Thursday, November 15, 2012

'ವೇದಾ ಮೇಡಂ ಹಾಗೇಕೆ ಮಾಡಿದರು....?' ಭಾಗ-3

'ನಿಂಗೆ ಗೊತ್ತಿಲ್ಲಾ ಗುರು...ಹುಡುಗೀರು ಅಂದ್ರೆ ಸುಮ್ನೆ ಅಲ್ಲಾ ..ಅದ್ಕೆ ಹೆಣ್ಣು ಚಂಚಲೆ .ಅನ್ನೋದು...ಯಾವತ್ತೇ ಆಗಲಿ ಯಾರಿಗೆ ಮರುಳಾದ್ರೂ ಹುಡುಗೀರಿಗೆ ಮರುಳಾಗಬಾರದು ನೋಡು ' ಜಗದೀಶ  ಎಗ್ಗುಸಿಗ್ಗಿಲ್ಲದೆ ಮಾತಾಡುತ್ತಿದ್ದ. ಅವನು ಹಾಗೆಯೇ . ಮಾತಾಡಲು ಇಳಿದ ಅಂದರೆ ಮುಗೀತು. ಮಾತಾಡುತ್ತಲೇ ಇರುತ್ತಾನೆ. ಚಿತ್ರವಿಚಿತ್ರವಾಗಿ ವಾದ ಮಾಡುತ್ತಾನೆ. ಏನೇನೋ ಸಮರ್ಥನೆ ಕೊಡುತ್ತಾನೆ. ಅದರಲ್ಲೂ ಹುಡುಗಿಯರ ವಿಷಯ ಬಂತೆಂದರೆ ಸಾಕು ಪುಂಖಾನುಪುಂಖವಾಗಿ ಹೇಳುತ್ತಲೇ ಇರುತ್ತಾನೆ. ಜಗದೀಶ ನನ್ನ ಸಹೋದ್ಯೋಗಿ. ನನಗಿಂತ ಒಂದು ವರ್ಷಕ್ಕೂ ಮುನ್ನವೇ ನಮ್ಮ ಕಂಪನಿ ಸೇರಿದವ. ದಪ್ಪಗಿದ್ದಾನೆ . ಅವನ ದೇಹದ ಯಾವ ಭಾಗದಲ್ಲೂ ಅಧಿಕ ಮಾಂಸವಿರದ ಜಾಗವಿಲ್ಲ . ಅವನ ಪ್ಯಾಂಟಿನ ಅಳತೆಯನ್ನು ನೋಡಿದರೆ ನಮಗೆ ನಗು. ಆದರೆ ಅವನು ಯಾವತ್ತೂ ಇನ್ ಶರ್ಟ್   ಮಾಡದೆ ಬರುವುದಿಲ್ಲ . ಘಂ ಎನ್ನುವ ಸೆಂಟ್ ಪೂಸಿಕೊಲ್ಲದೆ ಆಫೀಸಿಗೆ ಕಾಲಿಡುವುದಿಲ್ಲ .
'ಸರಿಯಪ್ಪಾ ಗುರುವೇ ನೀ ಹೇಳೋದು..ನಿನ್ನನ್ನ ಇದುವರೆಗೂ ಯಾವ ಹುಡುಗಿ ಜೊತೆ ನೋಡಲೇ ಇಲ್ಲ..ಕಸ್ಟಮರ್ ಕೇರ್ ಬಿಟ್ಟರೆ ಬೇರಾವ ಹೆಣ್ಣು ಜೀವಾನೂ ನಿಂಗೆ ಫೋನ್ ಮಾಡಿದ್ದು ನಮಗೊತ್ತಿಲ್ಲಾ ..ಅದೆಂಗೆ ಹುಡುಗೀರ್ ಬಗ್ಗೆ ಇಷ್ಟೊಂದ್ ತಿಳ್ಕೊನ್ಡಿದ್ದೀಯಾ?' ರೋಹಿತ್ ಪ್ರಶ್ನೆ . ರೋಹಿತ್ ನಮ್ಮ ಗುಂಪಲ್ಲೆ ಜಾಲಿಯಾಗಿರುವ ಮನುಷ್ಯ  ಎಲ್ಲರನ್ನೂ ರೇಗಿಸುತ್ತಾನೆ ಅದರಲ್ಲೂ ಜಗದೀಶ್ ಮತ್ತು ರೋಹಿತ್ ಜುಗಲ್ ಬಂದಿ ನಮ್ಮ ಇಡೀ ಗುಂಪನ್ನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುತ್ತದೆ. 
ರೋಹಿತ್ ನ ಪ್ರಶ್ನೆ ಜಗದೀಶನಿಗೆ ಸರಿಯಾಗಿಯೇ ನಾಟಿದುದಕ್ಕೆ ಎರಡು ಕಾರಣವಿತ್ತು. ಮೊದಲನೆಯದಾಗಿ ಆತನಿಗೆ ಯಾರೂ ಸ್ನೇಹಿತೆಯರೇ ಇರಲಿಲ್ಲ . ನಮ್ಮ ಆಫೀಸಿನಲ್ಲಿ ಯಾರೂ ಅವನ ಜೊತೆ ಮಾತನಾಡುತ್ತಿರಲಿಲ್ಲ . ಗೆಳೆತನ ಬೆಳೆಸಿದರೂ ಎರಡೇ ದಿನಕ್ಕೆ 'ಬೇಜಾನ್ ಇರಿಟೇಟ್ ಮಾಡ್ತಾನೋ.' ಎಂದು ಆರೋಪಿಸುತ್ತಿದ್ದರು. ಅವರು ಒಂದಿಬ್ಬರ ಹತ್ತಿರ ಹಾಗೆ ಹೇಳಿದ್ದರೆ ಜಗದೀಶ ಇಡೀ ಆಫೀಸಿನವರ ಹತ್ತಿರ ' ಆಕೆ ಸರಿಯಿಲ್ಲ.ಲೂಸು..' ಎಂದೆಲ್ಲಾ ಅಪಪ್ರಚಾರ  ಮಾಡಿಬಿಡುತ್ತಿದ್ದ . ಅವನೊಂದಿಗೆ ಗೆಳೆತನ ಹಗೆತನ ಎರಡೂ ಅಪಾಯಕಾರಿಯಾಗಿರುತ್ತಿತ್ತು ಹುಡುಗಿಯರ ಪಾಲಿಗೆ .
ಎರಡನೆಯ ಕಾರಣವೆಂದರೆ  ಕಸ್ಟಮರ್ ಕೇರ್ ಹುಡುಗಿ. ಒಂದು ತಿಂಗಳ ಹಿಂದೆ ಅವನ ಫೋನಿಗೆ ಕಸ್ಟಮರ್ ಕೇರ್ ಹುಡುಗಿಯೊಬ್ಬಳು ಅವಳ ಕಾರ್ಯ ನಿಮಿತ್ತ ಫೋನ್ ಮಾಡಿದ್ದಳು . ಜಗದೀಶ್ ಆಕೆಯ ಜೊತೆ ಚೆನ್ನಾಗಿ ಮಾತನಾಡಿದ್ದ. ಆಕೆ ಆನಂತರ ದಿನದಿನ ಫೋನ್ ಮಾಡಲು ಶುರು ಮಾಡಿದ್ದಳು. ಇವನು ಸ್ವರ್ಗವೇ ಕೈಗೆ ಬಂದಂಗೆ ನಮ್ಮೆಲ್ಲರ ಮುಂದೆ ಜೋರಾಗಿ ಮಾತಾಡುತ್ತಿದ್ದ. 'ಸಿಗಲು ಹೇಳುತ್ತಿದ್ದಾಳೆ ಮಾರಾಯಾ.ನನಗೆ ಹುಡುಗೀರು ಜೊತೆ ಹಾಗೆಲ್ಲಾ ಅಡ್ದಾಡೋಕೆ ಇಷ್ಟ ಇಲ್ಲಾ...' ಎಂದೆಲ್ಲಾ ಜಂಭ ಕೊಚ್ಚಿಕೊಳ್ಳುತಿದ್ದನಾದರೂ ಆಕೆಯ ಫೋನಿಗೆ ಇವನೇ ಕಾಯುತಿದ್ದದ್ದು ನಮಗೆಲ್ಲ ಮೋಜಿನ ಸಂಗತಿಯಾಗಿತ್ತು . ಆಕೆ ಅಕಸ್ಮಾತ್ ಫೋನ್ ಮಾಡದಿದ್ದರೆ ಆವತ್ತೆಲ್ಲಾ ಚಡಪಡಿಸುತ್ತಿದ್ದರೂ ನಮ್ಮಗಳ ಮುಂದೆ ' ಸಧ್ಯ ಇವತ್ತು ಡಿಸ್ಟರ್ಬ್ ಮಾಡ್ತಿಲ್ಲಾ ..ಆರಾಮವಾಗಿ ಕೆಲಸ ಮಾಡಬಹುದು..' ಎಂದೆಲ್ಲ ಜಂಭ  ಕೊಚ್ಚಿಕೊಳ್ಳುತ್ತಿದ್ದ .ದಿನ ಕಳೆದಂತೆ ಅವನ ಆರ್ಭಟ ಹೆಚ್ಚಾಗಿತ್ತು .ಅವರಿಬ್ಬರೂ ಫೋನಲ್ಲೇ ಅಗತ್ಯಕ್ಕಿಂತ ಹೆಚ್ಚಾಗಿ ಮುಂದುವರೆದಿದ್ದರು . ಅದೊಂದು ದಿನ ಇಬ್ಬರೂ ಭೇಟಿಯಾಗಲು  ನಿರ್ಧರಿಸಿದ್ದರು. ಅದಕ್ಕೆಂದೇ ಹೊಸ ಶರ್ಟು ಪ್ಯಾಂಟು ಬೂಟು ವಾಚು  ಎಲ್ಲವನ್ನೂ ಖರೀದಿಸಿದ್ದ. ಭೇಟಿ ಮಾಡಿದರು.. ಆಮೇಲೇನಾಯಿತೋ .. ಭೇಟಿ ಮಾಡಿದ ಮೇಲೆ ಆಕೆ ಇವನ ಜೊತೆ ಗೆಳೆತನ ಮುರಿದುಕೊಂಡಿದ್ದಳು . ಇವನು ಮಾತ್ರ ' ವೇಸ್ಟು ಹುಡುಗಿ ಗುರು..ಬಲೆಗೆ ಹಾಕೊಳೋದಿಕೆ ನೋಡಿದಳು.ನಾನು ಗೊತ್ತಲ್ಲಾ . ..ಅಂತವಕ್ಕೆಲ್ಲಾ...ಊಹೂ...'ಎಂದಿದ್ದನಾದರೂ ನಮಗೆಲ್ಲ ನಿಜ ವಿಷಯ ಗೊತ್ತಿದ್ದರಿಂದ ನಾವು ಅವನನ್ನು ಅವಾಗವಾಗ ರೇಗಿಸುತ್ತಿದ್ದೆವು. 
'ಹೇ...ನೀನೆ  ಹೇಳು .. ಈ ನನ್ಮಗ ಹುಡುಗೀರ್ ಸಿಕ್ದಿರೋಕೆ ಈ ತರಾ ಮಾತಾಡ್ತಿದ್ದಾನೆ ..ಯಾವುದಾದರೂ ಮಹಿಳಸಂಘಕ್ಕೆ ಗೊತ್ತಾಗಬೇಕು... 'ಎಂದ ರೋಹಿತ್ ನನ್ನ ಕಡೆ ನೋಡಿದ. ಅಲ್ಲಿಯವರೆಗೂ ನಾನವರ ಮಾತುಗಳನ್ನು ಕೇಳುತ್ತಿದ್ದೆನಾದರೂ ಮನಸ್ಸು ಮಾತ್ರ ಬೇರೆಲ್ಲೂ ಇತ್ತು .
ನನ್ನನ್ನು ಕಾಡುತ್ತಿದ್ದದ್ದು ಅದೇ ಪ್ರಶ್ನೆ  
'ವೇದಾ  ಹಾಗೇಕೆ  ಮಾಡಿದರು..?'
******************      *********************    ****************
ಆವತ್ತು ಅಲಾರ್ಮ್ ಹೊಡೆದ ನಂತರ ಎಚ್ಚರವಾಯಿತು. ಆಮೇಲೆ  ಮಲಗುವುದಕ್ಕೆ  ಎಷ್ಟೇ ಪ್ರಯತ್ನಿಸಿದರೂ ಮತ್ತೆ ನಿದ್ರೆ ಬರಲೇ ಇಲ್ಲ . ಸುಮ್ಮನೆ ಮಲಗಿ ಮೈತುಂಬಾ ರಗ್ಗು ಹೊದ್ದುಕೊಂಡು ಬೆಚ್ಚನೆಯ ಅನುಭವವನ್ನು ಸವಿಯೋಣ ಎನಿಸಿದರೂ ಅದ್ಯಾಕೋ ಅದೂ ಹಿತ ಎನಿಸಲಿಲ್ಲ . ರಗ್ಗು ಎತ್ತಿ  ಬೀಸಾಡಲಾ  ಎನ್ನಿಸಿತ್ತು. ಅದೆಷ್ಟು ಬೇಗ ಸಮಯವಾಗುತ್ತದೋ ಎನಿಸುತ್ತಿತ್ತು. ಸುಮಾರು ಹೊತ್ತು ಹಾಸಿಗೆಯ ಮೇಲೆಯೇ ಹೊರಳಾಡಿದೆ. ಆಮೇಲೆ ಯಾಕೋ ಸುಮ್ಮನೆ ಮಲಗುವುದು ಅಸಹನೀಯ ವೆನಿಸಿದ್ದರಿಂದ ಎದ್ದು ಬಿಟ್ಟೆ. ಬೇಗ ರೆಡಿಯಾದೆ. ಆಮೇಲೇನು ಮಾಡುವುದು? ಹನ್ನೆರೆಡು ಘಂಟೆಗೆ ವೇದಾ ಮೇಡಂ ಎಲ್ಲಿ ಸಿಗಬಹುದು..? ಅವರು ಫೋನ್ ಮಾಡಬಹುದೇನೋ ಎಂದು ಕಾಯಹತ್ತಿದೆ . ನಾನೇ ಒಂದು ಫೋನ್ ಮಾಡಲಾ  ಎಂದು ಸಾವಿರಾರು ಬಾರಿ ಎನಿಸಿತ್ತಾದರೂ ಅದೇಕೋ ಮನಸ್ಸು ಹಿಂಜರಿದಿತ್ತು.
ಸಮಯ ಕಳೆಯುವುದು ಅಸಹನೀಯವೆನಿಸಿತ್ತು. ಪುಸ್ತಕ ತೆಗೆದುಕೊಂಡರೆ ಒಂದು ಪುಟವನ್ನು ಏಕಾಗ್ರತೆಯಿಂದ ಓದಲಾಗಲಿಲ್ಲ ಟಿವಿಯಲ್ಲಿನ ಕಾರ್ಯಕ್ರಮಗಳು ನೋಡುವ ಮುಂಚೆಯೇ ಬೋರ್ ಹೊಡೆಸುತ್ತವೇನೋ ಎನಿಸಲು ಪ್ರಾರಂಭಿಸಿತ್ತು. ಗೆಳೆಯರು ಫೋನ್ ಮಾಡಿದರೂ ಪ್ರತಿಕ್ರಿಯಿಸಲಿಲ್ಲ ಅಕಸ್ಮಾತ್ ಅಲ್ಲಿ ಬಾ ಇಲ್ಲಿ ಬಾ ಎಂದೆಲ್ಲಾ ಕರೆದರೆ ಏನು ಮಾಡುವುದು ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡತೊಡಗಿದರೂ ಅಂತರಾಳದಲ್ಲಿ ಅವರ್ಯಾರ ಜೊತೆ ಮಾತನಾಡಲು ಇಷ್ಟವಿರಲಿಲ್ಲ.
ಗಡಿಯಾರದ ಕಡೆಗೆ, ಆನಂತರ ಕೈ ಗಡಿಯಾರದ ಕಡೆಗೆ, ಆನಂತರ ಮೊಬೈಲಿನಲ್ಲಿ ತೋರಿಸುವ ಸಮಯದ ಕಡೆಗೆ ಬೇಡಬೇಡ ವೆಂದರೂ ಕಣ್ಣು ಹಾಯುತ್ತಿತ್ತು.
ಹನ್ನೆರೆಡಾಯಿತು . ಇನ್ನೇನು ಫೋನ್ ಬರಬಹುದು ಎನಿಸಿತು. ಫೋನ್ ಕೈಯಲ್ಲಿ ಹಿಡಿದುಕೊಂಡು ಕಾಯತೊಡಗಿದೆ.. ಎದೆಬಡಿತ ಜೋರಾಗಿತ್ತು. ಚಡಪಡಿಕೆ ಜಾಸ್ತಿಯಾಗುತಿತ್ತು .
ಹನ್ನೆರೆಡು  ಹತ್ತಾಯಿತು.
ಫೋನ್ ಬರಲಿಲ್ಲ .
ಅಕಸ್ಮಾತ್ ನೆಟ್ವರ್ಕ್ ಪ್ರಾಬ್ಲಂ ಇರಬಹುದಾ? ಕೆಲವೊಮ್ಮೆ ಆ ಕಡೆಯಿಂದ ಫೋನ್ ಮಾಡಿದರು. ಈ ನೆಟ್ ವರ್ಕ್ ಕೈ ಕೊಟ್ಟು ನನ್ನದು ನಾಟ್ ರೀಚಬಲ್ ಆಗಿಬಿಟ್ಟರೆ ...ಹೀಗೆ ಒಮ್ಮೆಲೇ  ಹಲವಾರು ಪ್ರಶ್ನೆಗಳು ಕಾಡಲು ಪ್ರಾರಂಭಿಸಿತ್ತು.
ಮತ್ತೆ ಮೊಬೈಲ್ ಕಡೆ ನೋಡುವುದು ...ಗಡಿಯಾರದ ಕಡೆಗೆ..ಹೀಗೆ..?
ಹನ್ನೆರೆಡುವರೆಯಾಯಿತು..
ಒಂದಾಯಿತು..
ವೇದಾ ಫೋನ್ ಮಾಡಲಿಲ್ಲ .
ಯಾಕೋ ಬೇಸರವಾಯಿತು. ವೇದಾ ಮೇಡಂ ಮರೆತುಬಿಟ್ಟರಾ ಹೇಗೆ? ಹಾಗೆಲ್ಲಾ ಆಕೆ ಮರೆಯುವವರಲ್ಲ ಎನಿಸಿತು. ಕೊನೆಗೆ ತಡೆಯಲಾರದೆ ನಾನೇ ಫೋನ್ ಮಾಡಿದೆ.
ಕಿವಿಯ ಹತ್ತಿರ ಮೊಬೈಲ್ ಹಿಡಿದುಕೊಂಡೆ. ಎದೆ ಬಡಿತ ಜೋರಾಗಿತ್ತು.
ಮಬೈಲ್ ಸ್ವಿಚೆಡ್  ಆಫ್ ಆಗಿತ್ತು.
ನನ್ನನ್ಯಾರೋ ಎತ್ತಿ ದೊಡ್ಡ ಕಂದಕಕ್ಕೆ ಬೀಸಾಕಿದ ಅನುಭವವಾಗಿತ್ತು. ಬೇಸರ ಮನಸಿನ ಮೂಲೆಮೂಲೆಯಲ್ಲೂ ತುಂಬಿಕೊಂಡಿತು . ಯಾಕೋ ನನಗರಿವಿಲ್ಲದೆ  ಕಣ್ಣಂಚಲ್ಲಿ ನೀರು ಬಂದಿತು.
 ಮತ್ತೆ ಮತ್ತೆ ಪ್ರಯತ್ನಿಸಿದೆ .
ಮತ್ತದೇ ಹೆಂಗಸು ಸ್ವಿಚೆಡ್  ಆಫ್ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದ್ದಳು.
ಸೀದಾ ಹಾಸಿಗೆಯ ಮೇಲೆ ಹಾಗೆಯೇ ಬಿದ್ದುಕೊಂಡೆ ನನ್ನ ಮೂಡ್  ಹಾರಿ ಹೋಗಿತ್ತು.
ಪ್ಯಾಂಟು ಶರ್ಟು ಯಾವುದನ್ನು ತೆಗೆಯಬೇಕೆನಿಸಲಿಲ್ಲ .
ಊಟವನ್ನೂ ಮಾಡಲಿಲ್ಲ.
ಮತ್ತೆ ಮೊಬೈಲ್ ಟ್ರೈ ಮಾಡಿದೆ. ಮತ್ತದೇ...
ಹಾಗೆ ಇಡೀ ದಿನ ರಾತ್ರಿಯವರೆಗೂ ಟ್ರೈ ಮಾಡುತ್ತಲೇ ಇದ್ದೆ .
ಮತ್ತು ಅದೇ ಹೆಂಗಸು ಅದನ್ನೇ ಹೇಳಿ ಹೇಳಿ ಸುಸ್ತು ಹೊಡೆದುಹೋಗಿದ್ದಳು.
ನನ್ನ ಇಡೀ ಭಾನುವಾರ , ನನ್ನ  ಮನಸ್ಸು ಎಲ್ಲಾ ಹಾಳಾಗಿಹೋಗಿತ್ತು . ಇದ್ದಕಿದ್ದಂತೆ ನನ್ನ ಮೇಲೆ, ವೇದಾ ಮೇಲೆ ಅಸಾಧ್ಯ ಸಿಟ್ಟು ಬಂದಿತು.
ಒಂದು ವಾರ ರಜಾ ಹಾಕಿ ಎಲ್ಲಾದರೂ ಹೋಗಿಬಿಡಲಾ.ಕೆಲಸ ಬಿಟ್ಟುಬಿಡಲಾ. ಹೀಗೆ ಏನೇನೋ  ಹುಚ್ಚುಚ್ಚು ಯೋಚನೆಗಳು ಮನಸ್ಸಿನಲ್ಲಿ  ಹಾದುಹೋದವು.
ಆದರೆ ಅದ್ಯಾರೋ ಹೆಂಗಸಿಗೆ ನಾನ್ಯಾಕೆ ಹಾಗೆ ಮಾಡಬೇಕು..? ಎನಿಸಿತು ಕೂಡ .
ಕೊನೆಗೆ ಮನಸನ್ನು ಒಂದು ತಹಬದಿಗೆ ತರಲು ಸಾಕುಸಾಕಾಯಿತು.
ಬೆಳಿಗ್ಗೆ ಆಫೀಸಿನಲ್ಲಿ ನೇರವಾಗಿ ಕೇಳಬೇಕು..
ಅಥವಾ ಆಕೆ ಭೇಟಿ ಮಾಡದೆ ಇದ್ದುದರಿಂದ ನನಗೇನೂ ಆಗಿಲ್ಲವೆಂಬಂತೆ ಸುಮ್ಮನಿದ್ದುಬಿಡುವುದಾ?
ಮನಸ್ಸು ಗೊಂದಲದಲ್ಲೇ ಇತ್ತು.
ಆದರೂ ಒಂದು ಪ್ರಶ್ನೆ  ಕಾಡುತ್ತಲೇ ಇತ್ತು,
'ವೇದಾ ಮೇಡಂ ಹಾಗೇಕೆ ಮಾಡಿದರು....?'                                              [ಸಶೇಷ]
ನನ್ನ ಪುಸ್ತಕ ಇಲ್ಲಿ ದೊರೆಯುತ್ತದೆ:
ಗೂಗಲ್ ಪ್ಲೇ ನಲ್ಲಿ
ಗೂಗಲ್ ಬುಕ್ ನಲ್ಲಿ. 

Tuesday, November 13, 2012

ಕುಬಿ ಮತ್ತು ಹಿಟ್ ವಿಕೆಟ್ ...

 ಮೈಸೂರಿಗೆ ಹೋಗಿ ಬರುವುದಿತ್ತು. ಹಾಗಾಗಿ ಒಂದಷ್ಟು ಪುಸ್ತಕಗಳನ್ನು ಜತೆಯಲ್ಲಿಟ್ಟುಕೊಂಡಿದ್ದೆ . ಸಮಯ ಸಿಕ್ಕಾಗಲೆಲ್ಲಾ ಓದುವುದರಿಂದ ಸಮಯದ ಸದುಪಯೋಗ  ಆಗುತ್ತದೆನ್ನುವುದು ನನ್ನ ಅಭಿಪ್ರಾಯ. ಯಾಕೆಂದರೆ ಈಗಾಗಲೇ ಸುಮಾರು ಸಮಯವನ್ನು ಹೇಗೇಗೋ ಕಳೆದುಹಾಗಿದೆ. ನನ್ನ  ನೆಚ್ಚಿನ ನಿರ್ದೇಶಕ/ನಟ ಶಂಕರ್ ನಾಗ್ ನೆನಪಿಸಿಕೊಂಡರೆ ನನಗೆ ನಾಚಿಕೆಯಾಗುತ್ತದೆ. ಪ್ರತಿಕ್ಷಣವನ್ನು ದುಪ್ಪಟ್ಟು ದುಡಿಸಿಕೊಂಡವರು ಶಂಕರ್. 
ಹಾಗಾಗಿ ಈ ಸಾರಿ ಜೋಗಿಯವರ ಕಾದಂಬರಿ 'ಹಿಟ್ ವಿಕೆಟ್',  ಕಥಾ ಸಂಕಲನ ಸಂಕಲನ ಕಾಡು ಹಾದಿಯ ಕಥೆಗಳು ನನ್ನ ಪುಸ್ತಕದ ಸಂಗ್ರಹದಲ್ಲಿದ್ದವು. . ಹಿಟ್ ವಿಕೆಟ್ ಓದಿದೆ . ಕಾದಂಬರಿ ಸತ್ವವೇನೋ ಇಷ್ಟವಾಯಿತು. ಆದರೆ ನಿರೂಪಣೆ ಯಾಕೋ ಹಿಡಿಸಲಿಲ್ಲ . ಪ್ರತಿ ಅಧ್ಯಾಯದ ಕೊನೆಗೆ ಮುಂದಾಗುವುದರ ಸುಳಿವು ಪ್ರತಿ ಸಾರಿ ಕೊಡುವುದು ಯಾಕೋ ಕಿರಿಕಿರಿ ಎನಿಸಿತು. ಮೊದಲೆಲ್ಲಾ ಯಂಡಮೂರಿ ವೀರೇಂದ್ರನಾಥರ  ಧಾರಾವಾಹಿಗಳು ನಿಯತಕಾಲಿಕದಲ್ಲಿ ಬರುವಾಗ ಆ ತರಹದ ಸುಳಿವುಗಳನ್ನು ಮುಂದಿನವಾರಕ್ಕೆ ಕಾಯುವಂತೆ ಮಾಡುತ್ತಿದ್ದವು. ಯಾವುದೋ ಒಂದು ಘಟನೆಯ ಕೊನೆಯಲ್ಲಿ 'ಅದೇ ಮುಂದೆ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆನ್ನುವುದು ಆ ಕ್ಷಣದಲ್ಲಿ ಅವನಿಗೆ ಗೊತ್ತಿರಲಿಲ್ಲ', 'ಆಕೆಯ ನಿರ್ಧಾರ ಅಚಲವಾಗಿತ್ತು. ಅದೇ ಮುಂದೆ ಅವಳ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆ ಎಂಬುದು ಆ ಕ್ಷಣಕ್ಕೆ ಆಕೆಯಾ ಅರಿವಿಗೆ ಬರಲಿಲ್ಲ' ಎಂಬೆಲ್ಲಾ ಸೂಚನೆ/ಸುಳಿವುಗಳು ಕುತೂಹಲವನ್ನು ಇಮ್ಮಡಿಗೊಳಿಸುತ್ತಿತ್ತು. ಆದರೆ ಅದೇ ಒಟ್ಟಾರೆಯಾಗಿ ಕಾದಂಬರಿ ರೂಪದಲ್ಲಿ ನಮ್ಮ ಕೈಗೆ ಸಿಕ್ಕಾಗ ಅಂತಹ ಮಜವನ್ನೇನೋ ಕೊಡುತ್ತಿರಲಿಲ್ಲ . ಆಗ ಕೊಡುತ್ತಿತ್ತೇನೋ ..ಆದರೆ ಇತ್ತೀಚಿಗೆ ಯಾಕೋ ಆ ತರಹದ ಸುಳಿವು ಕಿರಿಕಿರಿ ಉಂಟುಮಾಡುತ್ತವೆ . ಕಾರಣ ನನಗೂ ಗೊತ್ತಿಲ್ಲ . ಮೊನೆ ಹಿಟ್ ವಿಕೆಟ್ ಕಾದಂಬರಿ ಓದುವಾಗಲೋ ನನಗೆ ಹಾಗೆ ಆಯಿತು . ಕ್ರಿಕೆಟ್ , ಬೆಟ್ಟಿಂಗ್ ಅದರ ವಿರಾಟ ರೂಪ ಮುಂತಾದವುಗಳನ್ನು ಒಂದು ಕಾದಂಬರಿಯಲ್ಲಿ ಹಿಡಿದಿಡುವುದು ಕಷ್ಟ ಸಾಧ್ಯ . ಮತ್ತದಕ್ಕೆ ಸಾಕಷ್ಟು ದಾಖಲೆ , ನಿಜ ಘಟನೆಗಳನ್ನೂ ಸೇರಿಸಿದಾಗ ಇನ್ನೂ ಕಾದಂಬರಿ ಸತ್ವಯುತವಾಗುತ್ತದೆ . ಆದರೆ ಹಿಟ್ ವಿಕೆಟ್ ತೀರಾ ಸಾದಾರಣ ಎನಿಸಿತು. ಬಹುಶ ನನಗೆ ಜೋಗಿ ಮೆಚ್ಚಿನ ಲೇಖಕರಾದ್ದರಿಂದ ನಾನೇ ಅತಿಯಾಗಿ ನಿರೀಕ್ಷೆ ಮಾಡಿದುದರಿಂದ ಹೀಗಾಯಿತೇನೋ?
ಅವರ ಕಥಾಸಂಕಲನ ಕಾಡು ಹಾದಿಯ ಕಥೆಗಳು ಹಿಡಿಸಿತು. ಆ ಕಥೆಗಳನ್ನು ಅಲ್ಲಲ್ಲಿ ಓದಿದ್ದರೂ ಒಂದೇ ಪುಸ್ತಕದಲ್ಲಿ ಒಂದೇ ಗುಕ್ಕಿಗೆ ಸಿಕ್ಕಿದ್ದು ಖುಷಿಯಾಯಿತು. ಕಥೆಗಳೂ ಅಷ್ಟೇ ಬೇರೆ ಯಾವುದೋ ಲೋಕಕ್ಕೆ ಕರೆದುಕೊಂಡು ಹೋದವು. 
ಮನೆಯಲ್ಲಿ ನಮ್ಮ ಪುಸ್ತಕದ ನಿಮಿತ್ತ ಕುಬಿ ಮತ್ತು ಇಯಾಲ ಸಿನೇಮ ನೋಡಿದೆ . ತೇಜಸ್ವಿಯವರ  ಕಥೆಯನ್ನು ಮೊದಲೇ ಓದಿದ್ದೆ.  ಹಾಗೆ ಸಿನೆಮಾವನ್ನೂ ಮೊದಲೇ  ನೋಡಿದ್ದೆನಾದರೂ ಹೆಚ್ಚು ಕಡಿಮೆ ಸಿನೆಮಾ ವಿವರಗಳು ಮರೆತೇ  ಹೋಗಿತ್ತು. ಹಾಗಾಗಿ ಮತ್ತೆ ನೋಡಿದೆ. ನಿರ್ದೇಶಕರು ಸದಾನಂದ ಸುವರ್ಣ. ಇವರು ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ ಚಿತ್ರದ ನಿರ್ಮಾಪಕರು. ಕುಬಿ ಮತ್ತು ಇಯಾಲ ಚಿತ್ರಕ್ಕೆ ರಾಷ್ಟ್ರ , ರಾಜ್ಯ ಪ್ರಶಸ್ತಿಗಳು ದೊರೆತಿವೆ . ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಬರೆದಿದ್ದಾರೆ . ಇನ್ನು ಸಿನೆಮಾದ ಬಗ್ಗೆ ಎಲ್ಲರಿಗೂ ಗೊತ್ತಿರುವಂತಹದ್ದೆ .   ಹಳ್ಳಿಗೆ ಹೊಸದಾಗಿ ಬರುವ ವೈದ್ಯ ಕುಬಿಗೆ ಆ ಊರಿನ ಕ್ರೈಸ್ತ ಧರ್ಮದ ಹುಡುಗಿ ಇಯಾಲಳ  ಪರಿಚಯವಾಗುತ್ತದೆ . ಆಕೆಯ ಮುಗ್ಧತೆ, ತುಂತುತನಗಳು ಕುಬಿಯವರಿಗೆ ಆಕೆಯನ್ನು ಆಪ್ತಳನ್ನಾಗಿಸುತ್ತದೆ .ಆನಂತರ ಆಕೆಯ ಕೊಲೆಯಾಗುತ್ತದೆ . ಅದನ್ನು  ಜನರು ಹೇಗೆ ತಮ್ಮ ತಮ್ಮ ಸ್ವಾರ್ಥಕೆ ಬಳಸಿಕೊಳ್ಳುತ್ತಾರೆಂಬುದನ್ನು ನಿರ್ದೇಶಕರು ಬಹಳ ಚೆನ್ನಾಗಿ ನಿರೂಪಿಸುತ್ತ ಹೋಗುತ್ತಾರೆ. ಕುಬಿಯಾಗಿ ಚಾರು ಹಾಸನ್ ಉತ್ತಮ ಅಭಿನಯ ನೀಡಿದ್ದಾರೆ.

Monday, November 12, 2012

ಆತ ಹಂತಕ ಜೋ...

ಅದೊಂದು ಅಸ್ತವ್ಯಸ್ತ ಕುಟುಂಬ ಎಂದೇ ಹೇಳಬಹುದು. ಅಪ್ಪ, ಮಲತಾಯಿ, ಅಣ್ಣ ತಂಗಿ ಅದರ ಸದಸ್ಯರು. ಪ್ರತಿಯೊಬ್ಬರಿಗೂ ಅವರದೇ ಆದ ಸಮಸ್ಯೆಗಳಿವೆ. ಎಲ್ಲರಿಗೂ ಹಣದ ಅವಶ್ಯಕತೆ ಇದೆ . ಮಗ ಹುಟ್ಟಾ ಕುಡುಕ . ಜೂಜು ಕೋರ. ಊರಲ್ಲಿರುವ ದುಶ್ಚಟಗಳೆಲ್ಲಾ ಅವನಿಗೊಬ್ಬನಿಗೆ ಇದೆ .ಮೈತುಂಬಾ ಸಾಲ  ಮಾಡಿಕೊಂಡಿದ್ದಾನೆ. ಅವನನ್ನು ಸಾಲಗಾರರು ಬೆನ್ನೆತ್ತಿದ್ದಾರೆ . ನಿಗದಿತ ಸಮಯದಲ್ಲಿ ಅವರ ಹಣ ಕೊಡದಿದ್ದರೆ ಅವರು ಸಾಯಿಸಿಬಿಡುತ್ತಾರೆ. ಅಂತಹ ಕಟುಕರು ಅವರು . ಆಗ ಅವನಿಗೆ ಗೆಳೆಯ ಒಂದು ಐಡಿಯಾ ಕೊಡುತ್ತಾನೆ. ಈಗ ಇಡೀ ಕುಟುಂಬದಿಂದ ದೂರ ಉಳಿದಿರುವ ತಾಯಿಯ ಹೆಸರಲ್ಲಿ ಇನ್ಸ್ಯೂರನ್ಸ್ ಇದೆ. ಆಕೆ ಸತ್ತರೆ ಅದು ತಂಗಿಯ ಪಾಲಾಗುತ್ತದೆ . ಎಲ್ಲರೂ ಹಂಚಿಕೊಂಡರೆ ಕಷ್ಟಗಳು ಮಾಯವಾಗುತ್ತವೆ. ಆ ಐಡಿಯಾ ಮಗನಿಗೆ ಸರಿ ಎನಿಸುತ್ತದೆ . ಮೊದಲು ತಂದೆಯೊಂದಿಗೆ, ಆಮೇಲೆ ಇಡೀ ಕುಟುಂಬದ ಜೊತೆ ಚರ್ಚಿಸಿದಾಗ ಅಲ್ಲೂ ಗ್ರೀನ್ ಸಿಗ್ನಲ್ ದೊರೆಯುತ್ತದೆ.  ಆಕೆ ನಿಜಕ್ಕೂ ಯಾರಿಗೂ ಬೇಕಾಗಿರುವುದಿಲ್ಲ . ಆಕೆಗೀಗ ವಾರಸುದರರೂ ಇರುವುದಿಲ್ಲವಾದ್ದರಿಂದ ಅದರ ಲಾಭ ಪಡೆಯಲು ಇಡೀ ಕುಟುಂಬ ನಿರ್ಧರಿಸುತ್ತದೆ. ಈಗ ಆಕೆಯನ್ನು ಕೊಲೆ ಮಾಡಬೇಕು. ಯಾರು  ಮಾಡುವುದು? ಒಂದು ಕೊಲೆಯನ್ನು ಕರಾರುವಕ್ಕಾಗಿ ಮಾಡುವವರು ಯಾರು? ಪೋಲಿಸ್ ಕಣ್ಣುಗಳಿಂದ ತಪ್ಪಿಸಿ ಇನ್ಶ್ಯೂರನ್ಸ್ ಹಣ ತಲುಪುವಂತೆ ಮಾಡುವವರು ಯಾರು? ಅದಕ್ಕಾಗಿ  ಸರಿಯಾದ ವ್ಯಕ್ತಿಯೆಂದರೆ ಜೋ ಕೂಪರ್ . ವೃತ್ತಿಯಲ್ಲಿ ಆತ  ದಿಟೆಕ್ಟಿವ್. ಆದರೂ ಕೆಲವೊಮ್ಮೆ ಹಣಕ್ಕೋಸ್ಕರ ಈ ತರಹದ ಕೆಲಸ ಮಾಡುತ್ತಾನೆ . ಆದರೆ ಆತನ ಕೆಲಸ ಪಕ್ಕಾ. ಹಾಗೆ ದುಡ್ಡಿನ ವಿಷಯದಲ್ಲೂ ಆತ  ಅಷ್ಟೇ ಕಟ್ಟುನಿಟ್ಟು.ಅಪ್ಪ ಮಗ ಇಬ್ಬರೂ ಆತನನ್ನು ಭೇಟಿ  ಮಾಡುತ್ತಾರೆ. ಆತ ಒಂದು ದೊಡ್ಡ ಮೊತ್ತದ ಹಣಕ್ಕಾಗಿ ಕೆಲಸ ಒಪ್ಪಿಕೊಳ್ಳುತ್ತಾನೆ. ಹಾಗೆ ಕೆಲಸ ಕೂಡ ಮುಗಿಸುತ್ತಾನೆ.      ಆನಂತರ ಗೊತ್ತಾಗುವ ವಿಷಯವೆಂದರೆ ಆಕೆ ಸತ್ತರೆ ಆ ಹಣ ಇವರಿಗೂ ದೊರೆಯುವುದಿಲ್ಲಾ ಎಂಬುದು.? ಅಂದರೆ ಆಕೆ ತನ್ನ ಹಣವನ್ನು ಮಗಳ ಹೆಸರಿಗೆ ಬರೆದಿಲ್ಲ  ಹಾಗಾದರೆ ಮತ್ಯಾರಿಗೆ ದೊರೆಯುತ್ತದೆ..? ಈಗ ಕೊಲೆಯಂತೂ ಆಗಿ ಹೋಗಿದೆ. ಜೋ ಸುಮ್ಮನೆ ಬಿಡುವವನಲ್ಲ ... ಮುಂದೇನಾಗುತ್ತದೆ..?
 ಇದು  ಆಸ್ಕರ್ ಪ್ರಶಸ್ತಿ ವಿಜೇತ, ದಿ ಎಕ್ಸಾರ್ಸಿಸ್ಟ್, ಫ್ರೆಂಚ್ ಕನೆಕ್ಷನ್ ಮುಂತಾದ ಚಿತ್ರಗಳ  ನಿರ್ದೇಶಕ ವಿಲಿಯಂ ಫ್ರೈಡ್ ಕಿನ್ ನಿರ್ದೇಶನದ ಮ್ಯಾಥ್ಯೂ ಮೆಖಾನಿ ಅಭಿನಯದ ಕಿಲ್ಲರ್ ಜೋ ಚಿತ್ರದ ಕಥೆ. ಚಿತ್ರದ ಪ್ರಾರಂಭದಿಂದಲೇ ಹಿಡಿದು ಕೂರಿಸಿಬಿಡುವ ಗುಣವಿರುವ ಕಿಲ್ಲರ್ ಜೋ ಒಂದು ಪಕ್ಕಾತಿಪಕ್ಕ ಥ್ರಿಲರ್ ಎಂದೇ ಹೇಳಬಹುದು. ಇನ್ ಟು ದಿ ವೈಲ್ಡ್ ,ಮಿಲ್ಕ್ ಚಿತ್ರದಲ್ಲಿ ಗಮನಸೆಳೆದಿದ್ದ ಎಮಿಲಿ ಹಿರ್ಶ್ ನ ಅತ್ಯುತಮ ಅಭಿನಯವಿರುವ ಈ ಚಿತ್ರ ಇದೆ ಹೆಸರಿನ ನಾಟಕ ಆಧರಿಸಿದ ಚಿತ್ರ.
2011 ರಲ್ಲಿ  ತೆರೆಗೆ ಬಂದ ಈ ಚಿತ್ರ ಒಂದು ಗಂಟೆ ನಲವತ್ತೈದು ನಿಮಿಷಗಳಷ್ಟು ಉದ್ದವಿದೆ. 

Thursday, November 8, 2012

VFX-ಮಾಯಾಜಾಲದ ಬೆನ್ನುಬಿದ್ದು..

ಸ್ಮಿತ್ ಕೆಮೆರಾ.
ಜಾರ್ಜ್ ಮೆಲಿಸ್.
ನಮ್ಮ ಸಿನೆಮಾದ ಶೀರ್ಷಿಕೆಯ ಗ್ರಾಫಿಕ್ಸ್ ಹೀಗೆಯೇ ಬರಬೇಕು ಎಂಬ ಕಲ್ಪನೆ ನನ್ನಲ್ಲಿತ್ತು.ಹಾಗಾಗಿ ಬಜೆಟ್ಟಿನ ಮಿತಿಯಲ್ಲಿ ಅದೇಗೆ ನಾನಂದುಕೊಂಡದ್ದನ್ನು ಮಾಡಿಸುವುದು ಎಂಬ ಜಿಜ್ಞಾಸೆಗೆ ಬಿದ್ದಿದ್ದೆ. ಗ್ರಾಫಿಕ್ಸ್, VFX ಎಲ್ಲಾ ಹೇಗೆ ಮಾಡುತ್ತಾರೆಂಬ ಕಲ್ಪನೆ ಇರಲಿಲ್ಲ . ಹೆಸರಾಂತ ಸ್ಟುಡಿಯೋಗೆ ಕೆಲಸ ವಹಿಸಿ ಆರಾಮವಾಗಿದ್ದರೆ ಮುಗೀತು. ಅವರೊಂದು ಪ್ರೂಫ್ ಕೊಟ್ಟು ಓಕೆ ಎಂದಾಕ್ಷಣ ಅಂತಿಮ ರೂಪ ಕೊಟ್ಟು ಬಿಡುತ್ತಿದ್ದರು. ಅದೆಲ್ಲಾ ಸೆಕೆಂಡಿನ ಲೆಕ್ಕದಲ್ಲಿ ನಡೆಯುತ್ತಿದ್ದ ಕೆಲಸ . ಪ್ರತಿ ಫ್ರೇಮಿಗೂ ದುಡ್ಡು. ಆದರೆ ನಮ್ಮ ಸಿನೆಮಾದಲ್ಲಿ ಕೋಟಿ ಕೋಟಿ ಬಜೆತ್ತಿರಲಿಲ್ಲ. ಹಾಗಂತ ಗುಣಮಟ್ಟದಲ್ಲಿ ರಾಜಿಯಾಗುವುದಾದರೂ ಹೇಗೆ?   ಅದಕ್ಕೆ ನನಗೆ ಪಕ್ಕ ಕೆಲಸಗಾರನೋಬ್ಬನ ಅವಶ್ಯಕತೆ ಇತ್ತು. ಆವಾಗ ನನಗೆ ಸಿಕ್ಕಿದ್ದು ಪ್ರದೀಪ್. VFX ವಿಷಯದಲ್ಲಿ ಸಾಕಷ್ಟು ತಿಳಿದುಕೊಂಡಿದ್ದ ವ್ಯಕ್ತಿ. ನಮ್ಮ ಸಿನೆಮಾಗೆ ಕೆಲಸ ಮಾಡುತ್ತೇನೆ ಎಂದಾಗ ಅನುಮಾನದಿಂದ ಒಪ್ಪಿಕೊಂಡಿದ್ದೆ.. ಆದರೂ ಮೊದಲು ನನಗೆ ನಿಮ್ಮ ಕೆಲಸ ತೋರಿಸಿ ಎಂದಿದ್ದೆ. ಆಗ ಅವರು ತೋರಿಸಿದ ಒಂದೆರೆಡು ತುಣುಕುಗಳನ್ನು ಕಂಡು ನನಗೆ ಖುಷಿಯಾಯಿತು. ಅವರಿಗೆ ನನ್ನ ಸಿನೆಮಾದ ಶೀರ್ಷಿಕೆಯ ಕೆಲಸ ವಹಿಸಿದೆ. ತುಂಬಾ ಅದ್ಭುತವಾಗಿ ಕೆಲಸ ಮಾಡಿಕೊಟ್ಟರು. ಆಮೇಲೆ ನಮ್ಮ ಸಿನೆಮಾದ ಇನ್ನಿತರ ಕೆಲಸಗಳು ಸ್ವಲ್ಪ ತಡವಾದವು. ಆ ಸಂದರ್ಭದಲ್ಲಿ ನನಗೆ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಯಿತು.
ಅರ್.ಡಬ್ಲ್ಯೂ.ಪಾಲ್
ನಾವೂ ಕೂಡ 2012 ಅಥವಾ ಜುರಾಸಿಕ್ ಪಾರ್ಕ್ ತರಹದ ಸಿನೆಮಾ ಮಾಡಲು ಸಾಧ್ಯವೇ ..? ಆ ಮಟ್ಟದ ಗ್ರಾಫಿಕ್ಸ್ ನಮ್ಮಲ್ಲಿ ಸಾಧ್ಯವೇ   ಎಂಬ ಪ್ರಶ್ನೆ ಕಾಡತೊಡಗಿತು.  ಹಣ ತಂತ್ರಜ್ಞಾನ ಯಾವುದು ಇದಕ್ಕೆ ಅಡ್ಡಗಾಲು ಹಾಕಬಹುದು..? ನಮ್ಮಲ್ಲೂ ನೂರಾರು ಪುರಾಣದ             ರೋಮಾಂಚಕ ಕಥೆಗಳಿವೆ. ಅವುಗಳನ್ನು ಪರಿಣಾಮಕಾರಿಯಾಗಿ ತೆರೆಯ ಮೇಲೆ ತರಬೇಕೆಂದರೆ VFX ಅಗತ್ಯ. ಅದೇ ಸಮಯಕ್ಕೆ ಬಂದ ಪ್ರದೀಪ್ 'ಸಾರ್ ಹೇಗೂ ಫ್ರೀ ಇದ್ದೀರಾ ನೀವೇ ಸ್ಟಡಿ ಮಾಡಬಹುದು 'ಎಂದು ಒಂದೆರೆಡು ಗ್ರಾಫಿಕ್ಸ್ ತಂತ್ರಜ್ಞಾನದ ತಂತ್ರಾಂಶಗಳನ್ನು ನನ್ನ ಕಂಪ್ಯೂಟರಿಗೆ ತುಂಬಿಹೋದರು. ಅದಕ್ಕೂ ಮುನ್ನ ಒಂದಷ್ಟು ಅಭ್ಯಾಸ ಮಾಡಿದೆ. ಅದರ ಬಗ್ಗೆ ಅದ್ಯಯನ ಮಾಡಿದೆ. ಆನಂತರ ನಾನು ನಿಧಾನಕ್ಕೆ trial and error ಮಾಡುತ್ತಾ ಹೋದೆ . ಇಂಟರ್ನೆಟ್ ಸಹಾಯದಿಂದ ಒಂದಷ್ಟು ಕಲಿತೆ. ಗೆಳೆಯ ಪಿಲಿಪ್ ಒಂದಷ್ಟು ಸಾಮಗ್ರಿ ಒದಗಿಸಿದರು. ಕಲಿಯುತ್ತ ಹೋದಂತೆ ನನ್ನ ಮುಂದೆ ಒಂದು ಹೊಸ ಪ್ರಪಂಚವೇ ತೆರೆದುಕೊಂಡಿತು. ನಮ್ಮ ಇತಿಮಿತಿಯಲ್ಲಿ ದೃಶ್ಯ ವೈಭವದಲ್ಲಿ ಸಾಧಿಸಬಹುದಾದ ಸಾಧ್ಯತೆಗಳ ಅಂದಾಜು ಗೋಚರವಾಯಿತು .
 ಪ್ರಾಯೋಗಿಕವಾಗಿ ನಾನು ಕಲಿಯುತ್ತಾ ಹೋದಂತೆ ನನ್ನ ಆಸಕ್ತಿ, ಕುತೂಹಲ ಇಮ್ಮಡಿಯಾಯಿತು. VFX ನ ಇತಿಹಾಸದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಎನಿಸಿತು. ಯಾವಾಗ ಯಾವಾಗ ಸಿನಿಮಾದಲ್ಲಿ ಬಳಕೆಯ ಪ್ರಾರಂಭವಾಯಿತು. ? ಹೇಗೆ ಅದರ ಸಾಧ್ಯತೆಗಳು ಹೆಚ್ಚಾದವು ಎಂಬ ಸಂಗತಿ ತಿಳಿದುಕೊಳ್ಳಬೇಕೆಂಬಾಸೆಯಾಯಿತು.. ಒಂದು ಗಣಕಯಂತ್ರದಲ್ಲಿ ಒಂದು ಜಗತ್ತನ್ನೇ ಸೃಷ್ಟಿಸಿಬಿಡುವ ತಂತ್ರಜ್ಞಾನಕ್ಕೆ ಸಲಾಮು ಹೊಡೆಯದೆ ಬೇರೆ ಮಾರ್ಗವಿರಲಿಲ್ಲ .ನನ್ನ ಆ ಅಭ್ಯಾಸದ ಹಾದಿಯಲ್ಲಿ ನಾನು ಕಂಡುಕೊಂಡ, ತಿಳಿದುಕೊಂಡ ವಿಷಯಗಳನ್ನು ಸುಮ್ಮನೆ ಬರೆಯುತ್ತಾ ಹೋಗುವ ಎನಿಸಿತು. 
 ಈವತ್ತು ದೃಶ್ಯ ವೈಭವ ಅಥವಾ VFX ಸಾಕಷ್ಟು ಸಾಧನೆಯ ಹೆಜ್ಜೆಗಳನ್ನಿಟ್ಟಿದೆ.  ಸ್ಪೆಷಲ್ ಎಫೆಕ್ಟ್ ನ ಮೊದಲು ಸಿನೆಮಾದಲ್ಲಿ ಬಳಸಿದ್ದು ಜಾರ್ಜ್ ಮೆಲಿಸ್. ಇತ್ತೀಚಿಗೆ ಬಂದ ಹ್ಯೂಗೋ ಸಿನೆಮಾ ನೋಡಿರಬಹುದು. ಅದು ಇದೆ ಮೆಲಿಸ್ ನ ಜೀವನಚರಿತ್ರೆ ಆಧರಿಸಿದ ಚಿತ್ರ.  VFX ನ ಪಿತಾಮಹ ಈ ಜಾರ್ಜ್ ಮೆಲಿಸ್ ಎಂದು ಹೇಳಬಹುದು.. ಚಿತ್ರ ಮಾಧ್ಯಮದಲ್ಲಿ ಹೊಸಹೊಸದನ್ನು ತೋರಿಸಲು ಆತ ಕಂಡು ಕೊಂಡ ಉಪಾಯಗಳು ನಮ್ಮನ್ನು ಬೆರಗುಗೊಳಿಸದೆ ಇರದು. ಸಿನೆಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಡಬಲ್ ಎಕ್ಸ್ ಪೋಸರ್ ಬಳಸಿದ್ದು ಇದೆ ಮೆಲಿಸ್. ಒಂದು ಕಡೆಯ ನೆಗಟಿವ್ ಅನ್ನು ಮುಚ್ಚಿ ಮತ್ತೊಂದು ಕಡೆ ಮಾತ್ರ ಎಕ್ಸ್ ಪೋಸ್ ಮಾಡಿ ಅದರಲ್ಲಿ ಚಿತ್ರೀಕರಿಸಿ, ಆನಂತರ ಉಳಿದರ್ಧದಲ್ಲಿ ಮತ್ತೆ ಚಿತ್ರೀಕರಿಸಿದ್ದು ಆ ಕಾಲಕ್ಕೆ ಒಂದು ದೊಡ್ಡ ಸಾಧನೆಯೇ ಸರಿ. 1902 ರಲ್ಲಿ ಬಂದ ಇಂಡಿಯನ್ ರಬ್ಬರ್ ಹೆಡ್ [ಇಂಡಿಯನ್ ರಬ್ಬರ್ ಹೆಡ ಚಿತ್ರದ ತುಣುಕು.]ನಲ್ಲಿ  ಈ ಉಪಾಯ ಬಳಸಿದ್ದು ಆವತ್ತಿನ ಜನರಿಗೆ ಅದ್ಭುತ ಎನಿಸದಿರಲಿಲ್ಲ . ಹಾಗೆಯೇ ಆತನ ಎ  ಟ್ರಿಪ್ ಟು ಮೂನ್  ಚಿತ್ರದಲ್ಲೂ ಕೂಡ ಒಂದಷ್ಟು ಹೊಸ ಹೊಸ ಉಪಾಯ ಬಳಸಲಾಗಿತು.
 ಮೆಲಿಸ್ ನ ನಂತರ ಈ ಕ್ಷೇತ್ರದಲ್ಲಿ ಹೆಚ್ಚು ತಲೆ ಕೆಡಿಸಿಕೊಂಡಿದ್ದು ರಾಬರ್ಟ್ ಡಬ್ಲ್ಯೂ ಪಾಲ್. ದಿ ಹಾಂಟೆಡ್ ಕ್ಯೂರಿಯಾಸಿಟಿ ಶಾಪ್ [1901] ವೀಡಿಯೊ ತುಣುಕಿಗಾಗಿ ಇಲ್ಲಿ ಕ್ಲಿಕ್ಕಿಸಿ ಚಿತ್ರದಲ್ಲಿ ಕೆಲವೊಂದು ಟ್ರಿಕ್ಕಿ ಶಾಟ್ ಗಳನ್ನ ಸಂಯೋಜಿಸಲಾಗಿತ್ತು. ಚಿತ್ರದ ಒಂದು ದೃಶ್ಯದಲ್ಲಿ ಶಾಪ್ ಒಳಗೆ ಒಂದು ಹೆಂಗಸಿನ ಅರ್ಧಭಾಗ ಮೊದಲು ಬಂದು ಅದರ ಹಿಂದೆ ಉಳಿದರ್ಧ ಭಾಗ ಬರುವಂತೆ, ಅಂಗಡಿಯವ ಆಕೆಯನ್ನು ಅಪ್ಪಿಕೊಳ್ಳಲು ಮುಂದಾದಾಗ ಆಕೆಯಾಗಿ ಮಮ್ಮಿಯಾಗಿ ರೂಪಾಂತರವಾಗಿ, ಆ ತಕ್ಷಣ ಅಸ್ಥಿಪಂಜರವಾಗುವಂತಹ ದೃಶ್ಯ ದ ಪರಿಣಾಮವನ್ನು ಸೃಷ್ಟಿಸಿದ್ದು ಪ್ರೇಕ್ಷಕರಿಗೆ ರೋಮಾಂಚನ ಉಂಟು ಮಾಡಿತ್ತು . ಈ ಚಿತ್ರದ ನಿರ್ದೇಶಕ ಡಬ್ಲ್ಯೂ.ಅರ. ಬೂತ್ ಆದರೂ ನಿರ್ಮಾಪಕನಾಗಿದ್ದ ಪಾಲ್ ನ ಸೃಜನಾತ್ಮಕತೆ ಇದರ ಹಿಂದೆ ಇದ್ದೆ ಇತ್ತು . 1906 ರಲ್ಲಿ ತೆರೆಗೆ ಬಂದ ದಿ ? ಮೊಟಾರಿಸ್ಟ್ [ವೀಡಿಯೊ ತುಣುಕಿಗಾಗಿ ಇಲ್ಲಿ ಕ್ಲಿಕ್ಕಿಸಿ.]ನ ಕಥೆ ಹೀಗಿದೆ . ಪ್ರವಾಸಕ್ಕೆ  ಹೊರಟ ದಂಪತಿಗಳ ಕಾರಿನ ವೇಗ ಮಿತಿ ಮೀರಿ ಕಾರು ಆಕಾಶಕ್ಕೆ ಜಿಗಿಯುತ್ತದೆ.. ಅಲ್ಲಿಂದ ಸೌರವ್ಯೂಹಕ್ಕೆ ಹೋಗಿ ಮಂಗಳ   ಗ್ರಹದ ಹೊರ ಉಂಗುರವನ್ನು ರಸ್ತೆಯನ್ನಾಗಿಸಿಕೊಳ್ಳುತ್ತದೆ .ಯಾವ ಗಣಕಯಂತ್ರವೂ ಇರದ ಕಾಲದಲ್ಲಿ ಸಿನೆಮಾ ಮಾಧ್ಯಮದಲ್ಲಿ ಏನೇ ಹೊಸದನ್ನು ಮಾಡಿದರೂ ಆವತ್ತಿಗೆ ಕ್ಯಾಮೆರಾದಲ್ಲೇ ಮಾಡಬೇಕಾಗಿತ್ತು. ಹಾಗಾಗಿ ಚಿತ್ರೀಕರಿಸುವಾಗಲೇ ಅಂದರೆ ಎಕ್ಸ್ ಪೋಸ್ ಮಾಡುವಾಗ ಬೇಕು ಬೇಕಾದ ಭಾಗಗಳನ್ನು ನೆಗಟಿವ್ ಮೇಲೆ ಎಕ್ಸ್ ಪೋಸ್ ಮಾಡಿಕೊಂಡು ಅಂತಿಮರೂಪು ಕೊಡುವುದು ಸುಲಭದ ಮಾತಾಗಿರಲಿಲ್ಲ.  ಆವತ್ತಿಗೆ ಅದೇ ಗಣನೀಯ ಸಾಧನೆ ಎಂದೇ ಹೇಳಬಹುದು. ಅದರೂ ಜಾರ್ಜ್ ಮೆಲಿಸ್ನಂತೆ ಪಾಲ್ ಚಿತ್ರಕರ್ಮಿಯಲ್ಲ  . ತನ್ನ ಕಂಪನಿಯ ಪರಿಕರಗಳನ್ನು ಮಾರಾಟಮಾಡಲು ಚಲನಚಿತ್ರವನ್ನು ಬಳಸಿಕೊಂಡನಷ್ಟೇ ಆದರೂ ಆತ ಅದಕ್ಕಾಗಿ ತಲೆಕೆಡಿಸಿಕೊಂಡದ್ದು ಮಾತ್ರ ಪ್ರಶಂಸನೀಯ. 1910ರ ವೇಳೆಗೆ ಚಿತ್ರ ನಿರ್ಮಾಣದಿಂದ ಹಿಂದೆ ಸರಿದ ಪಾಲ್ ತನ್ನ ಸ್ಟುಡಿಯೋ ಮಾರಿ ತನ್ನ ಸಿನಿಮಾಗಳನ್ನು ಸುಟ್ಟು ಹಾಕಿಬಿಟ್ಟ.
 ಈ ವಿಷಯದಲ್ಲಿ ಹೆಸರಿಸ ಬೇಕಾದ ಮತ್ತೊಬ್ಬ ಚಿತ್ರಕರ್ಮಿ ಛಾಯಾಗ್ರಾಹಕ ಜಿ.ಎ.ಸ್ಮಿತ್.1897ರಲ್ಲಿ ಸ್ವತಹ ಕೆಮೆರಾ ತಯಾರಿಸಿಕೊಂಡು  ಚಿತ್ರ ನಿರ್ಮಾಣಕ್ಕಿಳಿದ ಸ್ಮಿತ್ ಸುಮಾರು ಕಾಲ್ಪನಿಕ ಕಥಾ ಹಂದರದ ಸಿನೆಮಾಗಳನ್ನು ನಿರ್ಮಿಸಿದ.   [ಸಶೇಷ]

Tuesday, November 6, 2012

ಸೆನ್ಸಾರ್ ಪರೀಕ್ಷೆ ಪಾಸಾದದ್ದು...


ಸಿನೆಮಾವೆಲ್ಲಾ ಮಾಡಿಯಾದ ಮೇಲೆ ಜನರ ಮುಂದಿಡುವುದಕ್ಕೂ ಮುನ್ನ ದೊಡ್ಡ ಪರೀಕ್ಷೆಯೊಂದನ್ನು ಎದುರಿಸಬೇಕಾಗುತ್ತದೆ . ಅದೇ ಸೆನ್ಸಾರ್. ಸೆನ್ಸಾರ್ ಮಂಡಳಿ ಅವರ ನೀತಿ ನಿಯಮಗಳಿಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಆದರೆ ಅದೇ ಕೆಲವೊಮ್ಮೆ ಚಿತ್ರ ನಿರ್ಮಾಪಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿ ಬಿಡುತ್ತದೆ. ಚಿತ್ರದಲ್ಲಿ ಸಿಗರೇಟು ಸೇದುವ ದೃಶ್ಯ ಇದ್ದರೆ ಆ ಶಾಟ್  ನಲ್ಲಿ ಧೂಮಪಾನ ಸೇವನೆಯ ಎಚ್ಚರಿಕೆಯ ಸಂದೇಶವನ್ನು ಹಾಕಿಬಿಡಿ ಎನ್ನುತ್ತಾರೆ. ಆದರೆ ಅದಕ್ಕೆ ನಿರ್ಮಾಪಕ/ನಿರ್ದೇಶಕ ಸಂಕಲನ ಕೇಂದ್ರ ಕ್ಕೆ ಹೋಗಿ ಆ ಶಾಟ್ ಗಳನ್ನೂ ಬೇರ್ಪಡಿಸಿ, ಅದರ ಕೆಳಗೆ ಆ ಸಂದೇಶವನ್ನು ಸೇರಿಸಿ, ಆನಂತರ ಅದನ್ನು ಆಪ್ತಿಕಲ್ಸ್  ಮಾಡಿಸಿ ನೆಗೆಟಿವ್ ಪ್ರಿಂಟ್ ಹಾಕಿಸಿ, ಆಮೇಲೆ ಅದನ್ನು ತರಬೇಕು. ಅಷ್ಟರವರೆಗೆ ಹಣ ಸಮಯ ಎರಡೂ  ಸಾಕಷ್ಟು ಖರ್ಚಾಗಿರುತ್ತದೆ. ಅದೇ ರೀತಿ ಯಾವುದಾದರೂ ಆಕ್ಷೇಪಣಾರ್ಹ ದೃಶ್ಯವೇನಾದರೂ ಇದ್ದರೆ ಅದನ್ನು ಅದನ್ನು ತೆಗೆದುಬಿಡಿ, ಅಕಸ್ಮಾತ್ ಅದರ ಗತಿಯಲ್ಲಿ ಕುಂದುಂಟಾಗುತ್ತದೆಂದರೆ ಅದಷ್ಟೇ ಅಳಿಸಿಬಿಡಿ ಎನ್ನುತಾರೆ . ಆಗಲೂ  ಮತ್ತದೇ ಪ್ರಕ್ರಿಯೆ...
ಹಾಗಾಗಿಯೇ ಸಿನಿಮಾದವರ ನಡುವೆ ಮತ್ತು ಸೆನ್ಸಾರ್ ಅಧಿಕಾರಿಗಳ ನಡುವೆ ಆಗಾಗ ಜಗ್ಗಾಟವಾಗುವುದುಂಟು.
 ಸೆನ್ಸಾರ್ ಮಂಡಳಿಯ ಉದ್ದೇಶವಿಷ್ಟೇ. ಒಬ್ಬ ನೋಡುಗನಿಗೆ ಆ  ಸಿನೆಮಾ ಯಾವುದೇ ರೀತಿಯ ದುಷ್ಪರಿಣಾಮ, ದುಷ್ಕೃತ್ಯಕ್ಕೆ  ಪ್ರೇರೇಪಣೆಯಾಗಬಾರದು ಎನ್ನುವುದು. 
ನನಗೆ ಅಲ್ಪಸ್ವಲ್ಪ ಸೆನ್ಸಾರ್ ಮಂಡಳಿಯ ಬಗ್ಗೆ ಅರಿವು ಇದ್ದುದರಿನದಲೇ ನಾನು ನಮ್ಮ ಸಿನಿಮಾ ಮಾರ್ಚ್ 23 ನ್ನು ಸಂಕಲನ ಕೇಂದ್ರದಲ್ಲೇ ಒಂದಷ್ಟು ತುಂಡರಿಸಿಬಿಟ್ಟಿದ್ದೆ. ದೃಶ್ಯ ರೂಪದಲ್ಲಿ ಯಾವುದೇ ಕತ್ತರಿಯಾಗದಂತಾಗಲು ಪ್ರಯತ್ನಿಸಿದ್ದೆ. ಮಾತಿನಲ್ಲಂತೂ ಯಾವುದೇ ರೀತಿಯ ದ್ವಂದ್ವಾರ್ಥ ಇಲ್ಲದ್ದರಿಂದ ನಮ್ಮ ಸಿನಿಮಾಕ್ಕೆ ಯಾವುದೇ ರೀತಿಯ ಕಟ್ ಬರಲಾರದು ಎನಿಸಿತ್ತು.
 ಸೆನ್ಸಾರ್ ಕಮಿಟಿಯಲ್ಲಿ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಸದಸ್ಯರಿರುತ್ತಾರೆ. ಅವರಿಗೂ ತಾವು ಯಾವ ಸಿನೆಮಾವನ್ನು ನೋಡಲು ಹೋಗುತ್ತೇವೆ ಎಂಬುದರ ಅರಿವು ಕೊನೆಯ ಕ್ಷಣದವರೆಗೂ ಇರುವುದಿಲ್ಲ .ನಾವು ಅಂದರೆ ಸಿನಿಮಾ ನಿರ್ದೇಶಕ, ನಿರ್ಮಾಪಕರು ಸಿನಿಮಾ ಪ್ರದರ್ಶನ ಏರ್ಪಡಿಸಿ ಚಿತ್ರಮಂದಿರದ ಹೊರಗೆ ಕಾಯುತ್ತಾ ಕುಳಿತುಕೊಳ್ಳಬೇಕು. ಅವರ ಬಳಿ, ಸಿನಿಮಾದ ಸಂಪೂರ್ಣ ಬರಹದ ಪ್ರತಿ ಇರುತ್ತದೆ. ಅವರು ಸಿನಿಮಾ ನೋಡುತ್ತಾ ನೋಡುತ್ತಾ ಏನಾದರೂ ಇದ್ದಲ್ಲಿ ಅದನ್ನು ನೋಟ್ ಮಾಡಿಕೊಳ್ಳುತ್ತಾರೆ.
ನಮ್ಮ ಸಿನೆಮಾ ನೋಡುವವರೆಗೂ ಹೊರಗಡೆ ನಾನು ಗಿರಿಬಾಲು ಏನೇನೋ ಹರಟುತ್ತಾ. ಕುಳಿತಿದ್ದೆವು.  ಸಿನಿಮಾ ಮುಗಿಯಿತು. ಚಿತ್ರಮಂದಿರದಿಂದ ಹೊರಬಂದ ಸದಸ್ಯರೊಬ್ಬರು ಅಲ್ಲಿ ಇನ್ನೊಂದು ಸಿನೆಮಾ ನೋಡಲು  ಕುಳಿತಿದ್ದ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿಯವರ ಬಳಿ ಹೋಗಿ ' ಒಳ್ಳೆ ಸಿನಿಮಾರಿ..ಚೆನ್ನಾಗಿತ್ತು...ವೆರಿ ಇಂಟರೆಸ್ಟಿಂಗ್ ' ಎಂದರು. ಅಷ್ಟರಲ್ಲಿ ಹೊರಬಂದ ಇನ್ನೊಬ್ಬ ಸದಸ್ಯರು 'ಸೂಪರ್ ಪಿಚ್ಚರ್ ಕಣ್ರೀ .....ಎಲ್ಲಿ ಅದರ ಡೈರಕ್ಟರ್  ' ಎಂದರು. ನಾನು ಕೇಳಿಯೂ ಕೇಳಿಸದವನಂತೆ ಕುಳಿತುಬಿಟ್ಟೆ. ಆಮೇಲೆ ನಿರ್ಮಾಪಕರು ಬಂದರು. ಪರಸ್ಪರ ಪರಿಚಯ ಮಾಡಿಕೊಂಡ ಮೇಲೆ 'ತುಂಬಾ ಒಳ್ಳೆ ಪಿಕ್ಚರ್ ಮಾಡಿದ್ದೀರಾ..ಎಲ್ಲಿ ನಿರ್ದೇಶಕರು?' ಎಂದರು. ಇವರೇ ಎಂದು ನಿರ್ಮಾಪಕರು ನನ್ನೆಡೆಗೆ ತೋರಿಸಿದಾಗ ಅವರು '  ಏನ್ರಿ ನಾನು ಎಲ್ಲಿ ಎಲ್ಲಿ ಅಂತ ಹುಡುಕ್ತಿದೀನಿ.. ನೀವು ಇಲ್ಲೇ ಇದ್ದು ಮಾತಾಡಲೇ ಇಲ್ಲ.. 'ಎಂದವರು ಮೆಚ್ಚುಗೆಯ ಮಾತುಗಳನ್ನಾಡಿ ಹೊರಟುಹೋದರು. 
ಆನಂತರ ಸೆನ್ಸಾರ್ ಮಂಡಳಿಯ ಅಧ್ಯಕ್ಷರು  ಕರೆದು ಎರಡು ಮಾತುಗಳನ್ನೂ , ಸ್ವಾಮೀ ನಿತ್ಯಾನಂದ ವಿಡಿಯೋವನ್ನು ಹೋಲುವ ದೃಶ್ಯವನ್ನು ಕತ್ತರಿಸುವಂತೆ ಹೇಳಿದರು.
'ಎಲ್ರೂ ಮಾಡಿದ್ದೆ ಮಾಡ್ತಾರೆ..ಕುಯ್ದದ್ದೆ ಕುಯ್ತಾರೆ..ನೀವು ಅದು ಬಿಟ್ಟು ಬೇರೇನೋ ಮಾಡಿದ್ದೀರಿ...ಗುಡ್ ಅಟ್ಟೆಂಪ್ಟ್ .ಆಲ್ ದಿ ಬೆಸ್ಟ್ ' ಎಂದರು..
ಭರವಸೆ ಮತ್ತೆ ಗರಿಗೆದರಿತು.



Sunday, November 4, 2012

ಕನ್ನಡದ ಕ್ರಾಂತಿಕಾರಿ ರಾಯಣ್ಣ ಮತ್ತು ಇಂಗ್ಲಿಷಿನ 007

ಈ ವಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ  ಬಿಡುಗಡೆಯಾಗಿದೆ. ಚಿತ್ರದ ಬಜೆಟ್ ವಿಷಯದಲ್ಲಾಗಲಿ  ಬಿಡುಗಡೆಯಾದ ಚಿತ್ರ ಮಂದಿರಗಳ
ವಿಷಯದಲ್ಲಾಗಲಿ ಕನ್ನಡಕ್ಕೊಂದು ದಾಖಲೆ ಬರೆದ ಚಿತ್ರ ಎಂದೇ  ಹೇಳಬಹುದು. ಕನ್ನಡದ  ಸೂಪರ್ ಸ್ಟಾರ್ ದರ್ಶನ್   ಚಿತ್ರ ಕನ್ನಡ  ಚಿತ್ರರಂಗದಲ್ಲೇ ಅತ್ಯಂತ ವೆಚ್ಚದ ಚಿತ್ರ ಎನ್ನುವುದು ನಿಜ . ಕನ್ನಡದ ಮಟ್ಟಿಗೆ ಒಂದು ಐತಿಹಾಸಿಕ ಸಿನೆಮಾಕ್ಕೆ ಇಷ್ಟು ಖರ್ಚು ಮಾಡಿರುವುದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯೇ. ತಮಿಳು ತೆಲುಗಲ್ಲಿ ಬಹುವೆಚ್ಚದ ಸಿನೆಮಾಗಳು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಮೊನ್ನೆ ಮೊನ್ನೆ ಮಲಯಾಳಂ ಭಾಷೆಯಲ್ಲೂ ' ಪಳಸಿ ರಾಜ' ಎನ್ನುವ ಅದ್ದೂರಿ ವೆಚ್ಚದ ಸಿನೆಮಾ ಬಂದಿತ್ತು . ನಮ್ಮ ಕನ್ನಡದಲ್ಲಿ ಆ ಮಟ್ಟಿಗೆ ಅಂದರೆ ಹಣಕಾಸು ವೆಚ್ಚ ಮಾಡಿ ಸಿನಿಮಾ ಮಾಡುವುದು ಸಾಧ್ಯವಾದೀತಾ..? ಎನ್ನುವ ಪ್ರಶ್ನೆಗೆ ಉತ್ತರವಾಗಿ ಸಂಗೊಳ್ಳಿ ರಾಯಣ್ಣ ಬಂದಿದೆ .
 ಇದೊಂದು ಸಿನಿಮಾವನ್ನು ನಾವು ನೋಡಲೇ ಬೇಕು. ಮತ್ತು ಮೂವತ್ತು ಕೋಟಿ ವೆಚ್ಚದ ಸಿನೆಮಾವನ್ನು ನಾವು ಉಳಿಸಿಕೊಳ್ಳಲೇಬೇಕು. ಯಾಕೆಂದರೆ ಈ ಸಿನೆಮಾ  ನಿಂತರೆ ಕನ್ನಡ ಚಿತ್ರರಂಗದ ಮಾರುಕಟ್ಟೆ  ವಿಸ್ತಾರವಾಗುವುದರಲ್ಲಿ ಸಂದೇಶವಿಲ್ಲ . ನಿರ್ಮಾಪಕರಲ್ಲಿ ಕೋಟಿ  ಕೋಟಿ  ಬಂಡವಾಳ ಹೂಡಿದರೂ ನಾವು ಗೆಲ್ಲಬಹುದು ಎಂಬ ಧೈರ್ಯ ಬರುತ್ತದೆ. ಕನ್ನಡದಲ್ಲಿ ಕೋಟಿ ಕೋಟಿ ಬಾಚಿದ ಸಿನೆಮಾಗಳಿವೆ. ಆದರೆ ಅವ್ಯಾವುವು ನಿರೀಕ್ಷಿತವಲ್ಲ . ಗಂಡುಗಲಿ ರಾಮನ ಸೋಲಿನಿಂದಾಗಿ ಕನ್ನಡ ಚಿತ್ರರಂಗ ಒಬ್ಬ ನಿರ್ಮಾಪಕನನ್ನು ದೂರಮಾಡಿಕೊಳ್ಳುವಂತಾಗಿದ್ದು ಎಲ್ಲರಿಗೂ ಗೊತ್ತಿದೆ . ಹಾಗಾಗಿ ಸಂಗೊಳ್ಳಿ ರಾಯಣ್ಣ ನ  ಯಶಸ್ಸು ಕನ್ನಡಿಗರ ಮಟ್ಟಿಗೆ, ಚಿತ್ರರಂಗದ ಮಟ್ಟಿಗೆ  ಅತ್ಯವಶ್ಯವಾಗಿದೆ.
   
ನಿರ್ದೇಶಕ ಸ್ಯಾಮ್ ಮೆಂಡೆಸ್ ಬಾಂಡ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆಂಬ ಸುದ್ಧಿ ಬಂದಾಗಲೇ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿತ್ತು . ಕಾರಣ ಸ್ಯಾಮ್ ಮೆಂಡೆಸ್ ಹೊಡೆದಾಟದ ಚಿತ್ರಗಳಿಗಿಂತ ಭಾವಾಭಿನಯದ, ಅತ್ಯುತ್ತಮ ಸೂಕ್ಷ್ಮ ಸಂವೇದಿ  ಕಥೆಯ ಸಿನಿಮಾಗಳಿಗೆ ಹೆಸರುವಾಸಿ. ಆತನ ಅಮೆರಿಕನ್ ಬ್ಯೂಟಿ , ರೋಡ್ ಟು ಪರ್ಡಿಶನ್  ಮತ್ತು ರೆವಲ್ಯೂಷನರಿ ರೋಡ್    ಇದಕ್ಕೆ ಸಾಕ್ಷಿ . ಈಗ ಸ್ಕ್ಯಫಾಲ್  ಬಂದಿದೆ. ಚಿತ್ರದ ವಿಶೇಷವೆಂದರೆ ಇಲ್ಲಿನ ಬಾಂಡ್ ಬೇರೆ ಬಾಂಡ್ ಚಿತ್ರಗಳಂತೆ ದೇಶ ದೇಶ ಸುತ್ತುವುದಿಲ್ಲ . ತೀರಾ  ತಂತ್ರಜ್ಞಾನದ  ಹಿಂದೆ ಬೀಳುವುದಿಲ್ಲ . ಈತ ಹೊಡೆದಾಟಕ್ಕೂ ಸೈ , ಶೂಟ್ ಮಾಡಲು ಸೈ ...ಚಿತ್ರದ ಪ್ರಾರಂಭದಲ್ಲಿ ಬರುವ ಚೇಸ್ ದೃಶ್ಯ ಮೈನವಿರೇಳಿಸುತ್ತದೆ . ಕಥೆ ಹೇಳುವ ಅವಶ್ಯಕತೆ ಇಲ್ಲ . ಒಂದಷ್ಟು ಜನ ಸಮಾಜ ಕಂಟಕರಿದ್ದಾರೆ. ಬಾಂಡ್ ಗೆ ಕೈ ತುಂಬಾ ಕೆಲಸವಿದೆ. ಸಹಾಯಕ್ಕೆ ಬಾಂಡ್ ಹುಡುಗಿಯಿದ್ದಾಳೆ .ನೋಡಲು ನಾವು ನೀವು ಇದ್ದೇವೆ ...


Tuesday, October 30, 2012

ಎದೆಗಾರಿಕೆಯ ದೃಶ್ಯರೂಪದ ನಿರೀಕ್ಷೆಯಲ್ಲಿ....

ಹಿಂದೆ ಮುಂದೆ ಕಣ್ಣಾಡಿಸಿ ಅವನು ಕೇಳಿದ ; 'ಹೇಗೆ ಮುಗಿಸಬೇಕೆಂದು ತೀರ್ಮಾನಿಸಿದ್ದೀರಿ..'
ಅಗ್ನಿ ಶ್ರೀಧರ್ ರವರ  'ಎದೆಗಾರಿಕೆ' ಕಿರುಕಾದಂಬರಿಯಲ್ಲಿ ಕೊನೆಯ ಸನ್ನಿವೇಶದಲ್ಲಿ ಬರುವ ಮಾತುಗಳಿವು. ಆತನನ್ನು ಮುಗಿಸಬೇಕೆಂದು ಆಗಲೇ ನಿರ್ಧರಿಸಿ  ಆಗಿದೆ. ಅದಕ್ಕಾಗಿಯೇ ಆತನನ್ನು ಅಲ್ಲಿರಿಸಲಾಗಿದೆ . ಮತ್ತದು ಆತನಿಗೂ ಗೊತ್ತಿದೆ . ಹಾಗಂತ ಆತ ಅಮಾಯಕ ಅಲ್ಲ. ಸುಫಾರಿ ಹಂತಕ. ಶಾರ್ಪ್ ಶೂಟರ್. ಆದರೆ ಸಾವು ಇನ್ನೇನು ಇಂಚುಗಳಷ್ಟು ದೂರವಿದೆ ಎನಿಸುವಾಗ ಎಂತಹ ದಿಟ್ಟನಾದರೂ ವಿಚಲಿತನಾಗುವುದು ಸಹಜ. ಆದರೆ 'ಎದೆಗಾರಿಕೆ'ಯ ಆ ಪಾತ್ರ ಅದನ್ನು ಅಷ್ಟೇ ನಿರ್ಲೀಪ್ತವಾಗಿ ತೆಗೆದುಕೊಳ್ಳುತ್ತದೆ. ಕೊಲೆ ಮಾಡುವವರು ಬೆವರುತ್ತಿದ್ದರೆ , ಉದ್ವೇಗಕ್ಕೊಳಗಾಗುತ್ತಿದ್ದರೆ  ಆತ  ಮಾತ್ರ  ಅದನ್ನ ತೀರಾ ಸಾಮಾನ್ಯವೆನ್ನುವಂತೆ ತೆಗೆದುಕೊಳ್ಳುತ್ತಾನೆ .
ಕಾದಂಬರಿಯ ಈ ಸನ್ನಿವೇಶ ಅದೆಂತಹದ್ದೋ ವೇದನೆ  ಉಂಟುಮಾಡಿದ್ದು ನಿಜ. ದಿನಗಟ್ಟಲೆ ವಾರಗಟ್ಟಲೆ ನಾನು ಹಾಗೆ ಅದರ ಮೆಲುಕಲ್ಲೇ ಕಳೆದುಹೋಗಿದ್ದೇನೆ. ಅದರ ಮೂಡಿಂದ ಈವತ್ತಿಗೂ ಹೊರಬರಲು ಸಾಧ್ಯವಾಗಿಲ್ಲ . ಬೇಸರವಾದಗಳೆಲ್ಲಾ ಎದೆಗಾರಿಕೆ ಕೈಗೆತ್ತಿಕೊಳ್ಳುತ್ತೇನೆ .ಕೇವಲ 72 ಪುಟಗಳ ಪುಸ್ತಕ ಬೀರುವ ಪರಿಣಾಮ ಮಾತ್ರ ವರ್ಣಿಸಲಾಗದ್ದು.
ಅದನ್ನು  ಅವಕಾಶ ಸಿಕ್ಕರೆ ಸಿನಿಮಾ ಮಾಡುವ ಮಹದಾಸೆ ನನಗಿತ್ತು. ನಾನೂ ನನ್ನ ಮಿತಿಯಲ್ಲಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ ಕೂಡ. ಆವಾಗಾವಾಗ ಅದನ್ನು ನೆನಪಿಸಿಕೊಂಡು ರೋಮಾಂಚಿತನಾಗುತ್ತಿದ್ದೆ . 
ಈಗ ಸುಮನಾ ಕಿತ್ತೂರುರವರ  ನಿರ್ದೇಶನದಲ್ಲಿ ಕಾದಂಬರಿ ಸಿನಿಮಾ ರೂಪ ತಾಳಿದೆ. ಅದರ ಪ್ರೊಮೊ ನೋಡಿದ ಮೇಲೆ ಸಿನೆಮಾ ನೋಡುವ ತವಕ ಹೆಚ್ಚಾಗುತ್ತಿದೆ. ಕಾದಂಬರಿಯ ಅಕ್ಷರ ಅಕ್ಷರವೂ ನನಗೆ ಗೊತ್ತಿರುವುದರಿಂದ ಅದರ ದೃಶ್ಯರೂಪದ ಬಗ್ಗೆ ಅತೀವ ಕುತೂಹಲವಿದೆ. ಮೊದಲ ದಿನವೇ ನೋಡುವುದು ಖಾತರಿಯಾಗಿದೆ.
 ಓದಿರುವ ಕಾದಂಬರಿಗಳು, ಕಥೆಗಳು ಸಿನಿಮಾ ರೂಪವೋ ನಾಟಕ ರೂಪವೋ ತಾಳಿದಾಗ ಅದನ್ನು ನೋಡುವ ಖುಷಿಯೇ ಬೇರೆ. ಮುಂದೇನಾಗುತ್ತದೆ ಎಂದು ಗೊತ್ತಿದ್ದರೂ ಅದನ್ನು ಅಷ್ಟೇ ತವಕದಿಂದ ನೋಡುವ ಮನಸಾಗುತ್ತದೆ . ಹಾಗಂತ ಇಡೀ ಪುಸ್ತಕವೇ ಸಿನಿಮಾ ರೂಪ ತಾಳಲು ಸಾಧ್ಯವಿಲ್ಲ ಸಿನಿಮಾಕ್ಕೂ , ಬರಹ ರೂಪಕ್ಕೂ ನಡುವೆ ಇತಿ ಮಿತಿ ಸಾಧ್ಯತೆಗಳಲ್ಲಿ ಸಾಕಷ್ಟು ವ್ಯತ್ಯಾಸ  ಅಂತರಗಳಿವೆ. ನೀವು ಪ್ಯಾಪಿಲಾನ್ ಸಂಪೂರ್ಣ ಕಾದಂಬರಿ ಓದಿದ್ದರೆ ಚಿತ್ರ ಅಷ್ಟು ಖುಷಿ ಕೊಡಲಾರದು. ಆದರೆ ವೆ ಬ್ಯಾಕ್ ಹಾಗಲ್ಲ. ಲಾಂಗ್ ವಾಕ್ ಪುಸ್ತಕದ ತದ್ರೂಪು ಅದು. 3 ಈಡಿಯಟ್ಸ್  ಮತ್ತು ಫೈವ್ ಪಾಯಿಂಟ್ ಸಮೋನ್ ನಡುವೆ ವ್ಯತ್ಯಾಸ ಬಹಳವಿದ್ದರೂ ಪುಸ್ತಕಕ್ಕಿಂತ ಸಿನಿಮಾದ ತೂಕ ಜಾಸ್ತಿ. ಸ್ಲಮ್ ಡಾಗ್ ಮಿಲಿಯೇನರ್  ಪುಸ್ತಕ ರೂಪದಲ್ಲಿರುವ ಮಜಾವೇ ಬೇರೆ. ದೃಶ್ಯದ ರೂಪದ ಸೊಗಸೇ  ಬೇರೆ.  ನನ್ನ ಪ್ರಕಾರ ಕನ್ನಡದಲ್ಲಿ ಬರಹ ರೂಪವನ್ನು ಅಚ್ಚುಕಟ್ಟಾಗಿ ಭಾವಕ್ಕೆ ಧಕ್ಕೆ ತರದಂತೆ ದೃಶ್ಯರೂಪಕ್ಕಿಳಿಸಿದವರಲ್ಲಿ ಮೊದಲಿಗರೆಂದರೆ ಪುಟ್ಟಣ್ಣ ಕಣಗಾಲ್, ಗಿರೀಶ ಕಾಸರವಳ್ಳಿಯವರು. ಅವರು ಸಿನಿಮಾಗಳಿಗಾಗಿ ಸಾಕಷ್ಟು ಬದಲಾವಣೆ  ಮಾಡಿಕೊಂಡರೂ ಅವುಗಳಾವುವು ಕಾದಂಬರಿಯ ಭಾವಕ್ಕೆ ಧಕ್ಕೆ ತರುವಂತದ್ದಾಗಿರಲಿಲ್ಲ. ಪುಟ್ಟಣ್ಣನವರು  ಕನ್ನಡದಲ್ಲಿ 24 ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ 16 ಕಾದಂಬರಿ, 2 ಸಣ್ಣ ಕಥೆಯಾಧರಿಸಿದ್ದು.
ಈಗ ಎದೆಗಾರಿಕೆ ನಿರೀಕ್ಷೆ ಹುಟ್ಟಿಸಿದೆ .