Monday, February 8, 2016

ಮೋಹನಸ್ವಾಮಿಗಳು...

ನಾನಾಗ ಕಾಲೇಜಿನಲ್ಲಿ ಓದುತ್ತಿದ್ದಾಗ ಅಲ್ಲೊಬ್ಬ ವ್ಯಕ್ತಿಯಿದ್ದ. ಆಗಲೇ ಆತನ ವಯಸ್ಸು ಮೂವತ್ತೈದು ಮೀರಿತ್ತು. ಯಾವುದೋ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ ಆತ ಮದುವೆಯಾಗಿರಲಿಲ್ಲ. ತನ್ನೊಬ್ಬನಿಗೆ ಮನೆಯೊಂದನ್ನು ಮಾಡಿಕೊಂಡಿದ್ದ. ಟಿವಿ ಇದ್ದುದರಿಂದ ನಮ್ಮಲ್ಲಿನ ಕೆಲವು ಕ್ರಿಕೆಟ್ ಪ್ರೇಮಿಗಳು ಕಾಲೇಜಿಗೆ ಬಂಕ್ ಮಾಡಿ ಅವನ ಮನೆಗೆ ಹೋಗಿ ಬಿಡುತ್ತಿದ್ದರು. ಅಲ್ಲೇ ಊಟ ಮಾಡುತ್ತಿದ್ದರು. ಊರಿಗೆ ಹೋಗುವ ಕಡೆಯ ಬಸ್ ಮಿಸ್ಸಾದಾಗ ಪರಿಚಯದವನು ತಾನೇ ಎಂದು ಆ ರಾತ್ರಿ ಅಲ್ಲೇ ಮಲಗಲು ಹೋಗುತ್ತಿದ್ದರು. ಆದರೆ ಸರಿರಾತ್ರಿಯಲ್ಲಿ ಆತ ಅವರ ಮೈಮೇಲೆಲ್ಲಾ ಕೈಯಾಡಿಸಿಬಿಡುತ್ತಿದ್ದ. ಕೆಲವೊಮ್ಮೆ ಅದೆಲ್ಲ ಅದೆಷ್ಟು ಹಿಂಸಾತ್ಮಕ ಎಂದರೆ ಕೆಲವರು ಮಲಗಿ ನಿದ್ರೆ ಮಾಡುವವನಂತೆ ನಟಿಸಿ, ಅಸ್ಯಹಿಸಿ ಸೋತು ಹೋಗುತ್ತಿದ್ದರು. ಕೆಲವರು ಅಲ್ಲೇ ಕೊಸರಿಕೊಂಡು ಎದ್ದು ಕೈ ಬೀಸಾಕಿ ಜಗಳ ಮಾಡುತ್ತಿದ್ದರು. ಹೊಡೆದಾಟಗಳೂ ಆಗುತ್ತಿದ್ದವು. ಮಾರನೆಯ ದಿನ ಅವರು ಬಂದು ಕತೆಗಳನ್ನ ಹೇಳಿದಾಗ ನಾವೆಲ್ಲಾ ಅದ್ಯಾರೂ ಆ ಪುಣ್ಯಾತ್ಮ ಎಂದು ಬಸ್ ಸ್ಟಾಂಡ್ ನಲ್ಲಿ ಕಾಯುತ್ತಿದ್ದೆವು. ಅವನನ್ನು ನೋಡಿ ಮುಸಿ ಮುಸಿ ನಗುತ್ತಿದ್ದೆವು. ಅವನೊಡನೆ ಯಾರಾದರೂ ಇದ್ದರೆ ಅವನು ಅತ್ತ ಹೋದೊಡನೆಯೇ ಇವನನ್ನು ರೇಗಿಸಿ ಗೋಳುಹೊಯ್ದುಕೊಳ್ಳುತ್ತಿದ್ದೆವು.
ಅದ್ಯಾಕೆ ಹಾಗೆ ಮಾಡುತ್ತಿದ್ದೆವು? ಅದು ನಗುವ ವಿಷಯವಾಗಿರಲಿಲ್ಲ. ಆದರೆ ಆತ ತನ್ನ ಸಂಗಾತಿಯನ್ನು ಹುಡುಕಿಕೊಳ್ಳುವಲ್ಲಿ ಸೋಲುತ್ತಿದ್ದ ಎನಿಸುತ್ತದೆ. ಈ ಪೋಲಿ ಹುಡುಗರು ಇಷ್ಟವಿಲ್ಲದ ಹುಡುಗಿಯನ್ನು ರೇಗಿಸಿ ಕಿಚಾಯಿಸಿ ಉಗಿಸಿಕೊಳ್ಳುವಂತೆ ಸಿಕ್ಕ ಸಿಕ್ಕ ಹುಡುಗರಿಗೆ ಕೈ ಹಾಕುತ್ತಿದ್ದ.
ಬಹುಶ ಇಂತಹ ಘಟನೆಗಳೆ ನಮಗೆ ಸಲಿಂಗಿ ಎಂದರೆ ಬೇರೆಯದೇ ಆದ ಭಾವವನ್ನು ಮೂಡುವಂತೆ ಮಾಡಿದ್ದಿರಬಹುದೇನೋ?
ಇಷ್ಟಕ್ಕೂ ಸಲಿಂಗಿ ಎಂಬುದು ನಮಗೆ ನಿಲುಕದ ವಸ್ತುವಲ್ಲ. ಅದವರ ಖಾಸಗಿ ಕೋಣೆಯ ವಿಷಯವಷ್ಟೇ ಎಂಬುದಷ್ಟೇ ಸರಳವಾಗಿ ಮತ್ತು ಸಹಜವಾಗಿ ತೆಗೆದುಕೊಳ್ಳಲು ಮನಸ್ಸು ಸಿದ್ಧವಾಗಿಲ್ಲದೆ ಇದ್ದದ್ದು ಇದೇ ಕಾರಣವೇನೋ?. ಎಲ್ಲೋ ಬಸ್ಸಿನಲ್ಲಿ ಹೋಗುವಾಗ ವಿಚಿತ್ರವಾಗಿ ಸ್ಪರ್ಶಿಸಿ ನಗುವವರು, ಸೂಸು ಮಾಡುವಾಗ ಬಗ್ಗಿ ನೋಡುವವರು, ಕೈ ಕುಲುಕಿದರೆ ಅದನ್ನೇ ಹಿಸುಕುತ್ತಾ ನಿಲ್ಲುವವರು ನಮಗೆ ಈ ಭಾವವನ್ನು ಮೂಡಿಸಿರಬೇಕು. ಅವನು ಗೇ ಅಂತೆ ಎಂಬುದು ನಮ್ಮಲ್ಲಿ ಅಸಹನೀಯ ವಾಗುವುದಕ್ಕೆ ಕಾರಣವಾದರೂ ಏನು? ಪಕ್ಕದ ಮನೆಯವನು ಜೈಲಿಗೆ ಹೋಗಿಬಂದನಂತೆ, ಅವನ್ಯಾರೋ ಕುಡಿದು ಬಿದ್ದಿದ್ದನಂತೆ ಎಂಬೆಲ್ಲಾ ವಿಷಯಗಳು ನಮಗೆ ಪರವಾಗಿಲ್ಲ ಎನಿಸಿದರೂ ಇದ್ಯಾಕೆ ನಮಗೆ ಸಹಜ ಎಣಿಸಿಲ್ಲ ಎಂಬುದು ಪ್ರಶ್ನೆ. ಏಕೆಂದರೆ ನಾನೇ ಎಷ್ಟೋ ಸಾರಿ ಹೊಸಬರು/ಪರಿಚಿತರು ತೀರಾ ಹೆಗಲ ಮೇಲೆ ಕೈ ಹಾಕಿದರೆ, ಕೈ ಹಿಡಿದುಕೊಂಡರೆ, ಅನುಮಾನದಿಂದ ನೋಡಿದ್ದಿದ್ದೆ.
ವಸುಧೇಂದ್ರ ನನಗೆ ಕಾಲೇಜು ದಿನಗಳಲ್ಲಿ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಕತೆಗಳ ಮೂಲಕ ಪರಿಚಯವಾಗಿದ್ದರು.ಅವರ ಬರಹಗಳು, ಕತೆಗಳು ಎಂದರೆ ನನಗೆ ತುಂಬಾ ಇಷ್ಟವಾಗುತ್ತಿತ್ತು. ಹಾಗೆಯೇ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಬಂದಾಗ ವಾಹಿನಿಯೊಂದರ ಕಾರ್ಯಕ್ರಮದಲ್ಲಿ  ಸಂಚಿಕೆ ನಿರ್ದೇಶನಾಗಿದ್ದಾಗ ಒಮ್ಮೆ ಕತೆಗಾರ ವಸುಧೇಂದ್ರ ಅವರ ಸಂದರ್ಶನ ತೆಗೆದುಕೊಳ್ಳಿ ಎಂದಾಗ ಖುಷಿಯಾಗಿದ್ದೆ. ಫೋನ್ ನಂಬರ್ ತೆಗೆದುಕೊಂಡು ಮಾತಾಡಿ, ಅವರ ಕತೆಗಳ ಬಗ್ಗೆ ಮಾತನಾಡಿದೆ. ಅವರೂ ಖುಷಿಯಾಗಿದ್ದರು. ಆನಂತರ ಅವರ ಮನೆಗೆ ಚಿತ್ರೀಕರಣಕ್ಕೆ ಹೋದಾಗ ಒಂದಷ್ಟು ಮಾತನಾಡಿದೆವು. ಎಷ್ಟೆಲ್ಲಾ ಓದಿದ್ದೀಯಲ್ಲ ನೀನು, ಖುಷಿಯಾಗುತ್ತದೆ ಎಂದಿದ್ದರು ವಸುಧೇಂದ್ರ. ಅವರ ಕತೆಗಳು ಪ್ರಕಟವಾಗುತ್ತಿದ್ದಾಗ ಪತ್ರಿಕೆಯಲ್ಲಿ ಅವರ ಮೀಸೆ ಇರುವ ಫೋಟೋ ಒಂದು ಪ್ರಕಟವಾಗಿತ್ತು. ಆದರೆ ಎದುರಿಗಿದ್ದ ವಸುಧೇಂದ್ರರಿಗೆ ಮೀಸೆ ಇರಲಿಲ್ಲ. ನಾನದನ್ನು ಕೇಳಿಯೇ ಇದ್ದೆ, ಅದಕ್ಕೆ ಅವರು ಅದು ಹಳೆಯ ಫೋಟೋ ಕಣೋ ಎಂದಿದ್ದರು. ಆನಂತರ ಅವರ ಪುಸ್ತಕ ಬಿಡುಗಡೆಯ ಕಾರ್ಯಕರ್ಮಕ್ಕೆ ಚಿಕ್ಕ ವೀಡಿಯೊ ಬೇಕು ಎಂದಿದ್ದರು. ಆಗೊಂದಷ್ಟು ದಿನ ಅವರ ಜೊತೆ ಓಡಾಡಿದ್ದೆ. ಇವರ್ಯಾಕೆ ಮದುವೆಯಾಗಿಲ್ಲ, ಮಾತಾಡುವಾಗ ಸ್ವಲ್ಪ ವ್ಯತ್ಯಾಸವಿದೆಯಲ್ಲ..  ಎಂದೆಲ್ಲಾ ಎನಿಸಿತ್ತು. ಆದರೆ ಅದೆಲ್ಲದಕ್ಕೂ ಮೀರಿದ ಅವರ ಬರಹ, ಸಿನಿಮಾ ಜ್ಞಾನ ನನ್ನನ್ನು ಮೂಕವನ್ನಾಗಿಸಿತ್ತು. ಆನಂತರ ಅವರ ಮೋಹನ ಸ್ವಾಮಿ ಬಂದಾಗ ಇವರು ಸಲಿಂಗಿ ಇರಬಹುದು ಎನ್ನಿಸಿತ್ತು. ಇಲ್ಲವಾದಲ್ಲಿ ಅಷ್ಟು ಚೆನ್ನಾಗಿ ಅದೇಗೆ ಹಾಗೆ ಬರೆಯಲು ಸಾಧ್ಯ..? ಆ ಸಂವೇದನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಎನಿಸಿತ್ತು.
ಆದರೆ ಆವಾಗ ನನಗೆ ಕಾಡುತ್ತಿದ್ದ ಪ್ರಶ್ನೆ ಇಷ್ಟೇ. ಆರ್ಥಿಕವಾಗಿ ಸಾಮಾಜಿಕವಾಗಿ ವೈಚಾರಿಕವಾಗಿ ಸದೃಢವಾಗಿರುವ ಇವರು ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ..? ಬ್ರೋಕ್ ಬ್ಯಾಕ್ ಮೌಂಟನ್ , ಮಿಲ್ಕ್ ಮುಂತಾದ ಚಿತ್ರಗಳನ್ನು ನೋಡಿದಾಗ ಅದೇಕೋ ಒಳಗೆ ಸೇರಿರಲಿಲ್ಲ. ಆದರೆ ನೇಪಾಳಿ ಚಿತ್ರ ಸೂನ್ಗವಾ ನೋಡಿದಾಗ ಸಾಯುವಷ್ಟು ಇಷ್ಟವಾಗಿತ್ತು. ಯಾಕೆಂದರೆ ಅಲ್ಲಿದ್ದವರು ಸ್ತ್ರೀಸಲಿಂಗಿಗಳು. ಅಲ್ಲಿದ್ದ ಎರಡು ಹೆಣ್ಣುಮಕ್ಕಳು ಇಷ್ಟವಾಗಿದ್ದರಿಂದ ಸಿನಿಮಾ ಇಷ್ಟವಾಗಿತ್ತೇನೋ? ಆದರೆ ಸಲಿಂಗಿ ಎನ್ನುವ ವಿಷಯವೇ ನಮ್ಮದಲ್ಲ ಎನಿಸಿತ್ತು. ಆದರೆ ನಮ್ಮದಲ್ಲ ಎಂದಾದ ಮಾತ್ರಕ್ಕೆ ಜಗತ್ತಿನಲ್ಲಿ ಇರಲೇ ಬಾರದು ಎನ್ನುವುದಕ್ಕೆ ನಾವಾದರೂ ಯಾರು? ಮೊದಲೇ ಹೇಳಿದಂತೆ ಇದು ಅವರ ಅಂತಃಪುರದ ವಿಷಯ.
ಈಗ ವಸುಧೇಂದ್ರ ಒಪ್ಪಿಕೊಂಡಿದ್ದಾರೆ. ಮೊನ್ನೆ ಅವರ ಸಂದರ್ಶನ ಓದಿದಾಗ ನನ್ನಲ್ಲಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ಕೂಡ ಸಿಕ್ಕಿದೆ. ಅದು ಹೌದೋ ಅಲ್ಲವೋ..? ಸರಿಯೋ ತಪ್ಪೋ.. ಅವರವರ ಭಾವನೆ ಅವರದ್ದು. ಅವರವರ ಆಯ್ಕೆ ಅವರದ್ದು. ಮತ್ತದೇ ಸಹಜತೆ ಎನಿಸುತ್ತದೆ.

Friday, October 9, 2015

ಮಹಾಭಾರತ ನಡೆದದ್ದು ನಿಜವೇ? ಭಾಗ-1

ಕಿ.ಪೂ. ಅಕ್ಟೋಬರ್ 16, 5561.
ಅನಾಮತ್ತು ಎರಡು ವರ್ಷಗಳ ನನ್ನ ರಜೆ ಮುಗಿದಿದೆ. ಚಿತ್ರರಂಗದಿಂದ ಸ್ವಲ್ಪ ಬೇರೆಕಡೆ ಜೀವನೋಪಾಯಕ್ಕಾಗಿ ಹೊರಳಿಕೊಂಡಿದ್ದ ನಾನು ಮತ್ತೆ ಚಿತ್ರರಂಗಕ್ಕೆ ಧಾವಿಸಿದ್ದೇನೆ. ಈ ಸಾರಿ ಮೊದಲಿನ ತಪ್ಪುಗಳ ಬಗೆಗಿನ ಅರಿವಿದೆ. ಮೂರ್ಖತನದ ಸ್ಪಷ್ಟ ಚಿತ್ರಣವಿದೆ. ಸಾಧ್ಯವಾದಷ್ಟು ಕಡಿಮೆ ತಪ್ಪುಗಳನ್ನು ಮಾಡುತ್ತಾ ಈ ಸಾರಿ
ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದೇನೆ.
ಅದಕ್ಕೆ ಸಂಬಂಧಿಸಿದಂತೆ ನಾನು ಆಯ್ದುಕೊಂಡ ಕತೆಗೆ ಸ್ವಲ್ಪ ಮಹಾಭಾರತ ಹೋಲುತ್ತದೆ. ಪ್ರತಿ ಕತೆಯಲ್ಲಿಯೂ ಮಹಾಭಾರತದ ತುಣುಕು ಒಂದು ನನಗಂತೂ ಕಾಣಸಿಗುತ್ತದೆ. ಆದರೆ ನನ್ನದೇ ಚಿತ್ರದಲ್ಲಿ ಅದರ ಅಂಶ ಸ್ವಲ್ಪ ಜಾಸ್ತಿಯೇ ಇದೆ ಎನ್ನಬಹುದು. ಇದೊಂದು ಪ್ರೇಮಕತೆ, ದುಷ್ಟ ಸಂಹಾರದ ಕತೆ, ಧರ್ಮ ಯುದ್ಧದ ಕತೆ ಹೀಗೆ ನೀವು ಏನು ಬೇಕಾದರೂ ಹೇಳಬಹುದು. ನಾನು ಯಾವುದೇ ಶೈಲಿಯ ಕತೆ ಮಾಡಿದರೂ ಒಮ್ಮೆ ಕತೆ ಮಾಡಿದ ಮೇಲೆ ಅಥವಾ ಅದಕ್ಕೂ ಮುನ್ನ ಆ ಸಂಬಂಧಿ ಒಂದಷ್ಟು ಚರ್ಚೆ ಅಧ್ಯಯನ ಮಾಡುತ್ತೇನೆ. ಇನ್ನು ಮಹಾಭಾರತ ಎಂದಾಗ ಅದರ ಬಗ್ಗೆ ಅಧ್ಯಯನ ಮಾಡಲು ನನಗಂತೂ ಈ ಜನ್ಮ ಸಾಲುವುದಿಲ್ಲ ಎನಿಸಿಬಿಡುತ್ತದೆ.
ಮೊದಲೆಲ್ಲಾ ಮಹಾಭಾರತ ಎಂದರೆ ಅದೊಂದು ರೋಚಕ ಕಥಾನಕದ ಸಂಕಲನ ಎನಿಸುತ್ತಿತ್ತು. ಅದರಲ್ಲಿರುವ ಮಸಾಲೆ ಅಂಶಕ್ಕೆ ಲೆಕ್ಕವೆಲ್ಲಿದೆ? ಒಬ್ಬಳು ಐವರನ್ನು ಪತಿ ಎಂದು ಒಪ್ಪಿಕೊಳ್ಳುತ್ತಾಳೆ, ನಟ್ಟ ನಡುವಣ ಸಭೆಯಲ್ಲಿ ಹೆಂಗಸಿನ ಸೀರೆ ಸೆಳೆಯಲಾಗುತ್ತದೆ, ಅಣ್ಣ ತಮ್ಮಂದಿರು ಜೂಜಾಡಿ ಸೋಲುತ್ತಾರೆ,  ಅರಗಿನ ಮನೆಗೆ ಬೆಂಕಿ ಬೀಳುತ್ತದೆ.. ಒಂದೇ ಎರಡೇ ತಂತ್ರ, ಕುತಂತ್ರ, ಮಂತ್ರ, ರೋಚಕತೆ, ಪ್ರೀತಿ ,ಪ್ರಣಯ, ಸಾಹಸ, ಅನ್ಯಾಯ, ನ್ಯಾಯ, ಧರ್ಮ, ಅಧರ್ಮ.. ಹಿಂಸೆ, ಅಹಿಂಸೆ, .. ಸದಾಚಾರ, ಅನಾಚಾರ, ಅತ್ಯಾಚಾರ.. ಅಬ್ಬಬ್ಬಾ ಏನೇನಿದೆ ಅದರಲ್ಲಿ. ಮೊದಲೆಲ್ಲಾ ನಮ್ಮಪ್ಪ ನಮ್ಮನ್ನು ಕೂರಿಸಿಕೊಂಡು ದಿನಾ ರಾತ್ರಿ ಊಟದ ನಂತರ ವಿದ್ಯುತ ಇಲ್ಲದಾದಾಗ ಮಹಾಭಾರತದ ಒಂದೊಂದೇ ಅಧ್ಯಾಯವನ್ನು ಹೇಳುತ್ತಿದ್ದಾಗ ಮೈಯೆಲ್ಲಾ ರೋಮಾಂಚನ ಉಂಟಾಗುತ್ತಿತ್ತು. ಆನಂತರ ನಾನೇ ಒಂದಷ್ಟು ಓದತೊಡಗಿದೆ. ಹೊಸ ಹಳೆಯ ವಿಮರ್ಶಾತ್ಮಕ, ವಿಡಂಬನಾತ್ಮಕ, ವಿಶ್ಲೇಷಣಾತ್ಮಕ ಬರಹ ಕಾದಂಬರಿ ಪುಸ್ತಕಗಳನ್ನು ಆಗಾಗ ಸಿಕ್ಕ ಸಿಕ್ಕಲ್ಲಿ ಓದುತ್ತಿದ್ದೆ. ಹಿರಿಯರು ಸಿಕ್ಕರೆ ಕೇಳುತ್ತಿದ್ದೆ.
ನನಗೆ ಆವಾಗಲೆಲ್ಲಾ ಏಳುತ್ತಿದ್ದ ಪ್ರಶ್ನೆ ಒಂದೇ..
ಮಹಾಭಾರತ ನಿಜವಾಗಿಯೂ ನಡೆದ ಕತೆಯೇ? ಅಥವಾ ಕಪೋಲ ಕಲ್ಪಿತವೆ?
ಕತೆಯ ಹೂರಣ ನೋಡಿದರೆ ಅದು ಕಲ್ಪನೆ ಎನ್ನಲೂಬಹುದು, ಹಾಗೆಯೇ ವಾಸ್ತವ ಎನ್ನಲೂ ಬಹುದು. ಹಾಗಾದರೆ ಬಕಾಸುರ ಇದ್ದಾನೆ? ಕೃಷ್ಣನ ಚಕ್ರ ತಿರುಗುತ್ತಿತ್ತೆ..? ಹೀಗೆ ಸುಮ್ಮನ್ನೇ ನನ್ನನ್ನೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದೆ. ಆದರೆ ಅದರ ಬಗ್ಗೆ ಹೆಚ್ಚು ಅಧ್ಯಯನ ಮಾಡಲು ಹೋಗಿರಲಿಲ್ಲ. 
ಮೊನ್ನೆ ಮೊನ್ನೆ ನಮ್ಮ ಸಿನಿಮಾಕ್ಕಾಗಿ ಮಹಾಭಾರತದ ಕುರಿತಾದ ಒಂದಷ್ಟು ಅಧ್ಯಯನ ಕೈಗೊಂಡೆ. ಕೆಲವು ಅಚ್ಚರಿಗಳು ನನಗೆ ಎದುರಾದವು.ಹಾಗಂತ ನಾನೇನೋ ಸಂಶೋಧನೆ ಮಾಡಲಿಲ್ಲ, ಯಾರ್ಯಾರೋ ಬರೆದಿದ್ದ ಪುಸ್ತಕಗಳನ್ನು ಓದುತ್ತಾ ಓದುತ್ತಾ ಟಿಪ್ಪಣಿ ಹಾಕಿಕೊಂಡೆ ನೋಡಿ.
ಮಹಾಭಾರತ ನಡೆದದ್ದು ನಿಜವೇ ಎನಿಸುವ ಅಂಶ ಒಂದು ಪುಸ್ತಕದಲ್ಲಿ ದೊರಕಿತು.
ಕಿ.ಪೂ. ಅಕ್ಟೋಬರ್ 16, 5561 ರಂದು ಮಹಾಭಾರತದ ಕುರುಕ್ಷೇತ್ರ ಯುದ್ಧ ನಡೆದಿದೆ. ಅಂದರೆ ಸರಿ ಸುಮಾರು ಮಹಾಭಾರತ ಯುದ್ಧ ಜರುಗಿ ಈವತ್ತಿಗೆ 7575 ವರ್ಷಗಳಾಗಿವೆ. 
ಅಷ್ಟು ಕರಾರುವಕ್ಕಾಗಿ ಅದೇಗೆ ಅದ್ಯಾವ ಆಧಾರದ ಮೇಲೆ ಹೇಳಲು ಸಾಧ್ಯ ಎನ್ನುವುದು ಮೊದಲ ಪ್ರಶ್ನೆ. ಪುರಾಣ ಪುಸ್ತಕ ಅಥವಾ ಏನೋ.. ಅವುಗಳ ಪ್ರಕಾರ ನಮ್ಮದು ಕಲಿಯುಗದ ಮೊದಲ ಪಾದ. ಮಹಾಭಾರತ ಜರುಗಿದ್ದು ದ್ವಾಪರಯುಗದಲ್ಲಿ. ಅಂದರೆ ಕಲಿಯುಗ ಶುರುವಾದದ್ದು ಯಾವಾಗ ಎನ್ನುವುದು ಪ್ರಶ್ನೆ. ನಮ್ಮ ಪುರಾಣ ಪುಸ್ತಕಗಳ ಪ್ರಕಾರ ನಾಲ್ಕು ಲಕ್ಷ ಮೂವತ್ತೆರೆಡು ವರ್ಷಗಳಿರುವ ಕಲಿಯುಗದಲ್ಲಿ ಈಗ ಜರುಗಿರುವುದು ಕೇವಲ ಐದು ವರ್ಷಗಳು ಅಂದುಕೊಳ್ಳೋಣ. ಅಂದರೆ ಊಹಿಸಿ.. 
ಇರಲಿ.
ಮೊದಲಿಗೆ ಈ ಮಹಾಭಾರತ ಯುದ್ಧದ ದಿನಾಂಕವನ್ನು ಪತ್ತೆ ಮಾಡಿದ್ದು ಯಾವುದರ ಆಧಾರದ ಮೇಲೆ ಎಂಬುದು ಪ್ರಶ್ನೆ. ಈ ವೈಜ್ಞಾನಿಕ ಮಾರ್ಗದ ಮೂಲಕ ಕರಾರುವಕ್ಕಾದ ಮಹಾಭಾರತ ಯುದ್ಧದ ದಿನಾಂಕವನ್ನು ಸಂಶೋಧಕರು ಮೇಧಾವಿಗಳು ಪಡೆಯಲು ಹಲವಾರು ಮಾರ್ಗದ ಮೊರೆ ಹೋಗಿದ್ದಾರೆ. ಜ್ಯೋತಿಷ್ಯ ಶಾಸ್ತ್ರ, ಜೀನಿಯಾಲಜಿ, ಆ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಯಾತ್ರಿಕರ ಬರಹಗಳು, ಖಗೋಳ ವಿಜ್ಞಾನ, ಶಾಸನಗಳು, ಭಾಷಾಶಾಸ್ತ್ರ, ಪುರಾತತ್ವ ಶಾಸ್ತ್ರ, ಪುರಾಣ ಕತೆಗಳು, ವೇದಗಳು ಹೀಗೆ ಹತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ವ್ಯಾಸ ರಚಿಸಿದ ಮಹಾಭಾರತ ಮುಖ್ಯವಾದದ್ದು .
ಇರಲಿ ಓದುತ್ತಾ ಓದುತ್ತಾ ನಾನೂ ಲೆಕ್ಕ ಹಾಕಲು ಕುಳಿತುಕೊಂಡೆ. ಹಾಗೆಯೇ ಗೊತ್ತಿರದ ವಿಷಯಗಳನ್ನು ಗೂಗಲ್ ಮಾಡುತ್ತಾ ಸಾಗಿದೆ. ಯಾಕೋ ಒಂದು ಜನ್ಮಕ್ಕೆ ಮುಗಿಯದ ಕೆಲಸವಲ್ಲ ಎನಿಸಿತು. ಎನಿವೇ ನಾನು ಓದಿದ್ದನ್ನು ನನಗನಿಸಿದ್ದನ್ನು ಬರೆದಿಡೋಣ ಎನಿಸಿ ಬರೆದದ್ದು ಇದು.
ದಿ ಸೈಂಟಿಫಿಕ್ ಡೇಟಿಂಗ್ ಆಫ್ ಮಹಾಭಾರತ ವಾರ್ ಎನ್ನುವ ಪುಸ್ತಕವದು. ಒಮ್ಮೆ ಸಿಕ್ಕರೆ ನೀವು ಓದಿ.
ಈಗ ಸಿನಿಮಾದ ಬರವಣಿಗೆ ಕೆಲಸ ಮುಕ್ಕಾಲು ಪಾಲು ಮುಗಿದಿದೆ. ಇನ್ನೇನಿದ್ದರೂ ಚಿತ್ರೀಕರಣಕ್ಕೆ ಬೇಕಾದ ಜಾಗಗಳ ಹುಡುಕಾಟ, ಕಲಾವಿದರ ಹುಡುಕಾಟ. ಈ ಸಿನಿಮಾದಂತೆಯೇ ಈ ಪುಸ್ತಕವೂ ನನ್ನನ್ನು ಕಾಡುತ್ತಿರುವುದು ವಿಪರ್ಯಾಸ.
[ಮುಂದುವರೆಯುತ್ತದೆ]

Thursday, October 8, 2015

ಮೋನಿಕಾ ಮಿಸ್ಸಿಂಗ್ ಗೆ ಜಾಗವಿದೆ..?

ಇದು ಈವತ್ತಿನ ವಿಷಯವಲ್ಲ... ವರ್ಷಗಟ್ಟಲೆ ಹಳೆಯದು. ಜಾಗತಿಕ ಚಿತ್ರಗಳನ್ನು ಅದ್ಯಯನ ಮಾಡಿ ಅವುಗಳಲ್ಲಿನ ನೋಡಲೇಬೇಕಾದ ಚಿತ್ರಗಳನ್ನು ಪಟ್ಟಿ ಮಾಡಿ ಪುಸ್ತಕವೊಂದನ್ನು ರಚಿಸಿದ್ದೆ. ಅದನ್ನು ಪ್ರಕಟಿಸುವ ಉದ್ದೇಶ ಆವಾಗ ಇರಲಿಲ್ಲವಾದರೂ ಒಂದು ಸಿನಿಮಾ ನಿಂತು ಹೋಗಿ ಹಣಕಾಸಿನ ತೊಂದರೆಯಿಂದಾಗಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಸಮಯವದು. ಕೆಲಸ ಮುಗಿದ ನಂತರ ಸಿನಿಮಾ ನೋಡುವುದು ಮತ್ತದರ ಬಗ್ಗೆ ನನ್ನದೇ ಗೆಳೆಯರ ಜೊತೆಗೆ ಚರ್ಚಿಸುವುದು ಇದಿಷ್ಟೇ ಕೆಲಸವಿತ್ತು ಆವಾಗ. ಸಿನಿಮಾ ಗೆಳೆಯರನ್ನು ಮೀಟ್ ಮಾಡುತ್ತಿರಲಿಲ್ಲ. ಮತ್ತೆಲ್ಲಿ ಸಿನಿಮಾದ ಕಡೆಗೆ ಮನಸ್ಸು ಹೊರಳಿಬಿಡುತ್ತದೋ ಎರಡು ವರ್ಷ ಸಿನಿಮಾ ಜಗತ್ತು ಬೇಡ ಎಂದು ಕರಾರುವಕ್ಕಾಗಿ ನಿರ್ಧರಿಸಿದ್ದ ದಿನಗಳಾಗಿತ್ತು ಅವು. ಆ ಸಂದರ್ಭದಲ್ಲಿ ಗೆಳೆಯ ಕೃಷ್ಣನ ಜೊತೆಗೆ ಮಾತನಾಡುತ್ತಿದ್ದಾಗ ಆತ ಆಗಲೇ ಒಂದು ಪುಸ್ತಕವನ್ನು ಪ್ರಕಟಿಸಿದ್ದ. ಸರಿ ನಿನ್ನ ಪುಸ್ತಕ ನಾನೇ ಪ್ರಕಟಿಸುತ್ತೇನೆ ಕೊಡು ಎಂದ. ಸಧ್ಯಕ್ಕೆ ಬೇಡ ಬಿಡು ಮಾರಾಯ ಎಂದೇ. ಹಾಗಾದರೆ ಒಂದು ಕೆಲಸ ಮಾಡು, ಕನ್ನಡದಲ್ಲಿ ನೋಡಲೇಬೇಕಾದ  ನೂರೊಂದು ಕನ್ನಡ ಚಿತ್ರಗಳು ಎನ್ನುವ ಪುಸ್ತಕ ಇಲ್ಲ, ಪರಭಾಷೆಯ ಅದರಲ್ಲೋಒ ಜಾಗತಿಕ ಮಟ್ಟದಲ್ಲಿ ಆಯಾ ಭಾಷೆಯಲ್ಲಿ ಸುಮಾರಷ್ಟು ಪುಸ್ತಕಗಳಿವೆ, ಕನ್ನಡದಲ್ಲಿ ಆ ಪ್ರಯತ್ನ ಯಾರೂ ಮಾಡಿಲ್ಲ, ಹೇಗೋ ಸಿನೆಮಾದಿಂದ ಸ್ವಲ್ಪ ದೂರ ಇದ್ದೀಯ, ಯಾಕೆ ಆ ಪುಸ್ತಕ ಬರೆಯಬಾರದು ಎಂದ. ನಾನು ಹೂಂ ಎಂದೆ.
ಅಷ್ಟೇ. ಆ ಪುಸ್ತಕ ನನಗೆ ಸರಿ ಸುಮಾರು ಒಂಭತ್ತು ತಿಂಗಳುಗಳ ಸಮಯವನ್ನು ಎಡೆಬಿಡದೆ ತೆಗೆದುಕೊಂಡು ಬಿಟ್ಟಿತ್ತು. ಸಿನಿಮಾ ನೋಡುವ ಚರ್ಚಿಸುವ ಮತ್ತದರ ತುಲನೆ ಮಾಡುವ ನಮ್ಮದೇ ಮಾನದಂಡಗಳಲ್ಲಿ ಅದನ್ನು ವಿಂಗಡಿಸುವ ಹೀಗೆ ಅದರ ಕೆಲಸಗಳನ್ನು ನನ್ನ ನಿದ್ರೆ ಕಸಿದಿದ್ದವು. ಎಲ್ಲಾ ಮುಗಿಸಿ ಪುಸ್ತಕ ಬರೆದು ಮುಗಿಸಿದಾಗ ದೊಡ್ಡ ನಿಟ್ಟುಸಿರು ಬಿಟ್ಟಿದ್ದಾಗಿತ್ತು.
ಆಮೇಲೆ ಅದನ್ನು ಪ್ರಕಟಿಸಲಾಯಿತು. ಓದಿದವರು ಚೆನ್ನಾಗಿದೆ ಎಂದರು. ಒಂದಷ್ಟು ಪತ್ರಿಕೆಗಳಲ್ಲೂ ಅದರ ಬಗ್ಗೆ ಬರೆಯಲಾಯಿತು. ಹಾಗೆಯೇ ಅದೊಂದು ದಿನ ನಿಮ್ಮ ಪುಸ್ತಕ ಹಿಡಿದುಕೊಂಡು ನಮ್ಮ ಕಚೇರಿಗೆ ಬನ್ನಿ ಎಂದರು ಸುದ್ದಿ ವಾಹಿನಿಯವರು. ನಾನು ಖುಷಿಯಾಗಿ ಹೋದೆ. ಪುಸ್ತಕದ ಬಗ್ಗೆ ಮಾತನಾಡಿಸಿ, ಎಂಥ ಅದ್ಭುತವಾದ ಪುಸ್ತಕ ಬರೆದಿದ್ದೀರಿ, ಕನ್ನಡದಲ್ಲಿ ಈ ಸಾಧನೆಯನ್ನು ಬೇರೆ ಯಾರೂ ಮಾಡಿಲ್ಲ, ಒಂದು ಚಿಕ್ಕ ಬೈಟ್ ಕೊಡಿ ಎಂದರು, ಕೊಟ್ಟೆ. ಸಾರ್ ಇದನ್ನು ಪ್ರಸರಿಸುವ ದಿನ ಸಮಯ ನನಗೆ ಹೇಳಿ, ನಾನು ಒಂದಷ್ಟು ಜನರಿಗೆ ಹೇಳುತ್ತೇನೆ, ಪುಸ್ತಕದ ಮಾರಾಟಕ್ಕೆ ಸಹಾಯವಾಗುತ್ತದೆ ಎಂದೆ, ಹೇಯ್ ಖಂಡಿತ ಸಾರ್, ನೀವು ಇಷ್ಟು ಕೆಲಸ ಮಾಡಿದ್ದೀರಿ.. ನಾವು ಇಷ್ಟು ಮಾಡಲಾರೆವಾ? ಸರಿಯಾದ ಸಮಯದಲ್ಲಿ ಹಾಕುತ್ತೇವೆ.. ಎಂದರು. ಖುಷಿಯಾಗಿ ಪ್ರಕಾಶಕರಿಗೆ ಅಲ್ಲೇ ಕರೆ ಮಾಡಿ ವಿಷಯ ತಿಳಿಸಿ, ಮನೆಗೂ ಬಂದು ಹೇಳಿ ಮತ್ತೆ ಕೆಲಸದಲ್ಲಿ ತೊಡಗಿಸಿಕೊಂಡೆ.
ಒಂದು ವಾರವಾಯಿತು. ಏಕೋ ಪ್ರಸಾರವಾಗಲಿಲ್ಲ. ಫೋನ್ ಮಾಡಿ ಕೇಳುವುದಾದರೂ ಏಕೆ ಎಂದುಕೊಂಡೆ. ಇರಲಿ ಎಂದು ಒಂದು ಫೋನ್ ಒಗಾಯಿಸಿದೆ. ತಕ್ಷಣ ಪ್ರತಿಕ್ರಿಯಿಸಿದ ಆ ಮಂದಿ ಈ ವಾರದಲ್ಲಿ ಪ್ರಸಾರ ಮಾಡುತ್ತೇವೆ ಎಂದರು. ಸಿನಿಮಾ ಕಾರ್ಯಕ್ರಮದಲ್ಲಿಯೇ ಪ್ರಕಟಿಸುತ್ತೇವೆ, ಅಷ್ಟು ಮಾಡಿರೋಅವರಿಗೆ ನಾವಿಷ್ಟು ಮಾಡಲು ಸಾಧ್ಯವಿಲ್ಲವೇ ಎಂದರು. 
ಮತ್ತೆ ಹತ್ತು ಹದಿನೈದು ದಿನ ಕಳೆದವು. ಪ್ರಸಾರವಾಗಲಿಲ್ಲ. ಮತ್ತೆ ಮತ್ತೆ ಕೇಳಿದರೆ ಚನ್ನವೆ? ಇರಲಿ ಎಂದು ಫೋನ್ ಹಾಕಿದೆ. ಸಾರ್.. ಅದನ್ನು ಪ್ರಸಾರಮಾಡಬೇಕು, ಆದರೆ ಸರಿಯಾದ ಸ್ಲಾಟ್ ಸಿಗುತ್ತಿಲ್ಲ, ಸಿಕ್ಕ ತಕ್ಷಣ ಖಂಡಿತ ಪ್ರಸಾರ ಮಾಡುತ್ತೇವೆ, ಆ ಸಮಯದಲ್ಲಿ ನಾವೇ ನಿಮಗೆ ಕರೆ ಮಾಡಿ ಹೇಳುತ್ತೇವೆ ಎಂದರು. ನಾನು ಆಯಿತು ಎಂದೆ.
ವರ್ಷಗಳೇ ಕಳೆದುಹೋಯಿತು.
ಅವರಿಗೆ ಸಮಯ ಸಿಗಲಿಲ್ಲ, ಹಾಗಾಗಿ ಪ್ರಸಾರ ಮಾಡಲು ಆಗಲಿಲ್ಲ.
ನಾನು ಮಾಧ್ಯಮದಲ್ಲಿ ಒಂದಷ್ಟು ದಿನ ಕೆಲಸ ಮಾಡಿದವನೇ/. ಟಿಆರ್ಪಿ ಬೆನ್ನು ಬಿದ್ದಾಗ ಯಾವುದು ಹೆಚ್ಚು ವಿವಾದ ಹುಟ್ಟಿಸುತ್ತದೆ ಎಂಬುದರ ಮೇಲಷ್ಟೇ ಗಮನ ಇರುತ್ತದೆ. ಅದಾದ ನಂತರ ಹುಚ್ಚ ವೆಂಕಟ್ ಥೂ ಕನ್ನಡ ನನ್ನ ಎಕ್ಕಡ ಎಂದರು, ತಕ್ಷಣಕ್ಕೆ ಅತನದೂ ಟಿವಿಯಲ್ಲಿ ನೇರ ಪ್ರಸಾರದ ಜೊತೆಗೆ ವಿಧವಿಧವಾಗಿ ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಆಯಾಮ ಪಡೆದು ದಿನಗಟ್ಟಲೆ ವಾರಗಟ್ಟಲೆ  ಪ್ರಸಾರವಾಯಿತು, ಆ ದಿನದಿಂದ ಕಾರ್ಯಕ್ರಮಗಳನ್ನು ಗಮನಿಸುತ್ತ ಬಂದಾಗ ಚಪ್ಪಲಿಯಲ್ಲಿ ಹೊಡೆದವರು ಹೊಡೆಸಿಕೊಂಡವರು ಸೆಲೆಬ್ರಿಟಿ ಆದದ್ದು ಸಿನಿಮಾ ಜಗತ್ತಿನಲ್ಲಿ ಸಾಧನೆ ಎನಿಸಿಕೊಂಡದ್ದು ನೋಡಿ ಇದೆಂತಹ ವಿಪರ್ಯಾಸ ಎನಿಸಲಿಲ್ಲ. ವರ್ಷಗಟ್ಟಲೆ ಕಷ್ಟಪಟ್ಟು ಕನ್ನಡ ಸಿನಿಮಾದ ಬಗೆಗೆ ಪುಸ್ತಕ ಬರೆದರೆ ಒಂದು ಚಿಕ್ಕ ಬೈಟ್ ಹಾಕಲು, ಪುಸ್ತಕದ ಬಗ್ಗೆ ಚಿಕ್ಕ ವಿವರ ನೀಡಲೂ ಜಾಗವಿಲ್ಲ ಎನ್ನುವವರಿಗೆ ಇದಕ್ಕೆಲ್ಲಾ ಗಂಟೆಗಟ್ಟಲೆ ಸಮಯ ಹೇಗೆ ಸಿಗುತ್ತದೆ ಎನಿಸದಿರಲಿಲ್ಲ. ಆತ ನಾನು ಗಂಡಸಲ್ಲ ಎಂದರೆ ಅದು ದಿನಗಟ್ಟಲೆ ಸುದ್ದಿ, ಸಿನಿಮಾ ಜಗತ್ತಿನಲ್ಲಿ ಯಾರೋ ಹುಡುಗಿಯನ್ನು ಕರೆದರೆ ದಿನಗಟ್ಟಲೆ ಸುದ್ದಿ, ನನ್ನನ್ನು ಆತ ಲೆಕ್ಕವಿಡುವಷ್ಟು ಸಾರಿ ಅತ್ಯಾಚಾರ ಮಾಡಿದ್ದಾನೆ ಎಂದರೆ ಅದಕ್ಕೂ ದಿನವೆಲ್ಲಾ ಸಮಯವಿದೆ..ಅದೆಲ್ಲಾ ಓಕೆ. ಮಧ್ಯ ಮಧ್ಯ ಇಂತಹದ್ದಕ್ಕೂ ಮೂರ್ನಾಲ್ಕು ನಿಮಿಷ ಎತ್ತಿಟ್ಟರೆ ಖುಷಿಯಾಗುತ್ತದೆ ಅಲ್ಲವೇ?
ಇದೆಲ್ಲಾ ನೆನಪಿಗೆ ಬಂದದ್ದು ನಿನ್ನೆ ಮೋನಿಕಾ ಮಿಸ್ಸಿಂಗ್ ವಿವಾದ ಸುದ್ದಿ ವಾಹಿನಿಯಲ್ಲಿ ನೇರಪ್ರಸಾರವಾದಾಗ. ಆಸ್ಕರ್ ಕೃಷ್ಣ ಮೋನಿಕಾ ಮಿಸ್ಸಿಂಗ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಷ್ಟೇ ಗಂಟೆಗಟ್ಟಲೆ ಟಿವಿಯಲ್ಲಿ ಕುಳಿತು ಮಾತನಾಡಬೇಕಾಯಿತು. ಆದರೆ ಇದೇ ವ್ಯಕ್ತಿ ಹಣ ಖರ್ಚು ಮಾಡಿ ನೋಡಲೇ ಬೇಕಾದ ಕನ್ನಡದ ನೂರೊಂದು ಚಿತ್ರಗಳು ಪುಸ್ತಕ ಪ್ರಕಟಿಸಿದಾಗ ಯಾರೂ ಮಾತು ಆಡಿಸಲಿಲ್ಲ. ಇದೇನು ಈ ತರಹದ್ದೊಂದು ಒಳ್ಳೆಯ ಪುಸ್ತಕ ಪ್ರಕಟಿಸಿದ್ದೀರಾ ಬನ್ನಿ ಕಾರ್ಯಕ್ರಮ ಮಾಡೋಣ ಎನ್ನಲಿಲ್ಲ.. 
ಇದಲ್ಲವೇ ವಿಪರ್ಯಾಸ...

Monday, September 28, 2015

ನಾನು ಅವನಲ್ಲ ಮತ್ತು ಬ್ಯೂಟಿಫುಲ್ ಬಾಕ್ಸರ್...

ಪ್ರಕಾಶ್ ರಾಜ್ ಅಭಿನಯದ ಒಗ್ಗರಣೆ ಚಿತ್ರದ ಬಿಡುಗಡೆಯ ದಿನ ಮೊದಲ ಪ್ರದರ್ಶನ ನೋಡಲು ಹೋಗಿದ್ದಾಗ ಅಲ್ಲಿದ್ದ ಕಲಾವಿದರೊಬ್ಬರು ಪರಿಚಯ ಮಾಡಿಕೊಂಡಿದ್ದರು, ಅಲ್ಲದೆ ಚಿತ್ರಮಂದಿರದ ಒಳಗಡೆವರೆಗೂ ನನ್ನ ಜೊತೆಯಲ್ಲಿಯೇ ಬಂದು ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆಯೇ ನಾನೂ ಕೂಡ ಒಂದು ಪಾತ್ರವನ್ನು ಮಾಡಿದ್ದೇನೆ ಎಂದಿದ್ದರು. ನಾನು ಆಗಲಿ ಎಂದು ಸಿನಿಮಾ ನೋಡುವ ಕಾತುರತೆಯಿಂದ ಚಿತ್ರಮಂದಿರ ಹೊಕ್ಕಿದ್ದೆ. ಆದರೆ ಸಿನಿಮಾ ನೋಡಿದ ಮೇಲೆ ಎಲ್ಲಿ, ಯಾವ ಪಾತ್ರ ಮಾಡಿದ್ದು ಆತ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದೆ. ಆಮೇಲೆ ಗೊತ್ತಾಯಿತು ಅಲ್ಲಿದ್ದ ಲೈಂಗಿಕ ಅಲ್ಪಸಂಖ್ಯಾತ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದಾಗಿ. ನಾನು ಅವನಲ್ಲ ಅವಳು ಒಳ್ಳೆಯ ಸಾಕ್ಷ್ಯಚಿತ್ರ ಮಾದರಿಯ ಜೀವನಚರಿತ್ರೆಯ ಚಿತ್ರ. ಮಾದೇಶನ ವಿದ್ಯಾ ಆಗುವಲ್ಲಿನ ಜೀವನದ ಪಯಣವನ್ನು ಸಾರುತ್ತಾ ಸಾಗುವ ಚಿತ್ರ. ಯಾವುದೇ ಪರಿಸ್ಥಿತಿಯಲ್ಲಿಯೂ ಸಿನಿಮೀಯ ಪಾತ್ರಗಳನ್ನೂ ಸೃಷ್ಟಿಸದೇ, ಅತಿರೇಕಕ್ಕೆ ಎಡೆ ಮಾಡದೆ ಇದ್ದುದ್ದನ್ನು ಇದ್ದ ಹಾಗೆ ತೋರಿಸುತ್ತಾ ಹೋಗಿರುವುದು ಚಿತ್ರದ ಹೈ ಲೈಟ್. ನಿಜಕ್ಕೂ ಸಂಚಾರಿ ವಿಜಯ್ ಅಭಿನಯ ಅತ್ಯುತ್ತಮ ಮತ್ತು ರಾಷ್ಟ್ರ ಪ್ರಶಸ್ತಿಗೆ ಅರ್ಹ.ಮಾದೇಶ, ವಿದ್ಯಾಳಾಗುವ ಕಥಾನಕ, ಆ ಪಯಣದಲ್ಲಿನ ಯಾತನೆ, ಖುಷಿಯನ್ನು ಅವರೆಡೆಗೆ ಸಮಾಜಕ್ಕಿರುವ ಅನಾದರವನ್ನು ಅಲ್ಲಲ್ಲಿ ಸೂಕ್ಷ್ಮವಾಗಿ ವಿಶದ ಪಡಿಸಿರುವ ಪರಿ ಮೆಚ್ಚುಗೆಗೆ ಅರ್ಹ. ನೋಡಲೇಬೇಕಾದ ಸಿನಿಮಾದ ಪಟ್ಟಿಗೆ ಸೇರಿಸಬಹುದಾದ ಚಿತ್ರವಿದು. ಹಾಗೆಯೇ ಹಿಜಡಾ ಜಗತ್ತಿನ ಒಳಹೊರಗುಗಳನ್ನು ಅವುಗಳ ಪ್ರಕ್ರಿಯೆಯನ್ನು ಎಷ್ಟೋ ಅವಶ್ಯಕವೋ ಅಷ್ಟೇ ತೋರಿಸುತ್ತಾ ಸಾಗುವುದು ನಿಜಕ್ಕೂ ಅಭಿನಂದನಾರ್ಹ.
ನಂಗೆ ಈ ಲಿಂಗಪರಿವರ್ತಿತರ ಸಿನಿಮಾ ಎಂದಾಗ ನನ್ನನ್ನು ಹೆಚ್ಚು ಕಾಡುವುದು  ಬ್ಯೂಟಿಫುಲ್ ಬಾಕ್ಸರ್. ಚಿತ್ರದ ಶೀರ್ಷಿಕೆ ಇಷ್ಟವಾಗಿತ್ತು. ಸಿಂಗಪೂರ್ ಮೂಲದ ಚಿತ್ರವನ್ನು ಏಕಚೈ ಉಕ್ರೋಗಾತಂ ಎನ್ನುವ ಹೆಸರಿನ ನಿರ್ದೇಶಕರು ನಿರ್ದೇಶನ ಮಾಡಿದ್ದರು. ಗಂಡಾಗಿ ಹುಟ್ಟಿದ ಪರಿನ್ಯಾ ತನ್ನೊಳಗಿನ ಹೆಣ್ತನವನ್ನು ಸಾಕಾರಗೊಳಿಸಿಕೊಳ್ಳಲು ಗಂಡಸ್ತನವಿಲ್ಲದ ಗಂಡಸ್ತನವನ್ನು ಹೆಣ್ಣಾಗಿ ಮಾಡಿಕೊಳ್ಳಲು ಪಡುವ ಪಾಡಿನ ಕತೆಯದು. ಬಾಲ್ಯದಿಂದಲೇ ಹೆಣ್ತನದ ಸೆಳೆತದಿಂದಾಗಿ ಲಿಪ್ ಸ್ಟಿಕ್ ಹಾಕಿಕೊಳ್ಳುವುದು ಹೆಣ್ಣಂತೆ ಸಿಂಗರಿಸಿಕೊಳ್ಳುವುದು ಮಾಡುವ ಪರಿನ್ಯಾ ಆ ಕಾರಣದಿಂದಲೇ ಅದ್ಭುತವಾಗಿ ವಾಲಿಬಾಲ್ ಆಡುತ್ತಿದ್ದರೂ ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗುವುದಿಲ್ಲ. ಹಾಗಾಗಿ ಬಾಕ್ಸಿಂಗ್ ಗೆ ಇಳಿಯುವ ಪರಿನ್ಯಾಳ ಗುರಿ ಹಣ ಸಂಪಾದಿಸುವುದು ಮತ್ತು ಆ ಹಣದಿಂದ ಹೆಣ್ಣಾಗುವುದು. ಗುದ್ದಾಡಿ ಗುದ್ದಾಡಿ ಗಂಡಸರನ್ನು ಮಣ್ಣು ಮುಕ್ಕಿಸುವ ಪರಿನ್ಯಾ ಹಣ ಸಂಪಾದನೆ ಮಾಡಿ ಅದನ್ನು ತನ್ನ ಲಿಂಗ ಬದಲಾವಣೆಯಾ ಕನಸು ನನಸು ಮಾಡಿಕೊಳ್ಳುತ್ತಾನೆ, ಆ ಮೂಲಕ ಅವನು ಅವಳಾಗುತ್ತಾನೆ.ಚಿತ್ರದ್ದು ನೈಜಕತೆ ಎಂದು ತಿಳಿದಾಗ ಅದನ್ನು ಮತ್ತೆ ಮತ್ತೆ ನೋಡಿದ್ದೆ. 
ಈ ನಿಟ್ಟಿನಲ್ಲಿ ನನಗೆ ಹಲವಾರು ಸಿನಿಮಾಗಳು ಕಾಡಿವೆ. ಹಾಗೆಯೇ ವಸುಧೇಂದ್ರ ಬರೆದ ಮೋಹನಸ್ವಾಮೀ ಕಥಾ ಸಂಕಲನದಲ್ಲಿನ ಒಂದು ಕತೆ ತುಂಬಾ ಕನಲುವಂತೆ ಮಾಡಿತ್ತು. ಊರಲ್ಲಿ ಹೆಣ್ಣಿಗನಾಗಿದ್ದ ಶಂಕರಗೌಡ ಅದೊಂದು ದಿನ ಊರು ಬಿಟ್ಟು ಮರೆಯಾಗುತ್ತಾನೆ. ಆದರೆ ಒಂದಷ್ಟು ದಿನದ ನಂತರ ವಾಪಸ್ಸು ಊರಿಗೆ ಬರುವ ಶಂಕರ ಹೆಣ್ಣಾಗಿರುತ್ತಾನೆ. ಊರ ಜನ ಅವನನ್ನು ಅಚ್ಚರಿಯಿಂದ ನೋಡುವಂತೆ ಮಾಡಿಬಿಡುತ್ತಾನೆ. ತನ್ನದೇ ಮನೆಗೆ ಹೋಗಿ ನಾನೀಗ ಹೆಣ್ಣು ಎಂದು ಘೋಷಣೆ ಮಾಡುತ್ತಾನೆ, ನನಗೆ ಆಸ್ತಿಯಲ್ಲಿ ಪಾಲು ಬೇಕು ಎನ್ನುತ್ತಾನೆ. ಊರ ಗಂಡಸರ ಸಹವಾಸ ಮಾಡುತ್ತಾನೆ. ತನಗಿಷ್ಟ ಬಂದ ಹಾಗೆ ಬದುಕುವ ಶಂಕರನನ್ನು ಅವನೇ ಮನೆಯವರೇ ಸಾಯಿಸಿ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿಬಿಡುತ್ತಾರೆ. ಕತೆ ಓದಿ ತುಂಬಾ ದಿನ ಯೋಚಿಸಿದ್ದೆ. ಇಲ್ಲಿ ಯಾರ ತಪ್ಪು, ಯಾರು ಸರಿ ಎಂಬುದಕ್ಕಿಂತ ಹೀಗೆ ನಡೆಯಿತಲ್ಲಾ ಎನ್ನುವ ವಿಷಾದ ನನ್ನನ್ನು ಬಹುದಿನಗಳವರೆಗೆ ಕಾಡಿತ್ತು.

Wednesday, September 16, 2015

ಕಾದಂಬರಿ ಮತ್ತು ಪುಟ್ಟಕ್ಕ...

ಗಡಸು ನೀರು ಅಂದ್ರೆ ನಿಮಗೆ ಗೊತ್ತಿರಬಹುದು.. ಅದನ್ನು ಒಟ್ಟು ಕ್ಯಾಲ್ಸಿಯಂ ಅಯಾನ್ಸ್ ಮತ್ತು ಮೆಗ್ನೀಷಿಯಂ ಅಯಾನ್ಸ್ ಜೊತೆಗೆ ನೀರಿನಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಅಂಶದ ಜೊತೆಗೆ ಲೆಕ್ಕ ಹಾಕಿ ತಾಳೆ ಮಾಡಿ ನೀರಿನ ಗಡಸುತನವನ್ನು ನಿರ್ಣಯ ಮಾಡಬಹುದು. ಅವರೆಡರ ಅನುಪಾತ ಕಡಿಮೆ ಇದ್ದರೆ ನೀರಿನ ಗಡಸುತನ ಕಡಿಮೆ ಇರುತ್ತೆ.. ಇಲ್ಲಾಂದ್ರೆ ಗಡಸುತನ ಜಾಸ್ತಿ ಇರುತ್ತೆ.. ಕಡಿಮೆ ಆದರೇನು, ಜಾಸ್ತಿ ಆದರೇನು ಸ್ವಾಮೀ.. ಕುಡಿಯೋದ್ ತಾನೇ ಅನ್ನಬಹುದು ನೀವು.. ಆದರೆ ಅಡುಗೆ ಮಾಡುವಲ್ಲಿಗೆ ಇದು ಮುಖ್ಯ ಆಗುತ್ತೆ ನೋಡಿ.. ನಿಮಗೆ ಅನ್ನ ಉದುರುದರಾಗಿ ಬೇಕು ಅಂದ್ರೆ ಕ್ಯಾಲ್ಸಿಯಂ ಜಾಸ್ತಿ ಇರೋ ನೀರಲ್ಲಿ ಅಡುಗೆ ಮಾಡಬೇಕು..ಅದು ಅಕ್ಕಿಯ ನಾರಿನ ಜೊತೆಗೆ ಮಿಳಿತವಾಗಿ ಅನ್ನ ಉದುರುದರಾಗಿ ಆಗುತ್ತೆ,  ಚಿತ್ರಾನ್ನ, ಪುಳಿಯೋಗರೆ ಮುಂತಾದವಕ್ಕೆ ಈ ಗಡಸುತನ ಕಡಿಮೆ ಇರಬೇಕಾಗುತ್ತೆ. ಆದರೆ ಮಾಂಸದ ಸಾರಿಗೆ ಗಡಸು ನೀರು ಬೆಸ್ಟ್..ಏಕೆಂದರೆ ಈ ಕ್ಯಾಲ್ಸಿಯಂ ಮಾಂಸದ ನಾರಿನಲ್ಲಿನ ಹೆಚ್ಚಿನ ದ್ರವಾಂಶದ ಜೊತೆಗೆ ಸೇರಿ,  ಮಾಂಸ ಬೇಯುವಲ್ಲಿಗೆ ಸಹಾಯ ಮಾಡುತ್ತೆ.. ಹಾಗಾಗಿ ಬೆಂದ ಮೇಲೆ ತಿನ್ನೋಕೆ ಸುಲಭ..
ಅದ್ಸರಿ ಇದೇನು ನೀರಿನ ಬಗೆಗಿನ ವಿವರ ಎನ್ನುವ ಮೊದಲು ಒಂದು ಘಟನೆ ನಡೆದಿದೆ. ಅದನ್ನು ಅವಲೋಕಿಸೋಣ. ಒಂದು ಕೊಲೆ. ಹೆಂಡತಿ ಹಿಂದಿನ ದಿನ ಊರಿಗೆ ಹೋಗಿದ್ದಾಳೆ. ಅವಳು ಮನೆಯಲ್ಲಿ ಇಲ್ಲ ಎಂದು ಗೊತ್ತಾದ ತಕ್ಷಣ ನಮ್ಮ ಹೀರೋ ತನ್ನ ಗೆಳತಿಯನ್ನು ಮನೆಗೆ ಕರೆಸಿಕೊಂಡಿದ್ದಾನೆ. ರಾತ್ರಿ ಕಳೆದು ಇಬ್ಬರೂ ಬೆಳಿಗ್ಗೆ ಕಾಫಿ ಕುಡಿದಿದ್ದಾರೆ. ಗೆಳತಿಯೇ ಸ್ವತಃ ಕಾಫಿ ಮಾಡಿದ್ದಾಳೆ. ಆನಂತರ ಸಂಜೆ ಸಿಗೋಣ ಎಂದು ಮಾತನಾಡಿಕೊಂಡಿದ್ದಾರೆ. ಸಂಜೆ ಹೋಟೆಲ್ಲಿಗೆ ಊಟಕ್ಕೆ ಹೋಗೋಣ ಎಂದವನು ತುಂಬಾ ಹೊತ್ತಾದರೂ ಕರೆ ಮಾಡದೆ ಇದ್ದಾಗ, ಕರೆ ಸ್ವೀಕರಿಸದೆ ಇದ್ದಾಗ ಗಾಬರಿಯಾದ ಆಕೆ ಮನೆಗೆ ಬಂದಿದ್ದಾಳೆ. ಅಲ್ಲವನ್ನು ಸತ್ತು ಬಿದ್ದಿದ್ದಾನೆ. ಕಾಫಿ ಕುಡಿದ ಲೋಟ, ಒಂದು ವಾಟರ್ ಬಾಟಲು ಪಕ್ಕದಲ್ಲಿದೆ. 
ಆಕೆಗೆ ಗಾಬರಿಯಾಗಿ ತಕ್ಷಣ ಪೋಲಿಸ್ ಗೆ ಫೋನ್ ಮಾಡಿದ್ದಾಳೆ.
ಅದು ಕೊಲೆಯಾ?
ಪೋಸ್ಟ್ ಮಾರ್ಟಂ ರಿಪೋರ್ಟ್ ಪ್ರಕಾರ ವಿಷ ಪ್ರಾಶನದಿಂದ ಆತ ಸತ್ತಿದ್ದಾನೆ. ಆತ ಸತ್ತ ಸಮಯದಲ್ಲಿ ಹೆಂಡತಿ ದೂರದ ಊರಿನಲ್ಲಿದ್ದಾಳೆ, ಗೆಳತಿ ಬಂದ ತಕ್ಷಣ ಫೋನ್ ಮಾಡಿದ್ದಾಳೆ. ಬೇರೆ ಯಾವ ನರಪಿಳ್ಳೆಯೂ ಬಂದಿರುವ ಸುಳಿವಿಲ್ಲ. ಹೆಂಡತಿ ಮೇಲೆ ಸಂಶಯ ಪಡಲು ಸಾಧ್ಯವೇ ಇಲ್ಲ, ಏಕೆಂದರೆ ಆಕೆ ದೂರದಲ್ಲಿದ್ದಾಳೆ. ವಿಷ ಬಂದಿರುವುದು ಕಾಫಿ ಲೋಟದಲ್ಲಿ ಆದ್ದರಿಂದ ಮೊದಲೇ ಕಾಫಿ ಲೋಟಕ್ಕೋ ನೀರಿಗೋ ಬೆರೆಸಿ ಆಕೆ ಹೋಗಿದ್ದರೆ, ಗೆಳತಿಯೂ ಸಾಯಬೇಕಾಗಿತ್ತು.  ಬೆಳಿಗ್ಗೆ ಕುಡಿದ ಕಾಫಿ ಲೋಟಗಳು ಸಿಂಕ್ ನಲ್ಲಿ ಹಾಗೆಯೇ ಇವೆ..ಅದರಲ್ಲಿ ವಿಷದ ಅಂಶವಿಲ್ಲ..
ಹೋಗಲಿ ಗೆಳತಿಯ ಮೇಲೆ ಸಂಶಯ ಪಡೋಣ ಎಂದರೆ ಅವಳೇ ಫೋನ್ ಮಾಡಿದ್ದಾಳೆ.. ಮತ್ತು ಯಾವ ರೀತಿಯಲ್ಲಿಯೂ ಯಾವುದೇ ಸಾಕ್ಷ್ಯವನ್ನು ಅಳಿಸುವ ಪ್ರಯತ್ನವನ್ನು ಆಕೆ ಮಾಡಿಲ್ಲ..
ಅಥವಾ ಆತ್ಮಹತ್ಯೆ ಇರಬಹುದಾ..? ಏಕೆಂದರೆ ಲೋಟದ ಮೇಲಿನ, ಬಾಟಲು ಮೇಲಿನ ಬೆರಳ ಗುರುತು ಸತ್ತವನದೆ ಆದ್ದರಿಂದ ಅವನೇ ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಉಹೂ.. ಗೆಳತಿ ಸಂಜೆ ಹೊರಗೆ ಹೋಟೆಲ್ಲಿಗೆ ಊಟಕ್ಕೆ ಹೋಗೋಣ ಎಂದವನು, ಅಷ್ಟೇ ಅಲ್ಲ ಹೋಟೆಲ್ಲಿಗೆ ಸಂಜೆ 6.30ಕ್ಕೆ ಕರೆ ಮಾಡಿ ಎರಡು ಸೀಟ್ ರೆಸೆರ್ವ್ ಮಾಡಿದವನು ಅದೇಕೆ 7 ಕ್ಕೆ ಆತ್ಮಹತ್ಯೆ ಮಾಡಿಕೊಂಡಾನು?
ಸರಿ.. ವಿಷ ಬಂದಿದ್ದಾದರೂ ಎಲ್ಲಿಂದ?
ನೀರಿನ ಬಾಟಲು ಪರೀಕ್ಷೆ ಮಾಡಲಾಯಿತು.. ಫಲಿತಾಂಶ ಶೂನ್ಯ..
ಕಾಫಿ ಪುಡಿ, ಕಾಫೀ ಲೋಟದಲ್ಲಿನ ಉಳಿದ ದ್ರವದಲ್ಲಿ ವಿಷವಿದೆ ನಿಜ.. ಅದು ಬಂದದ್ದಾದರೂ ಎಲ್ಲಿಂದ..
ಫಿಲ್ಟರ್ ವಾಟರ್ ನಿಂದ ಎನ್ನುವುದಾದರೆ ವಾಟರ್ ಫಿಲ್ಟರ್ ಪೈಪಿನಲ್ಲಿ ವಿಷದ ಅಂಶವಿರಬೇಕಲ್ಲವೇ?
ವಿಷಯವಂತೂ ಸ್ಪಷ್ಟ.. ವಿಷ ಪ್ರಾಶನ.. ಅದೂ ವಿಷವನ್ನು ನೀರಿಗೆ ಹಾಕಲಾಗಿದೆ, ಆ ನೀರನ್ನು ಕಾಫೀ ಮಾಡಲು ಬಳಸಲಾಗಿದೆ..
ಸರಿ.. ಇಡೀ ನೀರಿನ ಸಂಪು, ಪೈಪ್, ಹಿಡಿ, ನಟ್ ಬೋಲ್ಟ್, ನಳ, ಫಿಲ್ಟರ್ ಎಲ್ಲವನ್ನು ಪರೀಕ್ಷೆ ಮಾಡಿದರೆ..?
ಅದೂ ಆಯಿತು.. ಉಹೂ..
ಹೋಗಲಿ..ಸರಿ.. ನೀರಿನ ಪೈಪ್ ಬದಲಿಸಿ ಎಷ್ಟು ದಿನವಾಯಿತು ಪರೀಕ್ಷೆ ಮಾಡೋಣ. ಕೊಲೆಗಾರ ನೀರಿನ ಪೈಪ್ ಲೈನ್ ನಲ್ಲಿಯೇ ವಿಷ ಸೇರಿಸಿದ್ದರೆ ಅವನು ಇತ್ತೀಚಿಗೆ ಅದನ್ನು ಬದಲಿಸಿ ವಿಷ ಹಾಕಿ ಮತ್ತೆ ಫಿಕ್ಸ್ ಮಾಡಬೇಕಲ್ಲವೇ?
ಆದರೆ ಆ ಪೈಪ್ ಹಾಕಿಸಿ ವರ್ಷಗಟ್ಟಲೆ ಆಗಿದೆ ಮತ್ತು ಅದನ್ನು ಬದಲಿಸಿಯೇ ಇಲ್ಲ...
ಹೇಗೆ..?
ಯಾರು?
ಪ್ರಾರಂಭದಲ್ಲಿಯೇ ಕಾದಂಬರಿಗಾರ ನಾಯಕನ ಪತ್ನಿಯೇ ಕೊಲೆಗಾರ್ತಿ ಎನ್ನುವ ಸುಳಿವನ್ನು ನೀಡುತ್ತಾನೆ. ಆದರೆ ಕಾದಂಬರಿ ಮುಂದುವರೆಯುತ್ತಿದ್ದಂತೆಯೇ ಅಲ್ಲಿನ ಪತ್ತೆದಾರರ ಜೊತೆಗೆ ಓದುಗನೂ ಹುಡುಕುವಂತೆ ಮಾಡುತ್ತಾನೆ. ಗೊತ್ತಿದ್ದೂ ಯಾವುದನ್ನು ನಿಖರವಾಗಿ ಸಾಕ್ಷಿ ಸಮೇತ ನಿರೂಪಿಸಲಾಗದ ಪತ್ತೆದಾರನ ಸ್ಥಿತಿ ಓದುಗನದೂ ಆಗುತ್ತದೆ. ಕಾದಂಬರಿಯಕೊನೆಯ ಪುಟದವರೆಗೂ ಕುತೂಹಲ ಕಾಯ್ದುಕೊಳ್ಳುವ ಕಾದಂಬರಿಕಾರ ಕೊನೆಗೆ ನೀಡುವ ವಿವರಣೆ ಅಚ್ಚರಿ ಎನಿಸುತ್ತದೆ.
ಇದು ದೃಷ್ಯಂ ಚಿತ್ರದ ಮೂಲ ಲೇಖಕ ಬರೆದ ಕಾದಂಬರಿ ಸಾಲ್ವೇಶನ್ ಆಫ್ ಎ ಸೈಂಟ್ ನ ಕತೆ. ಪ್ರಾರಂಭದಿಂದಲೂ ಕೊನೆಯವರೆಗೆ ಕುತೂಹಲ ಕೆರಳಿಸುತ್ತಾ ಸಾಗುವ ಕತೆ ಇದು. ಮೊದಲಿಗೆ ಜಪಾನಿ ಹೆಸರುಗಳು ಸ್ವಲ್ಪ ನೆನಪಲ್ಲಿಟ್ಟುಕೊಳ್ಳುವ ಕಷ್ಟ ಎನಿಸಿದರೂ ಆನಂತರ ಕಾದಂಬರಿ ನಿಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.
ಒಮ್ಮೆ ಓದಿ.
ಅಂದ ಹಾಗೆ ಬಿಡುವಾದಾಗ ಈ ಕಿರುಚಿತ್ರ ನೋಡಿ.. ನಿಮ್ಮ ಅಭಿಪ್ರಾಯ ತಿಳಿಸಿ...



Sunday, September 13, 2015

ಕಳೆದುಹೋಗಿದ್ದ ಸೂರಿ ಸಿಕ್ಕಿದ ಖುಷಿಯಲ್ಲಿ..

ರಂಗ ಎಸ್ ಎಸ್ ಎಲ್ ಸಿ ಸಮಯದಲ್ಲಿ ನಾನು ಕಾಲೇಜಿನಲ್ಲಿದ್ದೆ. ಬಿಡುಗಡೆಯಾದಾಗ ಸಿನಿಮಾಕ್ಕೆ ಎದ್ದು ಬಿದ್ದು ಓಡಿದ್ದೆ. ಸಿನಿಮಾ ಬಿಡಿ, ಆ ವಟವಟ ಎಂದು ಮಾತನಾಡುವ ರಂಗ, ಆತನ ಸೈಡ್ ಕಿಕ್ ಜಪಾನ್ ನನಗೆ ತುಂಬಾ ಇಷ್ಟವಾಗಿದ್ದರೂ ಇದೇ ಮಾತನ್ನು ಇಡೀ ಚಿತ್ರಕ್ಕೆ ಹೇಳುವ ಹಾಗಿರಲಿಲ್ಲ. ಆದರೆ ದುನಿಯಾ ಚಿತ್ರ ನೋಡಿ, ಅದರಲ್ಲಿನ ಕಸುಬುದಾರಿಕೆಗೆ ಮರುಳಾಗಿದ್ದೆ. ಹಾಡು, ಹೊಡೆದಾಟ, ಬದುಕಿನ ವಿಪರ್ಯಾಸಗಳನ್ನು ಸೂರಿ ತುಂಬಾ ಚೆನ್ನಾಗಿ ಚಿತ್ರಿಸಿದ್ದರು. ಆದರೆ ಆನಂತರದ ಅವರದೇ ಚಿತ್ರಗಳು ಇಷ್ಟವಾಗಲಿಲ್ಲ. ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿನ ಕತೆ, ನಿರೂಪಣೆ ಒಳಗೆ ಸೇರಲೇ ಇಲ್ಲ, ಜಾಕಿ ಓಕೇ ಎನಿಸಿದರೆ ಅಣ್ಣಾಬಾಂಡ್ ಇಷ್ಟವಾಗಲಿಲ್ಲ. ಅದೇಕೆ ಇಷ್ಟವಾಗಬೇಕು, ಇಷ್ಟಕ್ಕೂ ಒಬ್ಬ ನಿರ್ದೇಶಕ ತನ್ನೆದುರಿನ ಪ್ರಪಂಚವನ್ನು, ತನ್ನೊಳಗಿನ ಕಲ್ಪನೆಯನ್ನು ಪರದೆಯ ಎ ಬಿಡಿಸುತ್ತಾನೆ, ನೋಡುವ ಧರ್ಮ, ನೋಡುವ ಕರ್ಮ ನಮ್ಮದು. ಇಷ್ಟವಾಗುವುದು, ಬಿಡುವುದು ಸಿನಿಮಾಕ್ಕೆ ಸೇರಿದ್ದು. ನಾವು ತಿರಸ್ಕರಿಸಿದ ಚಿತ್ರ ಸೂಪರ್ ಹಿಟ್ ಆಗಿರಬಹುದು, ನಾವು ತುಂಬಾ ಇಷ್ಟಪಟ್ಟ ಚಿತ್ರಗಳು ಡಬ್ಬಾ ಸೇರಿರಬಹುದು. ಆದರೆ ಒಬ್ಬ ನಿರ್ದೇಶಕ ಹೀಗೆಯೇ ಚಿತ್ರ ನಿರ್ದೇಶನ ಮಾಡಬೇಕು ಎಂಬುದಾಗಿ ನಾವು ಅಂದಾಜು ಊಹೆ ಕಲ್ಪನೆ ನಿರ್ಧಾರ ಮಾಡಿಕೊಂಡು ಬಿಡುವುದು ನಮ್ಮದೇ ತಪ್ಪು. ಆತ ನಿರ್ದೇಶನ ಮಾಡುತ್ತಾನೆ, ಹೋಗಿ ನೋಡು, ಇಷ್ಟವಾಯಿತಾ ಆಯಿತು, ಆಗಲಿಲ್ಲವಾ ಬೈದೆದ್ದು ಬಾ ಅಷ್ಟೇ ಕತೆ. ಹೋಟೆಲ್ಲಿನಲ್ಲಿ ಆರ್ಡರ್ ಮಾಡಿದ ಮೇಲೆ ಚೆನ್ನಾಗಿಲ್ಲವೆಂದರೂ ಗೊಣಗಿಕೊಂಡೆ ತಿನ್ನುವುದಿಲ್ಲವೇ? ಹಾಗೆಯೇ ಇದು ನನ್ನ ಪಾಲಿಗೆ.
ಹಾಗೆ ನೋಡಿದರೆ ಕೆಂಡಸಂಪಿಗೆ ಚಿಕ್ಕ ಚೊಕ್ಕ ಚಿತ್ರ. ವಿಮರ್ಶೆ ಪಕ್ಕಕ್ಕಿಡಿ. ನೋಡಿ, ನೋಡುವಾಗ ಏನನ್ನಿಸಿತು, ಅಷ್ಟೇ ಮುಖ್ಯ ಅಲ್ಲವೇ? ಅವರು ಆಕಾಶದ ಮೇಲಾದರೂ ಕ್ಯಾಮೆರಾ ಇಟ್ಟಿರಲಿ, ಪಾತಾಳದಲ್ಲಾದರೂ ಕ್ಯಾಮೆರಾ ಹುದುಗಿಸಿರಲಿ, ನಮಗೆ ಮಾಡುವುದು ಏನಿದೆ.? ನೋಡುವಾಗ ಪರದೆಯ ಮೇಲಿನದ್ದು ಒಳ ಹೋದರೆ ಸಾಕು. ಹಾಗಂತ ತೀರಾ ಕಾವ್ಯಾತ್ಮಕವಾಗಿ ಅಥವಾ ಭಾವನಾತ್ಮಕವಾಗಿ ಹೇಳಲು ಹೋಗಿದ್ದಾರಾ ನಿರ್ದೇಶಕರು ಎಂದರೆ ಇಲ್ಲ ಎನ್ನುವುದು ಚಿತ್ರದಲ್ಲಿ ಕಾಣಸಿಗುತ್ತದೆ. ಭಗ್ನಹೃದಯಿ ನಾಯಕ ವಾಸ್ತವ ಒಪ್ಪಿಕೊಂಡು ಮುಂಬೈನಲ್ಲಿ ಕೆಲಸ ಮಾಡುವ ಒಂದು ಚಿತ್ರಣವೇ ಸಾಕು ಬಿಡಿ ಚಿತ್ರದಲ್ಲಿನ ವಾಸ್ತವತೆಯ ಅರುಹಲು.
ಸೂರಿ ಕೆಂಡ ಸಂಪಿಗೆ ಎಲ್ಲೂ ಸಿನಿಮೀಯವಾಗಿಲ್ಲ, ಅಥವಾ ನ್ಯಾಯಸಮ್ಮತ ಕತೆಯೂ ಆಗಿಲ್ಲ. ಅದು ನಿರ್ದೇಶಕರಿಗೂ ಬೇಕಿಲ್ಲ. ಚಿತ್ರದಲ್ಲಿನ ವಾಸ್ತವ, ಅವ್ಯವಸ್ತೆ ಹಾಗೆಯೇ ಇರುತ್ತದೆ, ಅದಕ್ಕೆ ಅಂತ್ಯವಿಲ್ಲ ಎನ್ನುವುದು ಕೆಂಡಸಂಪಿಗೆ ಹೂರಣ. ಅದು ನಿಜವೂ ಹೌದು. ಹೀಗೂ ಮಾಡಬಹುದು ಎಂಬುದು ಇಲ್ಲಿಲ್ಲ, ಹೀಗೆಯೇ ಇರುತ್ತದೆ ಎಂಬುದು ಇಲ್ಲಿದೆ ಅಷ್ಟೇ. ಹಾಗಂತ ತೀರಾ ಅನ್ಯಾಯವವನ್ನು ವೈಭವೀಕರಿಸಿಲ್ಲ ನಿರ್ದೇಶಕರು, ಬದಲಿಗೆ ಅಷ್ಟೆಲ್ಲಾ ಕಷ್ಟ ಪಡುವ ನಾಯಕ ನಾಯಕಿ ಬೇರಾಗಿ ಬೇಸರ ಹುಟ್ಟಿಸಿದರೆ, ತೀರಾ ಹೆಣಗಳನ್ನೇ ಉದುರಿಸಿ ಗಳಿಸಿದ ಹಣ ದಕ್ಕದೇ ಒದ್ದಾಡುವ ಪೋಲಿಸ್ ಅಧಿಕಾರಿ ಸ್ಥಿತಿ ನಗು ತೃಪ್ತಿ ತರುತ್ತದೆ. ಆ ಮೂಲಕ ಸೂರಿ ಸೂಚ್ಯವಾಗಿ ವಾಸ್ತವದ ನೆಲಗಟ್ಟಿನಲ್ಲಿಯೇ ಒಳ್ಳೆಯದಕ್ಕೆ ಜಯ ಇದೆ ಎನ್ನುವುದನ್ನು ತೋರಿಸಿದ್ದಾರೆ ಅಥವಾ ಆಟವಾಡಿಸುವವ ಮೇಲೊಬ್ಬನಿದ್ದಾನೆ ಎನ್ನುವ ಸೂಚನೆ ನೀಡಿದ್ದಾರೆ. ನಾಯಕನಾಗಿ ವಿಕ್ಕಿ, ನಾಯಕಿಯಾಗಿ ಮಾನ್ವಿತಾ ಸೂಪರ್.
ಯಾಕೋ ಸೂರಿ ಕಳೆದುಹೋದರಾ... ಎಂದು ಯೋಚಿಸುವನ್ತಾಗಿದ್ದಾಗ ಮತ್ತೆ ಸೂರಿ ಅವರ ದುನಿಯಾ ತೆರೆದುಕೊಂಡಿದೆ.  



Saturday, September 12, 2015

ಕರ್ನಾಟಕದಲ್ಲಿ ಕನ್ನಡ ಸಿನಿಮಾಕ್ಕೆ ಬೇಕೇ ಇಂಗ್ಲೀಷ್ ಅಡಿಬರಹ?

ಸರ್ಕಾರದ ಘೋಷಣೆ/ಆದೇಶದಂತೆ ಧೂಮಪಾನ/ಮದ್ಯಪಾನ ಇರುವ ಕಡೆಗೆ ಆ ಚಿತ್ರಣದ ಮೇಲೆ ಧೂಮಪಾನ ವಿರೋಧದ ಸಂದೇಶ ಹಾಕಬೇಕು ಎನ್ನುವುದಕ್ಕೆ ನಾವೇ ಚಿತ್ರಕರ್ಮಿಗಳು ಗೊಣಗಿಕೊಂಡಿದ್ದೇವೆ. ಅಲ್ಲಾ, ಸಿನಿಮಾವನ್ನು ತುಂಬಾ ತನ್ಮಯನಾಗಿ ನೋಡುವ ಪ್ರೇಕ್ಷಕನ ಮನಸ್ಸನ್ನು ಕ್ಷಣಾರ್ಧವಾದರೂ ಆಚೀಚೆ ಸರಿಸಿಬಿಡುವ ಸಾಧ್ಯತೆ ಇರುವುದರಿಂದ ನಾವೇಕೆ ಅದನ್ನು ಆ ಸಮಯದಲ್ಲಿ ಹಾಕಬೇಕು ಎನ್ನುವ ಪ್ರಶ್ನೆಯನ್ನು ಎತ್ತಿದ್ದೇವೆ, ಅದರಲ್ಲೂ ಅನುರಾಗ್ ಕಶ್ಯಪ್ ಈ ವಿಷಯ ಕುರಿತು ವರ್ಷಗಟ್ಟಲೆ ಹೋರಾಡಿದ್ದಾರೆ. ನಮ್ಮ ಹಣ ಖರ್ಚು ಮಾಡಿ ನಾವು ತೆರಿಗೆ ಕಟ್ಟಿ ಮಾಡುವ ಸಿನಿಮಾದಲ್ಲಿ ಸುಖಾಸುಮ್ಮನೆ ನಾವೇಕೆ ಬಿಟ್ಟಿ ಜಾಹಿರಾತು ನೀಡಬೇಕು.. ನಿಮಗೆ ಅವಶ್ಯವಿದ್ದರೆ ನಿಮ್ಮದೇ ಅದಕ್ಕೆಂದೇ ಮೀಸಲಾದ ಹಣದಲ್ಲಿ ಜಾಹಿರಾತು ನೀಡಿ ಎನ್ನುವ ವಾದ ಅವರದು. ಹಾಗೆಯೇ ಮಧುರ ಭಂಡಾರ್ಕರ್ ತಮ್ಮ ಹೀರೋಯಿನ್ ಚಿತ್ರದಲ್ಲಿ ಆ ರೀತಿ ಹಾಕಬಾರದೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಅದಿರಲಿ. ಕನ್ನಡದ ಚಿತ್ರಗಳಿಗೆ ಇಂಗ್ಲೀಷ್ ಅಡಿಬರಹ ಹಾಕುವ ಸಂಸ್ಕೃತಿ ಇತ್ತೀಚಿನದು. ಲೂಸಿಯ ಚಿತ್ರದಲ್ಲಿ ಅಡಿಬರಹ ಹಾಕಲಾಗಿತ್ತು. ಮೊನ್ನೆ ಉಪ್ಪಿ-2 ಚಿತ್ರಕ್ಕೆ ಹಾಕಲಾಗಿತ್ತು, ಈಗ ಕೆಂಡಸಂಪಿಗೆ ಚಿತ್ರದಲ್ಲಿದೆ.
ಇದರಿಂದ ಲಾಭಗಳಿವೆಯೇ?
ಖಂಡಿತ ಇವೆ ಎನ್ನಲು ಒಂದಷ್ಟು ಕಾರಣಗಳನ್ನು ನೀಡಬಹುದೇನೋ? 
ನಮ್ಮ ಕನ್ನಡ ಚಿತ್ರಗಳನ್ನು ಭಾಷೆಯ ಕಾರಣದಿಂದ ನೋಡಲಾಗದ ಪರಭಾಷಿಗನಿಗೆ ಸಿನಿಮಾ ಅರ್ಥವಾಗುತ್ತದೆ, ಹಾಗಾಗಿ ಕನ್ನಡ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚುತ್ತದೆ. ಚಿತ್ರವನ್ನು ಕರ್ನಾಟಕದ ಹೊರಗೂ ಏಕಕಾಲದಲ್ಲಿ ಬಿಡುಗಡೆ ಮಾಡಬಹುದು ಇತ್ಯಾದಿ ಇತ್ಯಾದಿ...
ಅದು ನಿಜ ಕೂಡ ಹೌದು.
ಆದರೆ ನನ್ನ ವಾದ ಏನೆಂದರೆ ಕನ್ನಡ ಭಾಷೆ ಉಳಿಸಿ, ಡಬ್ಬಿಂಗ್ ಬೇಡ ಎನ್ನುವ ನಾವೇ ಇಲ್ಲಿನ ಭಾಷೆ ಕಲಿಯದವನಿಗೆ ಸಿನಿಮಾವನ್ನು ಸುಲಭೀಕರಿಸಿದರೆ ಹೇಗೆ? ಸಿನಿಮಾ ನೋಡಿ, ಕನ್ನಡ ಕಲಿತವರಿದ್ದಾರೆ. ನಮ್ಮಲ್ಲಿಯೇ ನಿಮಗೆ ತೆಲುಗು ಹೇಗೆ ಗೊತ್ತು, ತಮಿಳು ಹೇಗೆ ಅರ್ಥವಾಗುತ್ತದೆ ಎನ್ನುವ ಪ್ರಶ್ನೆಗೆ ಸಿನಿಮಾ ನೋಡಿ ನೋಡಿ ಕಲಿತೆ ಎನ್ನುವ ಉತ್ತರವನ್ನು ನಾನು ಸುಮಾರು ಜನರಿಂದ ಕಲಿತಿದ್ದೇನೆ. ಅಷ್ಟೇ ಏಕೆ? ಹೆಚ್ಚು ಓದಿರದ, ಕುಗ್ರಾಮದಲ್ಲಿದ್ದ  ನನ್ನ ತಂಗಿಯೇ ಬರೀ ಟಿವಿ ನೋಡಿ ಹಿಂದಿ ಅರ್ಥ ಮಾಡಿಕೊಳ್ಳುತ್ತಿದ್ದಳು. ಈವತ್ತಿಗೂ ನಾಲ್ಕನೆಯ ತರಗತಿ ಓದಿರುವ ನಮ್ಮಮ್ಮ ತಮಿಳು ತೆಲುಗು ಹಿಂದಿ ಚಿತ್ರಗಳನ್ನು ನೋಡಿ ಅರ್ಥ ಮಾಡಿಕೊಳ್ಳುತ್ತಾರೆ. ಅಡಿಬರಹವಿಲ್ಲದೆ ಚಿತ್ರದ ಕತೆ ಹೇಳುತ್ತಾರೆ. ಹಾಗೆಯೇ ವರ್ಷಗಟ್ಟಲೆ ಇಲ್ಲೇ ಬೀಡು ಬಿಟ್ಟಿರುವ ನಮ್ಮಲ್ಲಿನ ಪರಭಾಷಿಗರಿಗೆ ನಾವು ಅವರದೇ ವಾಹಿನಿಗಳು, ಪತ್ರಿಕೆಗಳು, ಅವರದೇ ಭಾಷೆಯಲ್ಲಿ ಚಿತ್ರಗಳನ್ನು ನೀಡಿದ್ದೇವೆ. ಅವರದೆ ಭಾಷೆಯಲ್ಲಿಯೇ ನಾವು ಕಷ್ಟಪಟ್ಟು ಮಾತನಾಡಿದ್ದೇವೆ. ಈಗ ಕನ್ನಡ ಚಿತ್ರದ ಅಡಿಬರಹವನ್ನು ಇಂಗ್ಲೀಷ್ ನಲ್ಲಿ ಕೊಟ್ಟರೆ ಅವರಿಗಿದ್ದ ಕೊನೆಯ ಅನಿವಾರ್ಯತೆಯನ್ನು ನಾವೇ ಅಂದರೆ ಚಿತ್ರಕರ್ಮಿಗಳೇ ಕೊಂದುಹಾಕಿದಂತಾಗುತ್ತದೆಯೇ ಎನ್ನುವ ಪ್ರಶ್ನೆ ನನ್ನದು...
ಕೆಲಸದ ನಿಮಿತ್ತ ಬಾಂಬೆನಲ್ಲಿ ಒಂದಷ್ಟು ದಿನ ಬೀಡು ಬಿಟ್ಟಿದ್ದಾಗ ಸಿಕ್ಕಿದ್ದ ಗೆಳೆಯನೊಬ್ಬ ಉಪೇಂದ್ರ ಅವರ ದೊಡ್ಡ ಅಭಿಮಾನಿಯಾಗಿದ್ದ. ಸುಮಾರು ಹದಿನಾರಕ್ಕೂ ಹೆಚ್ಚು ಬಾರಿ ಅವರ ಎ ಚಿತ್ರವನ್ನು ಲೆಕ್ಕವಿಲ್ಲದಷ್ಟು ಬಾರಿ ಉಪೇಂದ್ರ ಚಿತ್ರವನ್ನು ನೋಡಿದ್ದ ಆತ ಸ್ವಲ್ಪ ಸ್ವಲ್ಪ ಕನ್ನಡ ಉಪೇಂದ್ರ ಅವರ ಚಿತ್ರಗಳನ್ನು ನೋಡಿಯೇ ಕಲಿತೆ ಎಂದಿದ್ದ. ಆಮೇಲೆ ನಾನೇ ಒಂದಷ್ಟು ಒಳ್ಳೊಳ್ಳೆಯ ಕನ್ನಡ ಚಿತ್ರಗಳ ಸಿಡಿ ಕೊಟ್ಟಿದ್ದೆ. ತೆಲುಗಿನ ಆರ್ಯ ಚಿತ್ರಕ್ಕೆ ಮರುಳಾಗಿದ್ದ ನಾನು ತೆಲುಗು ಕಲಿಯಲು ಪ್ರಯತ್ನಿಸಿದ್ದೆ. ಆದರೆ ನಮ್ಮಲ್ಲೇ ಇಂಗ್ಲೀಷ್ ಅಡಿಬರಹ ಹಾಕಿ, ನೋಡುವ ಸಿನೆಮಾವನ್ನು ಓದುವಂತೆ ಮಾಡುವುದು ಇಲ್ಲಿ ಅಂದರೆ ನಮ್ಮದೇ ಕನ್ನಡದ ನೆಲದಲ್ಲಿ ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಶ್ನೆ.
ಹಾಗೆ ನೋಡಿದರೆ ಇಂಗ್ಲೀಷ್ ಅಡಿಬರಹ ಹಾಕುವುದರಿಂದ ಬೇರೆ ಭಾಷೆಯ ನೋಡುಗರನ್ನು ಕನ್ನಡ ಚಿತ್ರಕ್ಕೆ ಎಳೆದು ತರುವುದು ಸುಲಭ ಎನ್ನುವುದು ನಿಜವಾದರೂ ಚಿತ್ರಮಂದಿರಕ್ಕೆ ಕರೆತರುವ ಭರದಲ್ಲಿ ಅವರು ಭಾಷೆ ಕಲಿಯುವ/ಅರ್ಥೈಸಿಕೊಳ್ಳುವ ಪರಿಚಯಿಸಿಕೊಳ್ಳುವ ಅನಿವಾರ್ಯತೆ/ಅವಕಾಶವನ್ನು  ದೂರ ತಳ್ಳಿದಂತಾಗುವುದಿಲ್ಲವೇ?
ಹೊರರಾಜ್ಯದಲ್ಲಿ ಸಬ್ ಟೈಟಲ್ ಜೊತೆಗೆ, ನಮ್ಮಲ್ಲಿ ಸಬ್ ಟೈಟಲ್ ಇಲ್ಲದೆ ಬಿಡುಗಡೆ ಮಾಡಲು ತಾಂತ್ರಿಕವಾಗಿ ಒಂದಷ್ಟು ಕಾರಣಗಳಿವೆ. ಚಿತ್ರದ ಎರಡು ಆವೃತ್ತಿಯನ್ನು ಉಪಗ್ರಹ ವಿತರಣೆಗಾಗಿ ಅಪ್ಲೋಡ್ ಮಾಡಿಸಬೇಕಾಗುತ್ತದೆ. ಇಲ್ಲಿ ಎರೆಡೆರೆಡು ಖರ್ಚುಗಳಿವೆ. ಹಾಗೆಯೇ ಕ್ಯೂಬ್ ಅಥವಾ ಯು ಎಫ್ ಓ ಗಳಿಗೆ ಎರಡು ಸಿನಿಮಾದ ಖರ್ಚು ನೀಡಬೇಕಾಗಬಹುದು. ಆದರೆ ಕೋಟಿಗಟ್ಟಲೆ ಸಿನಿಮಾದಲ್ಲಿ ಲಕ್ಷದ ಖರ್ಚಿವು. 
ಏನೋ ಒಟ್ಟಿನಲ್ಲಿ ಕೆಲವು ನಮ್ಮಲ್ಲಿಯೇ ಪ್ರಾರಂಭವಾಗುತ್ತದೆ. ಒಳ್ಳೆಯದಕ್ಕೂ ಕೆಟ್ಟದ್ದಕ್ಕೋ ಎಂಬುದು ಗೊತ್ತಾಗದ ಸ್ಥಿತಿ. ನಮ್ಮ ಭಾಷೆಯ ಮೂಲಕವೇ, ನಮ್ಮ ಸಿನಿಮಾದ ಗುಣಮಟ್ಟ ವಿಶೇಷದ ಮೂಲಕವೇ ಬೇರೆ ಭಾಷಿಗರನ್ನು ತಲುಪೋಣ ಎನ್ನುವುದು ಸರಿ ಅಲ್ಲವೇ?
ಚರ್ಚಿಸಲು ಆಹ್ವಾನವಿದೆ.. ಏನಂತೀರಿ..?
ಬೇರೆ ಭಾಷೆಯ ಚಿತ್ರಗಳಿಗೆ ಕರ್ನಾಟಕದಲ್ಲಿ  ಕನ್ನಡ ಅಡಿಬರಹ ಬಳಸಿದರೆ ಎಲ್ಲರಿಗೂ ಅರ್ಥವಾಗುತ್ತದೆ ಎಂದು ನಾನು ಜಗತ್ತಿನ ಚಿತ್ರಗಳಿಗೆ ಕನ್ನಡ ಅಡಿಬರಹ ಬರೆಯುವ ಪ್ರಯತ್ನ ಮಾಡಿದ್ದೆ. ಇರಾನಿ, ಪರ್ಷಿಯನ್ ಚಿತ್ರಗಳಿಗೆ ಇಂಗ್ಲೀಷ್ ಅಡಿಬರಹವನ್ನು ಕನ್ನಡದಲ್ಲಿ ಬರೆದು ಅದನ್ನು ನೋಡಲು ಸಾಧ್ಯವಾದಾಗ ಖುಷಿಯಾಗಿದ್ದೆ. ಆದರೆ ಅದನ್ನು ಎಲ್ಲರಿಗೂ ಸಿಗುವಂತಾಗಲಿ ಎನ್ನುವ ಆಶಯದಿಂದ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಲು ನೋಡಿದಾಗ ಬೇಸರವಾಗಿತ್ತು. ಸಬ್ ಟೈಟಲ್ ಅಂತರ್ಜಾಲ ತಾಣದಲ್ಲಿ ತೆಲುಗು ತಮಿಳು ಬೆಂಗಾಲಿ ಭಾಷೆಯ ಆಯ್ಕೆ ಇತ್ತೇ ಹೊರತು ಕನ್ನಡ ಆಯ್ಕೆಗೆ ಅವಕಾಶವೇ ಇರಲಿಲ್ಲ. ಈ ಕುರಿತು ಆ ಸೈಟ್ ಗಳಿಗೆ ಇಮೇಲ್ ಮಾಡಿದ್ದೆ. ಆನಂತರ ಬೇರೆ ದಾರಿಕಾಣದೆ ಭಾರತೀಯ ಭಾಷೆಗಳ ಅಡಿಯಲ್ಲಿ ತೆಲುಗು ಭಾಷೆಯ ಅಡಿಯಲ್ಲಿ ಕನ್ನಡ ಸಬ್ ಟೈಟಲ್ ಅಪ್ಲೋಡ್ ಮಾಡಿದ್ದೆ.
ಈಗ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಅಡಿಬರಹವಿದೆ.. ಬಹುಶ: ಕನ್ನಡ ಬಾರದ ಪ್ರೇಕ್ಷಕ ಧ್ವನಿ ಕೇಳಿಸಿಕೊಂಡು ಇಂಗ್ಲೀಷ್ ಓದಿಕೊಂಡು ಕನ್ನಡ ಪರಿಚಯಿಸಿಕೊಳ್ಳುವ ಉಲ್ಟಾ ಕಲಿಕೆ ನಡೆಯಬಹುದಾ? ಕಾದುನೋಡಬೇಕಾಗಿದೆ.
ಅಂದ ಹಾಗೆ ಜಪಾನಿ ಭಾಷೆಯ ಕಾದಂಬರಿ ಸಾಲ್ವೇಶನ್ ಆಫ್ ಎ ಸೈಂಟ್ ಕಾದಂಬರಿ ಓದುತ್ತಿದ್ದೇನೆ. ಇನ್ನು ಕೆಲವೇ ಪುಟಗಳಿರುವ ಕಾದಂಬರಿ ಬರೆದದ್ದು ಕಇಗೋ ಹಿಗಶಿನೋ. ಓಡಿಸಿಕೊಂಡು ಹೋಗುವ ಕಾದಂಬರಿಯ ಕಥಾವಸ್ತು ಕುತೂಹಲಕರವಾಗಿದೆ. ಆದರೆ ಹೆಸರುಗಳನ್ನೂ ನೆನಪಿಟ್ಟುಕೊಂಡು ಓದುವ ಸಾಹಸ ಮಾತ್ರ ಫಜೀತಿ. ಅಂದ ಹಾಗೆ ಹಿಗಶಿನೋ ಪರಿಚಯವಾದದ್ದು ದೃಶ್ಯಂ ಚಿತ್ರದಿಂದ. ಅದರ ಮೂಲ ಸಿನಿಮಾದ ಕಾದಂಬರಿಗಾರ ಈತ. ಆ ಕಾದಂಬರಿ ಓದಿದ ನಂತರ ಪುಣ್ಯಾತ್ಮ ಇನ್ನೇನು ಬರೆದಿರಬಹುದು ಎಂದು ಹುಡುಕಾಡಿದಾಗ ಸಿಕ್ಕಿದ್ದು ಇದು.
ಸಿಕ್ಕರೆ ಓದಿ.