Saturday, December 1, 2012

ಎರಡು ಕವನಗಳು....

 ನನ್ನ ಪೇಂಟಿಂಗ್....
ಕೆಟ್ಟ ಸಮಯವಿದು...
1.
ಕಳೆಯೋಣ
ಈ ಸಮಯವನು

ತಲೆಯೆತ್ತಿದರೆ ಗ್ರಹಣ
ಹಿಡಿ ಅನ್ನ  ಮಣ್ಣು
ಕಣ್ಣ  ತುಂಬದ ನಿದಿರೆ
ಸೋಲು ಸೋಲೇ ಉಸಿರು.

ಹಾದು ಹೋಗಲಿ ಹೀಗೆ
ತಪ್ಪಿಸುವ ಮಾತೇಕೆ?

2.
 ಕಾಯೋಣ
ಆ ಕಾಲವನು

ಬದುಕು ಬೆಳದಿಂಗಳು
ಭರ್ತಿ ತೃಪ್ತಿಯ ಉದರ
ಸಂತೆಯಲು ನಿದ್ರೆ
ಕೈತಾಕಿದ್ದು ಚಿನ್ನ.

ಕಾಲ ಬರಲೇ ಬೇಕು ..
ಕಳೆದರೆ ರಾತ್ರಿ
ಉಳಿದದ್ದು ಹಗಲೇ ತಾನೇ..?

2. ಸೋತಿದ್ದೇನೆ..ಗೆಲ್ಲಲು ಬೇಕಿದೆ ಕನಸು...

ಒದ್ದಾಡುತ್ತಿದ್ದೇನೆ
ಮಗ್ಗುಲು ಬದಲಿಸುತ್ತಾ
ಕಣ್ಣರೆಪ್ಪೆ ಅದುಮುತ್ತಾ
ನೂರು ಸೋಲುಗಳನ್ನು ಪಕ್ಕಕ್ಕಿರಿಸಿ,
ಸುಡುಚಿಂತೆಗಳಿಗೆ ತಣ್ಣೀರೆರೆಚಿ,
ಇತಿಹಾಸವನ್ನು ಮೆದುಳಿ೦ದ ಅಳಿಸಿ
ನನ್ನ ನಾ ಮರೆಯುವ ಯತ್ನಗಳಿಂದ
ಸೋತು ಸೋತು ಮತ್ತೆ ಸೋತು
ಮಲಗಿದ್ದೇನೆ ನಿದ್ರೆ ಬಾರದೆ..!
****
ಬಾರದ ಪ್ರಿಯತಮೆಗಾಗಿ ಕಾದಿದ್ದೆ.
ಒಡನಾಡಿದ ನೆನಪುಗಳು ನನ್ನನ್ನುಳಿಸಿದ್ದವು
ಬೇಸರಿಸದಂತೆ ಬಸವಳಿಯದಂತೆ
ಸೋತು ಸಾಯದಂತೆ
ಮುಖ ತಿರುಗಿಸಿದವಳಿಗೆರೆಡು ಅಕ್ಷತೆ ಹಾಕಿ ಬಂದೆ
ಮತ್ತೆ ಕಾಯಲು ಹೋಗಲಿಲ್ಲ.

. ಬಾರದ ಮಳೆಗಾಗಿ ಕಾದಿದ್ದೆ. 
ಮಳೆ ಬಂದಂತೆ ಬೆಳೆ ಬೆಳೆದಂತೆ
ಬದುಕು  ಹಸನಾದಂತೆ...
ಹಗಲುಗನಸುಗಳೆನ್ನ  ಕಾದಿದ್ದವು
ಜಿಗುಪ್ಸೆಯಿಂದ ,ಹಸಿವಿಂದ
ಆತ್ಮಹತ್ಯಯಂತಹ ಪಾಪದಿಂದ

ಮಳೆಬರಲಿಲ್ಲ.
ರೂಢಿ ಬದುಕಾಗಿ ,
ಬದುಕು ರೂಢಿಯಾಗಿ ನಾನೀಗ ಮಳೆಗೆ ಕಾಯುತ್ತಿಲ್ಲ.
***
ಈಗ
ಬಾರದ ನಿದ್ರೆಗಾಗಿ ಕಾಯುತ್ತಿದ್ದೇನೆ
ನಿದ್ರೆ ಬಾರದೆ,ಕಣ್ಣು ಮುಚ್ಚದೆ
ಬೀಳದ ಕನಸುಗಳನ್ನ ಶಪಿಸುತ್ತಾ
ಕತ್ತಲಿದೆ, ಮಂಚವಿದೆ,
ಬದುಕು ನಿರ್ವರ್ಣ..

ನಿದ್ರೆಯಿಲ್ಲದೆ, ಕನಸಿಲ್ಲದೆ,
ನಾಳೆಗಳೆಲ್ಲವೂ ಶೂನ್ಯ...!!!

*****

ನನ್ನ ಹಳೆಯ ಡೈರಿಯಲ್ಲಿದ್ದ ಕವನಗಳಿವು. ಬೆಂಗಳೂರಿಗೂ  ಬರುವ ಮುಂಚಿನ ದಿನಗಳ ನನ್ನ ಪರಿಸ್ಥಿತಿಯನ್ನು ವ್ಯಕ್ತಪಡಿಸುತ್ತವೆ  . ಆಶ್ಚರ್ಯದ ಸಂಗತಿಯೆಂದರೆ ಈವತ್ತಿಗೂ ನನಗದು ಸೂಕ್ತ ಅನಿಸುತ್ತದೆ... ಇರಲಿ ನನಗೆ ಕವನವನ್ನು ಓದುವುದು ಇಷ್ಟ. ಬರೆಯುವುದೆಂದರೆ ಕಷ್ಟ . ಎಷ್ಟೋ ತಲೆಗೆ ಬಂದದ್ದನ್ನು ಗೀಚಿ ಆಮೇಲೆ ಹರಿದುಹಾಕಿದ್ದೇನೆ . ಈ ಎರಡು ಕವನಗಳೂ  ಅಷ್ಟೇ ಹತಾಶ ಮನೋಭಾವದಿಂದ ನಾನು ಹೊರಬರಲು ನನಗಾಗೆ ಬರೆದುಕೊಂಡದ್ದು .

Monday, November 26, 2012

ಡ್ರಾಮಾ:ಚಿತ್ರ ವಿಮರ್ಶೆ.

ಡ್ರಾಮಾ ಚಿತ್ರ ಬಂದಿದೆ.ನಿರ್ದೇಶಕ ಯೋಗರಾಜ್ ಭಟ್, ಅವರ ಹಿಂದಿನ ಚಿತ್ರಗಳು, ನಿರೀಕ್ಷೆಗಳನ್ನು ಬಿಟ್ಟು ಸುಮ್ಮನೆ ಕನ್ನಡ ಪ್ರೇಕ್ಷಕನಾಗಿ [ಅದು ಅತ್ಯವಶ್ಯ-ಯಾಕೆಂದರೆ ಭಟ್ಟರ ಸಿನೆಮಾದಲ್ಲಿ ಮಾತೆ ಬಂಡವಾಳ] ಸಿನಿಮಾಮಂದಿರದ ಒಳಹೊಕ್ಕರೆ ನಮಗೆ ಕಾಣಸಿಗುವುದು ಏನು ಎಂಬುದನ್ನು ಗಮನಿಸೋಣ. ಚಿತ್ರದ ಪ್ರಾರಂಭ ಅಂದರೆ ಟೈಟಲ್ ಕಾರ್ಡ್ ನಿಂದ ಹಿಡಿದು ಕೊನೆಯವರೆಗೆ ನಿರ್ದೇಶಕರು ಆಸಕ್ತಿ ವಹಿಸಿರುವುದು ಕಾಣಸಿಗುತ್ತದೆ. ಚಿತ್ರದಲ್ಲಿ ಇಬ್ಬರು ನಾಯಕರೂ ಮಹಾನ್ ತರಲೆಗಳು. ಉಡಾಫೆ ಮನೋಭಾವದವರು. ಪಿಯುಸಿಯಲ್ಲಿ ಆರು ಸಲ ಡುಮ್ಕಿ ಹೊಡೆದಿದ್ದಾರೆ. ಹಳ್ಳಿಯಲ್ಲಿ ಏನೆಲ್ಲಾ ತರಲೆ ಮಾಡಬಹುದೋ ಅಷ್ಟನ್ನು ಮಾಡಿಕೊಂಡಿದ್ದಾರೆ. ಅಲ್ಲಿಗೆ ಅಚಾನಕ್ಕಾಗಿ ಬರುವ ನಾಯಕಿ ಹುಡುಗರನ್ನು ನೋಡಿ ಕಬಡ್ಡಿ ಆಡಲು ಆಹ್ವಾನಿಸಿ, ಅದೇ ದೃಶ್ಯದಲ್ಲೇ ನಾಯಕನ ಮನಗೆದ್ದು 'ನಾನು ಬೇಕಿದ್ದರೆ ನನ್ನ ಹಿಂದೆ ಬಾ' ಎನ್ನುತ್ತಾಳೆ. ಇವನು ಗೆಳೆಯನನ್ನೂ ಕರೆದುಕೊಂಡು ಅಲ್ಲಿಂದ ಹೊರಟುಬಿಡುತ್ತಾನೆ. ಕಾಲೇಜು, ವಿಚಿತ್ರ ಪ್ರಾಂಶುಪಾಲರು, ಹುಡುಗ-ಹುಡುಗಿಯರ ಹಾಸ್ಟೆಲ್ಲು ಇದೆಲ್ಲದರ ಜೊತೆಗೆ ನಾಯಕಿಯ ತಂದೆ ಭೂಗತ ಜಗತ್ತಿನ ನಾಯಕ ಇಷ್ಟೆಲ್ಲಾ ಇದ್ದಮೇಲೆ ಒಂದು ಸಿನೆಮಾದ ಕಂಪ್ಲೀಟ್ ಪ್ಯಾಕೇಜ್ ರೆಡಿ ತಾನೇ? ಹೊಡೆದಾಟ, ಹಾಸ್ಯ, ಹಾಡುಗಳು ಕೊಲೆ ಸೆಂಟಿಮೆಂಟ್ ಎಲ್ಲದಕ್ಕೂ ಇಲ್ಲಿ ಸಾಕಷ್ಟು ಅವಕಾಶವಿದೆ. ಅದನ್ನೆಲ್ಲಾ ನಿರ್ದೇಶಕರು ಸಾಕಷ್ಟು ಸದುಪಯೋಗ ಪಡಿಸಿಕೊಂಡಿದ್ದಾರೆ ಎನ್ನಬಹುದು. ಹುಡುಗಿಯ ಮುತ್ತಿಗಾಗಿ, ಆ ಮೂಲಕ ಪ್ರೀತಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಾಗುವ ನಾಯಕ ಆ ಒಂದು ಘನಕಾರ್ಯದಿಂದಾಗಿ ಬಹುದೊಡ್ಡ ಸಮಸ್ಯೆಯೊಂದಕ್ಕೆ ಸಿಲುಕಿಕೊಳ್ಳುತ್ತಾನೆ. ಆದರೆ ಪ್ರೇಕ್ಷಕನಿಗೆ ಅಚ್ಚರಿಯಾಗುವಂತೆ ಬಹುಬೇಗ ಅದರಿಂದ ಹೊರಬಂದು ಮತ್ತೊಂದು ಸಮಸ್ಯೆಯಲ್ಲದ ಸಮಸ್ಯೆಗೆ ಸಿಲುಕಿಕೊಂಡ ನೆಪಹೇಳಿ ನಾಯಕಿಯೊಂದಿಗೆ ಗೆಳೆಯನನ್ನೂ ಆಕೆಯ ಗೆಳತಿಯನ್ನೂ ಕರೆದುಕೊಂಡು ಸಮುದ್ರ ತೀರಕ್ಕೆ ಹೋಗಿ ಹಾಡಿ ಕುಣಿದು ಅಲ್ಲೇ ಗೆಳೆಯನಿಗೆ ಬುದ್ಧಿಬರುವಂತೆ ಮಾಡಿ ಕ್ಲೈಮ್ಯಾಕ್ಸ್ ಕೂಡ ಮುಗಿಸುತ್ತಾನೆ. 
ಡ್ರಾಮಾ ಚಿತ್ರದಲ್ಲಿ ಕಥೆಯ ಎಳೆಯಷ್ಟೇ  ಇಲ್ಲ, ಗಟ್ಟಿಯಾದ ಹಲವಾರು ಕವಲುಗಳುಲ್ಲ ಕಥೆಯೇ ಇದೆ.ಅಲ್ಲಲ್ಲಿ  ಅಥವಾ ಅಗತ್ಯಕ್ಕಿಂತ ಹೆಚ್ಚಾಗಿಯೇ ಪಂಚಿಂಗ್ ಇರುವ ಸಂಭಾಷಣೆಗಳಿವೆ. ಚಂದನೆಯ, ಮಜಾ ಕೊಡುವ ಹಾಡುಗಳಿವೆ. ಕಚಗುಳಿಯಿಕ್ಕುವ ಹಾಸ್ಯದ ಸನ್ನಿವೇಶಗಳಿವೆ. ಆದರೆ ಬರೀ ಕಥೆಯಿದ್ದ ಮಾತ್ರಕ್ಕೆ ಅದು ಎಲ್ಲರಿಗೂ ಆಪ್ತವಾಗಬೇಕೆಂದೇನೂ ಇಲ್ಲವಲ್ಲ. ಇಲ್ಲೂ ಅದೇ ಆಗಿದೆ. ಇಬ್ಬರ ನಾಯಕರ ಉಡಾಫೆ ಕೊನೆಯವರೆಗೂ ಎಲ್ಲೂ ಒಂದು ತೂಕಕ್ಕೆ ಬರುವುದೇ ಇಲ್ಲ. ಪ್ರತಿ ಮಾತಿನಲ್ಲೂ ಉಡಾಫೆ ಮಾಡುತ್ತಾ , ಏನೇನೋ ಮಾಡುತ್ತಾ ಕಾಲ ಕಳೆಯುವವರು ಗಂಭೀರವಾದಾಗಲೂ  ಪ್ರೇಕ್ಷಕ ಮಾತ್ರ ಅನುಮಾನದಿಂದಲೇ ನೋಡುತ್ತಾನೆ. ಅಲ್ಲಿನ ಪಾತ್ರಗಳು ಅಳುವಾಗಲೂ, ಗಂಭೀರವಾಗಿ ಮಾತನಾಡುವಾಗಲೂ ನಮ್ಮದು ಅದೇ ನಿರೀಕ್ಷೆ. ಇಲ್ಲೇನಾದರೂ ಪಂಚಿಂಗ್ ಡೈಲಾಗ್ ಹೊಡಿಯಬಹುದಾ..? ಎಂಬುದು. ಅದಕ್ಕೆ ಕಾರಣ ನಿರ್ದೇಶಕರು. ನಮ್ಮನ್ನು ಅವರು ಹಾಗೆ ಮಾಡಿಬಿಟ್ಟಿದ್ದಾರೆ.  ಹಾಗಾಗಿಯೇ ಕೆಲವೊಂದು ಸನ್ನಿವೇಶಗಳು ಚೆನ್ನಾಗಿವೆಯಾದರೂ ತೀರ ಮನಸ್ಸಿಗೆ ತಟ್ಟುವುದಿಲ್ಲ. ಮಗಳು ಸುಖವಾಗಿರಲಿ ಎಂದು ಕೊನೆಯಲ್ಲಿ ತನ್ನನ್ನು ಕೊಂದುಕೊಂಡು  , ಎದುರಾಳಿಗಳನ್ನೂ ಸಾಯಿಸುವ ನಾಯಕಿಯ ಅಪ್ಪ ಗ್ರೇಟ್ ಎನಿಸುವುದಿಲ್ಲ. ಬಿಟ್ಟುಹೋದ ಹೆಂಡತಿಗಾಗಿ, ನೋಡೇ ಇರದ ಮಗಳಿಗೆ ಪರಿತಪಿಸುವ, ಕನ್ನಡದಲ್ಲೇ ಮಾತಾಡುವ ಪ್ರಾಂಶುಪಾಲ ಹುಚ್ಚನಂತೆ, ತಿಕ್ಕಲುನಂತೆ ಭಾಸವಾಗುವುದಕ್ಕೆ ಕಾರಣ ನಿರ್ದೇಶಕರೇ...ಇಲ್ಲಿನ ನಾಯಕಿ ತುಂಟಿಯಾ? ತಂದೆತಾಯಿ ಪ್ರೀತಿಯಿಂದ ವಂಚಿತ ಹುಡುಗಿಯಾ...? ಫ್ಲರ್ಟ್ ?.ಅಥವಾ ಈ ಎಲ್ಲವನ್ನೂ ಹೊಂದಿರುವ ಹೆಣ್ಣಾ ಎಂಬುದು ನಮಗೆ ಸ್ಪಷ್ಟವಾಗುವುದಿಲ್ಲ.
ಹಾಗಂತ ಡ್ರಾಮಾ ಕೆಟ್ಟ ಚಿತ್ರವಲ್ಲ. ನಾವು  ಅಂದರೆ ಪ್ರೇಕ್ಷಕರು ಇನ್ನೂ ಹೆಚ್ಚು ನಿರೀಕ್ಷಿಸುವುದಕ್ಕೆ ಕಾರಣವಿದೆ. ಅದೆಂದರೆ ನಿರ್ದೇಶಕ ಯೋಗರಾಜ್ ಭಟ್. ಅದ್ಯಾರೋ ಬೇರೆ ನಿರ್ದೇಶಕರು ಮಾಡಿದ್ದರೆ ಪರವಾಗಿಲ್ಲ ಎಂದು ಸುಮ್ಮನಿದ್ದುಬಿಡಬಹುದಿತ್ತು. ಆದರೆ ಮುಂಗಾರುಮಳೆಯ ನಂತರದ ಭಟ್ ಸಿನಿಮಾಗಳಿಗೆ  ಈಗಾಗಲೇ ಮೂರುಮೂರು ಸಾರಿ ಹಾಗೆ ಹೇಳಿ ಆಗಿದೆ. ಈ ಚಿತ್ರದಲ್ಲಿ ಏನೋ ಮಾಡುತ್ತಾರೆ ಎಂದು ಕಾದದ್ದೂ ಆಗಿದೆ. ಅದೂ ಭಟ್ಟರೇ ಕೊಟ್ಟಂತಹ ಭರವಸೆ. ಆದರೆ ಎರಡು ಉಡಾಫೆ ಹುಡುಗರ ಸರಳ ಕಥೆಯನ್ನೂ ನಿರೂಪಿಸುವುದಕ್ಕೆ ಭಟ್ ಬೇಕಾ..? ಚಿತ್ರದ ಎಲ್ಲಾ ಪಾತ್ರಗಳೂ ಅದೇ ಉಡಾಫೆಯಿಂದ ಮಾತಾಡಲೇ ಬೇಕಾ..? ಇವೆಲ್ಲಕ್ಕೂ ಭಟ್ರೇ ಉತ್ತರ ಹೇಳಬೇಕು. ಆಯಾ ದೃಶ್ಯಕ್ಕೆ ನಗೆತರಿಸಲು ಎಷ್ಟು ಬೇಕೋ ಅಷ್ಟನ್ನೇ ಮಾಡಿರುವ ಭಟ್ಟರು ಅದರಿಂದಾಚೆಗೆ ಯೋಚಿಸಿಲ್ಲವೇನೋ..? ಹಾಗಾಗಿಯೇ ಕೆಲವು ಪಾತ್ರಗಳು ಪೇಲವ ಎನಿಸುತ್ತವೆ. ಎಲ್ಲೋ ಬಂದು ಹೇಗೋ ಆಡಿ ಹೊರಟುಹೋಗುತ್ತವೆ. ದ್ವಿತೀಯ ನಾಯಕನ ನಾಯಕಿ ಮೂಕಿಯ ಪಾತ್ರವೂ ಅಷ್ಟೇ. ಅವರ ಪ್ರೀತಿಯೂ ಅಷ್ಟೇ. ಕಾಡುವುದಿಲ್ಲ.ಹಾಗೆ ನಾಯಕಿ ರಾಧಿಕಾಪಂಡಿತ್  ಪಾತ್ರವೇ ಜಾಳುಜಾಳಾದ್ದರಿಂದ ಅವರ ಪ್ರೀತಿ ಅಷ್ಟೊಂದು ಗಾಢ ಎನಿಸುವುದಿಲ್ಲ.
ಸಿನಿಮಾ ನೋಡಿದ ಮೇಲೆ ನನಗನಿಸಿದ್ದು ಈ ಅಂಶಗಳು. ಅತೀ ಹೆಚ್ಚು ನಿರೀಕ್ಷೆಯಲ್ಲಿದ್ದುದರಿಂದ ನನಗೆ ಹೀಗನ್ನಿಸಿತಾ..? ನಾನೇ ಪೂರ್ವಗ್ರಹ ಪೀಡಿತನಾಗಿದ್ದೆನಾ ..?ಎಂದು ನನ್ನನ್ನೇ ಹಲವಾರು ಸಾರಿ ಕೇಳಿಕೊಂಡೆ. ಆಮೇಲೆ ಚಿತ್ರ ಮುಗಿಸಿ ಹೊರಬಂದ ಮೂರ್ನಾಲ್ಕು ಅಪರಿಚಿತರಲ್ಲಿ  ಸುಮ್ಮನೆ ಸಿನಿಮಾದ ಬಗ್ಗೆ ವಿಚಾರಿಸಿದೆ. ಯಾರಲ್ಲೂ ಅದೊಂದು ತೃಪ್ತಿಯ ಭಾವ ಇರಲಿಲ್ಲ. ಇನ್ನೂ ಏನೋ  ಇರಬೇಕಿತ್ತು..ಇನ್ನೇನೋ ಕಡಿಮೆಯಾಗಿದೆ ಎನ್ನುವ ಭಾವವೇ ಅವರಲ್ಲೂ ಇದ್ದದ್ದರಿಂದ ನನ್ನ ಅನಿಸಿಕೆಯೂ ಸರಿ ಎನಿಸಿತ್ತು.
ಭಟ್ರ  ಹಿಂದಿನ ಸಿನೆಮಾಗಳಲ್ಲಿ ಕಥೆ ಇರಲಿಲ್ಲವೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನನ್ನ ಮುಂದಿನ ಚಿತ್ರದಲ್ಲಿ ಕಥೆಯಿಟ್ಟುಕೊಂಡೆ ಸಿನೆಮಾ ಮಾಡುತ್ತೇನೆಂದು ಭಟ್ ಭರವಸೆ ನೀಡಿದ್ದರು. ಮತ್ತದನ್ನು ಈಗ ಉಳಿಸಿಕೊಂಡಿದ್ದಾರೆ. ಈಗಲೂ ಅಷ್ಟೇ! ಇನ್ನೂ ಏನೇನು ಕೊರತೆ ಇದೆ ಎಂಬುದನ್ನು ಪಟ್ಟಿಮಾಡಿ ಭಟ್ಟರ ಮುಂದಿಟ್ಟರೆ ಮುಂದಿನ ಚಿತ್ರದಲ್ಲಿ ಆ ಎಲ್ಲ ಕೊರತೆ ನೀಗಿಸುತ್ತಾರೆಂಬ ತುಂಬು ಭರವಸೆಯಿಟ್ಟುಕೊಂಡು ನನ್ನ ಚಿತ್ರಾವಲೋಕನಕ್ಕೆ  ಪೂರ್ಣವಿರಾಮ ಇಡುತ್ತಿದ್ದೇನೆ.
[ಈ ಎಲ್ಲಾ ಅಭಿಪ್ರಾಯಗಳೂ ನನ್ನ ವೈಯಕ್ತಿಕವಾದವುಗಳಾಗಿವೆ. ನಾನೊಬ್ಬ ಪಕ್ಕಾ ಪ್ರೇಕ್ಷಕನಾಗಿ ಅನಿಸಿದ್ದನ್ನು ಅನಿಸಿದ ಹಾಗೆ ಬರೆದುಕೊಂಡಿದ್ದಾಗಿದೆ..]


Wednesday, November 21, 2012

ಯೋಗರಾಜ್ ಭಟ್ ರ ಡ್ರಾಮಾ ...

 ಯೋಗರಾಜ್ ಭಟ್ ನಿರ್ದೇಶನದ ಡ್ರಾಮಾ ಈ ವಾರ ತೆರೆಕಾಣುತ್ತಿದೆ. ಭಟ್ಟರು ಈಗೇನು ಮಾಡಿರಬಹುದು ಅಥವಾ ಇದನ್ನು ಎಷ್ಟು ಚೆನ್ನಾಗಿ ಮಾಡಿರಬಹುದು ಎನ್ನುವ ಕುತೂಹಲವಿದೆ. ಮುಂಗಾರುಮಳೆಯ ಪ್ರತಿಯೊಂದು ಅಂಶವು ಒಬ್ಬ ಚಿತ್ರಕರ್ಮಿಗೆ ಅದ್ಯಯನಕ್ಕೆ ಅರ್ಹವಾದದ್ದು. ಮೇಲ್ನೋಟಕ್ಕೆ ಆ ಸಿನಿಮಾದಲ್ಲಿ ಏನಿದೆ ಎನಿಸಿದರೂ ಸುಮ್ಮನೆ ಚಿತ್ರಕಥೆಯ ತಿರುವುಗಳನ್ನು ಗಮನಿಸುತ್ತಾ ಹೋದಂತೆ ಅದರ ವಿಶೇಷತೆ ನಮಗೆ ಗೊತ್ತಾಗುತ್ತದೆ. ಮೊದಲ  ನೋಟಕ್ಕೆ ತೀರ ಸಾದಾರಣ ಎನಿಸುವ ಮುಂಗಾರುಮಳೆಯ ಚಿತ್ರಕಥೆ ನಿಜಕ್ಕೂ ಅನಿರೀಕ್ಷಿತ ತಿರುವುಗಳನ್ನು ಒಳಗೊಂಡಿದೆ . ಸುಮ್ಮನೆ ಗಮನಿಸಿ. ನೋಡಿದ ಕೂಡಲೇ ನಾಯಕಿಗೆ ಮನಸೋಲುವ ನಾಯಕ ಶತಾಯಗತಾಯ ಆಕೆಯನ್ನು ಪ್ರೀತಿಸಿ ಮದುವೆಯಾಗಲೇಬೇಕು ಎಂಬ ನಿರ್ಧಾರಕೆ ಬಂದು ಬಿಡುತ್ತಾನೆ. ಆಕೆಯ ಹಿಂದೆ ಬೀಳುತ್ತಾನೆ. ಆದರೆ ಆಕೆಗೆ ಮದುವೆ ನಿಶ್ಚಿತಾರ್ಥವಾಗಿರುತ್ತದೆ.ಇದು ಮೊದಲ ತಿರುವು. ಅದು ಗೊತ್ತಾಗುತ್ತಿದ್ದಂತೆಯೇ ನಾಯಕ ಆಕೆಯ ಸಹವಾಸವೇ ಬೇಡ ಎಂದು ಹಿಂದಿರುಗಿ ಹೊರಟು ಬಿಡುತ್ತಾನೆ . ಆದರೆ ನಾಯಕಿ ತಮಾಷೆಗೆ ಕಿಚಾಯಿಸುತ್ತಾಳೆ, ಆತ ವಾಪಸ್ಸು ಬರುತ್ತಾನೆ . ಅದು ಎರಡನೇ ತಿರುವು. ಹಿಂದೆ ಬಂದವ ಆಕೆಯ ಹಿಂದೆ ಬಿದ್ದು ಬಿದ್ದು ರೋಸಿಹೋಗಿ ಆಕೆಯ/ಪ್ರೀತಿಯ  ಸಹವಾಸ ಬೇಡ ಎಂದು ಆಕೆಯನ್ನು ಬಿಡಲು ತಯಾರಾಗುತ್ತಾನೆ . ಆದರೆ ಅಷ್ಟರಲ್ಲಿ ಆಕೆಯೇ ಅವನಿಗೆ ಮನಸೋತಿರುತ್ತಾಳೆ. ಇದು ಮೂರನೆಯ ತಿರುವು. ಇಬ್ಬರ ಪ್ರೀತಿಯೂ ಒಂದಾಗಿ ಮದುವೆಯಾಗಬೇಕೆಂದು ನಿರ್ಧರಿಸಿದಾಗ ಆತ ಪರಿಸ್ಥಿತಿಯ ಒತ್ತಡಕ್ಕೆ ಮಣಿದು  ಬದಲಾಗುತ್ತಾನೆ. ಉಲ್ಟಾ ಹೊಡೆಯುತ್ತಾನೆ. ಇದು ಮತ್ತೊಂದು ತಿರುವು. ಹೀಗೆ ಇಡೀ ಚಿತ್ರವೇ ಗಿರಕಿ ಹೊಡೆಯುತ್ತಾ ಸಾಗುತ್ತದೆ. ಏನೋ ಆಗುವುದೆಂದು ಊಹಿಸಿದರೆ  ಇನ್ನೇನೋ ಆಗುತ್ತದೆ. ಯಾವುದೂ ಬೇಕು ಎಂದಾಗ ಸಿಗುವುದಿಲ್ಲ. ಸಿಕ್ಕಾಗ ಅದರ ಬಗ್ಗೆ ಒಲವಿರುವುದಿಲ್ಲ ಅಥವಾ ಅದು ಬೇಕಿರುವುದಿಲ್ಲ ಎಂಬ ಸಿದ್ಧಾಂತ ಚಿತ್ರಕ್ಕೆ ಚೆನ್ನಾಗಿ ಒಪ್ಪುತ್ತದೆ. ನಾನು ಮೊದಲಿಗೆ ಸಿನೆಮಾ ನೋಡಿದ ಮೇಲೆ ಸುಮ್ಮನೆ ಅದನ್ನೇ ಮೆಲುಕು ಹಾಕುತ್ತಿದ್ದಾಗ ಅದರ ಮಧ್ಯಂತರ ಎಲ್ಲಿ ಎಂಬುದೇ ಮರೆತುಹೋಗಿತ್ತು. ಅಷ್ಟರ ಮಟ್ಟಿಗೆ ಭಟ್ಟರ ತಂಡ ಪ್ರೇಕ್ಷಕನನ್ನು ಹಿಡಿದುಕೂರಿಸಿದ್ದಂತೂ ನಿಜ. 
 ಆದರೆ ಆಮೇಲಿನ ಭಟ್ಟರ ಚಿತ್ರಗಳು ಅದೇಕೋ ಅಷ್ಟು ರುಚಿಸಲಿಲ್ಲ. ಪುನರಾವರ್ತನೆ ಎನಿಸಿತು. ದೃಶ್ಯ ವೈಭವ, ಸಂಗೀತ, ಸಾಹಿತ್ಯ, ಸಂಭಾಷಣೆ ಹೀಗೆ ಪ್ರತಿ ಕ್ಷೇತ್ರದಲ್ಲೂ ದಕ್ಷತೆ ಮೆರೆದಿದ್ದ ಮುಂಗಾರುಮಳೆಯ ನಂತರದ ಚಿತ್ರಗಳು ಬರೀ ಸಂಭಾಷಣೆ-ಹಾಡುಗಳಷ್ಟೇ ಚಂದ ಎನಿಸುವಂತಾಗಿತ್ತು.
ಚಿತ್ರದಿಂದ  ಚಿತ್ರಕ್ಕೆ ಬೆಳೆಯುತ್ತಾ ಭಟ್ಟರು ಎಲ್ಲೋ ಸಾಗಿಹೋಗಬಹುದಿತ್ತೇನೋ ಎನಿಸುತ್ತದೆ. ಬಾಲಿವುಡ್ನಲ್ಲಿ ತಮಿಳರು ಮಾಡಿದ್ದನ್ನು ನಮ್ಮಲ್ಲಿನ ಶ್ರೇಷ್ಠ ನಿರ್ದೇಶಕರೇಕೆ ಮಾಡುವುದಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.. ಉದಾಹರಣೆಗೆ ಮುರುಗದಾಸ್ ದೀನ ಚಿತ್ರದಿಂದ ತಮ್ಮ ಪಯಣ ಪ್ರಾರಂಭಿಸಿ ಈವತ್ತಿನ ತುಪಾಕಿಯವರೆಗೆ ಅವರ ಬೆಳವಣಿಗೆ ಏರುಮುಖವಾಗಿಯೇ ಇದೆ. ತುಪಾಕಿ ಈಗ ಹಿಂದಿಗೆ ರಿಮೇಕ್ ಆಗುತ್ತಿದೆ . ಹಾಗೆ ಶಂಕರ್ ಕೂಡ. ಆದರೆ ನಮ್ಮಲ್ಲಿ ಅದೇಕೆ ಅದಾಗುತ್ತಿಲ್ಲ. ಮುಂಗಾರುಮಳೆಯ ನಂತರ ಭಟ್ ಚಿತ್ರಗಳೇಕೆ ಯಾವರೀತಿಯಲ್ಲೂ ಅದಕ್ಕಿಂತ ಮುಂದಾಗಲಿಲ್ಲವಲ್ಲ ಎಂಬ ಪ್ರಶ್ನೆ ಕಾಡುತ್ತದೆ. ಚಿತ್ರದಿಂದ ಚಿತ್ರಕ್ಕೆ ಮಾರುಕಟ್ಟೆಯನ್ನೂ, ತಮ್ಮದೇ ಚಾಪನ್ನೂ ಹೆಚ್ಚಿಸಿಕೊಳ್ಳುವ ತಮಿಳರ ಛಾತಿ ನಮಗೇಕೆ ಬರುವುದಿಲ್ಲ. ಬಹುತೇಕ  ಹೊಸತನ, ಹೊಸ ಪ್ರಯೋಗಗಳು ನಮ್ಮಲ್ಲೇ ಮೊದಲು ಮೊಳಕೆ ಹೊಡೆದರೂ ನಾವೇಕೆ ನಮ್ಮ ಚಿತ್ರರಂಗದಿಂದಾಚೆಗೆ ನಮ್ಮ ಹೆಜ್ಜೆ ಇಡಲು ಸಾಧ್ಯವಾಗಿಲ್ಲ ಎನಿಸುತ್ತದೆ.ಬರೀ ರೀಮೇಕ್ ಮಾಡಿಕೊಂಡಿ ಹಿಂದಿಯಲ್ಲಿ ನೆಲೆಕಂಡುಕೊಂಡ ಪ್ರಿಯದರ್ಶನ್, ಪ್ರಭುದೇವ  ತಮ್ಮದೇ ಸಿನಿಮಾಗಳನ್ನು ಮತ್ತೊಮ್ಮೆ ನಿರ್ದೇಶಿಸಿ ಹೆಸರುಗಳಿಸಿದ ಶಂಕರ್, ಮುರುಗದಾಸ್, ಅಮೀರ್ ಮುಂತಾದವರನ್ನು ನೋಡಿದಾಗ ನಮ್ಮಲ್ಲಿನ ಟಾಪ್ ನಿರ್ದೇಶಕರೇಕೆ ಅಲ್ಲಿ ಬರೀ ಹೆಜ್ಜೆ ಇಡಲೂ  ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.
ನನ್ನ  ಮೆಚ್ಚಿನ ನಿರ್ದೇಶಕ ಯೋಗರಾಜ್ ಭಟ್ ರಿಗೆ ಈವತ್ತು ಎಲ್ಲವೂ ಅವರ ಕೈಯಲ್ಲಿದೆ. ಅವರ ಸಿನೆಮಾಕ್ಕೆ ಬೇಕಾದ ಹೀರೋ, ತಂತ್ರಜ್ಞರನ್ನು  ಕೊಡುವ ನಿರ್ಮಾಪಕರಿದ್ದಾರೆ. ಅದೆಲ್ಲವನ್ನೂ ತಮ್ಮ ಅನುಭವ, ಬುದ್ದಿವಂತಿಕೆಯ ಜೊತೆ ಬೆರೆಸಿ ಇಡೀ ಭಾರತವೇ ತಿರುಗಿನೋಡುವಂತಹ  ಚಿತ್ರ ನೀಡಲಿ, ಮತ್ತು ನಮ್ಮದೂ ಚಿತ್ರರಂಗ ಸಮರ್ಥವಾಗಿದೆ ಎಂಬುದನ್ನು ಭಟ್ ತರಹದ ನಿರ್ದೇಶಕರು ಪರಭಾಷೆಯ ಚಿತ್ರರಂಗಕ್ಕೆ ತೋರಿಸಿಕೊಡಲಿ ಎಂಬುದು ನಮ್ಮಂತಹ ಬಹುತೇಕ ಅಭಿಮಾನಿಗಳ ಆಶಯ.
ಡ್ರಾಮಾವನ್ನ ಕಣ್ತುಂಬಿಕೊಳ್ಳಲು ಕ್ಷಣಗಣನೆ ಮಾಡುತ್ತಿದ್ದೇನೆ...

ಆತ ಹಂತಕ , ನಾನು ಚಿತ್ರಕಥೆಗಾರ-ಯಾಮಾರಿದರೆ ಕೊಲೆ.

ನಿಮಗೆ ಚೆಟ್ ಲೋಗನ್ ಬಗ್ಗೆ ಗೊತ್ತಿರಲಿಕ್ಕಿಲ್ಲ. ಭಯಾನಕ ಮನುಷ್ಯ ಅವನು . ತನ್ನ ದಾರಿಗೆ ಅಡ್ಡ ಬಂದರೆ ಯಾರನ್ನೂ ಸುಮ್ಮನೆ ಬಿಡುವುದಿಲ್ಲ . ಬೇರೆ ಮಾತೆ ಇಲ್ಲ . ಮುಗಿಸಿಬಿಡುವುದೇ.. ! ಕುಳಿತು ಮಾತಾಡುವುದು , ತರ್ಕದಿಂದ ವರ್ತಿಸುವುದು ಅದೆಲ್ಲಾ ಅವನ ಜಾಯಮಾನದಲ್ಲಿ ಇಲ್ಲವೇ ಇಲ್ಲ. ಅವನಿಗೆ ಗೊತ್ತಿರುವುದು ಒಂದೇ ಎದುರು ನಿಂತವರೆಲ್ಲಾ ಶತ್ರುಗಳು ಮತ್ತು ಅವರನ್ನು ಕೊಲ್ಲಲೇಬೇಕು.ಇಲ್ಲದಿದ್ದರೆ ನನಗೆ ಉಳಿಗಾಲವಿಲ್ಲ ಎಂಬುದು ಅವನ ಸಿದ್ಧಾಂತ. ಜೈಲಿನಿಂದ ತಪ್ಪಿಸಿಕೊಂಡವನು ಒಂದೇ ರಾತ್ರಿಯಲ್ಲಿ  ಆತ ಮಾಡಿದ ಕೊಲೆಗಳ ಸಂಖ್ಯೆ ಆರು. ಅದೂ ಬರ್ಬರವಾಗಿ. ಅವಳು..ಪಾಪಾ ಆ ಹುಡುಗಿಗೆ ಆತನ ಆಕ್ರಮಣ ಹೇಗಿತ್ತೆಂದರೆ ಅವಳ ತಲೆ  ಚೂರುಚೂರಾಗಿತ್ತು. ಇಡೀ ಮಿದುಳು ರಕ್ತ ಕೂದಲು ಎಲ್ಲವೂ ಮಿಕ್ಸಾಗಿದ್ದವು ಎಂದರೆ ಅದರ ಬರ್ಬರತೆಯನ್ನು ನೀವು ಊಹಿಸಬಹುದು. ಈಗ ಒಬ್ಬ ಪೋಲಿಸನನ್ನು ಕೂಡ ಕೊಲೆಮಾಡಿ ಅವನ ಟೋಪಿ ಮತ್ತು ಪಿಸ್ತೂಲ್  ಅನ್ನು ತನ್ನ ವಶಕ್ಕೆ ತೆಗೆದುಕೊಂಡು ಪರಾರಿಯಾಗಿದ್ದಾನೆ. ಅದೂ ಪೋಲಿಸ್ ವಾಹನದಲ್ಲೇ. ಈಗ ಇಡೀ ಪೋಲಿಸ್ ವ್ಯವಸ್ಥೆ ಆತನ ಹಿಂದೆ ಬಿದ್ದಿದ್ದೆ. ಎಲ್ಲ ಕಡೆ ರೇಡಿಯೋ  ಸಂದೇಶಹೋಗಿದೆ.
ಅಂಥವನು ಈಗ ನನ್ನ ಮುಂದಿದ್ದಾನೆ. ನನಗೆ ಪೋಲಿಸ್ ಅಪರಾಧಿಗಳು, ರಕ್ತ, ಕೊಲೆಗಳ ಅನುಭವವಿಲ್ಲ. ಅವೆಲ್ಲಾ ಸಿನಿಮಾಗಳಿಂದ ಮಾತ್ರ ನನಗೆ ಪರಿಚಿತ .ಯಾಕೆಂದರೆ ನಾನು ಚಿತ್ರರಂಗದಲ್ಲಿ ಬರಹಗಾರನಾಗಿ ತೊಡಗಿಸಿಕೊಂಡಿರುವವನು. ಚಲನಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದು ನನ್ನ ಕೆಲಸ . ಚಲನಚಿತ್ರಗಳಲ್ಲಿ ನನ್ನ ಪಾತ್ರದ ಮೂಲಕ ಹಲವಾರು ಕೊಲೆಗಳನ್ನೂ ಅತ್ಯಾಚಾರಗಳನ್ನೂ ಮಾಡಿಸಿದ್ದೇನೆ . ಆದರೆ ನಿಜ ಜೀವನದಲ್ಲಿ  ಅದರ ಬಗ್ಗೆ ಯೋಚಿಸಲೂ ನನಗೆ ಸಾಧ್ಯವಿಲ್ಲ . ಯಾವುದೋ ಸಿನೆಮಾದ ಕಥೆ ಬೆಳವಣಿಗೆಯ ಸಮಯದಲ್ಲಿ ಅದ್ಯಯನಕ್ಕಾಗಿ ಜೈಲಿನ ಒಳಗೆ ಹೋಗಿದ್ದೆ .
ಈ ಸಾರಿ ನಮ್ಮ ನಿರ್ಮಾಪಕರು   ಹೇಳಿಬಿಟ್ಟಿದ್ದರು. ಈ  ಸಾರಿಯ ಕಥೆಯಲ್ಲಿ ಎಲ್ಲಾ ರೀತಿಯ ರೋಚಕತೆ ಇರಬೇಕು. ಕೊಲೆ ಸುಲಿಗೆ ಶೃಂಗಾರ, ಹಾಸ್ಯ..ಹೀಗೆ ನವರಸಗಳೂ ತುಂಬಿ ತುಳುಕಬೇಕು ಎಂದು . ಅದಕ್ಕಾಗಿಯೇ ನಾನು ಪಟ್ಟಣದಲ್ಲಿದ್ದರೆ ಆ ಜನಜಂಗುಳಿಯಲ್ಲಿ ಏಕಾಗ್ರತೆ  ಸಾಧ್ಯವಿಲ್ಲವೆಂದು  ಈ  ಕಾಡೊಳಗೆ ವಾಸ್ತವ್ಯ ಮಾಡಿಕೊಟ್ಟಿದ್ದರು. ನಾನು ಏನು ಬರೆಯಬೇಕು ಯಾವ ರೀತಿಯ ಕಥೆ ಮಾಡಬೇಕು ಅಂಬ ಗೊಂದಲದಲ್ಲಿದ್ದಾಗಲೇ ಚೆಟ್ ನನ್ನ ಮನೆಗೆ ನುಗ್ಗಿದ್ದು . ಅವನ ಪರಿಚಯವಾದ ಮೇಲೆ ನಾನು ದಂಗು ಬಡಿದಿದ್ದೆ. ಈಗ ಅವನನ್ನು ಹೊರಗೆ ಕಳುಹಿಸುವುದೆಂತು ?..ಹಾಗೆ ಮಾತಾಡಿಸುತ್ತಿದ್ದಾಗ ಅವನು ತಾನು ಮಾಡಿದ ಕೊಲೆಗಳ ಬಗ್ಗೆ ಹೇಳಿದಾಗ ಅವನ ಕಥೆಯನ್ನು ಸಂಪೂರ್ಣ ಕೇಳಿಕೊಂಡು ಅದಕ್ಕೊಂದಿಷ್ಟು  ಸೇರಿಸಿ ಕಥೆ ಮಾಡಿದರೆ ನೈಜತೆಯ ಸ್ಪರ್ಶ ಸಿಗುತ್ತದೆ ಎನಿಸಿತು. . ಚೆಟ್ ನಿಗೆ ಪೂರ್ತಿ ಕಥೆ ಹೇಳುವಂತೆ ಕೇಳಿಕೊಂಡೆ .
'ನಾನೀಗಾಗಲೇ ಆರು ಕೊಲೆ ಮಾಡಿದ್ದೇನೆ. ಅವುಗಳ ಕಾರಣ  ಕೇಳಿದರೆ ನಿನಗೆ ಕ್ಷುಲ್ಲಕ ಎನಿಸಬಹುದು . ಆದರೆ ನನಗೆ ಹಾಗನ್ನಿಸುವುದಿಲ್ಲ . ಸುಮ್ಮನೆ ಕೇಳಿಸಿಕೊಳ್ಳುತ್ತಾ ಹೋಗು. ಸ್ವಲ್ಪ  ಹೆಚ್ಚುಕಡಿಮೆಯಾದರೂ ಏಳನೆಯವನು ನೀನಾಗಬಹುದು...' ಎಂದ ಚೆಟ್ ಕಣ್ಣಲ್ಲಿ   ಕ್ರೌರ್ಯ ತುಂಬಿ ತುಳುಕುತ್ತಿತ್ತು.
ಇದು ಜೇಮ್ಸ್ ಹಾಡ್ಲಿ ಚೇಸ್ ನ ಕಾದಂಬರಿ 'ವೀ ವಿಲ್ ಶೇರ್ ಎ ಡಬಲ್ ಫ್ಯೂನರಲ್ ' ನ ಪ್ರಾರಂಭದ ಪುಟಗಳ ಸಾರಾಂಶ . ನಾನು ಒಂದಷ್ಟು ಓದಿಯಾದ ಮೇಲೆ , ಬರೆದಾದ ಮೇಲೆ, ಸಿನಿಮಾಗಳನ್ನು ನೋಡಿಯಾದ ಮೇಲೆ ಬ್ರೇಕ್ ಎಂಬಂತೆ ಚೇಸ್ ಕಾದಂಬರಿಗಳನ್ನ ಓದುತ್ತೇನೆ . ಚೇಸ್ ನ ಕಾದಂಬರಿಗಳು ನನಗ್ಯಾವತ್ತೂ ಮೋಸ ಮಾಡಿಲ್ಲ ಅಥವಾ ಅದರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಇದೂ ಕೂಡ ಹಾಗೆಯೇ. ಪ್ರಾರಂಭದಲ್ಲೇ ಹಿಡಿದು ಕೂರಿಸಿಬಿಡುವ ಕಾದಂಬರಿ.   ಪುಟದಿಂದ ಪುಟಕ್ಕೆ ಕುತೂಹಲ ಕೆರಳಿಸುತ್ತಾ ಸಾಗುವ ಕಾದಂಬರಿಯ ಅಂತ್ಯ ಬಹಳ ರೋಚಕವಾಗಿದೆ. ಉತ್ತಮ ಟೈಮ್ ಪಾಸ್ ಕಾದಂಬರಿ. ಸುಮ್ಮನೆ ಓದಿ ಎಂದು ಶಿಫಾರಸ್ಸು ಮಾಡಬಹುದು .
..

ನಾನು ನಾನಲ್ಲ...ದೇವರಾಣೆಗೂ ಅವನೇ..?

ವರಿಬ್ಬರೂ  ತುಂಬಾ  ಅನೋನ್ಯವಾಗಿರುವ ಸಹೋದರರು. ಅಣ್ಣನಿಗೆ ಕಲೆಯಲ್ಲಿ  ಆಸಕ್ತಿ.   ಅಣ್ಣನಿಗೆ ಮದುವೆಯಾಗಿ ಸುಂದರವಾದ, ಒಳ್ಳೆಯ ಹೆಂಡತಿ ಇದ್ದಾಳೆ. ತಮ್ಮನಿಗೆ ಪ್ರೇಯಸಿ ಇದ್ದಾಳೆ ಆದರೂ ಮದುವೆಯಾಗಿಲ್ಲ. ಮರದಲ್ಲಿ ಕೆತ್ತನೆಯ ಕೆಲಸಗಳನ್ನು  ಮಾಡುವುದೆಂದರೆ ಖುಷಿ . ಆದರೆ ತಮ್ಮನಿಗೆ  ಕಾರ್ ರೇಸ್  ಹುಚ್ಚು.ಕಾರನ್ನು  ಶರವೇಗದಲ್ಲಿ ಓಡಿಸುವುದೆಂದರೆ  ಎಲ್ಲಿಲ್ಲದ ಉತ್ಸಾಹ . ಆದರೆ  ಅದು ಅಪಾಯಕಾರಿಯಾದ್ದರಿಂದ ಅಣ್ಣನಿಗೆ ಅದು  ಇಷ್ಟವಿರುವುದಿಲ್ಲ. ಆದರೆ  ಹೇಗೋ ಅಣ್ಣನ ಮನವೊಲಿಸುತ್ತಾನೆ . 'ಸರಿ ಇದೆ ಕೊನೆಯ ಪಂದ್ಯ. ಆಮೇಲಿನಿಂದ ಇದರಲ್ಲಿ ಭಾಗವಹಿಸುವಂತಿಲ್ಲ ' ಎಂದು ಹೇಳುವ ಅಣ್ಣ ಆ ಕಾರ್ ರೇಸ್ ಗೆ ತಮ್ಮನಿಗೆ ಪ್ರೋತ್ಸಾಹ ಕೊಡಲು  ತಾನೂ ಬರುತ್ತಾನೆ. ಪಂದ್ಯ ಮುಗಿಸಿ ಬರುವಾಗ ಅಪಘಾತವಾಗುತ್ತದೆ. ಅಣ್ಣತಮ್ಮ ಇಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗುತ್ತವೆ. ಇಬ್ಬರೂ ಕೋಮ ಸ್ಥಿತಿ ತಲುಪುತ್ತಾರೆ. ಒಂದು ವರ್ಷದ ನಂತರ ತಮ್ಮ ಕೋಮ ಸ್ಥಿತಿಯಿಂದ ಹೊರಬರುತ್ತಾನೆ. ಆಸ್ಪತ್ರೆಯಿಂದ ಮನೆಗೆ ಕರೆತಂದ ಅತ್ತಿಗೆಗೆ ಆತ ತಾನು 'ಅಣ್ಣ' ಎಂದೆ ಪರಿಚಯಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಆತನ ನಡೆ, ನುಡಿ ಎಲ್ಲಾ ಪಕ್ಕಾ ಅಣ್ಣನಂತೆಯೇ. ಅತನ ಪ್ರತಿಯೊಂದು ಸೂಕ್ಷ್ಮಾತಿಸೂಕ್ಷ್ಮ ಅಂಶಗಳೂ ಅಣ್ಣನಂತೆಯೇ ಇರುತ್ತವೆ. ಅತ್ತಿಗೆಗೆ ಗಾಬರಿಯಾಗುತ್ತದೆ. ಅದೇಗೆ ಆತನನ್ನು ಗಂಡನೆಂದು ಸ್ವೀಕರಿಸುವುದು? ಇದು ಆಕೆಗಷ್ಟೇ ಅಲ್ಲ ವೈದ್ಯಲೋಕದಲ್ಲೂ ಗೊಂದಲಗಳಿಗೆ ಕಾರಣವಾಗುತ್ತದೆ. ವೈದ್ಯರುಗಳಿಗೆ ಇದೊಂದು ಸವಾಲೆನಿಸುತ್ತದೆ. ಕೊನೆಗೆ ಕೋಮಾದಲ್ಲಿರುವ ಅಣ್ಣನ ಆತ್ಮ ತಮ್ಮನ ದೇಹಕ್ಕೆ ಸೇರಿಕೊಂಡಿರಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ.
ಈಗ ಅತ್ತಿಗೆಗೆ  ಈತ ನಿಜವಾಗಲೂ ತನ್ನ ಗಂಡನಾ..? ಎನ್ನುವ ಪ್ರಶ್ನೆ ಕಾಡತೊಡಗುತ್ತದೆ. ತನ್ನ ಮತ್ತು ಗಂಡನ ಜೀವನದಲ್ಲಿ ನಡೆದ ಕೆಲವು ವೈಯಕ್ತಿಕ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿದರೂ ಆತ ಅದಕ್ಕೆಲ್ಲಾ ನಿಖರವಾಗಿಯೇ 'ಅಣ್ಣ' ನಂತೆಯೇ ಉತ್ತರಿಸುತ್ತಾನೆ. ಆದರೂ ಆಕೆಗೆ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ತಮ್ಮನ ಪ್ರೇಯಸಿ ಕರೆದು ಆಕೆಯ ಹತ್ತಿರ ಹೇಗೆ ವರ್ತಿಸುತ್ತಾನೆ ಎಂದು ಪರೀಕ್ಷಿಸುತ್ತಾಳೆ. ಅಲ್ಲೂ ಆಕೆಗೆ  ಅಚ್ಚರಿಯೇ...ಅಣ್ಣನ ಆತ್ಮ ತಮ್ಮನಿಗೆ ಸೇರಿಕೊಂಡರೆ ತಮ್ಮನ ಆತ್ಮ ಎಲ್ಲಿ?
ಅದೊಂದು ದಿನ ಜೋರು ಮಳೆಯಲ್ಲಿ ಮನಗೆ ಬರುವ ತಮ್ಮನ ನಡವಳಿಕೆ ಅತ್ತಿಗೆಯನ್ನು ಅಚ್ಚರಿಗೊಳಿಸುತ್ತದೆ. ಹಿಂದೊಂದು ದಿನ ಇದೆ ತರಹದ ಸನ್ನಿವೇಶದಲ್ಲಿ ಅಣ್ಣ ಹೇಗೆ ನಡೆದುಕೊಂಡಿದ್ದನೋ ಹಾಗೆಯೇ ಈವತ್ತು ತಮ್ಮ ನಡೆದುಕೊಂಡಾಗ ಆಕೆಗೆ ಇದು ಅಣ್ಣನೆ , ತನ್ನ ಗಂಡನೆ ಎನಿಸಿಬಿಡುತ್ತದೆ.
ಆಕೆಯ ಅನುಮಾನಗಳು ಸಂಪೂರ್ಣ ಅಳಿಸಿಹೋಗಿ,  ಇದು ತಮ್ಮನ ದೇಹದಲ್ಲಿರುವ ತನ್ನ ಗಂಡ ಎನಿಸಿಬಿಡುತ್ತದೆ.
ಹೌದಾ ..? ಇದೆಲ್ಲಾ ಸಾಧ್ಯವಾ ಎನ್ನುವ ಪ್ರಶ್ನೆಗಳಿಗೆ ಉತ್ತರವೆಂದರೆ  ...ಅದೆಲ್ಲವನ್ನೂ ದೃಶ್ಯರೂಪದಲ್ಲಿ ನೋಡಿದರೆ ಮಜಾ ಎಂಬುದು ನನ್ನ ಅನಿಸಿಕೆ. 2003ರಲ್ಲಿ ಬಿಡುಗಡೆಯಾದ ಪಾರ್ಕ್ ಯಂಗ್ ಹೂ ನಿರ್ದೇಶನದ ಕೊರಿಯನ್ ಭಾಷಾ ಚಲನಚಿತ್ರ   ' ಅಡಿಕ್ಟಡ್ '  ಚಿತ್ರದ ಸಾರಾಂಶ ಇದು. ಪ್ರಾರಂಭದಲ್ಲಿ ಏನೋ ಎನಿಸಿದರೂ ಬರುಬರುತ್ತಾ ಕಥೆಯ ರೋಚಕತೆಯಿಂದಾಗಿ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಕೊನೆಯವರೆಗೂ ಎಲ್ಲೂ ರಹಸ್ಯ ಬಿಟ್ಟುಕೊಡದ ನಿರ್ದೇಶಕ ಆ ಮೂಲಕ ತಮ್ಮ ಪ್ರಾವೀಣ್ಯತೆ ಮೆರೆದಿದ್ದಾರೆ ಎನ್ನಬಹುದು. ಒಂದು ಘಂಟೆ  ನಲವತ್ತಾರು ನಿಮಿಷವಿರುವ  ಈ ಚಿತ್ರವನ್ನೊಮ್ಮೆ ನೋಡಿ.

Thursday, November 15, 2012

'ವೇದಾ ಮೇಡಂ ಹಾಗೇಕೆ ಮಾಡಿದರು....?' ಭಾಗ-3

'ನಿಂಗೆ ಗೊತ್ತಿಲ್ಲಾ ಗುರು...ಹುಡುಗೀರು ಅಂದ್ರೆ ಸುಮ್ನೆ ಅಲ್ಲಾ ..ಅದ್ಕೆ ಹೆಣ್ಣು ಚಂಚಲೆ .ಅನ್ನೋದು...ಯಾವತ್ತೇ ಆಗಲಿ ಯಾರಿಗೆ ಮರುಳಾದ್ರೂ ಹುಡುಗೀರಿಗೆ ಮರುಳಾಗಬಾರದು ನೋಡು ' ಜಗದೀಶ  ಎಗ್ಗುಸಿಗ್ಗಿಲ್ಲದೆ ಮಾತಾಡುತ್ತಿದ್ದ. ಅವನು ಹಾಗೆಯೇ . ಮಾತಾಡಲು ಇಳಿದ ಅಂದರೆ ಮುಗೀತು. ಮಾತಾಡುತ್ತಲೇ ಇರುತ್ತಾನೆ. ಚಿತ್ರವಿಚಿತ್ರವಾಗಿ ವಾದ ಮಾಡುತ್ತಾನೆ. ಏನೇನೋ ಸಮರ್ಥನೆ ಕೊಡುತ್ತಾನೆ. ಅದರಲ್ಲೂ ಹುಡುಗಿಯರ ವಿಷಯ ಬಂತೆಂದರೆ ಸಾಕು ಪುಂಖಾನುಪುಂಖವಾಗಿ ಹೇಳುತ್ತಲೇ ಇರುತ್ತಾನೆ. ಜಗದೀಶ ನನ್ನ ಸಹೋದ್ಯೋಗಿ. ನನಗಿಂತ ಒಂದು ವರ್ಷಕ್ಕೂ ಮುನ್ನವೇ ನಮ್ಮ ಕಂಪನಿ ಸೇರಿದವ. ದಪ್ಪಗಿದ್ದಾನೆ . ಅವನ ದೇಹದ ಯಾವ ಭಾಗದಲ್ಲೂ ಅಧಿಕ ಮಾಂಸವಿರದ ಜಾಗವಿಲ್ಲ . ಅವನ ಪ್ಯಾಂಟಿನ ಅಳತೆಯನ್ನು ನೋಡಿದರೆ ನಮಗೆ ನಗು. ಆದರೆ ಅವನು ಯಾವತ್ತೂ ಇನ್ ಶರ್ಟ್   ಮಾಡದೆ ಬರುವುದಿಲ್ಲ . ಘಂ ಎನ್ನುವ ಸೆಂಟ್ ಪೂಸಿಕೊಲ್ಲದೆ ಆಫೀಸಿಗೆ ಕಾಲಿಡುವುದಿಲ್ಲ .
'ಸರಿಯಪ್ಪಾ ಗುರುವೇ ನೀ ಹೇಳೋದು..ನಿನ್ನನ್ನ ಇದುವರೆಗೂ ಯಾವ ಹುಡುಗಿ ಜೊತೆ ನೋಡಲೇ ಇಲ್ಲ..ಕಸ್ಟಮರ್ ಕೇರ್ ಬಿಟ್ಟರೆ ಬೇರಾವ ಹೆಣ್ಣು ಜೀವಾನೂ ನಿಂಗೆ ಫೋನ್ ಮಾಡಿದ್ದು ನಮಗೊತ್ತಿಲ್ಲಾ ..ಅದೆಂಗೆ ಹುಡುಗೀರ್ ಬಗ್ಗೆ ಇಷ್ಟೊಂದ್ ತಿಳ್ಕೊನ್ಡಿದ್ದೀಯಾ?' ರೋಹಿತ್ ಪ್ರಶ್ನೆ . ರೋಹಿತ್ ನಮ್ಮ ಗುಂಪಲ್ಲೆ ಜಾಲಿಯಾಗಿರುವ ಮನುಷ್ಯ  ಎಲ್ಲರನ್ನೂ ರೇಗಿಸುತ್ತಾನೆ ಅದರಲ್ಲೂ ಜಗದೀಶ್ ಮತ್ತು ರೋಹಿತ್ ಜುಗಲ್ ಬಂದಿ ನಮ್ಮ ಇಡೀ ಗುಂಪನ್ನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುತ್ತದೆ. 
ರೋಹಿತ್ ನ ಪ್ರಶ್ನೆ ಜಗದೀಶನಿಗೆ ಸರಿಯಾಗಿಯೇ ನಾಟಿದುದಕ್ಕೆ ಎರಡು ಕಾರಣವಿತ್ತು. ಮೊದಲನೆಯದಾಗಿ ಆತನಿಗೆ ಯಾರೂ ಸ್ನೇಹಿತೆಯರೇ ಇರಲಿಲ್ಲ . ನಮ್ಮ ಆಫೀಸಿನಲ್ಲಿ ಯಾರೂ ಅವನ ಜೊತೆ ಮಾತನಾಡುತ್ತಿರಲಿಲ್ಲ . ಗೆಳೆತನ ಬೆಳೆಸಿದರೂ ಎರಡೇ ದಿನಕ್ಕೆ 'ಬೇಜಾನ್ ಇರಿಟೇಟ್ ಮಾಡ್ತಾನೋ.' ಎಂದು ಆರೋಪಿಸುತ್ತಿದ್ದರು. ಅವರು ಒಂದಿಬ್ಬರ ಹತ್ತಿರ ಹಾಗೆ ಹೇಳಿದ್ದರೆ ಜಗದೀಶ ಇಡೀ ಆಫೀಸಿನವರ ಹತ್ತಿರ ' ಆಕೆ ಸರಿಯಿಲ್ಲ.ಲೂಸು..' ಎಂದೆಲ್ಲಾ ಅಪಪ್ರಚಾರ  ಮಾಡಿಬಿಡುತ್ತಿದ್ದ . ಅವನೊಂದಿಗೆ ಗೆಳೆತನ ಹಗೆತನ ಎರಡೂ ಅಪಾಯಕಾರಿಯಾಗಿರುತ್ತಿತ್ತು ಹುಡುಗಿಯರ ಪಾಲಿಗೆ .
ಎರಡನೆಯ ಕಾರಣವೆಂದರೆ  ಕಸ್ಟಮರ್ ಕೇರ್ ಹುಡುಗಿ. ಒಂದು ತಿಂಗಳ ಹಿಂದೆ ಅವನ ಫೋನಿಗೆ ಕಸ್ಟಮರ್ ಕೇರ್ ಹುಡುಗಿಯೊಬ್ಬಳು ಅವಳ ಕಾರ್ಯ ನಿಮಿತ್ತ ಫೋನ್ ಮಾಡಿದ್ದಳು . ಜಗದೀಶ್ ಆಕೆಯ ಜೊತೆ ಚೆನ್ನಾಗಿ ಮಾತನಾಡಿದ್ದ. ಆಕೆ ಆನಂತರ ದಿನದಿನ ಫೋನ್ ಮಾಡಲು ಶುರು ಮಾಡಿದ್ದಳು. ಇವನು ಸ್ವರ್ಗವೇ ಕೈಗೆ ಬಂದಂಗೆ ನಮ್ಮೆಲ್ಲರ ಮುಂದೆ ಜೋರಾಗಿ ಮಾತಾಡುತ್ತಿದ್ದ. 'ಸಿಗಲು ಹೇಳುತ್ತಿದ್ದಾಳೆ ಮಾರಾಯಾ.ನನಗೆ ಹುಡುಗೀರು ಜೊತೆ ಹಾಗೆಲ್ಲಾ ಅಡ್ದಾಡೋಕೆ ಇಷ್ಟ ಇಲ್ಲಾ...' ಎಂದೆಲ್ಲಾ ಜಂಭ ಕೊಚ್ಚಿಕೊಳ್ಳುತಿದ್ದನಾದರೂ ಆಕೆಯ ಫೋನಿಗೆ ಇವನೇ ಕಾಯುತಿದ್ದದ್ದು ನಮಗೆಲ್ಲ ಮೋಜಿನ ಸಂಗತಿಯಾಗಿತ್ತು . ಆಕೆ ಅಕಸ್ಮಾತ್ ಫೋನ್ ಮಾಡದಿದ್ದರೆ ಆವತ್ತೆಲ್ಲಾ ಚಡಪಡಿಸುತ್ತಿದ್ದರೂ ನಮ್ಮಗಳ ಮುಂದೆ ' ಸಧ್ಯ ಇವತ್ತು ಡಿಸ್ಟರ್ಬ್ ಮಾಡ್ತಿಲ್ಲಾ ..ಆರಾಮವಾಗಿ ಕೆಲಸ ಮಾಡಬಹುದು..' ಎಂದೆಲ್ಲ ಜಂಭ  ಕೊಚ್ಚಿಕೊಳ್ಳುತ್ತಿದ್ದ .ದಿನ ಕಳೆದಂತೆ ಅವನ ಆರ್ಭಟ ಹೆಚ್ಚಾಗಿತ್ತು .ಅವರಿಬ್ಬರೂ ಫೋನಲ್ಲೇ ಅಗತ್ಯಕ್ಕಿಂತ ಹೆಚ್ಚಾಗಿ ಮುಂದುವರೆದಿದ್ದರು . ಅದೊಂದು ದಿನ ಇಬ್ಬರೂ ಭೇಟಿಯಾಗಲು  ನಿರ್ಧರಿಸಿದ್ದರು. ಅದಕ್ಕೆಂದೇ ಹೊಸ ಶರ್ಟು ಪ್ಯಾಂಟು ಬೂಟು ವಾಚು  ಎಲ್ಲವನ್ನೂ ಖರೀದಿಸಿದ್ದ. ಭೇಟಿ ಮಾಡಿದರು.. ಆಮೇಲೇನಾಯಿತೋ .. ಭೇಟಿ ಮಾಡಿದ ಮೇಲೆ ಆಕೆ ಇವನ ಜೊತೆ ಗೆಳೆತನ ಮುರಿದುಕೊಂಡಿದ್ದಳು . ಇವನು ಮಾತ್ರ ' ವೇಸ್ಟು ಹುಡುಗಿ ಗುರು..ಬಲೆಗೆ ಹಾಕೊಳೋದಿಕೆ ನೋಡಿದಳು.ನಾನು ಗೊತ್ತಲ್ಲಾ . ..ಅಂತವಕ್ಕೆಲ್ಲಾ...ಊಹೂ...'ಎಂದಿದ್ದನಾದರೂ ನಮಗೆಲ್ಲ ನಿಜ ವಿಷಯ ಗೊತ್ತಿದ್ದರಿಂದ ನಾವು ಅವನನ್ನು ಅವಾಗವಾಗ ರೇಗಿಸುತ್ತಿದ್ದೆವು. 
'ಹೇ...ನೀನೆ  ಹೇಳು .. ಈ ನನ್ಮಗ ಹುಡುಗೀರ್ ಸಿಕ್ದಿರೋಕೆ ಈ ತರಾ ಮಾತಾಡ್ತಿದ್ದಾನೆ ..ಯಾವುದಾದರೂ ಮಹಿಳಸಂಘಕ್ಕೆ ಗೊತ್ತಾಗಬೇಕು... 'ಎಂದ ರೋಹಿತ್ ನನ್ನ ಕಡೆ ನೋಡಿದ. ಅಲ್ಲಿಯವರೆಗೂ ನಾನವರ ಮಾತುಗಳನ್ನು ಕೇಳುತ್ತಿದ್ದೆನಾದರೂ ಮನಸ್ಸು ಮಾತ್ರ ಬೇರೆಲ್ಲೂ ಇತ್ತು .
ನನ್ನನ್ನು ಕಾಡುತ್ತಿದ್ದದ್ದು ಅದೇ ಪ್ರಶ್ನೆ  
'ವೇದಾ  ಹಾಗೇಕೆ  ಮಾಡಿದರು..?'
******************      *********************    ****************
ಆವತ್ತು ಅಲಾರ್ಮ್ ಹೊಡೆದ ನಂತರ ಎಚ್ಚರವಾಯಿತು. ಆಮೇಲೆ  ಮಲಗುವುದಕ್ಕೆ  ಎಷ್ಟೇ ಪ್ರಯತ್ನಿಸಿದರೂ ಮತ್ತೆ ನಿದ್ರೆ ಬರಲೇ ಇಲ್ಲ . ಸುಮ್ಮನೆ ಮಲಗಿ ಮೈತುಂಬಾ ರಗ್ಗು ಹೊದ್ದುಕೊಂಡು ಬೆಚ್ಚನೆಯ ಅನುಭವವನ್ನು ಸವಿಯೋಣ ಎನಿಸಿದರೂ ಅದ್ಯಾಕೋ ಅದೂ ಹಿತ ಎನಿಸಲಿಲ್ಲ . ರಗ್ಗು ಎತ್ತಿ  ಬೀಸಾಡಲಾ  ಎನ್ನಿಸಿತ್ತು. ಅದೆಷ್ಟು ಬೇಗ ಸಮಯವಾಗುತ್ತದೋ ಎನಿಸುತ್ತಿತ್ತು. ಸುಮಾರು ಹೊತ್ತು ಹಾಸಿಗೆಯ ಮೇಲೆಯೇ ಹೊರಳಾಡಿದೆ. ಆಮೇಲೆ ಯಾಕೋ ಸುಮ್ಮನೆ ಮಲಗುವುದು ಅಸಹನೀಯ ವೆನಿಸಿದ್ದರಿಂದ ಎದ್ದು ಬಿಟ್ಟೆ. ಬೇಗ ರೆಡಿಯಾದೆ. ಆಮೇಲೇನು ಮಾಡುವುದು? ಹನ್ನೆರೆಡು ಘಂಟೆಗೆ ವೇದಾ ಮೇಡಂ ಎಲ್ಲಿ ಸಿಗಬಹುದು..? ಅವರು ಫೋನ್ ಮಾಡಬಹುದೇನೋ ಎಂದು ಕಾಯಹತ್ತಿದೆ . ನಾನೇ ಒಂದು ಫೋನ್ ಮಾಡಲಾ  ಎಂದು ಸಾವಿರಾರು ಬಾರಿ ಎನಿಸಿತ್ತಾದರೂ ಅದೇಕೋ ಮನಸ್ಸು ಹಿಂಜರಿದಿತ್ತು.
ಸಮಯ ಕಳೆಯುವುದು ಅಸಹನೀಯವೆನಿಸಿತ್ತು. ಪುಸ್ತಕ ತೆಗೆದುಕೊಂಡರೆ ಒಂದು ಪುಟವನ್ನು ಏಕಾಗ್ರತೆಯಿಂದ ಓದಲಾಗಲಿಲ್ಲ ಟಿವಿಯಲ್ಲಿನ ಕಾರ್ಯಕ್ರಮಗಳು ನೋಡುವ ಮುಂಚೆಯೇ ಬೋರ್ ಹೊಡೆಸುತ್ತವೇನೋ ಎನಿಸಲು ಪ್ರಾರಂಭಿಸಿತ್ತು. ಗೆಳೆಯರು ಫೋನ್ ಮಾಡಿದರೂ ಪ್ರತಿಕ್ರಿಯಿಸಲಿಲ್ಲ ಅಕಸ್ಮಾತ್ ಅಲ್ಲಿ ಬಾ ಇಲ್ಲಿ ಬಾ ಎಂದೆಲ್ಲಾ ಕರೆದರೆ ಏನು ಮಾಡುವುದು ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡತೊಡಗಿದರೂ ಅಂತರಾಳದಲ್ಲಿ ಅವರ್ಯಾರ ಜೊತೆ ಮಾತನಾಡಲು ಇಷ್ಟವಿರಲಿಲ್ಲ.
ಗಡಿಯಾರದ ಕಡೆಗೆ, ಆನಂತರ ಕೈ ಗಡಿಯಾರದ ಕಡೆಗೆ, ಆನಂತರ ಮೊಬೈಲಿನಲ್ಲಿ ತೋರಿಸುವ ಸಮಯದ ಕಡೆಗೆ ಬೇಡಬೇಡ ವೆಂದರೂ ಕಣ್ಣು ಹಾಯುತ್ತಿತ್ತು.
ಹನ್ನೆರೆಡಾಯಿತು . ಇನ್ನೇನು ಫೋನ್ ಬರಬಹುದು ಎನಿಸಿತು. ಫೋನ್ ಕೈಯಲ್ಲಿ ಹಿಡಿದುಕೊಂಡು ಕಾಯತೊಡಗಿದೆ.. ಎದೆಬಡಿತ ಜೋರಾಗಿತ್ತು. ಚಡಪಡಿಕೆ ಜಾಸ್ತಿಯಾಗುತಿತ್ತು .
ಹನ್ನೆರೆಡು  ಹತ್ತಾಯಿತು.
ಫೋನ್ ಬರಲಿಲ್ಲ .
ಅಕಸ್ಮಾತ್ ನೆಟ್ವರ್ಕ್ ಪ್ರಾಬ್ಲಂ ಇರಬಹುದಾ? ಕೆಲವೊಮ್ಮೆ ಆ ಕಡೆಯಿಂದ ಫೋನ್ ಮಾಡಿದರು. ಈ ನೆಟ್ ವರ್ಕ್ ಕೈ ಕೊಟ್ಟು ನನ್ನದು ನಾಟ್ ರೀಚಬಲ್ ಆಗಿಬಿಟ್ಟರೆ ...ಹೀಗೆ ಒಮ್ಮೆಲೇ  ಹಲವಾರು ಪ್ರಶ್ನೆಗಳು ಕಾಡಲು ಪ್ರಾರಂಭಿಸಿತ್ತು.
ಮತ್ತೆ ಮೊಬೈಲ್ ಕಡೆ ನೋಡುವುದು ...ಗಡಿಯಾರದ ಕಡೆಗೆ..ಹೀಗೆ..?
ಹನ್ನೆರೆಡುವರೆಯಾಯಿತು..
ಒಂದಾಯಿತು..
ವೇದಾ ಫೋನ್ ಮಾಡಲಿಲ್ಲ .
ಯಾಕೋ ಬೇಸರವಾಯಿತು. ವೇದಾ ಮೇಡಂ ಮರೆತುಬಿಟ್ಟರಾ ಹೇಗೆ? ಹಾಗೆಲ್ಲಾ ಆಕೆ ಮರೆಯುವವರಲ್ಲ ಎನಿಸಿತು. ಕೊನೆಗೆ ತಡೆಯಲಾರದೆ ನಾನೇ ಫೋನ್ ಮಾಡಿದೆ.
ಕಿವಿಯ ಹತ್ತಿರ ಮೊಬೈಲ್ ಹಿಡಿದುಕೊಂಡೆ. ಎದೆ ಬಡಿತ ಜೋರಾಗಿತ್ತು.
ಮಬೈಲ್ ಸ್ವಿಚೆಡ್  ಆಫ್ ಆಗಿತ್ತು.
ನನ್ನನ್ಯಾರೋ ಎತ್ತಿ ದೊಡ್ಡ ಕಂದಕಕ್ಕೆ ಬೀಸಾಕಿದ ಅನುಭವವಾಗಿತ್ತು. ಬೇಸರ ಮನಸಿನ ಮೂಲೆಮೂಲೆಯಲ್ಲೂ ತುಂಬಿಕೊಂಡಿತು . ಯಾಕೋ ನನಗರಿವಿಲ್ಲದೆ  ಕಣ್ಣಂಚಲ್ಲಿ ನೀರು ಬಂದಿತು.
 ಮತ್ತೆ ಮತ್ತೆ ಪ್ರಯತ್ನಿಸಿದೆ .
ಮತ್ತದೇ ಹೆಂಗಸು ಸ್ವಿಚೆಡ್  ಆಫ್ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದ್ದಳು.
ಸೀದಾ ಹಾಸಿಗೆಯ ಮೇಲೆ ಹಾಗೆಯೇ ಬಿದ್ದುಕೊಂಡೆ ನನ್ನ ಮೂಡ್  ಹಾರಿ ಹೋಗಿತ್ತು.
ಪ್ಯಾಂಟು ಶರ್ಟು ಯಾವುದನ್ನು ತೆಗೆಯಬೇಕೆನಿಸಲಿಲ್ಲ .
ಊಟವನ್ನೂ ಮಾಡಲಿಲ್ಲ.
ಮತ್ತೆ ಮೊಬೈಲ್ ಟ್ರೈ ಮಾಡಿದೆ. ಮತ್ತದೇ...
ಹಾಗೆ ಇಡೀ ದಿನ ರಾತ್ರಿಯವರೆಗೂ ಟ್ರೈ ಮಾಡುತ್ತಲೇ ಇದ್ದೆ .
ಮತ್ತು ಅದೇ ಹೆಂಗಸು ಅದನ್ನೇ ಹೇಳಿ ಹೇಳಿ ಸುಸ್ತು ಹೊಡೆದುಹೋಗಿದ್ದಳು.
ನನ್ನ ಇಡೀ ಭಾನುವಾರ , ನನ್ನ  ಮನಸ್ಸು ಎಲ್ಲಾ ಹಾಳಾಗಿಹೋಗಿತ್ತು . ಇದ್ದಕಿದ್ದಂತೆ ನನ್ನ ಮೇಲೆ, ವೇದಾ ಮೇಲೆ ಅಸಾಧ್ಯ ಸಿಟ್ಟು ಬಂದಿತು.
ಒಂದು ವಾರ ರಜಾ ಹಾಕಿ ಎಲ್ಲಾದರೂ ಹೋಗಿಬಿಡಲಾ.ಕೆಲಸ ಬಿಟ್ಟುಬಿಡಲಾ. ಹೀಗೆ ಏನೇನೋ  ಹುಚ್ಚುಚ್ಚು ಯೋಚನೆಗಳು ಮನಸ್ಸಿನಲ್ಲಿ  ಹಾದುಹೋದವು.
ಆದರೆ ಅದ್ಯಾರೋ ಹೆಂಗಸಿಗೆ ನಾನ್ಯಾಕೆ ಹಾಗೆ ಮಾಡಬೇಕು..? ಎನಿಸಿತು ಕೂಡ .
ಕೊನೆಗೆ ಮನಸನ್ನು ಒಂದು ತಹಬದಿಗೆ ತರಲು ಸಾಕುಸಾಕಾಯಿತು.
ಬೆಳಿಗ್ಗೆ ಆಫೀಸಿನಲ್ಲಿ ನೇರವಾಗಿ ಕೇಳಬೇಕು..
ಅಥವಾ ಆಕೆ ಭೇಟಿ ಮಾಡದೆ ಇದ್ದುದರಿಂದ ನನಗೇನೂ ಆಗಿಲ್ಲವೆಂಬಂತೆ ಸುಮ್ಮನಿದ್ದುಬಿಡುವುದಾ?
ಮನಸ್ಸು ಗೊಂದಲದಲ್ಲೇ ಇತ್ತು.
ಆದರೂ ಒಂದು ಪ್ರಶ್ನೆ  ಕಾಡುತ್ತಲೇ ಇತ್ತು,
'ವೇದಾ ಮೇಡಂ ಹಾಗೇಕೆ ಮಾಡಿದರು....?'                                              [ಸಶೇಷ]
ನನ್ನ ಪುಸ್ತಕ ಇಲ್ಲಿ ದೊರೆಯುತ್ತದೆ:
ಗೂಗಲ್ ಪ್ಲೇ ನಲ್ಲಿ
ಗೂಗಲ್ ಬುಕ್ ನಲ್ಲಿ. 

Tuesday, November 13, 2012

ಕುಬಿ ಮತ್ತು ಹಿಟ್ ವಿಕೆಟ್ ...

 ಮೈಸೂರಿಗೆ ಹೋಗಿ ಬರುವುದಿತ್ತು. ಹಾಗಾಗಿ ಒಂದಷ್ಟು ಪುಸ್ತಕಗಳನ್ನು ಜತೆಯಲ್ಲಿಟ್ಟುಕೊಂಡಿದ್ದೆ . ಸಮಯ ಸಿಕ್ಕಾಗಲೆಲ್ಲಾ ಓದುವುದರಿಂದ ಸಮಯದ ಸದುಪಯೋಗ  ಆಗುತ್ತದೆನ್ನುವುದು ನನ್ನ ಅಭಿಪ್ರಾಯ. ಯಾಕೆಂದರೆ ಈಗಾಗಲೇ ಸುಮಾರು ಸಮಯವನ್ನು ಹೇಗೇಗೋ ಕಳೆದುಹಾಗಿದೆ. ನನ್ನ  ನೆಚ್ಚಿನ ನಿರ್ದೇಶಕ/ನಟ ಶಂಕರ್ ನಾಗ್ ನೆನಪಿಸಿಕೊಂಡರೆ ನನಗೆ ನಾಚಿಕೆಯಾಗುತ್ತದೆ. ಪ್ರತಿಕ್ಷಣವನ್ನು ದುಪ್ಪಟ್ಟು ದುಡಿಸಿಕೊಂಡವರು ಶಂಕರ್. 
ಹಾಗಾಗಿ ಈ ಸಾರಿ ಜೋಗಿಯವರ ಕಾದಂಬರಿ 'ಹಿಟ್ ವಿಕೆಟ್',  ಕಥಾ ಸಂಕಲನ ಸಂಕಲನ ಕಾಡು ಹಾದಿಯ ಕಥೆಗಳು ನನ್ನ ಪುಸ್ತಕದ ಸಂಗ್ರಹದಲ್ಲಿದ್ದವು. . ಹಿಟ್ ವಿಕೆಟ್ ಓದಿದೆ . ಕಾದಂಬರಿ ಸತ್ವವೇನೋ ಇಷ್ಟವಾಯಿತು. ಆದರೆ ನಿರೂಪಣೆ ಯಾಕೋ ಹಿಡಿಸಲಿಲ್ಲ . ಪ್ರತಿ ಅಧ್ಯಾಯದ ಕೊನೆಗೆ ಮುಂದಾಗುವುದರ ಸುಳಿವು ಪ್ರತಿ ಸಾರಿ ಕೊಡುವುದು ಯಾಕೋ ಕಿರಿಕಿರಿ ಎನಿಸಿತು. ಮೊದಲೆಲ್ಲಾ ಯಂಡಮೂರಿ ವೀರೇಂದ್ರನಾಥರ  ಧಾರಾವಾಹಿಗಳು ನಿಯತಕಾಲಿಕದಲ್ಲಿ ಬರುವಾಗ ಆ ತರಹದ ಸುಳಿವುಗಳನ್ನು ಮುಂದಿನವಾರಕ್ಕೆ ಕಾಯುವಂತೆ ಮಾಡುತ್ತಿದ್ದವು. ಯಾವುದೋ ಒಂದು ಘಟನೆಯ ಕೊನೆಯಲ್ಲಿ 'ಅದೇ ಮುಂದೆ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆನ್ನುವುದು ಆ ಕ್ಷಣದಲ್ಲಿ ಅವನಿಗೆ ಗೊತ್ತಿರಲಿಲ್ಲ', 'ಆಕೆಯ ನಿರ್ಧಾರ ಅಚಲವಾಗಿತ್ತು. ಅದೇ ಮುಂದೆ ಅವಳ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆ ಎಂಬುದು ಆ ಕ್ಷಣಕ್ಕೆ ಆಕೆಯಾ ಅರಿವಿಗೆ ಬರಲಿಲ್ಲ' ಎಂಬೆಲ್ಲಾ ಸೂಚನೆ/ಸುಳಿವುಗಳು ಕುತೂಹಲವನ್ನು ಇಮ್ಮಡಿಗೊಳಿಸುತ್ತಿತ್ತು. ಆದರೆ ಅದೇ ಒಟ್ಟಾರೆಯಾಗಿ ಕಾದಂಬರಿ ರೂಪದಲ್ಲಿ ನಮ್ಮ ಕೈಗೆ ಸಿಕ್ಕಾಗ ಅಂತಹ ಮಜವನ್ನೇನೋ ಕೊಡುತ್ತಿರಲಿಲ್ಲ . ಆಗ ಕೊಡುತ್ತಿತ್ತೇನೋ ..ಆದರೆ ಇತ್ತೀಚಿಗೆ ಯಾಕೋ ಆ ತರಹದ ಸುಳಿವು ಕಿರಿಕಿರಿ ಉಂಟುಮಾಡುತ್ತವೆ . ಕಾರಣ ನನಗೂ ಗೊತ್ತಿಲ್ಲ . ಮೊನೆ ಹಿಟ್ ವಿಕೆಟ್ ಕಾದಂಬರಿ ಓದುವಾಗಲೋ ನನಗೆ ಹಾಗೆ ಆಯಿತು . ಕ್ರಿಕೆಟ್ , ಬೆಟ್ಟಿಂಗ್ ಅದರ ವಿರಾಟ ರೂಪ ಮುಂತಾದವುಗಳನ್ನು ಒಂದು ಕಾದಂಬರಿಯಲ್ಲಿ ಹಿಡಿದಿಡುವುದು ಕಷ್ಟ ಸಾಧ್ಯ . ಮತ್ತದಕ್ಕೆ ಸಾಕಷ್ಟು ದಾಖಲೆ , ನಿಜ ಘಟನೆಗಳನ್ನೂ ಸೇರಿಸಿದಾಗ ಇನ್ನೂ ಕಾದಂಬರಿ ಸತ್ವಯುತವಾಗುತ್ತದೆ . ಆದರೆ ಹಿಟ್ ವಿಕೆಟ್ ತೀರಾ ಸಾದಾರಣ ಎನಿಸಿತು. ಬಹುಶ ನನಗೆ ಜೋಗಿ ಮೆಚ್ಚಿನ ಲೇಖಕರಾದ್ದರಿಂದ ನಾನೇ ಅತಿಯಾಗಿ ನಿರೀಕ್ಷೆ ಮಾಡಿದುದರಿಂದ ಹೀಗಾಯಿತೇನೋ?
ಅವರ ಕಥಾಸಂಕಲನ ಕಾಡು ಹಾದಿಯ ಕಥೆಗಳು ಹಿಡಿಸಿತು. ಆ ಕಥೆಗಳನ್ನು ಅಲ್ಲಲ್ಲಿ ಓದಿದ್ದರೂ ಒಂದೇ ಪುಸ್ತಕದಲ್ಲಿ ಒಂದೇ ಗುಕ್ಕಿಗೆ ಸಿಕ್ಕಿದ್ದು ಖುಷಿಯಾಯಿತು. ಕಥೆಗಳೂ ಅಷ್ಟೇ ಬೇರೆ ಯಾವುದೋ ಲೋಕಕ್ಕೆ ಕರೆದುಕೊಂಡು ಹೋದವು. 
ಮನೆಯಲ್ಲಿ ನಮ್ಮ ಪುಸ್ತಕದ ನಿಮಿತ್ತ ಕುಬಿ ಮತ್ತು ಇಯಾಲ ಸಿನೇಮ ನೋಡಿದೆ . ತೇಜಸ್ವಿಯವರ  ಕಥೆಯನ್ನು ಮೊದಲೇ ಓದಿದ್ದೆ.  ಹಾಗೆ ಸಿನೆಮಾವನ್ನೂ ಮೊದಲೇ  ನೋಡಿದ್ದೆನಾದರೂ ಹೆಚ್ಚು ಕಡಿಮೆ ಸಿನೆಮಾ ವಿವರಗಳು ಮರೆತೇ  ಹೋಗಿತ್ತು. ಹಾಗಾಗಿ ಮತ್ತೆ ನೋಡಿದೆ. ನಿರ್ದೇಶಕರು ಸದಾನಂದ ಸುವರ್ಣ. ಇವರು ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ ಚಿತ್ರದ ನಿರ್ಮಾಪಕರು. ಕುಬಿ ಮತ್ತು ಇಯಾಲ ಚಿತ್ರಕ್ಕೆ ರಾಷ್ಟ್ರ , ರಾಜ್ಯ ಪ್ರಶಸ್ತಿಗಳು ದೊರೆತಿವೆ . ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಬರೆದಿದ್ದಾರೆ . ಇನ್ನು ಸಿನೆಮಾದ ಬಗ್ಗೆ ಎಲ್ಲರಿಗೂ ಗೊತ್ತಿರುವಂತಹದ್ದೆ .   ಹಳ್ಳಿಗೆ ಹೊಸದಾಗಿ ಬರುವ ವೈದ್ಯ ಕುಬಿಗೆ ಆ ಊರಿನ ಕ್ರೈಸ್ತ ಧರ್ಮದ ಹುಡುಗಿ ಇಯಾಲಳ  ಪರಿಚಯವಾಗುತ್ತದೆ . ಆಕೆಯ ಮುಗ್ಧತೆ, ತುಂತುತನಗಳು ಕುಬಿಯವರಿಗೆ ಆಕೆಯನ್ನು ಆಪ್ತಳನ್ನಾಗಿಸುತ್ತದೆ .ಆನಂತರ ಆಕೆಯ ಕೊಲೆಯಾಗುತ್ತದೆ . ಅದನ್ನು  ಜನರು ಹೇಗೆ ತಮ್ಮ ತಮ್ಮ ಸ್ವಾರ್ಥಕೆ ಬಳಸಿಕೊಳ್ಳುತ್ತಾರೆಂಬುದನ್ನು ನಿರ್ದೇಶಕರು ಬಹಳ ಚೆನ್ನಾಗಿ ನಿರೂಪಿಸುತ್ತ ಹೋಗುತ್ತಾರೆ. ಕುಬಿಯಾಗಿ ಚಾರು ಹಾಸನ್ ಉತ್ತಮ ಅಭಿನಯ ನೀಡಿದ್ದಾರೆ.