Monday, March 21, 2016

ಕೇಳುವುದಕ್ಕೂ ನೋಡುವುದಕ್ಕೂ ವ್ಯತ್ಯಾಸವಿದೆ...


ಇದೊಂದು ಘಟನೆ ಕೇಳಿ. ವಿಷ್ಣುವರ್ಧನ್ ಅಭಿನಯದ ಸುಪ್ರಭಾತ ಚಿತ್ರ ಬಿಡುಗಡೆಯಾದಾಗ ನಾನಿನ್ ನು ಚಿಕ್ಕವನು. ಹಾಗಾಗಿ ಆ ಸಿನೆಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವ ಸಾಧ್ಯತೆ ಇರಲೇ ಇಲ್ಲ. ಆದರೆ ವಿಷ್ಣುವರ್ಧನ್ ಚಿತ್ರಗಳೆಂದರೆ ನನಗಂತೂ ಹುಚ್ಚು. ಆದರೆ ನೋಡುವುದೆಲ್ಲಿ..? ನಮ್ಮೂರು ಪಕ್ಕದ ನಂಜನಗೂಡಿಗೆ ಹೋಗಿ ನೋಡಿಬರುವುದು ಸಾಧ್ಯವಿರಲಿಲ್ಲ. ಆದರೆ ಆವಾಗ ಟೇಪ್ ರೆಕಾರ್ಡರ್ ಇತ್ತಲ್ಲಾ, ಸ್ಟೋರಿ ಕ್ಯಾಸೆಟ್ ತಂದು ಅದನ್ನು ಹಾಕಿಕೊಂಡು ಕೇಳುತ್ತಾ ದೃಶ್ಯಗಳನ್ನೂ ಫೈಟ್ ಗಳನ್ನೂ ತುಣುಕು ಹಾಡನ್ನು ಎಂಜಾಯ್ ಮಾಡುತ್ತಿದ್ದೆವು. ರೇಡಿಯೋ ದಲ್ಲಿ ಪ್ರತಿಭಾನುವಾರ ಮದ್ಯಾಹ್ನ ಸಿನಿಮಾ ಕತೆ ಪ್ರಸಾರ ಮಾಡಿದರೂ ನಮಗಿಷ್ಟದ ಸಿನಿಮಾಕ್ಕೆ ಟೇಪ್ ರೆಕಾರ್ಡರ್ ಒಂದೇ ಮಾರ್ಗವಾಗಿತ್ತು. ಆವಾಗ ಸುಪ್ರಭಾತ ಚಿತ್ರದ ಸ್ಟೋರಿಯನ್ನು ತುಂಬಾ ಸಲ ಕೇಳಿ ಅದರ ಕತೆಯನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದೆವು. ಎರಡು ಚಿಲ್ಲರೆ ಘಂಟೆಗ;ಅ ಸಿನಿಮಾವನ್ನು ಒಂದು ಘಂಟೆಗೆ ಇಳಿಸುವುದು ಸುಲಭದ ಮಾತಲ್ಲವಾದರೂ ಅದಕ್ಕೆ ಮೊದಲೆಲ್ಲಾ ಅವಕಾಶ ಇತ್ತು. ಹಾಡುಗಳ ಲೆಕ್ಕದಲ್ಲಿ ಅರ್ಧ ಘಂಟೆ ಎಗರಿಹೋಗುತ್ತಿತ್ತು. ಇನ್ನು ಫೈಟ್ ಲೆಕ್ಕದಲ್ಲಿ ಐದಾರು ನಿಮಿಷ ಕಾಣೆಯಾಗುತ್ತಿತ್ತು. ಉಳಿದ ಬಿಲ್ಡ್ ಅಪ್ ಮ್ಯೂಸಿಕ್ ಬಿಲ್ಡ್ ಅಪ್ ಅದೂ ಇದೂ ಸೇರಿ ಉಳಿದ ನಿಮಿಷಗಳು ಸಂಕಲಿತವಾಗಿ ಕೇವಲ ಒಂದು ಘಂಟೆ ಸ್ಟೋರಿ ಸಿಗುತ್ತಿತ್ತು.
ನನಗೆ ಸುಪ್ರಭಾತ ಚಿತ್ರದ ಸ್ಟೋರಿ ಕೇಳಿದಾಗ ಅದೊಂದು ವಿಷಾದದೊಂದಿಗೆ ಕೊನೆಯಾಗುವ ಚಿತ್ರ ಎಂದೇ ಎನಿಸಿತ್ತು. ಸುಹಾಸಿನಿಯೊಂದಿಗೆ ಪ್ರೀತಿಯಾಗಿ ಕೊನೆಯಲ್ಲಿ ಆಕೆಗೆ ಮಗು ಇರುವ ವಿಷಯ ಗೊತ್ತಾಗಿ ಆ ಮಗುವನ್ನು ಚಿತ್ರದ ನಾಯಕ ತಂದು ನಾಯಕಿಗೆ ಒಪ್ಪಿಸಿ, ನಿನ್ನ ಮಗಳನನ್ನು ನಿನಗೆ ಸೇರಿಸಿದ್ದೀನಿ, ಯಾವಾಗಲಾದರೂ ನಿನ್ನ ಮಗಳಿಗೆ ಅಪ್ಪ ಬೇಕು ಎನಿಸಿದರೆ ಈ ಬೆಟ್ಟದ ಮೇಲಿರುವ ಪೆಟ್ರೋಲ್ ಬಂಕ್ ತೋರಿಸು ಎನ್ನುತ್ತಾನೆ. ಆಗ ಮ್ಯೂಸಿಕ್ ಬರುತ್ತದೆ. ಅದೇ ಮ್ಯೂಸಿಕ್ ನೊಂದಿಗೆ ಚಿತ್ರ ಕೊನೆಯಾಗುತ್ತಿದೆ. ಬರೀ ಕೇಳಿಸಿಕೊಳ್ಳುವವ ಏನು ಅರ್ಥ ಮಾಡಿಕೊಳ್ಳಬೇಕು ಹೇಳಿ. ನಾನರ್ಥ ಮಾಡಿಕೊಂಡದ್ದು ಅದನ್ನೇ. ನಾಯಕಿ ಹಾಗೆ ಹೇಳಿ, ಮಗುವನ್ನು ಕರೆದುಕೊಂಡು ಹೋಗಿಬಿಡುತ್ತಾಳೆ. ವಿಷ್ಣುವರ್ಧನ್ ತ್ಯಾಗಮಯಿಯಾಗಿ ನೋಡುತ್ತಾ ನಿಂತುಕೊಳ್ಳಬಹುದು ಎಂಬುದಾಗಿ. ಯಾಕೆಂದರೆ ಆವಾಗೆಲ್ಲಾ ಚಿತ್ರದ ನಾಯಕ ತ್ಯಾಗಕ್ಕೆ, ಅದರಲ್ಲೂ ಪ್ರೀತಿಯನ್ನು ತ್ಯಜಿಸುವ ಕಾಯಕಕ್ಕೆ ಔರ್ದಾಯಕ್ಕೆ ಹೆಸರುವಾಸಿಯಲ್ಲವೇ..? ಆದರೆ ಅದೆಲ್ಲಾ ಕಳೆದು ನಾನು ಕಾಲೇಜಿಗೆ ಹೋಗುವ ಸಮಯ ಬಂದಾಗ ಮತ್ತೊಮ್ಮೆ ಸುಪ್ರಭಾತ ಚಿತ್ರಮಂದಿರಕ್ಕೆ ಬಂದಾಗ ಅದನ್ನು ನೋಡಿದೆ. ಆದರೆ ಅಲ್ಲಿನ ಕ್ಲೈಮಾಕ್ಸ್ ಬೇರೆ. ಅದು ಸುಖಾಂತ್ಯ. ಅಷ್ಟು ಡೈಲಾಗ್ ಮುಗಿದ ಮೇಲೆ ಕಾರ್ ಹತ್ತಿರಕ್ಕೆ ಹೋಗುವ ಸುಹಾಸಿನಿ, ಆನಂತರ ಮನಸ್ಸು ಬದಲಿಸಿ ಓಡಿಬಂದು ಅಪ್ಪಿಕೊಳ್ಳುತ್ತಾಳೆ. ಇಬ್ಬರು ಖುಷಿಯಾಗುತ್ತಾರೆ. ಆದರೆ ಕೇಳುವಿಕೆ ಇಡೀ ಚಿತ್ರದ ಕತೆಯನ್ನೇ ನನ್ನ ಪಾಲಿಗೆ ಉಲ್ಟಾ ಮಾಡಿದ್ದಂತೂ ಸತ್ಯ.
ಇದೆಲ್ಲಾ ಯಾಕೆ ಹೇಳಿದೆನೆಂದರೆ ಸಿನಿಮಾ ಎಂಬುದು ದೃಶ್ಯ ಮಾಧ್ಯಮ. ಅದನ್ನು ನೋಡುತ್ತಲೇ ಕಣ್ತುಂಬಿಕೊಳ್ಳಬೇಕು. ಅದರಲ್ಲೋ ದೊಡ್ಡ ಪರದೆಯ ಮೇಲೆ ನೋಡುತ್ತಾ ನೋಡುತ್ತಾ ಅದಕ್ಕೆ ನಮ್ಮನ್ನು ನಾವು ಅಂಟಿಸಿಕೊಂಡಾಗಲೇ ಮಜಾ. ಅದು ಬಿಟ್ಟು ಟಿವಿಯಲ್ಲಿ ಲ್ಯಾಪ್ ಟಾಪ್ ನಲ್ಲಿ ಮೊಬೈಲ್ ನಲ್ಲಿ ಸಿನಿಮಾ ನೋಡುವುದು ಏನು ಮಜಾ. ಜೊತೆಗೆ ಸಿನಿಮಾ ನಮ್ಮ ಕೈಯಲ್ಲಿರಬಾರದು. ನಮಗೆ ಬೇರೆಯ ಆಯ್ಕೆಗಳಿರಬಾರದು. ದೃಶ್ಯ ಚೆನ್ನಾಗಿರಲಿ, ಬೋರ್ ಆಗುತ್ತಿರಲಿ ನೋಡೇ ತೀರಬೇಕು ಎನ್ನುವ ಹಾಗಿರಬೇಕು. ಆದ್ರೆ ಈವತ್ತು ನಾವೆಲ್ಲಾ ಟಿವಿಯಲ್ಲಿಯೇ ಸಿನಿಮಾ ನೋಡುತ್ತೇವೆ, ಸ್ವಲ್ಪ ಬೋರ್ ಎನಿಸಿದರೂ ಅದನ್ನು ಬದಲಿಸುತ್ತೇವೆ, ಅಥವಾ ಬೇರೆ ಸಿನಿಮಾ ಹಾಕುತ್ತೇವೆ, ಮುಂದಕ್ಕೆ ಓಡಿಸುತ್ತೇವೆ. ಒಟ್ಟಿನಲ್ಲಿ ಸಿನಿಮಾವನ್ನು ನಮ್ಮ ಕೈಗೊಂಬೆ ಮಾಡಿಕೊಳ್ಳುತ್ತೇವೆ. ಲಾಕ್ ಅಪ್ ಡೆತ್ ಚಿತ್ರದ ಒಂದು ಚೇಸ್, ಪೋಲಿಸ್ ಸ್ಟೋರಿ ಯಾ "ಚಂದನೆಯ ಬೈಗುಳ", ಪ್ರೇಮಲೋಕದ ಹಾಡುಗಳು, .. ಹೀಗೆ ಇಂತಹ ಬಿಡಿಬಿಡಿ ಸನ್ನಿವೇಶಗಳಿಗಾಗಿಯೇ ಸಿನಿಮಾವನ್ನು  ಹತ್ತಾರು  ಬಾರಿ ನೋಡಿದ್ದಿದೆ. ಇಡೀ ಸಿನಿಮಾ ಕಣ್ಣಿಗೆ ತುಂಬಿಕೊಳ್ಳುತ್ತಾ ಆ ದೃಶ್ಯ ಬಂದಾಗ ಫುಲ್ ಅಲರ್ಟ್ ಆಗಿ ಕುರ್ಚಿಯ ತುದಿಗೆ ಕುಳಿತು ಅನುಭವಿಸಿದ್ದಿದೆ. ಆದರೆ ಈವತ್ತು ಇಷ್ಟವಾದ ಹಾಡನ್ನು ಮೊಬೈಲ್ ಗೆ ತುಂಬಿಕೊಳ್ಳುತ್ತೇವೆ, ದೃಶ್ಯವೂ ಮೊಬೈಲ್ ನಲ್ಲಿರುತ್ತದೆ. ಅಲ್ಲೇ ನೋಡುತ್ತೇವೆ, ಅಲ್ಲೇ ಡಿಲೀಟ್ ಮಾಡುತ್ತೇವೆ.
ಮನೆಗಳಲ್ಲಿ ತರಕಾರಿ ಕತ್ತರಿಸುತ್ತಾ ತಲೆಯೆತ್ತದೆಯೇ ಧಾರಾವಾಹಿ ನೋಡುತ್ತೇವೆ. ಅಲ್ಲಿ ನೋಡಲೇಬೇಕು ಅನ್ನುವಂತಹದ್ದು ಏನಿಲ್ಲ, ಅದೇ ಮುಖ, ಅದೇ ಘಟನೆ, ಇಬ್ಬರು ಮಾತನಾಡುತ್ತಾ ಮಾತನಾಡುತ್ತಾ ಕುಳಿತರೆ, ನಿಂತರೆ ಅವರ ರಿಯಾಕ್ಷನ್ ಅದುನ್ ಇದೂ ಸೇರಿ ನಿಮಿಷಗಟ್ಟಲೆ ಒಂದೇ ಒಂದೇ ದೃಶ್ಯ ನಡೆಯುತ್ತದೆ. ಹಾಗಾಗಿ ಸುಮ್ಮನೆ ಕೇಳಿಸಿಕೊಂಡರೆ ಸಾಕಷ್ಟೇ. ಅಲ್ಲಿ ನಷ್ಟದ ಮಾತೆ ಇಲ್ಲ. ಆದರೆ ಸಿನಿಮಾ ಹಾಗಲ್ಲ. ಅಲ್ಲಿ ಮಾತು ಬೆಳ್ಳಿ, ಮೌನ ಬಂಗಾರ. ಆದರೆ ಇತ್ತೀಚಿಗೆ ಬಂದ ಕೆಲವು ಸಿನಿಮಾಗಳು ಅದನ್ನು ಸುಳ್ಳು ಮಾಡಿದ್ದು ಸತ್ಯ. ಸಿಂಪಲ್ ಲವ್ ಸ್ಟೋರಿ, ಎದ್ದೇಳು ಮಂಜುನಾಥ ಮುಂತಾದ ಸಿನಿಮಾಗಳನ್ನು ನೋಡಲೆಬೇಕಿಲ್ಲ, ಕೇಳಿಸಿಕೊಂಡರೂ ಸಾಕು. ಏಕೆಂದರೆ ತೆರೆಯ ಮೇಲೆ ಜಾಸ್ತಿ ಆಕ್ಷನ್ ಇರುವುದೇ ಇಲ್ಲವಲ್ಲ. ಮಾತಾಡುತ್ತಾ, ಮಾತಾಡುತ್ತಾ ಕತೆ ಮುಂದುವರೆದರೆ ಮಾತೆ ಸಾಕಲ್ಲವೇ? ಪಂಚಿಂಗ್ ಡೈಲಾಗ್, ಡಬಲ್ ಮೀನಿಂಗ್ ಡೈಲಾಗ್ ಮುಂತಾದವುಗಳನ್ನು ಸಿನಿಮಾದಲ್ಲಿರಿಸಿದರೆ ಸಿನಿಮಾ ನೋಡುವುದಕ್ಕಿಂತ ಕೇಳುವುದೇ ಖುಷಿ ಎನಿಸುತ್ತದೆ. ಆ ಮೂಲಕ ದೃಶ್ಯಮಾಧ್ಯಮದ ಮುಖ್ಯಾಂಶವೆ ನೆಗೆದುಬಿದ್ದುಹೋದ ಹಾಗಾಗುತ್ತದೆ. ಎಲ್ಲವನ್ನು ಹೇಳುವ ಮೂಲಕವೇ ವಿಶದ ಪಡಿಸುವುದಕ್ಕಿಂತ ತೋರಿಸಿದರೆ ಕಣ್ಮುಂದೆ ನಡೆದರೆ ಹೆಚ್ಚು ಕಾಲ ಮನಸ್ಸಲ್ಲಿ ಉಳಿಯುತ್ತವೆ, ಇಲ್ಲವಾದರೆ ಬೇಗೆ ಕಿವಿಗೆ ಬೀಳುತ್ತವೆ, ಹಾಗೆ ಮರೆತೂಹೋಗುತ್ತವೆ.
ನಿರ್ದೇಶಕ ವಿಜಯಾನಂದ್ ಒಂದು ಮಾತು ಹೇಳಿದ್ದರು, ನಾನು ಕತೆಯನ್ನು  ಹೇಳಲಾರೆ, ನೋಡಬಲ್ಲೆ ಎಂದು. ಬಹುಶ ಪ್ರತಿಯೊಬ್ಬ ಚಿತ್ರಕರ್ಮಿ ಇದನ್ನೇ ಪಾಲಿಸಿದರೆ ಸಿನಿಮಾ ನೋಡುವ ಸೊಗಸು ಹೆಚ್ಚುತ್ತದೆ.  ಅಲ್ಲವೇ?

No comments:

Post a Comment