Monday, October 29, 2012

ವೇದಾ ಮೇಡಂ ಜೊತೆ ಇಡೀ ದಿನ... ಭಾಗ-2

ಡೀ ವಾರ ಏನೂ ವಿಶೇಷ ನಡೆಯಲಿಲ್ಲ. ನಾನು ಪುಸ್ತಕ ಕೊಟ್ಟಿದ್ದೆ. ಅಷ್ಟೆಲ್ಲಾ ಆತ್ಮೀಯವಾಗಿ ಮಾತನಾಡಿಸಿದ್ದ ವೇದಾ ಮೇಡಂ ಆಮೇಲಿಂದ ಆ ತರಹದಲ್ಲಿ ನನ್ನೊಂದಿಗಗೇನೂ ವರ್ತಿಸಿರಲಿಲ್ಲ . ಆದರೆ ನಂಗೆ ಮಾತ್ರ ಆಕೆಯ ಆವತ್ತಿನ ನಡವಳಿಕೆಯನ್ನು ಮರೆಯಲು ಸಾಧ್ಯವಾಗಿರಲಿಲ್ಲ . ಈಗೀಗಂತೂ ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳಲು ತೊಡಗಿದ್ದೆ. ಆ ಪುಸ್ತಕ ಓದುತ್ತಿರಬಹುದಾ..? ಇಷ್ಟವಾಗಿಲ್ಲವಾ..? ಎಂಬೆಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಂಡಿದ್ದವು.ಎಷ್ಟೋ ಸಾರಿ ಸುಮ್ಮನೆ ಫೋನ್ ಮಾಡಿ ಒಮ್ಮೆ ಕೇಳೋಣವಾ..?ಎನಿಸಿದರೂ ಆ ಸಾಹಸಕ್ಕೆ ಕೈ ಹಾಕಿರಲಿಲ್ಲ .ಆದರೆ ನಾನು ಮತ್ತೆರೆಡು ಪುಸ್ತಕಗಳನ್ನು ಆಕೆಗಾಗಿ ಎತ್ತಿಟ್ಟುಕೊಂಡಿದ್ದೆ. ಆದರೋ ಇದೆಂತಹ ಸೆಳೆತ ನನ್ನದು ವಿವಾಹಿತೆಯ ಮೇಲೆ ಎಂಬ ಪ್ರಶ್ನೆ ಆವಾಗಾವಾಗ ಹುಟ್ಟುತ್ತಲೇ ಇತ್ತು. ಅದ್ಯಾವ ಸಾಧ್ಯತೆಗಳಿರಬಹುದು ಈ ಸೆಳೆತಕ್ಕೆ ಎನ್ನುವುದೂ ಗೊತ್ತಾಗದೆ ಗೊಂದಲದಲ್ಲಿದ್ದೆ. ನನ್ನ ಸಹೋದ್ಯೋಗಿಗಳಿಗೆ ಹೇಳಿದರೆ ' ಏನು ಗುರು..ಇಮ್ರಾನ್ ಹಶ್ಮಿ ಪಾತ್ರನ ನೀನು ವಹಿಸಿಕೊಂಡಿದ್ದೀಯಾ ಅನ್ಸುತ್ತೆ ...' ಎಂದೆಲ್ಲಿ ಗೇಲಿ ಮಾಡುತ್ತಾರೋ ಎಂಬ ಭಯವಿತ್ತು. ವಿವಾಹಿತ ಹೆಂಗಸಿನ ಸಹವಾಸಕ್ಕೆ ಹೆಸರುವಾಸಿ ಅವನೇ ತಾನೇ...
ನಾನು ಸುಮ್ಮನೆ ಯೋಚಿಸುವುದು ಮಾಡಿದನೆ ಹೊರತು ಬೇರೇನೂ ಮಾಡಲಾಗಲಿಲ್ಲ .ಗೊಂದಲಗಳು ಹಾಗೆಯೇ ಉಳಿದಿದ್ದವು.
ಆವತ್ತು ಶುಕ್ರವಾರ. ನಾನು ಇನ್ನೇನು ಲಾಗ್ ಔಟ್ ಆಗುವುದರಲ್ಲಿದ್ದೆ. ಅಷ್ಟರಲ್ಲಿ ನನ್ನ ಬಳಿ ಬಂದ ವೇದಾ ಮೇಡಂ
'ಏನು..ವೀಕೆಂಡ್ ಪ್ರೋಗ್ರಾಮ್...' ತುಂಬಾ ಸಾಮಾನ್ಯವಾಗಿ ಕೇಳಿದರು. ಅವರ ಧ್ವನಿಯಲ್ಲೆನಾದರೂ ವಿಶೇಷವಿರಬಹುದೇ ಎಂದು ಪರೀಕ್ಷಿಸುವ ಕೆಲಸದಿಂದಾಗಿ ನಾನು ಉತ್ತರಿಸುವುದು ನಿಮಿಷಗಳಷ್ಟು ತಡವಾಗಿತ್ತು.
'ಆ..ಈ ವಾರ ಯಾವುದು ಹೊಸ ಸಿನಿಮಾ ಬಿಡುಗಡೆಯಾಗಿಲ್ಲವಲ್ಲ...ಹಾಗಾಗಿ ಬೇರೇನೂ ಮಾಡೋದು ಅಂತ ಇನ್ನು ಪ್ಲಾನ್ ಮಾಡಿಲ್ಲ.." ಎಂದೆ .
'ಹಾಗಾದ್ರೆ ಸಿಗೊಂವಾ...? ಸುಮ್ನೆ ಮೆಮೊರಬಲ್ ಆಗಿ ವೀಕಂಡ್  ಸ್ಪೆಂಡ್ ಮಾಡೋಣ...' ಈಗಲೂ ಆಕೆಯ ಧ್ವನಿಯಲ್ಲಿ ಏನಾದರೂ ವ್ಯತ್ಯಾಸ ಇರಬಹುದಾ ಎಂಬಂತೆ ನೋಡಿದೆ.ಆದರೆ ಆ ತರಹದ್ದು ಏನೂ ಕಾಣಿಸಲಿಲ್ಲ .
'ಸರಿ..ನೀವು ಹೇಗೆ ಹೇಳಿದರೆ ಹಾಗೆ..' ಎಂದೆ .
''ಏಯ್ ..ಹಾಗೆಲ್ಲಾ ಹೆಂಗಸರಿಗೆ ದಿಡೀರ್ ಅಂತ ಶರಣಾಗಬೇಡ  ಮಾರಾಯಾ..ಆಮೇಲೆ ನಿಂಗೆ ಕಷ್ಟ. ' ಎಂದು ನಕ್ಕಾಗ ನಾನಾಕೆಯ ಮುಖವನ್ನೇ ನೋಡಿದ್ದೆ . ಇನ್ನು ಸುಂದರವಾಗಿ ಕಂಡಿದ್ದರು  ವೇದಾ ಮೇಡಂ. ಅವರ ಮುಂಗುರಳು, ತೀರಾ ತುಂಬಿರದ ಗಲ್ಲಗಳು.ಅವರ ತುಟಿ ..! ನಾನು ಅಗತ್ಯಕ್ಕಿಂತ ಹೆಚ್ಚು ಮಾನಸಿಕವಾಗಿ ಮುಂದುವರೆಯುತ್ತಿರುವೆನಾ ಎನ್ನುವ ಪ್ರಶ್ನೆ ನನ್ನನ್ನು ಕಾಡದಿರಲಿಲ್ಲ .
ಆದರೂ ಅವರ ಮಾತಿಗೆ ಏನು ಹೇಳಬೇಕೆಂದು ತೋಚಲಿಲ್ಲ . ನಗುವುದಾ..?
ನಾನು ಮಾತನಾಡಲಿಲ್ಲ. ನಗುವ ಪ್ರಯತ್ನ ಮಾಡಿದೆ. ಬಹುಶ ಅದು ಪೆಚ್ಚು ನಗೆ ಎನಿಸಿರಬೇಕು.
'ನೋಡು..ಏನಾದರೂ ಮಾತಾಡೋ ಹಂಗಿದ್ರೆ ಮಾತಾಡಿಬಿಡಬಹುದು...ಈ ಪ್ರಶ್ನಾರ್ಥಕ ಚಿಹ್ನೆನ ಮುಖದಲ್ಲಿ ಹೊತ್ಕಂಡ್ರೆ  ಸ್ವಲ್ಪ  ಕಷ್ಟ ನೋಡು... '
ಈಗಲೂ ನಂಗೆ ಏನೂ ಮಾತಾಡುವುದೆಂದು ತೋಚಲಿಲ್ಲ .ಹಾಗಂತ ಸುಮ್ಮನಿರುವುದು ಸರಿಯಲ್ಲ ಎನಿಸಿ ,
' ಹಾಗಲ್ಲ  ಮೇಡಂ. ನೀವು ದೊಡ್ದವರಲ್ವಾ.? ಸರ್ಯಾಗೆ ಹೇಳಿರ್ತೀರ ..ಅದಕ್ಕೆ ಸುಮ್ಮನಾದೆ'  ಎಂದೆ .
'ಅಂದ್ರೆ ನನ್ನ ಆಂಟಿ ಲಿಸ್ಟಿಗೆ ಸೇರ್ಸಿಬಿಟ್ಟೆ  ಅನ್ನು...' ಎಂದರು. ದನಿಯಲ್ಲಿ ಅದೇ ತುಂಟತನ.
'ನನಗೇನೂ ಬೇಜಾರಿಲ್ಲ..ಆದರೂ ನೀವು ಹುಡುಗ್ರು ಆಂಟಿ ಅಂತ ಯಾವ್ಯಾವ ಅರ್ಥ  ಇಟ್ಕೊಂಡು ಪಟ್ಟ ಕೊಡ್ತೀರೋ ಯಾರಿಗ್ಗೊತ್ತು ?'
ಆಕೆ ನಗದೆ ಗಂಭೀರವಾಗಿ ನನ್ನನ್ನೇ ನೋಡಿದರು. ನಾನು ಕಕ್ಕಾಬಿಕ್ಕಿಯಾದೆ.ಏನು ಮಾಡುವುದು? ಆದರೆ ನಿಮಿಷ ತಡೆದ ಆಕೆ ನಕ್ಕುಬಿಟ್ಟರು.
ನನಗೆ ನಿರಾಳವೆನಿಸಿತು..
ನಾನು ನಕ್ಕೆ . ಆಕೆಯೂ ನಕ್ಕು ಬಾಯ್  ಹೇಳಿ ಹೊರಟುಹೋದರು. ಅದೇಕೋ ನಂತರದ ಕ್ಷಣ, ಜಾಗ ಎಲ್ಲಾ ಬರಡುಬರಡೆನಿಸಿತು.
'ಎಷ್ಟು ಚೆನ್ನಾಗಿದ್ದಾರಲ್ವಾ..? ಹಾಗೆ ಮಾತೂ ಆಡ್ತಾರೆ..' ಯಾರಿಗೋ ಹೇಳುವಂತೆ ನನಗೆ ನಾನೇ ಹೇಳಿಕೊಂಡೆ .ಆಮೇಲೆ ನಿಧಾನಕ್ಕೆ ಆಫೀಸಿನಿಂದ ಹೊರಬಂದು  ಮೆಟ್ಟಿಲಿಳಿಯ ತೊಡಗಿದೆ ಮನಸು ಮಾತ್ರ ಎಲ್ಲೋ ಇತ್ತು. ನನಗದು ಗೊತ್ತಾಗುತ್ತಲೂ  ಇತ್ತು. ಆದರೆ ನನ್ನ ಮನಸಿಗೆ ನಾನು ಕಡಿವಾಣ ಹಾಕಲು ಹೋಗಲಿಲ್ಲ .

*************    ***************    ***************

'ಬದುಕು ಅಂದ್ರೆ ಏನಿರಬಹುದು? ಮದುವೆ, ಮನೆ , ಕೆಲಸ , ಹೆಂಡತಿ ಮಕ್ಕಳು..ಇಷ್ಟೇನಾ.?' ಬೈಕಿನ ಹಿಂದೆ ಕುಳಿತಿದ್ದೆ . ಹಾಗೆ  ಬಾಗಿ ಸಂಧ್ಯಾಳ ಕಿವಿಯಲ್ಲಿ ಉಸುರಿದ್ದೆ . ಅವಳ ಲಹರಿಯಲ್ಲಿ ಅವಳಿದ್ದಳು .
'ಏನು.' ಎಂದಳು . ಅವಳ ಸ್ಕೂಟಿ ಆ ಕಡೆ ಈ ಕಡೆ ವಾಲಾಡಿತು . ನಾನು ಮತ್ತೊಮ್ಮೆ ಅದನ್ನೇ ಹೇಳಲು ಅನುವಾದೆ . ಆದರೆ ಅವಳದನ್ನು ಸ್ಪಷ್ಟವಾಗೆ ಕೇಳಿಸಿಕೊಂಡಿದ್ದಳು. ಅದನ್ನು ಜೀರ್ಣಿಸಿಕೊಳ್ಳಲು ಸಮಯ ಹಿಡಿದಿತ್ತು ಅಷ್ಟೇ .
'ನೀನು ಬರ್ತಾ ಬರ್ತಾ ಅಬ್ ನಾರ್ಮಲ್ ಆಗ್ತಿದಿಯಾ ..ಸರಿ ಅದು ಬಿಟ್ಟು ಬೇರೆ ಏನು ಹೇಳಪ್ಪಾ..?' ಎಂದಳು. ಸ್ಕೂಟಿ ಈಗ ತಹಬದಿಗೆ ಬಂದಿತ್ತಾದರೂ ಅದರ ವೇಗ ಕಡಿಮೆಯಾಗಿತ್ತು . 
'ಏನಿರಬಹುದು...? ' ಅದಕ್ಕೆ ಉತ್ತರ ನನಗೂ ಗೊತ್ತಿರಲಿಲ್ಲ . ಆದರೆ ಇಂತಹ ಪ್ರಶ್ನೆಗಳು ಆವಾಗವಾಗ ನನ್ನನ್ನು ನಿದ್ರೆ ಮಾಡಲು ಬಿಡುತ್ತಿರಲಿಲ್ಲ .
'ನೋಡು..ಬದುಕು ಅಂದ್ರೆ ಚೆನ್ನಾಗಿ ಬದುಕೋದಷ್ಟೇ ..ಅದು ಬಿಟ್ಟು ಹಾಗೆ ಹೀಗೆ ಅಂತ ತಲೆ ಕೆಡಿಸಿಕೊಂಡ್ರೆ ಲೈಫು ಕಾಂಪ್ಲಿ ಕೇಟ್  ಆಗುತ್ತೆ ನೋಡು...ಹೀಗೆ ಸುಮಾರು ಜನ ತಲೆ ಕೆಡಿಸ್ಕೊಂಡು ಹೆಂಡ್ತಿ ಬಿಟ್ಟು ಜನ ಬಿಟ್ಟು ಊರು ಬಿಟ್ಟು  ಅಳೆದು ಹುಡುಕಿ ಆಮೇಲೆ ಕೊನೇಲಿ ಬದುಕು ಅಂದ್ರೆ ಬದುಕೋದು ಅಷ್ಟೇ ಅನ್ನೋ ತೀರ್ಮಾನಕ್ಕೆ ಬಂದ್ಬಿಟ್ಟಿದ್ದಾರೆ..'
ಆಕೆ ಸರಾಗವಾಗಿ ಹೇಳುತ್ತಿದ್ದಳು . ಸಂಧ್ಯಾ ಯಾವಾಗಲೂ ಅಷ್ಟೇ . ಅವಳಲ್ಲಿ ಗೊಂದಲಗಳು ಕಡಿಮೆ . ಯಾವುದನ್ನೂ ಅಳೆದು ತೂಗಿ ನೋಡುವ ಜಾಯಮಾನ ಅವಳದಲ್ಲ . ಎಲ್ಲಾ ಸೀದಾಸಾದಾ ಮತ್ತು ಸಲೀಸು . ಅದು ಅಂದ್ರೆ ಅದು , ಇದು ಅಂದ್ರೆ ಇದು. ಅಷ್ಟೇ. ಯಾವದನ್ನು ಅಷ್ಟು ಸಲೀಸಾಗಿ, ಆರಾಮವಾಗಿ ತೆಗೆದುಕೊಳ್ಳಲು  ಹೇಗೆ ಸಾಧ್ಯ ? ನಾನು ಮುಂದಕ್ಕೇನೂ  ಮಾತಾಡಲಿಲ್ಲ . ನಮ್ಮ ಪದವಿಯ ಅಂತಿಮ ವರ್ಷ ಬಂದಿತ್ತು. ಇನ್ನು ಹೀಗೆ ತಿರುಗಾಡಲು ಹೆಚ್ಚು ಸಮಯವಿಲ್ಲ . ಕೊನೆಯ ಪರದೆಗೆ ಸಿದ್ಧರಾಗಬೇಕಿತ್ತು . ಆದರೆ ನಾನು ಇನ್ನು  ಸಿದ್ಧವಾಗಿರಲಿಲ್ಲ . ಮಾನಸಿಕವಾಗಿ ಇನ್ನು ಗೊಂದಲದಲ್ಲಿದ್ದೆ . ಪ್ರೀತಿ, ಪ್ರೇಮ ತಿರುಗಾಟದ ನಂತರ ಮದುವೆ...ಮಧ್ಯ ಒಂದು ಗ್ಯಾಪ್ ಬೇಕೇನೋ ಎನ್ನಿಸಿತ್ತು . ಆದರೆ ಅದನ್ನು ಏನಾದರೂ ಹೇಳಿದರೆ 'ನಾನು ಮಾನಸಿಕವಾಗಿ ಆರೋಗ್ಯಕರವಾಗಿಲ್ಲಾ 'ಎಂದು ಸಂಧ್ಯಾ ಹಿಂದೆ ಮುಂದೆ ನೋಡದೆ ಬಿರುದುಕೊಟ್ಟುಬಿಡುತ್ತಿದ್ದಳು. ಅವಳಾಗಲೇ ಎಲ್ಲದಕ್ಕೂ ಸಿದ್ಧವಾಗಿ ಬಿಟ್ಟಿದ್ದಳು . ಪರೀಕ್ಷೆಯ ಫಲಿತಾಂಶ ಬರುತ್ತಿದ್ದ ಹಾಗೆ ಮನೆಯವರ ಮುಂದೆ ನಮ್ಮ ವಿಷಯ ಪ್ರಸ್ತಾಪ ಮಾಡುವುದು . ಅದಕ್ಕೂ ಮುನ್ನ ಕೆಲಸಕ್ಕೆ  ಅರ್ಜಿ ಗುಜರಾಯಿಸಿ, ಅದನ್ನು ಪಕ್ಕಾ ಮಾಡಿಕೊಳ್ಳುವುದು. ಇಬ್ಬರಲ್ಲಿ ಯಾರಿಗಾದರೋಬ್ಬರಿಗೆ ಕೆಲಸ ಸಿಗುವನ್ತಾಯಿತಾದರೆ ಸಾಕು ಮದುವೆಗೆ ತಡ ಮಾಡುವಂತಿಲ್ಲ . ಮದುವೆಯಾದ ಮೇಲೆ ಇಬ್ಬರೂ ಕೆಲಸ   ಮಾಡುವುದಾ ಇಲ್ಲಾ ಒಬ್ಬರು ಮಾತ್ರ ಅಂದ್ರೆ ತಾನು ಮಾತ್ರ ಮನೆಯಲ್ಲಿದ್ದು ಪಕ್ಕಾ ಗೃಹಿಣಿಯಂತೆ ಮನೆ ಸಂಭಾಳಿಸಿಕೊಂಡು ..ಹೀಗೆ ಆಕೆಯ ಯೋಚನಾಲಹರಿಯ ವಿಸ್ತಾರ ದೊಡ್ಡದಿತ್ತು. ಮತ್ತವಳ ದೃಷ್ಟಿಯಲ್ಲಿ ಅದೆಲ್ಲಾ ಸಾಧ್ಯ. 
ಆದರೆ ನನಗೆ? 
 ಮೊದಲಿಗೆ ಮನೆಯಲ್ಲಿ   ಅದೇಗೆ ನಾನು ಮದುವೆಯಾಗುತ್ತೇನೆ ಅಥವಾ ನನಗೆ ಮಾಡುವೆ ಮಾಡಿ ಎಂದು ಕೇಳುವುದು?  ಎರಡನೆಯದಾಗಿ ಒಂದು ಹುಡುಗಿಯನ್ನು ಪ್ರೀತಿಸುತ್ತಿರುವ ವಿಷಯ ಹೇಳುವುದಾದರೂ ಹೇಗೆ..? ಅಕಸ್ಮಾತ್ ಒಪ್ಪದಿದ್ದರೆ ಸಂಧ್ಯಾ ಹೇಳುವಂತೆ ಹಠ ಮಾಡುವುದು ಹೇಗೆ? 
ಸಂಧ್ಯಾಳ  ಹತ್ತಿರ ಈ ಎಲ್ಲ ಪ್ರಶ್ನೆಗಳಿಗೂ ಉತ್ತರವಿತ್ತು. ಅವಳ ಪ್ರಕಾರ ಮೊದಲು ಮನೆಯವರ ಮುಂದೆ ವಿಷಯ ಪ್ರಸ್ತಾಪ ಮಾಡುವುದು.. ಅವರನ್ನು ಒಪ್ಪಿಸುವುದಕ್ಕೆ ಪ್ರಯತ್ನಿಸುವುದು ..ಅತ್ತು ಕರೆದು ಮಾಡುವುದು..ಆಗಲೂ ಒಪ್ಪದಿದ್ದಾಗ ನಮ್ಮ ಮುಂದಿನ ದಾರಿ ನಾವು ನೋಡಿಕೊಳ್ಳುವುದು...ಇಷ್ಟನ್ನು ಸಂಧ್ಯಾ ಅದೆಷ್ಟು ಸರಳವಾಗಿ ಸಾಮಾನ್ಯ ವಿಷಯವೆನ್ನುವಂತೆ ಹೇಳುತ್ತಿದ್ದಳೆಂದರೆ  ನನಗೆ ನನ್ನ ಬಗ್ಗೆಯೇ ಅನುಮಾನ ಬಂದುಬಿಡುತ್ತಿತ್ತು . 'ಸರಳವಾಗಿರುವ ವಿಷಯವನ್ನು ನಾನೇ  ಕ್ಲಿಷ್ಟಕರವನ್ನಾಗಿಸುತ್ತಿದ್ದೆನಾ 'ಎನಿಸುತ್ತಿತ್ತು . ನಾಲ್ಕು ವರ್ಷದ ಪ್ರೀತಿಗೊಂದು ಗಂಟು ಹಾಕುವ ಕೆಲಸಕ್ಕೆ ಮನಸು ಮಾತ್ರ ಹಿಂದೆ ಸರಿಯುತ್ತಿತ್ತು . ಹಾಗಂತ ಸಂಧ್ಯಾಳ ಹೊರತುಪಡಿಸಿ ನನಗೆ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವೂ ಇರಲಿಲ್ಲ . ಆಕೆಯ ಪ್ರತಿಯೊಂದು ನಡವಳಿಕೆ, ಸಿಟ್ಟು , ಕೋಪ ತಾಪ ಎಲ್ಲವೂ ನನಗೆ ನನ್ನ ಪ್ರಾಣಕ್ಕಿಂತ ಹೆಚ್ಚು ಇಷ್ಟವಾಗುತ್ತಿತ್ತು . ಆದರೆ ಸಮಸ್ಯೆಯಿದ್ದದ್ದು ಎಲ್ಲಿ..?ಸುಮ್ಮನೆ ಕುಳಿತು ಮನೆಯವರ ಬಗ್ಗೆ  ಯೋಚಿಸಿದರೆ  ಮನೆಯವರೂ ಅಂತಹ ಸಮಸ್ಯೆ ತಂದೊಡ್ಡಬಹುದು ಅನಿಸಿರಲಿಲ್ಲವಾದರೂ ಅವರ ಮುಂದೆ ಹೇಗೆ ಕೇಳುವುದೇ ಎನ್ನುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು .
ಆ ಮಾತನ್ನು ಅಷ್ಟಕ್ಕೇ  ಬಿಟ್ಟವಳು,
'ನಾಳೆ  ಗುರುವಾರ. ಬೆಳಿಗ್ಗೆ ಬೇಗನೆ ಎದ್ದು ರಾಯರ ಮಠದ ಹತ್ತಿರ ಬಾ 'ಎಂದು ಅಪ್ಪಣೆ ಹೊರಡಿದಳು ಸಂಧ್ಯಾ . ರಾಯರ ಮಠಕ್ಕೆ ಹೋಗುವುದೇನೂ ಕಷ್ಟದ ಕೆಲಸವಲ್ಲ ಆದರೆ ಬೆಳಿಗ್ಗೆ ಐದು ಘಂಟೆಗೆ ಎದ್ದು ಸಿದ್ಧವಾಗಿ ಅಲ್ಲೀವರೆಗೆ ನಡೆದುಕೊಂಡು ಹೋಗುವುದಿತ್ತಲ್ಲಾ ಅದೇ ಹಿಂಸೆಯಾಗುತ್ತಿತ್ತು. ಆದರೆ ಸಂಧ್ಯಾಳ  ಪ್ರಕಾರ 'ಈಗ ನಮಗೆ ಎಲ್ಲವೂ ಸುಸೂತ್ರವಾಗಿ ನಡೆಯಬೇಕಿತ್ತು . ಹಾಗಾಗಿ ದೇವರ ಸ್ಮರಣೆ ಜಪತಪ ಮಾಡಿದರೆ ಅಡ್ಡಿ ಆತಂಕಗಳು ಇಲ್ಲವಾಗುತ್ತವೆ ..'.ಎಂಬುದು ಆಕೆಯ ಬಲವಾದ ನಂಬಿಕೆ.  ನಾನೇನೂ ನಾಸ್ತಿಕನಲ್ಲವಾದರೂ ಜಪತಪ ದೂರದ ಮಾತಾಗಿತ್ತು.
ಆವತ್ತಿನ ತಿರುಗಾಟ ಕನಸು ಹಂಚಿಕೊಂಡು ರೂಮಿಗೆ ಬಂದಾಗ ಹತ್ತು ಗಂಟೆಯಾಗಿತ್ತು .
'ಬೆಳಿಗ್ಗೆ ಮರೆಯಲೇ ಬೇಡ ನಮಗೆ ಒಳ್ಳೆದಾಗಬೇಕು ಅಂದ್ರೆ ದೇವರ ಕೃಪೆ ಬೇಕಲೇ ಬೇಕು ಸಂಧ್ಯಾ ಒತ್ತಿ ಒತ್ತಿ ಹೇಳಿದ್ದಳು. ನಾನು ತಲೆಯಲ್ಲಾಡಿಸಿದ್ದೆ.
ಆದರೂ ಬೆಳ್ಳಿಗ್ಗೆ ಬೇಗ ಎದ್ದು ಹೋಗಲೇಬೇಕೆಂದು  ನನ್ನ ಗಡಿಯಾರಕ್ಕೆ ಅಲಾರ್ಮ್ ಕೊಟ್ಟು ಮಲಗಿದ್ದೆ .

****************   ******************  **************

ಟ್ರಿನ್... ಟ್ರಿನ್ ನ್  ನ್ ನ್ನ್ ನ್ನ್ ನ್...
ಅಲಾರ್ಮ್ ಗೆ ಬೆಚ್ಚಿ ಎದ್ದು ಕುಳಿತುಕೊಂಡೆ. ಸಮಯ ನೋಡಿದೆ. ಐದು ಘಂಟೆ ತೋರಿಸುತ್ತಿತ್ತು . ಒಂದು ಕ್ಷಣ ನಾನು ಗೊಂದಲಕ್ಕೆ ಬಿದ್ದೆ. ನನಗೆ ವೇದಾ ಮೇಡಂ ಸಿಗಲಿಕ್ಕೆ ಹೇಳಿದ್ದು  ಮದ್ಯಾಹ್ನ ಹನ್ನೆರೆಡು ಘಂಟೆಗೆ . ನಾನು ಐದು ಘಂಟೆಗೆ ಅಲಾರ್ಮ್ ಯಾಕಿಟ್ಟೆ ? ಯಾಕೋ ಪಾಪ ಪ್ರಜ್ಞೆ ಕಾಡ  ತೊಡಗಿತು.
 ಆವತ್ತು ಇದೆ ರೀತಿ ಅಲಾರ್ಮ್ ಹೊಡೆದಿತ್ತು. ಎದ್ದು ಓಡಾಡಿ ನಿದ್ರೆ ತಡೆಯಲಾರದೆ ಮತ್ತೆ ಮಲಗಿಬಿಟ್ಟಿದ್ದೆ. ಆಮೇಲೆ ಸಂಧ್ಯಾ ಕೇಳಿದಾಗ 'ಬೆಳಿಗ್ಗೆ ವಿಪರೀತ ತಲೆನೋವು ಬಂದಿತ್ತು.'ಎಂದಿದ್ದೆ . ಸಂಧ್ಯಾ ಅನುಮಾನ ಪಡುವವಳೇ ಅಲ್ಲ .
'ರಾತ್ರಿ ತುಂಬಾ ಹೊತ್ತು  ಎಚ್ಚರವಾಗಿರ್ತೀಯ ಅದಕ್ಕೆ ಇರ್ಬೇಕು ..'ಎಂದು ಅವಳೇ ಕಾರಣವನ್ನೂ ಹೇಳಿದ್ದಳು . ಆಗ ನನಗೆ ನಿಜಕ್ಕೂ ಬೇಸರವಾಗಿತ್ತು . 'ಇಂಥ ಹುಡುಗಿಗೆ ಸುಳ್ಳು ಹೇಳಬೇಕಾ.?' ಎನಿಸಿತ್ತು.
'ಬಹುಶ  ಇದೆಲ್ಲವನ್ನು ನೋಡಿಯೇ ಏನೋ ರಾಘವೇಂದ್ರ ನಮ್ಮನ್ನು ದೂರ ಮಾಡಿದನಾ? ' ಎಂಬ ತಲೆಹರಟೆಯ ಪ್ರಶ್ನೆ ಬಂದು ಹೋಯಿತು.
 ಸಂಧ್ಯಾಳನ್ನು ನೆನಪಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದರೂ ಆಗಾಗ ಹೀಗಾಗುತ್ತಿತ್ತು.
ಮತ್ತೆ ಹಾಸಿಗೆಗೆ ಬಿದ್ದೆ. ಆದರೆ ಆವತ್ತು ಬಂದ ನಿದ್ರೆ ಈವತ್ತು  ಬರಲೇ ಇಲ್ಲ. ಈವತ್ತು ವೇದಾ ಮೇಡಂ ನನ್ನನ್ಯಾಕೆ  ಕರೆದಿರಬಹುದು ಎಂಬ ಪ್ರಶ್ನೆಯೇ ಪುಳಕನೀಡುತ್ತಿತ್ತು ಕಣ್ಣು ಮುಚ್ಚಿದರೂ ನಿದ್ರೆ ಹತ್ತಿರಕ್ಕೆ ಸುಳಿಯಲಿಲ್ಲ . ಯಾವ ಬಟ್ಟೆ ಹಾಕಿಕೊಳ್ಳಬೇಕು ಯಾವ ಸೆಂಟ್ ಹಾಕಿಕೊಳ್ಳಬೇಕು ಎಂಬುದನ್ನು ರಾತ್ರಿಯೇ ನಿರ್ಧರಿಸಿ ಎತ್ತಿಟ್ಟಿದ್ದರಿಂದ ಈಗ ಮಾಡುವಂತ ಕೆಲಸವೇನೂ ಇರಲಿಲ್ಲ, ನಿದ್ರೆಯೊಂದನ್ನು ಬಿಟ್ಟು.
ಆದರೆ ನಿದ್ರೆ ಮಾತ್ರ ಹತ್ತಿರ ಸುಳಿಯದೇ ಸತಾಯಿಸುತ್ತಿತ್ತು.
                                                                                                                                                    [ಸಶೇಷ ]

Thursday, October 18, 2012

ನಿರ್ಮಾಪಕ ರಾಮುರವರ ಜೊತೆ ಮಾತಾಡಿದ್ದು..

ಆವತ್ತು ಲಾಕಪ್ ಡೆತ್ ಸಿನೆಮಾ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. ನನಗೋ ಸಂಭ್ರಮ .ಅದೊಂದು ಅದ್ಭುತ ಫೈಟಿಂಗ್ ಸಿನಿಮಾ ಎಂಬುದನ್ನು ಅವರಿವರ ಬಾಯಿಂದ ಕೇಳಿದ್ದೆ. ಪತ್ರಿಕೆಯಲ್ಲಿ ಓದಿದ್ದೆ. ಅದರ ಚಿತ್ರೀಕರಣದ ಸಮಯದಲ್ಲಿ ಅಪಘಾತವಾದದ್ದು   ಮತ್ತಿತರ ವಿವರಗಳು ಗೊತ್ತಿದ್ದವು. ಆ ಚಿತ್ರ ನಂಜನಗೂಡಿಗೆ ಬಂದಿತ್ತಾದರೂ ನಾನು ಹೋಗಿ ನೋಡಿರಲಿಲ್ಲ . ನಮ್ಮದು ನಂಜನಗೂಡಿನಿಂದ 9 ಕಿಲೋ ಮೀಟರ್ ದೂರದ ಹಳ್ಳಿ . ಹಾಗಾಗಿ ಅದೇ ಸಿನೆಮಾ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುವ  ಸುದ್ಧಿಯನ್ನು ಕಳೆದ ಭಾನುವಾರ ಮುನ್ನೋಟದಲ್ಲಿ ಕೇಳಿ ತಿಳಿದಿದ್ದ ನನಗೆ ಈ ಭಾನುವಾರ  ಅದೆಷ್ಟು ಬೇಗ ಬೇಗ ಬರುತ್ತದೋ ಎಂಬ ಕಾತರ ಹೇಳತೀರದಾಗಿತ್ತು. ಆವತ್ತು ವಿದ್ಯುತ್ ಹೋಗದಿರಲಿ ಎಂದು ದೇವರಿಗೆ ಹರಕೆ, ಪ್ರಾರ್ಥನೆ ಮಾಡಿಯೂ ಆಗಿತ್ತು. ನಮ್ಮೂರಲ್ಲಿ ಹಾಗೆಯೇ. ಭಾನುವಾರ ಬಂತೆಂದರೆ ವಿದ್ಯುತ್  ಕೈ  ಕೊಡುತ್ತಿತ್ತು ..ನೋಡಿದ್ದವರು ನಾನು ಅಷ್ಟು ಸಲ ನೋಡಿದ್ದೇನೆ , ಹಾಗಿದೆ  ಹೀಗಿದೆ ಎಂದೆಲ್ಲಾ ಕೊಚ್ಚಿ ಕೊಂಡದ್ದು ಬೇರೆ ನೋಡುವ ಕಾತರವನ್ನು ಹೆಚ್ಚಿಸಿತ್ತು. ಜೊತೆಗೆ ಚೇಸ್ ದೃಶ್ಯದ ವರ್ಣನೆಗಳು ಬೇರೆ ತಲೆಕೆಡಿಸಿದ್ದವು.
 ಚಿತ್ರದ ಪ್ರಸಾರ ಪ್ರಾರಂಭವಾಯಿತು. ಚಿತ್ರ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿತ್ತು. ಆವತ್ತು ವಿದ್ಯುತ್ ಕೂಡ ನಮ್ಮ ಜೊತೆಯಿತ್ತು . ಆಸ್ಪತ್ರೆಯಿಂದ ಪ್ರಕಾಶ ರೈ , ಶೋಭರಾಜ್ ಸಂಗಡಿಗರು ದೇವರಾಜರವರನ್ನು ಅಪಹರಿಸಿಕೊಂಡು ಹೊರಟರು. ಪೋಲಿಸರೂ ಅವರ ಬೆನ್ನು ಬಿದ್ದರು. ನಾವೆಲ್ಲಾ ಹುಡುಗರು ಮೈಯೆಲ್ಲಾ ಕಣ್ಣಾದೆವು...ಇನ್ನೇನು ಚೇಸ್ ಪ್ರಾರಂಭವಾಯಿತು ಅಂದುಕೊಂಡೆವು.....ಅಷ್ಟೇ !! ಸಲೀಸಾಗಿ ದೇವರಾಜ್ ಯಾವ ಅಡೆತಡೆಯೂ ಇಲ್ಲದೆ ಕಾಡು ಸೇರಿಕೊಂಡಿದ್ದರು. ನಮಗೆಲ್ಲಾ ಆಶ್ಚರ್ಯ ವಾಯಿತು ಇದೇನು ಪೋಲಿಸರೂ ಸುಮ್ಮನಾದರಾ?
ಕಾರಣವಿಷ್ಟೇ. ಆ ಚೇಸ್   ದೃಶ್ಯವನ್ನು ದೂರದರ್ಶನದವರು ಕತ್ತರಿಸಿಬಿಟ್ಟಿದ್ದರು.ನಮಗಾಗ ದೂರದರ್ಶನದ ಪ್ರದರ್ಶನದ ನಿಯಮಗಳ ಬಗ್ಗೆ, ಸೆನ್ಸಾರ್ ಬಗೆಗೆ ಗೊತ್ತಿಲ್ಲವಾದ್ದರಿಂದ ದೂರದರ್ಶನದವರನ್ನು   ಹಿಗ್ಗಾಮುಗ್ಗಾ ಬೈದುಕೊಂಡಿದ್ದೆವು.  
ಆನಂತರ ನಾನು ಕಾಲೇಜಿಗೆ ನಂಜನಗೂಡಿಗೆ ಬಂದೆ. ಆವಾಗೊಮ್ಮೆ ಲಾಕಪ್ ಡೆತ್ ಚಿತ್ರಮಂದಿರಕ್ಕೆ ಬಂದಿತು. ಮೂರ್ನಾಲ್ಕು ಸಾರಿ ನೋಡಿಬಿಟ್ಟೆ.
ಮೊನ್ನೆ ರಾಮು ಅವರನ್ನು ಭೇಟಿ  ಮಾಡಿದ್ದೆ . ಅವರಿಗೆ ಫೋನ್ ಮಾಡಿದಾಗ ಅವರು ಆಕಾಶ್ ಆಡಿಯೋ ಸ್ಟುಡಿಯೋಗೆ ಬನ್ನಿ  ಎಂದರು. ಮೊದಲೇ ಕೋಟಿ ರಾಮು! ಭಯದಿಂದಲೇ ಹೋದೆ. ಅದೆಷ್ಟು ಸರಳವಾಗಿದ್ದರೆಂದರೆ ನಾನು ಕಳೆದುಹೋದೆ. ಇವರೇನಾ ಕೋಟಿಕೋಟಿ ಖರ್ಚು ಮಾಡಿ ಸಿನೆಮಾ ಮಾಡಿರುವವರು ಮತ್ತು ಮಾಡುತ್ತಲೇ ಇರುವವರು ಎನಿಸಿತು. ನಾನು ನನ್ನ ಉದ್ದೇಶ ಹೇಳಿದೆ. ನಾನೊಂದು ಕಥೆ ಹೇಳಬೇಕು ಎಂದದಕ್ಕೆ 'ಅದಕ್ಕೇನು ಹೇಳಿ ..' ಎಂದರು. ನಾನು ಅನಾಮತ್ತು ನಲವತ್ತು ನಿಮಿಷ ಕಥೆ ಹೇಳಿದೆ. ಸಾವಧಾನವಾಗಿ ಕುಳಿತು ಕೇಳಿಸಿಕೊಂಡರು. ಮಧ್ಯದಲ್ಲಿ ಹತ್ತಾರು ಫೋನ್ ಬಂದರೂ ಮುಖ್ಯವಾದದದೊಂದು ಕರೆ ಮಾತ್ರ ಸ್ವೀಕರಿದರು. . ಕೇವಲ ಒಂದೇ ಒಂದು ಸಿನೆಮಾ, ಅದೂ ಬಿಡುಗಡೆಯಾಗಿಲ್ಲದ ಸಿನೆಮಾ ನಿರ್ದೇಶಕನ ಜೊತೆ ಅಷ್ಟು ದೊಡ್ಡ ನಿರ್ಮಾಪಕರು ಒಂದು ಘಂಟೆ ವ್ಯಯಿಸಿದ್ದು ನನಗೆ ಆಶ್ಚರ್ಯ ತರಿಸಿತು.  ಚಿಕ್ಕ ಪುಟ್ಟ ಕೆಲಸಗಳನ್ನು ಇಟ್ಟುಕೊಂಡು ನಾವು ಬ್ಯುಸಿ ಬ್ಯುಸಿ ಎಂದು ಕೂಗಾಡುವುದು ..ಅಷ್ಟೆಲ್ಲಾ ಸಿನೆಮಾ ಮಾಡಿದ ವ್ಯಕ್ತಿ ಅಷ್ಟು ಚೆನ್ನಾಗಿ, ಮಧ್ಯ ಮಧ್ಯ ಪ್ರಶ್ನೆ ಕೇಳುತ್ತಾ , ನನ್ನ ಕಥೆಗೆ ಸ್ಪಂದಿಸುತ್ತಾ ಸಂಪೂರ್ಣ ಕಥೆ ಕೇಳಿ ಆಮೇಲೂ ಅದರ ಬಗ್ಗೆ ಚರ್ಚಿಸಿದ್ದು ನನಗೆ ಖುಷಿಯಾದದ್ದಷ್ಟೇ ಅಲ್ಲಾ ದೊಡ್ಡವರಿಂದ ಕಲಿಯುವುದು ಸಾಕಷ್ಟಿದೆ ಎನಿಸಿತು.
'ಪ್ರತಿಯೊಬ್ಬರಿಗೂ ಸಮಯ ನೀಡುವ ವ್ಯಕ್ತಿಯೇ ನಿಜವಾಗಿಯೂ ಬ್ಯುಸಿಯಾದ ವ್ಯಕ್ತಿ..' ಎಂದು ಗೆಳೆಯ ಹೇಳಿದ್ದು ನಿಜ ಎನಿಸಿತು.

Tuesday, October 16, 2012

ಜನಶ್ರೀ ಪ್ರಶಸ್ತಿ ಮತ್ತು ಯೋಗರಾಜ್ ಭಟ್ ರ ಮಾತುಗಳು..

'ನಮಗೆ ಬುದ್ದಿ ಬಲಿತಾಗ ಸಿಹಿ ಅಂಗಡಿಯ ಮುಂದೆ ಹೋದಾಗ ಬೂಂದಿ ನೋಡಿ , ತಿನ್ನುವ ಆಸೆಯಾಗುವುದು ಸಹಜ. ಹಾಗೆ ತಿನ್ನುತ್ತಾ ಹೋದಂತೆ ಅದನ್ನು ಹೇಗೆ ಮಾಡುತ್ತಾರೆಂಬ ಕುತೂಹಲ ಉಂಟಾಗಿ ಅದರ ಬಗ್ಗೆ ತಲೆಕೆಡಿಸಿಕೊಂಡು ಮಾಡುವುದನ್ನು ಕಲಿತುಬಿಡುತ್ತೇವೆ. ಕಲಿತಾದ ಮೇಲೇ ಬೂಂದಿಯನ್ನು ಮಾಡಿ ಅಂಗಡಿ ಇಟ್ಟಾಗ ತಿನ್ನುವ ಖುಷಿ ಹೋಗಿಬಿಡುತ್ತದೆ. ಹಾಗೆ ನಮ್ಮ ನಾಲಗೆ ರುಚಿ ಕೆಡಿಸಿಕೊಳ್ಳುತ್ತದೆ. ಹಾಗೆ ಸಿನಿಮಾವೂ , ಸಿನೆಮಾ ತಂತ್ರಜ್ಞರೂ ಕೂಡ . ನಾವೆಲ್ಲಾ ರುಚಿ ಕೆಡಿಸಿಕೊಂಡ ತಂತ್ರಜ್ಞರು. ಒಬ್ಬ ಓದುಗ , ಪ್ರೇಕ್ಷಕ ಎಲ್ಲಿಯವರೆಗೆ ಬರೆ ಓದುಗನಾಗಿಯೇ ಅಥವಾ ಪ್ರೆಕ್ಷಕನಾಗಿಯೇ ಇರುತ್ತಾನೋ ಅಲ್ಲಿಯವರೆಗೆ ಆತ ಓದನ್ನು ,ಚಿತ್ರವನ್ನು ಸವಿಯಬಲ್ಲ..'
ಇದು ಮೊನ್ನೆ ಜನಶ್ರೀ ವಾಹಿನಿಯ ಕಿರುಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್ ಆಡಿದ ಮಾತುಗಳು . ನನಗೆ ಯೋಗರಾಜ್ ಭಟ್ ತುಂಬಾ ಇಷ್ಟ. ವ್ಯಕ್ತಿಯಾಗಿಯೂ, ನಿರ್ದೇಶಕನಾಗಿಯೂ . ಅವರ ಮುಂಗಾರು ಮಳೆಯನ್ನೂ ನಾನು ಚಿತ್ರಮಂದಿರದಲ್ಲೇ ಲೆಕ್ಕವಿಲ್ಲದಷ್ಟು ಸಲ ನೋಡಿದ್ದೇನೆ. ಅವರ ಜೊತೆ ನಾನು ಎರಡೇ ಮಾತಾಡಿರುವುದು. 
ನನಗೂ ಒಮ್ಮೆ ಭಟ್ಟರು ಹೇಳಿದಂತೆ ಭಾಸವಾಗಿಬಿಡುತ್ತದೆ. ಹಾಗಾಗಿಯೇ ನಾನು ಬರೆಯುವುದಕ್ಕಿಂತ ಓದುವುದನ್ನು ಹೆಚ್ಚು ಇಷ್ಟ ಪಡುತ್ತೇನೆ ಸಿನೆಮಾ ಮಾಡುವುದನ್ನು ಹಾಗೂ ನೋಡುವುದನ್ನು ಬೇರೆಬೇರೆಯಾಗಿ ಪರಿಗಣಿಸುತ್ತೇನೆ. ನಾಲಗೆ ರುಚಿ ಕೆಡಿಸಿಕೊಳ್ಳದಿರಲಿ ಎನ್ನುವ ಆಶಯ ನನ್ನದು.
 ಜನಶ್ರೀ ವಾಹಿನಿಯ ಕಿರುಚಿತ್ರದಲ್ಲಿ ನಮ್ಮ ಕಿರುಚಿತ್ರ 'ನಿರಾಕೃತ' ಕ್ಕೆ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ  ಪ್ರಶಸ್ತಿ ಬಂದಿದೆ. ಸಂತಸವಾಗಿದೆ ನಮ್ಮ ಕಿರುಚಿತ್ರದ ಅವಧಿಯಿದ್ದದ್ದು 15 ನಿಮಿಷಗಳು. ಅದನ್ನು ಆರು ನಿಮಿಷಕ್ಕೆ ತುಂಡರಿಸಬೇಕಾದಾಗ ನನಗೆ ಅದರ ಭಾವವೇ ತುಂಡಾಗಿಬಿಡುತ್ತಲ್ಲ ಎನಿಸಿತ್ತು.ಅದು ನಿಜ ಕೂಡ.ಆದರೆ ಕಿರುಚಿತ್ರವೊಂದನ್ನು ಮನೆಯಲ್ಲಿಟ್ಟುಕೊಂಡು ನಾನು ತಯಾರಿಸಿದ ಕಿರುಚಿತ್ರದ ಅವಧಿಯಷ್ಟನ್ನೇ ಸ್ಪರ್ಧೆಗೆ ಇಡೀ ಎಂದು ಹೇಳಲಾಗುವುದಿಲ್ಲವಲ್ಲ... ಹಾಗಾಗಿ ಅದನ್ನು ತುಂಡರಿಸೋಣ ಎಂದು  ನಿರ್ಧರಿಸಿದೆ. ಅದಕ್ಕಾಗಿ ಸಂಕಲನ ಕೇಂದ್ರಕ್ಕೆ ಹೋಗುವುದು, ಅಲ್ಲಿ ಕುಳಿತು ನೀಟಾಗಿ ಭಾವಕ್ಕೆ ಧಕ್ಕೆ ಬರದಂತೆ ತುಂಡರಿಸುವುದು ಆವತ್ತಿನ ನನ್ನ ಕೆಲಸದ ಬಿಸಿಯಲ್ಲಿ ಸಾಧ್ಯವಿರಲಿಲ್ಲ . ಏನು ಮಾಡುವುದು ಎಂದು ಯೋಚಿಸಿದೆ. ನನ್ನಲ್ಲಿದ್ದ ಸಾಫ್ಟ್ ವೇರ್[ಅದು ಸಂಕಲನಕ್ಕೆ ಬಳಸುವ ಸಾಫ್ಟ್ ವೇರ್ ಅಲ್ಲ] ಒಂದರಿಂದ ನಾನೇ ಸಂಕಲನ  ಕಾರ್ಯ ಕೈಗೊಂಡೆ. ಕಿರುಚಿತ್ರವನ್ನು ಅದರ ಭಾವದ ಸಮೇತ ಸರಿ ಸುಮಾರು ಮೂರನೇ ಒಂದು ಭಾಗಕ್ಕಿಳಿಸುವಲ್ಲಿ ಯಶಸ್ವಿಯಾದೆ. ಆಮೇಲೆ ನೋಡಿದಾಗ ನನಗನಿಸಿದ್ದು ಇದಕ್ಕೆ ಯಾವ ವಿಭಾಗದಲ್ಲೂ ಅಂದರೆ ನಿರೂಪಣೆ, ಸಂಕಲನ, ನಿರ್ದೇಶನ.. ಹೀಗೆ ಪ್ರಶಸ್ತಿ ಕೊಡುವುದು ಸೂಕ್ತವಲ್ಲ ಎಂಬುದು. ಕಥೆಗಾಗಿ ಕೊಡಬಹುದು..ಆದರೆ ತಾಂತ್ರಿಕ ಅಂಶಗಳನ್ನು ನಾನೆ ನಿರ್ಜೀವಗೊಳಿಸಿಬಿಟ್ಟಿದ್ದೆ. ಬೇರೇನೂ ಮಾಡಲು ಆಗ ಸಮಯವೂ ಇರಲಿಲ್ಲ . ಹಾಗೆಯೇ ಕಳುಹಿಸಿದ್ದೆ.
ಈಗ ಜನಶ್ರೀಯವರು ಒಟ್ಟಾರೆಯಾಗಿ ಚಿತ್ರದ ಕಥೆಯ ಆಶಯವನ್ನು ಪರಿಗಣಿಸಿ ಪ್ರಶಸ್ತಿಕೊಟ್ಟಿದ್ದಾರೆ. 
ಇನ್ನೊಂದು ಖುಷಿಯ  ವಿಷಯವೆಂದರೆ ನನಗೆ ಪ್ರಶಸ್ತಿ ನೀಡಿದ್ದು ಅತೀ ಹೆಚ್ಚು ಚಿತ್ರಗಳ ನಿರ್ದೇಶಕ ಸಾಯಿಪ್ರಕಾಶ್.

Monday, October 15, 2012

ಸಿನೆಮಾ ಮತ್ತು ಪ್ರೊಜೆಕ್ಟರ್....

ನನಗೆ ನಿರ್ದೇಶಕರೊಬ್ಬರು ಹೇಳಿದ ಘಟನೆ ಇದು. ತಮಿಳಿನ ಖ್ಯಾತ ನಿರ್ದೇಶಕರೊಬ್ಬರ ಸಿನೆಮಾ ಅದು.  ಅದರ ನಾಯಕ ಪಾರ್ತಿಬನ್.ಅದು ಕನ್ನಡದಲ್ಲೂ ರೀಮೇಕ್ ಆಯಿತು. ಜೊತೆಗೆ ಅದಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಗಳಿಸಿತ್ತು. ಅದು ತಮಿಳುನಾಡಿಗಿಂತ  ಕರ್ನಾಟಕದ ಚಾಮರಾಜನಗರದ ಚಿತ್ರಮಂದಿರವೊಂದರಲ್ಲಿ ಅಭೂತ ಪೂರ್ವ ಯಶಸ್ಸುಗಳಿಸಿತ್ತಂತೆ. ಇದನ್ನು ಕಂಡ ಆ ಚಿತ್ರದ ನಿರ್ದೇಶಕರಿಗೆ ಅಚ್ಚರಿ. 'ತಮಿಳುನಾಡಿಗಿಂತ ಅದೇಗೆ ಇಲ್ಲಿ ಅಷ್ಟೊಂದು ಯಶಸ್ಸು ಕಾಣಲು ಸಾಧ್ಯ ' ಏನಿಸಿದ್ದೆ ಸೀದಾ  ಚಾಮರಾಜನಗರದ ಆ ಚಿತ್ರಮಂದಿರಕ್ಕೆ ಬಂದು ಒಂದು ಕುರ್ಚಿಯಲ್ಲಿ ಆಸೀನರಾದರು. ಅವರಿಗೆ ಜನರ ಪ್ರತಿಕ್ರಿಯೆಯನ್ನು ಗಮನಿಸುವುದಿತ್ತು. ಚಿತ್ರ ಪ್ರಾರಂಭವಾಯಿತು. ಹಾಗೆ ಮುಗಿಯಿತು. ಜನರೆಲ್ಲಾ ಚಿತ್ರದ ಭಾವಕ್ಕೆ ಪರವಶರಾಗಿದ್ದರು. ಹಾಗೆಯೇ ಚಿತ್ರದ ಉದ್ದವೂ ಮೊಟಕಾಗಿತ್ತು. ಕೆಲವು ಶಾಟ್ ಗಳು ಇರಲೇ ಇಲ್ಲ . ಇದೇನು ಎನಿಸಿ ನಿರ್ದೇಶಕ ಚಿತ್ರಮಂದಿರದ ಮಾಲೀಕನಲ್ಲಿ ತಮ್ಮ ಪರಿಚಯ ಮಾಡಿಕೊಂಡು ಅಲ್ಲಿನ ಪ್ರೊಜೆಕ್ಟರ್ ಕೊನೆಗೆ ಹೋಗಿ ಅಲ್ಲಿದ್ದ ಆಪರೇಟರ್ ನನ್ನು ಕೇಳಿದರಂತೆ. 'ಅಲ್ಲಪ್ಪಾ..ಅದೇಕೆ ಕೆಲವ್ವೊಂದು ಕಡೆ ಕಟ್ ಹಾಗಿರೋಹಂಗಿದೆ...' ಅದಕ್ಕೆ ಆ ಪ್ರೊಜೆಕ್ಟರ್ ಆಪರೇಟರ್ 'ಸಾರ್..ಅಲ್ಲೆಲ್ಲಾ ಬೋರ್ ಹೊಡಿತಿತ್ತು..ಮತ್ತದು ಬೇಕೂ ಇರ್ಲಿಲ್ಲಾ. ಫಸ್ಟ್ ದಿನ ಜನ ಎಲ್ಲಾ ಎದ್ದುಹೊಗ್ತಿದ್ರು. ಅದಕ್ಕೆ ಇಷ್ಟೊಳ್ಳೆ ಸಿನಿಮಾ ಬೋರ್ ಅಯ್ತೈತಲ್ಲಾ...ಅನ್ನಿಸ್ತು. ಎಲ್ಲೆಲ್ಲಿ ಜನ ಹೋಯ್ತಾ ಅವರೋ ಅದನ್ನು ನೋಡ್ಕಂಡು ಹೆಚ್ಚುಕಮ್ಮಿ ಆಗದಿರೋ ಹಂಗೆ ನಾನೇ ಕಟ್ ಮಾಡ್ಬಿಟ್ಟೆ....'ಅಂದನಂತೆ. ನಿರ್ದೇಶಕರು ಅವನನ್ನು ಮೆಚ್ಚಿದ್ದೆ ಅಲ್ಲ ಇನ್ನು ಮುಂದೆ ನನ್ನೆಲ್ಲಾ ಸಿನೆಮಾವನ್ನು ಬಿಡುಗಡೆಗೆ ಮುನ್ನ ಪ್ರೊಜೆಕ್ಟರ್ ಆಪರೇಟರ್ ಗೆ ತೋರಿಸಿ ಅವರ ಸಲಹೆ ಪಡೆಯುತ್ತೇನೆ ಎಂದು ನಿರ್ಧರಿಸಿದರಂತೆ.
ನಮ್ಮ ಚಿತ್ರ ಮಾರ್ಚ್ 23 ರ  ಗ್ರೇಡಿಂಗ್ ಮುಗಿದಿತ್ತು. ಅದರ ಎರಡು ರೀಲುಗಳನ್ನೊಮ್ಮೆ ಪರೀಕ್ಷೆ ಮಾಡೋಣ ಎಂದು ನಮ್ಮ ಕ್ಯಾಮೆರಾಮನ್ ನಿರಂಜನ ಬಾಬು ಹೇಳಿದರು. ಸರಿ ಎಂದದ್ದೆ   ಅಲ್ಲೇ ಇದ್ದ ಪ್ರೊಜೆಕ್ಟರ್ ನಲ್ಲಿ ಆ ಎರಡು ರೀಲುಗಳನ್ನು ನೋಡೇಬಿಡೋಣ ಎನಿಸಿದ್ದರಿಂದ ನಾನು, ನಮ್ಮ ನಿರ್ಮಾಪಕರು, ಸಂಭಾಷಣೆಗಾರ ಗಿರಿಬಾಲು ಮೂವರು ಪ್ರಸಾದ್ನಲ್ಲಿನ ಪೂರ್ವ ವೀಕ್ಷಣಾ ಚಿತ್ರಮಂದಿರದ ಕುರ್ಚಿಗಳಲ್ಲಿ ಆಸೀನರಾದೆವು. ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ನಮ್ಮದೇ ಸಿನಿಮಾ ನೋಡುವ ಖುಷಿ ನಮ್ಮದು. ಅಲ್ಲೀವರೆಗೆ ನಮ್ಮ ಸಿನೆಮಾವನ್ನು ಸಂಕಲನ ಮೇಜಿನ ಮೇಲೆ ನೂರಾರು ಬಾರಿ ನೋಡಿದ್ದಾಗಿತ್ತಾದರೂ ದೊಡ್ಡ ಪರದೆಯಲ್ಲಿ ಡಿಟಿಎಸ್ ಶಬ್ಧದೊಂದಿಗೆ ನೋಡುವ ಖುಷಿಯೇ  ಬೇರೆ. ಸಿನೆಮಾ ಶುರುವಾಯಿತು ಎರಡು ರೀಲು ಮುಗಿಯಿತು. ವರ್ಣವಿನ್ಯಾಸದಲ್ಲಿ ನಮಗೆ ತೃಪ್ತಿಯಿತ್ತು. ನಮ್ಮ ಸಿನೆಮಾದ ಕಥೆ ಮೂರು ಟ್ರಾಕ್ ನಲ್ಲಿ ಹೋಗುವುದರಿಂದ ಮೂರು ಟ್ರಾಕುಗಳೂ ಮೂರು ವಿಧದಲ್ಲಿದ್ದರೆ ಚೆಂದ ಮತ್ತು ಪರಿಣಾಮಕರ ಎಂಬುವುದು ನನ್ನ ಆಶಯವಾಗಿತ್ತು. ಅದಕ್ಕೆ ನಮ್ಮ ತಂತ್ರಜ್ಞರೂ ಹೌದು ಎಂದು ಕೊಂಡಾಡಿದ್ದರು. ಹಾಗಾಗಿ ಕೊನೆಯ ಸಾರಿ ಓಕೆ ಎನ್ನುವ ಮೊದಲು ನೋಡುವವರೆಗೂ ನಮ್ಮೆಲ್ಲರಿಗೂ ಒಂದು ರೀತಿಯ ಕಳವಳ-ಕುತೂಹಲ ಇದ್ದೇ ಇತ್ತು. ಬಹುಶ ಪ್ರತಿ ಪ್ರಯೋಗದ ಹಿಂದೆ ಈ ತೆರನಾದುದದೊಂದು ಭಯ ಕುತೂಹಲ ಇದ್ದೆ ಇರುತ್ತದೆನಿಸುತ್ತದೆ .
ಹೊರಗೆ ಬಂದೆವು. ಆಗ ಪ್ರಸಾದ್ ಪೂರ್ವ ವೀಕ್ಷಣ ಚಿತ್ರಮಂದಿರದ ಪ್ರೊಜೆಕ್ಟರ್ ನನ್ನ ಬಳಿ ಬಂದರು . ಬಂದವರು 'ಸಾರ್ ನೀವು ಮಾರ್ಚ್ 23 ಚಿತ್ರದ ನಿರ್ದೇಶಕರ..?' ಎಂದರು. ನಾನು ಹೌದೆಂದೆ. 'ಸಾರ್ ಯಾವತ್ತು ಇದರ ಪ್ರೀಮಿಯರ್ ಷೋ ಅಥವಾ ಪ್ರೊಜೆಕ್ಷನ್ ?'ಎಂದರು. 'ಗ್ರೇಡಿಂಗ್ ಮುಗೀಲಿ ಮಾಡೋಣ ' ಎಂದೇ. 'ಯಾಕೆ ಎನ್ನುವ ಪ್ರಶ್ನೆಯನ್ನೂ ಕೇಳಿದೆ .' ಸರ್ ನಾನು ಬಹುತೇಕ ಕನ್ನಡದ ಎಲ್ಲಾ ಸಿನೆಮಾನೂ ಇಲ್ಲಿ  ನೋಡ್ತೇನೆ.ಸೆನ್ಸಾರ್ ಮುಂಚೆ, ಸೆನ್ಸಾರ್ ಅದಮೇಲೆ ನೋಡೇ ನೋಡ್ತೀನಿ. . ಸುಮಾರು ಸಿನೆಮಾಗಳು ಎರಡ್ಮೂರು ರೀಲು ನೋಡ್ತಿದ್ದ ಹಾಗೆ ಅದರ ಕಥೆ ಮುಂದಾಗಬಹುದಾದ ಸಾಧ್ಯತೆಗಳು ಗೊತ್ತಾಗಿಬಿಡ್ತವೆ. ಇದರ ಸ್ಟೋರಿ ಇಷ್ಟೇ ಅನ್ಸಿಬಿಡುತ್ತೆ. ಆದರೆ ನಿಮ್ಮ ಸಿನೆಮಾದ ಎರಡು ರೀಲು ನೋಡಿದೆ. ಏನೂ ಅರ್ಥ  ಆಗ್ಲಿಲ್ಲ..ಅಷ್ಟೇ ಅಲ್ಲ. ಮುಂದೇನಾಗಬಹುದು ಅನ್ನೋ ಕ್ಯೂರಿಯಾಸಿಟೀ ಬಂತು...ಅದಕ್ಕೆ ನೋಡಬೇಕನ್ನಿಸುತ್ತೆ. ..ಏನೋ ಇದೆ ಅನ್ನಿಸ್ತು ಸಾರ್ ಅದಕ್ಕೆ ನಾನೇ ಕಾಯೋಹಾಗ್ ಮಾಡ್ತು ನಿಮ್ ಸಿನಿಮಾ ..' ಎಂದರು. ನಾನು ಒಳಗೊಳಗೇ ಖುಷಿಯಾದೆ. ನಮ್ಮತಂಡದವರಲ್ಲದ ಪ್ರೇಕ್ಷಕರೊಬ್ಬರು ಆಡಿದ ಮಾತು ನನಗೆ ಭರವಸೆ ತುಂಬಿತು. ಉಸಿರು ನಿರಾಳವಾಯಿತು. ನಾನಂದೆ 'ಸಾರ್ ಇಷ್ಟರಲ್ಲೇ ಮಾಡ್ತೀವಿ. ನೋಡಿದ ಮೇಲೆ ಎಲ್ಲಿ  ಯಾವ್ಯಾವ್ದು ಹೆಚುಕಡಿಮೆ ಆಯಿತು  ಅನ್ನೋದನ ಪ್ರಾಮಾಣಿಕವಾಗಿ ಹೇಳ್ಬೇಕು..' ಎಂದು ಮೇಲಿನ ಘಟನೆಯನ್ನು ಅವರಿಗೆ ಹೇಳಿದೆ.
ಈಗ ಮುಂದಿನ ತಿಂಗಳು ಬಿಡುಗಡೆಗೆ ತಯಾರಾಗುತ್ತಿದ್ದೇವೆ ...
ಬದುಕು ಯಾವ ತಿರುವು ಪಡೆಯುವುದೋ ಎನ್ನುವ ಕುತೂಹಲ ಹಾಗೆ ಇದೆ..?


Friday, October 12, 2012

ಅವಳು, ಆಕೆ ಮತ್ತು ಆತ್ಮ...ಭಾಗ-1

ಸಮಯ 12.30 ಆಗಿತ್ತು.
ನಾನು ಆಗ ತಾನೇ ಇಟಲಿಯ ಸಿನೆಮಾ ಪರಡಿಸೋ ನೋಡಿ ಮುಗಿಸಿದ್ದೆ.ಅ ಚಿತ್ರ ಇನ್ನೂ ನನ್ನ ಕಣ್ಣಲ್ಲಿ ಹಾಗೆಯೇ ಉಳಿದು ಬಿಟ್ಟಿತ್ತು.ಅಲ್ಲಿನ ನಾಯಕ, ಅನೂಹ್ಯ ಪ್ರೇಮಕಥೆಯ ಜೊತೆಗೆ ಅಲ್ಲಿ ಬರುವ ಆಲ್ಫ್ರೆದೋ ಪಾತ್ರ ನನ್ನನ್ನಾವರಿಸಿಕೊಂಡಿದ್ದವು. ಕ್ಲೈಮ್ಯಾಕ್ಸಿನಲ್ಲಿ  ಆಲ್ಫ್ರೆದೋ ತನಗಾಗಿ ಕೊಟ್ಟಿದ್ದ ಚಲನಚಿತ್ರಗಳ ತುಣುಕುಗಳನ್ನು ನೋಡುತ್ತಾ ಕಣ್ತುಂಬಿಕೊಳ್ಳುವ ನಾಯಕನ ಅಭಿನಯ ನನ್ನ ಕಣ್ಣಲ್ಲೂ ನೀರು ತರಿಸಿತ್ತು. ಆ ಚಿತ್ರದ ನಿರ್ದೇಶಕ ಗಿಸಿಪಿಗೆ ಮನದಲ್ಲಿ ಸಾವಿರಾರು ಸಾರಿ ನಮಸ್ಕರಿಸಿದ್ದೆ.
ಆಗ ಮೊಬೈಲ್ ರಿ0ಗಾಗತೊಡಗಿತ್ತು.
ಅದೆಂತಹ ಇಷ್ಟವಾದ ಹಾಡನ್ನೇ ಕರೆಧ್ವನಿಯಾಗಿ ಹಾಕಿಕೊಂಡರೂ ಅದು ರಿಂಗಣಿಸುವಾಗ ಮಾತ್ರ ಅಸಾಧ್ಯ ಕಿರಿಕಿರಿಯಾಗಿಬಿಡುವ ರಹಸ್ಯ ಮಾತ್ರ ಇನ್ನೂ ನನಗೆ ಗೊತ್ತಾಗಿಲ್ಲ. ತಟ್ಟನೆ ನನ್ನ ಕಣ್ಣು ಗೋಡೆಯ ಮೇಲಿದ್ದ ಗಡಿಯಾರದತ್ತ ತಿರುಗಿತು. ಹೌದು.ಮುಲಾಜಿಲ್ಲದೆ ಗಡಿಯಾರ 12.30 ತೋರಿಸುತ್ತಿತ್ತು.
'ಇಷ್ಟೊತ್ತಲ್ಲಿ ನನಗೆ ಫೋನ್ ಮಾಡಿರುವವರು ಯಾರಿರಬಹುದು..? ಮನೆಯವರಿಂದ ಆ ಸರಿರಾತ್ರಿಯಲ್ಲಿ ಕರೆ ಬರಲು ಸಾಧ್ಯವೇ ಇಲ್ಲ ..ಇನ್ನ ಗೆಳೆಯರು..? '
ಮೊಬೈಲ್ ತೆಗೆದುಕೊಂಡು ಅದರ ಪರದೆಯ ಮೇಲೆ ಕಣ್ಣಾಡಿಸಿದೆ.
ವೇದಾ...ವೇದಾ ಮ್ಯಾಡಂ..
ನನಗೆ ಆಶ್ಚರ್ಯವಾಗದೆ ಇರಲಿಲ್ಲ . ಇಷ್ತೊತ್ತಲ್ಲಿ ವೇದಾ ನನಗೇಕೆ ಕರೆ ಮಾಡಿದರು? 
ವೇದಾ ನಮ್ಮ ಟೀಮ್ ಲೀಡರ್. ಅಷ್ಟೇ ಅಲ್ಲ ..ನಮ್ಮ ಕಂಪನಿಯ ಅತಿ ಮುಖ್ಯ ವ್ಯಕ್ತಿ. ವಿವಾಹಿತ ಸುಂದರಿ.  ಆಕೆಗೆ 38 ವರ್ಷ ವಯಸ್ಸು. ಹಾಗಂತ ಆಕೆಯೇ ಸಮಯೋಚಿತವಾಗಿ ಹೇಳಿದರೆ ನಮ್ಮ ಸಹೋದ್ಯೋಗಿಗಳು 'ಸುಮ್ನಿರಿ ಮ್ಯಾ'ಮ್ .ಸಾಧ್ಯಾನೆ ಇಲ್ಲ..' ಎಂದು ಅವರ ಮುಂದೆಯೇ ಉದ್ಗರಿಸಿ ಅವರ ಬೆನ್ನ ಹಿಂದೆ 'ಸುಮ್ನೆ ಸ್ಕೋಪ್ ತಗಳೋದು...ಅಷ್ಟು ವಯಸು ಆಗಿರೋಕೆ ಸಾಧ್ಯಾನೆ ಇಲ್ಲ...' ಎಂದು ಹೀಗಳೆಯುತ್ತಿದ್ದವರಲ್ಲಿ ಭವ್ಯ ಮೊದಲನೆಯವಲಾಗಿದ್ದಳು.
ನಾನು ಸುಮ್ಮನೆ ಕರೆ ಸ್ವೀಕರಿಸದೆ ಆಕೆ ಇಷ್ಟೊತ್ತಲ್ಲಿ ಯಾಕೆ ಕರೆ ಮಾಡಿರುವುದು ಎಂದು ಯೋಚಿಸತೊಡಗಿದೆ. ನಮ್ಮ ಪ್ರಾಜೆಕ್ಟ್ ಸಬ್ಮಿಶನ್ ಗೆ ಇನ್ನೂ ಸಮಯವಿತ್ತು. ಕರೆ ನಿಂತಿತು. ಬೆಳಿಗ್ಗೆ ಕೇಳಿದರೆ ಮಲಗಿದ್ದೆ ಎಂದು ಹೇಳಿದರಾಯಿತು ಎಂದು ಮಲಗಲು ಅನುವಾದೆ.
ಮತ್ತೆ ಮೊಬೈಲ್ ಬಡಿದುಕೊಳ್ಳತೊಡಗಿತು.
ನಿದ್ರೆಯಲ್ಲಿರುವವನಂತೆ ನಟಿಸಲು ಸಿದ್ಧನಾಗಿ ಕರೆ ಸ್ವೀಕರಿಸಿದೆ.
ಹಲೋ..
ಏನು ಮಲಗ್ಬಿಟ್ಟಿ ದ್ದಾ....?
'ಹೌದು ಮ್ಯಾಂ...ಏನ್ ವಿಷಯ ಮ್ಯಾಂ'
'ಏನಿಲ್ಲಾ..ನೀನು ಮೊನ್ನೆ ಮಾತಾಡುವಾಗ ಅದ್ಯಾರು ಜೇಮ್ಸ್ ಚೆಸು ಕಾದಂಬರಿ ಅಂತೆಲ್ಲಾ ಭಾಳ ಹೋಗಳ್ತಿದ್ದೆಯಲ್ಲಾ...ಆತನ ಪುಸ್ತಕಗಳು ಎಲ್ಲಿ ಸಿಕ್ತವೆ..?
'ಯಾಕೆ ಮೇಡಂ ಇಷ್ಟೊತ್ತಲ್ಲಿ..?
'ಯಾಕೆ..ಆತನ ಪುಸ್ತಕಗಳ ಬಗ್ಗೆ ಕೇಳಬೇಕಾದರೆ ಇಷ್ಟೊತ್ತಿಗೆ ಕೇಳಬೇಕೂಂತ ಪರ್ಟಿಕುಲರ್   ಟೈಮ್ ಇದೆಯಾ..?' ಧ್ವನಿಯಲ್ಲಿ ತುಂಟುತನವಿದ್ದರೂ ನಾನದನ್ನು ಗಮನಿಸದವನತೆ ಮಾತು ಮುಂದುವರೆಸಿದೆ.
'ಅಯ್ಯೋ ..ಹಾಗೇನಿಲ್ಲ..ಅದು ಜೇಮ್ಸ್ ಹ್ಯಾಡ್ಲಿ ಚೆಸ್...ಪತ್ತೆಧಾರಿ ನಾವಲ್ಸ್..'
'ಕರೆಕ್ಟು...ಪುಸ್ತಕ , ಕಾದಂಬರಿ ಅಂದ್ರೆ ನಿದ್ರೆಗಣ್ಣಲ್ಲೂ ಸರ್ಯಾಗಿ ಹೇಳ್ತೀಯ ನೋಡು... ಅವು ಎಲ್ಲಾ ಬುಕ್ ಸ್ಟೊರಿನಲ್ಲಿ ಸಿಕ್ತಾವಾ..? ನಾನೊಂದಷ್ಟು ಓದಬೇಕು...ನೀನು ಚೆನ್ನಾಗಿರುತ್ತೆ ಅಂತ ಹೇಳ್ತಿದ್ದೆಯಲ್ಲಾ..'
ನಾನೀಗ ಎದ್ದು ಕುಳಿತುಕೊಂಡೆ.
'ಮೇಡಂ ನಾನು ಹೇಳಿದೆ ಅಂತ ನೀವು ಓದ್ಲಿಕೆ ಹೋಗಬೇಡಿ... ನನಗೇನೋ ಇಷ್ಟ ಆಗ್ತವೆ...ಹಾಗಂತ ನಿಮಗೆ ಇಷ್ಟ ಆಗಬೇಕು ಅಂತಿಲ್ಲವಲ್ಲ..'
'ಉಹೂ..ಅದೆಲ್ಲಾ ಗೊತ್ತಿಲ್ಲಾ ನೀನು ಹೇಳಿದೆ ಅಂತಾನೆ ಓದ್ತಿರೋದು...ಇಷ್ಟ ಆಗ್ಲೇ ಬೇಕು...ಅಷ್ಟೇ..' ಎಂದರು ಮೊಂಡುತನದ ಭಾವ  ಮಾತಿನಲ್ಲಿತ್ತು.
ನನಗೇನು ಹೇಳಬೇಕೋ ಗೊತ್ತಾಗಲಿಲ್ಲ . ನಾನೇ ಮಾತು ಬದಲಿಸಿದೆ.
'ಸರಿ ಮೇಡಂ..ನನ್ನತ್ರ ಸಾಕಷ್ಟಿದೆ..ನಿಮಗೆ ತಂದು ಕೊಡ್ತೀನಿ...ನೀವು ಓದಬಹುದು..'
'ಹಂಗಾರೆ ನಿನ್ನ ಬೈಯಾಕೆ ಇನ್ನೂ ಹಕ್ಕಿರುತ್ತೆ...ನಾಳೆ ಮಿಸ್ ಮಾಡಬೇಡ...ಈಗ ನೀನು ಮಲಗಬಹುದು.."
ನಾನು ಗುಡ್ ನೈಟ್  ಹೇಳಿದೆ.
ಮೊಬೈಲ್ ಕೆಳಗಿಟ್ಟು ಸುಮ್ಮನೆ ಕುಳಿತುಕೊಂಡೆ. ಆಮೇಲೆ ನನ್ನ ಪುಸ್ತಕಗಳನ್ನು ಇಟ್ಟಿದ್ದ ಅಟ್ಟೆಯ ಹತ್ತಿರ ಹೋಗಿ ಚೇಸ್  ಕಾದಂಬರಿ ತೆಗೆದುಕೊಂಡು ಅವುಗಳ ಕಥೆಯನ್ನು ನೆನಪಿಸಿಕೊಳ್ಳತೊಡಗಿದೆ. ಯಾವುದನ್ನು ಕೊಡುವುದು..? ಯಾವುದೂ ತೀರ ಇಂಟರೆಸ್ಟಿಂಗ್  ಆಗಿರುವುದು ಎಂಬ ಕೋಟಿ ರೂಪಾಯಿಗಳ ಪ್ರಶ್ನೆ ನನ್ನನ್ನು ಕಾಡತೊಡಗಿತು.ನನಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ . ಅದರಲ್ಲಿ ಲೈಕ್ ಎ ಹೋಲ್ ಇನ್ ದಿ ಹೆಡ್ , ಎನ್ನುವ ಕಾದಂಬರಿ ಕೊಡುವುದೆಂದು ನಿರ್ಧರಿಸಿ ನನ್ನ ಬ್ಯಾಗಿಗೆ ಹಾಕಿಕೊಂಡೆ.
ಹಾಸಿಗೆಗೆ ಬಂದಾಗ ವೇದಾ ಮೇಡಂ ನನ್ನ ನೆನಪಿಗೆ ಬಂದರು.ಅಷ್ಟೇ ಅಲ್ಲ ಕನಸಿನಲ್ಲೂ ನನ್ನನ್ನು ಆವರಿಸಿದರು.

******   ******    *******

ಬೆಳಿಗ್ಗೆ ಲಗುಬಗೆಯಿಂದ ಆಫೀಸಿಗೆ ಹೊರಟೆ. ನಾನು ದಿನಾ ತಿನ್ನುವ ಚಿಕ್ಕ ಹೋಟೆಲಿನಲ್ಲಿ ಇಡ್ಲೀ ತಿಂದೆನಾದರೂ ಆದೆಷ್ಟು ಬೇಗ ಆಫೀಸಿಗೆ ತಲುಪುವೇನೋ ಎಂಬ ಕಾತರ ನನ್ನನ್ನು ಉಪಾಹಾರ ಸ್ವಾದಿಸಲು ಬಿಡಲಿಲ್ಲ . ನನಗರಿವಿಲ್ಲದೆ ನನ್ನ ಉಡುಪಿನ ಮೇಲೆ ನಿಗಾ ವಹಿಸಿದ್ದೆ. ಕಾದಂಬರಿ ಇದೆಯೋ ಇಲ್ಲವೋ ಎನ್ನುವುದನ್ನು ಪದೆ  ಪದೆ ಖಾತರಿ ಮಾಡಿಕೊಂಡಿದ್ದೆ . ದಿನದ ಬಸ್ಸು ಆವತ್ತು ಲೇಟ್  ಎನಿಸದಿರಲಿಲ್ಲ .
ಆಫೀಸಿಗೆ ಹೋದತಕ್ಷಣ ವೇದಾ ಮೇಡಂ ಚೇಂಬರಿಗೆ ಎಡೆತಾಕಿದರೆ ಆಕೆಯಿನ್ನೂ ಬಂದಿರಲಿಲ್ಲ . ಸಮಯ ನೋಡಿಕೊಂಡೆ. ನಾನು ಅನಾಮತ್ತು ಅರ್ಧ ಘಂಟೆ ಮುಂಚಿತವಾಗಿಯೇ ಆಫೀಸಿಗೆ ಬಂದಿದ್ದೆ. ಏನು ಮಾಡುವುದು ತೋಚದೆ ಸೀದಾ ಕ್ಯಾಂಟೀನಿಗೆ ಹೋಗಿ ಕುಳಿತುಕೊಂಡೆ.ಚೇಸ್ ಪುಸ್ತಕಗಳನ್ನು ಬ್ಯಾಗಿನಿಂದ ಹೊರತೆಗೆದು ಮತ್ತೊಮೆ ಕಣ್ಣಾಡಿಸತೊಡಗಿದೆ.
ಅಷ್ಟರಲ್ಲಿ ಅಭಯ ಬಂದ. ರೋಹಿತ್ ಬಂದ. ಭವ್ಯ , ರುಕ್ಮಾಂಗದ ಬಂದರು. ನಾನವರ ಬಳಿ ಏನೂ ಹೇಳಲಿಲ್ಲ .. ಮತ್ತೆ ನಮ್ಮ ನಮ್ಮ ಡೆಸ್ಕ್ ಗೆ ಬಂದೆವು. ಇಮೇಲ್ ಚೆಕ್ ಮಾಡಿದೆವು. ಅಷ್ಟರಲ್ಲಿ ವೇದಾ ಬಂದರು. ನಾನು ಅವರೆಡೆಗೆ ನೋಡಿದೆನಾದರೂ ಅವರೇನೂ  ನನ್ನೆಡೆಗೆ ವಿಶೇಷ ದೃಷ್ಟಿ ಬೀರಲಿಲ್ಲ. ತಮ್ಮ ದೈನಂದಿನ ಮಂದಹಾಸದೊಂದಿಗೆ ಎಲ್ಲರಿಗೂ ನೋಡಿ ನನ್ನ ಬಳಿ ಬಂದರು. 'ಹೇಗೆ ನಡೀತಿದೆ...ಸರ್ಕೂಟ್  ಕಂಪ್ಲೀಟ್  ಆಯ್ತಾ?'
'ನಾನು ಯಾ ..ಅಂ 'ಎಂದವನು 'ಮೇಡಂ ಅದೇ ಬುಕ್ ತಂದಿದೀನಿ..' ಎಂದು ಬ್ಯಾಗಿಗೆ ಕೈ ಹಾಕಿದೆ. ಆದರೆ ವೇದಾ..'ಓಕೆ ಓಕೆ ..ಆಮೇಲೆ ಕೊಡುವಿಯಂತೆ...ಕಂಟಿನ್ಯೂ...'ಎಂದು ಹೋಗಿಬಿಟ್ಟರು. ನನಗೆ ಅವಮಾನವಾದಂತೆನಿಸಿತು . ರಾತ್ರಿಯೆಲ್ಲ ನಿದ್ರೆಗೆಡಿಸಿ ಈಗ ಇಷ್ಟೊಂದು  ನಿರಾಸಕ್ತಿ ತೋರಿಸುತ್ತಿರುವವಳಲ್ಲ...ಛೆ ನಾನು ತರಲೆಬಾರದಿತ್ತು ಎನಿಸಿತು. ರಾತ್ರಿ ಆಕೆ ಬಡಬಡಿಸಿದ್ದನ್ನು ನಾನು ಗಂಭೀರವಾಗಿ ತೆಗೆದುಕೊಂಡದ್ದು ಪಿಚ್ಚೆನಿಸಿತು.
ನನ್ನ ಮೂಡ ಸರಿಹೋಗಲಿಲ್ಲ ಯಾಕೋ ಬೇಸರ ಉಕ್ಕುಕ್ಕಿ ಬರುತ್ತಿತ್ತು. ಇಂದು ಸಂಜೆ ಬೇಗ ಮನೆಗೆ ಹೋಗಿಬಿಡಬೇಕು. ಸಂಜೆ ಆಕೆಗೆ ಪುಸ್ತಕ ಕೊಡಲು ಹೋಗಬಾರದು. ಆಕೆಯೇ ತಾನಾಗೆ ಕೇಳಿದರೆ ಮಾತ್ರ ನೆನಪಿಸಿಕೊಂಡವನಂತೆ ನಾಟಕ ಆಡಬೇಕು..
ಎಂದೆಲ್ಲಾ ಯೋಚಿಸಿದ ಮೇಲೆ ಮನಸು ಒಂದು ತಹಬದಿಗೆ ಬಂದಿತು.
ಸಂಜೆ ನಾನು ಬೇಗನೆ ಲಾಗೌಟ್  ಆದೆ. ನಂತರ ಹೊರಡಲನುವಾಗುವಷ್ಟರಲ್ಲಿ ವೇದಾ ನನ್ನ ಬಳಿ ಬಂದವರು ' ಬಾ ಹೋಗೋಣ ..' ಎಂದರು. ಎಲ್ಲಿಗೆ ಎನ್ನುವ ಪ್ರಶ್ನೆ ಹುಟ್ಟಿತಾದರೂ ನಾಲಿಗೆಗೆ  ಅದನ್ನು ಹೊರಹಾಕುವ ಧೈರ್ಯ ಬರಲಿಲ್ಲ.
ಸುಮ್ಮನೆ ಆಕೆಯನ್ನು ಹಿಂಬಾಲಿಸಿದೆ. ಆಕೆಯೂ ನನ್ನ ಜೊತೆ ಮಾತಾಡಲಿಲ್ಲ . ನಾವು ಆಫೀಸಿನ ಮೆಟ್ಟಿಲಿಳಿದು ಹೊರಬಂದೆವು.
'ಇಲ್ಲೇ ಇರು..ಕಾರ್ ತರ್ತೀನಿ..' ಎಂದ ವೇದಾ ನನ್ನ ಪ್ರತಿಕ್ರಿಯೆಗೆ ಕಾಯದೆ ಅಲ್ಲಿಂದ ಕಾರ್ ಪಾರ್ಕಿಂಗ್ ಕಡೆಗೆ ಹೊರಟುಹೋದರು. ನಾನು ಸುಮ್ಮನೆ ಇದ್ದೆ. ನನ್ನನ್ನು ಯಾರೋ ನಿಯಂತ್ರಿಸುತ್ತಿದ್ದಾರೆನೋ ಎನಿಸಿತ್ತು.
ನಾನು ಕಾರಲ್ಲಿ ಅವರ ಪಕ್ಕ ಕುಳಿತಿದ್ದೆ. ಆಕೆ ನಿಧಾನಕ್ಕೆ ಡ್ರೈವ್ ಮಾಡುತ್ತಿದ್ದರು. ನಾನು ಕಿಟಕಿಯ ಕಡೆಗೊಮ್ಮೆ ಹೊರಗೊಮ್ಮೆ ನೋಡುತ್ತಿದ್ದೆ. ಅಪ್ಪಿತಪ್ಪಿಯೂ ಆಕೆಯೆಡೆಗೆ ನೋಡಬಾರದೆಂಬ ನನ್ನ ನಿರ್ಧಾರವನ್ನು ಪಾಲಿಸಲೆಬೇಕಿತ್ತು.
'ಏನೋ ಯೋಚನೆ ಮಾಡ್ತಿದ್ದೀಯಾ ಅನ್ಸುತ್ತೆ..ನೋಡು ಅಫೀಸಿದು..ಆಫೀಸಿಗೆ ಬಿಟ್ಬಿಡಬೇಕು...' ಎಂದರು. ನನಗೆ 'ಎಲ್ಲಿ ಆಫೀಸು..ಮನಸೆಲ್ಲಾ ಹಾಳು  ಮಾಡ್ಬಿಟ್ಟು..' ಮುಂದಕ್ಕೆ ಮೌನದಲ್ಲೂ ಮಾತು ಮುಂದುವರೆಯಲಿಲ್ಲ ನಾನೇಕೆ ಹೀಗಾಡುತ್ತಿದ್ದೇನೆ ಎನಿಸಿತು ಕೂಡ.
ಕಾರು ನಿಂತಿತು . ನಾನು ನನ್ನ ಆಲೋಚನೆಯಲ್ಲಿ ಎಲ್ಲಿಗೆ ಬಂದೆವು, ಕಾರು ಎಲ್ಲಿ ಹೋಗುತ್ತಿದೆ ಎಂಬುದನ್ನೂ ಗುರುತಿಟ್ಟುಕೊಂಡಿರಲಿಲ್ಲ. ನಿದ್ರೆಯಿಂದ ಎಚ್ಚೆತ್ತವನಂತೆ ಸುತ್ತಾ ಮುತ್ತ್ತಾ ನೋಡಿದೆ ಅದೊಂದು ಪಾರ್ಕಿಂಗ್ ಲಾಟ್. ಮತ್ತೆಲ್ಲಿಬಂದೆವು...?
ಯಾಂತ್ರಿಕವಾಗಿ ಕಾರು ಇಳಿದೆ. ಆಕೆಯೂ ಕಾರು ಇಳಿದು ನನ್ನ ಬಳಿ ಬಂದು,
'ನನಗೆ ಒಂದೊಂದ್ಸಾರಿ ಭಯ...ನೀನು ಹೇಳಿದೆ ಅಂತ ಬುಕ್ ಗಿಕ್ ಅಂತೆಲ್ಲಾ ತಲೆಕೆಡಿಸಿಕೊಳ್ತಿದ್ದೀನಿ. ನಿನ್ನ ತರಾ ಆಗ್ಬಿಡ್ತೀನಾಂತ...ಹೀಗೆ...ಭಾವಾಲೋಕದಲ್ಲಿ ವಿಹರಿಸೋ...' ಎಂದು ಮಾತನ್ನು ಅರ್ಧ ಮಾಡಿ ನಕ್ಕರು . ಕೊನೆಯ ಸಾಲುಗಳನ್ನು ಕಾವ್ಯಮಯ ಶೈಲಿಯಲ್ಲಿ ಹೇಳಿದ್ದು ನನಗೂ ನಗು ತರಿಸಿತು .
ಅದು ಕಾಫೀ ಡೇ .
 ಒಳಗೆ ಬಂದೆವು. ಕೇವಲ ಬೆರಳೆಣಿಕೆಯ ಜನರಿದ್ದರು.  ಒಂದು ಕಡೆ ಕುಳಿತೆವು ಎದುರುಬದುರಾಗಿ.
'ಈಗ ಬುಕ್ ಕೊಡು. ನೀನು ನನಗೋಸ್ಕರ ಬುಕ್ ಹುಡ್ಕಂಡು ತಗೊಂಡ್ ಬಂದಿರ್ತೀಯ..ಒಂದ್ ಕಾಫೀ ಕೂಡ ಕುಡಿಸದೆ ಹೇಗೆ ತಗಳೋದು..ಅದಕ್ಕೆ ಬೆಳಿಗ್ಗೆ ತಗೊಳ್ಳಲಿಲ್ಲ.' ಎಂದರು. ನನ್ನ ಬೇಸರ ಜರಕ್ಕನೆ ಇಳಿದುಹೋಯಿತು.
ಅಷ್ಟರಲ್ಲಿ ವೈಟರ್ ಬಂದ.
'ಏನು ತಗೋತೀಯಾ.'
ನನಗೆ ನಿಜವಾಗಲೂ ಅಲ್ಲಿ ಏನೇನೆಲ್ಲಾ ಸಿಗುತ್ತದೆಂಬ ಪರಿಕಲ್ಪನೆ ಇರಲಿಲ್ಲ . ನಾನು ಮೊದಲ ಬಾರಿಗೆ ಕಾಫೀ ಡೇಗೆ ಬಂದಿದ್ದು. ಹೆಸರು ಕಾಫೀ ಡೆ  ಆದ್ದರಿಂದ ಕಾಫೀಯಂತೂ ಸಿಕ್ಕೆ ಸಿಗುತ್ತದೆಂಬ ಭರವಸೆ ಇತ್ತು.
'ನನಗೆ ಕಾಫೀ ಸಾಕು..'
ಸರಿ ಮಾರಾಯಾ..ಅದೇ ಯಾವ್ದೂಂತ ..?'
'ನನಗೆ ಗೊತ್ತಿಲ್ಲ ಮೇಡಂ. ನಾನು ಫಸ್ಟ್ ಟೈಮ್ ಬರ್ತಿರೋದು...ನಿಮಗೆ ಗೊತ್ತಿರೋದು ನೀವೇ ಹೇಳಿ..' ಎಂದುಬಿಟ್ಟೆ. ಆಕೆ ವೈಟರ್ ಕಡೆಗೆ ತಿರುಗಿ ಅದ್ಯಾವುದೋ  ಇಂಗ್ಲಿಷಿನಲ್ಲಿ ಹೇಳಿದರು. ಆತ ಹೋದ ಮೇಲೆ ನನ್ನ ಕಡೆಗೆ ತಿರುಗಿ 'ಫಸ್ಟ್ ಟೈಮ್ ಅಂದ್ರೆ ನನ್ನ ಜೊತೆ ಬರ್ತಿರೋದು ಫಸ್ಟ್ ಟೈಮ್ ಅಂತಾನಾ.? ಅಥವಾ ಯಾವುದೇ ಹುಡುಗಿ ಜೊತೆ ಬರ್ತಿರೋದು ಫಸ್ಟ್ ಟೈಮ್ ಅಂತಾನಾ..ಅಥವಾ ಕಾಫೀ ಡೇಗೆ ಬರ್ತಿರೋದು ಫಸ್ಟ್ ಟೈಮ್ ಅಂತಾನಾ...' ನನ್ನನ್ನೇ ನೇರವಾಗಿ ದಿಟ್ಟಿಸುತಾ ಕೇಳಿದರು. ನಾನು 'ಮೂರು ಪ್ರಶ್ನೆಗಳಿಗೆ ಒಂದೇ ಉತ್ತರ ಮೇಡಂ...ಎಸ್ ' ಎಂದೆ .
'ಈಗ ನೋಡಪ್ಪಾ ಚಾರ್ಜ್ ಆದೆ. ಇಷ್ಟೊತ್ತು ಒಂಥರಾ ಇದ್ದೆ...' ಎಂದರು.
ನನಗೆ ತಟ್ಟನೆ ನೆನಪಿಗೆ ಬಂದದ್ದು ಸಂಧ್ಯಾ. ಆಕೆ ನಾನೂ ಅದೆಷ್ಟು ಸಾರಿ ಟೀ  ಕಾಫಿ ಕುಡಿದಿಲ್ಲ. ಆದರೆ ನಾವೆಂದೂ ಕಾಫೀ ಡೇಗೆ ಹೋದವರಲ್ಲ . ನಮ್ಮೂರಿನಲ್ಲಿ ಕಾಫೀ ಡೇ  ಇರಲಿಲ್ಲವಲ್ಲ. ಟೀ  ಇಲ್ಲದೆ ನನಗೆ ಆಗುವುದಿಲ್ಲ ..ಆಕೆ ಬೈಯುತ್ತ ಬೈಯುತ್ತಾ ತಾನೂ ಟೀ  ಕುಡಿಯುವುದನ್ನು ರೂಡಿಮಾಡಿಕೊಂಡಿದ್ದಳು. ಅಲ್ಲಿದ್ದ ಮೈಲಾರಿ ರೆಸ್ಟೋರೆಂಟ್ ಗೆ ತಪ್ಪದೆ ಹೋಗುತ್ತಿದ್ದೆವು. ಹೆಸರಿಗೆ ರೆಸ್ಟೋರೆಂಟ್ . ಆದರೂ ಅದೊಂದು ಚಿಕ್ಕಾತಿಚಿಕ್ಕ ಹೋಟೆಲು. ಅಲ್ಲಿನ ಹುಡುಗ ನಮಗೆ ಪರಿಚಯವಿದ್ದ . ನಾವಲ್ಲಿ ಕುಳಿತು ಗಂಟೆಗಟ್ಟಲೆ ಹರಟುತ್ತಿದ್ದೆವು. ನಾನು ಸಿನಿಮಾ ಕಾದಂಬರಿ ಎಂದರೆ ಆಕೆ ಮನೆ, ಕುಟುಂಬ, ಕೆಲಸ ಎನ್ನುತ್ತಿದ್ದಳು.ಅದೆಷ್ಟು ಚೆನ್ನಾಗಿತ್ತು..?
'ಹಲೋ ನೋ ಮೋರ್ ಪ್ಲಾಶ್ ಬ್ಯಾಕ್...' ಮುಖದ ಮುಂದೆ ಕೈತಂದು ಚಿಟಿಕೆ ಹೊಡೆದರು ವೇದಾ. ನಾನು ವಾಸ್ತವಕ್ಕೆ ಬಂದೆ.
ತಲೆ ತಗ್ಗಿಸಿದೆ. ಆಕೆ ಮುಂದೆ ಏನನ್ನೂ ಕೇಳಲಿಲ್ಲ ಮತ್ತದನ್ನು ಗಂಭೀರವಾಗಿಯೂ ಪರಿಗಣಿಸಲಿಲ್ಲ .
'ಯಾವುದನ್ನೇ ಮಾಡಿದರೂ ಅದು ಮೆಮೊರಬಲ್ ಆಗಿರಬೇಕು..ಆಲ್ವಾ...ಈಗ ನೋಡು.ನೀನೆ.ಇದೆ ತರಾ ನೀನ್ಯಾವತ್ತಾದರೂ ಕಾಫೀ ಡೇಗೆ ಹೋದರೆ ನನ್ನ ನೆನಪಿಸಿಕೊಳ್ಳಬೇಕು....ಅದಕ್ಕೆ ಇಲ್ಲಿ ಕರ್ಕೊಂಡುಬಂದೆ...ನನ್ನನ್ನು ನೆನಪಿಸಿಕೊಳ್ತೀಯಾ...ಆಲ್ವಾ..?
ನನಗೆ ಪ್ರಶ್ನೆ ವಿಚಿತ್ರವೆನಿಸಿತು. ಕಣ್ಮುಂದೆ ಇರುವಾಕೆಯನ್ನು ನೆನಪಿಸಿಕೊಳ್ಳುವ ಪ್ರಮೇಯ ಎಲ್ಲಿಯದು? ಆದರೆ ಆಕೆಯ ದ್ವನಿಯಲ್ಲಿದ ಆರ್ದ್ರತೆ ನನ್ನನ್ನು ಒಂದು ಕ್ಷಣ ಯೋಚಿಸುವಂತೆ ಮಾಡಿತ್ತು.
ಅಷ್ಟರಲ್ಲಿ ಎರಡು ಉದ್ದನೆಯ ಗಾಜಿನ ಲೋಟದಲ್ಲಿ ಕಪ್ಪು ಬಿಳಿ ಮಿಶ್ರಿತ ವಿಚಿತ್ರ ಅರೆಪಾನೀಯವನ್ನು ವೇಟರ್ ತಂದಿಟ್ಟ.
ಮುಂದೆ ಸುಮಾರು ಅರ್ಧ ಗಂಟೆ ನಾವು ಜೊತೆಯಲ್ಲಿದ್ದೆವು. ನಾನು ಕಾದಂಬರಿ ಬಗ್ಗೆ ಹರಟಿದೆ . ಆಕೆ ಏನೋ ಮಾತಾಡಿದರು. ಒಟ್ಟಿನಲ್ಲಿ ನನಗೆ ಹೊಸ ಅನುಭವವಾಗಿತ್ತು
'ಸರಿ ಹೊರಡೋಣ್ವಾ ..?' ಎಂದು ಕೇಳಿದರು.
ಹಾಗೆ ನನ್ನ ಉತ್ತರಕ್ಕೂ ಕಾಯದೆ ಬಿಲ್ ಪೆ ಮಾಡಿದರು.
ಅಲ್ಲಿಂದ ಹೊರಬಂದ ಮೇಲೆ
'ಮೇಡಂ ನನ್ನನ್ನು ಯಾವುದಾದರೂ ಬಸ್ ಸ್ಟಾಪ್ ಗೆ ಡ್ರಾಪ್ ಮಾಡಿ..' ಎಂದೇ.ಆಕೆ 'ಸರಿ 'ಎಂದರು.
ಹತ್ತಿರದಲ್ಲಿದ್ದ ಬಸ್ ಸ್ಟಾಪ್ ನಲ್ಲಿ ಇಳಿದೆ.
'ಬೈ ಸೀ ಯೂ ಟುಮಾರೋ ..' ಇಳಿದವನು ಕಾರಿನ ಬಾಗಿಲು ಮುಚ್ಚಿ ಕಿಟಕಿಯಿಂದ ತಲೆ ಹಾಕಿ ಹೇಳಿದೆ.
'ಸೀ ಯೂ..ಅಂದಹಾಗೆ ನೆಕ್ಸ್ಟ್ ಟೈಮ್ ಮನೆಗೆ ಕರೀತೀಯಲ್ವಾ..?' ಎಂದದ್ದೆ ಅಲ್ಲಿಂದ ಹೊರಟುಹೋದರು.
ನಾನು ಸುಮಾರು ಹೊತ್ತು ಬಸ್ ಸ್ಟಾಂಡಿನಲ್ಲಿ ಕುಳಿತಿದ್ದೆ. ಆಕೆಯೊಂದಿಗೆ ಕಳೆದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೆ. ವಿಚಿತ್ರವಾದ ಭಾವ ನನ್ನನ್ನು ಆವರಿಸಿಕೊಳ್ಳುತ್ತಿತ್ತು.  ಹಾಗೆ ನನ್ನ ಪರ್ಸ್  ತೆಗೆದೇ.ಒಳಗಿಟ್ಟಿದ್ದ ಸಂಧ್ಯಾಳ ಫೋಟೋ ದಿಟ್ಟಿಸಿದೆ. ಅವಳು ಹಾಗೆಯೇ ನಗುತ್ತಿದ್ದಳು.
ಮತ್ತೆ ಫೋಟೋ ಒಳಗೆ ಹಾಕಿದೆ. ಈಗ ಮತ್ತೆ ನನ್ನ ಕಣ್ಮುಂದೆ ವೇದಾ ಇದ್ದರು. ವಿವಾಹಿತೆಯಾದರೂ ಅಷ್ಟೊಂದು ಚೆಂದಕ್ಕೆ ಸ್ಲಿಮ್ ಇರಲು ಸಾಧ್ಯವಾ ಎನ್ನುವ ಮೂರ್ಖ ಪ್ರಶ್ನೆ ನನ್ನಲ್ಲೊಮ್ಮೆ ಹಾದು  ಹೋಯಿತು. ಕಣ್ಮುಚ್ಚಿಕೊಂಡು ಅವರ ಚಿತ್ರವನ್ನು ಮನಸ್ಸಿನಲ್ಲಿ ಪುನರ್ ಚಿತ್ರಿಸತೊಡಗಿದೆ .
ತಟ್ಟನೆ ನಾನೇ ಬೆಚ್ಚಿದೆ. ಅದ್ಯಾವ ಆತ್ಮ ಸಾಕ್ಷಿ ನನ್ನನ್ನು ಎಚ್ಚರಿಸಿತೋ ಗೊತ್ತಾಗಲಿಲ್ಲ.ನಾನೇನು ಯೋಚಿಸುತ್ತಿದ್ದೇನೆ ಎನಿಸಿತು. ಆಕೆ ಒಂದು ಕಾದಂಬರಿ ಕೇಳಿದಳು. ನಾನು ಕೊಟ್ಟೆ. ಜೊತೆಯಾಗೊಂದು ಕಾಫೀ ಕುಡಿದೆವು. ಮುಗಿತಲ್ಲ..ಇದ್ಯಾವ ರೀತಿ? ಎನಿಸಿತು.
ಆದರೂ ಯಾವುದೋ ಭಾವ ನನ್ನನ್ನಾವರಿಸಿದ್ದು ನನಗೆ ಸ್ಪಷ್ಟವಾಗಿತ್ತು.

Wednesday, October 10, 2012

ಒಂದೇ ಶಾಟ್..ಪಿಚ್ಚರ್ ಫಿನಿಶ್...


ಅಡ್ರೆನಾಲಿನ್ ಹೆಸರೇ ಹೇಳುವಂತೆ ಇದೊಂದು ಸಾಹಸ, ಕುತೂಹಲಭರಿತ ಚಿತ್ರ. ಬಹಳ ವೇಗವಾಗಿ ಓಡುವ ದೃಶ್ಯಗಳನ್ನೊಳಗೊಂಡಿರುವ ಈ ಚಿತ್ರದ ಕಥೆಯೂ ಅಂತಹದ್ದೆ. ಚಿತ್ರದ ವಿಶೇಷವೆಂದರೆ ಇಡೀ ಚಿತ್ರವನ್ನು ಕೇವಲ ಒಂದೇ ಒಂದು ಚಿತ್ರಿಕೆಯಲ್ಲಿ ನಿರೂಪಿಸಿರುವುದು ಇಂಗ್ಲಿಷ್ ನಲ್ಲಿ ಬಂದ ಫೋನ್ ಭೂತ್ ಚಿತ್ರದ ಕಥೆಯ ಹೋಲಿಕೆಯಿರುವ ಈ ಚಿತ್ರದ ಚಿತ್ರಣ ಮಾತ್ರ ಆ ಚಿತ್ರಕ್ಕಿಂತ ಬೇರೆಯದೆ ಆದ ಶೈಲಿಯಲ್ಲಿದೆ.
ಒಂದೇ ಶಾಟ್ ನಲ್ಲಿ ಚಿತ್ರಿತವಾಗಿರುವ ಈ ಚಿತ್ರದಲ್ಲಿ ದೃಶ್ಯಗಳ ಬದಲಾವಣೆಯಾಗಲಿ, ಸ್ಥಳಗಳ ಬದಲಾವಣೆಯಾಗಲಿ, 86 ನಿಮಿಷದ ನಾಗಾಲೋಟಕ್ಕೆ ಮತ್ತು ಒಂದೇ ಒಂದು ಚಿತ್ರಿಕೆಯ ಚಿತ್ರೀಕರಣಕ್ಕೆ ಅಡ್ಡಿ ಮಾಡುವುದಿಲ್ಲ. ಪಾನ್ ಅಂಗಡಿಯಿಂದ, ಕ್ರೀಡೋಪಕರಣಗಳ ಅಂಗಡಿಗೆ, ಅಲ್ಲಿಂದ ಬ್ಯಾಂಕ್ ಗೆ ಹರಿದಾಡುವ ಸಿನಿಮಾದ ಕಥೆಗೆ ತಕ್ಕಂತೆ ಕೆಮೆರಾವನ್ನು ಓಡಾಡಿಸಿರುವ ಛಾಯಾಗ್ರಾಹಕನ ಕೆಲಸವನ್ನು ಪ್ರಶಂಸಿಸಬೇಕಾಗುತ್ತದೆ.
ಜೆ.ವಿ.ಸಿ. ಕಂಪೆನಿಯ ಹೊಸ    GY-HD100U  ಕೆಮೆರಾ ಬಳಸಿ ತಯಾರಿಸಿರುವ ಈ ಚಿತ್ರ, ಹಿಂದಿನ ಪುಟಗಳಲ್ಲಿ ನೀವು ಓದಿದ ಚಿತ್ರಗಳದೇ ಪ್ರಾರಂಭಿಕ ಸಮಸ್ಯೆಗಳನ್ನೆದುರಿಸಿದೆ. ಇಡೀ 86 ನಿಮಿಷಗಳಷ್ಟು ಚಿತ್ರಣವನ್ನ ಹಿಡಿದಿಟ್ಟುಕೊಳ್ಳಬೇಕಾದರೆ ಮಿನಿ ಡಿ.ವಿ ಟೇಪ್ ಸಾಲದಾದ್ದರಿಂದ ನೇರವಾಗಿ ಎರಡು ಹಾರ್ಡ್ ಡ್ರೈವ್ ಗಳನ್ನು ನೇರವಾಗಿ ಜೆವೈಸಿ ಕೆಮರಾಗೆ ಸಂಪರ್ಕಿಸಲಾಗಿತ್ತು. ತಿಂಗಳುಗಟ್ಟಲೇ ಕಲಾವಿದರಿಗೆ ಕಾರ್ಯಗಾರಮಾಡಿ ಅವರಿಗೆ  ತರಬೇತಿ ನೀಡಲಾಯಿತು. ಆ ನಂತರ ಚಿತ್ರೀಕರಣಕ್ಕೆ ಬೇಕಾದ ಪರಿಕರಗಳನ್ನು ಮೊದಲೆ ಸಿದ್ಧಮಾಡಿಟ್ಟುಕೊಳ್ಳಲಾಯಿತು. ಚಿತ್ರೀಕರಣಕ್ಕೆ ಸರ್ವಸಿದ್ಧತೆಗಳನ್ನು  ಮಾಡಿಕೊಂಡು ಒಂದು ಭಾನುವಾರ ಇಡೀ ಚಿತ್ರವನ್ನು ಅಥವ ಒಂದು ಶಾಟನ್ನು ಚಿತ್ರೀಕರಿಸಲಾಯಿತು. ಒಂದುಸಾರಿ ಕೆಮೆರಾ ಆನ್ ಮಾಡಿ ಆಕ್ಷನ್ ಹೇಳಿದ ಮೇಲೆ ಕಟ್ ಹೇಳುವವರೆಗೆ ಇಡೀ ಸಿನಿಮಾವೇ ಮುಗಿದುಹೋಗಿತ್ತು.
 ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ ಕ್ರಿಸ್‌ಥಾಮ್ಸನ್ ತನ್ನ ಹೊಸ ಕಾರೊಂದನ್ನು ಕೊಂಡುಕೊಂಡಿದ್ದಾನೆ. ಅದನ್ನು ತೆಗೆದುಕೊಂಡು ಖುಷಿಯಿಂದ ಮನೆಗೆ ಹೋಗ ಬೇಕೆನ್ನುವಷ್ಟರಲ್ಲಿ ಅವನಿಗೆ ಗೊತ್ತಾಗುವ ವಿಷಯವೆಂದರೆ ಕಾರಿನ ಉಪಗ್ರಹ ಸೇವೆಯ ಪಾಸ್ ವರ್ಡನ್ನು ಕದ್ದಿರುವ ವ್ಯಕ್ತಿಯೊಬ್ಬ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆಂಬುದು, ಈಗ ತಾನು ಹೇಳುವ ಹಾಗೆ ಕೇಳದಿದ್ದರೆ ಅಪಹರಿಸಿರುವ ಕ್ರಿಸ್ ಥಾಮ್ಸನ್ ಮಗಳನ್ನು ಕೊಂದು ಬಿಡುವುದಾಗಿ ಹೆದರಿಸುತ್ತನೆ. ತನ್ನ ಮಗಳ ಪ್ರಾಣ ರಕ್ಷಣೆಗಾಗಿ ಅಪಹರಣಕಾರನ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಒಂದಾದ ಮೇಲೊಂದು ಅಪರಾಧ ಕೃತ್ಯಗಳನ್ನ ಮಾಡುತ್ತ ಸಾಗುತ್ತಾನೆ ಕ್ರಿಸ್. ಆದರೆ ಎಲ್ಲೂ ಅಮಾಯಕರಿಗೆ ತೊಂದರೆಯಾಗದಂತೆ ಬೇರೆ ಆಯ್ಕೆಯಿಲ್ಲದೆ ಅವರ ಕೆಲಸಗಳನ್ನು ನೆರವೇರಿಸಿ ಮಗಳನ್ನು ಕಾಪಾಡಿಕೊಳ್ಳುವುದೇ ಚಿತ್ರದ ಕಥಾವಸ್ತು.
ನೀವು ಈ  ಸಿನಿಮಾವನ್ನು ಒಂದೇ ಶಾಟ್ ನಲ್ಲಿ ಚಿತ್ರೀಕರಿಸಿದ ಉದ್ದೇಶವೇನು ?  ಎಂಬ ಪ್ರಶ್ನೆಗೆ ನಿರ್ದೇಶಕ ರಾಬರ್ಟ್ ಲಿನ್ ಪ್ರಾಮಾಣಿಕವಾಗಿ ಹೇಳುವುದಾದರೆ, ಮುಖ್ಯ ಪಾತ್ರಧಾರಿಯ ತುಮುಲವನ್ನು, ಅವನ ಹೊಯ್ದಾಟವನ್ನು, ಹೋರಾಟವನ್ನ ನೇರವಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಕೂರಿಸಬೇಕಾಗಿತು. ಎಂದುತ್ತರಿಸಿದ್ದಾನೆ.
ಅದೇನೆ ಇರಲಿ ಮನರಂಜನೆಯ ಮಾಧ್ಯಮವಾದ ಚಲನಚಿತ್ರ ಕ್ಷೇತ್ರದಲ್ಲಿ ಆಗಾಗ ಇಂತಹ ಪ್ರಯೋಗಗಳು ಕಾಲಕಾಲಕ್ಕೆ ನಡೆದುಕೊಡೇ ಬಂದಿವೆ. ಒಂದು ಕಥೆಯನ್ನು ಪ್ರೇಕ್ಷಕರ ಮುಂದಿಡಲು ನಿರ್ದೇಶಕರು ನಾನಾ ಕಸರತ್ತು ಗಳನ್ನು ಮಾಡಿದ್ದಾರೆ. ಮತ್ತು ಯಶಸ್ವಿಯೂ ಆಗಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಚಿತ್ರದ ಒಟ್ಟು ಪರಿಣಾಮವನ್ನ ತುಲನೆ ಮಾಡುವುದಕ್ಕಿಂತ ಅವರ ಪ್ರಯತ್ನಗಳಿಗೆ ನವನವೀನ ನಿರೂಪಣೆ ಶೈಲಿ, ರಚನಾತ್ಮಕ ಚಿಂತನೆಗೆ ಒಂದು ಶಹಬ್ಬಾಸ್ ನೀಡಲೇಬೇಕಾಗುತ್ತದೆ.
ಈ ಚಿತ್ರ 2007 ರಲ್ಲಿ ಬಿಡುಗಡೆಯಾಯಿತು.


Monday, October 8, 2012

ಇರುವುದೊಂದೇ ಬದುಕು...

ಹದಿನೈದು ದಿನಗಳು ಅದೇಗೋ ಕಳೆದುಹೋದವು. ನನ್ನ ಸಿನೆಮಾದ ಬಿಸಿಯಲ್ಲಿ ಏನನ್ನು ಬರೆಯಲು ಸಾಧ್ಯವಾಗಲಿಲ್ಲ. ಆದರೆ ಆ ದಿನಗಳಲ್ಲಿ ಕೈಗೆ ಸಿಕ್ಕಿದ್ದನ್ನು ಸಮಯ ಸಿಕ್ಕಾಗಲೆಲ್ಲಾ ನೋಡುತ್ತಿದ್ದೆ. ಕೆಲವು ಸಿನೆಮಾಗಳನ್ನು ಅದರ ಹಿನ್ನೆಲೆ ಏನನ್ನೂ ತಿಳಿಯದೆ ಸುಮ್ಮನೆ ನೋಡಿದೆ. ಅದ್ಯಾರು ನಿರ್ದೇಶಕ ಇದ್ಯಾರು ನಟ, ಅದೇನು ವಿಶೇಷಾ ಇಂಥ ಪ್ರಶ್ನೆಗಳಿಗೆಲ್ಲಾ ಉತ್ತರವೇ ಇರಲಿಲ್ಲ. ಕೆಲವಂತೂ  ಯಾವ ಭಾಷೆಯದೂ ಎಂಬುದು ಗೊತ್ತಾಗಲಿಲ್ಲ .
ಕೆಲವೊಮ್ಮೆ ನನಗೆ ಸುಖಾ ಸುಮ್ಮನೆ  ಸಿನೆಮಾಗಳು  ಸಿಕ್ಕಿ ಬಿಡುತ್ತವೆ. ಹಾಗೆಯೇ ಕೆಲವು ಪುಸ್ತಕಗಳೂ ಸಿಕ್ಕಿ ಓದಿಸಿಕೊಳ್ಳುತ್ತವೆ. 45m2 ಎನ್ನುವ ಸಿನೆಮಾ ನನಗೆ ಅದೇಗೆ ಅದೇಕೆ ಸಿಕ್ಕಿತೋ ಗೊತ್ತಿಲ್ಲ. ಗ್ರೀಕ್ ದೇಶದ ಸಿನೆಮಾ ಅದು. ಕೇವಲ ಕೆಲವೇ ಪಾತ್ರಗಳು ನಾಲ್ಕಾರು ಸ್ಥಳಗಳಲ್ಲಿ ನಡೆಯುವ ಕಥೆ. ಕಥೆ ವಿಷಯಕ್ಕೆ ಬಂದರೆ ಯುವತಿಯೊಬ್ಬಳು ಏಕಾಂಗಿಯಾಗಿ ಬದುಕಲು ಪಡುವ ಕಷ್ಟ ಸುಖಗಳ ಕಥೆಯೇ ಸಿನಿಮಾದ ಕಥೆ. ಎಲ್ಲರ ಮನೆಯಂತೆ ಆ ಮನೆಯಲ್ಲೂ ಸಮಸ್ಯೆಗಳಿವೆ.ಹಾಗೆಯೇ ತಾಯಿಗೆ ತನ್ನ ಮಗಳಿನ್ನೂ ಒಂದು ಕಡೆ ನೆಲೆಯಾಗಿಲಿಲ್ಲವಲ್ಲ, ಅವಳ ಬದುಕು ಹಸನಾಗಲಿಲ್ಲವಲ್ಲ ಎನ್ನುವ ಚಿಂತೆ ಇದೆ. ಊಟ ಮಾಡುವಾಗ , ಕೆಲಸಕ್ಕೆ ಸಿದ್ಧಳಾಗುವಾಗ ತಾಯಿಯದ್ದು ಅದೇ ಮಾತು ಅದೇ ಕಥೆ. ಅದೇ ಮಗಳಿಗೆ ಕಿರಿಕಿರಿ ಎನಿಸುತ್ತದೆ. ಅಮ್ಮ ನನ್ನನ್ನು ನೆಮ್ಮದಿಯಾಗಿ ತಿನ್ನಲು ಬಿಡುವುದಿಲ್ಲ ಎಂದೆಲ್ಲಾ ರೇಗುತ್ತಾಳೆ ಆದರೂ ತಾಯಿ ಮಾತ್ರ ತನ್ನ ಗೊಣಗಾಟ ಮುಂದುವರೆಸುತ್ತಾಳೆ  ತಾಯಿಯ ಮುಂದೆ ಬೈಯುತ್ತಾಳಾದರೂ  ನಾಯಕಿಗೂ ಅದೇ ಚಿಂತೆ. ಆ ಚಿಂತೆ ಅವಳನ್ನು  ಅದೆಷ್ಟರ ಮಟ್ಟಿಗೆ  ನುಂಗಿಹಾಕುತ್ತದೆಂದರೆ ವಿನಾಕಾರಣ ಒಂಟಿತನದಲ್ಲಿ ಕಳೆಯುವ ರೀತಿ ಮಾಡಿಬಿಡುತ್ತದೆ. ಬದುಕು ಅಸಹನೀಯವಾಗುತ್ತದೆ. ಎಲ್ಲಾದರೂ ದೂರ ಹೋಗಿಬಿಡಲಾ ಎನಿಸುತ್ತದೆ.ಆಕೆ ತನ್ನ ಮನೆಬಿಟ್ಟು ಒಂದು ಅಪಾರ್ಟ್ಮೆಂಟಿನಲ್ಲಿ ಬಾಡಿಗೆಗೆ ಮನೆ ಹಿಡಿಯುತ್ತಾಳೆ. ಅಲ್ಲೊಬ್ಬ ಕವಿ,ಕಲಾವಿದ ತನ್ನ ಒಂದಷ್ಟು ಬರಹಗಳನ್ನು ಚಿತ್ರಗಳನ್ನು ಅಲ್ಲಿಯೇ ಬಿಟ್ಟು ತನ್ನ ಕಲಾಸಕ್ತಿಯನ್ನು ಸಾಕಾರಗೊಳಿಸಿಕೊಳ್ಳಲು ದೂರ ಹೋಗಿರುತ್ತಾನೆ . ಆ ಕಲಾಕೃತಿಗಳು, ಆತನ ಬರಹಗಳು ಆಕೆಯಲ್ಲಿ ಹೊಸ ಚೈತನ್ಯ ತುಂಬುತ್ತವೆ. ಬದುಕನ್ನು ಸಹನೀಯವಾಗಿ ಮಾಡಿಬಿಡುತ್ತವೆ . ಇದಿಷ್ಟೇ ಕಥೆ. ನಿರೂಪಣೆಯೂ ತೀರಾ ಸಾದಾರಣ.ಆದರೂ ಇಂಥ ಸಿನಿಮಾಗಳನ್ನು ನೋಡುವುದರಿಂದ  ಆ ದೇಶದ ಸಂಸ್ಕೃತಿ ಮುಂತಾದವು ತಿಳಿಯುತ್ತದೆ.  .2010ರಲ್ಲಿ ಬಂದ ಈ ಚಿತ್ರದ  ಅವಧಿ ಒಂದೂವರೆ ಘಂಟೆಗಳು.ಆಧುನಿಕ ಗ್ರೀಕ್ ನ ಯುವಕ ಯುವತಿಯರ ಮನಸ್ಥಿತಿ, ಅವರ ಬದುಕನ್ನು ಚೆನ್ನಾಗಿ ತೋರಿಸುವ ಚಿತ್ರ 45m2.