Saturday, March 1, 2014

ಆಕ್ಷನ್ ಕಟ್ ಇತ್ಯಾದಿ..

ಒಂದು ದೃಶ್ಯವನ್ನು ಹೇಗೆ ಚಿತ್ರೀಕರಿಸಿದರೆ ಉತ್ತಮ. ಅಂದರೆ ಹೋಟೆಲ್ಲಿನಲ್ಲಿ ಇಬ್ಬರು ಮಾತನಾಡುತ್ತ ಕುಳಿತಿದ್ದಾರೆ ಎಂದುಕೊಳ್ಳೋಣ. ಅವರಿಬ್ಬರ ಮಾತಿನ ದೃಶ್ಯವನ್ನು ಹೇಗೆಲ್ಲಾ ಚಿತ್ರಿಸಬಹುದು ಎಂಬುದೇ ಪ್ರಶ್ನೆ. ಯಾಕೆಂದರೆ ಸಂಭಾಷಣೆ ಬರೆಯುವಾಗ ಅಥವಾ ಬರಹದ ರೂಪದಲ್ಲಿ ಅವರಿಬ್ಬರೂ ಕುಳಿತು ಮಾತನಾಡುತ್ತಿದ್ದರು ಎಂಬ ವಿವರ ಬರೆದು ಅವರ ಮಾತುಗಳನ್ನು ಒಬ್ಬ ಚಿತ್ರಕತೆ/ಸಂಭಾಷಣೆಕಾರ ಬರೆದಿರುತ್ತಾನೆ. ಆದರೆ ಚಿತ್ರೀಕರಣ ಎಂಬ ವಿಷಯಕ್ಕೆ ಬಂದಾಗ ಕ್ಯಾಮೆರಾ ದಲ್ಲಿ ಅದನ್ನು ಯಾವ ರೀತಿ ಸೆರೆ ಹಿಡಿದರೆ ಅದು ಉತ್ತಮವಾಗಿರುತ್ತದೆ. ಎಷ್ಟು ಶಾಟ್ ಗಳನ್ನೂ ಅದರಲ್ಲಿ ವಿಂಗಡಿಸಿದರೆ ಅದರ ಪರಿಣಾಮ ಹೆಚ್ಚಿರುತ್ತದೆ ಎಂಬುದು ಗೊಂದಲಮಯವಾದ ಉತ್ತರವಿರುವಪ್ರಶ್ನೆ. ಹಾಗೆ ನೋಡಿದರೆ ಒಂದು ದೃಶ್ಯವನ್ನು ಹೀಗೆಯೇ ಇಷ್ಟೇ ಶಾಟ್ ಗಳ ಮೂಲಕ ಚಿತ್ರಿಸಬೇಕು ಎಂಬ ವ್ಯಾಕರಣವೆನಿಲ್ಲ. ಮೊದಲೇ ಹೇಳಿದಂತೆ ಒಂದು ಕತೆಯನ್ನು ಕ್ಯಾಮೆರಾದ ಮೂಲಕ ಅದರ ಅರ್ಥ ತಪ್ಪದಂತೆ ಭಾವ ಕೆಡದಂತೆ ಹೇಳುವುದೇ ದೃಶ್ಯ ಮಾಧ್ಯಮ. ಹಾಗಾಗಿ ಕ್ಯಾಮೆರಾ ಮೂಲಕ ಶಾಟ್ ಮೂಲಕ ಸೆರೆಹಿಡಿದದ್ದು ಅಪ್ಯಾಯಮಾನವಾಗಿರಬೇಕು.
ನಮ್ಮ ಸಿನಿಮಾ ವಿಷಯಕ್ಕೆ ಬಂದರೆ ಕ್ಯಾಮರಾಕ್ಕೆ ಒಂದಷ್ಟು ಅಂಶಗಳಿವೆ. ಟ್ರ್ಯಾಲಿ, ಕ್ರೇನ್, ಸ್ಟಾಂಡ್ ಹೀಗೆ.ಹಾಗೆಯೇ ಶಾಟ್ ವಿಷಯಕ್ಕೆ ಬಂದರೆ ಸಾಮಾನ್ಯವಾಗಿ ಕ್ಲೋಸ್, ಮಿಡ್. ಲಾಂಗ್ ಶಾಟ್ ಗಳಿವೆ. ಇವುಗಳ ಕೋನ ಮತ್ತು ಚೌಕಟ್ಟು ಬದಲಾಗಬಹುದೇನೋ? ಆದರೆ ಶಾಟ್ ಹೆಚ್ಚು ಕಡಿಮೆ ಅದೇ ಆಗಿರುತ್ತದೆ. ಹೀಗಿರುವಾಗ ಇಬ್ಬರು ಹೋಟೆಲ್ಲಿನಲ್ಲಿ ಮಾತನಾಡುವ ದೃಶ್ಯವನ್ನು ಹೇಗೆ ಚಿತ್ರಿಸಿದರೆ ಉತ್ತಮ ಎಂಬುದು ನಿರ್ದೇಶಕನ ಕಲ್ಪನೆಯ ಚಿತ್ರದ ಮೇಲೆ ಅವಲಂಬಿತವಾಗಿರುತ್ತದೆ ಎನ್ನಬಹುದು.ಯಾಕೆಂದರೆ ಚಿತ್ರಿಸಿದ ನಂತರ ಅದನ್ನು ಸಂಕಲನ ಮೇಜಿನ ಮೇಲೆ ಜೋಡಿಸಿದಾಗ ವ್ಯತ್ಯಾಸ ಬರಬಾರದು.
ಹಾಗಂತ ನಮ್ಮಲ್ಲಿ ಉಪಕರಣವಿದೆ ಎಂದು ಅವುಗಳನ್ನು ಯರ್ರಾಬಿರ್ರಿ ಉಪಯೋಗಿಸಲೂ ಬಾರದು. ಇತ್ತೀಚಿಗೆ ಜಿಮ್ಮಿ ಜಿಬ್ ಇದೆ ಎಂಬ ಕಾರಣಕ್ಕೆ ಸುಮಾರಷ್ಟು ಚಿತ್ರಗಳಲ್ಲಿ ಪ್ರತಿ ದೃಶ್ಯದಲ್ಲೂ ಮೇಲಿಂದ ಚಿತ್ರಿಕೆ ತೆಗೆದಿರುವ ಉದಾಹರಣೆ ಇದೆ. ಹಾಗೆಯೇ ಮೊನ್ನೆ ಯಾವುದೋ ಕಿರುಚಿತ್ರವೊಂದನ್ನು ನೋಡುತ್ತಿದ್ದಾಗ ಮೊದಲ ದೃಶ್ಯದಲ್ಲಿ ಕ್ಯಾಮೆರಾವನ್ನು ಕೈಯಲ್ಲಿ ಹಿಡಿದು ಇಷ್ಟಬಂದ ಹಾಗೆ ಅಲುಗಾಡಿಸಿದ್ದಾರೆ. ಅದರ ಉದ್ದೇಶವೇನು. ನೋಡಲು ಕಿರಿಕಿರಿ ಉಂಟ್ರು ಮಾಡುವ ಮತ್ತು ಆ ದೃಶ್ಯದಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ಇರುವುದರಿಂದ ಅದು ವ್ಯರ್ಥ ಎನಿಸದೇ ಇರದು. ಯಾಕೆಂದರೆ ಸಾಮಾನ್ಯವಾಗಿ ಅಪಘಾತದ ದೃಶ್ಯವನ್ನು ಚಿತ್ರಗಳಲ್ಲಿ ತೋರಿಸುವಾಗ ಕೊನೆಯಲ್ಲಿ ಕ್ಯಾಮೆರಾದ ಅಲುಗಾಟ ಅದರ ಪರಿಣಾಮವನ್ನು ಹೆಚ್ಚಿಸುತ್ತದೆ. ಹಾಗೆಯೇ ಚೇಸ್ ದೃಶ್ಯದಲ್ಲಿ ದೃಶ್ಯಕ್ಕೆ ತಕ್ಕಂತೆ ಕ್ಯಾಮೆರಾ ಚಲನೆಯಿರುತ್ತದೆ.
ಹಾಗೆಯೇ ಮನಸಿನ ಭಾವನೆಗಳ ತುಮುಲವನ್ನು ವ್ಯಕ್ತ ಪಡಿಸಲು ಕೆಲವೊಮ್ಮೆ ಕ್ಯಾಮೆರಾದ ಮೂಲಕ ಕೆಲವು ಪ್ರಯೋಗಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ ವರ್ಟಿಗೋ ಚಿತ್ರದ ನಾಯಕನಿಗೆ ಮೇಲಿಂದ ಕೆಳಗೆ ನೋಡಿದರೆ ತಲೆ ಸುತ್ತುತ್ತದೆ ಎಂಬುದನ್ನು ಸೂಚಿಸಲು  ಹಿಚ್ ಕಾಕ್ ಒಂದು ವಿಶಿಷ್ಟ ಪ್ರಯೋಗ ಮಾಡಿದ್ದರು. ಅದು ವರ್ಟಿಗೋ ಶಾಟ್ ಎಂದೇ ಇತ್ತೀಚಿಗೆ ಪ್ರಸಿದ್ಧವಾಗಿದೆ. ಕ್ಯಾಮೆರಾದ ಚಲನೆ ಮತ್ತು ಜೂಮ್ ಎರಡನ್ನೂ ವಿರುದ್ಧ ದಿಕ್ಕಿನಲ್ಲಿ ಚಾಲಿಸಿದರೆ ಈ ಪರಿಣಾಮ ದಕ್ಕುತ್ತದೆ. 
ಅಂತೆಯೇ ಇರುವಷ್ಟೇ ಶಾಟ್ ನಿಂದ ಒಂದು ದೃಶ್ಯವನ್ನು ಹೇಗೆ ಚಿತ್ರಿಕರಿಸಬಹುದು ಎಂಬುವುದನ್ನು ಒಂದು ಮಟ್ಟಕ್ಕೆ ನಿರ್ಧರಿಸಬೇಕಾದರೆ ಮತ್ತು ಶಾಟ್ ವಿಂಗಡಣೆ ಮಾಡುವಾಗ ಯಾವುದನ್ನು ಕ್ಲೋಸ್ ನಲ್ಲೂ ಯಾವುದನ್ನು ಲಾಂಗ್ ಶಾಟ್ ನಲ್ಲೂ ಮತ್ತು ಯಾವುದನ್ನು ವೈಡ್ ಶಾಟ್ ನಲ್ಲೂ ಚಿತ್ರೀಕರಿಸಿದರೆ ಉತ್ತಮ ಮತ್ತು ಪರಿಣಾಮಕಾರಿ ಹಾಗೆಯೇ ಒಂದು ದೃಶ್ಯವನ್ನು ಎಷ್ಟು ಶಾಟ್ ಗಳಾಗಿ ವಿಂಗಡಿಸಿದರೆ ಅದು ನಿರೀಕ್ಷಿತ ಪರಿಣಾಮ ಬೀರುತ್ತದೆ ಮತ್ತು ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂಬ ಪ್ರಶ್ನೆಗಳು ಉತ್ತರಿಸಲು ಕಷ್ಟ ಸಾಧ್ಯವಾದವುಗಳು. ಯಾಕೆಂದರೆ ಒಂದು ದೃಶ್ಯವನ್ನು ಒಂದೇ ಶಾಟ್ ನಲ್ಲೂ ಹತ್ತು ಶಾಟ್ ನಲ್ಲೂ ಹತ್ತಾರು ಕೋನದಲ್ಲೂ  ಚಿತ್ರೀಕರಿಸಬಹುದು. 
ಆದರೆ ಹಾಗೆ ವಿಂಗಡಿಸುವ ಮೊದಲಿಗೆ ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಒಳ್ಳೆಯದು.
1. ಇಡೀ ಚಿತ್ರದ ಗತಿ. ಅಂದರೆ ಇಡೀ ಚಿತ್ರದ ನಿರೂಪಣೆಯ ಶೈಲಿ ಯಾವ ರೀತಿಯದ್ದು. ಅಂದರೆ ತೀವ್ರಗತಿಯೋ, ಮಂದ ಗತಿಯೋ  ಎಂಬುದನ್ನು ಮೊದಲೇ ನಿರ್ಧರಿಸಬೇಕು. ಮತ್ತದು ನಿರ್ದೇಶಕನ ತಲೆಯಲ್ಲಿ ಅಚ್ಚೊತ್ತಿರಬೇಕು. ಯಾಕೆಂದರೆ ಒಂದು ದೃಶ್ಯ ಬರೀ ಬಿಡಿಯಾಗಿ ಪ್ರಭಾವಕಾರಿಯಾದರೆ ಸಾಲದು ಒಟ್ಟಾರೆ ಭಾವವನ್ನೂ ಎತ್ತಿ ಹಿಡಿಯಬೇಕು.
2. ದೃಶ್ಯದ ಸಾರ, ಅದರ ಗತಿ ಮತ್ತು ಅದರ ಹಿಂದಿನ ದೃಶ್ಯ ಕೊನೆಯಾದ ಮತ್ತು ಮುಂದಿನ ದೃಶ್ಯ ಪ್ರಾರಂಭವಾಗುವ ರೀತಿ.
ಇದು ಪ್ರಮುಖವಾದ ಅಂಶ ಎನ್ನಬಹುದು. ಯಾಕೆಂದರೆ ಇಡೀ ದೃಶ್ಯ ಏನನ್ನು ಹೇಳುತ್ತದೆ ಎಂಬುದನ್ನು ಸರಿಯಾಗಿ ಒಬ್ಬ ಚಿತ್ರಕರ್ಮಿ ಅರ್ಥ ಮಾಡಿಕೊಂಡು ಬಿಟ್ಟರೆ ಕ್ಯಾಮೆರಾ ಕಣ್ಣು ಹೆಚ್ಚು ಯಾವುದರ ಮೇಲೆ ಕೇಂದ್ರಿಕರಿಸಬೇಕು ಎಂಬುದರ ಅಂದಾಜು ಆತನಿಗೆ ಸಿಕ್ಕಿ ಬಿಡುತ್ತದೆ. ಜೊತೆಗೆ ಕೊನೆಯ ದೃಶ್ಯದ ಅಂತ್ಯ ಎಲ್ಲಾಗಿತ್ತು ಎಂಬುದು ನಿಚ್ಚಳವಾಗಿ ಗೊತ್ತಿದ್ದರೆ ದೃಶ್ಯದಿಂದ ದೃಶ್ಯದ ಬದಲಾವಣೆ ಅಥವಾ ರೂಪಾಂತರ ಸರಿ ಹೋಗುವಂತೆ ಚಿತ್ರಿಸಲು ಸಹಾಯಕವಾಗುತ್ತದೆ. ಹಾಗೆಯೇ ಪ್ರಸ್ತುತ ದೃಶ್ಯದ ಚಿತ್ರಣವನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಅಂದಾಜು ಆಗಿಬಿಡುತ್ತದೆ. ಇಲ್ಲವಾದಲ್ಲಿ  ಸಂಕಲನ ಮೇಜಿನ ಮೇಲೆ ನಾನಾ ರೀತಿಯ ಸರ್ಕಸ್ ಮಾಡಬೇಕಾಗುತ್ತದೆ.
3.ಈಗ ವಿಷಯಕ್ಕೆ ಬರೋಣ. ಇಬ್ಬರು ವ್ಯಕ್ತಿಗಳು ಹೋಟೆಲ್ಲಿನಲ್ಲಿ ಕುಳಿತು ಮಾತನಾಡುತ್ತಿದ್ದಾರೆ.
ಮೊದಲಿಗೆ ಅದು ಹೋಟೆಲ್ ಎಂಬುದನ್ನು ನಾವು ಪ್ರೇಕ್ಷಕನಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಅಂದರೆ ಅದರ ಅವಶ್ಯಕತೆ ಎಷ್ಟಿದೆ ಎಂಬುದು ನಿರ್ದೇಶಕನಿಗೆ ಗೊತ್ತಿರಬೇಕು.ಅಂದರೆ ಹೋಟೆಲಿನ ಹೊರಾಂಗಣ ಅಥವಾ ಒಳಾಂಗಣ ಹೀಗೆ. ಮೊದಲ ಚಿತ್ರಿಕೆ ಹೋಟೆಲ್ ಎಂಬುದು ಜನರಿಗೆ ಅರ್ಥವಾಗಿ ಬಿಡಬೇಕಾಗುತ್ತದೆ.  ಏಕಾ ಏಕಿ ಇಬ್ಬರು ಕುಳಿತಿರುವುದನ್ನು ತೋರಿಸಿ ಕೂಡ ಆನಂತರ ಹೋಟೆಲ್ ಪರಿಚಯ ಮಾಡಿಕೊಡಬಹುದು. ಅಥವಾ ಇಬ್ಬರ ಮಾತು ಆದಾದ ಮೇಲೆ ಅವರು ಕುಳಿತಿದ್ದು ಹೋಟೆಲ್ಲಿನಲ್ಲಿ ಎನ್ನುವುದನ್ನು ವಿಷದ ಪಡಿಸಬಹುದು.  ಉದಾಹರಣೆಗೆ ಮೊದಲಿಗೆ ಹೋಟೆಲನ್ನು ತೋರಿಸುವ ಶಾಟ್ ಅನ್ನು ತೋರಿಸಿದ ನಂತರ ಅವರು ಕುಳಿತ ಜಾಗವನ್ನು ಅಥವಾ ಟೇಬಲ್ ಅನ್ನು ತೋರಿಸಬಹುದು. ಇಬ್ಬರೇ ಕುಳಿತಿದ್ದಾರೆ. ಅವರು ಎದುರು ಬದುರು ಕುಳಿತಿದ್ದಾರಾ..? ಅಕ್ಕ ಪಕ್ಕ ಕುಳಿತಿದ್ದಾರಾ  ಎಂಬುದನ್ನು ವಿವರಿಸುವ ಶಾಟ್ ಅನ್ನು ಚಿತ್ರಿಸಿದರೆ ಅವರು ಹೋಟೆಲ್ಲಿನಲ್ಲಿ, ಕುಳಿತಿರುವ ರೀತಿ ಎರಡೂ ಪ್ರೇಕ್ಷಕನ ತಲೆಯಲ್ಲಿ ಅಚ್ಚೋತ್ತಿದಂತಾಯಿತು. ಆನಂತರ ಇಬ್ಬರ ಮಾತುಗಳನ್ನು ಸೆರೆ ಹಿಡಿಯುತ್ತಾ ಸಾಗಬಹುದು.ಇಬ್ಬರ ಮುಖ್ಯವಾದ ಸಂಭಾಷಣೆ ಮತ್ತು ಪ್ರತಿಕ್ರಿಯೆಗೆ ಕ್ಲೋಸ್ ಬಳಸಿದರೆ ಉತ್ತಮ. ಆದರೆ ಮೊದಲೆಲ್ಲಾ ಪರದೆಯ ಆಕಾರ ಆಯತಾಕಾರವಿದ್ದುದರಿಂದ ಕ್ಲೋಸ್ ಚೆನ್ನಾಗಿ ಕಾಣಿಸುತ್ತಿತ್ತು. ಆದರೆ ಸಿನೆಮಾಸ್ಕೋಪ್ ಬರೀ ಕ್ಲೋಸ್ ಅನ್ನು ಒಂದು ಮೂಲೆಯಲ್ಲಿ ತೋರಿಸುವುದರಿಂದ ಅದಕ್ಕಿಂತ ಓ.ಎಸ್.ಎಸ್. ಉತ್ತಮ ಎನ್ನಬಹುದು.
ಹಾಗೆಯೇ ಶಾಟ್ ನ ಕೋನಗಳೂ ಕೂಡ ಭಾವವನ್ನು ವ್ಯಕ್ತ ಪಡಿಸುತ್ತವೆ. ಹಾಗಾಗಿ ಒಂದು ಶಾಟ್ ಮತ್ತದರ ಚೌಕಟ್ಟು ಜೊತೆಗೆ ಕೋನ ಮೂರನ್ನೂ ಗಮನಿಸಿ ಅದು ಆ ದೃಶ್ಯದ ಭಾವಕ್ಕೆ ಪೂರಕವಾಗಿದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ. ಇಲ್ಲವಾದಲ್ಲಿ ಇಬ್ಬರು ಸರಸ ಸಲ್ಲಾಪ ದ ಮಾತನ್ನಾಡುತ್ತಿದ್ದರೆ ಕೋನದಿಂದಾಗಿ ಅದರ ಭಾವ ಗಂಭೀರ ಎನಿಸುವ ಸಾಧ್ಯತೆ ಇರುತ್ತದೆ.ಹಾಗೆಯೇ ತುಂಬಾ ಗಂಭೀರವಾದ, ಪ್ರಚೋದನಕಾರಿಯಾದ ಭೇಟಿಯ ದೃಶ್ಯ ನೀರಸವಾಗಿ ಬಿಡುತ್ತದೆ.
ಇಷ್ಟೆಲ್ಲಾ ಯಾಕೆ ತಲೆಕೆಡಿಸಿಕೊಳ್ಳಬೇಕು..? ಎಂಬುದೂ ಒಂದು ಪ್ರಶ್ನೆ. ಯಾಕೆಂದರೆ ಸಂಕಲನ ಮೇಜಿನ ಮೇಲೆ ಕುಳಿತಾಗ ಎಷ್ಟೋ ಸಾರಿ ನಾವಂದು ಕೊಂಡದ್ದು ಬೇರೆ ಅಲ್ಲಿ ಚಿತ್ರೀಕರಿಸಿದ ಭಾವವೇ ಬೇರೆ ಎನಿಸಿರುವುದಕ್ಕೆ ಕಾರಣ ಇದಾಗಿರುತ್ತದೆ.
[ನನ್ನ ಪುಸ್ತಕ ಆಕ್ಷನ್-ಕಟ್ ಇತ್ಯಾದಿ' ಯ ಒಂದು ಅಧ್ಯಾಯ]

Sunday, February 23, 2014

ನಾನು ಕಂಡಂತೆ ಟ್ರೈಲರ್ ಗಳು...

ನಮ್ಮೂರಿನ ಚಿತ್ರಮಂದಿರದಲ್ಲಿ ಯಾವುದೋ ಚಿತ್ರವನ್ನು ನೋಡುತ್ತಿದ್ದೆವು. ಆಗ ಮಧ್ಯಂತರದಲ್ಲಿ ಕನ್ನಡದ ಬಿಡುಗಡೆಯಾಗದ ಚಿತ್ರದ ತುಣುಕು ಪ್ರದರ್ಶನವಾಯಿತು. ಅದೆಷ್ಟು ಕೆಟ್ಟದಾಗಿತ್ತು ಎಂದರೇ ಆವತ್ತೇ ಆ ಚಿತ್ರವನ್ನು ನೋಡಬಾರದೆಂದು ನಾವು ಗೆಳೆಯರು ನಿರ್ಧರಿಸಿ ಬಿಟ್ಟಿದ್ದೆವು. ಬಿಡುಗಡೆಯಾಗಿ ಆ ಚಿತ್ರ ಸೋತಾಗ ನಾವೆಲ್ಲಾ ಆ ಟ್ರೈಲರ್ ಗೆ ಕೈ ಮುಗಿದೆವು. ಯಾಕೆಂದರೆ ಆ ಟ್ರೈಲರ್ ನಮ್ಮ ಹಣ ನೆಮ್ಮದಿ ಸಮಯ ಎಲ್ಲವನ್ನೂ ಉಳಿಸಿತ್ತು. ಆದರೆ ಟ್ರೈಲರ್ ಉದ್ದೇಶವನ್ನು ಮಾತ್ರ ಅದು ತಲೆಕೆಳಗು ಮಾಡಿ ಬಿಟ್ಟಿತ್ತು.
ಆದರೆ ಎಲ್ಲಾ ತುಣುಕುಗಳು ಈ ರೀತಿಯ ಋಣಾತ್ಮಕ ಪ್ರಚಾರ ಮಾಡುವುದಿಲ್ಲ.
ಟ್ರೈಲರ್  ಅಥವಾ ಪ್ರಚಾರ ತುಣುಕು ಒಂದು ಸಿನಿಮಾ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಯಾಕೆಂದರೆ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚು ಮಾಡುವಲ್ಲಿ ಈ ಪ್ರಚಾರ ತುಣುಕುಗಳ ಪಾತ್ರ ದೊಡ್ಡದು. ಮೊದಲೆಲ್ಲಾ ಚಿತ್ರ ಮಂದಿರಗಳಿಗೆ ಹೋಗಿ ಕುಳಿತಾಗ ಮಧ್ಯಂತರದಲ್ಲಿ ಬರುವ ಟ್ರೈಲರ್ ಗಾಗಿ ಕಾದು ಕುಳಿತುಕೊಳ್ಳುತ್ತಿದ್ದೆ. ಅದರಲ್ಲೂ ಹಾಲಿವುಡ್ ಮಂದಿಯ ಚಿತ್ರ ತುಣುಕುಗಳನ್ನು ನೋಡಲು ಎಂತಹದ್ದೋ ಮಜಾ ಎಂದೆ ಹೇಳಬಹುದು.
ದೂರದರ್ಶನ ಒಂದೇ ಇದ್ದ ಸಮಯದಲ್ಲಿ ಆವಾಗಾವಾಗ ಹೊಸ ಚಿತ್ರಗಳ ತುಣುಕುಗಳು ಪ್ರಚಾರವಾಗುತ್ತಿದ್ದವು. ಆಮೇಲೆ ಉಪಗ್ರಹವಾಹಿನಿಗಳು ಬಂದವು. ಅದಕ್ಕಾಗಿಯೇ ಅರ್ಧಗಂಟೆ ಆ ವಾಹಿನಿಗಳು ಮೀಸಲಿಟ್ಟಿದ್ದವು. ಹೊಸ ಚಿತ್ರಗಳ ತುಣುಕುಗಳು ಅಲ್ಲಿ ಪ್ರದರ್ಶನವಾದರೆ ನೋಡಿ ಆ ಚಿತ್ರದ ಗುಣಮಟ್ಟವನ್ನು ಒಂದು ಮಟ್ಟಗಿನ ಅಂದಾಜು ಮಾಡಬಹುದಿತ್ತು.
ಈ ಪ್ರಚಾರ ತುಣುಕು ಎಂದರೆ ಆವಾಗಲೆಲ್ಲಾ ಬರೀ ಚಿತ್ರದ ಒಂದಷ್ಟು ಮುಖ್ಯ ಅಂಶಗಳ ತುಣುಕು, ಸಂಭಾಷಣೆಗಳು ಸಾಹಸ ದೃಶ್ಯಗಳು ಹಾಡಿನ ಚುಟುಕು ಹೀಗೆ ಇವುಗಳನ್ನು ತುಂಡರಿಸಿ ಜೋಡಿಸಲಾಗಿರುತ್ತಿತ್ತು. ಅಂದರೆ ಅದಕ್ಕಾಗಿಯೇ ವಿಶೇಷವಾದ ಸ್ಕ್ರಿಪ್ಟ್ ಸಿದ್ಧ ಪಡಿಸಿದ್ದು ಕಡಿಮೆಯೇ. ನಾವೆಲ್ಲಾ ಅದನ್ನು ನೋಡಿ ಆ ತುಣುಕು ನೆನಪಲ್ಲಿಟ್ಟುಕೊಂಡು ಚಿತ್ರಗಳಿಗೆ ಹೋಗುತ್ತಿದ್ದೆವು.
ಆದರೆ ಅಂತರ್ಜಾಲ ಬಂದ ಹಾಗೆ ಅದರಲ್ಲಿ ಯು ಟ್ಯೂಬ್ ಪ್ರಚಲಿತವಾದ ಹಾಗೆ ಅದಕ್ಕೆ ಬೇರೆಯದೇ ಆದ ಆಯಾಮ ದೊರೆಯಿತು ಎನ್ನಬಹುದು.
ಚಿತ್ರದ ತುಣುಕು ಎಂದರೆ ನಾ ಕಂಡ ಮಟ್ಟಿಗೆ ಎರಡು ನಿಮಿಷ ಮೂರು ನಿಮಿಷಗಳು ಇರುತ್ತಿದ್ದವು. ಆದರೆ ಕನ್ನಡದ ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಬಂತು ನೋಡಿ ಪ್ರಚಾರ ತುಣುಕಿಗೆ ಹೊಸ ಆಯಾಮವೇ ದೊರಕಿತು. ಇಡೀ ಚಿತ್ರದ ಕಥೆಯನ್ನು ಸೂಚ್ಯವಾಗಿ ತಿಳಿಸುವ ಆಕರ್ಷಕವಾದ ತುಸು ಪೋಲಿ ತುಸು ತಮಾಷೆಯ ಪ್ರೊಮೊ ನಿಜಕ್ಕೂ ಅದೆಷ್ಟು ಚೆನ್ನಾಗಿತ್ತು ಎಂದರೆ ನೋಡಿದವರು ಬೇರೆಯವರಿಗೆ ಹೇಳಲಾಗದೆ, ತೋರಿಸಲಾಗದೆ ಇರಲು ಸಾಧ್ಯವಿರಲಿಲ್ಲ. ಬರೀ ಟ್ರೈಲರ್ ಗಾಗಿಯೇ ಒಂದು ಸ್ಕ್ರಿಪ್ಟ್ ಸಿದ್ಧಪಡಿಸಿದ್ದ ಚಿತ್ರತಂಡ ಎಂಟು ನಿಮಿಷಗಳ ಪ್ರೊಮೊದಿಂದಲೇ ಹೆಸರುವಾಸಿಯಾಗಿತ್ತು. ಕನ್ನಡದ ಮಟ್ಟಿಗೆ ಅದೊಂದು ಹೊಸ ಅಲೆ ಎಬ್ಬಿಸಿತಲ್ಲದೆ ಪ್ರೊಮೊ ವಿಷಯದಲ್ಲಿ ಟ್ರೆಂಡ್ ಸೆಟ್ಟರ್ ಆಯಿತು.
ಅಷ್ಟೇ! ಆಮೇಲೆ ಶುರುವಾಯಿತು ನೋಡಿ ಟ್ರೈಲರ್ ಗಳ ಭರಾಟೆ. ಸಿನಿಮಾ ಮಾಡುವ ಬದಲಿಗೆ ಎಲ್ಲರೂ ಟ್ರೈಲರ್ ಮಾಡಲು ಶುರು ಹಚ್ಚಿಕೊಂಡರು. ಸಿಂಪಲ್ ನಲ್ಲಿದ್ದ ಕೆಲವೇ ಕೆಲವು ದ್ವಂದ್ವಾರ್ಥದ ಸಂಭಾಷಣೆಯನ್ನು ಅಪಾರ್ಥ ಮಾಡಿಕೊಂಡವರು ಇಡೀ ಪ್ರೊಮೊ ತುಂಬಾ ಬರೀ ಸೊಂಟದ ಕೆಳಗಿನ ಭಾಷೆಯನ್ನೇ ಬಳಸತೊಡಗಿದರು. ಮಂಚದ ಸುತ್ತವೇ ಸುತ್ತತೊಡಗಿದ ಮಾತುಗಳು ಮಾತೆತ್ತಿದರೆ ನೀವು ಹುಡುಗಿಯರು ಎಂದೆ ಪ್ರಾರಂಭವಾಗುತ್ತಿದ್ದವು. ಮತ್ತವುಗಳ ಉದ್ದವೂ ಗಮನಾರ್ಹವಾದಷ್ಟು ಉದ್ದವಾಗಿದ್ದಂತೂ ಸತ್ಯ. ಈಗಲೂ ಯೂ ಟ್ಯೂಬ್ ನಲ್ಲಿ ಅಂತಹ ಅಸಹ್ಯಕರವಾದ ಹಲವಾರು ಪ್ರೋಮೊಗಳಿವೆ. ಎಲ್ಲದರಲ್ಲೂ ಹೇರಳವಾದ ಕೆಟ್ಟ ಕೆಟ್ಟ ಅಶ್ಲೀಲ ಎನಿಸುವ ಮಾತುಗಳಿವೆ. ಪೋಲಿತನ, ಶೃಂಗಾರ ತುಂಟುತನ ಅಶ್ಲೀಲ ನಡುವಣ ವ್ಯತ್ಯಾಸ ತಿಳಿಯದ ಗೆಳೆಯ ನಿರ್ದೇಶಕರು ಸುಮ್ಮನೆ ಒಂದು ಕ್ಯಾಮೆರಾ ಹಿಡಿದು ಮನಸ್ಸಿಗೆ ಬಂದ ಅಸಹ್ಯವನ್ನೆಲ್ಲಾ ಪ್ರೊಮೊ ಮೂಲಕ ಕಾರಿಕೊಂಡಿದ್ದಾರೆ. ಈ ಟ್ರೈಲರ್ ಭರಾಟೆ ಅದೆಷ್ಟರ ಮಟ್ಟಿಗೆ ಸಿನಿಮಾಗಳಿಗೆ ಅನಿವಾರ್ಯ ಎನಿಸಿತು ಎಂದರೆ ಎಲ್ಲಾ ನಿರ್ದೇಶಕರು ಅದನ್ನು ಮಾಡತೊಡಗಿದರು. ಹರ್ಷ ಭಜರಂಗಿ ಚಿತ್ರದ ಟ್ರೈಲರ್ ಅನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಗಮನ ಸೆಳೆದರು. ಆದರೆ ಅದರಲ್ಲಿ ವಿಶೇಷವಾದ ಕಾನ್ಸೆಪ್ಟ್ ಇರಲಿಲ್ಲ.
ಈಗ ಮತ್ತೆ ಅದೇ ತಂಡ ಉಳಿದವರು ಕಂಡಂತೆ ಚಿತ್ರದ ನಾಲ್ಕು ಚಿಲ್ಲರೆ ನಿಮಿಷಗಳ ಪ್ರೊಮೊ ಬಿಡುಗಡೆ ಮಾಡಿದೆ. ಯಾತಿಕ್ರೋ ಬೋಳಿಮಕ್ಲ ನಗ್ತಾ ಇದ್ದೀರಾ ಶೂಟ್ ಮಾಡ್ಬೇಕಾ ಎನ್ನುವ ಮಾತಿನಿಂದ ಶುರುವಾಗುವ ಪ್ರೊಮೊ ನಿಜಕ್ಕೂ ಆಕರ್ಷಕವಾಗಿದೆ. ಹಾಗೆಯೇ ಚಿತ್ರದ ಬಗ್ಗೆ ಒಂದು ನಿರೀಕ್ಷೆಯನ್ನು ಹುಟ್ಟಿ ಹಾಕಿದೆ. ಒಂದು ಮುತ್ತಿನ ಕತೆಯ ಎಳೆಯನ್ನು ಸೂಚ್ಯವಾಗಿ ಬಿಚ್ಚಿಡುವ ಈ ಪ್ರೊಮೊ ಉಳಿದವರು ಕಂಡಂತೆ ಚಿತ್ರವನ್ನು ನೋಡಲೇಬೇಕಾದ ಚಿತ್ರವನ್ನಾಗಿ ಮಾಡಿಬಿಟ್ಟಿದೆ. ಒಬ್ಬ ನಟನಾಗಿ ತೆರೆಗೆ ಕಾಲಿಟ್ಟ ರಕ್ಷಿತ್ ಅವರ ಪ್ರತಿಭೆ ಇಷ್ಟು ದಿನ ಅದೆಲ್ಲಿ ಅಡಗಿ ಕುಳಿತಿತ್ತು ಅನಿಸುತ್ತದೆ.
ಚಿತ್ರಕ್ಕೆ ತಕ್ಕಂತೆ ಇರುವ ಪ್ರೊಮೊ ದಲ್ಲಿ ದ್ವಂದ್ವಾರ್ಥವಿಲ್ಲದ ಕಾರಣ ಚಿತ್ರತಂಡ ತಮ್ಮದೇ ಸೂತ್ರವನ್ನು ಪರಿವರ್ತಿಸಿಲ್ಲದಿರುವುದು ಮೆಚ್ಚುಗೆಗೆ ಕಾರಣವಾಗಿದೆ ಎನ್ನಬಹುದು.

Friday, February 21, 2014

ಒಂದೇ ಎಳೆ...ಅದೇ ರೀತಿ ಬೇರೆ ನೀತಿ

ಒಬ್ಬ ನಿರ್ದೇಶಕ ಸಿನಿಮಾ ಮಾಡುತ್ತಾ ಸಾಗಿದಂತೆ ತನ್ನದೇ ಶೈಲಿ ರೂಪಿಸಿಕೊಳ್ಳುತ್ತಾನೆ. ಅದರ ಜೊತೆಗೆ ತನ್ನತನವನ್ನು ಅದರಲ್ಲಿ ತೋರಿಸುತ್ತಾನೆ ಆದರೆ ಇನ್ನೂ ಸ್ವಲ್ಪ ಹೆಚ್ಚೇ ಗಮನಿಸಿದರೇ ಒಂದೇ ಕತೆ ಎಳೆಯನ್ನು ಅಥವಾ ನಿರೂಪಣೆಯ ಶೈಲಿಯನ್ನು ಅಲ್ಪ ಸ್ವಲ್ಪ ಬದಲಿಸಿರುತ್ತಾನೆ.
ಉದಾಹರಣೆಗೆ ಉಪೇಂದ್ರರ ಎ, ಓಂ, ಉಪೇಂದ್ರ ಮುಂತಾದ ಚಿತ್ರಗಳನ್ನು ಗಮನಿಸಿದರೇ ಗೊತಾಗುತ್ತದೆ. ಮೊದಲಿಗೆ ವ್ಯಕ್ತಿಯ ಘಟನೆಯ ಉಚ್ಛ್ರಾಯ ಸ್ಥಿತಿ ತೋರಿಸಿ ಆನಂತರ ಅದರ ವ್ಯತಿರಿಕ್ತವಾದ ಘಟನೆ, ಸನ್ನಿವೇಶ ಪಾತ್ರ ತೋರಿಸಿ ಮೂರನೆಯ ಭಾಗದಲ್ಲಿ ಪ್ರಸ್ತುತ ನಡೆಯುತ್ತಿರುವುದನ್ನು ತೋರಿಸಿದ್ದಾರೆ. ಅಂದರೆ ಅವರ ಚಿತ್ರದ ಕತೆಯನ್ನು/ನಿರೂಪಣೆಯನ್ನು ಮೂರು ಭಾಗಗಳಾಗಿ ಮಾಡಿದ್ದಾರೆ ಎನ್ನಬಹುದು. ಓಂ ಚಿತ್ರದಲ್ಲಿ ಮೊದಲಿಗೆ ಡಾನ್ ಆದ ಸತ್ಯ ಅಂದರೆ ರೌಡಿಸಂ ನ ಉಚ್ಛ್ರಾಯ ಸ್ಥಿತಿ ಆನಂತರ ಅದಕ್ಕೆ ವ್ಯತಿರಿಕ್ತವಾದ ದೇವಸ್ಥಾನದ ಅರ್ಚಕ, ಅಮಾಯಕ ಸತ್ಯ ಹಾಗೆ ಮೂರನೆಯ ಭಾಗದಲ್ಲಿ ಈಗ[ಆಗ] ನಡೆಯುವ ಘಟನೆಗಳನ್ನು ಪೋಣಿಸುತ್ತಾರೆ. ಎ ಕೂಡ ಹಾಗೆ. ಮೊದಲಿಗೆ ಹುಚ್ಚುಚ್ಚಾಗಿ ಆಡುವ ಪ್ರೇಮಿ ಸೂರ್ಯ ಆನಂತರ ಹೆಣ್ಣು ಪ್ರೀತಿಯೆಂದರೆ ಬೆಂಕಿಯ ಹಾಗೆ ಸಿಡುಕುವ ಸೂರ್ಯ, ಮೂರನೆಯ ಭಾಗದಲ್ಲಿ ಮತ್ತೆ ವಾಸ್ತವ ತೋರಿಸುತ್ತಾರೆ. ಸೂಪರ್ ಚಿತ್ರದಲ್ಲೂ ಹಾಗೆಯೇ ಇದೆ. 
ಹಾಗೆ ಪ್ರೇಮ್ ಚಿತ್ರಗಳಲ್ಲಿ ಹುಡುಕಾಟ ಪ್ರಮುಖ ಪಾತ್ರ ಎನಿಸುತ್ತದೆ. ಅವರ ಮೊದಲ ಚಿತ್ರ ಕರಿಯ ದಲ್ಲಿ ನಾಯಕ ನಾಯಕಿ ಒಬ್ಬರನ್ನೊಬ್ಬರು ಹುಡುಕುತ್ತಾ ಸಾಗುತ್ತಾರೆ, ಜೋಗಿ ಚಿತ್ರದಲ್ಲಿ ಅಮ್ಮ ಮಗ ಪರಸ್ಪರ ಹುಡುಕುತ್ತಾರೆ, ಎಕ್ಸ್ ಕ್ಯೂಸ್ ಮಿ ಯಲ್ಲಿ ನಾಯಕನನ್ನು ನಾಯಕಿ ಹುಡುಕುತ್ತಾಳೆ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಮತ್ತೆ ನಾಯಕ ನಾಯಕಿ ಹುಡುಕಾಟ ಹೀಗೆ.
ಸುಮ್ಮನೆ ಯೋಗರಾಜ್ ಭಟ್ ಅವರ ಇತ್ತೀಚಿನ ಚಿತ್ರಗಳನ್ನು ಗಮನಿಸೋಣ. ಅವರ ಕತೆಯ ಪ್ರಕಾರ ಪ್ರೀತಿ ಹುಟ್ಟ ಬೇಕಾದರೆ ಊರು ಬಿಟ್ಟು ಹೋಗಲೇಬೇಕು. ಇದ್ದ ಕಡೆ ಪ್ರೀತಿ ಹುಟ್ಟಿಸಿದ್ದು ಯೋಗರಾಜ್ ಭಟ್ ಕಡಿಮೆ. ಮುಂಗಾರು ಮಳೆ ಚಿತ್ರದಲ್ಲಿ ಇಲ್ಲಿಂದ ಮದುವೆಗೆ ಹೋದ ನಾಯಕನಿಗೆ ಅಲ್ಲಿ ಲವ್ ಆಗುತ್ತದೆ, ಗಾಳಿಪಟದಲ್ಲಿ ರಜಾ ಕಳೆಯಲು ಹೋದರೆ ಮೂರು ಜನಕ್ಕೂ ಅಲ್ಲೇ ನಾಯಕಿಯರು ಸಿಕ್ಕಿ ಪ್ರೀತಿ ಶುರುವಾಗುತ್ತದೆ, ಡ್ರಾಮಾ ಚಿತ್ರದಲ್ಲಿ ಊರು ಬಿಟ್ಟು ನಿರ್ಜನ ಪ್ರದೇಶದಂತಹ ಕಾಲೇಜಿನಲ್ಲಿ ಪ್ರೀತಿಯಾಗುತ್ತದೆ, ಮನಸಾರೆ ಚಿತ್ರದಲ್ಲಿ ಬೆಂಗಳೂರು ಬಿಟ್ಟು ದೂರದೂರಿನ ಹುಚ್ಚಾಸ್ಪತ್ರೆಯಲ್ಲಿ ಪ್ರೀತಿ ಸಿಗುತ್ತದೆ. ಪಂಚರಂಗಿಯಲ್ಲಿ ಅಣ್ಣನ ಮದುವೆಗೆ ಹೋದ ನಾಯಕನಿಗೆ ಪ್ರೀತಿ ಸಿಗುತ್ತದೆ. ಅಂದರೆ ಬೇರೆ ಊರಿಗೆ ಕಾಲಿಟ್ಟ ನಾಯಕನಿಗೆ ನಾಯಕಿ ಪ್ರೀತಿ ಸಿಗುತ್ತದೆ ಎನ್ನಬಹುದು.
ಹಿಂದಿಯ ರಾಕೇಶ್ ರೋಶನ್ ಚಿತ್ರಗಳು ಹೇಗೆ 'ಕ' ಅಕ್ಷರದಿಂದ ಶುರುವಾಗುತ್ತವೋ ಹಾಗೆಯೇ ಚಿತ್ರದ ಕತೆಯೂ ಹೆಚ್ಚು ಕಡಿಮೆ ಒಂದೇ ಇರುತ್ತದೆ. ಅವರ ಚಿತ್ರಗಳ ಕತೆಯ ಎಳೆ ಮೊದಲಾರ್ಧ ನಾಯಕ ಸುಮ್ಮನಿರುತ್ತಾನೆ, ಎರಡನೆಯ ಭಾಗದಲ್ಲಿ ಪ್ರತೀಕಾರ ಕೈಗೊಳ್ಳುತ್ತಾನೆ.
ಕೊಯ್ಲಾ ಚಿತ್ರದಲ್ಲಿ ಮೂಗನಾಗಿರುತ್ತಾನೆ ನಾಯಕ. ಮಧ್ಯಂತರದ ನಂತರ ರೊಚ್ಚಿಗೆಳುತ್ತಾನೆ. ಕಹೋನ ಪ್ಯಾರ್ ಹೈ ಚಿತ್ರದಲ್ಲಿ ಮೊದಲಾರ್ಧದ ನಾಯಕ ಮೆದು ಸ್ವಭಾವದವನು. ಅವನಿಗೆ ಅನ್ಯಾಯವಾಗುತ್ತದೆ. ಎರಡನೆಯ ಭಾಗದಲ್ಲಿ ಮತ್ತೆ ಪ್ರತೀಕಾರ. ಕ್ರಿಶ್, ಕೋಇ ಮಿಲ್ ಗಯಾ, ಕರಣ್ ಅರ್ಜುನ್  ಚಿತ್ರಗಳದ್ದೂ ಹಾಗೆಯೇ.ಆದರೆ ಇದೆ ಸೂತ್ರ ಎಲ್ಲಾ ನಿರ್ದೇಶಕರಿಗೂ ಅನ್ವಯಿಸುವುದಿಲ್ಲ. ನಮ್ಮ ಸೂರಿ ಪ್ರತಿ ಸಿನಿಮಾದಲ್ಲೂ ನಾಯಕನನ್ನು ಕೆಳಮಾಧ್ಯಮ ವರ್ಗದ ಹುಡುಗನಾಗಿ ಚಿತ್ರಿಸುತ್ತಾರೆ.ಮಠ ಗುರು ಪ್ರಸಾದ್ ಚಿತ್ರಗಳ ಮುಖ್ಯ ಪಾತ್ರಗಳಲ್ಲಿ ಉಂಡಾಡಿಗುಂಡರ ಸಂಖ್ಯೆ ಜಾಸ್ತಿ ಇರುತ್ತದೆ.ಸೂರಜ್ ಆರ್ ಬಾರ್ಜಾತ್ಯ ಇಡೀ ಸಿನಿಮಾ ಮನೆಯಲ್ಲೇ ಮದುವೆ ಸಂಭ್ರಮದಲ್ಲೇ ಮುಗಿದುಹೋಗುತ್ತದೆ.
ಹಾಗೆ ನೋಡಿದರೆ ಬರೀ ಒಬ್ಬ ನಿರ್ದೇಶಕರನ್ನು ಇಂತಹ ಸರಣಿಗಳು ಆವರಿಸುವುದಿಲ್ಲ. ಕೆಲವೊಮ್ಮೆ ಒಂದಷ್ಟು ಚಿತ್ರಗಳ ಯಶಸ್ಸೂ ಕೂಡ ಎಲ್ಲಾ ನಿರ್ದೇಶಕರಿಗೂ ಈ ರೀತಿ ಮಾಡುವಂತೆ ಮಾಡಿದ ಉದಾಹರಣೆಗಳಿವೆ. ಹೀಗೆ ಸ್ವಲ್ಪ ಕಾಲದ ಹಿಂದೆ ತೆಲುಗಿನ ಬಹುತೇಕ ಚಿತ್ರಗಳಲ್ಲಿ ನಡೆಯುತ್ತಿದ್ದ ಮ್,ಮದುವೆ ಮುರಿದುಬಿದ್ದು ವಧುವೋ ವರನೋ[ಹೆಚ್ಚಾಗಿ ವಧುವೇ] ನನಗಿವನು ಬೇಡ, ಅವನೇ ಬೇಕು ಎಂದು ಪ್ರಿಯಕರನ ಹತ್ತಿರಕ್ಕೆ ಹಾರಿ ಹೋಗಿದ್ದರು. ಅದುವರೆವಿಗೂ ನಾಯಕನೇನೂ ಬೇರೆಲ್ಲೋ ದೂರದಲ್ಲಿ ಇರುತ್ತಿರಲಿಲ್ಲ. ಅವಳ ಹಿಂದೆ ಮುಂದೆ ಸುತ್ತಾಡುತ್ತಿರುತ್ತಿದ್ದ. ಆದರೆ ನಾಯಕಿ ಮಾತ್ರ ಬಿಂಕ ತೋರಿಸಿ ಅಪ್ಪ ಅಮ್ಮನ ಕೈಲಿ ಮದುವೆ ಖರ್ಚು ಮಾಡಿಸಿ ಆನಂತರ ಹೀಗೆ ಹೇಳಿದಾಗ ಅಲ್ಲಿಯವರೆಗೆ ಅದನ್ನೇ ನಿರೀಕ್ಷಿಸುತ್ತಾ ಕುಳಿತಿದ್ದ ನಮಗೆ ಗೊತ್ತಿತ್ತು..ಆದರೂ ಮೊದಲೇ ಹೇಳಬೇಕಲ್ಲಮ್ಮ...ಈಗ ಎಷ್ಟೆಲ್ಲಾ ಖರ್ಚಾಯಿತು ಎಂದು ಸಿನೆಮಾದ ವೆಚ್ಚದ ಜೊತೆಗೆ ನಮ್ಮ ಟಿಕೆಟ್ ನ ವೆಚ್ಚವನ್ನು ಸೇರಿಸಿ ಉದ್ಗಾರ ತೆಗೆಯುತ್ತಿದ್ದದ್ದುಂಟು.
ಆದರೂ ಕೆಲ ನಿರ್ದೇಶಕರು ತಮ್ಮ ಅನನ್ಯ ಶೈಲಿಯಿಂದ ತಮ್ಮದೇ ಛಾಪು ಮೂಡಿಸಿರುವುದಂತೂ ನಿಜ. ಬರೀ ಶಾಟ್ ಗಳನ್ನೇ ನೋಡಿ ಅಥವಾ ಹಾಡುಗಳನ್ನು ಕೇಳಿ ಅಥವಾ ಪೋಸ್ಟರ್ ಗಮನಿಸಿ ಇದು ಇವರದೇ ಎಂದೇ ಹೇಳಿಬಿಡಬಹುದು. ಅದವರ ಸಾಮರ್ಥ್ಯ ಎನ್ನಬಹುದು.
ಒಬ್ಬರ ಮುಖ ಒಬ್ಬರಿಗೆ ಕಾಣದ ರೀತಿ ಕುಳಿತು ಗಂಭೀರವಾಗಿ ಮಾತನಾಡುತ್ತಿದ್ದಾರೆಂದರೆ ಅದು ರಾಮ ಗೋಪಾಲ್ ವರ್ಮ ಶೈಲಿ. ಇಲ್ಲವಾದರೆ ಆ ತರಹ ಕತ್ತಲಕೂಪದಲ್ಲಿ ಯಾರಾದರೂ ಯಾಕೆ ಕುಳಿತುಕೊಳ್ಳುತ್ತಾರೆ ಹೇಳಿ. ಮನೆ ಎಂದರೆ ಅರಮನೆ, ವಾಹನವೆಂದರೆ ಹೆಲಿಕ್ಯಾಪ್ಟರ್ ಅಂದರೆ ಅದು ಕರಣ್ ಜೋಹರ್ ಎನ್ನಬಹುದು. ಇನ್ನು ಮಣಿರತ್ನಂ ಎಂದರೆ ತೀರಾ ಮನರಂಜನೆ ನಿರೀಕ್ಷಿಸುವ ಹಾಗಿಲ್ಲ. ಹಾಗೆಯೇ ಅರಳು ಹುರಿದಂತೆ ಮಾತನಾಡುವ ಜಾಯಮಾನದ ಪಾತ್ರಗಳು ಅವರಲ್ಲಿ ಕಡಿಮೆಯೇ. ಮಾತು ಕಡಿಮೆ ಎಂದರೆ ಕಿಂ ಕಿ ಡಕ್. ಗ್ರಾಫಿಕ್ಸ್ ಎಂದರೆ ರೋಲಂಡ್ ಎಮ್ರಿಚ್. ಉದ್ದನೆಯ ಅವಧಿಯ ಚಿತ್ರ ಎಂದರೆ ಅಶುತೋಷ್ ಗೋವಾರಿಕರ್, ಶೃಂಗಾರಮಯ ಎಂದರೆ ಟಿಂಟ್ ಬ್ರಾಸ್ ಹೀಗೆ. ಅವರ ಒಟ್ಟಾರೆ ಚಿತ್ರಗಳಲ್ಲಿ  ಅಡಕವಾಗಿರುವ ಹೆಚ್ಚಿನ ದ್ರವ್ಯದ ಮೇಲೆ ಪಟ್ಟಿ ಮಾಡುತ್ತಾ ಸಾಗಬಹುದೇನೋ?
ನಾನಂತೂ ಒಂದು ಚಿತ್ರ ನೋಡಿದ ಅದು ಇಷ್ಟವಾದರೆ  ಆ ನಿರ್ದೇಶಕನ ಎಲ್ಲಾ ಚಿತ್ರಗಳನ್ನು ನೋಡಲು ಇಷ್ಟಪಡುತ್ತೇನೆ.ಅದು ಯಾವುದೇ ಭಾಷೆಯಾದರೂ ಸರಿ. ಯಾಕೆಂದರೆ ಪ್ರತಿ ನಿರ್ದೇಶಕನಲ್ಲೂ ಒಂದು ಗುರ್ತಿಸಬಹುದಾದ ಅಂಶವಿದ್ದೇ ಇರುತ್ತದೆ. ಅದೇ ಅವನ ಶಕ್ತಿ  ಎನ್ನಬಹುದು.
ನನ್ನ ಪ್ರಶ್ನೆ: ನಿಮಗೆ ಕಂಡ ನಿಮ್ಮ ನೆಚ್ಚಿನ ನಿರ್ದೇಶಕರ ಮಾಮೂಲಿ ಮತ್ತು ಶಕ್ತಿಶಾಲಿ ಅಂಶ ಯಾವುದು?

Sunday, February 16, 2014

ಲಾಜಿಕ್, ವಾಸ್ತವ, ಅತಿಕಲ್ಪಿತ- ಒಂದು ತಲೆ ಹರಟೆ.

ನನ್ನ ಕಳೆದ ವಾರದ ಲೇಖನ ಓದಿ ಯಾರೋ ಫೋನ್ ಮಾಡಿದ್ದರು. ನಿಮಗೆ ಯಾರದಾದರೂ ಯಶಸ್ಸು ಕಂಡರೆ ಆಗುವುದಿಲ್ಲವಾ..? ಏನಾದರೊಂದು ಹುಡುಕಿ ಅದು ಒರಿಜಿನಲ್ ಅಲ್ಲ ಎನ್ನುವ ರೀತಿ ಮಾಡುತ್ತೀರಾ..? ಈಗ 6-5=2 ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಇದು ಬೇಕಿತ್ತಾ ಎನ್ನುವ ರೀತಿ ಮಾತನಾಡಿದರು.
ಹಾಗೆ ನೋಡಿದರೆ ಈ ಚಿತ್ರದ ಪೋಸ್ಟರ್ ನೋಡಿದಾಗಲೇ ನನಗೆ ಗೊತ್ತಿತ್ತು.ಆದರೆ ನಾನೇ ಸಿನಿಮಾ ಬಿಡುಗಡೆಯಾದ ತಕ್ಷಣ ಲೇಖನ ಪ್ರಕಟಿಸಬಹುದಿತ್ತು. ಆದರೆ ಹಾಗೆ ಮಾಡಿದರೆ ಯಾಕೋ ಸರಿಯಾಗುವುದಿಲ್ಲ ಎನಿಸಿ ಒಂದಷ್ಟು ದಿನ ತಡೆದು ಆನಂತರ ಪ್ರಕಟಿಸಿದ್ದೇನೆ.
ಒಂದು ಚಿತ್ರ ಇನ್ನೊಂದು ಚಿತ್ರದ ರೀಮೇಕ್, ಸ್ಫೂರ್ತಿ ನೆರಳು ಏನಾದರೂ ಒಂದು ಆಗಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ನಾನವರಿಗೆ ಹೇಳಿದೆ. ನನ್ನ ಚಿತ್ರವೇ ಎರಡ್ಮೂರು ಚಿತ್ರಗಳ ಸ್ಫೂರ್ತಿ. ಅದರಲ್ಲಿ ನಾನೇಕೆ ದೊಡ್ಡತನ ತೋರಿಸಲಿ ಎಂದೆ. ಯಾಕೆಂದರೆ ಎಲ್ಲಾ ವಿಷಯಗಳೂ ನಮ್ಮ ಪರಿಧಿಗೆ ನಿಲುಕುವುದಿಲ್ಲ. ನಾನು ಪ್ರತಿಸಾರಿಯೂ ಕತೆ ಮಾಡುವಾಗ ಅಥವಾ ಚಿತ್ರ ನೋಡುವಾಗ ಅಲ್ಲಿನ ಪರಿಸರ ಅಥವಾ ಮಾತು ದೃಶ್ಯ ಮುಂತಾದವುಗಳನ್ನು ನೋಡಿ ಅಚ್ಚರಿ ಪಡುತ್ತೇನೆ. ಯಾಕೆಂದರೆ ಎಷ್ಟೋ ಸನ್ನಿವೇಶಗಳು ನಮಗೆ ಗೊತ್ತೇ ಇರುವುದಿಲ್ಲ. ಉದಾಹರಣೆಗೆ ಜೈಲಿನ ಒಳಭಾಗದಲ್ಲಿ ನಡೆಯುವ ಘಟನೆಗಳು ನಮ್ಮ ಎಷ್ಟು ಜನಕ್ಕೆ ಅನುಭವಕ್ಕೆ ಸಿಲುಕುತ್ತವೆ ಹೇಳಿ.. ನನಗೆ ನ್ಯಾಯಾಲಯ. ಜಡ್ಜ್ ಮುಂತಾದ ಪರಿಕಲ್ಪನೆ ಚಿಕ್ಕಂದಿನಲ್ಲೇ ಬಂದಿತ್ತು. ನಾನಿದ್ದದ್ದು ಹುಟ್ಟಿದ್ದು ಹಳ್ಳಿಯಲ್ಲಿ. ಹಾಗಿದ್ದು ಅದರ ಸ್ಪಷ್ಟ ಚಿತ್ರ ನನ್ನಲ್ಲಿ ಪಡಿ ಮೂಡಿದ್ದಕ್ಕೆ ಚಿತ್ರಗಳೇ ಕಾರಣ. ಚಿಕ್ಕ ಚಿಕ್ಕ ವಿಷಯಕ್ಕೂ ಎರಡೂ ಕಡೆ ಮೇಜು ಗುದ್ದಾಡಿಕೊಂಡು ಶರಂಪರ ವಾದ ಮಾಡುವ ಮಾತಿಗೆ ಮಾತು ಬೆಸೆಯುವ ಹಾಗೆಯೇ ನಾಯಕ ಜಡ್ಜ್ ಗೆ ಪ್ರತಿವಾದ ಮಾಡುವ ದೃಶ್ಯಗಳನ್ನು ನೋಡಿ ರೋಮಾಂಚಿತನಾಗಿದ್ದೆ. ಚಿತ್ರರಂಗಕ್ಕೆ ಬಂದ ಮೇಲೆ  ಅದೆಲ್ಲವನ್ನೂ ಒಮ್ಮೆ ಕಣ್ಣಾರೆ ನೋಡೇ ಬಿಡೋಣ ಎಂದುಕೊಂಡು ಒಂದಷ್ಟು ದಿನ ನ್ಯಾಯಾಲಯಗಳಿಗೆ ಸುತ್ತಾಡಿದೆ. ಅಲ್ಲಿ ವಾದ ವಿವಾದಗಳು ಕೇಳಿಸಲೇ ಇಲ್ಲ. ಜಡ್ಜ್ ಏನೋ ನೋಡಿ ಆರೋಪಿಯನ್ನು ಕರೆದರೆ, ಮತ್ತೆ ಪ್ರತಿವಾದಿ ಆ ಫೈಲ್ ಅನ್ನು ಮುಂದಿಟ್ಟರೆ ತಲೆ ಎತ್ತಿ ನೋಡಿ ಮುಂದಿನ ದಿನಾಂಕ ಕೊಡುತ್ತಿದ್ದರು. ಈ ಪ್ರಕ್ರಿಯೆ ಇಷ್ಟು ನೀರಸವಾ ಎನಿಸದೇ ಇರಲಿಲ್ಲ. ಆನಂತರ ನನ್ನ ಪರಿಚಿತ ವಕೀಲರನ್ನು ಈ ಬಗ್ಗೆ ವಿಚಾರಿಸಿದಾಗ ಆ ತರಹ ನಡೆಯುತ್ತವೆ. ಹಾಗಂತ ನಿಮ್ಮ ಚಿತ್ರಗಳಲ್ಲಿ ತೋರಿಸುವ ಹಾಗೆ ನಡೆಯುವುದು ತೀರಾ ಕಡಿಮೆ. ಸಾಕ್ಷಿಗಳು, ಆರೋಪಿಗಳು ಮಾತನಾಡುವುದೇ ಕಡಿಮೆ. ಒಂದಷ್ಟು ಅತ್ತು ಕರೆದು ಮಾಡುತ್ತಾರೆ. ಯಾಕೆಂದರೆ ಎಲ್ಲವೂ ಸಾಕ್ಷಿಯ ಮೇಲೆ ನಿಂತಿರುತ್ತದೆ ಎಂದರು.
ಹಾಗೆಯೇ ನಮ್ಮ ಚಿತ್ರಗಳಲ್ಲಿ ಉದ್ದನೆಯ ಮಚ್ಚನ್ನು ,ಲಾಂಗನ್ನು ಬೆನ್ನಹಿಂದೆ ಇಟ್ಟುಕೊಂಡು ಎದುರಾಳಿಯ ಮುಂದೆ ನಿಂತಾಗ ನಾಯಕ ಸ್ಟೈಲ್ ಆಗಿ ಅದನ್ನು ಹೊರತೆಗೆಯುವ ದೃಶ್ಯ ರೋಮಾಂಚಕ ಎನ್ನಬಹುದು. ಯಾಕೆಂದರೆ ಅದಕ್ಕೆ ಹೆಚ್ಚು ಶಿಳ್ಳೆ ಬೀಳುವುದು. ಆದರೆ ಅಷ್ಟುದ್ದದ ಲಾಂಗನ್ನು ಅದೇಗೆ ಬೆನ್ನಹಿಂದೆ ಇಡುವುದು ಎನ್ನುವುದೇ ನನ್ನ ಯಕ್ಷ ಪ್ರಶ್ನೆ. ಹೇಗೋ ನಿಧಾನಕ್ಕೆ ಇಡಬಹುದೇನೋ. ಆದರೆ ಬೆನ್ನ ಬಗ್ಗಿಸದೆಯೇ ಓಡಾಡುವುದು ಹೇಗೆ. ಸೊಂಟಕ್ಕೆ ಮೊದಲು ರಾಜರು ಖಡ್ಗ ಇಟ್ಟುಕೊಳ್ಳುತ್ತಿದ್ದರು. ಈಗಲೂ ಪಿಸ್ತೂಲ್ ಸೊಂಟದಲ್ಲಿರುತ್ತದೆ. ಆದರೆ ದರ್ಶನ್ ಅಂತಹ ಎತ್ತರದ ವ್ಯಕ್ತಿ ಹೇಗೋ ಬೆನ್ನಹಿಂದೆ ಜಾಗ ಹೊಂದಿಸಬಹುದೇನೋ .ಆದರೆ ಉಳಿದವರು ಹೇಗೆ? ಎದುರಾಳಿ ಎದುರಿಗೆ ನಿಂತಾಗ ನಾಜೂಕಾಗಿ ತೆಗೆಯಬೇಕು. ಹೆಚ್ಚು ಕಡಿಮೆಯಾದರೆ ಸೊಂಟದಿಂದ ಬೆನ್ನವರೆಗೆ ಅವರೇ ಗಾಯ ಮಾಡಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಅದಕ್ಕೂ ನಾನು ಸುಮ್ಮನೆ ಒಂದಷ್ಟು ಜನರನ್ನು ಕೇಳಿದ್ದೆ. ಅದಕ್ಕೆ ಇಲ್ಲಾರೀ ವಾಹನಗಳ ಸೀಟಿನ ಕೆಳಗೆ, ಒಳಗೆ ಅಡಗಿಸಿಡುತ್ತೇವೆ..ತೀರಾ ಬೆನ್ನಹಿಂದೆ ಇಟ್ಟುಕೊಂಡು ಹೊಡೆದಾಟದ ಸಮಯದಲ್ಲಿ ಅವನ ಮುಂದೆ ತೆಗೆಯಲು ಸಮಯವಾದರೂ ಎಲ್ಲಿರುತ್ತದೆ ಎಂದರು.ಆದರೆ ಅದನ್ನೇ ಹಾಗೆ ತೋರಿಸಿದರೆ ನೀರಸ ಎನಿಸುವ ಸಂಭವ ಇದ್ದೇ ಇರುತ್ತದೆ..
ಹಾಗಂತ ಎಲ್ಲವನ್ನೂ ವಾಸ್ತವದ ನೆಲೆಗಟ್ಟಿನಲ್ಲಿ ತಾರ್ಕಿಕ ಅಂಶಗಳ ಜೊತೆ ನಿರೂಪಿಸುತ್ತೇವೆ ಎನ್ನುವುದು ಅಸಾಧ್ಯದ ಮಾತು.ಏಕೆಂದರೆ ಒಂದು ಮನರಂಜನೀಯ ಸಿನಿಮಾಕ್ಕೆ ಅದರದೇ ಆದ ಇತಿಮಿತಿ ಇದ್ದೇ ಇರುತ್ತದೆ. ಎಲ್ಲವನ್ನೂ ತಾರ್ಕಿಕವಾಗಿ ತೋರಿಸುತ್ತಾ ಪ್ರತಿಯೊಂದಕ್ಕೂ ಕಾರಣ ಕೊಡುತ್ತಾ ಸಾಗಿದರೆ ಚಿತ್ರವೊಂದು ಸಾಕ್ಷ್ಯಚಿತ್ರವಾಗಿ ಬೋರ್ ಆಗಿಬಿಡುವ ಸಾಧ್ಯತೆ ಇದ್ದೇ ಇದೆ.
ಆದರೂ ಕೆಲವು ಚಿತ್ರಗಳಲ್ಲಿನ ಕೆಲವೇ ಕೆಲವು ವಿಷಯಗಳನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಅಥವಾ ಆ ಚಿತ್ರ ಮನಸ್ಸಿಗೆ ತಟ್ಟುವುದೂ ಇಲ್ಲ. ಯಾಕೆ ಹೀಗೆ ಎಂದರೆ ಅಲ್ಲಿರುವ ವಿಷಯವನ್ನು ನಿರ್ದೇಶಕ/ಬರಹಗಾರ ಕನ್ವಿನ್ಸ್ ಮಾಡಲು ಸೋತಿರುತ್ತಾನೆ. ಪರದೆಯ ಮೇಲಿನ ದೃಶ್ಯ ಏನೇ ಇರಲಿ ಅದನ್ನು ನಂಬಿಸುವ ಕಲೆ ನಿರ್ದೇಶಕನಿಗೆ ಬಿಟ್ಟದ್ದು. ಆಗ ಹಿಂದೆ ಮುಂದೆ ಯೋಚಿಸದೆ ಪ್ರೇಕ್ಷಕ ಸಿನಿಮಾ ನೋಡುತ್ತಾ ಕುಳಿತುಬಿಡುತ್ತಾನೆ. ಯಾವಾಗ ತೆರೆಯ ಮೇಲಿನ ದೃಶ್ಯ ನಮ್ಮೊಳಗೇ ಸೇರುವುದಿಲ್ಲವೋ, ಅಥವಾ ನಾವು ನಂಬುವುದಕ್ಕೆ ಆಗುವುದಿಲ್ಲವೋ ಗಮನ ಬೇರೆಡೆಗೆ ಸರಿದು ಚಿತ್ರ ಬೋರ್ ಆಗಲು ಪ್ರಾರಂಭಿಸಿ ಅದರಲ್ಲಿ ನೂರು ತಪ್ಪು ಕಾಣಸಿಗುತ್ತದೆ.
ದೆವ್ವ ಭೂತದ ಚಿತ್ರಗಳಲ್ಲಿ ಅದೇಕೆ ಮಧ್ಯರಾತ್ರಿಯಲ್ಲಿ ಒಬ್ಬೊಬ್ಬರೇ ಎದ್ದು ಹೊರಗೆ ಹೋಗುತ್ತಾರೆ, ಅಪ್ಪು ಚಿತ್ರದಲ್ಲಿ ಮಧ್ಯರಾತ್ರಿ ಮೀರಿದ ಸಮಯದಲ್ಲಿ ನಾಯಕಿ ಏಕೆ ಕಾರನ್ನು ಒಬ್ಬಳೇ ಚಾಲಿಸುತ್ತಾ ಬರುತ್ತಾಳೆ, ರಾಜಾಹುಲಿ ಚಿತ್ರದಲ್ಲಿ ನಾಯಕಿ ದಿನಂಪ್ರತಿ ಒಂದು ದಿನವೂ ಮಿಸ್ ಆಗದಂತೆ ಅದೇ ಸೀಟಿನಲ್ಲಿ ಹೇಗೆ ಕುಳಿತುಕೊಳ್ಳುತ್ತಾಳೆ, ಅಂಬಾನಿ, ಟಾಟಾ ನಂದನ್ ನಿಲಕೆನಿ ರಸ್ತೆಯಲ್ಲಿ ನಡೆದರೂ ಗುರುತಿಸಲಾಗದ ಜನರ ಮಧ್ಯ ಎರಡೇ ವರ್ಷದಲ್ಲಿ ವ್ಯವಹಾರದಲ್ಲಿ ಹಣ ಮಾಡುವ ಗೂಗ್ಲಿ  ಚಿತ್ರದ ನಾಯಕ ಅದೇಗೆ ಸೆಲೆಬ್ರಿಟಿ ತರ ಜನರಿಂದ ಸುತ್ತುವರೆಯುತ್ತಾನೆ,   ಅಮ್ಮ ಸಿಕ್ಕರೆ ನನ್ನ ಅಡ್ರೆಸ್ ಕೊಡು ಎನ್ನುವ ಜೋಗಿ ಚಿತ್ರದ ನಾಯಕ ಮೊಬೈಲ್ ಯಾಕೆ ಬಳಸುವುದಿಲ್ಲ, ಹಳ್ಳಿಯಲ್ಲಿ ಗಟ್ಟುಮುಟ್ಟಾದ ರೋಗ ರುಜಿನವಿಲ್ಲದ ಮುದುಕಿ ಅದೇಗೆ ಒಂದೇ ರಾತ್ರಿಯ ಮಳೆಗೆ ಸತ್ತೆ ಹೋಗುತ್ತಾಳೆ, ..ಹೀಗೆ ಒಂದಷ್ಟು ಪಟ್ಟಿ ಮಾಡಬಹುದು. ಆದರೆ ಇವೆಲ್ಲಾ ಯಶಸ್ವೀ ಚಿತ್ರಗಳು ಮತ್ತು ಪ್ರೇಕ್ಷಕ ಇದಾವುದನ್ನೂ ತಲೆಕೆಡಿಸಿಕೊಳ್ಳದೆ ಒಟ್ಟಾರೆ ಭಾವವನ್ನು ಪರಿಗಣಿಸುತ್ತಾನೆ ಎಂಬುದು ನನ್ನ ಅನಿಸಿಕೆ.
ನೀವೇನಂತೀರಿ..?

Wednesday, February 12, 2014

ರಿಮೇಕ್ ಹಿಂದೆ ಬಿದ್ದಾಗ..


ಪರಭಾಷೆಯಲ್ಲಿ ಉತ್ತಮ ವಿಮರ್ಶೆ ಪಡೆದಿದ್ದ ಆದರೆ ಅಷ್ಟಾಗಿ ಯಶಸ್ಸು ಪಡೆಯದ ಒಂದು ಉತ್ತಮ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಿದ್ದ  ನಿರ್ಮಾಪಕರನ್ನು ಕೇಳಿದ್ದೆ. 'ಅಲ್ಲಾ ಸಾರ್..ಈ ಚಿತ್ರ ಅಲ್ಲೇ ತೋಪು..ಮತ್ಯಾಕೆ ಅದನ್ನು ಕನ್ನಡಕ್ಕೆ ಮಾಡಿದಿರಿ...ಅದ್ಯಾವ ಮಾನದಂಡದ ಅದರ ಮೇಲೆ ಹಣ ಹಾಕಿದಿರಿ..' ಅವರು ನಗುತ್ತಾ ಉತ್ತರಿಸಿದರು. 'ನಾನಾಗ ಚೆನ್ನೈ ನಗರಕ್ಕೆ ಯಾವುದೋ ಕೆಲಸಕ್ಕೆ ಹೋಗಿದ್ದೆ. ಸಮಯ ಸಿಕ್ಕಾಗ ಸಿನಿಮ ನೋಡುವುದು ನನ್ನ ಅಭ್ಯಾಸ.ಹಾಗೆಯೇ ಅಲ್ಲಿದ್ದ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದೆ. ನನಗೆ ಅದೆಷ್ಟು ಇಷ್ಟವಾಯಿತು ಎಂದರೆ ಈ ಚಿತ್ರವನ್ನು ನನಗೆ ಗೊತ್ತಿರುವ ಮಂದಿಗೆಲ್ಲಾ ತೋರಿಸಿದೆ. ಫೋನ್ ಮಾಡಿ ನನ್ನ ಗೆಳೆಯರಿಗೆಲ್ಲಾ ಚಿತ್ರ ನೋಡುವಂತೆ ಹೇಳಿದೆ. ಅದಾದ ನಂತರವೂ ಯಾಕೋ ತೃಪ್ತಿಯಾಗಲಿಲ್ಲ. ಈ ಕತೆಯನ್ನು ಇಡೀ ಕನ್ನಡ ಜನಕ್ಕೆ ತೋರಿಸಬೇಕು ಎನಿಸಿತು..ಹಾಗಾಗಿ ಅದನ್ನು ಕನ್ನಡಕ್ಕೆ ತಂದೆ. ನಾನು ಹಣಕಾಸಿನ ಲೆಕ್ಕಾಚಾರದಲ್ಲಿ ಸೋತಿರಬಹುದು. ಆದರೆ ಗುಣಮಟ್ಟದ ಲೆಕ್ಕಾಚಾರದಲ್ಲಿ ಗೆದ್ದಿದ್ದೇನೆ...' ಎಂದಿದ್ದರು.
ಹೌದು. ನನ್ನ ಪ್ರಕಾರ ಅದೇ ಸರಿ. ಯಾರೇ ಆಗಲಿ ಒಂದು ಕತೆಯನ್ನು ಅಥವಾ ಸಿನೆಮಾವನ್ನು ಕನ್ನಡಕ್ಕೆ ತರಬೇಕೆಂದರೆ ಅದು ಅಷ್ಟರ ಮಟ್ಟಿಗೆ ನಮ್ಮನ್ನು ಕಾಡಬೇಕು. ನೋಡಿದಾಕ್ಷಣ ಎಲ್ಲರಿಗೂ ಇದನ್ನು ತೋರಿಸಬೇಕು ಎನಿಸಬೇಕು. ಆನಂತರವೇ ಅದನ್ನು ಸಿನಿಮಾ ಅಥವ ರೀಮೇಕ್ ಮಾಡಬೇಕು.
ಆದರೆ ಅದು ಅಷ್ಟರ ಮಟ್ಟಿಗೆ ನಮ್ಮಲ್ಲಿ ನಡೆಯುವುದಿಲ್ಲ. ಇಲ್ಲಿ ಯಶಸ್ಸೊಂದೆ ಮೂಲ ಮಂತ್ರ. ಆ ಚಿತ್ರ ಯಶಸ್ವಿಯಾಗಿದೆ. ಅದನ್ನು ಕನ್ನಡೀಕರಿಸೋಣ..ಸಮರೋಪಾದಿಯಲ್ಲಿ ಕೆಲಸ ಮಾಡಿ ಸಂತೆಗೆ ಮೂರು ಮೊಳ ನೇಯ್ದು ಮಾರಲು ಇಡಬೇಕು. ಅಷ್ಟೆ ಸಾರ್ಥಕತೆ. ಹಾಗಾಗಿಯೇ ಎಷ್ಟೋ ಚಿತ್ರಗಳು ನಮ್ಮಲ್ಲಿ ತೋಪು ಬೀಳುತ್ತವೆ. ಅಲ್ಲಿನ ಭಾವ, ಗತಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ನಮ್ಮವರು ಬರೀ ಯಶಸ್ಸೇ ಮಾನದಂಡ ಎಂದು ಕೊಳ್ಳುತ್ತಾರೆ.ಅಲ್ಲಿ ಹಿಟ್ ಆಗಿದೆ. ಹಾಗಾದರೆ ಇಲ್ಲೂ ಆಗಬಹುದು ಎನ್ನುವ ತಪ್ಪು ಕಲ್ಪನೆಯಷ್ಟೇ ನಿರ್ಮಾಪಕರ ತಲೆಯಲ್ಲಿ ತುಂಬಿರುತ್ತದೆ. ಹಾಗೆಯೇ ನಿರ್ದೇಶಕನಿಗೆ ಹೊಸ ಕತೆ ಮಾಡುವ ಅದನ್ನು ಚಿತ್ರಕತೆ ಮಾಡುವ, ನಿರ್ಮಾಪಕರಿಗೆ ಕಲಾವಿದರಿಗೆ ಒಪ್ಪಿಸುವ ರಿಸ್ಕು ಕಡಿಮೆಯಾಗಿ ಹೇಗೋ ಒಂದು ಸಿಡಿ ಕೊಟ್ಟು ಚಿತ್ರ ತಯಾರಿಗೆ ನಿಂತುಬಿಡುತ್ತಾನೆ.
ಆದರೆ ಕೇವಲ ಲೆಕ್ಕಾಚಾರವೇ ಸಿನಿರಂಗವನ್ನು ಆಳುವುದಿಲ್ಲ. 
ಸುಮಾರು ವರ್ಷದ ಹಿಂದೆ ಇಲ್ಲಿಂದ ಚೆನ್ನೈ ಗೆ ಕೆಲಸದ ಮೇಲೆ ಒಬ್ಬ ನಿರ್ಮಾಪಕರು ಹೋದರಂತೆ. ಹೋದವರೇ ಅಲ್ಲಿನ ಹಂಚಿಕೆದಾರರನ್ನು ಭೇಟಿ ಮಾಡಿ ಯಾವ ಯಾವ ಚಿತ್ರ ಯಾವ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ವಿಚಾರಿಸಿದಾಗ ಒಂದು ತಮಿಳು ಚಿತ್ರ ಯರ್ರಾಬಿರ್ರಿ ಓಡುತ್ತಿರುವುದು ಗೊತ್ತಾಗಿದೆ. ತಕ್ಷಣವೇ ಹಿಂದೆ ಮುಂದು ನೋಡದ ನಿರ್ಮಾಪಕರು ಆ ನಿರ್ಮಾಪಕರನ್ನು ಹೇಗೋ ಭೇಟಿ ಮಾಡಿದ್ದೆ ಅದರ ಕನ್ನಡ ಅವತರಣಿಕೆಯ ಹಕ್ಕುಗಳನ್ನು ಕೊಡುವಂತೆ ದುಂಬಾಲು ಬಿದ್ದಿದ್ದಾರೆ.ನಮ್ಮ ನಿರ್ಮಾಪಕರಿಗೆ ಅದೆಲ್ಲಿ ಬೇರೇಯವರ ಪಾಲಾಗಿ ಬಿಡುತ್ತದೋ ಎಂಬ ಭಯ ಏನೋ ಒಂದು ಹಣಕ್ಕೆ ತೆಗೆದುಕೊಂಡು ಜಗತ್ತನ್ನು ಗೆದ್ದವರಂತೆ ಕರ್ನಾಟಕ್ಕೆ ಬಂದಿದ್ದಾರೆ.
ಬಂದ ಮೇಲೆ ಗೊತ್ತಾಗಿರುವ ವಿಷಯವೆಂದರೆ ಆ ಚಿತ್ರ ಕನ್ನಡದ ರೀಮೇಕ್ ಎಂಬುದು.
ಇನ್ನೂ ಒಂದು ಚಿತ್ರದ ಕತೆ ಹೆಚ್ಚು ಕಡಿಮೆ ಇದೆ ಆಗಿದೆ. ಕನ್ನಡದಲ್ಲಿ ಬಿಡುಗಡೆಯಾದ ಚಿತ್ರವೊಂದು ಆನಂತರ ತಮಿಳಿನಲ್ಲಿ ರೀಮೇಕ್ ಆಗಿ ಆನಂತರ ಮತ್ತೆ ಕನ್ನಡದಲ್ಲಿ ಬಂದದ್ದು ಗೊತ್ತೇ ಇದೆ.
ದಿನೇಶ್ ಬಾಬು ನಿರ್ದೇಶನದ ಎಸ್. ನಾರಾಯಣ್ ಅಭಿನಯದಲ್ಲಿ ಬಲಗಾಲಿಟ್ಟು ಒಳಗೆ ಬಾ ಎಂಬ ಚಿತ್ರವೊಂದು ಬಂದಿತ್ತು. ಇಂಗ್ಲಿಷ್ ಚಿತ್ರದ ಕನ್ನಡ ಅವತರಣಿಕೆ ಅದು ಎನ್ನಬಹುದು.ಅದನ್ನು ರಾಜಮೌಳಿ ಮರ್ಯಾದೆ ರಾಮಣ್ಣ ಹೆಸರಿನಲ್ಲಿ ತೆಲುಗಿಗೆ ತಂದರು. ಅದು ಯಶಸ್ವಿಯೂ ಆಯಿತು. ತಕ್ಷಣವೇ ಅದನ್ನು ಕೋಮಲ್ ಕನ್ನಡಕ್ಕೆ ಅದೇ ಹೆಸರಿನಲ್ಲಿ ತಂದರು. ಚಿತ್ರ ಸೋತಿದ್ದು ಬೇರೆ ಮಾತು.
ಸ್ಕೂಲ್ ಮಾಸ್ಟರ್ ಚಿತ್ರದ್ದು ಅದೇ ಕತೆ.ಬಿ.ಆರ್.ಪಂತುಲು ಅಭಿನಯದಲ್ಲಿ ತೆರೆಗೆ ಬಂದ ಈ ಚಿತ್ರ 1958 ರಲ್ಲೇ ಬಿಡುಗಡೆಯಾದ
ಈ ಚಿತ್ರ ಹಿಂದಿಯಲ್ಲಿ ಭಾಗ ಬಾನ್ ಆಗಿ ಬಂದರೆ ಅದನ್ನೇ ಮತ್ತೆ ಈ ಬಂಧನ ಮಾಡಿದರು. ಹಾಗೆ ನೋಡಿದರೆ ಮೂರು ಚಿತ್ರದಲ್ಲಿ ಕ್ಲೈಮಾಕ್ಸ್ ಬಿಟ್ಟರೆ ಎಲ್ಲವೂ ಅದೇ ಕತೆ.ಆದರೂ ಅದನ್ನು ರೀಮೇಕ್ ಮಾಡಿದರು ನಮ್ಮವರು.
ಇದೆಲ್ಲವನ್ನೂ ಗಮನಿಸಿದರೆ ಇವರೆಲ್ಲರ ದೃಷ್ಟಿ ಕತೆಯ ಮೇಲೆ ಬೀಳುವುದೇ ಇಲ್ಲ ಎಂಬುದು ಗೊತ್ತಾಗುತ್ತದೆ. ಬರೀ ಯಶಸ್ಸನ್ನೇ ನೋಡುತ್ತಾರೆ.ಚಿತ್ರ ಯಶಸ್ವಿಯಾಗಿದೆ, ಯಾಕೆ ಅದರ ಕತೆ ಏನಿತ್ತು..ಕನ್ನಡದಲ್ಲಿ ಅದು ಆಗಿಬರುತ್ತದಾ...ಎಂಬುದನ್ನೆಲ್ಲಾ ಪರಾಮರ್ಶಿಸಿ ಆನಂತರ ಅದನ್ನು ಕನ್ನಡೀಕರಿಸಿದರೆ ಅದು ಸರಿ. ಅಲ್ಲಿ ಯಶಸ್ವಿಯಾಯಿತು ಎಂಬುದನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ ಅದೆಷ್ಟರ ಮಟ್ಟಿಗೆ ಸರಿ..?
ಮೊನ್ನೆ ಮೊನ್ನೆ ಇಂಗ್ಲಿಷ್ ಚಿತ್ರ ಬ್ಲೇರ್ ವಿಚ್ ಪ್ರೊಜೆಕ್ಟ್ ನ ಕನ್ನಡ ರೂಪವಾದ 6-5=2 ಬಿಡುಗಡೆಯಾಗಿ ಯಶಸ್ವಿಯಾದದ್ದು ಗೊತ್ತೇ ಇದೆ. ಬಹುಶ ಕನ್ನಡದ ಮಟ್ಟಿಗೆ ಇತ್ತೀಚಿಗೆ ಬರೀ ಹೊಸತನ, ನವ್ಯ ನಿರೂಪಣೆಯಿಂದ ಯಶಸ್ವಿಯಾದ ಚಿತ್ರವದು. ಈಗ ಅದನ್ನು ಹಿಂದಿ ರೀಮೇಕ್ ಮಾಡಲು ಹೊರಟಿರುವುದು ಸರಿ. ಆದರೆ ಅದರ ರೀಮೇಕ್ ಮಾಡಹೊರಟವರಿಗೆ ಅದೇ ತರಹದ ಚಿತ್ರವೊಂದು ಈಗಾಗಲೇ ಹಿಂದಿಯಲ್ಲಿ ಬಂದಿತ್ತು ಎಂಬುದು ಗೊತ್ತಿರಬಹುದಾ..? ಗೊತ್ತಿದ್ದೂ ತಲೆ ಕೆಡಿಸಿಕೊಳ್ಳದೆ ರೀಮೇಕ್ ಮಾಡುತ್ತಿದ್ದಾರಾ ಎಂಬುದೇ ಪ್ರಶ್ನೆ.
ನಿರೂಪಣೆ ಹೊಸತನವನ್ನು ಮೆಚ್ಚಿ ಅದನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದರೆ ಅದಕ್ಕೆ ಶಹಬ್ಬಾಸ್ ಹೇಳಬಹುದು. ಆದರೆ ಇಲ್ಲಿ ಗೆದ್ದ್ದಿದೆ ಎಂಬುದಕ್ಕೆ ಹಿಂದೆ ಮುಂದೆ ನೋಡದೆ ರೀಮೇಕ್ ಮಾಡಲು ಒಪ್ಪಿರಬಹುದಾ..? 
2012 ರಲ್ಲಿ ಬಿಡುಗಡೆಯಾದ ಈ ಹಿಂದಿ ಚಿತ್ರದ ಹೆಸರು ?: ಎ ಕ್ವೆಶ್ಚನ್ ಮಾರ್ಕ್. ಏಳು ಜನ ವಿದ್ಯಾರ್ಥಿಗಳು ಒಂದು ಕಾಲೇಜ್ ಪ್ರೊಜೆಕ್ಟ್ ಗಾಗಿ ಮೂವಿ ಶೂಟ್ ಮಾಡಲು ಹೋಗುತ್ತಾರೆ. ಅವರು ವಾಪಸ್ಸಾಗುವುದಿಲ್ಲ. ಸುಮಾರು ದಿನದ ನಂತರ ಅವರ ಕ್ಯಾಮೆರಾ ಮುದ್ರಿತ ಟೇಪ್ ಸಿಗುತ್ತದೆ. ಅದರಲ್ಲಿದ್ದನ್ನೆ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗಿದೆ ಎಂದೇ ಹೆಸರು ಮಾಡಿಕೊಂಡು ತೆರೆಗೆ ಬಂದ ಈ ಚಿತ್ರದ ನಿರ್ದೇಶಕರು ಯಶ್ ದೇವ್ ಮತ್ತು ಆಲಿಸಿನ್ ಪಟೇಲ್. ಭಾರತದ ಮೊತ್ತ ಮೊದಲ 'ಫೌಂಡ್ ಫೂಟೇಜ್' ಫಿಲಂ ಎಂದೇ ಹೆಸರಾದ ಈ ಚಿತ್ರ ಹೇಳ ಹೆಸರಿಲ್ಲದಂತೆ ಸೋತದ್ದು ಬೇರೆ ಮಾತು.

ಒಟ್ಟಿನಲ್ಲಿ ರೀಮೇಕ್ ಎನ್ನುವುದು ತಪ್ಪೋ ಸರಿಯೋ. ಅದು ಬೇರೆ ಮಾತು. ಒಂದು ಭಿನ್ನವಾದ ವಿಶಿಷ್ಟವಾದ ಕತೆಯನ್ನು ನಮ್ಮಲ್ಲಿಗೆ ತರುವುದು ಒಳ್ಳೆಯದೇ. ಆದರೆ ಸುಖಾ ಸುಮ್ಮನೆ ಅಲ್ಲಿ ಗೆದ್ದಿದೆ ಎಂದಾಕ್ಷಣ ಅದರ ಕತೆ ಇನ್ನಿತರ ವಿಷಯದ ಬಗ್ಗೆ ಯೋಚಿಸದೆ ಕಣ್ಮುಚ್ಚಿಕೊಂಡು ಕನ್ನಡಕ್ಕೆ ತರುವುದು ನಮ್ಮಲ್ಲಿನ ಸೋಮಾರಿತನವನ್ನು ತೋರಿಸುತ್ತದೆ ಅಲ್ಲವೇ.ಅಥವಾ ನಮ್ಮಲ್ಲಿನ ಆತ್ಮ ವಿಶ್ವಾಸದ ಕೊರತೆಯನ್ನು ನಮ್ಮ ಕತೆಯಲ್ಲಿನ ಭರವಸೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎನಿಸುವುದಿಲ್ಲವೇ?

Tuesday, February 4, 2014

ಉದ್ದವನ್ನು ತುಂಡರಿಸುತ್ತಾ...

ಚಿತ್ರಕರ್ಮಿಗಳು ಸಿನಿಮಾ ಮಾಡುವಾಗ ಎದುರಾಗುವ ಸಮಸ್ಯೆ ಅದರ ಅವಧಿಯದ್ದು. ಅಂದರೆ ಬರಹದ ರೂಪದ ಸಿನಿಮಾ ದೃಶ್ಯ ರೂಪಕ್ಕೆ ಬಂದಾಗ ಎಷ್ಟು ಉದ್ದ ಬರುತ್ತದೆ, ಎಷ್ಟು ಉದ್ದ ಮಾಡಿದರೆ ಸರಿಯಾಗುತ್ತದೆ ಎಂಬುದನ್ನು ಅಂದಾಜು ಮಾಡುವುದು ಅಷ್ಟು ಸುಲಭವಲ್ಲ. ಮೊದಲಿಗೆ ಒಂದು ಕತೆಯನ್ನು ಮನಸ್ಸಿನಲ್ಲಿ ಅಂದುಕೊಂಡ ನಂತರ ಅದರ ಚಿತ್ರಕತೆ ರಚಿಸಿದ ನಂತರ ಅದು ಎಷ್ಟು ಅವಧಿಯ ಚಿತ್ರ ಆಗಬಹುದು ಎಂಬ ಅಂದಾಜು ಮಾಡಲು ಒಬ್ಬ ನಿರ್ದೇಶಕ ಮುಂದಾಗುತ್ತಾನೆ. ಮೊದಲೆಲ್ಲಾ ಐದು ಹಾಡು ನಾಲ್ಕು ಫೈಟ್ ಗಳಿದ್ದರೆ ಮುಕ್ಕಾಲು ಘಂಟೆ ಎಗರಿ ಹೋಗುತ್ತಿತ್ತು. ಆನಂತರ ಉಳಿದ ಒಂದು ಮುಕ್ಕಾಲು ಘಂಟೆಗೆ ಕತೆಯನ್ನು ಹೆಣೆಯ ಬೇಕಿರುತ್ತಿತ್ತು. 
ನನಗೆ ಗೊತ್ತಿರುವಂತೆ ಪ್ರತಿ ದೃಶ್ಯವನ್ನು ರಚಿಸಿದ ಮೇಲೆ ಅದರ ಅಂತಿಮ ಪ್ರತಿ ಬರೆದಾದ ನಂತರ ಸ್ಟಾಪ್ ಕ್ಲಾಕ್ ಇಟ್ಟುಕೊಂಡು ಆ ದೃಶ್ಯವನ್ನು ಸಂಪೂರ್ಣ ಶಾಟ್ಸ್ ಜೊತೆಗೆ ಹಿನ್ನೆಲೆ ಸಂಗೀತವನ್ನು ಸೇರಿಸಿಕೊಂಡು ಕಲ್ಪಿಸುತ್ತಾ ನಟಿಸಿಕೊಂಡು ಅಂದಾಜು ಮಾಡುತ್ತೇವೆ. ಆಗ ಆ ದೃಶ್ಯ ಎಷ್ಟು ಉದ್ದ ಬರಬಹುದು ಎಂಬ ಅಂದಾಜು ನಮಗೆ ಸಿಕ್ಕಿ ಬಿಡುತ್ತದೆ. ಆದರೆ ಚಿತ್ರೀಕರಣದ ಸಮಯದಲ್ಲಿ ಮತ್ತು ಚಿತ್ರೀಕರಣದ ನಂತರ ಅದು ಗಮನಾರ್ಹ ಬದಲಾವಣೆ ಕಂಡು ಬಿಡುತ್ತದೆ. ಅದಕ್ಕೆ ನಿರೂಪಣೆಯ ಗತಿ ಮತ್ತು ಕಲಾವಿದರ ಅಭಿನಯ ಶೈಲಿ ಕೂಡ ಕಾರಣವಾಗುತ್ತದೆ. ಉದಾಹರಣೆಗೆ ಒಂದು ಪೇಜ್ ಉದ್ದದ್ದ ಸಂಭಾಷಣೆ ಇರುವ ದೃಶ್ಯವೊಂದನ್ನು ರಘುವರಣ್, ಸಾಯಿಕುಮಾರ್ ಇಬ್ಬರಿಗೂ ಕೊಟ್ಟರೇ ಅವರು ಅವರದೇ ಶೈಲಿಯಲ್ಲಿ ಅಭಿನಯಿಸಿದರೆ ಅದರ ಉದ್ದ ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸ ಹೊಂದುತ್ತದೆ. ಸಾಯಿಕುಮಾರ್ ಇರುವ ಅಷ್ಟೂ ಸಂಭಾಷಣೆಯನ್ನು ಪಟಪಟನೆ ಉದುರಿಸಿ ಅಥವಾ ಅಬ್ಬರಿಸಿ ಬಾಯೊರೆಸಿಕೊಂಡು ಕಣ್ಣು ಕೆಕ್ಕರಿಸಿಕೊಂಡು ನಿಂತು ಬಿಡುತ್ತಾರೆ. ಆದರೆ ರಘುವರಣ್ ಹಾಗಲ್ಲ. ಒಂದೊಂದೇ ಮಾತನ್ನು ಅಳೆದು ತೂಗಿ ಗುಣಿಸಿ ಭಾಗಿಸಿ ಎದುರಿರುವವನು ಕೇಳಿಸಿಕೊಳ್ಳುತ್ತಿದ್ದಾನೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುವವರಂತೆ ಆಗಾಗ ಅವನ ಮುಖ ನೋಡುತ್ತಾ ನಿಧಾನಕ್ಕೆ ಅದು ಯಾವುದೇ ವಿಷಯವಾದರೂ ತಲೆಕೆಡಿಸಿಕೊಳ್ಳದೆ ಸಾವಧಾನ ಚಿತ್ತರಾಗಿ ಹೇಳುತ್ತಾರೆ. ಸಾಯಿಕುಮಾರ್ ಒಂದೇ ನಿಮಿಷಕ್ಕೆ ಹಿನೆಲೆ ಸಂಗೀತ, ಪರಿಣಾಮ ಜೊತೆಗೆ ಅಷ್ಟನ್ನು ಮುಗಿಸಿದ್ದರೆ, ರಘುವರಣ್ ಗೆ ಎರಡೂವರೆ ನಿಮಿಷವಾದರೂ ಬೇಕಾಗುತ್ತದೆ. 
ಹಾಗೆಯೇ ಕೆಲವು ಚಿತ್ರಗಳು ಮಂದಗತಿಯನ್ನು ಬೇಡುತ್ತವೆ. ಅಥವಾ ನಿರ್ದೇಶಕರ ಕಲ್ಪನೆ ಮತ್ತು ಸೃಜನ ಶೀಲತೆಯ ನಿರೂಪಣೆಯಲ್ಲಿ ಮಂದಗತಿ ಇರುತ್ತದೆ. ಆವಾಗ ಬರಹದ ಪ್ರತಿ ಹಿಡಿದುಕೊಂಡು ನಿರ್ದೇಶಕನನ್ನು ಹೊರತುಪಡಿಸಿ ಬೇರೆಯವರು ಅಂದಾಜು ಮಾಡುವುದು ಕಷ್ಟ. ಉದಾಹರಣೆಗೆ ಹಿಂದಿಯಲ್ಲಿ ಬಂದ ಲೂಟೆರ ಚಿತ್ರವನ್ನು ಗಮನಿಸಿದರೇ ಗೊತ್ತಾಗುತ್ತದೆ. ಸುಮ್ಮನೆ ಕುಳಿತು ಅದರ ಸ್ಕ್ರಿಪ್ಟ್ ಅನ್ನು ನೋಡಿಕೊಂಡು ನಾವು ರಚಿಸಿದರೂ ಅದು ಬರಹದ ರೂಪದಲ್ಲಿ ಮಾಮೂಲಿ ಚಿತ್ರಗಳಿಗಿಂತ ಕಡಿಮೆ ಪುಟಗಳಲ್ಲಿ ಮುಗಿದುಹೋಗುತ್ತದೆ.
ನಮ್ಮ ಚಿತ್ರದ ಬಗ್ಗೆ ಮಾತಾಡುವುದಾದರೆ ಮೊದಲಿಗೆ ಬರಹದ ರೂಪದಲ್ಲಿದ್ದ ಸಿನೆಮಾ ಎರಡು ಘಂಟೆ ಹತ್ತು ನಿಮಿಷ ಬರುತ್ತದೆ ಎಂದು ಅಂದಾಜು ಮಾಡಿದ್ದೆ. ಸ್ಟಾಪ್ ಕ್ಲಾಕ್ ಹಾಕಿಕೊಂಡು ರೂಮಿನ ಬಾಗಿಲು ಹಾಕಿಕೊಂಡು ಇಡೀ ದೃಶ್ಯವನ್ನು ಕಣ್ಣಮುಂದೆ ನಡೆಯುತ್ತಿರುವಂತೆ ಶಾಟ್ ವಿಭಜನೆಯ ಜೊತೆಗೆ ಕಲ್ಪಿಸಿ ಪಾತ್ರಗಳ ಸಂಭಾಷಣೆಯನ್ನು ಒಪ್ಪಿಸಿಕೊಂಡು ಅಂದಾಜು ಮಾಡಿದ್ದೆ. ನನ್ನ ಪ್ರಕಾರ ಅದು ಕರಾರುವಕ್ಕಾಗಿ ಅಷ್ಟೇ ಸಮಯ ಬರುತ್ತದೆ ಎನಿಸಿತ್ತು. ಆದರೆ ಚಿತ್ರೀಕರಣದ ನಂತರ ಸಂಕಲನ ಮಾಡಿ ಚಿತ್ರ ನೋಡಿದಾಗ ನನ್ನ ಅಂದಾಜು ತಲೆಕೆಳಗಾಗಿತ್ತು . ಚಿತ್ರ ಅನಾಮತ್ತು ಎರಡು ಘಂಟೆ ಮೂವತ್ತಾರು ನಿಮಿಷ ಬಂದಿತ್ತು. ಅಂದರೆ ಇಪ್ಪತ್ತು ನಿಮಿಷ ಹೆಚ್ಚಿಗೆ ಬಂದಿತ್ತು. ನಾನು ಅಂದುಕೊಂಡಷ್ಟನ್ನೇ ಅಂದುಕೊಂಡ ಹಾಗೆಯೇ ಚಿತ್ರೀಕರಿಸಿದ್ದೆ. ಆದರೂ ಇಪ್ಪತ್ತಾರು ನಿಮಿಷ ಹೆಚ್ಚಿತ್ತು. ಅದೂ ಹಾಡು ಇಲ್ಲದೆ. ಈಗ ನಮಗೆ ಪೀಕಲಾಟಕ್ಕಿಟ್ಟುಕೊಂಡದ್ದು ಎಲ್ಲಿ ಯಾವುದನ್ನು ಕತ್ತರಿಸಬೇಕು ಎಂಬುದು. ಪೂರ್ತಿ ಎರಡು ಘಂಟೆ ಮೂವತ್ತಾರು ನಿಮಿಷವನ್ನು ಪರದೆಗೆ ತಂದುಬಿಡೋಣ ಎಂದರೆ ನಮ್ಮವರು ಇಲ್ಲ...ಅನಗತ್ಯ ಲ್ಯಾಗ್ ಆಗುತ್ತದೆ. ಜನಕ್ಕೆ ಬೋರ್ ಹೊಡೆಸಬಹುದು ಎಂಬರ್ಥದ ಮಾತುಗಳನ್ನು ಆಡಿದರು.
ಹಾಗೆ ನೋಡಿದರೆ ಮೊದಲೆಲ್ಲಾ ನೆಗೆಟಿವ್ ನಲ್ಲಿ ಶೂಟ್ ಮಾಡುವ ಸೆನ್ಸಾರ್ ಗೆ ಹದಿಮೂರು ಸಾವಿರದ ಚಿಲ್ಲರೆ ಅಡಿಗಳಷ್ಟು ಉದ್ದವಿರಲೇ ಬೇಕಿತ್ತು. ಎಷ್ಟೋ ಚಿತ್ರಗಳು ಚಿತ್ರೀಕರಣವಾಗಿ ಅದರ ಉದ್ದ ಸಾಲದೇ ಮತ್ತೆ ಒಂದೆರೆಡು ದೃಶ್ಯವನ್ನೂ ಹಾಡನ್ನೂ ಸೇರಿಸಿ ಉದ್ದವನ್ನು ಸರಿ ಪಡಿಸುತ್ತಿದ್ದರು. ನನಗೆ ಗೊತ್ತಿರುವಂತೆ ಒಂದು ಚಿತ್ರದ ಉದ್ದ ಕಡಿಮೆಯಾದಾಗ ಅದಕ್ಕೆ ಒಂದು ಹಾಡನ್ನು ಕೈಗೆ ಸಿಕ್ಕಿದ ಕ್ಯಾಮೆರಾ ದಲ್ಲಿ ಚಿತ್ರಿಸಿ ಸೇರಿಸಲಾಗಿತ್ತು. ಆಗಲೂ ಕಡಿಮೆಯಾದಾಗ ಆ ಚಿತ್ರತಂಡ ಚಿತ್ರದಲ್ಲಿದ್ದ ಓಕೆ ಆಗದ ಶಾಟ್ಸ್ ಗಳನ್ನೂ ಚಿತ್ರದ ಕೊನೆಯಲ್ಲಿ ಸೇರಿಸಿ ಅದಕ್ಕೆ ಮೇಕಿಂಗ್' ಎಂಬ ಬರಹ ಹಾಕಿ ಅದನ್ನೇ ಉಲ್ಪಾ ಪಲ್ಟಾ ತಿರುಗಿಸಿ ಹಿಗ್ಗಿಸಿದ್ದರು.
ಆದರೆ ನಮ್ಮ ಚಿತ್ರರಂಗದ ಮಟ್ಟಿಗೆ ಈ ಉದಾಹರಣೆ ತುಂಬಾ ಕಡಿಮೆ ಎನ್ನಬಹುದು. ಒಬ್ಬ ನಿರ್ದೇಶಕ ಚಿತ್ರೀಕರಣ ಸ್ಥಳದಲ್ಲಿ ಹೇಗೆ ಬೇಕೋ ಹಾಗೆಲ್ಲಾ ಶಾಟ್ಸ್ ತೆಗೆಯಲು ಮುಂದಾಗಿಬಿಡುತ್ತಾನೆ. ಅಲ್ಲಿಗೆ ಹೋಗುವವರೆಗೆ ಒಂದು ಮನಸ್ಸಿನಲ್ಲಿ ಇಷ್ಟನ್ನು ಚಿತ್ರಿಸಬೇಕು ಎಂದೇ ಕೊಂಡೆ ಹೋಗುತ್ತಾನಾದರೂ ಅಲ್ಲಿ ಹೋದ ಮೇಲೆ ತಲೆ ಎಲ್ಲೆಲ್ಲೋ ಓಡಿ ಅಗತ್ಯವಿರಲಿ ಇಲ್ಲದಿರಲಿ ಚಿತ್ರಿಸಿಬಿಡುತ್ತಾನೆ. ಬೇಕಾದರೆ ಬಳಸಿಕೊಂಡರಾಯಿತು..ಇಲ್ಲದಿದ್ದರೆ ಬೇಡ..ಮತ್ತೆ ಇದೆ ಜಾಗಕ್ಕೆ ಬರಲು ಸಾಧ್ಯವಾಗುತ್ತದೆಯೇ ಎಂಬ ಸಮರ್ಥನೆ ಅವನದ್ದಾಗಿರುತ್ತದೆ.
ಆದರೆ ನಾನು ತಿಳಿದ ಮಟ್ಟಿಗೆ ಇದು ಹಾಲಿವುಡ್ ನಲ್ಲಿ ಕಡಿಮೆಯೇ. ಯಾಕೆಂದರೆ ಅಲ್ಲಿ ವಿಸ್ತೃತವಾದ ಸ್ಟೋರಿಬೋರ್ಡ್ ಇರುತ್ತದೆ. ಇಷ್ಟನ್ನೇ ಹೀಗೆಯೇ ಚಿತ್ರಿಸಬೇಕು ಎಂಬುದು ಮೊದಲೇ ಕರಾರುವಕ್ಕಾಗಿರುತ್ತದೆ. ಹಾಗಾಗಿ ಅಲ್ಲಿ ಅಷ್ಟಾಗಿ ಸಮಸ್ಯೆಯಾಗುವುದಿಲ್ಲ.
ನಮ್ಮಲ್ಲಿ ಎಷ್ಟೋ ಚಿತ್ರಗಳು ಮೊದಲ ಹಂತದ ಸಂಕಲನವಾದ ಮೇಲೆ ನೋಡಿದರೆ ನಾಲ್ಕು ಘಂಟೆಗೂ ಹೆಚ್ಚು ಬಂದು ಬಿಟ್ಟಿರುತ್ತದೆ. ಅದರಲ್ಲೂ ಸ್ಟಾರ್ ಸಿನೆಮಾಗಳು ಉದ್ದುದ್ದ ಬರುತ್ತವೆ. ಅದರಲ್ಲಿ ಬಿಲ್ಡ್ ಅಪ್ ಶಾಟ್ಸ್ ಗಳು ಎಕ್ಸ್ಟ್ರಾ ಶಾಟ್ಸ್ ಗಳು...ಆನಂತರ ಟ್ರಿಮ್ಮಿ೦ಗ್ ಗೆ ಕುಳಿತುಕೊಂಡರೆ ಮೊದಲಿಗೆ ಶಾಟ್ಸ್ ಲೆಕ್ಕದಲ್ಲಿ ಕತ್ತರಿಸುತ್ತಾ ಕೊನೆ ಕೊನೆಗೆ ದೃಶ್ಯವನ್ನೇ ಎಗರಿಸಬೇಕಾಗುತ್ತದೆ. ಕೊನೆಗೂ ಅಂತೂ ಇಂತೂ ಅಂತಿಮ ಪ್ರತಿ ಮೂರು ಘಂಟೆಯಷ್ಟು ಬಂದರೆ ಇನ್ನೇನೂ ಕತ್ತರಿಸಲು ಸಾಧ್ಯವಿಲ್ಲ ಎನಿಸಿ ಬಿಡುಗಡೆ ಮಾಡಿಬಿಡುತ್ತಾರೆ. ಆದರೆ ಬಿಡುಗಡೆಯಾದ ಮೇಲೆ ಮತ್ತೆ ಚಿತ್ರ ಎಳೆತ ಎನಿಸಿದರೆ ಆಗ ಮತ್ತಷ್ಟು ಕತ್ತರಿಸಬೇಕಾಗುತ್ತದೆ. ಇತ್ತೀಚಿಗೆ ಬೃಂದಾವನ, ಮಾತ್ರನ್. ಜಿಲ್ಲಾ, ನೆನೋಕ್ಕಡಿನೆ ಮುಂತಾದ ಚಿತ್ರಗಳು ಹದಿನೈದು ನಿಮಿಷಗಳಷ್ಟು ಕಡಿತಗೊಂದಿದ್ದವು. ಕೆಲವು ಚಿತ್ರಗಳಂತೂ ಆರುಘಂಟೆಗಳಷ್ಟು ಉದ್ದವಿದ್ದದ್ದು , ನಾಲ್ಕು ಘಂಟೆ ಉದ್ದವಿದ್ದದ್ದು ನಮ್ಮಲ್ಲಿ ಉದಾಹರಣೆಗಳಿವೆ.
ಏಕೆ ಹೀಗೆ ಆಗುತ್ತವೆ.? ಎಂಬ ಪ್ರಶ್ನೆ ಕುರಿತು ಹಲವಾರು ಸಾರಿ ಯೋಚಿಸಿದ್ದೇನೆ. ಯಾಕೆಂದರೆ ಒಂದು ಚಿತ್ರದ ಪೂರ್ವ ಯೋಜನೆ ಬರಹದ ಹಂತದಲ್ಲಿ ನಿರ್ದೇಶಕ ಇರದೇ ಇದ್ದರೇ ಅಥವಾ ನಿರ್ದೇಶಕ ಚಿತ್ರದ ಮೂಡ್ ಅಥವಾ ಭಾವವನ್ನು ಅರಿತುಕೊಳ್ಳದಿದ್ದರೆ ಈ ರೀತಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಕೈಗೆ ಸಿಕ್ಕಿದ ದೃಶ್ಯದ ಬರಹದ ಪ್ರತಿಯನ್ನು ಸಂಕಲನದಲ್ಲಿ ತೊಂದರೆಯಾಗದಂತೆ ಶಾಟ್ಸ್ ವಿಭಜಿಸಿ ನಿರ್ದೇಶನ ಮಾಡಿದರೆ ಅದು ನಿರ್ದೇಶನವೇ ಅಲ್ಲ. ಇಷ್ಟಕ್ಕೂ ಸಿನಿಮಾದಲ್ಲಿ ಶಾಟ್ಸ್ ದೃಶ್ಯವನ್ನು ಚಿತ್ರೀಕರಿಸಲು ಉಪಯೋಗವಾಗುವಂತಹದ್ದು. ಆದರೆ ಚಿತ್ರದ ಭಾವಕ್ಕೆ ಯಾವ ಶಾಟ್ಸ್ ಇಟ್ಟರೆ ಪರಿಣಾಮಕಾರಿ ಎಲ್ಲಿಗೆ ಒಂದು ಶಾಟ್ಸ್ ಬದಲಿಸಿದರೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಚಿತ್ರದ ಒಟ್ಟಾರೆ ಆಶಯಕ್ಕೆ ಮತ್ತು ಗತಿಗೆ ಪೂರಕವಾಗಿರುತ್ತದೆ ಎಂಬುದನ್ನು ಅರಿತುಕೊಂಡು ಮಾಡುವುದು ನಿರ್ದೇಶನ ಎನ್ನಬಹುದು. ಅದರ ಹೊರತಾಗಿ ಸುಮ್ಮನೆ ಒಂದಷ್ಟು ಶಾಟ್ ವಿಭಜಿಸಿದರೆ ಭಾವ ಮನಸ್ಸಿಗೆ ತಟ್ಟುವುದಿಲ್ಲ. ಸಿನೆಮಾದಲ್ಲಿ ಗತಿ ಎಂಬುದು ಹೆಚ್ಚು ಅಗತ್ಯವಾದ ಅಂಶ. ಯಾಕೆಂದರೆ ಒಂದು ಥ್ರಿಲ್ಲರ್ , ಪತ್ತೆಧಾರಿ, ಭಯಾನಕ,.ಹಾಸ್ಯ ಹೀಗೆ ಆಯಾ ವಿಭಾಗಕ್ಕೆ ಅದರದೇ ಆದ ನಿರೂಪಣಶೈಲಿ ಇರುತ್ತದೆ. ಅದ್ಯಾವುದನ್ನೂ ಲೆಕ್ಕಿಸದೆ ಸುಮ್ಮನೆ ಶಾಟ್ ವಿಭಜನೆ ಮಾಡಿ ಚಿತ್ರೀಕರಿಸಿದರೆ ಉದ್ದ ಅಳತೆ ಸಿಗದೇ ಸಿನಿಮಾ ಏನೇನೋ ಆಗುತ್ತದೆ.
ಹೆಚ್ಚಾಗಿ ಕಿರುತೆರೆ ದೈನಂದಿನ ಧಾರಾವಾಹಿಗಳಲ್ಲಿ ಈ ಕೆಲಸವಾಗುತ್ತದೆ. ಎಲ್ಲೋ ಕುಳಿತು ಚಿತ್ರಕತೆ ಸಂಭಾಷಣೆ ಬರೆಯುವ ಬರಹದ ರೂಪ ಬೆಳಿಗ್ಗೆ ನಿರ್ದೇಶಕನ ಕೈ ಸೇರುತ್ತದೆ. ಅದನ್ನು ಸಂಜೆಯವರೆಗೆ ಚಿತ್ರಿಸಿಕೊಡಬೇಕಾಗುತ್ತದೆ. ಇತ್ತೀಚಿಗೆ ನಾನೊಂದು ಧಾರಾವಾಹಿಗೆ ಸಂಚಿಕೆ ನಿರ್ದೇಶಕನಾಗಿದ್ದೆ. ನನಗೆ ಬೆಳಿಗ್ಗೆ ಪ್ರತಿ ದೊರೆಯುತ್ತಿತ್ತು. ಕಲಾವಿದರಿರುತ್ತಿದ್ದರು. ಇದೇಕೆ, ಇದೇನು, ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರವೂ ಇರುತ್ತಿರಲಿಲ್ಲ. ಅದಕ್ಕೆ ಸಮಯವೂ ಇರುತ್ತಿರಲಿಲ್ಲ. ಆ ದಿನದಲ್ಲಿ ಅಷ್ಟನ್ನೂ ಹೆಚ್ಚು ಚಿತ್ರಿತ ಅವಧಿಯ ಜೊತೆಗೆ ಚಿತ್ರಿಸಿಕೊಡಬೇಕಾಗುತ್ತಿತ್ತು. ನಾನದನ್ನು ಮಾಡಿದೆ ಕೂಡ. ಅದು ಅಷ್ಟು ಖುಷಿ ಎನಿಸದಿದ್ದರೂ ಅದರದೇ ಆದ ಪ್ರಪಂಚದಲ್ಲಿ ಅದು ಅವಶ್ಯಕವೂ ಆಗಿತ್ತು.
ಇಷ್ಟಕ್ಕೂ ಚಿತ್ರಗಳಲ್ಲಿ ಇಷ್ಟೇ ಅವಧಿಯಿರಬೇಕು ಎನ್ನುವ ಕಾನೂನು ಇಲ್ಲ. ಹಾಲಿವುಡ್ ರಂಗದಲ್ಲಿ ಒಂದೂವರೆ ಘಂಟೆಯಿಂದ ಚಿತ್ರದ ಕತೆ ಬೇಡುವಷ್ಟು ಅವಧಿಯಿರುತ್ತದೆ. ಟೈಟಾನಿಕ್ ಮೂರು ಘಂಟೆ ಹದಿನಾರು ನಿಮಿಷ, ಶಿಂಡ್ಲರ್ ಲಿಸ್ಟ್ ಮೂರುವರೆ ಘಂಟೆ ಹೀಗೆ. ಬರ್ನಾರ್ಡೊ ಬಾರ್ಟುಲೂಸಿ ನಿರ್ದೇಶನದ 1900 ಐದು ಘಂಟೆ, ವಾರ ಅಂಡ್ ಪೀಸ್ ಎಂಟುಘಂಟೆ ಅವಧಿಯದ್ದಾಗಿವೆ. ಆದರೆ ಅವುಗಳು ಬೋರ್ ಎನಿಸುವುದಿಲ್ಲ. ಯಾಕೆಂದರೆ ಚಿತ್ರೀಕರಿಸುವಾಗಲೇ ಅವರಿಗೆ ಚಿತ್ರದ ಅವಧಿಯ ಅಂದಾಜು ಇರುತ್ತದೆ. ಹಾಗಾಗಿ ತೀರಾ ಉದ್ದವಾಗಿ ಆನಂತರ ಕತ್ತರಿಸುವ ಪ್ರಮೇಯ ಬರುವುದಿಲ್ಲವೇನೋ?
ಒಟ್ಟಿನಲ್ಲಿ ಅಂದುಕೊಂಡ ಅವಧಿಗಿಂತ ಎರಡು ಪಟ್ಟು ಮೂರು ಪಟ್ಟು ಉದ್ದದ ಚಿತ್ರಗಳು ನಮ್ಮಲ್ಲೇ ಜಾಸ್ತಿ ಇರಬಹುದೇನೋ ಅನ್ನುವ ಅನುಮಾನ ನನ್ನದು. ಯಾಕೆಂದರೆ ನನಗೆ ಗೊತ್ತಿರುವಂತೆಯೇ ಎಷ್ಟೋ ಯಶಸ್ವೀ ನಿರ್ದೇಶಕರ ಯಶಸ್ವೀ ಚಿತ್ರಗಳು ನೀಳ ಚಿತ್ರಗಳಾಗಿದದ್ದು ಆನಂತರ ಚಿಕ್ಕದಾದದ್ದು ಅದನ್ನು ಕಡಿತಗೊಳಿಸಲು ಒದ್ದಾಡಿದ್ದು ಎಷ್ಟೋ ಅಂಶಗಳನ್ನು ಕಿತ್ತೆ ಹಾಕಿದ್ದು ನನಗೆ ಗೊತ್ತಿದೆ.

Thursday, January 30, 2014

ರೀಮೇಕ್...1

ಪ್ರತಿ ಸಾರಿ ರೀಮೇಕ್ ಚಿತ್ರಗಳನ್ನು ನೋಡಿದ ಮೇಲೆ ನನಗೆ ಹೀಗೆಯೇ ಯೋಚನೆ ಕಾಡತೊಡಗುತ್ತದೆ. ಸುಮ್ಮನೆ ಈ ಚಿತ್ರ ಎಲ್ಲೂ ಬಂದಿಲ್ಲ, ಇದರ ಬಗ್ಗೆ ನಾನು ಓದೂ ಇಲ್ಲ, ನೋಡೂ ಇಲ್ಲ  ಎಂದೆಲ್ಲಾ ಮನಸ್ಸಿನಲ್ಲಿ ಅಂದುಕೊಂಡು ಖಾಲಿ ತಲೆಯಲ್ಲಿಯೇ ಸಿನಿಮಾ ನೋಡುವ ಪ್ರಯತ್ನ ಮಾಡುತ್ತೇನೆ. ಆದರೂ ನೋಡಿಯಾದ ಮೇಲೆ ಅಯ್ಯೋ ಅದೇ ಚೆನ್ನಾಗಿತ್ತಲ್ಲ ಎನಿಸುತ್ತದೆ. ಅದೇ ರೀತಿ ಕೆಲವು ಚಿತ್ರದ ಕನ್ನಡ ಅವತರಣಿಕೆ ಎಂದಾಗ ಅದರಲ್ಲಿನ ಅದ್ಭುತವಾಗಿದ್ದ ಅಂಶಗಳನ್ನು ಕನ್ನಡದಲ್ಲೂ ನೋಡುವ ಖುಷಿಗೆ ಚಿತ್ರ ಮಂದಿರಕ್ಕೆ ಹೊಕ್ಕಿರುತ್ತೇನೆ. ಅದು ಕೆಲವೊಮ್ಮೆ ಕೈ ಕೊಡುತ್ತವೆ.
ನಾನು ಚಿನ್ನತಂಬಿ, ಚಿಂಟಿ, ಅನಾರಿ ರಾಮಾಚಾರಿ ನಾಲ್ಕು ಚಿತ್ರಗಳನ್ನು ನೋಡಿದ್ದೇನೆ. ರವಿಚಂದ್ರನ್, ಶಿವಾಜಿ ಪ್ರಭು, ವೆಂಕಟೇಶ್ ಎಲ್ಲರೂ ಕಣ್ಣಲ್ಲೇ ಇದ್ದಾರೆ. ಆದರೆ ರವಿಚಂದ್ರನ್ ಮುಂದೆ ಅವರೆಲ್ಲರೂ ಒಂದು ಹೆಜ್ಜೆ ಕಮ್ಮಿಯೇ. ಯಾಕೆಂದರೆ ಶಿವಾಜಿ ಪ್ರಭು ಗುಂಡ ಗುಂಡಕ್ಕೆ ತೀರಾ ಪೆದ್ದನಂತೆ ಕಾಣುತ್ತಾರೆ..ವೆಂಕಟೇಶ್ ಚುರುಕಾಗಿದ್ದು ಪೆದ್ದನಿಗಿಂತ ಸ್ವಲ್ಪ ಮೇಲೆ ಅನಿಸುತ್ತಾರೆ. ಆದರೆ ಆ ರಾಮಾಚಾರಿಯ ಅಮಾಯಕ ಮನಸ್ಸಿನ ಮುಗ್ಧ ಯುವಕನ ಪಾತ್ರವಿದೆಯಲ್ಲ ಅದು ರವಿಚಂದ್ರನ್ ದೇ ಎನಿಸುತ್ತದೆ. ಅದೇ ರೀತಿ ಶಂಕರ್ ನಾಗ್ ಅಭಿನಯದ ಹೊಸ ಜೀವನ, ಕಾಶೀನಾಥ್ ಅಭಿನಯದ ಲವ್ ಮಾಡಿ ನೋಡು ಚಿತ್ರಗಳನ್ನು ಗಮನಿಸಬಹುದು.ಎರಡರ ಮೂಲ ರೂಪಕ್ಕಿಂತ ನಮ್ಮದು ಚೆನ್ನಾಗಿದೆ ಎನಿಸುತ್ತದೆ. ಅದೇ ಅ ಕಿಸ್ ಬಿಫೋರ್ ಡೈಯಿಂಗ್ ಚಿತ್ರದ ಹಳೆಯ ಆನಂತರ ಮ್ಯಾಟ್ ದಿಲ್ಲೊನ್ ಅಭಿನಯದ ಆನಂತರ ಮಲಯಾಳಂ ಭಾಷೆಯ ಚಿತ್ರಗಳನ್ನು ನೋಡಿದ ಮೇಲೆ ಬಾಜಿಗರ್ ಸೂಪರ್ ಎನಿಸುತ್ತದೆ. ಪ್ರತೀಕಾರ, ಪ್ರೀತಿ ತಾಯಿ ಮಮತೆ ಎಲ್ಲವನ್ನೂ ಹದವಾಗಿ ಬೆರೆಸಿದ್ದ ಚಿತ್ರವದು. ಅದರ ಎಲ್ಲಾ ಅಂತ್ಯಗಳನ್ನು ಸುಮ್ಮನೆ ಗಮನಿಸಿ. ಆಂಗ್ಲ ಭಾಷೆಯ ಚಿತ್ರದಲ್ಲಿ ನಾಯಕಿಯನ್ನು ಅಟ್ಟಿಸಿಕೊಂಡು ಬರುವಾಗ ನಾಯಕ ಸಾಯುತ್ತಾನೆ. ಮಲಯಾಳಂ ಚಿತ್ರದಲ್ಲಿ ನಾಯಕಿಯ ತಂಗಿ ನಾಯಕನನ್ನು ಸಾಯಿಸುತ್ತಾಳೆ.ಆದರೆ ಬಾಜಿಗರ್ ಚಿತ್ರದ ಅಂತ್ಯದಲ್ಲಿ ಖಳನೆ ಸಾಯಿಸಿದರೂ ಅದರಲ್ಲಿನ ಫೋರ್ಸ್ ಬೇರೆ. ನಾಯಕ ಸಮರ್ಥನೆ ಇದ್ದರೂ  ಅನ್ಯಾಯವಾಗಿ ಮೂರು ಕೊಲೆಗಳನ್ನು ಮಾಡುತ್ತಾನೆ. ಹಾಗಾಗಿ ಅವನು ಅವನ ದಾರಿಯಲ್ಲಿ ಸರಿ ಎನಿಸಿದರೂ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದಾಗ ಅದು ತಪ್ಪು. ಹಾಗೆಯೇ ಪ್ರತೀಕಾರದ ಬೆಂಕಿ ನಮ್ಮನ್ನೂ ಸುಡುತ್ತದೆ ಎನ್ನುವದನ್ನು ಚಿತ್ರದಲ್ಲಿ ಸೇರಿಸಲೇ ಬೇಕಿತ್ತು. ಆದರೆ ಕನ್ನಡದಲ್ಲಿ ಆ ಎಲ್ಲಾ ಆಶಯವನ್ನೂ ಒಂದೇ ಏಟಿಗೆ ತೆಗೆದು ಬೀಸಾಕಿದರು. ನಾಯಕ ಖಳನನ್ನು ಸಾಯಿಸಿ ನಾನು ಕೊಲೆ ಮಾಡಿರುವುದು ನನಗೆ ಗೊತ್ತು, ನಿನಗೆ ಗೊತ್ತು ಆ ದೇವರಿಗೆ ಗೊತ್ತು ಶಿಕ್ಷೆ ಅವನೇ ಕೊಡಲಿ ಎಂದು ಆರಾಮವಾಗಿ ನಡೆದುಕೊಂಡು ಹೋಗಿಬಿಡುತ್ತಾನೆ, ನಾಯಕಿಯ ಜೊತೆಗೆ. ಇಲ್ಲಿ ನಿರ್ದೇಶಕ ನಾಯಕನನ್ನ್ಯಾಕೆ ಉಳಿಸಿದರು? ಜೊತೆಗೆ ಏನನ್ನು ಹೇಳಲು ಹೊರಟರು ..ಮತ್ತದು ಸರಿಯಾಯಿತಾ..? ನಾವು ಸಾವಿರ ಮಾತನಾಡಬಹುದು. ಆದರೆ ಫಲಿತಾಂಶ ನಮ್ಮಲ್ಲೇ ಇದೆ. ಚಿತ್ರ ಸೋತದ್ದು ಗೊತ್ತೇ ಇದೆ.
ಅದೇ ರೀತಿ ಅಲ್ಲಿನ ಪ್ರಮುಖ ಅಂಶಗಳನ್ನು ಇಲ್ಲಿ ಪೇಲವ ಮಾಡಿದ್ದರು. ನನ್ನ ವಿಷಯವೇ ಅದು. ಒಂದು ರೀಮೇಕ್ ಮಾಡುವಾಗ ಅದರಲ್ಲಿನ ಭಾವತೀವ್ರತೆ, ಅದರಲ್ಲಿನ ಪ್ರಮುಖ ಅಂಶ ಮತ್ತು ಅದರಲ್ಲಿದ್ದ ಜನ ಸೆಳೆಯುತ್ತಿದ್ದ ಅಂಶ ಯಾಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಲ್ಲಿ ಅದೇ ಪ್ರಮುಖವಾದ ಅಂಶವಾಗಿರುತ್ತದೆ. ಬಹುತೇಕ ನಮ್ಮವರ್ಯಾಕೆ[ಬರೀ ಕನ್ನಡ ಸಿನೆಮಾ ಬಗ್ಗೆ ಮಾತಾಡುತ್ತಿರುವುದರಿಂದ] ಅದನ್ನು ಸರಿಯಾಗಿ ಗಮನಿಸುವುದಿಲ್ಲ. ಬಾಜಿಗರ್ ವಿಷಯದಲ್ಲಿ ಕ್ಲೈಮಾಕ್ಸ್ ಮುಖ್ಯವಾದ ಜನರನ್ನು ಆಕರ್ಷಿಸಿದ ಅಂಶ ಎನ್ನಬಹುದು. ಹೊಟ್ಟೆಯಲ್ಲಿ ರಾಡು ಚುಚ್ಚಿಸಿಕೊಂಡ ನಾಯಕ ಖಳನನ್ನು ನೋಡುತ್ತಿದ್ದರೆ, ಖಳ ಅಟ್ಟಹಾಸದ ನಗು ನಗುತ್ತಿರುತ್ತಾನೆ. ಆದರೆ ಸ್ವಲ್ಪ ಹೊತ್ತಿನ ನಂತರ ನಾಯಕನೂ ನಗತೊಡಗಿದಾಗ ಖಳನಿಗೆ ಗಾಬರಿ, ಆಶ್ಚರ್ಯ..ನಿನ್ನನ್ನು ಕೊಲ್ಲಲು ನನಗೆ ಕಾರಣ ಸಿಕ್ಕಿತು ಎನ್ನುವ ಭಾವ ಆ ನಗೆಯಲ್ಲಿರಬಹುದಾ..? ಒಟ್ಟಿನಲ್ಲಿ ಆ ದೃಶ್ಯ ರೋಮಾಂಚನ ಉಂಟುಮಾಡುವುದು ಸಹಜ. ಆದರೆ ಅದೇ ಕನ್ನಡ ಅವತರಣಿಕೆಯಲ್ಲಿಲ್ಲ.
ಪೊರ್ಕಿ ಮತ್ತು ಪೋಕಿರಿಯ ಸಮಸ್ಯೆಯೂ ಅದೆ. ಅಲ್ಲಿನ ಪವರ್, ಫೋರ್ಸ್ ಕನ್ನಡದಲ್ಲಿರಲಿಲ್ಲ. ಹಾಗೆ ನೋಡಿದರೆ ತೆಲುಗಿನ ಮಹೇಶ್ ಬಾಬು ಪವರ್ ಗೆ ತಾರಾಮೌಲ್ಯಕ್ಕೆ ದರ್ಶನ್ ಎಲ್ಲಾ ದಿಕ್ಕಿನಿಂದಲೂ ಜಾಸ್ತಿ ಎನ್ನಬಹುದು. ಆದರೆ ಅಲ್ಲಿನ ಅವರ ಕೇಶ ಶೈಲಿ ಮತ್ತು ಅಭಿನಯ ಶೈಲಿ ಸಿನಿಮದ ಮೊದಲ ಋಣಾತ್ಮಕ ಅಂಶ ಎನ್ನಬಹುದು. ಆದರೆ ಅಣ್ಣಯ್ಯ, ಗಡಿಬಿಡಿ ಗಂಡ ಮುಂತಾದ ರವೀಚಂದ್ರನ್ ಅವರ ಅಭಿನಯದ ರೀಮೇಕ್ ಚಿತ್ರಗಳಲ್ಲಿ ಮೂಲಕ್ಕಿಂತ ಒಂದು ಕೈ ಹೆಚ್ಚಗಿನ ಸೊಗಸಿದೆ ಎನ್ನಬಹುದು. ಹಾಗೆಯೇ ತಮಿಳಿನ ರಜನಿಕಾಂತ್ ಅಭಿನಯದ ಭಾಷಾ ಕನ್ನಡದಲ್ಲಿ ಬರುತ್ತದೆ ಎಂದಾಗ ಕುತೂಹಲ ಇದ್ದೇ ಇತ್ತು. ಆದರೆ ಇಲ್ಲಿನ ಕೋಟಿಗೊಬ್ಬ ಚೆನ್ನಾಗಿತ್ತು. ಅದೇ ಮಾತನ್ನು ವಿಷ್ಣುಸೇನಾಗೆ ಹೇಳಲಿಕ್ಕೆ ಬರುವುದಿಲ್ಲ. ಇದೆಲ್ಲಾ ದೊಡ್ಡವರ ಸಿನಿಮಾಗಳು. ಫ್ರೆಂಚ್ ನ ಪ್ರಾನ್ಸಿಸ್ ವಬೇರ್ ನಿರ್ದೇಶನದ ಡಿನ್ನರ್ ಗೇಮ್ ಹಿಂದಿಯಲ್ಲಿ ಭೇಜಾ ಫ್ರೈ ಆಗಿ ಬಂದಾಗ ಮೂಲಕ್ಕಿಂತ ಹೆಚ್ಚಿನ ನಗು ದೇಸಿ ಸಿನಿಮಾದಲ್ಲಿತ್ತು. ವಿನಯ್ ಪಾಠಕ್ ಅಭಿನಯ ಅದ್ಭುತ ಎಂದೇ ಹೇಳಬಹುದು. ಯಾಕೆಂದರೆ ಇಲ್ಲಿ ವಿನಯ್ ಪಾಠಕ್ ನಾನು ಹಾಸ್ಯಗಾರ ಎಂದುಕೊಳ್ಳದೆ ಅಭಿನಯಿಸಿದ್ದರು. ಮೂಲದಲ್ಲಿ ಚಿತ್ರಕಲಾವಿದನ ಪಾತ್ರ ಹಿಂದಿಯಲ್ಲಿ ಗಾಯಕನಾಗಿ ಬದಲಾಗಿತ್ತು. ಆದರೆ ಅದೇ ಕನ್ನಡಕ್ಕೆ ದಿನೇಶ್ ಬಾಬು ನಿರ್ದೇಶನದಲ್ಲಿ ಮಿಸ್ಟರ್ ಗರಗಸ ಆಗಿ ಮೂಡಿಬಂದಾಗ ಅಲ್ಲಿ ನಗು ಬರಲು ಕಾರಣವೇ ಇರಲಿಲ್ಲ. ಕೋಮಲ್ ಪ್ರತಿ ದೃಶ್ಯದಲ್ಲೂ ಕೃತಕವಾಗಿ ಕಾಣಿಸಿದ್ದರು, ಅಭಿನಯಿಸಿದ್ದರು... ಒಬ್ಬ ಚಿತ್ರ ನಿರ್ದೇಶಕನಾಗಿ ಬರಹಗಾರನಾಗಿ ಬೇಕೆಂತಲೇ ನಗಿಸಲು ಪ್ರಯತ್ನಿಸಿದ್ದರು.
ಹಿಂದಿಯಲ್ಲೂ ಇದು ಹಲವಾರು ಸಾರಿ ಆಗಿದ್ದಿದೆ. ಇಂಗ್ಲಿಷಿನಲ್ಲಿ ಎರಡು ಇಟಾಲಿಯನ್ ಜಾಬ್ ಚಿತ್ರಗಳಿವೆ. ಎರಡರಲ್ಲೂ ಮುಖ್ಯವಾದ ಅಂಶವೆಂದರೆ ತುಂಬಿದ ಜನನಿಬಿಡ ನಗರದಲ್ಲಿನ ಟ್ರಾಫಿಕ್ ಜಾಮ್ ಕುರಿತಾದದ್ದು. ಟ್ರಾಫಿಕ್ ಜಾಮ್ ಬಳಸಿಕೊಂಡು ದೊಡ್ಡ ಕಳ್ಳತನ ಮಾಡುವುದು ಚಿತ್ರದ ಮುಖ್ಯ ಅಂಶ.ಆದರೆ ಅಬ್ಬಾಸ್ ಮಸ್ತಾನ್ ತಲೆಯನ್ನು ಎಲ್ಲಿ ಇಟ್ಟಿದ್ದರೋ..? ಆ ಮುಖ್ಯಾಂಶವನ್ನೇ ತೆಗೆದು ಬಿಟ್ಟಿದ್ದರು. ಸಿನಿಮಾ ಅಟ್ಟರ್ ಪ್ಲಾಪ್ ಆದದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ..
ಒಂದು ಚಿತ್ರವನ್ನು ಅಥವಾ ಕಾದಂಬರಿಯನ್ನು ರೂಪಾಂತರ ಭಾಷಾಂತರ ಗೊಳಿಸುವಾಗ  ಮೂಲದಲ್ಲಿ ಮುಖ್ಯವಾದ ಅಂಶ ಏನಿತ್ತು ಎಂಬುದನ್ನು ತಿಳಿದುಕೊಳ್ಳದೇ ರೀಮೇಕ್ ಮಾಡಿದಾಗ ಈ ರೀತಿ ಫಲಿತಾಂಶ ಬರುವುದು ಖಂಡಿತವೆ ಅಲ್ಲವೇ.