Thursday, February 14, 2013

ಹುಲಿರಾಯನಿದ್ದಾನೆ ಎಚ್ಚರಿಕೆ...

ಜಾನ್ ನ ಪ್ಲಾನ್ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಒಂದು ಕೊಲೆ ಮಾಡಿದರೆ ಏನೇ ಬುದ್ದಿವಂತಿಕೆ ತೋರಿಸಿದರೂ ಸಿಕ್ಕಿಕೊಳ್ಳುವುದಂತೂ ಖಚಿತ. ಅದಕ್ಕಾಗಿಯೇ ಜಾನ್ ಈ ಉಪಾಯ ಹುಡುಕಿದ್ದು. ಅವನಿಗೆ ಈಗ ಕೆಲ್ಲಿ ಮತ್ತು ಟಾಮ್ ರಿಂದ ಮುಕ್ತಿ ಬೇಕಾಗಿದೆ. ಹಾಗಂತ ಕತ್ತು ಹಿಡಿದು ಮನೆಯಿಂದ ಆಚೆ ದೂಡಿದರೆ ಅಷ್ಟು ಸುಲಭವಾಗಿ ಹೋಗುವವರಲ್ಲ ಕೆಲ್ಲಿ ಮತ್ತು ಟಾಮ್. ಆಕಸ್ಮಿಕವಾಗಿ ಅವರು ಸತ್ತಂತೆ ಕೊಲೆ ಮಾಡುವುದಾದರೂ ಹೇಗೆ. ಸುಫಾರಿ ಕೊಟ್ಟರೆ ಅದು ದೊಡ್ಡ ರಿಸ್ಕು. ಮತ್ತು ಹಣ ಖರ್ಚು.ಈವತ್ತು ತಪ್ಪಿಸಿಕೊಂಡರೂ ನಾಳೆ ದಿನ ಆ ಕೊಲೆಗಾರರು ಬೇರಾವುದೋ ಕೇಸಿಗೆ ಪೊಲೀಸರಿಗೆ ಸಿಕ್ಕಿಬಿದ್ದು ಎಲ್ಲವನ್ನೂ ಬಾಯಿ ಬಿಡುವ ಸಂಭವ ಇದೆ. ಎಷ್ಟೋ ಅಪರಾಧದ ಕೇಸುಗಳಲ್ಲಿ ಇಂಥ ಘಟನೆ ನಡೆದಿರುವುದು ಜಾನ್ ಗೆ ಗೊತ್ತು. ಹಾಗಾಗಿ ಜಾನ್ ಒಂದು ಮಾಸ್ಟರ್ ಪ್ಲಾನ್ ಮಾಡುತ್ತಾನೆ. 
ಮೊದಲಿಗೆ ಮನೆಯ ಕಿಟಕಿ ಬಾಗಿಲುಗಳನ್ನೆಲ್ಲಾ ಒಮ್ಮೆ ಹಾಕಿದರೆ ತೆಗೆಯಲಾರದಂತೆ ತಾನೇ ನಿಂತು ಆಳುಗಳಲ್ಲಿ ಹೇಳಿ ಕೆಲಸ ಮಾಡುತ್ತಾನೆ. ಒಮ್ಮೆ ಕೆಲ್ಲಿ ಮತ್ತು ಟಾಮ್ ಒಳಗಿದ್ದಾಗ ಬಾಗಿಲು ಹಾಕಿದರೆ ಮುಗಿಯಿತು.ಜಾನ್ ನೆ ಸ್ವತಹ ಬಾಗಿಲು ತೆರೆಯುವವರೆಗೂ ಅವರು ಹೊರಬರುವುದು ಸಾಧ್ಯವಿಲ್ಲ. 
ಒಬ್ಬ ಸರ್ಕಸ್ ಕಂಪನಿಯವನಿಂದ ಒಂದು ಭಯಾನಕ ಅಪಾಯಕಾರಿ ಹುಲಿಯನ್ನು ಖರೀದಿಸುತ್ತಾನೆ. ಹೇಗೋ ಮನೆ ಊರ ಹೊರಗಡೆ ಇರುವುದರಿಂದ ಹುಲಿಯೊಂದು ಬಂದು ದಾಳಿ ಮಾಡಿ ಹತ್ಯೆ ಮಾಡಿತೆಂದರೆ ಅದು ಪೂರ್ವ ನಿಯೋಜಿತವೆಂದು ಯಾವ ಶೆರ್ಲಾಕ್ ಹೋಮ್ಸ್ ನಿಂದಲೂ ಪತ್ತೆ ಮಾಡಲು ಸಾಧ್ಯವಿಲ್ಲ ಎಂಬುದೇ ಅವನ ಯೋಚನೆ. ಆ ರಾತ್ರಿ ಮನೆಗೆ ಹುಲಿಯನ್ನು ಬಿಟ್ಟು ತಾನು ಮಾತ್ರ ಹೊರಬಂದು ಬಾಗಿಲು ಬೀಗ ಹಾಕಿಕೊಳ್ಳುತ್ತಾನೆ. ಈಗ ಮನೆಯಲ್ಲಿ ಒಂದು ಹಸಿದ ಭಯಾನಕ ಅಪಾಯಕಾರಿ ಹುಲಿ, ಕೆಲ್ಲಿ ಮತ್ತು ಟಾಮ್ ಮೂರೇ ಜೀವಗಳು.ಇದಾವುದರ ಅರಿವಿಲ್ಲದ ಕೆಲ್ಲಿ ನೀರು ಕುಡಿಯಲು ಬಂದಾಗ ಅವಳಿಗೆ ಹುಲಿಯಿರುವ ವಿಷಯ ಗೊತ್ತಾಗುತ್ತದೆ.
ಮುಂದೆ ಹುಲಿ ಕೆಲ್ಲಿ ಮತ್ತು ಟಾಮ್ ರನ್ನು ಸಾಯಿಸುತ್ತದಾ..?
ಟಾಮ್ ಪ್ಲಾನ್ ಯಶಸ್ವಿಯಾಗುತ್ತದಾ..? ಎಂಬುದೇ ಪ್ರಶ್ನೆ.
ಸಾದಾರಣವಾಗಿ ಸಿನಿಮಾಗಳನ್ನ  ನೋಡಿದವರಿಗೆ ಈ ಎರಡು ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟದ ಕೆಲಸವಲ್ಲ. ಇಷ್ಟು ನೋಡಿದ ಮೇಲೆ ಮುಂದೇನಾಗಬಹುದು ಎಂಬುದನ್ನು ಊಹಿಸುವುದೂ ಕಷ್ಟವಲ್ಲ. 
ಆದರೆ ಸಿನಿಮಾ ನೋಡುವ ಥ್ರಿಲ್ ಇದೆಯಲ್ಲಾ ಅದು ಮಾತ್ರ ಅನೂಹ್ಯ.
ಇದು 2010 ರಲ್ಲಿ ತೆರೆಗೆ ಬಂದ ಕಾರ್ಲೋಸ್ ಬ್ರೂಕ್ ನಿರ್ದೇಶನದ ಬರ್ನಿಂಗ್ ಬ್ರೈಟ್ ಚಿತ್ರದ ಸಾರಾಂಶ. ಕಡಿಮೆ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಲ್ಲದೆ ಅಂತಿಮ ಹಂತದಲ್ಲಿ ನಮ್ಮನ್ನು ಕುರ್ಚಿಯ ತುದಿಗೆ ಕೂರಿಸಿಬಿಡುತ್ತದೆ.ಸುಮಾರು ಒಂದೂವರೆ ಘಂಟೆ ಅವಧಿಯ ಈ ಚಿತ್ರ ಥ್ರಿಲ್ಲರ್ ಪ್ರಿಯರಿಗೆ ಹೇಳಿಮಾಡಿಸಿದಂತಿದೆ.

Tuesday, February 12, 2013

ಪ್ರೇಮಿಗಳ ದಿನದ ನೆನಪಿನಲ್ಲಿ...

2007 ರಲ್ಲಿ ಬಿಡುಗಡೆಯಾದ ಅಟೋನ್ಮೆಂಟ್  ಚಿತ್ರದ ನಿರ್ದೇಶಕರು ಜೋ ರೈಟ್. ಆಸ್ಕರ್ ಪ್ರಶಸ್ತಿ ಗಳಿಸಿದ ಈ ಚಿತ್ರದಲ್ಲಿ ಕೈರಾ ನೈಟ್ಲಿ ಮತ್ತು ಚಂದನೆಯ ನಟ ಜೇಮ್ಸ್ ಮ್ಯಾಕ್ ಅವೇ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಪ್ರೀತಿ, ಯುದ್ಧ, ತ್ಯಾಗವನ್ನೂ ಹದವಾಗಿ ಬೆರೆಸಿದ ಚಿತ್ರವಿದು. ಚಿತ್ರದ ನಾಯಕಿ ದೊಡ್ಡ ಮನೆತನದವಳು. ಶ್ರೀಮಂತರು. ಆ ಮನೆಯ ಕೆಲಸದಾಳಿನ ಮಗ ನಾಯಕ. ಇಷ್ಟು ಹೇಳಿದರೆ ಕಥೆಯನ್ನ ಮುಂದೆ ಊಹಿಸಿಬಿಡಬಹುದು. ಆದರೆ ಚಿತ್ರ ನೋಡಿದರೆ ಕಣ್ಣಂಚಲ್ಲಿ ಒಂದು ಹನಿ ಕಣ್ಣೀರು ಜಾರದಿದ್ದರೆ ಕೇಳಿ. ಸಿನೆಮಾದ ಚಿತ್ರಕಥೆ, ಅಲ್ಲಿನ ತಿರುವುಗಳು ನಮ್ಮನ್ನು ಬೇರೊಂದು ಪ್ರೇಮಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ನೋಡಿಲ್ಲವಾದಲ್ಲಿ ವ್ಯಾಲಂಟೈನ್ಸ್ ಡೆ ಯನ್ನು ಈ ಚಿತ್ರದೊಂದಿಗೆ ಆಚರಿಸಬಹುದು.
ಫೆಬ್ರುವರಿ ಹದಿನಾಲ್ಕು ವ್ಯಾಲೆಂಟೈನ್ಸ್ ಡೇ ಎನ್ನುವುದು ನಮ್ಮ ಕಾಲೇಜಿನಲ್ಲಿ ಗೊತ್ತಿದ್ದರೂ ಅಷ್ಟು ಜೋರಾಗಿ ಯಾರೂ ಆಚರಿಸುತ್ತಿರಲಿಲ್ಲ. ಆದರೆ ಒಂದು ಮಾತ್ರ ಮಾಡುತ್ತಿದ್ದದ್ದುಂಟು. ಅದೆಂದರೆ ಬಟ್ಟೆ ಧರಿಸುವುದು. ಬಣ್ಣ ಬಣ್ಣದ ಬಟ್ಟೆ ಧರಿಸುತ್ತಿದ್ದರು. ಅದರಲ್ಲಿ ಅಡಗಿದ್ದ ಸಂಕೇತಗಳನ್ನು ನಾವು ಕಂಡುಕೊಂಡು ನಮ್ಮ ನಮ್ಮಲ್ಲೇ ನಾವು ಯಾರ್ಯಾರು ಜೋಡಿಗಳಾಗಿದ್ದಾರೆ, ಯಾರ್ಯಾರು ಒಂಟಿ ಎಂಬುದನ್ನು ಗುರುತಿಸುವ ಕೆಲಸವಿಲ್ಲದ ಕೆಲಸ ಮಾಡುತ್ತಿದ್ದೆವು. ಕೆಂಪು ಅಥವಾ ಪಿಂಕ್ ಧರಿಸಿದರೆ ಈಗಾಗಲೇ ಅವರು ಪ್ರೀತಿಯಲ್ಲಿ ಮುಳುಗಿದ್ದಾರೆಂದು, ಹಸಿರಾದರೆ ಪ್ರೀತಿಗೆ ಬೀಳಲು ಸಿದ್ಧರಿದ್ದಾರೆಂದೂ ಬಿಳಿಯಾದರೆ ಸಿದ್ಧವಿಲ್ಲವೆಂದು ತಿಳಿದುಕೊಂಡಿದ್ದವು.ಅದ್ಯಾರು ಅದೇಗೆ ಈ ಎಲ್ಲಾ ನೀತಿ ನಿಯಮಗಳನ್ನೂ ಬಣ್ಣದ ಬಟ್ಟೆಯ ಸಂಕೇತಗಳನ್ನು ಹುಟ್ಟುಹಾಕಿದ್ದರೋ ಗೊತ್ತಿರಲಿಲ್ಲ. ಆದರೆ ಇದರರಿವಿಲ್ಲದ ತಮ್ಮಲ್ಲಿದ್ದ ಬಟ್ಟೆಗಳನ್ನು ಹಾಕಿಕೊಂಡು ಬಂದ ಅಮಾಯಕರು ಇದರಲ್ಲಿ ಸಿಲುಕಿಕೊಂಡು ಪೇಚು ಅನುಭವಿಸುತ್ತಿದ್ದರು. ಯಾವುದಾದರೂ ಹುಡುಗಿ  ಹಾಕಿಕೊಂಡು ಬಂದ ಬಟ್ಟೆಯಲ್ಲಿ ಯಾವುದಾದರೂ ಮೂಲೆಯಲ್ಲಿ ಹಸಿರು ಬಣ್ಣವಿದ್ದರಂತೂ ಮುಗಿದೇಹೋಗುತ್ತಿತ್ತು..'ಇವ್ಳು ನೋಡಪ್ಪಾ ರೆಡಿ ಅವಳೇ..' ಎಂದು ಅವಳನ್ನು ಆಡಿಕೊಂಡು ನಗುತ್ತಿದ್ದರು.
ಪ್ರೇಮಿಗಳ ದಿನ, ಕಾಲೇಜು ಹೈಸ್ಕೂಲು ದಿನಗಳ ಪ್ರೀತಿ ಪ್ರೇಮ ಎಂದರೆ ಎಂಥಹದ್ದೋ ಖುಷಿ. ಅದರ ನೆನಪೇ ಅಪ್ಯಾಯಾಮಾನ. ಆದರೆ ಕೆಲವೊಂದು ಪ್ರೇಮ ಕಥೆಗಳು ನಮ್ಮನ್ನು ಕಾಡುತ್ತವೆ. ಅದರಲ್ಲೂ ಪ್ರೇಮಿಗಳ ದಿನ ಬಂದರೆ ಮೊದಲು ನೆನಪಾಗುವುದು ಇದೆ ಕಥೆ.
ಅದೊಂದು ದಿನ ನಮ್ಮ ಹಾಸ್ಟೆಲ್ಲಿಗೆ ಬಂದ ನನ್ನ ಗೆಳೆಯನ ಗೆಳೆಯ ನನಗೂ ಗೆಳೆಯನಾದ. ಅವನಾಗಲೇ ತನ್ನದೇ ಊರಿನ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆತನೇನೋ ಪಿಯುಸಿಯಲ್ಲಿ ಡುಮ್ಕಿಯಾಗಿದ್ದನಾದರೂ ಆಕೆಯನ್ನು ಪ್ರೀತಿಸುವುದನ್ನು ಬಿಟ್ಟಿರಲಿಲ್ಲ. ಅವಳಿಗಿಂತ ಮುಂಚೆ ಅವಳ ಕಾಲೇಜಿನ ಮುಂದೆ ಹಾಜರಿರುತ್ತಿದ್ದವ ಅವಳಿಗೊಂದು ಸ್ಮೈಲ್ ಕೊಡುತ್ತಿದ್ದ. ಆಕೆ ಮುಖ ಸಿಂಡರಿಸುತ್ತಿದ್ದಳು. ಈತ ಡೋಂಟ್ ಕೇರ್ ಪಾಲಿಸಿಯವನು.ತನ್ನ ಕೆಲಸವಾಯಿತೆಂಬಂತೆ ಅಲ್ಲಿಂದ ಬಂದವನು ಆಕೆಯ ಕಾಲೇಜು ಮುಗಿಯುವ ಮೊದಲೇ ಅಲ್ಲಿಗೆ ಹಾಜರಿದ್ದು ಅವಳನ್ನೊಮ್ಮೆ ನೋಡಿ ಬಸ್ ನಿಲ್ದಾಣದ ವರೆಗೂ ಹಿಂಬಾಲಿಸಿ, ಆಕೆ ಬಸ್ಸು ಹತ್ತಿ ಅದು ಹೊರಟ ಮೇಲೆ ಅಲ್ಲಿಂದ ಕಾಲುಕೀಳುತ್ತಿದ್ದ. ಅವಳು ಯಾವ್ಯಾವ ಬಣ್ಣದ ಬಟ್ಟೆ ಹಾಕಿಕೊಂಡು ಬಂದಿದ್ದಳು, ಅವಳ ಊರು ಯಾವುದು ಎನ್ನುವುದನೆಲ್ಲಾ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದ. ಆಕೆ ಯಾವ ಹಬ್ಬದ ದಿನ ಯಾವರೀತಿ ಸಿಂಗರಿಸಿಕೊಂಡಿದ್ದಳು, ಯಾವ ಸಮಾರಂಭದಲ್ಲಿ ಯಾವ ರೀತಿ ಇದ್ದಳು ಎಂಬುದರ ದಾಖಲೆ ಯಾವ ಫೋಟೂಕ್ಕಿಂತ ನಿಚ್ಚಳವಾಗಿ ಅವನ ಮನಸ್ಸಿನಲ್ಲಿತ್ತು.
ನನಗೆ ಪರಿಚಯವಾದ ಮೇಲೆ ತನ್ನ ಒಮ್ಮುಖದ ಪ್ರೇಮಕಥೆ ಹೇಳಿದಾಗ ನನಗೆ ಪಿಚ್ಚೆನಿಸಿತ್ತು. ಎರಡು ವರ್ಷಗಳಿಂದ ಈತನ ಯಾವ ಸರ್ಕಸ್ಸಿಗೂ ಸ್ಪಂಧಿಸದ ಆಕೆಯೂ, ಅದಕ್ಕೆ ತಲೆಕೆಡಿಸಿಕೊಳ್ಳದೆ ಇಂದಲ್ಲಾ ನಾಳೆ ನನ್ನ ಪ್ರೀತಿಯನ್ನು ಒಪ್ಪಿಕೊಂಡೆ ಒಪ್ಪಿಕೊಳ್ಳುತ್ತಾಳೆ ಎಂಬ ಆಶಾಭಾವನೆಯಲ್ಲಿ ತನ್ನ ಪ್ರಯತ್ನವನ್ನೂ ಚಾಚೂ ತಪ್ಪದೆ ಸ್ವಲ್ಪವೂ ಉದಾಸೀನ ತೋರಿಸದೆ ಮುಂದುವರೆಸುತ್ತಿರುವ ಈತನೂ ನನಗೆ ವಿಶೇಷ ಎನಿಸಿದ್ದರು. ಆದರೆ ಅವನಲ್ಲಿ ಒಂದು ನಂಬಿಕೆ ಗಟ್ಟಿಯಾಗಿತ್ತು. ಯಾವತ್ತಿದ್ದರೂ ಆಕೆ ನನ್ನ ಪ್ರೀತಿಸುತ್ತಾಳೆ ಎಂಬುದು. ಅದೇಗೆ ಎಂಬುದು ಆ ದೇವರಿಗೂ ಗೊತ್ತಿರಲಿಲ್ಲವೇನೋ? ಪ್ರತಿ ಹಬ್ಬಕ್ಕೆ, ವಿಶೇಷ ದಿನಕ್ಕೆ ಆಕೆಯ ಹುಟ್ಟುಹಬ್ಬಕ್ಕೆ ಮೊದಲ ಕೊಡುಗೆ ಇವನು ಕೊಟ್ಟರೆ ಆಕೆ ತೆಗೆದುಕೊಂಡು 'ನಾನು ನಿನ್ನ ಪ್ರೀತಿಸುವುದಿಲ್ಲ..ನೀನು ನನಗೆ ಇಷ್ಟವಿಲ್ಲ.' ಎಂದು ಹೇಳಿಹೊಗುತ್ತಿದ್ದಳು. ಕೆಲವೊಮ್ಮೆ ಅವನ ಕೊಡುಗೆಗಳನ್ನು ಅಲ್ಲೇ ಬೀಸಾಕುತ್ತಿದ್ದಳು. ಇವನು ಜೋಪಾನವಾಗಿ ಅದನ್ನು ಆಯ್ದುಕೊಂಡು ಮನೆಗೆ ತಂದಿರಿಸಿಕೊಳ್ಳುತ್ತಿದ್ದ. ಅವನ ಪ್ರೇಮವನ್ನು ನಾನೇನೋ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ 'ನಿನಗವಳು ಸಿಕ್ಕೇ ಸಿಗುತ್ತಾಳೆ..ನಿನ್ನನ್ನ  ಪ್ರೀತಿಸದೆ ಬೇರಾರನ್ನು ಪ್ರೀತಿಸೋಕೆ ಸಾಧ್ಯ..' ಎಂಬರ್ಥದ ಮಾತುಗಳನ್ನಾಡಿದರೆ ಸಾಕು ಅವನು ಹಿಗ್ಗೆ ಹೀರೆಕಾಯಿಯಾಗುತ್ತಿದ್ದ. ಆವತ್ತು ರಾತ್ರಿ ಪಾರ್ಟಿ ಖಚಿತವಾಗುತ್ತಿತ್ತು.
ಅವನು ಸಿಕ್ಕಾಗಲೆಲ್ಲಾ ಮಾತನಾಡುತ್ತಿದ್ದ. ಪ್ರತಿ ಮಾತಿನಲ್ಲೂ ಅವಳೇ. ಕೇಳುವವರಿಗೆ ಬೋರ್ ಆಗುತ್ತಿತ್ತು. ನನಗೆ ಒಬ್ಬ ಇಷ್ಟೊಂದು ಉತ್ಕಟವಾಗಿ ಹೇಗೆ ಪ್ರೀತಿಸಲು ಸಾಧ್ಯ ಅದೂ ಪ್ರತಿಕ್ರಿಯೇಯಿಲ್ಲದೆ ಎನಿಸುತ್ತಿತ್ತು.
ಸುಮಾರು ದಿನವಾಯಿತು. ನಾವು ನಮ್ಮ ನಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆವು. ನಾನಂತೂ ಅವನನ್ನು ಮರೆತುಬಿಟ್ಟಿದ್ದೆ . ಅವನೂ ಇತ್ತೀಚಿಗೆ ನಮ್ಮ ಹಾಸ್ಟೆಲ್ಲಿನ ಕಡೆಗೆ ಬಂದಿರಲಿಲ್ಲ. ಆದರೆ ಅದೊಂದು ದಿನ ನನ್ನ ಗೆಳೆಯನ ಮನೆಗೆ ಹೋದಾಗ ಅದೂ ಇದೂ ಮಾತಾಡುತ್ತ ಅವನ ವಿಷಯ ಬಂದಿತ್ತು. ಗೆಳೆಯ ಅವನ ಕಥೆಯನ್ನೂ ಪೂರ್ತಿ ಮಾಡಿದ್ದ. ನಾನು ವಿಷಣ್ಣನಾಗಿ ಕುಳಿತಿದ್ದೆ.
ಹೀಗೆ ದಿನಗಟ್ಟಲೆ ವರ್ಷಗಟ್ಟಲೆ ಅಲೆದವನಿಗೆ ಒಮ್ಮೆ ಇದನ್ನು ಪಕ್ಕ ಮಾಡಿಕೊಳ್ಳಲೇ ಬೇಕೆನಿಸಿದೆ. ಹಾಗಾಗಿಯೇ ಫೆಬ್ರುವರಿ ಹದಿನಾಲ್ಕಕ್ಕೆ ಕಾದವನು ಆ ದಿನ ಒಳ್ಳೆಯ ಬಟ್ಟೆ ಧರಿಸಿ ಒಳ್ಳೆಯ ದುಬಾರಿ ಕೊಡುಗೆಯೊಂದಿಗೆ ಆಕೆಯ ಕಾಲೇಜು ಬಳಿಗೆ ಹೋಗಿದ್ದಾನೆ.ಅವಳನ್ನು ಬೇಟಿ ಮಾಡಿದ್ದಾನೆ. ಪರಿಪರಿಯಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಹೆದರಿಸಿದ್ದಾನೆ. ಗೋಳಾಡಿದ್ದಾನೆ. ಎಲ್ಲದಕ್ಕೂ ಆಕೆ ಒಂದೇ ಉತ್ತರ ಕೊಟ್ಟು ಗಿಫ್ಟನ್ನು ಬೀಸಾಕಿ ಹೊರಟುಹೋಗಿದ್ದಾಳೆ. ಅದಾದ ಮೇಲೆ ಅವನಿಗನ್ನಿಸಿದ್ದು 'ಈಕೆ ಈ ಜನ್ಮದಲ್ಲಿ ತನಗೆ ಸಿಗುವುದಿಲ್ಲ ..' ಎಂದು. ಬೇಸರಗೊಂಡವನು ಮನೆಗೆ ಬಂದು ಅವತ್ತೆಲ್ಲಾ ಆರಾಮವಾಗಿ ಮನೆಯವರ ಜೊತೆ ಕಳೆದಿದ್ದಾನೆ. ಗೆಳೆಯರನ್ನೆಲ್ಲಾ ಮಾತನಾಡಿಸಿದ್ದಾನೆ. ಅಲ್ಲೂ ನಿರಾಶಾದಾಯಕ ಮಾತನ್ನಾಡಿಲ್ಲ.
ಮಾರನೆಯ ದಿನ ಬೆಳಿಗ್ಗೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಡಾಕ್ಟರು ಅಪ್ಪನಿಗೆ ಬರೆದುಕೊಟ್ಟಿದ್ದ ಮಾತ್ರೆಯ ಚೀಟಿಯನ್ನು ಮಾತ್ರ ತೆಗೆದುಕೊಂಡು, ಬೇರಾವುದೇ ರೀತಿಯ ತನ್ನನ್ನು ಗುರುತಿಸಬಹುದಾದ ವಸ್ತುಗಳನ್ನೂ ತೆಗೆದುಕೊಳ್ಳದೆ  ಎಲ್ಲರನ್ನೂ ಮಾತನಾಡಿಸಿ ಹೋಗಿದ್ದಾನೆ. ಆ ಚೀಟಿಯಲ್ಲಿದ್ದ ನಿದ್ರೆಯ ಮಾತ್ರೆಗಳನ್ನು ಯಾವ ಮೆಡಿಕಲ್ಲಿನವರೂ ಅಗತ್ಯಕ್ಕಿಂತ ಹೆಚ್ಚುಕೊಡುವುದಿಲ್ಲ ಎಂಬುದು ಮೊದಲೇ ಗೊತ್ತಿದ್ದರಿಂದ ಸುಮಾರು ಅಂಗಡಿಗಳಿಗೆ ಹೋಗಿ ಅದೇ ಮಾತ್ರೆಗಳನ್ನು ತೆಗೆದುಕೊಂಡಿದ್ದಾನೆ. ಆನಂತರ ಊರಿಂದ ನಡೆಯುತ್ತಲೇ ಸಾಗಿದ್ದಾನೆ. ಸಂಜೆಯವರೆಗೂ ನಡೆದವನು ಅಲ್ಲಿ ನಿದ್ರೆ ಮಾತ್ರೆ ನುಂಗಿ ಮಲಗಿಬಿಟ್ಟಿದ್ದಾನೆ.
ಮಗ ಎರಡ್ಮೂರು ದಿನ ಕಳೆದರೂ ಮನೆಗೆ ಬರದಿದ್ದಾಗ ಮನೆಯವರು ಗಾಬರಿಯಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಗೆಳೆಯರೂ ಅಕೆಯ ಬಳಿ ಹೋಗಿ ವಿಷಯ ಹೇಳಿದಾಗ ಗಾಬರಿಯಾದ ಆಕೆ 'ಅವನನ್ನು ಕರೆತನ್ನಿ ನಾನು ಅವನನ್ನು ಮದುವೆಯಾಗುತ್ತೇನೆ..' ಎಂದು ಗೋಳಾಡಿದ್ದಾಳೆ.
ಅಲ್ಲಿ ಪೊಲೀಸರಿಗೆ ಹೆಣ ಸಿಕ್ಕಿದರೂ ಗುರುತು ಹಚ್ಚಲಾಗಿಲ್ಲ. ಕೊನೆಗೆ ಶರ್ಟಿನ ಕಾಲರಿನಲ್ಲಿದ್ದ ಟೈಲರ್ ವಿಳಾಸ, ಮತ್ತು ಜೇಬಿನಲ್ಲಿದ್ದ ಮಾತ್ರೆ ಚೀಟಿಯಿಂದ ಮನೆಯವರನ್ನು ಕಂಡುಹಿಡಿದು ಹೆಣ ತಲುಪಿಸಿದ್ದಾರೆ.
ಒಂದು ನವಿರಾಗಿ ಬದುಕು ರೂಪಿಸಬೇಕಾಗಿದ್ದ ಪ್ರೀತಿ ಒಬ್ಬನ ಬಳಿ ತೆಗೆದುಕೊಂಡರೆ ಆಕೆಯನ್ನು ಜೀವನವಿಡೀ ಕೊರಗುವಂತೆ ಮಾಡಿದೆ. ಇದಕ್ಕೆ ಹೊಣೆ ಮಾಡುವುದಾದರೂ ಯಾರನ್ನು?

Sunday, February 10, 2013

ಇವಾನ್ಸ್ ವುಮನ್ ಬೆನ್ನುಬಿದ್ದು.

ಬೆಂಗಳೂರು ಚಿತ್ರೋತ್ಸವದಲ್ಲಿ ಇವಾನ್ಸ್ ವುಮನ್ ಎನ್ನುವ ಚಿಲಿಯನ್ ಚಲನಚಿತ್ರವಿತ್ತು. ಮೊದಲಿಗೆ ಆ ಚಿತ್ರದ ಕಥೆ ಏನೂ ಎಂಬುದು ಅರ್ಥವಾಗಲಿಲ್ಲ. ಅಪಹರಣಕಾರನೊಬ್ಬ ಹುಡುಗಿಯೊಬ್ಬಳನ್ನು ಅಪಹರಿಸಿದ ನಂತರ ಆಕೆಯೊಂದಿಗೆ ಬಾಂಧವ್ಯ ಬೆಳೆಸಿಕೊಳುವ ಕಥೆ ಅದು. ಆದರೆ ಚಿತ್ರದ ಪ್ರಾರಂಭ ಹಿನ್ನೆಲೆ ಮುಂತಾದವುಗಳ ಬಗ್ಗೆ ನಿರ್ದೇಶಕಿ ತಲೆಕೆಡಿಸಿಕೊಳ್ಳದೆ ಇದ್ದುದರಿಂದ ಪ್ರೇಕ್ಷಕನಿಗೆ ಯಾವುದು ಅರ್ಥವಾಗದ ರೀತಿಯಲ್ಲಿತ್ತು ಚಿತ್ರ. ಮಾರನೆಯ ದಿವಸ ಚಿತ್ರೋತ್ಸವದಲ್ಲಿ ಸಿಕ್ಕಿದ ಗೆಳೆಯರ ಜೊತೆ ಮಾತನಾಡುವಾಗ ಆ ಚಿತ್ರದ ಬಗ್ಗೆ ಪ್ರಸ್ತಾಪಿಸಿದಾಗ ಅವರಿಗೂ ಅದೂ ಅರ್ಥವಾಗದ್ದು ಹಾಗಿರಲಿ, ಇನ್ನೊಂದು ದೊಡ್ಡ ಅನರ್ಥವಾಗೇ ಇತ್ತು. ಚಿತ್ರದಲ್ಲಿ ಅಪಹೃತೆ ಚಿಕ್ಕ ಹುಡುಗಿಯಾಗಿದ್ದಾಗಲಿನ ದೃಶ್ಯ ಒಂದಿದೆ. ಅದನ್ನು ನೋಡಿದ್ದವರೆಲ್ಲಾ ಅದೊಂದು ತಂದೆ ಮಗಳ ನಿಷಿದ್ಧ ಸಂಬಂಧದ ಕಥೆ ಎಂದೆ ತಿಳಿದುಕೊಂಡಿದ್ದರು. ಅಷ್ಟೇ ಅಲ್ಲದೆ 'ಏನು ಗುರು...ತಂದೇನೆ ಮಗಳನ್ನ ಆ ತರಹ ಕೂಡಿಹಾಕಿ ಅನುಭವಿಸೋದು ಎಂಥ ಕೆಟ್ಟೆದ್ದಲ್ವಾ...ಅದೇನು ದರಿದ್ರದ ಸಿನಿಮಾ ತಗಿತಾರಪ್ಪಾ...' ಎಂದೆಲ್ಲಾ ಬೈದಿದ್ದರು. ಆದರೆ ಎಲ್ಲೆಲ್ಲೂ ತಂದೆ ಮಗಳ ಪ್ರಸ್ತಾಪ ಬರದಿದ್ದುದರಿಂದ ನನಗೆ ಅದೊಂದು ಅನುಮಾನ ಇದ್ದೆ ಇತ್ತು.
ಮನೆಗೆ ಬಂದ ಮೇಲೆ ಆ ಚಿತ್ರದ ಬಗ್ಗೆ ಒಂದಷ್ಟು ಹುಡುಕಾಡಿದೆ.
ಆಗ ತಿಳಿದುಬಂದ ವಿವರಗಳು ಒಂದಷ್ಟು ಕುತೂಹಲಕರವಾಗಿದ್ದವು. ಇವಾನ'ಸ್ ವುಮನ್ ಚಿತ್ರ ನೈಜ ಘಟನೆಯಾಧಾರಿತ ಚಿತ್ರ. ನತಾಸ್ಚ ಕಾಂಪುಶ್ ಎನ್ನುವ ಆಸ್ಟ್ರಿಯನ್ ಮಹಿಳೆಯ ಕಥೆ ಆಧರಿಸಿದ ಚಿತ್ರ. ನತಾಶ್ಚ ಹತ್ತು ವರ್ಷದವಳಾಗಿದ್ದಾಗ ಪ್ರಿಕ್ಲೋಪಿಲ್ ಎಂಬಾತ ಆಕೆಯನ್ನು ಅಪಹರಿಸಿದ್ದ. ಪೊಲೀಸರು ಈ ಕೇಸನ್ನು ಬಗೆಹರಿಸಲು ಶತಪ್ರಯತ್ನ ಪಟ್ಟಿದ್ದರು.ಯಾವುದೇ ಉಪಯೋಗವಾಗಿರಲಿಲ್ಲ. ಅಪಹರಣಕಾರನ ಬಗ್ಗೆ ಯಾವ ಮಾಹಿತಿಯೂ ದೊರೆತಿರಲಿಲ್ಲ. ಅಪಹರಣವಾದಾಗ 12 ವರ್ಷದ ಹುಡುಗ ಮಿನಿ ಬಸ್ಸೊಂದರಲ್ಲಿ ಬಂದವರು ಕಿಡ್ನಾಪ್ ಮಾಡಿದ್ದರು ಎಂದು ಸಾಕ್ಷಿ ನುಡಿದಿದ್ದರಿಂದ ಅಲ್ಲಿದ್ದ 776 ವ್ಯಾನುಗಳನ್ನು ತಪಾಸಣೆ ನಡೆಸಿದ್ದರು. ಪಿಲ್ ನನ್ನೂ ಕೂಡ ಪರೀಕ್ಷೆಗೆ ಒಳಪಡಿಸಿದಾಗ ತಾನು ಆ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬನೇ ಇದ್ದೆ ಎಂದು ಸುಳ್ಳುಹೇಳಿ ತಪ್ಪಿಸಿಕೊಂಡಿದ್ದ. ಇದೆಲ್ಲಾ ನಡೆದದ್ದು 1998ರಲ್ಲಿ. ಅದಾದ ಎಂಟು ವರ್ಷದ ನಂತರ ನತಾಶ್ಚ ಅಲ್ಲಿಂದ ತಪ್ಪಿಸಿಕೊಂಡು ಬಂದಾಗಲೇ ಅವಳ ಕಥೆ ಎಲ್ಲರಿಗೂ ತಿಳಿದುಬಂದದ್ದು. 
ಆ ಎಂಟು ವರ್ಷದಲ್ಲಿ ಅವಳನ್ನು ಸೆಲ್ಲಾರ್ ಒಂದರಲ್ಲಿ ಕೂಡಿಹಾಕಿದ್ದ ಪಿಲ್ ಆಕೆಗೆ ಪುಸ್ತಕಗಳನ್ನೂ ಕೊಡುತ್ತಿದ್ದ. ಓದಿಸುತ್ತಿದ್ದ. ಮನೆಯಲ್ಲಿ ಓಡಾಡಲು ಅವಕಾಶ ಕೊಟ್ಟಿದ್ದನಾದರೂ ಮನೆಯಿಂದ ಹೊರಹೋಗದಂತೆ ನಿರ್ಬಂಧ ಹಾಕಿದ್ದ. ಆ ಪ್ರಯತ್ನ ಮಾಡಿದರೆ ಕೊಳ್ಳುತ್ತೇನೆಂದು ಬೆದರಿಕೆಯನ್ನೂ ಹಾಕಿದ್ದ.
ಆದರೆ ಅದೊಂದು ದಿನ ಆಕೆ ಸಮಯ ಸಾಧಿಸ ತಪ್ಪಿಸಿಕೊಂಡಿದ್ದಳು. ಪೊಲೀಸರು ತನ್ನ ಬೆನ್ನ ಹಿಂದೆ ಬಿದ್ದಿದ್ದಾರೆಂದು ತಿಳಿದಾಕ್ಷಣ ಪಿಲ್ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡ. ಹಾಗಾಗಿ ಆತನ ಉದ್ದೇಶವೆನಿತ್ತೆಂಬುದು ಯಾರಿಗೂ ಗೊತ್ತಾಗಲಿಲ್ಲ. ಆನಂತರ ನತಾಶ್ಚ ತನ್ನದೇ ಕಥೆಯನ್ನೂ ನತಾಶ್ಚ ಕಾಂಪುಶ್  3,096 ದಿನಗಳು ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಹೊರತಂದಳು. ಅವಳನ್ನು ಕುರಿತ ಟಿವಿಯಲ್ಲಿ ಕಾರ್ಯಕ್ರಮವೂ ಒಂದು ಪ್ರಸಾರವಾಯಿತು.
ಅವಳ ಈ ಕಥೆಯನ್ನ  ಆಧರಿಸಿ ಫ್ರಾನಿಸ್ಕ ಸಿಲ್ವಾ ಸ್ಪಾನಿಶ್ ಭಾಷೆಯಲ್ಲಿ ಇವಾನ'ಸ್ ವುಮನ್  ಚಿತ್ರ ಮಾಡಿರುವುದು. ಆದರೆ ಸ್ವಲ್ಪ ಹಿನ್ನೆಲೆಯೊಂದಿಗೆ ಚಿತ್ರಕಥೆಯಲ್ಲಿ ಇನ್ನೂ ತಲೆಕೆಡಿಸಿಕೊಂಡಿದ್ದರೆ ಒಂದು ಅತ್ಯುತ್ತಮ ಚಿತ್ರವಾಗಿರುತ್ತಿತ್ತಲ್ಲದೆ ಅದ್ಭುತವಾದ ಥ್ರಿಲ್ಲರ್ ಕೂಡ ಆಗುವ ಸಾಧ್ಯತೆ ಇತ್ತು. ಒಂಟಿತನ, ಹೆಣ್ತನದ ತಳಮಳ, ಯವ್ವನದ ಒಳಗುದಿಯನ್ನು ವ್ಯಕ್ತಪಡಿಸಲು ಕಥೆಯಲ್ಲಿಯೇ ಸಾಕಷ್ಟು ಅವಕಾಶಗಳಿತ್ತು.ಆದರೆ ಹೊಸತನ, ಪ್ರಯೋಗದ ದೆಸೆಯಿಂದಾಗಿ ಚಿತ್ರ ಯಾವ ಭಾವವನ್ನು ಸರಿಯಾಗಿ ವ್ಯಕ್ತಪಡಿಸದೆ ಸಾದಾರಣ ಚಿತ್ರವೂ ಆಗದಂತಾಗಿಹೋದದ್ದು ಬೇಸರದ ಸಂಗತಿ.

Saturday, February 9, 2013

ಒಂದು ಸುಂದರ ಅನುಭೂತಿ...

ಸೂನ್ಗವಾ ಎನ್ನುವುದು ಒಂದು ನೇಪಾಲಿ ಭಾಷೆಯ ಚಿತ್ರದ ಹೆಸರು.ಇದು. ಸ್ತ್ರೀಸಲಿಂಗಿ ಸಂಬಂಧದ ಕಥೆಯನ್ನೂ ಹೊಂದಿರುವ ಚಿತ್ರ.  ಒಂದು ಸಿನೆಮವಾಗಿ ಅದರ ನಿರೂಪಣೆ, ಚಿತ್ರಕಥೆ ಮುಂತಾದವು ಹಿಡಿದುಕೂರಿಸುವಂತಹ ಚಿತ್ರ.ಸಲಿಂಗ ಪ್ರೇಮದ ಚಿತ್ರಗಳಾದ ಮಿಲ್ಕ್, ಬ್ರೋಕ್ ಬ್ಯಾಕ್ ಮೌಂಟನ್ . ಮುಂತಾದ ಚಿತ್ರಗಳನ್ನೂ ನಾವು ಈಗಾಗಲೇ ನೋಡಿದ್ದೇವೆ, ಮೆಚ್ಚಿದ್ದೇವೆ.ಹಾರ್ವೆ ಮಿಲ್ಕ್ ಜೀವನ ಚರಿತ್ರೆಯಾಧಾರಿತ ಚಿತ್ರ ಮಿಲ್ಕ್ ಎಲ್ಲಾ ವಿಭಾಗದಲ್ಲೂ ಉತ್ಕೃಷ್ಟ ವೆನಿಸಿದ್ದರೂ ವಾಸ್ತವದ ಅಂಶ ಹೆಚ್ಚಾದ್ದರಿಂದ ಅಷ್ಟೇನೂ ಆಪ್ತ ಎನಿಸಿರಲಿಲ್ಲ. ಆದರೆ ಸೂನ್ಗವ ಚಿತ್ರಕ್ಕೆ ನಾನು ನಿಜಕ್ಕೂ ಮರುಳಾಗಿ ಬಿಟ್ಟೆ. ಮೊನ್ನೆ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನೋಡಿದ ಚಿತ್ರ ಇದು. ಸ್ವಲ್ಪ ಇರುಸುಮುರುಸಿನಿಂದಲೇ ಒಳಹೋದ ನನಗೆ ಒಂದು ಅಪ್ಯಾಯಮಾನವಾದ ಅನುಭವವಾದ್ದದಂತೂ ಸತ್ಯ.
ಚಿತ್ರವನ್ನ ಇಷ್ಟೊಂದು ಪ್ರಶಂಸೆ ಮಾಡಲಿಕ್ಕೆ ಪ್ರಮುಖವಾಗಿ ಮೂರು ಕಾರಣಗಳಿವೆ. ಅವುಗಳೆಂದರೆ : ಸುಂದರವಾದ ನಟಿಯರು ಮತ್ತು ಅವರ ಅದ್ಭುತ ಅಭಿನಯ, ಸರಳವಾದ ಚಿತ್ರಕಥೆ ಮತ್ತು  ಪೂರ್ವಗ್ರಹ ಪೀಡಿತವಲ್ಲದ ಪ್ರೌಢತೆ ಮೆರೆದಿರುವ  ನಿರ್ದೇಶನ. ಪ್ಯಾರಿಸ್  ಮೂಲದ ಸುವರ್ಣ ಥಾಪರವರ ಚೊಚ್ಚಲ  ನಿರ್ದೇಶನದ ಈ ಚಿತ್ರ ನೇಪಾಳಿ ಭಾಷೆಯ ಮೊಟ್ಟ  ಮೊದಲ  ಸಲಿಂಗ   ಪ್ರೇಮ ಕಥೆಯಾಧರಿಸಿದ ಚಿತ್ರ. ಮೊನ್ನೆ ಅಂದರೆ ಜನವರಿ ನಾಲಕ್ಕನೇ ತಾರೀಖಿನಂದು ಬಿಡುಗಡೆಯಾದ  ಈ ಚಿತ್ರ ಈಗಾಗಲೇ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ  ಗಳಿಸಿ ಜನರ ಪ್ರತಿಕ್ರಿಯೆಗೆ ಕಾಯುತ್ತಿದೆ.
ಚಿತ್ರದ ಪ್ರಮುಖ ಪಾತ್ರಧಾರಿಗಳಾದ ದೀಯ ಮಸ್ಕೆ, ನಿಶಾ ಅಧಿಕಾರರವರ ಅಭಿನಯ ಮತ್ತು ಸೌಂದರ್ಯ ನಮ್ಮ ಕಣ್ಣುಗಳನ್ನು ಪರದೆಗೆ ಅಂಟಿಸಿ ಬಿಡುತ್ತದೆ.
ಚಿತ್ರದ ಕಥೆ ಇಂತಿದೆ. ದಿಯಾ ಮತ್ತು ಕಿರಣ್ ಜೀವದ ಗೆಳತಿಯರು.ಆದರೆ ದಿನ ಕಳೆದಂತೆ ಅವರ ಗೆಳೆತನ ಗೆಳೆತನದ ಎಲ್ಲೇ ಮೀರಿ ಇನ್ನೂ ಮುಂದುವರೆಯುತ್ತದೆ. ಅದರಲ್ಲೂ ಕಿರಣ್ ಳಿಗೆ ಗೆಳತಿ ದೀಯಾಳ ಬಗ್ಗೆ ಹುಚ್ಚು ಪ್ರೀತಿ. ಆಕೆ ಬೇರೆಯವರ ಜೊತೆ ಮಾತಾಡಿದರೆ ನೊಂದುಕೊಳ್ಳುವ ಕೋಪ ಮಾಡಿಕೊಳ್ಳುವ ಮಟ್ಟಕ್ಕೆ ಅವರ ಸಂಬಂಧ ಬೆಳೆದುನಿಲ್ಲುತ್ತದೆ. ದೀಯಳಿಗೆ ಅವರಿಬ್ಬರ ಸಂಬಂಧದ ಬಗ್ಗೆ ಇನ್ನೂ ಗೊಂದಲವಿರುತ್ತದೆ. ಮುಂದೆ ಇದಾವುದರ ಅರಿವಿಲ್ಲದ ದೀಯಾಳ ಮನೆಯವರು ದೀಯಾಳಿಗೆ ಮದುವೆ ನಿಶ್ಚಯ ಮಾಡುತ್ತಾರೆ. ವರ ಕೂಡ ದೀಯಾಳನ್ನು ಒಪ್ಪಿಕೊಳ್ಳುತ್ತಾನೆ. ಇಲ್ಯಾರೂ ದೀಯಾಳ ಅಭಿಪ್ರಾಯವನ್ನೂ ಕೇಳದೆ ನಿಶ್ಚಿತಾರ್ಥ ಮಾಡಿಬಿಡುತ್ತಾರೆ. ಇದನ್ನು ತಡೆಯಲಾಗದ ದೀಯ ವಿಷಯವನ್ನೂ ಕಿರಣ್ ಳಿಂದ ಮುಚ್ಚಿಡುತ್ತಾಳೆ. ಮುಂದೆ ವಿಷಯ ಗೊತ್ತಾದಾಗ ಇಬ್ಬರಿಗೂ ಮಾತಿನ ಸಂಘರ್ಷ ನಡೆದು ತಮ್ಮ ಸಂಬಂಧವನ್ನೂ ಗಟ್ಟಿ ಮಾಡಿಕೊಳ್ಳುವ  ಸಮಾಜವನ್ನು ಎದುರಿಸುವ ನಿರ್ಧಾರಕ್ಕೆ ಬಂದುಬಿಡುತ್ತಾರೆ. ವಿಷಯ ತಿಳಿದ ಸಂಪ್ರದಾಯಸ್ಥ ಮನೆಯವರು ಗೋಳಾಡುತ್ತಾರೆ. ಎರಡೂ ಮನೆಗಳಲ್ಲಿ ಪ್ರತಿರೋಧ ಏರ್ಪಡುತ್ತದೆ.ಮದುವೆಯಾಗ ಬೇಕಾದ ವರ ವಿಷ್ಯ ತಿಳಿದು ದೀಯಾಳ ಬಗ್ಗೆ ಅಸಹ್ಯ ವ್ಯಕ್ತಪಡಿಸಿ ದೂರಾಗುತ್ತಾನಾದರೂ ಅದೊಂದು ದಿನ ಮೊದಲೇ ಸೇರಿದ್ದರಿಂದ ದೀಯಾ, ಅವನ ಮಗುವಿಗೆ ತಾಯಿಯಾಗುವ ಸನ್ನಿವೇಶ ಬಂದುಬಿಟ್ಟಿರುತ್ತದೆ. 
ಇಬ್ಬರೂ ತಮ್ಮ ತಮ್ಮ ಮನೆ ತೊರೆದು ಬೇರೊಂದು ಮನೆ ಮಾಡಿಕೊಂಡು ಜೀವಿಸಲು ಪ್ರಾರಂಭಿಸುತ್ತಾರಲ್ಲದೆ ದೀಯಾಳ ಮಗುವನ್ನೂ ಸಾಕುವ ನಿರ್ಧಾರ ಕೈಗೊಳ್ಳುತ್ತಾರೆ.
ಆದರೆ ಸಮಾಜ ಅವರನ್ನು ತಮ್ಮಷ್ಟಕ್ಕೆ ತಾವೇ ಇರಲು ಬಿಡುವುದೇ..? ಸಂಪ್ರದಾಯ, ಜಾತಿಗಳಿಗೆ ಬೆಲೆ ಕೊಡುವ ಹಿರಿಯರು ಈ ನಿಷಿದ್ಧ ಪ್ರೀತಿಯನ್ನು ಹೇಗೆ ತೆಗೆದುಕೊಳ್ಳುತ್ತಾರೆ...
ಚಿತ್ರದಲ್ಲಿ ನಿರ್ದೇಶಕರ ಕೌಶಲ ಎದ್ದುಕಾಣುತ್ತದೆ. ಶೃಂಗಾರಮಯ ಸನ್ನಿವೇಶಗಳು, ಅಣ್ಣ-ತಂಗಿಯ ಭಾವನಾತ್ಮಕ ದೃಶ್ಯಗಳನ್ನು ಚಿತ್ರೀಕರಿಸಿರುವ ಪರಿ ನಿಜಕ್ಕೂ ಖುಷಿಕೊಡುತ್ತದೆ. ಇಡೀ ಚಿತ್ರದಲ್ಲಿ ದೀಯಾಳನ್ನು ಮದುವೆಯಾಗಲು ಬರುವ ವರ ಸುಮಾರು ದೃಶ್ಯಗಳಲ್ಲಿದ್ದರೂ ಆತನ ಮುಖವನ್ನೇ ತೋರಿಸದಿರುವುದು ನಿರ್ದೇಶಕರ ಜಾಣ್ಮೆಗೆ ಹಿಡಿದ ಕೈಗನ್ನಡಿ. ಒಟ್ಟಾರೆಯಾಗಿ ಹೇಳಬೇಕೆಂದರೆ ಅವಶ್ಯವಾಗಿ ನೋಡಲೇ ಬೇಕಾದ ಚಿತ್ರ ಸೂನ್ಗವಾ.

Thursday, February 7, 2013

ಹಣೆಬರಹ ತಿದ್ದಿದ ದೇವರನ್ನು ಸ್ಮರಿಸುತ್ತಾ...

ನನಗೆ ಕೊಟ್ಟಿದ್ದ ಜಾಗ ಮುಖ್ಯಮಂತ್ರಿ ಜಗಧೀಶ್ ಶೆಟ್ಟರ್ ರವರ ವಾಸಸ್ಥಾನವಾದ 'ಕೃಷ್ಣಾ' ದ ಮುಂದೆ. ಅಶೋಕ ಹೋಟೆಲ್ಲಿನ ಮುಂದಕ್ಕೆ ಹಾಸು ಹೊಕ್ಕಾಗಿರುವ ರಸ್ತೆಯಲ್ಲಿ ಜಾಗ ಸಿಕ್ಕಿದ್ದು ನಿಜಕ್ಕೂ ನನ್ನ ಅದೃಷ್ಟ ಎಂದೆನಿಸಿತ್ತು.ಬೆಳಿಗ್ಗೆ ಆರೂವರೆಗೆ ಅಲ್ಲಿ ಹಾಜರಾಗಿ ನನ್ನ ಪೇಂಟಿಂಗ್ ಗಳನ್ನ ಜೋಡಿಸಿದೆವು. ನಾನು ಸುಮ್ಮನೆ ಚಿತ್ರಗಳನ್ನೂ ಚಿತ್ರಿಸಿರಲಿಲ್ಲ. ಅದರಲ್ಲಿ ಮೂರ್ನಾಲ್ಕು ಸರಣಿಗಳನ್ನು ಮಾಡಿಕೊಂಡಿದ್ದೆ. 'ಛಾಯಾ' ಎನ್ನುವ ಸರಣಿಯಲ್ಲಿ ಬರೆ ನೆರಳಿನದ್ದೆ ಆಟ.ಏನೇ ಬಣ್ಣಗಳಿದ್ದರೂ ನೆರಳಿನ ಬಣ್ಣ ಮಾತ್ರ ಕಪ್ಪು ಬಿಳುಪೆ. ಆ ಒಂದು ಪರಿಕಲ್ಪನೆಯ ಮೇಲೆ ಒಂದಷ್ಟು ಪೇಂಟಿಂಗ್ ಮಾಡಿದ್ದೆ. ಹಾಗಾಗಿ ಜೋಡಿಸಿಡುವಾಗ ಆ ಪರಿಕಲ್ಪನೆಯ ಮೇಲೆಯೇ ಜೋಡಿಸಿದರೆ ಚೆನ್ನಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿತ್ತು. ನಾವು ಎಲ್ಲವನ್ನೂ ಜೋಡಿಸಿಡುವಷ್ಟರಲ್ಲಿ ಒಂಭತ್ತು ಘಂಟೆ. ಆದರೆ ಜೋಡಿಸಿಟ್ಟ ಮೇಲೆ ಅಲ್ಲಿಗೆ ಬಂದ ಪೋಲಿಸ್ 'ಇದು ಮುಖ್ಯ ಮಂತ್ರಿಗಳ ಮನೆಯ ಕ೦ಪೌಂಡ್..ಹಾಗಾಗಿ ನೀವು ಇಲ್ಲಿನ ಫುಟ್ ಪಾತ ಮೇಲೆ ಇಡುವ ಹಾಗಿಲ್ಲ .' ಎಂದರು. 'ಎಲ್ಲವನ್ನೂ ತೆಗೆದು ರಸ್ತೆಗೆ ಜೋಡಿಸಿಬಿಡಿ..' ಎಂದು ಬಿಟ್ಟರು.ಸರಿ ಎಂದುಕೊಂಡ ನಾವು ರಸ್ತೆಗೆ ಬಿದ್ದೆವು. ಮತ್ತೆ ತೆಗೆದು ಜೋಡಿಸಿಡುವ ಕೆಲಸ ಪ್ರಾರಂಭವಾಯಿತು. ಹತ್ತು ಘಂಟೆಯ ಹೊತ್ತಿಗೆ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಬಂದ ಪೋಲಿಸ್ 'ಇಲ್ಲಿ ಇಡುವ        ಹಾಗೆ ಇಲ್ಲ...ಚಿತ್ರಕಲಾ ಪರಿಷತ್ ನವರು ಅನುಮತಿ ತೆಗೆದುಕೊಂಡಿಲ್ಲ.ಹಾಗಾಗಿ ನೀವು ಇಲ್ಲಿಂದ ತೆಗೆದುಬಿಡಿ ಎಂದುಬಿಟ್ಟರು. .' ನಾವು ಸ್ವಲ್ಪ ಕೊಸರಾಡಿದ್ದಕ್ಕೆ 'ನೀವೇ ತೆಗೆದಿಡಿ..ಇಲ್ಲಾಂದ್ರೆ ನಮ್ಮವರು ಬಂದು ತೆಗೆದಿಡಬೇಕಾಗುತ್ತದೆ..' ಎಂದು ಸ್ವಲ್ಪ ಒರಟಾಗಿಯೇ ಹೇಳಿದರು. ಚಿತ್ರಕಲಾ ಪರಿಷತ್ ನವರೂ ಕೂಡ 'ಕಳೆದ ಬಾರಿ ಹೀಗಾಗಿರಲಿಲ್ಲ...ಏನೋ ಈ ಸಾರಿ ಅನುಮತಿ ಕೊಡುತ್ತಿಲ್ಲ..ಸಾರಿ..ನೀವು ಎಲ್ಲವನ್ನೂ ಕಟ್ಟಿಡಿ..ನಮ್ಮ ಸ್ವಯಂ ಸೇವಕರು ಬಂದು ಎಲ್ಲವನ್ನೂ ಜೋಡಿಸಿಡುತ್ತಾರೆ...ನಿಮಗೆ ಹೊಸ ಜಾಗ ಕೊಡುತ್ತೇವೆ...' ಎಂದು ಹೋಗಿಬಿಟ್ಟರು. ನಾವು ಎಲ್ಲವನ್ನೂ ಕಟ್ಟಿಕೊಂಡು ಸ್ವಯಂ ಸೇವಕರಿಗೆ ಕಾಯ್ದುಕುಳಿತೆವು. . ಹನ್ನೊಂದಾದರೂ ಯಾರೂ ಬರಲೇ ಇಲ್ಲ. ಹನ್ನೆರಡರ ಹೊತ್ತಿಗೆ ನಮಗೆ ಒಂತರಾ ಆಗಿಹೋಗಿತ್ತು. ನಾನು ಚಿತ್ರಪ್ರದರ್ಶನಕ್ಕೆ ಬಂದವನು ನನ್ನ ಚಿತ್ರವನ್ನೆಲ್ಲಾ ಕಟ್ಟಿಟ್ಟು ಅಲ್ಲಿನ ಚಿತ್ರಗಳನ್ನೂ ನೋಡತೊಡಗಿದೆ. ಗೆಳೆಯ ಪಿಲಿಪ್ ಜೊತೆಗಿದ್ದರಿಂದ ಅವರ ಜೊತೆ ಚಿತ್ರಗಳ ಬಗ್ಗೆ ಮಾತಾಡುತ್ತಿದ್ದೆವು. ಯಾಕೋ ಚಿತ್ರಕಲಾ ಪರಿಷತ್ ನವರು ನಮಗೆ ಹೊಸಜಾಗ ಮಾಡಿಕೊಡುವ ಯಾವ ಆಸಕ್ತಿಯನ್ನು ತೋರಿಸದೆ ತಮ್ಮ ತಮ್ಮ ಸಂಭ್ರಮದಲ್ಲಿ ಮುಳುಗಿಹೋಗಿದ್ದರು. ಯಾರನ್ನೂ ಕೇಳಿದರೂ ಇನ್ನೊಬ್ಬರೆಡೆಗೆ ಕೈತೊರಿಸುತ್ತಿದ್ದರು. ನಾನು ಮೂರ್ನಾಲ್ಕು ಸರಿ ಅಲ್ಲಲ್ಲಿ ಎಡಿತಾಕಿದೆ ..ಸಾರ್ ಅವರನ್ನು ಕೇಳಿ..ಇರಿ ವೈಟ್ ಮಾಡಿ...ಎಂದೆ ಹೇಳುತ್ತಿದ್ದರು.ಅಂತೂ ಇಂತೂ ಕ್ರೆಸೆಂಟ್ ರಸ್ತೆಯ ಕಾರು ಪಾರ್ಜಿಂಗ್ ಜಾಗದಲ್ಲಿ ಮೂಲೆಯಲ್ಲಿ ಒಂದು ಜಾಗ ನಮಗೆ ಸಿಕ್ಕಾಗ ಹೆಚ್ಚು ಕಡಿಮೆ ಅರ್ಧ ದಿವಸ ಕಳೆದುಹೋಗಿತ್ತು. ಅಷ್ಟರಲ್ಲಾಗಲೇ ನಮಗೆ ಮತ್ತೆ ಜೋಡಿಸಿಡುವ, ಪ್ರದರ್ಶಿಸುವ ಆಸಕ್ತಿ ಕಳೆದುಹೋಗಿತ್ತು. ಕೊಟ್ಟಿದ್ದ ಜಾಗವೂ ಹಾಗೆಯೇ ಇತ್ತು. ಅಲ್ಲಿ ಯಾರೂ ಬರಲು ಸಾಧ್ಯವೇ ಇರಲಿಲ್ಲ. ಸುಮ್ಮನೆ ಎಲ್ಲವನ್ನೂ ಕಟ್ಟಿ ಒಂದೆಡೆ ಇಟ್ಟು ಅಲ್ಲಿರುವ ಅದ್ಭುತ ಚಿತ್ರಗಳನ್ನೂ ಕಣ್ತುಂಬಿಕೊಳ್ಳೋಣ ಎನಿಸಿತು. ಆದರೆ ಇರಲಿ ಎಂದು ಜೋಡಿಸಿಟ್ಟೆದ್ದಾಯಿತು.
ನಾನು ಬೆಂಗಳೂರಿಗೆ ಬಂದಾಗಿನಿಂದ ಪ್ರತಿವರ್ಷ ಚಿತ್ರಸಂತೆಗೆ ಹಾಜರಾಗುತ್ತಿದ್ದರೂ ನಾನು ಚಿತ್ರಗಳನ್ನಿಟ್ಟಿದ್ದ ಈ ಜಾಗಕ್ಕೆ ಒಮ್ಮೆಯೂ ಇಣುಕಿರಲಿಲ್ಲ. ಆಮೇಲಿನದು ಎಲ್ಲವೂ ನೀರಸ. ನೋಡಲಿಕ್ಕೂ ಜನಬರದ ಜಾಗವಾಗಿತ್ತದು.
ಇದೆಲ್ಲದರ ನಡುವೆಯೂ ಚಿತ್ರಸಂತೆ ಕಣ್ಣಿಗೆ ಒಂದು ಹಬ್ಬ ಎನ್ನಬಹುದು.ಸಾವಿರಕ್ಕೂ ಹೆಚ್ಚು ಕಲಾವಿದರ ಅಸಂಖ್ಯ ಚಿತ್ರಗಳು ಒಂದೇ ಜಾಗದಲ್ಲಿ ನೋಡಲು ಸಿಗುವುದು ಕಷ್ಟ. ಚಿತ್ರಸಂತೆಯಿಂದ ಅದು ವರ್ಷ ವರ್ಷ ಸಾಧ್ಯವಾಗುತ್ತದೆ. ಅದರಲ್ಲೂ ಕೆಲವರ ವರ್ಣ ವಿನ್ಯಾಸ, ಶೈಲಿ ಹೊಸತನ ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋದದ್ದಂತೂ ಸತ್ಯ.
ಮುಂದಿನ ಚಿತ್ರಸಂತೆಗೆ ಭಾಗವಹಿಸಲು ಇನ್ನಷ್ಟು ಹುರುಪು ಬಂದಿದೆ. ಆದರೆ ಈ ಸಾರಿಯಂತೆ ಮುಂದಿನ ಸಾರಿ ದೇವರು ಹಣೆಬರಹ ತಿದ್ದದಿದರೆ ಸಾಕು..

Saturday, February 2, 2013

ಮುತ್ತಾಗದ ಮಣಿ, ಮೊರೆಯದ ಕಡಲು.

ಚಿತ್ರ ಬಿಡುಗಡೆಯಾಗಿದೆ. ಮೊದಲ ಆಟದ ಸಮಯ. ಜನರಿಲ್ಲ. ಟಿಕೆಟ್ ಗಳಿಗೆ ಸಂಖ್ಯೆಯ ಹಂಗಿಲ್ಲ. ಸರತಿಯ ಸಾಲಿಲ್ಲ. ಟಿಕೇಟು ಕೊಂಡುಕೊಂಡು ಒಳಬಂದಾಯ್ತು. ಸಿನಿಮಾವೂ ಶುರುವಾಯಿತು. ಜನರಲ್ಲಿ ಅಸಹನೆ. ಆವಾಗಾವಾಗ ಎದ್ದು ಹೊರಗಡೆ ಹೋಗುತ್ತಾರೆ. ಸಿಗರೇಟು ಸೇದುತ್ತಾರೆ. ಮೊಬೈಲ್ ಹಿಡಿದುಕೊಂಡು ಒಂದಷ್ಟು ಜನ ಹೊರಗೆ ಹೋಗಿ ಮಾತಾಡಿಕೊಂಡು ಬರುತ್ತಾರೆ. ಆದರೆ ಕೆಲವೊಬ್ಬರು ಅಲ್ಲೇ ಸೀಟಿಗೆ ಒರಗಿ ಮೊಬೈಲಿನಲ್ಲಿ ಮಾತಾಡಲು ಪ್ರಯತ್ನಿಸುತ್ತಾರೆ. ಸಿನಿಮಾದ ದೃಶ್ಯದಲ್ಲಿ ಶಬ್ದ ಜೋರಾದದ್ದಕ್ಕೆ ಶಪಿಸುತ್ತಾರೆ. ಮಧ್ಯಂತರ ಬರುತ್ತದೆ. ಅದಾದ ನಂತರ ಎಷ್ಟೋ ಜನ ಮತ್ತೆ ಒಳಬರುವುದೋ ಏನೋ  ಎಂಬ ಚಿಂತೆಗೆ ಬೀಳುತ್ತಾರೆ. ಶುರುವಾಗಿ ಸ್ವಲ್ಪ ಹೊತ್ತಾದ ಮೇಲೆ ಬೇಕೋ ಬೇಡವೋ ಎಂಬಂತೆ ಒಳಬರುತ್ತಾರೆ. ಆನಂತರ ಮುಗಿಯಲು ಇನ್ನೂ ಸಮಯವಿರುವಾಗಲೇ  ಎದ್ದು ಹೊರಬರುತ್ತಾರೆ.
ಇದು ಈವತ್ತು ಕಡಲ ಚಿತ್ರ ಪ್ರದರ್ಶನವಿದ್ದ ಚಿತ್ರಮಂದಿರದಲ್ಲಿ ಕಂಡುಬಂದಂತಹ ದೃಶ್ಯ. ಹಾಗಂತ ಚಿತ್ರ ಅಷ್ಟು ಕೆಟ್ಟದಾಗಿದೆಯಾ..?
ಚಿತ್ರದ  ನಾಯಕ ಅನಾಥ. ನಾಯಕಿ ವಿಲನ್ ಮಗಳು. ಇವರಿಬ್ಬರ ಪ್ರೀತಿ.ಅನಾಥನಿಗೆ ಆಸರೆಯಾಗುವವನು ಅಲ್ಲಿನ ಚರ್ಚಿನ ಪಾದ್ರಿ. ಇವರಿಗೆ ಎದುರಾಗಿ ನಿಲ್ಲುವವನು ವಿಲನ್. ಮೊದಲು ವಿಲನ್ ಮತ್ತು ಪಾದ್ರಿಗೂ ಪರಿಚಯ ಮತ್ತು ಸಂಘರ್ಷವಿರುತ್ತದೆ. ಪಾದ್ರಿಯ ತತ್ವ ಯಾವತ್ತಿಗೂ ಒಳ್ಳೆತನಕ್ಕೆ ಬೆಲೆಯಿದೇ ಮತ್ತು ಅದೇ ಗೆಲ್ಲುತದೆ ಎಂಬುದು.ಇಷ್ಟು ಹೇಳಿದ ಮೇಲೆ ಮುಂದೇನಾಗುತ್ತದೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಆದರೆ ಚಿತ್ರ ನಮ್ಮನ್ನು ಕಾಡುವುದು, ಕಾಡಿ ಕಾಡಿ ಕಂಗೆಡಿಸುವುದು, ಸುಸ್ತು ಮಾಡುವುದು, ಅದರ ಏಕತಾನತೆಯಿಂದ. ಇಡೀ ಚಿತ್ರದಲ್ಲಿ ಎಲ್ಲೂ ನಗುವಿಲ್ಲ. ಒಂದಷ್ಟು ರೋಮಾನ್ಸ್ ಬಿಟ್ಟರೆ ಬೇರೆಲ್ಲಾ ಬರೀ ಮಾತುಕತೆಯೇ.ನಿಧಾನಕ್ಕೆ ನಡೆಯುವ ಅನಪೇಕ್ಷಿತ ದೃಶ್ಯಾವಳಿಗಳೇ.
ಮಣಿರತ್ನಂ ಚಿತ್ರಗಳೆಂದರೆ ತಂತ್ರಜ್ಞಾನದ ಬಗ್ಗೆ ಮಾತನಾಡುವ ಹಾಗಿಲ್ಲ. ಅದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಛಾಯಾಗ್ರಹಣ, ಸಂಗೀತ ಮುಂತಾದವುಗಳನ್ನೆಲ್ಲಾ ದಿಗ್ಗಜರೆ ಮಾಡಿರುವುದರಿಂದ ಅವೆಲ್ಲಾ ಪರಿಣಾಮಕಾರಿಯಾಗಿಯೇ ಇವೆ. ಆದರೆ ಚಿತ್ರದ ಕಥೆ ನಿರೂಪಣೆ ಮಾತ್ರ ನಿಂತ ನೀರು.ವಿಲನ್ ಆಗಿ ಅರ್ಜುನ ಸರ್ಜಾ ಪಾದ್ರಿಯಾಗಿ ಅರವಿಂದ್ ಸ್ವಾಮೀ ಉತ್ತಮ ಅಭಿನಯ ನೀಡಿದ್ದಾರೆ. ಆದರೆ ನಾಯಕ ಗೌತಂ ಕಾರ್ತಿಕ್ ಅಭಿನಯ ಸಾದಾರಣ.
ಚಿತ್ರದ  ಉದ್ದೇಶ ಮನರಂಜನೆಯೇ ಆಗಿರಬೇಕು ಎಂಬುದೆನಿಲ್ಲ. ಒಂದು ಗಂಭೀರವಾದ ವಿಚಾರವನ್ನೂ ಪ್ರೇಕ್ಷಕರ ಮುಂದಿಡುವುದೂ ಆಗಿರಬಹುದು. ಅಥವಾ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ, ಒಂದು ಘಟನೆಯ ವರದಿಯೂ ಆಗಿರಬಹುದು. ಅಥವಾ ಒಂದು ಕಾಲ್ಪನಿಕ ವಿಷಯದ ವಿವರಣೆಯೂ ಇರಬಹುದು. ಆದರೆ ಮಣಿರತ್ನಂ ಅದ್ಯಾವುದೂ ಅಲ್ಲದ  ಸರ್ವೆ ಸಾದಾರಣವಾದ   ಚಿತ್ರವೊಂದನ್ನು ಬಹಳಷ್ಟು ವೆಚ್ಚಮಾಡಿ ಅತ್ಯುತಮ ತಂತ್ರಜ್ಞರನ್ನು ಕಲೆಹಾಕಿ  ಹೊರತಂದಿದ್ದಾರೆ. ಕಡಲ ಅಲೆ, ಮೊರೆತ, ಸುತ್ತ ಮುತ್ತಲ ಕಣ್ತಣಿಸುವ ಪ್ರದೇಶಗಳು ಮುಂತಾದವುಗಳು ಚೆಂದಕ್ಕೆ ಕಾಣಿಸಿದರೂ ಸಿನಿಮಾಕ್ಕೆ ಕಥೆಗೆ ಏನೂ ಸಹಾಯ ಮಾಡಿಲ್ಲ.
ಚಿತ್ರ ನೋಡಿ ಹೊರಬಂದ ಮೇಲೆ ನಮಗೆ ಉಳಿಯುವುದು ಕಡಲಿನ ಮೊರೆತದ ಸದ್ದು , ಬೇಸರ ಮತ್ತು ಅರ್ಧ ಟಿಕೇಟಿನ ತುಂಡು ಮಾತ್ರ.

Friday, February 1, 2013

ಲಿಂಕನ್:ಆಸ್ಕರ ಕಣದ ಚಿತ್ರಗಳು

ಸ್ಟೀವನ್ ಸ್ಪೀಲ್ ಬರ್ಗ್ ಎಂದರೆ ನಮ್ಮಂಥ ಚಿತ್ರರಸಿಕರಲ್ಲಿ ಒಂದು ಮಿಂಚಿನ ಸಂಚಲನವಾಗುವುದು ಸತ್ಯದ ಸಂಗತಿ. ಅದ್ದೂರಿತನ ಮತ್ತು ವಸ್ತು ವಿಷಯದಲ್ಲಿ ಸ್ಪೀಲ್ ಬರ್ಗ್ ಚಿತ್ರಗಳು ಎಂದಿಗೂ ಮುಂಚೂಣಿಯಲ್ಲೇ ಇರುತ್ತವೆ. ಅವರ ಕಡಿಮೆ ವೆಚ್ಚದ ಡುಯೇಲ್ ನಿಂದ ಹಿಡಿದು ಜುರಾಸ್ಸಿಕ್ ಪಾರ್ಕ, ಶಿಂಡ್ಲರ್ಸ್ ಲಿಸ್ಟ್, ಎ,ಐ. ಮುಂತಾದ ಚಿತ್ರಗಳನ್ನು ಮರೆಯಲು ಹೇಗೆ ಸಾಧ್ಯ.ಇಲ್ಲಿಯವರೆಗೆ ನಿರ್ದೇಶನದಲ್ಲಿ ಅರ್ಧ ಶತಕ ಭಾರಿಸಿರುವ ಸ್ಪೀಲ್ ಬರ್ಗ್ ಮೂರು ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಅಪರೂಪದ ನಿರ್ದೇಶಕ.
 ಈ ವರ್ಷದ ಆಸ್ಕರ್ ಪಟ್ಟಿಯಲ್ಲಿ ಅತಿ ಹೆಚ್ಚು ವಿಭಾಗಕ್ಕೆ ಅಂದರೆ 12 ವಿಭಾಗಗಳಿಗೆ ನಾಮಾಂಕಿತಗೊಂಡಿರುವ ಚಿತ್ರ ಇದೆ ಸ್ಪೀಲ್ ಬರ್ಗ್ ನಿರ್ದೇಶನದ ಲಿಂಕನ್. ಭಾರತೀಯ ಸಂಸ್ಥೆ ರಿಲಾಯನ್ಸ್ ನ ಸಹ ನಿರ್ಮಾಣದೊಂದಿಗೆ ತಯಾರಾಗಿರುವ ಚಿತ್ರ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ವಿಜೇತೆ  ಡೋರಿಸ್ ಕೆಅರ್ನ್ಸ್ ಗುಡ್ ವಿನ್ ಳ ಕಾದಂಬರಿ ಆಧರಿಸಿದೆ.
ಚಿತ್ರದ ಕಥೆ ಅಬ್ರಾಹಾಂ ಲಿಂಕನ್ ರ ರಾಜಕೀಯ ಜೀವನ ಮತ್ತು ಗುಲಾಮಗಿರಿ ವಿರುದ್ಧದ 13 ನೆಯ ತಿದ್ದುಪಡಿಯನ್ನು ಅನುಷ್ಠಾನಕ್ಕೆ ತರುವುದರ ಕುರಿತದ್ದಾಗಿದೆ. ವರ್ಣಬೇಧ ನೀತಿಯಿಂದಾಗಿ ದೇಶದಲ್ಲಿ ಕರಿಯರ ಮೇಲಿನ ದೌರ್ಜನ್ಯ ಅತಿಯಾದ ಸಂದರ್ಭದಲ್ಲಿ ಲಿಂಕನ್ ಅದರ ವಿರುದ್ಧ ಹೋರಾಡುವ ಕಥೆ ಚಿತ್ರದ್ದು.
ಚಿತ್ರದ ಪ್ರಾರಂಭದಲ್ಲೇ ಸ್ಪೀಲ್ ಬರ್ಗ್ ಹಿಡಿದು ಕೂರಿಸಿಬಿಡುತ್ತಾರೆ ಕರಿಯರನ್ನು ಬಿಳಿಯ ಸೈನಿಕರು ತುಳಿದು ಸಾಯಿಸುವ ದೃಶ್ಯ ಮನಕಲಕುತ್ತದೆ . ಸಂವಿಧಾನದ 13 ನೆಯ ತಿದ್ದುಪಡಿಯನ್ನೂ ಜಾರಿಗೆ ತರಲೆಬೇಕೆಂಬುದು ಲಿಂಕನ್ ಧೇಯೋದ್ದೇಶ. ಆದರೆ ಇನ್ನು ಸಿವಿಲ್ ವಾರ್ ಮುಗಿದಿಲ್ಲದ ಕಾರಣ ಅದರ ಜಾರಿಗೆ ನಿಲ್ಲುವುದು ರಾಜಕೀಯ ಸ್ಥಿತಿಗತಿಯಲ್ಲಿ ಏರುಪೇರು ತರುವುದು ಲಿಂಕನ್ನರಿಗೂ ಗೊತ್ತಿದ್ದ ಸಂಗತಿ. ಅದೂ ಅಲ್ಲದೆ ಆ ಒಂದು ತಿದ್ದುಪಡಿಯ ಪರವಾಗಿ ನಿಂತರೆ ತುಂಬಾ ಜನ ರಾಜಕೀಯ ಹಿತೈಶಿಗಳನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆನ್ನುವುದು ಸತ್ಯ. ಹಾಗಾಗಿಯೇ ಲಿಂಕನ್ ರಿಪಬ್ಲಿಕನ್ ಪಕ್ಷದ ಸ್ಥಾಪಕ ಫ್ರಾನ್ಸಿಸ್ ಮೇಲೆ ನಂಬಿಕೆಯಿರಿಸುತ್ತಾರೆ. ಪ್ರಾನ್ಸಿಸ್ ಇದಕ್ಕೆ ಒಪ್ಪಿದರೂ ತನ್ನದೇ ಆದ ಶರತ್ತನ್ನು ಒಡ್ಡುತ್ತಾನೆ. ಯಾವುದೇ ಇತ್ಯರ್ಥವಾಗದೆ ಯುದ್ಧ  ನಿಲ್ಲಿಸಲು ಸಾಧ್ಯವಿಲ್ಲವಾದರೂ ಪ್ರಾನ್ಸಿಸ್ನ ಬೆಂಬಲದ ಅವಶ್ಯಕತೆ ಬೇಕೆಬೇಕಾದ್ದರಿಂದ ಲಿಂಕನ್ ಬೇರೆ ದಾರಿ ಕಾಣದೆ ಪ್ರಾನ್ಸಿಸ್ ಷರತ್ತಿಗೆ ಅಸ್ತು ಎನ್ನುತ್ತಾನೆ. ಇದರ ಮಧ್ಯ ತಿದ್ದುಪಡಿಗಾಗಿ ಎಲ್ಲರ ಬೆಂಬಲ ತೆಗೆದುಕೊಳ್ಳಲು ಪ್ರಯತ್ನಿಸುವ ಲಿಂಕನ್ ಮತ್ತು ವಿಲಿಯಂ ಅದಕ್ಕಾಗಿ ಹರಸಾಹಸ ಪಡಬೇಕಾಗುತ್ತದೆ. ಅಂತೂ ಇಂತೂ 13ನೆ ವಿಧಿಯ ಜಾರಿಯಾಗುವಲ್ಲಿಗೆ ಚಿತ್ರ ಕೊನೆಯ ಘಟ್ಟಕ್ಕೆ ಬಂದು ನಿಲ್ಲುತ್ತದೆ.  ಆನಂತರ ಲಿಂಕನ್ ಯುದ್ಧ ಭೂಮಿಗೆ ಭೇಟಿ ನೀಡುವುದು, ಆನಂತರ ಆತನ ಹತ್ಯೆ ಮುಂತಾದವುಗಳನ್ನು ನಿರ್ದೇಶಕರು ತ್ವರಿತಗತಿಯಲ್ಲಿ ತೋರಿಸಿಬಿಡುತ್ತಾರೆ. ಚಿತ್ರದ ಗತಿ ನಿದಾನವಾಗಿ ಸಾಗುತ್ತದೆಯಾದರೂ ಎಲ್ಲೂ ತನ್ನ ಹಿಡಿತವನ್ನು ಕಳೆದುಕೊಳ್ಳುವುದಿಲ್ಲ ಆದರೆ ಸುಮಾರು ಎರಡೂವರೆ ಘಂಟೆಗಳ ಅವಧಿಯ ಚಿತ್ರದಲ್ಲಿ ರೋಚಕತೆಯಿಲ್ಲ . ಚಿತ್ರವನ್ನೂ  ನೋಡುವುದಕ್ಕೂ ಮೊದಲು ಚಿತ್ರದ ಹಿನ್ನೆಲೆ, ಅಮೆರಿಕಾದ ಸಂವಿಧಾನ, ಲಿಂಕನ್ ಮತ್ತು ವರ್ಣಬೇಧ ನೀತಿಯ ಬಗ್ಗೆ ಸ್ವಲ್ಪ ಅರಿವಿದ್ದರೆ ಚಿತ್ರ ಸಹನೀಯವಾಗುತ್ತದೆ.  ಸರಿಯಾಗಿ ಮಗ್ನನಾಗಿ ನೋಡಿದರೆ ಪ್ರಾರಂಭದಿಂದ ಕೊನೆಯವರೆಗೂ ಕುತೂಹಲದಿಂದ ನೋಡಿಸಿಕೊಳ್ಳುತ್ತಾ ಸಾಗುತ್ತದೆ.
ಇದು  ಲಿಂಕನ್ ಜೀವನ ಚರಿತ್ರೆಯಲ್ಲ. ಬದಲಿಗೆ ಲಿಂಕನ್ ವರ್ಣಬೇಧ ನೀತಿಯನ್ನು ಜಾರಿಗೊಳಿಸುವುದಕ್ಕಾಗಿ ಮಾಡಿದ ಹೋರಾಟದ ಕಥೆ ಎನ್ನಬಹುದು. ಹಾಗಾಗಿಯೇ ಚಿತ್ರ ಅಲ್ಲಿಂದಲೇ ಪ್ರಾರಂಭವಾಗಿ ಅಲ್ಲಿಗೆ ಮುಗಿಯುತ್ತದೆ. ಚಿತ್ರದ ಕೊನೆಯಲ್ಲೂ ಕೂಡ ಲಿಂಕನ್ ರ ಸಾವನ್ನು ನಿರ್ದೇಶಕ ಹೈಲೈಟ್ ಮಾಡುವುದಿಲ್ಲ. ಚಿತ್ರದ ಅಂತ್ಯ ಕೂಡ ಲಿಂಕನ್ ರ ಭಾಷಣದ ಮೂಲಕ ಕೊನೆಯಾಗುತ್ತದೆ. ಬಹುಶ ಸ್ಪೀಲ್ ಬರ್ಗ್ ಉದ್ದೇಶ ಲಿಂಕನ್ ಅವರ ಸಾಧನೆಯ ಹಾದಿಯನ್ನು ವಿಷದಪದಿಸುವುದಷ್ಟೇ ಆಗಿರಬಹುದು. ಹಾಗಾಗಿಯೇ ಇಲ್ಲಿ ಲಿಂಕನ್ ರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ವಿವರಗಳಿಲ್ಲ. ಅವರ ಹಿನ್ನೆಲೆ , ಬಾಲ್ಯ ಕೂಡ ಚಿತ್ರದ ನಿರೂಪಣೆಯಲ್ಲಿ ಬರುವುದಿಲ್ಲ. ಹಾಗೆ ಅವರ ಹತ್ಯೆಯ ವಿವರಗಳು, ಹತ್ಯೆಯ ಘಟನೆಯನ್ನು ನೇರವಾಗಿ ತೋರಿಸಿಲ್ಲ. ಬರೇ ಲಿಂಕನ್ ರನ್ನು ಶೂಟ್ ಮಾಡಿದ್ದಾರೆ ಎಂಬ ಸುದ್ದಿ ಬರುವಲ್ಲಿಗೆ ಅದನ್ನು ಮೊಟಕುಗೊಳಿಸಲಾಗಿದೆ.
ಚಿತ್ರದ  ಪಾತ್ರಧಾರಿಗಳಲ್ಲಿ ಲಿಂಕನ್ ಪಾತ್ರ ನಿರ್ವಹಿಸಿರುವ ಡೆನಿಯಲ್ ಲೇ ಡೇವಿಸ್ ನಮಗೆ ಅಬ್ರಾಹಂ ಲಿಂಕನ್ ರ ಪ್ರತಿರೂಪದಂತೆಯೇ ಕಾಣಿಸುತ್ತಾರೆ. ನಾನು ಲಿಂಕನ್ ಫೋಟೂಗಳನ್ನು ನೋಡಿದ್ದು ಪುಸ್ತಕಗಳಲ್ಲಿ . ಅದೇ ಪ್ರತಿರೂಪದ ಲಿಂಕನ್ ನಮಗೆ ಈ ಚಿತ್ರದಲ್ಲಿ ಕಾಣಸಿಗುವುದನ್ನು ಕಂಡಾಗ ಅಮೆರಿಕಾದ ಚಿತ್ರಕರ್ಮಿಗಳ ಪ್ರಸಾದನ ಸಾಮರ್ಥ್ಯ ಮತ್ತು ಕಲಾವಿದರ ಪಾತ್ರದೆಡಿಗಿನ ತನ್ಮಯತೆಯ ಬಗ್ಗೆ ಮೆಚ್ಚುಗೆ ಮೂಡದಿರದು.