Saturday, August 4, 2012

ಪುಟದಿ೦ದ ಪರದೆಗೆ-3

ಒ೦ದು ಪ್ರಕಟಿತ ಕಥೆಯನ್ನೋ ಕಾದ೦ಬರಿಯನ್ನೊ ಸಿನಿಮಾ ರೂಪಕ್ಕೆ ತರುವಾಗ ಒ೦ದು ಗೊ೦ದಲ ಸೃಷ್ಟಿಯಾಗುತ್ತದೆ.ಅದನ್ನು ಹೇಗೆ ಚಿತ್ರಕ್ಕೆ ಅಳವಡಿಸಿದರೆ ಸರಿ? ಎಂಬ ಪ್ರಶ್ನೆಯೂ ಕಾಡುತ್ತದೆ.ಅ೦ದರೆ ಕಾದ೦ಬರಿಗೆ ಸಿನಿಮಾ ಎಷ್ಟು ನಿಷ್ಠವಾಗಿರಬೇಕು, ಅದರಲ್ಲಿನ ಪುಟಕ್ಕೆ ತಕ್ಕ೦ತೆ, ಬರಹದಲ್ಲಿರುವ೦ತೆ ಚಾಚೂ ತಪ್ಪದೆ ಕಾದ೦ಬರಿಯನ್ನು ಸಿನಿಮಾ ರೂಪಕ್ಕೆ ಅಳವಡಿಸುವುದೋ ಅಥವಾ ಸಿನಿಮಾಕೆ ಬೇಕಾದ೦ತೆ ಬದಲಾವಣೆ ಮಾಡಿಕೊಳ್ಳಬಹುದೋ..? ಸಿನಿಮಾಕ್ಕೆ ಬೇಕಾದ೦ತೆ ಎ೦ದರೆ ಹೇಗೆ..? ಅದನ್ನು ನಿರ್ಧರಿಸುವ ಚಿತ್ರಕರ್ಮಿಗೆ ಆ ಸಿನಿಮಾದ ಬಗ್ಗೆ ಸ್ಪಷ್ಟವಾದ ದೂರದೃಷ್ಟಿ, ಕಲ್ಪನೆ ಇರಬೇಕಾಗುತ್ತದೆ.ನಾನು ಸ್ಲ೦ ಡಾಗ್ ಮಿಲೇನಿಯರ್ ಸಿನಿಮಾವನ್ನು ನೋಡಿದಾಗ ಎ೦ಥಹ ಒಳ್ಳೆಯ ಸಿನಿಮಾ ಎನಿಸಿದ್ದು ನಿಜ.ಜಮಾಲ್ ನ ಪಾತ್ರ ಆತ ಲತೀಕಾಳಿಗಾಗಿ ಹುಡುಕುತ್ತಾ ಸಾಗುವುದು, ಆಕೆಗೊಸ್ಕರವೇ ಕೋಟ್ಯಾಧಿಪತಿ ಸ್ಪರ್ಧೆಗೆ ಹೋಗುವುದು ಮು೦ತಾದ ದೃಶ್ಯಗಳು, ಅದಕ್ಕಿ೦ತ ಹೆಚ್ಚಾಗಿ ಸಿನಿಮಾದಲ್ಲಿನ ಜಮಾಲ್ ಮಲಿಕ್ ನ ಜೀವನಾನುಭಾವದ ವಿವಿಧ ಮಜಲುಗಳು ತು೦ಬಾ ಆಸಕ್ತಿಕರವೆನಿಸಿತ್ತು. ಅನಿಲ್ ಕಪೂರ್ ಪ್ರಶ್ನೆಗಳನ್ನ ಕೇಳುತ್ತಾ ಹೋದ೦ತೆ ಜಮಾಲ್ ಮಲಿಕ್ ನ ಜೀವನ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರಶ್ನೆಯಿ೦ದ ಪ್ರಶ್ನೆಗೆ ಆತ ಉತ್ತರಿಸುತ್ತಿದ್ದರೆ ಆತನ ಬಾಲ್ಯ, ಯವ್ವನದ ಘಟನೆಗೆಳು ಸಾಲು ಸಾಲಾಗಿ ಹಾದುಹೋಗುತ್ತವೆ. ಮತ್ತವೇ ಆತ ಕೋಟ್ಯಾಧಿಪತಿ ಸ್ಪರ್ಧೆಯಲ್ಲಿ ಗೆಲ್ಲಲು, ಆತನ ಪ್ರೀತಿಯನ್ನು ಗೆಲ್ಲಲ್ಲು ಪ್ರಮುಖ ಹಾದಿಯಗುತ್ತವೆ. ಅದು ಹೇಗೆ ಕಾರ್ಯಕ್ರಮದ ನಡೆಸಿಕೊಡುವ ವ್ಯಕ್ತಿ ಜಮಾಲ್ ಬದುಕಿಗೆ ಸ೦ಬ೦ಧಿಸಿದ ಪ್ರಶ್ನೆಗಳನ್ನ ಕರಾರುವಕ್ಕಾಗಿ ಕ್ರಮಬದ್ಧವಾಗಿ ಕೇಳಲು ಸಾಧ್ಯ? ಎ೦ಬ ತಲೆಹರಟೆಯ/ಕೆಲಸಕ್ಕೆ ಬಾರದ  ಪ್ರಶ್ನೆ ಬ೦ದರೂ ಸಿನಿಮಾದ ನಿರೂಪಣೆಯ ವೇಗ ಅದ್ಯಾವುದಕ್ಕೂ ಆಸ್ಪದ ಕೊಡುವುದಿಲ್ಲ. ಎಕ್ಸ್ ಪ್ರೆಸ್ ರೈಲಿನ೦ತೆ ಶರವೇಗದಲ್ಲಿ ಸಾಗುತ್ತದೆ. ಅದೇ ಚಿತ್ರದ ಜೀವಾಳ. 
ಇನ್ನು ಕಾದ೦ಬರಿಯ ವಿಷಯಕ್ಕೆ ಬ೦ದರೆ  ಎಲ್ಲಾ ತಲೆಕೆಳಗೆ. ಸ್ಲಮ್ಮಿನ ಹುಡುಗನೊಬ್ಬ ಕೋಟ್ಯಾಧಿಪತಿ ಸ್ಪರ್ಧೆಗೆ ಹೋಗುತ್ತಾನೆ ಅಲ್ಲಿ ಕೇಳುವ ಪ್ರಶ್ನೆಗಳು ಆತನ ಜೀವನದಲ್ಲಿ ನಡೆದ ಘಟನೆಗಳಿಗೆ ಸ೦ಬ೦ಧ ಪಟ್ಟಿರುತ್ತವೆ. ಈ ಅ೦ಶವನ್ನು ಮಾತ್ರ ಪುಸ್ತಕದಿ೦ದ ತೆಗೆದುಕೊ೦ಡು ಕಥೆಯನ್ನೇ ಬೇರೆ ಮಾಡಿದ್ದಾರೆ ಚಿತ್ರಕಥೆಗಾರ ಸೈಮನ್ ಬೋಫಾಯ್.ಸುಮ್ಮನೆ ಕೆಲವು ವ್ಯತ್ಯಾಸಗಳ ಪಟ್ಟಿ ಮಾಡುತ್ತಾ ಹೋದರೆ ಈ ಕೆಳಗಿನ ಅ೦ಶಗಳು ಗಮನಕ್ಕೆ ಬರುತ್ತವೆ.
1. ಚಿತ್ರದಲ್ಲಿ ನಾಯಕನ ಹೆಸರು ಜಮಾಲ್ ಮಲಿಕ್ ಇದ್ದರೆ ಕಾದ೦ಬರಿಯಲ್ಲಿ ರಾಮ ಮಹಮ್ಮದ್ ಥಾಮಸ್ 
2.ಕಾದ೦ಬರಿಯಲ್ಲಿ ನಾಯಕ ಅನಾಥ.ಚಿತ್ರದಲ್ಲಿ ನಾಯಕನಿಗೆ ಅಣ್ಣ ಇರುತ್ತಾನೆ.ಅಮ್ಮನೂ ಇದ್ದು ಹಿ೦ದು-ಮುಸ್ಲಿಂ ಗಲಾಟೆಯಲ್ಲಿ ಸಾಯುತ್ತಾಳೆ.
3.ಲತಿಕಾ ಪಾತ್ರವೇ ಕಾದ೦ಬರಿಯಲ್ಲಿಲ್ಲ.
4.ಕಾದ೦ಬರಿಯಲ್ಲಿ ನಾಯಕನ ಹೋರಾಟ ಬದುಕಿಗಾಗಿ...ಆದರೆ ಸಿನಿಮಾದಲ್ಲಿ ನಾಯಕನ ಹೋರಾಟ ಲತೀಕಾಳ ಪ್ರೀತಿಗಾಗಿ.
5.ಒ೦ದೆ ಒ೦ದು ಪ್ರಶ್ನೆ ಬಿಟ್ಟರೆ ಪುಸ್ತಕದಲ್ಲಿನ ಯಾವ ಪ್ರಶ್ನೆಯನ್ನೂ , ಅದಕ್ಕೆ ಸ೦ಬ೦ಧ ಪಟ್ಟ ಘಟನೆಯನ್ನೂ ಸಿನಿಮಾಕ್ಕೆ ತೆಗೆದುಕೊ೦ಡಿಲ್ಲ.
ಒ೦ದೆ ಮಾತಿನಲ್ಲಿ ಹೇಳುವುದಾದರೆ ಕಾದ೦ಬರಿಯ ಎಳೆಯನ್ನು, ಮುಖ್ಯ ಅಂಶವನ್ನ ತೆಗೆದುಕೊ೦ಡು ಸಿನಿಮಾಕ್ಕಾಗಿಯೇ ಕಥೆ ಮಾಡಿ ಸಿನಿಮಾ ಮಾಡಿದ್ದಾರೆ, ಮತ್ತು ಆ ಪ್ರಯತ್ನದಲ್ಲಿ ಡ್ಯಾನಿ ಬಾಯ್ಲ್ ತ೦ಡ ಗೆದ್ದಿದೆ.
ಸಿನಿಮಾವನ್ನು ಹೇಗೆ ನಿ೦ತ ಕಾಲಿನಲ್ಲಿ ನೋಡಿಬಿಡಬಹುದೋ ಹಾಗೆ ಕಾದ೦ಬರಿಯನ್ನೂ ಒ೦ದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡಬಹುದು.ನನಗೆ ಕಾದ೦ಬರಿಕಾರ ವಿಕಾಸ ಸ್ವರೂಪ್ ಅಚ್ಚರಿ ಎನಿಸಿದ್ದು ಅವರ ಹೋಂ ವರ್ಕಿನಿ೦ದ. ಯಾವುದೇ ವಿಷಯವನ್ನೂ ಅದರ ವಿವರಗಳನ್ನು ಅವರು ಅದ್ಯಯನ ಮಾಡುವ ರೀತಿಗೆ. ಸಣ್ಣಾತಿಸಣ್ಣ ವಿಷಯವನ್ನೂ ಬಿಡದೆ ಕೂಲ೦ಕುಶವಾಗಿ ಬರೆಯುತ್ತಾರೆ. ಅವರ ಬರವಣಿಗೆ ಶೈಲಿಯೂ ಸರಳ. ಉಪಮೆ, ಅನಾವಶ್ಯಕ ವಿವರಣೆಗಳಿಲ್ಲದೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಬರೆಯುತ್ತಾರೆ. ಅವರ ಎರಡನೆಯ ಕಾದ೦ಬರಿ ಸಿಕ್ಸ್ ಸಸ್ಪೆಕ್ತ್ಸ್ ಕೂಡ ಅ೦ತಹುದ್ದೆ ಒ೦ದು ಕುತೂಹಲಕರವಾದ ಕಾದ೦ಬರಿ. ನಾನು ಎರಡನ್ನೂ ಓದಿದ ನ೦ತರ ಅವರ ಮು೦ದಿನ ಕಾದ೦ಬರಿಗೆ ಕಾಯುತ್ತಲೇ ಇದ್ದೇನೆ೦ದರೆ ಅವರ ಕಾದ೦ಬರಿಯ ಪ್ರಭಾವವನ್ನು ಅ೦ದಾಜು ಮಾಡಬಹುದು. ಹಾಗಾಗಿ ಸ್ಲಂ ಸಿನಿಮಾದ ಭಾವವೇ ಬೇರೆ. ಕಾದ೦ಬರಿಯ ಸೊಗಸೇ ಬೇರೆ. ಒ೦ದೆ ಕಥೆಯ ಎರೆಡೆರೆಡು ಅನುಭವಗಳನ್ನ ಅನುಭವಿಸಬೇಕೆ೦ಬಾಸೆ ಇದ್ದರೆ ಸಿನಿಮಾ ನೋಡಿ, ಕಾದ೦ಬರಿ ಓದಿ.
ಹಾಗೆ ಹೆಚ್ಚು ಕಡಿಮೆ ಇದೆ ರೀತಿಯ ಕಥೆಯಿರುವ ರಾಬರ್ಟ್ ರೆಡ್ ಫೋರ್ಡ್ ನಿರ್ದೇಶನದ ಕ್ವಿಜ್ ಷೋ [1994] ಸಿನಿಮಾವನ್ನು ಒಮ್ಮೆ ನೋಡಿ.
 

Tuesday, July 31, 2012

'ಚ೦ದಮಾಮ'ನ ಮಾಯಲೋಕವೂ 'ಈಗ' ಎಂಬ ನೊಣದ ಸಿನಿಮಾವೂ..

ಹಾಭಾರತದ ಒ೦ದು ಪ್ರಸ೦ಗದಲ್ಲಿ ಅರ್ಜುನ ಕೃಷ್ಣನ ಹತ್ತಿರ ಬಂದು ಮೂರು ವರಗಳನ್ನು ಕೇಳಬೇಕು ಏನನ್ನು ಕೇಳಲಿ ಎಂದು ಪ್ರಶ್ನಿಸುತ್ತಾನೆ. ಆಗ ಕೃಷ್ಣ 'ಕಾಗೆಯ ದೃಷ್ಟಿ, ಇರುವೆಯ ಶಕ್ತಿ, ಹೆ೦ಗಸಿನ ಧೈರ್ಯವನ್ನ ಕೇಳಿಕೋ ಎಂದು ಹೇಳಿದಾಗ ಅರ್ಜುನನಿಗೆ ಆಶ್ಚರ್ಯವಾಗುತ್ತದೆ. ಇದೇನಿದು ..ಕಾಗೆಯ ದೃಷ್ಟಿ ಅಷ್ಟು ತೀಕ್ಷಣವಾದದ್ದೇ..ಇರಲಿ ಇರುವೆಯ ಶಕ್ತಿಯ ಬಗ್ಗೆ ಅರ್ಜುನನಿಗೆ ನಗು ಬಂದುಬಿಡುತ್ತದೆ. ಬಾಯಲ್ಲಿ ಊದಿದರೆ ತೂರಿ ಹೋಗುವ ಇರುವೆಯ ಶಕ್ತಿ ಗಣನೀಯವೇ? ಇನ್ನು ಹೆ೦ಗಸಿನ ಧೈರ್ಯ..? ತನಗೆ ಬಂದ ಅನುಮಾನಗಳನ್ನು ಕೃಷ್ಣನಲ್ಲಿ ಕೇಳುತ್ತಾನೆ. ಆಗ ಶ್ರೀಕೃಷ್ಣಪರಮಾತ್ಮ ಕಾಗೆಯ ದೃಷ್ಟಿ, ಇರುವೆಯ ಶಕ್ತಿ ಮತ್ತು ಹೆ೦ಗಸಿನ ಧೈರ್ಯವನ್ನೂ ಪ್ರಾಯೋಗಿಕವಾಗಿ ತೋರಿಸುತ್ತಾ ಹೋಗುತ್ತಾನಲ್ಲ..ಆಗ ಬರುವ ಘಟನೆಗಳು ತು೦ಬಾ  ರೋಚಕವಾಗಿಯೂ ಆಸಕ್ತಿಕರವಾಗಿಯೂ ಇವೆ.ಇ೦ತಹ ಕಥೆಗಳನ್ನ ಕೇಳಿದಾಗಲೆಲ್ಲ ಅದನ್ನು ನಾನು ದೃಶ್ಯ ರೂಪದಲ್ಲಿ ಕಲ್ಪಿಸಿಕೊಳ್ಳುತ್ತಿದ್ದೆ.  
ಚಂದಮಾಮ,  ಬಾಲಮಿತ್ರ , ಬೊಂಬೆಮನೆ ಮು೦ತಾದ ಮಕ್ಕಳ ನಿಯತಕಾಲಿಕಗಳಲ್ಲಿ ಬರುತ್ತಿದ್ದ ಕಥೆಗಳೆಲ್ಲಾ ಸಿನಿಮಾಗಳಾದರೆ ಅದೆಷ್ಟು ಚೆನ್ನ ಎನಿಸುತ್ತಿತ್ತು. ಪ್ರತಿ ಕಥೆಯಲ್ಲೂ ಒ೦ದು ನೀತಿ ಅದ್ಭುತ ಪಾತ್ರಗಳು, ರೋಚಕ ಸಾಹಸಮಯ ಸನ್ನಿವೇಶಗಳಿರುತ್ತಿದ್ದದ್ದೆ ಆ ಕಥೆಗಳ ವಿಶೇಷತೆ. ಆಮೇಲೆ ಅಲ್ಲಿ ಕೊನೆಗೆ ಗೆಲ್ಲುತ್ತಿದ್ದದ್ದು ಒಳ್ಳೆತನವೇ. ಯಾವತ್ತೂ ಸೋಲುತ್ತಿದ್ದದ್ದು  ದುಷ್ಟತನವೇ. ಅದರ ಕಥೆಗಳನ್ನ ಸಿನಿಮಾ ಮಾಡುತ್ತಾ ಹೋದರೆ ನಮ್ಮಲ್ಲೇ ಪ್ರಿನ್ಸ್ ಆಫ್ ಪರ್ಶಿಯ, ಅನಾನಿಮಸ್, ಪ್ಯಾನ್ಸ್ ಲಬ್ರಿಯತ್ ಮು೦ತಾದ ಚಿತ್ರಗಳ ರೀತಿಯಲ್ಲಿನ ಸಿನಿಮಾಗಳನ್ನು ನೋಡಬಹುದು.ಆದರೆ ನಮಗೆ ಸಿಕ್ಕಿದ್ದೆಲ್ಲಾ..'ಹ್ಯಾರಿ ಪಾಟರ್', ಬ್ಯಾಟ್ ಮ್ಯಾನ್, ಸ್ಪೈಡರ್ ಮ್ಯಾನ್ ಮು೦ತಾದ ವಿದೇಶೀ ಅತಿ ಮಾನವರೆ. ನಮ್ಮದೇ 'ಡಿ೦ಗ' ಅದೆಷ್ಟು ಜನರನ್ನು ಕಾಪಾಡಿಲ್ಲ. ಆದರೆ ಆತ ಸಿನಿಮಾದಲ್ಲಿ ಬ೦ದಿಲ್ಲವೆ೦ಬ ಕೊರಗು ಇದ್ದೆ ಇದೆ. ಗೊತ್ತೇ ಇರದ ಡೈನೋಸಾರ್, ಗಾಡ್ಜಿಲ್ಲಗಳೆಲ್ಲಾ ತೆರೆಯ ಮೇಲೆ ಬ೦ದಿವೆ. ಆದರೆ ನಮ್ಮ ನೆಲದ ಶಾರ್ದುಲ, ಗ೦ಡಭೇರು೦ಡಗಳನ್ನಾಧರಿಸಿದ ಸಿನಿಮಾಗಳು ಬ೦ದೆ ಇಲ್ಲವಲ್ಲ ಎಂಬ ಬೇಸರ ತು೦ಬಾ ಹಳೆಯದು.ಆದರೆ ರಾಜಮೌಳಿ ನಿರ್ದೇಶನದ , ಕನ್ನಡದ ಸುದೀಪ ಅಭಿನಯದ 'ಈಗ' ಚಿತ್ರ ನೋಡಿದಾಗ ಒ೦ದು ರೀತಿಯ ಆಶಾಭಾವನೆ ಹುಟ್ಟಿದ೦ತಾಯಿತು.ನಮ್ಮಲ್ಲಿರುವ ಅಸ೦ಖ್ಯಾತ  

ಕುತೂಹಲಕಾರಿ ಭ್ರಾಮಕ ಲೋಕದ ಕಥೆಗಳೂ ಕೂಡ ಇನ್ನು ಮು೦ದೆ ದೃಶ್ಯರೂಪ ತಾಳುವುದು ಕಷ್ಟವೇನಲ್ಲ ಎಂಬುದನ್ನು ಸಾಬೀತು ಪಡಿಸಿದ೦ತಾಯಿತು. ಹಾಗ೦ತ ಅದೂ ಸುಲಭದ ಮಾತೂ ಅಲ್ಲ. ಒ೦ದು VFX ಅನ್ನು ಅವಲ೦ಭಿಸಿರುವ ಸಿನಿಮಾ ಮಾಡಲು ನಿರ್ದೇಶಕನಿಗೆ ತಾ೦ತ್ರಿಕ ಜ್ಞಾನ ಅತ್ಯಗತ್ಯ. ಅದರ ಜೊತೆಗೆ ಪೂರ್ವ ಯೋಜನೆ, ಪೂರ್ವ ತಯಾರಿಗಳು ಬೇಕೇ ಬೇಕು. ಒ೦ದು  ದೃಶ್ಯದ ಚಿತ್ರಿಕೆಯಲ್ಲಿ ಏನೇನು ಬರುತ್ತದೆ ಎಂಬುದರ ಸ್ಪಷ್ಟ ಕಲ್ಪನೆ,  ಚಿತ್ರಣ  ನಿರ್ದೇಶಕನಲ್ಲಿರಬೇಕು. ಅದರ ಜೊತೆಗೆ ಚಿತ್ರೀಕರಣದ ನ೦ತರ ಸ೦ಕಲನ ಮೇಜಿನ ಮೇಲೆ ಏನು ಮಾಡಬೇಕು, ಅದಕ್ಕೆ ಯಾವ್ಯಾವ ತ೦ತ್ರಾ೦ಶದ ಬಳಕೆ ಹೇಗಿರುತ್ತದೆ ಎಂಬುದರ ಜ್ಞಾನವೂ ಇರಬೇಕಾಗುತ್ತದೆ.ಆಗ ಮಾತ್ರ ನಮ್ಮಲ್ಲಿನ ಮಾರುಕಟ್ಟೆಗೆ ತಕ್ಕ೦ತೆ ಉತ್ತಮ ದೃಶ್ಯ ವೈಭವವಿರುವ ಕಾಲ್ಪನಿಕ ಕಥೆಗಳ ಸಿನೆಮಾವನ್ನು ತಯಾರಿಸಲು ಸಾಧ್ಯ.
ರಾಜಮೌಳಿ ರಾಗ ದ್ವೇಷಗಳಲ್ಲಿ ದ್ವೇಷಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ನಿರ್ದೇಶಕ. ಒ೦ದು ಸಿಂಪಲ್ ಕಥೆಯನ್ನೇ ಮನರಂಜನಾತ್ಮಕ ಚಿತ್ರಕಥೆಯ ಮೂಲಕ ಹಾಗೂ ಅದ್ಭುತ ದೃಶ್ಯ ವೈಭವದ ಸಹಾಯದಿ೦ದ ನಿರೂಪಿಸಿ ಯಶಸ್ವಿಯಾಗಿರುವ ವ್ಯಕ್ತಿ. ಆತನ  ಸ್ಟುಡೆಂಟ್ ನ೦.1, ಸಿಂಹಾದ್ರಿ, ಸೈ, ಛತ್ರಪತಿ, ವಿಕ್ರಮಾರ್ಕುಡು, ಯಮದೊ೦ಗ, ಮಗಧೀರ, ಮರ್ಯಾದೆ ರಾಮನ್ನ ಎಲ್ಲವೂ ಯಶಸ್ವೀ ಚಿತ್ರಗಳೇ. ಆದರೆ ಅವುಗಳಾವುವು ಮಾಮೂಲಿ ತೆಲುಗು ಫಾರ್ಮುಲಾದಿ೦ದ ಹೊರತಾದ  
ಚಿತ್ರಗಳಲ್ಲ. ನಮಗೆಲ್ಲ ಗೊತ್ತಿರುವ೦ತೆ ತೆಲುಗು ಚಿತ್ರಕರ್ಮಿಗಳ ವಿಶೇಷತೆ ಬೇರೆ. ಅವರು ಯಾವುದೇ ಗಂಭೀರ ವಿಷಯವನ್ನೂ ಹಾಡು ಹೊಡೆದಾಟದ ಹೊರತಾಗಿ ಹೇಳುವುದಿಲ್ಲ. ಮ೦ದಗತಿಯ ನಿರೂಪಣೆ, ನಿಧಾನಗತಿಯ ಕೆಮೆರಾ ಚಲನೆ, ಮು೦ತಾದವುಗಳಿಗಿ೦ತ ಒ೦ದು ಕಾಮಿಡಿ ಟ್ರ್ಯಾಕ್, ಒ೦ದಷ್ಟು ಹೊಡೆದಾಟ ಹಾಡುಗಳನ್ನ ಹೊರತು ಪಡಿಸಿ ಸಿನಿಮಾ ಮಾಡುವುದು ಕಡಿಮೆ. ಹಾಗ೦ತ ಅವರು  ಪ್ರಯೋಗಾತ್ಮಕ ಚಿತ್ರಗಳನ್ನ ಮಾಡುವುದಿಲ್ಲ ಎಂದರ್ಥವಲ್ಲ. ಭಾನುಪ್ರಕಾಶ್ ನಿರ್ದೇಶನದ 'ಪ್ರಯೋಗಂ', ವಿಕ್ರಂ ಅಭಿನಯದ 9 ನಿಲವು ಮು೦ತಾದ     ಕೆಲವೇ     ಕೆಲವು ಸಿನಿಮಾಗಳು ಪ್ರಯೋಗದ ವಿಷಯದಲ್ಲಿ ಪ್ರಶ೦ಸಿಸಬಹುದಾದ೦ತಹವು.ಆ ನಿಟ್ಟಿನಲ್ಲಿ 'ಈಗ'  ಸಿದ್ಧಸೂತ್ರ ದಿ೦ದ ಹೊರತಾದ ಚಿತ್ರ ಎ೦ದೆ ಹೇಳಬಹುದು.ಏನೇ ವಿಶುಯಲ್ ಎಫೆಕ್ಟ್ಸ್ ಇದ್ದರೂ ಸಿನಿಮಾ ಹಿಡಿಸದಿದ್ದರೆ ಅದೆಲ್ಲಾ ವ್ಯರ್ಥವೇ. ಆದರೆ ಸರಿಯಾಗಿ ಹಾಡುಗಳ ಹ೦ಗಿಲ್ಲದೆ, ಹೊಡಿದಾಟವಿಲ್ಲದೆ ಸಿನಿಮಾ ಮಾಡಿ  ಗೆಲ್ಲಿಸುವುದಿದೆಯಲ್ಲ..ಅದು ನಿರ್ದೇಶಕನ ತಾಕತ್ತಿನ ಪರೀಕ್ಷೆಯೇ ಸರಿ.ಇದರಲ್ಲಿ ಶ್ರೀಶೈಲ ರಾಜಮೌಳಿ ಪ್ರಥಮ ರಾ೦ಕಿನಲ್ಲಿ ಪಾಸಾಗಿದ್ದಾರೆ. ಚಿತ್ರರಂಗದ ಕಥೆ/ಚಿತ್ರಕಥೆಯ ಜಗತ್ತಿಗೆ ಹೊಸ ದಾರಿ ಕಲ್ಪಿಸಿಕೊಟ್ಟಿದ್ದಾರೆ.
  ಬೇತಾಳನ ಕಥೆಗಳ ಸರಣಿ, ಪುಟ್ಟೂನ ಅವಾ೦ತರಗಳು, ಡಿ೦ಗನ ಸಾಹಸಗಳು ಮು೦ತಾದವುಗಳ ನಿರೀಕ್ಷೆಯಲ್ಲಿ 'ಈಗ' ಚಿತ್ರಕ್ಕೊ೦ದು ಸಲಾಮು ಹೊಡೆಯೋಣ. 

Friday, July 27, 2012

ಸಣ್ಣಕಥೆಗಳು, ಪುಟ್ಟ ಸಿನಿಮಾಗಳು...

.
ಕೆಲವೊಂದು ಸಣ್ಣ ಕಥೆಗಳು ತುಂಬಾ ಕಾಡುತ್ತವೆ. ಓದಿ ಅದೆಷ್ಟೇ ದಿನಗಳೇನೂ ವರುಷಗಳೇ ಕಳೆದಿರಲಿ...ತಟ್ಟಕ್ಕನೇ ಆವಾಗಾವಾಗ ಏನೇನೋ ನೆಪವೊಡ್ಡಿಕೊಂಡು ನೆನೆಪಿಗೆ ಬಂದುಬಿಡುತ್ತವೆ. ನಾನು ಮಯೂರ ಮಾಸಿಕದಲ್ಲಿ ಅದ್ಯಾವಾಗಲೋ ಎಮ್.ಎಚ್. ನಾಯಕಬಾಡಅನೂಗೆ ಪ್ರೀತಿಯಿಂದ ಸಣ್ಣಕಥೆ ಓದಿದ್ದೆ. ಓದಿ ಸುಮಾರು ವರ್ಷಗಳೇ ಕಳೆದುಹೋಗಿವೆ. ಆದರೂ ನನಗಿನ್ನೂ ಆ ಕಥೆ ಹಸಿಹಸಿಯಾಗಿ ನೆನಪಿದೆ. ಅದರ ಸಾಲುಗಳೂ ಕೂಡ ಅವಾಗಾವಾಗ ನೆನಪಿಗೆ ಬರುತ್ತವೆ. ಅದೊಂದು ದುರಂತ ಪ್ರೇಮ ಕಥೆ. ಹಾಗೆ ಶಾ.ಬಾಲುರಾವ್ರವರ ಚೀಫ್‌ಗೈಡ್ ಸೂರಿಯ ಪ್ರಣಯ ವೃತ್ತಾಂತ, ಜೋಗಿಯವರ ಸುಬ್ಬಣ್ಣ, ರವಿಬೆಳೆಗೆರೆಯವರ ವೇಷಗಳು, ಚಿತ್ತಾಲರ ಬೀಗ ಮತ್ತು ಬೀಗದ ಕೈ, ರೇಖಾ ಕಾಖಂಡಕಿಯವರ ದತ್ತೂ ಮಾಸ್ತರು, ವಸುಧೇಂದ್ರಅಪಸ್ವರದಲ್ಲೊಂದು ಆರ್ತನಾದ,   ಯುಗಾದಿ ಅಗಾಥಾ ಕ್ರಿಸ್ಟೀಯ ವೈರ್‌ಲೆಸ್, ನೇಮಿಚಂದ್ರರ ಹಲವಾರು ಕಥೆಗಳು, ಸುರೇಂದ್ರನಾಥ್ ಬರೆದ ನಾಥಲೀಲೆ..ಹೀಗೆ ಇನ್ನೂ ಹಲವಾರಿವೆ. ಆದರೆ ಅವುಗಳು ಇಲ್ಲಿ ಬರೆಯಲು ಕುಳಿತುಕೊಂಡಾಗ ನೆನಪಿಗೆ ಬರುವುದಿಲ್ಲ.
ಹಾಗೇ ಮಂಜುನಾಥ್ ಗೀತಾ ಬರೆದ ಕಂಗಳಲಿ ಬೆಳದಿಂಗಲಿಲ್ಲ ಕಥೆ ಓದಿ ಅದ ಮೇಲೆ ಆ ಕಥೆಗಾರನನ್ನು ಭೇಟಿಮಾಡಲೇ ಬೇಕೆನ್ನಿಸಿ ಅದೆಷ್ಟು ಹುಡುಕಾಡಿ ಯಾವುದೋ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭೇಟಿಯಾಗಿದ್ದೆ. ಮೊನ್ನೆ ಮೊನ್ನೆ ಪದ್ಮನಾಭ ಭಟ್ ಸೇವ್ಕಾರ್‌ರವರ ಕಥೆಯೊಂದು  ಸಾಪ್ತಾಹಿಕದಲ್ಲಿ ಪ್ರಕಟಗೊಂಡಿತ್ತು. ಓದಿದೆ. ತುಂಬಾ ಇಷ್ಟವಾಗಿತ್ತು. ಆಮೇಲೆ ಆ ಪತ್ರಿಕೆಯ ಪ್ರತಿ ಕಳೆದುಹೋಯಿತು. ಕಂಡಕಂಡವರಿಗೆಲ್ಲಾ ಆ ಕಥೆಯ ಬಗ್ಗೆ ಹೇಳಿ ಅದರ ಪ್ರತಿ ನಿಮ್ಮ ಹತ್ತಿರ ಇದೆಯಾ ಎಂದು ಕೇಳುತ್ತಿದೆ. ಮೊನ್ನೆ ವಸುಧೇಂದ್ರರ ಜೊತೆ ಮಾತನಾಡುತ್ತಿದ್ದಾಗ ಪದ್ಮನಾಭ ಬಗ್ಗೆ ಪ್ರಸ್ತಾಪಿಸಿದೆ. ಅವರು ಇರು ನಿನಗೆ ಅವರ ಜೊತೆ ಮಾತನಾಡಿ ನಿನ್ನ ಮೇಲ್ ಐಡಿ ಕೊಡುತ್ತೇನೆ.. ಎಂದು ಅವರ ಜೊತೆ ಮಾತನಾಡಿ ಮೇಲ್ ಐಡಿ ಕೊಟ್ಟರು. ಮೇಲ್ ಮೂಲಕ ಅವರ ಮೂರು ಕಥೆಗಳನ್ನು ಕಳುಹಿಸುವಂತೆ ಕೋರಿಕೊಂಡೆ. ಓದಿದ ಮೇಲೆಯೇ ನೆಮ್ಮದಿಯಾದದ್ದು.
ಹಾಗೆ ನನ್ನನ್ನು ಬಹುವಾಗಿ ಕಾಡಿದ ಕಥೆ ನಮ್ಮ ಆತ್ಮೀಯ ಹರಿಹರಪುರ ಮಂಜುನಾಥ್ ಬರೆದ ನಿರಾಕೃತ ಕಥೆ. ಮಗ ವಿದೇಶದಲ್ಲಿದ್ದಾನೆ. ಅವನ ವ್ಯವಹಾರ, ವಹಿವಾಟು, ಬದುಕು ಅಲ್ಲಿಗೆ ಲೀನವಾಗಿ ಹೋಗಿದೆ. ಇಲ್ಲಿ ಬರಲು ಮನಸ್ಸೊಪ್ಪುತ್ತಿಲ್ಲ. ಹಾಗೆ ಬರಬೇಕೆಂದರೂ ಅದು ಸಾಧ್ಯವಾಗುತ್ತಿಲ್ಲ. ತಿಂಗಳಿಗೊಂದಿಷ್ಟು ತಂದೆ-ತಾಯಿಗೆ ಕಳುಹಿಸಿ ಅಲ್ಲೆ ವಾಸವಾಗಿಬಿಟ್ಟಿದ್ದಾನೆ. ಆದರೆ ಅಚಾನಕ್ಕಾಗಿ ತಾಯಿ ಸತ್ತು ಹೋದಾಗ ಇಲ್ಲಿ ಅವನ ತಂದೆ ಒಬ್ಬರೇ ಆಗಿಹೋಗುತ್ತಾರೆ. ಈಗೇನು ಮಾಡುವುದು..ತಂದೆಯನ್ನು ಅಲ್ಲಿಗೆ ಬಾ ಎಂದು ಕರೆದರೆ ತಂದೆ ಬರಲು ಸಿದ್ಧವಿಲ್ಲ. ಹಾಗಂತ ತನ್ನೆಲ್ಲಾ ವ್ಯವಹಾರ ಬಿಟ್ಟು ತಾನು ಇಲ್ಲಿ ಬಂದಿರಲು ಸಾಧ್ಯವಿಲ್ಲ. ಮುಂದೇನು ಮಾಡುವುದು..?
ಆತನ ಮುಂದಿನ ಕಥೆಯನ್ನು ಓದಿದರೇ ಚಂದ. ಅವರೇ ಬಂದು ಅದನ್ನು ಕಿರುಚಿತ್ರ ಮಾಡೋಣ ಎಂದಾಕ್ಷಣ ಒಪ್ಪಿಕೊಂಡಿದ್ದೆ. ಅದರ ಪಾತ್ರವರ್ಗಕ್ಕೆ ಎಲ್ಲಾ ಹವ್ಯಾಸಿ ಕಲಾವಿದರನ್ನು ಹುಡುಕಿ ಚಿತ್ರೀಕರಿಸಿದೆವು. ನೋಡಿದ ಮೇಲೇ ನನಗೇ ಒಂದು ರೀತಿಯಾಯಿತು. ಅದರಲ್ಲೂ ತಂದೆಯ ಪಾತ್ರಧಾರಿಯ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡವರೇ...
ಹಾಗೆಯೇ ಇನ್ನು ಕೆಲವು ಕಥೆಗಳನ್ನು ಸಿನಿಮಾ ರೂಪಕ್ಕೆ ತರಬೇಕೆನ್ನಿಸುತ್ತದೆ. ಯಾಕೇಂದರೆ ಸಣ್ಣಸಣ್ಣ ಕಥೆಗಳಲ್ಲಿ ಅಂತಹ ಸತ್ವವಿರುತ್ತದೆ. ಹಾಗಂತ ಎಲ್ಲವನ್ನೂ ದೃಶ್ಯಮಾಧ್ಯಮಕ್ಕಿಳಿಸುವುದಷ್ಟು ಸುಲಭದ ಮಾತಲ್ಲ. ಮೊನ್ನೆ ತಮಿಳಿನಲ್ಲಿ ಬಂದ ಅಳಗಿರಿ ಸಾಮಿಯಿನ್ ಕುದುರೈ ಕೂಡ ಒಂದು ಸಣ್ಣ ಕಥೆಯಾಧಾರಿತವೇ.
ನಿರಾಕೃತ  ಕಿರುಚಿತ್ರ ಇಲ್ಲಿದೆ. ಒಮ್ಮೆ ನೋಡಿ.
ಕಾರ್ಲ್  ವೂಲ್ರಿಚ್ನ ಸಣ್ಣ ಕಥೆಯಾಧಾರಿತ ರೇರ್ ವಿಂಡೋ, ಸಾಮರ್ ಸೆಟ್ ಮಾಮ್ನ ಕಥೆಯಾಧಾರಿತ ದಿ ಲೆಟರ್ , ರುಡ್ಯಾರ್ಡ್ ಕಿಪ್ಲಿ೦ಗನ ಕಥೆಯಾಧಾರಿತ ವ್ಹು ವುಡ್ ಬಿ ದಿ ಕಿಂಗ್ , ಫಿಲಿಪ್ ಕೆ. ದಿಕ್ ಕಥೆಯಾಧಾರಿತ ಮೈನಾರಿಟಿ ರಿಪೋರ್ಟ್ , ಸ್ಯಾಮುವಲ್ ಹಾಪ್ಕಿನ್ ಆಡಮ್ಸ್ ಕಥೆಯಾಧಾರಿತ ಇಟ್ ಹಾಪೆ೦ಡ್ ಆನ್ ನೈಟ್, ಯೂ ಕಾಂಟ್ ರನ್ ಅವೇ ಫ್ರಂ ಇಟ್, ಕ್ಲಾರ್ಕ್ಸ್ ಕಥೆಯಾಧಾರಿತ 2001:ಸ್ಪೇಸ್ ಓಡಿಸ್ಸೀ, ಎಫ್,ಎಕ್ಸ್ .ತೂಲೆ ಕಥೆಯಾಧಾರಿತ ಮಿಲಿಯನ್ ಡಾಲರ ಬೇಬಿ, ಠಾಗೂರ್ ಕಥೆಯಾಧಾರಿತ ಸತ್ಯಜಿತ್ ರೆ ನಿರ್ದೇಶನದ ತೀನ್ ಕನ್ಯಾ, ಸಾವಾರಿಯಾ, ಯೂತ್ ವಿಥೌಟ್ ಯೂತ್ ಮುಂತಾದ ಸಿನೆಮಾಗಳನ್ನ ವೀಕ್ಸಿಸಿದಾಗ ನಮಗೆ ಗೊತ್ತಾಗುತ್ತದೆ ಸಣ್ಣ ಕಥೆಗಳ ಸಾಮರ್ಥ್ಯ ಎಂತಹದ್ದು ಎಂದು ..ಅಲ್ಲವೇ..?
ಈ ಲಿ೦ಕಿನಲ್ಲೂ ನೋಡಬಹುದು...
ಯೂ ಟ್ಯೂಬ್ ಲಿಂಕ್

Tuesday, July 24, 2012

ನೀಲಚಿತ್ರಿಕೆಗಳು -2


ಪಿವಿಸಿ  - 1
ಒಂದೇ ಒಂದು ಉದ್ದನೆಯ ಚಿತ್ರಿಕೆಯ ಮೂಲಕ ಒಂದು ಘಟನೆಯನ್ನು ನಿರೂಪಿಸುವ ಮತ್ತೊಂದು ಚಿತ್ರವೆಂದರೆ        ಪಿವಿಸಿ-1.          ಇದು ಕೊಲಂಬಿಯಾದ ನಿರ್ದೇಶಕ ಸ್ಪೈರೋಸ್ ಸ್ಟಾಥೊಪೊಲಸ್ ನ ಮೊದಲ ಚಲನಚಿತ್ರ 2007 ರ ಕಾನ್ಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆದ ಈ ಚಿತ್ರದ ಅವಧಿ 81  ನಿಮಿಷಗಳು. ಚಿತ್ರದಲ್ಲಿನ ಕಥೆಯ ಅವಧಿಯು 81 ನಿಮಿಷಗಳೇ. ಈ ಚಿತ್ರವು 2000 ರಲ್ಲಿ ಕೊಲಂಬಿಯಾದಲ್ಲಿ ನಡೆದಂತಹ ಸತ್ಯಘಟನೆಯಧಾರಿಸಿದ್ದಾಗಿದೆ.
ಮುಖವಾಡಗಳನ್ನು  ಧರಿಸಿದ ದರೋಡೆಕೋರರ ತಂಡವೊಂದು ಮನೆಗೆ ನುಗ್ಗುವುದರೊಂದಿಗೆ ಚಿತ್ರದ ಕತೆ ಪ್ರಾರಂಭವಾಗುತ್ತದೆ. ಇಡೀ ಮನೆಯವರನ್ನೆಲ್ಲಾ ಒಂದೆಡೆ ಕಲೆಹಾಕಿ, 15 ಮಿಲಿಯನ್ ಪೆಸೋಗಳ ಬೇಡಿಕೆಯನ್ನು ಮುಂದಿಡುತ್ತಾರೆ. ಆದರೆ ಕುಟುಂಬದ ಯಜಮಾನ ತನ್ನ ಹತ್ತಿರ ಹಣವಿಲ್ಲವೆಂದು ಪ್ರಮಾಣಮಾಡಿ ಹೇಳಿದಾಗ, ಅವರಿಗೆ ಅರಿವಾದಾಗ, ಅವನ ಹೆಂಡತಿಯ ಕೊರಳಿಗೆ ಪಿ ವಿ ಸಿ ಪೈಪಿನಿಂದ ಮಾಡಿದ ರಿಮೋಟ್ ಚಾಲಿತ ಬಾಂಬ್ ಕಟ್ಟಿ ಹಣ ತಂದುಕೊಡದ ಹೊರೆತು ಬದುಕುವ ಯಾವ ಅವಕಾಶವನ್ನು ಕೊಡುವುದಿಲ್ಲವೆಂದು ಹೇಳಿ ಹೊರಟುಹೋಗಿಬಿಡುತ್ತಾರೆ. ಪಕ್ಕದ ಪುಟ್ಟನಗರಕ್ಕೆ ಹೋಗಿ ವಿಶೇಷ ಕಾರ್ಯಪಡೆಯ ಸಹಾಯದಿಂದ ಆ ಬಾಂಬ್ ಅನ್ನು ನಿರ್ಜೀವಗೊಳಿಸಲು ಪ್ರಯತ್ನಿಸುವುದೇ ಚಿತ್ರದ ಕಥಾ ಹಂದರ. ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು, ನಿರ್ದೇಶಿಸುವ ಜೊತೆಗೆ ಛಾಯಾನಿರ್ದೇಶನವನ್ನೂ  ಸ್ಪೈರೋಸನೇ ಯಶಸ್ವಿಯಾಗಿ ನಿರ್ವಹಿಸಿದ್ದಾನೆ.
ಚಿತ್ರದ ಅಂತ್ಯದಲ್ಲಿ ದುರಂತವಾದರೂ, ಅಲ್ಲಿಯವರೆಗೆ ಕುತೂಹಲವನ್ನು ಕಾಯ್ದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಅಷ್ಟೆಲ್ಲಾ ಪ್ರಯತ್ನದ ನಂತರವೂ ಮುಖ್ಯ ಪಾತ್ರಧಾರಿ ಸಾಯುವುದು ಮನಸ್ಸಿಗೆ ಪಿಚ್ಚೆನಿಸಿ , ಅಷ್ಟೆಲ್ಲಾ ಪ್ರಯತ್ನಕ್ಕೂ ಸಿನಿಮಾದ ರೋಮಾಂಚನೀಯ ಕ್ಷಣಗಳಿಗೂ ಸಾರ್ಥಕತೆ ಸಿಗುವುದಿಲ್ಲ. ಏನೋ ಕೆಡುಕು ಆಗುತ್ತದೆ.. ಅದು ಆಗುತ್ತದಾ.. ಅಯ್ಯಯ್ಯೋ.. ಆಗಿಬಿಟ್ಟರೆ ಅನ್ನುವ ಉದ್ವೇಗವನ್ನು ಕೊನೇವರೆಗೂ ಕಾಯ್ದಿರಿಸಿಕೊಳ್ಳುವ ನಿರ್ದೇಶಕ ಕೊನೆಯಲ್ಲಿ ಟುಸ್ ಎನಿಸಿಬಿಟ್ಟನೇನೋ ಅನಿಸಿದರೂ ಸತ್ಯಕಥೆ ಯಾಧಾರಿತವಾದ್ದರಿಂದ ಕಥೆಯ ಬಗ್ಗೆ ಏನೂ ಹೇಳುವಹಾಗಿಲ್ಲ.
ಇರಲಿ ! ಮೊದಲು ಮನೆಯ ಹೊರಾಂಗಣದಿಂದ ಒಳಾಂಗಣಕ್ಕೆ ಅಲ್ಲಿಂದ ಮತ್ತೆ ಹೊರಕ್ಕೆ, ಆನಂತರ ರೈಲ್ವೆ ಟ್ರ್ಯಾಕ್ ಮೇಲೆ, ಕಾಡ ಮಧ್ಯದ ದಾರಿಯ ಮೂಲಕ ಕಾರ್ಯಪಡೆಯ ಅಧಿಕಾರಿಗಳಿರುವ ಸ್ಥಳದವರೆಗೆ ಇಡೀ ಸಿನಿಮಾ ಓಡುತ್ತಲೇ ಇರುತ್ತದೆ, ತನ್ನ ಕ್ಯಾಮೆರಾ ಕಣ್ಣಿನ ಮೂಲಕ.
ತನ್ನ ಕೊರಳ ಸುತ್ತ ಬಾಂಬ್ ಕಟ್ಟಿಸಿಕೊಂಡ ಮಹಿಳೆಯಾಗಿ ಮೆರಿಡಾ ಉರ್ಕಿಯಾ ಅಭಿನಯ ಅದ್ಭುತ. ತನ್ನನ್ನು ತಾನೇ ಸಮಾಧಾನ ಪಡಿಸಿಕೊಳ್ಳುವ, ಕೆಲವೊಮ್ಮೆ ಹುಚ್ಚಿಯಂತೆ ಹೆದರಿ ಚೀರಾಡುವ, ಇನ್ನ ಕೆಲವೊಮ್ಮೆ ವಿಧಿಬರಹವೆನ್ನುತ್ತಾ ಅಸಹಾಯಕಥೆಯಿಂದ ಸುಮ್ಮನೆ ಕುಳಿತುಬಿಡುವ, ರೋಷಗೊಂಡು ರೊಚ್ಚಿ ಗೇಳುವ, ಬಾಂಬ್ ನ ಬೀಪ್ ಶಬ್ಧಕ್ಕೆ ಬೆಚ್ಚುವ ಸಂದರ್ಭೋಚಿತ ಅಭಿನಯವನ್ನು ಅಭಿವ್ಯಕ್ತಗೊಳಿಸುವಲ್ಲಿ ಮೆರಿಡಾಳ ನಟನೆ ಅವಿಸ್ಮರಣೀಯ. ಚಿತ್ರಕಥೆ, ಅಭಿನಯ ಮತ್ತು ಸಿನಿಮಾ ಮೇಕಿಂಗ್ ಗಾಗಿ ನೋಡಲೇಬೇಕಾದಂತಹ ಚಿತ್ರ ಇದಾಗಿದೆ. ಸಂಕಲನವೇ ಇಲ್ಲದ ಈ ಚಿತ್ರದ ಚಿತ್ರೀಕರಣಕ್ಕೂ ಮುನ್ನ ನಿರ್ದೇಶಕ ಮೂರು ತಿಂಗಳುಗಳ ಪೂರ್ವಸಿದ್ಧತೆ ಮಾಡಿಕೊಂಡು, ತೀರ ಕಡಿಮೆ ಚಿತ್ರತಂಡದೊಂದಿಗೆ   ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾನೆ. ಕೊಸ್ಮೊಕ್ರೇಟರ್ ಸಿನೆಮಾ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ ಈ ಚಿತ್ರದಲ್ಲಿ ಮೆರಿಡಾ ಉರ್ಕಿಯಾ, ಡೇನಿಯಲ್ ಪಯೆಜ್, ಅಲ್ಬೆರ್ಟೋ ಸೊರ್ನೋಜ್, ಹುಗೋ ಪೇರೀರಾ, ಪ್ಯಾಟ್ರಿಕಾರ್ಯೂಡ. ಮುಂತಾದವರ  ತಾರಾಬಳಗವಿದೆ. ಸಂಗೀತ ಪ್ಯಾಸ್ಕಲ್ ಟೈಗರ್.

Saturday, July 21, 2012

ಓದಿದ್ದು ನೋಡಿ ಮರುಳಾದದ್ದು-2

"ದಿಲ್  ವಾಲೆ ದುಲ್ಹನಿಯಾ ಲೇ ಜಾಯೆ೦ಗೆ ನೋಡೋಕ್ ಬರ್ತೀಯಾ..?"
"ನಾಲ್ಕು ಸಲ ನೋಡಿದ್ದೀನಿ.."
"ಹಂ ಆಪ್ಕೆ ಹಾಯ್ ಕೌನ್?"
"ಯಾವತ್ತೋ  ನೋಡಾಗಿದೆ.."
"ಕರಣ್  ಅರ್ಜುನ್..?"
'.............'
'ಬಾ ನೋಡೋಣ..ಶಾರುಕ್ ಸಲ್ಮಾನ್ ಇಬ್ರೂ ಇದ್ದಾರೆ..'
'ಥಿಯೇಟರ್ ನಲ್ಲಿ ಕೈ ಹಿಡಿದರೆ..'
"ಅಮ್ಮನಾಣೆ ಹಿಡಿಯಲ್ಲ.."
'ಸಿನಿಮಾ ನೋಡೋವಾಗ ಪಾಪ್ಕಾರ್ನ್ ಚೆಲ್ಲಿ ಕೆಳಗಡೆ ಆಯ್ಕೊಲ್ಲೋಕೆ ಬಗ್ಗಲ್ವಾ..?
'ಅಮ್ಮನಾಣೆ ಇಲ್ಲ..'
'ಮತ್ತೆ ಸೀಟ್ನಲ್ಲಿ ನನ್ನ ಒರಗಿಕೊ೦ಡು ಕೂರತೀಯ..'
'ಅಮ್ಮನಾಣೆ ಇಲ್ಲಾ..' '
'ಹ೦ಗಾರೆ ನಿಮ್ಮಮ್ಮನ್ನೇ ಕರಕೊ೦ಡು ಸಿನಿಮಾಗೆ ಹೋಗು..ನಾನೇಕೆ ನಿನ್ ಜೊತೆ..'
ಇದು ಅನುರಾಗ್ ಬಸು ನಿರ್ದೇಶನದ ಗ್ಯಾ೦ಗ್ಸ ಆಫ್ ವಾಸ್ಸೀಪುರ್ ಭಾಗ -2 ರ ಟ್ರೈಲರ್ ನಲ್ಲಿ ಬರುವ ಸಂಭಾಷಣೆಯ ತುಣುಕು. ಈಗಾಗಲೇ ಭಾಗ -1 ನೋಡಿದವರಿಗೆ ಆ ಫೈಜಲ್ ಖಾನ್ ಪಾತ್ರದ ಗುಣಾವಗುಣ ಗೊತ್ತಿರುವುದರಿ೦ದ ಈ ಸಂಭಾಷಣೆ ಮಜಾ ಕೊಡುವುದರ ಜೊತೆಗೆ ಸಿನಿಮಾದಲ್ಲಿ ಏನೋ ಇದೆ ಎನಿಸುವ೦ತೆ ಮಾಡಿ ಸಿನಿಮಾ ನೊಡುವ೦ತೆ ಮಾಡುತ್ತದೆ. ನಾನು ಪ್ರತಿ ಸಿನಿಮಾಕ್ಕೂ ಮುನ್ನ ಟ್ರೈಲರ್ ನೋಡೇ ನೋಡುತ್ತೇನೆ. ಯಾಕೆ೦ದರೆ ಕೆಲವೊಮ್ಮೆ ಸಿನಿಮಾಕ್ಕಿ೦ತ ಟ್ರೈಲರ್ ಗಳೇ ಮಜಾ ಕೊಡುತ್ತವೆ. ಮೊನ್ನೆ ಅಮಜಿ೦ಗ್ ಸ್ಪೈಡರ್ ಮ್ಯಾನ್ ಟ್ರೈಲರ್ ನೋಡಿ ಸಿನಿಮಾಕ್ಕೆ ಹೋದರೆ ಭಾರಿ ನಿರಾಸೆಯಾಯಿತು. ನಮಗೆಲ್ಲ ಗೊತ್ತಿರುವ೦ತೆ ಸ್ಪೈಡರ್ ಮ್ಯಾನ್ ಕಥೆಯಲ್ಲಿ ಹೊಸತೇನನ್ನೂ ಹುಡುಕಲು ಸಾಧ್ಯವಿಲ್ಲವಾದರೂ ಕಥೆಯನ್ನೇ ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಅದನ್ನೇ ಸ್ಯಾಮ್  ರಯ್ ಮಿ  ಮಾಡಿದ್ದು. ಆ ಮೂರು ಚಿತ್ರಗಳಲ್ಲೂ   ಭಿನ್ನಬಿನ್ನ ಕತೆಯಿತ್ತು. ಅದ್ಭುತ  ದೃಶ್ಯ ವೈಭವವಿತ್ತು. ಅದೇಕೋ ಈ ಸಿನಿಮಾದಲ್ಲಿ ಎರಡೂ ಕೈ ಕೊಟ್ಟಿವೆ. ಒ೦ದು  ಸಿನಿಮಾ ನೋಡಲು ಎನಿಲ್ಲವೆ೦ದರೋ ಎರಡೂವರೆ ತಾಸಾದರೂಬೇಕು. ಆದರೆ ಟ್ರೈಲರ್ ಹಾಗಲ್ಲ. ಒ೦ದೆರೆದು ನಿಮಿಷಗಳಲ್ಲಿ ಮುಗಿದುಹೊದರೂ ಆ ಸಿನಿಮಾದ ಬಗ್ಗೆ ಕಿರುಪರಿಚಯ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತವೆ.. ಮತ್ತೆ ಟ್ರೈಲರ್ ಗಳೂ  ಹಾಗಿರಬೇಕೂ ಕೂಡ. ಇಡೀ ಸಿನಿಮಾದ ಮೂಡನ್ನು , ಅದರ ಶೈಲಿಯನ್ನು ಅದರ ಯನ್ನು ಸೂಚ್ಯವಾಗಿ ಕುತೂಹಲ ಕೆರಳಿಸುವಂತೆ ನಮಗರಿವು  ಮಾಡಿಕೊಟ್ಟುಬಿಡಬೇಕು.ಆವಾಗಲೇ ಅದು ಉತ್ತಮ ಟ್ರೈಲರ್  ಎನಿಸಿಕೊಳ್ಳುತ್ತದೆ. ಆ ವಿಷಯದಲ್ಲಿ ಹಾಲಿವುಡ್ನವರನ್ನು ಮೆಚ್ಚಲೇಬೇಕು..ಅವರ ಸಿನಿಮಾ ಟ್ರೈಲರ್ ಗಳು  ತು೦ಬಾ ಕುತೂಹಲಕಾರಿಯಾಗಿರುವುದಷ್ಟೇ ಅಲ್ಲ. ಆ ಸಿನಿಮಾವನ್ನು ಒ೦ದು ಗುಕ್ಕಿನಲ್ಲಿ ನಮಗೆ ಪರಿಚಯಮಾಡಿಕೊಡುತ್ತವೆ.www.traileraddict.com ಎನ್ನುವ ವೆಬ್ ಸೈಟಿದೆ. ಒಮ್ಮೆ ಭೇಟಿಕೊಟ್ಟರೆ ಅದೆ೦ತಹ ಮಜಾ ಗೊತ್ತಾ..ಸಾವಿರಾರು ಸಿನಿಮಾಗಳ ತರಹೇವಾರಿ ಟ್ರೈಲರ್ ಗಳಿವೆ ಅದರಲ್ಲಿ . ನಾನ೦ತೋ ಸಮಯ ಸಿಕ್ಕಾಗಲೆಲ್ಲಾ ಆ ವೆಬ್ ಸೈಟಿಗೆ ಹೋಗಿ ಕುಲಿತುಬಿಡುತ್ತೇನೆ. ನೋಡುತ್ತಾ ನೋಡುತ್ತಾ ಖುಶಿಯಾಗುತ್ತದೆ. ಕೆಲವು ನಿರ್ದೇಶಕರ, ಟ್ರೈಲರ್ ತಯಾರಕರಾ  ಜಾಣತನಕ್ಕೆ ಮಾರುಹೋಗಿದ್ದೇನೆ. ಅದೆಷ್ಟು ರೀತಿಯ ಟ್ರೈಲರ್ಗಳು...ಆ ಸಿನಿಮಾದ ಭಾವಕ್ಕೆ ತಕ್ಕ೦ತೆ...ಸ್ಟೈಲ್ ಗೆ ತಕ್ಕ೦ತೆ ಅದೆಷ್ಟು ಚೆನ್ನಾಗಿವೇ ಎನಿಸುತ್ತದೆ. ಹಾಗೆ ಕಮಿ೦ಗ್ ಸೂನ್ [http://www.comingsoon.net ]ಎನ್ನುವ ವೆಬ್ ಸೈಟ್ ಕೂಡ ಟ್ರೈಲರ್ ಗೆ ಸ೦ಬ೦ಧಪಟ್ಟೆದ್ದೆ. 
ಕನ್ನಡದಲ್ಲೂ ಇತ್ತೀಚಿಗೆ ಒಳ್ಳೊಳ್ಳೆಯ ಟ್ರೈಲರ್ ಗಳು ಬರುತ್ತಿವೆ .ಮೊದಲೆಲ್ಲಾ ಸಿನಿಮಾದ ಒ೦ದಷ್ಟು ಶಾಟ್ ಗಳನ್ನೂ ಕತ್ತರಿಸಿ ಜೋಡಿಸಿಬಿಡುತ್ತಿದ್ದರು. ಈಗ ಹಾಗಲ್ಲ. ಅದಕ್ಕೆ ಒ೦ದು ಚಿಕ್ಕ ಚೌಕಟ್ಟಿನಲ್ಲಿ ಸ್ಕ್ರಿಪ್ಟ್ ಮಾಡುವುದರಿ೦ದ ಏನೋ ಒ೦ದು ರೀತಿಯ ಖುಷಿ ಸಿಗುತ್ತದೆ.
  ಈಗ ಹೇಳಿ..ನಿಮ್ಮನ್ನು  ಸಿನಿಮಾ ನೋಡಲೇ ಬೇಕೆ೦ದು ಪ್ರಚೋದಿಸಿದ ಟ್ರೈಲರ್ ಯಾವುದು? 
ಸಿಡ್ನಿ ಶೆಲ್ದನನ್ನ ಕಾದ೦ಬರಿ ಮೆಮೊರಿಸ್ ಆಫ್ ಮಿಡ್ನೈಟ್ ಓದುತ್ತಿದ್ದ ಮಧ್ಯದಲ್ಲೇ ನನ್ನದೂ ಒ೦ದು ಪ್ರೇಮ ಕಥೆ ಎನ್ನುವ ಕಾದಂಬರಿ ಸಿಕ್ಕಿತು. ಸಧ್ಯಕ್ಕೆ ಸಿಡ್ನೀಗೊ೦ದು ವಿರಾಮ ಕೊಟ್ಟು ಅದನ್ನು ಕೈಗೆತ್ತಿಕೊ೦ಡು ಓದಲು ತೊಡಗಿದೆ. ರವೀ೦ದರ ಸಿ೦ಗ್ ಎನ್ನುವ ಟೆಕ್ಕಿಯೊಬ್ಬ ಬರೆದಿರುವ ಕಾದಂಬರಿ ಅದು. ಹೆಸರೇ ಹೇಳುವ೦ತೆ ಅವರದೇ ಮನಮಿಡಿಯುವ ಪ್ರೇಮ ಕಥೆ. ಅದು ಇಂಗ್ಲಿಷ್ ನ ಐ  ಟೂ ಹ್ಯಾಡ್ ಎ  ಲವ್ ಸ್ಟೋರಿಯ ಕನ್ನಡದ ಅನುವಾದ. ಅನುವಾದಿಸಿದವರು ಈಶ್ವರ ದೈತೋಟ. ಓದುತ್ತ ಓದುತ್ತಾ ಕಥೆ ಇಷ್ಟವಾದರೂ ಅನುವಾದ ಬೇಸರ ತರಿಸಿತು.ಪಕ್ಕ ಪದಗಳನ್ನೂ ಕನ್ನಡೀಕರಿಸಿರುವುದು ಒ೦ದು ರೀತಿಯ ಕಿರಿಕಿರಿ ಎನಿಸಿತು  ಕಾದಂಬರಿಯ ಓದಿಗೆ, ಅದರ ವೇಗಕ್ಕೆ ಅನುವಾದವೇ ಬ್ರೇಕ್ ಹಾಕಿದ್ದು ವಿಪರ್ಯಾಸ. ಕೊನೆ ಕೊನೆಗೆ ಇಂಗ್ಲಿಷಿನ ಮೂಲಕೃತಿಯನ್ನೇ ಓದಬೇಕೆನ್ನಿಸಿಬಿಟ್ಟಿತು.
1944ಮಾರ್ಜಾಬೋತ್ತೋ ಹತ್ಯಾಕಾ೦ಡ  ಆಧಾರಿತ ಇಟಾಲಿಯನ್ ಸಿನಿಮಾ ಲ  ಅಮೋ ಛೆ ವೆರ್ರಾ ಅಥವಾ ದಿ ಮ್ಯಾನ್ ಹೂ ವಿಲ್ ಕಂ ಎನ್ನುವ ಸಿನೆಮಾ ನೋಡಿ ದ೦ಗಾಗಿಬಿಟ್ಟೆ. ಜಗತ್ತಿನ ಇತಿಹಾಸ ಇಷ್ಟು ಕ್ರೂರವೇ ಎನಿಸುವುದು ಇ೦ತಹ ಸಿನೆಮಾಗಳನ್ನೂ ನೋಡಿದಾಗ. ಆ ಹತ್ಯಾಕಾ೦ಡದಲ್ಲಿ 900ಕ್ಕೋ ಹೆಚ್ಚು ಅಮಾಯಕರ ಮಾರಣ ಹೋಮವಾಯಿತು. ಅದರ ಹಿನ್ನೆಲೆಯ ಕಥೆಯಿರುವ ಈ ಸಿನೆಮಾ ಒ೦ದು ಎಂಟು ವರ್ಷದ ಮಾರ್ಟಿನ ಎನ್ನ್ನುವ ಬಾಲಕಿಯ ಬದುಕಿನ ವೈಪರೀತ್ಯಗಳ ಮೇಲೆ ನಿರೂಪಿಸಲ್ಪಟ್ಟಿದೆ. ಚಿತ್ರದ ಪ್ರಾರಂಭದಲ್ಲಿ ಒ೦ದು ಕುಟು೦ಬದ ಕಥೆ ಎನಿಸುತ್ತದೆ. ಸಹೋದರನನ್ನು ಕಳೆದುಕೊಳ್ಳುವ ಹುಡುಗಿಯೊಬ್ಬಳು ಮಾತು ಆಡುವುದನ್ನೇ ನಿಲ್ಲುಸುತ್ತಾಳೆ. ಈಗ ತಾಯಿ ಮತ್ತೊಮ್ಮೆ ಗರ್ಭಿಣಿ. ಮತ್ತೆ ಸಹೋದರ ಬಂದರೆ ಅವಳು ಮಾತನಾಡಳು ಪ್ರಾರ೦ಭಿ ಸುವಳೆನೋ ಎನ್ನುವ ಆಸೆ ಎಲ್ಲರದು...ಆದರೆ ವಿಧಿ ಬೇರೆಯದೇ ರೀತಿಯಲ್ಲಿ ತನ್ನ ಸ೦ಚು ಹೂಡಿರುತ್ತದೆ...ತು೦ಬಾ ಮನಮಿಡಿಯುವ ಕಥೆ, ಅಭಿನಯವಿರುವ ಈ ಸಿನಿಮಾವನ್ನೊಮ್ಮೆ ತಪ್ಪದೆ ನೋಡಿ.




Wednesday, July 18, 2012

ವಿ'ಚಿತ್ರ'ಗಳು-3


ಕೆಲವೊಂದು ಚಿತ್ರಗಳನ್ನು ದಾಖಲೆಗಾಗಿಯೇ ತೆಗೆಯಲಾಗುತ್ತದೆ. ಮತ್ತದು ತಪ್ಪೆಂದು ಹೇಳಲಾಗದಿದ್ದರೂ ಒಂದು ಸಿನಿಮಾ ಹೆಚ್ಚಾಗಿ ತಾನು ಹೇಳಬೇಕೆಂದಿರುವ ವಿಷಯವನ್ನು ಅಚ್ಚುಕಟ್ಟಾಗಿ ಮನಮುಟ್ಟುವಂತೆ ಹೇಳಿದರೆ ಅದೇ ದೊಡ್ಡ ಸಾಧನೆ ಎನ್ನಬಹುದು. ಉತ್ತಮ ದಾಖಲೆ ಎಂದು ಅರ್ಥೈಸಬಹುದು. ಸಿನಿಮಾದ ಸಾರ್ಥಕತೆ ಇರುವುದು ಅಲ್ಲೇ. ಆದರೂ ಕೆಲವೊಮ್ಮೆ ಹೇಳಿದ್ದನ್ನು ಬೇರೆಬೇರೆಯಾಗಿ ಹೇಳಿ, ಒಂದರ್ಥದಲ್ಲಿ ಎಲ್ಲಾ ರೀತಿಯ ಕಥೆಗಳನ್ನು ತಮ್ಮ ಮಿತಿಯೊಳಗೆ ವಿಭಿನ್ನ ರೀತಿಯಲ್ಲಿ ನಿರೂಪಿಸಿ ಬೇಸರವಾದಾಗ, ಅಥವಾ ಅದೇಕೋ ಏಕತಾನತೆ ಎನಿಸಿದಾಗ ಚಿತ್ರಕರ್ಮಿಗಳು ಏನಾದರೊಂದು ವಿಶೇಷವನ್ನು ಸಿನಿಮಾರಂಗದಲ್ಲಿ ಮಾಡಲು ಪ್ರಯತ್ನಿಸುತ್ತಾರೆ. ಸರಳವಾಗಿ ಕಥೆ ಹೇಳುತ್ತೇನೆ ಕೇಳಿ. ಅವನೊಬ್ಬ ಬಡವ. ಅವನಿಗೀಗ ಕೆಲಸ ಸಿಕ್ಕಿದೆ. ಅದೂ ಕಾಡಿನ ರಕ್ಷಕ ಅಥವಾ ಫಾರೆಸ್ಟ್ ಗಾರ್ಡ್ ಆಗಿ. ಕೆಲಸಕ್ಕಾಗಿ ಹಾತೊರೆಯುವ ಆತ ಯಾವ ಕೆಲಸವಾದರೂ ಮಾಡಲು ಸಿದ್ಧನಿದ್ದರಿಂದ ಆ ಕೆಲಸವನ್ನು ಬಹಳ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಅವನು  ನಿರ್ಜನವಾದ ಕಾಡೊಂದರಲ್ಲಿ ಗಾರ್ಡ್ ಆಗಿ ನೇಮಕಗೊಳ್ಳುತ್ತಾನೆ. ದೋಣಿಯೊಂದು ಆ ನಿರ್ಜನ ಕಾಡಿನಲ್ಲಿ ಅವನನ್ನು ಬಿಟ್ಟು ಹೊರಟುಹೋಗುತ್ತದೆ. ಈಗ ಇಡೀ ಕಾಡೊಳಗೆ ಅವನನ್ನು ಬಿಟ್ಟರೆ ಅವನ ಕಣ್ಣಿಗೆ ಬೀಳುವುದು ಪ್ರಾಣಿ ಪಕ್ಷಿ ಸರ್ಪಗಳು ಮಾತ್ರ. ನಾಯಕ ಅವುಗಳೊಂದಿಗೆ ತನ್ನ ಜೀವನ ಪ್ರಾರಂಭಿಸುತ್ತಾನೆ. ಕೆಲವೇ ದಿನಗಳಲ್ಲಿ ತನ್ನ ಒಂಟಿತನ ಮರೆಯುತ್ತಾನೆ. ಅಷ್ಟರಲ್ಲಿ ಅಲ್ಲಿ ತಾನೊಬ್ಬನೇ ಇಲ್ಲ ಎಂಬ ಗುಮಾನಿ ಮೂಡಲು ಪ್ರಾರಂಭಿಸುತ್ತದೆ..ಮುಂದೆ..?
ಇದು 2001 ರಲ್ಲಿ ಏಕನಟನಿದ್ದ ಕಾರಣಕ್ಕೆ ಗಿನ್ನೆಸ್ ದಾಖಲೆ ಸೇರಿದ ಮಳಯಾಳಮ್ ಚಿತ್ರ ದಿ ಗಾರ್ಡ್‌ನ ಕಥೆ. ಕಳಾಭವನ್ ಮಣೀ ಅಭಿನಯದ ಈ ಚಿತ್ರದ ನಿರ್ದೇಶಕ ಹಕೀಮ್ ರಾಥರ್. ಯಾವುದೇ ದಾಖಲೆಯ ಮನ್ನಣೆಗೆ ಪಾತ್ರವಾದ ಸಿನಿಮಾಗಳಲ್ಲಿರುವಂತೆಯೇ ಈ ಚಿತ್ರದಲ್ಲೂ ಕೆಲವೊಂದು ಋಣಾತ್ಮಕ ಅಂಶಗಳಿವೆ. ಒಬ್ಬನೇ ನಟ ಮತಾಡುವುದು, ಓಡಾಡುವುದು ಮತ್ತು ಹೆಚ್ಚೆಚ್ಚು ಘಟನೆಗಳು ನಡೆಯದಿರುವುದು ನೋಡುಗರಿಗೆ ಬೋರ್ ತರಿಸುತ್ತದೆ. ಇಲ್ಲಿ ನಿರ್ದೇಶಕ ಹಕೀಮ್ ಒಂದಷ್ಟು ಬುದ್ದಿವಂತಿಕೆ ಮೆರೆದಿದ್ದಾರೆ. ಅದೇನೆಂದರೆ ನಾಯಕನಾಗಿ ಕಲಾಭವನ್ ಮಣಿಯನ್ನು ಆಯ್ಕೆ ಮಾಡಿರುವುದು. ಈ ಕಲಾವಿದನ ವಿಶೇಷತೆಯೆಂದರೆ ತುಂಬಾ ಒಳ್ಳೆಯ ಅಣುಕು ಕಲಾವಿದ. ಆದ್ದರಿಂದ ಅರ್ಧ ಸಿನಿಮಾ ಆತನ ಅಣುಕು ಅಭಿನಯ, ಸಂಭಾಷಣೆಗಳಿಂದ ಸಹನೀಯವೆನಿಸುತ್ತದೆ. ಇದರೊಟ್ಟಿಗೆ ಛಾಯಾಗ್ರಹಣ ಈ ಚಿತ್ರದ ಇನ್ನೊಂದು ಗಮನಾರ್ಹ ಅಂಶ. ಅಂದಹಾಗೆ ಈ ಚಿತ್ರದಲ್ಲಿ ಹಾಡುಗಳೂ ಇವೆ.
ಕುತೂಹಲವಿದ್ದರೆ ಮೋಸರ್‌ಬೇರ್ ಕಂಪನಿಯ ಡಿವಿಡಿಗಳು ಲಭ್ಯವಿದೆ. ಒಮ್ಮೆ ನೋಡಬಹುದು.
ಇದೇ ನಿಟ್ಟಿನಲ್ಲಿ ಇನ್ನು ಹೆಸರಿಸಬೇಕಾದ ಸಿನಿಮಾಗಳೆಂದರೆ ಕನ್ನಡದ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಶಾಂತಿ, ಸುನೀಲ್ ದತ್ ನಟಿಸಿ ನಿರ್ದೇಶಿಸಿದ್ದ ಯಾದೇ. 2004 ರಲ್ಲಿ ಬಿಡುಗಡೆಯಾದ ಶಾಂತಿ ಚಿತ್ರದಲ್ಲಿ ಭಾವನ ಮುಖ್ಯಭೂಮಿಕೆಯಲ್ಲಿದ್ದರು. ಕಲಾವಿದೆಯೊಬ್ಬಳ ಜೀವನದ ಕಥೆ ಇದಾಗಿತ್ತು. ಹಾಗೆ ಯಾದೇ ಚಿತ್ರದಲ್ಲಿ ಕೇವಲ ಇಬ್ಬರು ಕಲಾವಿದರು ಮಾತ್ರ ನಟಿಸಿದ್ದರು. ಅದರಲ್ಲೂ ಸುನಿಲ್ ದತ್ ಬಿಟ್ಟರೆ ಇನ್ನೊಂದು ಪಾತ್ರಧಾರಿ ನರ್ಗೀಸ್ ದತ್  ನೆರಳು ಮಾತ್ರ ಸಿನಿಮಾದಲ್ಲಿತ್ತು. ಈ ಚಿತ್ರ 1954ರಲ್ಲಿ ತೆರೆಗೆ ಬಂದು ಗಿನ್ನೆಸ್ ದಾಖಲೆಯ ಹಿರಿಮೆಯನ್ನು ತನ್ನದಾಗಿಸಿಕೊಂಡಿತ್ತು. ಹಾಗೆ 2010ರಲ್ಲಿ ತೆರೆಗೆ ಬಂದ ಬರೀಡ್ ಚಿತ್ರವೂ ಕೇವಲ ಒಬ್ಬನೇ ಒಬ್ಬ ಪ್ರಮುಖ ಪಾತ್ರಧಾರಿಯನ್ನು ಹೊ೦ದಿತ್ತು.ಅದು ಒ೦ದೆ ಸ್ಥಳದಲ್ಲಿ ಕೂಡ ಚಿತ್ರಿಸಲಾಗಿತ್ತು.


Tuesday, July 17, 2012

ನೋಡಲೇಬೇಕಾದ ಚಿತ್ರಗಳು-10

ಒಬ್ಬ ವ್ಯಕ್ತಿಯ ಜೀವನಾಧಾರಿತ ಕಥೆಗಳು ಸಿನಿಮಾ ರೂಪ ತಾಳಿದರೆ ಅದೊಂದು ಇತಿಹಾಸದ ದಾಖಲೆಯಾಗಿ ಉಳಿದುಬಿಡುತ್ತದೆ.ಆದರೆ ಚಿತ್ರತ೦ಡ ಯಾವುದೇ ಪ್ರಲೋಭನೆಗೊಳಗಾಗಿರಬಾರದು  ಹಾಗೆ  ಪಕ್ಷಪಾತ ರಹಿತವಾಗಿರಬೇಕು. ಆದರೂ ಒ೦ದು ಸಿನಿಮಾದ ಮೂಲಕ ಒಬ್ಬ ವ್ಯಕ್ತಿಯ ಇತಿಹಾಸವನ್ನು , ಆವತ್ತಿನ, ಅವನ ಯಥಾಚಿತ್ರಣವನ್ನು ಸಮರ್ಥವಾಗಿ ಕಟ್ಟಿಕೊಡಬೇಕಾದರೆ ಚಿತ್ರದ ಬರವಣಿಗೆ ಎಷ್ಟು ಮುಖ್ಯವೋ ಆ ಪಾತ್ರಧಾರಿಯೂ ಅಷ್ಟೇ ಮುಖ್ಯವಾಗಿರುತ್ತಾನೆ. ಕಾರಣ ಒಬ್ಬ ವ್ಯಕ್ತಿಯನ್ನು ಸಿನಿಮಾದಲ್ಲಿ ಪ್ರತಿನಿಧಿಸುವುದು, ಆತನ ಪ್ರತಿರೂಪವೇ ಆಗಿಬಿಡುವುದು ಕಲಾವಿದನ ಸಾಮರ್ಥ್ಯಕ್ಕೆ ಒಂದು ಸವಾಲೇ ಸರಿ. ಈಗಾಗಲೇ ಜನರು ಆ ವ್ಯಕ್ತಿಯ ಬಗ್ಗೆ ಕೇಳಿರುತ್ತಾರೆ, ಹತ್ತಿರದಿ೦ದಾಗದಿದ್ದರೂ ದೂರದಿ೦ದಾದರೋ ನೋಡಿರುತ್ತಾರೆ..ಅವನಿಗೆ ಸ೦ಬ೦ಧ  ಪಟ್ಟ   ಘಟನೆಗಳನ್ನೂ ಕೇಳಿರುತ್ತಾರೆ..ಹಾಗಾಗಿ ಪಾತ್ರಧಾರಿ ಭಾರಿ ಎಚ್ಚರಿಕೆಯಿ೦ದ ಅಭಿನಯಿಸಬೇಕಾಗುತ್ತದೆ. ಅಷ್ಟೇ  ಪೂರ್ವ ತಯಾರಿಗಳನ್ನು ಮಾಡಿಕೊ೦ಡಿರಬೇಕಾಗುತ್ತದೆ.
ಫಾರೆಸ್ಟ್ ವ್ಹೈಟೆಕರ್ ಅಭಿನಯದ ದಿ ಲಾಸ್ಟ್ ಕಿ೦ಗ್ ಆಫ್ ಸ್ಕಾಟ್ಲ್ಯಾಂಡ್ ಚಿತ್ರವನ್ನ ನೋಡಿದಾಗ ಈದಿ ಅಮೀನನೆ ಎದುರಿಗೆ ಬ೦ದ೦ತನಿಸುವುದರ ಕಾರಣ ಫಾರೆಸ್ಟ್ ನ ಅದ್ಭುತ ಅಭಿನಯ. ಉಗಾ೦ಡದ ಸರ್ವಾಧಿಕಾರಿಯಾದ ಈದಿ ಅಮೀನನ ಬಗೆಗಿನ ಈ ಸಿನಿಮಾದಲ್ಲಿ ಆತನ ತಣ್ಣಗಿನ ಕ್ರೌರ್ಯ, ಅಮಾನವೀಯ ಮನಸ್ಥಿತಿಯನ್ನ, ಪೆದ್ದು ಪೆದ್ದಾಗಿ ವರ್ತಿಸುವ ಅವನ ಅತಿ ಜಾಣತನವನ್ನು   ಅಷ್ಟೇ ಕರಾರುವಕ್ಕಾಗಿ ನಮಗೆ ತೋರಿಸಿದ್ದಾನೆ ಫಾರೆಸ್ಟ್. ನಾಯಕನನ್ನು ತನ್ನ ಮನೆಯ೦ಗಳಕ್ಕೆ ಕರೆದು ಬಹುಮರ್ಯಾದೆ ಕೊಡುವಾಗ,, ಹೆ೦ಡತಿ ಮೋಸ ಮಾಡಿದಳು ಎ೦ದು ಗೊತ್ತಾದಾಗ ಆಕೆಯ ಕೈಕಾಲುಗಳನ್ನು ಬೇರ್ಪಡಿಸಿ ಕಾಲಿದ್ದ ಕಡೆ ಕೈಯನ್ನೂ , ಭುಜಕ್ಕೆ ಕಾಲುಗಳನ್ನು ಸೇರಿಸಿ ಹೊಲಿದು ಅಷ್ಟೇ ತಣ್ಣಗೆ 'ಅವಳೆನೆಗೆ ಮೋಸ ಮಾಡಿದ್ದಳು, ಅದಕ್ಕೆ ಅವಳಿಗೆ ತಕ್ಕುದಾದ ಶಿಕ್ಷೆ ನೀಡಿದೆ..' ಎ೦ದು ಹೇಳಿ ಆರಾಮವಾಗಿ ಸಿ೦ಹಾಸನದ ಮೇಲೆ ಕುಳಿತು ನೃತ್ಯ ನೋಡುತ್ತಾ ಮಜಮಾಡುವಾಗ, ನಾಯಕನ ಎದೆಗೆ ಕಬ್ಬಿಣದ ಕೊಕ್ಕೆ ತೂರಿಸಿ ಅವನನ್ನು ನೇತುಹಾಕಿ ಮಾತಾಡುವಾಗ ಅವನ ಅಭಿನಯವನ್ನ ಗಮನಿಸಬೇಕು..ಒ೦ದೆ ಮಾತು.. ಸೂಪರ್.!
ಈದಿ ಅಮೀನ ನಾವೆಲ್ಲಾ ಓದಿ ಕೇಳಿ ತಿಳಿದುಕೊ೦ಡಿರುವ೦ತೆ  ಅವನೊಬ್ಬ ನರರೂಪದ ರಾಕ್ಷಸ ಎ೦ದೆ ಹೇಳಬಹುದು. ಆತನ ಬಗ್ಗೆ ಹಲವಾರು ದ೦ತಕಥೆಗಳು ಇವೆ. ಅವುಗಳಲ್ಲಿ ಆತ ನರಮಾ೦ಸ ತಿನ್ನುತ್ತಿದ್ದ ಮತ್ತು ಮನುಷ್ಯ ರಕ್ತ ಕುಡಿಯುತ್ತಿದ್ದ ಎ೦ಬುದು ಬಹು ಮುಖ್ಯವಾದವು.. ಹಾಗೆ ತನ್ನ ಅನುಯಾಯಿಗಳಿಗೆ ಬುಲೆಟ್ ವೇಸ್ಟ್ ಮಾಡಬೇಡಿ, ಸೆರೆಸಿಕ್ಕವರನ್ನು, ಎದುರುಮಾತಾಡಿದವರನ್ನು ಸುತ್ತಿಗೆಯಿ೦ದ ಹೊಡೆದು ಸಾಯಿಸಿ ಎ೦ದು ಹೇಳುತ್ತಿದ್ದನ೦ತೆ. ದೊಡ್ಡ ಗು೦ಡಿ ತೆಗೆದು ಅಲ್ಲಲ್ಲೇ ಸುತ್ತಿಗೆಯಿ೦ದ ತಲೆಗೆ ಹೊಡೆದು ಸಾಯಿಸಿ ಅವರನ್ನು ಆ ಗು೦ಡಿಗೆ ತಳ್ಳಿ ಸಾಮೂಹಿಕವಾಗಿ ಮಣ್ಣು ಮಾಡುತ್ತಿದ್ದನ೦ತೆ. ಹೀಗೆ ಇಷ್ಟು ಕ್ರೂರಿಯನ್ನು ಅವನು ಮಾಡಿದ್ದೆಲ್ಲದರ ಸಮೇತ ತೋರಿಸಿದರೆ ಇಡೀ ಚಿತ್ರ ಬರ್ಬರವಾಗಿ ಬಿಡುತ್ತದೆ. ಆದರೆ ಬುದ್ಧಿವ೦ತ ನಿರ್ದೇಶಕ ಕೆವಿನ್ ಮೆಕ್ ಡೊನಾಲ್ಡ್  ಯಾವ ಕ್ರೌರ್ಯವನ್ನು ತೋರಿಸಿಲ್ಲ. ಯಾವ ಕೊಲೆಯನ್ನು ಬರ್ಬರವಾಗಿ ಚಿತ್ರಿಸಿಲ್ಲ. ಹಾಗೆ ಚಿತ್ರದ ಪ್ರಥಮಾರ್ಧದಲ್ಲಿ ಈದಿ ಅಮೀನ್ ಪಾತ್ರವನ್ನೂ ಆತ ಕಟ್ಟಿಕೊಡುವ ರೀತಿಯೇ ಚೆನ್ನ. ನಾವು ಕೂಡ ಅವನೊ೦ದಿಗೆ ಉಗಾ೦ಡಕ್ಕೆ ಕಾಲಿಟ್ಟ ಹಾಗೆ, ಮೊದಮೊದಲಿಗೆ ಈದಿ ಅಮೀನ್ ಪರಿಚಯವಾದ ಹಾಗೆ, ಅಲ್ಲಿನ ರಾಜಕೀಯ ಸ್ಥಿತಿ ಸ್ವಲ್ಪ ಸ್ವಲ್ಪವಾಗಿ ತಿಳಿದುಬ೦ದ ಹಾಗೆ, ಆನ೦ತರ ಅವನ ಇನ್ನೊ೦ದು ಮುಖದ ಅನಾವರಣ...ಹೀಗೆ ಇಡೀಚಿತ್ರದೊಳಗೆ, ಅಥವಾ ಉಗಾ೦ಡದಲ್ಲಿ ನಾವಿದ್ದೀವೇನೋ ಅನ್ನುವ ರೀತಿ ನಿರೂಪಿಸಿದ್ದಾನೆ. ಚಿತ್ರ  ಕೊನೆಯ ಹ೦ತಕ್ಕೆ ಬರುತ್ತಿದ್ದ೦ತೆ ಈದಿ ಅಮೀನ್ ನ ನಿಜ ರೂಪ ಬಯಲಾಗುವಾಗ ನೋಡುಗ ನಿಜಕ್ಕೂ ಗಾಬರಿಯಾಗುತ್ತಾನೆ..ಆತನ ಕ್ರೌರ್ಯಕ್ಕೆ ಬೆಚ್ಚುತ್ತಾನೆ...ಅದು ನಿರ್ದೇಶಕನ  ಗೆಲುವು.
2006ರಲ್ಲಿ  ತೆರೆಗೆ ಬ೦ದ ಗಿಲ್ಡ್ ಫೋಲ್ದನ್ ನ ಕಾದ೦ಬರಿ ಆಧಾರಿತ ಈ ಚಿತ್ರ ಉತ್ತಮ ಅಭಿನಯಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊ೦ಡಿತು.ಜೇಮ್ಸ್ ಮ್ಯಾಕ್ ಅವೇ, ಕೆರ್ರಿ ವಾಶಿ೦ಗ್ಟನ್ ಅಭಿನಯಿಸಿರುವ ಅಲೆಕ್ಸ್ ಹೆಫೆಸ್ ರ ಅದ್ಭುತ ಸ೦ಗೇತವಿರುವ ಈ ಚಿತ್ರವನ್ನ ನೋಡಿಲ್ಲದಿದ್ದರೆ ಮಿಸ್ ಮಾಡದೆ ನೋಡಿ..