Saturday, March 23, 2013

ಯಕುಜಾ -ಸರಣಿಗಳು

 ತಕೆಷಿ ಕಿತನೋ ಜಪಾನಿ ಭಾಷೆಯ ಹೆಸರುವಾಸಿ ನಿರ್ದೇಶಕ. ಇಟಲಿಯ ಮಾಫಿಯ, ನಮ್ಮಲ್ಲಿನ ಭೂಗತ ಲೋಕ ಇರುವಂತೆ ಜಪಾನಿನ ಸಂಘಟಿತ ಅಪರಾಧಲೋಕವನ್ನು ಯಕುಜ ಎಂದು ಕರೆಯುತ್ತಾರೆ. ಜಪಾನೀ ಭಾಷೆಯಲ್ಲಿ ಅತಿ ಹೆಚ್ಚು ಯಕುಜಾ ಸಂಬಂಧಿ ಚಿತ್ರದಲ್ಲಿ ತೊಡಗಿಸಿಕೊಂಡವನೆಂದರೆ ಇದೆ ತಕೆಷಿ ಕಿತನೋ. ಆತನ ಸೋನತೈನ್ [1993], ಬ್ರದರ್[2000], ಔಟ್ ರೇಜ್[2010], ಔಟ್ ರೇಜ್ ಬೇಯೊಂಡ್[2012]  ಈ ನಿಟ್ಟಿನಲ್ಲಿ ಬಂದ ಪ್ರಸಿದ್ಧ ಚಿತ್ರಗಳು.
ಔಟ್ ರೇಜ್ ಚಿತ್ರ ಡ ಕಥೆ ತುಂಬಾ ಸರಳವಾದದ್ದು. ಜಪಾನೀ ಭೂಗತ ದೊರೆಗಳ ಅಥವಾ ಸಂಘಟಿತ ಅಪರಾಧಲೋಕದ ಮುಖ್ಯಸ್ಥರ ನಡುವೆ ಕಥೆ ಚಿತ್ರದ್ದು.
ಒಬ್ಬ ಬಾಸ್, ನಮ್ಮಲ್ಲಿನ ಡಾನ್ ಎಂದುಕೊಳ್ಳಿ. ಇಡೀ ನಗರದ ಸಮಸ್ತ ದಂಧೆಯೂ ಅವನ ಕೈಯಲ್ಲೇ ಇದೆ. ಎಲ್ಲಾ ಬಾರ್ಅಂಡ್ ರೆಸ್ಟೋರೆಂಟ್, ಮಾದಕ ವಸ್ತು ಸಾಗಣೆ, ಲೈವ್ ಬಾಂಡ್ ಗಳು ಆತನವು ಅಥವಾ ಅವನ ಕೈಕೆಳಗೆ ಇರುವಂತಹವು. ನಗರದಲ್ಲಿ ಇವರ ವಿರುದ್ಧದ ಗ್ಯಾಂಗ್ ಒಂದು ತನ್ನ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದಾಗ ಅದನ್ನು ಮಟ್ಟಹಾಕಲು ಆ ಡಾನ್ ಒಂದು ಕಾರ್ಯ ತಂತ್ರ ರೂಪಿಸುತ್ತಾನೆ. ಇದರಲ್ಲಿ ನಾಯಕನ ಪಾತ್ರವೇನೂ ಇರುವುದಿಲ್ಲ. ಆದರೂ ತನ್ನ ಬಾಸ್ ನ ಅಣತಿಯಂತೆ ಅವನು ಹೇಳಿದ ಕೆಲಸವನ್ನ ಮಾಡುತ್ತಾನೆ. ಆದರೆ ನಾರದ ಬುದ್ದಿಯ ಬಾಸ್ ನ ತಂತ್ರವೇ ಬೇರೆ ಇರುತ್ತದೆ. ಈಗ ನಾಯಕ ಬಲಿಪಶುವಾಗುತ್ತಾನೆ. ಮುಂದೆ ದ್ರೋಹ ಮೋಸ ಅನ್ಯಾಯ ಕೊಲೆ ಮುಂತಾದವುಗಳು ನಡೆಯುತ್ತವೆ.ಇದು ಎಲ್ಲಾ ಚಿತ್ರದಲ್ಲೂ ಇರುವ ಕಥೆ ಇದೆ. ಅದರಲ್ಲೂ ಒಂದು ಭೂಗತಲೋಕದ ಕಥೆಯನ್ನೂ ತೆರೆದಿಡುವ ಸಿನೆಮಾಗಳಲ್ಲಿ ಈ ತರಹದ ಕಥೆ ಇದ್ದೆ ಇರುತ್ತದೆ. ಆದರೂ ಚಿತ್ರಗಳು ಭಿನ್ನ ಎನಿಸುವುದು ಅದರ ನಿರೂಪಣೆಯಿಂದ. ಇಲ್ಲಿ ತಕೆಷಿ ಕಿತನೋ ನಾಯಕನಾಗಿಯೂ ಅಭಿನಯಿಸಿದ್ದಾರೆ. ಪ್ರಾರಂಭದಲ್ಲಿ ಸ್ವಲ್ಪ ನಿಧಾನಗತಿ ಎನಿಸಿದರೂ ಚಿತ್ರ ಮುಂದುವರೆದಂತೆ ಕಥೆಯ ಹಂದರ ನಮ್ಮನ್ನು ಹಿಡಿದುಕೂರಿಸಿಬಿಡುತ್ತದೆ. ನಿರೂಪಣೆಯಂತೂ ಸೂಪರ್. ಹಿನ್ನೆಲೆ ಸಂಗೀತ ಮತ್ತು ಕ್ಯಾಮೆರಾ ಚಲನೆ ನಮ್ಮನ್ನು ಕುರ್ಚಿಯಿಂದ ಅಲುಗಾಡಲು ಬಿಡುವುದಿಲ್ಲ. ಅದರಲ್ಲೂ ಕೊನೆಯ ಇಪ್ಪತ್ತು ನಿಮಿಷದಲ್ಲಿ ಎಲ್ಲವೂ ನಿರೀಕ್ಷಿತ ಎನಿಸಿದರೂ ಚಿತ್ರ ನೋಡದೆ ಇರಲು ಸಾಧ್ಯವಿಲ್ಲ. ತಕೆಷಿ ಕಿತನೋ ಅಭಿನಯ ಆತನ ಸಂಭಾಷಣೆ ಹೇಳುವ ಪರಿ ತುಂಬಾ ಪರಿಣಾಮಕಾರಿ. ಹತ್ಯೆಯ ದೃಶ್ಯಗಳು ಮತ್ತದರ ಚಿತ್ರೀಕರಣ ಥ್ರಿಲ್ಲಿಂಗ್ ಆಗಿದೆ.
ಔಟ್ ರೇಜ್ ಬೇಯೊಂಡ್ 2012 ರಲ್ಲಿ ತೆರೆಗೆ ಬಂದ ಔಟ್ ರೇಜ್ ನ ಮುಂದುವರೆದ ಭಾಗದ ಕಥೆ. ಎರಡು ಪ್ರಬಲ ಗ್ಯಾಂಗುಗಳು ಕಾರ್ಯ ತತ್ಪರವಾಗಿದ್ದಾಗ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುವುದು. ಇಬ್ಬರು ಬಡಿದಾಡಿಕೊಂಡು ಯಾರು ಸಾಯುತ್ತಾರೆ, ಯಾರು ಉಳಿಯುತ್ತಾರೆ ನೋಡುವುದು ಸತ್ತವರಿಗೆ ನಮಸ್ಕಾರ ಉಳಿದವರರಿಗೆ ಅಂತ್ಯಸಂಸ್ಕಾರ ಮಾಡುವುದು. ಇದು ಅಲ್ಲಿನ ಪೋಲಿಸ್ ಅಧಿಕಾರಿಯೊಬ್ಬನ ಸೂತ್ರ. ಹಾಗಾಗಿ ಯಕುಜಾದ ಎರಡು ಗುಂಪಿನ ನಡುವೆ ಆತನೇ ಜಗಳ ತಂದಿಕ್ಕುತ್ತಾನೆ. ಒಬ್ಬರನ್ನೊಬ್ಬರು ಬಡಿದಾಡಿಕೊಂಡು ಸಾಯುವಂತೆ ಮಾಡುತ್ತಾನೆ. ಈ ಆಟದಲ್ಲಿ ನಾಯಕ ಮತ್ತೆ ಬಲಿಪಶುವಾಗುತ್ತಾನೆ. ಜೈಲಿನಲ್ಲಿದ್ದ ನಾಯಕ ಬಿಡುಗಡೆಯಾದಾಗ ಆತನಿಗೆ ಇಷ್ಟವಿಲ್ಲದಿದ್ದರೂ ಅವನನ್ನು ಮತ್ತೆ ಭೂಗತಜಗತ್ತಿಗೆ ಇಳಿಯುವಂತೆ ಮಾಡುತ್ತಾನೆ ಪೋಲಿಸ್ ಅಧಿಕಾರಿ. ಮುಂದೆ ಮತ್ತದೇ ಮಾರಣಹೋಮ.
ಈ ಸರಳ ಕಥೆಯ ಚಿತ್ರ ನೋಡಿದ ನಂತರವೂ ನಮ್ಮನ್ನು ಕಾಡುತ್ತವೆ. ಅಟ್ಟಿಸಿಕೊಂಡು ಓಡಾಡುವ, ಕೊಂದು ಅತ್ತಹಾಸಗೈಯುವವರೇ ಬೇಟೆಯಾಗುವುದು, ಪ್ರಾಣಭಿಕ್ಷೆಯಾಚಿಸುವುದು ಭೂಗತಲೋಕದ ವಿಪರ್ಯಾಸಕ್ಕೆ ಸಾಕ್ಷಿಯಾಗುತ್ತದೆ.
ಎರಡು ವರ್ಷಗಳ ಅಂತರದಲ್ಲಿ ಬಂದ ಎರಡೂ ಚಿತ್ರಗಳು ಒಂದೇ ಚಿತ್ರದಂತೆ ಭಾಸವಾಗುತ್ತವೆ. ಅಥವಾ ಒಂದರ ನಂತರ ಮತ್ತೊಂದನ್ನು ಒಮ್ಮೆಲೆ ನೋಡಬಹುದಾದಷ್ಟು ಕುತೂಹಲಕಾರಿಯಾಗಿವೆ. ತಪ್ಪೊಪ್ಪಿಗೆಯ ಸಂಕೇತವಾಗಿ ಒಂದು ಕಿರುಬೆರಳನ್ನು ಕತ್ತರಿಸಿಕೊಡುವ, ಕೊಲೆಗಾರ ಎದುರಿಗೆ ನಿಂತಾಗಲೂ ಅವನನ್ನು ರೋಷದಿಂದ ಕೆಣಕುವ ದೃಶ್ಯಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಹಾಗೆಯೇ ಎರಡೂ ಚಿತ್ರಗಳ ಚಿತ್ರಣವೂ ಅಷ್ಟೇ. ಅದರ ಗತಿ, ನಿರೂಪಣ ಶೈಲಿ ಒಂದೇ ತೆರನಾಗಿದ್ದು ಒಂದು ಚಿತ್ರದ ಮುಂದುವರೆದ ಭಾಗ ಹೇಗಿರಬೇಕೋ ಹಾಗಿರುವುದು ಪ್ರೇಕ್ಷಕನಲ್ಲಿ ಒಂದೇ ಸಿನೆಮಾ ನೋಡಿಡ ಭಾವವನ್ನು ಮೂಡಿಸುತ್ತವೆ. ಹಾಗೆ ಚಿತ್ರದಲ್ಲಿ ಗಮನಸೆಳೆಯುವುದು ತಣ್ಣನೆಯ ಕ್ರೌರ್ಯ. ಒಂದು ಕೊಲೆಯನ್ನು ಅಷ್ಟೇ ನೀಟಾಗಿ, ಯೋಜನಾಬದ್ಧವಾಗಿ ಮತ್ತು ನಿರ್ದಯೆಯಿಂದ ಮಾಡಿ ಮುಗಿಸುವ ಪಾತ್ರಗಳ ಬಗ್ಗೆ ಒಂದು ರೀತಿಯ ಭಾವ ಮೂಡುತ್ತದೆ.

Sunday, March 17, 2013

2012-ನೋಡಿದ ಚಿತ್ರಗಳು-1

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಸಿನೆಮಾ ನೋಡುತ್ತಿದ್ದೆ. ನಮ್ಮ ಕಾಲೇಜು ಮದ್ಯಾಹ್ನ ಎರಡಕ್ಕೆ ಮುಗಿಯುತ್ತಿದ್ದರಿಂದ ತರಗತಿಗೆ ಚಕ್ಕರ್ ಹಾಕುವ ಪ್ರಮೇಯ ಬಂದಿರಲಿಲ್ಲ. ಊಟ ಮಾಡಿದ ನಂತರ ಬಸ್ಸು ಹಿಡಿದು ಮನೆಗೆ ಹೋಗಬೇಕಾಗಿತ್ತು. ಆದರೆ ಅಷ್ಟು ಬೇಗ ಹೋಗಿ ಮಾಡುವುದಾದರೂ ಏನಿತ್ತು. ಹಾಗಾಗಿ ಲಕ್ಷಣವಾಗಿ ಚಿತ್ರಮಂದಿರಕ್ಕೆ ಹೋಗಿ ಕುಳಿತುಬಿಡುತ್ತಿದ್ದೆ. ಸಿನೆಮಾ ಯಾವುದಾದರೇನು..? ನೋಡುತ್ತಿದ್ದೆ .ನೋಡಿದ ನಂತರ ಸಿನೆಮಾದ ಟಿಕೇಟಿನ ಅರ್ಧಭಾಗ ನಮ್ಮ ಬಳಿ ಇರುತ್ತಿತ್ತಲ್ಲ.. ಅದರ ಹಿಂದೆ ಸಿನೆಮಾದ ಹೆಸರು, ನೋಡಿದ ದಿನಾಂಕ ಬರೆದಿಡುತ್ತಿದ್ದೆ. ನನ್ನ ಪದವಿ ಮುಗಿಯುವವರೆಗೆ ಆ ತರಹದ ಟಿಕೆಟ್ ಗಳು ಬೇಜಾನ್ ಆಗಿದ್ದವು. 
ಈಗಲೂ ಅಷ್ಟೇ ಸಿನೆಮಾ ನೋಡಿದ ತಕ್ಷಣ ಅದರ ಬಗ್ಗೆ ಚಿಕ್ಕಾದಾದ ಟಿಪ್ಪಣಿ ಬರೆದಿಡುತ್ತೇನೆ. ಇಲ್ಲವಾದಲ್ಲಿ ಆ ಸಿನೆಮಾದ ಹೆಸರು ದಿನಾಂಕವನ್ನು ಡೈರಿಯಲ್ಲಿ ಬರೆದು ಬಿಡುತ್ತೇನೆ.ಕಳೆದ ವರ್ಷ ನನಗೆ ಅಂತಹ ಕೆಲಸವಿರಲಿಲ್ಲ. ಕೈಯಲ್ಲಿದ್ದದ್ದು ಒಂದೇ ಚಿತ್ರ. ಹಾಗಾಗಿ ಸಿನೆಮಾ ನೋಡಲು ಸಾಕಷ್ಟು ಸಮಯ ಸಿಕ್ಕಿತ್ತು. ಆಗ ನೋಡಿದ ಹಾಲಿವುಡ್ ಸಿನೆಮಾಗಳಿವು.
1.ಕಾಂಟ್ರಬ್ಯಾಂಡ್:
ಶೂಟರ್  ಚಿತ್ರ ನೋಡಿದ ನಂತರ ಮಾರ್ಕ್ ವಾಲ್ಬರ್ಗ್ ನನಗೆ ಇಷ್ಟವಾದದ್ದು. ಒಬ್ಬ ಮಾಸ್ ಹೀರೋ ಆಗಿ. ನಂಗೆ ಜಾತನ್ ಸ್ತಾಥಂ ಬಿಟ್ಟರೆ ಮಾರ್ಕ್ ವಾಲ್ ಬರ್ಗೆ ಇಷ್ಟವಾಗುವುದು. ಅದರಲ್ಲೂ ಒಂದು ಕಮರ್ಶಿಯಲ್ ಎಲಿಮೆಂಟಿರುವ ಚಿತ್ರಗಳೆಂದರೆ ನನಗೆ ಯಾವಾಗಲೂ ಖುಷಿ ತರುವ ವಿಚಾರವೇ.ಈ ಚಿತ್ರದ ಕಥೆಯ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುವ ಹಾಗಿಲ್ಲ. ಮಾದಕ ವಸ್ತುವಿನ ಸಾಗಣೆಯನ್ನೂ ಮುಖ್ಯ ಎಳೆಯನ್ನಾಗಿ ಹೊಂದಿರುವ ಚಿತ್ರದಲ್ಲಿ ನಾಯಕ ಮಾಜಿ ಸ್ಮಗ್ಲರ್. ಆದರೆ ಈವಾಗ ದಂಧೆ ಬಿಟ್ಟು ತನ್ನ ಹೆಂಡತಿ ಮಕ್ಕಳೊಂದಿಗೆ ಆರಾಮವಾಗಿದ್ದಾನೆ. ಆದರೆ ಮೈದುನ ಕೂಡ ಒಬ್ಬ ಸಾಗಣೆದಾರನಾಗಿದ್ದು ಪೋಲಿಸರಿಂದ ತಪ್ಪಿಸಿಕೊಳ್ಳುವಾಗ ಮಾದಕವಸ್ತುವನ್ನು ನದಿಗೆ ಬೀಸಾಕಿಬಿಡುತ್ತಾನೆ. ಆದರೆ ಅವನ ಬಾಸ್ ಬಿಡಬೇಕಲ್ಲ...ಅವನ ಹಿಂದೆ ಬೀಳುತ್ತಾನೆ...ನಾಯಕ ಇನ್ನೂ ಸುಮ್ಮನಿದ್ದರೆ ನಾಯಕನೆನಿಸಿಕೊಳ್ಳುವುದಿಲ್ಲವಲ್ಲ...ಮೈದುನನ್ನುಳಿಸಲು ಹೋರಾಟಮಾಡುತ್ತಾನೆ...ಚಿತ್ರ ಕೆಲವೊಂದು ಕಡೆ ಕುತೂಹಲ ತರಿಸಿದರೂ ಸುಮಾರು ಕಡೆ ಬೋರ್ ಹೊಡೆಸುತ್ತದೆ. ಸಂಭಾಷಣೆ ಅಂತಹ ಹೇಳಿಕೊಳ್ಳುವಹಾಗಿಲ್ಲ. ಹಾಗೆ ಹೊಡೆದಾಟದ ಸನ್ನಿವೇಶಗಳೂ ಅಷ್ಟೇ. ಹಾಗಾಗಿ ಚಿತ್ರ ಒಂದು ಸಾಮಾನ್ಯ ಚಿತ್ರವೆನಿಸಿಕೊಳ್ಳುತ್ತದೆ.
2.ಹೇ ವೈರ್:
ಇದೊಂದು ಪಕ್ಕ ಆಕ್ಷನ್ ಚಿತ್ರ. ನಮ್ಮಲ್ಲಿ ಮಾಲಾಶ್ರೀ ಚಿತ್ರಗಳ ರೀತಿ ಇರುವ ಚಿತ್ರವಿದು. ಒಂದು ಕೇಡಿಗಳ ಗ್ಯಾಂಗ್ ..ನಾಯಕಿ ಹೊಡೆದಾಟ...ಇಷ್ಟೇ ಸಿನೆಮಾ.ಆರು ಅಡಿಗೆ ಕೇವಲ ಇಂಚುಗಳಷ್ಟು ಕಡಿಮೆಯಿರುವ ನಾಯಕಿ ಗಿನಾ ಕ್ಯಾರೆನೋ ಅಭಿನಯದ ಈ ಚಿತ್ರದಲ್ಲಿ ಒಂದೆರೆಡು ಹೊಡೆದಾಟದ ದೃಶ್ಯ ಬಿಟ್ಟರೆ ಬೇರೇನೂ ಹೇಳಿಕೊಳ್ಳುವ ಹಾಗಿಲ್ಲ. ಚಿತ್ರಕಥೆಯೂ ಅಷ್ಟೇ . ನಿಂತಲ್ಲೇ ಸುತ್ತುತ್ತದೆ. ಅಂತಹ ತಿರುವುಗಳಿಲ್ಲ. ಎಲ್ಲವೂ ನಿರೀಕ್ಷಿತವೇ. ಒಮ್ಮೆ ನೋಡಿ ಮರೆತುಬಿದಬಹುದಾದ ಚಿತ್ರ ಹೇ ವೈರ್. ಓಶಿಯನ್1,2,3, ಇನ್ ಫಾರ್ಮಂಟ್ ಮುಂತಾದ ಚಿತ್ರಗಳ ನಿರ್ದೇಶಕ ಸ್ಟೀವನ್ ಸೋಡರ್ಬರ್ಗ್ ನಿರ್ದೇಶನದ ಅತ್ಯಂತ ಸಾಮಾನ್ಯ ಚಿತ್ರವಿದು.
3.ವುಮನ್ ಇನ್ ಬ್ಲಾಕ್:
 ಹ್ಯಾರಿ ಪಾಟರ್ ನಾಯಕ ಡೆನಿಯಲ್ ರಾಡ್ಕ್ಲಿಫ್ ಅಭಿನಯದ ಈ ಚಿತ್ರ .ವಕೀಲ ವೃತ್ತಿಯ ನಾಯಕ ವಿಧುರ. ಕಾರ್ಯ ನಿಮಿತ್ತ ಒಂದು ಹಳ್ಳಿಗೆ ಹೋದಾಗ ಕಪ್ಪು ಧಿರಿಸಿನ ದೆವ್ವವೊಂದು ಅಲ್ಲಿ ಭಯಾನಕ ವಾತಾವರಣ ಸೃಷ್ಟಿಸಿರುವುದು ತಿಳಿದುಬರುತ್ತದೆ. ಮುಂದೆ ಅದೇ ಒಂದಷ್ಟು ಭಯಾನಕ ಸನ್ನಿವೇಶಗಳು.. ಕೊನೆಗೊಂದು ರಹಸ್ಯ..ಚಿತ್ರ ಒಂದು ಹಾರರ್ ವಿಭಾಗದ ಚಿತ್ರವಾದರೂ ಅಂತಹ ಪ್ರಭಾವನ್ನೇನೂ ಬೀರುವುದಿಲ್ಲ. ಹ್ಯಾರಿ ಪಾಟರ್ ನಾಯಕ ನಮಗೆ ಈ ಚಿತ್ರದಲ್ಲೆಲ್ಲೂ ದೊಡ್ದವನೆನಿಸುವುದಿಲ್ಲ. ಹಾಗಾಗಿ ಚಿತ್ರ ಅಲ್ಲಲ್ಲಿ ಶಾಕ್ ಕೊಟ್ಟರೂ ಪರಿಪೂರ್ಣ ಭಯಾನಕ ಚಿತ್ರ ನೋಡಿದ ಭಾವ ಮೂಡಿಸುವುದಿಲ್ಲ.
4.ಕ್ರೋನಿಕಲ್:
ಜೋಶ ಟ್ರಂಕ್ ನಿರ್ದೇಶನದ ಮೊತ್ತಮೊದಲ ಚಿತ್ರವಿದು. ಮೂರು ಜನ ಗೆಳೆಯರು. ಅವರಲ್ಲೊಬ್ಬ ಪುಕ್ಕಲ. ಅವನನ್ನು ಎಲ್ಲರೂ ರೇಗಿಸುವವರೇ. ತಂದೆಯ ನಿರ್ಲಕ್ಷ್ಯಕ್ಕೊಳಗಾದ ಆತನಿಗೆ ಎಲ್ಲವನ್ನೂ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಹುಚ್ಚು. ಮುಂದೆ ಮೂವರಿಗೂ  ಅದ್ಭುತ ಶಕ್ತಿ ದೊರೆತಾಗ ಅದನ್ನು ಮೊದಲಿಗೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆನಂತರ ಆ ಶಕ್ತಿಯಿಂದ ತಮಗಿಷ್ಟ ಬಂದಹಾಗೆ ಆಡಲು ಶುರುಮಾಡುತ್ತಾರೆ. ಮುಂದೆ ಅದೇ ದುರಂತಕ್ಕೆ ಕಾರಣವಾಗುತ್ತದೆ.
ನನಗೆ ಈ ಚಿತ್ರ ಇಷ್ಟವಾದದ್ದು ಅದರ ವಿಶುಯಲ್ ಎಫೆಕ್ಟ್ ನಿಂದ. ಇಡೀ ಚಿತ್ರವನ್ನ ಬ್ಲೇರ್ ವಿಚ್ ಪ್ರಾಜೆಕ್ಟ್ ಮಾದರಿಯಲ್ಲಿ ಅಂದರೆ ಯಾವುದು ಮುದ್ರಿತ ಟೇಪಿನಲ್ಲಿದ್ದ ವೀಡಿಯೊ ತರಹ ನಿರೂಪಿಸಲಾಗಿದೆ. ಆದರೂ ದೃಶ್ಯ ವೈಭವ ಮನಸ್ಸಿಗೆ ತಟ್ಟುತ್ತದೆ. ಒಮ್ಮೆ ಆರಾಮವಾಗಿ ನೋಡಬಹುದಾದ ಚಿತ್ರವಿದು.

Saturday, March 16, 2013

ಹಾಲಿವುಡ್ ನ ಬಾಂಗ್ಲಾ ರೀಮೇಕ್...

ಯಾವುದೇ ಚಿತ್ರರಂಗದಲ್ಲೂ ರೀಮೇಕ್ ಎನ್ನುವುದು ಇದ್ದೆ ಇದೆ. ರೀಮೇಕ್ ತಪ್ಪೂ ಎಂದೂ ಹೇಳಲಾಗುವುದಿಲ್ಲ. ಆದರೆ ಮಕ್ಕಿಕಾಮಕ್ಕಿ ಭಟ್ಟಿ ಇಳಿಸುವುದು ಸ್ವಲ್ಪ ಇರುಸು ಮುರುಸು ತರುತ್ತದೆ. ಆದರೆ ಬರೀ ಕಥೆಯನ್ನಷ್ಟೇ ತಗೆದುಕೊಂಡು ಅದನ್ನು ನಮ್ಮ ನೆಲಕ್ಕೆ ಅನ್ವಯಿಸಿ ನೋಡುವಂತಹ ಸಿನಿಮಾ ಮಾಡಿದರೆ ಅದು ಸ್ವಾಗತಾರ್ಹ. ಪ್ಯಾಚ್ ಆಡಮ್ಸ್ ಮತ್ತು ಡೆಡ್ ಪೋಎಟ್ ಸೊಸೈಟಿ ಚಿತ್ರಗಳನ್ನ ಮುನ್ನಾಭಾಯಿ ಎಂ.ಬಿ.ಬಿ.ಎಸ್ ಮತ್ತು 3 ಇಡಿಯಟ್ಸ್ ಮಾಡಿದಾಗ ನಾವು ಖುಷಿಖುಷಿಯಿಂದ ನೋಡಿದ್ದೇವೆ. ಮೂಲ ಪ್ರತಿಗಿಂತ ಇದೆ ಅದ್ಭುತ ಅಂತಲೂ ಅನಿಸಿದ್ದಿದೆ. ಹಾಗೆಯೇ ಎ ಕಿಸ್ ಬಿಫೋರ್ ಡೈಯಿಂಗ್ ಗೆ ಒಂದು ತಾರ್ಕಿಕ ಹಿನ್ನೆಲೆ ಕೊಟ್ಟು ಬಾಜಿಗರ್ ಮಾಡಿದಾಗ ಹುಚ್ಚೆದ್ದು ನೋಡಿದ್ದೂ ಇದೆ.. 
ನಮಗೆಲ್ಲಾ ಗೊತ್ತಿರುವಂತೆ ಬೆಂಗಾಲಿ ಭಾಷೆಯ ಚಿತ್ರಕರ್ಮಿಗಳು ಅವರ ಸ್ವಂತ ಕಥೆಯಿಂದಾಗಿ ಹೆಸರುವಾಸಿ. ಯಾವುದೇ ಸಿದ್ಧಸೂತ್ರಗಳಿಗೆ ಮಾರುಹೋಗದೆ ಸಿನೆಮಾ ಮಾಡುತ್ತಾ ಬಂದವರು ಅವರು. ಹಾಗಾಗಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಾಲಿ ಸಿನೆಮಾಗಳಿಗೆ ಅದರದೇ ಆದ ಮಾನ್ಯತೆಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಕ್ರಮೇಣ ನಶಿಸಿಹೋಗುತ್ತಿದೆ. ಇತ್ತೀಚಿನ  ವರ್ಷದಲ್ಲಿ ಬಂದ ಬೆಂಗಾಲಿ ಸಿನೆಮಾಗಳೆಡಿಗೆಗೆ ಕಣ್ಣು ಹಾಯಿಸಿದರೆ ನಮಗದು ಅರ್ಥವಾಗುತ್ತದೆ. ಬಹುತೇಕ ದಕ್ಷಿಣ ಭಾರತದ ಅದರಲ್ಲೂ ತೆಲುಗು ಚಿತ್ರಗಳ ಅವತರಣಿಕೆಯೇ ಅಲ್ಲಿವೆ. ಆರ್ಯ, ಆರ್ಯ 2, ಬೊಮ್ಮರಿಲ್ಲು, ರೆಡಿ, ಕನ್ನಡದ ಮುಂಗಾರು ಮಳೆ, ಸಿಂಘಂ ಹೀಗೆ.
ರೀಮೇಕ್ ಮಾಡುವಾಗ ಸವಾಲುಗಳು ಜಾಸ್ತಿ. ಬರೀ ಅಲ್ಲಿರುವುದನ್ನೇ ಇಲ್ಲಿ ತೆಗೆದು ಸಿನಿಮಾ ನೆಲಕಚ್ಚಿದ ಉದಾಹರಣೆ ಅತಿ ಹೆಚ್ಚು ಎನ್ನಬಹುದು. ಹಾಗಾಗಿ ಗಟ್ಟಿ ಕಥೆಯ ಚಿತ್ರಗಳನ್ನೂ, ಅದರ ಕಥೆಗಳನ್ನೂ ಬೇರೆ ಬೇರೆ ಭಾಷೆಗಳಲ್ಲಿ ಪುನರ್ನಿಮಿಸಲು ತಯಾರಿ ನಡೆಸುತ್ತಾರೆ. ಆದರೆ ಅದೇ ಯಂದಿರನ್, ಮಮ್ಮಿ, ಟೈಟಾನಿಕ್ , 2012 ಮುಂತಾದ ಚಿತ್ರಗಳನ್ನ ರೀಮೇಕ್ ಮಾಡಲು ಸಾಧ್ಯವಾಗುವುದಿಲ್ಲ
ಆದರೆ ಮೊನ್ನೆ ಬಾಂಗ್ಲ ಭಾಷೆಯ  ಒಂದು ಸಿನೆಮಾ ನೋಡುತ್ತಾ ನೋಡುತ್ತಾ ಅದೆಷ್ಟು ನಕ್ಕೆನೆಂದರೆ ಹೇಳಲಾಗದು. ಜೊತೆಗೆ ಅವರ ಹುಚ್ಚುತನಕ್ಕೆ ಬೆರಗಾದೆ. ಕಿಂಗ್ ಕಾಂಗ್ ಚಿತ್ರ ನಮಗೆಲ್ಲ ಗೊತ್ತೇ ಇದೆ. ಹಾಲಿವುಡಿನಲ್ಲಿ ಸುಮಾರು ಸಾರಿ ನಿರ್ಮಾಣ ವಾಗುತ್ತಲೇ ಇರುವ ಈ ಚಿತ್ರದ ಮುಖ್ಯ ಆಸ್ತಿ ಎಂದರೆ ಗ್ರಾಫಿಕ್ಸ್. ಯಾಕೆಂದರೆ ಕಿಂಗ್ ಕಾಂಗ್ ಎನ್ನುವ ಬೃಹತ್ ಗಾತ್ರವನ್ನು ಅದರ ಕೆಳಗಿನ ಜನಸಾಮಾನ್ಯರನ್ನು ನಿಜವಾಗಿ ತೋರಿಸಿದಾಗಲೇ ಸಿನೆಮಾ ಕನ್ವಿನ್ಸಿಂಗ್ ಎನಿಸುವುದು. ಆದರೆ ಬಾಂಗ್ಲಾ ಕಿಂಗ್ ಕಾಂಗ್ ಅದೆಲ್ಲಕ್ಕೂ ನಗು ಉಕ್ಕಿಸುವಂತಿದೆ. ಕಿಂಗ್ ಕಾಂಗ್ ಅಲ್ಲಿದೆ ಇಲ್ಲಿದೆ ಹಾಗಿದೆ ಹೀಗಿದೆ ಎಂಬುದನ್ನು ವರ್ಣನೆ ಕೊಡುತ್ತಲೇ ಸಾಗುವ ಚಿತ್ರ ಕೊನೆಗೆ ನಮಗೆ ಬೇಸ್ತು ಬೀಳುವಂತೆ ಮಾಡುತ್ತದೆ. ಗ್ರಾಫಿಕ್ಸ್ ಮುಖ್ಯ ಭಾಗವಾಗಿರುವ ಚಿತ್ರದಲ್ಲಿ ಅದೊಂದು ಬಿಟ್ಟು ಬೇರೆಲ್ಲವೂ ಅಸಹನೀಯವಾಗಿದೆ. ಒಂದು ರೀಮೇಕ್ ಚಿತ್ರವನ್ನೂ ಹೀಗೂ ಮಾಡಬಹುದೆನ್ನುವ ಉದಾಹರಣೆ ಎಂತಿದೇ ಈ ಚಿತ್ರ. ಸುಮ್ಮನೆ ಮಜಾ ತೆಗೆದುಕೊಳ್ಳುವ ಇರಾದೆಯಿದ್ದರೆ ಈ ಸಿನೆಮಾ ನೋಡಿ. ಹಾಲಿವಿಡಿನ ಕಿಂಗ್ ಕಾಂಗ್ ಚಿತ್ರ ಮರೆತುಹೋದರೂ ಹೋಗಬಹುದು.

Monday, March 11, 2013

ಬಟ್ಟಲು ಕಣ್ಣಿನ ಚಲುವೆ ಮತ್ತು ತುಜೆ ದೇಖ ತೋ ಏ ಹಾಡು...,

ಆಕೆಯ ಹೆಸರನ್ನು ನೀವು ರಮಣಿ ಎಂದುಕೊಳ್ಳಿ. ಆಕೆ ಮನೆಯಿಂದ ಕಾಲೇಜಿಗೆ ಅರ್ಧ ಕಿಲೋಮೀಟರು ನಡೆದುಕೊಂಡೆ ಬರುತ್ತಿದ್ದಳು.ಬಸವನ ಗುಡಿ ಬ್ಲಾಕಿನಿಂದ ಆಕೆ ಪುಸ್ತಕಗಳನ್ನ ಎದೆಗವುಚಿಕೊಂಡು ಆ ಕಡೆ ಈ ಕಡೆ ನೋಡದೆ ತಲೆ ತಗ್ಗಿಸಿ, ಆಗಾಗ ವಾಹನಗಳ ಹಾರನ್ನಿನ ಸದ್ದಿಗೆ ತಲೆ ಎತ್ತಿ ನೋಡಿ ಮತ್ತೆ ತಲೆ ಕೆಳಗೆ ಹಾಕಿ ನಡೆಯುತ್ತಾ ಸಾಗಿದರೆ ಕಾಲೇಜು ತಲುಪುವವರೆಗೆ ಆ ಕಡೆ ಈ ಕಡೆ ನೋಡುತ್ತಿರಲಿಲ್ಲ. ಆದರೆ ಆಕೆಯ ಮನೆಯಿಂದ ಹೊರಡುತ್ತಿದ್ದಂತೆ ಅವಳನ್ನು ಹಿಂಬಾಲಿಸುತ್ತಿದ್ದವನು ಭರತ್. ಪಕ್ಕದ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿದ್ದವನು ಅವನು. ಒಂಭತ್ತನೆಯ ತರಗತಿಗೆ ಅವಳ ಬೆನ್ನು ಬಿದ್ದವನು ಮೂರುವರ್ಷಗಳವರೆಗೂ ಅವಳನ್ನು ಎಡೆಬಿಡದೆ ಹಿಂಬಾಲಿಸುತ್ತಿದ್ದ. ಆದರೆ ಒಂದು ದಿನವೂ ಆಕೆಯನ್ನು ಮಾತನಾಡಿಸುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಸುಮ್ಮನೆ ಅವಳ ಹಿಂದೆ ನಡೆದುಕೊಂಡು ಕಾಲೇಜಿನವರೆಗೆ ಬರುವುದು, ಆಕೆ ಕಾಲೇಜು ತಲುಪಿದ ಮೇಲೆ ವಾಪಸು ಹೋಗಿಬಿಡುವುದು, ಅದಾದ ಮೇಲೆ ಸಂಜೆ ಕಾಲೇಜು ಬಿಡುವ ಮುನ್ನವೇ ಕಾಲೇಜಿನ ಹತ್ತಿರ ಬರುವುದು, ಬಿಟ್ಟ ತಕ್ಷಣ ಅವಳನ್ನು ಬೆನ್ನೆತ್ತಿ ಮನೆಯ ವರೆಗೂ ಹೋಗಿ ಆಕೆ ಮನೆಯೊಳಗೇ ಹೋದ ಮೇಲೆ ತನ್ನ ಮನೆಗೆ ಹೋಗುವುದು ಅವನ ನಿತ್ಯದ ದಿನಚರಿಯಾಗಿತ್ತು. 
ಇನ್ನು ನಮ್ಮ ಮದನನ ಕಥೆಯೇ ಬೇರೆ. ರಮಣಿ ಕಾಲೇಜಿಗೆ ಬಂದ ದಿನವೇ 'ಅವಳು ನನ್ನ ಹುಡುಗಿ ಅವಳಿಗೆ ಯಾರೂ ಕಣ್ಣಾಕಬಾರದು..' ಎಂದು ತಾಕೀತು ಮಾಡಿಬಿಟ್ಟಿದ್ದ. ಸ್ವಲ್ಪ ಒರಟನಾದ್ದರಿಂದ ಅವನ ಮಾತು ನಡೆಯುತ್ತಿತ್ತು. ಅವಳು ಕುಳಿತುಕೊಳ್ಳುವ ಬೆಂಚಿನ ನೇರಕ್ಕೆ ಯಾರೂ ಕುಳಿತುಕೊಳ್ಳುವ ಹಾಗಿರಲಿಲ್ಲ, ಅವನು ಕುಳಿತುಕೊಳ್ಳಲು ಬಿಡುತ್ತಿರಲಿಲ್ಲ. ಯಾರೇ ಕುಳಿತಿದ್ದರೂ ಅವರನ್ನು ಜಗಳ ಮಾಡಿ ಎಬ್ಬಿಸಿ ಕಳುಹಿಸುತ್ತಿದ್ದ. ಇಂತಹ ರಕ್ಷಕರ ನಡುವೆಯೇ ಇದ್ದ ರಮಣಿ ಮಾತ್ರ ಇಬ್ಬರನ್ನು ಕಣ್ಣೆತ್ತಿ ವರ್ಷದಲ್ಲಿ ಒಂದು ಸಲವೂ ನೋಡಿರಲಿಲ್ಲ. ಇನ್ನು ಮಾತನಾಡಿಸುವುದೆಲ್ಲಿ ಬಂತು. ಕಾಲೇಜಿನಲ್ಲಂತೂ ಆಕೆಯನ್ನು ಮಾತನಾಡಿಸುವ ಹಾಗಿರಲಿಲ್ಲವಲ್ಲ. ಇನ್ನು ಹೊರಗೆ ಭರತ್ ನ ಕಣ್ಣು ತಪ್ಪಿಸುವುದಾದರೂ ಹೇಗೆ.?
ಆದರೆ  ರಮಣಿ ಸುಂದರಿ ಎಂದು ಒಂದೇಮಾತಿನಲ್ಲಿ ಹೇಳಿಬಿಡಬಹುದಿತ್ತು. ಬಟ್ಟಲು ಕಣ್ಣುಗಳು ಅವಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದ್ದವು. ಅದೊಂದು ದಿನ ನನ್ನ ಪಾಡಿಗೆ ನಾನು ಕುಳಿತಿದ್ದೆ. ನನ್ನ ಕಾಲಿನ ಹತ್ತಿರ ಪೆನ್ನಿನ ಕ್ಯಾಪೊಂದು ಬಂದು ಬಿದ್ದಿತ್ತು. ನಾನು ಬಗ್ಗಿ ನೋಡಿದ್ದೆ. ಹಿಂದುಗಡೆ ಕುಳಿತಿದ್ದ ಮದನ 'ಏಯ್ ಅದನ್ನೆತ್ತಿ ಅವಳಿಗೋ ಕೊಡು..' ಎಂದಾಗಲೇ ಅದು ರಮಣಿಯದು ಎಂದು ನನಗೆ ಗೊತ್ತಾದದ್ದು. ನಾನು ಆಕೆಯ ಕಡೆ ತಿರುಗದೆ ಹಾಗೆ ಎತ್ತಿಕೊಟ್ಟಿದ್ದೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಅದೇ ರೀತಿ ಮತ್ತೆ ಕ್ಯಾಪು ನನ್ನ ಕಾಲಬಳಿ ಬಿದ್ದಿತ್ತು. ಮತ್ತೆ ಮತ್ತೆ ಅದು ಬೀಳಲು ಶುರುವಾದಾಗಲೇ ನನಗೆ ಗೊತ್ತಾದದ್ದು ಆಕೆ ಬೇಕೆಂತಲೇ ಆ ಕೆಲಸ ಮಾಡುತ್ತಿದ್ದಾಳೆ ಎಂಬುದು. ಸರ್ಪಗಾವಲಿನಲ್ಲಿದ್ದ ಹುಡುಗಿಯನ್ನು ಪ್ರೀತಿಸಲು ಸಾಧ್ಯವೇ..? ಇಲ್ಲಿ ಅವರಪ್ಪ ಅಮ್ಮನ ಪ್ರಶ್ನೆಯೇ ಇಲ್ಲ. ಇದ್ದದ್ದು ಇಬ್ಬರು ಏಕಮುಖಿ ಪ್ರೇಮಿಗಳದ್ದು. ಒಂದು ದಿನವೂ ಮಾತನಾಡಿಸದ ಆದರೆ ವರ್ಷಗಟ್ಟಲೆ ಪ್ರೀತಿಸುತ್ತಿದ್ದ ಅವರಿಬ್ಬರೂ ನಿಜವಾದ ಪ್ರೇಮಿಗಳೇ..ಆದರೆ ಆಕೆ ಅವರಿಬ್ಬರನ್ನು ಅಲಕ್ಷ್ಯ ಮಾಡಿದ್ದಳು. ಸುಖಾಸುಮ್ಮನೆ ನನ್ನ ಹಿಂದೆ ಬಿದ್ದಿದ್ದಳು. ಪ್ರೀತಿಸಬೇಕೆ ಬೇಡವೇ ಎಂಬ ಪ್ರಶ್ನೆ ಗೆ ನನ್ನಲ್ಲಿ ಸ್ಪಷ್ಟ ಉತ್ತರವಿರಲಿಲ್ಲ. ಹಾಗಂತ ಆಕೆಯ ಗೆಳೆತನ, ಸಾಂಗತ್ಯವನ್ನು ನಿರ್ಲಕ್ಷಿಸಳು ಮನಸ್ಸು ಒಪ್ಪಿರಲಿಲ್ಲ. ಆದರೆ ಈ ನಕ್ಷತ್ರಿಕರಿಂದ ಮುಕ್ತಿ ಹೇಗೆ ಎಂಬುದೇ ದೊಡ್ಡ ತಲೆ ನೋವಾಗಿತ್ತು ನನಗೆ. ಆದರೆ ರಮಣಿ ಅದ್ಯಾವುದನ್ನೂ ಗಮನಿಸುತ್ತಿರಲಿಲ್ಲ.ಪೆನ್ನು ಬೀಳಿಸುವ ಕಾರ್ಯಕ್ರಮದಿಂದ ಪ್ರಾರಂಭಿಸಿ ಮಾತನಾಡಿಸುವ ಮಟ್ಟಕ್ಕೆ ಬಂದಿದ್ದಳು . ನಾನು ಕಾಲೇಜು ಬಿಟ್ಟಾಕ್ಷಣ  ನನಗಾಗಿ ಕಾಯುತ್ತಿದ್ದಳು. ಆದರೆ ಏನೂ ಮಾತನಾಡುತ್ತಿರಲಿಲ್ಲ. ಸುಮ್ಮನೆ ನನ್ನನ್ನೊಮ್ಮೆ ನೋಡಿ ತನ್ನ ಮನೆಗೆ ಹೊರಟುಬಿಡುತ್ತಿದ್ದಳು. ಆ ಒಂದು ನೋಟಕ್ಕೆ ನಾನು ಇಡೀ ದಿನ ಕಾಯುತ್ತಿದ್ದೆ. ಬಹುಶ ಅವಳೂ ಕಾಯುತ್ತಿದ್ದಳೆನೋ. ಆಗತಾನೆ ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಬಿಡುಗಡೆಯಾಗಿತ್ತು. ಇಡೀ ಕಾಲೇಜಿನಲ್ಲಿ ಅದರದೇ ಮಾತು. ಎಲ್ಲರ ಬಾಯಲ್ಲೂ ಆ ಸಿನೆಮಾದ ಹಾಡಿನ ಗುನುಗು. ಶಾರುಕ್ ಅಂತೂ ನಮಗೆ ಹುಚ್ಚು ಹಿಡಿಸಿದ್ದಂತೂ ನಿಜ. ಶನಿವಾರ ನಾವೆಲ್ಲಾ ಸಿನಿಮಾಕ್ಕೆ ಹೊರಟು ನಿಂತಿದ್ದೆವು. ಮದನ ನನ್ನ ಹತ್ತಿರಕ್ಕೆ ಬಂದವನು 'ನೋಡು ಈವತ್ತು ರಮಣಿ ಬರ್ತಾಳೆ.. ನಿನ್ನ ಹತ್ತಿರ ಏನೋ ಮಾತಾಡಬೇಕಂತೆ...' ಎಂದಿದ್ದ. ನನಗೆ ಆಶ್ಚರ್ಯವಾಗಿತ್ತು. ಆದರೆ ರಮಣಿ ಅದೆಷ್ಟು ಬುದ್ದಿವಂತೆಯಾಗಿದ್ದಳೆಂದರೆ ತಾನೇ ಮದನನ ಹತ್ತಿರ ಹೋಗಿ ನೇರವಾಗಿ ವಿಷಯ ತಿಳಿಸಿ ನೀನೆ ನನಗೆ ಸಹಾಯ ಮಾಡು ನಾನು ಅವನೊಂದಿಗೆ ಮಾತಾಡಬೇಕು ಎಂದುಬಿಟ್ಟಿದ್ದಳು. ಅದನ್ನು ಮಹಾಪ್ರಸಾದವೆಂಬಂತೆ ಸ್ವೀಕರಿಸಿದ್ದ ಮದನ ನನಗೆ ಹಾಗೆ ಹೇಳಿದ್ದ. ನನಗೆ ಭಲೇ ಹುಡುಗಿ ಎನಿಸಿತ್ತು. 
ಚಿತ್ರಮಂದಿರದಲ್ಲಿ ಇಬ್ಬರು ಅಕ್ಕಪಕ್ಕ ಕುಳಿತಿದ್ದೆವು. ಸಿನಿಮಾದ ಪ್ರತಿ ದೃಶ್ಯ, ಹಾಡು ಅದ್ಭುತ ಎನಿಸಿತ್ತು. ಅದೆಂತಹದೋ ಅನನ್ಯ ಭಾವ ನನ್ನನ್ನು ತುಂಬಿ ಹೋಗಿತ್ತು. ಚಿತ್ರ ಮುಗಿಯುವವರೆಗೆ ನಾವಿಬ್ಬರು ಒಂದೂ ಮಾತನಾಡಿರಲ್ಲಿಲ್ಲ. ಆದರೆ ಅದೆಷ್ಟೋ ಮಾತನಾಡಿದಂತೆ ಭಾಸವಾಗಿತ್ತು.
ಆಕೆ ಪ್ರೊಪೋಸ್ ಮಾಡಿದ್ದಳು. ನಾನು ಸ್ವೀಕರಿಸಿದ್ದೆ. ಅಥವಾ ನಾನು ಪ್ರೊಪೋಸ್ ಮಾಡಿದ್ದೆ. ಅವಳು ಸ್ವೀಕರಿಸಿದ್ದಳು.ಅಥವಾ ಇಬ್ಬರಿಗೂ ಪ್ರೊಪೋಸ್ ಮಾಡುವ ಪ್ರಮೇಯವೇ ಬಂದಿರಲಿಲ್ಲ. ಅಷ್ಟರಲ್ಲಾಗಲೇ ಇಬ್ಬರಲ್ಲೂ ಪ್ರೀತಿ ಮೂಡಿಯಾಗಿತ್ತು.
ಮೊನ್ನೆ ಮೊನ್ನೆ ಅಚಾನಕ್ಕಾಗಿ ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಚಿತ್ರದ ಹಾಡು ಕಿವಿಗೆ ಬಿದ್ದಾಗ ಇದೆಲ್ಲಾ ನೆನಪಾದದ್ದಂತೂ ಸತ್ಯ. ಹಾಗೆ ಮೆಲುಕುಹಾಕುತ್ತಾ ಸಾಗಿದಂತೆ ಶಾರುಕ್, ಕಾಜೋಲ್ ಎಲ್ಲ ನೆನಪಾಗಿತ್ತು. ನನ್ನ ಕಣ್ಣಮುಂದೆ ಇಡೀ ಚಿತ್ರಣವೇ ಬಂದು ನಿಂತಿತ್ತು. ಒಂದು ಸಿನೆಮಾ, ಹಾಡು ನಮ್ಮನ್ನು ನಮ್ಮದೆಯ ಚರಿತ್ರೆಯ ಪುಟಗಳಿಗೆ ಕರೆದುಕೊಂಡು ಹೋಗುವಂತೆ ಮಾಡಿಬಿಡುವ ವಿಸ್ಮಯದ ಅರಿವಾಯಿತು. ಪ್ರತಿಯೊಬ್ಬರಿಗೋ ಬಹುಶ ಹಾಗೆ ಅನಿಸುತ್ತದೆ. ಆವತ್ತೆಷ್ಟು ಚೆನ್ನಾಗಿತ್ತು..? ನನಗಂತೂ ನಮ್ಮ ಕಾಲೇಜು ದಿನಗಳು ರಂಗೇರಲು ಕಾರಣ ಶಾರುಕ್ ಮತ್ತು ಕಾಜೋಲ್, ವಿಷ್ಣುವರ್ಧನ್, ಚಿತ್ರಗಳು ಮತ್ತದರ ಇಂಪಾದ ಗೀತೆಗಳು, ಎನಿಸುತ್ತದೆ. ಸಿನೆಮಾದ  ಯುಗಳ ಗೀತೆಗಳು, ಇಂಪಾದ ಸಂಗೀತ ಮೈ ನವಿರೇಳಿಸುತ್ತಿದ್ದವಲ್ಲದೆ ನಮ್ಮದೇ ಕಾಲೇಜು ಗೆಳತಿಯರನ್ನು ಕನಸು ಕಣ್ಣಿನ ಮೂಲಕ ನೋಡುವಂತೆ ಮಾಡುತ್ತಿದ್ದದಂತೂ ಸತ್ಯ. ಈವತ್ತು ಬಲವಂತವಾಗಿ ಬರೀ ನೆನಪನ್ನಷ್ಟೇ ಹೆಕ್ಕಲು ಸಾಧ್ಯವಿಲ್ಲ. ಜೊತೆಗೆ ಹಾಡುಗಳಿದ್ದರಷ್ಟೇ ಅದು ಸಂಪೂರ್ಣವಾಗುವುದು ಎನಿಸುತ್ತದೆ.ನಾನಂತೂ ಸಿನೆಮಾದ ಜೊತೆ ಜೊತೆಯೇ ಬೆಳೆದವನು. ಸಿನೆಮಾದ ಹಾಡುಗಳೇ ನನ್ನ ಬದುಕಿನ ಕಾಲಘಟ್ಟದ ಪ್ರಮುಖ ತಿರುವುಗಳು. ಸುಮ್ಮನೆ ಕುಳಿತು ನೆನಪಿಸಿಕೊಂಡರೆ ಬಾಜಿಗರೋ ಬಾಜಿಗರ್ ನಿಂದ ಹಿಡಿದು ಮುಂಗಾರುಮಳೆಯೇ ಏನು ನಿನ್ನ ಹನಿಗಳ ಲೀಲೆ ವರೆಗೆ ಮೈ ನವಿರೇಳಿಸುವ ನವಿರು ನವಿರಾದ ನೆನಪುಗಳು ಮನಸುಗಳನ್ನು ತಂಪಾಗಿಸುತ್ತವೆ.
ಅದೆಷ್ಟು  ಸಿನೆಮಾಗಳು ನನಗೆ ಅದ್ಭುತವಾದ ನೆನಪುಗಳಿಗೆ ಸಾಕ್ಷಿಯಾಗಿ ನಿಂತಿವೆ ಎಂಬುದನ್ನು ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ.ಆ ಹಾಡುಗಳು ಕಿವಿಗೆ ಬಿದ್ದರೆ ಬೇರೆಯದೇ ಮಾಯಾಲೋಕ ಕಣ್ಣಂಚಲ್ಲಿ ಮೂಡಿ ಮರೆಯಾಗುತ್ತದೆ.ಆ ನೆನಪಿನ ಭಾಗವಾದ ಅವರೆಲ್ಲಾ ನೆನಪಾದರೂ ಅವರೆಲ್ಲಿರಬಹುದು ಎಂಬ ಪ್ರಶ್ನೆ ಕಾಡುತ್ತದೆ. ಹಾಗೆ ಕಣ್ಣಂಚಿನಲ್ಲಿ ಒಂದು ಹನಿ ನೀರು ಜಿನುಗುತ್ತದೆ.ಅದರ ಭಾವ ನಮಗರಿವಾಗುವುದಿಲ್ಲ..ಸಿನೆಮಾ ಪ್ಯಾರದಿಸೋ ಚಿತ್ರದ ನಾಯಕನಂತೆ.
ಸಿನೆಮಾ ಪ್ಯಾರಡಿಸೋ ಸಿನೆಮಾದಲ್ಲಿ ಕೊನೆಯ ದೃಶ್ಯ ನಿಮಗೆ ಗೊತ್ತಿರಬಹುದು. ಸತ್ತ ಆಲ್ಫ್ರೆದೋ ನಾಯಕನಿಗಾಗಿ ಒಂದು ಸಿನೆಮಾದ ರೀಲನ್ನು ಬಿಟ್ಟು ಹೋಗಿರುತ್ತಾನೆ. ನಾಯಕ ಬಾಲ್ಯದಲ್ಲಿದ್ದಾಗ ನೋಡಬಾರದಿದ್ದ ಚುಂಬನದ ದೃಶ್ಯಗಳಿದ್ದ ರೀಲು ಅದು. ಅದನ್ನು ನಾಯಕನಿಗಾಗಿ ಎತ್ತಿ ಇಡುವ ಆಲ್ಫ್ರೆದೋ ಪ್ರೀತಿಯನ್ನು ಮರೆಯುವುದಾದರೂ ಹೇಗೆ. ಅದನ್ನು ಚಿತ್ರಮಂದಿರದಲ್ಲಿ ನೋಡುತ್ತಾ ನೋಡುತ್ತಾ ಕಣ್ಣೀರಾಗುತ್ತಾನೆ ನಾಯಕ. ನಾನು ನೋಡಿರುವ ಸಿನೆಮಾಗಳಲ್ಲಿ ಶಕ್ತಿಯುತವಾದ ಅದ್ಭುತವಾದ ಕ್ಲೈಮ್ಯಾಕ್ಸ್ ಅದೇ ಎನಿಸುತ್ತದೆ.
ನಿಮ್ಮ ನೆನಪುಗಳನ್ನು ಬಡಿದೆಬ್ಬಿಸುವ ಹಾಡುಗಳು ಯಾವುವು? ಅಥವಾ ಸಿನೆಮಾ ಯಾವುದಿರಬಹುದು? ಒಮ್ಮೆ ನೆನಪಿಸಿಕೊಳ್ಳಿ.

Saturday, February 23, 2013

ಒಂದು ಬೆಳ್ಳಿ ಕಿರಣ-ಸಿಲ್ವರ್ ಲೈನಿಂಗ್ ಪ್ಲೇ ಬುಕ್

ಈ ವರ್ಷದಲ್ಲಿ ಎಂಟು ಆಸ್ಕರ್ ಪ್ರಶಸ್ತಿಗಳಿಗೆ ನಾಮಾಂಕಿತವಾಗಿರುವ ಚಿತ್ರ ಸಿಲ್ವರ್ ಲೈನಿಂಗ್ ಪ್ಲೇ ಬುಕ್ .ಚಿತ್ರದ ನಿರ್ದೇಶಕರು ಡೇವಿಡ್.ಓ.ರಸಲ್. ರಸಲ್ ನಿರ್ದೇಶನದ ತ್ರೀ ಕಿಂಗ್ಸ್ ಮತ್ತು ಫೈಟರ್ ಚಿತ್ರಗಳನ್ನ ನೀವು ಈಗಾಗಲೇ ನೋಡಿರಬಹುದು.ಒಂದು ಗಟ್ಟಿಯಾದ ಕಥೆ ಮತ್ತು ಆಸಕ್ತಿಕರವಾದ ನಿರೂಪಣೆ ರಸಲ್ ಚಿತ್ರಗಳ ಆಸ್ತಿ ಎನ್ನಬಹುದು. ಆದರೆ ಆ ವಿಷಯದಲ್ಲಿ ಈ ಚಿತ್ರ ಅಷ್ಟೇನೂ ಗಟ್ಟಿಯಾದ ಕಥೆ ಹೊಂದಿಲ್ಲ ಎನ್ನಬಹುದು. ಮ್ಯಾಥ್ಯೂ ಕ್ವಿಕ್ ಬರೆದ ಇದೆ ಹೆಸರಿನ ಕಾದಂಬರಿ ಆಧರಿಸಿದ ಸಿಲ್ವರ್ ಲೈನಿಂಗ್ ಪ್ಲೇ ಬುಕ್ ಚಿತ್ರ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಂಕಲನ ಹೀಗೆ ಎಂಟು ಪ್ರಮುಖ ವಿಭಾಗಗಳಲ್ಲಿ ನಾಮಾಂಕಿತಗೊಂಡಿರುವ ಈ ಚಿತ್ರದಲ್ಲಿ ಬಾಲಿವುದಿನ ನಟ ಅನುಪಮ್ ಖೇರ್ ವೈದ್ಯರ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕೆಲಸ ಮುಗಿಸಿ ಮನೆಗೆ ಬಂದರೆ ಹೆಂಡತಿ ಬೇರೆಯೊಬ್ಬನ ಜೊತೆಗಿದ್ದರೆ ಯಾರಿಗೆ ತಾನೇ ಕೋಪ ಬರದಿರುತ್ತದೆ ಹೇಳಿ. ಇಲ್ಲಿ ಪ್ಯಾಟ್ ಗೆ ಆಗುವುದೂ ಅದೇ. ರೊಚ್ಚಿಗೆದ್ದ ಪ್ಯಾಟ್ ಹಿಂದೆ ಮುಂದೆ ನೋಡದೆ ತನ್ನ ಹೆಂಡತಿ ನಿಕ್ಕಿಯ ಜೊತೆಗಿದ್ದ ಅಯೋಗ್ಯನನ್ನು ಹಿಡಿದು ಹಿಗ್ಗಾ ಮುಗ್ಗಾ ಭಾರಿಸುತ್ತಾನೆ. ಆನಂತರ ಆತನ ಮಾನಸಿಕ ಸ್ಥಿತಿ ಕೆಡುತ್ತದೆ. ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಬಂದುಬಿಡುತ್ತದೆ. ಸುಮಾರು ಎಂಟು ತಿಂಗಳುಗಳ  ಚಿಕಿತ್ಸೆ ಪಡೆದು ಹೊರಬರುವ ಪ್ಯಾಟ್ ಮತ್ತೆ ತನ್ನ ಹೆಂಡತಿಯನ್ನ ಸೇರಲು ಆಸೆಪಡುತ್ತಾನೆ. ಆದರೆ ಆಕೆಯೊಂದಿಗೆ ಮಾತನಾಡುವುದಾದರೂ ಹೇಗೆ? ಆಗ ಪರಿಚಯವಾಗುವವಳು ಟಿಪಾನಿ. ಮುಂಬರುವ ನೃತ್ಯ ಸ್ಪರ್ಧೆಯಲ್ಲಿ ಟಿಫಾನಿಯ ಜೋಡಿಯಾಗಿ ಪ್ಯಾಟ್ ನರ್ತಿಸಲು ಒಪ್ಪಿಕೊಂಡರೆ ಪ್ಯಾಟ್ ಪರವಾಗಿ ನಿಕ್ಕಿ ಯ ಜೊತೆ  ಮಾತನಾಡಲು ಟಿಫಾನಿ ಒಪ್ಪಿಕೊಳ್ಳುತ್ತಾಳೆ .
 ಮುಂದೆ ಒಂದಷ್ಟು ಘಟನೆಗಳು ನಡೆಯುತ್ತವೆ. ಅನಿವಾರ್ಯವಾಗಿ ಟಿಫಾನಿ ಮತ್ತು ಪ್ಯಾಟ್ ಜೊತೆಯಾಗಿರಬೇಕಾಗುತ್ತದೆ. ಆ ಸಾಂಗತ್ಯ ಅವರಿಬ್ಬರ ನಡುವಣ ಪ್ರೀತಿಗೆ ಕಾರಣವಾಗುತ್ತದೆ.ಕೊನೆಯಲ್ಲಿ ಅವರಿಬ್ಬರೂ ಒಂದಾಗುತ್ತಾರೆ.ಚಿತ್ರ ಸುಖಾಂತ್ಯವಾಗುತ್ತದೆ.
ಚಿತ್ರದ ಕಥೆ ಅಷ್ಟೇನೂ ವಿಶೇಷವಾದದ್ದಲ್ಲ. ಹಾಗೆಯೇ ಅದರ ನಿರೂಪಣೆಯೂ. ಅಬ್ಬಬ್ಬಾ ಎನಿಸುವ ತಿರುವುಗಳಿಲ್ಲ ಚಿತ್ರದಲ್ಲಿ. ಹೆಚ್ಚು ಕಡಿಮೆ ಎಲ್ಲಾ ನಿರೀಕ್ಷಿತವೇ.ಆದರೆ ಚಿತ್ರ ಇಷ್ಟವಾಗುತ್ತದೆ. ಅಲ್ಲಲ್ಲಿ ಕಚಗುಳಿಯಿಡುತ್ತಾ ಸಾಗುವ ಚಿತ್ರಕಥೆ ಎಲ್ಲೂ ಬೇಸರವನ್ನುಂಟು ಮಾಡುವುದಿಲ್ಲ. 
ನಾಯಕನ ಪಾತ್ರದಲ್ಲಿ ಬ್ರಾಡ್ಲಿ ಕೂಪರ್ ಉತ್ತಮ ನಟನೆ ಮಾಡಿದ್ದಾರೆ. ಮತ್ತು ನೋಡಲು ಚಂದಗೆ ಕಾಣಿಸುತ್ತಾರೆ. ನಾಯಕಿಯ ಪಾತ್ರದಲ್ಲಿ ಜೆನಿಫರ್ ಲಾರೆನ್ಸ್ , ಪೋಷಕ ಪಾತ್ರದಲ್ಲಿ ರಾಬರ್ಟ್ ಡಿ ನೇರೋ, ಕ್ರಿಸ್ ಟಕ್ಕರ್ ಅಭಿನಯಿಸಿದ್ದಾರೆ.

ತ್ರಿವಳಿ ಪ್ರತಿಕಾರಗಳು.

ಚಾನ್ ವೂಕ್ ಪಾರ್ಕ್ ಸೌತ್ ಕೊರಿಯಾದ ಹೆಸರಾಂತ ನಿರ್ದೇಶಕ . ತನ್ನ ವಿಭಿನ್ನ ಶೈಲಿಯಿಂದ ಮತ್ತು ಮಂದಗತಿಯಾದರೂ ಕುತೂಹಲಕಾರಿ ನಿರೂಪಣೆಯಿಂದ ಗಮನ ಸೆಳೆಯುವ ಈತನ ಚಿತ್ರಗಳು ನೋಡುಗರಿಗೆ ರಸದೌತಣ ಎಂದೆ ಹೇಳಬಹುದು. ಪಾರ್ಕ್ ನ ಚಿತ್ರಗಳು ಸಾಹಸಮಯ ಅಥವಾ ದ್ವೇಷಸಾಧನೆಯ ಕಥಾವಸ್ತುವನ್ನು ಹೊಂದಿವೆ.ಆತನ ಪ್ರತೀಕಾರದ ಸರಣಿ ಚಿತ್ರಗಳಾದ ಸಿಂಪಥಿ ಫಾರ್ ಮಿಸ್ಟರ್  ವೆಂಜೆಯಾನ್ಸ್, ಓಲ್ಡ್ ಬಾಯ್ ಮತ್ತು ಸಿಂಪಥಿ ಫಾರ್ ಲೇಡಿ ವೆಂಜೆಯಾನ್ಸ್ ಚಿತ್ರಗಳು ವೆಂಜೆಯಾನ್ಸ್ ಟ್ರೈಲಜಿ ಎಂದೆ ಹೆಸರುವಾಸಿಯಾಗಿವೆ. 
ಮೂರೂ ಚಿತ್ರಗಳ ಮೂಲ ವಸ್ತು ದ್ವೇಷ, ಪ್ರತೀಕಾರ. ಆದರೂ ಕಥೆಯಲ್ಲಿನ ವೈವಿಧ್ಯತೆಯಿಂದಾಗಿ ಅವು ಗಮನಸೆಳೆಯುತ್ತವೆ. ಮುಂದೇನಾಗುತ್ತದೆ ಹೇಗಾಗುತ್ತದೆ ಎಂಬ ಚಿಕ್ಕ ಸುಳಿವನ್ನೂ ಬಿಟ್ಟುಕೊಡದೆ ಕೊನೆಯವರೆಗೂ ಪ್ರೇಕ್ಷಕನನ್ನು ಸತಾಯಿಸುವ ಪಾರ್ಕ್ ನ ಈ ಚಿತ್ರಗಳು ಆಷ್ಟೇ  ಚೆನ್ನಾಗಿ ಕ್ರೌರ್ಯವನ್ನೂ ಬಿಂಬಿಸುತ್ತವೆ. ಈ ಚಿತ್ರಗಳು ಕಥೆಯಲ್ಲಿನ ಮೂಲಭಾವದಿಂದಾಗಿ ಸರಣಿ ಎನಿಸಿಕೊಳ್ಳುತ್ತವೆ. ಆದರೆ ಚಿತ್ರದ ಕಥೆಗಳು ಬೇರೆ ಬೇರೆ. ಒಂದಕ್ಕೊಂದು ಸಂಬಂಧವೇ ಇಲ್ಲ. ಪ್ರತೀಕಾರದ ಬೆಂಕಿ ಎಲ್ಲರನ್ನೂ ಸುಡುತ್ತದೆ ಮತ್ತು ಆ ಕಿಚ್ಚನ್ನು ಒಮ್ಮೆ ಹಚ್ಚಿದರೆ ನಾವು ಬೇಕೆಂದರೂ ಆರಿಸಲಾಗುವುದಿಲ್ಲ ಎನ್ನುವ ಸತ್ಯವನ್ನು ಮೂರು ಚಿತ್ರಗಳೂ ತೆರೆದಿಡುತ್ತವೆ. ಈ ಸರಣಿಯ ಮೊದಲನೆಯ ಚಿತ್ರವಾಗಿ ಬಂದದ್ದು ಸಿಂಪಥಿ ಫಾರ್ ಮಿಸ್ಟರ್  ವೆಂಜೆಯಾನ್ಸ್. 2002 ರಲ್ಲಿ ತೆರೆಗೆ ಬಂದ ಈ ಚಿತ್ರ ಗಲ್ಲಾಪೆಟ್ಟಿಗೆ ಲೂಟಿ ಮಾಡಿತಲ್ಲದೆ, ವಿಮರ್ಶಕರಿಂದಲೂ ಭಾರಿ ಮೆಚ್ಚುಗೆ ಗಳಿಸಿತು. ಕಿವುಡ ಮೂಗನೊಬ್ಬ ತನ್ನ ತಂಗಿಯ ಆಸ್ಪತ್ರೆಯ ಖರ್ಚುವೆಚ್ಚ ಭರಿಸಲು ತನ್ನ ಗೆಳತಿಯ ಜೊತೆ ಸೇರಿ ಒಬ್ಬ ಶ್ರೀಮಂತನ ಒಬ್ಬಳೇ ಮಗಳನ್ನ ಅಪಹರಿಸುತ್ತಾನೆ. ಆಕೆಯನ್ನು ಬಿಡಿಸಿಕೊಳ್ಳಲು ಹಣದ ಬೇಡಿಕೆ ಇಡುತ್ತಾನೆ. ಹೆಂಡತಿಯಿಂದ ದೂರಾಗಿದ್ದ ಆ ಮಗುವಿನ ತಂದೆ ಬೇರೇನೂ ಯೋಚಿಸದೆ ಹಣ ಕೊಡಲು ನಿರ್ಧರಿಸಿ ಹಣವನ್ನೂ ನಾಯಕ ಹೇಳಿದ ಜಾಗಕ್ಕೆ ತಲುಪಿಸುತ್ತಾನೆ. ಆದರೆ ಅದು ಆ ಮೂಗನ ತಂಗಿಗೆ ತಿಳಿದು ಆಕೆ ಸಾಯುತ್ತಾಳೆ. ಆಕೆಯನ್ನು ಮಣ್ಣು ಮಾಡುವ ಕಾರ್ಯದಲ್ಲಿ ನಿರತನಾಗುವ ಮೂಗನ ಅತಾಚುರ್ಯದಿಂದ ಅಪಹೃತ ಬಾಲಕಿ ಕೂಡ ಸಾಯುತ್ತಾಳೆ. ಇದರಿಂದ ರೊಚ್ಚಿಗೇಳುವ ಬಾಲಕಿಯ ತಂದೆ ಅಪಹರಣಕಾರರ ಹಿಂದೆ ಬೀಳುತ್ತಾನೆ. ಮೊದಲಿಗೆ ಮೂಗನ ಗೆಳತಿಯನ್ನು ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಾನೆ, ಆನಂತರ ಮೂಗನನ್ನೂ ಸಾಯಿಸುತ್ತಾನೆ,..ಆಗ ಮೂಗನ ಗೆಳತಿಯ ಸಹಚರರು ಬಾಲಕಿಯ ತಂದೆಯನ್ನು ಸಾಯಿಸುತ್ತಾರೆ. ಹೀಗೆ ಯಾವುದೋ ಒಂದು ಅತಾಚುರ್ಯದಿಂದಾಗಿ ವಿನಾಕಾರಣದ ಪ್ರತಿಕಾರದ ಬೆಂಕಿ ಎಲ್ಲರನ್ನೂ ಸುಟ್ಟುಬಿಡುತ್ತದೆ.
 ಇದಾದ  ನಂತರ ಬಂದ ಓಲ್ಡ್ ಬಾಯ್ ಕಥೆ ಕೂಡ ಭಿನ್ನವಾದದ್ದಾದರೂ ವಿಷಯ ಮಾತ್ರ ಪ್ರತಿಕಾರಕ್ಕೆ ಸಂಬಂಧಿಸಿದ್ದು. 2003ರಲ್ಲಿ ತೆರೆಗೆ ಬಂದ ಈ ಚಿತ್ರದ ಕಥೆ ತುಂಬಾ ಸರಳವಾದದ್ದು. ವ್ಯಕ್ತಿಯೊಬ್ಬನನ್ನು ಒಂದು ಕೋಣೆಯೊಳಗೆ 15 ವರ್ಷಗಳ ವರೆಗೆ ಕೂಡಿ ಹಾಕಲಾಗುತ್ತದೆ. ಅವನಿಗೆ ತಾನೇಕೆ ಇಲ್ಲಿದ್ದೇನೆ, ತನ್ನನ್ಯಾರು ಇಲ್ಲಿ ಕಟ್ಟಿಹಾಕಿರುವವರು, ಅವರ ಉದ್ದೇಶವೇನು ಎಂಬುದೂ ಗೊತ್ತಾಗುವುದಿಲ್ಲ. ಅವನು ಮಾಡಿದ ತಪ್ಪೇನು ಎಂಬುದು ಗೊತ್ತಾಗುವುದಿಲ್ಲ. ಹದಿನೈದು ವರ್ಷದ ನಂತರ ಒಂದು ಬಟಾಬಯಲಿನಲ್ಲಿ ಅವನನ್ನು ಬಿಟ್ಟುಬಿಡುತ್ತಾರೆ. ಈಗ ನಾಯಕನಿಗಿರುವ ಏಕೈಕ ಗುರಿಯೆಂದರೆ ತನಗೆ ಏನೊಂದು ಹೇಳದೆ ಹದಿನೈದು ವರ್ಷ ಕೊನೆಯಲ್ಲಿಟ್ಟು ಶಿಕ್ಷಿಸಿದವನನ್ನು ಹುಡುಕುವುದು, ತನ್ನ ಹಗೆ ತೀರ್ಸಿಕೊಳ್ಳುವುದು. ಆದರೆ ಅವನಿಗೆ ಗೊತ್ತಿರದ ವಿಷಯವೆಂದರೆ ಆ ವ್ಯಕ್ತಿಯ ಶಿಕ್ಷೆ ಬರೀ ಬಂಧನಕ್ಕೆ ಮುಗಿದಿರುವುದಿಲ್ಲ. ಬದಲಿಗೆ ಆತನ ಸ್ವತಂತ್ರ ಕೂಡ ಶಿಕ್ಷೆಯ ಇನ್ನೊಂದು ಮಜಲಾಗಿದೆ ಎಂಬುದು.
2005ರಲ್ಲಿ ತೆರೆಗೆ ಬಂದ ಸಿಂಪಥಿ ಫಾರ್ ಲೇಡಿ ವೆಂಜೆಯಾನ್ಸ್ ಚಿತ್ರ ಕೂಡ ಇದೆ ವಿಷಯವನ್ನ ಒಳಗೊಂಡಿದ್ದರೂ ಕ್ರೌರ್ಯದ ಚಿತ್ರೀಕರಣ ಈ ಚಿತ್ರದಲ್ಲಿ ಸ್ವಲ್ಪ ಕಡಿಮೆ ಎಂದೆ ಹೇಳಬಹುದು.ತಾನು ಮಾಡಿರದ ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸುವ ನಾಯಕಿ ಜೈಲಿನಿಂದ ಹೊರಬಂದ ಮೇಲೆ ತನ್ನ ಪರಿಸ್ಥಿತಿಗೆ ಕಾರಣನಾದವನನ್ನು ಹುಡುಕಿ ಕೊಳ್ಳುವ ಕಥೆ ಈ ಚಿತ್ರದ್ದು. ಇದು ಕೂಡ ಗಲ್ಲಾಪೆಟ್ಟಿಗೆ ಸೂರೆಗೊಂಡಿತಲ್ಲದೆ ಹಲವಾರು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಂಸೆಗಳಿಸಿತು.
ಮೂರು ಚಿತ್ರಗಳ ನಿರ್ದೇಶನ ಮಾತ್ರ ಎಲ್ಲರೂ ಮೆಚ್ಚುವ ಹಾಗಿದೆ. ಪ್ರತಿಯೊಂದು ದೃಷ್ಯವನ್ನು ತುಂಬಾ ವಿವರವಾಗಿ ಬಿಚ್ಚಿಡುವ ನಿರ್ದೇಶಕನಲ್ಲಿ ಯಾವುದೇ ಅವಸರವಿಲ್ಲ. ನಿಧಾನಕ್ಕೆ ಚಲಿಸುವ ಕೆಮೆರಾ ಚಲನೆ ನಮ್ಮ ಕಣ್ಣಮುಂದೆಯೇ ಕಥೆ ನಡೆಯುತ್ತಿದೆಯೇನೋ ಎನ್ನುವ ಭಾವ ತರಿಸುತ್ತದೆ. ಅದರಲ್ಲೂ ಕೊಲೆಯ ದೃಶ್ಯಗಳ ಮೇಕಿಂಗ್ ಸೂಪರ್. ಅಂದರೆ ಎಲ್ಲವೂ ಕಣ್ಣಿಗೆ ಕಟ್ಟುವಂತಿದೆ ಅಥವಾ ನೋಡಲಾಗದೆ ಕಣ್ಣು ಮುಚ್ಚಿಕೊಳ್ಳುವ ಹಾಗಿದೆ.ಮನುಷ್ಯನಲ್ಲಿರುವ ತಣ್ಣನೆಯ ರಾಕ್ಷಸ ಜಾಗೃತನಾದಾಗ ಕೊಲೆಯಂತಹ ಅಸಹ್ಯಕರವಾದ ಕೆಲಸ ಕೂಡ ಹೇಗೆ ಆರಾಮವಾಗಿ ದೈನಂದಿನ ನಿತ್ಯಕ್ರಮದಂತೆ ನಡೆದುಹೋಗುತ್ತದೆ ಎಂಬುದನ್ನು ನಿರ್ದೇಶಕ ತನ್ನ ಕೌಶಲದಿಂದ ಅದ್ಭುತವಾಗಿ ತೋರಿಸಿದ್ದಾನೆ. 
ಮೂರೂ ಚಿತ್ರಗಳಲ್ಲಿನ ಪಾತ್ರಧಾರಿಗಳ ಅಭಿನಯ, ಹಿನ್ನೆಲೆ ಸಂಗೀತ ಚಿತ್ರೋಚಿತವಾಗಿವೆ.
ಥ್ರಿಲ್ಲರ್ ಪ್ರಿಯರು, ಕ್ರೈಂ ಚಿತ್ರಗಳ ಪ್ರಿಯರು ನೋಡಬಹುದಾದಂತಹ ಚಿತ್ರಗಳು ಇವು.

 

Monday, February 18, 2013

ನೋಡಲೇಬೇಕಾದ ಕನ್ನಡಚಿತ್ರ -ಪ್ರಪಾತ.

ಭಾರದ್ವಾಜ ಮುನಿಯ ವೈಮಾನಿಕ ಶಾಸ್ತ್ರ ಸುಮಾರು ಜನರಿಗೆ ಗೊತ್ತಿಲ್ಲ. ವೈಮಾನಿಕ ಶಾಸ್ತ್ರದಲ್ಲಿ ವಿಮಾನ ತಯಾರಿಕೆ ಹಾರಾಟ ಮುಂತಾದವುಗಳನ್ನು ವಿವರವಾಗಿ ಬರೆದಿಡಲಾಗಿದೆ. ವಿಮಾನ ಹಾರಾಟಕ್ಕೆ ಬೇಕಾದ ತಂತ್ರಜ್ಞಾನ, ಬಳಸಬೇಕಾದ ಲೋಹ, ಅದರ ಬಿಡಿಭಾಗಗಳು ಮತ್ತವುಗಳ ಜೋಡಣೆ ಮುಂತಾದವುಗಳ ಬಗ್ಗೆ ತುಂಬಾ ವಿವರವಾಗಿ ಬರೆದಿರುವ ಶಾಸ್ತ್ರ ಇದು. ೧೮೯೫ ರಲ್ಲಿ ಆನೇಕಲ್ ಸುಬ್ಬರಾಯ ಶಾಸ್ತ್ರಿಗಳು ಮುಂಬೈ ನಲ್ಲಿ ಪ್ರಥಮ ವಿಮಾನ ಹಾರಾಟ ನಡೆಸಿದರು ಎಂಬುದಕ್ಕೆ ಅದು ಆವತ್ತಿನ ಕೇಸರಿ ಪತ್ರಿಕೆಯಲ್ಲಿ ಪ್ರಕಟವಾಗಿರುವುದೇ ಸಾಕ್ಷಿ. ಅದಾದ ನಂತರ ೧೯೦೩ರಲ್ಲಿ ರೈಟ್ ಸಹೋದರರು ವಿಮಾನಯಾನದ ಪಿತಾಮಹರಾದರು ಎಂಬುದು ಸಧ್ಯದ ಇತಿಹಾಸ.
ನಾವು ಯಾರಿಗೂ ಕಮ್ಮಿ ಇರಲಿಲ್ಲ, ನಮ್ಮಲ್ಲಿ ಎಲ್ಲವೂ ಇತ್ತು ಎನ್ನುವ ಮನಸ್ಥಿತಿ ಭಾರತೀಯರಿಗೆ ಮೊದಲಿನಿಂದಲೂ ಬಂದಿದೆ. ಹಾಗಾದರೆ ಈವತ್ಯಾಕಿಲ್ಲ ಎನ್ನುವ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಎಲ್ಲವೂ ನಮ್ಮ ಪುರಾಣದಲ್ಲಿ ಉಲ್ಲೇಖವಾಗಿದ್ದರೂ ಪ್ರಾಯೋಗಿಕವಾಗಿ ಹೇಗೆ, ಯಾವುದನ್ನು ಬಳಸಬೇಕೆನ್ನುವುದಕ್ಕೆ ವಿವರಗಳಿಲ್ಲ. ಅಥವಾ  ಬಳಸಿದ್ದರೆನ್ನುವುದಕ್ಕೆ ಸಾಕ್ಷಿಗಳಿಲ್ಲ. ಈ ಬಗ್ಗೆ ಮಾತಾಡಲು ನಿಂತರೆ ದೊಡ್ಡ ವಾಗ್ವಾದವೇ ನಡೆದುಹೋಗಬಹುದು.
ಇರಲಿ.ಆದರೆ ವಿಮಾನಯಾನ ನಮ್ಮದೇ ಎನ್ನುವುದಕ್ಕೆ ನಮಗೆ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಹಾಗೆ ಅದರ ಕಾಲಘಟ್ಟವೂ ಕೂಡ ತೀರ ಹಳೆಯದಲ್ಲ. ಬ್ರಿಟಿಶ್ ಆಳ್ವಿಕೆಯ ಕಾಲದ್ದು. ಹಾಗೆ ವಿಮಾನಯಾನವನ್ನೂ ಸಾಕ್ಷಾತ್ಕರಿಸಲು ಶ್ರಮಿಸಿದ ಆನೇಕಲ್ ಸುಬ್ಬರಾಯ ಶಾಸ್ತ್ರಿಯನ್ನ ಜಗಧೀಷ ಚಂದ್ರ ಬೋಸ್ ಭೇಟಿಯಾಗಿದ್ದರು. ಪಟೇಲರು  ಭೇಟಿಯಾಗಿದ್ದರು ಎಂಬುದಕ್ಕೆ ಸ್ಪಷ್ಟ ದಾಖಲೆಗಳಿವೆ.
ಮೊನ್ನೆ ನಾನು ನಟ/ನಿರ್ದೇಶಕ ಸುಚೇಂದ್ರ ಪ್ರಸಾದರನ್ನು ಭೇಟಿಯಾಗಿದ್ದೆ. ಅವರದೇ ಸ್ಟುಡಿಯೋದಲ್ಲಿ ಅವರ ಚಿತ್ರ 'ಪ್ರಪಾತ' ನೋಡಿದೆ.ಹತ್ತು ವರ್ಷಗಳು ಈ ವಿಷಯದಲ್ಲಿ ಸಂಶೋಧನೆ ನಡೆಸಿರುವ ಸುಚೇಂದ್ರ ಪ್ರಸಾದರು ಆನೇಕಲ್ ಸುಬ್ಬರಾಯ ಶಾಸ್ತ್ರಿಗಳ ವಿಮಾನಯಾನದ ಬಗ್ಗೆ ಚಿತ್ರಿಸಿರುವ ಏಕೈಕ ಅಪರೂಪದ ಚಿತ್ರವಿದು. ಸುಚೇಂದ್ರಪ್ರಸಾದರ ಕನ್ನಡ ಪಂಡಿತನ ಪಾತ್ರವನ್ನ ನಾವು ಡ್ರಾಮ ಚಿತ್ರದಲ್ಲಿ ನೋಡಿದ್ದೇವೆ. ಖುಷಿಯ ಪ್ರಶಂಸಾರ್ಹ ವಿಷಯವೆಂದರೆ ಅವರು ನಿಜವಾಗಲೂ ಹಾಗೆಯೇ ಇದ್ದಾರೆ. ತುಂಬಾ ಸ್ಪಷ್ಟವಾದ ಸುಲಲಿತವಾದ ಕನ್ನಡ ಮಾತಾಡುತ್ತಾರಾದರೂ ಅದೆಲ್ಲೂ ಕೃತಕವೆನಿಸುವುದಿಲ್ಲ. ಅವರೊಂದಿಗಿನ ಮಾತುಕತೆಯ ಪ್ರಾರಂಭದಲ್ಲಿ ನಾನು ತಬ್ಬಿಬ್ಬಾಗಿದ್ದೆ. ತೀರಾ ಕುಶಲೋಪರಿಗಳನ್ನೂ ಪಕ್ಕಾ ಕನ್ನಡದಲ್ಲಿ ವಿಚಾರಿಸಿದಾಗ ನಾವೆಷ್ಟು ಹದಗೆಟ್ಟಿದ್ದೇವೆ ಎನಿಸಿತು.ಮಾತಾಡುತ್ತಾ ಮಾತಾಡುತ್ತಾ ನನಗೂ ಕನ್ನಡ ಬಳಕೆ ಸುಲಭ ಎನಿಸಿತು. ಅದನ್ನು ಅವರಿಗೆ ಹೇಳಿದಾಗ "ಪ್ರಯತ್ನಸಿ ಅಷ್ಟೇ...ಮತ್ತೆಲ್ಲಾ ಸರಾಗ.." ಎಂದರು.
ಚಿತ್ರದ  ಬಗ್ಗೆ ವಿವರವಾಗಿ ಬರೆಯುವುದಾಗಲಿ ಅಥವಾ ವಿಮರ್ಶೆ ಮಾಡುವುದಾಗಲಿ ಈ ಲೇಖನದ ಉದ್ದೇಶವಲ್ಲ. ಹಾಗೆ ಅದೆಷ್ಟೇ ಚಿತ್ರದ ಬಗ್ಗೆ ಬರೆಯಲು ಪ್ರಯತ್ನಿಸಿದರೂ ಅದು ಪೂರ್ಣ ಎನಿಸುವುದಿಲ್ಲ. ಹಾಗಾಗಿ ಒಮ್ಮೆ ಚಿತ್ರವನ್ನ ನೋಡಿ ಎನ್ನುವುದೇ ಸೂಕ್ತ ಎನಿಸುತ್ತದೆ.ಚಿತ್ರದಲ್ಲಿ ಬರುವ ಬಹಳಷ್ಟು ಪಾತ್ರಗಳು ಅವುಗಳ ವರ್ತನೆಗಳು ನೈಜವಾಗಿವೆ ಅಷ್ಟೇ ಅಲ್ಲ ಮಜಾ ಕೊಡುತ್ತವೆ.
ಆನೇಕಲ್ ಸುಬ್ಬಾರಾಯ ಶಾಸ್ತ್ರಿಗಳ ಬಗ್ಗೆ ಅದ್ಯಯನ ನಡೆಸಿ, ಅವರ ಸಾಧನೆಯನ್ನು ಬೆಳಕಿಗೆ ತರಬೇಕೆನ್ನುವ ಉತ್ಸಾಹ, ಉದ್ದೇಶ ಪ್ರಪಾತ ಚಿತ್ರದ ನಾಯಕನದ್ದು. ಅದನ್ನು ಸಾಧಿಸುವ ಹಾದಿಯಲ್ಲಿ ಆತನಿಗೆ ಎದುರಾಗುವ ತೊಡಕುಗಳು ಅಡೆತಡೆಗಳು ಮುಂತಾದವುಗಳೇ ಚಿತ್ರದ ತಿರುಳು. ಸೂಕ್ಷ್ಮ ವಿಷಯವನ್ನೂ ಚೆನ್ನಾಗಿ, ವಿವರವಾಗಿ ತೆರೆದಿಡುವ, ಹಾಗೆ ಇತಿಮಿತಿಯ ಬಜೆಟ್ಟಿನ ನಡುವೆಯೂ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಸಾದರ ಪ್ರಯತ್ನ ನಿಜಕ್ಕೂ ಸ್ತುತ್ಯಾರ್ಹ.ವಸ್ತುವಿನ ವಿಚಾರದಲ್ಲೂ ನಿರೂಪಣೆಯ ವಿಚಾರದಲ್ಲೂ ಗೆದ್ದಿರುವ ಸುಚೇಂದ್ರ ಪ್ರಸಾದರ ಈ ಚಿತ್ರ ಅಷ್ಟೇನೂ ಗಮನ ಸೆಳೆಯದಿದ್ದದ್ದು, ಜೊತೆಗೆ ಚಿತ್ರವನ್ನ ನಮ್ಮ ಪ್ರಶಸ್ತಿ ಮಂಡಳಿಯವರೂ ಗುರುತಿಸದಿದ್ದದ್ದು ಇನ್ನೂ ಬೇಸರದ ಸಂಗತಿ. ಯಾವ ಯಾವದೂ ಚಿತ್ರಗಳಿಗೆ ಒಂದೊಂದು ಪ್ರಶಸ್ತಿಯನ್ನು ಹಂಚಿಬಿಡುವ ನಮ್ಮವರು 'ಪ್ರಪಾತ' ಚಿತ್ರದಲ್ಲಿ ಕೊಡತಕ್ಕ, ಪರಿಗಣಿಸತಕ್ಕ ಹಲವಾರು ವಿಷಯಗಳಿದ್ದರೂ 'ಕಣ್ಣು' ಮುಚ್ಚಿಕೊಂಡದ್ದರ ಹಿಂದಿನ ರಹಸ್ಯವನ್ನು ದೇವರೇ ಕಂಡುಹಿಡಿಯಬೇಕೇನೋ.
ಇರಲಿ. ಕನ್ನಡಿಗರೆಲ್ಲರೂ ಅವಶ್ಯವಾಗಿ ನೋಡಲೇಬೇಕಾದ ಚಿತ್ರ ಪ್ರಪಾತ ಒಮ್ಮೆ ನೋಡಿ..