Wednesday, August 28, 2013

ಕಲಾವಿದರೂ, ಹೊಟ್ಟೆಯ ಆರು ಮಡಿಕೆಗಳೂ..


ನಮಗೆಲ್ಲಾ ಗೊತ್ತಿರುವಂತೆ ಕ್ರಿಶ್ಚಿಯನ್ ಬೇಲ್ ದಿ ಮಷನಿಸ್ಟ್ ಚಿತ್ರದಲ್ಲಿ, ಮ್ಯಾಟ್ ದಮಾನ್, ಇನ್ಫಾರ್ಮ೦ಟ ಚಿತ್ರದಲ್ಲಿ ಕಾಸ್ಟ್ ಅವೆಯ್ ಚಿತ್ರದಲ್ಲಿ ಟಾಮ್ ಹಾನ್ಕ್ಸ್ ದೇಹಸ್ವರೂಪವನ್ನು ಏರುಪೇರು ಮಾಡಿಕೊಂಡಿದ್ದು ಗೊತ್ತೇ ಇದೆ. ಕಮಲ್ ಹಾಸನ್ ಆಗಾಗ ಈ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. 
ಒಬ್ಬ ನಟನ ಅಂಗಸೌಸ್ಟವ ಚೆನ್ನಾಗಿರಬೇಕು. ನೋಡಲಿಕ್ಕೆ ಫಿಟ್ ಆಗಿ ಕಂಡರೆ ನಾಯಕ ಎನ್ನುವುದಕ್ಕೂ ಸರಿಹೋಗುತ್ತದೆ ಎಂದೆಲ್ಲಾ ಯೋಚಿಸಬಹುದು. 
ಮೊನ್ನೆ ಕನ್ನಡದ ನಟ ಹೇಮಂತ್ ಹೃದಾಯಘಾತದಿಂದ ಮೃತ ಪಟ್ಟಿದ್ದು ಗೊತ್ತಿರುವ ಸಂಗತಿಯೇ. ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಹೊಸದೇನಾದರೂ ಮಾಡಬೇಕೆಂದುಕೊಂಡು ಅದಕ್ಕಾಗಿ ಶ್ರಮ ಪಡುವುದು ತಪ್ಪಲ್ಲ. ಆದರೆ ವಿಪರೀತ ದೇಹದಂಡನೆ ಸರಿಯೇ ಎಂಬುವುದೇ ಪ್ರಶ್ನೆ.ನಟ ಹೇಮಂತ್ ಸಾವಿಗೆ ಅವರು ದೇಹ ಧಾರ್ಡ್ಯತೆಗಾಗಿ ಮತ್ತು ಅತೀ ವೇಗದಲ್ಲಿ ಮೈಕಟ್ಟಿನ ರಚನೆಗಾಗಿ ತೆಗೆದುಕೊಂಡ ಅಧಿಕ ಪ್ರೋಟೀನ್ ಅಂಶವೆ ಕಾರಣ ಎಂಬುದು ವೈದ್ಯಕೀಯ ಮೂಲಗಳಿಂದ ದೃಢಪಟ್ಟಿದೆ. ವಿಷಯ ಅದಲ್ಲ. ಇಂದಿನ ಯುವ ನಟರೇಕೆ ಮೈಕಟ್ಟಿನ ಹಿಂದೆ ಬಿದ್ದಿದ್ದಾರೆ ಎಂಬುದು.
ಈವತ್ತು ಸಿಕ್ಸ್ ಪ್ಯಾಕ್ ಅಬ್ಸ್ ಎಂಬುದು ಜನರಲ್ಲಿ ಜನಜನಿತ. ಆದರೆ ನಾನು ಕಂಡ ಮಟ್ಟಿಗೆ ನಮ್ಮ ದಕ್ಷಿಣಭಾರತದ ಚಿತ್ರರಂಗದಲ್ಲಿ ಮೊದಲಿಂದಲೂ ಮೈಕಟ್ಟಿಗೆ ಅಂತಹ ಬೆಲೆಯಿರಲಿಲ್ಲ. ಕನ್ನಡದಲ್ಲಿ ವರನಟ ರಾಜ್ ಬಿಟ್ಟರೆ ಬೇರೆ ನಟರು ಬೊಜ್ಜಿಲ್ಲದೆ ವೃತ್ತಿ ಜೀವನದ ಪೂರ್ತಿ ಸಂಭಾಳಿಸಿದ್ದು ಕಡಿಮೆ ಎನ್ನಬಹುದು. ಹಾಗಂತ ರಾಜ್ ಏನೂ ಬಾಡಿ ಬಿಲ್ಡರ್ ಅಲ್ಲ. ಅವರ ನಿಯಮಿತವಾದ ಯೋಗ ಅವರನ್ನು ಅವರ ದೇಹಸಿರಿಯನ್ನು ಕಾಪಾಡಿಕೊಂಡಿತ್ತು ಎನ್ನಬಹುದು.ಆವಾಗಲೆಲ್ಲಾ ದೊಡ್ಡ ದೇಹವೆಂದರೆ ಖಳರದ್ದು.ಟೈಗರ್ ಪ್ರಭಾಕರ್, ಫೈಟರ್ ಬೋರಯ್ಯ ಮುಂತಾದವರೆಲ್ಲಾ ದೊಡ್ಡ ದೇಹವನ್ನು ಹೊಂದಿ ನಾಯಕರಿಂದ ಏಟು ತಿಂದು ಸೋತು ಮಲಗುತ್ತಿದ್ದರು. ಆದರೆ ಬಾಲಿವುಡ್ ನಲ್ಲಿ ಹಾಗಲ್ಲ. ಅಲ್ಲಿ ಆವಾಗಿನಿಂದಲೂ ಕಟ್ಟು ಮಸ್ತಾದ ದೇಹಕ್ಕೆ ಒಂದು ಮಟ್ಟಗಿನ ಪ್ರಾಧಾನ್ಯತೆ ಇತ್ತೇ ಇತ್ತು.
ಸಲ್ಮಾನ್ ಖಾನ್, ಸಂಜಯ್ ದತ್, ಸುನೀಲ್ ಶೆಟ್ಟಿ, ಆಮೀರ್ ಖಾನ್ ಕಟ್ಟು ಮಸ್ತಾದ ಕೆತ್ತಿದ ಶಿಲ್ಪದಂತಹ ದೇಹಸಿರಿಯೊಂದಿಗೆ ಚಿತ್ರರಂಗಕ್ಕೆ ಕಾಲಿರಿಸಿದವರು. ಆದರೆ ಅದರ ನಡುವೆ ಬಿರುಗಾಳಿಯಂತೆ ನುಗ್ಗಿದ್ದು ಶಾರುಕ್ ಖಾನ್. ಸಾಮಾನ್ಯವರ್ಗದ ಸಾಮಾನ್ಯ ರೂಪಿನ ಸಾಮಾನ್ಯ ದೇಹಸಿರಿಯ ಶಾರುಕ್ ಅವರೆಲ್ಲರನ್ನೂ ಮೀರಿ ಬೆಳೆದುಬಿಟ್ಟರು.ಅವರ ಮುಗುಳ್ನಗೆ, ಅವರ ಹಾವ ಭಾವ ಗಳು ಚಿತ್ರರಸಿಕರನ್ನು ಹುಚ್ಚೆಬ್ಬಿಸಿದ್ದವು.
ಆದರೆ ಅವರೇ ಓಂ ಶಾಂತಿ ಓಂ ಚಿತ್ರಕ್ಕೆ ಮೊಟ್ಟ ಮೊದಲಿಗೆ ಸಿಕ್ಸ್ ಪ್ಯಾಕ್ ಮಾಡಿದರು ನೋಡಿ, ಅಲ್ಲಿಯವೆರೆಗೆ ನೇಪಥ್ಯದಲ್ಲಿದ್ದ ಸಿಕ್ಸ್ ಪ್ಯಾಕ್ ಅಬ್ಸ್ ಎನ್ನುವುದು ಎಲ್ಲರ ಕಣ್ಮನಿಯಾಯಿತು. ಯಾಕೆ ನಾವು ಒಮ್ಮೆ ಪ್ರಯತ್ನಿಸಬಾರದು ಎಂದುಕೊಳ್ಳುವುದಕ್ಕೆ ಕಾರಣ ಇದೆ ಶಾರುಕ್. ಅದೇ ಆಮೀರ್, ಸಲ್ಮಾನ್ ಸಿಕ್ಸ್ ಪ್ಯಾಕ್ ಮಾಡಿದ್ದರೆ ಜನರು ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ. ಆದರೆ ಶಾರುಕ್ ನಮ್ಮ ನಿಮ್ಮಂತೆ ಸಾದಾರಣ ದೇಹಸಿರಿಯ ವ್ಯಕ್ತಿಯಾದ್ದರಿಂದ ಆ ಭಾವನೆ ಜೀವಂತವಾಯಿತು. ತದನಂತರ ಶುರುವಾಯಿತು ಕಲಾವಿದರಲ್ಲಿ ಸಿಕ್ಸ್ ಪ್ಯಾಕ್ ಹುಚ್ಚು. ಒಂದಲ್ಲಾ ಒಂದು ರೀತಿಯಲ್ಲಿ ಸೋತವರು ಗಮನಸೆಳೆಯಲು ಸಿಕ್ಸ್ ಪ್ಯಾಕ್ ದಾರಿ ಕಂಡುಕೊಂಡರು. ಮೂರು ತಿಂಗಳಲ್ಲಿ ಆರು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಮಾಡುವುದು ಹೇಗೆ ಎಂಬುದರ ಬಗ್ಗೆಯಲ್ಲಾ ವರದಿಗಳು, ಲೇಖನಗಳು, ಚಿತ್ರಣಗಳು. ಕಾರ್ಯಕ್ರಮಗಳು ಎಲ್ಲೆಲ್ಲೂ ಹರಿದಾಡಿದವು. ಈವತ್ತು ನಟರಿಗೆ ಇದೊಂದು ಮುಖ್ಯವಾದ ಅಂಗವೆನಿಸಿದೆ.
ಶಾರುಕ್ ನಟನಾಗಿ ಯಶಸ್ಸಾದ ಮೇಲೆ ಸಿಕ್ಸ್ ಪ್ಯಾಕ್ ಮಾಡಿದ್ದರು ಮತ್ತು ಆ ಚಿತ್ರ ಎಲ್ಲ ರೀತಿಯಿಂದಲೂ ಚೆನ್ನಾಗಿತ್ತು. ಆಮೀರ್ ಘಜಿನಿ ಯಲ್ಲಿ ಎಂಟು ಅಬ್ಸ್ ಮಾಡಿದಾಗಲೂ ಚಿತ್ರ ಅದರಿಂದ ಯಶಸ್ವಿಯಾಗಿರಲಿಲ್ಲ.
ಆದರೆ ನಮ್ಮಲ್ಲಿ ಎಲ್ಲರೂ ಹಿಂದೆ ಮುಂದೆ ನೋಡದೆ ಸಿಕ್ಸ್ ಪ್ಯಾಕ್ ಎಂದು ಒದ್ದಾಡುತ್ತಿದ್ದಾರೆ. ಹಾಸ್ಯನಟನಾಗಿ ಅದ್ಭುತ ಯಶಸ್ಸು ಗಳಿಸಿದ ತೆಲುಗು ನಟ ಸುನೀಲ್ ಸಿಕ್ಸ್ ಪ್ಯಾಕ್ ಮಾಡಿಕೊಂಡರಷ್ಟೇ.ಕನ್ನಡದಲ್ಲಿ ಸಂಚಾರಿ ಮಾಡಿ ಸೋತ ರಾಜ್ ಮುಂದಿನ ಚಿತ್ರ ಜಟಾಯು ವಿಗೆ ತಾವೂ ಹೊಟ್ಟೆಯಲ್ಲಿ ಆರು ಭಾಗಗಳ ಚಿತ್ತಾರ ಮಾಡಿಕೊಂಡರು.ಈಗೀಗ ಅಜೇಯ ರಾವ್, ಪ್ರೇಂ ,ಚೇತನ್ ಚಂದ್ರ , ನಟಿ ಮಮತಾ ರಾವತ್...ಹೀಗೆ ಎಲ್ಲರೂ ಸಿಕ್ಸ್ ಪ್ಯಾಕ್ ಹಿಂದೆ ಬಿದ್ದಿದ್ದಾರೆ... ಪ್ರೇಕ್ಷಕನಿಗೆ ಬೇಕಿರುವುದು ಅತ್ಯುತ್ತಮ ಕಥೆಯಿರುವ ಒಳ್ಳೆಯ ಚಿತ್ರವೇ ಹೊರತು ನಟನ ದೇಹ ಸಿರಿಯಲ್ಲ.  ಹಾಗೆಯೇ ನಟ ಜಾಗ್ರತೆ ವಹಿಸಬೇಕಾದದ್ದು ಕಥೆಯ ಆಯ್ಕೆಯಲ್ಲಿ..ಕಲಿಯಬೇಕಾದದ್ದು ಅಭಿನಯವನ್ನು. ಅದೆಲ್ಲವನ್ನೂ ಪಕ್ಕಕ್ಕಿರಿಸಿ ಬರೀ ಹೊಟ್ಟೆಯ ಕಡೆಗೆ ಮಾತ್ರ ಗಮನ ಹರಿಸಿದರೆ ಹೇಗೆ..? ಎಂಬುದೇ  ಪ್ರಶ್ನೆ.
ಸಿಕ್ಸ್ ಪ್ಯಾಕ್ , ದಪ್ಪಗಾಗುವುದು, ಸಣ್ಣಗಾಗುವುದು ಇವೆಲ್ಲವೂ ಆ ಪಾತ್ರಕ್ಕೆ ಬೇಕೇ ಬೇಕಾಗಿದ್ದು ಒಬ್ಬ ಕಲಾವಿದ ಅದಕ್ಕಾಗಿ ಶ್ರಮ ತೆಗೆದುಕೊಂಡರೆ ಅದು ಮೆಚ್ಚಲಾರ್ಹ ಸಂಗತಿಯೇ. ಆದರೆ ಬರೀ ಸಿಕ್ಸ್ ಪ್ಯಾಕ್ ಮಾಡಿದರೆ ಅದೇ ಚಿತ್ರದಲ್ಲಿ ವಿಭಿನ್ನತೆ ಕೊಡುತ್ತದೆ ಎಂದರೆ ಅದು ಒಪ್ಪಿಕೊಳ್ಳಲಾಗದ ಸಂಗತಿ ಎನ್ನಬಹುದು

Tuesday, August 27, 2013

ಇದು ನನ್ನದೇ ಕಥೆ..


ನಾನು ಚಿತ್ರ ಬಿಡಿಸುತ್ತೇನೆ. ಅದು ನನಗೆ ಹುಟ್ಟಿದಾಗಿನಿಂದಲೇ ಬಂದದ್ದು. ಅದನ್ನು ನಾನು ಕಲಿತದ್ದಾದರೂ ಹೇಗೆ? ಅದೆಷ್ಟೇ ನೆನಪಿಸಿಕೊಂಡರೂ ನಂಗೆ ಗೊತ್ತಾಗುತ್ತಿಲ್ಲ. ಆದರೆ ಒಂದನ್ನು ಮಾತ್ರ ಸ್ಪಷ್ಟವಾಗಿ ಹೇಳಬಲ್ಲೆ. ನಂಗೆ ಬುದ್ದಿ ಬಂದಾಗಿಲಿಂದ ನಾನು ಬರೆಯುತ್ತೇನೆ. ಕೈಗೆ ಸಿಕ್ಕಿದ್ದರಲ್ಲಿ ಚಿತ್ರ ಬಿಡಿಸುತ್ತೇನೆ. ಮೊದಲೆಲ್ಲಾ ಇದ್ದಿಲನ್ನು ತೆಗೆದುಕೊಂಡು ಗೋಡೆಯ ಮೇಲೆ ಚಿತ್ರ ಬಿಡಿಸುತ್ತಿದ್ದೆ. ಹೂವುಗಳು, ಚಂದನೆಯ ಸೊಂಟದ ಮೇಲೆ ನೀರಿನ ಬಿಂದಿಗೆ ಹೊತ್ತುಕೊಂಡು ಹೊರಟ ಹೆಂಗಸರು, ಆಟವಾಡುತ್ತಿರುವ ಮಕ್ಕಳು,..ಹೀಗೆ. ಎಲ್ಲವನ್ನು ನನ್ನ ಕಲ್ಪನೆಯೊಂದಿಗೆ ಪುನರ್ರಚಿಸುತ್ತಿದ್ದೆ. ಆವಾಗೆಲ್ಲಾ ನನ್ನನ್ನು ನನ್ನ ಕಲೆಯನ್ನು ಮೆಚ್ಚಿಕೊಳ್ಳದಿದ್ದವರು ಯಾರು?
ಆದರೆ ಬೆಳೆಯುತ್ತಾ ಬೆಳೆಯುತ್ತಾ ಅದು ನನ್ನ ಹವ್ಯಾಸವಾಗಲಿಲ್ಲ.ಅದು ನಾನೇ ಆಯಿತು. ಅದನ್ನೇ ಗಂಭೀರವಾಗಿ ವೃತ್ತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದೆ. ಆವಾಗಲಿಂದ ನನ್ನ ಪರಿಸ್ಥಿತಿ ಬಿಗಡಾಯಿಸಿತು ಎನ್ನಬಹುದು. ಎಲ್ಲಾ ತಲೆಕೆಳಗಾಯಿತು. ಕಲೆಗೆ ಪ್ರಪಂಚದಲ್ಲಿ ಬೆಲೆಯಿದೆ ಆದರೆ ಅದು ಹಣದ ರೂಪದಲ್ಲಿಲ್ಲ ಎಂಬ ಸತ್ಯ ಗೋಚರವಾಗುವಷ್ಟರಲ್ಲಿ ನನ್ನ ಜೀವನದ ಅರ್ಧ ಭಾಗವೇ ಕಳೆದುಹೋಗಿತ್ತು. ಸರಿ ಇನ್ನೇನು ಮಾಡುವುದು. ಮಾಡುವ ಮಾಡಿದ ಕೆಲಸವೆಲ್ಲಾ ಮಣ್ಣು ಎಂಬಂತಾಯಿತು. ಈ ಕಾರಣದಿಂದಲೇ ಎಷ್ಟೋ ಮಹಾನ ಕಲಾವಿದರುಗಳು ಆತ್ಮಹತ್ಯೆ ಮಾಡಿಕೊಂಡದ್ದು ಎನಿಸಿತು. 
ಹೌದು. ಈ ಜಗತ್ತಿನಲ್ಲಿ ನಾನು ಬದುಕಿ ಮಾಡುವಂತಹದ್ದಾದರೂ ಏನು? ಯಾಕಾಗಿ ಬದುಕಬೇಕು.? ನಾನು ಬದುಕಿದರೆ ಸಂತಸ ಪಡುವವರಾದರೂ ಯಾರು? ಸತ್ತರೆ ಯಾರಾದರೂ ಅಳುತ್ತಾರಾ..?
ಎಲ್ಲಾ ಪ್ರಶ್ನೆಗಳಿಗೆ 'ಇಲ್ಲಾ' ಎನ್ನುವ ಒಂದೆ ಉತ್ತರವಾದರೆ, ನಾನಾದರೂ ಯಾಕೆ ಬದುಕಬೇಕು ಎನಿಸಿತು.
ಇಂತಹವು ಅದೆಷ್ಟೋ ಆಲೋಚನೆಗಳು ನನ್ನ ತಲೆಗೆ ಬಂದಾಗ ಅದನ್ನು ಕಾರ್ಯ ರೂಪಕ್ಕೆ ತರಲು ನಾನು ತಡಮಾಡಿದ್ದೆ. ಯಾಕೋ ಇದನ್ನು ತಡ ಮಾಡಬಾರದು ಎನಿಸಿತು.
ನಾನು ಸಾಯಲು ನಿರ್ಧರಿಸಿದೆ. ಆತ್ಮಹತೆಯಂತಹ ಮಹಾಪಾಪಕ್ಕೆ ಕೈ ಹಾಕಲು ಯೋಚಿಸಿದೆ.
ಆದರೆ ಇಲ್ಲಿ ಸತ್ತರೆ ಒಂದಷ್ಟು ಜನಕ್ಕಾದರೂ ನಾನು ಗೊತ್ತು.ಅವರು ಮರುಗುವುದಕ್ಕಿಂತ ಬದುಕಲಾರದೆ ಸತ್ತ..? ಎಂದು ಮೂಗು ಮುರಿಯುವುದು ಶತಸಿದ್ದ. ಹೌದು. ಇಲ್ಲಿಯವರೆಗೆ ಒಂದು ಸ್ವಲ್ಪವೂ ಸಹಾಯಕ್ಕೆ ಬಾರದ ಜನರ ಕೈಯಲ್ಲಿ ಏನೇನೋ ಯಾಕೆ ಮಾತನಾದಿಸಿಕೊಳ್ಳಬೇಕು.
ದೂರದ ಊರಿಗೆ ಹೋಗಿ ಸತ್ತರೆ ಯಾರಿಗೂ ನಾನು ಯಾರು ಎಂಬುದು ಗೊತ್ತಾಗಿವುದಿಲ್ಲ.
ಅದಕ್ಕೆ ನಾನು ದೂರದ ಊರಿನ ಹಾದಿ ಹಿಡಿದೇ.
ಸಾಯಲು ನಿರ್ಧರ್ಸಿದ ಮೇಲೆ ಅದಕ್ಯಾಕೆ ಅವಸರ. ನಿಧಾನಕ್ಕೆ ಸಾವಧಾನಕ್ಕೆ ಸತ್ತರಾಯಿತು ಎಂದುಕೊಂಡೆ. ಹಾಗಂತ ಸಾಯುವ ನಿರ್ಧಾರವನ್ನೇನೂ ಬಿಡಲಿಲ್ಲ. 
ಆದರೆ ಆಕೆ ನನ್ನ ಅಷ್ಟೂ ಯೋಚನೆ ಯೋಜನೆಯನ್ನು ತಲೆಕೆಳಗು ಮಾಡಿಬಿಟ್ಟಿದ್ದಳು. ಅವಳು ವಿಧವೆ. ಒಂಟಿಯಾಗಿದ್ದಳು. ಅಕಸ್ಮಾತ್ತಾಗಿ ಗೊತ್ತು ಗುರಿತಿಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದಿದ್ದಳು. 
ಹೌದು. ನಾನಾಕೆಯ ಪ್ರೀತಿಯಲ್ಲಿ ಬಿದ್ದಿದ್ದೆ. ಸಾವಿನ ತುದಿಯಲ್ಲಿದ್ದವನಿಗೆ ಪಟಾರನೆ ಹಿಂದಕ್ಕೆ ಜಿಗಿಯುವ ಹಂಬಲವಾಯಿತು.ಜಿಗಿದುಬಿಡಲಾ ..? ಬೇಡವಾ..? ಪ್ರಶ್ನೆಗೆ ಉತ್ತರ ಹುಡುಕುವುದೇ ಕಷ್ಟವಾಯಿತು.
2002 ರಲ್ಲಿ ಬಿಡುಗಡೆಯಾದ ಸ್ಪ್ಯಾನಿಷ್ ಭಾಷೆಯಲ್ಲಿ ಜಪೋನ್ ಎನ್ನುವ ಚಿತ್ರವೊಂದಿದೆ.ಕಾರ್ಲೋಸ್ ರೆಯ್ಗದಾಸ್ ಅದರ ನಿರ್ದೇಶಕ. ಆತನ ಹಿಂದಿನ ಚಿತ್ರಗಳಾದ ಬ್ಯಾಟಲ್ ಇನ್ ದಿ ಹೆವನ್, ಸೈಲೆಂಟ್ ಲೈಟ್ ಚಿತ್ರಗಳನ್ನು ನೀವು ನೋಡಿದ್ದರೆ ಆತನ ಬಗ್ಗೆ ಸ್ವಲ್ಪವಾದರೂ ಗೊತ್ತಿರುತ್ತದೆ. ಸ್ವಲ್ಪ ಮಂದಗತಿಯ ನಿರೂಪನೆಯಾದರೂ ಚಿತ್ರದ ಕಥೆಯಲ್ಲಿ ಚಿತ್ರಕಥೆಯಲ್ಲಿ ಅದೆಂತಹದ್ದೋ ಸೆಳೆತವಂತೂ ಇದ್ದೆ ಇರುತ್ತದೆ. ಆತನ ಚಿತ್ರಗಳ ಪಾತ್ರಧಾರಿಗಳೂ ಅಷ್ಟೇ. ತನ್ಮಯರಾಗಿ ನಟಿಸುತ್ತಾರೆ. ಜಪೋನ್ ಚಿತ್ರದಲ್ಲೂ ಅಷ್ಟೇ .. ನಿರೂಪಣೆ ಮತ್ತು ಕಥೆ ನಿಧಾನಕ್ಕೆ ಸಾಗುತ್ತದೆ. ಕಥೆಯ ಹಿಂದು ಮುಂದೆ ನಮಗೆ ಗೊತ್ತಾಗಿಬಿಡುತ್ತದೆ. ಮುಂದೇನೂ ಕುತೂಹಲಗಳು ಉಳಿಯುವುದಿಲ್ಲ. ಆದರೂ ನೀವು ಚಿತ್ರವನ್ನು ಪೂರ್ತಿಯಾಗಿ ನೋಡದೆ ಇರಲಾರಿರಿ.

Thursday, August 22, 2013

ಅಮಾಯಕರ ರಕ್ಷಕ....ಕಾಂಸ್ಟಂಟ್ ಗಾರ್ಡ್ನರ್


ಕಾಂಸ್ಟಂಟ್ ಗಾರ್ಡ್ನರ್ ಚಿತ್ರವನ್ನ ನೋಡಲೇಬೇಕು ಎನ್ನುವುದಕ್ಕೆ ಹಲವಾರು ಕಾರಣಗಳನ್ನು ಕೊಡಬಹುದು. ನಾಲ್ಕು ಆಸ್ಕರ ಪ್ರಶಸ್ತಿಗಳಿಗೆ ನಾಮಾಂಕಿತವಾಗಿದ್ದ ಮತ್ತೊಂದು ನೋಡಲೇಬೇಕಾದ ಚಿತ್ರ ಸಿಟಿ ಆಫ್ ಗಾಡ್ ಚಿತ್ರದ ನಿರ್ದೇಶಕ ಮೆರೆಲ್ಲಿ ಫರ್ನಾ೦ಡಿಸ್ ನಿರ್ದೇಶನದ ಚಿತ್ರವಿದು ಎಂಬುದು ಮೊದಲನೆಯ ಕಾರಣವಾದರೆ ಕಲಾವಿದರ ಅಭಿನಯ, ಹಿನ್ನೆಲೆ ಸಂಗೀತ ಮತ್ತಿವೆಲ್ಲಕ್ಕಿ೦ತ ಹೆಚ್ಚಾಗಿ ಸಂಕಲನಕ್ಕಾಗಿ ಈ ಚಿತ್ರವನ್ನ ನೋಡಲೆಬೇಕಾಗುತ್ತದೆ.
ಇದೊಂದು ಕಾದಂಬರಿ ಆಧರಿಸಿದ ಚಿತ್ರ. ಕಥೆ ಸರಳವಾದದ್ದು. ಬಹುರಾಷ್ಟ್ರೀಯ ಔಷಧ ಕಂಪನಿಗಳ ದೌರ್ಜನ್ಯವನ್ನೂ ಕುರಿತಾದ ಚಿತ್ರವಿದು. ಯಂಡಮೂರಿ ವೀರೇಂದ್ರನಾಥರ ಕಾದಂಬರಿ 'ಪ್ರಾರ್ಥನಾ' ಹಾಗೆ ತಮಿಳಿನ ಜೀವ ಅಭಿನಯದ ಚಲನಚಿತ್ರ 'ಈ' ಚಿತ್ರವೂ ಕೂಡ ಇದೆ ಸಂಬಂಧಿ ಕಥೆಯನ್ನ ಒಳಗೊಂಡಿದ್ದವು.
ಸರ್ಕಾರೇತರ ಸಮಾಜಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ನಾಯಕಿ ತೆಸ್ಸಾಳ ಕೊಲೆ ಕೆನ್ಯಾದಲ್ಲಾಗುತ್ತದೆ.ನಾಯಕ ಹೆಂಡತಿಯ ಕೊಲೆಗೆ ಕಾರಣವನ್ನು ಹುಡುಕುತ್ತಾ ಸಾಗುತ್ತಾನೆ. ಕ್ಷಯ ರೋಗಕ್ಕೆ ಸಂಬಂಧ ಪಟ್ಟ ಔಷಧಗಳ ಪರೀಕ್ಷೆಗಾಗಿ ಕೀನ್ಯಾದ ಅಮಾಯಕ ಜನರನ್ನು ಬಲಿಪಶು ಮಾಡುತ್ತಿರುವ ಔಷಧ ಕಂಪನಿಯ ದುಷ್ಕೃತ್ಯವನ್ನು ತೆಸ್ಸಾ ಬಯಲಿಗೆಳೆಯುವ ಪ್ರಯತ್ನದಲ್ಲಿರುತ್ತಾಳೆ. ಆಕೆಯನ್ನು ತಡೆಯುವ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ದುಷ್ಕರ್ಮಿಗಳಿಗೆ ಅವಳನ್ನು ಕೊಲೆಮಾಡುವುದು ಅನಿವಾರ್ಯವಾಗಿರುತ್ತದೆ. ನಾಯಕ ಒಂದೊಂದೆ ಅಂಶಗಳನ್ನೂ ಬಿಡಿಸುತ್ತಾ ಸಾಗಿದಂತೆ ಮೃತ್ಯು ಅವನನ್ನು ಬೆನ್ನುಬೀಳಲು ಪ್ರಾರಂಭಿಸುತ್ತದೆ.
ಚಿತ್ರದಲ್ಲಿ  ಗಮನ ಸೆಳೆಯುವುದು ನಿರೂಪಣೆ. ಇಡೀ ಚಿತ್ರವನ್ನ ನಾವು ಕಣ್ಣು ಮಿಟುಕಿಸದೆ ನೋಡಬೇಕಾಗುತ್ತದೆ. ವಾಸ್ತವ ಮತ್ತು ಫ್ಲಾಶ್ ಬ್ಯಾಕ್ ಗಳನ್ನ ಕ್ಷಣಾರ್ಧದಲ್ಲಿ ಬದಲಿಸುತ್ತಾ , ಮಿಶ್ರ ಮಾಡುತ್ತಾ ಸಾಗುವ ನಿರ್ದೇಶಕ ನೋಡುಗರಿಗೆ ಗೊಂದಲವನ್ನು೦ಟು ಮಾಡಿಬಿಡುತ್ತಾನೆ. ಹಾಗಾಗಿ ಸಿನೆಮಾವನ್ನೂ ಅರ್ಥೈಸಿಕೊಳ್ಳಲು ಗಮನವನ್ನ ಕೇಂದ್ರಿಕರಿಸುವುದು ಅತ್ಯಗತ್ಯವಾಗುತ್ತದೆ. ಚಿತ್ರದ ಪ್ರಾರಂಭದಲ್ಲಿ ವಿಮಾನ ನಿಲ್ದಾಣದಲ್ಲಿ ಹೆಂಡತಿಯನ್ನೂ ಬೀಳ್ಕೊಡುವ ದೃಶ್ಯದ ಜೊತೆಗೆ ಪಟ್ಟನೆ ಅಪಘಾತದ ದೃಶ್ಯವನ್ನು ತೋರಿಸಿ ವಿಮಾನವೇ ಅಪಘಾತವಾಯಿತೇನೋ ಎಂಬ ಶಾಕ್ ಕೊಡುತ್ತಾನೆ ನಿರ್ದೇಶಕ. ಇದೆ ತಂತ್ರ ಸಿನಿಮಾ ಪೂರ್ತಿ ಮುಂದುವರೆದಿದೆ. ಇಲ್ಲಿ ಸಂಕಲನಕಾರ ಕ್ಲೈರ್ ಸಿಮ್ಪ್ಸೋನ್ ನ ಕೈಚಳಕವನ್ನ ನಾವು ಮೆಚ್ಚಲೇಬೇಕು.
ಇದೆ ಸಿನಿಮಾವನ್ನಾಧರಿಸಿ ಕನ್ನಡಲ್ಲಿ ರಮೇಶ್ ಅರವಿಂದ್ 'ಆಕ್ಸಿಡೆಂಟ್ ' ಎನ್ನುವ ಸಿನೆಮಾ ಮಾಡಿದ್ದರು.

Monday, August 19, 2013

ನರರೂಪಿ ರಕ್ಕಸನನ್ನು ಕಂಡಿರಾ..?

ರಾತ್ರಿಯಾಗಿದೆ.ಆಕೆ ಬಸ್ಸಿಗಾಗಿ ಕಾಯುತ್ತಿದ್ದಾಳೆ. ಅಲ್ಲಿಗೆ ತನ್ನ ವ್ಯಾನ್ ಚಾಲನೆ ಮಾಡಿಕೊಂಡು ಅಲ್ಲಿಗೆ ಆತ ಬರುತ್ತಾನೆ. ಯಾವ ಕಡೆ ಹೋಗಬೇಕು? ಅವನ ಪ್ರಶ್ನೆ. ಅವಳು ಉತ್ತರ ಹೇಳುತ್ತಾಳೆ. ಹೌದು ನಾನು ಅಲ್ಲಿಗೆ ಹೋಗಬೇಕು ಎಂದು ಒಂದು ನಗು ನಗುತ್ತಾನೆ. ಆತ ಮಧ್ಯವಯಸ್ಕ. ಬನ್ನಿ ಡ್ರಾಪ್ ಮಾಡುತ್ತೇನೆ..ಈ ಹೊತ್ತಿನಲ್ಲಿ ಬೇರೆ ಬಸ್ಸು ಬರುವ ಸಾಧ್ಯತೆಯಿಲ್ಲ. ಜೊತೆಗೆ ಈ ಜಾಗ ಸುರಕ್ಷಿತವೂ ಅಲ್ಲ.. ಎಂದಾಗ ಆಕೆ ಅವನನ್ನು ನಂಬಿ ಆತನ ವಾಹನ ಇರುತ್ತಾಳೆ. ಅವನು ಅಷ್ಟು ದೂರ ಹೋಗಿ ಒಂದು ಕೈಯಲ್ಲಿ ಚಾಲನೆ ಮಾಡುತ್ತಲೇ  ಇನ್ನೊಂದು ಕೈಯಿಂದ ಏನನ್ನೋ ಹುಡುಕಲು ತೊಡಗುತ್ತಾನೆ. ಎಲ್ಲಿಟ್ಟೆ ನಾನು..ಅವನಿಗೆ ಹೇಳಿಕೊಳ್ಳುತ್ತಾನೆ. ಅವಳಿಗೆ ಏನೂ ಅರ್ಥವಾಗುವುದಿಲ್ಲ. ಕೊನೆಗೆ ಹುಡುಕಿ ತೆಗೆದರೆ ಅದೊಂದು ಕಬ್ಬಿಣದ ರಾದಿನಂತಹ ಪೈಪು. ರಸ್ತೆಯ ಪಕ್ಕಕ್ಕೆ ವಾಹನ ನಿಲ್ಲಿಸಿ ಅವಳೆಡೆಗೆ ನೋಡುತ್ತಾನೆ. ಆಕೆ ಭಯದಿಂದ ಇವನನ್ನೇ ನೋಡುತ್ತಾಳೆ. "ಯಾಕೆ ಅಷ್ಟೊಂದು ಭಯದಿಂದ ನೋಡುತ್ತಿ..ಈ ಪೈಪನ್ನು ನೀನು ಈ ಮೊದಲು ನೋಡೇ ಇಲ್ಲವಾ..? " ಎನ್ನುತ್ತಾನೆ. ಆಕೆ ಪ್ರತಿಕ್ರಿಯಿಸುವ ಮೊದಲೇ ಅದರಿಂದ ಅವಳ ತಲೆಗೆ ನಾಲ್ಕು ಏಟು ಭಾರಿಸಿಬಿಡುತ್ತಾನೆ. ಆಕೆ ಅಲ್ಲೇ ಸ್ಪಾಟ್ ಔಟ್.
ಅವನು ಹಿಂಸಾ ವಿನೋದಿ.ಅವನು ಕೊಲೆಗಳನ್ನು ವಿನೋದಕ್ಕಾಗಿಯೇ ಮಾಡುತ್ತಾನೆ. ಅದಕ್ಕೆ ಅವನಿಗೆ ಯಾವ ಕಾರಣಗಳೂ ಬೇಕಿಲ್ಲ. ಅವನ ಮುಂದೆ ನೀವು ಯಾವುದೇ ವಿಷಯ ಹೇಳಿ ಕರುಣೆ ಗಿಟ್ಟಿಸಲಾರಿರಿ. ಅವನು ಸುಮ್ಮನೆ ಒಂದೆ ಏಟಿಗೂ ಸಾಯಿಸುವುದಿಲ್ಲ. ಬರ್ಬರವಾಗಿ ಸಾಯುವುದನ್ನು ಸಾಯುವಾಗ ಕಿರುಚುವುದನ್ನು ನೋಡಿ ಖುಷಿಪಡುತ್ತಾ ಸಾಯಿಸುತ್ತಾನೆ. ಕೊಲೆ ಮಾಡಿದ ಮೇಲೂ ಅವನು ಸುಮ್ಮನಿರುವುದಿಲ್ಲ. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವಂತೆ ಸತ್ತವರ ದೇಹದ ಭಾಗಗಳನ್ನು ನಿಧಾನಕ್ಕೆ ಯಾವುದೇ ಧಾವಂತವಿಲ್ಲದೆ ಬೇರ್ಪಡಿಸುತ್ತಾನೆ. ಆನಂತರ ಅವುಗಳನ್ನು ಎಲ್ಲೆಂದರಲ್ಲಿ ಚೆಲ್ಲಿ ಬಿಡುತ್ತಾನೆ. ಅವನ ಗುರಿಯಿರುವುದು ಒಂಟಿ ಮಹಿಳೆಯರ ಮೇಲೆ...ಆಕೆಗೆ ತುಂಬಾ ಪ್ರೀತಿಸುವ ಗಂಡನಿದ್ದಾನೆ..ಆಕೆ ಗರ್ಭಿಣಿ ..ಅದೊಂದು ದುರಾದೃಷ್ಟವಶಾತ್ ಅವನ ಕೈಗೆ ಸಿಕ್ಕಿ ಸಾಯಬಾರದ ಸಾವು ಸಾಯುತ್ತಾಳೆ...ಚಿತ್ರದ ನಾಯಕನಿಗೆ ಅವಳಿಲ್ಲದೆ ಬದುಕಲು ಕಾರಣವಿದೆಯೇ..? ಖಂಡಿತ ಇದೆ...ಅದು ದ್ವೇಷ...ಅವನನ್ನು ಬಿಡಬಾರದು..
ಕೊರಿಯನ್ ಭಾಷೆಯ ನಟ ಮಿನ್ ಸಿಕ್ ಚೊಇ ನಿಮಗೆ ಗೊತ್ತಿರಬಹುದು. ಓಲ್ಡ್ ಬಾಯ್ ಸೂಪರ್ ಹಿಟ್ ಚಿತ್ರದ ನಾಯಕ.  ಅವನದು ಇಲ್ಲಿ ಆ ಹಿಂಸಾ ವಿನೋದಿಯ ಪಾತ್ರ. ಅದ್ಭುತವಾಗಿ ಅಭಿನಯಿಸಿರುವ ಅವನ ಅಭಿನಯ ತಣ್ಣನೆಯ ಕ್ರೌರ್ಯ ಅವನು ನಿಜವಾಗಲೂ ಸೈಕೋ ಇರಬಹುದಾ ಎನ್ನುವ ಅನುಮಾನ ಹುಟ್ಟಿಸದೆ ಇರದು. ಹಾಲಿವುಡ್ ಚಿತ್ರ ದಿ ಲಾಸ್ಟ್ ಸ್ಟಾಂಡ್ ಎನ್ನುವ ಸಾಹಸಮಯ ಚಿತ್ರದ ನಿರ್ದೇಶಕ ಕಿಂ ಜೀ ವೂನ್ ನಿರ್ದೇಶನದ ಈ ಚಿತ್ರದ ಹೆಸರು ಐ ಸಾ ದಿ ಡೆವಿಲ್ ಎಂಬುದಾಗಿದೆ. 2010 ರಲ್ಲೇ ತೆರೆಗೆ ಬಂದ ಈ ಚಿತ್ರ ಅತ್ಯುತ್ತಮ ರೋಮಾಂಚಕ ಚಿತ್ರ. ಎರಡು ಘಂಟೆ ಇಪ್ಪತ್ತು ನಿಮಿಷದಷ್ಟು ಉದ್ದವಿರುವ ಈ ಚಿತ್ರ ಯಾವ ಸಮಯದಲ್ಲೂ ಬೇಸರ ತರಿಸುವುದಿಲ್ಲ. ಅದಕ್ಕೆ ಕಾರಣ ಚಿತ್ರಕಥೆ. ಕ್ಷಣಕ್ಷಣಕ್ಕೆ ಕುತೂಹಲ ಕೆರಳಿಸುತ್ತಾ ಸಾಗುವ ಚಿತ್ರ ಪ್ರತಿ ದೃಶ್ಯದಲ್ಲೂ ಮೈ ನವಿರೇಳಿಸುತ್ತದೆ. ಅಷ್ಟೇ ಅಲ್ಲ..ಅಲ್ಲಲ್ಲಿ ಭಯ ತರಿಸುತ್ತದೆ.
ಕೊರಿಯನ್ ಚಿತ್ರಗಳಲ್ಲಿ ಏನೋ ವಿಶೇಷವಿದ್ದೆ ವಿರುತ್ತದೆ. ಅದರಲ್ಲೂ ಥ್ರಿಲ್ಲರ್ ಚಿತ್ರಗಳ ಕಥಾವಸ್ತು ಮತ್ತು ಚಿತ್ರಕಥೆ ಉತ್ತಮವಾಗಿರುತ್ತದೆ. ಪ್ರತಿ ದೃಶ್ಯ ಮೇಕಿಂಗ್ ಮುಂತಾದವುಗಳ ಬಗ್ಗೆ ಹೆಚ್ಚೆಚ್ಚು ಗಮನವಹಿಸುವ ಅಲ್ಲಿನ ನಿರ್ದೇಶಕರು, ಅಲ್ಲಿನ ಚಿತ್ರಗಳು ಹಾಲಿವುಡ್ ನಲ್ಲೂ ತಮ್ಮ ಛಾಪು ಮೂಡಿಸುತ್ತವೆ. ಈ ಚಿತ್ರ ಥ್ರಿಲ್ಲರ್ ಚಿತ್ರ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ.ನೀವಿನ್ನೂ ನೋಡಿಲ್ಲವಾದರೆ ಈಗಲೇ ನೋಡಿ..ಥ್ರಿಲ್ ಅನುಭವಿಸಿ.

Thursday, August 15, 2013

ಇಂತ ಪ್ರೇಮದ ಪರಿಯ ನಾನರಿಯೆ..



 ಆತ ಸೊಗಸುಗಾರ. ಶ್ರೀಮಂತ.ರಸಿಕ. ಇಡೀ ಊರಲ್ಲೇ ಆತ ತನ್ನ ಸರಸ ಸಲ್ಲಾಪಕ್ಕೆ ಹೆಸರುವಾಸಿಯಾದ ವ್ಯಕ್ತಿ. ಅದೆಷ್ಟು ಸುಂದರಿಯನ್ನು ತನ್ನ ಪಲ್ಲಂಗದಲ್ಲಿ ಶೃಂಗಾರ ಲೋಕದಲ್ಲಿ ವಿಹರಿಸುವಂತೆ ಮಾಡಿದ್ದರೂ ಆತನ ಕಣ್ಣು ಆಕೆಯ ಮೇಲೆ. ಹಾಗಂತ ಆಕೆ ಅವಿವಾಹಿತೆಯಲ್ಲ. ಕಾಮಾತುರಾಣಂ ನ ಭಯಂ ನ ಲಜ್ಜಾ.... ಅದಕ್ಕೆ ಆಕೆ ಒಂದು ಪಣ ಒಡ್ಡುತ್ತಾಳೆ. ಇವನು ಇನ್ನೊಬ್ಬಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕು...ಸೋತರೆ ಆಕೆಗೆ ಸಂಪತ್ತು...ಅವನು ಗೆದ್ದರೆ ಅವಳೇ ಅವನ ಸಂಪತ್ತು. ಇಲ್ಲಿ ಗೆದ್ದ ನಮ್ಮ ಮೊಜುಗಾರನಿಗೆ ಇಬ್ಬರು ಸುಂದರಿಯರು ಸಿಗುತ್ತಾರೆ. ಒಂದು ಆಕೆ ಮತ್ತೊಬ್ಬಳು ಈಕೆ.. ಆದರೆ ಸವಾಲಿನಂತೆ ಗೆಲ್ಲಬೇಕಾದ ಅಪರೂಪದ ಸುಂದರಿ ವಿಧವೆ. ಗಂಡನನ್ನು ಅತಿಯಾಗಿ ಪ್ರೀತಿಸುತ್ತಿದ್ದವಳು. ಗಂಡ ಸತ್ತ ಮೇಲೆ ಇನ್ನೂ ಆತನ ನೆನಪಲ್ಲೇ ವಿಹರಿಸುತ್ತಿರುವವಳು. ಬೇರೆ ಗಂಡಸರನ್ನು ಕಣ್ಣೆತ್ತಿಯೂ ನೋಡದ ಅಪ್ಸರೆಯ ಹೃದಯವನ್ನು ಅಪಹರಿಸುವುದು ಹೇಗೆ...?
ನಾಯಕ ಬಿಡುವ ಹಾಗೆಯೇ ಇಲ್ಲ. ಈಗ ಶುರುವಾಗುತ್ತದೆ ನೋಡಿ ನಿಜವಾದ ಪ್ರೇಮದಾಟ...ಮೋಸದಾಟ..ಇಲ್ಲಿ ಗೆಲ್ಲುವರ್ಯಾರು...? ಸವಾಲಿನಲ್ಲಿ ಇನ್ನೂ ಒಂದು ಷರತ್ತಿದೆ. ರಸಿಕ ಆಕೆಯನ್ನು ತನ್ನವಳಾಗಿ ಮಾಡಿಕೊಳ್ಳಬೇಕು ನಿಜ. ಆದ್ರೆ ಆಕೆಯನ್ನು ತಾನು ಪ್ರೀತಿಸಬಾರದು...
ಮುಂದೆ..?
ಒಂದು ಚಿತ್ರ ಇಷ್ಟವಾಗುವುದು ಏಕೆ..?ಅದರ ಕಥೆ, ಅಭಿನಯ ಚಿತ್ರಕಥೆ ನಾಯಕ ನಾಯಕಿ ಹೀಗೆ. ಅದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಈ ಚಿತ್ರದಲ್ಲಿ ಎಲ್ಲಾ ವಿಭಾಗಗಳ ಕೆಲಸಗಳೂ ಚಂದವೇ. ಚಿತ್ರೀಕರಣ ಸ್ಥಳ ಶೈಲಿ ಸೂಪರ್. ಚಿತ್ರದ ಪ್ರಾರಂಭದಲ್ಲೇ ನಾಯಕನ ಗುಣಾವಗುಣಗಳ ಪರಿಚಯವನ್ನು ಪರಿಚಯಿಸುವ ರೀತಿ ನಿಜಕ್ಕೂ ಅಪ್ಯಾಯಮಾನ.
ಇದು ಡೇಂಜರಸ್ ಲಿಯಾಸಂಸ್ ಚಿತ್ರದ ಕಥಾಸಾರ. ಫ್ರೆಂಚ್ ಕಾದಂಬರಿ ಆಧರಿಸಿದ ಈ ಚಿತ್ರದ ಸೊಬಗಿರುವುದು ದೃಶ್ಯೀಕರಣದಲ್ಲಿ ಮತ್ತು ಕಲಾವಿದರ ಅದ್ಭುತ ಅಭಿನಯದಲ್ಲಿ. .ಜಿನ್ ಹುರ್ ಹೋ ನಿರ್ದೇಶನದ ಈ ಚಿತ್ರಫ್ರೆಂಚ್ ಕಾದಂಬರಿಯನ್ನು ಆಧರಿಸಿದ್ದು. ಇದೆ ಕಾದಂಬರಿಯನ್ನು ಆಧರಿಸಿ ಇಲಿಯವರೆಗೆ ಸುಮಾರಷ್ಟು ಚಿತ್ರಗಳು ಬಂದಿವೆ. 1988 ರಲ್ಲಿ ತೆರೆಗೆ ಬಂದ ಇದೆ ಹೆಸರಿನ ಚಿತ್ರ ಮೂರು ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಕೋರಿಯನ್ ಭಾಷೆಯಲ್ಲಿ ಅನ್ ಟೋಲ್ಡ್ ಸ್ಕ್ಯಾಂಡಲ್ ಎಂಬ ಹೆಸರಿನಲ್ಲಿ ಚಿತ್ರ ಬಂದಿದೆಯಾದರೂ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳು ಜಾಸ್ತಿಯಿವೆ ಹೊರತು ಸೊಬಗಿಲ್ಲ. ಹಾಗಾಗಿ ಈ ಚೀನಾ ಭಾಷೆಯ ಚಿತ್ರವನ್ನು ನೋಡಿದ ಮೇಲೆ ಅದರ ಚಂದ ನಿಮ್ಮನ್ನಾವರಿಸಿ ಕಣ್ಣು ತಂಪು ಮಾಡಿ, ಹೃದಯವನ್ನು ಬೆಚ್ಚಗಾಗಿಸದಿದ್ದರೆ ಕೇಳಿ

Wednesday, August 14, 2013

ಚಿತ್ರಕಥೆಯ ಮೇಲೆ ಚಿಕ್ಕ ಟಿಪ್ಪಣಿ

ಚಿತ್ರಕಥೆ ಎಂದರೇನು..? ಅದನ್ನು ಬರೆಯುವುದು ಹೇಗೆ..?
ಎಂಬೊಂದು ಪ್ರಶ್ನೆ ನನ್ನನ್ನು ಬೆನ್ನತ್ತಿದ್ದು ನಾನು ಪಿಯುಸಿ ಓದುತ್ತಿದ್ದಾಗ.ನಂಜನಗೂಡಿನ ಗ್ರಂಥಾಲಯವನ್ನೆಲ್ಲಾ ಈ ಒಂದು ವಿಷಯಕ್ಕ್ಕಾಗಿ ಹುಡುಕಾಡಿದ್ದೆ. ಸಿನಿಮಾದ ಶೀರ್ಷಿಕೆಯಲ್ಲಿ ಕಥೆ-ಚಿತ್ರಕಥೆ ಎಂದು ಬರುತ್ತಿತ್ತಲ್ಲ...ಕಥೆಗೂ ಚಿತ್ರಕಥೆಗೂ ಏನು ಸಂಬಂಧ ..? ಏನು ವ್ಯತ್ಯಾಸ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತ್ತು. ಅಲ್ಲಿ ಅಂದರೆ ನಂಜನಗೂಡಿನ ಗ್ರಂಥಾಲಯದಲ್ಲಿ ಕೆಲವೇ ಕೆಲವು ಸಿನಿಮಾ ಸಂಬಂಧಿ ಪುಸ್ತಕಗಳಿದ್ದವು. ಆದರೆ ಅವ್ಯಾವೂ ನನಗೆ ತೃಪ್ತಿಕರವಾದ ವಿವರಣೆ ನೀಡಿರಲಿಲ್ಲ.
ಹಾಗೆ ನನಗೆ ಹೊಳೆದದ್ದು .ಸಂಸ್ಕಾರ ಚಲನಚಿತ್ರ. ಹಾಗೆ ಘಟಶ್ರಾದ್ಧ ಚಲನಚಿತ್ರ. ಯಾಕೆಂದರೆ ಅವೆರಡೂ ಕಾದಂಬರಿ ಆಧರಿಸಿದ ಚಿತ್ರಗಳು. ಅಂದರೆ ಕಥೆ ಎಂದರೆ ಕಾದಂಬರಿಯ ರೂಪ. ಚಿತ್ರಕಥೆ ಎಂದರೆ ಸಿನಿಮಾಕ್ಕೆ ಪರಿವರ್ತಿಸಬೇಕಾದಾಗ ಬರೆಯಬೇಕಾದ ಬರಹದ ರೂಪ. ಮೊದಲಿಗೆ ಅವೆರಡೂ ಚಿತ್ರಗಳ ಮೂಲ ಕಾದಂಬರಿಯನ್ನು ನಾಲ್ಕಾರು ಸಾರಿ ಓದಿಕೊಂಡು ಮನನ ಮಾಡಿಕೊಂಡಿದ್ದೆ. ಅಂದರೆ ಅದರ ಪ್ರತಿ ಪುಟವೂ, ಅದರಲ್ಲಿನ ದ್ರವ್ಯವೂ ನೆನಪಿರಬೇಕು ಹಾಗೆ..ಆನಂತರ ಸಿನಿಮಾವನ್ನು ನಾಲ್ಕಾರು ಸಾರಿ ನೋಡಿ ಅದರ ದೃಶ್ಯರೂಪವನ್ನು ನನಗೆ ತೋಚಿದಂತೆ ನೋಟ್ ಮಾಡಿಕೊಂಡಿದ್ದೆ. ಕಾದಂಬರಿಯಲ್ಲಿನ ದೃಶ್ಯಕ್ಕೂ ಸಿನಿಮಾದಲ್ಲಿನ ಚಿತ್ರಣಕ್ಕೂ ತಾಳೆ ಹಾಕುತ್ತಾ ಹೋದಂತೆ ನನಗೆ ಚಿತ್ರಕಥೆ ಎಂಬುದರ ಮೂಲ ಅರಿವಾಗುತ್ತಾ ಹೋಯಿತು. ಆನಂತರ ಕಾದಂಬರಿ ಆಧಾರಿತ ಚಿತ್ರಗಳನ್ನು ಪಟ್ಟಿ ಮಾಡಿಕೊಂಡು ಆ ಕಾದಂಬರಿಗಳನ್ನು ನಂಜನಗೂಡಿನ ಗ್ರಂಥಾಲಯದಲ್ಲಿ ಹುಡುಕಾಡಿದ್ದೆ. ಆನಂತರ ಅದೇ ಕೆಲಸ ಪುಸ್ತಕ ಓದುವುದು..ಸಿನಿಮಾ ನೋಡುವುದು..ರೂಪಾಂತರವನ್ನು ಗಮನಿಸುವುದು...ಸುಮಾರು ಚಿತ್ರಗಳನ್ನು ಕಾದಂಬರಿಗಳನ್ನು ಓದಿ ನೋಡಿ ತಾಳೆ ಹಾಕಿದ ನಂತರ ಚಿತ್ರಕಥೆಯ ಅಂದಾಜು ಬಂದಿತ್ತು.
ಅಂದರೆ ಕಥೆಯನ್ನು ಚಿತ್ರೀಕರಣಕ್ಕೆ ಅನುವು ಮಾಡುವ, ಅದನ್ನು ಸಿನಿಮಾ ರೂಪಕ್ಕೆ ತರುವ ಪ್ರಕ್ರಿಯೆಯ ಬರಹ ರೂಪವೇ ಚಿತ್ರಕಥೆ ಎನಿಸಿತು.
ಆಮೇಲೆ ಬಿಡಿ. ಸುಮಾರು ಪುಸ್ತಕಗಳನ್ನು ಸಿನಿಮಾಗಳನ್ನು ನೋಡಿದೆ. ಅದರ ಬಗ್ಗೆ ಸಾಕಷ್ಟು ಅದ್ಯಯನ ಕೂಡ ಮಾಡಿದೆ.
ಹಾಗೆ ಒಂದು ಅದ್ಭುತವಾದ, ಯಶಸ್ವಿಯಾದ  ಚಿತ್ರಕಥೆ ರಚಿಸುವುದು ಹೇಗೆ,,? ಎಂಬೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ ನೀವು/ನಾವು ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲ.
ಕಥೆಗೆ ಪೂರಕವಾದ ಚಿತ್ರಕಥೆಯನ್ನಷ್ಟೇ ರಚಿಸಲು ಸಾಧ್ಯವೇ ಹೊರತು, ಯಶಸ್ವಿ ಅಥವಾ ಅದ್ಭುತ ಚಿತ್ರಕಥೆ ರಚಿಸಲು ಯಾವುದೇ ಸಿದ್ದ ಸೂತ್ರಗಳಿಲ್ಲ. 
ಒಂದು ಕಥೆಯನ್ನು ಆಸಕ್ತಿಕರವನ್ನಾಗಿ ಮಾಡುವ ಪ್ರಕ್ರಿಯೆಗೆ ಚಿತ್ರಕಥೆಗಾರನಲ್ಲಿ ಒಂದು ಅನುಭವ, ಸಿನಿಮಾ ನೋಡುಗನಿಗಿರುವ ದೃಷ್ಟಿ, ಆಸಕ್ತಿ ಎಲ್ಲವೂ ಇರಬೇಕಾಗುತ್ತದೆ. ಸುಮ್ಮನೆ ನಮ್ಮ ಕಲ್ಪನೆಯ ಚಿತ್ರಕಥೆಯನ್ನು ರಚಿಸಿ ಸಿನಿಮಾ ಮಾಡಿದರೆ ಅದು ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ.  ನಮ್ಮಲ್ಲಿ ಸುಮಾರು ಅದೇ ರೀತಿಯಾಗುತ್ತದೆ. ನನಗೆ ಗೊತ್ತಿರುವಂತೆ ಸುಮಾರು ಜನ ಚಿತ್ರಕರ್ಮಿಗಳು ಚಿತ್ರಕಥೆ ರಚಿಸುವಾಗ ಚರ್ಚೆ ಮಾಡುವುದಿಲ್ಲ. ಸುಮ್ಮನೆ ತಾವಂದು ಕೊಂಡದ್ದೇ ಅಂತಿಮ ಎನ್ನುವ ರೀತಿ ನಿರ್ಣಯ ಮಾಡಿಬಿಡುತ್ತಾರೆ. ಆದರೆ ಕಡಿಮೆಯೆಂದರೂ ಲಕ್ಷ್ಯಗಟ್ಟಲೆ ಹಣ ವ್ಯಯವಾದ ತಿಂಗಳುಗಟ್ಟಲೆ ಬೆವರು ಸುರುಸಿದ ಅರವತ್ತಕ್ಕೂ ಹೆಚ್ಚು ಜನರು ದುಡಿದ ಹಲವರ ಕನಸಿನ ಕೂಸಾದ ಚಿತ್ರಗಳು ಹೇಳ ಹೆಸರಿಲ್ಲದಂತೆ ನೆಲ ಕಚ್ಚಿದಾಗಲೆಲ್ಲಾ ಅದೆಷ್ಟು ನಷ್ಟವಾಗುತ್ತದೆ ನೀವೇ ಯೋಚಿಸಿ. ಸಿನಿಮಾದ ಗಲ್ಲಾ ಪೆಟ್ಟಿಗೆಯ ವಿಷಯ ಬಿಡಿ. ನೋಡಿದ ಕೆಲವರಿಗಾದರೂ ಪರವಾಗಿಲ್ಲ ಎನಿಸದಿದ್ದರೆ ಅದೆಂತ ಸಾಧನೆ ಎನಿಸುತ್ತದೆ ನನಗೆ. ಸುಮ್ಮನೆ ಏನೋ ಒಂದು ಕಥೆ ಮಾಡಿ, ಚಿತ್ರಕಥೆ ರಚಿಸಿ, ಹೇಗೋ ನಿರ್ಮಾಪಕರ ಕೈಯಲ್ಲಿ ಹಣ ಚೆಲ್ಲಿಸಿ ಸಿನೆಮಾ ಮಾಡುವುದಕ್ಕಿಂತ ಸ್ವಲ್ಪ ಯೋಚಿಸಿ, ಅದ್ಯಯನ ಮಾಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದರಿಂದ ಅವರಿಗೆ, ಚಿತ್ರರಂಗಕ್ಕೆ ಲಾಭವಿದೆ.
ಮೊನ್ನೆ ಒಂದು ಸಿನೆಮಾದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ದುಂಡಿರಾಜ್ ಬರೆದ ಹೆಸರುವಾಸಿ ಹನಿಗವನವನ್ನೇ ನಾನು ಬರೆದದ್ದು ಅಂದರೆಂದು ಪತ್ರಿಕೆಯಲ್ಲಿ ಪ್ರಕಟವಾಯಿತು. ಸಾಹಿತ್ಯದ ಬಗ್ಗೆ ಅಷ್ಟೂ ಅರಿವಿರದ ನಿರ್ದೇಶಕರು ಹೇಗೆ ತಮ್ಮ ಚಿತ್ರದ ಕಥೆ,ಚಿತ್ರಕಥೆ, ಸಂಭಾಷಣೆಯನ್ನು ರಚಿಸಿರಬಹುದೆಂಬ ಕುತೂಹಲ ನನಗೂ ಇದೆ.
ನಮ್ಮ ಚಿತ್ರದ ವಿಷಯಕ್ಕೆ ಬಂದರೆ ಒಂದು ಸಾದಾರಣ ಬಜೆಟ್ಟಿನಲ್ಲಿ ಥ್ರಿಲ್ಲರ್ ಮಾಡೋಣ ಎಂದು ಹೊರಟಾಗ ಚಿತ್ರಕಥೆ ಸ್ವಲ್ಪ ಕುತೂಹಲಕಾರಿಯಾಗಿರಲಿ ಎನಿಸಿತ್ತು. ಹಾಗಾಗಿ ಚಿತ್ರಕಥೆಗಾಗಿ ಮೂರು ತಿಂಗಳುಗಳ ಚರ್ಚೆ ಮಾಡಿದ್ದೆವು. ಆದರೆ ಚಿತ್ರ ಮುಗಿದು ಸಂಕಲನ ಮೇಜಿನ ಮೇಲೆ ಚಿತ್ರ ನೋಡಿದಾಗ ಮೊದಲಾರ್ಧ ಸ್ವಲ್ಪ ಮಂದಗತಿ ಎನಿಸಿತು. ಎಲ್ಲರೂ ಅದನ್ನು ಕತ್ತರಿಸಿ ಎಂದೇ ಸಲಹೆ ಕೊಟ್ಟರೂ ನಾನು ಸುಮ್ಮನಿದ್ದೆ. ಆದರೆ ನಾಲ್ಕಾರು ಜನರಿಗೆ ತೋರಿಸಿದಾಗ ಅದೇ ಅಭಿಪ್ರಾಯ ಬಂದಿತ್ತು. ವಿಧಿಯಿಲ್ಲದೇ ಮೊದಲಾರ್ಧದಲ್ಲಿ ಕಥೆಗೆಲ್ಲೂ ಧಕ್ಕೆಯಾಗದಂತೆ ಕತ್ತರಿ ಪ್ರಯೋಗ ಮಾಡಿದ್ದೆ.
ಈ ಚಿತ್ರಕಥೆ ಎಂಬ ಸಿನಿಮಾದ ಜೀವಾಳ ಯಾವತ್ತಿಗೂ ಒಂದು ಸ್ಪಷ್ಟ ರೂಪ ತಾಳಿಲ್ಲವಾದರೂ ಅದಕ್ಕೆ ಅದರದೇ ಆದ ಸ್ವರೋಪವಂತೂ ಇದ್ದೆ ಇದೆ. ಅದೇನು ಎಂಬುದಕ್ಕೆ ನಾವು ಒಳ್ಳೆಯ ನೋಡುಗರಾಗಿರಬೇಕು ಎಂದೆನಿಸುತ್ತದೆ ನನಗೆ.ಮೊನ್ನೆ ಗೆಳೆಯ ವಾಸುಕಿ ಸಿಕ್ಕಿ ಚಿತ್ರಕಥೆಯ ಬಗ್ಗೆ ಒಂದಷ್ಟು ಚರ್ಚಿಸಿದರು. ಈವತ್ತಿಗೆ ಗೂಗಲ್ ನಮಗೆ ಎಲ್ಲವನ್ನೂ ಹುಡುಕಿಕೊಡುತ್ತದೆ. ಬರೆಯುವ ಶೈಲಿ, ಅದು ಹೇಗಿರಬೇಕು ಹಾಗಿರಬೇಕು ಅದು ಹಾಗಿತ್ತು ಎಂಬೆಲ್ಲಾ ವಿವರವನ್ನೂ ಕೊಡುತ್ತದೆ. ಆದರೆ ಅನುಭವ ಎಂಬುವುದನ್ನು ಅದೇಗೆ ಕೊಡಲು ಸಾಧ್ಯ ಹೇಳಿ.
ಮೊನ್ನೆ ಟೋನಿ ಚಿತ್ರ ನೋಡುವಾಗ ನನಗನ್ನಿಸಿದ್ದು ಇದೆ. ನಿರ್ದೇಶಕರು ಒಂದು ಒಳ್ಳೆಯ ಥ್ರಿಲ್ಲರ್ ಮಾಡಿದ್ದಾರೆ. ಮುಖ್ಯ ವಾಹಿನಿಯ ಕಥೆಗಳು ಮತ್ತು ಅದಕ್ಕೆ ಬೇಕಾದ ಹಿನ್ನೆಲೆಗಳು ಚೆನ್ನಾಗಿಯೇ ಇವೆ. ಚಿತ್ರದ ಪ್ರಾರಂಭದಲ್ಲಿ ಅದನ್ನು ತೋರಿಸುತ್ತಾ ಮಧ್ಯ ಮಧ್ಯ ನಾಯಕನ ಹಿನ್ನೆಲೆ ವ್ಯಕ್ತಿತ್ವ ಪರಿಚಯ ಮಾಡಿಕೊಡುತ್ತಾ ಸಾಗಿ ಅಂತ್ಯ ಬರುವಷ್ಟರಲ್ಲಿ ಅವನನ್ನು ಸಂಪೂರ್ಣ ಪರಿಚಯಿಸಿ ಈಗ ನಡೆಯುತ್ತಿರುವ ಘಟನೆ ಮುಂದೇನಾಗುತ್ತದೆ ಎಂಬುದನ್ನು ಅರಿವು ಮಾಡಿಸಿದ್ದರೆ ಸಾಕಾಗಿತ್ತು. ಆದರೆ ಚಿತ್ರದ ರೋಚಕತೆಯನ್ನು ಬೇಕಿರದ ಚಿತ್ರದ ಗತಿಗೆ ಪೂರಕವಾಗಿಲ್ಲದ ಉಪಕಥೆಗಳನ್ನೂ ತುರುಕುವುದರ ಮೂಲಕ ಕೊಂದುಹಾಕಿದ್ದಾರೆ. ಏನಾಗಿ ಹೊಯಿತಪ್ಪಾ  ಎನ್ನುವ ಉದ್ಗಾರ ಪ್ರೇಕ್ಷಕನಿಂದ ಬರುವ ಮುನ್ನವೇ ಅದನ್ನು ಉದ್ದ ಮಾಡುತ್ತಾ ಮಾಡುತ್ತಾ ಅದೇನೂ ಆಸಕ್ತಿಕರವಾದುದಲ್ಲ ಎನಿಸಿಬಿಡುತ್ತಾರೆ. ನನ್ನ ಪ್ರಕಾರ ಇದಕ್ಕೆ ನೇರ ಕಾರಣ ಚಿತ್ರಕಥೆಗಾರ. ಇಡೀ ಸಿನೆಮಾದ ಆಶಯ, ಅದರ ಭಾವವನ್ನು ಮನದಲ್ಲಿರಿಸಿಕೊಂಡು ಒಬ್ಬ ಪ್ರೇಕ್ಷಕನಾಗಿ ಚಿತ್ರವನ್ನು ಅನುಭವಿಸಿ ಆನಂತರ ಬರಹರೂಪಕ್ಕಿಳಿಸಿದ್ದರೆ ಚಿತ್ರ ಕನ್ನಡದ ಫೋನ್ ಬೂತ್ ಆಗುತ್ತಿತ್ತೇನೋ?
ಒಂದು ಸಸ್ಪೆನ್ಸ್ ಥ್ರಿಲ್ಲರ್ ಎಂದಾಗ ಕೊನೆಯ ಹಂತದ ರೋಚಕತೆ ಮತ್ತು ಬಯಲಾಗುವ ರಹಸ್ಯ ಬಹು ಮುಖ್ಯ ಪಾತ್ರವಹಿಸುತ್ತದೆ. ಆಮೇಲಿನದ್ದೆಲ್ಲಾ ಸುಮ್ಮನೆ ವಂದನಾರ್ಪಣೆ ಅಷ್ಟೇ. ಆದರೆ ಅಂತ್ಯವನ್ನೇ ವಂದನಾರ್ಪಣೆ ಮಾಡಿ ವಂದನಾರ್ಪಣೆಯನ್ನೇ ಅಂತ್ಯ ಮಾಡಿದರೆ ..?
ಇದು ಸುಮ್ಮನೆ ಉದಾಹರಣೆ ಅಷ್ಟೇ. ಅಂದರೆ ಯಾರೋ ಅನಾಮಿಕನೊಬ್ಬ ನಾಯಕನ ಹುಡುಗಿಯನ್ನು ಅಪಹರಿಸಿ ಅವನಿಗೊಂದು ಫೋನ್ ಕೊಟ್ಟು ನಾನು ಹೇಳಿದ ಕೆಲಸವನ್ನು ಸರಿ ತಪ್ಪೆನ್ನೆದೆ ಮಾಡಿದರೆ ನಿನ್ನ ಹುಡುಗಿ ನಿನಗೆ ಸಿಗುತ್ತಾಳೆ ಎಂದಾಗ ನಾಯಕ ಮಾಡುವ ಕೆಲಸಗಳು ಆ ತಲ್ಲಣಗಳಿಗಿಂತ ರೋಚಕತೆ ಏನಿತ್ತು ಹೇಳಿ..? ಆದರೆ ಅದರ ನಡುವಿನ ಭೂಮಿ ಕಥೆ ಮತ್ತು ಜನಪದ ಕಥೆಗಳು ಆಪ್ತವಾಗಿದ್ದರೂ ಟೋನಿ ಚಿತ್ರಕ್ಕೆ ಆತ್ಮೀಯವಾಗದೆ ಚಿತ್ರದ ಗತಿಯನ್ನು ಕಮ್ಮಿ ಮಾಡಿವೆ ..
ಹಾಗಾಗಿ ಚಿತ್ರಕಥೆಯನ್ನು ರಚಿಸುವ ಮುನ್ನ ಚಿತ್ರದ ಒಟ್ಟಾರೆ ಚಿತ್ರಣದ ಭಾವ ನಮ್ಮಲ್ಲಿದ್ದಾಗ ಅದಕ್ಕೆ ತಕ್ಕಂತೆ ದೃಶ್ಯ ರಚಿಸುತ್ತಾ ಸಾಗಬಹುದೇನೋ..?

Monday, August 5, 2013

ಕನ್ನಡದಲ್ಲಿ ಸಬ್ ಟೈಟಲ್ ಮಾಡುವುದು ಹೀಗೆ..

ಕಳೆದ ವಾರದ ಕನ್ನಡ ಅಡಿಬರಹ ಕುರಿತಾದ ಲೇಖನವನ್ನು ಹಲವಾರು ಗೆಳೆಯರು ಮೆಚ್ಚಿದ್ದಷ್ಟೇ ಅಲ್ಲ ತಾವೂ ಕೂಡ ಮಾಡಲು ಮುಂದೆ ಬಂದಿದ್ದಾರೆ. ಹಾಗಾಗಿ ನನಗೆ ಒಂದು ದೊಡ್ಡ ಶಕ್ತಿ ಬಂದಂತಾಗಿದೆ. ಯಾವ ಯಾವ ಚಿತ್ರಗಳಿಗೆ ಅಡಿಬರಹ ಮಾಡುವುದು ಎಂಬ ಪಟ್ಟಿಯ ಸಿದ್ಧತೆಯಲ್ಲಿದ್ದೇನೆ.
ಅಡಿಬರಹ ಮಾಡುವುದು ತುಂಬಾ ಸುಲಭ. ಅದಕ್ಕೆ ಬೇಕಿರುವುದು ಮೊದಲಿಗೆ ಆಸಕ್ತಿ ಮತ್ತು ಎರಡನೆಯದಾಗಿ ಕಂಪ್ಯೂಟರ್.ಅದನ್ನು ಮಾಡುವ ಬಗೆಯನ್ನು ಚಿಕ್ಕ ವಿವರಣೆಯ ಮೂಲಕ ಈ ವೀಡಿಯೊದಲ್ಲಿ ತೋರಿಸಿದ್ದೇನೆ. ಒಮ್ಮೆ ನೋಡಿದರೆ ಸಾಕು ನಿಮಗೆ ಅರ್ಥವಾಗಿ ಬಿಡುತ್ತದೆ.

ಇಷ್ಟೇ.ಇದನ್ನು ಮಾಡಿದ ನಂತರ ಪ್ಲೇಯರ್ಗಳಲ್ಲಿ ಪ್ರಿಫರೆನ್ಸಸ್ ಇರುವ ಕಡೆ ಅಡಿಬರಹದ ಲಿಪಿಯನ್ನು ಕನ್ನಡಕ್ಕೆ ಬದಲಾಯಿಸಿದರಾಯಿತು. ಹಾಗೆಯೇ ಇದನ್ನು ಡಿವಿಡಿ ಪ್ಲೇಯರ್ ಗಳಲ್ಲಿ ತೋರಿಸಬೇಕೆಂದರೆ ನಾವು ಅಡಿಬರಹವನ್ನು ವೀಡಿಯೊಗೆ ಎಂಬೆಡ್ ಮಾಡಿದರಾಯಿತು. ಅದಕ್ಕೆ ಉಚಿತವಾಗಿಯೇ ಸಿಗುವ ಹಲವಾರು ತಂತ್ರಾಂಶಗಳಿವೆ. ಹಾಗೆಯೇ ವಿ.ಎಲ್.ಸಿ ಮೀಡಿಯಾ ಪ್ಲೇಯರ್ ನಲ್ಲಿ ಕೂಡ ನಾವು ಎಂಬೆಡ್ ಮಾಡಬಹುದು.ಈ ವೀಡಿಯೊ ವನ್ನು ನೀವು ಯುಟ್ಯೂಬ್ ನಲ್ಲಿ ಈ ಕೊಂಡಿಯನ್ನು ಕ್ಲಿಕ್ ಮಾಡುವುದರ ಮೂಲಕವೂ ನೋಡಬಹುದು.
http://youtu.be/FvNtPkJTMO0
ಮತ್ತೆ ಮತ್ತೆ ದಿ ಕಲರ್ ಆಫ್ ಪ್ಯಾರಡೈಸ್ ಚಿತ್ರವನ್ನು ಕನ್ನಡದ ಅಡಿಬರಹದ ಮುಖಾಂತರ ನೋಡಿದೆ. ಅದೇನೋ ಅದರ ಅನುಭವವೇ ಬೇರೆ ಎನಿಸಿತು. ಆನಂತರ  ಬಿಹೈಂಡ್ ದಿ ಸನ್ ಚಿತ್ರವನ್ನು ಈ ಮೊದಲಿಗೆ ನೋಡಿದ್ದೆನಾದರೂ ವಸುಧೇಂದ್ರ ತಾವು ಮಾಡಿದ ಕನ್ನಡ ಅಡಿಬರಹವನ್ನು ಕೊಟ್ಟ ಮೇಲೆ ಮತ್ತೊಮ್ಮೆ ನೋಡಿದೆ. ನಿರ್ದೇಶಕ ವಾಲ್ಟರ್ ಸಾಲ್ಸ್ ಬಗ್ಗೆ ನೀವು ಕೇಳಿರಬಹುದು. ಚೆಗುವಾರ ನ ಕಥೆಯಾಧಾರಿತ ದಿ ಮೋಟಾರ್ ಸೈಕಲ್ ಡೈರೀಸ್ ಚಿತ್ರವನ್ನು ತೆರೆಗೆ ತಂದ ಅದ್ಭುತ ನಿರ್ದೇಶಕ. ಅವನ ಸೆಂಟ್ರಲ್ ಸ್ಟೇಷನ್ ಚಿತ್ರದ ಸೊಬಗೆ ಬೇರೆ. ಈ ಚಿತ್ರವೂ ಸಹ ವಾಲ್ಟರ್ ನಿರ್ದೇಶನದ ಚಿತ್ರ.ಒಂದು ದ್ವೇಷದ ಕಥೆಯನ್ನು ಮಾನವೀಯ ಸಂಬಂಧಗಳ ಸೂಕ್ಷ್ಮಗಳ ಅಡಿಪಾಯದ ಜೊತೆಗೆ ತೆರೆಗೆ ತಂದಿರುವ ಪರಿ ಅನನ್ಯವಾದದ್ದು . ಚಿತ್ರವನ್ನು ನೋಡಿ ಅನುಭವಿಸಿದರಷ್ಟೇ ಚಂದ. ಅದರಲ್ಲೂ ನನ್ನ ಮೆಚ್ಚಿನ ಬರಹಗಾರ ವಸುಧೇಂದ್ರರ ಅಡಿಬರಹದ ಜೊತೆ ನೋಡುವುದೂ ಇನ್ನೂ ಖುಷಿ ತರುವ ಸಂಗತಿ ಎನ್ನಬಹುದು. ಆ ಚಿತ್ರವನ್ನು ನೋಡಿಲ್ಲವಾದರೆ ಒಮ್ಮೆ ನೋಡಿ. ಬೇಕಿದ್ದರೆ ಕನ್ನಡದ ಅಡಿಬರಹಕ್ಕೆ ಇಮೇಲ್ ಮಾಡಿದರೆ ಕಳುಹಿಸುತ್ತೇನೆ.ನೀವು ಯಾವ ಚಿತ್ರಕ್ಕೆ ಅಡಿಬರಹ ಮಾಡಲು ಸಿದ್ಧರಿದ್ದೀರಾ ಎಂಬುದೇ ಈ ಸಲದ ಪ್ರಶ್ನೆ..?