Friday, September 4, 2015

ಆಟ ಅಡ್ಸೋನು ಎಲ್ಲೋ ಕುಂತವ್ನೆ...

ಮೃತ್ಯು ಭಯ ಕಾಡಿದಾಗ ಮನುಷ್ಯ ಸತ್ಯವನ್ನು ಬಾಯಿಬಿಟ್ಟೆ ಬಿಡುತ್ತಾನೆ, ಸಾವು ಕಣ್ಣೆದುರಿಗೆ ಕಂಡಾಗ ಆತನಿಗೆ ತನ್ನ ತಪ್ಪಿನ ಅರಿವಾಗುತ್ತದೆ..ಇದು ನನ್ನ ಮೊದಲ ಚಿತ್ರದ ಒಂದು ಸಾಲಿನ ಎಳೆ. ಹಾಗೆ ನೋಡಿದರೆ ಮಾರ್ಚ್ 23 ಚಿತ್ರವನ್ನು ಒಂದು ಕತೆ ಬರೆದು ಅದಕ್ಕೆ ಚಿತ್ರಕತೆ ಹೆಣೆದು ಆನಂತರ ಮಾಡಿದ ಚಿತ್ರವಲ್ಲ. ಒಂದು ಸಿನಿಮಾ ಆಫೀಸ್ ನಲ್ಲಿ ಕುಳಿತಿದ್ದಾಗ ತಿಂಗಳು ಗಟ್ಟಲೆ ಆ ಸಿನಿಮಾ ಸೆಟ್ಟೇರದೇ ಇದ್ದಾಗ ಗೆಳೆಯರೆಲ್ಲಾ ಸೇರಿ ನಮ್ಮೆಲ್ಲರ ಬಳಿ ಇಷ್ಟು ಹಣವಿದೆ, ಇದಕ್ಕೆ ತಕ್ಕ ಹಾಗೆ ಒಂದು ಥ್ರಿಲ್ಲರ್ ಚಿತ್ರವನ್ಯಾಕೆ ಮಾಡಬಾರದು ಎಂದಿದ್ದರು. ಸರಿ. ಥ್ರಿಲ್ಲರ್ ಹೇಗೆ ಮಾಡಬಹುದು, ಯಾವ ಕತೆ ಆಯ್ಕೆ ಮಾಡಿಕೊಳ್ಳಬಹುದು  ಎಂದೆಲ್ಲಾ ತಲೆ ಕೆಡಿಸಿಕೊಂಡಿದ್ದ ನನಗೆ ಮಾಮೂಲಿ ಒಂದು ಕೊಲೆ ನಡೆಯುತ್ತದೆ, ಅದನ್ನು ಹುಡುಕುತ್ತಾರೆ ಎಂದೋ, ಅಥವಾ ಒಂದು ಪ್ರದೇಶದಲ್ಲಿ ಅಥವಾ ಒಂದು ನಿರ್ಧಿಷ್ಟ ಜಾಗದಲ್ಲಿ ಒಂದಷ್ಟು ಜನ ಟ್ರ್ಯಾಪ್ ಆಗುತ್ತಾರೆ, ಬಿಡಿಸಿಕೊಂದು ಬರಲು ಒದ್ದಾಡುತ್ತಾರೆ.. ಎಂದೋ ಕತೆ ಮಾಡುವುದು ಅಷ್ಟು ಸೇರಲಿಲ್ಲ. ಈ ನಡುವೆ ನಾನು ಸಾಕಷ್ಟು ತಲೆ ಕೆಡಿಸಿಕೊಂಡಿದ್ದು ಬ್ಲೇರ್ ವಿಚ್ ಪ್ರಾಜೆಕ್ಟ್ ಬಗ್ಗೆ. ಅಷ್ಟರಲ್ಲಾಗಲೇ ಟಿವಿ ವಾಹಿನಿಯೊಂದರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧೀ ಹಂತಕ  ಶಿವರಾಸನ್ ಮತ್ತವನ ತಂಡ ಸತ್ತ ಕೋಣನಕುಂಟೆ ಒಂಟಿ ಮನೆಯ ಸುತ್ತಾ ಈಗಲೂ ನರಳುವ, ಯಾರೋ ಓಡಾಡುವ ಸಪ್ಪಳ ಕೇಳಿ ಬರುತ್ತಿದೆ, ಜನ ಅಲ್ಲಿಗೆ ಹೋಗಲು ಹೆದರುತ್ತಿದ್ದಾರೆ ಎನ್ನುವ ಸುದ್ದಿ ಪ್ರಸಾರವಾಗಿತ್ತು. ನಾನು ಅದನ್ನೇ ಸಿನಿಮಾ ಮಾಡಿದರೆ ಹೇಗೆ ಎಂದು ಯೋಚಿಸಿದೆ. ಕತೆ ಇಷ್ಟೇ. ಸುದ್ದಿ ವಾಹಿನಿಯ ಸುದ್ದಿ ನೋಡಿದ ಐದಾರು ಯುವ ಸಿನಿಮಾಮಂದಿ ಅಥ್ವಾ ಸಿನಿಮಾ ವಿದ್ಯಾರ್ಥಿಗಳು ಅದನ್ನು ಲೈವ್ ಚಿತ್ರೀಕರಿಸಲು ಅದೊಂದು ದಿನ ಕೋಣನ ಕುಂಟೆ ಮನೆಗೆ ಹೋಗುತ್ತಾರೆ. ಆದರೆ ಯಾರೂ ವಾಪಸ್ಸು ಬರುವುದಿಲ್ಲ. ಮೂರುದಿನದ ನಂತರ ಅವರ ಕ್ಯಾಮೆರಾ ಮತ್ತು ಟೇಪ್ ಸಿಗುತ್ತದೆ. ಅದರಲ್ಲಿನ ವೀಡಿಯೊದ ಸಂಕಲಿತ ಚಿತ್ರಣವೇ ನಮ್ಮ ಸಿನಿಮಾ ಎಂದೇ. ಆದರೆ ಗೆಳೆಯರು ಅಯ್ಯೋ ಅದನ್ನೇ ಹೇಗೋ ಮಾರಾಯ ಎರಡು ಘಂಟೆ ಎಳೀತೀಯಾ ಜನ ಎದ್ದು ಹೋಗ್ತಾರೆ ಎಂದಿದ್ದರು.
ಈ ನಡುವೆ ನನಗೆ ಎ ವೆಡ್ನೆಸ್ ಡೇ ಇಷ್ಟವಾಗಿತ್ತು, ಸಾಮಾನ್ಯನೊಬ್ಬ ದೊಡ್ಡ ಮಟ್ಟದ ಮಾಸ್ಟರ್ ಪ್ಲಾನ್ ಮಾಡುವ ಕತೆ ಹಿಡಿಸಿತ್ತು. ನಮ್ಮಲ್ಲೂ ಒಬ್ಬ ಅತೀ ಸಾಮಾನ್ಯನನ್ನು ನಾಯಕನನ್ನಾಗಿ ಮಾಡಿ, ಒಂದು ಮಾಸ್ಟರ್ ಪ್ಲಾನ್, ಒಂದು ದಿನದ ಕತೆ ಆಯ್ಕೆ ಮಾಡಿಕೊಂಡೆವು. ಆವತ್ತಿನ ಜ್ವಲಂತ ವಿವಾದಗಳು ಯಾವುದು ಎಂದಾಗ, ನಿತ್ಯಾನಂದ ರಂಜಿತ ಪ್ರಕರಣ, ರಾಜಕಾರಣಿ ಅನೈತಿಕ ಪ್ರಕರಣ, ಸರಣಿ ಹಂತಕ ಮೋಹನ್ ಪ್ರಕರಣ ಹೀಗೆ .. ಒಂದಷ್ಟು ಘಟನೆಗಳನ್ನೂ ಆಯ್ಕೆ ಮಾಡಿಕೊಂಡು ಅದಕ್ಕೆ ಚಿತ್ರಕತೆ ಹೆಣೆದು ಸಿನಿಮಾ ಮಾಡಿದ್ದಾಯಿತು.
ಆನಂತರದ್ದು ಏನೇನೋ ಆಯಿತು ಬಿಡಿ. ಮೊನ್ನೆ ಯಾರೋ ಗೆಳೆಯರು ಆಟಗಾರ ಸಿನಿಮಾ ನೋಡಿ, ಗುರು ನೀನು ಹೇಳಿದ್ಯಲ್ಲಾ ನಿನ್ನ ಸಿನಿಮಾದ ಬಗ್ಗೆ ಅದೇ ಕತೆ ನೋಡು, ಅವರು ಸಿನಿಮಾ ಮಾಡಿ ಬಿಡುಗಡೆ ಮಾಡಿದ್ದಾರೆ, ನೀನು ಡಬ್ಬದಲ್ಲೇ ಇಟ್ಟುಕೊಂಡಿದ್ದೀಯ ಎಂದರು. ಇದ್ದರೂ ಇರಬಹುದು ಎಂದುಕೊಂಡೆ. ಒಂದು ಆಲೋಚನೆ ಮತ್ತೊಬ್ಬರಿಗೆ ಬರದಿರಲು ಅದೇನೋ ಅಂತಹ ಗ್ರೇಟ್ ಥಾಟ್ ಅಲ್ಲ ಬಿಡಪ್ಪ.. ಸಿನಿಮಾ ಇಷ್ಟವಾಯ್ತಾ ಖುಷಿ ಪಡು ಎಂದು ಅವನಿಗೆ ದಬಾಯಿಸಿದೆ.
ಆನಂತರ ಆಟಗಾರ ನೋಡಿದೆ. ಅದರ ವಿಮರ್ಶೆ ಬಿಡಿ. ನಮ್ಮ ಸಿನೆಮಾಕ್ಕೂ ಅದಕ್ಕೂ ಯಾವುದೇ ಸಾಮ್ಯತೆಯಿಲ್ಲದಿದ್ದದ್ದು ಖುಷಿಯ ಸಂಗತಿಯೇ. ಅದನ್ನೇ ಕರೆ ಮಾಡಿ ಹೇಳಿದೆ ಆತನಿಗೆ. ಆಟಗಾರ ಚಿತ್ರದ ಕತೆ ಅಗಾಥಕ್ರಿಷ್ಟಿ ಕಾದಂಬರಿಯ ಮೂಲದ ಕತೆಯೋ, ಅದನ್ನು ಆಧರಿಸಿ ತಯಾರಾದ ನಾಲ್ಕೈದು ಚಿತ್ರಗಳ ಅವತರಣಿಕೆಯೋ ಎನ್ನುವುದು ವಿಷಯವಲ್ಲ. ಹಾಗೆ ನೋಡಿದರೆ ಆಟಗಾರ ರಿಮೇಕ್ ಚಿತ್ರ. ತಮಿಳಿನಲ್ಲಿ ಅಷ್ಟಾಗಿ ಸದ್ದೇ ಮಾಡದ ಅಡುಥದು ಚಿತ್ರದ ಕನ್ನಡ ಅವತರಣಿಕೆ. 2011 ರಾಲಿ ತೆರೆಕಂಡ ಈ ಚಿತ್ರವನ್ನು ಥಕ್ಕಳಿ ಶ್ರೀನಿವಾಸನ್ ನಿರ್ದೇಶನ ಮಾಡಿದ್ದರು. ಬಹುತೇಕ ಹೊಸಬರೇ ನಟಿಸಿದ್ದ ಈ ಚಿತ್ರದಲ್ಲಿ ಅನಂತನಾಗ್ ಪಾತ್ರವನ್ನು ನಾಸರ್ ನಿರ್ವಹಿಸಿದ್ದರು. ಅಡುಥದು ಚಿತ್ರದ ಮಕ್ಕಿಕಾಮಕ್ಕಿ ಕನ್ನಡ ಅವತರಣಿಕೆಯಾದ ಆಟಗಾರ ಅಧಿಕೃತ ರಿಮೇಕೋ ಅನಧಿಕೃತ ರಿಮೇಕೋ ಗೊತ್ತಿಲ್ಲ.  
ಒಂದಷ್ಟು ವಿರಾಮವೋ, ಏನೋ ಚಿತ್ರರಂಗದಿಂದ ಅನಾಮತ್ತು ಎರಡು ವರ್ಷ ದೂರ ಇದ್ದದ್ದು ಆಯಿತು. ಆಕ್ಷನ್ ಕಟ್ ಪ್ರಪಂಚದಿಂದ ಬೇರೆ ಪ್ರಪಂಚಕ್ಕೆ ತೆರೆದುಕೊಂಡಿದ್ದೂ ಆಯಿತು. ಈಗ ಮತ್ತೆ ಹಳೆಯ ಕಡತಗಳಿಗೆ ಮನಸ್ಸು ಹೊರಳಿದೆ. ಹೊಸ ಚಿತ್ರಕ್ಕೆ ತಯಾರಿ ನಡೆದು, ಸ್ಕ್ರಿಪ್ಟ್ ಮುಗಿದಿದೆ. ಮೊನ್ನೆ ಲೊಕೇಶನ್ ಹಂಟಿಂಗ್ ಕೂಡ ಮಾಡಿದ್ದಾಗಿದೆ. ಇನ್ನೂ ಕಾಸ್ಟಿಂಗ್ ಅಥವಾ ತಾರಾಗಣದ ಆಯ್ಕೆಯ ದೊಡ್ಡ ಕೆಲಸ ಬಾಕಿಯಿದೆ.
ಕಲಾವಿದ ಆಕಾಂಕ್ಷಿಗಳು ಫೋಟೋ ಡೀಟೇಲ್ಸ್ ಅನ್ನು ಇಮೇಲ್ ಮಾಡಿದರೆ ಒಮ್ಮೆ ಪರಿಗಣನೆಗೆ ತೆಗೆದುಕೊಳ್ಳಬಹುದು.
ನಮಸ್ಕಾರ.

Thursday, April 2, 2015

ಸೇವ್ ದಿ ಕ್ಯಾಟ್ ಪುಸ್ತಕ ಮತ್ತು ಕೃಷ್ಣಲೀಲಾ ಸಿನಿಮಾ:

ಸೇವ್ ದಿ ಕ್ಯಾಟ್ ಪುಸ್ತಕವನ್ನು ಓದಿರಬಹುದು. ಚಿತ್ರಕತೆ, ಸಿನಿಮಾ ಜಾನ್ರ್ ಬಗ್ಗೆ ಚಿತ್ರಕರ್ಮಿ ಓದಲೇಬೇಕಾದ ಪುಸ್ತಕವದು. ಹಾಗಂತ ಆ ಪುಸ್ತಕದಲ್ಲಿ ಅದ್ಭುತವಾದದ್ದೇನೂ ಹೇಳಿಲ್ಲ. ಸರಳವಾಗಿ ಸಿನಿಮಾ ಹೀಗೆ ಮತ್ತು ಇಷ್ಟೇ ಎಂಬುದನ್ನು ಹೇಳಲಾಗಿದೆ.
ಏಕೆಂದರೆ ಚಿತ್ರದ ಕತೆ ಚಿತ್ರಕತೆಯಲ್ಲಿ ಹಲವಾರು ಗೊಂದಲಗಳಿವೆ. ಹಾಗೆಯೇ ಸ್ಟಾರ್ ಸಿನಿಮಾ, ಇಮೇಜ್, ವಾಸ್ತವ ಕತೆ, ಮಸಾಲೆ, ಮನರಂಜನೆ, ಹಾಸ್ಯ ಹೀಗೆ ಎಲ್ಲವನ್ನೂ ಬೇರೆಯದೇ ಆದ ನಿಟ್ಟಿನಲ್ಲಿ ನೋಡಲಾಗುತ್ತದೆ. ಅದು ಹಾಗಲ್ಲ. ಎಲ್ಲಾ ಒಂದೇ ಎಂಬುದನ್ನು ಪ್ರತಿಪಾದಿಸುವ ಪುಸ್ತಕವದು. ಸಂಪೂರ್ಣವಾಗಿ ಕಥೆ ಮಾಡಿಕೊಳ್ಳಿ, ಚಿತ್ರಕತೆಯ ಅವಶ್ಯವಿಲ್ಲ. ಕತೆ ಚಿಕ್ಕ ಎಳೆಯಾಗಿದ್ದಾಗ ಮಾತ್ರ  ಚಿತ್ರಕತೆ ಬಗ್ಗೆ ತಲೆಕೆಡಿಸಿಕೊಳ್ಳಿ ಎನ್ನುತ್ತಾನೆ ಲೇಖಕ, ಸಿನಿಮಾ ಸಂಶೋಧಕ ಬ್ಲೇಕ್ ಸ್ನೈಡರ್. ಅದು ನಿಜವೂ ಹೌದು. ಕತೆ ವಿಸ್ತೃತ ಮತ್ತು ವಿವರವಾಗಿದ್ದಾಗ ಸ್ಪಷ್ಟವಾಗಿದ್ದಾಗ ಚಿತ್ರಕತೆ ಅಲ್ಲಿಯೇ ಇರುತ್ತದೆ. ಅದಕ್ಕಾಗಿ ವಿಶೇಷವಾಗಿ ಬರೆಯುವ ಅವಶ್ಯಕತೆ ಇಲ್ಲ. ಉದಾಹರಣೆಗೆ ಮಣಿರತ್ನಂ ಅವರ ತಿರುಡಾ ತಿರುಡಾ ಚಿತ್ರದ ಉದಾಹರಣೆ ತೆಗೆದುಕೊಂಡರೆ ಇಲ್ಲಿ ಚಿತ್ರಕತೆಯೇ ಜೀವಾಳ. ಕತೆ ನೆಪಮಾತ್ರವಷ್ಟೇ. ಇತ್ತೀಚಿಗೆ ವಿಸ್ತೃತವಾದ ಕತೆ ಚಿತ್ರಕತೆ ಸರಿಯಾದ ಫಾರ್ಮ್ಯಾಟ್ ನಲ್ಲಿ ಕನ್ನಡದಲ್ಲಿ ಬಂದದ್ದು ಕಡಿಮೆಯೇ. ಸಿನಿಮಾ ಹಿಟ್ ಅಥವಾ ಫ್ಲಾಪ್ ಅದು ವಿಷಯವೇ ಬೇರೆ. ಆದರೆ ಕಸುಬುದಾರಿಕೆ ಮತ್ತು ಕುಸುರಿ ವಿಷಯದಲ್ಲಿ ಅದರ ಕೊರತೆ ಕಂಡದ್ದು ಸತ್ಯ.
ಹಾಗೆಯೇ ನಿರ್ದೇಶಕ ಶಶಾಂಕ್ ಅವರ ಕೃಷ್ಣಲೀಲಾ ಚಿತ್ರವನ್ನು ತೆಗೆದುಕೊಳ್ಳಿ. ಇತ್ತೀಚಿಗಿನ ವಿಸ್ತೃತವಾದ ಮತ್ತು ಸರಿಯಾದ ಫಾರ್ಮ್ಯಾಟ್ ಚಿತ್ರಕತೆಯ ಚಿತ್ರವದು. ಚಿತ್ರದ ದೃಶ್ಯದ ಭಾವ ಮತ್ತು ನಿರ್ದೇಶಕರ ಆಶಯ ಇಲ್ಲಿ ಭಿನ್ನ. ಅದು ನಿರೀಕ್ಷಿತ ಪರಿಣಾಮವನ್ನಂತೂ ಬೀರಿರುವುದು ಸತ್ಯ. ಏಕೆಂದರೆ ಚಿತ್ರದ ದೃಶ್ಯದ ಭಾವ ಗಂಭೀರವಾದದ್ದು, ನಿರ್ದೇಶಕರ ಆಶಯ ಪ್ರೇಕ್ಷಕರಿಗೆ ಮನ ಮುಟ್ಟಿಸುವುದು ಎರಡೂ ಇಲ್ಲಿ ವರ್ಕ್ ಔಟ್ ಆಗಿದೆ. ಅಕಸ್ಮಾತ್ ಏರುಪೇರಾಗಿದ್ದರೆ ನಿರ್ದೇಶಕ ಶಶಾಂಕ್ ಇಲ್ಲಿ ಸೋಲುತ್ತಿದ್ದರು. ಆದರೆ ಅವರ ಅನುಭವ ಮತ್ತು ವಿಶನ್ ಪಕ್ಕಾ ಇದೆ. ನಾವು ಎಷ್ಟೋ ಚಿತ್ರಗಳಲ್ಲಿ ನೋಡಿದ್ದೇವೆ. ಅಲ್ಲಿ ಹಾಸ್ಯ ದೃಶ್ಯವಿದ್ದರೆ ನಾವು ಅಳುತ್ತಿರುತ್ತೇವೆ, ತೆರೆಯ ಮೇಲೆ ಅಳುತ್ತಿದ್ದರೆ ನಾವು ನಗುತ್ತಿರುತ್ತೇವೆ. ಅಂದರೆ ದೃಶ್ಯದ ಭಾವ, ನಿರ್ದೇಶಕರ ಆಶಯ ಒಂದೇ ಇದ್ದರೂ ಅದು ಪ್ರೇಕ್ಷಕನ ಮನಮುಟ್ಟುವಲ್ಲಿ ಸೋತಿರುತ್ತದೆ. ಆದರೆ ಕೃಷ್ಣಲೀಲಾ ಚಿತ್ರದಲ್ಲಿನ ದೃಶ್ಯಗಳನ್ನು ಆಶಯಗಳನ್ನು ಸುಮ್ಮನೆ ಗಮನಿಸಿ.  
ತೆರೆಯ ಮೇಲೆ ಗಂಭೀರವಾಗಿ ಕತೆ ನಡೆಯುತ್ತಿದ್ದರೆ ಪಾತ್ರಧಾರಿಗಳು ಹಿಂಸೆ ಅನುಭವಿಸುತ್ತಿದ್ದರೆ, ಪ್ರೇಕ್ಷಕ ಇಷ್ಟ ಪಡುತ್ತಲೇ ಮರುಗುತ್ತಲೇ ಮನರಂಜನೆ ಪಡೆದುಕೊಳ್ಳುತ್ತಿರುತ್ತಾನೆ. ಹಾಗಾಗಿಯೇ ಇತ್ತೀಚಿನ ಚಿತ್ರಗಳಲ್ಲಿ ವಿಸ್ತೃತವಾದ ಕತೆಯ ಮತ್ತು ಅದಕ್ಕೆ ಅನುರೂಪವಾದ ಚಿತ್ರಕತೆಯ ಚಿತ್ರ ಎಂದರೆ ಕೃಷ್ಣಲೀಲಾ ಎನ್ನಬಹುದು. ಸಿನಿಮಾದ ಬಗೆಗೆ ಅದ್ಯಯನ ಮಾಡಬೇಕು ಎಂದಾಕ್ಷಣ ನಮ್ಮ ಕಣ್ಣು ಹಾರುವುದು ಹಾಲಿವುಡ್ ಬಾಲಿವುಡ್ ಮತ್ತು ವಿಮರ್ಶಾತ್ಮಕವಾಗಿ ಹೆಸರು ಮಾಡಿದ ಚಿತ್ರಗಳ ಮೇಲೆ. ಆದರೆ ಅದಲ್ಲ ಅದ್ಯಯನ. ನಮ್ಮಲ್ಲಿನ ಚಿತ್ರಗಳನ್ನು ಸೂಕ್ಷ್ಮವಾಗಿ ನೋಡಬೇಕು ಎನ್ನುತ್ತಾನೆ ಬ್ಲೇಕ್. ಹಾಗಾಗಿಯೇ ಕೃಷ್ಣಲೀಲಾ ಚಿತ್ರದ ಸ್ಕ್ರಿಪ್ಟ್ ಮತ್ತು ಸಿನಿಮಾ ಉತ್ತಮ ಎನ್ನಬಹುದು. ಭಿನ್ನ ವಿಭಿನ್ನ ವಿಶಿಷ್ಟ ಎಂದೆಲ್ಲಾ ವರ್ಗೀಕರಣ ಮಾಡುವ ಮೊದಲು ಸಿನಿಮಾ ಮಾಡಿ, ನೋಡಿಸಿ, ಅವರ ಅಭಿಪ್ರಾಯ ಪಡೆದುಕೊಳ್ಳಿ ಎನ್ನುವುದು ಅವನ ವಾದ ಕೂಡ. 

Saturday, February 28, 2015

ಅದು ಬೆಸ್ಟ್ ಆಫರ್....

ಅವನೊಬ್ಬ ಕಲಾಕೃತಿಗಳ ಮೌಲ್ಯ ಮಾಪಕ. ವಯಸ್ಸು ಇಳಿವಯಸ್ಸು. ಈ ರಿಸರ್ವಡ್ ಅಂತಾರಲ್ಲ ಅಂತಹ ವ್ಯಕ್ತಿತ್ವದವನು. ಯಾರನ್ನೂ ನಂಬುವುದಿಲ್ಲ.. ತನ್ನ ಮನೆಗೆ ಇದುವರೆವಿಗೂ ಯಾರನ್ನೂ ಕರೆದುಕೊಂಡು ಬಂದಿಲ್ಲ ಎಂದರೆ ಸುಮ್ಮನೆ ಊಹಿಸಿ...ಅವನ ಗುಣ ಎಂತಹದ್ದು ಎಂಬುದನ್ನು. ಜಗತ್ತಿನ ಮೂಳೆ ಮೂಲೆಯಿಂದ ಅವನಿಗೆ ಹರಾಜು ಪ್ರಕ್ರಿಯೆಗೆ ಕರೆ ಬರುತ್ತದೆ. ತುಂಬಾ ಸಲೀಸಾಗಿ ಹರಾಜು ಪ್ರಕ್ರಿಯೆ ನಡೆಸಿ ಕೊಡುವ ಆತ ಒಬ್ಬ ಪುರಾತನ ಅಮೂಲ್ಯ ಕಲಾಕೃತಿಗಳ ಸಂಗ್ರಾಹಕ ಕೂಡ ಹೌದು. ಅವನದೊಂದು ಉಪಾಯವಿದೆ. ಅವನ ಗೆಳೆಯ ಬಿಲ್ಲಿಯನ್ನು ಹರಾಜಿನ ಜಾಗದಲ್ಲಿ ಗಿರಾಕಿಯಾಗಿ ಕೂರಿಸುತ್ತಾನೆ. ಹಾಗೆಯೇ ತಾನೇ ಮೌಲ್ಯ ಮಾಪನ ಮಾಡುವ ಕಲಾಕೃತಿಯನ್ನು ಅದು ಒರಿಜಿನಲ್ ಆಗಿದ್ದರೂ ಅದು ಫೋರ್ಜರಿ ಎಂದು ಪ್ರಮಾಣೀಕರಿಸುತ್ತಾನೆ. ಅದರ ಮೂಲ ಬೆಲೆಗಿಂತ ತೀರಾ ಕಡಿಮೆ ಬೆಲೆಗೆ ಹರಾಜಾಗುವಂತೆ ಮಾಡಿ ತನ್ನ ಗೆಳೆಯ ಬಿಲ್ಲಿಯ ಕೈಯಲ್ಲಿ ಕೊಳ್ಳುವಂತೆ ಮಾಡುತ್ತಾನೆ. ಆನಂತರ ಬಿಲ್ಲಿಗೆ ಒಂದಷ್ಟು ಹಣ ಬೀಸಾಕುತ್ತಾನೆ. ವರ್ಷಗಳ ಈ ಕೆಲಸದಿಂದ ಅವನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಅತ್ಯಮೂಲ್ಯ ಕಲಾಕೃತಿಗಳ ಸಂಗ್ರಹವಿದೆ. ಆದರೆ ಅದೆಲ್ಲವೂ ಅವನ ಮನೆಯ ರಹಸ್ಯಕೋಣೆಯಲ್ಲಿ ಬಂಧಿಯಾಗಿವೆ. ಅಲ್ಲಿಗೆ ಅವನನ್ನು ಬಿಟ್ಟರೆ ಬೇರೆಯವರ ಪ್ರವೇಶವೇ ಇಲ್ಲ. ಇಂತಿಪ್ಪವನಿಗೆ ಅದೊಂದು ದಿನ ಫೋನ್ ಬರುತ್ತದೆ. ಆ ಕಡೆಯಿಂದ  ನೋವಿನಿಂದ ಕೂಡಿದಂತೆ ಭಾಸವಾಗುವ ಹೆಣ್ಣು ಧ್ವನಿ ಮಾತನಾಡುತ್ತದೆ. ನಮ್ಮ ಬಂಗಲೆಯನ್ನು ನಾನು ಮಾರಾಟಮಾಡಬೇಕಾಗಿರುವುದರಿಂದಾಗಿ ಇಲ್ಲಿನ ಅತ್ಯಮೂಲ್ಯ ಕಲಾಕೃತಿಗಳನ್ನು ಮಾರಲು ನಂಗೆ ನಿಮ್ಮ ಸಹಾಯಬೇಕು, ಅದರ ಮೌಲ್ಯ ಮಾಪನ ಮಾಡಿಕೊಡಬೇಕು ಎಂಬುದು ಅದರ ಸಾರಾಂಶ. ನಮ್ಮ ನಾಯಕ ಮೊದಲಿಗೆ ಒಪ್ಪುವುದಿಲ್ಲ. ಆದರೆ ಹಿಂದೆ ಬೀಳುವ ಆಕೆ ಮತ್ತು ಆಕೆಯ ಸುಮಧುರವಾದ ಕಂಠ ಆತನನ್ನು ಆ ಕೆಲಸಕ್ಕೆ ಪ್ರೇರೇಪಿಸಿ ಅವನು ಮೌಲ್ಯ ಮಾಪನ ಮಾಡಲು ಒಪ್ಪಿಕೊಳ್ಳುತ್ತಾನೆ. ಆದರೆ ಆತ ಮೌಲ್ಯ ಮಾಪನ ಶುರು ಮಾಡಿದರೂ ಆಕೆ ಅವನಿಗೆ ಕಾಣಿಸಿಕೊಳ್ಳುವುದೇ ಇಲ್ಲ. ಬದಲಿಗೆ ಬರೀ ಆಕೆಯ ಕರೆ ಮಾತ್ರದ ಮೂಲಕ ಸಂವಹನ ನಡೆಯುತ್ತದೆ. ಇದರಿಂದ ಬೇಸತ್ತ ನಾಯಕ ಆಕೆಯನ್ನು ನೋಡಲೇಬೇಕೆಂದು ಒತ್ತಾಯಿಸಿದಾಗ ತಿಳಿಯುವ ನಿಜ ವಿಷಯ ಎಂದರೆ ಆಕೆಗೆ ಗುಂಪಿನಲ್ಲಿ ಸೇರಲು ಭಯ ಇದೆ ಎಂಬುದು. ಆಕೆ ತನ್ನ ಬಾಲ್ಯದಲ್ಲಿ ಪೋಷಕರನ್ನು ಕಳೆದುಕೊಂಡ ನಂತರ ಇಲ್ಲಿಯವರೆಗೆ ಮನೆಯಿಂದ ಹೊಸ ಬಂದೆ ಇಲ್ಲ ಎಂದಾಗ ಆಕೆಯನ್ನು ಹೇಗಾದರೂ ಮಾಡಿ ಆ ಪಂಜರದಿಂದ ಹೊರತರಲು ನಾಯಕ ನಿರ್ಧರಿಸುತ್ತಾನೆ ಅಷ್ಟೇ ಅಲ್ಲ, ಜೊತೆಗೆ ಅವನಿಗರಿವಿಲ್ಲದೆ ಪ್ರೀತಿಯಲ್ಲಿ ಬೀಳುತ್ತಾನೆ. ಆಕೆಯನ್ನು ಹೊರ ತರುತ್ತಾನೆ, ಬೆರೆಯುವಂತೆ ಮಾಡುತ್ತಾನೆ. ತನ್ನ ನೀರಸ ಏಕಮುಖವಾಗಿದ್ದ ಬದುಕಿಗೆ ಅರ್ಥ ಸಿಕ್ಕಿತು ಎಂದು ಕೊಳ್ಳುತ್ತಾನೆ. ಮುಂದೆ..
ಕೆಲವು ಚಿತ್ರಗಳ ಕತೆ ಹೇಳಲು ಖುಷಿ ಕೊಡುತ್ತದೆ. ಹಾಗೆಯೇ ಕೆಲವು ಚಿತ್ರಗಳು ನೋಡಿದರೆ ಮಜಾ ಕೊಡುತ್ತವೆ. ಆದ್ರೆ ಗಿಸಿಪಿ ತಾರ್ನೆತೊರ್ ನಿರ್ದೇಶನದ ಈ ಚಿತ್ರ ಮಾತ್ರ ನೋಡಲೂ ನೋಡಿದ ನಂತರ ಬೇರೆಯವರಿಗೆ ಆ ಚಿತ್ರದ ಕತೆ ಹೇಳಲು ಕುತೂಹಲ ಎನಿಸುತ್ತದೆ. ನಿಧಾನಕ್ಕೆ ಮಂದಗತಿಯಲ್ಲಿ ಚಿತ್ರ ಪ್ರಾರಂಭವಾಗುತ್ತದೆ. ನನಗೆ ಗಿಸಿಪಿಯ ಸಿನಿಮಾಗಳೆಂದರೆ ಹುಚ್ಚು. ಚಿತ್ರಕತೆ, ಕ್ಲೈಮಾಕ್ಸ್ ಮತ್ತು ನಿರ್ದೇಶನದಲ್ಲಿ ಆತ ನನ್ನ ಪಾಲಿಗೆ ಮಾಸ್ಟರ್. ಅವನ ಸ್ಟಾರ್ ಮೇಕರ್, ಸಿನಿಮಾ ಪ್ಯಾರಾಡಿಸೋ, ದಿ ಪ್ರೊಫೆಸರ್, ಬಾರಿಯಾ, ಮಲೀನಾ , ದಿ ಲೆಜೆಂಡ್ ಆಫ್ 1900 ಚಿತ್ರಗಳನ್ನು ಪದೇ ಪದೇ ನೋಡಿದ್ದೇನೆ. ಅದರಲ್ಲೂ ಬೆಸ್ಟ್ ಆಫರ್ ಚಿತ್ರದ ಕ್ಲೈಮಾಕ್ಸ್ ಅಂತೂ ಅದೆಷ್ಟು ಸಾರಿ ನೋಡಿದ್ದೇನೋ ನನಗೆ ಗೊತ್ತಿಲ್ಲ. ಚಿತ್ರ ನೋಡುತ್ತಾ ಸಾಗಿದಂತೆ ಅದು ನಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುವ ಪರಿ ಇದೆಯಲ್ಲ ಅದು ಅನನ್ಯ. ಅದರಲ್ಲೂ ಹಿನ್ನೆಲೆ ಸಂಗೀತ ಕ್ಲೈಮಾಕ್ಸ್ ನಲ್ಲಿನ ದೃಶ್ಯದ ಹಿನ್ನೆಲೆಯಲ್ಲಿ ಬರುವ ಸಂಗೀತವಂತೂ ನನಗೆ ಹುಚ್ಚೆ ಹಿಡಿಸಿಬಿಟ್ಟಿದೆ. ಇನ್ನು ಅಭಿನಯದಲ್ಲಿರುವ ಪ್ರಮುಖ ನಾಲ್ಕು ಪಾತ್ರಗಳು ಮನಸ್ಸಿನಲ್ಲಿ ನಿಲ್ಲುತ್ತದೆ.
ಚಿತ್ರ ನೋಡಿದ ನಂತರ ನನಗನ್ನಿಸಿದ್ದು ಇದು ಗಿಸಿಪಿಯ ಬೆಸ್ಟ್ ಆಫರ್ ಗಳಲ್ಲೊಂದು ಎಂದು. ಒಮ್ಮೆ ನೋಡಲೇ ಬೇಕಾದ ಚಿತ್ರ.

Sunday, February 22, 2015

ಬರೆದದ್ದು ನೋಡಿದ್ದು...


ಏಕಾಏಕಿ ಬ್ಯುಸಿಯಾಗಿಬಿಟ್ಟೆ ನೀನು ಎನ್ನುವವರೆಗೆ ನನಗೆ ಮನವರಿಕೆಯಾಗಿರಲೇ ಇಲ್ಲ ನೋಡಿ. ಹೌದು. ಸಿನಿಮಾ ನೋಡುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಕನ್ನಡ ಸೇರಿದಂತೆ ವಾರಕ್ಕೆ ಸರಾಸರಿ ಎಂಟು ಚಿತ್ರಗಳನ್ನು ನೋಡುತ್ತೇನೆ. ನೋಡಿದ ಚಿತ್ರಗಳ ಬಗ್ಗೆ ಸ್ವಲ್ಪ ಟಿಪ್ಪಣಿ, ಒಂದು ಬರಹ, ಗೆಳೆಯರ ಜೊತೆ ಒಂದು ಚರ್ಚೆ ಮಾಡುತ್ತೇನೆ. ಹಾಗೆಯೇ ಓದಿದ ಪುಸ್ತಕಗಳ ಸಂಖ್ಯೆಯೂ ಸಮಾಧಾನಕರವಾಗಿದೆ. ಆದರೇಕೋ ಬರೆಯುವುದು. ನಿಲ್ ...
 ಅದೇ ಬೇಸರದ ಸಂಗತಿ ಎನಿಸಿದ್ದು. ಈ ವರ್ಷದ ಆರಂಭದಲ್ಲಿ ಮತ್ತೆ ನಿಗದಿತವಾಗಿ ಬರೆಯಲೇ ಬೇಕು ಎಂದುಕೊಂಡೆನಾದರೂ ಅದೇಕೋ ಏನೋ ಬರೆಯಲು ಸಾಧ್ಯವಾಗಲೇ ಇಲ್ಲ. ನನ್ನ ಸಿನಿಮಾದ ಸ್ಕ್ರಿಪ್ಟ್, ಬೇರೆ ಸಿನೆಮಾಗಳ ತಂಡದ ಜೊತೆ ಚರ್ಚೆ, ಓಡಾಟ ಹೀಗೆ ಇದರಲ್ಲಿಯೇ ಸಮಯ ಹೋಗಿ ಬಿಡುತ್ತಿದೆ ಎನಿಸುತ್ತಿತ್ತು. ಆದರೆ ಮೊನ್ನೆ ಸಿಕ್ಕ ಗೆಳೆಯ ಹಾಗಂದದ್ದೇ ಸುಮ್ಮನೆ ಕುಳಿತು ಯೋಚಿಸಿದೆ. ನನಗೆ ಆಗ ಮನವರಿಕೆಯಾದದ್ದು ಏನೆಂದರೆ ನಾನೆಂತಹ ಭ್ರಾಮಕ ಲೋಕದಲ್ಲಿ ಬದುಕುತ್ತಿದ್ದೆ ಎಂದು.
ಹೌದು. ಸುಮ್ಮನೆ ಗಮನಿಸಿದರೆ ಅಥವಾ ನನ್ನದೇ ಬದುಕಿನ ಮಜಲುಗಳನ್ನು ಲೆಕ್ಕ ಹಾಕಿ ನೋಡಿದರೆ ಫಲಿತಾಂಶ ಏನೂ ಇಲ್ಲ. ಇಷ್ಟಕ್ಕೂ ಬ್ಯುಸಿಯಾಗಿರುವ ನಾನು ಮಾಡಿರುವ ಕೆಲಸವಾಗಲಿ, ಅದರ ಸಂಪಾದನೆಯಾಗಲಿ ಶೂನ್ಯ. ಹಾಗಾದರೆ ನಾನು ಯಾವುದಕ್ಕೆ ಬ್ಯುಸಿಯಾಗಿದ್ದೆ ಎಂದು ನನ್ನನ್ನೇ ಪ್ರಶ್ನಿಸಿಕೊಂಡೆ. ನನ್ನ ಎದುರಿನ ನನ್ನನ್ನು ಆವರಿಸಿದ್ದ ಸೋಮಾರಿತನದ ಪರದೆ ಹರಿದುಬಿತ್ತು. ಇರಲಿ ಬಿಡಿ.
ನೋಡಿದ ಸಿನೆಮಕ್ಕಿಂತ ಓದಿದ್ದು ತುಂಬಾ ನೆನಪಿಗೆ ಬಂದು ಬಿಟ್ಟಿತು. ತುಂಬಾ ಜನ ಮೆಸೇಜ್ ಮಾಡಿದಾಗಲೂ ಅದಕ್ಕೆ ಪ್ರತಿಕ್ರಿಯಿಸಬೇಕು ಎಂದುಕೊಂಡರೂ ಅದೆಲ್ಲೋ ಕಾಡುಹರಟೆಯಲ್ಲಿ ಸಮಯ ಹೋಗಿಬಿಡುತ್ತಿತ್ತು. ಈಗ ತಹಬದಿಗೆ ತಂದುಕೊಂಡೆ.
ವರ್ಷಾರಂಭದಿಂದ ಇಲ್ಲಿಯವರೆಗೆ ನಾನು ನೋಡಿದ ಚಿತ್ರಗಳು ಪಟ್ಟಿ ನನಗೆ ಗೊತ್ತಿದೆ. ಅದರಲ್ಲೂ ಕನ್ನಡ ಚಿತ್ರಗಳ ಬಗ್ಗೆ ಒಂದು ಬರವಣಿಗೆ ಬರೆದುಬಿಟ್ಟಿದ್ದೇನೆ. ಆದರೆ ಇತರ ಚಿತ್ರಗಳ ಬಗ್ಗೆ ನಾನು ಏನೂ ಬರೆಯಲೇ ಇಲ್ಲ. 
ವರ್ಷದ ಆರಂಭದಲ್ಲಿ ನಾನು ಮೊದಲು ನೋಡಿದ ಹಾಲಿವುಡ್ ಚಿತ್ರ ಟೇಕನ್-3. ಅದೇಕೋ ಏನೋ ಅದರಲ್ಲಿ ಹೊಸದೇನೂ ಇರುವುದಿಲ್ಲ ಎನಿಸಿದರೂ ಸಿನಿಮಾವನ್ನು ಒಮ್ಮೆ ನೋಡಲೇ ಬೇಕು ಎನಿಸಿಬಿಡುತ್ತದೆ. ನನಗೆ ಫೈಟಿಂಗ್ ಇಷ್ಟ. ದುಷ್ಟ ಸಂಹಾರ ಯಾವತ್ತಿಗೂ ಇಷ್ಟ. ಹಾಗಾಗಿಯೇ ಟೇಕನ್ ನಂತಹ ಚಿತ್ರಗಳನ್ನು ಮುಗಿಬಿದ್ದು ನೋಡುತ್ತೇನೆ. ಸುಮ್ಮನೆ ಕುಳಿತು ಪರದೆಗೆ ಕಣ್ಣನ್ನೇ ಪೇಸ್ಟ್ ಮಾಡುವಂತಹ ಚಿತ್ರವನ್ನು ನೋಡಿ ತುಂಬಾ ಸಮಯವೇ ಅಗಿಹೋಗಿದೆಯೇನೋ? ಟೇಕನ್ -3 ಮತ್ತೊಂದು ಹೊಡಿಬಡಿ ಚಿತ್ರ. ಮೊದಲ ಭಾಗದಲ್ಲಿ ಮಗಳನ್ನು ಹೊತ್ತೊಯ್ದರು, ಬಿಡಿಸಿಕೊಂಡು ಬಂದ ನೀಸನ್,. ಎರಡನೆಯ ಭಾಗದಲ್ಲೂ ಹೊತ್ತೊಯ್ದರು ಮತ್ತೆ ಬಿಡಿಸಿಕೊಂಡು ಬಂದದ್ದಾಯ್ತು.. ಹಾಗಂತ ಮೂರನೆಯ ಭಾಗದಲ್ಲೂ ಮಗಳನ್ನು ಹೊತ್ತೊಯ್ಯುವರಾ? ಇಲ್ಲ. ಈ ಸಾರಿ ಹೆಂಡತಿಯನ್ನು ಕೊಂದು ಅದನ್ನು ಇವನ ತಲೆಯ ಮೇಲೆಯೇ ಹಾಕಿ ಮಜಾ ತೆಗೆದುಕೊಳ್ಳುತ್ತಾರೆ. ಈಗ ನೀಸನ್ ಗೆ ಎರೆಡೆರಡು ಕೆಲಸ. ಕೊಲೆಪಾತಕಿಯನ್ನು ಹಿಡಿಯುವುದು, ಪೋಲಿಸರಿಂದ ತಪ್ಪಿಸಿಕೊಳ್ಳುವುದು.... ಮಾಡದೆ ಬಿಡುತ್ತಾನಾ?
ಸಿನಿಮಾ ನಮ್ಮನ್ನು  ನೋಡಿಸಿಕೊಂಡು ನೀಸನ್ ನನ್ನು ಓಡಿಸಿಕೊಂಡು ಹೋಗುತ್ತದೆ. ಪ್ರಾರಂಭವಾದರೆ ಬೋರ್ ಎನಿಸುವ ಮೊಮೆಂಟ್ ಇಲ್ಲ. ಅಲ್ಲಿ ಹೋದ , ಇಲ್ಲಿ ಸಿಕ್ಕಿದ ಹೊಡಿ ಬಡಿ.. ಕಡೆಯವರೆಗೂ .. ಬೋರ್ ಆದರೆ ಒಮ್ಮೆ ನೋಡಿ..
ಜಾಸನ್ ಸ್ಟಾತಂ ಅಭಿನಯದ ವೈಲ್ಡ್ ಕಾರ್ಡ್ ಚಿತ್ರದಲ್ಲಿ ಎರಡೇ ಎರಡು ಹೊಡೆದಾಟ ಬಿಟ್ಟರೆ ಏನೂ ಮೆಚ್ಚತಕ್ಕಂತಹ ಅಂಶವಿಲ್ಲ. ಅದೇನೋ. ಇತ್ತೀಚಿಗೆ ಎಲ್ಲಾ ಹೊಡೆದಾಟ ಚಾಕ್ಯಚಕ್ಯತೆ ಇದ್ದರೂ ವ್ಯರ್ಥವಾಗುತ್ತಿರುವ ನಟ ಎಂದರೆ ಈ ಜಾಸನ್. ಜೆಟ್ ಲಿ, ಸ್ಟಾಲನ್, ಅರ್ನಾಲ್ಡ್  ಮುಂತಾದ ಸಾಹಸಿ ನಟರುಗಳಷ್ಟೇ ಸಮರ್ಥನಾದ ಈ ನಟನನ್ನು ಸರಿಯಾಗಿ ಬಳಸಿಕೊಳ್ಳದೆ ಇರುವುದು ಅದೂ ಹಾಲಿವುಡ್ ನಲ್ಲಿ ವಿಪರ್ಯಾಸ. ಚಿರತೆಯಂತೆ ಜಿಗಿಯುವ ತೀಕ್ಷಣ ಕಣ್ಣುಗಳು ಈ ನಟಬ್ನ ಚಿತ್ರ ಬರುತ್ತವೆ, ಆದರೆ ಹಿಡಿತವಿಲ್ಲದ ಕತೆ ಚಿತ್ರಕತೆಯಿಂದಾಗಿ ನೀರಸ ಎನಿಸುತ್ತವೆ.
ಈ ಸಾರಿಯ ಆಸ್ಕರ್ ಕಣದಲ್ಲಿನ ಚಿತ್ರಗಳಲ್ಲಿ ಗ್ರಾಂಡ್ ಬುಡಾಫೆಸ್ಟ್ ಹೋಟೆಲ್, ಬರ್ಡ್ ಮ್ಯಾನ್, ಬಾಯ್ ಹುಡ್ ಮುಂತಾದ ಸುಮಾರಷ್ಟು ಚಿತ್ರಗಳನ್ನು ನೋಡಿದೆ. ಅವುಗಳಲ್ಲಿ ಯಾವ್ಯಾವುದು ಆಸ್ಕರ್ ಪಡೆಯಬಹುದು ಎನ್ನುವ ಕುತೂಹಲವಿದೆ.

Friday, January 16, 2015

ಶಂಕರ್ ಐ

ಶಂಕರ್ ಅವರ ಬಹು ನಿರೀಕ್ಷಿತ ಚಿತ್ರವಾದ ಐ ಬಿಡುಗಡೆಯಾಗಿದೆ. ಬಹುಕೋಟಿ ವೆಚ್ಚದ ಈ ಚಿತ್ರ ತನ್ನ ನಿರೀಕ್ಷೆಯನ್ನು ಉಳಿಸಿಕೊಂಡಿದೆಯೇ ಎಂಬುದು ಪ್ರಶ್ನೆ.
ಅದಕ್ಕೆ ಉತ್ತರ ಹೌದು ಎಂದರೆ ಹೌದು ಇಲ್ಲ ಎಂದರೆ ಇಲ್ಲ.
ಶಂಕರ್ ಏನೇ ಮಾಡಿದರೂ ಮನರಂಜನೆಯ ಚೌಕಟ್ಟಿನಲ್ಲಿಯೇ ಮಾಡುತ್ತಾರೆ. ಅದವರ ಶಕ್ತಿ  ಮತ್ತದೇ ಅದೇ ಅವರ ದೌರ್ಬಲ್ಯ. ಹಾಗಾಗಿಯೇ ಶಂಕರ್ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಕೊಡಬಲ್ಲರು. ವರ್ಷಗಟ್ಟಲೆ ಪ್ರೇಕ್ಷಕರನ್ನು ಕಾಯಿಸಿ ಅಬ್ಬಾ ಕಾಯ್ದದ್ದು ಸಾರ್ಥಕ ಎನ್ನುವಂತೆ ಮಾಡಬಲ್ಲರು. ಸ್ಟಾರ್ ನಟನನ್ನು ಚಿತ್ರಕ್ಕೆ ನಾಯಕನನ್ನಾಗಿಸಿ ಆತನ ಅಭಿಮಾನಿಗಳನ್ನು ಖುಷಿ ಪಡಿಸಬಲ್ಲರು.
ಐ ಚಿತ್ರ ಅದೇ ವಿಭಾಗದ ಚಿತ್ರ. ಕತೆ ಚಿತ್ರಕತೆಯ ವಿಷಯಕ್ಕೆ ಹೋದರೆ ಹೆಚ್ಚು ತಲೆ ಕೆಡಿಸುವ ಕತೆಯೂ ಇಲ್ಲ, ಬುದ್ದಿವಂತಿಕೆ ಎನಿಸುವ ಚಿತ್ರಕತೆಯೂ ಇಲ್ಲ. ಸಾದಾರಣದಲ್ಲಿ ಅತೀ ಸಾದಾರಣ ಕತೆ, ನೀವು ಘಜಿನಿ ಎಂದುಕೊಳ್ಳಬಹುದು, ಚಿತ್ರಕತೆಯೂ ಅಷ್ಟೇ ಫ್ಲಾಶ್ ಬ್ಯಾಕ್ ಮಗ್ಗಲಲ್ಲಿ ಕತೆ ತೆರೆಯುವ ಶಂಕರ್ ಅದರಲ್ಲೂ ಯಾವುದೇ ಹೆಚ್ಚುಗಾರಿಕೆ ತೋರಿಲ್ಲ. ಹಾಗಾದರೆ ಇದೊಂದು ಸೀದಾ ಸಾದಾ ಚಿತ್ರವೇ?
ಖಂಡಿತ ಇಲ್ಲ. ಶಂಕರ್ ಗೆಲ್ಲುವುದು ಇರುವ ಸಾದಾರಣ ಕತೆಯನ್ನು ಅಸಾದಾರಣ ದೃಶ್ಯವೈಭವದ ಜೊತೆ ಕಟ್ಟಿಕೊಡುವಲ್ಲಿ. ಇಲ್ಲಿ ಅವರದ್ದು ಎಲ್ಲವೂ ಬಿಗ್ ಸ್ಕೇಲ್. ದೊಡ್ಡ ಕ್ಯಾನ್ವಾಸ್. ಒಂದು ಗಲ್ಲಿ ಎಂದರೂ ಅಲಂಕೃತವಾಗಿ ಉದ್ದಕ್ಕೆ ಕಾಣಿಸುತ್ತದೆ, ಒಂದು ಮನೆ ಎಂದರೆ ಅದರಲ್ಲಿ ಹಲವಾರು ಮಜಲುಗಳಿವೆ, ಹೊಡೆದಾಟ ಎಂದರೆ ಸಂಖ್ಯೆ ಮೀರಿದ ಎದುರಾಳಿಗಳಿದ್ದಾರೆ, ಹಾಡು ಎಂದಾಗ ಅದರಲ್ಲೇ ಲೋ ಬಜೆಟ್ ಸಿನಿಮಾ ಮಾಡಬಹುದಾದ ವೆಚ್ಚ ಎದ್ದು ಕಾಣುತ್ತದೆ.
ಒಂದು ರೂಪದರ್ಶಿಗಳ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಕತೆ. ಆನಂತರ ತಿರುಗುವುದು ಮಸಾಲೆ ಮನರಂಜನೆಯತ್ತ. ಇಲ್ಲಿನ ಪ್ರೀತಿ ಪ್ರೇಮ ದ್ವೇಷ ಎಲ್ಲದಕ್ಕೂ ಸಿನಿಮೀಯ ತಿರುವುಗಳನ್ನೇ ನಿರ್ದೇಶಕರು ನೆಚ್ಚಿಕೊಂಡಿದ್ದಾರೆ. ಹಾಗೆಯೇ ಪ್ರತಿಕಾರಕ್ಕೂ ತಮ್ಮದೇ ಶೈಲಿಯನ್ನು ಪುನರಾವರ್ತನೆ ಮಾಡಿದ್ದಾರೆ. ನಾಯಕ ಲಿಂಗೇಶನ್ ಮಿಸ್ಟರ್ ತಮಿಳುನಾಡು ಆದರೆ ನಾಯಕಿ ಅಂತರರಾಷ್ಟ್ರೀಯ ಮಟ್ಟದ ರೂಪದರ್ಶಿ. ಆಕೆಯನ್ನು ಹೇಗಾದರೂ ಮಾಡಿ ಅನುಭವಿಸಲು ಮತ್ತೊಬ್ಬ ಕಾಯ್ದುನಿಂತಿದ್ದಾನೆ. ತನ್ನ ತೆಕ್ಕೆಗೆ ಸಿಕ್ಕುವುದಿಲ್ಲ ಎಂದು ಗೊತ್ತಾದಾಗ ಆಕೆಯ ಜಾಗಕ್ಕೆ ಬೇರೆಯವರನ್ನು ತಂದುಕೂರಿಸುತ್ತಾನೆ. ಇದರಿಂದ ಹತಾಶೆಗೊಳಗಾದ ನಾಯಕಿ ಸಿಡಿದು ನಿಂತು ಅವನ ಜಾಗಕ್ಕೆ ನಾಯಕನನ್ನು ಆಯ್ಕೆ ಮಾಡುತ್ತಾಳೆ. ನಾಯಕ ರೂಪದರ್ಶಿಯಾಗುತ್ತಾನೆ. ಮುಂದೆ..? ನಾಯಕ ಸ್ಟಾರ್ ಆದಂತೆ ಖಳನಾಯಕ ಕೆಲಸವನ್ನೂ ಕಳೆದುಕೊಳ್ಳುತ್ತಾನೆ, ಮೊದಲೇ ಹುಡುಗಿ ಸಿಕ್ಕಿರುವುದಿಲ್ಲ. ಅದರ ಜೊತೆಗೆ ಮತ್ತೊಂದು ಪ್ರೇಮಕತೆಯನ್ನು ನಿರ್ದೇಶಕರು ತಂದಿದ್ದಾರೆ. ಅದರಲ್ಲೂ ಆತ/ಆಕೆಗೆ ನಾಯಕ ತಿರಸ್ಕರಿಸಿರುತ್ತಾನೆ. ಎಲ್ಲರೂ ಒಂದಾಗುತ್ತಾರೆ. ನಾಯಕನ ಮೇಲೆ ಹಗೆ ಸಾಧಿಸುತ್ತಾರೆ... ಮುಂದೇನಾಗುತ್ತದೆ ಎಂಬುದು ಒಂದು ಸಾಲಿನ ಕತೆ. ಆದರೆ ಅದನ್ನು ನಿರ್ದೇಶಕರು ಶ್ರೀಮಂತವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಅದನ್ನು ಚಿತ್ರಮಂದಿರದಲ್ಲೇ ನೋಡುವುದು ಸೊಗಸು.
ಮೂರು ಘಂಟೆ ಎಂಟು ನಿಮಿಷಗಳ ಚಿತ್ರವನ್ನು ನಿರ್ದೇಶಕರು ಬೋರ್ ಆಗದಂತೆ ನಿರೂಪಿಸಿದ್ದಾರೆ. ಇಲ್ಲಿ ಎಲ್ಲವೂ ನಿರೀಕ್ಷಿತ. ಏನಾಗುತ್ತದೆ ಎಂಬುದನ್ನು ಪ್ರೇಕ್ಷಕ ಮೊದಲೇ ಅಂದಾಜು ಮಾಡಿಬಿಡಬಲ್ಲ. ಆದರೆ ಅದು ಹೇಗೆ ಆಗುತ್ತದೆ ಎಂಬುದು ಶಂಕರ್ ಗೆ ಬಿಟ್ಟು ಬಿಡಬೇಕಾಗುತ್ತದೆ.
ನಾಯಕನಾಗಿ ವಿಕ್ರಂ ತನ್ನ ಖದರ್ ತೋರಿಸಿದ್ದಾರೆ. ಅಭಿನಯವಷ್ಟೇ ತನ್ನ ದೇಹವನ್ನು ಪಾತ್ರಕ್ಕೆ ತಕ್ಕಂತೆ ಏರುಪೇರು ಮಾಡಿಕೊಂಡಿದ್ದಾರೆ. ನಾಯಕಿಯಾಗಿ ಅಮಿ ಜಾಕ್ಸನ್ ಗ್ಲಾಮರ್ ಬೊಂಬೆ. ಇನ್ನುಳಿದಂತೆ ಉಪೇನ್ ಪಟೇಲ್, ಸುರೇಶ ಗೋಪಿ ಅವರ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ.
ಹಿನ್ನೆಲೆ ಸಂಗೀತ ಮತ್ತು ಸಂಗೀತ ಸ್ವಲ್ಪ ಮಟ್ಟಿಗೆ ನಿರಾಸೆ ಉಂಟು ಮಾಡುತ್ತದೆ. ಛಾಯಾಗ್ರಹಣ ಮತ್ತು ಪ್ರಸಾದನ ಚಿತ್ರದ ಜೀವಾಳ ಆಗಿದೆ.
ಕೊನೆ ಮಾತು: ಶಂಕರ್ ಇಷ್ಟನ್ನು ನೀಡಬಲ್ಲರು. ಆದರೆ ಚಿತ್ರ ಗ್ರೇಟ್ ಎನಿಸುವುದಿಲ್ಲ. ಅದೇಕೆ ಎನಿಸಬೇಕು ಎಂಬ ಪ್ರಶ್ನೆ ಹಠಾತ್ತನೆ ಹುಟ್ಟಬಹುದು. ಒಬ್ಬ ನಿರ್ದೇಶಕ ಒಂದಷ್ಟು ಹಣ ವೆಚ್ಚ ಮಾಡಿ  ಹೇಗೇಗೋ ಚಿತ್ರ ಮಾಡಿದಾಗ ಇಷ್ಟು ಮಾಡಿದರೆ ಸಾಕು ಎನಿಸುವುದು ಸಹಜ. ಆದರೆ ಇಷ್ಟನ್ನು ಹಲವಾರು ಬಾರಿ ಮಾಡಿರುವ ಶಂಕರ್ ಅವರಿಂದ ಮತ್ತಷ್ಟನ್ನು ನಿರೀಕ್ಷೆ ಮಾಡುವುದು ತಪ್ಪೇನಿಲ್ಲ. ಮೂರು ಗಂಟೆಗಳ ದೃಶ್ಯ ವೈಭವದಲ್ಲಿ ಬೋರ್ ಆಗದಂತೆ ಚಿತ್ರ ನಿರೂಪಿಸುವುದು ಸುಲಭದ ಕೆಲಸವಲ್ಲವಾದರೂ ಅದನ್ನು ಶಂಕರ್ ಮಾಡಬಲ್ಲರು ಎನ್ನುವುದಾದರೆ ಶಂಕರ್ ಇನ್ನು ಒಂದು ಹೆಜ್ಜೆ ಮುಂದೆ ಹೋದರೆ ಸೂಪರ್ ಹಿಟ್ ಚಿತ್ರದ ಜೊತೆಗೆ ಗ್ರೇಟ್ ಚಿತ್ರವನ್ನೂ ಕೊಡಬಹುದು. 

Sunday, December 21, 2014

ಪಿಕೆ

ಚಿತ್ರ ಪ್ರಾರಂಭವಾಗುತ್ತದೆ. ಒಂದು ಹಾರುವ ತಟ್ಟೆ ಬಂದು ನಿಲ್ಲುತ್ತದೆ. ಅದರಿಂದ ಆಮೀರ್ ಖಾನ್ ನಗ್ನವಾಗಿ ಕೆಳಗಿಳಿಯುತ್ತಾರೆ. ಅನ್ಯಗ್ರಹವಾಸಿಯಾದ ಆಮೀರ್ ಯಾನೆ ಪಿಕೆಗೆ ಏನು ಮಾಡುವುದು ಎಂಬುದು ತಿಳಿಯುವದಿಲ್ಲ. ಅಷ್ಟರಲ್ಲಿ ವ್ಯಕ್ತಿಯೊಬ್ಬ ಆಮೀರ್ ಖಾನ್ ತನ್ನ ಗ್ರಹಕ್ಕೆ ವಾಪಸ್ಸಾಗಳು ಅಗತ್ಯವಿದ್ದ ಕೊರಳಿನ ಸರ ಕಿತ್ತು ಓಡಿಬಿಡುತ್ತಾನೆ. ಭೂಮಿಯ ಮೇಲಿನ ವಿಷಯಗಳ ಬಗ್ಗೆ ಕಿಂಚಿತ್ತೂ ಅರಿವಿರದ ಪಿಕೆ ಒಂದೊಂದಾಗಿ ತಿಳಿದುಕೊಳ್ಳುತ್ತಾ ಸಾಗುತ್ತಾನೆ. ಮನುಷ್ಯರೇ ಮಾಡಿದ ವಿಷಯಗಳಿಗೆ ಪ್ರಶ್ನೆ ಹಾಕುತ್ತಾ ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯತ್ನಿಸುತ್ತಾನೆ.
ಹಿರಾನಿ ಅವರ ಕತೆಯ ಚಿತ್ರಕತೆಯ ಬಗೆಗೆ ಏನನ್ನೂ ಹೊಸದು ಹೇಳುವ ಹಾಗಿಲ್ಲ. ಯಾಕೆಂದರೆ ಒಂದು ವಿಷಯವನ್ನು ಹಾಸ್ಯ ಮಿಶ್ರಿತವಾಗಿ ಹೇಳುವಲ್ಲಿ ಹಿರಾನಿ ಅವರನ್ನು ಸರಗಟ್ಟುವವವರು ಚಿತ್ರರಂಗದಲ್ಲಿ ಕಡಿಮೆಯೇ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಯಾವುದನ್ನೇ ಆಗಲಿ ಕನ್ವಿನ್ಸ್ ಮಾಡುವ ಅವರ ನಿರೂಪಣೆಗೆ ಮಾರುಹೋಗದೆ ಇರಲಾರದು.
ಪಿಕೆ ಪ್ರಸ್ತುತ ಜಗತ್ತಿಗೆ ಬೇಕಾದ ಚಿತ್ರ. ಪ್ರೇಕ್ಷಕರಿಗೆ ಮಾತ್ರವಲ್ಲ. ಚಿತ್ರಕರ್ಮಿಗಳಿಗೂ. ಮೊದಲಿಗೆ ಪ್ರೇಕ್ಷಕರ ವಿಷಯಕ್ಕೆ ಬಂದರೆ ಪಿಕೆ ಈವತ್ತಿನ ದೇವರು ಅಸ್ತಿತ್ವದ ಬಗೆಗಿನ ಚಿತ್ರ. ಸೂಕ್ಷ್ಮವಾಗಿ ನೋಡಿದರೆ ದೇವರ ಅಸ್ತಿತ್ವಕ್ಕಿಂತ ಆತನ ಅಸ್ತಿತ್ವದ ಬಗೆಗೆ ಮಾನವನಿಗಿರುವ ನಂಬಿಕೆ ಅಪನಂಬಿಕೆ ಮೂಢ ನಂಬಿಕೆ ಮುಂತಾದವುಗಳನ್ನು ಪ್ರಶ್ನಿಸುವ ಚಿತ್ರ. ದೇವರಿದ್ದಾನೆ ಇಲ್ಲ, ಎನ್ನುವುದು ಇಲ್ಲಿನ ವಿಷಯವಲ್ಲ. ದೇವರು ಮಾನವರ ಅಂದರೆ ನಮ್ಮಗಳ ಜೊತೆ ಹೇಗಿದ್ದಾನೆ ಎಂಬುದು ಪ್ರಶ್ನೆ. ಅಥವಾ ನಾವುಗಳು ದೇವರನ್ನು ಹೇಗೆ ಇಟ್ಟುಕೊಂಡಿದ್ದೇವೆ ಎಂಬುದನ್ನು ಹಾಸ್ಯ ಮಿಶ್ರಿತವಾಗಿ ಹಾಗೆಯೇ ಚಿಂತಾನಾತ್ಮಕವಾಗಿ ತೆರೆಯ ಮೇಲೆ ತರುವ ಮತ್ತು ಅದನ್ನು ಒಪ್ಪಿಸುವ ಕೆಲಸ ಸುಲಭವಲ್ಲ. ಹಿರಾನಿ ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕ ಚಿಕ್ಕ ಪ್ರಸಂಗಗಳು, ಅದರಲ್ಲಿ ನಗೆಯುಕ್ಕಿಸುವ ಪರಿ, ವಿಡಂಬನೆ, ಅಲ್ಲಲ್ಲಿ ಬರುವ ಭಾವನಾತ್ಮಕ ಸನ್ನಿವೇಶ ಹೀಗೆ ಚಿತ್ರ ಸಾಗುತ್ತಾ ಸಾಗುತ್ತಾ ಪ್ರೇಕ್ಷಕ ಅತ್ತಿತ್ತ  ಆತನ ಗಮನ ಬೇರೆಡೆಗೆ ಹರಿಯದಂತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಹಾಗಾಗಿ ಚಿತ್ರಕತೆ ಬರೆದ ಹಿರಾನಿ ತಂಡಕ್ಕೆ ನಮನ ಹೇಳಲೇಬೇಕಾಗುತ್ತದೆ.
ಇನ್ನು ಚಿತ್ರಕರ್ಮಿಗಳು ಅಥವಾ ಯುವ ಪೀಳಿಗೆಯ ನಿರ್ದೇಶಕರು ಹಿರಾನಿ ಅವರಿಗೆ ಸಲಾಮು ಹೊಡೆಯುವುದರ ಜೊತೆಗೆ ಅವರನ್ನು ಅನುಕರಿಸಬಹುದು. ಯಾಕೆಂದರೆ ಯಶಸ್ಸು ಗುಣಮಟ್ಟ ಎರಡನ್ನೂ ತಮ್ಮ ಸಿನಿಮಾದಲ್ಲಿ ಸಾಧ್ಯ ಎಂಬುದನ್ನು ಸಾಧಿಸಿತೋರಿಸಿರುವ ಹಿರಾನಿ ಅವರ ಚಿತ್ರ ಇತಿಹಾಸವನ್ನು ಗಮನಿಸಿದರೆ ಅವರು ತೆಗಯುಕೊಳ್ಳುವ ವಸ್ತು ಗಿಂತ ಅವರ ಚಿತ್ರಕತೆಯ ತಾಕತ್ತು ಮತ್ತು ದೃಶ್ಯ ರಚನೆ ತಾಕತ್ತು ದೊಡ್ಡದು ಎನಿಸುತ್ತದೆ. ಹಾಗಾಗಿ ಸಮಯ ತೆಗೆದುಕೊಂಡು ಸಿನಿಮಾ ಮಾಡುವ ಹಿರಾನಿ ಆ ಸಮಯವನ್ನು ಒಂದು ಕ್ಷಣವೂ ವ್ಯರ್ಥ ಮಾಡಿಲ್ಲ ಎನಿಸುವುದು ಅವರ ಚಿತ್ರಗಳನ್ನು ನೋಡಿದ ಮೇಲೆಯೇ. ಸುಮ್ಮನೆ ಸಿನಿಮಾ ಮಾಡುವ, ಯಶಸ್ಸು ನೀಡುವ ಅಥವಾ ಗಂಭೀರ ಸಮಸ್ಯೆ ಚಿತ್ರ ತೆಗೆದು ಪ್ರಶಸ್ತಿ ತನ್ನದಾಗಿಸಿಕೊಳ್ಳುವುದಕ್ಕಿಂತ ಒಟ್ಟಾರೆಯಾಗಿ ಎಲ್ಲವನ್ನು ಒಂದೇ ಚಿತ್ರದಲ್ಲಿ ಮಾಡಬಹುದು ಎಂಬುದನ್ನು ಅವರಿಂದ ಕಲಿಯಬೇಕಾಗುತ್ತದೆ.
ಅಮೀರ್ ಖಾನ್ ಸ್ಟಾರ್ ನಟ ಎಂಬುದನ್ನು ಮರೆತು ಚಿತ್ರ ಮಾಡಿದ್ದಾರೆ ಅಥವಾ ಅವರು ಸ್ಟಾರ್ ಆಗಿರುವುದರಿಂದಲೇ ಈ ಪಾತ್ರ ನಿರ್ವಹಿಸಿದ್ದಾರೆ. ಅವರ ಹಾವ ಭಾವ ಪಾತ್ರ ಪೋಷಣೆ ಸೂಪರ್. ಉಳಿದ ತಾರಾಗಣ, ಛಾಯಾಗ್ರಹಣ, ತಂತ್ರಜ್ಞರ ಬಗ್ಗೆ ಬಿಡಿಬಿಡಿಯಾಗಿ ಹೇಳುವುದಕ್ಕಿಂತ ಯಥಾ ರಾಜ ತಥಾ ಪ್ರಜಾ ಎಂಬೊಂದು ವಾಕ್ಯವನ್ನು ಹೇಳಿ ಅರ್ಥೈಸಿಬಿಡಬಹುದು.
ಇದೆಲ್ಲದರ ಜೊತೆಗೆ ಕೆಲವು ಅಂಶಗಳನ್ನು ವಾದಿಸಬಹುದು. ಚಿತ್ರದಲ್ಲಿ ಓ ಮೈ ಗಾಡ್ ನೆರಳಿದೆ. ಪಾತ್ರ ಪೋಷಣೆ, ಕಥಾ ಹಂದರದಲ್ಲಿ ಅಮೆರಿಕಾದ ಟಿವಿ ಸರಣಿಯ  ಸರಕು ಕಾಣಿಸುತ್ತದೆ, ಹಿರಾನಿ ಹಿಂದಿನ ಚಿತ್ರ ನೋಡಿದವರಿಗೆ ಚಿತ್ರದಲ್ಲಿನ ಪಾತ್ರ ಪೋಷಣೆ ಹೊಸದು ಎನಿಸುವುದಿಲ್ಲ ಹೀಗೆ. ಆದರೆ ಇಂತಹ ಚಿತ್ರದ ಮಟ್ಟಿಗೆ ಈವತ್ತಿಗೆ ಇದೆಲ್ಲಾ ಅಪ್ರಸ್ತುತ ಎನಿಸುತ್ತದೆ.
ಒಮ್ಮೆ ಮನೆಮಂದಿಯಲ್ಲ ನೋಡಲೇ ಬೇಕಾದ ಚಿತ್ರವಿದು.



Monday, November 3, 2014

ದೃಶ್ಯ ಹಿಂದೆ ಬಿದ್ದು..

ಅದೇನೋ ಒಂದರ ಹಿಂದೆ ಬಿದ್ದರೆ ಸುಲಭವಾಗಿ ಅದರಿಂದ ಕಳಚಿಕೊಳ್ಳಲು ಸಾಧ್ಯವಾಗುವುದಿಲ್ಲ ನೋಡಿ. ಮೊದಲಿಗೆ ಸಸ್ಪೆಕ್ಟ್ ಎಕ್ಷ್, ಆನಂತರ ದೃಶ್ಯಂ ಆನಂತರ ದೃಶ್ಯ ಈಗ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್-ಕಾದಂಬರಿ. ಈಗಾಗಲೇ ದೃಶ್ಯಂ ನೋಡಿ, ಕೋರಿಯನ್ ಸಿನೆಮಾವನ್ನೂ ನೋಡಿ ಕಾದಂಬರಿ ಓದಿದ್ದರೆ ಮುಂದೆ ಓದಬಹುದೇನೋ? ಅಕಸ್ಮಾತ್ ಇನ್ನೂ ನೀವು ನೋಡಿಲ್ಲದಿದ್ದರೆ, ನೋಡುವ ಮನಸ್ಸಿದ್ದರೆ ನಿಮ್ಮಿಷ್ಟ.
ಒಂದು ಪುಸ್ತಕವನ್ನು ಸಿನಿಮಾಕ್ಕೆ ರೂಪಾಂತರ ಮಾಡುವಾಗ ಒಂದಷ್ಟು ಬದಲಾವಣೆ ಮಾಡುವಾಗ ಏನೇನಲ್ಲಾ ಮಾಡಬೇಕಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ.  ಸಧ್ಯಕ್ಕೆ ಈ ಕಾದಂಬರಿಯ ವಿವಾದವನ್ನೇ ತಗೆದುಕೊಳ್ಳಿ. ಮೊದಲಿಗೆ ಅದರ ಅಧಿಕೃತ ಹಕ್ಕುಗಳನ್ನು ಕೊಂಡುಕೊಂಡ ಏಕ್ತಾ ಕಪೂರ್ ಸಿನಿಮಾ ಮಾಡುವ ಮೊದಲೇ ಮಲಯಾಳಂ ನಲ್ಲಿ ಚಿತ್ರವನ್ನೇ ಬಿಡುಗಡೆ ಮಾಡಿದರು. ಆನಂತರ ಅದೆಲ್ಲಾ ಭಾಷೆಗಳಿಗೂ ರಿಮೇಕ್ ಆಗಿ ಯಶಸ್ವಿಯಾಯಿತು. ಈಗ ಹಿಂದಿಯಲ್ಲೂ ಮಾಡುತ್ತಿದ್ದಾರೆ, ಹಾಗೆಯೇ ಅಧಿಕೃತ ಪುಸ್ತಕದ ಹಕ್ಕುಗಳನ್ನು ಕೊಂಡುಕೊಂಡ ಏಕ್ತಾ ಕಪೂರ್ ಪುಸ್ತಕವನ್ನು ಚಿತ್ರವನ್ನಾಗಿಸುತ್ತಿರುವುದರಿಂದ ಸಿನಿಮಾಕ್ಕೆ ಅದರ ನಿರ್ಮಾಪಕರಿಗೆ ನೋಟೀಸ್ ಕಳುಹಿಸಿದ್ದಾರೆ.
ಹಾಗೆ ನೋಡಿದರೆ ದೃಶ್ಯಂ ಚಿತ್ರಕ್ಕೂ ಕಾದಂಬರಿಗೂ ವ್ಯತ್ಯಾಸವಿದೆ. ದೃಶ್ಯಂ ಕತೆಯೇ ಬೇರೆ, ಕಾದಂಬರಿ ಕತೆಯೇ ಬೇರೆ. ಆದರೆ ಸಾಮ್ಯತೆ ಇರುವುದು ಒಂದು ಅಂಶದಲ್ಲಿ. ಕಾದಂಬರಿಯ ನಾಯಕಿ ಒಂದು ಕೊಲೆ ಮಾಡುತ್ತಾಳೆ. ಅದು ಮಾಜಿ ಗಂಡನನ್ನು. ಕೊಲೆಯ ನಂತರ ಏನು ಮಾಡುವುದು, ಪೋಲಿಸರಿಗೆ ಶರಣಾಗುವುದಾ..? ಹಾಗಾದರೆ ಮಗಳ ಗತಿ ಏನು? ಎಂಬ ಪ್ರಶ್ನೆಗಳ ಗೊಂದಲದಲ್ಲೇ ಇದ್ದಾಗ ಪಕ್ಕದ ಮನೆಯ ಗಣಿತ ಶಿಕ್ಷಕ ಬಾಗಿಲು ತಟ್ಟುತ್ತಾನೆ. ಆನಂತರ ಅವನು ನೇರವಾಗಿ ವಿಷಯಕ್ಕೆ ಬಂದು ನನ್ನನ್ನು ನಂಬಿದರೆ ನಾನು ನಿಮ್ಮನ್ನು ಕಾಪಾಡುತ್ತೇನೆ ಎಂದಾಗ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ಹಾಗಾಗುತ್ತದೆ.
ಮಾರನೆಯ ದಿನ ನದಿಯ ಪಕ್ಕ ಒಂದು ಹೆಣ ಸಿಕ್ಕುತ್ತದೆ. ಅದರ ಮುಖವನ್ನು ಜಜ್ಜಿ ಹಾಕಿರುವುದರಿಂದ ಆತನ ಹಲ್ಲಿನ ದಾಖಲೆಯಿಂದ ಅವನನ್ನು ಗುರುತಿಸುವುದು ಸಾಧ್ಯವೇ ಇಲ್ಲ. ಇನ್ನು ಎರಡೂ ಹಸ್ತಗಳನ್ನು ಬೆರಳ ಸಮೇತ ಸುಟ್ಟು ಹಾಕಿರುವುದರಿಂದ ಕೈ ಬೆರಳ ಗುರುತೂ ಸಾಧ್ಯವಿಲ್ಲ.ಅವನ ಮೈ ಮೇಲಿನ ಬಟ್ಟೆ ಬಿಚ್ಚಿ ಪೂರ್ಣ ನಗ್ನಗೊಳಿಸಲಾಗಿದೆ. ಪಕ್ಕದಲ್ಲೊಂದು ಕದ್ದ ಸೈಕಲ್ ಇದೆ. ಗುರುತಿಗಾಗಿ ಪಕ್ಕದಲ್ಲೇ ಅರೆಬೆಂದ ಬಟ್ಟೆ ಇದೆ.
ಇವುಗಳನ್ನು ಹಿಡಿದುಕೊಂಡು ತನಿಖೆಗೆ ಇಳಿಯುತ್ತಾರೆ ಪೊಲೀಸರು. ಅರೆ ಬೆಂದ ಬಟ್ಟೆ, ಬಟ್ಟೆಯ ಪಕ್ಕ ಸಿಕ್ಕ ಹೋಟೆಲ್ಯ ಚಾವಿಯಿಂದ   ಆತ ನಾಯಕಿಯ ಪತಿ ಎಂಬುದನ್ನು ಕಂಡು ಹಿಡಿಯುತ್ತಾರೆ.  ಹಾಗಾದರೆ ಇಷ್ಟು ಬರ್ಬರವಾಗಿ ಕೊಲೆ ಮಾಡಿದವರ್ಯಾರು.. ಪೋಸ್ಟ್ಮೊ ಮಾರ್ಟಂ ಪ್ರಕಾರ ಕೊಲೆ ನಡೆದಿರುವುದು ಹತ್ತನೆಯ ತಾರೀಖು. ಮೊದಲಿಗೆ ಅನುಮಾನ ನಾಯಕಿಯ ಮೇಲೆ ಬರುತ್ತದೆ. ಆಕೆಯನ್ನು ಕೇಳಿದಾಗ ಆಕೆ ಹತ್ತನೆಯ ದಿನಾಂಕ ಸಿನಿಮಾ ನೋಡಿದ್ದಾಗಿ, ಅಲ್ಲಿಂದ ಹೋಟೆಲ್ಲಿಗೆ ಹೋಗಿ ಊಟ ಮಾಡಿದ್ದಾಗಿ ಹೇಳುತ್ತಾಳೆ. ಆಕೆಯ ಮಾತನ್ನು ಪರೀಕ್ಷಿಸಲು ಪೊಲೀಸರು ಎಲ್ಲಾ ತಂತ್ರ ಉಪಯೋಗಿಸುತ್ತಾರೆ. ಸಿನಿಮಾ ಮಂದಿರದ ಸಿಸಿಟಿವಿ ಫೂಟೇಜ್ ತರಿಸಿ ನೋಡುತ್ತಾರೆ, ಆಕೆಗೆ ಮಂಪರು ಪರೀಕ್ಷೆ ಮಾಡುತ್ತಾರೆ. ಎಲ್ಲವೂ ಸರಿ.
ನಾಯಕಿಗೆ ಆಶ್ಚರ್ಯವಾಗುತ್ತದೆ. ಯಾಕೆ ಎಲ್ಲರೂ ಹತ್ತನೆಯ ತಾರೀಖಿನ ಬಗ್ಗೆ ಕೇಳುತ್ತಿದ್ದಾರೆ. ಕೊಲೆ ನಡೆದಿರುವುದು ಒಂಬತ್ತು.ಎಷ್ಟೇ ಕೆದಕಿದರೂ ಪೊಲೀಸರಿಗೆ ನಾಯಕಿ ಹೇಳುತ್ತಿರುವುದು ಸುಳ್ಳು ಎನಿಸುವುದೇ ಇಲ್ಲ.
ಆದರೆ ನಿಜವಾಗಿ ನಡೆದದ್ದು ಏನು..?
ದೃಶ್ಯ ಚಿತ್ರದಲ್ಲೂ ಒಂದು ದೃಶ್ಯವನ್ನು ಸೃಷ್ಟಿ ಮಾಡುತ್ತಾನೆ ನಾಯಕ. ಕೊಲೆ ನಡೆದ ನಂತರ ಬಸ್ಸಿನಲ್ಲಿ, ಪ್ರವಚನ ಹೀಗೆ ಎಲ್ಲ ಕಡೆ ಹೋಗಿ ಕೊಲೆ ನಡೆದ ದಿನವೇ ಇಡೀ ಕುಟುಂಬ ಅಲ್ಲಿದ್ದರು ಎಂಬುದಾಗಿ ಕತೆ ಕಟ್ಟುತ್ತಾನೆ. ಅದನ್ನು ಸುಳ್ಳು ಎಂದು ಸಾಬೀತು ಮಾಡಲು ಎಷ್ಟೇ ಹೆಣಗಾಡಿದರೂ ಸಾಧ್ಯವಾಗುವುದೇ ಇಲ್ಲ.
ಇಲ್ಲೂ ಅಷ್ಟೇ. ನಾಯಕ ಒಂದು ದಿನವನ್ನು ಸೃಷ್ಟಿಸುತ್ತಾನೆ. ಒಂಬತ್ತನೆಯ ದಿನಾಂಕ ನಡೆದ ಕೊಲೆಯನ್ನು ಹತ್ತಕ್ಕೆ ವರ್ಗಾಯಿಸುತ್ತಾನೆ. ಅದಕ್ಕಾಗಿ ಆತ ಇನ್ನೊಂದು ಕೊಲೆ ಮಾಡುತ್ತಾನೆ. ನಿಜವಾದ ನಾಯಕಿಯ ಒಂಬತ್ತನೆಯ ದಿನಾಂಕ ಕೊಲೆಯಾದವನ  ಕಳೇಬರವನ್ನು ಮರೆ ಮಾಡುವ ನಾಯಕ ಆತನ ಬಟ್ಟೆ, ಹೋಟೆಲ್ ಬೀಗದ ಕೈ ತೆಗೆದುಕೊಂಡು ಇನ್ನೊಬ್ಬ ತಿರುಬೋಕಿಯನ್ನು ಹತ್ತನೆಯ ತಾರೀಖು ನದಿಯ ತೀರಕ್ಕೆ ಕರೆದೊಯ್ದು ಕೊಲೆ ಮಾಡುತ್ತಾನೆ. ಆನಂತರ ಆತನನ್ನು ನಗ್ನಗೊಳಿಸಿ ಮುಖ ಜಜ್ಜಿ ಕೈ ಬೆರಳುಗಳನ್ನು ಸುಟ್ಟು ಪಕ್ಕದಲ್ಲಿ ಬಟ್ಟೆ ಬೀಗದ ಕೈ ಅರೆಬರೆ ಸುಟ್ಟು ಪೋಲಿಸರಿಗೆ ಸಿಕ್ಕುವಂತೆ ಮಾಡುತ್ತಾನೆ. ಹಾಗಾಗಿಯೇ ಹೆಣ ನಾಯಕಿಯ ಪತಿಯದು ಮತ್ತು ಅವನ ಕೊಲೆಯಾದದ್ದು ಹತ್ತಕ್ಕೆ ಎಂಬ ಕತೆ ಸೃಷ್ಟಿಸುತ್ತಾನೆ. ಹತ್ತನೆಯ ತಾರೀಖು ಏನಾಯಿತು ಎಂದು ಎಲ್ಲರೂ ಪ್ರಶ್ನೆ ಕೇಳುತ್ತಾರೆ. ಆವತ್ತು ನಾಯಕಿಯ ಪಾಲಿಗೆ ಏನೂ ಆಗಿರುವುದಿಲ್ಲ. 
ಇಲ್ಲಿ ಎರಡೂ ಕತೆಗಳಲ್ಲಿ ಸಾಮ್ಯತೆ ಇಲ್ಲ. ಒಂದು ದಿನವನ್ನು ಸೃಷ್ಟಿಸುವ ಪರಿಯಲ್ಲಿ ಸಾಮ್ಯತೆ ಇದೆ. ಹಾಗಾಗಿ ಐಡಿಯಾ ಮಾತ್ರ ತೆಗೆದುಕೊಂಡಿರುವ ಜೀತು ಜೋಸೆಫ್ ದೃಶ್ಯಂ ಗೆ ತಮ್ಮದೇ ಕತೆ ಹೆಣೆದಿದ್ದಾರೆ.
ಇನ್ನು ಕೋರಿಯನ್ ಸಿನಿಮಾದ ವಿಷಯಕ್ಕೆ ಬಂದರೆ ಚಿತ್ರ ತುಂಬಾ ಮಂದಗತಿಯಲ್ಲಿದೆ. ಅದೇಕೆ ಅಷ್ಟೊಂದು ಮಂದಗತಿ ಎಂಬುದು ಪ್ರಶ್ನೆ. ಅದು ಬಿಟ್ಟರೆ ಕಾದಂಬರಿಗೆ ನಿಷ್ಠೆಯಿಂದಿದೆ ಸಿನಿಮಾ.ಆದರೆ ದೃಶ್ಯ ಚಿತ್ರಕ್ಕೆ ಬೇರೆಯದೇ ಕತೆ ಹೆಣೆಯಲಾಗಿದೆ. ಈಗ ಹಿಂದಿಯಲ್ಲಿ ಎರಡೂ ಚಿತ್ರಗಳು ಒಮ್ಮೆಲೇ ಬಿಡುಗಡೆಯಾದರೆ ಹೇಗೆ..?
ಈ ಹಿಂದೆ ಕನ್ನಡದಲ್ಲಿ ಸಾಗರಿ ಮತ್ತು ಆಪ್ತ ಮಿತ್ರ ಚಿತ್ರಗಳ ಕತೆ ಹೀಗೆ ಆಗಿತ್ತು. ಎರಡೂ ಒಂದೇ ಚಿತ್ರದ ಕನ್ನಡ ಅವತರಣಿಕೆ. ಆಪ್ತಮಿತ್ರ ಗೆದ್ದಿತ್ತು.