Tuesday, May 7, 2013

ನಾಲ್ಕು ಸಣ್ಣ ಕಥೆ, ಒಂದು ದೊಡ್ಡ ಚಿತ್ರ..


 ಒಂದು ಸಿನಿಮಾ..ಅದರಲ್ಲಿ ನಾಲ್ಕು ಕಥೆಗಳು. ಈ ತರಹದ ಪ್ರಯೋಗ ಕನ್ನಡದ ಜೊತೆಗೆ ಬೇರೆಲ್ಲಾ ಭಾಷೆಯಲ್ಲೂ ಬಂದಿವೆ. ಬಾಲಿವುಡಿನಲ್ಲಿ ಇದಕ್ಕೂ ಮುನ್ನ ದಸ್ ಕಹಾನಿಯಾ ಎಂಬೊಂದು ಸಿನಿಮಾ ಬಂದಿತ್ತು. ಹಾಗೆ ಡರ್ನಾ ಮನಾ ಹೈ, ಡರ್ನಾ ಜರೂರಿ ಹೈ ಮೊನ್ನೆ ಮೊನ್ನೆ ಬಂದ ಡೇವಿಡ್ ಕೂಡ ಇದೇ ಪಟ್ಟಿಗೆ ಸೇರುವ ಚಿತ್ರಗಳು. ಬಾಂಬೆ ಟಾಕೀಸ್ ಚಿತ್ರದಲ್ಲಿ ನಾಲ್ಕು ಕಥೆಗಳಿವೆ. ಇಲ್ಲಿನ ವಿಶೇಷವೆಂದರೆ ನಾಲ್ಕು ಕಥೆಗಳ ನಿರ್ದೇಶಕರೂ ಬೇರೆ. ಹಾಗಾಗಿಯೇ ನಾಲ್ಕು ಭಿನ್ನರುಚಿಯ ನಿರ್ದೇಶಕರು ಒಂದೇ ಸಿನಿಮಾದಲ್ಲಿನ ನಾಲ್ಕು ಕಥೆಗಳನ್ನು ಕಟ್ಟಿಕೊಟ್ಟಿರುವುದು ಸಿನಿಮಾದ ಗುಣಮಟ್ಟವನ್ನು ಹೆಚ್ಚಿಸಿರುವುದರ ಜೊತೆಗೆ ಚಿತ್ರವನ್ನು ರಂಜನೀಯವಾಗಿಯೂ ಮಾಡುವಲ್ಲಿ ಯಶಸ್ವಿಯಾಗಿದೆ.
ಕರಣ್ ಜೋಹರ್ ತಮ್ಮ ವೈಭವಯುತ ಕೌಟುಂಬಿಕ ಚಿತ್ರಗಳಿಗೆ ಹೆಸರುವಾಸಿ. ಆದರೆ ಕರಣ್ ಇಲ್ಲಿ ತಮ್ಮ
ಎಂದಿನ ಶೈಲಿಯ ಚಿತ್ರೀಕರಣಕ್ಕೆ ಮೊರೆ ಹೋಗಿಲ್ಲ.ಅಜೀಬ್ ದಾಸ್ತಾನ್ ಹೈ ಯೆ ಹೆಸರಿನ ಕಥೆಯನ್ನು ಕರಣ್ ತುಂಬಾ ನೈಜವಾಗಿ ಚಿತ್ರೀಕರಿಸಿದ್ದಾರೆ. ನಗರದ ದಂಪತಿಗಳ ಸಹಬಾಳ್ವೆ ಅಥವಾ ಹಾಗೆ ನಟಿಸುವ ಹೊಂದಾಣಿಕೆ ಅನಿವಾರ್ಯತೆಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಇಬ್ಬರ ನಡುವೆ ಮೂರನೆಯವರ ಪ್ರವೇಶವಾದಾಗ ಆಗುವ ವ್ಯತ್ಯಾಸಗಳನ್ನು ತುಂಬಾ ಚೆನ್ನಾಗಿ ತೆರೆದಿಟ್ಟಿದ್ದಾರೆ ನಿರ್ದೇಶಕರು. ರಾಣಿ ಮುಖರ್ಜಿ, ರಣದೀಪ್ ಹೂಡಾ ಮತ್ತು ಸಾಕಿಬ್ ಸಲೀಮ್ ರವರ ಪೈಪೋಟಿಯ ಅಭಿನಯ ಮತ್ತು ಸಂಭಾಷಣೆ ಈ. ಚಿತ್ರಣದ ಹೈಲೈಟ್.
ಗ್ಯಾಂಗ್ಸ್ ಆಫ್ ವಾಸ್ಸೇಪುರ್ ಚಿತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದ ನವಾಜುದ್ದಿನ್ ಸಿದ್ದಿಕಿ ಪ್ರತಿಭೆಯನ್ನು ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಸ್ಟಾರ್ ಕಥೆಯಲ್ಲಿ ಪರಿಪೂರ್ಣವಾಗಿ ಬಳಸಿಕೊಂಡಿದ್ದಾರೆ ಎನ್ನಬಹುದು. ಇದು ಭಾರತೀಯ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ರವರ ಕಥೆಯನ್ನಾಧರಿಸಿದ್ದು. ಒಬ್ಬ ಮಹತ್ವಾಕಾಂಕ್ಷಿ ಕಲಾವಿದನೊಬ್ಬ ತನ್ನ ಪ್ರತಿಭೆಯ ಅನಾವರಣದ ಅವಕಾಶಕ್ಕಾಗಿ ಪರಿತಪಿಸುವ ವಸ್ತುವನ್ನು ಹೊಂದಿರುವ ಈ ಕಥೆಯ ನಿರೂಪಣೆ, ಚಿತ್ರಕಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಂತ್ಯ ಶಕ್ತಿಯುತವಾಗಿದೆ.
ಇನ್ನು ಜೋಯಾ ಅಖ್ತರ್ ನಿರ್ದೇಶನದ ಶೀಲಾ ಕಿ ಜವಾನಿ, ಅನುರಾಗ್ ಕಶ್ಯಪ್ ನಿರ್ದೇಶನದ ಮುರಬ್ಬ ಹೆಚ್ಚು ಕಡಿಮೆ ಒಂದೇ ನೆಲಗಟ್ಟಿನ ಕಥೆಯನ್ನಾಧರಿಸಿದೆ ಎನ್ನಬಹುದು. ಎರಡೂ ಕಥೆಯಲ್ಲಿ ಚಲನಚಿತ್ರದ ಸೂಪರ್ ಸ್ಟಾರ್ ಗಳು ಬಹುಮುಖ್ಯ ಪಾತ್ರವಹಿಸುವ ಮೂಲಕ ಜನಸಾಮಾನ್ಯ ಮತ್ತು ಜನಪ್ರಿಯ ವ್ಯಕ್ತಿಗಳ ನಡುವಿನ ಬಾಂಧವ್ಯವನ್ನು ಎತ್ತಿತೋರಿಸುವ ಪ್ರಯತ್ನ ಮಾಡುತ್ತವೆ.
ಚಿತ್ರದಲ್ಲಿನ ನಾಲ್ಕು ಕಥೆಗಳು ಭಿನ್ನ ಭಿನ್ನ ಶೈಲಿಯವುದಾದರೂ ಕಥೆಯಲ್ಲಿನ ಭಾವ, ಭಾವುಕತೆ ಮಾತ್ರ ಒಂದೆ ಎನ್ನಬಹುದು. ಒಬ್ಬ ವ್ಯಕ್ತಿಯ ಮೂಲಕ ಇಡೀ ಕುಟುಂಬದ ಆಗುಹೋಗುಗಳನ್ನು ಸಮಾಜದ ವಿವಿಧ ಸ್ತರಗಳ ನಡುವಣ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನವಂತೂ ನಾಲ್ಕು ಕಥೆಯಲ್ಲಿ ಎದ್ದುತೋರುತ್ತದೆ. ಒಂದೊಂದು ಕಥೆಯ ಹಿನ್ನೆಲೆಯೂ ಬೇರೆ ಬೇರೆ. ಆದರೆ ಕಥೆಯಲ್ಲಿನ ಸತ್ವ ಮತ್ತು ಅಭಿನಯ ನಮಗೆ ನಾಲ್ಕು ಕಥೆಗಳೂ ಒಂದಕ್ಕೊಂದು ಬಸೆದುಕೊಂಡಂತೆ ಭಾಸವಾಗುತ್ತದೆ. 
ಈ ಚಿತ್ರದಲ್ಲಿನ ಇನ್ನೊಂದು ಅಚ್ಚರಿಯಂದರೆ ನಿರ್ದೇಶಕರುಗಳು. ನಾಲ್ಕೂ ನಿರ್ದೇಶಕರೂ ಅವರದೇ ಆದ ಕಥಾ ನಿರೂಪಣೆ, ಶೈಲಿಗೆ ಹೆಸರುವಾಸಿಯಾದವರು. ಮತ್ತವರ ಅಭಿರುಚಿಯೂ ಭಿನ್ನವಾದದ್ದು. ಆದರೆ ಈ ಚಿತ್ರದಲ್ಲಿ ಅವರು ಆಯ್ದುಕೊಂಡಿರುವ ಕಥೆ ಅವರದೇ ಅಭಿರುಚಿಯದಾದರೂ ನಿರೂಪಣೆಯಲ್ಲಿ ಮಾತ್ರ ತಮ್ಮ ಜಾಡನ್ನು ಸ್ವಲ್ಪ ಸಡಿಲಗೊಳಿಸಿದ್ದಾರೆ ಎನ್ನಬಹುದು. ಹಾಗಾಗಿಯೇ ನಾವು ನೋಡಿದ್ದ ಕರಣ್ ಜೋಹರ್ ಇಲ್ಲಿ ನಮಗೆ ಭಿನ್ನವಾಗಿ ಕಾಣಿಸುತ್ತಾರೆ. ಅನುರಾಗ್ ಕಶ್ಯಪ್ ತಮ್ಮ ಎಂದಿನ ನಿರೂಪಣಾ ಶೈಲಿಯಲ್ಲೇ ಮುಂದುವರೆದಿದ್ದರೂ ಕಥೆಯಲ್ಲಿನ ಗಟ್ಟಿತನದಿಂದಾಗಿ ನಮ್ಮೊಳಗಿನ ಪ್ರೇಕ್ಷಕನನ್ನು ತಣಿಸುವಲ್ಲಿ ಯಶಸ್ವಿಯಾಗುತ್ತಾರೆ.
ಚಿತ್ರದ ಕೊನೆಯ ಹಾಡು ಬೋನಸ್ ಎಂದುಕೊಳ್ಳಬಹುದು. ಹಾಗೆ ಶತಮಾನೋತ್ಸವ ಆಚರಿಸುತ್ತಿರುವ ಭಾರತೀಯ ಚಿತ್ರರಂಗಕ್ಕೆ ಬಾಂಬೇ ಟಾಕೀಸ್ ಅದ್ಭುತ ಕೊಡುಗೆ ಎನ್ನಬಹುದು. ಸಿನಿಮಾಸಕ್ತರು ಒಮ್ಮೆ ನೋಡಲೇಬೇಕಾದ ಚಿತ್ರವಿದು. 

ಒಂದು ಚಲನ 'ಚಿತ್ರ'ಹಿಂಸೆ......

ಇತ್ತೀಚಿಗೆ ಒಂದಷ್ಟು  ಕನ್ನಡ ಚಿತ್ರಗಳು ಬಿಡುಗಡೆಯಾದವು. ಕೆಲವು ಸಿನಿಮಾಗಳು ಯಾವುದೇ ಕುತೂಹಲ ಹುಟ್ಟಿಸುವುದಿಲ್ಲ. ಹಾಗಂತ ಆ ಸಿನಿಮ ಕೆಟ್ಟ ಚಿತ್ರ ಎಂದು ಹೇಗೆ ಹೇಳುವುದು. ಬರೀ ಪೋಸ್ಟರ್ ನೋಡಿ , ಆ ಸಿನಿಮಾವನ್ನೇನು ನೋಡುವುದು ಎಂದು ಮೂಗು ಮುರಿಯುವುದು ಎಷ್ಟು ಸರಿ. ಒಂದೊಳ್ಳೆ ಬಜೆಟ್ ಇದ್ದಾಗ ಕೆಟ್ಟ ಚಿತ್ರವನ್ನೂ ಜನರಿಗೆ ತಲುಪಿಸಿ ಅವರು ಚಿತ್ರಮಂದಿರಕ್ಕೆ ಬರುವಂತೆ ಮಾಡಿ, ಆಮೇಲಿಂದ ಎಕ್ಕಾ ಮಕ್ಕಾ ಉಗಿಸಿಕೊಂಡು ಹೋದ ಅದೆಷ್ಟು ನಿರ್ದೇಶಕರಿಲ್ಲ...ಸಿನೆಮಾಗಳಿಲ್ಲ.
 ಆದರೆ ಕೆಲವು ಸಿನೆಮಾಗಳನ್ನು ಅದೆಷ್ಟು ಕೇವಲವಾಗಿ, ಬೇಜವಾಬ್ದಾರಿಯಿಂದ[ಬಹುಶ ಅವರು ತೀರಾ ಗಂಭೀರವಾಗಿಯೇ ತೆಗೆದುಕೊಂಡಿರುತ್ತಾರೇನೋ..?} ಮಾಡಿರುತ್ತಾರೆಂದರೆ ಅವರ ಮೇಲೆ ಬೇಸರ ಉಂಟಾಗುವುದಿಲ್ಲ. ಬದಲಿಗೆ ಹುಚ್ಚು ಕೋಪ ನೆತ್ತಿಗೇರಿ, ಸಿನಿಮಾದ ಮೇಲೆಯೇ ಜಿಗುಪ್ಸೆ ಬಂದುಬಿಡುತ್ತದೆ.
ಬರೀ ಒಳ್ಳೊಳ್ಳೆಯ, ನೋಡಲೇಬೇಕಾದ ಸಿನೆಮಾಗಳ ಪರಿಚಯವನ್ನೇ ಎಷ್ಟೂಂತ ಮಾಡೋದು ಎಂದು ನನಗೂ ಕೆಲವೊಮ್ಮೆ ಅನಿಸಿದ್ದಂತೂ ನಿಜ.ಹಾಗಾಗಿ ಎಷ್ಟೋ ಅಸಹನೀಯ ಚಿತ್ರಗಳನ್ನು ನೋಡಿದ್ದರು ಬರೆದು ಎಲ್ಲರಿಗೂ ಹಿಂಸೆ ಕೊಡಲು ಮನಸ್ಸು ಬಂದಿರಲಿಲ್ಲ. ಈಗ ಮೊನ್ನೆ ಮೊನ್ನೆ ಒಂದು ಸಿನೆಮಾ ನೋಡಿದೆ. ಮೊದಲೇ ಹೇಳಿದಂತೆ ನಾನು ಬಂದ ಸಾಧ್ಯವಾಗುವ ಎಲ್ಲಾ ಸಿನೆಮಾಗಳನ್ನೂ ನೋಡುತ್ತೇನೆ.
ಅದರ ಹೆಸರು ಬೆಂಕಿ ಬಿರುಗಾಳಿ. ಅದರ ಪೋಸ್ಟರ್ ಗಳನ್ನೂ ನೀವೀಗಾಗಲೇ ನೋಡಿರುತ್ತೀರಿ. ಅದರ ಬಗ್ಗೆ ಕೇಳುವ ಉತ್ಸಾಹ ಆಸಕ್ತಿ ನಿಮಗಿಲ್ಲ ಅನಿಸುತ್ತದೆ. ಆದರೆ ಅದನ್ನೇ ಏಕೆ ಗಂಭೀರವಾಗಿ ವಿಮರ್ಶೆ ಮಾಡಬಾರದು ಎನಿಸಿತು. ಅದೂ ಒಂದು ಈ ಹಾಳಾದ ಬದುಕಲ್ಲಿ ನಡೆದು ಹೋಗಲಿ ಎಂದು ಬರೆದ ಲೇಖನವಿದು.
ಇನ್ನುಮುಂದಿನದ್ದನ್ನು ನೀವು ಓದಬಹುದು..ಅಥವಾ ಓದದಿದ್ದರೂ..ನಿಮ್ಮಿಷ್ಟ.

ಬೆಂಕಿ ಬಿರುಗಾಳಿ.....ನೋಡುಗನ ನರಬಲಿ..!!
ಕೆಲವು ಚಿತ್ರಕರ್ಮಿಗಳು ಪ್ರಯೋಗ, ಹೊಸತನದ ನೆಪದಲ್ಲಿ ಸಿನಿಮಾವನ್ನು ಹೇಗೇಗೋ ತೆಗೆಯುವುದುಂಟು. ಹಾಗೆ ಕೆಲವು ಸಿನೆಮಾ ಜ್ಞಾನವಿರದ ಮಂದಿ ಅವಕಾಶವಿದೆಯೆಂದು ತಮ್ಮ ಅಡ್ಡಕಸುಬಿತನವನ್ನು ಸಿನಿಮಾದಲ್ಲಿ ತೋರಿಸುವುದೂ ಉಂಟು.ಇದು ಎರಡನೆಯ ವಿಭಾಗಕ್ಕೆ ಸೇರಿದ ಸಿನಿಮಾ. ಉದಾಹರಣೆಗೆ ಒಂದು ದೃಶ್ಯವಿದೆ ಚಿತ್ರದಲ್ಲಿ. ನಿರ್ದೇಶಕ ಚಿತ್ರದಲ್ಲಿ ನಿರ್ಮಾಪಕನಿಗೆ ಕಥೆ ಹೇಳುತ್ತಿದ್ದಾನೆ. ಅದನ್ನು ಅಲ್ಲೇ ಕೇಳಿಸಿಕೊಳ್ಳುತ್ತಿದ್ದ ಮಾಜಿ ನಿರ್ಮಾಪಕನೊಬ್ಬ ನಾಯಕ ಕಮ್ ನಿರ್ದೇಶಕನ ಹತ್ತಿರ ಬಂದು ’ಸಾರ್..ನಾನು ಒಂದು ಕಾಲದ ನಿರ್ಮಾಪಕ..ಆ ಸಂದರ್ಭದಲ್ಲಿ ಈಕೆಗೆ ಅವಕಾಶಕೊಡುತ್ತೇನೆ ಎಂದು ಪ್ರಮಾಣ ಮಾಡಿದ್ದೆ..ನಿಮ್ಮ ಚಿತ್ರದಲ್ಲಿ ಈಕೆಗೊಂದು ಅವಕಾಶಕೊಡಿ ..” ಎನ್ನುತ್ತಾನೆ. ಆಗ ನಿರ್ದೇಶಕ ಅದಕ್ಕೇನಂತೆ ಎಂದದ್ದೇ ಆಕೆಯ ಜೊತೆಗೊಂದು ಡುಯೆಟ್ ಹಾಡಿಬರುತ್ತಾನೆ. ನೆನಪಿರಲಿ
ಸಿನಿಮಾದಲ್ಲಿನ ಕಥೆಗೂ ಈ ಹಾಡಿಗೂ ಯಾವ ಸಂಬಂಧವೂ ಇಲ್ಲ. ಒಂದು ಸಿನಿಮಾವನ್ನು ಇಷ್ಟಬಂದಹಾಗೆ ಚಿತ್ರೀಕರಿಸುವುದೆಂದರೇ ಇದೇ ಇರಬೇಕು. ಹಾಗೆಯೇ ಇಡೀ ಸಿನಿಮಾದ ಕಥೆ, ನಿರೂಪಣೆ ನೋಡುಗನಲ್ಲಿ ಬರೇ ಬೇಸರವನ್ನ ತರುವುದಷ್ಟೇ ಅಲ್ಲ ಅದರ ಕರ್ತೃವಿನ ಮೇಲೆ ಅಸಾಧ್ಯ ಕೋಪವನ್ನ ಉಂಟುಮಾಡದೇ ಇರುವುದಿಲ್ಲ. ಬಹುಷ ಇಂತಹ ಇನ್ನೊಂದಷ್ಟು ಚಿತ್ರಗಳು ಬಂದುಬಿಟ್ಟರೇ ಸಾಕು ಪ್ರೇಕ್ಷಕನಿಗೆ ಕನ್ನಡ ಚಿತ್ರವೆಂದರೇ ಹೇವರಿಕೆ ಉಂಟಾಗಿಬಿಡುತ್ತದೆ.
ಚಿತ್ರ ಹೇಗೋ ಪ್ರಾರಂಭವಾಗುತ್ತದೆ. ಹಾಗೆಯೇ ಅರ್ಥಹೀನವಾಗಿ ಮುಗಿಯುತ್ತದೆ.ಇದರ ಮಧ್ಯ ಒಂದಷ್ಟು ಹಾಡುಗಳೂ ಹೊಡೇದಾಟಗಳೂ ಬಂದು ಹೋಗಿರುತ್ತವೆ. ನಾಯಕ ಒಬ್ಬನೇ ಆದರೂ ನಾಯಕಿಯರಿಗೇನೂ ಬರವಿಲ್ಲ. ರೇಖಾ,ನಮಿತ,ಸಂಧ್ಯಾ, ರಿಶಿಕಾ, ಶ್ವೇತಾ ಹೀಗೆ ಸುಂದರಿಯರ ದಂಡೇ ಇದೆ. ಕಾರಣವಿಲ್ಲದಿದ್ದರೂ ಎಲ್ಲರೂ ನಾಯಕನೊಂದಿಗೆ ಹಾಡಿ, ಕುಣಿಯುತ್ತಾರೆ. ಆದರೆ ಹಾಡಾಗಲಿ ಸಾಹಿತ್ಯವಾಗಲಿ ನಿಮಗೆ ಎಳ್ಳಷ್ಟೂ ಇಷ್ಟವಾಗುವುದಿಲ್ಲ. ಹಾಗೆ ಕೇಡಿಗಳೂ ಇದ್ದಾರೆ. ಮುಲಾಜಿಲ್ಲದೇ ನಾಯಕ ಹೊಡದಾಡುತ್ತಾನೆ. ಯಾಕೆ ಹೊಡೆದ, ಅವನ ಹೋರಾಟದ ಹಿಂದಿನ ಗುಟ್ಟೇನು ಎಂಬುದನ್ನು ನಿರ್ದೇಶಕ ಮಹಾಶಯರು ತಾವೇ ವಿವರಿಸಬೇಕು. ಇಷ್ಟಕ್ಕೂ ಚಿತ್ರದಲ್ಲಿನ ಕಥೆ ಏನು? ಎಂಬ
ಕುತೂಹಲ ನಿಮ್ಮನ್ನು ಕಾಡಬಹುದು. ಅನುರಾಗ್ ಬಸು ನಿರ್ದೇಶನದ ಗ್ಯಾಂಗ್ ಸ್ಟರ್ ಚಿತ್ರ ನಿಮಗೆ ನೆನಪಿರಬೇಕು. ಅತ್ಯುತ್ತಮ ಚಿತ್ರಕಥೆ,ಅದ್ಭುತ ಹಾಡುಗಳಿದ್ದ ಚಿತ್ರ ಅದು. ಬೆಂಕಿ ಬಿರುಗಾಳಿ ಆ ಚಿತ್ರದ ಕೆಟ್ಟ ರೀಮೇಕ್ ಎನ್ನಬಹುದು. ಅದೇ ಕಥೆಯ ಜೊತೆಗೆ ತಮ್ಮದೂ ಒಂದಷ್ಟು ಅಸಹನೀಯ ತಿರುವುಗಳನ್ನು ಸೇರಿಸಿ ಕಲಸುಮೇಲೋಗರ ಮಾಡಿದ್ದಾರೆ ನಿರ್ದೇಶಕರು.
ಚಿತ್ರದ ಯಾವ ವಿಭಾಗದ ಕೆಲಸದ ಬಗ್ಗೆಯೂ ಮಾತಾಡುವುದು ಹಾನಿಕಾರಕ. ಈ ಚಿತ್ರನೋಡಲು ಹೋದರೆ ಬರೀ ದುಡ್ಡು, ಸಮಯವಷ್ಟೇ ವ್ಯರ್ಥವಾಗುವುದಿಲ್ಲ. ಜೊತೆಗೆ ಮನಸ್ಥಿತಿಯೂ ಕುಲಗೆಟ್ಟುಹೋಗುವುದರಲ್ಲಿ ಸಂಶಯವಿಲ್ಲ. ನಿರ್ದೇಶಕ, ನಾಯಕ, ಕಥೆಗಾರ, ಸಂಭಾಷಣೆಗಾರ ಬಶೀದ್ ಯಾವ ವರ್ಗದ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟಕೊಂಡು ಈ ಚಿತ್ರವನ್ನ ಕಲ್ಪಿಸಿಕೊಂಡರೋ ಅವರಿಗೇ ಗೊತ್ತು. ಅಷ್ಟೆಲ್ಲಾ ತಂತ್ರಜ್ಞರು, ಕಲಾವಿದರು ಮತ್ತು ಹಣವನ್ನಿಟ್ಟುಕೊಂಡು ಎಲ್ಲಾ ರೀತಿಯಿಂದಲೂ ಇದಕ್ಕಿಂತ ಕೆಟ್ಟ ಚಿತ್ರ ನಿರ್ಮಿಸಲು ಸಾಧ್ಯವಿಲ್ಲ . ಹಾಗಾಗಿ ಬಶೀದ್ ಆ ವಿಷಯದಲ್ಲಿ ದಾಖಲೆ ಮಾಡಿದ್ದಾರೆ ಎನ್ನಬಹುದು.

ರಹಸ್ಯಮಯ ರೀಮೇಕುಗಳು...

ರೀಮೇಕ್ ಎಂಬುವುದು ಚಿತ್ರರಂಗದಲ್ಲಿ ಸರ್ವೇ ಸಾಮಾನ್ಯ. ಬಹುತೇಕ ಎಲ್ಲಾ  ದೇಶದ, ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ರೀಮೇಕ್ ಎನ್ನುವುದು ಇದ್ದಇದೆ. ಯಾವುದೋ ಕಥೆ ಸಿನೆಮಾಕ್ಕೆ ತಕ್ಕುದಾದರೆ ಅದನ್ನು ಸಿನೆಮಾರೂಪಕ್ಕೆ ತರಲು ಒಬ್ಬ ಚಿತ್ರಕರ್ಮಿ ಮುಂದಾಗುತ್ತಾನೆ. ಇಲ್ಲಿ ಕಥೆ ಯಾವುದೇ ಭಾಷೆಯದಾದರೂ ಅಭ್ಯಂತರವಿರುವುದಿಲ್ಲ. ಹಾಗೆಯೇ ರೀಮೇಕ್.  ಈಗಾಗಲೇ ಬೇರೆ ಭಾಷೆಯಲ್ಲಿ ಬಂದ ಚಿತ್ರವೂ ನಮ್ಮ ನಾಡಿಗೆ ಭಾಷೆಗೆ ಅಗತ್ಯ ಎನಿಸಿದಾಗ ಅದನ್ನು ಪುನರ್ನಿರ್ಮಾಣ ಮಾಡುವುದು ತಪ್ಪಲ್ಲ. ಆದರೆ ಕೇವಲ ಯಶಸ್ಸನ್ನಷ್ಟೇ ಮಾನದಂಡವನ್ನಾಗಿಟ್ಟುಕೊಂಡು ಸ್ವಂತ ಕಥೆ ಮಾಡುವ ರಿಸ್ಕು ತೆಗೆದುಕೊಳ್ಳದೆ ಸುಖಾ ಸುಮ್ಮನೆ ರೀಮೇಕ್ ಮಾಡುವುದು ಸೃಜನಶೀಲತೆಯ ದಾರಿದ್ರ್ಯ ಎನ್ನಬಹುದು.ಟೈಟಾನಿಕ್ ಚಿತ್ರ ಆರನೆಯ ಬಾರಿ ನಿರ್ಮಿತವಾದ ಚಿತ್ರ. ಹಾಗೆಯೇ ಬಹಳಷ್ಟು ಶ್ರೇಷ್ಠ ಚಿತ್ರಗಳು ಇನ್ನೊಂದು ಭಾಷೆಯಿಂದ ಬಂದವುಗಳೇ ಆಗಿವೆ. ಇನ್ನೂ ಒಂದಿದೆ. ಅದು ಸ್ಫೂರ್ತಿ.. ಒಂದು ಸಿನೆಮಾ ನೋಡುವಾಗ ಅದರಲ್ಲಿನ ಕೆಲವು ದೃಶ್ಯ, ಸನ್ನಿವೇಶಗಳಿಂದಾಗಿ ಬೇರೆಯದೇ ಆದ ಕಥೆಯೊಂದು ಹೊಳೆದುಬಿಡಬಹುದು.ಆಗ ಅದು ಸ್ಫೂತಿಯಾಗುತ್ತದೆ.ಕನ್ನಡದ ಓಂ ಚಿತ್ರ, ಹಿಂದಿಯ ಸತ್ಯ ಚಿತ್ರಕ್ಕೆ ಸ್ಫೂರ್ತಿ ಎಂದು ಸ್ವತಹ ರಾಮ್ ಗೋಪಾಲ್ ವರ್ಮರವರೆ ಹೇಳಿಕೊಂಡಿದ್ದಾರೆ. ಮೈನೆ ಪ್ಯಾರ್ ಕಿಯಾ ಚಿತ್ರಕ್ಕೆ ಪ್ರೇಮಲೋಕ ಸ್ಫೂರ್ತಿ..ಹೀಗೆ.
ಮೊನ್ನೆ ಶರಣ್ ಅಭಿನಯದ ಸುಂದರಿ ಗಂಡ ಸದಾನಂದ ಎನ್ನುವ ಸಿನೆಮಾ ವಾಹಿನಿಯೊಂದರಲ್ಲಿ ನೋಡುತ್ತಿದ್ದೆ. ನೋಡುತ್ತಾ ನೋಡುತ್ತಾ ನನಗೆ ಗೊತ್ತಾದ ವಿಷಯವೆಂದರೆ ಅದು ಹಾಲಿವುಡಿನ ಕಾಲಿನ್ ಫೆರೆಲ್ ಅಭಿನಯದ ಫೋನ್ ಬೂತ್ ಚಿತ್ರದ ಕನ್ನಡದ ಅವತರಣಿಕೆ ಎಂಬುದು. ನೋಡಿ ಒಂದು ಗಂಭೀರ, ಥ್ರಿಲ್ಲರ್ ಚಿತ್ರವನ್ನು ಹಾಸ್ಯ ಲೇಪನದ ಜೊತೆಗೆ ನಿರೂಪಿಸುವ ವಿಫಲ ಯತ್ನ ಎನ್ನಬಹುದು. ಬಹುಶ ಈ ಸಿನೆಮಾ ಫೋನ್ ಬೂತ್ ನಕಲು ಎಂಬುದು ಸುಮಾರು ಜನರಿಗೆ ಗೊತ್ತಿಲ್ಲ ಎನ್ನಬಹುದು. ಯಾಕೆಂದರೆ ಸಿನೆಮಾ ತಯಾರಕರೂ ಅದರ ಬಗ್ಗೆ ಮಾತಾಡಿಲ್ಲ, ಸಿನೆಮಾ ಜನರನ್ನೂ ತಲುಪಿಲ್ಲ. 
ಆಶಿಕಿ ಚಿತ್ರದ ಹಾಡುಗಳು ಈವತ್ತಿಗೂ ಮೈ ರೋಮಾಂಚನಗೊಳಿಸುತ್ತವೆ.ಹನ್ನೆರೆಡು ಹಾಡುಗಳೂ ಸೂಪರ್ ! ಅನು ಅಗರವಾಲ್, ರಾಹುಲ್ ರಾಯ್ ಅಭಿನಯವನ್ನು ಮರೆಯುವುದಾದರೂ ಹೇಗೆ..? ಕನ್ನಡದಲ್ಲಿ ಆಶಿಕಿ ರೋಜಾ ಎಂಬ ಹೆಸರಿನಲ್ಲಿ ಪುನರ್ನಿರ್ಮಾಣವಾಗಿದೆ ಮತ್ತು ನೀರಸವಾಗಿದೆ.
ಕೆಲವೇ ದಿನಗಳ ಹಿಂದೆ ಬೆಂಕಿ ಬಿರುಗಾಳಿ ಎಂಬೊಂದು ಸಿನಿಮಾ ಬಂದಿತ್ತು. ನನಗೋ ಆ ಸಿನೆಮಾದ ಬಗ್ಗೆ ಕೆಟ್ಟ ಕುತೂಹಲ. ಒಬ್ಬ ಅದೇಗೆ ಆ ತರಹದ ಸಿನೆಮಾ ಮಾಡಲು ಸಾಧ್ಯ..? ಮಾಡಿದ್ದರೂ ಕಥೆ ಹೇಗೆ ಹೆಣೆದಿರಬಹುದು ಎಂದು ತಲೆಕಡಿಸಿಕೊಂಡು ನೋಡಿಯೇ ಬಿಡೋಣ ಎಂದು ಚಿತ್ರಮಂದಿರಕ್ಕೆ ನುಗ್ಗಿಯೇ ಬಿಟ್ಟಿದ್ದೆ. ಅನಾಮತ್ತು ಎರಡು ಘಂಟೆಗಳ ಭರ್ಜರಿ ಮನರಂಜನೆ ಆ ಚಿತ್ರ. ತಲೆಬುಡವಿಲ್ಲದ , ಅರ್ಥಹೀನ ಸಿನೆಮಾ ಅದು. ಕನ್ನಡ ಚಿತ್ರರಂಗದ ಅಧೋಗತಿಗೆ ಅಂತಹ ನಾಲ್ಕಾರು ಚಿತ್ರಗಳು ಸಾಕು ಎಂದು ಹೇಳಬಹುದು. ಇರಲಿ. ಆದರೂ ಆ ಸಿನೆಮಾದಲ್ಲಿನ ಕಥೆ ಏನಿರಬಹುದು..? ಅದು ಯಾವುದಾದರೂ ಸಿನೆಮಾದ ಸ್ಫೂರ್ತಿಯೇ..?
ನಿಜಾಂಶ ಗೊತ್ತಾದರೆ ನೀವೇ ಬೆಚ್ಚಿ ಬೀಳುತ್ತೀರೀ..ಅನುರಾಗ್ ಬಸು ನಿರ್ದೇಶನದ ಅದ್ಭುತ ಚಿತ್ರಕಥೆಯ ಗ್ಯಾಂಗ್ ಸ್ಟರ್ ಸಿನೆಮಾ ನಿಮಗೆ ಗೊತ್ತಲ್ಲಾ..ಅದರಲ್ಲಿನ ನಿರೂಪಣೆ ಭಾವವನ್ನು ಮರೆಯಲಾದರೂ ಹೇಗೆ ಸಾಧ್ಯ..ಅದನ್ನೇ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಕನ್ನಡೀಕರಿಸಿದ್ದಾರೆ ಪುಣ್ಯಾತ್ಮರು. ಅಬ್ಬಾ ದೇವರೇ..? ಎನಿಸದಿರಲಿಲ್ಲ.
ಹೇರಾ ಪೆರಿ ಚಿತ್ರವೂ ಕನ್ನಡದಲ್ಲಿದೆ. ಆಪ್ತಮಿತ್ರಕ್ಕೂ ಮುನ್ನ ಮಣಿ ಚಿತ್ರತಾಲ್ ಚಿತ್ರವೂ ಸಾಗರಿ ಹೆಸರಲ್ಲಿ ಕನ್ನಡಕ್ಕೆ ಬಂದಿತ್ತು.ಹಾಗೆಯೇ ವರ್ಮಾ ಕಂಪನಿಯಿಂದ ಬಂದಂತಹ ಅತ್ಯುತ್ತಮ ಚಿತ್ರ ಏಕ್ ಹಸೀನಾ ತಿ ಕೂಡ ಕನ್ನಡದಲ್ಲಿ ಪ್ರೇಮ ಅಭಿನಯದಲ್ಲಿ ಬಂದಿದೆ.
ಕೆಲವು ಸಿನೆಮಾಗಳು ಮೂಲ ಭಾಷೆಯಲ್ಲಿ ಮಾಸ್ಟರ್ ಪೀಸ್ ಎನಿಸಿಕೊಳ್ಳುತ್ತವೆ.ಅವುಗಳನ್ನು ನಮ್ಮ ಭಾಷೆಗೆ ತರುವುದು ಸುಲಭದ ಕೆಲಸವಲ್ಲ. ಅಂತಹ ಸಿನೆಮಾಗಳಲ್ಲಿನ ಪಾತ್ರಧಾರಿಗಳ ಆಯ್ಕೆಯೇ ಸವಾಲಿನ ಕೆಲಸ. ಆದರೆ ಕನ್ನಡದ ಕೆಲವರು ಯಾವ ಯಗ್ಗು ಸಿಗ್ಗಿಲ್ಲದೆ ಅಂತಹ ಮಾಸ್ಟರ್ ಪೀಸ್ ಗಳನ್ನೇ ಕನ್ನಡಕ್ಕೆ ತಂದಿರುವುದು ಆಶ್ಚರ್ಯ ಎನಿಸುತ್ತದೆ.
ಇವು ನಾನು ಬಿಡುಗಡೆಯಾಗುವ ಬಹುತೇಕ ಚಿತ್ರಗಳನ್ನು ನೋಡುವುದರಿಂದ ಗೊತ್ತಾಗುತ್ತದೆ. ಆದರೆ ಗೊತ್ತಿಲ್ಲದೆಯೇ ಇನ್ನೂ ಯಾವ್ಯಾವ ಮಹಾನ್ ಚಿತ್ರಗಳು ಕನ್ನಡೀಕರಣಗೊಂಡಿವೆಯೋ..
ನಿಮ್ಮ ಅನುಭವಕ್ಕೆ ಬಂದಿರುವ ಅಂತಹ ಸಿನಿಮಾ ಯಾವುವು..? 

Tuesday, April 30, 2013

ವಿಕ್ಷಿಪ್ತತೆ, ಸೂರಿ ಮತ್ತು ಕಡ್ಡಿಪುಡಿ ಸಿನಿಮಾ..

 ವಿಕ್ಷಿಪ್ತ ಮತ್ತು ವಿಕೃತದ ನಡುವಿನ ಅಂತರ ಬಹಳ ದೊಡ್ಡದು ಎಂದು ಕೆಲವೊಮ್ಮೆ ಅನಿಸಿದರೆ ಕೆಲವೊಮ್ಮೆ ಎರಡರ ನಡುವಿನ ಅಂತರ ತುಂಬಾ ಚಿಕ್ಕದು ಅಥವಾ ಸಣ್ಣ ಎಳೆ ಎನಿಸುತ್ತದೆ.ಅದರಲ್ಲೂ ಸಿನಿಮಾ ವಿಷಯಕ್ಕೆ ಬಂದಾಗ ಕೆಲವು ನಿರ್ದೇಶಕರ ವಿಕ್ಷಿಪ್ತ ಮನಸ್ಥಿತಿ ಅಥವಾ ಅವರ ಕಥೆಯಲ್ಲಿನ ವಿಕ್ಷಿಪ್ತ ದೃಷ್ಟಿ ಅಚ್ಚರಿ ಮೂಡಿಸದೇ ಇರದು. ನಾವು ನೋಡುವ ದೃಷ್ಟಿಗೂ ಅವರು ತೋರಿಸುವ ಜಗತ್ತಿನ ಸೃಷ್ಟಿಗೂ ಅಜಗಜಾಂತರ ವ್ಯತ್ಯಾಸವಿರುವುದು ಕಂಡುಬರುತ್ತದೆ. ಆದರೆ ಎಲ್ಲರೂ ಜಗತ್ತನ್ನು ವಾರೆಗಣ್ಣಿಂದ ನೋಡಲು ಸಾಧ್ಯವಿಲ್ಲ. ಅದರಲ್ಲೂ ಒಂದು ಮಾಧ್ಯಮದಲ್ಲಿರುವ ಮರುಸೃಷ್ಟಿಗೆ ಅವಕಾಶವಿರುವ ಸೃಜನಶೀಲ ವ್ಯಕ್ತಿಗಳ ಬರಹ, ಚಿತ್ರಣ ಅಥವಾ ಒಟ್ಟಾರೆಯಾಗಿ ಅವರ ಸೃಷ್ಟಿ ನಮಗೊಂದು ಭಿನ್ನವಾದ‘ಲೋಕವನ್ನೇ ದರ್ಶಿಸುವುದು ನಿಜ.
ಇನ್ನು ಸಿನಿಮಾದ ವಿಷಯಕ್ಕೆ ಬಂದಾಗ ಒಬ್ಬ ನಿರ್ದೇಶಕ ತಾನು ನೋಡಿದ ಅಥವಾ ತನಗಿಷ್ಟವಾದದ್ದನ್ನೇ ತೆರೆಯ ಮೇಲೆ ತಂದರೆ ಅದು ಅತ್ಯುತ್ತಮವಾಗಿರುತ್ತದೆ ಅಷ್ಟೇ ಅಲ್ಲ.ಆ ಕಥಗೊಂದು ನ್ಯಾಯ ಸಿಗುತ್ತದೆ. ಬಲವಂತವಾಗಿ, ಸೂಕ್ತ ಅದ್ಯಯನವಿಲ್ಲದೇ ಒಂದು ಭಿನ್ನ ಕಥೆಯನ್ನು ನಿರೂಪಿಸಹೊರಟಾಗ ಸಾಕಷ್ಟು ಅಪಸವ್ಯವಾಗುವುದು ಸತ್ಯ. 
ನಿರ್ದೇಶಕ ಬಾಲಾರ ಯಾವುದೇ ಸಿನಿಮಾ ತೆಗೆದುಕೊಳ್ಳಿ. ಅದು ವಿಕ್ಷಿಪ್ತ ಎನ್ನಬಹುದು. ಅವರು ಜಗತ್ತನ್ನು ನೋಡಿರುವ ಅಥವಾ ನೋಡುವ ರೀತಿಯೇ ಭಿನ್ನವಾದದ್ದು. ಅವರ ಚಿತ್ರಗಳಲ್ಲಿ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಇರುತ್ತವೆ. ಹಾಸ್ಯ, ಹಾಡು, ಹೊಡೆದಾಟ, ಕೊಲೆ ಹೀಗೆ ಆದರೆ ಚಿತ್ರ ಮಾಮೂಲಿ ಮಸಾಲೆ ಸಿನಿಮಾ ಎನಿಸುವುದಿಲ್ಲ. 
ಕನ್ನಡದಲ್ಲಿ ಸೂರಿ ನಿರ್ದೇಶನದ ,ದುನಿಯಾ’ ಚಿತ್ರ ಬಂದಾಗ ನನ್ನಂತಹ ಯುವ ನಿರ್ದೇಶಕರಿಗೆ ಪುಳಕವಾದದ್ದಂತೂ ನಿಜ.ದುನಿಯಾ ಚಿತ್ರದಲ್ಲಿನ ದೃಶ್ಯರಚನೆ, ದೃಶ್ಯ ಜೋಡನೆ, ಪಾತ್ರ ಪೋಷಣೆ ಮತ್ತು ನಿರೂಪಣೆ ಮೆಚ್ಚುವಂತಹದ್ದು. ನಮ್ಮ ನಡುವಿನ ಜಗತ್ತನ್ನು ವಿಕ್ಷಿಪ್ತವಾಗಿ ತೋರಿಸಿದ್ದರು ಸೂರಿ. ಆದರೆ ಅದಾದ ಮೇಲೆ ಸೂರಿ ಬಲವಂತವಾಗಿ ತಮ್ಮ ಚಿತ್ರಗಳಲ್ಲಿ ಜಗತ್ತನ್ನು ವಿಭಿನ್ನವಾಗಿ ತೋರಿಸಲು ಪ್ರಯತ್ನಿಸಿದರೇನೋ..? ಹಾಗಾಗಿಯೇ ಅವರ ಮುಂದಿನ ಚಿತ್ರಗಳಲ್ಲಿ ಭಿನ್ನತೆಗಿಂತ
ಕ್ರೌರ್ಯ ಭೀಭತ್ಸಗಳು ರೌದ್ರಾವತಾರ ತಾಳಿದ್ದವು. ಎಲ್ಲವನ್ನು ಬೇರೊಂದು ದೃಷ್ಟಿಕೋನದಿಂದ ನೋಡಲೇಬೇಕು, ಪ್ರೇಕ್ಷಕ ಸೂರಿ ಸಿನಿಮಾಗಳಿಂದ ಬೇರೇನೋ ನಿರೀಕ್ಷಿಸುತ್ತಾನೆ ಎಂದು ಅವರಂದುಕೊಂಡರೇನೋ ಎಂಬಂತೆ ಅವರ ತದನಂತರ ಚಿತ್ರಗಳ ದೃಶ್ಯಗಳು, ಪಾತ್ರಗಳು ಅವುಗಳ ಹಿನ್ನೆಲೆ ಮುಂತಾದವುಗಳು ತೀರಾ ಸಾಮಾನ್ಯವಾಗಿರಲಿಲ್ಲ. ಅಷ್ಟೆಲ್ಲಾ ಮಾತನಾಡುವ ದುನಿಯಾದಲ್ಲಿನ ರಂಗಾಯಣ ರಘು ಪಾತ್ರವನ್ನು ಇತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಏಕಾಏಕಿ ಮೂಕನನ್ನಾಗಿಸಿದರು.ಹಾಗೆ ಮುಂದುವರೆದರೆ ಜಾಕಿ ಚಿತ್ರದಲ್ಲಿ ಹೆಣ ಇಟ್ಟುಕೊಂಡು ಅಪಹಾಸ್ಯ ಮಾಡುವ, ಅಣ್ಣಾಬಾಂಡ್ ನಲ್ಲೂ ಅದನ್ನೇ ಮುಂದುವರೆಸಿದರು. ಬಹುಶ ಅದೇ ಅವರ ಹಿನ್ನೆಡೆಗೆ ಕಾರಣವಿರಬಹುದು.
ಚಿತ್ರದಲ್ಲಿನ ಕಥೆಯಲ್ಲಿ ವಿಕ್ಷಿಪ್ತತೆಯನ್ನು ಬಲವಂತವಾಗಿ ಕಟ್ಟಿಕೊಡುವ ಪ್ರಯತ್ನದಿಂದಾಗಿಯೇ ಸೂರಿ ಚಿತ್ರಗಳು ಇಷ್ಟೇನಾ ಎನ್ನುವ ಹಣೆಪಟ್ಟಿ ಪಡೆದುಕೊಂಡವು ಎನ್ನಬಹುದು.
ಈಗ ಕಡ್ಡಿಪುಡಿ ಚಿತ್ರ ತೆರೆಗೆ ಬರುವ ಹಂತದಲ್ಲಿದೆ. ಅದರ ಪ್ರೋಮೋ ಕೂಡ ಅಲ್ಲಲ್ಲಿ ಹರಿದಾಡುತ್ತಿದೆ. ಬರೀ ಪ್ರೋಮೋ ನೋಡಿ ಯಾವುದನ್ನೂ ತೀರ್ಮಾನಿಸಲಾಗುವುದಿಲ್ಲವಾದರೂ ಮತ್ತೊಂದು ಸೂರಿ ಶೈಲಿಯ ಚಿತ್ರ ಎನ್ನುವುದರಲ್ಲಿ ಸಂಶಯ ಬರುವುದಿಲ್ಲ.ಚಿತ್ರದ ಸ್ತಿಲ್ಸ್ ಕೂಡ ಅದೇ ಕಥೆಯನ್ನು ಹೇಳುತ್ತವೆ. ಪ್ರೋಮೋದಲ್ಲಿನ ದೃಶ್ಯ ನನಗೆ ಸಿಟಿ ಆಫ಼್ ಗಾಡ್ ಚಿತ್ರದಲ್ಲಿನ ದೃಶ್ಯವೊಂದನ್ನು ನೆನಪಿಸಿತು. ಜಂಗ್ಲಿಯ ಮೊದಲ ದೃಶ್ಯ ಕೂಡ ಪಲ್ಪ್ ಫಿಕ್ಷನ್ ಚಿತ್ರದಲ್ಲಿನ ದೃಶ್ಯಕ್ಕೆ ಹೋಲಿಕೆಯಾಗುತ್ತಿತ್ತು.ಜಂಗ್ಲಿ ಚಿತ್ರದಲ್ಲಿ ಕಾರಿನ ಹಿಂಬದಿಯಲ್ಲಿ ಕೊಲೆ ಮಾಡಬೇಕಾಗಿರುವ ವ್ಯಕ್ತಿಯನ್ನಿಟ್ಟುಕೊಂಡು ಅದೊಂದು ವಿಷಯ ಬಿಟ್ಟು ಬೇರೆಲ್ಲಾ ಉಡಾಫೆಯ ತಮಾಷೆಯ ಮಾತಾಡಿಕೊಂಡು ಹೋಗುತ್ತಾರೆ, ಅದೇ ರೀತಿಯಲ್ಲಿ ಪಲ್ಪ್ ಪಿಕ್ಷನ್ ಚಿತ್ರದಲ್ಲಿ ಕೊಲೆ ಮಾಡಲು ಸಿದ್ಧರಾಗಿ ಹೋಗುವ ಜಾನ್ ಟ್ರವೋಲ್ಟ ಮತ್ತು ಸಾಮುವೆಲ್ ಜಾಕ್ಸನ್ ಆ ವಿಷಯವೊಂದನ್ನು ಬಿಟ್ಟು ಬೇರೆಲ್ಲಾ ಮಾತಾಡಿಕೊಂಡು ಹೋಗುತ್ತಾರೆ. ಸ್ಪೂರ್ತಿ ಏನೇ ಇರಲಿ. ಕನ್ನಡದ ಮಟ್ಟಿಗೆ ಬಹು ನಿರೀಕ್ಷೆಯ ನಿರ್ದೇಶಕ ಸೂರಿ. ಆದರೆ ದುನಿಯಾ ನಂತರದ ಅವರ ಯಾವ ಚಿತ್ರವೂ ಪ್ರೇಕ್ಷಕರನ್ನು ಸಂಪೂರ್ಣ ತಣಿಸಿಲ್ಲ. ಆದರೂ ಚಿತ್ರದಿಂದ ಚಿತ್ರಕ್ಕೆ ನಿರೀಕ್ಷೆ ಇಮ್ಮಡಿಯಾಗುತ್ತಲೇ ಇದೆ. ಇನ್ನು ಚಿರಯುವಕ ಶಿವರಾಜ್ ಕುಮಾರ್ ರವರ ಇತ್ತೀಚಿನ ಚಿತ್ರಗಳು ಯಾವುವೂ ಯಶಸ್ಸಿನ ಹಾದಿ ಹಿಡಿದಿಲ್ಲ. ಈ ಚಿತ್ರ ಶಿವಣ್ಣರಿಗೆ ಯಶಸನ್ನ ತಂದುಕೊಟ್ಟು, ಸೂರಿ ಮೇಲಿನ ಭರವಸೆಯನ್ನುಳಿಸಿ  ಪ್ರೇಕ್ಷಕರ ನಿರೀಕ್ಷೆಯನ್ನು ಜೀವಂತವಾಗಿಡಬೇಕಾಗಿದೆ.
ಹಾಗಾಗಿ ಕಡ್ಡಿಪುಡಿಯ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ

ವಿಶೇಷ ಚಿತ್ರ...26

ಸ್ಪೆಷಲ್ 26 ಚಿತ್ರ ನಿಜಕ್ಕೂ ವಿಶೇಷವಾದ ಚಿತ್ರ ಎನ್ನಬಹುದು. ಕಥೆ, ನಿರೂಪಣೆಯ ದೃಷ್ಟಿಯಿಂದಾಗಿ, ಕಲಾವಿದರ ಅಭಿನಯದ ದೃಷ್ಟಿಯಿಂದಾಗಿ ಈ ಚಿತ್ರ ನೋಡಲೇಬೇಕಾದ ಚಿತ್ರ ಎನಿಸಿಕೊಳ್ಳುತ್ತದೆ.1987ರ ಮಾರ್ಚ್ ತಿಂಗಳಲ್ಲಿ  ಮುಂಬೈನಲ್ಲಿ ನಡೆದ ಸುಳ್ಳು ತೆರಿಗೆ ದಾಳಿಯನ್ನಾಧರಿಸಿದ ಚಿತ್ರ ಇದು. ನಿಜ ಕಥೆಯ ಚಿತ್ರವಾದರೂ ನಿರ್ದೇಶಕ ಇದನ್ನು ಒಂದು ಸಾಕ್ಷ್ಯಚಿತ್ರವನ್ನು ಮಾಡಲು ಹೋಗಿಲ್ಲ. ಒಂದು ಪರಿಪೂರ್ಣ ಮನರಂಜನೆಯ ಚಿತ್ರಕ್ಕೇ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ತುಂಬಿಸಿರುವುದರಿಂದ ಚಿತ್ರ ಕುತೂಹಲ ಕೆರಳಿಸುತ್ತಾ ಸಾಗುತ್ತದೆ.
ಚಿತ್ರದ ಕಥೆ ಇಂತಿದೆ. ಆವತ್ತು ಜನವರಿ ಇಪ್ಪತ್ತಾರು. ಅಲ್ಲಿನ ಪೋಲೀಸ್ ಸ್ಟೇಷನ್ನಿಗೆ ಕರೆಯೊಂದು ಬರುತ್ತದೆ. ಅದನ್ನು ತೆಗೆದುಕೊಳ್ಳುವ ಪೋಲೀಸ್ ಅಧಿಕಾರಿಗೆ ಅತ್ತಲಿನ ಧ್ವನಿಯೊಂದು ತಾವು ಸಿ.ಬಿ.ಐ.ನವರು, ಈಗ ಒಬ್ಬ ಗಣ್ಯವ್ಯಕ್ತಿಯ ಮನೆಗೆ ದಾಳಿಗೆ ಹೋಗುತ್ತಿದ್ದೇವೆ, ಅದಕ್ಕೆ ಪೋಲೀಸ್ ಸಹಕಾರ ಬೇಕು ಎಂದಾಗ ಪೋಲೀಸ್ ಅಧಿಕಾರಿ ಒಪ್ಪಿಕೊಳ್ಳುತ್ತಾನೆ. ಒಬ್ಬ ಮಂತ್ರಿಯ ಮನೆಗೆ ನುಗ್ಗಿ ದಾಳಿ ನಡೆಸಿ ಅವನಲ್ಲಿದ್ದ ಹಣ, ಚಿನ್ನವನ್ನೆಲ್ಲಾ ದಸ್ತಗಿರಿಮಾಡುವ ಸಿ.ಬಿ.ಐನವರು ವಂಚಕರು ಎಂಬುದು ಆನಂತರ ಗೊತ್ತಾಗುತ್ತದೆ. ಈಗ ಅವರು ದೋಚಿರುವ ಸಂಪತ್ತು ಕಪ್ಪುಹಣವಾದ್ದರಿಂದ ಮಂತ್ರಿ ಅದನ್ನು ಸಾರ್ವಜನಿಕರ ಗಮನಕ್ಕೆ ತರಲು ಮನಸ್ಸುಮಾದುವುದಿಲ್ಲ. ಆದರೆ ಇದರಿಂದಾಗಿ ಪೋಲೀಸ್ ಆಫ಼ೀಸರ್ ಸಸ್ಪೆಂಡ್ ಆಗಬೇಕಾಗಿಬರುತ್ತದೆ. ಆತ ತನಿಖೆ ಮಾಡುತ್ತಾ ಸಾಗಿದಂತೆ ಇದೇ ತರಹದ ನಕಲಿ ದಾಳಿಗಳು ಸುಮಾರು ಕಡೆ ನಡೆದಿರುವುದು ತಿಳಿದುಬರುತ್ತದೆ. ಈ ಕೇಸಿನ ತನಿಖೆಯನ್ನು ನಿಷ್ಠಾವಂತ ದಕ್ಷ ಪೋಲೀಸ್ ಅಧಿಕಾರಿಗೆ ವಹಿಸಲಾಗುತ್ತದೆ.
ಇತ್ತ ವಂಚಕರ ಗುಂಪು ಈ ಸಾರಿ ಅದಕ್ಕಿಂತಲೂ ದೊಡ್ದ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ಆದರೆ ಅದು ಆ ಪೋಲೀಸಗೆ ತಿಳಿಯುತ್ತದೆ. ಅವರನ್ನು ನಕಲಿದಾಳಿ ಮಾಡುತ್ತಿರುವಾಗಲೇ ಹಿಡಿಯಬೇಕೆಂದು ಆ ಅಧಿಕಾರಿ ಪ್ಲಾನ್ ಮಾಡುತ್ತಾನೆ. ಇದಾವುದೂ ಗೊತ್ತಿರದ ಅವರು ತಮ್ಮ ಕಾರ್ಯವನ್ನು ಕೈಗೊಳ್ಳಲು ಮುಂದಾಗುತ್ತಾರೆ. ಮುಂದೆ,,?
ಚಿತ್ರ ಶರವೇಗದಲ್ಲಿ ಸಾಗುತ್ತದೆ. ಕೊನೆಯವರೆಗೂ ತನ್ನ ಕುತೂಹಲವನ್ನು ಉಳಿಸಿಕೊಳ್ಳುವ ಚಿತ್ರ ಕೊನೆಯಲ್ಲಿ ನೋಡುಗನಿಗೆ ಶಾಕ್ ಕೊಡುತ್ತದೆ.
ಚಿತ್ರದಲ್ಲಿನ ಸಂಭಾಷಣೆ ಮತ್ತು  ಚಿತ್ರಕಥೆ ಚಿತ್ರವನ್ನು ಹೆಚ್ಚು ಆಸಕ್ತಿಕರವನ್ನಾಗಿ ಮಾಡಿವೆ. ಅದರಲ್ಲೂ ಎಲ್ಲೂ ಸುಳಿವು ಬಿಟ್ಟುಕೊಡದ ಚಿತ್ರಕಥೆಯೇ ೨೬ರ ಹೈಲೈಟ್. ಹಾಗೆ ಹಿನ್ನೆಲೆ ಸಂಗೀತ ಸಿನಿಮಾದ ಗತಿಗೆ ಸಹಕಾರಿಯಾಗಿದೆ.
ವಂಚಕರ ನಾಯಕನಾಗಿ ಅಕ್ಶಯಕುಮಾರ್ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಗುಂಪಿನ ಸದಸ್ಯನಾಗಿ ಅನುಪಮ್ ಖೇರ್ ರದು ಪಾತ್ರೋಚಿತ ಅಭಿನಯ. ಚಿತ್ರದಲ್ಲಿ ನಮಗಿಷ್ಟವಾಗುವುದು ಮನೋಜ್ ಬಾಜಪೇಯಿ. ದಕ್ಷ ಪೋಲೀಸ್ ಅಧಿಕಾರಿಯಾಗಿ ಕಡಕ್ಕಾಗಿ ಪಾತ್ರ ನಿರ್ವಹಿಸಿದ್ದಾರೆ ಮನೋಜ್. ಹಾಗೆ ಮತ್ತೊಂದು ಮಹತ್ವದ ಪಾತ್ರ ನಿರ್ವಹಿಸಿರುವ ಜಿಮ್ಮಿ ಶೇರ್ ಗಿಲ್ ಕೂಡ ತಮ್ಮ ನಟನೆಯಿಂದಾಗಿ ಗಮನಸೆಳೆಯುತ್ತಾರೆ.
ಎ ವೆಡ್ನೆಸ್ ಡೇ ತರಹದ ಪ್ರಸ್ತುತ ಭಯೋತ್ಪಾದಕ ವಿರೋಧಿ ಥ್ರಿಲ್ಲರ್ ಚಿತ್ರ ನೀಡಿದ್ದ ನೀರಜ್ ಪಾಂಡೆಯವರ ನಿರ್ದೇಶನ ನಿಜಕ್ಕೂ ಅಭಿನಂದನಾರ್ಹ. ಒಮ್ಮೆ ನೋಡಿ ಎಂದು ಧೈರ್ಯವಾಗಿ ಶಿಫ಼ಾರಸ್ಸು ಮಾಡಬಹುದಾದ ಚಿತ್ರ ಸ್ಪೆಶಲ್ 26

Friday, April 26, 2013

ವರ್ಷಾಚರಣೆಯಲ್ಲಿ ನನ್ನ ಬ್ಲಾಗು...

ಸಾರ್..ಸಂಭಾವನೆ ಆಮೇಲೆ ಮಾತಾಡೋಣ..ನನ್ನ ಮೊದಲ ಚಿತ್ರವಾದ್ದರಿಂದ ನನಗೆ ಒಂದಷ್ಟು ಸ್ವಾತಂತ್ರ್ಯ ಕೊಡಿ, ನನ್ನ ಮೇಲೇ ನಂಬಿಕೆ ಇಡಿ ಎಂದು ನಮ್ಮ ನಿರ್ಮಾಪಕರಿಗೆ ಹೇಳಿದ್ದೆ. ಇದು ಮೂರ್ನಾಲ್ಕು ವರ್ಷಗಳ ಹಿಂದಿನ ಮಾತು. ಅದಕ್ಕೆ ನಿರ್ಮಾಪಕರೂ ಒಪ್ಪಿದ್ದರು . ಹಾಗೆ ನನ್ನ ಮೊದಲ ಸಿನೆಮಾದ ಯಾನ ಪ್ರಾರಂಭವಾಗಿತ್ತು. ಮೊದಲ ಸಿನಿಮಾ ಹೀಗೆಯೇ ಇರಬೇಕೆಂಬ ಆಸೆ, ಚಿತ್ರಣ ನನ್ನ ಕಣ್ಣಲ್ಲಿತ್ತು. ನನ್ನ ಗೆಳೆಯರು ನನ್ನ ಮೊದಲ ಸಿನಿಮಾವಾದ್ದರಿಂದ ಹೆಚ್ಚು ಹಣ ಅಪೇಕ್ಷೆ ಮಾಡದೇ ಕೆಲಸ ಮಾಡಲು ಸಿದ್ಧರಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏನಾಗುತ್ತಿತ್ತೋ? ಆದರೆ ಆಗಲಿಲ್ಲ, ನಿರ್ಮಾಪಕರ ಸಣ್ಣತನದ ಸಂಪೂರ್ಣ ಅರಿವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿತ್ತು. ನಮ್ಮ ನಡುವೆ ಒಂದು ಒಪ್ಪಂದವೂ ಆಗಿಹೋಗಿತ್ತು. ಅದರ ಪ್ರಕಾರ ನಾನೇ ನಾನಾಗಿ ಸಿನಿಮಾ ಮಾಡುವುದಿಲ್ಲ ಎಂದು ಹೋಗುವ ಆಗಿರಲಿಲ್ಲ..ಅಕಸ್ಮಾತ್ ಹಾಗೆ  ಹೋಗುವುದಾದರೆ ಅಲ್ಲಿಯವರೆಗೆ ನಿರ್ಮಾಪಕರ ವೆಚ್ಚವನ್ನೆಲ್ಲಾ ಭರಿಸಿ ಹೋಗಬೇಕಾಗಿತ್ತು. ಹಾಗೆಯೇ ನಿರ್ಮಾಪಕರೂ ಸಕಾರಣವಿಲ್ಲದೇ ನನ್ನ ಸಿನಿಮಾ ಮಾಡದೆ ನಿಲ್ಲಿಸುವ ಹಾಗಿರಲಿಲ್ಲ. ಏಕೋ ಏನೋ ಚಿತ್ರದ ಬರವಣಿಗೆಯ ಕೆಲಸ ಮುಗಿದನಂತರ ನಿರ್ಮಾಪಕರಿಗೆ ಚಿತ್ರವನ್ನು ಮುಂದುವರೆಸುವ ಮನಸ್ಸಾಗಲಿಲ್ಲ. ಹಾಗಂತ ಸಿನಿಮಾ ನಿಲ್ಲಿಸುವ ಹಾಗೂ ಇರಲಿಲ್ಲ. ಅಷ್ಟರಲ್ಲಾಗಲೆ ಕೆಲವು ಲಕ್ಷಗಳೂ ಕೈಬಿಟ್ಟಿದ್ದವು. ಈ ಎಲ್ಲಾ ಗೊಂದಲಗಳಿಂದ ನಾನು ಒಂದೆಡೇ ಅನಾಮತ್ತು ಐದಾರು ತಿಂಗಳು ಸುಮ್ಮನೇ ಇರಬೇಕಾದ ಕೆಟ್ಟ ಪರಿಸ್ಥಿತಿ ಬಂದುಬಿಟ್ಟಿತ್ತು. ನನಗೂ ನಿರ್ಮಾಪಕರಿಗೂ ಮುಖ ಕಂಡರೇ ಆಗದಂತಹ ಪರಿಸ್ಥಿತಿ. ಆ ತಿಂಗಳುಗಳಲ್ಲಿ ಏನು ಮಾಡುವುದು? ಹತಾಷೆ ಬೇಸರ ನನ್ನನ್ನಾವರಿಸಿದ್ದವು. ಅದನ್ನು ಕಳೆಯಲು ಪುಸ್ತಕ ಸಿನಿಮಾಗಳ ಮೊರೆಹೋದೆ. ದಿನಕ್ಕೆ ಕನಿಷ್ಟ ನಾಲ್ಕು ಸಿನಿಮಾ ನೋಡತೊಡತೊಡಗಿದೆ. ಜಗತ್ತಿನ ಮೂಲೆಮೂಲೆಯ ಚಿತ್ರಗಳನ್ನು ಹುಡುಕಿಹುಡುಕಿ ನೋಡಿದೆ. ಆನಂತರ ಆ ಸಿನಿಮಾ ನಿಂತು ಹೋಗಿ ಆ ನಿರ್ಮಾಪಕರಿಗೂ ನನಗೂ ಸಂಧಾನವೂ ಆಗಿ ನಾನು ಮತ್ತೆ ಬಂದು ನನ್ನ ಕೆಲಸಗಳಲ್ಲಿ ತೊಡಗಿಸಿಕೊಂಡರೂ ಸಿನಿಮಾ ನೋಡುವುದನ್ನು ಬಿಟ್ಟಿರಲಿಲ್ಲ. ಮತ್ತೆ ಬದುಕು ಹೇಗೇಗೊ ಆಗುತ್ತಿತ್ತು. ಕೈ ಹಾಕಿದ ಕೆಲಸ ಕೈಹಿಡಿಯುತ್ತಿರಲಿಲ್ಲ. ಸೋಲು ಕಂಗೆಡಿಸುತ್ತಿತ್ತು. ಆದರೂ ಸಿನಿಮಾವನ್ನು ಎಡೇಬಿಡದೇ ನೋಡತೊಡಗಿದ್ದೆ. 
ಅದೊಂದು ದಿನ ನಾನು ಫಿಲಿಪ್ ಮಾತಾಡುತ್ತಾ ಕುಳಿತ್ತಿದ್ದೆವು. ಫಿಲಿಪ್ ನಿಮಗೆ ಇಷ್ಟು ಚಿತ್ರಗಳ ನಾಲೆಜ್ ಇದೆ. ಹಾಗೆ ಬರವಣಿಗೆಯೂ ಇದೆ. ಪುಸ್ತಕ ಓದುತ್ತೀರಿ. ನೀವ್ಯಾಕೆ ಇದಕ್ಕೆ ಸಂಬಂಧಿಸಿದ ಬ್ಲಾಗ್ ಬರೆಯಬಾರದು ಎಂದರು. ನನಗೆ ಬ್ಲಾಗ್ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಸರಿ ಪ್ರಯತ್ನಿಸುವ ಎಂದು ಮನೆಗೆ ಬಂದವನಿಗೆ ಫಿಲಿಪ್ ಒಂದಷ್ಟು ಬ್ಲಾಗುಗಳ ಲಿಂಕ್ ಕಳಿಸಿದ್ದರು. ಅದರ ಜೊತೆಗೆ ಕನ್ನಡದ ಸುಮಾರು ಬ್ಲಾಗುಗಳನ್ನು ಓದಿದೆ. ಸಿನಿಮಾಕ್ಕೆ ಸಂಬಂಧಿಸಿದ ಬ್ಲಾಗುಗಳನ್ನು ತಿರುವಿಹಾಕಿದೆ. ಸರಿ ಒಂದು ಬ್ಲಾಗು ಮಾಡೇ ಬಿಡುವ ಎಂದು ನನ್ನ ಮೊದಲ ಬ್ಲಾಗು ಬರೆದೆ. ಅದು ಯಶಸ್ವಿಯಾಗಲಿಲ್ಲ. ಅದನ್ನು ಪೋಸ್ಟ್ ಮಾಡುವ ಅದನ್ನು ಫೇಸ್ ಬುಕ್ ನಲ್ಲಿ ಲಿಂಕ್ ಮಾಡುವ ಮುಂತಾದವುಗಳು ನನಗೆ ಗೊತ್ತಿರಲಿಲ್ಲ. ಹಾಗೆ ನನಗೆ ಅಂತರ್ಜಾಲ ಸಂಬಂಧಿ ಗೆಳೆಯರೂ ಹೆಚ್ಚು ಜನರಿರಲಿಲ್ಲ.
ಆನಂತರ ರವೀಂದ್ರ ಟಾಕೀಸ್ ಮಾಡಿದೆ. ಈವತ್ತಿಗೆ ಒಂದು ವರ್ಷವಾಯಿತು. ಬರೆಬರೆಯುತ್ತಾ ಎಷ್ಟೋ ವಿಷಯಗಳು ನನಗೆ ಅರಿವಾದವು. ಈಗಂತೂ ದಿನಾ ಸಮಯ ಸಿಕ್ಕಾಗಲೆಲ್ಲಾ ಸುಮಾರಷ್ಟು ಬ್ಲಾಗುಗಳನ್ನು ಓದುತ್ತೇನೆ. ಕೆಲವನ್ನು ರೆಗ್ಯುಲರಾಗಿ ಓದುತ್ತೇನೆ. ಹೊಸ ಬ್ಲಾಗು ಪ್ರಾರಂಭವಾದರೆ ಇನ್ನು ಖುಷಿಯಿಂದ ಓದುತ್ತೇನೆ. ಬ್ಲಾಗುಗಳ ಮೂಲಕ ಹೊಸ ಲೋಕವೊಂದು ತೆರೆದುಕೊಂಡಂತೆನಿಸಿದೆ. ಹಾಗೆ ನನ್ನ ಹಲವಾರು ಸೋಲು ಹತಾಷೆಗೆ ಅದ್ಭುತವಾದ ಔಷಧವಾಗಿದೆಯಲ್ಲದೇ, ನನಗೆ ಹಲವಾರು ಸಮಾನಮನಸ್ಕ ಗೆಳೆಯರನ್ನು ಸಂಪಾದಿಸಿಕೊಟ್ಟಿದೆ.
ಹಾಗಾಗಿ ನಾನು ಬ್ಲಾಗಿಗೆ ಋಣಿಯಾಗಿದ್ದೇನೆ.

Monday, April 22, 2013

ಬೆಳದಿಂಗಳ ಬಾಲೆಯ ಕನವರಿಕೆ...

ಕೆಲವೊಮ್ಮೆ ನಾವೇ ಮೆಚ್ಚಿದ ನಮ್ಮದೇ ಕಥೆಗಳು, ಆಲೋಚನೆಗಳು ಹಲವಾರು ದಿನ ಕಳೆದ ನಂತರ ನಮಗೆ ಔಟ್ ಡೇಟೆಡ್ ಎನಿಸುತ್ತದೆ. ಹಾಗೆ ಕೆಲವು ಸಿನೆಮಾಗಳ ವಸ್ತುಗಳೂ ಅಷ್ಟೇ. ತಂತ್ರಜ್ಞಾನ ಬೆಳೆದಂತೆ ಆವತ್ತಿನ ಸಿನೆಮಾವನ್ನು ಈವತ್ತು ನೋಡಿದಾಗ ಅರ್ಥಹೀನ ಎನಿಸುತ್ತದೆ. ಆದರೆ ಸಿನೆಮಾವನ್ನು ಆವತ್ತಿನ ಕಾಲಮಾನದಲ್ಲೇ ನೋಡಿದಾಗ ಮಾತ್ರ ನಮಗೆ ತಟ್ಟುತ್ತದೆ. ಅದರಲ್ಲೂ ನನ್ನ ಪೀಳಿಗೆಯವರು ನಾವು ಅದೃಷ್ಟವಂತರು ಎನ್ನಬಹುದು. ನಮಗೆ ಪತ್ರ ಬರೆಯುವ, ಪೋಸ್ಟ್ ಮಾಡುವ, ಅ೦ಚೆಗಾಗಿ ಕಾಯುವ ..ಎಲ್ಲವೂ ಅನುಭವಕ್ಕೆ ನಿಲುಕಿವೆ. ಹಾಗೆಯೇ ಇಮೇಲ್ ಕೂಡ ಗೊತ್ತು. ಎಸ್ಎಂ ಎಸ್ ಕೂಡ ನಮ್ಮ ಕೈಯಲ್ಲಿದೆ. ಆದರೆ ತೀರಾ ಇತ್ತೀಚಿನ ಪೀಳಿಗೆಗೆ ಇಮೇಲ್ ಗೊತ್ತೇ ಹೊರತು ಅಂಚೆ ಗೊತ್ತಿಲ್ಲ. ಪತ್ರ ಬರೆದಿಲ್ಲ. ಅಥವಾ ಬರೆಯುವ ಅವಶ್ಯಕತೆ ಇಲ್ಲ. 
ನನಗನಿಸಿದ ಪ್ರಕಾರ ಯಾರನ್ನಾದರೂ ಮಿಸ್ ಮಾಡಿಕೊಳ್ಳಲು ಈವತ್ತಿನ ಮಟ್ಟಿಗೆ ಸಾಧ್ಯವಿಲ್ಲ. ಅಥವಾ ಮಿಸ್ ಮಾಡಿಕೊಳ್ಳುವ ತೀವ್ರತೆ ಆವತ್ತಿನಷ್ಟಿಲ್ಲ. ಕಾಲೇಜಿನಲ್ಲಿ ಪ್ರೀತಿಸುವ ಅಥವಾ ಆಗ ತಾನೇ ಪ್ರೀತಿಗೆ ಬಿದ್ದವರು ಬೇಸಿಗೆಯ ಅಥವಾ ದಸರಾ ರಜೆಗೆ ತಮ್ಮ ತಮ್ಮ ಊರಿಗೆ ತೆರಳಿದಾಗ ಅವರ ಚಡಪಡಿಕೆಗಳು ಅದೆಷ್ಟಿರುತ್ತಿದ್ದವು. ಬರೀ ಟೆಲೆಫೋನ್ ನಲ್ಲಿ ಕದ್ದು ಮುಚ್ಚಿ ಮಾತಾಡಿಕೊಳ್ಳುವ ಪುಳಕ ಈಗೆಲ್ಲಿ. ತಿಂಗಳುಗಟ್ಟಲೆ ಮಿಸ್ ಮಾಡಿಕೊಳ್ಳುತ್ತಾ ಆ ಮೂಲಕ ಕಾಯುತ್ತ ಕೊನೆಗೊಂದು ದಿನ ಭೇಟಿಯಾದಾಗ ಮಾತು ಬರದೆ ಸುಮ್ಮನೆ ಮುಖ ಮುಖ ನೋಡುತ್ತಾ ಕಣ್ಣಂಚಿನಲ್ಲಿ ನೀರು ಜಿನುಗಿ...ಇಡೀ ದಿನಗಟ್ಟಲೆ ಹೇಗೆ ಬರೀ ನೆನಪಲ್ಲೇ ಕನಸಲ್ಲೇ ಕಳೆದದನ್ನು ಹೇಳಿಕೊಳ್ಳುವ ಅಂತ ಮನಸು ತವಕಿಸಿದರೂ ಮಾತು ಬರದೆ...ಅಬ್ಬಾ...
ಆದರೆ ಈಗ ಅದಿಲ್ಲ. ಮಿಸ್ ಮಾಡಿಕೊಳ್ಳುವ ಅವಧಿಯನ್ನು ಅಥವಾ ತೀವ್ರತೆಯನ್ನು ಮೊಬೈಲ್ ತಿಂದು ಹಾಕಿದೆ. 'ಏಯ್.. ನಾನಿಲ್ಲಿದ್ದೇ ಗೊತ್ತಾ...ಹೇಗಿದೆ ಅಂತೀಯ...ನೀನಿರಬೇಕಿತ್ತು...ಎಷ್ಟೊಂದು ಮಿಸ್ ಮಾಡ್ಕೊತಿದ್ದೀನಿ..' ಎಂದು ಆ ಕ್ಷಣದಲ್ಲೇ ಹೇಳಿಬಿಟ್ಟರೆ ಮುಗೀತಲ್ಲ...ಅಲ್ಲಿಗೆ ಮಿಸ್ ಮೈನಸ್...
ಬೆಳದಿಂಗಳ ಬಾಲೆಯ ರೇವಂತ್ ಒಂದು ಸ್ಥಿರದೂರವಾಣಿಯಲ್ಲಿ ಕೇಳಿಬರುವ ಸುಂದರ ಹುಡುಗಿಯ ಧ್ವನಿಗೆ ಮಾರುಹೋಗಿ ಹುಡುಕುತ್ತಾ ಸಾಗುವಲ್ಲಿನ ಪಯಣ ಅದೆಷ್ಟು ರೋಚಕ ರೋಮಾಂಚಕವಾಗಿತ್ತು ಅಲ್ಲವಾ..?ಚದುರಂಗದಾಟದಲ್ಲಿ ಗಟಾನುಗಟಿಗಳನ್ನು ಹೊಡಿದುರುಳಿಸೋ ರೇವಂತ್ ಒಂದು ನಂಬರ್, ಆ ಮೂಲಕ ಆ ಬೆಳದಿಂಗಳ ಬಾಲೆಯನ್ನು ಹುಡುಕಲು ಪಡುವ ಪ್ರಯತ್ನಗಳು, ಆಕೆ ಕೊಡುವ ಸುಳಿವುಗಳು, ನೋಡುಗನಿಗೆ ಅದೆಷ್ಟು ಆಪ್ತವೆನಿಸಿರಲಿಲ್ಲ. ಅಷ್ಟೇ ಅಲ್ಲ...ಚಿತ್ರದ ಕೊನೆಯಲ್ಲಿ ನಂಬರ್,  ಆ ಮನೆ ಗೊತ್ತಾಗಿ ಆಕೆಯನ್ನು ನೋಡಲು ಮಳೆಯಲ್ಲೇ ಓಡುವ ರೇವ೦ತನಿಗಿ೦ತ ನೋಡುಗನ ಕಾತರವೇ ಹೆಚ್ಚಿದ್ದಿರಬಹುದೇನೋ..?
ಹಾಗೆ ನೀವು ಯಾರೇ ನೀನು ಚಲುವೆ ಚಿತ್ರದಲ್ಲಿ ಬರೇ ಸ್ಥಿರದೂರವಾಣಿ ಮೂಲಕ, ಪತ್ರದ ಮೂಲಕ ಸಂಗೀತ, ರವಿಚಂದ್ರನ್ ಪ್ರೀತಿಯಲ್ಲಿ ಬೀಳುವುದನ್ನು ಅನುಭವಿಸದಿರುವುದಾದರೂ ಹೇಗೆ.? ಬರೀ ಪತ್ರಕ್ಕಾಗಿ ಕಾಯುತ್ತಾ , ಪತ್ರಗಳ ಮುಖೇನ ಕನಸು  ಹಂಚಿಕೊಳ್ಳುತ್ತಾ ಪ್ರೀತಿಯನ್ನು ಗಟ್ಟಿಮಾಡಿಕೊಳ್ಳುವ ವಿಸ್ಮಯ ಅದೆಷ್ಟು ಚಂದವಿತ್ತಲ್ಲವೇ? ಚಿತ್ರದ ಕೊನೆಯಲ್ಲಿ ಜೊತೆಯಲ್ಲೇ ರವಿಚಂದ್ರನ್ ಇದ್ದರೂ ಊರೆಲ್ಲಾ ಅಲೆಯುವ ನಾಯಕಿಗೆ ನಾಯಕ ಸಿಗುವ ಕೊನೆಕ್ಷಣದಲ್ಲಿ ನಮ್ಮ ಮೈಮನಸು ರೋಮಾಂಚನದಿಂದ ಅರಳದಿರಲು ಸಾಧ್ಯವೇ ಹೇಳಿ.
ಸುಮ್ಮನೆ ಯೋಚಿಸಿದಾಗ ಅಕಸ್ಮಾತ್ ಮೊಬೈಲ್ ಆವಾಗಲೇ ಬ೦ದುಬಿಟ್ಟಿದ್ದರೆ ಎಂಬ ಭಯವಾಗುತ್ತದೆ ನನಗೆ. ರೇವಂತ್ ಒಂದೆ ಘಂಟೆಯಲ್ಲಿ ಕಂಡುಹಿಡಿದುಬಿಡುತ್ತಿದ್ದ. ಆಕೆಯ ಜೊತೆಗೆ ಅಷ್ಟು ಬಾಂಧವ್ಯ ಬೆಳೆಯುತ್ತಿರಲಿಲ್ಲವೇನೋ? ಆಫೀಸಿಗೆ ಹೊರಡುವಾಗ, ಬಸ ಹತ್ತಿದ ಮೇಲೆ, ತಲುಪಿದ ಮೇಲೆ, ಮದ್ಯಾಹ್ನದ ಊಟದ ಸಮಯದಲ್ಲಿ ..ಹೀಗೆ ಪ್ರೀತಿ ಪಾತ್ರರಿಗೆ ಕ್ಷಣಕ್ಷಣದ ವರದಿ ಸಲ್ಲಿಸುವ ಮೊಬೈಲಿಗರಾದ ನಾವು, ಯಾರೇ ಪರಿಚಯವಾದರೂ ನಿಮ್ಮ ನಂಬರ್ ಕೊಡಿ, ಇದು ನನ್ನ ನಂಬರ್ ಎಂದು ವಿನಿಮಯ ಮಾಡಿಕೊಂಡು ಬಿಡುವ ಈ ಕಾಲದಲ್ಲಿ ಸಂಗೀತ ಪಟ್ಟಷ್ಟು ಕಷ್ಟ ಪಡಬೇಕಿಲ್ಲವೇನೋ? ಹಾಗಾಗಿ ಯಾರೇ ನೀನು ಚಲುವೆ ಚಿತ್ರವೇ ನಮಗೆ ಸಿಗುತ್ತಿರಲಿಲ್ಲ.ನಂಬರ ವಿನಿಮಯವಾಗಿ ಅಲ್ಲೇ ಪ್ರೀತಿ ಬೆಳೆದು ಅವರು ಒಬ್ಬರನ್ನೊಬ್ಬರು ಸಿಕ್ಕಿ ಎಲ್ಲವೂ ಸುಲಭವಾಗಿಬಿಡುತ್ತಿತ್ತು.
ಜೋಗಿ ಚಿತ್ರದಲ್ಲಿನ ಒಂದು ದೃಶ್ಯ. ಬೆಂಗಳೂರು ಮಹಾನಗರಿಗೆ ಬಂದು ಅರಿವಿಲ್ಲದೆ ರೌಡಿಯಾಗಿ ಬಿಡುವ  ಮಾದೇಶ ಅಮ್ಮನನ್ನು ಹುಡುಕುವುದು, ಹಾಗೆ ಮಗನನ್ನು ಹುಡುಕಿಕೊಂಡು ಬರುವ ಮಾದೇಶನ ತಾಯಿಗೆ ಮಗನ ಗೆಳೆಯ ಯೋಗೇಶ ಸಿಗುವುದು ಎಲ್ಲವೂ ಸರಿ. ಆಕೆ ಮೊದಲು ಯೋಗೇಶನಿಗೆ ಸಿಕ್ಕಿ ಆನಂತರ ಯೋಗೇಶ ಮಾದೇಶನಿಗೆ ಸಿಕ್ಕಾಗ ಅಮ್ಮನ ವಿಷಯ ತಿಳಿದವನು ವಿಳಾಸ ಬರೆದುಕೊಡುತ್ತಾನೆ ಹೊರತು ಮೊಬೈಲ್ ನಂಬರ್ ಕೊಡುವುದಿಲ್ಲ. ಚಿತ್ರದಲ್ಲಿ ಮಾದೇಶ ಮೊಬೈಲ್ ಕಾಲದವನಾದರೂ ಉಪಯೋಗಿಸುವುದಿಲ್ಲ. ಅದು ಚಿತ್ರದ ಓಟಕ್ಕೆ ಪ್ಲಸ್ ಆಗಿದೆ.
ಈಗಂತೂ  ಮೊಬೈಲ್ ಮಿಸ್ ಆದ ಕುರಿತು ಹಾಸ್ಯಮಯ, ಪ್ರೇಮ ಮತ್ತು ಸಾಹಸಮಯ ಚಿತ್ರಗಳು ಎಲ್ಲ ಭಾಷೆಯಲ್ಲೂ ಸುಮಾರಷ್ಟು ಬಂದಿವೆ. ಮೊಬೈಲಿ೦ದಲೆ ಪ್ರೀತಿ ಹುಟ್ಟುವ, ಮೊಬೈಲಿ೦ದಲೆ ಏನೇನೋ ಆಗುವ ಸಿನಿಮಾಗಳಿಗೇನೂ ಕೊರತೆಯಿಲ್ಲ. ಆದರೂ ಮೊದಲ ಪ್ರೇಮ ಪತ್ರವೇ..? ಎನ್ನುವ ಪತ್ರ ಮುಖೇನ ಪ್ರೀತಿಯ ಪುಳಕವೇಕೋ ಸಿಗುತ್ತಿಲ್ಲವೆನಿಸುತ್ತದೆ.
ನಿಮ್ಮ ಅಭಿಪ್ರಾಯ..?