನೆ. ಅದರಲ್ಲಿಯೇ ಖುಷಿ ಎನಿಸುತ್ತಿದೆ.

Tuesday, October 24, 2017

ನೋಡಿದ ಸಿನೆಮಾಗಳ ಓದುವ ಖುಷಿ..


ಜಾಗತಿಕ ಅಥವಾ ಕನ್ನಡದ ಅಥವಾ ಭಾರತೀಯ ಭಾಷೆಗಳ ಸಿನಿಮಾ ಬಗೆಗಿನ ಯಾವುದೇ ಪುಸ್ತಕ ಬಂದರೂ ನನಗೊಂತರ ಹಬ್ಬ ಎನಿಸುತ್ತದೆ. ಪುಸ್ತಕ ತೆರೆದು ಸಿನಿಮಾ ಪಟ್ಟಿಯ ಮೇಲೆ ಕಣ್ಣಾಡಿಸುತ್ತಾ ಸಾಗಿದಂತೆ ಆಯಾ ಸಿನೆಮಾಗಳ ಚಿತ್ರಣ ಹಿನ್ನೆಲೆ ಕಣ್ಣ ಮುಂದೆ ಬಂದು ಬಿಡುತ್ತದೆ.ಇಲ್ಲಿಯವರೆಗೆ ಬಂದಿರುವ ಪುಸ್ತಕಗಳಲ್ಲಿನ ಅಷ್ಟೂ ಸಿನಿಮಾಗಳನ್ನು ನಾನು ನೋಡಿದ್ದೇನೆ. ಮೊನ್ನೆ ರವರ ಪುಸ್ತಕ ತೆಗೆದುಕೊಂಡು ಕಣ್ಣಾಡಿಸುತ್ತಾ ಸಾಗಿದಂತೆ ಖುಷಿಯಾಗುತ್ತಾ ಹೋಯಿತು. ಈಗಾಗಲೇ ಅಲ್ಲಿರುವ ಎಲ್ಲಾ ಸಿನಿಮಾಗಳನ್ನು ಬರೀ ನೋಡಿದ್ದೇನೆ ಅಷ್ಟೇ ಅಲ್ಲ, ಕೆಲವು ಸಿನೆಮಾಗಳ ಮೇಲೆ ನಾನೂ ನನ್ನ ಬ್ಲಾಗ್ ನಲ್ಲಿ ಬರೆದಿದ್ದೇನೆ.
ಆದರೆ ಈಗಾಗಲೇ ನೋಡಿದ ಸಿನೆಮಾಗಳ ಬಗೆಗಿನ ಓದುವ ಖುಷಿಯೇ ಬೇರೆ. ನಾವು ಸಿನಿಮಾ ನೋಡಿರುತ್ತೇವೆ. ಅದರಲ್ಲೂ ನಾನಂತೂ ಸಿನಿಮಾದ ಹಿನ್ನೆಲೆ ಮುನ್ನೆಲೆ ನೋಡಿಕೊಂಡು ಅಳೆದು ತೂಗಿ ಸಿನಿಮಾ ನೋಡುವುದಿಲ್ಲ. ನೋಡಿದ ಮೇಲೆಯೇ ನಮ್ಮದು ನಿರ್ಧಾರ. ಚಿತ್ರೋತ್ಸವಗಳಿಗೆ ಹೋದಾಗ ನಾನು ಒಂದು ಸಿನಿಮಾ ಆದ ನಂತೆರ ಪಕ್ಕದ ಪರದೆಗೆ ಜಾರಿಕೊಳ್ಳುತ್ತೇನೆ. ಅಲ್ಲಿ ಯಾವುದಿದ್ದರೂ ನಾನು ನೋಡೇ ನೋಡುತ್ತೇನೆ. ಹಾಗಾಗಿ ಯಾವುದು ಎಂಬುದನ್ನೂ ನಾನು ವಿಚಾರಿಸುವುದೂ ಇಲ್ಲ, ಹಾಗೆಯೇ ಅದರ ನಿರ್ದೇಶಕ ಸಾರಾಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಹಾಗಾಗಿಯೇ ನನಗೆ ಕೆಲವು ಅಪರೂಪದ ವಿಚಿತ್ರವಾದ ವಿಶೇಷವಾದ ಸಿನಿಮಾಗಳು ನೋಡಲಿಕ್ಕೆ ಸಿಕ್ಕಿವೆ ಎನ್ನಬಹುದು. ಸುಮ್ಮನೆ ಬೆಸ್ಟ್ ಮೂವೀಸ್ ಎಂದು ನೀವು ಟೈಪಿಸಿದರೆ ಪ್ರಶಸ್ತಿ ಪುರಸ್ಕೃತ ವಿಮರ್ಷೆಗೆ ಒಳಗಾದ ಸಿನೆಮಾಗಳ ರಾಶಿ ರಾಶಿ ಬಂದು ಬೀಳುತ್ತದೆ, ಮತ್ತವುಗಳ  ಪಟ್ಟಿ ಪುನರಾವರ್ತನೆಯಾಗುತ್ತವೆ. ಹಾಗಾಗಿ ಕೆಲವು ಅಪರೂಪದ ಚಿತ್ರಗಳ ಬಗೆಗೆ ಬರಹಗಳು ತೀರ ಕಡಿಮೆ ಇವೆ. ಅವುಗಳು ಕಣ್ಣಿಗೆ ಕಾಣದೆ ಹಾಗೆಯೇ ಮರೆಯಾಗಿಬಿಡುತ್ತವೆ.
ಕೇಶವ ಮೂರ್ತಿ ಅವರ ಪುಸ್ತಕದಲ್ಲಿನ ಸಿನಿಮಾಗಳು ಈಗಾಗಲೇ ನೋಡಿರುವಂತಹವೇ ಆದರೂ ಅದರ ಬಗೆಗಿನ ಬರಹ ಖುಷಿ ಕೊಡುತ್ತದೆ. ಕೆಲವು ಚಿತ್ರಗಳ ಬಗೆಗಿನ ಹಿನ್ನೆಲೆ ಮುನ್ನೆಲೆ ಮತ್ತು ಸಾರಾಂಶವನ್ನು ಅದ್ಭುತವಾಗಿ ತೆರೆದಿಟ್ಟಿದ್ದಾರೆ. ಚಿತ್ರದ ಸಂಪೂರ್ಣ ಚಿತ್ರಿಕೆಯನ್ನು ಕಟ್ಟಿಕೊಡುವ ಬರಹ ಸಿನಿಮಾ ಬಗೆಗಿನ ಕುತೂಹಲವನ್ನು [ನೋಡಿಲ್ಲದಿದ್ದರೆ] ಇಮ್ಮಡಿಯಾಗಿಸುತ್ತದೆ.ಕನ್ನಡ ಬೆಂಗಾಲಿ, ಕೋರಿಯನ್, ಫ್ರೆಂಚ್ ಹೀಗೆ ಎಲ್ಲವನ್ನೂ ಒಟ್ಟಾಗಿಸಿದ್ದಾರೆ, ಹೊಸತು ಹಳತು ಎರಡೂ ಬರಹದಲ್ಲಿವೆ. ಪುಸ್ತಕದಲ್ಲಿ ಅತಿ ಹೆಚ್ಚು ಗಮನ ಸೆಳೆಯುವುದು ಲೇಖನಗಳ ಮುಖ ಬರಹ. ಪುಸ್ತಕದ ಹೆಸರೇ ಖುಷಿಕೊಡುತ್ತದೆ.ಒಟ್ಟಿನಲ್ಲಿ ಸಿನೆಮಾಪ್ರಿಯರಿಗೆ ಒಳ್ಳೆಯ ಪುಸ್ತಕ ...ಆಸಕ್ತರು ಓದಿ ಸಿನಿಮಾ ನೋಡಬಹುದು, ನೋಡಿದ್ದರೆ ಓದಿ ಖುಷಿ ಪಡಬಹುದು.
ಹಾಗೆ ನೋಡಿದರೆ ನಾನು ಕಂಡುಕೊಂಡ ಮಟ್ಟಿಗೆ ಕೇಶವಮೂರ್ತಿ ಅವರ ಸಿನಿಮಾ ಜ್ಞಾನ ಬಹಳ ದೊಡ್ಡದು. ಜಾಗತಿಕ ಸಿನೆಮರಂಗ ಮತ್ತು ನಮ್ಮದೇ ಚಿತ್ರರಂಗವನ್ನು ಜೊತೆ ಜೊತೆಗೆ ಅರಿತುಕೊಂಡಿರುವ ಅದರಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿರುವವರು ಕೇಶವಮೂರ್ತಿ. ಅವರ ವಿಮರ್ಶೆಗಳನ್ನು ನಾನು ಯಾವಾಗಲೂ ಓದುತ್ತೇನೆ. ಅದಕ್ಕಿಂತ ಹೆಚ್ಚಾಗಿ ಅವರ ಸಿನೆಮಸಂಬಂಧಿ ಬರಹಗಳು ನನಗಿಷ್ಟ. ಅವರ ಹೊಸ ಪುಸ್ತಕ ಎಂದಾಕ್ಷಣ ರೋಮಾಂಚನವಾದದ್ದು ಸುಳ್ಳಲ್ಲ. ಆ ನಿರೀಕ್ಷೆಯನ್ನು ಪುಸ್ತಕ ಹುಸಿಮಾದಿಲ್ಲ ಎನ್ನುವುದು ಖುಷಿಯ ಸಂಗತಿ.

ಕೊನೆಯದಾಗಿ : ನನ್ನದೇ ಪುಸ್ತಕ “ಚಿತ್ರ-ವಿಚಿತ್ರ” [ಇನ್ನೂ ಬಿಡುಗಡೆಯಾಗಿಲ್ಲ]ದಲ್ಲಿ ಅಂತಹ ಅಪರೂಪದ ಚಿತ್ರಗಳ ಬಗೆಗೆ ಮಾಹಿತಿ ಇದೆ. ಇದೆಲ್ಲಾ ನಾನು ಸುಮ್ಮನೆ ಸಿಕ್ಕ ಸಿಕ್ಕ ಸಿನಿಮಾ ನೋಡಿದಾಗ ಸಿಕ್ಕಿದ್ದು. ಯಾರೂ ಉದಾಹರಿಸಿದ, ಯಾರೂ ಹೇಳದ ಸಿನಿಮಾಗಳು ಅವು. ಅವುಗಳನ್ನು ನೋಡಿದಾಗ ಹೀಗೆಲ್ಲಾ ಸಿನಿಮಾ ಮಾಡಿದ್ದಾರಾ..? ಎನ್ನುವ ಅಚ್ಚರಿ ನನಗಂತೂ ಆಗಿದೆ.

Saturday, September 16, 2017

ನಾನು ಗೌರಿ..ನಾನು ಗೌರಿಯಲ್ಲ..ಗೌರಿ ಯಾರು..?

ಗೌರಿ ಲಂಕೇಶ್ ಹತ್ಯೆಯ ನಂತರ ಫೇಸ್ ಬುಕ್ ನಲ್ಲಿ ಆಗಿರುವುದಾದರೂ ಏನು?
ಸುಮ್ಮನೆ ಗಮನಿಸಿ.. ಕೆಸೆರೆರೆಚಾಟ ಬಿಟ್ಟರೆ ಮತ್ತೇನಿಲ್ಲ.
ನಾನು ಕಾಲೇಜು ದಿನಗಳಿಂದ ಹಾಯ್ ಬೆಂಗಳೂರು ಓದುತ್ತಿದ್ದೆ, ಈವತ್ತಿಗೂ ಓದುತ್ತೇನೆ. ಹಾಗೆಯೇ ತುಷಾರ, ಮಯೂರ ತರಂಗಗಳಿಂದ ಹಿಡಿದು, ಸ್ಟಾರ್ ಆಫ್ ಬೆಂಗಳೂರು, ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್, ಅಗ್ನಿ ಹೀಗೆ ಕೈಗೆ ಸಿಕ್ಕದ್ದನ್ನು ಓದುತ್ತೇನೆ. ಇಷ್ಟವಾದದ್ದು ಆಗುತ್ತವೆ, ಇಲ್ಲವಾದದ್ದು ಇಲ್ಲ. ಅದನ್ಯಾಕೆ ಓದುತ್ತೀಯ.. ಇದನ್ಯಾಕೆ ಓದುತ್ತೀಯ ಎನ್ನುವ ಗೆಳೆಯರಿಗೆ ಓದಬೇಕಲ್ಲಪ್ಪ.. ಚೆನ್ನಾಗಿಲ್ಲದಿದ್ದರೆ ಚೆನ್ನಾಗಿಲ್ಲ ಎನ್ನಲಾದರೂ ಓದಬೇಕಲ್ಲವೇ ಎಂದು ಪ್ರಶ್ನಿಸುತ್ತೇನೆ. ನಾನು ಆ ಪತ್ರಿಕೆಯನ್ನು ಓದುವುದೇ ಇಲ್ಲ, ಇಂತವರ ಸಿನೆಮಾವನ್ನು ನೋಡುವುದೇ ಇಲ್ಲ ಎನ್ನುವವರಿಗೆ ಅಲ್ಲಪ್ಪ..ನೀನು ಅದನ್ನು ಓದದೆಯೇ, ನೋಡದೆಯೇ ಕೆಟ್ಟದ್ದು ಎಂದು ಹೇಗೆ ನಿರ್ಧರಿಸುತ್ತೀಯ ಎನ್ನುತ್ತೇನೆ.
ಗೌರಿ ಲಂಕೇಶ್ ಧೋರಣೆ ಬೇರೆಯದೇ ಇತ್ತು. ಅವರು ಏಕಮುಖವಾಗಿ ಅವರಿಗೆ ಸರಿ ಎನಿಸಿದ್ದನ್ನು ಬರೆಯುತ್ತಿದ್ದರು. ಇಷ್ಟಕ್ಕೂ ಆಕೆ ಬರೆದಿರುವ ಕೆಲವೇ ಕೆಲವು ಪುಸ್ತಕಗಳನ್ನು ನಾನು ಓದಿದ್ದೇನೆ.ಅವರ ಅನುವಾದದ ದರವೇಶಿ ಕತೆಗಳು, ಗೌರಿ ಕಂಡ ಹಾಗೆ, ಆವರಣ ಒಂದು ವಿ ಕೃತಿ, ಬಸವರಾಜ ಮಾರ್ಗ ಓದಿದ್ದೇನೆ. ಆಕೆಯ ಪತ್ರಿಕೆಗಳು ಆನ್ ಲೈನ್ ನಲ್ಲಿ ಸಿಗುತ್ತಿದ್ದುದರಿಂದ ಕೊಂಡು ಓದುತ್ತಿದ್ದದ್ದು ಕಡಿಮೆಯೇ.
ನಾನು ಫೇಸ್ ಬುಕ್ ಗೆ ಬಂದಾಗ ಇಲ್ಲಿ ನನಗೆ ಹಲವಾರು ಕಲಾವಿದರು, ಬರಹಗಾರರು ಸಿಕ್ಕಿದ್ದು ಖುಷಿಯಾಗಿತ್ತು. ನಂಜನಗೂಡಿನ ಮೂಲೆಯಲ್ಲಿ ಬರೀ ಪತ್ರಿಕೆಯ ಮೂಲಕ ಪರಿಚಯವಾಗಿದ್ದವರು ಈಗ  ಒಂದು ವೇದಿಕೆಯಲ್ಲಿ ಸಿಗುತ್ತಾರೆ ಎನ್ನುವುದು ಖುಷಿ ಕೊಡುವ ಸಂಗತಿಯಲ್ಲವೇ. ಆದರೆ ಗೌರಿ ಲಂಕೇಶ್ ಚರ್ಚೆಗೆ ಸಿಗುತ್ತಿರಲಿಲ್ಲ. ಅವರ  ಏಕಮುಖ ಪ್ರವಾಹಗಳನ್ನ ಖಂಡಿಸಿ ಸಂದೇಶ ಕಳುಹಿಸಿದರೆ, ಅಥವಾ ಪ್ರತಿಕ್ರಿಯಿಸಿದರೆ ಅದಕ್ಕೆ ಪ್ರತ್ಯುತ್ತರಿಸದೆ ಇಗ್ನೋರ್ ಮಾಡುತ್ತಿದ್ದರು. ಆದರೂ ಆವಾಗವಾಗ ಅವರ ಸ್ಟೇಟಸ್ ಗಳಿಗೆ ಮೆಸೇಜ್ ಮಾಡುತ್ತಿದ್ದೆ. ಇಷ್ಟಕ್ಕೂ ಒಬ್ಬ ವ್ಯಕ್ತಿಯ ಧೋರಣೆ-ದೃಷ್ಟಿಕೋನ ಅವನ ವೈಯಕ್ತಿಕ ಅಲ್ಲವೇ.ಕೆಲವೊಮ್ಮೆ ಸಂದರ್ಭೋಚಿತವಾಗಿ ಗೌರಿ ಲಂಕೇಶ್ ಸರಿ ಎನಿಸಿದರೆ ಇನ್ನೂ ಕೆಲವೊಮ್ಮೆ ಅತಿ ಎನಿಸುತ್ತಿತ್ತು.
ಇದೆಲ್ಲಾ ಓಕೆ. ಆದರೆ ಮೊನ್ನೆ ಅವರ ಹತ್ಯೆಯಾಯಿತು. ಆ ನಂತರದ ಚಿತ್ರ ನಿಜಕ್ಕೂ ಗಾಬರಿ ಹುಟ್ಟಿಸುವಂತಹದ್ದು. ಆಕೆ, ಅಮ್ಮ, ತಾಯಿ, ಮಾತೆ ಹೀಗೆ ಶುರುವಾದ ಆಕೆಯ ಅಭಿಮಾನಿಗಳು ಆಕೆಯ ಬಗೆಗೆ ಮಾತನಾಡಿದ್ದಕ್ಕಿಂತ ಆಕೆಯ ವಿರೋಧಿಗಳ ಬಗ್ಗೆ ಜಾಸ್ತಿ ಬಾಯಿ ಮಾಡಿದರು. ಅಲ್ಲಿಗೆ ಪರ-ವಿರೋಧದವರ ಎರಡು ಗುಂಪುಗಳಾಗಿ ಹೋದವು.ಕೆಸೆರೆರೆಚಾಟ ಶುರುವಾಯಿತು ನೋಡಿ. ಈವತ್ತಿಗೂ ನಿಂತಿಲ್ಲ. ಪರವಾಗಿ ನಿಂತವರನ್ನು ನಿಲ್ಲಿಸಿ, ಗೌರಿ ಲಂಕೇಶ್ ಬಗೆಗೆ ಐದು ನಿಮಿಷ ಮಾತನಾಡಿ ಎಂದರೆ ಆಕೆ ಆಗೇ ಹೀಗೆ, ಆಕೆ ಅವರಿಗಾಗಿ ದುಡಿದರು, ಇವರಿಗಾಗಿ ಕೆಲಸ ಮಾಡಿದರು ಎಂದೆಲ್ಲಾ ಉತ್ತರಿಸುತ್ತಾರೆ. ಅದಿರಲಿ,,ಆಕೆಯ ಪತ್ರಿಕೆಯನ್ನು ಕೊಂಡು ಓದುತ್ತಿದ್ಯಾ..? ಆಕೆಯ ಪುಸ್ತಕಗಳು ಮನೆಯಲ್ಲಿದೆಯಾ..? ನೀನು ಓದಿರುವೆಯಾ ಎಂದರೆ ಅದಕ್ಕೆ ಉತ್ತರವಿಲ್ಲ. ನಾನು ಹೀಗೆಯೇ ಬಹುತೇಕ ಪರ-ವಿರೋಧಿಗಳನ್ನು ಪ್ರಶ್ನಿಸಿದ್ದೇನೆ.ಆದವರಿಗೆ ಬೇಕೂ ಆಗಿಲ್ಲ. ಇಲ್ಲಿ ಗೌರಿ ಲಂಕೇಶ್ ರನ್ನು ಅವರ ಆಶಯಗಳನ್ನು ತಿಳಿದುಕೊಳ್ಳುವುದಕ್ಕಿಂತ ಆಕೆಯ ಸಹಯೋಗದೊಂದಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಉಮ್ಮೆದಿಗೆ ಬಿದ್ದಿದ್ದಾರೇನೋ ಎನ್ನುವ ಅನುಮಾನ ಕಾಡುತ್ತದೆ. ಆಕೆಯನ್ನು ಸೈದ್ಧಾಂತಿಕವಾಗಿ ವಿರೋಧಿಸುವವರು ಇರಬಹುದೇನೋ? ಅವರೆಲ್ಲಾ ಆಕೆಯನ್ನು ಸಾಯಿಸಬೇಕು ಎಂದುಕೊಳ್ಳುತ್ತಾರೆಯೇ..? ಇಷ್ಟಕ್ಕೂ ವಿರೋಧಿಸಿ ಯುದ್ಧಕ್ಕೆ ನಿಲ್ಲುವವನು ಗೆಲ್ಲಲು ನೋಡುತ್ತಾನೆ. ಕೊಲ್ಲಲು ಪ್ರಯತ್ನಿಸಿದ ಅಂದರೆ ಪಾಖಂಡಿ.ಆದರೆ ಆ ತಕ್ಷಣ ಇವರೇ ಕೊಲೆ ಮಾಡಿದ್ದು ಎಂದು ಇವರು ಇಲ್ಲ, ಅವರಲ್ಲ ಇವರಿರಬಹುದು ಎಂದು ಅವರು...ಆನಂತರ ಅವರು ಸರಿಯಿಲ್ಲ, ಇವರು ಸರಿಯಿಲ್ಲ,..ಹೀಗೆ ಸಾಗುತ್ತ ವಾಗ್ವಾದ ವೈಯಕ್ತಿಕ ನಿಂದನೆಗೆ ಬಂದು ಬಿಟ್ಟಿದೆ. ಗೌರಿ ವಿರೋಧಿಸಿದವರನ್ನು ಅನ್ ಫ್ರೆಂಡ್ ಮಾಡುತ್ತೇನೆ ಎನ್ನುವವರು ಕೆಲವರು, ಗೌರಿ ಪರವಿರುವುದನ್ನು ನೋಡಿ, ಗೆಳೆತನಕ್ಕೆ ಚುಕ್ಕಿ ಇಡುವ ಇನ್ನೂ ಕೆಲವರು ..ಈಗ ಹೇಳಿ. ಗೌರಿ ಲಂಕೇಶ್, ಬಸವಣ್ಣ, ಬುದ್ಧ ಇತ್ಯಾದಿಗಳು ಗುಂಪುಗಾರಿಕೆ ಮಾಡಿ, ತನ್ನದೇ ಜಾತಿ ಧರ್ಮ ಕಟ್ಟುವ ಉಮ್ಮೆದಿಗೆ ಬಿದ್ದಿದ್ದರೆ..? ಜಾತಿ ಮತವಿಲ್ಲದ ದೇಶ ನಮ್ಮದಾಗಬೇಕು ಎನ್ನುವ ಆಶಯ ಅವರದಲ್ಲವೇ..? ಹಾಗಿದ್ದ ಮೇಲೆ ನಾವು, ನಮ್ಮ ಪರ ನಿಂತವರದ್ದೆ, ನಾವು ಹೇಳುವುದನ್ನು ವಿರೋಧಿಸಿದೆ ಜಿ ಹುಜೂರ್ ಎನ್ನುವವರನ್ನು ಸೇರಿಸಿಕೊಂಡು ನಮ್ಮವರದ್ದೆ ಗುಂಪು ಕಟ್ಟಿಕೊಂಡರೆ ಅವರ ಆಶಯಕ್ಕೆ ಧಕ್ಕೆಯಾಗುವುದಿಲ್ಲವೇ..?ಆಗಾದಾಗ ನಮ್ಮ ತಪ್ಪುಗಳೆಲ್ಲಿ ನಮಗೆ ಗೊತ್ತಾದೀತು...?
ಕೆಲವೊಮ್ಮೆ ನಾನು ಚರ್ಚೆಗೆ ನಿಲ್ಲುತ್ತೇನೆ, ಆದರೆ ಅದು ವಾಗ್ವಾದಕ್ಕೆ ತಿರುಗಿಕೊಂಡಾಗ ಸುಮ್ಮನಾಗುತ್ತೇನೆ ಅಷ್ಟೇ. ಚರ್ಚೆಯಿಂದ ವಿಷಯದ ಆಳ ತಿಳಿಯುತ್ತದೆ, ಆದರೆ ವಾದ ಮೊಂಡುವಾದಕ್ಕೆ ಕಾರಣವಾಗಿ, ಅದೇ ಅರ್ಥಹೀನ ಜಗಳಕ್ಕೆ ಕಾರಣವಾಗುತ್ತದೆ. ಅದು ನಮ್ಮನ್ನೂ ಏಕಮುಖಿ ಚಿಂತಕರನ್ನಾಗಿ ಮಾಡಿಬಿಡುತ್ತದೆ. ನೀವೇ ಗಮನಿಸಿ.ಈಗ ನಿಂದನೆ-ಪ್ರತಿನಿಂದನೆ ಮಾಡುತ್ತಿರುವವರು ಯಾರು..? ಅವರ್ಯಾರೂ ಅಜ್ಞಾನಿಗಳಲ್ಲ, ಅನಕ್ಷರಸ್ಥರಲ್ಲ..ಓದಿಕೊಂಡವರು, ಸಮಾಜದಲ್ಲಿ ತಮ್ಮದೇ ಆದ ಅಸ್ತಿತ್ವವನ್ನು ಹೊಂದಿರುವವರು. ಇದರಿಂದ ಏನು ಲಾಭ ಎನ್ನುವುದನ್ನೂ ಯೋಚಿಸದೇ ಅರಚಾಟ ಕಿರುಚಾಟ ಮಾಡುತ್ತಿರುವುದು ನೋಡಿದರೆ ಇವರ ಜ್ಞಾನ ಇಷ್ಟೇನಾ ಎನ್ನುವ ಅನುಮಾನ ಬರದೆ ಇರದು.
ಈಗ ನಾನು ಗೌರಿ, ನಾವೆಲ್ಲರೂ ಗೌರಿ ಎನ್ನುವ ಸಮಾವೇಶ ಮಾಡಿದರು. ಒಳ್ಳೆಯದು. ಇದೇ ಮುಖ ಪುಸ್ತಕದಲ್ಲಿ ಅದರ ಪರ ವಿರೋಧಗಳ ಮಾತುಕತೆಯೂ ಮಾಡಾಯಿತಲ್ಲ, ಆಗಿನ ಮಾತುಗಳನ್ನು ಸುಮ್ಮನೆ ಗಮನಿಸಿ, ಬಹುತೇಕ ಅವೆಲ್ಲವೂ ಕೊನೆಯಾಗಿರುವುದು ದೂಷಣೆಯಲ್ಲಿ, ಬೈಗುಳದಲ್ಲಿ.ಅದರ ಬದಲಿಗೆ ನಾವೆಲ್ಲರೂ ಗೌರಿ ಎನ್ನುವ ಪ್ರಜ್ಞಾವಂತರು ಅವರೆಷ್ಟರ ಮಟ್ಟಿಗೆ ಗೌರಿ ಎನ್ನುವುದನ್ನು ತೆರೆದಿಡುವ ಕೆಲಸ ಮಾಡಬಹುದು. ಗೌರಿ ಲಂಕೇಶರ ಬದುಕು, ಹೋರಾಟ, ಅವರ ಬರಹಗಳು, ಪುಸ್ತಕಗಳು, ಅವರು ಮಾಡಿರುವ ಸಮಾಜಮುಖಿ ಕಾರ್ಯಗಳು ಇತ್ಯಾದಿಗಳನ್ನು, ಅವರು ತಿಳಿದುಕೊಂಡದ್ದನ್ನು ತಮ್ಮ ಬರಹದಲ್ಲಿ ವಿಶದ ಪಡಿಸಬಹುದು. ವಿರೋಧಿಸುವವರ ವಾಲ್ ಮೇಲೆ, ಸಂದೇಶಗಳಲ್ಲಿ ಅದನ್ನಿಟ್ಟು ಇವರೇ ಗೌರಿ ಎಂದು ಪರಿಚಯಿಸಬಹುದು. ಆಗ ಗೌರಿ ಲಂಕೇಶ್ ಪರಿಚಯವಾಗುತ್ತದೆ. ನಿಜಕ್ಕೂ ಆಕೆಯ ಆಶಯಗಳು ಉನ್ನತವಾದದ್ದೇ ಆದಲ್ಲಿ ಬಹಳಷ್ಟು ಮಂದಿಗೆ ಅದು ಗೊತ್ತಿಲ್ಲದೇ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ತಿಳುವಳಿಕೆ ನೀಡಬಹುದು. ಆ ಮೂಲಕ ಭೌತಿಕವಾಗಿ ಇನ್ನಿಲ್ಲದ ಗೌರಿಯನ್ನು ಬರಹಗಳ ಮೂಲಕ ಜೀವಂತವಿಡಬಹುದು..ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ರಾಜಕೀಯ ಪಕ್ಷಗಳ ಬಗೆಗೆ, ಮೋದಿ ಸಿದ್ಧರಾಮಯ್ಯ, ಬಿಜೆಪಿ ಕಾಂಗ್ರೆಸ್, ಆರ್ ಎಸ್ ಎಸ್, ಹಿಂದೂ ಮುಸ್ಲಿಂ, ದೀನ ದಲಿತ ಎಲ್ಲದರ ಮೇಲೆಯೂ ವಾದಗಳಾಗುತ್ತಿವೆ. ಪರಸ್ಪರ ಸರಿ ತಪ್ಪುಗಳ ಲೆಕ್ಕಾಚಾರದಲ್ಲಿ ತೊಡಗಿರುವವರಿಗೆ ಅದನ್ನು ಪ್ರೂವ್ ಮಾಡುವ ನಿಟ್ಟಿನಲ್ಲಿ ಎದುರಿನವನ ಸರಿಗಳೂ ಗೌಣವಾಗುತ್ತಲಿವೆ. ಇದು ಹೇಗೆ ಆಗಿದೆಯೆಂದರೆ ನಿನ್ನ ಬಟ್ಟೆ ಕೊಳೆಯಾಗಿದೆ ನೋಡಿಕೋ ಎಂದವನಿಗೆ ನನ್ನದಿರಲಿ ನಿನ್ನ ಬಟ್ಟೆಯೂ ಕೊಳೆಯಾಗಿದೆ ಎನ್ನುವಂತಾಗಿದೆ. ಹೌದಾ.. ಇಲ್ಲವಲ್ಲ. ಅದು ಕೊಳೆಯಲ್ಲ ಎಂದು ನೋಡಿಕೊಳ್ಳುವುದು ಇಲ್ಲಿ ಬೇಕಾಗಿದೆಯೇ ಹೊರತು, ಅದು ಹಾಗೆಯೇ ಇರಲಿ ನಿನ್ನಲ್ಲೂ ಕೊಳೆಯಾಗಿದೆ ಎಂದು ತೋರಿಸುವುದರಿಂದ ಇಬ್ಬರ ಕೊಳೆಯೂ ಹಾಗೆಯೇ ಇರುತ್ತದೆಯಲ್ಲವೇ..?  ಗೌರಿ ಸತ್ತಿದ್ದಾರೆ..ಆಕೆ ಹೀಗಿದ್ದರು, ಇಷ್ಟೆಲ್ಲಾ ಮಾಡಿದ್ದರು ಎಂದು ಯಾರೊಬ್ಬರೂ ಪರಿಚಯಿಸುತ್ತಿಲ್ಲ. ಬದಲಿಗೆ ಅವರನ್ನು ಇವರು ಕೊಂದರು, ಆ ಪಕ್ಷ ಕೊಂದಿತು, ನಾವು ಹೀಗಿರಬೇಕು ಎನ್ನುವ ಮಾತಿನ ಜಗಳಕ್ಕೆ ನಿಂತಿರುವುದರಿಂದ ಇಲ್ಲಿ ಗೌರಿ ಲಂಕೇಶ್ ಮರೆಯಾಗಿ ಹತ್ಯೆಯಾಚೆಗಿನ ವಿಷಯಗಳೇ ಮಹತ್ವದ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿದೆ. ಹಾಗೆಯೇ ಮುಂದುವರೆದು ಅದೂ ಮರೆಯಾಗಿ ನಕಲಿ ಫೋಟೋಗಳ ಪ್ರಕಟಣೆ, ಮಾತಿನ ದೂಷಣೆ ಅಲ್ಲಿ ಇಲ್ಲಿ ಆದ ಚಿಕ್ಕ ತಪ್ಪುಗಳು ಪ್ರಧಾನ ಪಾತ್ರ ವಹಿಸುತ್ತಿವೆ.
 ಇದು ಹೀಗೆ ಮುಂದುವರೆದರೆ ಯಾವುದೂ ನಿಚ್ಚಳವಾಗುವುದಿಲ್ಲ. ಬದಲಿಗೆ ಇಡೀ ಸಾಮಾಜಿಕ ಜಾಲತಾಣವೇ ಕೆಸರುಗುಂಡಿಯಾಗಿ ಬಿಡುತ್ತದೆ, ಜೊತೆಗೆ ನಮ್ಮ ಮನಸ್ಸುಗಳೂ ಕೂಡ.

Wednesday, July 5, 2017

ಸಫಾರಿಯ ಸವಾರಿ ಹಿಂದಿನ ಕಷ್ಟಗಳು...

ಪುಟಾಣಿ ಸಫಾರಿ ಬಿಡುಗಡೆಗೆ ಸಿದ್ಧವಾಗಿದೆ, ಅದರ ಬಿಡುಗಡೆಯ ದಿನಾಂಕ ನಿಕ್ಕಿಯಾಗಿದೆ. ಮಕ್ಕಳ ಚಿತ್ರವಾದ್ದರಿಂದ ಅದನ್ನು ಪ್ರೇಕ್ಷಕರಿಗೆ ಅಂದರೆ ಇಚ್ಚಿತ ಪ್ರೇಕ್ಷಕರು ಎಂದರೆ ಮಕ್ಕಳಿಗೆ ತಲುಪಿಸುವುದು ಹೇಗೆ ಎಂಬೊಂದು ಪ್ರಶ್ನೆ ನನ್ನನ್ನು ಬಹುವಾಗಿ ಕಾಡಿತ್ತು. ಚಿತ್ರರಂಗದಲ್ಲಿ ಎಲ್ಲಾ ವಿಭಾಗಗಳ, ಶೈಲಿಯ ಚಿತ್ರಗಳಿಗೆ, ಸ್ಟಾರ್ ನಟರ ಚಿತ್ರಗಳಿಗೆ, ಹೆಸರುಗಳಿಸಿದ ನಿರ್ದೇಶಕರ ಚಿತ್ರಗಳಿಗೆ ಒಂದಿಷ್ಟು ಪ್ರೇಕ್ಷಕವೃಂದ ಇರುತ್ತದೆ. ಆದರೆ ಮಕ್ಕಳ ಚಿತ್ರಗಳಿಗೆ ಮಕ್ಕಳಿವೆಯಾದರೂ ಸಿನಿಮಾ ಎಂದಾಗ ಅವರು ಚಿತ್ರಮಂದಿರಕ್ಕೆ ಬರುತ್ತಾರೆಯೇ..? ಇದು ಮೊದಲ ಪ್ರಶ್ನೆ.
ಮಕ್ಕಳ ಚಿತ್ರ ಎಂದಾಗ ಅದರ ಮಿತಿಗಳು ಹತ್ತು ಹಲವಾರು ಇವೆ. ಸುಮ್ಮನೆ ನೀವೇ ಯೋಚಿಸಿ, ಕಳೆದ ವರ್ಷ ಕನ್ನಡದಲ್ಲಿಯೇ ಮಕ್ಕಳ ಚಿತ್ರಗಳು ಎನ್ನುವ ಹಣೆಪಟ್ಟಿ ಹೊತ್ತುಕೊಂಡು ಬಿಡುಗಡೆಯಾದ ಕನ್ನಡ ಚಿತ್ರಗಳು ಎರಡ್ಮೂರು ಚಿತ್ರಗಳು, ಈ ವರ್ಷದಲ್ಲಿ ಇಲ್ಲಿಯವರೆಗೆ ಐದು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಯಾವುದಕ್ಕೆ ನಮ್ಮ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿದ್ದೇವೆ..? ಯಾವುದನ್ನು ನೋಡಿದ್ದೀರಾ..?
ಉತ್ತರವಿಲ್ಲ. ಮಕ್ಕಳ ಚಿತ್ರಗಳ ಬಹುದೊಡ್ಡ ಮಿತಿ ಅಂದರೆ ಇದೆ. ಮಕ್ಕಳ ಚಿತ್ರಗಳು ಕಡಿಮೆ ವೆಚ್ಚದಲ್ಲಿ ಆಗಿಹೋಗುತ್ತವೆ, ಅದಕ್ಕೆ ಭರಪೂರ ಒಳ್ಳೆ ಮೊತ್ತದ ಸಬ್ಸಿಡಿ ಇದೆ.. ಎಂಬೆಲ್ಲಾ ಅಂದುಕೊಳ್ಳುವುದು ತಪ್ಪು. ಖರ್ಚು ವೆಚ್ಚ ಅಷ್ಟೇ ಇರುತ್ತದೆ.
ಮಾಮೂಲಿ ಚಿತ್ರಗಳಿಗೆ ಮಾಮೂಲಿಯಂತೆ ದಿನಪತ್ರಿಕೆಗಳಲ್ಲಿ ಜಾಹಿರಾತು ನೀಡುತ್ತೇವೆ, ಟಿವಿಗಳಲ್ಲಿ ಸುದ್ದಿವಾಹಿನಿಗಳಲ್ಲಿ ಕಾರ್ಯಕ್ರಮ ಮಾಡಿಸುತ್ತೇವೆ, ಜೊತೆಗೆ ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿಸುತ್ತೇವೆ, ಆಮೇಲೆ ಗೋಡೆಗಳ ಮೇಲೆ ಪೋಸ್ಟರ್.. ಆನಂತರ ..ಚಿತ್ರಮಂದಿರದಲ್ಲಿ..
ಇದನ್ನೇ ಮಕ್ಕಳ ಚಿತ್ರಗಳಿಗೆ ಅನ್ವಯಿಸಲು ಸಾಧ್ಯವೇ..? ಮಕ್ಕಳು ದಿನಪತ್ರಿಕೆಯನ್ನು ಅದರಲ್ಲೂ ಸಿನಿಮಾ ಪುರವಣಿಯನ್ನು ನೋಡುತ್ತವೆಯೇ..? ಅಥವಾ ಪೋಷಕರು ನೋಡಲು ಬಿಡುತ್ತಾರೆಯೇ..? ಇನ್ನೂ ಟಿವಿಯಲ್ಲಿ ಸುದ್ದಿವಾಹಿನಿಗಳ ಸಿನಿಮಾ ಪ್ರಚಾರ ಮಕ್ಕಳನ್ನು ಹೇಗೆ ತಲುಪಲು ಸಾಧ್ಯ..? ಪೋಷಕರು ಮಕ್ಕಳನ್ನು ಟಿವಿ ನೋಡಲು ಬಿಡುವ ಸಂದರ್ಭ ತೀರಾ ಕಡಿಮೆ..
ಇನ್ನು ಗೋಡೆಪ್ರಚಾರವನ್ನು ಶಾಲೆಗೇ ಹೋಗುವಾಗ, ಬಸ್ಸಿನಲ್ಲೋ, ಪೋಷಕರ ಬೈಕಿನಲ್ಲೋ ಕುಳಿತು ನೋಡಿದರೂ ಅದರ ಬಗ್ಗೆ ತಿಳಿಯಲು ಸಾಧ್ಯವೇ..? ಅಲ್ಲಿಗೆ ಮಕ್ಕಳಿಗೆ ನಮ್ಮ ಎಲ್ಲಾ ರೀತಿಯ ಪ್ರಚಾರಗಳೂ ತಲುಪುವ ಸಂಭವ ತೀರಾ ಕಡಿಮೆ ಎನ್ನುವಂತಾಯಿತು.
ಓಕೆ ಇಷ್ಟೆಲ್ಲಾ ಆದಮೇಲೆ ಚಿತ್ರ ಬಿಡುಗಡೆ ಮಾಡಿದೆವು ಎಂದುಕೊಳ್ಳಿ..ಕಾಲೇಜು ಹುಡುಗ, ಹದಿಹರೆಯದ ಹುಡುಗರು ಶಾಲೆಗೇ ತಪ್ಪಿಸಿಕೊಂಡು ಸಿನಿಮಾ ನೋಡಬಲ್ಲವು, ಆದರೆ ಶಾಲಾ ಬಾಲಕ/ಕಿಯರಿಗೆ ಅದು ಸಾಧ್ಯವೇ ಇಲ್ಲ. ಶಾಲೆ ಮುಗಿದಾದ ಮೇಲೆ ಶಾಲೆಯ ಬಸ್, ಆಟೋ, ಅಥವಾ ಪೋಷಕರ ಜೊತೆಗೆ ಮನೆ ಸೇರಿಕೊಂಡರೆ ಇನ್ನು ಹೊರಗಣ ಪ್ರಪಂಚ ನಾಳೆಯೇ..! ಹಾಗಾಗಿ ಮಕ್ಕಳೇ ಚಿತ್ರಮಂದಿರಕ್ಕೆ ಬರುವುದಿಲ್ಲ ಎಂದಾಯಿತು. ಇನ್ನು ಮಕ್ಕಳಿಗೆ ಚಿತ್ರದ ಪ್ರಚಾರ ತಲುಪಿತು ಎಂದುಕೊಳ್ಳೋಣ, ಮಕ್ಕಳು ಮನೆಯಲ್ಲಿ ಹಠ ಹಿಡಿದರೆ ಪೋಷಕರು ಇರೋ.. ಸಂಡೇ ಕರ್ಕೊಂಡು ಹೋಗ್ತೀನಿ ಎನ್ನದಿರುತ್ತಾರೆಯೇ..?ಆ ಭಾನುವಾರ ಯಾವುದಾದರೂ ಮದುವೆಯೋ ಕಾರ್ಯಕ್ರಮವೋ ಬಂದರೆ ಮುಗೀತಲ್ಲ, ಇನ್ನೊಮ್ಮೆ ಕರ್ಕೊಂಡು ಹೋಗ್ತೀನಿ ಅನ್ನುವಲ್ಲಿಗೆ ಕತೆ ಸಮಾಪ್ತಿಯಾಗುತ್ತದೆ. ಚಿತ್ರಮಂದಿರ ವಾರದ ಏಳುದಿನ ತೆರೆದಿರುತ್ತದೆ, ಆಟೋ ಚಾಲಕರು, ಕಾಲೇಜು ಹುಡುಗರು, ಮನೆಯಲ್ಲಿರುವವರು, ಕೂಲಿ ಮಾಡುವವರು.. ಹೀಗೆ ಎಲ್ಲರೂ ತಮಗೆ ಅನುಕೂಲ ಎನಿಸಿದ ದಿನ ಸಿನಿಮಾ ನೋಡುತ್ತಾರೆ, ಆದರೆ ಮಕ್ಕಳಸಿನೆಮಾಕ್ಕೆ ಅದೆಲ್ಲಾ ನಡೆಯದು. ಶಾಲೆಯ ರಜ, ಪೋಷಕರ ಪುರುಸೊತ್ತು, ಮನಸ್ಥಿತಿ, ಪರಿಸ್ಥಿತಿ ಎಲ್ಲವೂ ಪ್ರಧಾನ ಪಾತ್ರ ವಹಿಸುತ್ತದೆ.
ಇವೆಲ್ಲವನ್ನೂ ಗಮನಿಸಿದಾಗ ಮಕ್ಕಳ ಚಿತ್ರವನ್ನು ಯಾಕಾದರೂ ಮಾಡಬೇಕು ಎನ್ನುವ ಪ್ರಶ್ನೆ ಬಂದೇಬರುತ್ತದೆ. ಹಾಗಾಗಿಯೇ ಈವತ್ತಿನ, ಆವತ್ತಿನ ಸ್ಟಾರ್ ನಿರ್ದೇಶಕರುಗಳು ಮಕ್ಕಳ ಚಿತ್ರಗಳನ್ನು ನಿರ್ದೇಶನ ಮಾಡಿದ್ದು ಕಡಿಮೆ ಅಥವಾ ಇಲ್ಲವೇ ಇಲ್ಲ. ಗೀತಪ್ರಿಯ, ಎಸ.ವಿ.ರಾಜೇಂದ್ರಸಿಂಗ್ ಬಾಬು, ಟಿ.ಎಸ್.ನಾಗಾಭರಣ ಮುಂತಾದ ದಿಗ್ಗಜರು ಇಂತಹ ಪ್ರಯತ್ನಕ್ಕೆ ಕೈಹಾಕಿ ಸೈ ಎನಿಸಿಕೊಂಡದ್ದು ಇದೆ..ಮಣಿರತ್ನಂ ಒಂದೆರೆಡು ಆ ತರಹದ ಪ್ರಯತ್ನ ಮಾಡಿದ್ದು ಸತ್ಯ, ಅದು ಬಿಟ್ಟರೆ ಕನ್ನಡದಲ್ಲಿ ಈವತ್ತಿನ ತಲೆಮಾರಿನ ನಿರ್ದೇಶಕರುಗಳು ಮಕ್ಕಳ ಚಿತ್ರ ಮಾಡಿದ್ದು ಇದೆಯೇ..? ಉಹೂ.
ಇನ್ನು ವಿಷಯಕ್ಕೆ ಬರುವುದಾದರೆ ಮಕ್ಕಳಚಿತ್ರಗಳ ಕತೆಗಳು ಮತ್ತು ನಿರೂಪಣೆ..ಅದು ಮಕ್ಕಳಿಗೆ ಇಷ್ಟವಾಗಬೇಕಾಗುತ್ತದೆ..ಆದರೆ ನಮ್ಮಂತಹ ಪ್ರೇಕ್ಷಕರಿಗೆ ಅದು ಬೋರ್ ಎನಿಸುತ್ತದೆ. ನಾವೇನಾದರೂ ಪೋಗೋ, ಛೋಟಾಭೀಮ್ ಮುಂತಾದವುಗಳನ್ನು ಅರ್ಧಘಂಟೆ ಕುಳಿತುನೋಡಲು ಸಾಧ್ಯವೇ..? ಹಾಗಾಗಿ ಮಕ್ಕಳ ಚಿತ್ರಗಳು ಸಾಮಾನ್ಯವಾಗಿ ಸಾವಧಾನ ಬೇಡುತ್ತವೆ. ಹಾಗಂತ ಮಕ್ಕಳ ಚಿತ್ರವನ್ನು ದೊಡ್ಡವರು ನೋಡೇ ಇಲ್ಲ ಎಂದಲ್ಲ. ಆದರೆ ಅವು ಮಕ್ಕಳ ಚಿತ್ರವಲ್ಲ, ತಾರೆ ಜಮೀನ್ ಪರ್ ಚಿತ್ರವನ್ನು ನೋಡಿ, ದೊಡ್ಡವರು ಕಣ್ಣೀರಾದರೆ ಚಿಕ್ಕವರು ಚಿತ್ರಮಂದಿರದಲ್ಲಿಯೇ ನಿದ್ರೆ ಮಾಡಿದ್ದಿದೆ. ಬಹುತೇಕ ಭಾವನಾತ್ಮಕ ಅಂಶಗಳು, ನ್ಯಾಚುರಲ್ ಎನಿಸುವ ಅಂಶಗಳು ದೊಡ್ಡ ದೊಡ್ಡ ಸಂದೇಶಗಳು ದೊಡ್ಡವರಿಗೆ ಸೇರುತ್ತವೆ, ಆದರೆ ಮಕ್ಕಳಿಗ್ಯಾಕೆ ಅದರ ಉಸಾಬರಿ..?
ಹಾಗಾಗಿ ನಾವಂತೂ ಚಿತ್ರವನ್ನು ಬಿಡುಗಡೆ ಮಾಡಲೇಬೇಕಿದೆ. ಆದರೆ ಇಷ್ಟೆಲ್ಲಾ ಅಂಶಗಳನ್ನು ತಲೆಯಲ್ಲಿಟ್ಟುಕೊಂಡು ಕಣ್ಮುಚ್ಚಿಕೊಂಡು ಬಿಡುಗಡೆ ಮಾಡುವುದಾದರೂ ಹೇಗೆ..? ಹಾಗಾಗಿಯೇ ನಾವುಗಳು ಕುಳಿತುದಿನಗಟ್ಟಲೆ ಯೋಚಿಸಿದ್ದಿದೆ. ಸುಮ್ಮನೆ ಮಾಮೂಲಿ ಪ್ರಚಾರ ತಂತ್ರವನ್ನು ನಂಬಿಕೊಂಡರೆ ಅದು ಮಕ್ಕಳಿಗೆ ತಲುಪುವುದಿಲ್ಲ ಎನ್ನುವುದು ಮನಗಂಡದ್ದೇ ಮೊದಲಿಗೆ ಬಿಡುಗಡೆ ಮಾಡುವ ಚಿತ್ರಮಂದಿರವನ್ನು ಮಾತಾಡಿಕೊಂಡು ಅದರ ಸುತ್ತಮುತ್ತಲಿನ ಶಾಲೆಗಳನ್ನು ಪಟ್ಟಿ ಮಾಡಿದೆವು. ಆನಂತರ ನಿರ್ಮಾಪಕರ ಸ್ನೇಹಿತರ ಸಹಾಯದಿಂದ ಶಾಲೆಗಳಿಗೆ ಭೇಟಿ ಕೊಟ್ಟು, ಚಿತ್ರದ ಬಗೆಗೆ ಚಿಕ್ಕ ಮಾಹಿತಿ ಮಕ್ಕಳಿಗೆ ಕೊಟ್ಟು, ಒಂದಷ್ಟು ಕರಪತ್ರಗಳನ್ನು ಮಕ್ಕಳಿಗೆ ಹಂಚುವ ಕಾರ್ಯಕ್ರಮ ಹಮ್ಮಿಕೊಂಡೆವು. ಹಾಗೆಯೇ ಶಾಲೆಯ ಮುಖ್ಯಸ್ಥರಿಗೆ ಸಿನಿಮಾದ ಬಗೆಗೆ ವಿವರಿಸಿದೆವು. ನಮ್ಮ ವೀರೇಶ್ ಚಿತ್ರಮಂದಿರದ ಅಕ್ಕಪಕ್ಕ ಏರಿಯಗಳಲ್ಲಿ ನಮಗೆ ಪರಿಚಯವಿರುವ ಎಂಭತ್ತಕ್ಕೂ ಹೆಚ್ಚು ಶಾಲೆಗಳು ಸಿಕ್ಕವು. ಭೇಟಿ ನೀಡಿದಾಗ ಶಾಲೆಯ ಮುಖ್ಯಸ್ಥರಿಂದ ಅದ್ಭುತವಾದ ಪ್ರತಿಕ್ರಿಯೆ ಬಂದಿತು. ಸಾವಧಾನದಿಂದ ಕುಳಿತು ಮಾತನಾಡಿದ ಮುಖ್ಯಸ್ಥರು ನಮಗೆ ಪಾಠದ ಜೊತೆಗೆ ಇತರ ಚಟುವಟಿಕೆಯೂ ಬೇಕು, ನೀವು ಹತ್ತಿರದ ಚಿತ್ರಮಂದಿರದಲ್ಲಿ ಪ್ರದರ್ಶಿಸಿದರೆ ನಾವು ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ ಕಳುಹಿಸುತ್ತೇವೆ ಎಂದರು. ಅಷ್ಟು ಸಾಕು, ಎಂದು ಗೆದ್ದ ಮನಸ್ಸಿನಿಂದ ಹೊರಬಂದೆವು.
ಈಗ ದಿನ ಶಾಲೆಗಳ ಮಕ್ಕಳ ಭೇಟಿ ನಡೆಯುತ್ತಿದೆ, ಆ ಮೂಲಕ ಮಕ್ಕಳೇ ನೋಡಬೇಕಾದ ಚಿತ್ರವೊಂದಿದೆ ಎಂಬುದನ್ನು ಮಕ್ಕಳಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ.
ಇನ್ನು ಗೊತ್ತಿರುವ ಗೆಳೆಯ/ಗೆಳತಿಯರಿಗೆ ನೀವು ಬರದಿದ್ದರೂ ಪರವಾಗಿಲ್ಲ, ನಿಮ್ಮ ಮಕ್ಕಳನ್ನು ಕಳುಹಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ..ಉದ್ದೇಶ.. ಮಕ್ಕಳ ಮನಸ್ಥಿತಿಯನ್ನು ತಲೆಯಲ್ಲಿಟ್ಟುಕೊಂಡು ನಿರ್ಮಿಸಿದ ಚಿತ್ರ.. ಆದಷ್ಟೂ ಮಕ್ಕಳನ್ನು ತಲುಪಲಿ ಎಂಬುದಷ್ಟೇ.
ಆದರೆ ಇದನ್ನು ಇಡೀ ಬೆಂಗಳೂರಿಗೆ ಮಾಡಲಾಗುತ್ತದೆಯೇ..?ಇಡೀ ಕರ್ನಾಟಕದ ಮಕ್ಕಳಿಗೆ/ಶಾಲೆಗಳಿಗೆ ಮಾಡಲಾಗುತ್ತದೆಯೇ..?ಉಹೂ. ಆದರೆ ನಾವಿರುವ ಕಡೆಯಲ್ಲಿ ಇಷ್ಟಾದರೂ ಮಾಡದಿದ್ದರೆ ಹೇಗೆ..? ಬರೀ ಸಿನಿಮಾ ಮಾಡುವುದು, ಅದನ್ನು ಬಿಡುಗಡೆ ಮಾಡುವುದು ಅದಷ್ಟೇ ಸಿನಿಮಾ ಅಲ್ಲ. ಅದನ್ನು ಪ್ರೇಕ್ಷಕರಿಗೆ, ಅದೂ ಆಯಾ ಪ್ರೇಕ್ಷಕರಿಗೆ ತಲುಪಿಸುವುದು ಮುಖ್ಯ. ಸ್ಟಾರ್ ನಟನ ಪೋಸ್ಟರ್ ಗೆ ಜನ ಅಭಿಮಾನಿಗಳು ಮುಗಿಬಿದ್ದು ಬರುತ್ತಾರೆ, ಚಿತ್ರದಲ್ಲಿ ದ್ವಂದ್ವಾರ್ಥವಿದ್ದರೆ ಪಡ್ಡೆಗಳು ಹರಿಹಾಯುತ್ತಾರೆ, ಒಳ್ಳೆಯ ಗೀತೆಗಳು, ಹದಿಹರೆಯದ ವಸ್ತುಗಳು ಟೀನೇಜ್ ಹುಡುಗರನ್ನು ಚಿತ್ರಮಂದಿರಕ್ಕೆ ಕರೆತರುತ್ತದೆ.

ಆದರೆ ಮಕ್ಕಳ ಚಿತ್ರಗಳು ಮಕ್ಕಳನ್ನು ಕತೆತರುವುದಿಲ್ಲ, ಆದರೆ ಅವರ ಪೋಷಕರಿಗೆ ಮಕ್ಕಳಿಂದ ಒತ್ತಡ ತರಬಹುದು, ಅದಾಗ ಬೇಕಾದರೆ ಮೊದಲು ಸಿನಿಮಾದ ಬಗೆಗೆ ಮಕ್ಕಳಿಗೆ ತಲುಪಬೇಕು, ಆ ಕೆಲಸ ಈಗ ಮಾಡುತ್ತಿದ್ದೇವೆ..ಅಷ್ಟೇ..!

Monday, July 3, 2017

ಕಿಂ ಕಿ ಡುಕ್ ಮಾತಾಡುತ್ತಿದ್ದಾನೆ..

ನಿಮಗೆ ಕಿಂ ಕಿ ಡುಕ್ ಗೊತ್ತಿರಬಹುದು. ಸಿನಿಪ್ರಿಯನಿಗೆ ಅವನು ತೀರಾ ಪರಿಚಿತ. ವಿಕ್ಷಿಪ್ತ, ವಿಚಿತ್ರ ಕೆಲವೊಮ್ಮೆ ಬರ್ಭರ, ಬೀಭತ್ಸ ಇವೆಲ್ಲಾ ವನ ಒಂದಿಲ್ಲೊಂದು ಸಿನಿಮಾದಲ್ಲಿರುತ್ತದೆ. ಆದರೆ ಎಲ್ಲದರಲ್ಲೂ ಸಾಮಾನ್ಯ ಅಂಶ ಎಂದರೆ ಮಾತು ಕಡಿಮೆ ಇರುವುದು. ಹೌದು. ಆತನ ಸಿನೆಮಾಗಳ ಪ್ಲಸ್ ಪಾಯಿಂಟ್ ಅದೆ.. ಪಾತ್ರಗಳು ತೀರಾ ಕಡಿಮೆ ಮಾತನಾಡುತ್ತವೆ, ಮಾತನಾಡದೆ ಪ್ರತಿಕ್ತಿಯೇಗಳಲ್ಲೇ ಭಾವವನ್ನು ಹೇಳಿಬಿಡುತ್ತವೆ, ನೋಡುತ್ತಾ ನೋಡುತ್ತಾ ಅರ್ಥವಾಗುವ ಸಿನಿಮಾ ಅವನದ್ದು, ಕೇಳಿಸಿಕೊಂಡಲ್ಲ.
ಅವನ ಕ್ರೊಕೊಡೈಲ್, ವೈಲ್ಡ್ ಅನಿಮಲ್ಸ್ ಮುಂತಾದ ಸಿನಿಮಾಗಳನ್ನ ಬಿಡಿ. ಅವನ ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ನೋಡಿದರೆ ಗೊತ್ತಾಗುತ್ತದೆ. ನಿಜಕ್ಕೂ ಕಿವುಡ ಕೂಡ ಅರ್ಥೈಸಿಕೊಳ್ಳಬಹುದಾದಂತಹ ಅದ್ಭುತವಾದ ದೃಶ್ಯಕಾವ್ಯ ಅದು. ಹಾಗಾಗಿಯೇ ಬರೀ ಚಟುವಟಿಕೆಯಿಂದಲೇ ಸಿನಿಮಾ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತುಬಿಡುತ್ತದೆ. ಆ ಸಿನಿಮಾದ ಶಕ್ತಿಯೇ ಅದು. ಹಾಗೆಯೇ ಸಮರಿಟನ್ ಗರ್ಲ್ ನೋಡಿದರೆ ನೀವು ಕಣ್ಣೀರಾಗದೇ ಇರಲಾರಿರಿ. ಗೆಳತಿಯ ಸಾಲವನ್ನು ತೀರಿಸಬೇಕು ಎಂದುಕೊಂಡು ಹೊರಡುವ ಸುಂದರಿಯ ಕತೆ ಅದು. ಋಣ ಸಂದಾಯ ಇಷ್ಟು ರೋಚಕವೇ ಎನಿಸದೆ ಇರದು. ಇನ್ನೂ 3 ಐರನ್ ನಿಶ್ಯಬ್ಧದ ಆರ್ತನಾದ ಎನ್ನಬಹುದು. ವಿವಾಹಿತ-ನೊಂದ ಸುಂದರಿ, ಒಬ್ಬ ಮನೆಗಳ್ಳ, ಮತ್ತು ಆಕೆಯ ಪತಿಯ ನಡುವ ಕತೆಯಿದು. ನೀವು ಸಿನಿಮಾ ನೋಡುತ್ತಾ ನೋಡುತ್ತಾ ಸಂಭಾಷಣೆಗಳನ್ನು ಎನಿಸಬಲ್ಲಿರಿ, ಅಷ್ಟು ಕಡಿಮೆ ಸಂಭಾಷಣೆ ಇರುವ ಚಿತ್ರವದು. ಚಿತ್ರದಲ್ಲಿನ ಹಿನ್ನೆಲೆ ಸಂಗೀತ ಈವತ್ತಿಗೂ ನನ್ನ ಕಿವಿಯಲ್ಲಿ ಮೊರೆಯುತ್ತದೆ, ಜೊತೆಗೆ ಅದರ ದೃಶ್ಯಗಳೂ ಕೂಡ.
ಆದರೆ ಆತನ ಮೊಬಿಯಸ್ ಅತೀ ಬೀಭತ್ಸ ಚಿತ್ರ. ಅದನ್ನು ನೋಡುವುದೇ, ತೆರೆಯ ಮೇಲೆ ಕಾಣಸಿಗುವುದನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಅಷ್ಟೊಂದು ಸಧ್ಯಕ್ಕೆ ವಿಕೃತ ಎನ್ನಬಹುದಾದ ಚಿತ್ರವದು. ಒಂದು ಕುಟುಂಬದಲ್ಲಿ ನಡೆಯುವ ಕತೆಗೆ ಬಣ್ಣ ಹಚ್ಚಿರುವ ಕಿಂ ಕಿ ಡುಕ್ ಯಾಕಾದರೂ ಈ ಚಿತ್ರ ತೆಗೆದನೋ ಎನಿಸುವ ಮಟ್ಟಿಗಿನ ಚಿತ್ರವದು.
ಆದರೆ ಅವನ ಇತ್ತೀಚಿನ ಚಿತ್ರವಾದ ದಿ ನೆಟ್ ಮಾತ್ರ ಅವನ ಚಿತ್ರಗಳಿಗಿಂತ ಭಿನ್ನವಾದ ಚಿತ್ರ ಎನ್ನಬಹುದು. ಏಕೆಂದರೆ ಚಿತ್ರದಲ್ಲಿನ ಪಾತ್ರಗಳು ಮಾತನಾಡುತ್ತವೆ, ಅವನ ಸಿನಿಮಾ ಎನ್ನುವುದನ್ನು ಮರೆತವರಂತೆ ಹೆಚ್ಚು ಹೆಚ್ಚು ಮಾತನಾಡುತ್ತವೆ. ಹಾಗಾಗಿ ಹೇಗೇಗೋ ಆಗಿ ಕಿಂ ಕಿ ಡುಕ್ ನಾರ್ಮಲ್ ಆಗಿಹೋದನಲ್ಲ ಎನ್ನುವ ಸಮಾಧಾನ ಕೊಡುವ ಚಿತ್ರವದು.
ಏಕೆಂದರೆ ಒಬ್ಬ ನಿರ್ದೇಶಕ ದಿಕ್ಕು ಬದಲಿಸಿ ಯಶಸ್ಸಾಗುವುದು ಕಷ್ಟ. ಅವರ ಶೈಲಿಯನ್ನು ಬದಲಿಸಿದರೆ ಆದವರಿಗೆ ಸೇರುವುದು ಕಷ್ಟವಾಗುತ್ತದೆ. ಕೌಟುಂಬಿಕ ಹೆಂಗೆಳೆಯರ ಚಿತ್ರದಲ್ಲಿ ಯಶಸ್ಸಾದವರು ಏಕಾಏಕಿ ಥ್ರಿಲ್ಲರ್ ನಿರ್ದೇಶಿಸಿದರೆ ಅದು ನೋಡಲು ಸಹ್ಯವಾಗುವುದಿಲ್ಲ ಎನ್ನುವುದಕ್ಕೆ ಉದಾಹರಣೆ ನಮ್ಮಲ್ಲೇ ಇದೆ. ಹಾಗಾಗಿ ಮಾತಾಡುತ್ತಿರುವ ಕಿಂ ಕಿ ಡುಕ್ ಇಷ್ಟವಾಗುತ್ತಾನಾ..? ಎನ್ನುವ ಕಿಂ ಅಭಿಮಾನಿಗಳಿಗೆ ಆಗುತ್ತಾನೆ ಎನ್ನುವುದು ಖುಷಿಯ ಸಂಗತಿ.
ಹಾಗಾಗಿ ಅವನ ಚಿತ್ರ ದಿ ನೆಟ್ ಸಾಹಸಮಯ ಥ್ರಿಲ್ಲರ್ ಚಿತ್ರ. ಮೈರೋಮಾಂಚನಗೊಳಿಸುವ ಚಿತ್ರವನ್ನು ಒಮ್ಮೆ ನೋಡಿ..

Wednesday, June 21, 2017

ಇದು ಸಿನಿಮಾ ಅಲ್ಲ..

ಎಂತೆಂತಾ ಸಿನಿಮಾ ಮಾಡ್ತಾರೆ ಗುರು.. ಇನ್ಮೇಲೆ ಇಂತಹದ್ದೇ ಸಿನಿಮಾ ಮಾಡಿದ್ರೆ ಅವರನ್ನ ಬ್ಯಾನ್ ಮಾಡಬೇಕು ಎಂದು ನಾವು ನೀವು ತೀರಾ ಹಿಂಸಾತ್ಮಕ ಚಿತ್ರವನ್ನು ನೋಡಿದಾಗ ಅಂದುಕೊಂಡಿರಬಹುದು. ಆದರೆ ಒಂದು ಸರ್ಕಾರ ಅಥವಾ ದೇಶ ಒಬ್ಬ ಸೃಜನಶೀಲ ನಿರ್ದೇಶಕನಿಗೆ ನೀನು ಎರಡು ದಶಕಗಳ ಕಾಲ ಸಿನಿಮಾ ಮಾಡಲೇಬೇಡ ಎಂದುಬಿಟ್ಟರೆ..? ಅದಕ್ಕಿಂತ ಘೋರ ಶಿಕ್ಷೆ ಇದೆಯೇ..?
ಇದು ಸಿನಿಮಾ ಅಲ್ಲ.. ಹಾಗಂತ ಯಾರಿಗೆ ಹೇಳಲು ಹೊರಟಿದ್ದಾರೆ ಜಾಫರ್ ಫನಾಹಿ ಎಂಬುದು ಸಿನಿಮಾ ನೋಡು ನೋಡುತ್ತಾ ಗೊತ್ತಾಗುತ್ತದೆ.ಜಾಫರ್ ಫನಾಹಿ ಇರಾನಿಯನ್ ಚಿತ್ರ ನಿರ್ದೇಶಕ. ಸಿನಿರಸಿಕರಿಗೆ ಇರಾನಿಯನ್ ಸಿನಿಮಾಗಳು ಹೊಸದಲ್ಲ. ಅವನ ವೈಟ್ ಬಲೂನ್ ಸಿನಿಮಾ ನೋಡಿದರೆ ನಿಮಗೆ ಗೊತ್ತಾಗುತ್ತದೆ, ಜಾಫರ್ ಫನಾಹಿ ನಿರ್ದೇಶನದ ಪಾಂಡಿತ್ಯ. ತೀರಾ ಸರಳ ಎನಿಸುವ ಕತೆಗಳೇ ಫನಾಹಿ ಚಿತ್ರದ ವಸ್ತುಗಳು. ಹಾಗೆಯೇ ದೃಶ್ಯ ರಚನೆಗಳು ಕೂಡ. ತೀರಾ ಅಬ್ಬರವಿಲ್ಲದ, ಹಾಗೆಯೇ ತೀರಾ ಆಳಕ್ಕಿಳಿಯದ ಇರಾನ್ ಜಗತ್ತನ್ನು ತೆರೆದಿಡುವ ಚಿತ್ರಕತೆ ಆಪ್ತವೆನಿಸುತ್ತದೆ. ಬಹುತೇಕ ಇರಾನಿ ಚಿತ್ರಗಳಂತೆ ದೃಶ್ಯವನ್ನು ಸಾವಧಾನವಾಗಿ  ನಿರೂಪಿಸುತ್ತಾ ಸಾಗುವ ಜಾಫರ್ ದೃಶ್ಯದ ಸಣ್ಣ ಸಣ್ಣ ವಿವರಗಳನ್ನು ತೋರಿಸದೆ ದೃಶ್ಯವನ್ನು ಅಂತ್ಯಗೊಳಿಸುವುದಿಲ್ಲ. ಹೀಗಾಯಿತು., ಹೀಗೆ ನಡೆಯುತ್ತದೆ ಎನ್ನುವ ಮಾತನ್ನು ಹೀಗೆಯೇ ನಡೆಯಿತು ಎನ್ನುತ್ತಾನೆ ತನ್ನ ನಿರೂಪಣೆಯ ಮೂಲಕ ಮತ್ತು ಅಷ್ಟನ್ನೂ ತೋರಿಸಿಯೇ ತೀರುವುದು ಫನಾಹಿ ವೈಶಿಷ್ಟ್ಯ..
ಇಟ್ಸ್ ನಾಟ್ ಎ ಫಿಲಂ ಅವನು ಸಿನಿಮಾ ಮಾಡಬಾರದು ಎಂದು ನಿಷೇಧಕ್ಕೊಳಗಾದಾಗ ನಿರ್ದೇಶಿಸಿದ ಚಿತ್ರ. 20 ವರ್ಷಗಳು ಚಿತ್ರರಂಗದಿಂದ ದೂರ ಇರುವಂತೆ, ಸಂಪೂರ್ಣವಾಗಿ ಚಿತ್ರರಂಗದ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಮುಖ್ಯವಾಗಿ ಚಿತ್ರಕತೆ ನಿರ್ದೇಶನ ಮಾಡದಿರುವಂತೆ ಅಲ್ಲಿನ ಆಡಳಿತಸರ್ಕಾರ ಫನಾಹಿಯನ್ನು ನಿಷೇಧಿಸಿ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಅದರ ಅಂತಿಮತೀರ್ಪು ಬರುವವರಗೆ ಗೃಹಬಂಧನಕ್ಕೊಳಗಾದ ಫನಾಹಿ ಸುಮ್ಮನೆ ಕುಳಿತುಕೊಳ್ಳಲು, ಮತ್ತು ತನ್ನ ಸೃಅಜನಶೀಳತೆಯನ್ನು ತೆರೆದಿಡಲು ತಯಾರಿಸಿದ ಚಿತ್ರವಿದು. ಕತೆಯು ತೆರೆದುಕೊಳ್ಳುವುದೇ ಅದರಿಂದ. ಫೋನ್ ಮೂಲಕ ಗೆಳೆಯನಿಗೆ ಫೋನ್ ಮಾಡುವ ಫನಾಹಿ ಸಂಕ್ಷಿಪ್ತವಾಗಿ ನೋಡುಗರಿಗೆ ಸಧ್ಯದ ಪರಿಸ್ಥಿತಿಯನ್ನು ವಿವರಿಸಿಬಿಡುತ್ತಾನೆ. ಆನಂತರ ತನ್ನ ಅಸಹಾಯಕತೆಯನ್ನು ವ್ಯಕ್ತ ಪಡಿಸಲು ಫೋನ್ ಅನ್ನು ಸಶಕ್ತವಾಗಿ ಬಳಸಿಕೊಂಡಿದ್ದಾನೆ. ಹಾಗಾಗಿ ನೋಡುತ್ತಾ ನೋಡುತ್ತಾ ಸಿನಿಮಾ ನಮ್ಮಲ್ಲಿ ಅವನ ಪರಿಸ್ಥಿತಿಯ ಕುರಿತಾಗಿ ವಿಷಾದಭಾವವನ್ನುಂಟುಮಾಡುತ್ತದೆ.
ಆತನೇ ಹೇಳಿದ್ದಾನೆ, ಇದು ಸಿನಿಮಾ ಅಲ್ಲ. ಸಾಕ್ಷ್ಯಚಿತ್ರವಿರಬಹುದು..? ಹೌದು. ಅವನ ಕತೆಯನ್ನು ಅವನೇ ಹೇಳುತ್ತಾ ದೃಶ್ಯ ವಿವರಣೆಗೆ ತನ್ನದೇ ಚಿತ್ರದ ಉದಾಹರಣೆಯನ್ನು ತೋರಿಸುತ್ತಾ ಮಧ್ಯ ಮಧ್ಯ ವ್ಯಕ್ತಿಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ಹೇಳಿಯೂ ಹೇಳದಂತೆ ಹೇಳುತ್ತಾ , ತಾನು ಮಾಡಬೇಕೆಂದುಕೊಂಡಿದ್ದ ಚಿತ್ರದ ಕತೆಯನ್ನು ರೂಪುರೇಷೆಯನ್ನು ವಿವರಿಸುತ್ತಾ ಸಾಗುತ್ತಾನೆ.

ಚಿತ್ರ ಒಂದು ಕಾಲು ಘಂಟೆ ಅವಧಿಯದ್ದಾಗಿದೆ. ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಸಿನಿಮಾ ನೋಡುತ್ತಾ ಸಾಗಿದಂತೆ ಇಟ್ಸ್ ನಾಟ್ ಎ ಫಿಲಂ ಸಾಕ್ಷ್ಯಚಿತ್ರಕ್ಕಿಂತ ಹೆಚ್ಚಾಗಿ ಒಂದು ಪ್ರಯೋಗಾತ್ಮಕ ಚಿತ್ರವಾಗಿ ನಮ್ಮನ್ನು ಅಪ್ಪಿಕೊಳ್ಳುತ್ತದೆ.
ಅಂದಹಾಗೆ ಈ ಚಿತ್ರವನ್ನು ತಯಾರಿಸಿ, ಅದನ್ನು ಪೆನ್ ಡ್ರೈವ್ ನಲ್ಲಿಟ್ಟು, ಕೇಕ್ ನೊಳಗೆ ಸೇರಿಸಿ ಕಾನ್ಸ್ ಫಿಲಂ ಫೆಸ್ಟಿವಲ್ ಗೆ ಕಳುಹಿಸಿಲಾಯಿತಂತೆ.

Tuesday, June 20, 2017

ಅದೃಶ್ಯ ಅತಿಥಿ...

ವಿಷಯ ಸ್ಪಷ್ಟವಾಗಿದೆ. ಅವನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಆದರೆ ಅವನ ಮೇಲೆಯೇ ಕೊಲೆ ಆರೋಪ ಬಂದರೆ ಏನು ಮಾಡುವುದು.. ಅವನೇನು ಸಾಮಾನ್ಯ ವ್ಯಕ್ತಿಯಲ್ಲ. ಶ್ರೀಮಂತ. ಪತ್ನಿ ಡೈವೋರ್ಸ್  ಗೆ ಅರ್ಜಿ ಗುಜರಾಯಿಸಿದ್ದಾಳೆ. ಇದೆಲ್ಲದರ ನಡುವೆ ಕೊಲೆ ಆರೋಪ. ವಿಷಯ ಏನೆಂದರೆ ಎಲ್ಲರೂ ತಿಳಿದುಕೊಂಡಿರುವುದು ಅವನೇ ಸಂಬಂಧ ಇಟ್ಟುಕೊಂಡಿದ್ದ ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ ಎಂಬುದು...ಆದರೆ ಅವನ್ಯಾಕೆ ಕೊಲೆ ಮಾಡಬೇಕು...ಅವನ ಪ್ರಕಾರ ಅವನ ಮತ್ತವಳ ನಡುವಣ ಸಂಬಂಧ ತಿಲಿದವನೊಬ್ಬ ಬ್ಲಾಕ್ ಮೇಲ್ ಮಾಡಿದ್ದಾನೆ, ಅವನಿಗೆ ಹಣ ಕೊಡಲು ಹೋದಾಗ ಅವಳ ಕೊಲೆ ನಡೆದಿದೆ. ಕೊಲೆಗೂ ಮುನ್ನ ಇವನ ತಲೆಗೆ ಭಾರಿಸಿ ಪ್ರಜ್ಞೆ ತಪ್ಪಿಸಿದ್ದಾನೆ.. ಆದರೆ ಇದಕ್ಕೆಲ್ಲಾ ಸಾಕ್ಷಿ ಬೇಕಲ್ಲ.. ನ್ಯಾಯಾಲಯ ಕತೆ ಕೇಳುತ್ತಾ ಕುಳಿತುಕೊಳ್ಳುವುದಿಲ್ಲ. ಅದು ರುಜುವಾತು ಬೇಡುತ್ತದೆ. ರುಜುವಾತಿಗೆ ನೀವು ಸಾಕ್ಷಿ ಒದಗಿಸಬೇಕು. ಹಾಗಾದರೆ ಏನು ಮಾಡುವುದು..?
ಆತನ ಮುಂದೆ ಕುಳಿತ ವಕೀಲೆ ಕೇಳಿಕೊಳ್ಳುತ್ತಾಳೆ. ನೀನು ಹೊರಗಡೆ ಯಾವುದೇ ಕತೆಯನ್ನಾದರೂ ಹೇಳು, ಅದು ಹಾಗೆಯೇ ಇರಲಿ. ಆದರೆ ನನ್ನ ಮುಂದೆ ನಡೆದದ್ದನ್ನು ನಡೆದ ಹಾಗೆ ಹೇಳುತ್ತಾ ಹೋಗು, ವಿಷಯ ನನಗೆ ತಿಳಿದರೆ ನಾನು ಬೇಕಾದರೆ ಕತೆ ಕಟ್ಟುತ್ತೇನೆ, ಆದರೆ ನೀನೆ ನನಗೆ ಕತೆ ಕಟ್ಟಿ ಹೇಳಿದರೆ ನ್ಯಾಯಾಲಯದಲ್ಲಿ ಕೆಲಸ ಕೆಡುತ್ತದೆ...
ಆತ ಹೇಳಲು ಶುರು ಮಾಡುತ್ತಾನೆ. ಆವತ್ತಿನ ಘಟನೆ ನಡೆದದ್ದು ತೆರೆದುಕೊಳ್ಳುತ್ತದೆ. ಪ್ರೇಯಸಿಯ ಜೊತೆಗೆ ಕಾರಿನಲ್ಲಿ ಬರುವಾಗ ಆಕಸ್ಮಿಕವಾಗಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆಯುತ್ತಾರೆ. ಕಾರಿನಲ್ಲಿದ್ದ ಯುವಕ ಅಲ್ಲೇ ಸ್ಥಳದಲ್ಲೇ ಸಾಯುತ್ತಾನೆ. ಈಗ ಏನು ಮಾಡುವುದು..? ಪೊಲೀಸರಿಗೆ ಕೊಡೋಣ ಎಂದರೆ ಪ್ರೇಯಸಿ ಕೇಳಬೇಕಲ್ಲ.. ಬೇಡ ಇಬ್ಬರಿಗೂ ಸಮಸ್ಯೆಯಾಗುತ್ತದೆ..ಎಂದದ್ದೆ ಅದನ್ನು ಕವರ್ ಅಪ್ ಮಾಡಲು ಪ್ಲಾನ್ ಮಾಡುತ್ತಾಳೆ..ಹೇಗೋ ಸತ್ತಿದ್ದನಲ್ಲ.. ಹಾಗಾಗಿ ಕಾರಿನ ಸಮೇತ ಅವನನ್ನು ಕೆರೆಗೆ ತಳ್ಳಿಬಿಡೋದು ಸರಿ ಎನ್ನುವುದು ಅವಳ ವಾದ.. ಹಾಗೆ ಮಾಡುತ್ತಾರೆ ..ಅಷ್ಟೇ.. ಆದರೆ ಅದೆಲ್ಲಾ ಆ ಬ್ಲಾಕ್ ಮೈಲರ್ ಹೇಗೆ ಗೊತ್ತಾಯಿತು..? ಎನ್ನುವುದು ಸಧ್ಯದ ವಿಷಯ...
ವಕೀಲೆ ಇದನ್ನು ನಂಬುವುದಿಲ್ಲ. ಮತ್ತೆ ಕತೆ ಕಟ್ಟುತ್ತಿದ್ದೀಯ.. ಹೀಗಾದರೆ ನನಗೆ ಇನ್ನೂ ಕಷ್ಟವಾಗುತ್ತದೆ, ಅದಾಗ್ಯೂ ನೀನು ಹೀಗೆಯೇ ಮುಂದುವರೆದರೆ ಕಷ್ಟದಲ್ಲಿ ಸಿಲುಕಿಕೊಳ್ಳುವವನು ನೀನು, ನಾನಲ್ಲ..ಸರಿಯಾಗಿ ಏನು ನಡೆಯಿತೆಂದು ಹೇಳು ಎನ್ನುತ್ತಾಳೆ..ನಾಯಕ ಹೇಳತೊಡಗುತ್ತೇನೆ..
ಆವತ್ತು ಏನಾಯಿತೆಂದರೆ..

ಕತೆ ಹೀಗೆ ಸಾಗುತ್ತದೆ. ಇದೊಂದು ಮರ್ಡರ್ ಮಿಸ್ಟರಿ. ಇತ್ತೀಚಿನ ದಿನಗಳಲ್ಲಿ ಬಂದಂತಹ ಟೈಮ್ ಪಾಸ್ ಸಿನಿಮಾ ಇದು. ದಿ ಅನ್ ವಿಸಿಬಲ್ ಗೆಸ್ಟ್. ಪದರ ಪದರವಾಗಿ ತೆರೆದುಕೊಳ್ಳುವ ಕತೆ ಕುತೂಹಲ ಮೂಡಿಸುತ್ತದೆ. ಎಲ್ಲೂ ಬೋರ್ ಆಗದೆ ನೋಡಿಸಿಕೊಂಡು ಹೋಗುತ್ತದೆ. ಅನುಮಾನದ ಎಳೆಗಳು ಎಲ್ಲರ ಮೇಲೂ ಹಾದುಹೋಗುವಂತೆ ಕತೆ ಹೆಣೆದಿದ್ದಾರೆ ಕತೆಗಾರರು. ಹಾಗಾಗಿ ಕತೆ ನಿರೂಪಿಸುತ್ತಾ ಸಾಗುವ ನಾಯಕ ಆಗಾಗ ಬದಲಿಸುತ್ತಾನೆ. ಅದೇ ಕತೆ ಬೇರೆಯದೇ ಆಯಾಮದಲ್ಲಿ ಮತ್ತೊಮ್ಮೆ ತೆರೆದುಕೊಳ್ಳುತ್ತದೆ. ಥ್ರಿಲ್ಲರ್ ರೂಪದಲ್ಲಿ ತೆರೆದುಕೊಳ್ಳುವ ಕತೆ ಭಾವನಾತ್ಮಕವಾಗಿಯೂ ಕಾಡುತ್ತದೆ.